Monday 26 April 2021

೧೧ ಕೋವಿಡ್ಗಿಂತಲೂ ಭಯಂಕರ

೧೧ 

ಕೋವಿಡ್ಗಿಂತಲೂ ಭಯಂಕರ 



ಅಂದು ೨೦೨೦ರ ಜೂನ್ ೨೨ರ ದಿನವಾಗಿತ್ತು. ಭಾರಿ ಕೆಲಸದ ಒತ್ತಡದಿಂದ ಯುವ ವೈದ್ಯ  ಡಾ. ಕಿರಣ್ ಅಂದು ನಲುಗಿ ಹೋಗಿದ್ದರು. ಅವರ ಆಸ್ಪತ್ರೆಯ ಭರ್ತಿ, ಕೋವಿಡ್-೧೯ರ ರೋಗಿಗಳು ತುಂಬಿ ಹೋಗಿದ್ದರು. ಆಸ್ಪತ್ರೆಯ ಎಲ್ಲಾ ಹಾಸಿಗೆಗಳು ಹಾಗೂ ಐ.ಸಿ.ಯು.ಗಳ ತುಂಬಾ ರೋಗಿಗಳು ತುಂಬಿ ಹೋಗಿದ್ದರು. ಆಸ್ಪತ್ರೆಯಲ್ಲಿದ್ದ ಎಲ್ಲ ೨೦ ವೆಂಟಿಲೇಟರ್ಗಳನ್ನು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗಳಿಗೆ ಅಳವಡಿಸಲಾಗಿತ್ತು. ಬೇರೇ ರಾಜ್ಯಗಳ ಪರಿಸ್ಥಿತಿಗಳಿಗಿಂತ ತಮ್ಮ ರಾಜ್ಯದ ಪರಿಸ್ಥಿತಿ ಎಷ್ಟೋ ಸಮಾಧಾನಕರ ಎಂಬುದು ಡಾ. ಕಿರಣರಿಗೆ ತಿಳಿದಿತ್ತು. ಕೊಂಚ ವಿರಮಿಸಿದ್ದ ಅವರು ವಿಶ್ವದ, ಭಾರತದ ಮತ್ತು ಅವರ ರಾಜ್ಯದ ಕೋವಿಡ್ ಅಂಕಿ-ಅಂಶಗಳನ್ನು ಅವಲೋಕಿಸುತ್ತಿದ್ದರು. 

ಭಾರತದ ಕೋವಿಡ್ನ ಅಂಕಿ-ಅಂಶಗಳನ್ನು ಬೇರೆ ದೇಶಗಳಿಗೆ ಹೋಲಿಸಿದರೆ ಎಷ್ಟೋ ಸಮಾಧಾನಕರವಾಗಿದ್ದರೂ, ಅದು ಹೊರನೋಟದ ಪರಿಸ್ಥಿತಿ ಮಾತ್ರ ಎಂಬುದು ಅನುಭವಿಯಾದ ಡಾ.ಕಿರಣರಿಗೆ ತಿಳಿದಿತ್ತು. ಕೋವಿಡ್ ಲಕ್ಷಣಗಳಿರುವ ರೋಗಿಗಳ ಮೇಲಿನ ಪರೀಕ್ಷೆಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆಯುತ್ತಿಲ್ಲವೆಂಬುದು ಅವರಿಗೆ ತಿಳಿದಿತ್ತು. ಮುಂಬರುವ ದಿನಗಳಲ್ಲಿ ಕೋವಿಡ್ ರೋಗಿಗಳ ಮತ್ತು ಮೃತಪಡುವವರ ಸಂಖ್ಯೆ ತೀವ್ರವಾಗಿ ಹೆಚ್ಚಬಹುದೆಂಬ ಆತಂಕವೂ ಅವರಿಗಿತ್ತು. ಕೋವಿಡ್ನಂತಹ ಮಹಾಮಾರಿಯಿಂದ ಉಂಟಾಗಿರುವ ಇಂದಿನ ಪರಿಸ್ಥಿತಿ ಯಾರೂ ಕಂಡು ಕೇಳರಿಯದ್ದೂ ಎಂಬ ವಿಷಯ ಡಾ. ಕಿರಣರ ಮೇಲಿನ ಹಿರಿಯ ವೈದ್ಯರುಗಳ ಅಭಿಪ್ರಾಯವಾಗಿತ್ತು. 

ಕುರ್ಚಿಯಲ್ಲೇ ಕುಸಿದು ಮಲಗಿದ್ದ ಕಿರಣರನ್ನು ನಿದ್ರೆಯ ಮಂಪರು ಆವರಿಸಿತ್ತು. ತಮಗೆ ತಿಳಿಯದಂತೆ ಅವರು ತಮ್ಮ ಟಿ.ವಿ.ಯ ರಿಮೋಟ್ನ ಬಟನ್ನೊಂದನ್ನುಒತ್ತಿದ್ದರು. ಅಂದಿನ ಕೋವಿಡ್ನ ಪರಿಸ್ಥಿತಿಗಿಂತ ಘೋರವಾದ ಅಂಕಿ-ಅಂಶಗಳನ್ನು ಅವರ ಟಿ.ವಿ. ಪರದೆಯ ಮೇಲಿನ 'ಬ್ರೇಕಿಂಗ್ ನ್ಯೂಸ್' ಪಟ್ಟಿಯಲ್ಲಿ ತೋರಿಸಲಾಗುತ್ತಿತ್ತು. ಆ ಅಂಕಿ-ಅಂಶಗಳು ಭಯಾನಕವಾಗಿದ್ದು, 'ಪ್ರತಿದಿನ ೨೫,೦೦೦ ಸಾವುಗಳು ಮತ್ತು ವರ್ಷವೊಂದಕ್ಕೆ ೯ ಮಿಲಿಯೋನ್ನಷ್ಟು ಸಾವುಗಳು ಸಂಭವಿಸುತ್ತಿವೆ' ಎಂದು ತೋರಿಸಲಾಗುತ್ತಿತ್ತು. ನಂಬಲಾಗದ ಕಿರಣ್ ಅದೊಂದು ಪ್ರಸಾರದ ಆಭಾಸವಿರಬಹುದೆಂದುಕೊಂಡರು. ಆದರೆ ಆ ರೀತಿಯ ಅಂಕಿ-ಅಂಶಗಳನ್ನು ಮತ್ತೆ ಮತ್ತೆ ಟಿ.ವಿ. ಪರದೆಯ ಮೇಲೆ ಕೆಂಪು ಅಕ್ಷರಗಳಲ್ಲಿ ತೋರಿಸಲಾಗುತ್ತಿತ್ತು. ಸ್ವಲ್ಪ ಗಮನವಿಟ್ಟು ನೋಡಿದ ಮೇಲೇ, ಅಂದಿನ ಕಾರ್ಯಕ್ರಮ 'ಹಸಿವಿನ ಸಮಸ್ಯ'ಗೆ ಸಂಬಂಧಪಟ್ಟಿದ್ದು ಎಂಬ ಅರಿವು ಕಿರಣರಿಗಾಗಿದ್ದು. ಹಸಿವಿನ ಸಮಸ್ಯೆಯಿಂದ, ಇಂದು ವಿಶ್ವಾದ್ಯಂತ ಬಳಲುತ್ತಿರುವವರ ಸಂಖ್ಯೆ ೮೨೨ ಮಿಲಿಯನ್ ಗಳಷ್ಟು ಎಂಬುದು ತಜ್ಞರಾದ ಕಿರಣರಿಗೇ ಆಶ್ಚರ್ಯಕರ ಸುದ್ದಿಯಾಗಿತ್ತು. ಟಿ.ವಿ.ಯ ಕಾರ್ಯಕ್ರಮದ ನಿರ್ವಾಹಕರು ಏರಿದ ದನಿಯಲ್ಲಿ ಮಾತನಾಡುತ್ತಿದ್ದರು. 'ವಿಶ್ವಾದಾದ್ಯಂತ ೯ ಮಿಲಿಯನ್ ಜನರುಗಳು ಪ್ರತಿವರ್ಷ ಹಸಿವಿನಿಂದ ಬಳಲಿ ಸಾವನ್ನಪ್ಪುತ್ತಾರೆ. ಏಡ್ಸ್, ಮಲೇರಿಯ ಮತ್ತು ಟಿ.ಬಿ.ಖಾಯಿಲೆಗಳಿಂದ ಪ್ರತಿವರ್ಷ ಸಾವನ್ನಪ್ಪುವವರ ಒಟ್ಟು ಸಂಖ್ಯೆಗಿಂತ, ಹಸಿವಿನಿಂದ ಬಳಲಿ ಸಾಯುವವರ ಸಂಖ್ಯೆ ಹೆಚ್ಚಿನದು!' ಟಿ.ವಿ.ಪ್ರಸಾರದಲ್ಲಿ ಆಭಾಸವೇನೂ ಇತ್ತಿಲ್ಲ. 'ವಿಶ್ವ ಹಸಿವಿನ ದಿನ(World Hunger Day)'ವಾದ, ೨೮-೦೫-೨೦೨೦ರ ಕಾರ್ಯಕ್ರಮದ ಮರುಪ್ರಸಾರ ಅಂದು ನಡೆಯುತ್ತಿತ್ತು. 

ಆ ಕಾರ್ಯಕ್ರಮವನ್ನು ವೀಕ್ಷಿಸುವಂತೆ, ತಮ್ಮ ಗೆಳತಿ ರೋಹಿಣಿಗೆ ತಕ್ಷಣ ಕರೆಮಾಡಿದರು ಕಿರಣ್. ಹಸಿವಿನ ಆ ಕಾರ್ಯಕ್ರಮವನ್ನು ತಾನು 'ವಿಶ್ವ ಹಸಿವಿನ ದಿನ'ದಂದೇ  ನೋಡಿದ್ದು, ತನ್ನ ಸಂಶೋಧನೆಗೆ ಅವಶ್ಯಕವಾದ ಟಿಪ್ಪಣಿಗಳನ್ನು ಬರೆದುಕೊಳ್ಳಲು, ಈಗಲೂ ಮತ್ತೊಮ್ಮೆ ನೋಡುತ್ತಿರುವುದಾಗಿ ರೋಹಿಣಿ ಉತ್ತರಿಸಿದ್ದಳು. ಆ ಚಾನೆಲ್ನ ಮುಂದಿನ ಕಾರ್ಯಕ್ರಮವಾದ 'ಹಸಿವನ್ನು ಕುರಿತಾದ ಟೆಲಿ-ನಾಟಕ'ವೊಂದನ್ನು ನೋಡುವಂತೆ ರೋಹಿಣಿ, ಕಿರಣರನ್ನಾಗ್ರಹಿಸಿದ್ದಳು. 

'ಇಂದಿನ ವಿಶೇಷ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ. ವಿಶ್ವಾದ್ಯಂತ ಪ್ರತಿ ೧೦ ಸೆಕೆಂಡ್ಗಳಿಗೊಮ್ಮೆ ಒಂದು ಮಗು ಹಸಿವಿನಿಂದ ಸಾಯುತ್ತದೆ. ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಹಸಿವಿನ ಸಾವುಗಳ ಸಂಖ್ಯೆ ಹೆಚ್ಚಾಗಾಗುತ್ತದೆ. ೨೧ನೇ ಶತಮಾನದ ಅತ್ಯಂತ ದೊಡ್ಡದಾದ ಆರೋಗ್ಯ ಸಮಸ್ಯೆಯೆಂದರೆ "ಹಸಿವಿನ ಸಾವು." ದಿನೇ ದಿನೇ ಆ ಸಮಸ್ಯೆಯ ತೀವ್ರತೆ ಹೆಚ್ಚುತ್ತಲೇ ಸಾಗುತ್ತಿರುವುದು ವಿಷಾದಕರ. ಈ ವಿಷಯದ ಬಗ್ಗೆ ಹೆಚ್ಚಿನ ಚರ್ಚೆಯನ್ನು ಮಾಡವಂತೆ ಇಂದಿನ ಗಣ್ಯ ಅತಿಥಿಗಳನ್ನು ಕೋರಿಕೊಳ್ಳುತ್ತೇನೆ' ಎಂದು ಸಾಗಿತ್ತು ಅಂದಿನ ಕಾರ್ಯಕ್ರಮದ ನಿರ್ವಾಹಕರಾದ ರಾಮಸುಬ್ಬುರವರ ವಾಗ್ಝರಿ. "ಭಾರತದ ಹಸಿವಿನೊಂದಿಗಿನ ಹೋರಾಟದ  ಕಾರ್ಯಕ್ರಮ (Fight Hunger Project)"ದ ನಿರ್ದೇಶಕರಾದ ಡಾ. ದಿವಾಕರವರಿಂದ ಚರ್ಚೆ ಆರಂಭವಾಗಿತ್ತು. ಅವರ ವಿಷಯ ಮಂಡನೆ ವೈದ್ಯರಾದ ಕಿರಣರವರ ಕಣ್ಣನ್ನೂ ತೆರೆಸಿತ್ತು. 

'ಹಸಿವು, ಕೋವಿಡ್ಗಿಂತಲೂ ಭಯಾನಕವಾದುದೇ? ಹಸಿವೆಂಬ ಪೆಡಂಭೂತವನ್ನೇಕೆ ನಾವು ನಿರ್ಲಕ್ಷಿಸುತ್ತಿದ್ದೇವೆ? ವಿಶ್ವಾದ್ಯಂತ ಪ್ರತಿನಿತ್ಯ ಕೇವಲ ೫೦೦೦ ರೋಗಿಗಳನ್ನು ಕೊಲ್ಲುತ್ತಿರುವ  ಕೋವಿಡ್ಗಿಂತ, ೨೫,೦೦೦ ಮಾನವರುಗಳನ್ನು ಕೊಲ್ಲುತ್ತಿರುವ ಹಸಿವನ್ನು ನಾವು ನಿರ್ಲಕ್ಷಿಸುತ್ತಿರುವುದು ಹಾಸ್ಯಾಸ್ಪದವಲ್ಲವೇ? "ಹಸಿವಿನಿಂದ ಸಾಯುವವರು ಬಡವರುಗಳು ಮಾತ್ರವೆಂಬುದು ಈ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವೇ?" ಶ್ರೀಮಂತರನ್ನೂ ಬಿಡದೆ ಎಲ್ಲಾ ವರ್ಗಗಳ ಜನರಗಳನ್ನೂ ಕೋವಿಡ್ ಮಹಾಮಾರಿ  ಕೊಲ್ಲುತ್ತಿರುವುದೇ ನಮ್ಮನ್ನು ಹೆಚ್ಚು ತಲ್ಲಣಗೊಳಿಸಿದೆಯೇ? ಬಡವರುಗಳ ಬಗೆಗಿನ ದಿವ್ಯ ನಿರ್ಲಕ್ಷ್ಯ, ಮಾನವರುಗಳ ಮಾನಸಿಕತೆಯ ಕರಾಳ ಮುಖವೇ?' 

'ನಾನು ನೀಡುತ್ತಿರುವ ಅಂಕಿ-ಅಂಶಗಳಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಹಸಿವನ್ನು ಕುರಿತಾದ ಭಾರತದ  ಅಂಕಿ-ಅಂಶಗಳನ್ನು ತಮ್ಮ ಮುಂದಿಟ್ಟರೆ, ತಮ್ಮಗಳಿಗೆ ಆಶ್ಚರ್ಯ ಕಾದಿರಬಹುದು.  ಅಪೌಷ್ಟಿಕತೆಯ ತವರೇ ಭಾರತವೆಂದು ಹೇಳಬಹುದು. ೧೯೬ ಮಿಲಿಯನ್ ಜನರುಗಳು ಭಾರತದಲ್ಲಿ ಇಂದೂ ಹಸಿವಿನಿಂದ ಬಳಲುತ್ತಿದ್ದಾರೆ. ನಮ್ಮ ದೇಶದಲ್ಲಿನ ೫ ವರ್ಷಕ್ಕೂ ಕಮ್ಮಿ ವಯಸ್ಸಿನ ೨೧% ಮಕ್ಕಳು "ಕಮ್ಮಿ ತೂಕ (Wasting - ವಯಸ್ಸಿಗೆ ತಕ್ಕ ತೂಕವಿಲ್ಲದಿರುವುದು)"ದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದೇ ವರ್ಗದ ೩೮. ೪%ರಷ್ಟು ಮಕ್ಕಳು "ಎತ್ತರದ ಕೊರತೆ (Stunting - ವಯಸ್ಸಿಗೆ ತಕ್ಕ ಎತ್ತರವಿಲ್ಲದಿರುವುದು)"ಯಿಂದ ಪೀಡಿತರಾಗಿದ್ದಾರೆ. ಈ ರೀತಿಯ ಕೊರತೆಗಳಿಂದ ಮಕ್ಕಳ ದೈಹಿಕ ಬಲ ಮತ್ತು ಮನೋಬಲಗಳೆರಡೂ ಸರಿಪಡಿಸಲಾಗದ ನ್ಯೂನ್ಯತೆಗಳಾಗಿ ಉಳಿದುಬಿಡುತ್ತವೆ. ೨೦೧೭ರ  ವಿಶ್ವ ಹಸಿವಿನ ಸೂಚಿ(Global Hunger Index)ಯ ಪ್ರಕಾರ, ೧೧೯ ವಿಕಾಸ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಭಾರತದ ಸ್ಥಾನ ೧೦೦ನೆಯ ಸ್ಥಾನದಷ್ಟು ಕೆಳಮಟ್ಟದಲ್ಲಿದೆ.  ಪಕ್ಕದ ಬಡ ರಾಷ್ಟ್ರಗಳಾದ ನೇಪಾಳ, ಮಯನ್ಮಾರ್, ಶ್ರೀ ಲಂಕಾ ಮತ್ತು ಬಾಂಗ್ಲಾದೇಶಗಳು ಈ ನಿಟ್ಟಿನಲ್ಲಿ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ ಎಂಬುದು ವಿಷಾದಕರ ಸಂಗತಿ. ಪ್ರತಿದಿನ ೭೦೦೦ ಜನಗಳು ಮತ್ತು ಪ್ರತಿವರ್ಷ ೨೫ ಲಕ್ಷ ಜನಗಳು ಹಸಿವಿನಿಂದ ಭಾರತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂಬ ಸಂಗತಿ ಆತಂಕಕಾರಿಯಾದುದಲ್ಲವೇ?' ಹೀಗೆ ಮಂಡಿಸಿದ ಡಾ. ದಿವಾಕರ್ ರವರ ವಿಷಯಗಳು ಎಲ್ಲರನ್ನೂ ಚಕಿತಗೊಳಿಸಿದ್ದು ಸುಳ್ಳಾಗಿತ್ತಿಲ್ಲ. 

'ಧನ್ಯವಾದಗಳು ದಿವಾಕರ್ ರವರೆ. ತಾವು ನೀಡಿದ ವಿವರಗಳು ಖೇದಕರವಾದವು. ದಿನನಿತ್ಯ ೨೫,೦೦೦ ಜನರುಗಳನ್ನು ಬಲಿಪಡೆಯುವ ಹಸಿವಿನ ಸಮಸ್ಯೆ ಬಗ್ಗೆ ನಾವೇಕೆ ಯೋಚಿಸುವುದೂ ಇಲ್ಲ? ಭಾರತ ಮತ್ತು ವಿಶ್ವದ ಮುಂದಿರುವ ಅತೀ ದೊಡ್ಡ ಸಮಸ್ಯೆಯೆಂದರೆ, ಹಸಿವಿನ ಸಮಸ್ಯೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ವಿಷಯದ ಚರ್ಚೆಯನ್ನು ಪ್ರೊ. ಪ್ರಹ್ಲಾದರವರು ಮುಂದುವರೆಸಲಿ ಎಂದು ಕೋರಿಕೊಂಡವರು ನಿರ್ವಾಹಕರಾದ ರಾಮಸುಬ್ಬುರವರು. 

ಪ್ರೊ. ಪ್ರಹ್ಲಾದ್ರವರು ಮಾತನಾಡುತ್ತಾ, 'ರಾಮಸುಬ್ಬು ಮತ್ತು ದಿವಾಕರ್ ರವರು ನಿರ್ದಾಕ್ಷಿಣ್ಯವಾಗಿ ವಿಷಯ ಮಂಡನೆಯನ್ನು ಮಾಡಿ ನಮ್ಮ ಕಣ್ಣುಗಳನ್ನು ತೆರೆಸಿದ್ದಾರೆ. ಅಮೆರಿಕಾದ ನಾಗರೀಕ ಹಕ್ಕುಗಳ ಖ್ಯಾತ ವಾದಿಯಾಗಿದ್ದ ಡಾ. ಮಾರ್ಟಿನ್ ಲೂಥರ್ ಕಿಂಗ್ ರವರು ಒಂದು ಕಡೆ ಮಾತನಾಡುತ್ತ, "ನಾನು ಸತ್ತರೆ ನನಗೊಂದು ಸ್ಮಾರಕವನ್ನು ಕಟ್ಟಿಸಬೇಡಿ. ಹಸಿದ ಹೊಟ್ಟೆಗಳಿಗೆ ಆಹಾರವನ್ನು ನೀಡುವ ಪ್ರಯತ್ನವನ್ನು ಮಾತ್ರ ನಾನು ಮಾಡುತ್ತಿದ್ದೆ ಎಂದು ಮುಂದಿನ ಪೀಳಿಗೆಗೆ ತಿಳಿಸಿ" ಎಂದಿದ್ದರು. ನಮ್ಮವರೇ ಆದ, ನೊಬೆಲ್ ಪಾರಿತೋಷಕ ವಿಜೇತರಾದ ಡಾ. ಅಮರ್ತ್ಯ ಸೇನ್ರವರು ವಿಶ್ಲೇಷಿಸುತ್ತಾ "ಭಾರತದಲ್ಲಿ ಆಹಾರದ ಕೊರತೆ ಇಲ್ಲ. ಹಸಿವಿನಿಂದ ಬಳಲುತ್ತಿರುವರಿಗೆ ಆಹಾರವನ್ನು ತಲುಪಿಸುವ ವ್ಯವಸ್ಥೆ ಮಾತ್ರ ಸಮರ್ಪಕವಾಗಿಲ್ಲ" ಎಂದಿದ್ದಾರೆ. ಭಾರತದಲ್ಲಿನ  ಹಸಿದ ಹೊಟ್ಟೆಗಳನ್ನು ತುಂಬಿಸಲು ಬೇಕಾಗುವ ಆಹಾರ ಧಾನ್ಯಗಳ ಪ್ರಮಾಣಕ್ಕಿಂತ  ಹೆಚ್ಚು ಆಹಾರ ಧಾನ್ಯಗಳು, ಪ್ರತಿ ವರ್ಷ ಹಾಳಾಗಿ ಹೋಗುತ್ತದೆ. ಹಸಿದವರಿಗೆ ಆಹಾರವನ್ನು ತಲುಪಿಸುವ ಮಾರ್ಗಗಳನ್ನು ಕುರಿತು ಚರ್ಚೆಗಳು ಮಾತ್ರ ನಡೆಯುತ್ತವೇ ಹೊರೆತು, ಅದರ ಕಾರ್ಯಾನ್ವಯದ ಕೆಲಸಗಳು ಮಾತ್ರ ನಡೆಯುವುದೇ ಇಲ್ಲ' ಎಂದರು. 

ಈ ನಡುವೆ ವಕೀಲ ಮದನ್ ಲಾಲರು ಮಾತನಾಡಲು ತುದಿಗಾಲಲ್ಲಿ ನಿಂತಿದ್ದರು. 'ಮತ್ತೊಬ್ಬ ನೊಬೆಲ್ ವಿಜೇತರಾದ ಅರ್ಥ ಶಾಸ್ತ್ರಜ್ಞ ಅಂಗಸ್ ಡೇಟನ್ ರವರ ಮಾತುಗಳನ್ನು ನೆನಪಿಸಲಿಚ್ಛಿಸುತ್ತೇನೆ. "ಭಾರತದ ಬಡವರ ಅಪೌಷ್ಟಿಕತೆಯ ಕೊರತೆ ಕ್ಯಾಲೋರಿಗಳ ಕೊರತೆಯಿಂದ ಉಂಟಾದುದಲ್ಲ. ಭಾರತೀಯರ ಆಹಾರ ಪದ್ಧತಿಯಲ್ಲಿ ಶರ್ಕರಪಿಷ್ಟಾದಿಗಳ (carbohydrates) ಅಂಶ ಹೆಚ್ಚಾಗಿದ್ದು, ಪ್ರೋಟೀನ್ ಮತ್ತು ಕೊಬ್ಬಿನ (Fats) ಅಂಶಗಳು ಕಡಿಮೆ ಇರುತ್ತದೆ." ಭಾರತದಲ್ಲಿ ಹಸಿವಿನಿಂದ ಬಳಲುತ್ತಿರುವವರಲ್ಲಿ,  ೬೦%ಗೂ ಹೆಚ್ಚಿನವರು ಮಹಿಳೆಯರು. ಭಾರತದ ಇಡೀ ಜನಸಂಖ್ಯೆಗೆ ಸಾಕಾಗುವಷ್ಟು ಆಹಾರ ಭಾರತದಲ್ಲೇ ಉತ್ಪಾದನೆಗೊಳ್ಳುತ್ತದೆ. ಆದರೆ ಭಾರೀ ಸಂಖ್ಯೆಯ ಭಾರತೀಯರಿಗೆ ಸಾಕಷ್ಟು ಹಣವನ್ನುದುಡಿಯುವ ಅವಕಾಶಗಳಿಲ್ಲದೇ ಇರುವುದು ಆಹಾರ ಸಮಸ್ಯೆಗೆ ಕಾರಣವಾಗಿದೆ. ಹಸಿದವರಲ್ಲಿ ೮೦%ರಷ್ಟು ಜನರು ಗ್ರಾಮೀಣ ಭಾಗದವರಾಗಿರುತ್ತಾರೆ. ವಲಸಿಗರ ಸಮಸ್ಯೆ, ವಿವಿಧ ವರ್ಗಗಳ ನಡುವಿನ  ಘರ್ಷಣೆ, ಹವಾಮಾನ ವೈಪರೀತ್ಯ, ಪ್ರಾಕೃತಿಕ ದುರ್ಘಟನೆಗಳು ಮುಂತಾದ ಕಾರಣಗಳೂ ಹಸಿವಿನ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತವೆ. ಹಸಿವೆಂಬುದೇ ಅತ್ಯಂತ ಕ್ರೂರವಾದ ಮಹಾಮಾರಿ. ಆ ಮಹಾಮಾರಿಯನ್ನು ಹಣಿಯಲು ಬೇಕಾದ ಲಸಿಕೆ ಮತ್ತು ಔಷಧಗಳೆರಡೂ "ಆಹಾರ" ಮಾತ್ರ. ಆಹಾರ ನಮ್ಮ ದೇಶದಲ್ಲಿ ಸಾಕಷ್ಟಿದ್ದು, ಅದರ ಹಂಚಿಕೆ ವ್ಯವಸ್ಥೆ ಸರಿಯಿಲ್ಲದಿರುವುದೇ ದೊಡ್ಡ ಸಮಸ್ಯೆ. ಹಸಿವಿನ ಮಹಾಮಾರಿಯನ್ನು ಹಣಿಯುವುದು, ಕೋವಿಡ್ ಮಹಾಮಾರಿಯನ್ನು ಹಣಿಯುವುದಕ್ಕಿಂತಾ ಸುಲಭವಾದ ಕೆಲಸ. ಆದರೆ ನಮ್ಮ ಜನಗಳಲ್ಲಿ ಮತ್ತು ನಮ್ಮ ನಾಯಕರುಗಳಲ್ಲಿ ಬೇಕಾದ ಇಚ್ಚಾಶಕ್ತಿಯ ಕೊರತೆ ಇರುವುದೇ ವಿಷಾದಕರ ಸಂಗತಿ' ಎಂದವರು ಮದನ್ ಲಾಲರು. 

ಟಿ.ವಿ. ಚರ್ಚೆಯ ಮುಂದಿನ ಮಾತಿನ ಅವಕಾಶ ರಾಜುರವರದಾಗಿತ್ತು. 'ಹಸಿವಿನ ಸಮಸ್ಯೆ ಕುರಿತಾದ ಮೂಲಭೂತ ಸಮಸ್ಯೆಗಳನ್ನು ಎತ್ತಿ ತೋರಿಸಿ ಮಾತನಾಡಿದ ಎಲ್ಲರಿಗೂ ನಾನು ಆಭಾರಿ. ತಜ್ಞರುಗಳ ಪ್ರಕಾರ ಇಂದಿನ ಕೋವಿಡ್ ಸಮಸ್ಯೆ, ಹಸಿವಿನ ಸಮಸ್ಯೆಯನ್ನು ಇನ್ನೂ ತೀವ್ರಗೊಳಿಸಬಲ್ಲದು. "ಉದ್ಯೋಗಗಳ ಹರಣ, ಬಡವರಲ್ಲಿನ ಆದಾಯದ ಕುಸಿತ, ಸಾಗಾಣಿಕೆಯ ಸಮಸ್ಯೆ, ಕೋವಿಡೇತರ ರೋಗಗಳಿಗೆ ಚಿಕಿತ್ಸೆಯ ಕೊರತೆ, ಮುಂತಾದ ಸಮಸ್ಯೆಗಳು ಆಹಾರದ ವಿತರಣೆಯ ವ್ಯವಸ್ಥೆಯನ್ನು ಮತ್ತಷ್ಟು ಹದಗೆಡಿಸಿವೆ. ಕೋವಿಡ್ನ ಸಮಸ್ಯೆ ಮುಂದುವರೆದಷ್ಟೂ, ಆಹಾರದ ಸಮಸ್ಯೆಯೂ ಉಲ್ಬಣಗೊಳ್ಳುವುದರಲ್ಲಿ ಎರಡು ಮಾತಿಲ್ಲ.

 ಹಸಿವಿನ ಸಮಸ್ಯೆಯನ್ನು ನೀಗಿಸುವ ಕೆಲವು ಕಾರ್ಯಕ್ರಮಗಳನ್ನು ನಮ್ಮ ಸರಕಾರಗಳು ತೆಗೆದುಕೊಂಡಿವೆ. ಉಚಿತ ಹಾಗೂ ಕಮ್ಮಿ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಬಡವರಿಗೆ ತಲುಪಿಸುವ ವ್ಯವಸ್ಥೆ, ಶಾಲೆಗಳಲ್ಲಿ ಮಧ್ಯಾಹ್ನದೂಟದ ವ್ಯವಸ್ಥೆ, ರೈತರುಗಳಿಗೆ ನೇರ ಹಣದ ಪಾವತಿಯ ವ್ಯವಸ್ಥೆ, ಹಲವು ರಾಜ್ಯಗಳಲ್ಲಿನ ಉಚಿತ/ಕಮ್ಮಿ ಬೆಲೆಯ ಊಟದ ಕ್ಯಾಂಟೀನ್ ಗಳ ವ್ಯವಸ್ಥೆ , ಮುಂತಾದ ಕ್ರಮಗಳು ಹಸಿವಿನ ಸಮಸ್ಯೆಯನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನಗಳೇ ಎಂದು ಹೇಳಬಹುದು. ಆದರೆ ಹಲವಾರು ತಜ್ಞರುಗಳ ಪ್ರಕಾರ, ಉಚಿತವಾಗಿ ಆಹಾರವನ್ನೊದಗಿಸುವ ವ್ಯವಸ್ಥೆ ದೀರ್ಘಾವಧಿಯ ಪರಿಹಾರವಾಗಲಾರದು. ಹಲವಾರು ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಉಚಿತ ಆಹಾರದ ವ್ಯವಸ್ಥೆ ಜೀವಗಳನ್ನುಳಿಸಬಹುದು. ಆದರೆ ಎಗ್ಗಿಲ್ಲದೆ ಸಾಗುವ ಉಚಿತ ಆಹಾರದ ವ್ಯವಸ್ಥೆ ಹೊಸ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಅದರಿಂದ ಆಹಾರ ಧಾನ್ಯಗಳ ಬೆಲೆಗಳಲ್ಲಿ ಏರುಪೇರಾಗಿ, ಹೆಚ್ಚಿನ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ವ್ಯಾಪಾರಗಳ ಪ್ರಕ್ರಿಯೆಗಳಲ್ಲಿ ಉತ್ಸಾಹದ ಕೊರತೆಯುಂಟಾಗಬಹುದು. ಗ್ರಾಮೀಣಾಭಿವೃದ್ಧಿಗೆ ದೀರ್ಘಾವಧಿಯ ಯೋಜನೆಗಳು, ಸ್ತ್ರೀಯರ ಸಬಲೀಕರಣ ಮುಂತಾದ ಕ್ರಮಗಳಿಂದ ಹಸಿವಿನ ಸಮಸ್ಯೆಯನ್ನು ಹೆಚ್ಚು ಸಮರ್ಪಕವಾಗಿ ಎದುರಿಸಲು ಸಾಧ್ಯ. ನೀರು,  ನೈರ್ಮಲ್ಯ, ವಿದ್ಯಾಭ್ಯಾಸ, ಆರೋಗ್ಯ, ಸಾಗಾಣಿಕೆ, ಸಂವಹನ (communication) ಮುಂತಾದ ಸಮಸ್ಯೆಗಳು ನಮ್ಮ ಹಳ್ಳಿಗಳನ್ನು ಸತತವಾಗಿ ಕಾಡುತ್ತಿವೆ. ಪಟ್ಟಣದವರಿಗೆ ಹೋಲಿಸಿದರೆ ಗ್ರಾಮೀಣರ            ಜೀವಿತಾವಧಿ (Life expectancy)ಯೂ ಕಡಿಮೆಯೇ. ಹಾಗಾಗಿ ಹಸಿವಿನ ಸಮಸ್ಯೆಯನ್ನು ನಿವಾರಿಸಲು ಸಮಗ್ರ ಯೋಜನೆಯೊಂದನ್ನು ರೂಪಿಸುವ ಅಗತ್ಯವಿದೆ.  

ಹಸಿವೆಂಬುದು ಜನಸಂಖ್ಯಾ ಸ್ಫೋಟದಿಂದುಂಟಾದ ಸಮಸ್ಯೆಯೇ? ಅಲ್ಲ. ಹಸಿವು ಮತ್ತು ಜನಸಂಖ್ಯಾ ಸ್ಫೋಟಗಳೆರಡೂ ಬಡತನ ಮತ್ತು ಅಸಮಾನತೆಯಿಂದ ಉಂಟಾದ ಸಮಸ್ಯೆಗಳು. ಹೆಣ್ಣು ಕೀಳೆಂಬ ಭಾವನೆ ಮೊದಲು ತೊಲಗಬೇಕು. ಮಹಿಳೆಯರನ್ನು ಕೀಳೆಂದು ಕಾಣುವ ನಮ್ಮ ಜನರುಗಳ ಮನೋಭಾವದಿಂದಾಗಿ, ನಮ್ಮ ಮಹಿಳೆಯರುಗಳ ಪೈಕಿ ೬೦%ರಷ್ಟು ಮಹಿಳೆಯರು ಹಸಿವಿನಿಂದ ಬಳಲುತ್ತಿದ್ದಾರೆ.  ತಮ್ಮ ಮಕ್ಕಳುಗಳ ಹೊಟ್ಟೆಯನ್ನು ತುಂಬಿಸಲು ಮಾತೆಯರು ಉಪವಾಸದಿಂದಿರುತ್ತಾರೆ. ಕುಟುಂಬಗಳ ಅವಶ್ಯಕತೆಗಳ ಪೂರೈಕೆಯ ಜವಾಬ್ದಾರಿಯನ್ನು ತಾಯಂದಿರುಗಳು ನಿಭಾಯಿಸುತ್ತಾರೆ. ಆದರೂ ಹೆಚ್ಚಿನ ಕುಟುಂಬಗಳಲ್ಲಿ ಮಾತೆಯರಿಗೆ ಸೌಲಭ್ಯಗಳು ದೊರೆಯುವುದಿಲ್ಲ ಮತ್ತು ಕುಟುಂಬವನ್ನು ಕುರಿತಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರ ಅಭಿಪ್ರಾಯವನ್ನು ಪರಿಗಣಿಸುವುದಿಲ್ಲ. ಈ ರೀತಿಯ ಧೋರಣೆಗಳೇ ಕುಟುಂಬದ ಎಲ್ಲಾ ಸಮಸ್ಯೆಗಳ ಮೂಲ. ಆದುದರಿಂದ ಮಹಿಳೆಯರ ಸಬಲೀಕರಣದ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಈ ಕಾರ್ಯಕ್ಕೆ ಪೂರಕವಾಗಿ ಪುರುಷರ ಮನಃಸ್ಥಿತಿಯೂ ಬದಲಾಗಬೇಕು.' ಹೀಗಿದ್ದ ರಾಜುರವರ ವಾದದ ವೈಖರಿ ತರ್ಕಬದ್ಧವಾಗಿದ್ದು ಎಲ್ಲರನ್ನೂ ಆಕರ್ಷಿಸಿತ್ತು. 

ಕಾರ್ಯಕ್ರಮದ ನಿರ್ವಾಹಕ ರಾಮಸುಬ್ಬುರವರು ಮಾತನಾಡುತ್ತಾ, 'ರಾಜುರವರ ಮಾತುಗಳು ಹಸಿವಿನ ಸಮಸ್ಯೆಯ ದರ್ಶನವನ್ನು ಸಮಗ್ರವಾಗಿ ಮಾಡಿಸಿವೆ.  ಹೆಚ್ಚಿನದೇನನ್ನೂ ನಾನು ಹೇಳಬಯಸುವುದಿಲ್ಲ. ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ನಮ್ಮ ಟಿ.ವಿ. ವಾಹಿನಿಯ ಮುಂದಿನ ಕಾರ್ಯಕ್ರಮ 'ಹಸಿವನ್ನು ಕುರಿತಾದ ಟೆಲಿ ನಾಟಕ' ಎಂದರು.

***

ಅಂದು ಸಮಯ ಸಾಯಿಂಕಾಲದ ೫. ೦೦ ಘಂಟೆಯಾಗಿತ್ತು. ಅಕ್ಷರಗಳನ್ನು ಬರೆಯುವುದನ್ನು ಕಲಿಯುತ್ತಿದ್ದ ದುರ್ಗಾ ತನ್ನ ಶಾಲೆಯಲ್ಲಿ ಕುಳಿತಿದ್ದಳು. ಶಿಕ್ಷಕರಾಗಿ ಆ ಶಾಲೆಗೆ ವಾರಕ್ಕೆ ಎರಡು ಬಾರಿ ಬರುತ್ತಿದ್ದ ಬ್ಯಾನರ್ಜಿರವರು ತಮ್ಮ ಒಬ್ಬಳೇ ವಿದ್ಯಾರ್ಥಿನಿ ದುರ್ಗಾಗಳಿಗೆ  ವರ್ಣಮಾಲೆಗಳ ಪಟವನ್ನು  ತೋರಿಸುತ್ತಿದ್ದರು. ಹರಿದ ಲಂಗಗಳನ್ನು ತೊಟ್ಟ, ಕೃಶವಾದ ದೇಹದ ದುರ್ಗಾಳ  ಮೂರು ಹೆಣ್ಣು ಮಕ್ಕಳು ಅವಳ ಸುತ್ತಾ ಕುಳಿತಿದ್ದರು. ಆ ಮೂರು ಮಕ್ಕಳೂ, ಅರೆ ಬೆಂದ ಒಂದೇ ಮುಸುಕಿನ ಜೋಳದ ತೆನೆಯಿಂದ ಕಾಳುಗಳನ್ನು ಹೆಕ್ಕಿ ತಿನ್ನುತ್ತಿದ್ದರು. ಮಕ್ಕಳುಗಳ ನಡುವೆ ಮತ್ತೆ ಮತ್ತೆ ಕಾಳುಗಳಿಗಾಗಿ ಕಿತ್ತಾಟ ನಡೆಯುತ್ತಿತ್ತು. ಒಳ್ಳೆಯ ಮಾತುಗಳನ್ನಾಡಿ ಮಕ್ಕಳನ್ನು ಸಮಾಧಾನ ಪಡಿಸುತ್ತಿದ್ದ ದುರ್ಗಾ, ಅಕ್ಷರಗಳನ್ನು ತಿದ್ದುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. 'ನಿಮ್ಮ ಅಮ್ಮನಿಗೆ ತೊಂದರೆ ಕೊಡಬೇಡಿ' ಎಂದು ನಡುವೆ ಬ್ಯಾನರ್ಜಿ ಮೇಷ್ಟ್ರು ಕೂಗು ಹಾಕುತ್ತಿದ್ದರು. 

ಒಂದು ದಿನ, ದುರ್ಗಾ ತನ್ನ ಶಾಲೆಯಲಿದ್ದಳು. ಸಾಯಿಂಕಾಲ ೫. ೩೦ರ ಸಮಯವಾಗಿತ್ತು. ದುರ್ಗಾಳ ಗಂಡನಾದ ಚುನ್ನಿ ಲಾಲ್ ಕೂಗಾಡುತ್ತಾ ಶಾಲೆಯ ಬಳಿ ಬಂದಿದ್ದನು. 'ಓ ದುರ್ಗಾ, ಹೊರಗೆ ಬಾ. ದುಡ್ಡು ಕೊಡು. ನಾನು ಶರಾಬು ಕುಡಿಯುವ ಹೊತ್ತಾಯ್ತು. ನಂಕಯ್ಲಿ ತಡ್ಕೊಳಕ್ಕಾಗ್ತಿಲ್ಲ.' ಪತಿಯ ಕೂಗಾಟವನ್ನು ಕೇಳಿದ ದುರ್ಗಾ ಒಳಗೇ ನಡುಗ ಹತ್ತಿದ್ದಳು. ಹಣ ಕೊಡದ್ದಿದ್ದರೆ ಅವನು ಹೋಗುವುದಿಲ್ಲವೆಂದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಆ ದಿನ ಅವಳ ಕೈಯಲ್ಲಿ ಒಂದು ರುಪಾಯಿಯೂ ಕೂಡಾ ಇರಲಿಲ್ಲ. 

ಚುನ್ನಿಯ ಕೂಗಾಟ ಮುಂದುವರೆದಿತ್ತು. 'ಓ ಹೆಂಗಸೇ, ಹೊರಗೆ ಬಾ. ಒಳಗೆ ಏನು ಮಾಡ್ತಿ? ನಿನ್ನ ಮೇಷ್ಟ್ರ ಜೊತೆ ಚಕ್ಕಂದವಾಡ್ತಿದ್ದೀಯ?' ಚುನ್ನಿ ಕೂಗಾಟವನ್ನು ನಿಲ್ಲಿಸುವುದಿಲ್ಲವೆಂದು ತಿಳಿದಿದ್ದ ದುರ್ಗಾ ಹೊರಗೆ ಬಂದಿದ್ದಳು. ದುರ್ಗಳ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದ ಚುನ್ನಿ 'ಹಣ ಕೊಡು, ಹಣ ಕೊಡು' ಎಂದು ಅರಚಿದ್ದ. 'ನನ್ನಲ್ಲಿ ಈ ದಿನ ಹಣವಿಲ್ಲ, ನಾಳೆ ಕೊಡುತ್ತೇನೆ' ಎಂದು ದುರ್ಗಾ ಅಂಗಲಾಚಿದರೂ ಚುನ್ನಿ ಸುಮ್ಮನಾಗಲಿಲ್ಲ. 

ಮಧ್ಯೆ ಪ್ರವೇಶ ಮಾಡಿದ ಬ್ಯಾನರ್ಜಿ ಮೇಷ್ಟ್ರು ಚುನ್ನಿಯನ್ನು ಸಮಾಧಾನ ಪಡಿಸಲೆತ್ನಿಸಿದ್ದರು. ಏರು ಧ್ವನಿಯಲ್ಲಿ ಕೂಗಾಡಿದ ಚುನ್ನಿ, 'ಏಯ್ ಮೇಸ್ಟ, ನಿನಗೂ ನನ್ನ ಹೆಂಡತಿಗೂ ಏನೋ ಸಂಬಂಧ? ಎಷ್ಟು ದಿನಗಳಿಂದ ಅವಳನ್ನು ಗುಟ್ಟಾಗಿ ಅನುಭವಿಸುತ್ತಿದ್ದೀಯಾ? ನನಗೆಲ್ಲಾ ತಿಳಿದಿದೆ. ಸೂಳೆ ಮಗನೇ, ನಾಳೆಯಿಂದ ನಮ್ಮ ಹಳ್ಳಿಗೆ ಬರಬೇಡ.' ಎಂದನು. ಕೋಪ ನೆತ್ತಿಗೇರಿದ ಚುನ್ನಿ, ಶಾಲೆಯ ಮೂಲೆಯಲ್ಲಿದ್ದ ಪರಕೆಯೊಂದನ್ನು ಎತ್ತಿಕೊಂಡು ಅದರಿಂದ ದುರ್ಗಾಳನ್ನು ಥಳಿಸ ಹತ್ತಿದನು. ದುರ್ಗಾಳನ್ನು ಬಿಗಿಯಾಗಿ ಹಿಡಿದ ಅವಳ ಮೂರೂ ಮಕ್ಕಳೂ ಅಳಲಾರಂಭಿಸಿದರು. ಮೇಷ್ಟ್ರು ಏನು ತೋಚದೆ ಸುಮ್ಮನೆ ನಿಂತಿದ್ದರು. ಥಳಿತವನ್ನು ನಿಲ್ಲಿಸದ ಚುನ್ನಿಯನ್ನು ನೋಡಿ ಮೇಷ್ಟ್ರ ಕಣ್ಣಲ್ಲಿ ನೀರಿನ ಹನಿ ಮೂಡಿತ್ತು. ತಮ್ಮ ಕಿಸೆಯಿಂದ ಕೆಲವು ನೋಟುಗಳನ್ನು ಹೊರ ತೆಗೆದ ಮೇಷ್ಟ್ರು, ಅವುಗಳನ್ನು ಚುನ್ನಿಯ ಕೈಯಲ್ಲಿಟ್ಟರು. ನೋಟುಗಳನ್ನು ತನ್ನ ಕಿಸೆಗಿಳಿಸಿದ ಚುನ್ನಿ ಮತ್ತೆ ಅರಚುತ್ತಾ 'ಏ ಮೇಸ್ಟಾ, ನೀನೇನು ಹಣವನ್ನು ಬಿಟ್ಟಿ ಕೊಡುತ್ತಿಲ್ಲ. ನನ್ನ ಹೆಂಡತಿ ಜೊತೆ ಮಲಗಿದ್ದಕ್ಕೆ ಹಣ ಕೊಡ್ತಿದ್ದೀಯ. ಮಲ್ಕೋ, ಮಲ್ಕೋ, ನನಗೆ ಹಣ ಕೊಡ್ತಾ ಇರು' ಎಂದನು. ಕೂಡಲೇ  ಚುನ್ನಿ ಶರಾಬಿನಂಗಡಿ ಕಡೆ ಓಡಿದನು. ಕಣ್ಣೀರಿಡುತ್ತಾ ದುರ್ಗಾ ಮಕ್ಕಳೊಂದಿಗೆ ಮನೆ ಕಡೆ ನಡೆದಳು. 

ಚುನ್ನಿಯೊಂದಿಗೆ ಮದುವೆಯಾದಾಗ ದುರ್ಗಾಳಿಗಿನ್ನು ೧೩ರ  ಪ್ರಾಯ. ಮದುವೆಯಾಗಿ ೧೪ ವರ್ಷಗಳುರುಳಿ ದುರ್ಗಾ ಮೂರು ಹೆಣ್ಣು ಮಕ್ಕಳನ್ನೂ ಹಡೆದಿದ್ದಳು. ಕಾಡಿನ ಬುಡಕಟ್ಟಿನ ಚುನ್ನಿಯ ಕೆಲಸ ಮರಗಳನ್ನು ಕಡಿಯುವುದಾಗಿತ್ತು. ಆದರವನು ದುಡಿಯುವುದಕ್ಕಿಂತಾ ಕುಡಿತದಲ್ಲೇ ಕಾಲ ಹರಣ ಮಾಡುತ್ತಿದ್ದನು. ನಾಲ್ಕು ಕಿ.ಮೀ. ದೂರವಿರುವ ಸಣ್ಣ ನಗರವೊಂದಕ್ಕೆ ನಿತ್ಯ ನಡೆದು ಹೋಗುತ್ತಿದ್ದ ದುರ್ಗಾ, ಕೆಲವು ಮನೆಗಳಲ್ಲಿ ಕೆಲಸವನ್ನು ಮಾಡುತ್ತಿದ್ದಳು. ಅವಳ ಸಂಪಾದನೆಯ ಬಹು ಭಾಗ ಚುನ್ನಿಯ ಕುಡಿತಕ್ಕೇ ಹರಿದು ಹೋಗುತ್ತಿತ್ತು. ದುರ್ಗಾಳನ್ನು ಹಣಕ್ಕಾಗಿ ಪೀಡಿಸಿ ಚುನ್ನಿ ಅವಳನ್ನು ಹೊಡೆಯುವುದು ನಿತ್ಯದ ಕ್ರಮವಾಗಿ ಹೋಗಿತ್ತು. 

ದುರ್ಗಾಳ ಹಳ್ಳಿ, ಕಾಡೊಳಗಿನ ದುರ್ಗಮ ಪ್ರದೇಶವಾಗಿದ್ದು, ಅವಳ ಹಳ್ಳಿಯವರೆಲ್ಲಾ ಕಡು ಬಡವರಾಗಿದ್ದರು. ಮುಖ್ಯ ರಸ್ತೆಯಲ್ಲಿರುವ ಬಸ್ ನಿಲ್ದಾಣ ತಲುಪಲು ಹಳ್ಳಿಗರು ೩ ಕಿ.ಮೀ.ನಷ್ಟು ದೂರವನ್ನು ಮಣ್ಣಿನ ರಸ್ತೆಯಲ್ಲೇ ನಡೆದು ಹೋಗಬೇಕಿತ್ತು. ಆ ನಿಲ್ದಾಣದಲ್ಲಿ ಕೆಲವು ಬಸ್ ಗಳು ಮಾತ್ರ ನಿಲ್ಲುತ್ತಿದ್ದವು. ಹಲವು ಬಾರಿ ಸಮೀಪದ ಪಟ್ಟಣವನ್ನು ತಲುಪಲು ಹಳ್ಳಿಗರು ಮತ್ತೆ ಒಂದು ಕಿ.ಮೀ.ನಷ್ಟು ದೂರವನ್ನು ನಡೆದೇ ಸಾಗಬೇಕಿತ್ತು. ಆ ಪಟ್ಟಣದಲ್ಲಿ ಮಾತ್ರ ದುರ್ಗಾಳ ಹಳ್ಳಿಗರಿಗೆ ಒಂದು ಕೆ.ಜಿ.ಗೆ ಒಂದು ರೂ.ಗಳ ಅಕ್ಕಿ, ಸರಕಾರಿ ರೇಷನ್ ಅಂಗಡಿಯಲ್ಲಿ ದೊರೆಯುತ್ತಿತ್ತು. ಮಣ್ಣಿನ ರಸ್ತೆಯಲ್ಲಿ ಮಳೆ ದಿನಗಳಲ್ಲಿ ನಡೆದು ಹೋಗುವುದು ಬಹಳ ತ್ರಾಸದಾಯಕವಾಗಿತ್ತು. 

ಒಂದು ದಿನ ದುರ್ಗಾ ತನ್ನ ಶಾಲೆಯ ಬ್ಯಾನರ್ಜಿ ಮೇಷ್ಟ್ರನ್ನು ಕೇಳಿದ್ದಳು. 'ಸರಕಾರದವರಿಗೆ ಹೇಳಿ ರೇಷನ್ ಅಂಗಡಿಯನ್ನು ನಮ್ಮ ಹಳ್ಳಿಗೇ ತರಿಸಬಾರದೇಕೆ?'

ಮೇಷ್ಟ್ರು ಉತ್ತರಿಸುತ್ತಾ, 'ನಾನು ಹೊರಗಿನವನು. ನಾನು ಕೇಳುವುದು ಸರಿಯಲ್ಲ. ನೀನೇ ಏಕೆ ಕೇಳಬಾರದು?' ಭಯಗೊಂಡಂತೆ ಕಂಡ ದುರ್ಗಾ, 'ನನ್ನ ಮಾತನ್ನು ಸರಕಾರದವರು ಕೇಳುವರೇ?' ಎಂದಳು. 'ಏಕಾಗಬಾರದು? ಹಳ್ಳಿಯ ೧೦-೨೦ ಹೆಂಗಸರನ್ನು ಜೊತೆ ಮಾಡಿಕೊಂಡು ಹೋಗು. ಆಗ ನಿನ್ನ ಮಾತನ್ನು ಅವರು ಕೇಳಲೇ ಬೇಕಾಗುತ್ತದೆ' ಎಂದರು ಮಾಸ್ಟರ್ಜಿ. 

ಒಂದು ದಿನ ದುರ್ಗಾ ಹಳ್ಳಿಯ ೨೦ ಮಹಿಳೆಯರನ್ನು ಜೊತೆ ಮಾಡಿಕೊಂಡು ಹೊರಟೇ ಬಿಟ್ಟಿದ್ದಳು. ನೆರೆ ಗ್ರಾಮಗಳ ಕೆಲವು ಮಹಿಳೆಯರೂ ದುರ್ಗಾಳ ತಂಡದೊಂದಿಗೆ ಸೇರಿಕೊಂಡಿದ್ದರು. ಕಾಲ್ನಡುಗೆಯಲ್ಲೇ ಇಡೀ ತಂಡ ನಡೆದು ಸಾಗಿತ್ತು. ತಂಡದ ಮುಂದೆ ದುರ್ಗಾ ಸಾಗಿದ್ದಳು. ದುರ್ಗಾಳ ತಂಡ ಅಂತೂ ಆಹಾರ ಇಲಾಖೆಯ ಕಚೇರಿಯನ್ನು ತಲುಪಿತ್ತು. ಮುಂದಾಳಾಗಿದ್ದ ದುರ್ಗಾಳೆ,  ಆಹಾರದ ಅಧಿಕಾರಿಯೊಂದಿಗೆ  ಮಾತನಾಡುತ್ತಾ, 'ಸಾರ್, ನಮ್ಮ ಹಳ್ಳಿ ಇಲ್ಲಿಂದ ೪ ಕಿ.ಮೀ.ದೂರದಲ್ಲಿದೆ. ತಿಂಗಳ ರೇಷನ್ ಪಡೆಯಲು ತಮ್ಮ ಪಟ್ಟಣಕ್ಕೆ ನಮ್ಮ ಸುತ್ತಮುತ್ತಲಿನ ಹಳ್ಳಿಗರು ಕಾಲ್ನಡುಗೆಯಲ್ಲೇ  ಬರಬೇಕಾಗುತ್ತದೆ. ತಾವು ನಮ್ಮ ಹಳ್ಳಿಯಲ್ಲೊಂದು ರೇಷನ್ ಅಂಗಡಿಯನ್ನೇಕೆ ಆರಂಭಿಸಬಾರದು?' ಎಂದು ಕೇಳಿದಳು. 

ಅಧಿಕಾರಿಗಳು ಉತ್ತರಿಸುತ್ತಾ, 'ತಾವುಗಳು ನಮಗೊಂದು  ಸ್ಥಳವನ್ನು ಕಲ್ಪಿಸಿ ಕೊಟ್ಟರೆ, ನಾವು ರೇಷನ್ ಅಂಗಡಿಯನ್ನು ತಮ್ಮ ಹಳ್ಳಿಯಲ್ಲೇ ಆರಂಭಿಸುತ್ತೇವೆ' ಎಂದರು. ತನ್ನ ಗುಡಿಸಿಲಿನಲ್ಲೇ ರೇಷನ್ ಅಂಗಡಿಯನ್ನು ಪ್ರಾರಂಭಿಸಬಹುದೆಂದು ದುರ್ಗಾ ಹೇಳಿದಾಗ, ಮಹಿಳೆಯರೆಲ್ಲರೂ ಚಪ್ಪಾಳೆ ತಟ್ಟಿದರು. 

ಮೇಲಿನ ಘಟನೆ ನಡೆದನಂತರ  ಕೆಲವು ದಿನಗಳು ಕಳೆದಿತ್ತು. ಅಕ್ಕಿ ಚೀಲವನ್ನು ಹೊತ್ತ ಲಾರಿಯೊಂದು ದುರ್ಗಾಳ ಹಳ್ಳಿಗೆ ಬಂದೇ ಬಿಟ್ಟಿತ್ತು. ಲಾರಿ ಬರುವುದೆಂದು ಕಾದಿದ್ದ ಮಹಿಳೆಯರು ಸಂತಸಗೊಂಡು ಲಾರಿಗೆ ಮತ್ತು ಲಾರಿ ಚಾಲಕರಿಗೆ ಹಾರಗಳನ್ನು ಹಾಕಿದರು. ಹಳ್ಳಿಗರೆಲ್ಲರೂ ಲಾರಿಗೆ ಪೂಜೆ ಮಾಡಿ ಆರತಿಯನ್ನು ಬೆಳಗಿದ್ದೂ ಆಗಿತ್ತು. ಹಳ್ಳಿಯ ಗಂಡಸರು ಲಾರಿಯ ಮುಂದೆ ಇಡುಗಾಯಿಯನ್ನು ಒಡೆದಿದ್ದೂ ನಡೆದಿತ್ತು. ಹಳ್ಳಿಗರೆಲ್ಲಾ ಮುಂದಾಗಿ ಲಾರಿಯಿಂದ ಅಕ್ಕಿಯ ಮೂಟೆಗಳನ್ನು ಇಳಿಸಿ ದುರ್ಗಾಳ ಮನೆಯೊಳಗೆ ಇಡಲಾರಂಭಿಸಿದ್ದರು. 

ಅಷ್ಟರಲ್ಲಿ ಎಲ್ಲಿಂದಲೋ ಬಂದ ದುರ್ಗಾಳ ಗಂಡ ಚುನ್ನಿ ಲಾಲ್ 'ನನ್ನ ಮನೆಯಲ್ಲಿ ಅಕ್ಕಿ      ಮೂಟೆಗಳನ್ನಿಡ ಬೇಡಿ. ನಾನು ಮಲಗುವುದೆಲ್ಲಿ? ಬೇಡ, ಬೇಡ' ಎಂದರುಚಿದನು. 

'ನಮ್ಮ ಮನೆಯನ್ನು ರೇಷನ್ ಅಂಗಡಿ ಮಾಡುವುದರಿಂದ, ಸರಕಾರ ನಮಗೆ ಬಾಡಿಗೆ ನೀಡುತ್ತದೆ. ಆ ಬಾಡಿಗೆಯ ಹಣ ನಿಮ್ಮ ಶರಾಬಿನ ಖರ್ಚಿಗೆ ದೊರಕುತ್ತದೆ' ಎಂದು ದುರ್ಗಾ ಜಾಣತನದಿಂದ ಚುನ್ನಿಯ ಕಿವಿಯಲ್ಲಿ ಹೇಳಿದಾಗಲೇ, ಚುನ್ನಿಯ ಮುಖದಲ್ಲಿ ರಂಗೇರಿದ್ದು. ಅವನೂ ಅಕ್ಕಿ ಮೂಟೆಗಳನ್ನು ಲಾರಿಯಿಂದ ಇಳಿಸಲಾರಂಭಿಸುವ ಕೆಲಸ ಮಾಡಲು ಶುರು ಮಾಡಿದನು. 

ತಮ್ಮ ಹಳ್ಳಿಯಲ್ಲೇ ರೇಷನ್ ಅಂಗಡಿ ಆರಂಭವಾಗುವಂತೆ ಮಾಡಿದ್ದಕ್ಕಾಗಿ, ಹಳ್ಳಿಗರೆಲ್ಲರೂ ದುರ್ಗಾಳನ್ನು ಅಭಿನಂದಿಸಿದರು. ಕೆಲವು ದಿನಗಳನಂತರ ಅದೇ ರೇಷನ್ ಅಂಗಡಿಯಲ್ಲಿ ಬೇಳೆ ಮತ್ತು ಅಡುಗೆ ಎಣ್ಣೆಯನ್ನೂ  ವಿತರಿಸಲಾರಂಭಿಸಿದರು. ಹಳ್ಳಿಗರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸುಮಾರು ಆರು ವಾರಗಳನಂತರ ಸುತ್ತಲಿನ ಹಳ್ಳಿಯವರಿಗೂ ರೇಷನ್ ಮಾಲುಗಳನ್ನು, ಅದೇ ರೇಷನ್ ಅಂಗಡಿಯಿಂದ  ವಿತರಿಸಲಾರಂಭಿಸಿದರು. 

ಕೆಲವು ತಿಂಗಳುಗಳು ಕಳೆದಿತ್ತು. ದುರ್ಗಾಳಿಗೀಗ ಓದಲು, ಬರೆಯಲು ಬರುತ್ತಿತ್ತು. ಸಾಕಷ್ಟು ವಿಷಯಗಳನ್ನು ಅವಳು ದಿನ ಪತ್ರಿಕೆಯನ್ನು ಓದಿ ತಿಳಿದುಕೊಳ್ಳುತ್ತಿದ್ದಳು. ಬ್ಯಾನರ್ಜಿ ಮೇಷ್ಟ್ರು ಒಂದು ದಿನ ತಂದಿದ್ದ ಪತ್ರಿಕೆಯಲ್ಲಿ ಸುದ್ದಿಯೊಂದು ಬಂದಿತ್ತು. 'ಹಳ್ಳಿಗಳ ಪಂಚಾಯಿತಿ ಕಾಯಿದೆಗೆ ಸರಕಾರ ತಿದ್ದುಪಡಿಯೊಂದನ್ನು ತಂದಿದೆ. ಹಳ್ಳಿ ಪಂಚಾಯಿತಿಯ ಸದಸ್ಯರುಗಳ ಸ್ಥಾನದಲ್ಲಿ, ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗಾಗಿ ಕಾದಿರಿಸಲಾಗಿದೆ' ಎಂಬ ಸುದ್ದಿಯನ್ನು ಓದಿದ ದುರ್ಗಾಳಿಗೆ ಪಂಚಾಯಿತಿ ಚುನಾವಣೆ ಇನ್ನೊಂದು ತಿಂಗಳಲ್ಲಿ ನಡೆಯುತ್ತದೆ ಎಂಬುದೂ ತಿಳಿದಿತ್ತು. ಸುದ್ದಿಯ ವಿವರಗಳನ್ನು ಮತ್ತೊಮ್ಮೆ ಓದಿದ ಬ್ಯಾನರ್ಜಿ ಮೇಷ್ಟ್ರು, 'ದುರ್ಗಾ ನೀನೇಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು?' ಎಂದು ಕೇಳಿದರು. ಪುಳಕಿತಳಾದ ದುರ್ಗಾ, 'ನಾನೂ ಸ್ಪರ್ಧಿಸಬಹುದೇ?' ಎಂದು ಕೇಳುತ್ತಾ ನಾಚಿದ್ದಳು. 

ನಾಮಪತ್ರಗಳನ್ನು ಸಲ್ಲಿಸುವ ದಿನ ಬಂದಿತ್ತು. ಹಳ್ಳಿಗರೊಂದಿಗೆ ಮೆರವಣಿಗೆಯಲ್ಲಿ ಬಂದ ದುರ್ಗಾ, ಹಳ್ಳಿಯ ಮುಂದಿನ ಕಾಳಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿದನಂತರ  ಪಂಚಾಯಿತಿ ಕಚೇರಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದ್ದಳು. ಬೇರ್ಯಾರೂ ಪ್ರತಿಸ್ಪರ್ಧಿಗಳು ಇಲ್ಲದ್ದರಿಂದ, ದುರ್ಗಾ ಅವಿರೋಧವಾಗಿ ಆಯ್ಕೆಗೊಂಡಿದ್ದಳು. 

ಆ ಬಾರಿಯ ಪಂಚಾಯಿತಿಯ ಅಧ್ಯಕ್ಷರ ಸ್ಥಾನ ಪರಿಶಿಷ್ಟ ವರ್ಗಗಳಿಗೆ ಮೀಸಲಾಗಿದ್ದರಿಂದ, ದುರ್ಗಾಳನ್ನೇ ಅಧ್ಯಕ್ಷಳನ್ನಾಗಿ ಆಯ್ಕೆ ಮಾಡಲಾಗಿತ್ತು. ಒಂದು ದಿನ ಆ ಕ್ಷೇತ್ರದ ಶಾಸಕರು ದುರ್ಗಾಳ ಹಳ್ಳಿಗೆ ಭೇಟಿ ನೀಡಿದ್ದರು. ಸುತ್ತಲಿನ ಎಲ್ಲ ಹಳ್ಳಿಗಳನ್ನೂ ಸಂಪರ್ಕಿಸುವ ಮತ್ತು ಎಲ್ಲಾ ಹಳ್ಳಿಗಳನ್ನು ಮುಖ್ಯ ರಸ್ತೆಗೆ ಜೋಡಿಸುವ ರಸ್ತೆಗಳನ್ನು ನಿರ್ಮಿಸಲೇ ಬೇಕೆಂದು ದುರ್ಗಾ ಶಾಸಕರ ಮುಂದೆ ಬೇಡಿಕೆ ಇಟ್ಟಿದ್ದಳು. ರಸ್ತೆಗಳಿಗೆ ಮಂಜೂರನ್ನು ಸರಕಾರದಿಂದ ಪಡೆದ ದುರ್ಗಾ ಸಂಭ್ರಮಿಸಿದ್ದಳು.  'ಮನರೇಗಾ (MANREGA)' ಎಂಬ ಯೋಜನೆಯಡಿ  ರಸ್ತೆಗಳ ನಿರ್ಮಾಣ ಕಾರ್ಯ ಶುರುವಾಗಿತ್ತು. ನಿರ್ಮಾಣ ಕಾರ್ಯಕ್ಕೆ ಹಳ್ಳಿಯ ಜನರುಗಳನ್ನೇ ನೇಮಿಸಿಕೊಳ್ಳಲಾಗಿತ್ತು. ಎಲ್ಲಾ ರಸ್ತೆಗಳ ನಿರ್ಮಾಣ ಕಾರ್ಯ ಎರಡು ತಿಂಗಳುಗಳಲ್ಲಿ ಮುಗಿದಿತ್ತು. ಸುತ್ತಲ ಹಳ್ಳಿಗಳೆಲ್ಲವಕ್ಕೂ ಮುಖ್ಯ ರಸ್ತೆಯೊಂದಿಗೆ ಸಂಪರ್ಕ ಕಲ್ಪಿಸಲು, ಎರಡು ಸರಕಾರೀ ಬಸ್ಸುಗಳು ಮಂಜೂರು ಆಗಿ, ಬಸ್ ಸಂಚಾರವೂ ಆರಂಭವಾಗಿತ್ತು. ಎಲ್ಲಾ ಕಾರ್ಯಗಳು ನಡೆಯುವಂತೆ ಪ್ರಾಮಾಣಿಕವಾಗಿ ದುಡಿದ ದುರ್ಗಾಳಿಗೆ  ಹಳ್ಳಿಗರೆಲ್ಲರೂ ಸನ್ಮಾನವನ್ನು ಮಾಡಿದ್ದರು. 

ಮೇಲಿನ ಅಧಿಕಾರಿಗಳ ನೆರವಿನಿಂದ ಹಳ್ಳಿಗಳ ಹಿರಿಯರಿಗೆ ಮತ್ತು ವಿಧವೆಯರಿಗೆ ಮಾಸಿಕ ಪಿಂಚಣಿ ಬರುವಂತಹ ಏರ್ಪಾಡನ್ನೂ ದುರ್ಗಾ ಮಾಡಿದ್ದಳು. ಅವಳ ಅಧಿಕಾರಾವಧಿಯ ಸಮಯದಲ್ಲೇ ದುರ್ಗಾ ತನ್ನ ಹಳ್ಳಿಯಲ್ಲಿ ಶಾಲೆಯೊಂದು ಆರಂಭವಾಗುವಂತೆ ಮಾಡಿದ್ದಳು. ನೆರೆ ಹಳ್ಳಿಗಳ ಮಕ್ಕಳೂ ಅದೇ ಶಾಲೆಯಲ್ಲಿ ಕಲಿಯಲಾರಂಭಿಸಿದ್ದರು. ಶಾಲೆಯಲ್ಲಿ ಮಧ್ಯಾಹ್ನದೂಟದ ವ್ಯವಸ್ಥೆಯೂ ಆಯಿತು. 

ದುರ್ಗಾಳ ಈ ಎಲ್ಲ ಕ್ರಮಗಳಿಂದ ಸುತ್ತಲಿನ ಹಲವು ಹಳ್ಳಿಗರ ಹಸಿವಿನ ಸಮಸ್ಯೆ ಸಾಕಷ್ಟು ನೀಗಿತ್ತು. ಹಳ್ಳಿಗಳ ಬಡ ರೈತರಿಗೆ ಸರಕಾರದಿಂದ ಪ್ರತಿ ವರ್ಷ ರೂ. ೬೦೦೦ ಗಳ ಸಹಾಯವೂ ದೊರೆಯ ಹತ್ತಿತು. 

ತನ್ನ ಹಳ್ಳಿಗೊಂದು ಆಸ್ಪತ್ರೆ ಬೇಕೆಂಬುದು ದುರ್ಗಾಳ ಮಹಾದಾಸೆಯಾಗಿತ್ತು. ಚಿಕಿತ್ಸೆಗಾಗಿ ಹಳ್ಳಿಗರು ೪ ಕಿ.ಮೀ.ನಷ್ಟು ದೂರದ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಇತ್ತು. ಸರಕಾರದೊಡನೆ ಎರಡು ವರ್ಷಗಳಷ್ಟು ದೀರ್ಘಕಾಲ ದುರ್ಗಾ ಹೋರಾಟವನ್ನು ಮುಂದುವರೆಸಿದ್ದಳು. ರಾಜ್ಯ ಸರಕಾರದ ಆರೋಗ್ಯ ಮಂತ್ರಿಗಳನ್ನು ದುರ್ಗಾ ಭೇಟಿ ಮಾಡಿದನಂತರವೇ ಅವಳ ಹಳ್ಳಿಗೆ ಆಸ್ಪತ್ರೆಯೊಂದು ಮಂಜೂರಾಗಿದ್ದು. ಅದರಿಂದ ಸುತ್ತಲ ಹಳ್ಳಿಗರಿಗೆಲ್ಲರಿಗೂ ಆಸ್ಪತ್ರೆಯ ಸೌಲಭ್ಯ ದೊರೆತಂತಾಗಿತ್ತು. 

ದುರ್ಗಾಳ ಸತತ ಪರಿಶ್ರಮ ಮತ್ತು ಅವಳು ಸಾಧಿಸಿದ ಪ್ರಗತಿಯ ವಿಷಯ ಮಾಧ್ಯಮಗಳ ಗಮನಕ್ಕೆ ಬಂದಿತ್ತು. ಅಂತಾರಾಷ್ಟ್ರೀಯ ಮಾಧ್ಯಮಗಳು ದುರ್ಗಾಳ ಸಾಧನೆಯನ್ನು ಗುರುತಿಸಿದಾಗ, ವಿಶ್ವದ ಗಮನ ಅವಳ ಮೇಲಿತ್ತು. ರಾಜ್ಯ ಮತ್ತು ಕೇಂದ್ರ ಸರಕಾರದ ಪ್ರಶಸ್ತಿ-ಸನ್ಮಾನಗಳು ದುರ್ಗಾಳನ್ನರಸಿ ಬಂದಿದ್ದವು. 

ನಾಟಕ ಕೊನೆಗೊಳ್ಳುತ್ತಲೇ, ರೋಹಿಣಿ ತನ್ನ ಕಿರಣನಿಗೆ ಫೋನಾಯಿಸಿ ಮಾತನ್ನಾಡಿದ್ದಳು. 'ನಾಟಕ ಹೇಗಿತ್ತು? ಅದೊಂದು ಸತ್ಯಕತೆ. ಉಚಿತವಾಗಿ ಆಹಾರವನ್ನೊದಗಿಸುವುದರಿಂದ ಹಸಿವಿನ ಸಮಸ್ಯೆಯನ್ನು ತೊಲಗಿಸಲಾರದು. ಮಹಿಳೆಯರ ಸಬಲೀಕರಣ ನಮ್ಮ ಹಳ್ಳಿಗಳಲ್ಲಿ ಕ್ರಾಂತಿಯನ್ನು ತರಬಲ್ಲದು. ಹಸಿವಿನ ಸಮಸ್ಯೆಯ ನಿವಾರಣೆಗೆ  ಸಮಗ್ರ ಹೋರಾಟದ ಅವಶ್ಯಕತೆ ಇದೆ. ಅಂತಹ ಸಮಗ್ರ ಹೋರಾಟವನ್ನು ದುರ್ಗಾ ಮಾಡಿ ಗೆದ್ದಿದ್ದಾಳೆ' ಎಂದಾಗ ರೋಹಿಣಿಯ ಸಂತಸ, ಗೆಳಯ ಕಿರಣನದ್ದೂ  ಆಗಿತ್ತು. 

***          

ರೋಹಿಣಿಯ ಸಂಶೋಧನಾ ಕಾರ್ಯ ಎಡಬಿಡದೆ ಸಾಗಿತ್ತು. ಕೋವಿಡ್ ಮಹಾಮಾರಿ ಇಡೀ ದೇಶವನ್ನು ವ್ಯಾಪಿಸಿ ತಂದೊಡ್ಡಿದ್ದ ಸಮಸ್ಯೆಗಳ ಸಮಗ್ರ ಅಧ್ಯಯನ ಅವಳ ಸಂಶೋಧನೆಯ ಒಂದು ಮುಖ್ಯ ಭಾಗವಾಗಿತ್ತು. 'ಫೈಟ್ ಹಂಗರ್ ಪ್ರಾಜೆಕ್ಟ್' ಸಂಸ್ಥೆಯ ಅಧ್ಯಕ್ಷರಾದ ದಿವಾಕರ್ ರವರನ್ನು ಒಂದು ದಿನ  ಸಂಪರ್ಕಿಸಿ ರೋಹಿಣಿ ಮಾತನಾಡಿದ್ದಳು. 'ನಮಸ್ಕಾರ ಸಾರ್. ನಾನು ರೋಹಿಣಿ. ನಾನೊಬ್ಬ ಸಮಾಜ ಶಾಸ್ತ್ರಜ್ಞೆ ಮತ್ತು ಸಂಶೋಧಕಿ. ವಿಶ್ವ ಹಸಿವಿನ ದಿನದಂದು ತಾವು ಟಿ.ವಿ.ಚರ್ಚೆಯಲ್ಲಿ ಭಾಗವಹಿಸಿ ಮಂಡಿಸಿದ ವಿಷಯಗಳಿಂದ ನಾನು ತುಂಬಾ ಪ್ರಭಾವಿತಳಾಗಿದ್ದೇನೆ. ತಮ್ಮಿಂದ ನನ್ನ ಸಂಶೋಧನಾ ಕಾರ್ಯಕ್ಕೆ ಮಾರ್ಗದರ್ಶನ ದೊರೆಯಲೆಂದು ಆಶಿಸಬಹುದೇ?'

'ನನ್ನನ್ನು ಸಂಪರ್ಕಿಸಿದ್ದಕ್ಕಾಗಿ ತಮಗೆ ಧನ್ಯವಾದಗಳು. ತಮ್ಮ ಸಮಾಜ ಸೇವೆಯ ಬಗ್ಗೆ ನಾನು ಮಾಧ್ಯಮಗಳಲ್ಲಿ ಹಲವಾರು ಬಾರಿ ಓದಿದ್ದೇನೆ. ನನ್ನ ಸ್ನೇಹಿತರಾದ ಡಾ. ಕಿರಣರವರು ತಮ್ಮ ಸಂಶೋಧನಾ ಕಾರ್ಯದ  ಬಗ್ಗೆ ನನಗೆ ತಿಳಿಸಿದ್ದಾರೆ. ತಮ್ಮ ಮಾರ್ಗನಿರ್ದೇಶನಕ್ಕಾಗಿ ನನ್ನನ್ನು ಸಂಪರ್ಕಿಸಿದ್ದು ನನಗೆ ಹೆಮ್ಮೆಯ ವಿಷಯ. 

ನಾನೇನು ವೈದ್ಯನಲ್ಲ. ಆದರೂ ಸಮಸ್ಯೆಯ ಅರಿವು ನನಗಿದೆ. ಎಲ್ಲಾ ಮಾಧ್ಯಮಗಳೂ ಕೋವಿಡ್ ಸಮಸ್ಯೆಯನ್ನು ಅತಿರಂಜಿತವಾಗಿ ಬಣ್ಣಿಸುತ್ತಿವೆ. ಆ ರೀತಿಯ ಬಣ್ಣನೆಯಿಂದ ಜನರುಗಳು ಭಯಭೀತರಾಗುವುದಿಲ್ಲವೇ? ಟಿ.ಆರ್.ಪಿ. (TRP) ಹೆಚ್ಚಿಸಿಕೊಳ್ಳುವುದೊಂದೇ ಮಾಧ್ಯಮಗಳ ವ್ಯಾಪಾರವಾಗಿ ಹೋಗಿದೆ. "ಎಲ್ಲಾ ಮಾಧ್ಯಮಗಳಲ್ಲಿ ಕೋವಿಡ್ ಕುರಿತಾದ ಎಲ್ಲಾ ಕಾರ್ಯಕ್ರಮಗಳನ್ನು ಮತ್ತು ಸುದ್ದಿ ಪ್ರಸಾರಗಳನ್ನೂ ಎರಡು ತಿಂಗಳುಗಳ ಕಾಲ ನಿಷೇಧಿಸಿದರೆ, ಕೋವಿಡ್ ಸಮಸ್ಯೆಯನ್ನು ಹತ್ತಿಕ್ಕುವಲ್ಲಿ ಭಾರಿ ಮುನ್ನಡೆ ದೊರೆಯಬಹುದೆಂಬುದು" ಕೆಲವು ಮನಶ್ಯಾಸ್ತ್ರಜ್ಞರ ಅಭಿಪ್ರಾಯವಾಗಿದೆ." ಮತ್ತೆ ಕೆಲವರು ಹೇಳುವ ಪ್ರಕಾರ, ಮಾಧ್ಯಮಗಳು ವಿಷಯವನ್ನು ಕೊಂಚ ವೈಭವೀಕರಿಸಿ ಸರಕಾರ ಮತ್ತು ಜನರಗಳನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿವೆ" ಎಂಬುದಾಗಿದೆ. ಟಿ.ವಿ.ಗಳಲ್ಲಿ ಇಷ್ಟೆಲ್ಲ ಎಚ್ಚರಿಕೆಯ ಸಂದೇಶಗಳನ್ನು ಸತತವಾಗಿ ನೀಡುತ್ತಿದ್ದರೂ, ಎಗ್ಗಿಲ್ಲದೆ ಸಾಗಿರುವ ಜನರುಗಳ ಮೋಜು-ಮಸ್ತಿ ಮಾತ್ರ ವಿಷಾದಕರ. 

ಜನರುಗಳ ಮನಸ್ಸಿನಲ್ಲಿ ಕೋವಿಡ್ ಬಗೆಗಿನ ಭಯವನ್ನು ನಿವಾರಿಸಿ, ವಿಶ್ವಾಸವನ್ನು ಮೂಡಿಸುವ ಕಾರ್ಯ ಮೊದಲು ನಡೆಯಬೇಕು. "ಧೈರ್ಯಮ್ ಸರ್ವತ್ರ ಸಾಧನಂ" ಎಂಬ ಸಂಸ್ಕೃತ ಭಾಷೆಯ  ಮಾತನ್ನು ತಮಗೆ ನೆನಪಿಸಲಿಚ್ಛಿಸುತ್ತೇನೆ. ಜನರುಗಳಲ್ಲಿ ಮೂಡಿರುವ ಭಯದ ವಾತಾವರಣವೂ ಕೋವಿಡ್ ತೀವ್ರವಾಗಿ ಹರಡಲು ಕಾರಣ ಎಂಬುದು ಸತ್ಯ. ವೈದ್ಯರು ಮತ್ತು ಮನಶ್ಯಾಸ್ತ್ರಜ್ಞರು ಸಂಶೋಧಿಸಿ ಪ್ರತಿಪಾದಿಸುತ್ತಿರುವ  "ಸೈಕೊನ್ಯೂರೋಇಮ್ಮ್ಯೂನೊಲೊಜಿ (psychoneuroimmunology)" ಎಂಬುದೊಂದು  ಹೊಸ ವಿಜ್ಞಾನದ ಕವಲು. ಅದರ ಪ್ರಕಾರ, ಜನರುಗಳ ಮಾನಸಿಕ ಭಯ ಅವರುಗಳ ರೋಗ ನಿರೋಧಕ ಶಕ್ತಿಯನ್ನು ಬಹಳಷ್ಟು ಕುಂದಿಸಬಲ್ಲದು ಎನ್ನುತ್ತದೆ. ಕೋವಿಡ್ ಮಹಾಮಾರಿಯೂ ಬಹಳ ದಿನ ನಮ್ಮನ್ನು ಕಾಡದು ಮತ್ತು ಅದು ತನಗೆ ತಾನೇ ದುರ್ಬಲಗೊಳ್ಳುವುದು ಪ್ರಕೃತಿಯ ವಿಧಾನವೆಂಬ  ಧೈರ್ಯವನ್ನು ಜನರುಗಳಲ್ಲಿ ಮೂಡಿಸಬೇಕಾದ ಅವಶ್ಯಕತೆ ಇದೆ.' 

 ಡಾ. ದಿವಾಕರರ ವಿಷಯ ಧಾರೆ ರೋಹಿಣಿಯ ಸಂಶೋಧನಾ ಕಾರ್ಯಕ್ಕೆ ಒಂದು ಹೊಸ ಆಯಾಮವನ್ನು ತೋರಿಸಿಕೊಟ್ಟಂತಾಗಿದ್ದು ಸುಳ್ಳಲ್ಲ. 

'ಹೌದು, ಜನರುಗಳ ಭಯವನ್ನು ನಿವಾರಿಸಿ, ಅವರುಗಳ ಮನಃಸ್ಥಿತಿಯನ್ನು ಸುಧಾರಿಸಬೇಕಾದ ತುರ್ತು ಅವಶ್ಯಕತೆ ಇದೆ. ಆ ಕಾರ್ಯ ಹೇಗಾಗಬೇಕು?' ಎಂಬುದು ರೋಹಿಣಿಯ ಪ್ರಶ್ನೆಯಾಗಿತ್ತು.

'ರೋಹಿಣಿಯವರೇ, ಕೋವಿಡ್ ಎಂಬುದು ಮನುಕುಲ ಎದುರಿಸುತ್ತಿರುವ ಮೊದಲ ಮಹಾಮಾರಿಯಲ್ಲ. ನಮ್ಮ ಪ್ರಪಂಚ ಕೋವಿಡ್ಗಿಂತ ಭಯಂಕರವಾದ ಮಹಾಮಾರಿಯನ್ನು ಎದುರಿಸಿ ಬದುಕುಳಿದಿದೆ. ಹೌದು, "ಸ್ಪ್ಯಾನಿಷ್ ಫ್ಲೂ - ೧೯೧೮ (Spanish Flu - 1918)"ರ ಪ್ರಸ್ತಾಪವನ್ನು ನಾನು ಮಾಡುತ್ತಿದ್ದೇನೆ. ೧೯೧೮-೨೦ರ ಅವಧಿಯಲ್ಲಿ ವಿಶ್ವವನ್ನು ವ್ಯಾಪಿಸಿದ ಆ ಮಹಾಮಾರಿ ೫ ಕೋಟಿಯಷ್ಟು ಜನರುಗಳ ಪ್ರಾಣವನ್ನು ಹರಣ ಮಾಡಿತ್ತು ಎಂಬುದು ತಮಗೆ ತಿಳಿದಿದೆಯೇ? ೧೯೧೮ರ ಮಹಾಮಾರಿ ನಮ್ಮ ಭಾರತ ದೇಶದ ಪಾಲಿಗೆ ಮಾರಕವಾಗಿ, ನಮ್ಮ ೧. ೫ ಕೋಟಿ ಜನರುಗಳ ಪ್ರಾಣಗಳನ್ನು ತೆಗೆದಿತ್ತು. ತಮ್ಮ ಸಂಶೋಧನಾ ಪ್ರಬಂಧದಲ್ಲಿ ೧೯೧೮ರ ಮಹಾಮಾರಿಯನ್ನು ಪ್ರಸ್ತಾಪಿಸಲೇ ಬೇಕು. ಆ ಕಾಲದ ಕುತೂಹಲಕಾರಿ ಘಟನೆಯ ಕತೆಯೊಂದನ್ನು ನಾನು ಕಳುಹಿಸುತ್ತಿದ್ದೇನೆ. ಆ ಕತೆಯನ್ನೋದಿದರೆ, ತಮಗೆ ಸ್ಪ್ಯಾನಿಷ್ ಫ್ಲೂ - ೧೯೧೮ರ ಮಹಾಮಾರಿಯ ಬಗ್ಗೆ ಹೆಚ್ಚು ಅಧ್ಯಯನ ನಡೆಸುವ ಆಸಕ್ತಿ ಮೂಡುತ್ತದೆ ಎಂದು ಭಾವಿಸುತ್ತೇನೆ.' ಹೀಗಿದ್ದ ಡಾ. ದಿವಾಕರವರ ಮಾತುಗಳನ್ನು ಕೇಳಿದ ರೋಹಿಣಿಯ ಸಂಶೋಧನೆಯ ಉತ್ಸಾಹ ಇಮ್ಮಡಿಯಾಗಿತ್ತು. 

ದಿವಾಕರ್ ರವರು ಕಳುಹಿಸಿದ ಸ್ಪ್ಯಾನಿಷ್ ಫ್ಲೂ - ೧೯೧೮ರ ಸಮಯದ ಕತೆಯನ್ನು ಕುತೂಹಲದಿಂದ ರೋಹಿಣಿ ಓದ ಹತ್ತಿದ್ದಳು. .

ಅದಿತಿ ಜೋಗಳೇಕರ್ ೧೭ರ ಯುವತಿ. ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದ ಕಟ್ಟಾ ಅಭಿಮಾನಿ ಅವಳಾಗಿದ್ದಳು. ಅಂದು ಫೆಬ್ರವರಿ ೨೮ರ ದಿನವಾಗಿತ್ತು. ಅಂದು ಅದಿತಿಯ ಅಜ್ಜಿ ಸುಲಭ ಜೋಗಳೇಕರ್ ರವರ ಜನ್ಮದಿನವಾಗಿತ್ತು. ಸುಲಭರವರೇ ಅದಿತಿಯ ಮೊದಲ ಸಂಗೀತ ಗುರುಗಳಾಗಿದ್ದವರು. ತನ್ನಜ್ಜಿಯ ಜನ್ಮದಿನವಾದ ಅಂದು ಅದಿತಿಯ ನೆನಪಿನ ಲಹರಿ ತನ್ನಜ್ಜಿಯ ಜೀವನದ ವೃತ್ತಾಂತಗಳ ಕಡೆ ಹರಿದಿತ್ತು. 

ಪಾದರಸದಂತೆ ಚುರುಕಾದ ಸುಲಭ, ಹಲವು ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು. ಶಾಸ್ತ್ರೀಯ ಗಾಯನದ ಜೊತೆಗೆ, ಚಿತ್ರಕಲೆ, ಬಟ್ಟೆ ಹೊಲಿಗೆ ಮತ್ತು ಕಸೂತಿಯ ಕೆಲಸಗಳಲ್ಲಿ ಅವರು ಸಿದ್ಧಹಸ್ತೆಯಾಗಿದ್ದರು. ಸುಲಭಳಿಗೆ ಕಪ್ಪು ಮೊಲಗಳೆಂದರೆ ಪಂಚಪ್ರಾಣ. ಆಕೆ ಸಾಯುವ ಕೆಲವು ದಿನಗಳ ಮುಂಚೆ ಅವರು ಕಪ್ಪು ಮೊಲವೊಂದನ್ನು ತರಿಸಿ ಸಾಕಿಕೊಂಡಿದ್ದರು. ಬಹಳ ಆಕರ್ಷಕವಾದ ಆ ಕಪ್ಪು ಮೊಲಕ್ಕೆ ಸುಲಭ, 'ಶಾಲು' ಎಂದು ಹೆಸರಿಟ್ಟಿದ್ದರು. ಸುಲಭರವರ ಕಡೆಯ ದಿನಗಳಲ್ಲಿ ಅವರ ಆರೋಗ್ಯ ಕ್ಷೀಣಿಸುತ್ತಿರುವಾಗ, ಶಾಲುವೇ ಅವರ ಏಕೈಕ ಸಂಗಾತಿಯಾಗಿತ್ತು. 'ಶಾಲು' ಸುಲಭರಿಗೆ ಸುಮಾರು ಒಂದು ಶತಮಾನದ ಹಳೆಯ ನೆನಪನ್ನು ಸ್ಮರಿಸುವಂತೆ ಮಾಡಿತ್ತು. 

ಸುಲಭ ಜೋಗಳೇಕರ್ ಜನಿಸಿದ್ದು ೧೯೦೯ರಲ್ಲಿ. ಅವಳ ತಂದೆ ದೀನನಾಥ್ ರವರು ಕೈಮಗ್ಗದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸುಲಭ ಸುಮಾರು ೭ ವಯಸ್ಸಿನವಳಾಗಿದ್ದಾಗ ಅವಳ ತಾಯಿ ಅವಳಿಗೊಂದು ಕಪ್ಪು ಮೊಲವನ್ನು ತಂದು ಕೊಟ್ಟಿದ್ದರು. ಸುಲಭ ತನ್ನ ಕಪ್ಪು ಮೊಲಕ್ಕೆ ನೀಡಿದ್ದ ಹೆಸರು, ಅಂದು ಕೂಡ 'ಶಾಲು' ಎಂಬುದಾಗಿತ್ತು. ಸುಲಭ ತನ್ನ ಮೊಲ ಶಾಲುವಿನೊಂದಿಗೆ ಎರಡು ವರ್ಷ ಖುಷಿಯಿಂದಲೇ ಬೆಳೆದಿದ್ದಳು. ಆದರೆ ಸುಲಭಳ ತಂದೆ ದೀನನಾಥರಿಗೆ ಸಾಕು ಪ್ರಾಣಿಗಳ ಮೇಲೆ ದ್ವೇಷವಿತ್ತು. ಸುಲಭಳ ಮೇಲಿನ ಪ್ರೀತಿಗಾಗಿ ಮಾತ್ರ ಅವರು ಶಾಲುವಿನ ತುಂಟಾಟಗಳನ್ನು ಹೇಗೋ ಸಹಿಸಿಕೊಂಡಿದ್ದರು. ಈ ನಡುವೆ ಯಾರೋ ದೀನನಾಥರ ಕಿವಿಗೆ ಚಾಡಿಯೊಂದನ್ನು ಚುಚ್ಚಿದ್ದರು. ಕಪ್ಪು ಮೊಲ ಮನೆಗೆ ಕೆಡಕು ತರಬಹುದೆಂದು ನಂಬಿದ್ದ ಅವರು, ಒಂದು ದಿನ ಶಾಲುವನ್ನು ಎತ್ತಿಕೊಂಡು ಹೋಗಿ ಸಮೀಪದ ಕಾಡೊಂದರಲ್ಲಿ ಬಿಟ್ಟು ಬಂದಿದ್ದರು. ಶಾಲುವನ್ನು ಕಳೆದುಕೊಂಡ ಚಿಕ್ಕ ಹುಡುಗಿ ಬಹಳ ನೊಂದು ಹೋಗಿದ್ದಳು. 

೧೯೧೮ರ ಆಗಸ್ಟ್ ತಿಂಗಳು ಶುರುವಾಗಿತ್ತು. ಸುಲಭಳಿಗೆ ಆಗ ೯ ವರ್ಷಗಳು ತುಂಬಿದ್ದವು. ತನ್ನ ಮೂವರು  ಅಕ್ಕಂದಿರೊಂದಿಗೆ ಸುಲಭ, ಶಾಲೆಯಿಂದ ಹಿಂತಿರುಗುತ್ತಿದ್ದ ಸಮಯದಲ್ಲಿ ಭಾರೀ ಮಳೆಯೊಂದು ಬಂದಿತ್ತು. ನಾಲ್ಕೂ ಜನ ಅಕ್ಕ-ತಂಗಿಯರು ಮನೆ ತಲುಪುವ ಹೊತ್ತಿಗೆ ನೆಂದು ತೊಪ್ಪೆಯಾಗಿದ್ದರು. ದಪ್ಪವಾದ ಬಟ್ಟೆಯೊಂದರಿಂದ ಎಲ್ಲಾ ನಾಲ್ಕು  ಹೆಣ್ಣು ಮಕ್ಕಳ ಕೂದಲುಗಳನ್ನು ಸುಲಭಳ ತಾಯಿ ಒರೆಸಿ, ಊಟವನ್ನು ಉಣಿಸಿ ಮಲಗಿಸಿದ್ದರು. ಬೆಳಗಾಗುವ ಹೊತ್ತಿಗಾಗಲೇ ಸುಲಭಳ ಮೂರು ಅಕ್ಕಂದಿರಿಗೂ ಜ್ವರವೇರಿತ್ತು. ಗಾಬರಿಯಾದ ದೀನನಾಥರು,  ಪಕ್ಕದ ಮನೆಯ  ಪಂಡಿತರನ್ನು ತಮ್ಮ ಮನೆಗೆ ಕರೆಸಿದ್ದರು. ಸಹೋದರಿಯರನ್ನು ಪರೀಕ್ಷಿಸಿದ ಪಂಡಿತರು ಕೆಲವು ಔಷಧಿಗಳನ್ನು ಕೊಟ್ಟಿದ್ದರು. 'ಸುತ್ತಲ ಹಳ್ಳಿಗಳಲೆಲ್ಲಾ ವಿಚಿತ್ರ ಜ್ವರವೊಂದು ಜನರನ್ನು ಕಾಡುತ್ತಿದೆ. ಜ್ವರ ಬಡಪೆಟ್ಟಿಗೆ ಇಳಿಯುತ್ತಿಲ್ಲ. ಆ ರೀತಿಯ ವಿಚಿತ್ರ ಜ್ವರ ಮುಂಬೈ ಮೂಲಕ ಹಿಂತಿರುಗುತ್ತಿರುವ ಮೊದಲ ಮಹಾಯುದ್ಧದ ಭಾರತೀಯ  ಸೈನಿಕರುಗಳಿಂದ ಹರಡುತ್ತಿದೆಯೆಂಬ ವದಂತಿಯಿದೆ.ಆದುದರಿಂದ ಆ ರೀತಿಯ ರೋಗವನ್ನು "ಬಾಂಬೆ ಜ್ವರ" ಎಂದೇ ಜನರು ಕರೆಯುತ್ತಿದ್ದಾರೆ. ಸರಕಾರ ರೋಗವನ್ನು 'ಸ್ಪ್ಯಾನಿಷ್ ಫ್ಲೂ' ಎಂದು ಕರೆದು, ಅದು ಬೇಗನೆ ಹರಡುತ್ತಿದ್ದು, ಜನರುಗಳಿಗೆ ಮಾರಕವಾಗಿದೆ ಎಂದು ಡಂಗೂರ ಹೊಡೆಸುವ ಮೂಲಕ ಜನರುಗಳನ್ನು ಎಚ್ಚರಿಸುತ್ತಿದೆ.  ಯಾವುದಕ್ಕೂ ಹುಷಾರಾಗಿರಿ' ಎಂದು ಪಂಡಿತರು, ದೀನನಾಥರಿಗೆ ತಿಳಿಸಿದ್ದರು. 

ಹಲವು ದಿನಗಳು ಕಳೆದರು ಸುಲಭಳ ಸಹೋದರಿಯರ ಜ್ವರ ಕಮ್ಮಿಯಾಗಲಿಲ್ಲ. ಮುಂದಿನ ಎರಡು ದಿನಗಳಲ್ಲಿ ಅವರುಗಳ ಮೂಗಿನ ಮೂಲಕ ರಕ್ತದ ಸೋರುವಿಕೆ ಶುರುವಾಗಿತ್ತು. ಮೂವರು ಸಹೋದರಿಯರಿಗೂ ಊಸಿರಾಡುವುದು ಕಷ್ಟವಾಗುತ್ತಿತ್ತು. ಅದೇ ವಾರದಲ್ಲಿ ದೀನನಾಥರಿಗೂ ಅದೇ ರೀತಿಯ ಜ್ವರ ಬಂದು ಹಾಸಿಗೆ ಹಿಡಿದಿದ್ದರು. 'ಬಾಂಬೆ ಜ್ವರ' ಹಳ್ಳಿಯ ಹಲವರಿಗೆ ತಗುಲಿ ಜನರುಗಳಲ್ಲಿ ಗಾಬರಿಯನ್ನುಂಟು ಮಾಡಿತ್ತು. ಇಡೀ ಹಳ್ಳಿಯ ಜನರುಗಳು ಚಿಕಿತ್ಸೆಗಾಗಿ ಪಂಡಿತರನ್ನು ಮಾತ್ರ ನಂಬಿದ್ದರು. ರೋಗಸ್ಥರ ಎಲ್ಲ ಮನೆಗಳಿಗೂ ಭೇಟಿ ನೀಡುತ್ತಿದ್ದ ಪಂಡಿತರು, ಎಲ್ಲಾ ರೋಗಿಗಳಿಗೂ, ತಾವೇ ತಯಾರಿಸಿದ  ಔಷಧಿಗಳನ್ನು ಕೊಡುತ್ತಿದ್ದರು. 'ರೋಗಿಗಳು ಹಾಗೂ ರೋಗವಿನ್ನೂ ಬಾರದವರೂ ಪ್ರತಿನಿತ್ಯ ೩-೪ ಬಾರಿ ಹಬೆಯನ್ನು ತೆಗೆದುಕೊಳ್ಳಬೇಕು. ಕೊಂಚ ಅರಿಶಿನ ಹಾಕಿ ಕುದಿಸಿದ ಬಿಸಿ ನೀರನ್ನೇ ಹೆಚ್ಚು ಕುಡಿಯಬೇಕು. ಶಕ್ತಿಯಿದ್ದವರು ಪ್ರತಿದಿನ ೩೦ ನಿಮಿಷಗಳಷ್ಟು ಕಾಲ ಸೂರ್ಯನ ಬೆಳಕಿನಲ್ಲಿ ವಾಯು ವಿಹಾರವನ್ನು ಮಾಡಬೇಕು. ರೋಗ ಬೇಗ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ, ಜನರುಗಳ ಮಧ್ಯೆ ೬ ಅಡಿಗಳ ಅಂತರವನ್ನು ಕಾಪಾಡಿಕೊಳ್ಳಬೇಕು, ಗುಂಪು ಗೂಡಬಾರದು. ಎಲ್ಲರೂ ಪ್ರತಿದಿನ ೮ ಘಂಟೆಯಷ್ಟರ ದೀರ್ಘ ನಿದ್ದೆಯನ್ನು ಮಾಡಬೇಕು. ನಿದ್ದೆ ಮಾನವನ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ,' ಎಂಬುದಾಗಿತ್ತು, ಪಂಡಿತರು ಹಳ್ಳಿಗರಿಗೆ ನೀಡುತ್ತಿದ್ದ ಸೂಚನೆಗಳ ಪಟ್ಟಿ. 

'ದೇವರಲ್ಲಿ ವಿಶ್ವಾಸವಿಡಿ.  ನಂಬಿಕೆಯನ್ನು ಕಳೆದುಕೊಳ್ಳದೆ ದಿನನಿತ್ಯ ದೇವರ ಪ್ರಾರ್ಥನೆಯನ್ನು ಮಾಡಿ. ನಂಬಿಕೆ ಮತ್ತು ವಿಶ್ವಾಸಗಳಿಗೆ ರೋಗವನ್ನು ತಡೆಯುವ ಮತ್ತು ನಿವಾರಿಸುವ ಮಹಾಶಕ್ತಿಯಿದೆ. ನಂಬಿಕೆಯಿಂದ ಪ್ರಾರ್ಥನೆ, ಪ್ರಾರ್ಥನೆಯಿಂದ ಮನಃಶಾಂತಿ ಮತ್ತು ಸ್ಥೈರ್ಯಗಳು ವೃದ್ಧಿಯಾಗುತ್ತವೆ. ವೈದ್ಯರು ಮತ್ತು ರೋಗಿಗಳ ನಡುವಿನ ವಿಶ್ವಾಸ ಔಷಧಿಗಳ ಪರಿಣಾಮವನ್ನು ಹೆಚ್ಚಿಸಿ ರೋಗವನ್ನು ನಿವಾರಿಸಬಲ್ಲುದು.' ಹೀಗಿದ್ದ ಪಂಡಿತರ ಮಾತುಗಳಲ್ಲಿ, ಹಳ್ಳಿಗರಿಗೆಲ್ಲ ಅಪಾರವಾದ ಗೌರವ ಮತ್ತು ವಿಶ್ವಾಸಗಳು ಇದ್ದವು. ಆದುದರಿಂದ ಅವರೆಲ್ಲರೂ ಪಂಡಿತರ ಹಿತವಚನಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. 

ಪಂಡಿತರ ಪ್ರಾಮಾಣಿಕ ಚಿಕಿತ್ಸೆ ಹೀಗೇ ಮುಂದುವರೆದಿದ್ದರೂ ರೋಗದ ತೀವ್ರತೆ ಕಮ್ಮಿಯೇನಾಗಿರಲಿಲ್ಲ. ತನ್ನ ಪತಿಯನ್ನು ಮತ್ತು ಮಕ್ಕಳನ್ನು ಕಳೆದು ಕೊಂಡುಬಿಡುತ್ತೀನೇನೋ ಎಂಬ ಭೀತಿ ಸುಲಭಳ ತಾಯಿಯನ್ನು ಕಾಡ  ಹತ್ತಿತ್ತು. ಮುಗ್ಧ ಮನಸ್ಸಿನ ಸುಲಭಳಂದು ಅವಳಮ್ಮನಿಗೆ ಹೀಗೆ ಹೇಳಿದ್ದಳು. 'ಅಮ್ಮ, ನನ್ನ ಮುದ್ದಿನ ಕಪ್ಪು ಮೊಲ  "ಶಾಲು"ವನ್ನು ಮನೆಯಿಂದ ಕಾಡಿಗೆ ಕಳಿಸಿದ್ದು ನಮ್ಮೆಲ್ಲರಿಗೂ ದುರದೃಷ್ಟವನ್ನು ತಂದಿದೆ.' ಸುಲಭಳ ಅನಿಸಿಕೆಗೆ  ಅವಳ   ತಾಯಿಯಲ್ಲಿ ಯಾವುದೇ ಉತ್ತರವಿರಲಿಲ್ಲ. ಇಡೀ ಹಳ್ಳಿಯಲ್ಲಿ ಜನರುಗಳ ನಡುವೆ ಭಯದ ವಾತಾವರಣ ಉಂಟಾಗಿತ್ತು. 

ಒಂದು ದಿನ ಸುಲಭ ತನ್ನ ತಾಯಿಯೊಂದಿಗೆ ಕಟ್ಟಿಗೆಯನ್ನು ತರಲು ಸಮೀಪದ ಕಾಡಿಗೆ ಹೋಗಿದ್ದಳು. ಸುತ್ತಲೂ ನೋಡುತ್ತಿದ್ದ ಸುಲಭಳಿಗೆ ತನ್ನ ಕಪ್ಪು ಮೊಲ 'ಶಾಲು'ವನ್ನು ಕಂಡಾಗ ಅವಳಿಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಛಂಗನೆ ನೆಗೆದು ಶಾಲು ಸುಲಭಳ ಕೈಸೇರಿತ್ತು. ಶಾಲುವನ್ನು ಮನೆಗೆ ಕರೆದುಕೊಂಡು ಹೋಗುವಾಗ ಸುಲಭ ಮತ್ತು ಅವಳ ತಾಯಿ, ಇಬ್ಬರ ಮನಸಿನಲ್ಲೂ ಸಮಾಧಾನ ಹಾಗೂ ಸಂತೋಷಗಳು ಮೂಡಿದ್ದವು. ಶಾಲು  ಮನೆಗೆ ಬಂದ ಮಾರನೆಯ ದಿನವೇ ದೀನನಾಥರ ಜ್ವರ ಇಳಿದಿತ್ತು. ಇನ್ನೆರಡು ದಿನಗಳಲ್ಲಿ ಸುಲಭಳ ಮೂವರು ಅಕ್ಕಂದಿರ ಜ್ವರವೂ ಸಾಕಷ್ಟು ಕಮ್ಮಿಯಾಗಿತ್ತು. ಮತ್ತೊಮ್ಮೆ ಸುಲಭಳ ಮನೆಯಲ್ಲಿ ನಗುವಿನ ವಾತಾವರಣ ಮೂಡಿತ್ತು. ಶಾಲು ಹಿಂತಿರುಗಿ ಮನೆಯನ್ನು ಸೇರಿದ್ದೇ, ಎಲ್ಲರೂ ಬೇಗನೆ ಹುಷಾರಾಗಲು ಕಾರಣವಾಯಿತು ಎಂದು ಬಾಲಕಿ ಸುಲಭ ತನ್ನ ತಂದೆಗೆ ಹೇಳಿದಾಗ, ದೀನನಾಥರೂ ಹೌದೆಂಬಂತೆ ಗೋಣಾಡಿಸಬೇಕಾಗಿತ್ತು. 

ಇಡೀ ಹಳ್ಳಿಯಲ್ಲಿ ರೋಗದ ವಾತಾವರಣ ಮಾಯವಾಗಿತ್ತು. ನತದೃಷ್ಟ ಮೂರು ರೋಗಿಗಳು ಮಾತ್ರ ಸಾವನ್ನಪ್ಪಿದ್ದರು. 'ಆಧುನಿಕ ಚಿಕಿತ್ಸಾ ಕ್ರಮಗಳು ಗೊತ್ತಿಲ್ಲದ ಅಂದಿನ ದಿನಗಳಲ್ಲಿ, ಹಳ್ಳಿಯ ಬಡ ಪಂಡಿತರೊಬ್ಬರ ಸರಳ ಹಾಗು ಪ್ರಾಕೃತಿಕ  ಚಿಕಿತ್ಸೆ ಇಡೀ ಹಳ್ಳಿಗರನ್ನು ಮಹಾಮಾರಿಯಿಂದ ರಕ್ಷಿಸಿತ್ತು. 'ಪಂಡಿತರು ಭೋಧಿಸಿದ್ದ "ಪ್ರಾರ್ಥನೆ ಮತ್ತು ವಿಶ್ವಾಸ"ಗಳೆಂಬ ಮಹಾಮಂತ್ರಗಳು  ಫಲ ನೀಡಿದ್ದವು.' ಅಂದಿನ ಆ ಪ್ರಾಂತ್ಯದ ಮಹಾರಾಜರು, ಮಹಾಮಾರಿಯಿಂದ ಹಳ್ಳಿಗರ ಜೀವಗಳನ್ನುಳಿಸಿದ ಆ ಪಂಡಿತರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ್ದರು. ಪಂಡಿತರನ್ನು ತಮ್ಮ ಅರಮನೆಗೆ ಕರೆಸಿ ಅವರಿಗೆ  ಅದ್ಧೂರಿಯ  ಸನ್ಮಾನವನ್ನೂ ಮಾಡಿದ್ದರು. 

'೨೪X೭ರ ಕೋವಿಡ್ ಕುರಿತಾದ ಸತತ ನಕಾರಾತ್ಮಕ ಸುದ್ದಿಯನ್ನು ಮಾಧ್ಯಮಗಳ ಮೂಲಕ ಕೇಳಿ ಬೆಂಡಾಗಿರುವ ನಮಗೆ ಡಾ. ದಿವಾಕರ್ ರವರು ತಿಳಿಸಿರುವ ಸತ್ಯಕತೆಯಿಂದ ಸ್ಫೂರ್ತಿ ದೊರೆಯುವುದಿಲ್ಲವೇ? ಮನೋಬಲವನ್ನು ಕುಗ್ಗಿಸುವ ಮಾಧ್ಯಮಗಳ ನಕಾರಾತ್ಮಕ ಸುದ್ದಿಗಳಿಂದ ದೂರವಿರುವುದು, ಮಹಾಮಾರಿಯ ಭಯದಿಂದ ನಾವು ಹೊರಬರಲು ಸಹಾಯವನ್ನು ಮಾಡೀತೇ?' ಎಂದು ಸಂಶೋಧಕಿ ರೋಹಿಣಿ ಅಂದು ತನ್ನ ಡೈರಿಯಲ್ಲಿ ಟಿಪ್ಪಣಿ ಬರೆದುಕೊಂಡಿದ್ದಳು. 

***

ರೋಹಿಣಿಗೀಗ ೧೯೧೮ರ 'ಸ್ಪ್ಯಾನಿಷ್ ಫ್ಲೂ'ವಿನ ಬಗ್ಗೆ ಹೆಚ್ಚು ಮಾಹಿತಿಯನ್ನು ಸಂಗ್ರಹಿಸುವ ಕುತೂಹಲ ಉಂಟಾಗಿತ್ತು. ವಿಶ್ವ ಈವರೆಗೆ ಕಂಡ ಮಹಾಮಾರಿಗಳಲ್ಲಿ ಅದು ಅತ್ಯಂತ ಮಾರಕವಾದುದ್ದಾಗಿತ್ತು. ಒಂದು ಸಮೀಕ್ಷೆಯ ಪ್ರಕಾರ ೧೯೧೮-೨೦ರಲ್ಲಿ ಇಡೀ ವಿಶ್ವವನ್ನೇ ಆವರಿಸಿದ್ದ ಆ ಮಹಾಮಾರಿ ೫ ಕೋಟಿಯಷ್ಟು ಜನರುಗಳ ಪ್ರಾಣಗಳನ್ನು ಹರಣ ಮಾಡಿತ್ತು. ಬಡ ಭಾರತದ ಮೇಲೆ ಅದರ ಪರಿಣಾಮ ಬಹಳ ಕ್ರೂರವಾಗಿತ್ತು. ಭಾರತದಲ್ಲೇ  ಸುಮಾರು ೧. ೫ ಕೋಟಿಯಷ್ಟರ ಸಾವುಗಳಾಗಿದ್ದವು. ಸಾವುಗಳ ಪಟ್ಟಿಯಲ್ಲಿ ಭಾರತದ್ದು ಪ್ರಥಮ ಸ್ಥಾನ ಎಂಬ ಕುಖ್ಯಾತಿ ನಮ್ಮ ದೇಶಕ್ಕೆ ಅಂಟಿತ್ತು. 

೧೯೧೮ರ ಮಹಾಮಾರಿಯ ಬಗ್ಗೆ ಈಗಲೂ ಸಂಶೋಧನೆ ನಡೆಸುತ್ತಿರುವ ಕೆಲವು ವಿಜ್ಞಾನಿಗಳ ಪ್ರಕಾರ, ಅಂದಿನ ಮಹಾಮಾರಿ ಮೊದಲು ಕಾಣಿಸಿಕೊಂಡಿದ್ದು ಅಮೇರಿಕಾದಲ್ಲಿ. 'ಎಚ್೧ಎನ್೧ ಇನ್ಫ್ಲುಯೆಂಜಾ ಎ'  (H1N1 Influenza A) ಎಂಬ ವೈರಾಣುವಿನಿಂದ ಆ ರೋಗ ಹರಡಿತ್ತು. ಅದೇ ವೈರಾಣುವಿನಿಂದ ೨೦೦೯ರಲ್ಲಿ 'ಸ್ವೈನ್ ಫ್ಲೂ (Swine Flu)' ಎಂಬ ರೋಗವು ಹರಡಿದ್ದನ್ನು ಇಲ್ಲಿ ಸ್ಮರಿಸಬಹುದು. ೧೯೧೮ರ ಅಂದಿನ ಮಹಾಮಾರಿ ಎರಡು ವರ್ಷಗಳ ಕಾಲ ಮುಂದುವರೆದಿತ್ತು. ಅಂದಿನ ವಿಶ್ವದ ಜನಸಂಖ್ಯೆಯ ಮೂರನೇ ಒಂದರಷ್ಟು, ಅಂದರೆ ಸುಮಾರು ೫೦ ಕೋಟಿ ಜನರು ಆ ವೈರಾಣುವಿನಿಂದ ಸೋಂಕಿತರಾಗಿದ್ದರು! ೫ ಕೋಟಿಯಷ್ಟು ಜನರುಗಳ ಸಾವಿಗೆ ಕಾರಣವಾದ ಆ ಸ್ಪ್ಯಾನಿಷ್ ಫ್ಲೂ ಎಂಬ ಮಹಾಮಾರಿ ಮೊದಲನೇ ಮಹಾಯುದ್ಧ(೧೯೧೪-೧೮)ದಲ್ಲಿ ಮಡಿದ ಜನರುಗಳ ಸಂಖ್ಯೆಗಿಂತ  ಹೆಚ್ಚು ಸಾವನ್ನುಂಟು ಮಾಡಿತ್ತು. ಮೊದಲನೇ ಮಹಾಯುದ್ಧದಲ್ಲಿ ೯೦ ಲಕ್ಷ ಸೈನಿಕರು ಮತ್ತು ೭೦ ಲಕ್ಷದಷ್ಟು ನಾಗರೀಕರು   ಸಾವನ್ನಪ್ಪಿದ್ದರು. 

೧೯೧೮ರ ಮಧ್ಯ ಭಾಗದಲ್ಲಿ, ಅಮೇರಿಕಾದಲ್ಲಿ ಮೊದಲು ಕಾಣಿಸಿಕೊಂಡಿದ್ದ ಆ ಮಹಾಮಾರಿ ನಂತರ ಯುರೋಪ್ ಖಂಡಕ್ಕೂ ಹರಡಿತ್ತು. ಮೊದಲನೇ ಮಹಾಯುದ್ಧದ ಬೆನ್ನಲ್ಲೇ ವ್ಯಾಪಿಸಿದ್ದ ಆ ರೋಗದ ಮಾಹಿತಿಯನ್ನು ವ್ಯಾಪಕವಾಗಿ ಬಹಿರಂಗ ಪಡಿಸುವ ಇಚ್ಛೆ ಅಂದಿನ ಬೃಹತ್ ರಾಷ್ಟ್ರಗಳಿಗಿತ್ತಿಲ್ಲ.  ಆದರೆ ಮೊದಲ ಮಹಾಯುದ್ಧದಲ್ಲಿ ಸಕ್ರಿಯವಾಗಿರದಿದ್ದ ಸ್ಪೇನ್ ದೇಶ ಮಾತ್ರ ಯಾವುದೇ ಮುಚ್ಚುಮರೆಯಿಲ್ಲದೆ, ರೋಗದ ಹಾಗೂ ಸಾವಿನ ಮಾಹಿತಿಗಳನ್ನು ಬಹಿರಂಗ ಪಡಿಸಿತ್ತು. ಆದುದರಿಂದ ವಿಶ್ವಾದ್ಯಂತ ಜನರು ಆ ಮಹಾಮಾರಿಯನ್ನು  'ಸ್ಪ್ಯಾನಿಷ್ ಫ್ಲೂ-೧೯೧೮ (Spanish Flu - 1918)' ಎಂದು ಗುರುತಿಸಿದ್ದರು. 

ಒಂದು ಸಂಶೋಧನೆಯ ಪ್ರಕಾರ, ಸ್ಪ್ಯಾನಿಷ್ ಫ್ಲೂ - ೧೯೧೮ರ ವೈರಾಣು, ಮೊದಲು ಹಕ್ಕಿಗಳಲ್ಲಿ ಕಾಣಿಸಿಕೊಂಡಿತ್ತು. ಅನಂತರ ಅದು ಕೋಳಿಗಳಿಗೆ ಮತ್ತು ಹಂದಿಗಳಿಗೆ ಹರಡಿತ್ತು. ಕೋಳಿ ಮತ್ತು ಹಂದಿಗಳ ಮಾಂಸಗಳನ್ನು ಮೊದಲನೇ ಮಹಾಯುದ್ಧದ ಸೈನಿಕರುಗಳಿಗೆ ನೀಡಿದಾಗ, ವೈರಾಣುವಿನಿಂದ ಸೈನಿಕರುಗಳು ಸೋಂಕಿತರಾದರು. ಯುದ್ಧ ಮುಗಿದ ಮೇಲೆ ಸೈನಿಕರುಗಳು, ತಮ್ಮೂರುಗಳಿಗೆ ಮರಳಿದಾಗ ವೈರಾಣು ವ್ಯಾಪಕವಾಗಿ ಹರಡ ತೊಡಗಿತು. ಮೃತ ಸೈನಿಕರುಗಳ ದೇಹವನ್ನು ಶವ ಸಂಸ್ಕಾರಕ್ಕಾಗಿ ಅವರೂರುಗಳಿಗೆ ತಂದಾಗಲೂ ವೈರಾಣು ತನ್ನ ಸೋಂಕನ್ನು ಹರಡುತ್ತಾ ಸಾಗಿತ್ತು. ಸೈನಿಕರುಗಳು ಹೆಚ್ಚಾಗಿ ಅಮೇರಿಕಾ ಮತ್ತು ಏಷ್ಯಾ  ಖಂಡಗಳಿಗೆ  ಸೇರಿದವರಾಗಿದ್ದರು. ಯುರೋಪ್ ಖಂಡದ ವಿವಿಧ ರಾಷ್ಟ್ರಗಳಿಗೂ ಭಾರಿ ಸಂಖ್ಯೆಯಲ್ಲಿ ಸೈನಿಕರುಗಳು ಮರಳಿದ್ದರು. 

ಸ್ಪ್ಯಾನಿಷ್ ಫ್ಲೂ - ೧೯೧೮ರ ರೋಗ ಲಕ್ಷಣಗಳು, ಕೋವಿಡ್-೧೯ರ ರೋಗ ಲಕ್ಷಣಗಳಂತೇ ಇತ್ತು. ಗಂಟಲ ಕೆರತ, ತಲೆನೋವು ಮತ್ತು ಜ್ವರದಂತಹ ಲಕ್ಷಣಗಳು ಮಾರ್ಚ್ ೧೯೧೮ರ ಮೊದಲನೇ ಅಲೆಯ ಸಮಯದಲ್ಲಿ ಕಾಣಿಸಿಕೊಂಡಿತ್ತು. ಮೊದಲನೇ ಅಲೆ ಹೆಚ್ಚು ತೀವ್ರವಾದುದಾಗಿರದೆ, ಅದರಿಂದ ಹೆಚ್ಚು ಸಾವು ನೋವುಗಳು ಉಂಟಾಗಲಿಲ್ಲ. ಆ ಹಂತದಲ್ಲಿ ಹೆಚ್ಚಾಗಿ ಇತರೆ ರೋಗಗಳಿಂದ ಪೀಡಿತರಾದವರು ಮತ್ತು ವಯೋವೃದ್ಧರು ಮೃತಪಟ್ಟಿದ್ದರು. ಆದರೆ ಅತ್ಯಂತ ಕ್ರೂರಿಯಾದ ಎರಡನೇ ಅಲೆಯು ಆಗಸ್ಟ್-೧೯೧೮ರ ಸಮಯಕ್ಕೆ ಕರಾಳವಾಗಿ ವ್ಯಾಪಿಸ ಹತ್ತಿತ್ತು. ಸೈನಿಕರು ಹಾಗೂ ಯುವಕರು ಅಪಾರ ಸಂಖ್ಯೆಯಲ್ಲಿ ಎರಡನೇ ಅಲೆಯ ಅವಧಿಯಲ್ಲಿ ಮೃತಪಟ್ಟರು. ೧೯೧೯ರಲ್ಲಿ ರೋಗದ ಮೂರನೇ ಅಲೆಯು ಮತ್ತು ೧೯೨೦ರ ಅವಧಿಯಲ್ಲಿ  ದುರ್ಬಲವಾದ ನಾಲ್ಕನೇ ಅಲೆಯೂ ಮನುಕುಲವನ್ನು ಬೆಂಬಿಡದೆ ಕಾಡಿತ್ತು. 

ಸ್ಪ್ಯಾನಿಷ್ ಫ್ಲೂ - ೧೯೧೮ರ ಎರಡನೇ ಅಲೆಯ ಅವಧಿಯಲ್ಲಿ, ವೈರಾಣುವಿನ  ಸೋಂಕು,  ಮಾನವರ ಶ್ವಾಸಕೋಶಗಳಿಗೆ ಹರಡಿ ಅಪಾರ ಸಂಖ್ಯೆಯ ಸಾವುಗಳನ್ನು ಉಂಟುಮಾಡಿತ್ತು. ಮೂಗು-ಬಾಯಿಗಳಲ್ಲಿನ  ರಕ್ತಸ್ರಾವ, ವಿಚಿತ್ರವಾದ ವಾಸನೆ, ಹಲ್ಲುಗಳು ಉದುರುವುದು, ಕೂದಲು ಉದುರುವುದು, ನಿದ್ರಾಹೀನತೆ ಮತ್ತು ಕಣ್ಣುಗಳ ದೋಷ ಮುಂತಾದ ರೋಗ ಲಕ್ಷಣಗಳು ಎರಡನೇ ಅಲೆಯ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದವು. ಅಂದಿನ ವೈದ್ಯರುಗಳಿಗೆ ಅಂದಿನ ರೋಗದ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ.  ವಿಶ್ವಾದ್ಯಂತ ಹರಡಿದ್ದ ಅಪಾರ ಸಂಖ್ಯೆಯ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಲು, ಅಂದಿದ್ದ ವೈದ್ಯಕೀಯ ಸೌಲಭ್ಯಗಳು ಏನೇನೂ ಸಾಲದಾಗಿತ್ತು. ಅಂದೂ ವೈದ್ಯರುಗಳು 'ಕ್ವಾರಂಟೈನ್ ಮತ್ತು ಮಾಸ್ಕ್ ಧಾರಣೆಯ' ಮುನ್ನೆಚ್ಚರಿಕೆಯ ಕ್ರಮಗಳನ್ನು ಪರಿಪಾಲಿಸುವಂತೆ ಜನರುಗಳಿಗೆ ತಿಳಿಸಿದ್ದರು. ತಲೆನೋವಿನ ಬಾಧೆಗೆ ಇಂದು ನೀಡುವಂತಹ 'ಆಸ್ಪಿರಿನ್ (Aspirin) ' ಗುಳಿಗೆಗಳನ್ನು ಅಂದಿನ ಮಹಾಮಾರಿಯ ನಿವಾರಣೆಗೆ ವ್ಯಾಪಕವಾಗಿ ನೀಡಲಾಗುತ್ತಿತ್ತು. 

೧೯೧೮ರ ಎರಡನೇ ಅಲೆಯನಂತರ, ಸೋಂಕಿತರ ಸಂಖ್ಯೆ ಸಾಕಷ್ಟು ಕಮ್ಮಿಯಾಗಿತ್ತು. ಅಂದಿನ ಮಹಾಮಾರಿಯ ಜೊತೆಗೆ 'ನಿಮೋನಿಯ (pneumonia)' ರೋಗವು ಕಾಣಿಸಿಕೊಳ್ಳುತ್ತಿತ್ತು. ನಿಮೋನಿಯಾ ರೋಗವನ್ನು ನಿಭಾಯಿಸುವ ಶ್ರಮತೆಯನ್ನು ಅಂದಿನ ವೈದ್ಯರುಗಳು ಅಭಿವೃದ್ಧಿ ಪಡಿಸಿಕೊಂಡಿದ್ದು, ಸಾವು-ನೋವುಗಳ ಸಂಖ್ಯೆ ಸಾಕಷ್ಟು ಕಮ್ಮಿಯಾಗುವಂತೆ ಮಾಡಿತ್ತು. ಸ್ಪ್ಯಾನಿಷ್ ಫ್ಲೂ - ೧೯೧೮ರನ್ನು ಕುರಿತಾದ ಸಂಶೋಧನೆ ಇಂದಿಗೂ ನಡೆಯುತ್ತಿದೆ. ಅಂದಿನ ಎರಡನೇ ಅಲೆಯನಂತರ, ವೈರಾಣು ದುರ್ಬಲವಾಗುತ್ತಾ ಸಾಗಿದ್ದೇ,  'ಸ್ಪ್ಯಾನಿಷ್ ಫ್ಲೂ - ೧೯೧೮' ತನಗೆ ತಾನೇ ಮಾಯವಾಗುವಂತೆ ಮಾಡಿತ್ತು. 

ಮೊದಲನೇ ಮಹಾಯುದ್ಧದ ನಂತರ, ಆಗಸ್ಟ್ ೧೯೧೮ರ ಹೊತ್ತಿಗೆ ಭಾರತಕ್ಕೆ ಹಿಂತಿರುಗಿದ ಸೈನಿಕರುಗಳ ಮುಖಾಂತರ, ನಮ್ಮ ದೇಶಕ್ಕೂ ಸ್ಪ್ಯಾನಿಷ್ ಫ್ಲೂ ಹರಡಿತ್ತು. ಸೈನಿಕರುಗಳು ಅಂದಿನ ಬಾಂಬೆ ಮೂಲಕ ಹಿಂತಿರುಗುತ್ತಾ ಬರುತ್ತಿದ್ದರಿಂದ, ಬಾಂಬೆಯಿಂದಲೇ ರೋಗ ಹರಡುತ್ತಿದೆಯೆಂಬುದು ಜನರುಗಳ ಅಭಿಪ್ರಾಯವಾಗಿ ಹೋಗಿತ್ತು. ಹಾಗಾಗಿ ಆ ರೋಗವನ್ನು 'ಬಾಂಬೆ ಜ್ವರ ಅಥವಾ ಬಾಂಬೆ ಇನ್ಫ್ಲುಯೆಂಜಾ' ಎಂದೇ ಅಂದು ಜನರು ಕರೆಯುತ್ತಿದ್ದರು. ಅಂದಿನ ಮಹಾಮಾರಿ ಬಹಳ ಬೇಗ ಇಡೀ ದೇಶದಲ್ಲಿ ಹರಡಿ ಹೋಗಿತ್ತು. ಒಂದು ಸಮೀಕ್ಷೆಯ ಪ್ರಕಾರ,ಭಾರತದ ೧. ೫ ಕೋಟಿಯಷ್ಟು ಜನರು ಅಂದಿನ ಮಹಾಮಾರಿಗೆ ಬಲಿಯಾಗಿದ್ದು, ಭಾರತ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಸಂಖ್ಯೆಯ ಸಾವುಗಳನ್ನು ಕಂಡ ದೇಶವೆನಿಸಿಕೊಂಡಿತ್ತು. 'ಸ್ಪ್ಯಾನಿಷ್ ಫ್ಲೂ - ೧೯೧೮ರ ಮಹಾಮಾರಿ ಮತ್ತು ಮೊದಲನೇ ಮಹಾಯುದ್ಧ'ದಂತಹ ಎರಡು ದುರಂತಗಳನ್ನು ಕಂಡ  ೧೯೧೧-೨೧ರ ದಶಕ ಭಾರತದ ಪಾಲಿಗೆ ಕರಾಳವಾದ ದಶಕವಾಗಿದ್ದು, ಆ ಅವಧಿಯಲ್ಲಿ ಭಾರತ ತನ್ನ ಜನಸಂಖ್ಯೆಯಲ್ಲಿನ  ಕುಸಿತವನ್ನು ಕಂಡಿತ್ತು. ಕಳೆದ ೧೨೦ ವರ್ಷಗಳ ಅವಧಿಯಲ್ಲಿ, ಭಾರತದ ಜನಸಂಖ್ಯೆ ಇನ್ನ್ಯಾವ ದಶಕದಲ್ಲೂ ಕುಸಿತವನ್ನು ಕಾಣದಿರುವುದು ಗಮನಿಸಬೇಕಾದ ಅಂಶ. ಸೂರ್ಯಕಾಂತ ತ್ರಿಪಾಠಿ ಎಂಬ ಹಿಂದೀ ಕವಿಯೊಬ್ಬರು ಆ ಅವಧಿಯ ಸಾವುಗಳ ಬಗ್ಗೆ ಬರೆಯುತ್ತಾ,  'ಗಂಗಾ ನದಿಯ ಒಡಲು ಶವದ ರಾಶಿಗಳಿಂದ ತುಂಬಿ ಹೋಗಿದೆ' ಎಂದು  ವಿಷಾದಿಸಿದ್ದರು. ಅಂದಿನ ಅಪಾರ ಸಾವು-ನೋವುಗಳಿಂದ ಬಳಲಿ ಬೆಂಡಾದ ಭಾರತದ ಜನತೆಯ ಆಕ್ರೋಶ ಬ್ರಿಟಿಷ್ ಸರಕಾರದ ವಿರುದ್ಧ ಭುಗಿಲೆದ್ದಿತ್ತು. 

'ಬ್ರಿಟಿಷ್ ಸರಕಾರದ ದಾಸ್ಯದಲ್ಲಿ ನಾವು ನಲುಗುತ್ತಿದಾಗಲೇ ನಮ್ಮ ದೇಶ ಸ್ಪ್ಯಾನಿಷ್ ಫ್ಲೂ - ೧೯೧೮ರ ದಾಳಿಯನ್ನು ಹೇಗೋ ಸಹಿಸಿ ಉಳಿದುಕೊಂಡಿತ್ತು. ಆ ದಿನಗಳಲ್ಲಿ ಭಾರತದಲ್ಲಿದ್ದ ವೈದ್ಯಕೀಯ ಸೌಲಭ್ಯಗಳ ಸ್ಥಿತಿ-ಗತಿಗಳನ್ನೋ, ಹೇಳ ತೀರದಾಗಿತ್ತು!  ಅಂತಹ ವಿಷಮ ಪರಿಸ್ಥಿತಿಯಲ್ಲೇ ಬದುಕುಳಿದ ಭಾರತಕ್ಕೆ, ಇಂದಿನ ಕೋವಿಡ್-೧೯ರ ದಾಳಿಯನ್ನು ನಿಭಾಯಿಸುವುದು ಕಷ್ಟವಾಗದು. ಇಂದಿನ ಕೇಂದ್ರ  ಮತ್ತು ರಾಜ್ಯ ಸರಕಾರಗಳು ಕೋವಿಡ್ ಹೋರಾಟಕ್ಕೆ ಸಾಕಷ್ಟು ಸಿದ್ಧತೆಗಳನ್ನು ನಡೆಸಿವೆ. ೧೯೧೮ರ ವೈದ್ಯಕೀಯ ಸೌಲಭ್ಯಗಳ ಹೀನಾಯ ಸ್ಥಿತಿಗೆ ಹೋಲಿಸಿದರೆ, ಇಂದಿನ ಸೌಲಭ್ಯಗಳು ಸಾಕಷ್ಟು ಸಮರ್ಪಕವಾಗಿವೆ. ನಮ್ಮ ವೈದ್ಯರುಗಳ ಸಾಮರ್ಥ್ಯ ಮತ್ತು ಸೇವಾ ಮನೋಭಾವಗಳು ವಿಶ್ವಖ್ಯಾತಿಯ ಮಟ್ಟದ್ದಾಗಿದೆ. ಜನ ಸಾಮಾನ್ಯರುಗಳಲ್ಲಿ ಅರಿವನ್ನು ಮೂಡಿಸಲು ಸರಕಾರಗಳು ಸಾಕಷ್ಟು ಪ್ರಯತ್ನವನ್ನು ನಡೆಸಿವೆ. ಕೇಂದ್ರ ಸರಕಾರ ವಿವಿಧ ದೇಶಗೊಳೊಂದಿಗೆ ಸುಮಧುರ ಬಾಂಧವ್ಯವನ್ನು ಹೊಂದಿದ್ದು, ಅಂತಾರಾಷ್ಟ್ರೀಯ ನೆರವೂ ಭಾರತಕ್ಕೆ ಹರಿದು ಬರುತ್ತಿದೆ. ಇಂದಿನ ಮಹಾಮಾರಿಯನ್ನು ತಡೆಯಬಲ್ಲ ಲಸಿಕೆಯ ಗಳಿಕೆಗಾಗಿ, ನಮ್ಮ ವಿಜ್ಞಾನಿಗಳು ಹಗಲಿರುಳೆನ್ನದೆ ಸಂಶೋಧನೆ ನಡೆಸುತ್ತಿ ದ್ದಾರೆ. ವಿಶ್ವದ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿನ ಸಾವು-ನೋವುಗಳ ಸಂಖ್ಯೆ ಕಮ್ಮಿಯೆಂದೇ ಹೇಳಬಹುದು. ಎಲ್ಲವುದಕ್ಕಿಂತ  ಮುಖ್ಯವಾಗಿ ನಮ್ಮ ದೇಶದ ಜನತೆಯಲ್ಲಿ 'ದೈವ ಭಕ್ತಿ ಮತ್ತು ನಂಬಿಕೆ'ಗಳು ಅಪಾರವಾಗಿದ್ದು, ಅದು ನಮ್ಮ ಜನರುಗಳಲ್ಲಿನ ಸ್ಥೈರ್ಯವನ್ನು ವೃದ್ಧಿಸುತ್ತಿದೆ. 'ನಂಬಿಕೆ ಮತ್ತು ವಿಶ್ವಾಸ'ಗಳು ಪ್ರತಿರೋಧವನ್ನು ವೃದ್ಧಿಸುವ ಅಂಶಗಳೆಂಬುದನ್ನು ಮನೋವಿ ಜ್ಞಾನಿಗಳೂ ಒಪ್ಪುತ್ತಾರೆ. 'ನಂಬಿಕೆ ಎಂಬುದು ಪರ್ವತಗಳನ್ನು ಕೂಡಾ ಕದಲಿಸಬಲ್ಲದು (Faith can move mountains).' ಹಾಗಾಗಿ ಇಂದಿನ ಮಹಾಮಾರಿಯನ್ನು ನಾವು ಗೆದ್ದು ಹೊರಬರುತ್ತೇವೆ' ಎಂದು ರಾಜುರವರು ವಿವರಿಸಿದಾಗ, ರೋಹಿಣಿ ಕೂಡ ತಲೆದೂಗಿದ್ದಳು. 

###




 


No comments:

Post a Comment