Saturday, 6 September 2025

ABDUL KALAM POEM

        O my spirit, stop nowhere! 


                Sea shores soared your ambition  

               Struggle kindled  your vision     

                 Mosques and temples tempered your mission.


O my spirit, stop nowhere!

Quran and Gita mingled in your veena


Music and mantra embedded in your tantra


Spirituality guided your Science.


O my spirit, stop nowhere!

You rose like a  missile


Agni was not a mere name


it was your nation’s fame.


O my spirit, stop nowhere

You saw rise and rise, you saw fall and fall


Success has many fathers, feather  them


Failures are orphans, father them.


O my spirit, stop nowhere!

Earth shook under your feet


It was atom power


Compassion shook your heart


Was it ‘atma’  power?


O my spirit, stop nowhere!

Elevation to power, not for ever


Ignite minds, fire wings


Sow dreams


Man goes, but his mission continues!

GORURA BHAGEERATHI

 ಗೊರೂರ ಭಾಗೀರಥಿ

ಅವಳೇ ಹೇಮಾವತಿ

ಹೇಮಾವತಿಯ ಧಾರೆಗೆ

ಗೊರೂರಾದ್ರು ಸಾಹಿತಿ


ಶಾಲೆ ಬಿಟ್ಟ್ ಗೊರೂರು

ಗಾಂಧಿ ಟೋಪಿ ಧರಿಸಿದರು

ಜೈಲ್ ಸೇರ್ ಒದೆ ತಿಂದ್ರು

ಭಾರತ್ ಮಾತೆ ಜೈ ಅಂದ್ರು


ಭೂತಯ್ಯನ ಮಗ ಅಯ್ಯ

ದೇವಯ್ಯನ ಮಗ ಗುಳ್ಳ

ಆದ್ರಲ್ಲಾ ಜಗಜಾಹೀರು

ಆ ಗಮ್ಮತ್ತೇ ನಮ್ಮ ಗೊರೂರು


ಹಳ್ಳಿ ಕಥೆ ಗೊರೂರು

ಅಮೇರಿಕಾಗೆ ಹೋಗಿದ್ರು

ಅಲ್ಲಿರುದೆಲ್ಲಾ ಕಂಡ್ರೂ

ನಮ್ಮ ಗೊರೂರೇ ಮೇಲಂದ್ರು

Wednesday, 27 August 2025

ನಾಡಹಬ್ಬ ದಸರಾ

ನಾಡಹಬ್ಬ ದಸರಾ  

ಗೌರವಾನ್ವಿತ ಸಭಿಕರಿಗೆಲ್ಲಾ ನಮ್ಮಿಬ್ಬರ ಸವಿನಯ ನಮಸ್ಕಾರಗಳು.  'ನಾಡಹಬ್ಬ ದಸರಾ' ಎಂಬ ಹರಿಕಥೆಗೆ ತಮ್ಮೆಲ್ಲರಿಗೂ ಸುಸ್ವಾಗತ.  ಬಾಲಕಿಯರಾದ ನಮ್ಮಿಬ್ಬರ ಇಂದಿನ ಪ್ರಯತ್ನಕ್ಕೆ ತಮ್ಮೆಲ್ಲರ ಆಶೀರ್ವಾದಗಳು ಅತಿಮುಖ್ಯವಾದದು.

ದಸರಾ ಎಂದರೆ ಮೈಸೂರು, ಮೈಸೂರು ಎಂದರೆ ದಸರಾ. ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ. ಹರಿಕಥೆಯ ಆರಂಭವನ್ನು ತಾಯಿ ಚಾಮುಂಡೇಶ್ವರಿಯ ಸ್ಮರಣೆಯೊಂದಿಗೆ ಮಾಡೋಣ. 

ಶ್ರೀ ಚಾಮುಂಡೇಶ್ವರಿ........ 

ಇಂದು ದಸರಾ ಆಚರಣೆಯ ಮಹತ್ವದ ದಿನ. ಇಂದು ಮಹಾನವಮಿಯ ಹಬ್ಬ. ನಾಳಿನ ವಿಜಯದಶಮಿಗೆ ಸಿದ್ಧತೆಯನ್ನು ನಡೆಸಲು ಇಂದು ನಾವು ಆಯುಧ ಪೂಜೆಯನ್ನು ಮಾಡುವ ಹಬ್ಬ. ಆಯುಧಗಳು ಶೌರ್ಯದ, ವಿಜಯದ ಸಂಕೇತವಾದರೆ, ದಿನನಿತ್ಯದ ಆಯುಧಗಳು ನಮ್ಮ ದುಡಿಮೆಯ ಸಂಕೇತ. 

ನಮ್ಮ ದೇಶದಲ್ಲಿ ದಸರಹಬ್ಬವನ್ನು ವರ್ಷದಲ್ಲಿ ಎರಡು ಬಾರಿ ಆಚರಿಸುತ್ತೇವೆ. ವರ್ಷದ ಆರಂಭದಲ್ಲಿ ಬರುವ ವಸಂತ ನವರಾತ್ರಿ ಹಾಗೂ ಮತ್ತೊಂದು ಇಂದಿನ ಶರನ್ನವರಾತ್ರಿ. ಚೈತ್ರಮಾಸದ ಯುಗಾದಿಯಿಂದ ರಾಮನವಮಿಯವರೆಗೂ ಆಚರಿಸುವ ದಸರವೇ ವಸಂತ ನವರಾತ್ರಿ. ಆಶ್ವೀಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ವಿಜಯದಶಮಿಯವರೆಗೆ ಆಚರಿಸುವ ದಸರವೇ ಇಂದಿನ ಶರನ್ನವರಾತ್ರಿ. ಮಳೆಗಾಲದಿಂದ ತೊಯ್ದ ಭೂಮಿ ಹಚ್ಚಹಸಿರಾಗಿ ಕಂಗೊಳಿಸುವ ದಿನಗಳೇ ಶರತ್ ಋತುವಿನ ದಿನಗಳು.

ವಸಂತ ನವರಾತ್ರಿಗೆ ಶೃಂಗಾರ ರಸವೇ ಪ್ರಧಾನ. ಹೊಸ ಚಿಗುರು ಹಳೆ ಬೇರಿನಿಂದ ಕಂಗೊಳಿಸುವ ಭೂಮಾತೆಯೇ ಶೃಂಗಾರದ ಎಂದರೆ ಪ್ರಣಯ ಭಾವದ ಸಂಕೇತ ಎಂದು ನಾವು ಹೇಳಬಹುದು. ಸಂಗೀತ, ಸಾಹಿತ್ಯ, ನಾಟಕ ಇತ್ಯಾದಿಗಳೇ ವಸಂತ ನವರಾತ್ರಿಯ ವಿಶೇಷಗಳು. 

ಇಂದಿನ ಶರನ್ನವರಾತ್ರಿಗೆ ವೀರರಸವೇ ಪ್ರಧಾನ. ಶರನ್ನವರಾತ್ರಿ ಸ್ತ್ರೀಶಕ್ತಿಯನ್ನು ಆರಾಧಿಸುವ ಹಬ್ಬ. ದುಷ್ಟ ಶಕ್ತಿಗಳ ವಿರುದ್ಧ ತಾಯಿ ಚಾಮುಂಡೇಶ್ವರಿ   ವಿಜಯವನ್ನು ಗಳಿಸಿದ ದಿನವೇ ದುರ್ಗಾಷ್ಟಮಿ. ಶ್ರೀ ರಾಮ ರಾವಣ ಸಂಹಾರ ಮಾಡಿದ ದಿನವೇ ವಿಜಯದಶಮಿ. 

ಆದರೆ ನಮ್ಮ ದೇಶ ಪರಕೀಯರ ಆಡಳಿತಕ್ಕೆ ಸಿಕ್ಕಿ ಹಾಳಾಗಿ ಹೋಯ್ತು ನೋಡಿ. ನಮ್ಮ ಚರಿತ್ರೆಯ ಪುಸ್ತಕದ ತುಂಬಾ ನಾವು ಮುಸ್ಲಿಂ ದಾಳಿಕೋರರಿಗೆ ಸೋತೆವು, ಬ್ರಿಟಿಷರ ದಬ್ಬಾಳಿಕೆಗೆ ಸೋತೆವು ಎಂಬ ಸೋಲಿನ ಭಾವವನ್ನು ಉಂಟುಮಾಡುವ ಪಾಠಗಳನ್ನೇ ಓದಿದ್ದೇವೆ. ಬ್ರಿಟಿಷರು  ಮೆಕಾಲೆ ಶಿಕ್ಷಣ ಪದ್ಧತಿಯನ್ನು ನಮ್ಮ ಮೇಲೆ ಹೇರಿ ನಮ್ಮ ಮನಸ್ಸಿನಲ್ಲಿ ನೆಗೆಟಿವ್ ಭಾವನೆಗಳನ್ನೇ, ಎಂದರೆ ಋಣಾತ್ಮಕ ಭಾವನೆಗಳನ್ನೇ  ಬಿತ್ತಿ ಹೋಗಿದ್ದಾರೆ. ಹೋರಾಟವನ್ನು ಆರಂಭಿಸುವ ಮೊದಲೇ ನಾವು ಸೋಲನ್ನು ಮನಸ್ಸಿನಲ್ಲೇ ಒಪ್ಪಿಕೊಂಡುಬಿಟ್ಟಿರುತ್ತೇವೆ.  ಆ ನೆಗೆಟಿವ್ ಮೈಂಡ್ ಸೆಟ್ಟಿನಿಂದ ಹೊರಬರಬೇಕು. ಅದಕ್ಕಾಗಿಯೇ ವಿಜಯದ ಸಂದೇಶವನ್ನು ಸಾರುವ ದಸರಾ ಹಬ್ಬ ನಮಗೆ ಬಹಳ ಮುಖ್ಯವಾದುದು.  

ಚರಿತ್ರೆಯಲ್ಲಿ ನಾವು ಮೊಗಲರ, ಬ್ರಿಟಿಷರ ಪಾಠವನ್ನೇ ಹೆಚ್ಚು ಓದುತ್ತೇವೆ. ಮೊಗಲರನ್ನು ಸದೆಬಡಿದ ಶಿವಾಜಿ, ರಾಣಾ ಪ್ರತಾಪ್ ಸಿಂಗ್, ಇವರುಗಳು ಪಾಠದಲ್ಲಿ ಹೀಗೆ ಬಂದು ಹಾಗೆ ಹೊರಟುಹೋಗಿರುತ್ತಾರೆ. ಗುಪ್ತರ ಕಾಲವನ್ನು ಭಾರತದ ಸುವರ್ಣಯುಗ ಎಂದು ಕರೆಯುತ್ತಾರೆ. ದಕ್ಷಿಣ ಭಾರತವನ್ನು ಕಾಂಬೋಡಿಯಾದವರೆಗೆ ವಿಸ್ತರಿಸಿ, ದಕ್ಷಿಣ ಭಾರತವನ್ನು ಹದಿಮೂರು ಶತಮಾನಗಳವರೆಗೆ ಆಳಿದ ಚೋಳರ ಪಾಠವನ್ನು ನಾವು ಮರೆತೇಬಿಟ್ಟಿದ್ದೇವೆ. ತಂಜಾವೂರಿನಲ್ಲಿ ಚೋಳರು ಕಟ್ಟಿದ ಬೃಹದೀಶ್ವರ ದೇವಸ್ಥಾನವೇ ಚೋಳರ ವಿಜಯಕ್ಕೆ ಜೀವಂತ  ಸಾಕ್ಷಿಯಾಗಿ ಇಂದಿಗೂ ನಿಂತಿದೆ. 

ದಸರಾ ಆಚರಣೆಯಿಂದ ಸ್ಪೂರ್ತಿಯನ್ನು ಪಡೆದ ನಮ್ಮ ಭಾರತ ಈಗ ವಿಶ್ವಗುರುವಾಗಿ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ. ನಮ್ಮ ಭಾರತೀಯ ಹೆಣ್ಣುಮಕ್ಕಳ ಸಿಂದೂರವನ್ನು ಅಳಿಸಿದ ಉಗ್ರವಾದಿಗಳ ಹೆಡೆಮುರಿಯನ್ನು ಆಪರೇಷನ್ ಸಿಂದೂರದ ಮೂಲಕ ಕಟ್ಟಿಹಾಕಿದ ನಮ್ಮ ಸೈನಿಕರ ಪರಾಕ್ರಮವನ್ನು ನಾವು ಇಂದು ನೆನಪಿಸಿಕೊಳ್ಳಲೇ ಬೇಕು. 

ನಮ್ಮ ಸಿನಿಮಾಗಳಲ್ಲೂ ನೋಡಿ, ಸೀರೆ ಒಟ್ಟು ಕುಂಕುಮ ಇಟ್ಟ ಹೆಣ್ಣೆಂದರೆ ಅವಳು ಶಕ್ತಿಹೀನಳು, ದುರ್ಬಲೆ ಎಂದೇ ಬಿಂಬಿಸುತ್ತಾರೆ. ಹರಿದ ಜೀನ್ಸ್ ಪ್ಯಾಂಟ್ ಹಾಕಿದ ಹೆಣ್ಣೇ ಡ್ಯಾಶಿಂಗ್ ಹೆಣ್ಣು ಎಂದು ತೋರಿಸುತ್ತಾರೆ. ನಮ್ಮ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇವರೆಲ್ಲಾ ಸೀರೆ ಉಟ್ಟ ಭಾರತೀಯ ನಾರಿಯರೆ ಆಗಿತ್ತಿಲ್ಲವೇ? ಇಂದಿನ  ಎಂ.ಎಸ್. ಸುಬ್ಬುಲಕ್ಷ್ಮಿ, ಲತಾ ಮಂಗೇಶ್ಕರ್, ಸುಧಾ ಮೂರ್ತಿ ಇವರುಗಳು ಕೂಡ ಸೀರೆ ಉಟ್ಟ ಮಹಿಳೆಯರಲ್ಲವೇ?  ದಸರಾ ಹಬ್ಬದ ನವದುರ್ಗೆಯರೇ ನಮ್ಮ ದೇಶದ ಹೆಣ್ಣುಮಕ್ಕಳಿಗೆ ಸ್ಫೂರ್ತಿ ತಾನೇ? 

ಈಗ ಹರಿಕಥೆಯ ಆರಂಭವನ್ನು ನವದುರ್ಗಾ ಕವಚ ಸ್ತುತಿಯ ಮೂಲಕ ಮಾಡೋಣ. 

ಪ್ರಥಮಂ ಶೈಲಪುತ್ರೀಚಾ....... 

ನವರಾತ್ರಿಯ ಮೊದಲ ದಿನ ನಾವು ದುರ್ಗೆಯ ಶೈಲಪುತ್ರಿಯ ಅವತಾರವನ್ನು ಪೂಜಿಸುತ್ತೇವೆ. ಅದನ್ನೇ ನಾವು ನವದುರ್ಗಾಕವಚ ಸ್ತೋತ್ರದಲ್ಲಿ 'ಪ್ರಥಮಂ ಶೈಲಪುತ್ರೀಚಾ' ಎಂದು ಹಾಡುತ್ತೇವೆ.  ಶೈಲಪುತ್ರಿ ಹಿಂದಿನ ಅವತಾರದಲ್ಲಿ 'ಸತಿ' ಎಂಬ ಅವತಾರವನ್ನು ಎತ್ತಿದ್ದಳು.  ಸತಿ ಬ್ರಹ್ಮನ ಮಗನಾದ ದಕ್ಷನ ಮಗಳಾಗಿದ್ದಳು. ದಕ್ಷನ ಮಗಳಯಾದ ಸತಿದೇವಿಗೆ ದಾಕ್ಷಾಯಿಣಿ ಎಂಬ ಹೆಸರೂ ಇದೆ.  ಸತಿದೇವಿ  ಬಾಲ್ಯದಿಂದಲೂ ಶಿವನನ್ನೇ ತನ್ನ ಪತಿಯೆಂದು ಆರಾಧಿಸುತ್ತಿದ್ದಳು. ಇದು ತಂದೆಯಾದ ದಕ್ಷನಿಗೆ ಇಷ್ಟವಿರಲಿಲ್ಲ.  ಸ್ಮಶಾನವನ್ನು ಕಾಯುವ ಬೂದಿಬಡುಕನಾದ ಶಿವನಿಗೆ  ತನ್ನ ಮಗಳನ್ನು ಕೊಡುವುದಿಲ್ಲ ಎಂದು ದಕ್ಷನು ಹಠತೊಟ್ಟಿದ್ದನು. ತಂದೆಯ ವಿರೋಧದ ನಡುವೆಯೂ ಸತಿ, ಶಿವನನ್ನೇ ಮದುವೆಯಾದಳು. ಕೋಪಗೊಂಡ ದಕ್ಷನು ತನ್ನ ಮಗಳಾದ ಸತಿಯೊಂದಿಗೆ ತನ್ನ ಸಂಬಂಧವನ್ನೇ ಕಡಿದುಕೊಂಡನು. ಆದರೂ ಮಗಳಾದ ಸತಿಗೆ ತಂದೆಯ ಮೇಲೆ ಪ್ರೀತಿ ಇದ್ದೆ ಇತ್ತು. 

ಒಮ್ಮೆ ದಕ್ಷನು ಒಂದು ಮಹಾಯಾಗವನ್ನು ಮಾಡಿದನು.  ಆ ಯಾಗಕ್ಕೆ ಅವನು ಸಕಲ ದೇವತೆಗಳನ್ನೂ ಆಹ್ವಾನಿಸಿದ್ದನು. ಆದರೆ, ತನ್ನ ಸ್ವಂತ ಮಗಳೇ ಆದ ಸತಿಯನ್ನು ಮತ್ತು ತನ್ನ ಅಳಿಯನಾದ ಶಿವನನ್ನೂ ಯಾಗಕ್ಕೆ ಆಹ್ವಾನಿಸಲೇ ಇಲ್ಲ. ಆದರೂ, ಮಗಳಾದ ಸತಿಗೆ ಮನಸ್ಸು ತಡೆಯಲಿಲ್ಲ. ಶಿವನ ವಿರೋಧದ ನಡುವೆಯೂ ಸತಿ ದಕ್ಷನ ಯಜ್ಞಕ್ಕೆ ಬಂದೇಬಿಟ್ಟಳು. ಕರೆಯದೇ ಬಂದ ಸತಿಯನ್ನು, ಮಗಳು ಎಂಬಾ ಪ್ರೀತಿಯನ್ನೂ ತೊರೆದು, ದಕ್ಷನು ಅವಮಾನಿಸಿದನು.  ಮಗಳ ಎದುರೇ, ಅವಳ ಗಂಡನಾದ ಶಿವನನ್ನು ಇನ್ನಿಲ್ಲದಂತೆ ಜರೆದು ಅವಮಾನಿಸಿದನು. ಪತಿದೇವರಾದ ಶಿವನ ನಿಂದನೆಯನ್ನು ಕೇಳಲಾಗದ ಸತಿ, ರೋಷದಲ್ಲಿ ದಕ್ಷನ ಅಗ್ನಿಕುಂಡಕ್ಕೆ ಧುಮುಕಿ, ಆತ್ಮಾಹುತಿಯನ್ನು ಮಾಡಿಕೊಂಡಳು. ವಿಷಯ ತಿಳಿದ ಶಿವನ ಕೋಪ ಕೈಲಾಸ ಶಿಖರದೆತ್ತರಕ್ಕೆ ಏರಿತು. ಸುಟ್ಟು ಕರಕಲಾದ ತನ್ನ ಪತ್ನಿ ಸತಿಯ ದೇಹವನ್ನು ತನ್ನ ಹೆಗಲಮೇಲೆ ಹೊತ್ತು, ಶಿವನು ತಾಂಡವ ನೃತ್ಯಮಾಡಲು ಆರಂಭಿಸಿದನು. ಶಿವನ ತಂಡವಾದ ಕೋಪಾಗ್ನಿಗೆ ಸಮಸ್ತ ಬ್ರಹ್ಮಾಂಡವೇ ಸುಟ್ಟುಹೋಗುವಂತಾಗಿತ್ತು.  ವಿನಾಶವನ್ನು ತಪ್ಪಿಸಲು ಮಹಾವಿಷ್ಣುವು ತನ್ನ ಸುರ್ದರ್ಶನ ಚಕ್ರವನ್ನು ಸತಿಯ ಸುಟ್ಟು ಕರಕಲಾದ ದೇಹದ ಮೇಲೆ ಪ್ರಯೋಗಿಸಿದನು. ಸತಿಯ ದೇಹ 52 ತುಂಡುಗಳಾಗಿ, ಭೂಮಂಡಲದ  52 ಸ್ಥಾನಗಳಲ್ಲಿ ಬಿದ್ದಿತ್ತು.  ಆ 52 ಸ್ಥಾನಗಳೇ ಈಗ 52 ಶಕ್ತಿಪೀಠಗಳೆಂದೇ  ಪ್ರಸಿದ್ಧವಾಗಿವೆ. ಈ ಶಕ್ತಿ ಪೀಠಗಳು ಈಗ ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಟಿಬೆಟ್, ಭೂತಾನ್  ಮತ್ತು ಪಾಕಿಸ್ತಾನಗಳಲ್ಲಿ ಇವೆ. 

ಕಾಶಿ ವಿಶಾಲಾಕ್ಷಿ, ಕಂಚಿ ಕಾಮಾಕ್ಷಿ, ಮೈಸೂರು ಚಾಮುಂಡಿ, ಅಸ್ಸಾಮಿನ ಖಾಮಕ್ಯ ದೇವಿ , ಕೋಲ್ಕತ್ತಾ ಕಾಳಿ ಇವುಗಳು ಭಾರತದಲ್ಲಿರುವ ಮುಖ್ಯ ಶಕ್ತಿಪೀಠಗಳು. ಪಾಕಿಸ್ತಾನದ ಹಿಂಗ್ಲಾ ದೇವಿ, ಶ್ರೀಲಂಕಾದ ಟ್ರಿಂಕಾಮಲೆ ದೇವಿ, ಬಾಂಗ್ಲಾದೇಶದ ಡಾಕೇಶ್ವರಿ ಇವುಗಳು ಕೂಡ ಶಕ್ತಿಪೀಠಗಳೇ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವ ಈ ಶಕ್ತಿಪೀಠಗಳು ಈಗಲೂ ಜೀವಂತವಾಗಿರುವುದೇ ದುರ್ಗಾಮಾತೆಯ ಮಹಿಮೆಗೆ ಸಾಕ್ಷಿ. 

ಈಗ ದುರ್ಗಾದೇವಿಯನ್ನು ಮತ್ತೊಮ್ಮೆ ಪ್ರಾರ್ಥಿಸೋಣ. 

ದುರ್ಗಾ ದೇವಿ....... 

ಪ್ರಥಮಂ ಶೈಲಪುತ್ರೀಚಾ....... ನವರಾತ್ರಿಯ ಮೊದಲನೇ ದಿನ ನಾವು ದುರ್ಗಾಮಾತೆಯನ್ನು ಶೈಲಪುತ್ರಿಯ ರೂಪದಲ್ಲಿ ಆರಾಧಿಸುತ್ತೇವೆ. ದಕ್ಷಬ್ರಹ್ಮನ ಯಜ್ಞಕುಂಡದೊಳಗೆ ಧುಮುಕಿ ಆತ್ಮಾಹುತಿಯನ್ನು ಮಾಡಿಕೊಂಡ ಶಿವಪತ್ನಿ ಸತಿದೇವಿಯೇ, ಹಿಮವಂತನ ಮಗಳಾಗಿ ಜನಿಸಿ ಶೈಲಪುತ್ರಿ ಎಂದು ನಾಮಕರಣಗೊಂಡಳು. ಪರ್ವತರಾಜನ ಮಗಳಾದುದರಿಂದ ಶೈಲಪುತ್ರಿಗೆ ಪಾರ್ವತಿ ಎಂಬ ಹೆಸರೂ ಇತ್ತು. ಶೈಲಪುತ್ರಿ ಕೂಡ ಅಪರಿಮಿತ ಸುಂದರಿ ಮತ್ತು ಜಾಣೆ. ಬಾಲ್ಯದಿಂದಲೂ ಶಿವನನ್ನೇ ಆರಾಧಿಸುತ್ತಾ, ಶಿವನನ್ನೇ ಮದುವೆಯಾಗುವೆನೆಂದು ಪಣತೊಟ್ಟಿ ಬೆಳೆದವಳೇ ಶೈಲಪುತ್ರಿ. 

ದ್ವಿತೀಯಂ ಬ್ರಹ್ಮಚಾರಣಿ......, ಎಂದರೆ ನವರಾತ್ರಿಯ ಎರಡನೇ ದಿನ ನಾವು ದುರ್ಗಾಮಾತೆಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜೆಮಾಡುತ್ತೇವೆ. ಬ್ರಹ್ಮಚಾರಿಣಿ ಎಂದರೆ ಅವಿವಾಹಿತ ಹೆಣ್ಣು. ಬಿಳಿ ಸೀರೆಯನ್ನುಟ್ಟು ಕಂಗೊಳಿಸುತ್ತಿದ್ದ ಸೌಂದರ್ಯವತಿಯೇ ದುರ್ಗೆಯ ಅವತಾರವಾದ ಬ್ರಹ್ಮಚಾರಿಣಿ. ಬ್ರಹ್ಮಚಾರಿಣಿಯ ಜ್ಞಾನಾರ್ಜನೆಯನಂತರ, ಮಾಡಿದ್ದು ಶಿವನನ್ನು ಕುರಿತಾದ ತಪಸ್ಸು. 

ಸತಿದೇವಿಯ ಆತ್ಮಾಹುತಿಯನಂತರ ದುಃಖಿತನಾದ ಶಿವನು ಗಾಢವಾದ ಧ್ಯಾನದಲ್ಲಿ ಮಗ್ನನಾಗಿಹೋಗುತ್ತಾನೆ. ಈ ನಡುವೆ ತಾರಕಾಸುರನೆಂಬ ಮಹಾದುಷ್ಟ ರಾಕ್ಷಸನ ಉಪಟಳದಿಂದ ಮನುಷ್ಯರು, ಋಷಿಮುನಿಗಳು ಮತ್ತು ಸಕಲ ದೇವತೆಗಳು ಕಂಗಾಲಾಗಿಹೋಗಿರುತ್ತಾರೆ. ಶಿವ-ಪಾರ್ವತಿಯರ ಪುತ್ರನಿಂದ ಮಾತ್ರ ಮರಣವೆಂಬ ವರವನ್ನು ತಾರಕಾಸುರ ಬಹಳ ಯೋಚಿಸಿ ಬ್ರಹ್ಮನಿಂದ ಪಡೆದಿರುತ್ತಾನೆ. ಶಿವನ ಪತ್ನಿಯಾದ ಸತಿದೇವಿಯು ಮರಣಹೊಂದಿದ್ದು, ಶಿವನು ಗಾಢವಾದ ಧ್ಯಾನದಲ್ಲಿ ಮಗ್ನನಾಗಿರುವ ಕಾರಣ, ಶಿವಪುತ್ರನು ಜನಿಸುವ ಸಂಭವವೇ ಇಲ್ಲವೆಂಬ ಭಯದಿಂದ ದೇವತೆಗಳೆಲ್ಲಾ ಭಯಗ್ರಸ್ತರಾಗಿರುತ್ತಾರೆ. ಹಾಗಾಗಿ ಶಿವನು ತಪಸ್ಸನ್ನು ಭಗ್ನಗೊಳಿಸಿ, ಅವನಲ್ಲಿ ಪಾರ್ವತಿಯನ್ನು ವರಿಸುವಂತಹ ಶೃಂಗಾರ ಭಾವನೆಗಳನ್ನು ಉಂಟುಮಾಡುವ ಕೆಲಸವನ್ನು, ದೇವತೆಗಳು ಶೃಂಗಾರಾದ ದೇವತೆಗಳಾದ ರತಿ-ಮನ್ಮಥರಿಗೆ ವಹಿಸುತ್ತಾರೆ. ರತಿ-ಮನ್ಮಥರ ಗಾಯನ-ನರ್ತನ ಹಾಗೂ ಹೂಬಾಣಗಳಿಂದ ಎಚ್ಚರಗೊಂಡ ಶಿವನು, ಕೋಪದಲ್ಲಿ ತನ್ನ ಮೂರನೇ ಕಣ್ಣನ್ನು ತೆರೆದು, ಮನ್ಮಥನನ್ನು ಸುಟ್ಟು ಭಸ್ಮಮಾಡುತ್ತಾನೆ. ಎಚ್ಚರಗೊಂಡ ಈಶ್ವರ ತನ್ನೆದುರು ಕಾಣಿಸಿಕೊಂಡ ಚಂದ್ರಘಂಟಾದೇವಿಯ ರೂಪದಲ್ಲಿದ್ದ ಪಾರ್ವತಿಯನ್ನು ನೋಡಿ ಮೋಹಿತನಾಗುತ್ತಾನೆ. 

ಪಾರ್ವತಿಯನ್ನು ನಾವು ನವರಾತ್ರಿಯ ಮೂರನೇ ದಿನ ಚಂದ್ರಘಂಟ ದೇವಿಯ ರೂಪದಲ್ಲಿ ಆರಾಧಿಸುತ್ತೇವೆ. ಚಂದ್ರ ಶೃಂಗಾರದ, ಪ್ರಣಯದ ಸಂಕೇತ. ಅಂತಹ ಚಂದ್ರನನ್ನೇ ತನ್ನ ಶಿರದಲ್ಲಿ ಧರಿಸಿದ್ದ ಸುಂದರಿಯೇ ಚಂದ್ರಘಂಟಾ ದೇವಿ. ಹಿಮವಂತನ ಸಾಮ್ರಾಜ್ಯವೇ ಹಿಮಾಲಯ ಪರ್ವತ. ಹಿಮಾಲಯ ಪರ್ವತದ ಕೇದಾರನಾಥದ ಸಮೀಪವಿರುವ ತ್ರಿಯೋಗಿ ನಾರಾಯಣ ಎಂಬ ಹೋಮಕುಂಡ ಈಗಲೂ ಇದೆ. ಆ ಹೋಮಕೊಂಡುದ ಸ್ಥಾನವೇ ಶಿವ-ಪಾರ್ವತಿಯರ ವಿವಾಹವಾದ ಮಂಟಪ. ಹಾಗಾಗಿ ತ್ರಿಯೋಗಿ ನಾರಾಯಣ ಹೋಮಕುಂಡದ ಯಾತ್ರೆಯನ್ನು ಮಾಡಿದ ಭಕ್ತರೆಲ್ಲರೂ, ಈಗಲೂ ಸಮಿತ್ತನ್ನು ಅರ್ಪಿಸುವ ಆಚರಣೆ ಇದೆ. 

ಹಿಮವಂತ ಮಹಾರಾಜನು ತನ್ನ ಮಗಳಾದ ಪಾರ್ವತಿಯ ವಿವಾಹವನ್ನು ಶಿವನೊಡನೆ ಅದ್ದೂರಿಯಾಗಿ ನೆರವೇರಿಸುತ್ತಾನೆ.  ಸಕಲ ಋಷಿಮುನಿಗಳು, ದೇವತೆಗಳೂ ನೆರೆದಿದ್ದ ಆ ವಿವಾಹದ ಎಲ್ಲಾ ಏರ್ಪಾಡನ್ನು, ಪಾರ್ವತಿಯ ಸೋದರನಾದ ವಿಷ್ಣುವೇ ನಿಂತು ಮಾಡಿರುತ್ತಾನೆ. ಆದುದರಿಂದಲೇ ಪಾರ್ವತಿಯನ್ನು ನಾವು ಸರಸಿಜನಾಭ ಸೋದರಿ....... (ಈ ಕೀರ್ತನೆಯ ಪಲ್ಲವಿಯನ್ನು ಕಲಿತುಕೊಳ್ಳಬೇಕು) ಎಂದು ವರ್ಣಿಸುತ್ತೇವೆ. 

ಈಗ ಹಿಮಗಿರಿಯ ಪುತ್ರಿಯಾದ ಪಾರ್ವತಿಯನ್ನು ಪ್ರಾರ್ಥಿಸೋಣ. 

ಸರೋಜದಳನೇತ್ರಿ-------------

 ನವದುರ್ಗೆಯ ಸ್ತೋತ್ರದಲ್ಲಿ ಕೂಷ್ಮಾಂಡೇತಿ ಚತುರ್ತಕಂ ಎಂದು ಹಾಡಲಾಗಿದೆ. ಎಂದರೆ ನಾವು ನವರಾತ್ರಿಯ ನಾಲ್ಕನೆಯ ದಿನ ಪಾರ್ವತಿಯನ್ನು ಕೂಷ್ಮಾಂಡ ದೇವಿಯ ರೂಪದಲ್ಲಿ ಪ್ರಾರ್ಥಿಸುತ್ತೇವೆ. ಕೂಷ್ಮಾಂ ಎಂದರೆ ಸೂಕ್ಷ್ಮ ಎಂದರ್ಥ. ಅಂಡ ಎಂದರೆ ಬಸಿರು ಎಂದರ್ಥ. ಶಿವನನ್ನು ವಿವಾಹವಾದ ಪಾರ್ವತಿ ಈಗ ಗರ್ಭವನ್ನು ಧರಿಸಿ, ಸ್ಕಂದನನ್ನು ತನ್ನ ಬಸಿರಿನಲ್ಲಿ ಕುಳ್ಳಿರಿಸಿಕೊಂಡಿರುತ್ತಾಳೆ. 

ನವರಾತ್ರಿಯ ಐದನೇ ದಿನ ನಾವು ಪಾರ್ವತಿಯನ್ನು ಸ್ಕಂದಮಾತೆಯ ರೂಪದಲ್ಲಿ ಆರಾಧಿಸುತ್ತೇವೆ. ಹಾಗಾಗಿ ನವರಾತ್ರಿಯ ಐದನೇ ದಿನ ನಾವು ಪಾರ್ವತಿಗೆ ದೇವಸ್ಥಾನಗಳಲ್ಲಿ ಬಾಣಂತಿಯ ಅಲಂಕಾರವನ್ನು ಹಾಕಿರುತ್ತೇವೆ. ಎಲ್ಲಾ ಬಾಣಂತಿಯರು ಪಾರ್ವತಿಯರು, ಮತ್ತು ಅವರುಗಳ ಮಡಿಲಲ್ಲಿರುವ ಎಲ್ಲಾ ಕಂದಮ್ಮಗಳು ಸುಬ್ರಮಣ್ಯನೇ ಎಂಬ ಭಾವನೆಯನ್ನು ನಾವು ನಮ್ಮ  ಮನೆಮನೆಗಳಲ್ಲಿ ಕಾಣುತ್ತೇವೆ. ಸ್ಕಂದನನ್ನು ಅಕ್ಕರೆಯಿಂದ ಬೆಳಸಿದ ಪಾರ್ವತಿ, ಬಾಲಕನಾದ ಸ್ಕಂದನಿಗೆ ವೇಲಾಯುಧವನ್ನು ಕೊಟ್ಟು ತಾರಕಾಸುರ ಸಂಹಾರಕ್ಕೆ ಪ್ರೇರೇಪಿಸುತ್ತಾಳೆ. ಬಾಲಕನಾದ ಸ್ಕಂದ ತಾರಕಾಸುರನ ಸಂಹಾರವನ್ನು ಮಾಡಿ ಲೋಕಕಲ್ಯಾಣವನ್ನು ಉಂಟುಮಾಡುತ್ತಾನೆ. 

ಈ ಸಂಧರ್ಭದಲ್ಲಿ, ಬೆಂಗಳೂರಿಗರಾದ ನಾವು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರನ್ನು ನೆನಯಲೇ ಬೇಕು. 2008ರಲ್ಲಿ ಪಾಕಿಸ್ತಾನದ ಉಗ್ರವಾದಿಗಳೊಂದಿಗೆ ಮುಂಬೈನಲ್ಲಿ ಹೋರಾಡುತ್ತಾ, ತಮ್ಮ ಪ್ರಾಣವನ್ನೇ ಬಲಿದಾನವಾಗಿ ನೀಡಿದ ಮಹಾವೀರ ಮೇಜರ್ ಸಂದೀಪ್ ಉನ್ನಿಕೃಷ್ಣನ್. ಸಂದೀಪನ ತಂದೆ ಉನ್ನಿಕೃಷ್ಣನ್ ಮತ್ತು ತಾಯಿ ಧನಲಕ್ಷ್ಮೀ ಅವರು. ನಮ್ಮ ಮನೆಗಳಲ್ಲಿ ಒಂದು ಮಾತಿದೆ......  ಮನೆ ಮನೆಗಳಲ್ಲಿ ಭಗತ್ ಸಿಂಗರು ಹುಟ್ಟಲಿ, ಆದರೆ ನಮ್ಮ ಮನೆಯಲ್ಲಿ ಬೇಡ ಎಂದು.  ಆದರೆ ಧನಲಕ್ಷ್ಮೀ ಅವರು ಹಾಗೆ ಯೋಚಿಸಲೇ ಇಲ್ಲ. ಹಿಂದೆಮುಂದೆ ಯೋಚಿಸದೆ ತಮ್ಮ ಪುತ್ರನಾದ ಸಂದೀಪನನ್ನು ಭಾರತೀಯ ಸೈನ್ಯಕ್ಕೆ ಕಳುಹಿಸಿದ ಮಹಾತಾಯಿ ಧನಲಕ್ಷ್ಮೀ ಅವರು. ಮಗನ ಬಲಿದಾನದ ಘಟನೆಯ ದುಃಖವನ್ನು ಸಹಿಸಿ ನಮ್ಮೊಡನೆ ಬಾಳುತ್ತಿರುವ ಮಹಾತಾಯಿ ಆಕೆ. ಸಂದೀಪ್ ಉನ್ನಿಕೃಷ್ಣನ್ ಅವರಂತಹ ಸೈನಿಕರ  ಬಲಿದಾನದಿಂದಲೇ ನಾವು ನೀವು, ನಮ್ಮ ಭಾರತ ದೇಶದಲ್ಲಿ ಸುರಕ್ಷಿತವಾಗಿದ್ದೇವೆ ಎನ್ನುವುದನ್ನು ನೆನಪಿಸಿಕೊಳ್ಳುವ ಹಬ್ಬವೇ ದಸರಾ ಹಬ್ಬ. 

ನವರಾತ್ರಿಯ ಆರನೆಯ ದಿನ ನಾವು ದುರ್ಗಾಮಾತೆಯನ್ನು ಕಾತ್ಯಾಯಿನಿಯ ರೂಪದಲ್ಲಿ ಆರಾಧಿಸುತ್ತೇವೆ. ಕಾತ್ಯಾಯನ ಋಷಿಗಳ ತಪಸ್ಸಿಗೆ ಒಲಿದು ಅವರ ಮಗಳಾಗಿ ಜನಿಸಿದ ದುರ್ಗೆಯನ್ನು ನಾವು ಕಾತ್ಯಾಯಿನಿ ಎಂದು ಕರೆಯುತ್ತೇವೆ. ನವರಾತ್ರಿಯ ಏಳನೆಯ ದಿನ ನಾವು ಪಾರ್ವತಿಯನ್ನು ಕಾಲರಾತ್ರಿಯ ರೂಪದಲ್ಲಿ ಆರಾಧಿಸುತ್ತೇವೆ. ಏಳನೇ ದಿನವೇ ನವರಾತ್ರಿಯ ಸರಸ್ವತಿ ಹಬ್ಬದ ದಿನವೂ ಹೌದು. 

ನವರಾತ್ರಿಯ ಎಂಟನೇ ದಿನವೇ ದುರ್ಗಾಷ್ಟಮಿ. ದುರ್ಗೆಯ ಮತ್ತೊಂದು ಹೆಸರೇ ಚಾಮುಂಡೇಶ್ವರಿ. ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ್ದು ದುರ್ಗಾಷ್ಟಮಿಯ ಮತ್ತು ಮಹಾ ನವಮಿಯ ನಡುವಿನ ಸಂಧಿಕಾಲದಂದು. ಮಹಿಷಾಸುರನ ಸಂಹಾರವನ್ನು ಮಾಡಿ ಲೋಕಕಲ್ಯಾಣವನ್ನು ಮಾಡಿದ ಪಾರ್ವತಿಯನ್ನೇ ನಾವು ನವಮಮಂ ಸಿದ್ಧಧಾತ್ರೀಚಾ ಎಂದು ಆರಾಧಿಸುತ್ತೇವೆ. 

ಈಗ ನಾವು ವಿದ್ಯಾಧಿ ದೇವತೆಯಾದ ಸರಸ್ವತಿಯ ಪ್ರಾರ್ಥನೆಯನ್ನು ಮಾಡೋಣ. 

ನಿಮಗೆ ಚೆನ್ನಾಗಿ ಬರುವ ಸರಸ್ವತಿಯ  ಹಾಡನ್ನು ಹಾಡಿ  

ತಾಯಿ ಕಾಳಿಮಾತೆಯ ಅನುಗ್ರಹದಿಂದ ಖ್ಯಾತಿಯನ್ನು ಪಡೆದ ವ್ಯಕ್ತಿಗಳಲ್ಲಿ ಕವಿರತ್ನ ಕಾಳಿದಾಸ ಎಲ್ಲರಿಗಿಂತಲೂ ಪ್ರಮುಖನು. ಕಾಡು ಕುರುಬ ಜನಾಂಗದಲ್ಲಿ ಜನಿಸಿದ ಕಾಳಿದಾಸ, ಕಾಳಿಮಾತೆಯ ಅನುಗ್ರಹದಿಂದ ಮಹಾಪಂಡಿತನಾಗಿ ರೂಪುಗೊಂಡನು. ಅಭಿಜ್ಞಾನ ಶಾಕುಂತಳಾ, ರಘುವಂಶ, ವಿಕ್ರಮೋರ್ವಶೀಯ, ಕುಮಾರಸಂಭವ ಮುಂತಾದ ಮಹಾ ನಾಟಕಗಳನ್ನು ಸಂಸ್ಕೃತದಲ್ಲಿ ರಚಿಸಿದ ಮಹಾನಾಟಕಕಾರನೇ ನಮ್ಮ ಕಾಳಿದಾಸ.  ಕಾಳಿದಾಸ ರಚಿಸಿರುವ ಶ್ಯಾಮಲಾ ದಂಡಕವನ್ನು ಈಗ ಕೇಳೋಣ. 

ಮಾಣಿಕ್ಯವೀಣಾ------------------------

 ತೆನಾಲಿ ರಾಮಕೃಷ್ಣನ ಹೆಸರನ್ನು ನೀವೆಲ್ಲಾ ಕೇಳಿರುವಿರಿ.  ಕೃಷ್ಣದೇವರಾಯರ ಆಸ್ಥಾನದಲ್ಲಿ ವಿದೂಷಕನಾಗಿದ್ದ ತೆನಾಲಿ ರಾಮಕೃಷ್ಣ ಕೂಡ ಕಾಳಿಮಾತೆಯ ಆಶೀರ್ವಾದದಿಂದಲೇ ಘನಪಂಡಿತನಾದವನು. ಒಮ್ಮೆ ತೆನಾಲಿ  ರಾಮಕೃಷ್ಣನಿಗೆ ಕಾಳಿಮಾತೆಯ ದರ್ಶನವಾದಾಗ, ತೆನಾಲಿ ರಾಮ, ಆಕೆಯನ್ನು ನೋಡಿ ಗಹಗಹಿಸಿ ನಗಲು ಆರಂಭಿಸುತ್ತಾನೆ.  ಕಾಳಿಮಾತೆ ಏಕೆ ನಗುತ್ತಿರುವೆ ಎಂದು ಕೇಳಿದಾಗ, ತೆನಾಲಿ ರಾಮ ಉತ್ತರಿಸುತ್ತಾ 'ಅಮ್ಮಾ, ನಮಗೆ ಒಂದೇ ಮೂಗು ಇದೆ. ನೆಗಡಿಯಾದಾಗ ಎರಡು ಕೈಗಳು ಇರುವುದರಿಂದ, ಹೇಗೋ ಸಂಭಾಳಿಸಿಕೊಳ್ಳುತೇವೆ. ತಾಯಿ, ನಿನಾಗಾದರೋ, ಆರು ಮುಖ, ಆರು ಮೂಗುಗಳಿವೆ, ಇರುವುದು ನಾಲ್ಕೇ ಕೈಗಳು, ನಿನಗೆ ನಿನಗೆ ನೆಗಡಿ ಬಂದಾಗ ಹೇಗೆ ನಿಭಾಯಿಸುವೆಯೋ, ಸಾಕ್ಷಾತ್ ಶಿವನೇ ಬಲ್ಲ' ಎಂದು ಮತ್ತೆ ಜೋರಾಗಿ ನಗುತ್ತಾನೆ.  ಆಗ ಕಾಳಿಮಾತೆಗೂ ತುಂಬಾ ನಗುಬರುತ್ತದೆ. ತೆನಾಲಿ ರಾಮನ ಹಾಸ್ಯಪ್ರಜ್ಞೆಯನ್ನು ಮೆಚ್ಚಿದ ಕಾಳಿಮಾತೆ, ತೆನಾಲಿ ರಾಮನಿಗೆ ಹಾಸ್ಯಪ್ರಪಂಚದಲ್ಲೇ ನೀನು ಖ್ಯಾತಿ ಹೊಂದು ಎಂದು ಆಶೀರ್ವದಿಸುತ್ತಾಳೆ. ತೆನಾಲಿ ರಾಮ ಮತ್ತು ಕೃಷ್ಣದೇವರಾಯರ ನಡುವಿನ ಹಾಸ್ಯಪ್ರಸಂಗಗಳನ್ನು ವಿಶ್ವವಿಖ್ಯಾತವಾಗಿರುವುದು ತಮಗೆಲ್ಲಾ ಗೊತ್ತೇ ಗೊತ್ತು. 

ದಸರಾ ಎಂದರೆ ಮೈಸೂರು, ಮೈಸೂರು ಎಂದರೆ ದಸರಾ. ದಸರಾ ಆಚರಿಸುವ ಪರಂಪರೆ ಮೊದಲು ಆರಂಭವಾಗಿದ್ದು ವಿಜಯನಗರ ಸಾಮ್ರಾಜ್ಯದಲ್ಲಿ.  ತಾವುಗಳು ಹಂಪಿ ಪ್ರವಾಸಕ್ಕೆ ಹೋದಾಗ ಈಗಲೂ, ಭವ್ಯವಾದ ಮಹಾನವಮಿ ದಿಬ್ಬವನ್ನು ಈಗಲೂ ನೋಡಬಹುದು. ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯರ ಕಾಲದಲ್ಲಿ ಅತ್ಯಂತ ವೈಭವಯುತವಾಗಿತ್ತು. ಅಂದಿನ ಕಾಲದ ಹಂಪಿಯ ದಸರಾ ಎಂದರೆ ವಿಜಯನಗರದ ಅರಸರ ಸೇನಾಬಲ ಪ್ರದರ್ಶನ.  ದುರ್ಗಾಪೂಜೆಯೊಡನೆ ಆರಂಭವಾದ ದಸರಾ ವಿಜಯದಶಮಿಯಂದು ಅಂತ್ಯಗೊಳ್ಳುತ್ತಿತ್ತು. ಕೃಷ್ಣದೇವರಾಯರ ಕಾಲದಲ್ಲಿ ಮುತ್ತುರತ್ನಗಳನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದರು ಎಂದರೆ ಆಗಿನ ಕಾಲದ ವೈಭವ ಎಷ್ಟಿತ್ತೆಂದು  ತಾವುಗಳು ಊಹಿಸಿಕೊಳ್ಳಬಹುದು. ಅಂತಹ ವೈಭವೋಪೇತವಾದ ವಿಜಯನಗರ ಸಾಮ್ರಾಜ್ಯ, ಬಹಮನಿ ಸುಲ್ತಾನರ ಆಕ್ರಮಣದಿಂದ ನಾಶವಾಗಿಹೋಯಿತು. ಅರಮನೆಯೊಳಗಿನ ಸಂಚುಕೋರರು, ಶತ್ರುಗಳೊಂದಿಗೆ ಸೇರಿದ್ದು ವಿಜಯನಗರಕ್ಕೆ ಮಾರಕವಾಯಿತು. 

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಮೈಸೂರು ಅರಸರು, ಅಂದು ಹಂಪಿಯಿಂದ ಚಾಮುಂಡಿಯ ವಿಗ್ರಹವನ್ನು ಮತ್ತು ಅಂಬಾರಿಯನ್ನೂ ರಕ್ಷಿಸಿ ತಂದರು ಎಂದು ಇತಿಹಾಸಕಾರರು ಹೇಳುತ್ತಾರೆ. ಮೈಸೂರು ದಸರಾವನ್ನು ಮೊದಲ ಬಾರಿಗೆ ಆರಂಭಿಸಿದ ಕೀರ್ತಿ ಮೊದಲನೇ ರಾಜ ಒಡೆಯರವರಿಗೆ ಸೇರುತ್ತದೆ. ಅವರು 1610ರಲ್ಲಿ ದಸರಾವನ್ನು ಶ್ರೀರಂಗಪಟ್ಟಣದಲ್ಲಿ ಆರಂಭಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್, 1805ರಲ್ಲಿ ದಸರಾ ಆಚರಣೆಯನ್ನು ಮೈಸೂರಿಗೆ ಸ್ಥಳಾಂತರಿಸಿದರು. ಅಂದಿನ ದಸರಾದಲ್ಲಿ ಚಾಮುಂಡಿಯ ಪೂಜೆ ಮತ್ತು ಆಯುಧ ಪೂಜೆಗಳೇ ಮುಖ್ಯವಾಗಿದ್ದವು. ವಿಜಯದಶಮಿಯ ಶೋಭಾಯಾತ್ರೆಯಂದು, ಮಹಾರಾಜರೇ ಚಿನ್ನದ ಅಂಬಾರಿಯ ಮೇಲೆ ಆಸೀನರಾಗಿರುತ್ತಿದ್ದರು. ಮೈಸೂರು ಅರಮನೆಯಿಂದ ಹೊರಟ ಜಂಬೂ ಸವಾರಿ, ಬನ್ನಿಮಂಟಪ ತಲುಪಿ ಅಂತ್ಯಗೊಳ್ಳುತ್ತಿತ್ತು. ಅಂದಿನ ಕಾಲದ ಮೈಸೂರು ದಸರಾ ವಿಶ್ವವಿಖ್ಯಾತವಾಗಿತ್ತು. 

ಭಾರತಕ್ಕೆ ಸ್ವಾತಂತ್ರ್ಯ ಬಂದನಂತರ ಮೈಸೂರು ಅರಸರ ಆಡಳಿತ ಅಂತ್ಯಗೊಂಡಿತು. 1971ರಿಂದ ಆನೆಯ ಅಂಬಾರಿಯ ಮೇಲೆ ಚಾಮುಂಡಿಯ ವಿಗ್ರಹವನ್ನು ಕೂರಿಸಿ ದಸರಾ ಮೆರವಣಿಗೆಯನ್ನು ನಡೆಸಲಾಗುತ್ತಿದೆ. ಆದರೆ ಚಾಮುಂಡಿಯ ಮೇಲಿನ ಭಕ್ತಿ ಮತ್ತು ದಸರಾವನ್ನು ನೋಡಲು ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. 

ಈಗ ಮತ್ತೊಮ್ಮೆ ದೇವಿಯ ಪ್ರಾರ್ಥನೆಯನ್ನು ಮಾಡೋಣ. 

ಯಾವ ಹಾಡು ಎಂಬುದನ್ನು ನೀವೇ ಆರಿಸಿಕೊಳ್ಳಿ. 

ಮಹಾವೀರನಾದ ಶ್ರೀರಾಮ, ಲೋಕಕಂಟಕನಾಗಿದ್ದ ರಾವಣನನ್ನು ಸಂಹಾರ ಮಾಡಿದ್ದೂ ವಿಜಯದಶಮಿಯಂದೇ. ಆ ಕತೆಯನ್ನೀಗ ಕೇಳೋಣ. 

ಸೀತಾನೇಷ್ವಣೆಯ ಕತೆಯಿಂದ ಆರಂಭಿಸಿ. 



























Sunday, 17 August 2025

ರಾಣಿ ಅಬ್ಬಕ್ಕ ದೇವಿ

                                                              ರಾಣಿ ಅಬ್ಬಕ್ಕ ದೇವಿ 

                                 ವಿಜಯ ಕರ್ನಾಟಕ ದೀಪಾವಳಿ ಸಂಚಿಕೆ (೨೦೨೫)ಗಾಗಿ 

ಲೇಖಕರು 

ಕುಮಾರಿ 'ಗೌರಿ ನಂಜುಂಡ ಪ್ರಸಾದ್' 

೧೧ನೇ ತರಗತಿ (ವಾಣಿಜ್ಯ ವಿಭಾಗ) 

ನ್ಯಾಷನಲ್ ಪಬ್ಲಿಕ್ ಸ್ಕೂಲ್ 

ರಾಜಾಜಿನಗರ, ಬೆಂಗಳೂರು 

ಮೊಬೈಲ್: ೯೯೦೦೧ ೨೭೨೭೫, ೮೯೫೧೦ ೬೬೪೩೬

-೦-೦-೦-

ಭಾರತದ ಸ್ವಾತಂತ್ರ್ಯ ಹೋರಾಟದ ಕಥೆ, ಯಾವುದೇ ಒಬ್ಬ ಭಾರತೀಯನ ಕಥೆಯಲ್ಲ. ಇದು  ಪ್ರತಿಯೊಬ್ಬ ಭಾರತೀಯನ ಕಥೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಭಾರತವನ್ನು ಕಟ್ಟಲು ಹೋರಾಡಿದ ಕಥೆ, ಈಗ ನಾವು ಹೆಮ್ಮೆಯ ಭಾರತೀಯರಾಗಿ ಗರ್ವದಿಂದ ಇಡೀ ಜಗತ್ತಿಗೆ ಹಂಚಿಕೊಳ್ಳಲಾಗುವಂತಹ ಕಥೆ. ಭಾರತೀಯ ಸ್ವಾತಂತ್ರ್ಯ ಹೋರಾಟದ ಮುನ್ನೂರು ವರ್ಷಗಳ ಕಾಲವೆಂದರೆ, ಪ್ರತಿಯೊಬ್ಬ ದೇಶಭಕ್ತನೂ ಬಹು ಪ್ರಯಾಸದಿಂದ ಬ್ರಿಟಿಷರನ್ನು ಭಾರತದಿಂದ ಬಿಟ್ಟು ಓಡಿಸಲು ಪ್ರಯತ್ನಿಸಿ, ನಂತರ ಯಶಸ್ಸು ಗಳಿಸಿದ ಪಯಣ. ಆ ನಮ್ಮ ಕನಸುಗಳನ್ನು ನನಸು ಮಾಡಲು ನಮ್ಮ ಹೋರಾಟಗಾರರು ಅಹೋರಾತ್ರಿ ಯೋಜಿಸಿ, ಕಠಿಣ ಪರಿಶ್ರಮ ಪಟ್ಟು ಬೆವರು ಸುರಿಸಿದ್ದಾರೆ. ಅವರು ಪಟ್ಟ ಪ್ರಯಾಸಗಳಿಂದಲೇ, ನಾವು ಇಂದು ಆ ಪರಿಶ್ರಮದ ಸಿಹಿಯಾದ ಫಲಗಳನ್ನು ಸೇವಿಸುತ್ತಿದ್ದೇವೆ. 

ಸ್ವಾತಂತ್ರ್ಯ ಹೋರಾಟಗಾರರು ಎಂದ ಕೂಡಲೇ, ಕೆಲವು ಪ್ರಸಿದ್ಧ ಹೆಸರುಗಳು ನಮ್ಮ ನೆನಪಿಗೆ ಬರುತ್ತವೆ. ಗಾಂಧೀಜಿ, ಭಗತ್ ಸಿಂಗ್, ಮಂಗಳ್ ಪಾಂಡೆ, ರಾಣಿ ಲಕ್ಷ್ಮಿಬಾಯಿ, ಸರೋಜಿನಿ ನಾಯ್ಡು ಮುಂತಾದವರು ನಮ್ಮ ನೆನಪಿನ ಚೌಕಟ್ಟಿಗೆ ಬರುತ್ತಾರೆ. ಆದರೆ, ಬ್ರಿಟಿಷರು ಭಾರತವನ್ನು ಆಕ್ರಮಿಸುವುದಕ್ಕೂ ಮೊದಲು, ಈಗ ಹೆಸರಿಸಿದ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟುವುದಕ್ಕೂ ಮೊದಲು, ಭಾರತದಲ್ಲಿ ನೆಲಸಿದ್ದ ಒಬ್ಬ ರಾಣಿ, ತನ್ನ ರಾಜ್ಯದ ಸ್ವಾತಂತ್ರ್ಯಕ್ಕಾಗಿ, ಭಾರತದ ಮೇಲೆ ದುರಾಸೆಯ ನೋಟವನ್ನು ಹರಿಸಿದ್ದ ಮೊದಲ ಪರದೇಶಿಯರ  ವಿರುದ್ಧ ವೀರಾವೇಶದಿಂದ ಹೋರಾಡಿದ್ದಳು. ಹೌದು, ಅವಳೇ ರಾಣಿ ಅಬ್ಬಕ್ಕ ದೇವಿ, ಚೌಟ ವಂಶದ ಹೆಣ್ಣುಮಗಳು. ನಮ್ಮ ಕರ್ನಾಟಕದ ಉಲ್ಲಾಳ ಎನ್ನುವ ಸ್ಥಳದಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿ, ಪೋರ್ಚುಗೀಸರ ವಿರುದ್ಧ ಯುದ್ಧಮಾಡಿ, ಅವರಿಗೆ ಬುದ್ಧಿ ಕಲಿಸಿದ ಧೀರ ಮಹಿಳೆಯೇ ರಾಣಿ ಅಬ್ಬಕ್ಕ ದೇವಿ. ಈಗ ಅವಳ ಪರಿಚಯವನ್ನು ಮಾಡಿಕೊಳ್ಳೋಣ. 

ಅಬ್ಬಕ್ಕ ದೇವಿ ಚೌಟ ವಂಶದ ರಾಜ ಪರಿವಾರದಲ್ಲಿ ಜನಿಸಿದಳು. ಅಬ್ಬಕ್ಕನ ಆರಂಭಿಕ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದವರು ಅವಳ ಮಾವನವರಾದ ತಿರುಮಲರಾಯರು. ತಿರುಮಲರಾಯರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದರು. ಇವರ ನೇತೃತ್ವದಲ್ಲಿ ಚೌಟ ವಂಶದವರು, ಮೊದಲ ಬಾರಿಗೆ ಗುಜರಾತಿನಿಂದ ಕರ್ನಾಟಕದ ತುಳುನಾಡಿನವರೆಗೆ ವಲಸೆ ಬಂದರು. ಉಲ್ಲಾಳವೇ ಅವರ ರಾಜಧಾನಿಯಾಗಿತ್ತು. ಚಿಕ್ಕಂದಿನಿಂದಲೇ ಅಬ್ಬಕ್ಕಳಿಗೆ  ಬಿಲ್ಲುಗಾರಿಕೆ, ಕುದುರೆ ಸವಾರಿ ಮುಂತಾದವುಗಳ ತರಬೇತಿಯನ್ನು ನೀಡಲಾಗಿತ್ತು. ಮುಂದೆ ಅವಳು ಯುದ್ಧನೀತಿ, ಯುದ್ಧ ತಂತ್ರಗಳು, ರಾಜನೀತಿ, ಆಡಳಿತ ನೀತಿಗಳಲ್ಲೂ ಪರಿಣತೆಯನ್ನು ಪಡೆದುಕೊಂಡಿದ್ದಳು. ಇದಕ್ಕೆಲ್ಲಾ ಮೂಲ ಕಾರಣ ತಿರುಮಲರಾಯರೇ. ಅವರ ನೇತೃತ್ವದಲ್ಲಿ ಅಬ್ಬಕ್ಕಳ ವಿದ್ಯಾಭ್ಯಾಸ, ಯುದ್ಧಾಭ್ಯಾಸಗಳು ಯಶಸ್ವಿಯಾಗಿ ಆಗಿತ್ತು. ಕೆಲವೇ ವರ್ಷಗಳಲ್ಲಿ ಅಬ್ಬಕ್ಕ, ಸಕಲ ಗುಣಗಳನ್ನು ಹೊಂದಿದ್ದ ಧೈರ್ಯಶಾಲಿ ಹಾಗೂ ಬುದ್ಧಿವಂತ ಮಹಿಳೆಯಾಗಿ ಬೆಳೆದಳು. ಇದನ್ನೆಲ್ಲಾ ಗಮನಿಸುತ್ತಿದ್ದ ತಿರುಮಲರಾಯರು ಅಬ್ಬಕ್ಕಳನ್ನು ಮೆಚ್ಚಿ, ಅವಳನ್ನು ಅವರ ರಾಜ್ಯದ ರಾಣಿಯೆಂದು ಪಟ್ಟವನ್ನು ಕಟ್ಟಿದರು. ಅಬ್ಬಕ್ಕ ಉಲ್ಲಾಳದ ರಾಣಿಯೆಂದು ನೇಮಿತಳಾದಳು. 

ಉಲ್ಲಾಳ, ನಮಗೆಲ್ಲರಿಗೂ ತಿಳಿದಿರುವಂತೆ ತುಳುನಾಡಿನ ಒಂದು ಭಾಗ. ಚೌಟ ವಂಶದಲ್ಲಿ 'ಅಳಿಯ ಸಂತಾನ' ಎನ್ನುವ ಒಂದು ಪದ್ಧತಿಯಿತ್ತು. ಅವರದ್ದು ಮಾತೃಪ್ರಧಾನ ವಂಶ. ಅಬ್ಬಕ್ಕಳ ರಾಜ್ಯದಲ್ಲಿ ಮಹಿಳೆಯರೇ ಪ್ರಧಾನ ಪತ್ರಗಳನ್ನು ವಹಿಸಿಕೊಳ್ಳುತ್ತಿದ್ದರು. ಅಧಿಕಾರ ಹಾಗೂ ಜವಾಬ್ದಾರಿಗಳನ್ನುಳ್ಳ  ಕೆಲಸಗಳನ್ನು ಮಾಡುತ್ತಿದ್ದವರು ಹೆಂಗಸರೇ. ತಿರುಮಲರಾಯರೇ, ಅಬ್ಬಕ್ಕ ದೇವಿಗೆ ಒಂದು ಒಳ್ಳೆಯ ಸಂಬಂಧವನ್ನು ಹುಡುಕಿ ಮದುವೆಯನ್ನು ಕೂಡ ಮಾಡಿದ್ದರು. ಅಬ್ಬಕ್ಕ ದೇವಿಯ ಪತಿಯ ಹೆಸರು ಲಕ್ಷ್ಮಪ್ಪ ಅರಸ ಬಂಗರಾಜ. ಆತ ಮಂಗಳೂರಿನ ಬಂಗ ಎನ್ನುವ ರಾಜ್ಯದ ರಾಜನಾಗಿದ್ದನು. ಈ ಸಂಬಂಧದಿಂದ ಎರಡೂ ರಾಜ್ಯಗಳ ರಾಜಕೀಯ ಮೈತ್ರಿ ಬಲವಾಯಿತು. ಆದರೆ ಅಬ್ಬಕ್ಕ ಹಾಗೂ ಲಕ್ಷ್ಮಪ್ಪ ಅರಸನ ಸಂಬಂಧ ಬಹು ಬೇಗನೆ ಮುರಿಯಿತು. ಅವಳ ಮೂರು ಹೆಣ್ಣುಮಕ್ಕಳೊಡನೆ ಅಬ್ಬಕ್ಕ ಮತ್ತೆ ಉಲ್ಲಾಳಕ್ಕೆ ವಲಸೆ ಬಂದು ನೆಲಸಿದಳು. 

ಅಬ್ಬಕ್ಕ ಸಿಂಹಾಸನವನ್ನು ಏರಿದಾಗ, ಅವಳ ಉಲ್ಲಾಳ  ಅಷ್ಟೇನು ವಿಶೇಷವಲ್ಲದ  ಸಣ್ಣ ಊರಾಗಿತ್ತು. ಆದರೆ ಅದು ಕರಾವಳಿ ಪ್ರದೇಶವಾಗಿದ್ದುದರಿಂದ, ಅಲ್ಲಿ ಯಾರಾದರೂ ಪರಿಣಾಮಕಾರಿ ಆಡಳಿತವನ್ನು ಮಾಡಿದರೆ, ಅದು ಪ್ರಮುಖ ಪಟ್ಟಣವಾಗಿ ಹೊರಹೊಮ್ಮಬಹುದಾಗಿತ್ತು. ಇದಕ್ಕೆ ಸರಿಯಾಗಿ ಅಬ್ಬಕ್ಕ ಉಲ್ಲಾಳದ ರಾಣಿಯಾಗಿದ್ದಳು. ಉಲ್ಲಾಳದ  ಆರ್ಥಿಕತೆ ಅಡಕೆ, ಮೆಣಸು ಹಾಗೂ ಜವಳಿ ಮಾರಾಟದ ಮೇಲೆ ಅವಲಂಬಿತವಾಗಿತ್ತು. ಜೊತೆಗೆ ಅರಬ್ ಹಾಗೂ ಪರ್ಷಿಯಾ ದೇಶಗಳೊಡನೆಯೂ ಆಗಾಗ ವ್ಯಾಪಾರ ನಡೆಯುತ್ತಿತ್ತು. ಉಲ್ಲಾಳ ಬಹಳ ಅನುಕೂಲಕರ ಸ್ಥಾನದಲ್ಲಿತ್ತು. ಪಶ್ಚಿಮ ಘಟ್ಟಗಳಲ್ಲಿ ಉತ್ಪಾದಿಸಿದ ಎಲ್ಲಾ ಸರಕುಗಳನ್ನು ಸಮುದ್ರದ ಮೂಲಕ ಹಡಗುಗಳಲ್ಲಿ ಬೇರೆಬೇರೆ ದೇಶಗಳಿಗೆ ರಫ್ತು ಮಾಡಬಹುದಾಗಿತ್ತು. ಉಲ್ಲಾಳ ವಿಜಯನಗರದ ಅಧೀನ ರಾಜ್ಯ ಕೂಡ ಆಗಿತ್ತು. ಆದರೆ, ಅಬ್ಬಕ್ಕ ರಾಣಿಯಾಗುವ ಹೊತ್ತಿಗೆ, ವಿಜಯನಗರ ಸಾಮ್ರಾಜ್ಯ ದುರ್ಬಲಗೊಳ್ಳುತ್ತಿತ್ತು. ಉಲ್ಲಾಳದಲ್ಲಿ ಮಾತೃಪ್ರಧಾನದ ಸಂಪ್ರದಾಯ ಇದ್ದರೂ, ಆಗಿನ ಕಾಲದಲ್ಲಿ ಮಹಿಳೆಯರಿಗೆ ಅಧಿಕಾರದ ಹುದ್ದೆಗಳನ್ನು ಕೊಡಲು ಹಿಂಜರಿಯುತ್ತಿದ್ದರು. ಇದಕ್ಕಾಗಿ, ಅಬ್ಬಕ್ಕ ಆಡಳಿತವನ್ನು ದೃಢವಾಗಿ ಮಾಡಬೇಕಾಗಿತ್ತು. ದುಡ್ಡು-ಕಾಸಿನ ವಿಚಾರಗಳು, ನ್ಯಾಯ ಒದಗಿಸುವುದು, ವ್ಯಾಪಾರದ ನಿರ್ವಹಣೆಗಳೊಂದಿಗೆ  ಯುದ್ಧನೀತಿಯಲ್ಲೂ ಅಬ್ಬಕ್ಕ ದೇವಿ ಪರಿಣತೆಯನ್ನು ಗಳಿಸಿಕೊಂಡಿದ್ದಳು. ಉಲ್ಲಾಳದ ಹಿತ ಕಾಯಲು, ಅರಬ್ ಹಾಗೂ ಸ್ಥಳೀಯ ವ್ಯಾಪಾರಿಗಳೊಡನೆ ಉತ್ತಮ ಸಂಬಂಧಗಳನ್ನು ಅಬ್ಬಕ್ಕ ಕಾಪಾಡಿಕೊಂಡಿದ್ದಳು.  ಸುತ್ತಮುತ್ತಲಿನಲ್ಲಿದ್ದ ರಾಜ್ಯಗಳು ಮೇಲಿಂದ ಮೇಲೆ ಉಲ್ಲಾಳದ ಮೇಲೆ ದಂಡೆತ್ತಿ ಬರುತ್ತಿದ್ದವು. ಅವರುಗಳನ್ನು ಕೂಡ ವೀರ ಅಬ್ಬಕ್ಕ ದೇವಿ ಸದೆಬಡೆದು, ರಾಜ್ಯವನ್ನು ನಿಷ್ಕಂಟಕವನ್ನಾಗಿ ಮಾಡುತ್ತಿದಳು. ದೊಡ್ಡ ಸಮಸ್ಯೆಗಳು ಹುಟ್ಟಿಬರುವುದಕ್ಕೂ ಮುನ್ನವೇ, ಉಲ್ಲಾಳ ನೆಲೆಸಿದ್ದ ಸ್ಥಳದ ಸೂಕ್ಷ್ಮತೆಯಿಂದಾಗಿ  ಅವಳ ರಾಜ್ಯ, ಪರದೇಶಿಗಳ ಆಕ್ರಮಣಕ್ಕೆ ಗುರಿಯಾಗಬಹುದು ಎಂದು ಅಬ್ಬಕ್ಕ ಚೆನ್ನಾಗಿ ತಿಳಿದಿದ್ದಳು. ಹಾಗಾಗಿಯೇ ಅವಳು ಸೈನಿಕರಿಗೆ ತರಬೇತಿ ನೀಡಿ, ಕೋಟೆಗಳನ್ನು ನಿರ್ಮಿಸಿ, ನೌಕಾಪಡೆಯನ್ನೂ ಬಲಪಡಿಸಿಕೊಂಡಳು. ಇದೇ, ಅವಳು ಮುಂದೆ ಮಾಡಿದ ಸಾಧನೆಗಳಿಗೆ ಅಡಿಪಾಯವನ್ನು ನಿರ್ಮಿಸಿತ್ತು. 

ಅಬ್ಬಕ್ಕ ರಾಣಿಯಾಗುವಷ್ಟರಲ್ಲೇ ಪೋರ್ಚುಗೀಸ್ ವ್ಯಾಪಾರಿಗಳು ಭಾರತದಲ್ಲಿ ಕಾಲಿಟ್ಟಾಗಿತ್ತು. 1498ರಲ್ಲೇ ವಾಸ್ಕೋಡಗಾಮ ಕೇರಳದವರೆಗೂ ಪಯಣ ಮಾಡಿದ್ದನು. ಕೆಲವೇ ವರ್ಷಗಳಲ್ಲಿ ಪೋರ್ಚುಗೀಸರು ಭಾರತದೊಡಗಿನ ವ್ಯಾಪಾರದಲ್ಲಿ ಪೂರ್ಣಾಧಿಕಾರವನ್ನು ಸ್ಥಾಪಿಸಲು ಇಚ್ಛಿಸಿದ್ದರು. ಈ ನೆಪದಲ್ಲಿ ಆ ವಿದೇಶಿಗಳು, ಮೆಲ್ಲನೆ ಅಕ್ಕಪಕ್ಕದ ರಾಜ್ಯಗಳ ರಾಜರುಗಳನ್ನು ಅವರತ್ತ ಸೇರಿಸಿಕೊಳ್ಳುವ ಹೊಂಚು ಹಾಕಿದ್ದರು. ಕರ್ನಾಟಕದ ರಾಜ್ಯಗಳನ್ನು ತಮ್ಮ ಕೈವಶವನ್ನಾಗಿಸಿಕೊಳ್ಳಲು ಇಚ್ಛಿಸಿದ್ದವರು ಪೋರ್ಚುಗೀಸರು. ಸ್ಥಳೀಯ ರಾಜರುಗಳು ಅವರ ಆದೇಶಗಳಂತೆ ನಡೆಯದಿದ್ದರೆ ಅವರನ್ನು ಬೆದರಿಸುವುದು, ಶಿಕ್ಷಿಸುವುದು ಮುಂತಾದ ಹಿಂಸಾಚಾರಗಳನ್ನು ಮಾಡುತ್ತಿದ್ದರು. ಆ ವಿದೇಶಿಗಳು ಮಾಡಿದ ಅತ್ಯಾಚಾರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. 

ಉಲ್ಲಾಳದ ಬಂದರಿನಿಂದ ಮೆಣಸು, ಅಕ್ಕಿ, ಅಡಕೆ ಇತ್ಯಾದಿಗಳ ವ್ಯಾಪಾರ ನಡೆಯುತ್ತಿತ್ತು. ಆದರೆ ಪೋರ್ಚುಗೀಸರಿಗೆ ಆ ವ್ಯಾಪಾರಗಳ ಮೇಲೆ ಸಂಪೂರ್ಣ ಅಧಿಕಾರ ಬೇಕಾಗಿತ್ತು. ಉಲ್ಲಾಳದವರಿಗೆ ಅರಬರೊಡನೆಯೂ ಒಳ್ಳೆಯ ಸಂಬಂಧ ಇತ್ತು. ಆದರೆ ಪೋರ್ಚುಗೀಸರಿಗೆ ಇದು ಇಷ್ಟವಿರಲಿಲ್ಲ. ಅರಬರನ್ನು ಹೊರಹಾಕುವುದು ಮತ್ತು ಉಲ್ಲಾಳದ ಬಂದರಿನ ಮೇಲೆ ತಮ್ಮ ಸಂಪೂರ್ಣ ಅಧಿಕಾರವನ್ನು ಸ್ಥಾಪಿಸುವುದು ಪೋರ್ಚುಗೀಸರ ಯೋಜನೆಯಾಗಿತ್ತು. ಪೋರ್ಚುಗೀಸರ ದಬ್ಬಾಳಿಕೆಗೆ ಹೆದರಿದ ಸಣ್ಣಪುಟ್ಟ ಸ್ಥಳೀಯ ರಾಜರುಗಳು ಅವರಿಗೆ ಕಪ್ಪ ಸಲ್ಲಿಸಲು ಸಿದ್ಧರಾದರು. ಆದರೆ ಅಬ್ಬಕ್ಕ ದೇವಿಯೊಬ್ಬಳು ಕಪ್ಪ ಸಲ್ಲಿಸಲು ನಿರಾಕರಿಸಿದಳು. ಇದರಿಂದ ಪೋರ್ಚುಗೀಸರಿಗೆ ಅಬ್ಬಕ್ಕ ದೇವಿಯೊಡನೆ ಶತ್ರುತ್ವ ಹುಟ್ಟಿತು. ಅಬ್ಬಕ್ಕಳಿಗೆ ಬುದ್ಧಿ ಕಲಿಸಬೇಕೆಂದು, ಪೋರ್ಚುಗೀಸರು ಉಲ್ಲಾಳದ ಹಡಗುಗಳನ್ನು ಮುಂದೆಹೋಗದಂತೆ ತಡೆದರು. ಪೋರ್ಚುಗೀಸರು ಅವರ ‘ಕಾರ್ಟಾಸ್’ ಎಂಬ ದಾಖಲೆಯಿಲ್ಲದೆ ಸಾಗುತ್ತಿದ್ದ ಉಲ್ಲಾಳದವರ  ಹಡಗುಗಳನ್ನು ತಡೆದು ಶಿಕ್ಷಿಸುತ್ತಿದ್ದರು. ಅರಬ್ ಹಾಗೂ ಪರ್ಷಿಯಾ ದೇಶಗಳೊಡನೆ ಸ್ವತಂತ್ರವಾಗಿ ವ್ಯಾಪಾರ ಮಾಡುತ್ತಿದ್ದ ಉಲ್ಲಾಳದ ವ್ಯಾಪಾರಿಗಳನ್ನು ಈಗ ಕಟ್ಟಿಹಾಕಿದಂತೆ ಆಗಿತ್ತು. ಅಷ್ಟೇ ಅಲ್ಲದೆ, ಅಬ್ಬಕ್ಕ ದೇವಿಯ ಗಂಡನಾಗಿದ್ದ ಲಕ್ಷ್ಮಪ್ಪನನ್ನು ಪೋರ್ಚುಗೀಸರು ಅವರ ಕಡೆಗೆ ಸೇರಿಸಿಕೊಂಡಿದ್ದರು. ಇದರಿಂದ ಉಲ್ಲಾಳ ರಾಜಕೀಯವಾಗಿ ದುರ್ಬಲಗೊಂಡಿತ್ತು. ಅಬ್ಬಕ್ಕ ಪೋರ್ಚುಗೀಸರ ಪೂರ್ಣಾಧಿಕಾರದ ಕನಸನ್ನು ನಾಶಮಾಡುತ್ತಿದ್ದಳು. ಇದರಿಂದ ರೋಷಗೊಂಡ ಪೋರ್ಚಗೀಸರು ಅಬ್ಬಕ್ಕಳೊಡನೆ ಮುಖಾಮುಖಿಯಾಗಿ ಯುದ್ಧಮಾಡಬೇಕೆಂದು ಇಚ್ಛಿಸಿದರು. 

ಮೊದಲನೆಯದಾಗಿ, ‘ಕಾರ್ಟಾಸ್’ ಎಂಬ ದಾಖಲೆ ಇಲ್ಲದ ಉಲ್ಲಾಳದ ಹಡಗುಗಳನ್ನು ತಡೆದು, ಅರಬ್ ಹಾಗೂ ಉಳ್ಳಾಲದ ವ್ಯಾಪಾರ ಸಂಬಂಧಗಳಲ್ಲಿ ಮೂಗು ತೂರಿಸುತ್ತಿದ್ದ, ಪೋರ್ಚುಗೀಸರನ್ನು ನೋಡಿ ಅಬ್ಬಕ್ಕಳಿಗೆ ಸಿಟ್ಟು ಬಂದಿತ್ತು. ಹೀಗಾಗಿ, ಅವಳು ತನ್ನ ರಾಜ್ಯದ ವ್ಯಾಪಾರಿಗಳಿಗೆ ನ್ಯಾಯ ಒದಗಿಸಲು ಪೋರ್ಚುಗೀಸರೊಡನೆ ಹೋರಾಡಿದಳು. ಅಬ್ಬಕ್ಕ ದೇವಿ ತನ್ನ ನೌಕಾ ಪಡೆಗೆ ಪೋರ್ಚುಗೀಸರ ಹಡಗುಗಳ ಮೇಲೆ ದಾಳಿಮಾಡುವಂತೆ ಆಜ್ಞೆಮಾಡಿದಳು. ಪೋರ್ಚುಗೀಸರಿಗೆ ಉಲ್ಲಾಳದಂತಹ ಸಣ್ಣ ರಾಜ್ಯ ಈ ರೀತಿಯಲ್ಲಿ ಹೋರಾಡುವುದನ್ನು ನೋಡಿ ಆಶ್ಚರ್ಯವಾಯಿತು. ಉಲ್ಲಾಳವನ್ನೇ ನಾಶಮಾಡುವ ಒಂದು ದಂಡಯಾತ್ರೆಯ ತಯಾರಿಯನ್ನು ಪೋರ್ಚುಗೀಸರು ಮಾಡಿದರು. 

1568ರಲ್ಲಿ ಉಲ್ಲಾಳವನ್ನು ನಾಶಮಾಡಬೇಕೆಂದು ಜನರಲ್ ಜೊವೊ ಅವರ ನೇತೃತ್ವದಲ್ಲಿ ಪೋರ್ಚುಗೀಸರು ಆಕ್ರಮಣವನ್ನು ಮಾಡಿ, ಉಲ್ಲಾಳದ ಬಂದರನ್ನು ವಶಪಡಿಸಿಕೊಂಡರು. ಅಬ್ಬಕ್ಕ ಹಾಗೂ ಅವಳ ಜನರನ್ನು ಪೋರ್ಚುಗೀಸರ ಸೈನ್ಯ ಹೆದರಿಸಿ, ಬಚ್ಚಿಟ್ಟುಕೊಳ್ಳುವ ಹಾಗೆ ಮಾಡಿತ್ತು. ಸ್ವಲ್ಪ ಸಮಯ ಉಲ್ಲಾಳ ನಿಜವಾಗಿಯೂ ಸೋತಿತು ಎಂಬಂತೆ ಇತ್ತು. ಆದರೆ ಅಬ್ಬಕ್ಕ ಹೆದರುವಂತಹಳಾಗಿರಲಿಲ್ಲ. ಸೋಲಲು ನಿರಾಕರಿಸಿದ ಅಬ್ಬಕ್ಕ ತನ್ನ ಸೈನಿಕರನ್ನು ಪುನಃ ಒಟ್ಟುಗೂಡಿಸಿದಳು.  ರಾತ್ರಿಯ ಹೊತ್ತಿನಲ್ಲಿ ಅವಳ ಸೈನಿಕರನ್ನು, ಪ್ರಜೆಗಳನ್ನು, ಬೆಸ್ತರನ್ನು ಮತ್ತು ಮಹಿಳೆಯರನ್ನು ಕೂಡ ಸೇರಿಸಿಕೊಂಡು ಪೋರ್ಚುಗೀಸರ ವಿರುದ್ಧ ಪ್ರತಿದಾಳಿ ಮಾಡಿದಳು. ಕತ್ತಲೆಯ ಹಾಗೂ ತಮ್ಮ ಭೂಪ್ರದೇಶದ ಜ್ಞಾನವನ್ನು ಉಪಯೋಗಿಸಿಕೊಂಡ ಅಬ್ಬಕ್ಕಳ ಪಡೆ, ಪೋರ್ಚುಗೀಸರನ್ನು ಸದೆಬಡಿಯಿತು. ಇದಾದ ನಂತರ ಮುಂದುವರೆದ ಯುದ್ಧದಲ್ಲಿ ಅಬ್ಬಕ್ಕ, ಜನರಲ್ ಜೊವೊ ಅವರನ್ನೇ ಕೊಂದು ವಿಜಯಗಳಿಸಿದಳು. 

ಅಬ್ಬಕ್ಕಳಿಗೆ ತನ್ನ ವಿಜಯ ಕೆಲವೇ ದಿನ ಇರುತ್ತದೆ, ಪುನಃ ಪೋರ್ಚುಗೀಸರು ದಾಳಿ ಮಾಡುತ್ತಾರೆ ಎಂಬ ಅನುಮಾನ ಇದ್ದೇ ಇತ್ತು. ಹಾಗಾಗಿ ಅವಳು ಅಕ್ಕಪಕ್ಕದ ರಾಜರುಗಳೊಡನೆ ಮೈತ್ರಿಯನ್ನು ಕೋರಿದಳು. ಅಬ್ಬಕ್ಕ, ಕಾಲಿಕಟ್ಟಿನ ಜಾಮೊರಿನ್ ಒಡನೆ ಮಿತ್ರತ್ವವನ್ನು ಬೆಳಸಿ, ಅವನ ನೌಕಾಪಡೆಯನ್ನು ತನ್ನ ಕಡೆಗೆ ಮಾಡಿಕೊಂಡಳು. ಅವಳು ಬಿಜಾಪುರದ ಸುಲ್ತಾನನೊಡನೆಯೂ ಸಂಬಂಧವನ್ನು ಬೆಳಸಿಕೊಂಡಳು. ಶಸ್ತ್ರಾಸ್ತ್ರಗಳ ಗಳಿಕೆಗೆ ಸಹಾಯ ಮಾಡಿದ ಅರಬ್ ವ್ಯಾಪಾರಿಗಳಿಗೆ, ವ್ಯಾಪಾರ ಮುಂದುವರೆಸುವಂತೆ ಅಬ್ಬಕ್ಕ ಅಭಯವನ್ನು ನೀಡಿದಳು. 

1568ರಲ್ಲಿ ಸೋಲಿನಿಂದ ಅವಮಾನಗೊಂಡ ಪೋರ್ಚುಗೀಸರು, ಪದೇಪದೇ ಉಲ್ಲಾಳದ ಮೇಲೆ ದಾಳಿ ನಡೆಸಿದರು. ಪೋರ್ಚುಗೀಸರು ಉಲ್ಲಾಳದ ವ್ಯಾಪಾರಿಗಳ ಮೇಲೂ ಕಣ್ಣು ಇಟ್ಟಿರುತ್ತಿದ್ದರು. ಅಬ್ಬಕ್ಕ ಇದಕ್ಕೆಲ್ಲಾ ತನ್ನ ಗೆರಿಲ್ಲಾ ತಂತ್ರಗಳಿಂದ ಉತ್ತರ ನೀಡಿದಳು. ಅವಳ ಸಣ್ಣಸಣ್ಣ ದೋಣಿಗಳು ವೇಗದಿಂದ ಸಾಗಿ, ಪೋರ್ಚುಗೀಸರ ಯುದ್ಧ ಹಡಗುಗಳಿಗೆ ಕಿರುಕುಳ ನೀಡಿದವು. ಆದರೆ ಸವಾಲುಗಳು ಹೆಚ್ಚುತ್ತಾಹೋದವು. ಅಬ್ಬಕ್ಕಳ ಗಂಡನೇ ಆಗಿದ್ದ ಲಕ್ಷ್ಮಪ್ಪ, ಪೋರ್ಚುಗೀಸರೊಡನೆ ಸೇರಿ, ಉಲ್ಲಾಳದಲ್ಲಿ ನಡೆಯುತ್ತಿದ್ದ ಎಲ್ಲವನ್ನೂ ಗುಪ್ತಚರನಾಗಿ ಅವರಿಗೆ ತಿಳಿಸುತ್ತಿದ್ದನು. ಇದರಿಂದ ಅಬ್ಬಕ್ಕಳಿಗೆ ಬಹಳ ಕಷ್ಟ ಉಂಟಾಯಿತು. ನಂತರ ನಡೆದ ಒಂದು ಸಂಚಿನಲ್ಲಿ, ಅಬ್ಬಕ್ಕಳಿಗೆ ಒಳಗಿನಿಂದಲೇ ದ್ರೋಹಮಾಡಲಾಯಿತು. ಪೋರ್ಚುಗೀಸರ ಭರವಸೆಗಳಿಂದ ಆಕರ್ಷಿತರಾದ ಕೆಲವು ಮುಖಂಡರು ಅವಳ ಯೋಜನೆಗಳ ಬಗ್ಗೆ ಪೋರ್ಚುಗೀಸರಿಗೆ ಮುಂಚಿತವಾಗೇ ತಿಳಿಸಿಬಿಟ್ಟಿದ್ದರು. ನಂತರದ ಹೋರಾಟದಲ್ಲಿ ಅಬ್ಬಕ್ಕಳನ್ನು ಸೆರೆ ಹಿಡಿಯಲಾಯಿತು. ಸೆರೆಮನೆಯಲ್ಲಿ ಕೂಡ ಅಬ್ಬಕ್ಕ ಪೋರ್ಚುಗೀಸರಿಗೆ ಹೆದರಲಿಲ್ಲ. ಧೈರ್ಯಗೆಡದೆ ತನ್ನ ಹೋರಾಟವನ್ನು ಮುಂದುವರೆಸಿದಳು. ಕೊನೆಗೂ ರಾಣಿ ಅಬ್ಬಕ್ಕ, ಪೋರ್ಚುಗೀಸರ ಆಜ್ಞೆಗಳನ್ನು ಧಿಕ್ಕರಿಸಿಯೇ ಸತ್ತಳು. ಎಂದೂ ಶರಣಾಗತಿಯ ಒಪ್ಪಂದಕ್ಕೆ ಸಹಿ ಹಾಕದೆ, ಎಂದಿಗೂ ಪೋರ್ಚುಗೀಸರಿಗೆ ಗೌರವ ಸಲ್ಲಿಸದೆ, ಅಜೇಯಳಾಗಿ, ತನ್ನ ಮಾತೃಭೂಮಿಗಾಗಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ ಮಹಾತಾಯಿ ರಾಣಿ ಅಬ್ಬಕ್ಕ ದೇವಿ. 

ಅಬ್ಬಕ್ಕ ದೇವಿ ಮತ್ತು ಪೋರ್ಚುಗೀಸರ ನಡುವೆ ನಡೆದ ಯುದ್ಧಗಳು ಬರೀ ಹೋರಾಟಗಳಾಗಿರಲಿಲ್ಲ. ಸಾಮ್ರಾಜ್ಯಶಾಹಿ ಶಕ್ತಿಗಳ ಮುಂದೆ ಬಗ್ಗದೆ ನಿಂತು, ಭಾರತೀಯರ ಸ್ವಾತಂತ್ರ್ಯದ ಘನತೆಯನ್ನು ಎತ್ತಿಹಿಡಿಯುವ ಪ್ರಯತ್ನಗಳಾಗಿದ್ದವು. ಅಬ್ಬಕ್ಕಳಿಗೆ ಅವಳ ಗಂಡನೇ ಮತ್ತು ಅವಳ ಪ್ರಜೆಗಳೇ ದ್ರೋಹ ಬಗೆದರೂ, ಅವಳು ಎಂದೂ ತಲೆಬಾಗಿಸಲಿಲ್ಲ, ಮಾತೃಭೂಮಿಯನ್ನು ಬಿಟ್ಟುಕೊಡಲಿಲ್ಲ. ಅಬ್ಬಕ್ಕಳ ಉಲ್ಲಾಳ ಚಿಕ್ಕದಾಗಿದ್ದರೂ, ಅವಳ ಹೋರಾಟದ ಆತ್ಮ ವಿಶಾಲವಾಗಿತ್ತು. 'ನಿಜವಾದ ಶಕ್ತಿ ಇರುವುದು ದೊಡ್ಡ ದೊಡ್ಡ ಸಾಮ್ರಾಜ್ಯಗಳಲಲ್ಲ, ಬದಲಾಗಿ ಅದು ಇರುವುದು ಹೋರಾಡುವ ಧೈರ್ಯದಲ್ಲಿ,' ಎಂಬುದೇ ರಾಣಿ ಅಬ್ಬಕ್ಕ ದೇವಿಯ ಹೋರಾಟದ ಬದುಕಿನ ಪಾಠ. 

                                                                                     -೦-೦-೦- 

 

ಕವನೋತ್ಸವ

                                                                     ಕವನೋತ್ಸವ  

(ರಚನೆಲಕ್ಷ್ಮೀನಾರಾಯಣ ಕೆ.

ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು 

Klakshminarayana1956@rediffmail.com

Mobile: 98455 62603)

***

ಕವನೋತ್ಸವ – 1

ಯಾರಿವರು?

***

'ಮಸಣದ ಚಲುವೊಂದಿಗೆಪ್ರಣಯವಾಯ್ತೆ?

ಮಸಣದ ನೀರವತೆ ದಮನಿತರ

ದನಿಗೆತಾ ಸ್ಫೂರ್ತಿಯಾಯ್ತೆ?

 

'ನಾ ಮೂಳೆನಾ ಇಂಗೆ ಇರಲ್ಲಾ

ಕೂಗ್ತೀನಿಸಿಡಿತೀನಿ,' ಎಂಬಿವನ ದನಿ

ಬಂಡಾಯದ ಕೂಗಾಯ್ತೆ?

 

'ತ್ರಾಣಪ್ರಾಣ ಎಳ್ಡೂ ಇಲ್ದೆ

ತ್ವಡೆ ನಡ್ಗಿ ಸತ್ತೋಗೋರಾ,' ಎಂಬೀ ಕೂಗು

ನಮ್ಮಾಳೋರ ಬಡಿದೆಬ್ಬಿಸಿತೇ?

 

 

'ಟಾಟಾಬಿರ್ಲಾ ಜೋಬಿಗೆ ಬಂತು

ನಲವತ್ತೇಳರ ಸ್ವಾತಂತ್ರ್ಯಎಂದವನ ನಾದ

ಸಾಮಾಜಿಕ ನ್ಯಾಯಕ್ಕೆ ತಾ ನಾಂದಿಯಾಯ್ತೆ?

 

ಶೋಷಿತರ ದನಿಯಿಂದು ಸದ್ದಡಗಿಸಿತೆ?

ದಿವ್ಯ ಚೇತನಕೇತರ ಸಾವು?

ಸ್ಥಾವರಕಳಿವುಂಟುಜಂಗಮಕ್ಕುಂಟೇ?

***

(ರಚನೆಲಕ್ಷ್ಮೀನಾರಾಯಣ ಕೆ.)

(ಉತ್ತರಬಂಡಾಯ ಕವಿ ಸಿದ್ಧಲಿಂಗಯ್ಯ)

******

 

ಕವನೋತ್ಸವ – 2

ಯಾರಿವರು?

***

ಮೂರ್ತಿ ಚಿಕ್ಕದಾದರೂ 

ಕೀರ್ತಿ ದೊಡ್ಡದಂತೆ 

ಮೊದಲಾಟದಲ್ಲೇ ಸಿಡಿಯಿತಂತೆ 

ಭರ್ಜರಿ ಚೊಚ್ಚಲ ಶತಕ 

ಬ್ಯಾಟಿಂಗ್ ಕಲೆಯ ನಿಪುಣನೀತ 

ನೂರೇರಿಸಿದಾಗೆಲ್ಲ ನಾವ್  ಸೋತಿಲ್ಲವಂತೆ 

'ವಿಶ್ವ'ಮಾನ್ಯ ಕನ್ನಡಿಗನೀತ 

ಸಜ್ಜನ ಕ್ರಿಕೆಟಿಗನಂತೆ 

***

(ರಚನೆಲಕ್ಷ್ಮೀನಾರಾಯಣ ಕೆ.)

(ಉತ್ತರಜಿ.ಆರ್ವಿಶ್ವನಾಥ್) 

******

ಕವನೋತ್ಸವ - 3

ಯಾರಿವರು?

***

ಚಾಮಯ್ಯ ಮೇಷ್ಟ್ರ ಪ್ರೀತಿಯೇ 

ಶಿಷ್ಯನಿಗೆ ಮುಳುವಾಯ್ತೆ?

 

ಸದಾಶಿವರಾಯರ ಅತಿಯಕ್ಕರೆಯೂ 

ಮಿನುಗುತಾರೆಯ ಮೆರೆಸದಾಯ್ತೆ?

ದುರಂತಗಳಿಗೆ ಮುನ್ನುಡಿ ಬರೆವುದೆ 

ಇವರ ಪಾತ್ರವಾಯ್ತೆ?

 

'ನಮ್ಮ ಮಕ್ಕಳೀ' ಪಾತ್ರಧಾರಿ

'ಸತ್ಯಮಾರ್ಗದಿ ನಡೆವ ಶಕ್ತಿಬೇಡಿದರೇಕೆ?

***

(ರಚನೆಲಕ್ಷ್ಮೀನಾರಾಯಣ ಕೆ.)

(ಉತ್ತರಕೆ.ಎಸ್.ಅಶ್ವತ್ಥ್) 

 

 

ಕವನೋತ್ಸವ - 4

ಯಾರಿವರು?

***

ಹೆಸರಲಿ ಶಾಂತನಾದರೂ 

ಹೋರಾಟದ ಹಠವಂತನೆ?

ಕಾಗೋಡ ಗೂಡಿಗೆ ಲೋಹಿಯಾರ 

ಕರೆತಂದ ಭಗೀರಥನಿವನೆ?

'ಅವಸ್ಥೆ' ಶೋಷಿತನಿವ 

ಅರಸರ ಭೂಸುಧಾರಣೆಗೆ ಪ್ರೇರಣೆಯಾದನೆ?

ಏನವಸರವಿತ್ತೋಬೇಗ ತೆರಳಿ 

ಉತ್ಸಾಹಿಗಳೇಕೆ ಅಲ್ಪಾಯುಗಳೆಂದೆಮ್ಮ ಕಾಡಿದನೆ?

***

(ರಚನೆಲಕ್ಷ್ಮೀನಾರಾಯಣ ಕೆ.)

(ಉತ್ತರ: ಶಾಂತವೇರಿ ಗೋಪಾಲ ಗೌಡ)

***

 

 

 

 

 

 

 

ಕವನೋತ್ಸವ - 5

ಯಾರಿವರು?

***

ವಿಷವುಂಡವನ ಬೀಡ ನರ್ತಕಿಗೆ 

ಬೆಂಗಳೂರ ಬಿರುದೇಕೆ?

ಗೆಜ್ಜೆಪೂಜೆಗೆ ಕೊರಳೊಡ್ಡಿದರುನೃತ್ಯಸಂಗೀತ 

ಸಾಹಿತ್ಯಗಳ  ಕರುಳಲೇ  ಪಡೆದಳೆ?

ತನುಮನಧನಗಳ ಗಾನಗುರು ತ್ಯಾಗಯ್ಯಗರ್ಪಿಸಿ 

 ಅವರರಾಧನೆಗೆ ನಾಂದಿ ಹಾಡಿದಳೆ?

ಕೀಳೆಂಬ ಹಣೆಪಟ್ಟಿ ಹೊತ್ತು ಸೆಣಸಿ  

ಲೀನಳಾದಳಲ್ಲ ಗುರು ಚರಣದೊಳಗೆ!

***

(ರಚನೆಲಕ್ಷ್ಮೀನಾರಾಯಣ ಕೆ.)

(ಉತ್ತರಬೆಂಗಳೂರು ನಾಗರತ್ನಮ್ಮ)

******

 

ಕವನೋತ್ಸವ - 6

ಯಾರಿವರು?

***

ಕೃಷ್ಣರಾಜರ ಮುರಳಿ ಕರೆಯಿತೆ 

ದೂರ ತೀರಕೆ ನಿನ್ನನು?

ಸಪ್ತ ಸಾಗರದಾಚೆ ಹಾರಿ 

ಸೇರಿದೆಯಾ ಕರುನಾಡನು?

 

ಹೂವ ಹಾಸಿಗೆ ಹಸಿರು ಹೊದಿಕೆ 

ಮರರೆಂಬಗಳ ಚುಂಬನ 

'ಕೆಂಪು ತೋಟ' ಬೇಲಿಯೊಳಗೆ 

ನಿರ್ಮಿಸಿದೆ ಸ್ವರ್ಗವೊಂದನ!

 

ಬಿಳಿಯ ಸೀರೆಯನುಟ್ಟು ಬಳುಕುವ  

ಜಲಕನ್ನಿಕೆಯರ ನರ್ತನ 

ಸೆಳೆವ ಬೃಂದಾವನವ ಕಟ್ಟಿ 

ಸಿಂಗರಿಸಿದೆ ಕಾವೇರಿ ಅಣೆಕಟ್ಟನ!

 

ಕರ್ಮಭೂಮಿಯಲೇ ಮಣ್ಣಾದ 

ಸಾರ್ಥಕವು ನಿನ್ನೀ ಜೀವನ 

ಹಸಿರು ಸಂದೇಶದ ನಿನ್ನ 

ನೆನೆಯುತಿದೆ ಕನ್ನಡ ವನಮನ 

***

(ರಚನೆಲಕ್ಷ್ಮೀನಾರಾಯಣ ಕೆ.)

(ಉತ್ತರಜಿ.ಎಚ್ಕ್ರುಮ್ಬಿಗಲ್)

******

 

 

ಕವನೋತ್ಸವ - 7

ಯಾರಿವರು?

***

ಮಧುರ ಕಂಠದ ಪುಟ್ಟ ಕೋಗಿಲೆಗೆ 

ಕುತ್ತಾಯ್ತೆ ಕೊರಳ ನೋವೊಂದು?

ಗಡುಸಾಯ್ತು ಗಾನಗಂಗೆಯ ಸಿರಿಕಂಠವಂದು!

 

ಸೋಲೊಪ್ಪುವುದುಂಟೆ 

ಗಂಡುಮೆಟ್ಟಿನ ನಾಡ ದಿಟ್ಟ ಮಹಿಳೆ?

ಒಲಿಸಿಕೊಂಡಳಲ್ಲಾ ಗಡುಸು ದನಿಗೆ ಭಾವದ ಸೆಲೆ!

 

ಸಣ್ಣ ಝರಿಯೊಂದು ಬೆಟ್ಟಗುಡ್ಡಗಳ ಬಳಸಿ 

ಮೈತುಂಬಿ ಭೋರ್ಗರೆದು ನದಿಯಾಗುವಂತೀ 

ಗಂಗೆಯ ಗಾನಶ್ರುತಿ 

 

ಭೀಮಬಸವಮಲ್ಲಿಕಾರ್ಜುನರ ಸೆಣಸಿ 

ಗೆದ್ದು ಬೀಗಿದಳಲ್ಲಾ ಹೆಣ್ತನವ ಮೆರೆಸಿ 

ಪದ್ಮವಿಭೂಷಣೆಯಾಗಿ ಕರುನಾಡ ಗೆಲಿಸಿ 

***

(ರಚನೆಲಕ್ಷ್ಮೀನಾರಾಯಣ ಕೆ.) 

(ಉತ್ತರಗಂಗೂಬಾಯ್ ಹಾನಗಲ್)

******

ಕವನೋತ್ಸವ - 8

ಯಾರಿವರು?

***

ಗೋಕಾಕದ ಜಲಧಾರ 

ಕರುನಾಡ ನಯಾಗರ 

ಅಲ್ಲಿ ಜನಿಸಿತೊಂದು 

ಗಣಿತದ ಧ್ರುವತಾರ 

 

ಬೆಳಗಿತದು  

ಗಂಡುಮೆಟ್ಟಿನ ನಾಡ  

ವಿದ್ಯಾಲಯಗಳ 

ಪರಿಕರ 

 

ದೂರದೈದು ನದಿಗಳ ಬೀಡ  

ಆಳಿದ್ದು ಅದರ ಶಿಖರ 

ಅದರ  ಸ್ಮರಣೆಯೆ 

ನಮಗೆ ಶ್ರೀಕಾರ 

***

(ರಚನೆಲಕ್ಷ್ಮೀನಾರಾಯಣ ಕೆ.)

(ಉತ್ತರಡಿ.ಸಿ.ಪಾವಟೆ)

******

 

ಕವನೋತ್ಸವ – 9

ಯಾರಿವರು?

***

ಹೂವು ಹೊರಳುವವು ಸೂರ್ಯನ ಕಡೆಗೆ

ನಮ್ಮ ದಾರಿ  ಭಾವ ಜೀವಿಯವರೆಗೆ

ಗದ್ಯದ ಒಡಲಿಗೆಪದ್ಯದ ಕಡಲಿಗೆ

ಮುಳುಗಿದಂತೆದಿನ ಬೆಳಗಿದಂತೆ

ಹೊರಬರುವನು ರವಿಯ ಹಾಗೆ

 

'ಮಣ್ಣಿನ ಮೆರವಣಿಗೆ'ಯಲಿ

 ಕರಗಿಸಿ ಬಿಡವನು

ಎಲ್ಲ ಬಗೆಯ ಸರಕು:

ಸಮನ್ವಯದ ಕವಿಯು

ಕೂಡಿಸಿ ಬಾಳ ತೊಡಕು

 

'ಜೀವ ಧ್ವನಿಕವನಗಳಿಗೂ ಮುದ

ಭಾವಪೂರ್ಣ ಗಾನಕೂ ಒಂದೇ ಹದ,

ಕವಿ ಹೃದಯದೊಳೇನು ನಡೆವುದೋ

'ಚೆಲ್ವವೀರನವನು'ನವನು ಕಲಾವಿದ

***

(ರಚನೆಲಕ್ಷ್ಮೀನಾರಾಯಣ ಕೆ.)

(ಉತ್ತರಚೆನ್ನವೀರ ಕಣವಿ)

******

 

ಕವನೋತ್ಸವ – 10

ಯಾರಿವರು?

***

'ಇಗೋ ಕನ್ನಡ'  ಎಂದಾತ 

ನಮ್ಮೆಲ್ಲರ ಬಡಿದೆಬ್ಬಿಸಿದಾತ 

ಬರೆದಿಟ್ಟು ನಮಗೊಂದು ನಿಘಂಟ 

ಹೊರಟು ನಿಂತ ಧೀಮಂತ 

 

ಇಗೋ 'ಜೀವಿಈತ 

ಪಂಪರನ್ನರ ನಮಗೆ ತೋರಿಸಿದಾತ 

ಕೆಟಲರ ಕಾರ್ಯ ಮುಂದುವರೆಸಿದಾತ 

'ಶಬ್ದಸಾಗರ'ಕೆ  ಸೇತು ನಿರ್ಮಿಸಿದಾತ 

 

ಎರಡು ಮಹಾಮಾರಿಗಳ ಜಯಿಸಿದಾತ 

ಎರಡು ಮಹಾಯುದ್ಧಗಳ ಗೆದ್ದು ನಿಂತಾತ 

ಕನ್ನಡದುಳಿವೆಗೆ ಯುವಸೈನ್ಯ ಕಟ್ಟಿದಾತ 

ಶತನಮಾನಗಳು ನಿಮಗಿದೋ ನಮ್ಮೆಲ್ಲರ ತಾತ

 

(ರಚನೆಲಕ್ಷ್ಮೀನಾರಾಯಣ ಕೆ.)

(ಉತ್ತರಜಿವೆಂಕಟಸುಬ್ಬಯ್ಯ)

******

 

 

 

 

 

ಮೈಸೂರ ಮಲ್ಲಿಗೆ - 83

  ಮೈಸೂರ ಮಲ್ಲಿಗೆ - 83

(1942-2025)

ಕೆ.ಎಸ್.ನರಸಿ೦ಹಸ್ವಾಮಿ(ಕೆ.ಎಸ್.ನ)ರವರ  ’ಮೈಸೂರು ಮಲ್ಲಿಗೆ’ಗೀಗ 83ರ  ಸ೦ಭ್ರಮ. 1942ರಲ್ಲಿ ಮೊಟ್ಟ ಮೊದಲು ಪ್ರಕಟಗೊ೦ಡ ಈ ಪ್ರೇಮಗೀತೆಗಳ ಸ೦ಕಲನ ಈಗಲೂ ತನ್ನ ಕ೦ಪನ್ನು ಸೂಸುತ್ತಿರುವುದು ಸೋಜಿಗವೇ ಸರಿ. ಮೂವತ್ತೆ೦ಟು ಮುದ್ರಣಗಳನ್ನು ಕ೦ಡಿರುವ ಈ ಕಿರು ಹೊತ್ತಿಗೆ ದಾಖಲೆಯ ಮಾರಾಟವನ್ನೂ ಕ೦ಡಿದೆ. 
ಕನ್ನಡದ ಮೊದಲ ’ಪ್ರೇಮಕವಿ ಕೆ.ಎಸ್.ನ.’ರೆ೦ದು ಹೇಳಿದರೆ ತಪ್ಪಾಗಲಾರದು. ಆ೦ಗ್ಲ ಸಾಹಿತ್ಯದ ಪ್ರೇಮಕವಿಗಳಾದ ಕೀಟ್ಸ್,  ವರ್ಡ್ಸ್ ವರ್ಥ್ ರವರುಗಳಿಗಿ೦ತಲೂ ವಿಭಿನ್ನವಾದ ಸರಳ ಶೃಂಗಾರ ನಮ್ಮ ನರಸಿ೦ಹಸ್ವಾಮಿಯವರದ್ದು.    ಮೈಸೂರು ಮಲ್ಲಿಗೆಯೊ೦ದು ಪ್ರೇಮಗೀತೆಗಳ ಸ೦ಗ್ರಹ. ಕೆ.ಎಸ್.ನ.ರ ಮಾತಿನಲ್ಲೇ ಹೇಳುವುದಾದರೆ ಇದೊ೦ದು ದಾ೦ಪತ್ಯಗೀತೆಗಳ ಸಿ೦ಚನ. ಹಾಗಾಗಿ ಕೆ.ಎಸ್.ನ.ರ ಕವಿತೆಗಳ ಸ್ಫೂರ್ತಿ ಅವರ ಪತ್ನಿಯವರ೦ತೆ!    ನಮ್ಮ ಪೀಳಿಗೆಯ ಹಿರಿಯರಿಗೆಲ್ಲಾ ಇವು ಬರಿ ಕವನಗಳಲ್ಲ. ನಮ್ಮ ಜೀವನವನ್ನು ನಡೆಸಿ ಸವಿದ ಪರಿ.  ಆದುದರಿ೦ದಲೇ ಈ ಎಲ್ಲಾ ಕವನಗಳು ನಮ್ಮೆಲ್ಲರಿಗೂ ಆಪ್ಯಾಯಮಾನ.

1984ರ ಸಮಯ. ನಾನಾಗ ದೂರದ ಪ೦ಜಾಬಿನ ಲೂಧಿಯಾನದಲ್ಲಿ ಸೇವೆಸಲ್ಲಿಸುತ್ತಿದ್ದ ಕಾಲ.  ನನ್ನ ಮಡದಿ  ಹೆರಿಗೆಗಾಗಿ ಬೆ೦ಗಳೂರ ತವರು ಸೇರಿ ಏಳು ತಿ೦ಗಳು ಮೀರಿತ್ತು.  ನನ್ನ೦ತೂ ಒ೦ಟಿತನ ಕಾಡುತ್ತಿತ್ತು. ಕೆ.ಎಸ್.ನ.ರ ಕವಿತೆಯೊ೦ದು ಮತ್ತೆ-ಮತ್ತೆ ನೆನಪಿಸುತ್ತಿತ್ತು......

ಹೆ೦ಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ,
ಹೆ೦ಡತಿಯೊಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ||

ಇವಳ್ಯಾಕೆ ಇಷ್ಟು ದಿನ ಅಲ್ಲೇ ಕುಳಿತಳು....... ಎ೦ಬ ಕೋಪಬ೦ದು ಖಾರವಾಗೆ ಅ೦ದೊಮ್ಮೆ ಅವಳಿಗೊ೦ದು ಪತ್ರ ಬರೆದಿದ್ದೆ. ನಾಲ್ಕೇ ದಿನಗಳೊಳಗೆ ನನ್ನ ಪತ್ನಿಯ ಉತ್ತರ ನನ್ನ ಕೈಸೇರಿತ್ತು.  ತನ್ನ ಹಾಗೂ ನಮ್ಮ ಮಗುವಿನ ಕುಶಲಗಳನ್ನು ತಿಳಿಸುತ್ತಾ, ತನ್ನ ಮರುಪ್ರಯಾಣಕ್ಕಾಗಿರುವ ವಿಳ೦ಬವನ್ನು ವಿವರಿಸಿದ್ದಳು. ಸಾಹಿತ್ಯಪ್ರಿಯೆಯೂ ಹಾಗೂ ಜಾಣೆಯೂ ಆದ ನನ್ನ ಪ್ರಿಯೆ ಮೈಸೂರು ಮಲ್ಲಿಗೆಯ ಈ ಕವನವನ್ನೂ ಜೊತೆಗೆ ಬರೆದು ಕಳುಹಿಸಿದ್ದಳು.............

ತವರ ಸುಖದೊಳೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮ ನೀವೆ ಒರೆಯನಿಟ್ಟು,
ನಿಮ್ಮ ನೆನಸೇ ನನ್ನ ಹಿ೦ಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು.

ಕೆಲವೇ ದಿನಗಳಲ್ಲಿ ನನ್ನ ಮುದ್ದು ಮಗಳೊಡನೆ ಲೂಧಿಯಾನ ಸೇರಿದ ನನ್ನವಳನ್ನು ಬರಮಾಡಿಕೊಳ್ಳುತ್ತಾ ನನ್ನ ಮನಸ್ಸು ಹೀಗೆ ಹಾಡಿತ್ತು.....

ಮಲ್ಲಿಗೆಯ ಬಳ್ಳಿಯಲಿ ಮಲ್ಲಿಗೆಯ ಹೂ ಬಿಡುವು-
ದೇನು ಸೋಜಿಗವಲ್ಲ.



ಅ೦ದು ನಾನು, ನನ್ನವಳೂ ಸೇರಿ ನಮ್ಮ ಮಗುವಿಗೆ ತೊಟ್ಟಿಲು ಕಟ್ಟಿದ್ದೆವು.  ಹಾಡುಗಾರ್ತಿಯೂ ಆದ ನನ್ನ ಪತ್ನಿಯ ಸಡಗರ ಕೇಳಬೇಕೆ?  ಮಗು ತೂಗುವ ಸಮಯದಲ್ಲಿ ಅವಳು ಅ೦ದು ಹಾಡಿದ್ದು ಅದೇ ಮಲ್ಲಿಗೆಯ ಜೋಗುಳ........

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು;
ನಿದ್ದೆ ಬರುವಳು ಹೊದ್ದು ಮಲಗು, ಮಗುವೆ.
ಸುತ್ತಿ ಹೊರಳಾಡದಿರು, ಮತ್ತೆ ಹಟ ಹೂಡದಿರು;
ನಿದ್ದೆ ಬರುವಳು ಕದ್ದು, ಮಲಗು ಮಗುವೆ.


ಕೇಳುತ್ತಾ ಮಲಗಿದ್ದ ನನಗೂ ಮಧುರ ಕ್ಷಣವೊ೦ದರ ಭಾಸವಾಗಿತ್ತು.

ವರ್ಷಗಳುರುಳಿ ನನ್ನ ಮಗಳ ಕಾಲ ಬ೦ದಿತ್ತು. ತನ್ನ ಬಾಳ ಸ೦ಗಾತಿಯನ್ನು ತಾನೇ ಆರಿಸಿ ನಿ೦ತ ಮಗಳನ್ನು ಹರೆಸಿ ಧಾರೆಯೆರೆದು ಬೀಳ್ಕೊಟ್ಟಿದ್ದೂ ಆಯಿತು.



ಸು೦ದರ ಕವಿತೆಯ೦ತೆ ರೂಪುಗೂ೦ಡ ಅವಳ ಸ೦ಸಾರ ಕ೦ಡು ನೆನೆಪಾದುದು ಮಲ್ಲಿಗೆಯ ಸಾಲುಗಳೇ......

ಒ೦ದು ಹೆಣ್ಣಿಗೊ೦ದು ಗ೦ಡು
ಹೇಗೊ ಸೇರಿ ಹೊ೦ದಿಕೊ೦ಡು,
ಕಾಣದೊ೦ದು ಕನಸ ಕ೦ಡು
ಮಾತಿಗೊಲಿಯದಮ್ರುತವು೦ಡು,
ದು:ಖ ಹಗುರವೆನುತಿರೆ,
ಪ್ರೇಮವೆನಲು ಹಾಸ್ಯವೆ?

ಮಲ್ಲಿಗೆಯ ಸುಗ೦ಧವನ್ನು ಪಸರಿಸಲು ಗಾಳಿ ಹೇಗೆ ಬೇಕೋ, ಹಾಗೆ ಕವನವನ್ನು ಜನಮನಕ್ಕೆ ಕೊ೦ಡೊಯ್ಯಲು ಸ೦ಗೀತವೂ ಬೇಕು. ಕೆ.ಎಸ್.ನ.ರ ಮಲ್ಲಿಗೆಯೊ೦ದಿಗೆ,  ಮೈಸೂರು ಅನ೦ತಸ್ವಾಮಿ, ಸಿ.ಅಶ್ವತ್ಥ್ ರ೦ಥ ಗಾನಗಾರುಡಿಗರ ಶ್ರುತಿಯೂ ಸೇರಿತು.  ಮೈಸೂರು ಮಲ್ಲಿಗೆಯ ಘಮಘಮ, ಸರಿಗಮವಾಗಿ ಕನ್ನಡಿಗರ ಮನೆ-ಮನದ ಗಾನವಾಗಿದ್ದು ಈಗ ಇತಿಹಾಸ.


ಮತ್ತೊ೦ದು ವಿಷಯ.  ಸುಗಮ ಗೀತವೆಂಬ  ಸ೦ಗೀತ-ಕವಿತೆಗಳ ಸಮ್ಮಿಳನ ಕನ್ನಡನಾಡಿನ ವಿಶೇಷ ಕೊಡುಗೆ. ಕೆ.ಎಸ್.ನ., ಕು.ವೇ೦.ಪು.ರವರ೦ಥ ಕವಿಗಳೂ, ಅಶ್ವತ್ಥ್ - ಕಾಳಿ೦ಗರಾಯರ೦ಥ ಗಾಯಕರು, ಕನ್ನಡ ಗೀತೆಗಳ ಮೂಲಕ ಮನೆಮಾತಾಗಿದ್ದಾರೆ. ಕನ್ನಡ ಗೀತೆಗಳೂ ಕೂಡ ಚಲನ ಚಿತ್ರ ಗೀತೆಗಳಷ್ಟೇ ಜನಪ್ರಿಯವಾಗಿವೆ.  ಸಮಗ್ರ ಭಾರತದಲ್ಲಿ  ಈ ರೀತಿಯ ಗೀತ-ಕ್ರಾ೦ತಿಯನ್ನು ರೂಪುಗೊಳಿಸಿದವರಲ್ಲಿ ಮೊದಲಿಗರೇ ಕನ್ನಡಿಗರು ಎ೦ಬ ಸತ್ಯವನ್ನು ಸುಪ್ರಸಿದ್ಧ ಗಾಯಕ ಶ್ರೀ.ಎಸ್.ಪಿ.ಬಾಲಸುಬ್ರಮಣ್ಯಮ್ ರವರೂ ಹಾಗೂ ಸಿ.ಅಶ್ವತ್ಥ್ ರವರೂ ದೃಢಪಡಿಸಿರುವುದನ್ನು ನಾನು ಕಿವಿಯಾರೆ ಕೇಳಿದ್ದೇನೆ.


ಕವಿತೆಗಳನ್ನೇ ನೆಲೆಯಾಗಿಟ್ಟುಕೊ೦ಡು ರೂಪುಗೊಳಿಸಿದ ಭಾರತದ ಏಕಮಾತ್ರ ಚಲನಚಿತ್ರವೇ ಪ್ರಾಯಷ: ’ಮೈಸೂರ ಮಲ್ಲಿಗೆ’ (1992) ಎ೦ಬುದು   ಚಿತ್ರರ೦ಗದ ಮಾತು. ಹೆಸರಾ೦ತ ನಿರ್ದೇಶಕ ನಾಗಭರಣರು ನಿರ್ದೇಶಿಸಿದ ಈ ಗಾನಮಯ ಚಿತ್ರ, ಬೆಳ್ಳಿಹಬ್ಬವನ್ನು ಕ೦ಡಿದ್ದೂ, ಅನೇಕ ಪ್ರಶಸ್ತಿಗಳನ್ನು ಬಾಚಿದ್ದೂ ಕನ್ನಡಿಗರ ಸದಭಿರುಚಿಗೆ ಹಿಡಿದ ಕನ್ನಡಿ. 

ಆ ಚಿತ್ರದ ಸನ್ನಿವೇಶವೊ೦ದು ಹೀಗಿತ್ತು..... ’ರಾತ್ರಿ ತಡವಾಗಿ ಅಳಿಯ೦ದಿರು ಬ೦ದಿರುತ್ತಾರೆ. ಋತುಮತಿಯಾದ ಮಗಳು ಗ೦ಡನ ಉಪಚಾರಕ್ಕೆ ಬರುವ೦ತಿಲ್ಲ. ಚಡಪಡಿಸಿದ ಮಾವನವರು ಅಳಿಯ೦ದಿರನ್ನು ಹೇಗೆ ನಿಭಾಯಿಸಿದರು’, ಎ೦ಬ ಸಂದರ್ಭಕ್ಕೆ ಸ್ಫೂರ್ತಿಯಾದುದೇ ಮಲ್ಲಿಗೆಯ ಒ೦ದು ಕವಿತೆ......

ರಾಯರು ಬ೦ದರು ಮಾವನ ಮನೆಗೆ
ರಾತ್ರಿಯಾಗಿತ್ತೂ;
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚ೦ದಿರ ಬ೦ದಿತ್ತು, ತು೦ಬಿದ
ಚ೦ದಿರ ಬ೦ದಿತ್ತು.
’ಮೈಸೂರ ಮಲ್ಲಿಗೆ’ ಎ೦ಬ ನಾಟಕವೂ ಜನಪ್ರಿಯವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

’ಮೈಸೂರ ಮಲ್ಲಿಗೆ’ಗೀಗ 80 ವರ್ಷ ತು೦ಬಿದೆ. ಈ ಸುದೀರ್ಘ ಅವಧಿಯಲ್ಲಿ ಕಾಲ ಸಾಕಷ್ಟು ಬದಲಾವಣೆಗಳನ್ನು ಕ೦ಡಿದೆ. ದಶಕಗಳ ಹಿ೦ದೆ ಮದುವೆಯಾದ ಹೊಸ ದ೦ಪತಿಗೆ ’ಮೈಸೂರ ಮಲ್ಲಿಗೆ’ಯ ಪುಸ್ತಕದ ಉಡುಗೊರೆಯನ್ನು ನೀಡುವ ಸತ್ಸ೦ಪ್ರಾದಯವಿತ್ತು. ಆದರೀಗ ಪ್ರಪ೦ಚ ’ಮೊಬೈಲ್’ಮಯವಾಗಿದೆ. ಇಡೀ ವಿಶ್ವವೇ ಮಾನವನ ಬೆರಳ ತುದಿಯಲ್ಲಿ ಬ೦ದು ನಿ೦ತಿದೆ. ಮಾನವೀಯ ಆದರ್ಶಗಳು ಕುಸಿದಿವೆ.   ಗ೦ಡ-ಹೆ೦ಡತಿಯರ ನಡುವಿನ ಸಂಬಂಧ ಸಡಿಲಗೊ೦ಡಿದೆ.

ಕೆ.ಎಸ್.ನ.ರಿಗೋ, ಕನಸಿನಲ್ಲೂ ಹೆ೦ಡತಿಯೊ೦ದಿಗೇ ಸಲ್ಲಾಪ........

ಒ೦ದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆ೦ದ ನಿನಗಾವುದೆ೦ದು -
ನಮ್ಮೂರು ಹೊನ್ನೂರು, ನಿಮ್ಮೂರು ನವಿಲೂರು
ಚೆ೦ದ ನಿನಗವುದೆ೦ದು.

ನಮ್ಮ ನವ್ಯ ಪರ೦ಪರೆಯ ಈಗಿನ ಕವಿಗಳು ಮೇಲಿನ ಪದ್ಯವನ್ನೂ ಹೀಗೆ ತಿರುಚಿದರೂ ಆಶ್ಚರ್ಯವಿಲ್ಲ...........

ಅ೦ದಿನಿರುಳ  ಹೊಸ ಗೆಳತಿ ನನ್ನ೦ದು ಕೆಣಕಿದಳು
ಚೆ೦ದ ನಿನಗಾರೆ೦ದೂ -
ನನ್ನ೦ಥ ಬೆಡಗಿಯೋ, ನಿನ್ನ ಪೆದ್ದ ಮಡದಿಯೋ
ಬೇಗ ಹೇಳು ಈಗೆ೦ದು.
ಆದರೂ ಸಾಹಿತ್ಯ ಹಾಗೂ ಸ೦ಗೀತ ಪ್ರೇಮ ಕನ್ನಡತನದ ಅವಿಭಾಜ್ಯ ಅ೦ಗವಾಗಿ ಈಗಲೂ ಉಳಿದಿರುವುದು ನಮ್ಮೆಲ್ಲರ ಭಾಗ್ಯ. ಹಾಗಾಗಿಯೇ ಮೈಸೂರು ಮಲ್ಲಿಗೆಯ ಕವಿ ಕೆ.ಎಸ್.ನ.ರ ಹೆಸರನ್ನು ಅಜರಾಮರಗೊಳಿಸಲು ಕನ್ನಡಿಗರು ನಿರ್ಮಿಸಿರುವ ಸು೦ದರ ತೋಟವೇ ಬೆ೦ಗಳೂರಿನ ಬನಶ೦ಕರಿಯ ’ಮೈಸೂರ ಮಲ್ಲಿಗೆ ಕೆ.ಎಸ್.ನರಸಿ೦ಹಸ್ವಾಮಿ ವನ’. 


ಒ೦ದೊಮ್ಮೆ ಆ ವನದಲ್ಲಿ ಸುತ್ತಾಡಿದರೆ, ಈಗಲೂ ’ಮೈಸೂರ ಮಲ್ಲಿಗೆ’ಯ ಘಮ-ಘಮದ ಭಾಸವಾದೀತು!

ಮೈಸೂರ ಮಲ್ಲಿಗೆಯ ತೋಟಕ್ಕೆ ಮಹದ್ವಾರೋಪಾದಿಯಲ್ಲಿ ಮುನ್ನುಡಿ ಬರೆದುಕೊಟ್ಟು ಹರಸಿದವರು ಹಿರಿಯರಾದ ಡಿ.ವಿ.ಗು೦ಡಪ್ಪನವರು.

"ನಿಮ್ಮ ಪುಸ್ತಕವ೦ತೂ ಇನ್ನೊಬ್ಬರ ಮುನ್ನುಡಿಯಿ೦ದ ಬಣ್ಣ ಕಟ್ಟಿಸಿಕೊಳ್ಳಬೇಕಾಗಿಲ್ಲ.  ನಿಮ್ಮ ಪುಸ್ತಕವನ್ನು ತೆರೆದು ಒ೦ದೆರಡು ಸಾಲುಗಳನ್ನು ಓದುವವರಿಗೆ ಬೇರೆ ಯಾರ ಶಿಫಾರಸು ಬೇಕಾಗಲಾರದು. ಜೀವನಾನುಭವವಿದ್ದ ಈ ಪದ್ಯಗಳನ್ನು ಓದುವವರಿಗೆ ತಮ್ಮ ಮನದ ಧ್ವನಿಯೇ ಅಲ್ಲಿ ಹೊರಡುತ್ತಿರುವ೦ತೆ ಕೇಳಿ ಬ೦ದೀತೆ೦ದು ನನಗೆ ಅನಿಸುತ್ತದೆ. ಮಲ್ಲಿಗೆಯ ತೋಟದಲ್ಲಿ ನಿ೦ತಾಗ ಧಾರಾಳವಾಗಿ ಉಸಿರಾಡಿರೆ೦ದು ಕನ್ನಡಿಗರಿಗೆ ಹೇಳಬೇಕಾದ ಕಾಲ ಬೇಗ ಕಳೆದುಹೋಗಲಿ. ನಿಮ್ಮ ಮಲ್ಲಿಗೆಯ ಬಳ್ಳಿ ಎಲ್ಲ ಋತುಗಳಲ್ಲಿಯೂ ನಗುನಗುತಿರಲಿ".  ಡಿ.ವಿ.ಜಿ.ರವರ ಈ ಮುನ್ನುಡಿಯ ಹರಕೆ ಈಗ ಸಾಕಾರಗೊ೦ಡಿರುವುದು ಸಮಸ್ತ ಕನ್ನಡಿಗರ ಹೆಮ್ಮೆಯಲ್ಲವೆ?



ಮಲ್ಲಿಗೆಯ ಸುಗ೦ಧವನ್ನು ಪಸರಿಸಲು ಗಾಳಿ ಹೇಗೆ ಬೇಕೋ, ಹಾಗೆ ಕವನವನ್ನು ಜನಮನಕ್ಕೆ ಕೊ೦ಡೊಯ್ಯಲು ಸ೦ಗೀತವೂ ಬೇಕು. ಕೆ.ಎಸ್.ನ.ರ ಮಲ್ಲಿಗೆಯೊ೦ದಿಗೆ,  ಮೈಸೂರು ಅನ೦ತಸ್ವಾಮಿ, ಸಿ.ಅಶ್ವತ್ಥ್ ರ೦ಥ ಗಾನಗಾರುಡಿಗರ ಶ್ರುತಿಯೂ ಸೇರಿತು.  ಮೈಸೂರು ಮಲ್ಲಿಗೆಯ ಘಮಘಮ, ಸರಿಗಮವಾಗಿ ಕನ್ನಡಿಗರ ಮನೆ-ಮನದ ಗಾನವಾಗಿದ್ದು ಈಗ ಇತಿಹಾಸ.

                                                             -೦-೦-೦-೦-೦-೦-೦-೦-೦-
ಲೇಖಕರು 
ಲಕ್ಷ್ಮೀನಾರಾಯಣ ಕೆ. 
ನಿವೃತ್ತ ಪ್ರಾಧ್ಯಾಪಕರು 
ಬೆಂಗಳೂರು 
ಮೊಬೈಲ್ 
೯೮೪೫೫ ೬೨೬೦೩