Tuesday, 6 May 2025

ಪಂಜಾಬ್ - 4

 ಸಿಖ್ಖರ ಸುವರ್ಣಯುಗ 


ಬಂಡಾ ಸಿಂಗ್ ಬಹಾದುರ್ (1670 - 1716)

ಸಿಖ್ ಗುರುಪರಂಪರೆಯ ಹತ್ತನೆಯ ಹಾಗೂ ಅಂತಿಮ ಗುರು, ಗುರು ಗೋವಿಂದ್ ಸಿಂಗರನಂತರ, ಸಿಖ್ ಸಮುದಾಯವನ್ನು ಮುನ್ನಡೆಸಿದ ಕೀರ್ತಿ 'ಬಂಡಾ ಸಿಂಗ್ ಬಹಾದುರ್ (1670 - 1716)'ನಿಗೆ ಸೇರುತ್ತದೆ. ಗುರು ಗೋವಿಂದ್ ಸಿಂಗರಿಗೂ ಮತ್ತು ಬಂಡಾ ಸಿಂಗನಿಗೂ 'ಎತ್ತಣ ಮಾಮರ, ಎತ್ತಣ ಕೋಗಿಲೆ' ಎಂಬಂಥಾ ಸಂಬಂಧ. ಬಂಡಾ ಸಿಂಗ್ ಜನಿಸಿದ್ದು ಲಾಹೋರ್ ಸಮೀಪದ ರಜೌರಿಯ ಒಂದು ಹಿಂದೂ ರಜಪೂತ ಕುಟಂಬದಲ್ಲಿ. ಬಂಡಾ ಸಿಂಗನ ಅಂದಿನ ಹೆಸರು ಲಚ್ಮನ್ ದಾಸ್ ಎಂದು. ಬಾಲ್ಯದಲ್ಲೇ ಬೈರಾಗಿಗಳ ಕೂಟವನ್ನು ಸೇರಿದ ಲಚ್ಮನ್ ದಾಸ್, ಅವರುಗಳೊಡನೆ ಈಗಿನ ಮಹಾರಾಷ್ಟ್ರದ ನಾಂದೇಡ್ ಪಟ್ಟಣವನ್ನು ಸೇರಿ ಪ್ರತಿಪಾದಿಸಿದ್ದು ಹಿಂದೂ ಧರ್ಮವನ್ನು. ಧರ್ಮಕರ್ಮ ಸಂಯೋಗವೋ ಎಂಬಂತೆ ಗುರು ಗೋವಿಂದರೂ ಕೂಡ ತಮ್ಮ ಜೀವನದ ಅಂತಿಮ ಕಾಲಕ್ಕೆ ಸೇರಿದ್ದು ಅದೇ ನಾಂದೇಡ್ ಪಟ್ಟಣವನ್ನೇ. ಗುರು ಗೋವಿಂದರ ಬೋಧನೆಗಳು, ಪಂಜಾಬ್ ಮೂಲದವನೇ ಆದ ಯುವ ಲಚ್ಮನ್ ದಾಸನನ್ನು ಆಕರ್ಷಿಸಿದ್ದು ಸ್ವಾಭಾವಿಕವೇ ಆಗಿತ್ತು. ಹಾಗಾಗಿ ಯುವ ಲಚ್ಮನ್ ದಾಸನ ಕಣ್ಣುಗಳಲ್ಲಿ, ಖಾಲಸಾ ಪಂಥವನ್ನು, ಅಂದರೆ ಸಿಖ್ ಪಂಥವನ್ನು ಮುನ್ನಡೆಸಬಲ್ಲ ಆಶಾ ಕಿರಣವನ್ನು ಕಂಡವರು ಗುರು ಗೋವಿಂದ ಸಿಂಗರು. ಗುರು ಗೋವಿಂದರು, ತಮ್ಮೊಡನೆ ಹಲವಾರು ವರ್ಷಗಳಿಂದ ಇದ್ದ ನಂಬಿಕಸ್ತ ಶಿಷ್ಯರನ್ನೂ ಪರಿಗಣಿಸದೆ, ತಮ್ಮ ಹೊಸ ಶಿಷ್ಯ ಲಚ್ಮನ್ ದಾಸನಿಗೆ ಸಿಖ್ ಪಂಥವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದ್ದು ದೈವಸಂಕಲ್ಪದಂತೆಯೇ ಅಂದು ಆಗಿತ್ತು. ಲಚ್ಮನ್ ದಾಸನಿಗೆ 'ಬಂಡಾ' ಎಂದು ಹೊಸ ನಾಮಕರಣವನ್ನು ಮಾಡಿದವರು ಕೂಡಾ ಗುರು ಗೋವಿಂದ್ ಸಿಂಗರೇ.  'ಬಂಡಾ' ಎಂದರೆ ಗುರುಗಳ ಬಂಟ ಎಂದರ್ಥ. ಪಂಜಾಬಿನಲ್ಲಿ ಅಮಾಯಕ ರೈತ ಸಮುದಾಯಕ್ಕೆ ಕಿರುಕುಳ ನೀಡಿ, ಗುರು ಗೋವಿಂದ ಸಿಂಗರ ನಾಲ್ಕು ಮಕ್ಕಳನ್ನು ಹತ್ಯೆಮಾಡಿದ ಮುಸ್ಲಿಂ ನಾಯಕರುಗಳಿಗೆ ತಕ್ಕ ಶಿಕ್ಷೆಯನ್ನು ನೀಡುವ ದೀಕ್ಷೆಯನ್ನು ಹೊತ್ತು, ಬಂಡಾ ಸಿಂಗನು ತನ್ನದೊಂದು ಯುವಕರ ಪುಟ್ಟ ಸೈನ್ಯವನ್ನು ಕಟ್ಟಿಕೊಂಡು, ನಾಂದೇಡಿನಿಂದ ಉತ್ತರಕ್ಕೆ ಹೊರಟನು. 

ನಾಂದೇಡಿನಿಂದ ಹೊರಟ ಬಂಡಾ ತನ್ನ ಪುಟ್ಟ ಸೈನ್ಯದೊಂದಿಗೆ ನೆಲೆಯೂರಿದ್ದು ದಿಲ್ಲಿಯ ಸಮೀಪದ ಗ್ರಾಮವೊಂದರಲ್ಲಿ. ಸೇನಾ ದೀಕ್ಷೆಯನ್ನು ಹೊತ್ತು ಹೊರಟಿದ್ದ ಬಂಡಾ, ತನ್ನ ಗುರುಗಳ ಧಾರ್ಮಿಕ ಪ್ರಚಾರವನ್ನೂ ಮುನ್ನಡೆಸುವ ಕಾರ್ಯವನ್ನು ಮರೆಯಲಿಲ್ಲ. ತನ್ನ ಆಶ್ರಮಕ್ಕೆ ಭಕ್ತರುಗಳು ನೀಡಿದ ಕಾಣಿಕೆಗಳನೆಲ್ಲಾ ಬಡಬಗ್ಗರಿಗೆ ಹಂಚಿದ ಬಂಡಾನ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಾ ಸಾಗಿತ್ತು. ಆ ಪ್ರಾಂತ್ಯದಲ್ಲಿ ರೈತಾಪಿ ಜನಗಳಿಗೆ ಇಸ್ಲಾಂ ಮತಾಂಧರಿಂದ ಉಂಟಾಗುತ್ತಿದ್ದ ಕಿರುಕುಳಗಳ ವಿರುದ್ಧ ರಕ್ಷಣೆಯನ್ನು ಸಾರಿದ ಬಂಡಾನ ಬೆಂಬಲಿಗರ ಸಂಖ್ಯೆ ವೃದ್ಧಿಸುತ್ತಲೇ ಇತ್ತು. 

ಹೆಚ್ಚಾದ ಸೇನಾಬಲದೊಂದಿಗೆ ಬಂಡಾ ಸಿಂಗ್ ಮುನ್ನಡೆದಿದ್ದು ದಿಲ್ಲಿಯ ಉತ್ತರದಲ್ಲಿರುವ ಸೋನೀಪತ್ ಕಡೆಗೆ. ಸೋನೀಪತ್ ನ  ರಾಜಕೋಶ ಮತ್ತು ಶ್ರೀಮಂತರುಗಳ ಧನವನ್ನು ಲೂಟಿಹೊಡೆದ ಬಂಡಾ, ಆ ಧನಕನಕಗಳನ್ನು ತನ್ನ ಸಹವರ್ತಿಗಳೊಂದಿಗೆ ಹಂಚಿಕೊಂಡು ಮುನ್ನಡೆದಿದ್ದು ಪಂಜಾಬಿನ ಪಟಿಯಾಲ ಸಮೀಪದ ಸಮಾನಾ ಎಂಬ ಪಟ್ಟಣದ ಕಡೆಗೆ. ಸಮಾನಾ ಪಟ್ಟಣ ಗುರು ತೇಗ್ ಬಹಾದುರರ ಮತ್ತು ಗುರು ಗೋವಿಂದರ ಮಕ್ಕಳನ್ನು ಹತ್ಯೆಮಾಡಿದ ಇಸ್ಲಾಂ ನಾಯಕರುಗಳ ವಶದಲ್ಲಿತ್ತು. ಆ ಇಸ್ಲಾಂ ನಾಯಕರುಗಳನ್ನು ಬಗ್ಗುಬಡಿದು, ಸಮಾನಾವನ್ನು ವಶಪಡಿಸಿಕೊಂಡದ್ದೇ ಬಂಡಾನ ಮೊದಲ ವಿಜಯವಾಗಿತ್ತು. 

ಸಮಾನಾ ಪಟ್ಟಣದಿಂದ ಬಂಡಾ ಮುಂದೆ ಸಾಗಿದ್ದು ಪಂಜಾಬಿನ ಸರ್ಹಿನ್ದ್ ಕಡೆಗೆ.  ಸರ್ಹಿಂದಿನ ಸುಬೇದಾರನಾದ ವಾಝಿರ್ ಖಾನನೇ ಗುರು ಗೋವಿಂದರ ಮತ್ತು ಅವರ ನಾಲ್ಕು ಮಕ್ಕಳುಗಳ ಹತ್ಯೆಗೆ ಕಾರಣನೆಂದು ಬಂಡಾನಿಗೆ ಚೆನ್ನಾಗೇ ತಿಳಿದಿತ್ತು. ಸರ್ಹಿಂದಿನ ಕಡೆಗೆ ಸಾಗುತ್ತಾ ವಶಪಡಿಸಿಕೊಂಡ ಧನ ಹಾಗೂ ಕೃಷಿಭೂಮಿಯ ರಾಶಿಯನ್ನು ತನ್ನ ಬಡ ಅನುಯಾಯಿಗಳಿಗೆ ಹಂಚುತ್ತಾ ಸಾಗಿದ್ದ ಬಂಡಾನ ಸೈನ್ಯಬಲ ಹೆಚ್ಚುತ್ತಲೇ ಸಾಗಿತ್ತು. ಮೊಗಲರ ಪ್ರತಿನಿಧಿ ವಾಝಿರ್ ಖಾನನೊಂದಿಗೆ ನಡೆದ ಯುದ್ಧದಲ್ಲಿ ಮೊಗಲರ ಸೈನ್ಯವನ್ನು ಧ್ವಂಸಗೊಳಿಸಿದ ಬಂಡಾನ ಆಕ್ರಮಣಕ್ಕೆ ವಾಝಿರ್ ಖಾನನೇ ಬಲಿಯಾಗಿ ಹೋಗಿದ್ದನು. ಯುವ ನಾಯಕ ಬಂಡಾನ ಅಧಿಪತ್ಯ ಈಗ ಯಮುನಾ ನದಿಯಿಂದ ಸಟ್ಲೆಜ್ ನದಿಯವರೆಗೂ ಹರಡಿತ್ತು. 

ಬಂಡಾಯ ಶಮನಕ್ಕಾಗಿ ಬಹಳ ತಿಂಗಳುಗಳಿಂದ ದಕ್ಷಿಣದಲ್ಲೇ ಇದ್ದ ಮೊಗಲ್ ದೊರೆ ಬಹದ್ದೂರ್ ಶಾಹ್, ದಿಲ್ಲಿಯಿಂದ ದೂರವಿದ್ದ ಅವಕಾಶವನ್ನು ಬಳಸಿಕೊಂಡ ಬಂಡಾ, ಮುಂದೆ ಆಕ್ರಮಣ ಮಾಡಿದ್ದು ಪೂರ್ವದ ಕಡೆಯ ಸಹರನ್ ಪುರದ ಮೇಲೆ. ಸಹರನ್ ಪುರವನ್ನು ವಶಪಡಿಸಿಕೊಂಡ ಬಂಡಾ ಮರಳಿದ್ದು ತನ್ನ ಮಾತೃಭೂಮಿಯಾದ ಪಂಜಾಬಿನ ಕಡೆಗೆ.  ಪಂಜಾಬಿನ ಬಹುತೇಕ ಪ್ರದೇಶಗಳ ಅಧಿಪತ್ಯ ಈಗ ಬಂಡಾನ ಕೈವಶವಾಗಿತ್ತು. 

ಈ ನಡುವೆ ಮೊಗಲ್ ದೊರೆ ಬಹದ್ದೂರ್ ಶಾಹ್, ದಕ್ಷಿಣದ ದಂಗೆಕೋರರನ್ನು ಅಡಗಿಸಿಯಾಗಿತ್ತು. ಪಂಜಾಬನ್ನು ಬಂಡಾ ಆಕ್ರಮಿಸಿ ಕುಳಿತದ್ದು ಮೊಗಲ್ ದೊರೆಗೆ ಈಗ ದೊಡ್ಡ ತಲೆನೋವಾಗಿತ್ತು. ಹಾಗಾಗಿ ಬಹದ್ದೂರ್ ಶಾಹ್ ತನ್ನ ಸಕಲ ಸೈನ್ಯಗಳೊಡನೆ ಪಂಜಾಬಿನ ಕಡೆ ಆಕ್ರಮಣವನ್ನು ನಡೆಸಿ ದಕ್ಷಿಣ ಪಂಜಾಬಿನ (ಪಂಜಾಬ್ ಎಂದರೆ, ಘಟನೆಯ ಕಾಲಮಾನದ ಪ್ರಕಾರ ಅವಿಭಜಿತ ಪಂಜಾಬ್ ಎಂದು ಅರ್ಥೈಸಿಕೊಳ್ಳಬೇಕು) ಬಹುತೇಕ ಭಾಗಗಳನ್ನು ಪುನರ್ವಶ ಮಾಡಿಕೊಂಡನು. ಈ ಸಮಯದಲ್ಲಿ ಬಂಡಾ ಹಿಮಾಲಯದ ತಪ್ಪಲಿನ ಕಿರತ್ಪುರದಲ್ಲಿ ನೆಲಸಿದ್ದನು. ಮೊಗಲ್ ದೊರೆಯ ಆಕ್ರಮಣದ ನಡುವೆಯೂ, ಯುದ್ಧನಿರತನಾದ ಬಂಡಾ, ತನ್ನ ಗುರುಗಳ ಪರಮಶತ್ರುವಾಗಿದ್ದ ಬಿಲಾಸ್ಪುರದ ರಾಜ ಭೀಮಚಂದನನ್ನು ಹತ್ಯೆಮಾಡಿದನು. 

1712ರಲ್ಲಿ ಮೊಗಲ್ ದೊರೆ ಬಹದ್ದೂರ್ ಶಾಹ್ ನಿಧನನಾದನು. ನಂತರ ನಡೆದ ಕುರ್ಚಿಯ ಕಾಳಗದಲ್ಲಿ ಫಾರುಖ್ ಸಿಯಾರ್ ನೂತನ ಮೊಗಲ ದೊರೆಯಾದನು. ಸಿಖ್ಖರ ಧಮನಕ್ಕೆ ಪಣತೊಟ್ಟ ದೊರೆ ಫಾರುಖ್, ಬಂಡಾನನ್ನು ಹತ್ತಿಕುವ ಕಾರ್ಯವನ್ನು ತನ್ನ ಆಪ್ತನಾದ ಅಬ್ದುಸ್ ಸಮಾದ್ ಖಾನ್ ಎಂಬುವನಿಗೆ ವಹಿಸಿದನು. ಬಂಡಾ ಅಡಗಿಕೊಂಡಿದ್ದ ಪ್ರದೇಶಕ್ಕೆ ಮುತ್ತಿಗೆ ಹಾಕಿದ ಅಬ್ದುಸ್ ಸಮಾದ್, ತನ್ನ ಸೈನ್ಯವನ್ನು ಆ ಪ್ರದೇಶದ ಸುತ್ತಾ ನಿಯುಕ್ತಗೊಳಿಸಿ, ಬಂಡಾನ ಹೊರಬರುವಿಕೆಗಾಗಿ ಕಾದುನಿಂತನು. ಕೆಲವು ದಿನಗಳನಂತರ, ಅನ್ನ-ನೀರುಗಳಿಲ್ಲದೆ  ಬಂಡಾ ಮತ್ತವನ ಸಹಚರರು ಬಳಲಿ ಬೆಂಡಾಗಿಹೋದರು. ತಮ್ಮ ಹಸಿವನ್ನು ನೀಗಿಸಿಕೊಳ್ಳಲು ತಮ್ಮ ದನಕರುಗಳನ್ನು, ಕುದುರೆಕತ್ತೆಗಳನ್ನೂ ಬಂಡಾ ಮತ್ತವನ ಸಹಚರರು ಕೊಂದು ತಿನ್ನಬೇಕಾಯಿತು. ಬೇಸತ್ತು ಹೊರಬಂದ ಬಂಡಾ ಮತ್ತವನ ಸೈನ್ಯವನ್ನು ಮೊಗಲ್ ಸೈನಿಕರು ಬಂಧಿಸಿದರು. ನಿರ್ದಯಿಯಾದ ಅಬ್ದುಸ್ ಸಮಾದ್, ಬಂಡಾನ ಸಾವಿರಾರು ಸೈನಿಕರನ್ನು ಚಚ್ಚಿ ಕೊಂದನು.  ಬಂಡಾ ಮತ್ತವನ ಕುಟುಂಬದ ಸದಸ್ಯರನ್ನು ಕಬ್ಬಿಣದ ಪಂಜರದಲ್ಲಿ ಬಂಧಿಸಿದ ಅಬ್ದುಸ್ ಸಮಾದ್, ಅವರುಗಳನ್ನು ದಿಲ್ಲಿಗೆ ಎಳೆದೊಯ್ದನು. ಕಬ್ಬಿಣದ ಪಂಜರದೊಳಗೆ ಬಂಧಿಸಿಟ್ಟ ಬಂಡಾ ಮತ್ತವನ ಕುಟುಂಬದ ಸದಸ್ಯರುಗಳನ್ನು, ಸುಮಾರು 2000 ಸಿಖ್ ಸೈನಿಕರ ಶಿರಗಳನ್ನು ಸಿಕ್ಕಿಸಿದ ಭರ್ಜಿಗಳೊಂದಿಗೆ ದಿಲ್ಲಿಯ ಬೀದಿಬೀದಿಗಳಲ್ಲಿ ಮೆರವಣಿಗೆಯಲ್ಲಿ ಎಳೆದೊಯ್ಯಲಾಯಿತು. ಮೂರು ತಿಂಗಳುಗಳ ಕಾಲ ಬಂಡಾನಿಗೆ ಚಿತ್ರಹಿಂಸೆಯನ್ನು ನೀಡಿದ ಮೊಗಲ್ ಸೈನಿಕರು, ಬಂಡಾ ಅಡಗಿಸಿಟ್ಟಿರಬಹುದಾದ ಅಪಾರ ಧನರಾಶಿಯ ಸುಳಿವನ್ನು ತಿಳಿಯುವಲ್ಲಿ ವಿಫಲರಾದರು. ಅಂತಿಮವಾಗಿ ಬಂಡಾನನ್ನು ಇಸ್ಲಾಂ ಧರ್ಮಕ್ಕೆ ಪರಿವರ್ತನೆಗೊಳ್ಳುವಂತೆ ಆಗ್ರಹಿಸಲಾಯಿತು. ಒಪ್ಪದಿದ್ದ ಬಂಡಾನ ಮುಂದೆಯೇ ಆತನ ಮಗನಾದ ಅಜಯ್ ಸಿಂಗನನ್ನು ತುಂಡರಿಸಿ ಕೊಲ್ಲಲಾಯಿತು. ನಂತರ ಬಂಡಾನನ್ನು ಕೊಲ್ಲಲಾಯಿತು. 

ಬಂಡಾ ಸಿಂಗ್ ಬಹದ್ದೂರ್ ಅಲ್ಪಾಯುವಾದರೂ, ವಿಶ್ವದಲ್ಲೇ ಬಲಿಷ್ಠವಾದ ಮೊಗಲ್ ಸೈನ್ಯವನ್ನು ಎದುರಿಸಿ ಹಲವು ವಿಜಯಗಳನ್ನು ಗಳಿಸಿದ್ದು ಈಗ ಇತಿಹಾಸ. ಔರಂಗಜೇಬನನಂತರ ಮೊಗಲ್ ಸಾಮ್ರಾಜ್ಯ ಅವನತಿಯತ್ತ ಸಾಗಿತ್ತು. ಮರಾಠ ದೊರೆಗಳು ನಡೆಸಿದ ಹೋರಾಟದೊಂದಿಗೆ,  ಪಂಜಾಬಿನಲ್ಲಿ ಬಂಡಾ ಒಡ್ಡಿದ ಪ್ರತಿರೋಧವೂ ಮೊಗಲರ ಅವನತಿಗೆ ಒಂದು ಬಲವಾದ ಕಾರಣವಾಗಿತ್ತು.  ಪಂಜಾಬಿನ ಶೋಷಿತ ರೈತರನ್ನು ಒಗ್ಗೂಡಿಸಿ ಅವರುಗಳನ್ನು ಅನ್ಯಾಯದ ವಿರುದ್ಧ ಹೋರಾಡಲು ಸಜ್ಜುಗೊಳಿಸಿದ ಮಹಾನ್ ಸಿಖ್ ಹೋರಾಟಗಾರ ಬಂಡಾನೆಂಬುದನ್ನು ನಾವುಗಳು ಮರೆಯುವಂತಿಲ್ಲ.  

ನಾದಿರ್ ಶಹಾನ ಆಕ್ರಮಣ  (1738-39)

ಬಂಡಾ ಸಿಂಗ್ ಬಹಾದುರನ ಮರಣದನಂತರ, ಸುಮಾರು ಐದು ವರ್ಷಗಳ ಕಾಲ ನಾಯಕತ್ವದ ಕೊರತೆಯಿಂದ, ಸಿಖ್ಖರ ಹೋರಾಟಗಳು ತಣ್ಣಗಾಗಿದ್ದವು. ಲಾಹೋರಿನ ಆಡಳಿತವನ್ನು ನಡೆಸುತ್ತಿದ್ದ ದಿಲ್ಲಿಯ ಮೊಗಲರ ಪ್ರತಿನಿಧಿಗಳ ದಬ್ಬಾಳಿಕೆಯಿಂದ ತತ್ತರಿಸಿದ್ದ ಸಿಖ್ಖರು, ಸಣ್ಣ ಸಣ್ಣ ತಂಡಗಳಾಗಿ ವಿಭಜನೆಗೊಂಡು, ಪಂಜಾಬಿನ ಬೆಟ್ಟಕಾಡುಗಳಲ್ಲಿ ಅವಿತಿದ್ದರೂ ಸಕ್ರಿಯರಾಗಿದ್ದರು. 

ನಾದಿರ್ ಶಾಹ್ ಎಂಬುವ ಪರ್ಷಿಯನ್ ದೊರೆ  1738ರ ಸಮಯದಲ್ಲಿ ಉತ್ತರ ಭಾರತದ ಮೇಲೆ ಆಕ್ರಮಣ ಮಾಡಿದ್ದು ಭಾರತೀಯರು ಮರೆಯಲಾಗದ ಘಟನೆ. ಈಗಿನ ಇರಾನ್ ದೇಶವನ್ನೇ ಅಂದು ಪರ್ಷಿಯಾ ಎಂದು ಕರೆಯುತ್ತಿದ್ದರು. ಅಂದಿನ ಪಂಜಾಬ್ ಪ್ರಾಂತ್ಯದ ಕೇಂದ್ರವಾಗಿದ್ದ ಲಾಹೋರಿನ, ಮೊಗಲ್ ಉಸ್ತುವಾರಿಯಾಗಿದ್ದವನು ಜಕಾರ್ಯ ಖಾನ್. ನಾದಿರ್ ಶಹಾನ ಶೌರ್ಯಕ್ಕೆ ಬೆಚ್ಚಿದ ಜಕಾರ್ಯ ಖಾನ್, ನಾದಿರ್ ಶಹಾನ ಆಕ್ರಮಣಕ್ಕೆ ಪ್ರತಿರೋಧವನ್ನು ತೋರಿಸಲೇ ಇಲ್ಲ.  ಬೆಟ್ಟಕಾಡುಗಳಲ್ಲಿ ಸಿಖ್ಖರುಗಳು ತಲೆಮರೆಸಿಕೊಂಡಿದ್ದು ನಾದಿರ್ ಶಹಾನ ಹಾದಿಯನ್ನು ಸುಗಮಗೊಳಿಸಿತ್ತು. ಕರ್ನಾಲ್ ಪಟ್ಟಣದಲ್ಲಿದ್ದ  ಮೊಗಲರ ಸೈನ್ಯವನ್ನು ಹೊಸಕಿಹಾಕಿದ ನಾದಿರ್, ಮೊಗಲರ ರಾಜಧಾನಿ ದಿಲ್ಲಿಯನ್ನು ವಶಪಡಿಸಿಕೊಳ್ಳಲು ಬಹಳ ಸಮಯ ಬೇಕಾಗಲಿಲ್ಲ. ಮೊಗಲರ ಸೈನ್ಯದೊಂದಿಗೆ ದಿಲ್ಲಿಯ ನಾಗರೀಕರನ್ನು ಹತ್ಯೆಮಾಡಿ ದೋಚಿತ್ತು ನಾದಿರನ ಸೈನ್ಯ. ದಿಲ್ಲಿಯ ರಾಜಕೋಶವನ್ನೂ  ಲೂಟಿಹೊಡೆದ ನಾದಿರ್ ಶಹಾನ ಸೈನ್ಯ, ಮೊಗಲರ ವಶದಲ್ಲಿದ್ದ ಮಯೂರ ಸಿಂಹಾಸನವನ್ನೂ ಮತ್ತು ಕೊಹಿನೂರ್ ವಜ್ರವನ್ನೂ ವಶಪಡಿಸಿಕೊಂಡಿತ್ತು. ಲೂಟಿಹೊಡೆದ ಭಾರಿ ಧನಕನಕಗಳನ್ನು ಸಹಸ್ರಾರು ಆನೆ, ಒಂಟೆ ಮತ್ತು ಕುದುರೆಗಳ ಮೇಲೆ ಹೇರಿಕೊಂಡು ನಾದಿರ್ ಶಹಾ ಪಂಜಾಬ್ ಮಾರ್ಗವಾಗಿ ಪರ್ಷಿಯಾ ಕಡೆ ಹೊರಟಿದ್ದನು. ಪರ್ಷಿಯದತ್ತ ಧನಕನಕಗಳನ್ನು ಹೇರಿಕೊಂಡು ಹಿಂತಿರುಗುತ್ತಿದ್ದ ನಾದಿರನ ಸೈನ್ಯದ ಮೇಲೆ ಜಾಣತನದ ಆಕ್ರಮಣವನ್ನು ಮಾಡಿದ್ದು, ಹಸಿದ ಹೆಬ್ಬುಲಿಗಳಂತೆ ಪಂಜಾಬಿನ ಕಾಡುಬೆಟ್ಟಗಳಲ್ಲಿ ಕಾಯುತ್ತಿದ್ದ ಸಿಖ್ಖರ ವಿವಿಧ ತಂಡಗಳು. ನಾದಿರನ ಸೈನ್ಯದ ಮೇಲೆ ನೇರ ಆಕ್ರಮಣವನ್ನು ಮಾಡದೆ, ಗೆರಿಲ್ಲಾ ಯುದ್ಧ ತಂತ್ರವನ್ನು ಅಳವಡಿಸಿಕೊಂಡ ಸಿಖ್ ತಂಡಗಳು, ಧನಕನಕಗಳ ಭಾರಿ ರಾಶಿಯನ್ನೇ ವಶಪಡಿಸಿಕೊಂಡಿದ್ದವು. ಲೂಟಿ ಹೊಡೆದ ಧನಕನಕಗಳನ್ನು ರೈತಾಪಿ ಜನಗಳಿಗೆ ಹಂಚಿದ ಸಿಖ್ ತಂಡಗಳು, ತಮ್ಮ ಬಲಗಳನ್ನು ಮತ್ತಷ್ಟು ಹೆಚ್ಚಿಸಿಕೊಂಡವು.  ಸಿಖ್ಖರ ಲೂಟಿ ತಂತ್ರಗಳಿಗೆ ಹೈರಾಣಾದ ನಾದಿರ್ ಶಾಹ್, ತನ್ನ ಪರ್ಷಿಯಾ ದೇಶವನ್ನು ಸೇರುವ ಹೊತ್ತಿಗೆ 'ಸಾಕಪ್ಪ ಸಾಕು' ಎನ್ನುವಂತಾಗಿದ್ದನು. 

ಸಿಖ್ಖರ ಹತ್ಯಾಕಾಂಡ (ಜೂನ್ 1746)

ನಾದಿರ್ ಶಹಾ ಪರ್ಷಿಯಾ ದೇಶಕ್ಕೆ ಹಿಂದಿರುಗಿದನಂತರ, ಬೆಟ್ಟಕಾಡುಗಳಲ್ಲಿ ಅವಿತು ಕಾರ್ಯಾಚರಣೆ ನಡೆಸುತ್ತಿದ್ದ ಸಿಖ್ ತಂಡಗಳು, 1745ರ ದೀಪಾವಳಿ ಸಮಯಕ್ಕೆ ನವಾಬ್ ಕಾಪುರ್ ಸಿಂಗ್ ಎಂಬುವನ ನೇತೃತ್ವದಲ್ಲಿ ಸಂಘಟಿತಗೊಂಡವು. ಪಂಜಾಬಿನ ಲಾಹೋರ್ ಕೇಂದ್ರದ ಮೊಗಲ್ ಸಾಮಂತ ಜಕಾರ್ಯ ಖಾನ್ ಅದೇ ಸಮಯದಲ್ಲಿ ನಿಧನನಾದನು. ಆನಂತರ ಲಾಹೋರಿನ ಸಾಮಂತನಾದ ಯಾಹ್ಯಾ ಖಾನ್, ಸಿಖ್ಖರ ಸಂಘಟನೆಯನ್ನು ಧ್ವಂಸಗೊಳಿಸುವ ಕಾರ್ಯವನ್ನು ಜಾರಿಗೊಳಿಸಿದನು. ಕುಪಿತರಾದ ಸಿಖ್ ನಾಯಕರುಗಳು, ಲಾಹೋರ್ ಸಾಮಂತನಿಗೆ ಕೃಷಿಭೂಮಿಯ ಕಂದಾಯವನ್ನು ನೀಡುವುದನ್ನೇ ನಿಲ್ಲಿಸಿದರು. ಕ್ರೂರಿಯಾದ ಯಾಹ್ಯಾ ಖಾನ್, ಅಮೃತ್ ಸರದ ಹರಿಮಂದಿರ್ ಸಾಹೀಬನ್ನು ಧ್ವಂಸಗೊಳಿಸಿ, ಅಲ್ಲಿ ವಿರಾಜಮಾನವಾಗಿದ್ದ ಗುರು ಗ್ರಂಥ್ ಸಾಹೀಬನ್ನು ಸುಟ್ಟನು. ಹರಿಮಂದಿರ್ ಸಾಹೀಬಿನ ಪವಿತ್ರ ಕೊಳವನ್ನು ಮಾಂಸ, ಮೂಳೆ, ರಕ್ತಗಳಿಂದ ತುಂಬಿ ಅಪವಿತ್ರಗೊಳಿಸಿದನು.  ಸೈನ್ಯದ ಕಾರ್ಯಾಚರಣೆಯಲ್ಲಿ ಸುಮಾರು 7000 ಸಿಖ್ಖರನ್ನು ಹತ್ಯೆಮಾಡಿದ ಯಾಹ್ಯಾ ಖಾನ್, ಮಿಕ್ಕ 3000 ಸಿಖ್ಖರನ್ನು ಎಳೆದೊಯ್ದು, ಲಾಹೋರಿನ ಶಾಹಿದ್ಗಂಜ್ ಎಂಬಲ್ಲಿ ಅವರುಗಳ ಶಿರಚ್ಛೇಧನವನ್ನು ಮಾಡಿದನು. ಜೂನ್ 1746ರಲ್ಲಿ ನಡೆದ ಈ ದುರ್ಘಟನೆಯನ್ನು ಸಿಖ್ ಇತಿಹಾಸಕಾರರು 'ಸಿಖ್ಖರ ಘಲ್ಲುಘಾರ, ಅಂದರೆ ಸಿಖ್ಖರ ಹತ್ಯಾಕಾಂಡ' ಎಂದೇ ದಾಖಲಿಸಿದ್ದಾರೆ. 

ಘಲ್ಲುಘಾರಾದನಂತರವೂ ತೆಪ್ಪಗಾಗದ ಸಿಖ್ಖರು, 1747ರ ಬೈಸಾಖಿ ಹಬ್ಬದಂದು ಅಮೃತ್ ಸರದ ಹರಿಮಂದಿರ್ ಸಾಹೀಬಿನಲ್ಲಿ ಸಭೆ ಸೇರಿದರು. ಅಂತಹ ಸಭೆಗಳನ್ನು ಸಿಖ್ಖರು  'ಸರ್ಬತ್ ಖಾಲಸಾ' ಎಂದು ಕರೆಯುತ್ತಾರೆ. ಮೊಗಲರ ವಿರುದ್ಧದ ಹೋರಾಟವನ್ನು ಮುಂದುವರೆಸುವ ನಿರ್ಧಾರವನ್ನು ಅಂದಿನ ಸಭೆಯಲ್ಲಿ ಕೈಗೊಳ್ಳಲಾಯಿತು. ಅಮೃತ್ ಸರದ ಸುತ್ತಾ ಮಣ್ಣಿನ ಕೋಟೆಯೊಂದನ್ನು ನಿರ್ಮಾಣ ಮಾಡಿದ ಸಿಖ್ಖರು ಆ ಕೋಟೆಯನ್ನು 'ರಾಮ್ ರೌನಿ' ಎಂದು ಕರೆದರು. ಅಮೃತ್ ಸರ ನಗರವನ್ನು ನಿರ್ಮಾಣ ಮಾಡಿದ ಸಿಖ್ ಗುರು, ಗುರು ರಾಮ್ ದಾಸರ ನೆನಪಿನಲ್ಲಿ 'ರಾಮ್ ರೌನಿ' ಎಂಬ ಹೆಸರನ್ನುಆ ಕೋಟೆಗೆ ಇಡಲಾಗಿತ್ತು.  

ಅಹ್ಮದ್ ಶಾಹ್ ಅಬ್ದಾಲಿಯ ದಂಡಯಾತ್ರೆ (1747 - 69)

ಅಹ್ಮದ್ ಶಾಹ್ ಅಬ್ದಾಲಿ ಅಫ್ಘಾನಿಸ್ತಾನಕ್ಕೆ ಸೇರಿದವನಾಗಿದ್ದರೂ, ಪರ್ಷಿಯಾದ ನಾದಿರ್ ಶಾಹನ  ಬಲಗೈ ಬಂಟನಾಗಿದ್ದವನು. ಅಫ್ಘಾನಿಸ್ತಾನದ ದುರಾನಿ ಸಾಮ್ರಾಜ್ಯಕ್ಕೆ ಸೇರಿದ ಅಹ್ಮದ್ ಶಾಹನನ್ನು, ಅಹ್ಮದ್ ಶಾಹ್ ದುರಾನಿ ಎಂದು ಕೂಡ ಕರೆಯುತ್ತಿದ್ದರು. ನಾದಿರ್ ಶಾಹ್ ಮರಣ ಹೊಂದಿದನಂತರ ಭಾರತದ ಮೇಲೆ ಆಕ್ರಮಣವನ್ನು ಮಾಡುವ ದೀಕ್ಷೆಯನ್ನು ತೊಟ್ಟವನು ಅಹ್ಮದ್ ಶಾಹ್.  1747 - 69ರ ಅವಧಿಯ 12 ವರ್ಷಗಳಲ್ಲಿ ಈತ ಭಾರತದ ಮೇಲೆ 9 ಬಾರಿ ಆಕ್ರಮಣವನ್ನು ಮಾಡಿದನು. ಔರಂಗಜೇಬನನಂತರ ದುರ್ಬಲವಾದ ಮೊಗಲರ ದಿಲ್ಲಿಯ ಸಿಂಹಾಸನದ ಮೇಲೇ ಕಣ್ಣಿಟ್ಟಿದ್ದ ಅಹ್ಮದ್ ಶಾಹ್, ಪಂಜಾಬಿನ ಮಣ್ಣಿನ ಮಕ್ಕಳಾದ ಸಿಖ್ಖರಿಗೂ ಮಾರಕನೆನಿಸಿದನು. ಅಹ್ಮದ್ ಶಾಹನ ಒಂಬತ್ತೂ ಆಕ್ರಮಣದ ಸಮಯದಲ್ಲೂ ಆತನಿಗೆ ಬಲವಾದ ಪ್ರತಿರೋಧವನ್ನೊಡ್ಡಿ, ಸೋಲೊಪ್ಪದ ಸರದಾರರೆಂದರೆ ನಮ್ಮ ಸಿಖ್ ಸಮುದಾಯದವರು. 

ಅಹ್ಮದ್ ಶಾಹ್ ಅಬ್ದಾಲಿಯ 5ನೇ ದಂಡಯಾತ್ರೆ (1759) ಮತ್ತು 3ನೇ ಪಾಣಿಪತ್ ಯುದ್ಧ (1761)

1759ರ ಹೊತ್ತಿಗಾಗಲೇ ಮಹತ್ವಾಕಾಂಕ್ಷಿಗಳಾದ ಮರಾಠರು ದಿಲ್ಲಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನ ಮಾಡಿಯಾಗಿತ್ತು. ದಿಲ್ಲಿಯ ಮೊಗಲ್ ಸಾಮ್ರಾಜ್ಯದ ಅಧೀನದಲ್ಲಿದ್ದ ಹಲವಾರು ಪ್ರಾಂತ್ಯಗಳ ಮೇಲೆ ಮರಾಠರ ಅಧಿಪತ್ಯ ನಡೆಯುತ್ತಿತ್ತು. ಮರಾಠರನ್ನು ಕಂಡರೆ ಸಿಖ್ಖರಿಗೋ, ಅಷ್ಟಕಷ್ಟೆ. ಆದರೂ ಅಹ್ಮದ್ ಶಾಹನ ಆಕ್ರಮಣವನ್ನು ತಡೆಯುವಲ್ಲಿ ಸಿಖ್ಖರಿಗೆ, ಮರಾಠರ ಸಹಯೋಗ ಒದಗಿದ್ದು ಸ್ವಾಗತಾರ್ಹವೇ ಆಗಿತ್ತು. ಸಿಖ್ ಮತ್ತು ಮರಾಠ ಶಕ್ತಿಗಳು ಅಹ್ಮದ್ ಶಾಹನನ್ನು ಆತನ 1756 - 57ರ ನಾಲ್ಕನೇ ದಂಡಯಾತ್ರೆಯ ಸಮಯದಲ್ಲಿ ಹಿಮ್ಮೆಟಿಸಿಯಾಗಿತ್ತು. 1759ರ ಸಮಯದಲ್ಲಿ ಪಂಜಾಬಿನ ರಾಜಧಾನಿಯಾಗಿದ್ದ ಲಾಹೋರ್ ಮರಾಠರ ವಶದಲ್ಲಿತ್ತು. ಪಂಜಾಬಿನ ಬಹುತೇಕ ಭಾಗಗಳ ಆಡಳಿತ ಸೂತ್ರ, ಮರಾಠರ ಸಹಯೋಗಿಗಳಾಗಿದ್ದ ಸಿಖ್ಖರ ಕೈಯಲ್ಲಿತ್ತು. 

ಮರಾಠರು ಇಡೀ ಉತ್ತರ ಭಾರತವನ್ನೇ ಆಕ್ರಮಿಸಿಕೊಂಡು ಕೂತದ್ದು, ಅಹ್ಮದ್ ಶಾಹನ ನಿದ್ದೆಗೆಡಿಸಿತ್ತು. ಮರಾಠರ ಹುಟ್ಟಡಗಿಸಲು ಪಣತೊಟ್ಟ ಅಹ್ಮದ್ ಶಾಹ್, ಭಾರಿ ಸೈನ್ಯವೊಂದನ್ನು ಸಜ್ಜುಗೊಳಿಸಿ ಭಾರತದ ಕಡೆಗೆ ಐದನೇ ಬಾರಿಯ ಆಕ್ರಮಣಕ್ಕೆ ಹೊರಟಿದ್ದನು. ಉತ್ತರ ಭಾರತದ ಇಸ್ಲಾಂ ರಾಜರುಗಳೆಲ್ಲರ ಆಹ್ವಾನ ಹಾಗೂ ಬೆಂಬಲಗಳು ಅಹ್ಮದ್ ಶಾಹನ ಶಕ್ತಿಯನ್ನು ಇಮ್ಮಡಿಗೊಳಿಸಿದ್ದವು. ಮರಾಠರ ಉತ್ತರ ಭಾರತದ ಪಾರುಪತ್ಯವನ್ನು ಅಂತ್ಯಗೊಳಿಸುವ ಇಚ್ಛೆ ಹೊಂದಿದ್ದ ಹಲವು  ರಾಜಸ್ತಾನ್ ಪ್ರಾಂತ್ಯದ ಹಿಂದೂ ರಾಜರುಗಳೂ ಕೂಡ, ಅಹ್ಮದ್ ಶಹಾನ ಬೆಂಬಲಕ್ಕೆ ನಿಂತಿದ್ದವು. ಸಿಖ್ಖರಿಗೆ ಮಾತ್ರ ತಮ್ಮ ಆಜನ್ಮ ಶತ್ರುವಾದ ಅಹ್ಮದ್ ಶಾಹನನ್ನು ಹಿಮ್ಮೆಟ್ಟಿಸುವುದು ಮುಖ್ಯವಾಗಿತ್ತು.  ಹಾಗಾಗಿ ಅವರುಗಳಿಗೆ ಮರಾಠರ ಸಹಯೋಗ ಅನಿವಾರ್ಯವಾಗಿತ್ತು. 

ಅಂದಿನ ಪಂಜಾಬ್ ಪ್ರಾಂತ್ಯದ ಮರಾಠ ಪ್ರತಿನಿಧಿಯಾಗಿದ್ದ ಸಾಬಾಜಿ, ಅಹ್ಮದ್ ಶಹಾನ ಭಾರಿ ಸೈನ್ಯವನ್ನು ಸಮರ್ಥವಾಗಿ ಎದುರಿಸಲಿಲ್ಲ. ಪಂಜಾಬಿನಲ್ಲಿದ್ದ ಮರಾಠರ ಸೈನ್ಯವನ್ನು ಬಗ್ಗುಬಡಿದ ಅಹ್ಮದ್ ಶಾಹ್, ದಿಲ್ಲಿಯ ಕಡೆಗೆ ತನ್ನ ಸೈನ್ಯವನ್ನು ಕರೆದೊಯ್ದನು. ದಕ್ಷಿಣದ ಕಡೆಯಿಂದ ಮರಾಠರ ಭಾರಿ ಸೈನ್ಯವೊಂದು ಬರುವುದೆಂಬ ನಿರೀಕ್ಷೆಯಲ್ಲಿ ಅಹ್ಮದ್ ಶಾಹ್, ತನ್ನ ಸೈನ್ಯವನ್ನು, ದಿಲ್ಲಿಯ ಸಮೀಪದ ಅಲಿಘರದಲ್ಲಿರಿಸಿ  ಕಾದು ಕುಳಿತನು. 

ಅಹ್ಮದ್ ಶಾಹನ ಸೈನ್ಯ ದಿಲ್ಲಿಯ ಕಡೆ ಬೀಡುಬಿಟ್ಟಿದ್ದು, ಸಿಖ್ಖರಿಗೆ ವರದಾನವಾಗಿತ್ತು. ಜಸ್ಸಾ ಸಿಂಗ್ ಅಹ್ಲುವಾಲಿಯಾ ಮತ್ತು ಚಾರ್ಹತ್ ಸಿಂಗ್ ಸುಕೇರ್ಚಕಿಯರವರಂತಹ ಬಲಿಷ್ಠ ಹೋರಾಟಗಾರರ ನೇತೃತ್ವ ಅಂದು ಸಿಖ್ ಸಮುದಾಯಕ್ಕಿತ್ತು. 1760ರ ಸಮಯಕ್ಕೆ ಪಂಜಾಬಿನ ಬಹುತೇಕ ಭಾಗಗಳು ಸಿಖ್ಖರ ವಶವಾಗಿದ್ದವು.  

1761ರ ಜನವರಿ ಸಮಯದಲ್ಲಿ ಮರಾಠರ ಮತ್ತು ಅಹ್ಮದ್ ಶಾಹನ ಸೈನ್ಯಗಳ ನಡುವೆ ಭಾರೀ ಯುದ್ಧವೇ ಪಾಣಿಪತ್ತಿನಲ್ಲಿ ನಡೆಯಿತು. ಮರಾಠರ ಸೈನ್ಯದ ನೇತೃತ್ವ ವಹಿಸಿದ್ದ ಸದಾಶಿವ ರಾವ್ ಭಾವೆಯ          ನಿರೀಕ್ಷೆಯಂತೆ ದಕ್ಷಿಣದಿಂದ ಬರಬೇಕಿದ್ದ ಭಾರಿ ಸೈನ್ಯದ ನೆರವು ಬರಲೇ ಇಲ್ಲ. ಸ್ಥಳೀಯ ಮುಸ್ಲಿಂ ರಾಜರು ಮತ್ತು ರಾಜಸ್ಥಾನದ ಹಿಂದೂ ರಾಜರುಗಳ ಸೈನ್ಯಗಳೊಂದಿಗೆ ಕೂಡಿ ಬಲಿಷ್ಠವಾಗಿದ್ದ ಅಹ್ಮದ್ ಶಾಹನ ಸೈನ್ಯ, ಮರಾಠರ ಸೈನ್ಯವನ್ನು ಹೊಸಕಿ ಹಾಕಿತು. ಮರಾಠರ ಸೈನ್ಯ ಸೋತುಸುಣ್ಣವಾದರೂ, ಅಹ್ಮದ್ ಶಾಹನ ಸೈನಿಕರೂ ಅಪಾರ ಸಂಖ್ಯೆಯಲ್ಲಿ ಮಡಿದಿದ್ದರು. 

ಪಾಣಿಪತ್ತಿನ ಸಮರದಲ್ಲಿ ವಿಜಯಗಳಿಸಿದ ಅಹ್ಮದ್ ಶಾಹ್, ತಾನು ಗಳಿಸಿದ ಅಪಾರ ಧನಕನಕಗಳ ರಾಶಿಯನ್ನು ಅಪಾರ ಸಂಖ್ಯೆಯ ಆನೆ, ಕುದುರೆ ಮತ್ತು ಕತ್ತೆಗಳ ಮೇಲೆ ಹೇರಿಕೊಂಡು ತನ್ನ ಸ್ವಸ್ಥಾನವಾದ ಅಫ್ಘಾನಿಸ್ತಾನದ ಕಡೆ ಹೊರಟನು. ಅಷ್ಟು ಹೊತ್ತಿಗಾಗಲೇ ಸಿಖ್ಖರು, ಪಂಜಾಬಿನ ಬಹುತೇಕ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದಾಗಿತ್ತು. ಅಹ್ಮದ್ ಶಾಹ್ ಅಪಾರ ಧನರಾಶಿಯೊಂದಿಗೆ ಪಂಜಾಬ್ ಮಾರ್ಗವಾಗಿ ಅಫ್ಘಾನಿಸ್ತಾನಕ್ಕೆ ಹೊರಟದ್ದು, ಸಿಖ್ಖರಿಗೊಂದು ಸುವರ್ಣಾವಕಾಶವನ್ನು ಕಲ್ಪಿಸಿತ್ತು. ಸಿಕ್ಕ ಅವಕಾಶವನ್ನು ಚೆನ್ನಾಗೇ ಉಪಯೋಗಿಸಿಕೊಂಡ ಸಿಖ್ ಸೈನಿಕರು, ಅಹ್ಮದ್ ಶಹಾನ ಸೈನ್ಯಕ್ಕೆ ಭಾರಿ ಹಾನಿಯನ್ನು ಮಾಡಿ, ಅಪಾರ ಧನಕನಕಗಳ ರಾಶಿಯನ್ನು ವಶಪಡಿಸಿಕೊಂಡರು. ಅಹ್ಮದ್ ಶಾಹ್ ಮತ್ತವನ ಸೈನ್ಯ ಅಫ್ಘಾನಿಸ್ತಾನವನ್ನು ತಲುಪಿಯಾದ ಮೇಲೆ, ಚುರುಕಿನ ಆಕ್ರಮಣವನ್ನು ಮಾಡಿದ ಸಿಖ್ಖರು, ಲಾಹೋರ್ ಪಟ್ಟಣವನ್ನು ಆಕ್ರಮಿಸಿಕೊಂಡರು. ಮೂರನೇ ಪಾಣಿಪತ್ ಸಮರ ಅಫ್ಘಾನ್ನರ ಮತ್ತು ಮರಾಠರ ನಡುವೆ ನಡೆಯಿತಾದರೂ, ನಿಜವಾಗಿಯೂ ವಿಜಯವನ್ನು ದೋಚಿ ಬೀಗಿದವರು ಸಿಖ್ಖರಾಗಿದ್ದರು.  ಆದರೂ, ಸಮಸ್ತ ಸಿಖ್ ಸಮುದಾಯ ಅಂದು ಅಹ್ಮದ್ ಶಾಹನ ಕೆಂಗಣ್ಣಿಗೆ ಗುರಿಯಾದದ್ದು ಸುಳ್ಳಲ್ಲ.

ಸಿಖ್ಖರ ಭಾರಿ ಹತ್ಯಾಕಾಂಡ (ಫೆಬ್ರವರಿ 1762)

1762ರ ಸಮಯಕ್ಕೆ ಅವಿಭಜಿತ ಪಂಜಾಬಿನ ರಾಜಧಾನಿಯಾಗಿದ್ದ ಲಾಹೋರಿನ ಬಹುತೇಕ ಭಾಗಗಳು ಸಿಖ್ಖರ ವಶದಲ್ಲಿದ್ದರೂ, ಲಾಹೋರಿನ ಕೋಟೆ ಅಫ್ಘಾನ್ನರ ವಶದಲ್ಲೇ ಇತ್ತು. ತನ್ನ ಭಾರತದ ಐದನೇ ದಂಡಯಾತ್ರೆಯ ಸಮಯದಲ್ಲಿ ಸಿಖ್ಖರ ಗೆರಿಲ್ಲಾ ತಂತ್ರಗಳಿಗೆ ಸೋತುಸುಣ್ಣವಾಗಿದ್ದ ಅಹ್ಮದ್ ಶಾಹ್, ಸಿಖ್ಖರನ್ನು ಬಗ್ಗುಬಡಿಯಲೆಂದೇ, ತನ್ನ ಭಾರಿ ಸೈನ್ಯದೊಂದಿಗೆ ಲಾಹೋರನ್ನು ತಲುಪಿಯಾಗಿತ್ತು. ಲಾಹೋರಿನಲ್ಲಿ ಬೀಡುಬಿಟ್ಟಿದ್ದ ಸಿಖ್ಖರ ಅಂದಿನ ನಾಯಕನಾಗಿದ್ದವನು  ಜಸ್ಸಾ ಸಿಂಗ್ ಅಹ್ಲುವಾಲಿಯಾ. ಅಹ್ಮದ್ ಶಾಹನ ಸೈನಿದೊಂದಿಗೆ ಭಾರಿ ಯುದ್ಧವಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಜಸ್ಸಾ ಸಿಂಗ್, ತನ್ನ ಸೈನಿಕರುಗಳಿಗೆ  ಅವರವರ ಕುಟುಂಬದ ಸದಸ್ಯರುಗಳನ್ನು ದೂರದ ಹರಿಯಾಣದ ಪ್ರದೇಶಕ್ಕೆ ಬಿಟ್ಟುಬನ್ನಿರೆಂದು ಆದೇಶವನ್ನು ನೀಡಿದ್ದನು. ಪಂಜಾಬಿನಿಂದ ದಕ್ಷಿಣದ ಕಡೆಗೆ ಸಿಖ್ಖರ ಸೈನ್ಯ ತಮ್ಮ ತಮ್ಮ ಕುಟುಂಬಗಳೊಂದಿಗೆ ಪ್ರಯಾಣಿಸುತ್ತಿದೆಯೆಂಬ ಸುದ್ದಿಯನ್ನು ಬೇಹುಗಾರರ  ಮೂಲಕ ತಿಳಿದ ಅಹ್ಮದ್ ಶಾಹ್, ಅವರುಗಳ ಮೇಲೆ ರಾತ್ರೋರಾತ್ರಿ ಭಾರಿ ಆಕ್ರಮಣವನ್ನು ಮಾಡಿದನು. ಅಂದಿನ ಸಿಖ್ಖರ ಸೈನ್ಯದ ಜೊತೆ ಸುಮಾರು 35,000 ಹೆಂಗಸರು, ಮಕ್ಕಳು ಮತ್ತು ವೃದ್ಧರುಗಳು ಇದ್ದರು. ಬೇರೇ ಮಾರ್ಗವಿಲ್ಲದೆ, ಸಿಖ್ಖರ ಸೈನ್ಯ ತಮ್ಮ ಪರಿವಾರದ ಸದಸ್ಯರುಗಳನ್ನೇ ಗುರಾಣಿಯಂತೆ ಉಪಯೋಗಿಸಿಕೊಳ್ಳಬೇಕಾಯಿತು. ಹೋರಾಡಲಾಗದ ಅಮಾಯಕ ಕುಟುಂಬದ ಸದಸ್ಯರುಗಳನ್ನೂ ಲೆಕ್ಕಿಸದ ಅಹ್ಮದ್ ಶಾಹನ ಸೈನ್ಯ, ಅವರುಗಳ ಸಾಮೂಹಿಕ ಹತ್ಯೆಯನ್ನೇ ಮಾಡಿತು. ಒಂದು ಅಂದಾಜಿನ ಪ್ರಕಾರ ಸುಮಾರು 30,000 ಅಮಾಯಕ ಸಿಖ್ಖರ ಹತ್ಯೆಯನ್ನು ಅಂದು ಅಹ್ಮದ್ ಶಾಹ್ ಮಾಡಿದ್ದನು. ಈ ದುರ್ಘಟನೆಯನ್ನು ಸಿಖ್ ಇತಿಹಾಸಕಾರರು 'ಸಿಖ್ಖರ ಭಾರಿ ಹತ್ಯಾಕಾಂಡ, ವಡಾ ಘಲ್ಲುಘಾರ' ಎಂದೇ ದಾಖಲಿಸಿದ್ದಾರೆ. ಕ್ರೂರಿ ಅಹ್ಮದ್ ಶಾಹ್, ಅಸಂಖ್ಯಾತ ಸಿಖ್ಖರುಗಳ ತಲೆ ಬುರುಡೆಗಳ ಭಾರಿ ಭಾರಿ ರಾಶಿಗಳನ್ನೇ ಲಾಹೋರಿನಲ್ಲಿ ಒಟ್ಟುಹಾಕಿದ್ದನೆಂಬುದು ಈಗ ಇತಿಹಾಸ. ಸಿಖ್ಖರುಗಳ ಭಾರಿ ಹತ್ಯಾಕಾಂಡದನಂತರ, ಅಹ್ಮದ್ ಶಾಹನ ಕೋಪ ಸಿಖ್ಖರ ಪವಿತ್ರ ಸ್ಥಾನವಾದ ಅಮೃತ್ ಸರದ ಹರಿಮಂದಿರ್ ಸಾಹೀಬಿನ ಕಡೆಗೆ ತಿರುಗಿತು. ಆ ಪವಿತ್ರ ಸ್ಥಾನವನ್ನು ಮದ್ದುಗುಂಡುಗಳಿಂದ ಸಿಡಿಸಿದ ಅಹ್ಮದ್ ಶಾಹ್, ಆ ಮಂದಿರದ ಸುತ್ತಲಿನ ಪವಿತ್ರ ಕೊಳದೊಳಗೆ ಮೂಳೆ, ಮಾಂಸ ಮತ್ತು ರಕ್ತಗಳನ್ನು ತುಂಬಿಸಿ ಅಪವಿತ್ರಗೊಳಿಸಿದ್ದು ಕೂಡ ಇತಿಹಾಸ ಮರೆಯಲಾಗದ ದುರ್ಘಟನೆಯಾಗಿಹೋಗಿದೆ. 

ಆಫ್ಘಾನಿಸ್ತಾನದ ಅಹ್ಮದ್ ಶಾಹ್ ಅಬ್ದಾಲಿ ಭಾರತದ ಮೇಲೆ ದಂಡಯಾತ್ರೆ ನಡೆಸಿದ್ದು ಒಟ್ಟು ಒಂಬತ್ತು ಬಾರಿ. ಆ ಒಂಬತ್ತೂ ಅಕ್ರಮಣಗಳಲ್ಲೂ ಅಫ್ಘಾನರೊಂದಿಗೆ ಹೋರಾಡಿ ಅವರುಗಳನ್ನು ಹಿಮ್ಮೆಟಿಸಲು ಪ್ರಯತ್ನಿಸಿದವರು ಪಂಜಾಬಿನ ಮಣ್ಣಿನ ಮಕ್ಕಳಾದ ಸಿಖ್ಖರು. ಅಫ್ಘಾನ್ ಆಕ್ರಮಣಗಳಿಂದ ಅಪಾರ ಸಂಖ್ಯೆಯ ಸಾವುನೋವುಗಳನ್ನು ಸಿಖ್ಖರ ಅನುಭವಿಸಿದರೂ, ಆ ಆಕ್ರಮಣಗಳಿಂದ ಸಿಖ್ಖರುಗಳಿಗೆ ಪರೋಕ್ಷವಾಗಿ ಲಾಭವಾಗಿದ್ದು ಕೂಡ ಸುಳ್ಳಾಗಿರಲಿಲ್ಲ.  ಸಿಖ್ಖರ ಕಡುವೈರಿಗಳಾದ ಮೊಗಲರ ಜಂಘಾಬಲ, ಅಫ್ಘಾನ್ನರ ನಿರಂತರ ಆಕ್ರಮಣದಿಂದ ಅಡಗಿಹೋಗಿತ್ತು. ಪಂಜಾಬ್ ಪ್ರಾಂತ್ಯವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದ ಮರಾಠರನ್ನು ಹಿಮ್ಮೆಟ್ಟಿಸಿದವರು ಕೂಡ ಅಫ್ಘಾನರೇ ಆಗಿದ್ದು ಸಿಖ್ಖರಿಗೆ ವರದಾನವಾಗೇ ಪರಿಣಮಿಸಿತು. 'Fortune favors the brave' ಎಂಬ ನಾಣ್ನುಡಿಯಂತೆ, 18ನೇ ಶತಮಾನದ ಅಂತ್ಯದ ಸಮಯಕ್ಕೆ ಇಡೀ ಪಂಜಾಬ್ ಪ್ರಾಂತ್ಯದಲ್ಲಿ ಸಿಖ್ಖರ ಅಧಿಪತ್ಯ ಏರ್ಪಟ್ಟಿದ್ದಕ್ಕೆ, ಅಫ್ಘಾನ್ನರ ಆಕ್ರಮಣಗಳೂ ಕಾರಣವೆಂಬುದು ಸುಳ್ಳಲ್ಲ. 

ಪಂಜಾಬಿನ ಸಿಂಹ ಮಹಾರಾಜ ರಣಜಿತ್ ಸಿಂಗ್ (1780-1839)

ಹುಟ್ಟು ಹೋರಾಟಗಾರರಾದ ಸಿಖ್ಖರ ಆಶೋತ್ತರಗಳನ್ನು ಆಗಸಕ್ಕೇರಿಸಿದ ಕೀರ್ತಿ ಮಹಾರಾಜ ರಣಜಿತ್ ಸಿಂಗನದು. ಸಿಖ್ಖರೊಡನೆ ಹಿಂದೂಗಳನ್ನು ಮತ್ತು ಮುಸ್ಲಿಮರನ್ನೂ ಒಗ್ಗೂಡಿಸಿ, ಸಮಗ್ರ ಪಂಜಾಬಿನ ವಿಸ್ತಾರ ನೆರೆಯ ರಾಷ್ಟ್ರ ಅಫ್ಘಾನಿಸ್ತಾನಕ್ಕೂ ಹಬ್ಬುವಂತೆ ಮಾಡಿ, ಸಿಖ್ಖರ ಸುವರ್ಣಯುಗಕ್ಕೆ ನಾಂದಿ ಹಾಡಿದ ವೀರ ರಣಜಿತ್ ಸಿಂಗ್ ಸುಕೇರ್ಚಕಿಯ ಜನಿಸಿದ್ದು ನವೆಂಬರ್ 13, 1780ರಂದು. 

ಸುಕೇರ್ಚಕಿಯ ರಾಜಸಂತತಿಯ ಮೂಲಪುರುಷ ಬುಧ್ ಸಿಂಗ್. ಸಿಖ್ಖರ ಹತ್ತನೇ ಗುರು ಗೋವಿಂದ್ ಸಿಂಗರಿಂದಲೇ ಖಾಲಸಾ ಪಂಥದ, ಅಂದರೆ ಸಿಖ್ ಪಂಥದ ದೀಕ್ಷೆಯನ್ನು ಪಡೆದವನು ಬುಧ್ ಸಿಂಗ್. 1718ರಲ್ಲಿ ಬುಧ್ ಸಿಂಗನ ನಿಧನನಾದನಂತರ, ಸುಕೇರ್ಚಕ್ ಎಂಬ ಪಂಜಾಬಿನ ಪುಟ್ಟಗ್ರಾಮವೊಂದರಲ್ಲಿ ಕೋಟೆಯೊಂದನ್ನು ಕಟ್ಟಿದವನು ಆತನ ಮಗನಾದ ನೌಧ್ ಸಿಂಗ್. ಅಂದಿನ ಸಿಖ್ಖರ ಹೋರಾಟದ ಮುಂಚೂಣಿಯಲ್ಲಿದ್ದ ನವಾಬ್ ಕಾಪುರ್ ಸಿಂಗನೊಂದಿಗೆ, ನೌಧ್ ಸಿಂಗ್ ಕೈಜೋಡಿಸಿ ಅಫ್ಘಾನರನ್ನು ಹಿಮ್ಮೆಟಿಸಿದ್ದು ಈಗ ಇತಿಹಾಸ. ನೌಧ್ ಸಿಂಗನ ಹಿರಿಯ ಮಗನಾದ ಚಾರ್ಹತ್ ಸಿಂಗ್ ನೆಲೆಯೂರಿದ್ದು, ಈಗಿನ ಲಾಹೋರ್ ಸಮೀಪದ ಗುಜ್ರನ್ವಾಲದಲ್ಲಿ. ಚಾರ್ಹತ್ ಸಿಂಗನ ಮಗನಾದ ಮಹಾ ಸಿಂಗ್ ನೆರೆಯ ಕನ್ನಯ್ಯ ಪ್ರಾಂತ್ಯದ ದೊರೆ ಜಯ್ ಸಿಂಗನನ್ನು ಯುದ್ಧದಲ್ಲಿ ಸೋಲಿಸಿದನಾದರೂ, ಅವರಿಬ್ಬರ ನಡುವೆ ಏರ್ಪಟಿದ್ದು ಬೀಗರ ಸಂಬಂಧವೇ. ಜಯ್ ಸಿಂಗ್ ತನ್ನ ಮುದ್ದಿನ ಮೊಮ್ಮಗಳಾದ ಮೆಹ್ತಾಬ್ ಕೌರಳನ್ನು ವಿವಾಹ ಮಾಡಿ ಕೊಟ್ಟದ್ದು ಮಹಾ ಸಿಂಗನ ಏಕೈಕ ಪುತ್ರನಾದ ಐದು ವರ್ಷದ ಬಾಲಕ ರಣಜಿತ್ ಸಿಂಗನಿಗೆ. ಜಯ್ ಸಿಂಗನ ಮರಣದನಂತರ ಕನ್ನಯ್ಯ ಪ್ರಾಂತ್ಯದ ವಾರಸುದಾರಿಕೆ ಆತನ ಸೊಸೆಯಾದ ಸದಾ ಕೌರಳ ಪಾಲಿಗೆ ಬಂದಿತ್ತು. ಸದಾ ಕೌರ ತನ್ನ ಮಗಳಾದ ಮೆಹ್ತಾಬ್ ಕೌರಾಳೊಂದಿಗೆ, ತನ್ನ ಪುಟ್ಟ ಅಳಿಯನಾದ ರಣಜಿತ್ ಸಿಂಗನ ಮಾರ್ಗದರ್ಶನಕ್ಕೆ ನಿಂತದ್ದು, ಬಾಲಕ ರಣಜಿತ್ ಸಿಂಗನ ಪಾಲಿಗೆ ವರದಾನವೇ ಆಗಿ ಪರಿಣಮಿಸಿತ್ತು. 

ರಣಜಿತ್ ಸಿಂಗನ ತಂದೆ ಮಹಾ ಸಿಂಗ್ ನಿಧನನಾದಾಗ, ರಣಜಿತ್ ಸಿಂಗನಿನ್ನೂ ಹನ್ನೆರಡು ವರ್ಷಗಳ ಬಾಲಕನಾಗಿದ್ದನು. ಬಾಲ್ಯದಲ್ಲೇ ಸಿಡುಬು ರೋಗಕ್ಕೆ ತುತ್ತಾದ ರಣಜಿತ್ ಸಿಂಗ್ ತನ್ನ ಎಡಗಣ್ಣನ್ನು ಕಳೆದುಕೊಂಡನು. ಜೊತೆಗೆ ಅವನ ಮುಖದ ಭರ್ತಿ ಸಿಡುಬಿನ ಕಲೆಗಳು ಉಳಿದೇ ಹೋಗಿದ್ದವು. ಕಲಿಯುವ ಶಾಲೆಯ ಮೆಟ್ಟಿಲುಗಳನ್ನೇ ಏರದ ಬಾಲಕ ಕಲಿತದ್ದು ಜೀವನವೆಂಬ ಮಹಾಶಾಲೆಯಲ್ಲೇ. ತಾಯಿಯ ಸ್ಥಾನದಲ್ಲಿದೆ ಅತ್ತೆ, ಸದಾ ಕೌರಾಳ ನೇತೃತ್ವದಲ್ಲಿ ಕುದುರೆ ಸವಾರಿ, ಶಸ್ತ್ರವಿದ್ಯೆ ಮತ್ತು ಬೇಟೆಯಾಡುವ ತಂತ್ರಗಳನ್ನು ಕಲಿತ ರಣಜಿತ್ ಸಿಂಗ್, ಹದಿನೈದನೇ ವಯಸ್ಸಿಗೇ ತನ್ನ ತಂದೆ ಮಹಾ ಸಿಂಗನಿಂದ ಬಂದ ಸುಕೇರ್ಚಕಿಯ ಪ್ರಾಂತ್ಯದ ಆಡಳಿತವನ್ನು ವಹಿಸಿಕೊಂಡನು. ಜೊತೆಗೆ ಹೆಂಡತಿಯ ಕಡೆಯಿಂದ ದೊರೆತ ಕನ್ನಯ್ಯ ಪ್ರಾಂತ್ಯದ ಆಡಳಿತದ ಸೂತ್ರವೂ ರಣಜಿತ್ ಸಿಂಗನ ಕೈಯನ್ನೇ ಸೇರಿತು. 

1798ರ ಸಮಯದಲ್ಲಿ ಪಂಜಾಬಿನಲ್ಲಿ ಅರಾಜಕತೆಯಿತ್ತು. ಹಲವಾರು ಸಣ್ಣ ಸಣ್ಣ ಪ್ರಾಂತ್ಯಗಳನ್ನು ಆಳುತ್ತಿದ್ದ ಚಿಕ್ಕ ಪುಟ್ಟ ಸಿಖ್ ರಾಜರುಗಳಿಗೆ  ಪ್ರಜೆಗಳನ್ನು ದೋಚುವುದು ಮತ್ತು ವಿಲಾಸಿ ಜೀವನವನ್ನು ನಡೆಸುವುದೇ ನಿತ್ಯದ ಪಾಠವಾಗಿಹೋಗಿತ್ತು. ಹದಿನೈದರ ಪ್ರಾಯದ ರಣಜಿತ್ ಸಿಂಗ್, ತನ್ನ ಪ್ರಾಯಕ್ಕೆ ಮೀರಿದ ಮಹತ್ವಾಕಾಂಕ್ಷೆಯನ್ನು ಹೊಂದಿದ್ದನು. ನೆರೆಯ ನಾಕ್ಕೈ ಪ್ರಾಂತ್ಯದ ರಾಜಕುಮಾರಿ ರಾಜ್ ಕೌರಳನ್ನು ಎರಡನೇ ವಿವಾಹದಲ್ಲಿ ವರಿಸಿದ ರಣಜಿತ್ ಸಿಂಗ್ ತನ್ನ ಬಲವನ್ನು ಹೆಚ್ಚಿಸಿಕೊಂಡನು.  ಕಪುರ್ತಲಾದ ರಾಜಕುಮಾರ ಫತೇಹ್ ಸಿಂಗ್ ಅಹ್ಲುವಾಲಿಯಾನೊಡಗಿನ ಸ್ನೇಹ ರಣಜಿತ್ ಸಿಂಗನ ಬಲವನ್ನು ಮತ್ತಷ್ಟು ಹೆಚ್ಚಿಸಿತ್ತು. 

ಅಫ್ಘಾನಿಸ್ತಾನದ ಅಹ್ಮದ್ ಶಾಹ್ ಅಬ್ದಾಲಿಯ ಮೊಮ್ಮಗ ಶಾಹ್ ಜಮಾನನು 1798ರ ಹೊತ್ತಿಗೆ ತನ್ನ ಭಾರಿ ಸೈನ್ಯದೊಂದಿಗೆ ಪಂಜಾಬಿನ ಮುಖಾಂತರ ಭಾರತದ ಮೇಲೆ ಮೂರನೇ ಬಾರಿಗೆ ದಂಡೆತ್ತಿ ಬಂದಿದ್ದನು. ಈಗಿನ ಉತ್ತರಾಖಂಡ್ ಪ್ರಾಂತ್ಯದ ಅಧಿಪತ್ಯವಿದ್ದ ರೋಹಿಲ್ಲರು, ಅಯೋಧ್ಯಾ ಪ್ರಾಂತ್ಯದ ರಾಜನಾಗಿದ್ದ ವಾಝಿರ್ ಮತ್ತು ದೂರದ ದಕ್ಷಿಣದ ಟಿಪ್ಪುಸುಲ್ತಾನ, ಇವರೆಲ್ಲರ ಬೆಂಬಲ ಮತ್ತು ಆಹ್ವಾನ ಭಾರತದ ಮೇಲೆ ದಂಡೆತ್ತಿ ಬಂದಿದ್ದ ಶಾಹ್ ಜಮಾನನಿಗಿತ್ತು. ಅಂದಿನ ಲಾಹೋರ್ ನಿಜಮುದ್ದೀನ್ ಎಂಬ ಮುಸ್ಲಿಂ ರಾಜನ ಅಧೀನದಲ್ಲಿತ್ತು. ಭಾರತವನ್ನು ಲಾಹೋರಿನ ಮುಖಾಂತರ ಪ್ರವೇಶಿಸಲು ಶಾಹ್ ಜಮಾನನಿಗೆ ನಿಜಮುದ್ದೀನನ ಸಂಪೂರ್ಣ ಬೆಂಬಲವಿತ್ತು. ಲಾಹೋರಿನ ಸಾಮಂತ ಪಟ್ಟವನ್ನು  ಬಿಟ್ಟುಕೊಡುವುದಾದರೆ ಎಲ್ಲ ರೀತಿಯ ಸಹಕಾರವನ್ನು ಶಾಹ್ ಜಮಾನನಿಗೆ ನೀಡುವುದಕ್ಕೆ ನಿಜಾಮುದ್ದೀನ್ ತುದಿಗಾಲಲ್ಲಿ ನಿಂತಿದ್ದನು. ಹಾಗಾಗಿ ಲಾಹೋರಿನ ನಿಯಂತ್ರಣವನ್ನು ಸಾಧಿಸುವಲ್ಲಿ ಶಾಹ್ ಜಮಾನನಿಗೆ ಯಾವ ಕಷ್ಟವೂ ಆಗಲಿಲ್ಲ. 

ಅಮೃತಸರದ ಕಡೆಗೆ ಲಗ್ಗೆ ಇಟ್ಟ ಶಾಹ್ ಜಮಾನನ್ನು ಕಂಡು  ಭಯಗ್ರಸ್ತರಾದ ಸಣ್ಣಪುಟ್ಟ ಸಿಖ್ ರಾಜರುಗಳೆಲ್ಲ ತಮ್ಮ ಸೈನ್ಯ ಮತ್ತು ಸಂಪತ್ತನ್ನು ಬೆಟ್ಟಪ್ರದೇಶಗಳಲ್ಲಿ  ಬಚ್ಚಿಟ್ಟರು. ಆ ರಾಜರುಗಳೆಲ್ಲ ಸಿಖ್ಖರ ಪವಿತ್ರ ಸ್ಥಾನವಾದ ಅಮೃತಸರದಲ್ಲಿ ಗುಟ್ಟಾಗಿ ಸಭೆ ಸೇರಿದರು. ಹೆಚ್ಚಿನ ಸಂಖ್ಯೆಯ ಸಿಖ್ ರಾಜರುಗಳು ಫಲಾಯನವಾದವನ್ನು ಪ್ರತಿಪಾದಿಸಿದರು. ಅವರುಗಳನ್ನು ಹುರಿದುಂಬಿಸಿ ಹೋರಾಟದ ಮನೋಭಾವವನ್ನು ಅಂದು ಮೂಡಿಸಿದ್ದು ಹದಿನೆಂಟರ ಪ್ರಾಯದ ಯುವಕ  ರಾಜ ರಣಜಿತ್ ಸಿಂಗ್. ರಣಜಿತ್ ಸಿಂಗನ ವಾದದ ಪ್ರಕಾರ ತಮ್ಮ ತಮ್ಮ ಪ್ರಜೆಗಳಿಂದ ಕಪ್ಪಕಾಣಿಕೆಗಳನ್ನು ಪಡೆದು ಸುಖವನ್ನು ಅನುಭವಿಸಿದ ರಾಜರುಗಳು, ಕಷ್ಟಕಾಲದಲ್ಲಿ ಅವರುಗಳ ಕೈಬಿಡುವುದು ಸರಿಯಲ್ಲ. ಪ್ರಜೆಗಳು ಅನಾಥರಾದರೆ, ದಂಡೆತ್ತಿ ಬಂದ  ಶಾಹ್ ಜಮಾನನ ಸೈನ್ಯ ಅವರುಗಳನ್ನು ಬಗ್ಗುಬಡಿಯುವುದರಲ್ಲಿ ಅನುಮಾನವಿಲ್ಲ. ಪ್ರಜೆಗಳ ರಕ್ಷಣೆಯೇ ರಾಜರುಗಳ ಕರ್ತವ್ಯವೆಂದು ಸಾರಿದ ಯುವಕ ರಣಜಿತ್ ಸಿಂಗನ ಕರೆಗೆ ಜೈಕಾರ ಭೋರ್ಗರಿಸಿತು. ಅಂದು ಒಟ್ಟುಗೂಡಿದ ಸಿಖ್ ಸೈನ್ಯಗಳ ನಾಯಕನಾಗಿ ಹೊರಹೊಮ್ಮಿದವನು ರಣಜಿತ್ ಸಿಂಗನೇ ಆಗಿದ್ದನು. ಹೊಸ ನಾಯಕನ ನಾಯಕತ್ವದಲ್ಲಿ ಹೊಸ ಹುರುಪಿನೊಂದಿಗೆ ಹೋರಾಡಿದ ಸಿಖ್ ಸೇನೆ, ಶಾಹ್ ಜಮಾನನ ಸೈನ್ಯವನ್ನು ಹಿಮ್ಮೆಟಿಸಿ, ಸಮಗ್ರ ಪಂಜಾಬಿನ ಕೇಂದ್ರವಾದ ಲಾಹೋರ್ ಪಟ್ಟಣವನ್ನು ಗೆದ್ದುಕೊಂಡಿತು. ಆ ನಡುವೆ ಶಾಹ್ ಜಮಾನನ ಅಫ್ಘಾನಿಸ್ತಾನದಲ್ಲೆ ಆತನ ಸಹೋದರನಾದ ಮಹಮೂದನು ದಂಗೆ ಎದ್ದದ್ದು, ಶಾಹ್ ಜಮಾನನ  ದಿಕ್ಕೆಡಿಸಿತು. ತನ್ನ ಸಿಂಹಾಸನವನ್ನು ಕಾಪಾಡಿಕೊಳ್ಳಲು ಶಾಹ್ ಜಮಾನ ಅನಿವಾರ್ಯವಾಗಿ ಅಫ್ಘಾನಿಸ್ತಾನಕ್ಕೆ ಹಿಂತಿರುಗಬೇಕಾಯಿತು. ಹಿಂತಿರುಗಿ ಓಡುತ್ತಿದ್ದ ಶಾಹ್ ಜಮಾನನ ಸೈನ್ಯವನ್ನು ಅಟ್ಟಾಡಿಸಿಕೊಂಡು ಸದೆಬಡಿದ ರಣಜಿತ್ ಸಿಂಗನ ಪಡೆ, ಲಾಹೋರಿನ ಮೇಲೆ ತನ್ನ ಅಧಿಪತ್ಯವನ್ನು ಸಂಪೂರ್ಣವಾಗಿ ಸಾಧಿಸಿತ್ತು.  

ಲಾಹೋರನ್ನು ಪ್ರವೇಶಿಸಿದ ರಣಜಿತ್ ಸಿಂಗ್ ಮೊದಲು ಮಾಡಿದ ವಿನಮ್ರ ಕಾರ್ಯವೆಂದರೆ, ಅಲ್ಲಿನ ಬಾದ್ಷಹಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದು. ಜೂಲೈ 7, 1799ರ ದಿನದಂದು ಲಾಹೋರ್ ಕೋಟೆಯನ್ನು ಪ್ರವೇಶಿಸಿದ ತನ್ನ ಹೊಸ ರಾಜ ರಣಜಿತ್ ಸಿಂಗನಿಗೆ, ಅಲ್ಲಿನ ಸೈನ್ಯ 21 ಕುಶಾಲ ತೋಪುಗಳನ್ನು ಸಿಡಿಸಿ ಸ್ವಾಗತ ಕೋರಿತ್ತು.  ಸಮಗ್ರ ಪಂಜಾಬಿನ ಮಹಾರಾಜನಾಗಿ, 21ರ ಪ್ರಾಯದ  ರಣಜಿತ್ ಸಿಂಗನ ರಾಜತಿಲಕ ಸಮಾರಂಭ ನಡೆದದ್ದು 1801ರ ಬೈಸಾಖಿ ದಿನವಾದ ಏಪ್ರಿಲ್ 12ರಂದು. ಮಹಾರಾಜಾ ರಣಜಿತ್ ಸಿಂಗ್ ತನ್ನ ಪವಿತ್ರ ಸಿಂಹಾಸನವನ್ನು  ಪರಿಗಣಿಸಿದ್ದು ಸಿಖ್ ಪರಂಪರೆಯ 'ದರ್ಬಾರ್ ಖಾಲಸಾಜಿ' ಎಂದೇ. ಖಾಲಸಾ ಎಂಬುದು ಪವಿತ್ರ ಸಿಖ್ ಪರಂಪರೆಯ ಪರ್ಯಾಯ ನಾಮ.  ಲಾಹೋರಿನ ರಾಜಬೀದಿಗಳಲ್ಲಿ ಜಂಬೂ ಸವಾರಿ ನಡೆಸಿದ ರಣಜಿತ್ ಸಿಂಗ್, ನೆರದಿದ್ದ ಜನಸ್ತೋಮದ  ಮೇಲೆ ಗುರು ನಾನಕರ ಭಾವಚಿತ್ರವನ್ನೊಳಗೊಂಡ  ಸುವರ್ಣದ ನಾಣ್ಯಗಳ ಮಳೆಯನ್ನೇ ಸುರಿಸಿದ್ದನು. 

ಪಂಜಾಬಿನ ನೂತನ ಮಹಾರಾಜನ ಸಾಮ್ರಾಜ್ಯ, ಸಿಖ್ಖರ ಪವಿತ್ರಸ್ಥಾನವಾದ ಅಮೃತಸರದ ಮೇಲಿನ ಅಧಿಪತ್ಯವಿಲ್ಲದೆ ಅಪೂರ್ಣವಾಗಿತ್ತು. ಆ ಸಮಯದಲ್ಲಿ ಅಮೃತಸರ ಸುಮಾರು ಹನ್ನೆರಡು ಸಣ್ಣಪುಟ್ಟ ರಾಜಮನೆತನಗಳ ಅಧೀನದಲ್ಲಿದ್ದು ಅರಾಜಕತೆ ತಂಡವವಾಡುತ್ತಿತ್ತು. ಅಮೃತಸರದ ಪ್ರಮುಖ ನಾಗರೀಕರುಗಳು ಅಮೃತಸರ ಮಹಾರಾಜ ರಣಜಿತ್ ಸಿಂಗನ ಸಾಮ್ರಾಜ್ಯಕ್ಕೆ ಸೇರ್ಪಡೆಯಾಗಬೇಕೆಂದು ಗುಟ್ಟಾಗಿ ಆಹ್ವಾನವಿತ್ತಿದ್ದರು. ರಣಜಿತ್ ಸಿಂಗ್ ಅಮೃತಸರವನ್ನು ಪ್ರವೇಶಿಸುತ್ತಲೇ, ಬಹುತೇಕ ರಾಜರುಗಳು ತಮ್ಮ ಕಿರೀಟಗಳನ್ನು ಮಹಾರಾಜನ ಅಡಿಯಲಿಟ್ಟು ಶರಣಾದರು. ದಶಕಗಳ ಕಾಲ ಅಮೃತಸರವನ್ನು ಆಳಿದ ಭಂಗಿ ಮನೆತನದ ರಾಜಮಾತೆ ಮಾತ್ರ ಅಮೃತಸರದ ಭಂಗಿ ಕೋಟೆಯಲ್ಲೇ ಉಳಿದುಕೊಂಡಿದ್ದು, ಕೊಂಚಮಟ್ಟಿನ ಪ್ರತಿರೋಧವನ್ನು ತೋರಿಸಿದ್ದಳು. ಧಾರಾಳಿಯಾದ ರಣಜಿತ್ ಸಿಂಗ್, ರಾಜಮಾತೆಗೆ ತಕ್ಕುದಾದ ಪಿಂಚಿಣಿಯನ್ನು ಮಂಜೂರು ಮಾಡಿ, ಐತಿಹಾಸಿಕವಾದ ಭಂಗಿ ಕೋಟೆಯನ್ನು ವಶಪಡಿಸಿಕೊಂಡನು. ಭಂಗಿ ಕೋಟೆಗೆ ಸಿಖ್ಖರ ಹತ್ತನೇ ಗುರು ಗೋವಿಂದ್ ಸಿಂಗರ ಹೆಸರಿಟ್ಟವನೂ ರಣಜಿತ್ ಸಿಂಗನೆ. ಅಂದಿನಿಂದ ಅಮೃತಸರದ  ಆ ಕೋಟೆ ಗೋವಿಂದ್ಘರ್ ಕೋಟೆ ಎಂದೇ ಪ್ರಸಿದ್ಧವಾಗಿದೆ. ಅಮೃತಸರವನ್ನು ವಶಪಡಿಸಿಕೊಂಡನಂತರ ರಣಜಿತ್  ಸಿಂಗ್ ಮಾಡಿದ ಮೊದಲ ಕೆಲಸವೆಂದರೆ, ಗುರು ಅರ್ಜುನರಿಂದ ಸ್ಥಾಪಿಸಲ್ಪಟ್ಟ  ಹರಿಮಂದಿರಸಾಹೀಬಿನಲ್ಲಿ ವಿರಾಜಮಾನವಾಗಿದ್ದ ಗುರು ಗ್ರಂಥ್ ಸಾಹೀಬಿಗೆ ಗೌರವ ಸಮರ್ಪಣೆ ಮಾಡಿದ್ದು.            ಹರಿಮಂದಿರಸಾಹೀಬಿನ  ದುರಸ್ತಿ ಕಾರ್ಯಗಳನ್ನು ತ್ವರಿತವಾಗಿ ಮುಗಿಸಿದ ರಣಜಿತ್ ಸಿಂಗ್, ಇಡೀ ಗುರುದ್ವಾರಕ್ಕೆ ಚಿನ್ನದ ಹೊದಿಕೆಯನ್ನು ಹೊದಿಸಿ ಸಿಂಗರಿಸಿದನು. ಅಂದಿನಿಂದ ಅಮೃತ್ಸರದ ಹರಿಮಂದಿರಸಾಹೀಬ್ ಗುರುದ್ವಾರ ಸ್ವರ್ಣಮಂದಿರವೆಂದೇ ಪ್ರಸಿದ್ಧವಾಯಿತು. 

ಸಮಗ್ರ ಪಂಜಾಬಿನ ಮಹಾರಾಜನಾದ ರಣಜಿತ್ ಸಿಂಗ್, ಪಂಜಾಬಿನ ಮೂರನೆ ದೊಡ್ಡ ಜನಾಂಗ ಮಾತ್ರವಾದ ಸಿಖ್ ಸಮುದಾಯಕ್ಕೆ ಸೇರಿದವನಾಗಿದ್ದನು. ಆದರೂ ಆತ ಸಿಖ್ ದೊರೆಯಾಗಿ ಮಾತ್ರ ನೇಮಕಗೊಂಡಿರಲಿಲ್ಲ. ಪಂಜಾಬಿನ ಬಹುಸಂಖ್ಯಾತರುಗಳಾದ  ಮುಸ್ಲಿಮರು ಮತ್ತು ಹಿಂದು ಪ್ರಜೆಗಳು ಕೂಡ ರಣಜಿತ್ ಸಿಂಗನ ಸಾರ್ವಭೌಮತ್ವವನ್ನು ಮನಸಾರೆ ಸ್ವೀಕರಿಸಿದ್ದರು. ಆಡಳಿತದ ಸೂತ್ರಗಳನ್ನು ಬಿಗಿಗೊಳಿಸುವ ಕ್ರಮಗಳನ್ನು ಕೈಗೊಂಡ ರಣಜಿತ್ ಸಿಂಗ್, ಹೊರರಾಜ್ಯಗಳೊಡನೆ ವ್ಯವಹಾರದ ಖಾತೆಯನ್ನು ವಹಿಸಿದ್ದು ತನ್ನ ಆಪ್ತನಾದ ಅಝೀಝುದಿನನಿಗೆ. ಲಾಹೋರಿನ ಯುದ್ಧವನ್ನು ಗೆಲ್ಲಲು ಸಹಕರಿಸಿದ ಫತೇಹ್ ಸಿಂಗ್ ಅಹ್ಲುವಾಲಿಯನೇ ರಣಜಿತ್ ಸಿಂಗನ ಯುದ್ಧತಂತ್ರಗಳ ಸಲಹೆಗಾರನಾಗಿ ನೇಮಕಗೊಂಡನು. ಹಿಂದೂ ಯೋಧನಾದ ಮೋಹಕಾಮ್ ಚಂದ್ ಮುಖ್ಯ ಸೇನಾಧಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಂಡಿದ್ದನು.  ಸುತ್ತಲಿನ ಪ್ರಾಂತ್ಯಗಳಾದ ಜಮ್ಮು, ಕಾಶ್ಮೀರ, ಮುಲ್ತಾನ್, ಭಾವಾಲ್ಪುರಗಳ ರಾಜರುಗಳು ಸಹ ಲಾಹೋರ್ ದರ್ಬಾರನ್ನು  ಮನ್ನಣೆ ಮಾಡಿ, ಕಪ್ಪಕಾಣಿಕೆಗಳನ್ನು ಸಲ್ಲಿಸಲು ಆರಂಭಿಸಿದ್ದು, ಪಂಜಾಬಿನ ಹೊಸ ಮಹಾರಾಜಾ ರಣಜಿತ್ ಸಿಂಗನ ಸಾರ್ವಭೌಮತ್ವವನ್ನು ಸಾರಿತ್ತು. 

ಲಾಹೋರ್ ಪ್ರಾಂತ್ಯದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದ್ದರಿಂದ, ಮಹಾರಾಜಾ ರಣಜಿತ್ ಸಿಂಗ್ ಅವರುಗಳಿಗಾಗಿ ಶರಿಯತ್ ನ್ಯಾಯಾಲಯಗಳನ್ನೇ ಸ್ಥಾಪಿಸಿದನು. ಹಿಂದುಗಳಿಗೆ ಮತ್ತು ಸಿಖ್ಖರಿಗೆ ಪ್ರತ್ಯೇಕವಾದ ನ್ಯಾಯಾಲಯದ ವ್ಯವಸ್ಥೆ ಇತ್ತು. ಯುನಾನಿ ವೈದ್ಯನಾದ ಹಕೀಮ್ ನೂರುದ್ದೀನನ ನೇತೃತ್ವದಲ್ಲಿ ರಾಜ್ಯಾದ್ಯಂತ ನೂರಾರು ಆಸ್ಪತ್ರೆಗಳನ್ನು ತೆರೆಯಲಾಯಿತು. ಆ ಆಸ್ಪತ್ರೆಗಳಲ್ಲಿ ಯುನಾನಿ ಮತ್ತು ಆರ್ಯುವೇದದ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು. 

ರೈತರುಗಳ ಕೃಷಿ ಚಟುವಟಿಕೆಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಏರ್ಪಾಡುಗಳನ್ನು ಮಾಡಿದ್ದ ರಣಜಿತ್ ಸಿಂಗ್ ಅವರುಗಳಿಗೆ ಗುಣಮಟ್ಟದ ಬೀಜಗಳನ್ನು ಉಚಿತವಾಗಿ ನೀಡುತ್ತಿದ್ದನು.  ರಾಜಕೋಶದಿಂದ ಸಾರ್ವಜನಿಕ ಕೃಷಿ ಬಾವಿಗಳನ್ನು ತೋಡಿಸಲಾಗುತ್ತಿತ್ತು. ಉತ್ತಮ ತಳಿಯ ಜಾನುವಾರುಗಳನ್ನು ದೂರದ ಹರಿಯಾಣದಿಂದಲೂ ತರಿಸುತ್ತಿದ್ದ ಮಹಾರಾಜನು, ಅವುಗಳನ್ನು ರೈತರುಗಳಿಗೆ ಸುಲಭ ಬೆಲೆಯಲ್ಲಿ ಒದಗಿಸುತ್ತಿದನು. ಕೃಷಿ ಕರ ಎಂದಿಗೂ ಬೆಳೆದ ಬೆಳೆಯ ಐದನೇ ಒಂದಂಶದಷ್ಟು ಬೆಲೆಯನ್ನು ಮೀರುತ್ತಿರಲಿಲ್ಲ. 

ಪುಟ್ಟಗ್ರಾಮವೊಂದರ ಸರದಾರನಾಗಿದ್ದ ರಣಜಿತ್ ಸಿಂಗನು ಪಂಜಾಬಿನ ಮಹಾರಾಜನ ಪಟ್ಟಕ್ಕೇರುವುದಕ್ಕೆ ಅವನ ಸರ್ವಧರ್ಮ ಸಮಭಾವವೊಂದು ಪ್ರಮುಖ ಕಾರಣ. ಅವನ ಆಳ್ವಿಕೆಯಲ್ಲಿ ಸಿಖ್ಖರು, ಹಿಂದೂಗಳು ಮತ್ತು ಮುಸಲ್ಮಾನರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿತ್ತು. ಗುರುದ್ವಾರ, ದೇವಾಲಯ ಮತ್ತು ಮಸೀದಿಗಳ ಪ್ರಾರ್ಥನೆಗಳಲ್ಲಿ ಸಮಾನವಾದ ಭಕ್ತಿಭಾವದಿಂದ ಪಾಲ್ಗೊಳ್ಳುತ್ತಿದ್ದ ಮಹಾರಾಜನು ಎಲ್ಲಾ ಧರ್ಮಗಳ ಜನತೆಯ  ಅನುರಾಗವನ್ನು ಗೆದ್ದದ್ದು ಸ್ವಾಭಾವಿಕವೇ ಆಗಿತ್ತು. ಹಿಂದೂಗಳ ದಸರಾ ಸಮಾರಂಭದಲ್ಲಿ ಆಯುಧಗಳ ಪೂಜೆಯನ್ನು ತಪ್ಪದೇ ಮಾಡುತ್ತಿದ್ದ ಮಹಾರಾಜನು, ವಿಜಯದಶಮಿಯಂದು ರಾಮ ರಾವಣರ ಮಹಾಯುದ್ಧದ ಅಣಕು ಪ್ರದರ್ಶನವನ್ನು ಏರ್ಪಡಿಸುತ್ತಿದ್ದನು. ದೀಪಾವಳಿಯಂದು ಎಲ್ಲಾ ಗುರುದ್ವಾರಗಳನ್ನು ಮತ್ತು ದೇವಸ್ಥಾನಗಳನ್ನು ಹಣತೆಗಳ ಮೂಲಕ ಬೆಳಗಿಸುವ ಕಾರ್ಯ ಪಂಜಾಬ್ ಸಾಮ್ರಾಜ್ಯದಾದ್ಯಂತ ನಡೆಯುತ್ತಿತ್ತು. ಹೋಳಿ ಹಬ್ಬದಂದು ಬಣ್ಣದ ಓಕುಳಿಯಾಟಗಳಲ್ಲಿ ಮಹಾರಾಜನೇ ಪಾಲ್ಗೊಳ್ಳುತ್ತಿದನು. ವಸಂತ ಪಂಚಮಿಯಂದು ಮುಸ್ಲಿಂ ಮಹಾಪುರುಷರ ಸಮಾಧಿಗಳಿಗೆ ಸಕಲ ಭಕ್ತಿಭಾವಗಳೊಡನೆ ಗೌರವಸಮರ್ಪಣೆಗಳನ್ನು ಮಾಡಲಾಗುತ್ತಿತ್ತು. ಬೈಸಾಖಿಯ ಶುಭದಿನದಂದು ಅಮೃತಸರದ ಸ್ವರ್ಣಮಂದಿರದ ಪವಿತ್ರ ಕೊಳದಲ್ಲಿ ಮಂಗಳಸ್ನಾನ ಮಾಡುವುದರಲ್ಲಿ ಮಹಾರಾಜನೇ ಮೊದಲಿಗನಾಗಿರುತ್ತಿದ್ದನು. 

ಮಹಾರಾಜಾ ರಣಜಿತ್ ಸಿಂಗನ ಸಾಮ್ರಾಜ್ಯ 1809ರ ಸಮಯಕ್ಕೆ ಸಮಗ್ರ ಪಂಜಾಬನ್ನೂ ಮೀರಿ ಬೆಳೆದಿತ್ತು.   ಸಿಂಧು ನದಿಯ ಉಪನದಿಗಳಾದ ಝೆಲುಮ್, ಚೀನಾಬ್, ರಾವಿ, ಬ್ಯಾಸ್ ಮತ್ತು ಸುಟ್ಲೆಜ್ ಹಾಗೂ ಸಿಂಧು ನದಿಯನ್ನೇ ಒಳಗೊಂಡಿದ್ದ ಪಂಜಾಬ್ ಪ್ರಾಂತ್ಯ ಈಗ ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಹಂಚಿಹೋಗಿದೆ. ರಣಜಿತ್ ಸಿಂಗನ ರಾಜಧಾನಿ ಪಂಜಾಬಿನ ಕೇಂದ್ರವಾಗಿದ್ದ ಲಾಹೋರ್ ಆಗಿತ್ತು. ಲಾಹೋರ್ ಮತ್ತು ಅಮೃತಸರ್ ಸುತ್ತಲಿನ ಐವತ್ತು ಮೈಲಿಗಳಷ್ಟು ಪ್ರದೇಶದ ಮೇಲೆ ರಣಜಿತ್ ಸಿಂಗನ ನೇರ ಪ್ರಾಬಲ್ಯವಿತ್ತು. ಲಾಹೋರ್ ಕೇಂದ್ರದಿಂದ ನೈಋತ್ಯ ದಿಕ್ಕಿಗಿರುವ ಮುಲ್ತಾನ್,  ವಾಯುವ್ಯ ದಿಕ್ಕಿಗಿರುವ ಅಟ್ಟೋಕ್, ಈಶಾನ್ಯ ದಿಕ್ಕಿಗಿರುವ ಧರಂಶಾಲಾ ಮತ್ತು ಆಗ್ನೇಯ ದಿಕ್ಕಿಗಿರುವ ಕರ್ನಾಲ್ಗಳ ನಡುವಿನ ಬ್ರಹತ್ ಪ್ರದೇಶದ ಎಲ್ಲಾ ರಾಜರುಗಳು ಮಹಾರಾಜ ರಣಜಿತ್ ಸಿಂಗನಿಗೆ ಕಪ್ಪಕಾಣಿಕೆಗಳನ್ನು ಅರ್ಪಿಸುತ್ತಿದ್ದರು. 

ಸಮರವೀರನಾಗಿದ್ದ ರಣಜಿತ್ ತನ್ನ ಸುಸಜ್ಜಿತ  ಸೈನ್ಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದನು. ಅವನ ನೇರ ನಿಯಂತ್ರಣದಲ್ಲಿದ ಸೈನ್ಯದಲ್ಲಿ ಸುಮಾರು 15,000 ಸೈನಿಕರಿದ್ದರು. ಅವರುಗಳಲ್ಲಿ ಅಶ್ವಾರೂಢರಾಗಿದ್ದ ಸಿಖ್ ಸೈನಿಕರು, ಕಾಲಾಳುಗಳಾಗಿದ್ದ ಹಿಂದೂ ಸೈನಿಕರು ಮತ್ತು ಫಿರಂಗಿಗಳನ್ನು ಪ್ರಯೋಗಿಸಬಲ್ಲ ಮುಸ್ಲಿಂ ಸೈನಿಕರು ಇದ್ದರು. ಎರಡನೇ ವಿಭಾಗದಲ್ಲಿ ಮಹಾರಾಜನಿಂದ ಪಿಂಚಣಿಯನ್ನು ಪಡೆಯುತ್ತಿದ್ದ ರಾಜರುಗಳಿಗೆ ಸೇರಿದ 13,000 ಸೈನಿಕರಿದ್ದರು. ಮೂರನೇ ವಿಭಾಗದಲ್ಲಿ ಮಹಾರಾಜನ ಸಾಮಂತ ರಾಜರುಗಳಿಗೆ ಸೇರಿದ 10,000ದಷ್ಟು ಸೈನಿಕರಿದ್ದರು. ಸದಾ ಸಮರನಿರುತನಾಗಿರುತ್ತಿದ್ದ ರಣಜಿತ್ ಸಿಂಗ್ ನೇರವಾಗಿ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದನು. ಸೈನಿಕರುಗಳ ಸಾಹಸ ಶೌರ್ಯಗಳಿಗೆ, ಉದಾರಿಯಾದ ಮಹಾರಾಜನು ತಕ್ಕುದಾದ ಬಹುಮಾನಗಳನ್ನು ನೀಡುತ್ತಿದ್ದನು. 

1809ರ ಸಮಯಕ್ಕೆ ರಣಜಿತ್ ಸಿಂಗನ ಸಾಮ್ರಾಜ್ಯ ಬೃಹದಾಗಿತ್ತು. ಆತನ ಸಾಮ್ರಾಜ್ಯದ ವಾಯುವ್ಯ ದಿಕ್ಕಿಗೆ ಅಫ್ಘಾನಿಸ್ತಾನವಿತ್ತು ಮತ್ತು ಈಶಾನ್ಯ ದಿಕ್ಕಿಗೆ ಕಾಶ್ಮೀರ ಮತ್ತು ಗೂರ್ಖರುಗಳ ರಾಜ್ಯವಿದ್ದಿತು. ಆ ಮೂರು ಪ್ರಾಂತ್ಯಗಳಿಂದ ರಣಜಿತ್ ಸಿಂಗನಿಗೆ ಯಾವ ಭಯವೂ ಇರಲಿಲ್ಲ. ಪೂರ್ವ ಹಾಗೂ ಆಗ್ನೇಯ ದಿಕ್ಕುಗಳಲ್ಲಿ ಬ್ರಿಟಿಷರ ಸಾಮ್ರಾಜ್ಯ ಶರವೇಗದಲ್ಲಿ ಬೆಳೆಯುತ್ತಿತ್ತು. ಹಾಗಾಗಿ ರಣಜಿತ್ ಸಿಂಗ್ ಹಾಗೂ ಬ್ರಿಟಿಷರ ನಡುವೆ ಘರ್ಷಣೆ ಉಂಟಾಗಬಹುದೆಂಬ ಪರಸ್ಪರ ಅನುಮಾನಗಳು ಇದ್ದೇ ಇದ್ದವು.  1809ರ ಏಪ್ರಿಲ್ 25ರಂದು ರಣಜಿತ್ ಸಿಂಗ್ ಹಾಗೂ ಬ್ರಿಟಿಷರ ನಡುವೆ ಅಮೃತಸರದಲ್ಲಿ ಒಂದು ಪರಸ್ಪರ ಸ್ನೇಹದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಒಪ್ಪಂದದ ಪ್ರಕಾರ ಸಟ್ಲೆಜ್ ನದಿಯ ಉತ್ತರಕ್ಕಿರುವ ರಣಜಿತ್ ಸಿಂಗನ ಸಾಮ್ರಾಜ್ಯವನ್ನು ಬ್ರಿಟಿಷ್ ಸರಕಾರ ಮಾನ್ಯಮಾಡಿತ್ತು. ಈ ಒಡಂಬಡಿಕೆಯ ಪ್ರಕಾರ ಲೂಧಿಯಾನ, ಫೀರೋಜ್ಪುರ್ ಹಾಗು ಈಗ ಪಾಕಿಸ್ತಾನದಲ್ಲಿರುವ ಭಾವಾಲ್ಪುರಗಳು, ಮತ್ತವುಗಳ  ಉತ್ತರಕ್ಕಿರುವ ಪ್ರದೇಶಗಳಲ್ಲಿ ರಣಜಿತ್ ಸಿಂಗನ ಪ್ರಾಬಲ್ಯ ಮತ್ತಷ್ಟು ಬಲವಾಯಿತು. ಸಟ್ಲೆಜ್ ನದಿಯ ದಕ್ಷಿಣಕ್ಕೆ ಬ್ರಿಟಿಷರ ಪ್ರಾಬಲ್ಯವನ್ನು ಮಾನ್ಯ ಮಾಡಿದ ರಣಜಿತ್ ಸಿಂಗ್ ಆ ದಿಕ್ಕಿನಲ್ಲಿ ತನ್ನ ರಾಜ್ಯದ ವಿಸ್ತಾರವನ್ನು ಮಾಡುವ ಕನಸನ್ನು ಕೈಬಿಡಬೇಕಾಯಿತು. ಒಪ್ಪಂದದ ಪ್ರಕಾರ, ಸಟ್ಲೆಜ್ ನದಿಯ ದಕ್ಷಿಣಕ್ಕಿದ್ದ ಮಾಳ್ವ ಪ್ರಾಂತ್ಯದ ಪಟ್ಟಣಗಳಾದ ಪಟಿಯಾಲ, ಭಟಿಂಡ, ಬರ್ನಾಲ, ರೂಪನಗರ್ ಮುಂತಾದ ನಗರಗಳು ಕ್ರಮೇಣ ಬ್ರಿಟಿಷರ ಕೈವಶವಾಗಿಹೋದವು. 

ಬ್ರಿಟಿಷರೇ ಒಪ್ಪಂದಕ್ಕೆ ಸಹಿ ಹಾಕುವಂತೆ ಮಾಡಿದ ರಣಜಿತ್ ಸಿಂಗನ ಪ್ರತಿಷ್ಠೆ ಅಂದು ಉತ್ತರ ಭಾರತದಲ್ಲಿ ಉತ್ತುಂಗಕ್ಕೇರಿತ್ತು. ಈ ನಡುವೆ ಅಫ್ಘಾನಿಸ್ತಾನದ ಅಹ್ಮದ್ ಶಾಹ್ ಅಬ್ದಾಲಿಯ ಮೊಮ್ಮಗ ಶಾಹ್ ಶೂಜನು ಕಾಶ್ಮೀರದ ರಾಜನ ಬಂಧನದಲ್ಲಿ ದೀರ್ಘಕಾಲದಿಂದ ಇದ್ದನು. ಆತನ ಹಿರಿಯ ಪತ್ನಿಯಾದ ವಫಾ ಬೇಗಮ್, ತನ್ನ ಪತಿಯನ್ನು ಬಂಧನದಿಂದ ಬಿಡಿಸಿಕೊಡುವಂತೆಯೂ ಮತ್ತು ಬಿಡಿಸಿಕೊಟ್ಟಲ್ಲಿ ತನ್ನ ವಶದಲ್ಲಿದ್ದ ಕೊಹಿನೂರ್ ವಜ್ರವನ್ನು ಕೊಡುವುದಾಗಿಯೂ, ರಣಜಿತ್ ಸಿಂಗನಿಗೆ ವಿನಂತಿಸಿಕೊಂಡಳು. ಕೊಹಿನೂರ್ ವಜ್ರವು 18ನೇ ಶತಮಾನದ ಆದಿಭಾಗದಲ್ಲಿ ಈಗಿನ ಆಂಧ್ರ ಪ್ರದೇಶದ ಗಣಿಯೊಂದರಲ್ಲಿ ದೊರೆಯಿತು. ಕಾಲಕ್ರಮೇಣ ಅದು ಪ್ರಬಲರಾದ ಮೊಗಲ್ ರಾಜರ ಕೈಸೇರಿತ್ತು. 1738-39ರ ಸಮಯದಲ್ಲಿ ದಿಲ್ಲಿಯವರೆಗೆ ದಂಡೆತ್ತಿಬಂದಿದ್ದ ಪರ್ಷಿಯನ್ ದೊರೆ ನಾದಿರ್ ಶಾಹ್, ಮೊಗಲ್ ರಾಜನನ್ನು ಸೋಲಿಸಿ, ಅವನ ವಶದಲ್ಲಿದ್ದ ಮಯೂರ ಸಿಂಹಾಸನವನ್ನು ಮತ್ತು ಕೊಹಿನೂರ್ ವಜ್ರವನ್ನು ಹೊತ್ತೊಯ್ದಿದ್ದನು. ಆನಂತರ ಕೊಹಿನೂರ್ ವಜ್ರ ನಾದಿರ್ ಶಹಾನ ಪಟ್ಟಶಿಷ್ಯನಾದ ಅಹ್ಮದ್ ಶಾಹ್ ಅಬ್ದಾಲಿಯ ಕೈಸೇರಿತ್ತು. ಕ್ರಮೇಣ ಅದು ಅಬ್ದಾಲಿಯ ಮೊಮ್ಮಗನ ಪತ್ನಿಯಾದ ವಫಾ ಬೇಗಮಳ ವಶವಾಗಿತ್ತು. ಹಳೆಯ ದ್ವೇಷಗಳನ್ನು ಮರೆತ, ರಣಜಿತ್ ಸಿಂಗ್ ಶಾಹ್ ಶೂಜನನ್ನು ಬಿಡುಗಡೆಗೊಳಿಸಿ, ಆತನನ್ನು ಅವನ ಪತ್ನಿಗೊಪ್ಪಿಸಿದನು. ಕೊಟ್ಟ ಮಾತನ್ನು ನೆರವೇರಿಸಿಕೊಡಲು ಒಪ್ಪದ ವಫಾ ಬೇಗಮಳ ಮೇಲೆ ಒತ್ತಡವನ್ನು ಹೇರಿ ರಣಜಿತ್ ಸಿಂಗ್, ಕೊಹಿನೂರ್ ವಜ್ರವನ್ನು ಪಡೆಯಬೇಕಾಯಿತು. ರಣಜಿತ್ ಸಿಂಗನ ಮರಣದನಂತರ ಅಂತಿಮವಾಗಿ ಸಿಖ್ ಸಾಮ್ರಾಜ್ಯದ ದೊರೆಯಾಗಿದ್ದವನು, ಆತನ ಮಗನಾದ ಹನ್ನೊಂದು ವರ್ಷದ ಬಾಲಕ ದುಲೀಪ್ ಸಿಂಗ್. ಆ ಸಮಯದಲ್ಲಿ ಪಂಜಾಬನ್ನು ವಶಪಡಿಸಿಕೊಂಡ ಬ್ರಿಟಿಷರು ಕೊಹಿನೂರ್ ವಜ್ರವನ್ನೂ ಲಪಟಾಯಿಸಿದ್ದು ಈಗ ಇತಿಹಾಸ. 

ಪುರಾತನ ಭರತ ಖಂಡಕ್ಕೆ ಸೇರಿದ ಅಟ್ಟೋಕ್ ಪಟ್ಟಣವನ್ನು, ಹನ್ನೊಂದನೇ ಶತಮಾನದ ಆದಿಕಾಲದಲ್ಲಿ ಅಫ್ಘಾನಿಸ್ತಾನದ ಮೊಹಮ್ಮದ್ ಘಜ್ನಿ ತನ್ನ ವಶಕ್ಕೆ ಪಡೆದುಕೊಂಡಿದ್ದನು. ಹತ್ತೊಂಬತ್ತನೇ ಶತಮಾನದ ಆದಿಕಾಲದವರೆಗೆ ಅಟ್ಟೋಕ್ ಪಟ್ಟಣ ಅಫ್ಘಾನ್ನರ ವಶದಲ್ಲೇ ಇತ್ತು. ಅಟ್ಟೋಕ್ ಪಟ್ಟಣವನ್ನು ಅಫ್ಘಾನ್ನರಿಂದ ವಶಪಡಿಸಿಕೊಂಡ ಕೀರ್ತಿ ಮಹಾರಾಜ ರಣಜಿತ್ ಸಿಂಗನಿಗೆ ಸಲ್ಲುತ್ತದೆ. 1813ರಲ್ಲಿ ರಣಜಿತ್ ಸಿಂಗನ ಮುಖ್ಯ ಸೇನಾಧಿಕಾರಿ ಮೋಹಕಮ್ ಚಂದನ ನೇತೃತ್ವದಲ್ಲಿ ನಡೆದ ಯುದ್ಧದಲ್ಲಿ ಅಟ್ಟೋಕ್ ಪಟ್ಟಣವನ್ನು ಗೆದ್ದುಕೊಂಡದ್ದು, ಮಹಾರಾಜನಿಗೆ ಅಫ್ಘಾನಿಸ್ತಾನದ ವಿರುದ್ಧದ ಮೊದಲ ವಿಜಯವಾಗಿತ್ತು.

ಪಂಜಾಬ್ ಸಾಮ್ರಾಜ್ಯವನ್ನು ಸುಮಾರು ನಲವತ್ತು ವರ್ಷಗಳ ಸಮರ್ಥವಾಗಿ ಆಳಿ, ಸಿಖ್ಖರ ಸುವರ್ಣಯುಗದ ಅಧ್ಯಾಯವನ್ನು ಬರೆದ ಮಹಾರಾಜಾ ರಣಜಿತ್ ಸಿಂಗ್, 1839ರ ಜೂನ್ 27ರಂದು ಅನಾರೋಗ್ಯದ ಕಾರಣ ಮರಣಹೊಂದಿದನು. ರಣಜಿತ್ ಸಿಂಗನ ಅಂತಿಮ ಸಂಸ್ಕಾರವನ್ನು ಸಿಖ್, ಹಿಂದೂ ಮತ್ತು ಇಸ್ಲಾಂ ಧರ್ಮಗಳ ಪ್ರಾರ್ಥನೆಗಳೊಂದಿಗೆ, ಲಾಹೋರಿನಲ್ಲಿ ನೆರವೇರಿಸಲಾಯಿತು. 

ಭರತ ಖಂಡದ ಸಂಪೂರ್ಣ ವಾಯುವ್ಯ ಭಾಗದಲ್ಲಿ ತನ್ನ ಸಿಖ್ ಸಾಮ್ರಾಜ್ಯವನ್ನು ಕಟ್ಟಿ ಆಳಿದ ಮಹಾರಾಜಾ ರಣಜಿತ್ ಸಿಂಗ್, ಸ್ವಯಂ ಸದಾ ಯುದ್ಧನಿರತ ಸೈನಿಕನಾಗಿದ್ದನು. ಆ ಭಾಗದಲ್ಲಿ  ಮುಸ್ಲಿಮರು ಮತ್ತು ಹಿಂದುಗಳನಂತರದ ಜನಾಂಗವಾದ ಸಿಖ್ಖರ ಸಾಮ್ರಾಜ್ಯವನ್ನು ಕಟ್ಟಿ ಬೆಳಸಿದ ರಣಜಿತ್ ಸಿಂಗ್, ಸಾಮಾನ್ಯ ಮೈಕಟ್ಟಿನ ವ್ಯಕ್ತಿಯಾಗಿದ್ದನು. ಬಾಲ್ಯದಲ್ಲೇ ತನ್ನ ಎಡಗಣ್ಣನ್ನು  ಕಳೆದುಕೊಂಡದ್ದನ್ನು ಅವನು ನ್ಯೂನ್ಯತೆಯೆಂದು ಭಾವಿಸಲೇ ಇಲ್ಲ. ತನ್ನ ಸಾಹಸ ಪ್ರವೃತ್ತಿ ಮತ್ತು ಛಲಗಳಿಂದ ತನ್ನ ಮಹತ್ವಾಕಾಂಕ್ಷೆಯನ್ನು ಸಾಕಾರಗಳಿಸಿಕೊಂಡ ರಣಜಿತ್ ಸಿಂಗನನ್ನು ಇತಿಹಾಸ 'ಪಂಜಾಬಿನ ಸಿಂಹ'ನೆಂದೇ ಗುರುತಿಸಿದೆ. ಸರ್ವಧರ್ಮ ಸಮಭಾವಗಳ ಸಾಕಾರಮೂರ್ತಿಯಾದ ರಣಜಿತ್ ಸಿಂಗ್, ಎಲ್ಲಾ ಧರ್ಮಗಳನ್ನು ಸಮನಾಗಿ ನೋಡಲೆಂದೇ, ಪರಮಾತ್ಮ ತನಗೆ ಒಂದೇ ಕಣ್ಣನ್ನು ಉಳಿಸಿದ್ದಾನೆ ಎಂದು ಹೇಳುತ್ತಿದ್ದನು. 

 


 








 









  

 






 

Sunday, 4 May 2025

ರಾಮಾಯಣದ ರಹಸ್ಯಗಳು - ಹರಿಕಥೆ - 28-04-25 - ರಾಗಿಗುಡ್ಡ

 ರಾಮಾಯಣದ ರಹಸ್ಯಗಳು - ಹರಿಕಥೆ  - ರಾಗಿಗುಡ್ಡ 

ಗೌರವಾನ್ವಿತ ಸಭಿಕರಿಗೆಲ್ಲಾ ನಮ್ಮ ಸವಿನಯ ನಮಸ್ಕಾರಗಳು.  

'ರಾಮಾಯಣದ ರಹಸ್ಯಗಳು' ಎಂಬ ಇಂದಿನ ಹರಿಕಥೆಗೆ ತಮೆಲ್ಲರಿಗೂ ಸುಸ್ವಾಗತ. ನಮ್ಮಗಳ  ಇಂದಿನ ಪ್ರಯತ್ನಕ್ಕೆ ತಮ್ಮೆಲ್ಲರ  ಆಶೀರ್ವಾದ ಅತಿ ಮುಖ್ಯವಾದದ್ದು. 

ಹರಿಕಥೆಯ ಶುಭಾರಂಭವನ್ನು ಶ್ರೀ ರಾಮನ ಸ್ಮರಣೆಯೊಂದಿಗೆ ಮಾಡೋಣ. 

ಜಯ ಜಾನಕೀ ನಾಥ........ (ಪೂರ್ತಿ ಹಾಡು)

---------------------------------------------------------------------------

ಸಭಿಕರೇ ---------------

ಕೆಲವು ಕುಹಕಿಗಳು ಪ್ರಶ್ನೆ ಮಾಡ್ತಾರೆ! ಶ್ರೀ ರಾಮಚಂದ್ರನ  ಅತಿಶಯ ಮಹಿಮೆಗಳೆಲ್ಲಾ ಬರೀ ಸುಳ್ಳು ಕಣ್ರೀ ಅಂತಾರೆ........ ! ಶ್ರೀ ರಾಮ ಅಂದ್ರೆ ಬರೀ ಕಲ್ಲು ಕಣ್ರೀ ಅಂತಾರೆ.....!! ರಾಮಾಯಣ ನಡೆದಿದ್ದೇ ಸುಳ್ಳು ಅಂತಾರೆ!!!  ಸಭಿಕರುಗಳೇ......ಸ್ವಲ್ಪ ವಿಚಾರ ಮಾಡೋಣ. 

ಮೊನ್ನೆ ನಮ್ಮ ಉತ್ತರ ಪ್ರದೇಶದ ಪ್ರಯಾಗ್ ರಾಜಿನಲ್ಲಿ 144 ವರ್ಷಗಳನಂತರ  ಮಹಾ ಕುಂಭಮೇಳ ನಡೆಯಿತು.  ಕುಂಭಮೇಳ ನಡೆದ 46 ದಿನಗಳಲ್ಲಿ 66 ಕೋಟಿಗಳಷ್ಟು ಭಕ್ತರು ಬಂದು ಮಂಗಳ ಸ್ನಾನವನ್ನು ಮಾಡಿದ್ದು ಒಂದು ಪವಾಡವೇ ಸರಿ. ಇಡೀ ಪ್ರಪಂಚದಲ್ಲೇ ಎಲ್ಲೂ ಇಷ್ಟೊಂದು ಭಾರಿ ಸಂಖ್ಯೆಯಲ್ಲಿ ಜನರುಗಳು ಸೇರಿದ ಉತ್ಸವ  ನಡೆದಿಲ್ಲ. ಹಾಗಾದರೂ ಯಾವುದೇ ದುರ್ಘಟನೆ ನಡೆಯದೆ, ಸಮಾರಂಭ ಯಶಸ್ವಿಯಾಗಿ ನಡೆದಿದ್ದು ಶ್ರೀ ರಾಮಚಂದ್ರನ ಮಹಿಮೆಯೇ ಸರಿ.  

೧೪೦ ಕೋಟಿಗಳಷ್ಟು ಭಾರಿ ಜನಸಂಖ್ಯೆಯುಳ್ಳ ವಿಶ್ವದ ಬೃಹತ್ ರಾಷ್ಟ್ರ ನಮ್ಮ ಭಾರತ. ನಮ್ಮ ದೇಶ ಹಲವು ಸವಾಲುಗಳನ್ನು ಎದುರಿಸುತ್ತಿದೆ.  ಜೊತೆಗೆ ಹೊರಗಡೆಯ ಮತ್ತು ಒಳಗಡೆಯ ಶತ್ರುಗಳ ಕಾಟ ಬೇರೆ. ಹಾಗಾದರೂ, ಆರ್ಥಿಕವಾಗಿ ಅತ್ಯಂತ ವೇಗವಾಗಿ ಮುನ್ನಡೆಯುತ್ತಿರುವ ರಾಷ್ಟ್ರವೆಂದರೆ ನಮ್ಮ ಭಾರತ. ನಮ್ಮ ನೆರೆ ರಾಷ್ಟ್ರಗಳು ಹಸಿವು, ಹಿಂಸಾಚಾರಗಳಿಂದ ಬಳಲುತ್ತಿರುವಾಗ, ನಮ್ಮ ದೇಶದಲ್ಲಿ ಸುಭಿಕ್ಷ ಹಾಗೂ ಶಾಂತಿ ನೆಲಸಿದೆ. ಇದೆಲ್ಲ ವೆಂಕಟೇಶ್ವರರ ಆಶೀರ್ವಾದದಿಂದಲೇ ನಡೆಯುತ್ತಿದೆ ಎಂಬುದು ನಮ್ಮೆಲ್ಲರ ಅಚಲವಾದ ನಂಬಿಕೆ. 

ಐದು  ವರ್ಷಗಳ ಹಿಂದೆ  ಇಡೀ ಪ್ರಪಂಚವನ್ನೇ ಕೋವಿಡ್ ಮಹಾಮಾರಿ ಕಾಡಿತ್ತು. ಅಮೇರಿಕಾ, ಚೀನಾದಂತ ಬಲಿಷ್ಠ ರಾಷ್ಟ್ರಗಳೇ ತತ್ತರಿಸಿ ಹೋಗಿದ್ವು.  ಆದರೂ ನಮ್ಮ ಭಾರತ ದೇಶ ಮಾತ್ರ ಕೋವಿಡ್ ರೋಗವನ್ನು ಸುಲಭವಾಗೇ  ಗೆದ್ದಿತು. ಏಕಪ್ಪಾ ಅಂದ್ರೆ, ಶ್ರೀ ರಾಮಚಂದ್ರನ  ಆಶೀರ್ವಾದ ನಮ್ಮ ದೇಶದ ಮೇಲಿತ್ತು. 

ಬೋಲೋ ಶ್ರೀ ರಾಮಚಂದ್ರ ಕಿ      ಜೈ 

ಪವನ ಪುತ್ರ ಹನುಮನ ಕಿ              ಜೈ 

ಅಂಜನಿ ಪುತ್ರ ಹನುಮನಕಿ            ಜೈ 

____________________________________________________________

ಇಂದಿನ ನಮ್ಮ ಹರಿಕಥಾ ವಿಷಯ ಬರೋಣ .  "ರಾಮಾಯಣದ ರಹಸ್ಯಗಳು", ಇಂದಿನ ನಮ್ಮ ಹರಿಕಥಾ ವಿಷಯ. 

ರಾಮಾಯಣ ನಿಮಗೆಲ್ಲರಿಗೂ ಚೆನ್ನಾಗೆ ಗೊತ್ತು. ಅಂತಹ ರಾಮಾಯಣದಲ್ಲಿ ರಹಸ್ಯಗಳು ಇರಬಹುದೇ? 

ಸಭಿಕರೆ, ಪ್ರಪಂಚದ ಎಲ್ಲ ಭಾಷೆಗಳಲ್ಲೂ ರಾಮಾಯಣ ಇದೆ. 

ಎಲ್ಲವುದಕ್ಕೂ ಮೂಲ ನಮ್ಮ ಸಂಸ್ಕೃತದ ವಾಲ್ಮೀಕಿ ರಾಮಾಯಣ. ಕನ್ನಡದಲ್ಲಿ ತೊರವೆ ರಾಮಾಯಣ, ತಮಿಳಿನಲ್ಲಿ ಕಂಬ ರಾಮಾಯಣ, ತೆಲುಗಿನಲ್ಲಿ ರಂಗನಾಥ ರಾಮಾಯಣ, ಮಲಯಾಳಂನಲ್ಲಿ ಅಧ್ಯಾತ್ಮ ರಾಮಾಯಣ, ಹಿಂದಿಯಲ್ಲಿ ತುಳಸಿ ರಾಮಾಯಣ, ಬೆಂಗಾಲಿಯಲ್ಲಿ ಕೃತ್ತಿವಾಸ ರಾಮಾಯಣ, ಮರಾಠಿಯಲ್ಲಿ ಏಕನಾಥರ  ರಾಮಾಯಣ, ಇಂಗ್ಲಿಷ್ನಲ್ಲಿ ಟಿ.ಎಚ್. ಗ್ರಿಫಿತ್ ರ ರಾಮಾಯಣ--------------- ಹೀಗೆ ಪ್ರಪಂಚದ ಎಲ್ಲಾ ಭಾಷೆಗಳಲ್ಲಿ ರಾಮಾಯಣ ಇದೆ. 

ಹಾಗಾಗೇ 

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ

ಎಂದು ನಮ್ಮ ಕವಿ ಕುಮಾರ ವ್ಯಾಸ ಹಾಡಿದ್ದಾನೆ. 

ಬೇರೆ ಬೇರೆ ಕವಿಗಳು ಬೇರೆ ಬೇರೆ ಘಟನೆಗಳನ್ನು ಕಂಡು ತಮ್ಮ ರಾಮಾಯಣದಲ್ಲಿ ಬರೆದಿದ್ದಾರೆ. ಹಾಗಾಗಿ ಎಲ್ಲ ಘಟನೆಗಳ ಪರಿಚಯ ಎಲ್ಲಾ ಶ್ರೋತೃಗಳಿಗೂ ಇರುವುದಿಲ್ಲ. ನಮಗೆ ಪರಿಚಯವಿರದ ಘಟನೆಗಳೇ ನಮ್ಮ ಪಾಲಿಗೆ ರಹಸ್ಯಗಳು.  ಅಂತಹ ರಾಮಾಯಣದ ವಿವಿಧ ರಹಸ್ಯಗಳನ್ನು ತಮ್ಮ ಮುಂದೆ ಪ್ರಸ್ತುತಪಡಿಸುವುದೇ ಇಂದಿನ ಹರಿಕಥೆಯ ಉದ್ದೇಶ. 

ರಾಮಾಯಣ ಒಂದು ಚಿನ್ನದ ಗಣಿ. ಅದನ್ನು ಶೋಧಿಸುತ್ತಾ ಹೋದಷ್ಟೂ ನಮಗೆ ಹೊಸ ಹೊಸ ರತ್ನಗಳು ಅಂದರೆ ರಹಸ್ಯಗಳು ದೊರಕುತ್ತಾಹೋಗುತ್ತವೆ. 

-----------------------------------------------------------------------------------------------------------------------------

ಈಗ ಮತ್ತೊಮ್ಮೆ ಶ್ರೀ ರಾಮನ ಸ್ಮರಣೆ ಮಾಡೋಣ. 

ರಾಮ ರಾಮ ರಾಮ ರಾಮ ರಾಮ ಎನ್ನಿರೋ-----------

---------------------------------------------------------------------------------------------------------------

ಇಡೀ ಪ್ರಪಂಚಕ್ಕೆ ಆದಿ ಕವಿ ವಾಲ್ಮೀಕಿಗಳು, ಆದಿ ಕಾವ್ಯ ಶ್ರೀಮದ್ರಾಮಾಯಣ. ಬೇಡರಾಗಿ ಜನಿಸಿದ ವಾಲ್ಮೀಕಿಗಳಿಗೆ ರಾಮಾಯಣ ಬರೆಯಲು ಪ್ರೇರಣೆ ದೊರೆತದ್ದು ಹೇಗೆ? ಇದು ರಾಮಾಯಣದ ಮತ್ತೊಂದು ರಹಸ್ಯ. 

ನಾರದರ ಬೋಧನೆಯಿಂದ ಜ್ಞಾನವನ್ನು ಪಡೆದು ಋಷಿಗಳಾದ ವಾಲ್ಮೀಕಿಗಳು ಒಂದು ಬೆಳಗ್ಗೆ ತಮ್ಮ ಪ್ರಿಯ ಶಿಷ್ಯ ಭರದ್ವಾಜನೊಡನೆ ಬೆಳಗಿನ ಮಂಗಳ ಸ್ನಾನಕ್ಕಾಗಿ ತಮಸಾ ನದಿಯ ದಡಕ್ಕೆ ತೆರಳುತ್ತಾರೆ. ಪೂರ್ವದಲ್ಲಿ ಸೂರ್ಯ ಉದಯಿಸುತ್ತ ಇರುವ ನೋಟ ಮನೋಹರವಾಗಿರುತ್ತೆ. ನದಿಯ ತೀರದಲ್ಲಿ ಎರಡು ಕ್ರೌನ್ಚ ಪಕ್ಷಿಗಳು (ಕ್ರೌನ್ಚ ಪಕ್ಷಿ ಎಂದರೆ ಕೆಂಪು ಕತ್ತುಳ್ಳ ಕೊಕ್ಕರೆ ಎಂದಿಟ್ಟುಕೊಳ್ಳಿ), ಅದರಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಪಕ್ಷಿಗಳು ಪ್ರಣಯದಲ್ಲಿ ತೊಡಗಿರುತ್ತವೆ. ಕವಿಹೃದಯದ ಕೋಮಲ ಮನಸ್ಸಿನ ವಾಲ್ಮೀಕಿಗಳು ಕ್ರೌನ್ಚ ಪಕ್ಷಿಗಳ ಪ್ರಣಯವನ್ನು ಬಹಳ ಕುತೂಹಲದಿಂದ ನೋಡುತ್ತಿರುತ್ತಾರೆ. ಆ ಸಮಯದಲ್ಲಿ ಇದ್ದಕಿದ್ದಂತೆ ದೂರದ ಮರದ ಮರೆಯಿಂದ ಬೇಡನೊಬ್ಬ ತೀಕ್ಷ್ಣವಾದ ಬಾಣವೊಂದನ್ನು ಗಂಡು ಕ್ರೌನ್ಚ ಪಕ್ಷಿಯ ಕೊರಳಿಗೆ ಗುರಿಯಿಟ್ಟು ಬಿಡುತ್ತಾನೆ. ಬಾಣ ಕೊರಳಿಗೆ ಬೀಳುತ್ತಲೇ, ಪಕ್ಷಿಯ ಕೊರಳು ತುಂಡಾಗಿ ಗಂಡು ಪಕ್ಷಿ ಸಾಯುತ್ತದೆ. ಸತ್ತ ಗಂಡು ಪಕ್ಷಿಯನ್ನು ನೋಡಿ ಹೆಣ್ಣು ಪಕ್ಷಿ ದುಃಖಿಸುತ್ತಾ ರೋದಿಸಲಾರಂಭಿಸುತ್ತದೆ. ಆ ದುಃಖದ ದೃಶ್ಯವನ್ನು ನೋಡಿ ವಾಲ್ಮೀಕಿಗಳ ಸಿಟ್ಟು ನೆತ್ತಿಗೇರಿರುತ್ತದೆ. ಕೋಪದಲ್ಲಿ ಅವರು ಬೇಡನಿಗೆ ಶಪಿಸುತ್ತಾ.----------

ಮಾ ನಿಷಾದ  ಪ್ರತಿಷ್ಠಾ ತ್ವ೦ 

ಅಗಮಃ ಶಾಶ್ವತೀ:  ಸಮಾ: 

ಯತ್ ಕ್ರೌನ್ಚಮಿಥುನಾದೇಕಂ   

ಅವಧೀ: ಕಾಮಮೋಹಿತಃ 

ಎಂದು ಜೋರಾಗಿ ಹೇಳುತ್ತಾರೆ. ವಾಲ್ಮೀಕಿಗಳ ಶಾಪದ ಅರ್ಥವೇನೆಂದರೆ, 'ಓ ಬೇಡ, ಪ್ರಣಯದಲ್ಲಿದ ಕ್ರೌನ್ಚ ಪಕ್ಷಿಯನ್ನು ಕೊಂದಿರುವ ನಿನಗೆ, ಜೀವನದಲ್ಲಿ ಶಾಂತಿ ಎನ್ನುವುದು ಎಂದೆಂದಿಗೂ ಇಲ್ಲದಿರಲಿ' ಎಂದು. 

ಕ್ರೌನ್ಚ ಪಕ್ಷಿಗಳ ಗೋಳನ್ನು ನೋಡಿ ಮನಕಲಕಿಹೋದ ವಾಲ್ಮೀಕಿಗಳು, ಮನಸ್ಸಿಲ್ಲದಿದ್ದರೂ ಸ್ನಾನವನ್ನು ಮಾಡಿ ತಮ್ಮ ನಿತ್ಯ ಕರ್ಮಗಳನ್ನು ಬೇಗನೆ ಮುಗಿಸಿ, ತಮ್ಮ ಶಿಷ್ಯ ಭರದ್ವಾಜನೊಡನೆ ತಮ್ಮ ಆಶ್ರಮವನ್ನು ಸೇರುತ್ತಾರೆ. ಅವರ ಮನಸಿನಲ್ಲಿ ಬೇರೆ ಬೇರೆ ರೀತಿಯ ಯೋಚನೆಗಳು ಹಾದು ಹೋಗುತ್ತಿರುತ್ತದೆ. "ಆ ಬೇಡನೇಕೆ ಕ್ರೌನ್ಚ ಪಕ್ಷಿಯನ್ನು ಕೊಂದ? ಸನ್ಯಾಸಿಯಾದ ನಾನೇಕೆ ಕೋಪಕ್ಕೊಳಗಾದೆ? ನಾನೇಕೆ ಆ ಬೇಡನನ್ನು ಶಪಿಸಿದೆ? ಸ್ವಲ್ಪ ಕಾಲದ ಹಿಂದೆ ತಾನೂ ಬೇಡನಾಗಿ, ಪ್ರಾಣಿಗಳ ಬೇಟೆಯನ್ನಾಡುತ್ತಿದ್ದೆನಲ್ಲವೇ? ಹೊಟ್ಟೆ ಪಾಡಿಗೆ ಬೇಟೆಯಾಡಿದ ಆ ಬೇಡನದೆನು ತಪ್ಪು?"

ಆ ಸಮಯದಲ್ಲಿ ವಾಲ್ಮೀಕಿಗಳ ಮುಂದೆ ಬ್ರಹ್ಮದೇವರು ಪ್ರತ್ಯಕ್ಷಗೊಳ್ಳುತ್ತಾರೆ. ವಾಲ್ಮೀಕಿಗಳನ್ನು ಸಂಭೋದಿಸುತ್ತಾ, 'ಓ ವಾಲ್ಮೀಕಿ, ಏಕೆ ದುಃಖದಿಂದ ಕುಳಿತಿರುವೆ? ಇಂದು ಬೆಳಗ್ಗೆ ನಿನ್ನ ಬಾಯಿಂದ ಅಯಾಚಿತವಾಗಿ, ಅಂದರೆ ತಾನೇ ತಾನಾಗಿ ಹೋರಾಟ ಶಬ್ದಗಳು ಬೇಡನಿಗಿತ್ತ ಶಾಪವಲ್ಲ, ಅದು ಶ್ರೀಮನ್ನಾರಾಯಣನ ಸ್ತುತಿ" ಎನ್ನುತ್ತಾರೆ. ಆಶ್ಚರ್ಯಗೊಂಡ  ವಾಲ್ಮೀಕಿಗಳು ಬ್ರಹ್ಮದೇವರಿಗೆ ವಂದಿಸಿ, 'ಬ್ರಹ್ಮದೇವರೇ, ಅದು ಹೇಗೆ ಶ್ರೀಮನ್ನಾರಾಯಣನ ಸ್ತುತಿಯಾಗುತ್ತದೆ?' ಎಂದು ಕೇಳುತ್ತಾರೆ. 

ಶ್ರೋತೃಗಳೇ ನೋಡಿ, ಸಂಸ್ಕೃತ ಭಾಷೆಯ ಆಪೂರ್ವ ಶಕ್ತಿಯೇ ಅಂತಹದ್ದು. ಒಂದೇ ಪದಕ್ಕೆ ಹಲವಾರು ಅರ್ಥಗಳು ಇಲ್ಲುಂಟು.  ಮಾ ನಿಷಾದ ಎಂದರೆ ಏನರ್ಥ? 'ಮಾ' ಅಂದರೆ  'ಆಗದಿರಲಿ' ಎಂದರ್ಥ. ನಿಷಾದ ಎಂದರೆ ಬೇಟೆಯಾಡುವ ಬೇಡ ಎಂದರ್ಥ. ಅದೇ ಪದಗಳಿಗೆ ಬೇರೆ ಅರ್ಥಗಳು ಉಂಟು. ಬ್ರಹ್ಮದೇವರು ವಾಲ್ಮೀಕಿಗಳಿಗೆ ವಿವರಿಸುತ್ತಾ, 'ಮಾ ಎಂದರೆ ಮಹಾತಾಯೀ ಲಕ್ಷ್ಮಿ ಎಂದರ್ಥ. ನಿಷಾದ ಎಂದರೆ ವಾಸಸ್ಥಾನ. ಲಕ್ಷ್ಮಿಯ ವಾಸಸ್ಥಾನ ಎಂದರೆ ಶ್ರೀಮನ್ನಾರಾಯಣ ಎಂದರ್ಥ. ಲಕ್ಷ್ಮಿ ವಾಸಸ್ಥಾನ ಶ್ರೀಮನ್ನಾರಾಯಣನ ಹೃದಯ ತಾನೇ? ಹಾಗಾಗಿ ನಿನ್ನ ಬೆಳಗಿನ ಮಾತುಗಳ ಅರ್ಥವೇ ಬೇರೆ. ಕಾಮಮೋಹಿತನಾದ ರಾವಣನನ್ನು ಕೊಂದು, ಲೋಕಕಲ್ಯಾಣವನ್ನು ಮಾಡಿರುವ ಶ್ರೀಮನ್ನಾರಾಯಣನೇ, ನಿನ್ನ ನಾಮವು ಬ್ರಹ್ಮಾ೦ಡದಲ್ಲಿ ಶಾಶ್ವತವಾಗಿ ಉಳಿಯಲಿ ಎಂದರ್ಥ. 

ವಾಲ್ಮೀಕಿ,  ನೀನಾಡಿದ ಮಾತುಗಳು ಬರಿ ಮಾತುಗಳಲ್ಲ, ಅದೊಂದು ಉತ್ತಮ ಛ೦ದಸ್ಸಿನಲ್ಲಿರುವ   ಶ್ಲೋಕ ನೋಡು. 

ಮಾ ನಿಷಾದ  ಪ್ರತಿಷ್ಠಾ ತ್ವ೦ 

ಅಗಮಃ ಶಾಶ್ವತೀ:  ಸಮಾ: 

ಯತ್ ಕ್ರೌನ್ಚಮಿಥುನಾದೇಕಂ   

ಅವಧೀ: ಕಾಮಮೋಹಿತಃ 

ನಿನ್ನ ಮಾತುಗಳಲ್ಲಿ ನಾಲ್ಕು ಸಾಲುಗಳಿವೆ.  ಪ್ರತಿ ಸಾಲಿನಲ್ಲೂ ಎಂಟು ಅಕ್ಷರಗಳಿವೆ. ಕಾವ್ಯಕ್ಕೆ ಇಂದೊಂದು ಸುಂದರ ಛಂದಸ್ಸು. ಇದನ್ನು ಇನ್ನು ಮುಂದೆ 'ಅನುಷ್ಟಪ್ ಛಂದಸ್ಸು' ಎಂದು ಕರೆಯೋಣ. ಇದೆ ಛಂದಸ್ಸಿನಲ್ಲಿ ವಾಲ್ಮೀಕಿ ನೀನು ಶ್ರೀಮದ್ರಾಮಯಣದ ಕಾವ್ಯವನ್ನು ರಚಿಸಿ ಲೋಕಕಲ್ಯಾಣವನ್ನುಂಟುಮಾಡು' ಎನ್ನುತ್ತಾರೆ ಬ್ರಹ್ಮದೇವರು. 

ಬ್ರಹ್ಮದೇವರಿಂದ ಹೊಸ ಪ್ರೇರೇಪಣೆಯನ್ನು ಪಡೆದ ವಾಲ್ಮೀಕಿಗಳು, ತಮ್ಮ ಬಾಯಿಂದ ಅಯಾಚಿತವಾಗಿ ಹೋರಾಟ ಅನುಷ್ಟಪ್ ಛಂದಸ್ಸಿನಲ್ಲೇ ರಾಮಾಯಣ ರಚನೆಯನ್ನು ಮಾಡಿರುವುದು ಈಗ ಇತಿಹಾಸ. ವಾಲ್ಮೀಕಿಗಳಿಂದ ರಚಿತವಾದ ಅನುಷ್ಟಪ್ ಛಂದಸ್ಸು ಈಗ ಇಡೀ ಸಂಸ್ಕೃತ ಕಾವ್ಯಲೋಕಕ್ಕೆ ಅಡಿಪಾಯವಾಗಿರುವುದೂ ಇತಿಹಾಸ. ಮುಂದೆ ಬಂದ  ವ್ಯಾಸರು ಮಹಾಭಾರತವನ್ನು ರಚಿಸಿದ್ದೂ ಅನುಷ್ಟಪ್ ಛಂದಸ್ಸಿನಲ್ಲೇ.

ಇದು ರಾಮಾಯಣ ಬರೆಯಲು ವಾಲ್ಮೀಕಿಗಳಿಗೆ ದೊರೆತ ಪ್ರೇರಣೆಯ ಕಥೆ. 

----------------------------------------------------------------------------------------------------------------------------

 ಶ್ರೋತೃಗಳೇ--------

ಅಂದ ಹಾಗೆ ರಾಮಾಯಣ ನಡೆದ್ದದ್ದು ಯಾವಾಗ? ಇದೇ ಒಂದು ದೊಡ್ಡ ರಹಸ್ಯದ ವಿಷಯ. ಆ ರಹಸ್ಯವನೀಗ ಪರಿಶೀಲಿಸೋಣ. 

ರಾಮನ ಜನನ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯ ಮಧ್ಯಾನ್ಹ ೧ ಘಂಟೆಗಾಯ್ತು ಅಂತ ವಾಲ್ಮೀಕಿಗಳು ರಾಮಾಯಣದಲ್ಲಿ ಬರೆದಿದ್ದರೆ. ರಾಮನ ಜನ್ಮ ಕುಂಡಲಿಯನ್ನೇ ಬರೆದಿರುವ ವಾಲ್ಮೀಕಿಗಳು ರಾಮ ಜನನದ ಸಮಯದಲ್ಲಿದ್ದ ಗ್ರಹಕೂಟಗಳ ಸ್ಥಾನವನ್ನು ಬರೆದಿಟ್ಟಿದ್ದಾರೆ. ಇಂದಿನ ವಿಜ್ಞಾನಿಗಳು ತಮ್ಮ ಪ್ಲಾನೆಟ್ ಸಾಫ್ಟ್ವೇರ್ ನಲ್ಲಿ  ಶೋಧಿಸಿದಾಗ, ವಾಲ್ಮೀಕಿಗಳು ದಾಖಲಿಸಿರುವ ಗ್ರಹಸ್ಥಾನಗಳು ಕ್ರಿಸ್ತ ಪೂರ್ವ ೫೧೧೪ರ ಏಪ್ರಿಲ್ ೧೦ರಂದು ಇತ್ತು ಎಂದು ಒಪ್ಪಿಕೊಳ್ಳುತ್ತಾರೆ. ಕ್ರಿಸ್ತ ಪೂರ್ವದ ೫೦೦೦ ವರ್ಷ ಪ್ಲಸ್ ಕ್ರಿಸ್ತ ಶಕದ ಇಂದಿನ ೨೦೦೦ ವರ್ಷ……….ಅಂದರೆ ರಾಮಾಯಣ ನಡೆದದ್ದು ಇಂದಿಗೆ ಸುಮಾರು ಏಳು ಸಾವಿರ ವರ್ಷಗಳ ಹಿಂದೆ. 

ಆದರೂ ವಿತಂಡ ವಾದಿಗಳು ಇಷ್ಟೇ ಆಧಾರ ಸಾಲದು ಅಂತ ತಕರಾರು ಮಾಡ್ತಾರೆ. ಅಂತಹವರಿಗೆ ನಾನ್ ಹೇಳೋದೆನಂದ್ರೆ, ರಾಮ ಸೇತು ಎನ್ನೋದು ಈಗಲೂ ಇದೆ. ಅದು ಶಿಥಿಲವಾಗಿ ಸಾಕಷ್ಟು ಹಾಳಾಗಿರಬಹುದು. ಆದರೂ  ನಮ್ಮ ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ತುದಿಯವರೆಗೆ ಇರುವ ರಾಮಸೇತುವನ್ನು ಬ್ರಿಟಿಷರು ಆಡಮ್'ಸ್ ಬ್ರಿಡ್ಜ್ ಎಂದು ಕರೆದರು. ಕಾರ್ಬನ್ ಡೇಟಿಂಗ್ ಅನ್ನೋ ತಂತ್ರದ ಪ್ರಕಾರ ರಾಮಸೇತುಗೆ ೭೦೦೦ ವರ್ಷಗಳಾಗಿರಬಹುದು ಎಂಬುದನ್ನು ಇಂದಿನ ವಿಜ್ಞಾನಿಗಳು ಒಪ್ಪುತ್ತಾರೆ. ರಾಮಾಯಣ ನಡೆದ್ದದ್ದು ನಿಜ, ರಾಮಾವತಾರವಾಗಿದ್ದು ೭೦೦೦ ವರ್ಷಗಳ ಹಿಂದೆ ಎಂಬುದಕ್ಕೆ ರಾಮ ಸೇತು ಮತ್ತೊಂದು ಆಧಾರ. 

---------------------------------------------------------------------------------------------------

೭೦೦೦ ವರ್ಷದ ಹಿಂದೆ ನಮ್ಮನ್ನೆಲ್ಲಾ ಕಾಪಾಡಲು ಭೂಮಿಯ ಮೇಲೆ ಅವತರಿಸಿದ ಶ್ರೀ ರಾಮನನ್ನು ಮೈಸೂರು ವಾಸುದೇವಾಚಾರ್ಯರು  ಹೇಗೆ ಸ್ವಾಗತಿಸಿದರು ಎಂಬುದನ್ನು ಈಗ ಕೇಳೋಣ. 

ರಾ ರಾ ರಾಜೀವಲೋಚನಾ ರಾಮ-----------(ಪೂರ್ತಿ ಹಾಡು) 

------------------------------------------------------------------------------------------------------



-------------------------------------------------------------------------------------------------


ಓಂ ಭೂರ್ಭುವಸ್ಸುವಃ |
ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್ ||

ಶ್ರೋತೃಗಳೇ, ನಾನೀಗ ಪಠಿಸಿದ್ದು ಗಾಯತ್ರಿ ಮಂತ್ರ. ರಾಮಾಯಣದ ಮಧ್ಯ ಗಾಯತ್ರಿ ಮಂತ್ರ ಏಕೆ ಬಂತು? ಗಾಯತ್ರಿ ಮಂತ್ರಕ್ಕೂ, ರಾಮಾಯಣಕ್ಕೂ ಏನು ಸಂಬಂಧ? ರಾಮಾಯಣ ಮುಂಚೆ ಬಂತೋ? ಅಥವಾ ಗಾಯತ್ರಿ ಮಂತ್ರ ಮುಂಚೆ ಬಂತೋ? ಎಂಬ ಅನುಮಾನಗಳು ನಿಮ್ಮಿಗಳನೀಗ ಕಾಡುತ್ತಿರಬಹುದು. 

ಗಾಯತ್ರಿ ಮಂತ್ರಕ್ಕೂ ರಾಮಾಯಣಕ್ಕೂ ಇರುವ ಸಂಬಂಧವೇ ರಾಮಾಯಣದ ಮತ್ತೊಂದು ರಹಸ್ಯ. 

ಗಾಯತ್ರಿ ಮಂತ್ರ ರಾಮಾಯಣಕ್ಕಿಂತ ಪ್ರಾಚೀನವಾದುದು. ಆತ್ಮಲಿಂಗವನ್ನು ಪ್ರಮೇಶ್ವರನಿಂದ ಪಡೆದುಕೊಂಡ ರಾವಣ, ಲಂಕೆಗೆ ಹಿಂತಿರುಗುವಾಗ ಗಾಯತ್ರಿ ಮಂತ್ರದ ಪಠಣದೊಂದಿಗೆ ಸಂಧ್ಯಾವಂದನೆಯನ್ನು ಮಾಡಿದ್ದನ್ನು ನಾವು ಕೇಳಿದ್ದೇವೆ. 

ಗಾಯತ್ರಿ ಮಂತ್ರದ ಅರ್ಥವೇನು?

ಗಾಯತ್ರಿ ಮಂತ್ರ ಪ್ರತ್ಯಕ್ಷ ದೈವ ಸೂರ್ಯನಾರಾಯಣನ ಪ್ರಾರ್ಥನೆ. ಮಹಾ ತೇಜಸ್ಸಿನಿಂದ ಕೂಡಿರುವ ಓ, ಸೂರ್ಯನಾರಾಯಣ, ನಿನ್ನ ತೇಜಸ್ಸು ನಮ್ಮ ಬುದ್ಧಿಯನ್ನು ಉದ್ದೀಪನಗೊಳಿಸಲಿ, ಚುರುಕುಗೊಳಿಸಲಿ, ಧಿಯೋ ಯೋ ನ: ಪ್ರಚೋದಯಾತ್ ಎಂದರ್ಥ. ಇಂದು ನಾವೆಲ್ಲರೂ ಪ್ರತಿದಿನ ಮಾಡುವ ಸೂರ್ಯನಾರಾಯಣನ ಸ್ಮರಣೆ. 

ಸಭಿಕರೆ, ನೋಡಿ ಗಾಯತ್ರಿ ಮಂತ್ರದ ಉದಾರ ಧ್ಯೇಯವನ್ನು! ನನ್ನ ಬುದ್ಧಿಯನ್ನು ಉದ್ದೀಪನಗೊಳಿಸು ಎನ್ನುವ ಸ್ವಾರ್ಥ ಅದರಲಿಲ್ಲ. ನಮ್ಮ ಬುದ್ಧಿಯನ್ನು ಉದ್ದೀಪನಗೊಳಿಸು, ಇಡೀ ಸಮಾಜವನ್ನೇ ಜಾಗೃತಗೊಳಿಸು ಎಂಬ ಉದಾರ ಧ್ಯೇಯ ಗಾಯತ್ರಿ ಮಂತ್ರದ್ದು.  

ತತ್ಸವಿತುರ್ವರೇಣ್ಯಂ------------------------------------------------------------------------------------------------

ಎಂಬಲ್ಲಿಂದ ಎಣಿಸಿದರೆ ಗಾಯತ್ರಿ ಮಂತ್ರದಲ್ಲಿ ೨೪ ಅಕ್ಷರಗಳಿವೆ.  ವಾಲ್ಮೀಕಿ ರಾಮಾಯಣದಲ್ಲಿ ೨೪೦೦೦ ಶ್ಲೋಕಗಳಿವೆ. ರಾಮಾಯಣದ ಮೊದಲ ಶ್ಲೋಕ ಯಾವುದು? 

ತಪ: ಸ್ವಾಧ್ಯಾಯ ನಿರತ೦
ತಪಸ್ವೀ ವಾಗ್ವಿದಾಂ ವರ೦
ನಾರದಂ ಪರಿಪಪ್ರಚ್ಛ 
ವಾಲ್ಮೀಕಿರ್ಮುನಿಪುಂಗವ೦

ರಾಮಾಯಣದ ಮೊದಲ ಶ್ಲೋಕದ ಮೊದಲ ಅಕ್ಷರ 'ತ'

ಹಾಗೆಯೇ ಹುಡುಕುತ್ತಹೋದರೆ ರಾಮಾಯಣದ ೧೦೦೧ನೇ ಶ್ಲೋಕದ ಮೊದಲ ಅಕ್ಷರ 'ತ್ಸ'. 

೨೦೦೧ನೇ ಶ್ಲೋಕದ ಮೊದಲ ಅಕ್ಷರ 'ವಿ'

ಹೀಗೆ ರಾಮಾಯಣದ ಪ್ರತಿ ಒಂದು ಸಾವಿರದ ಮೊದಲ ಶ್ಲೋಕದ ಮೊದಲ ಅಕ್ಷರಗಳನ್ನು ನಾವುಗಳು ಆರಿಸಿಕೊಳ್ಳುತ್ತಾಹೋದರೆ ನಮಗೆ ೨೪ ಅಕ್ಷರಗಳು ಸಿಕ್ಕುತ್ತವೆ. ಆ ೨೪ ಅಕ್ಷರಗಳನ್ನು ಅದೇ ಕ್ರಮದಲ್ಲಿ ಜೋಡಿಸಿ ನೋಡಿದರೆ ನಮಗೆ ಗಾಯತ್ರಿ ಮಂತ್ರ ದೊರಕ್ಕುತ್ತದೆ. ಹೀಗೆ ಗಾಯತ್ರಿ ಮಂತ್ರ ಎಂಬ ಅನರ್ಘ್ಯ ರತ್ನವನ್ನು ವಾಲ್ಮೀಕಿಗಳು  ತಮ್ಮ ರಾಮಾಯಣದಲ್ಲಿ ಅಡಗಿಸಿಟ್ಟಿದ್ದಾರೆ 

ಮೊದಲಕ್ಷರವನ್ನು ನಾವುಗಳು ಆರಿಸಿಕೊಂಡ ಆ ೨೪ ಶ್ಲೋಕಗಳನ್ನು ನಾವು ಪಠಿಸಿದರೆ ಅದೇ 'ಗಾಯತ್ರಿ ರಾಮಾಯಣ.'   ಗಾಯತ್ರಿ ರಾಮಾಯಣದ ೨೪ ಶ್ಲೋಕಗಳನ್ನು ನಾವು ಪಠಿಸಿದರೆ, ಇಡೀ ರಾಮಾಯಣವನ್ನು ಪಠಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ವಾಲ್ಮೀಕಿಗಳು ನಮ್ಮೆಲ್ಲರಿಗೂ ತಿಳಿಸಿದ್ದಾರೆ. 
------------------------------------------------------------------------------------------------------------------------

ರಾಮಾಯಣ ಪಠಿಸುವುದು ಜನಸಾಮಾನ್ಯರಿಗೆ ಕಷ್ಟ. ೨೪,೦೦೦ ಶ್ಲೋಕಗಳು. 

ಗಾಯತ್ರಿ ರಾಮಾಯಣವನ್ನು ಪಠಿಸುವುದೂ ಕಷ್ಟ. ೨೪ ಶ್ಲೋಕಗಳು, ಅದೂ ಸಂಸ್ಕೃತದಲ್ಲಿ. 

ಪುರಂದರ ದಾಸರು ನಮ್ಮಂತಹವರಿಗೆ ಹೇಳಿದ್ದಾರೆ. ೨೪,೦೦೦ ಶ್ಲೋಕವೂ ಬೇಡ, ೨೪ ಶ್ಲೋಕಗಳೂ ಬೇಡ, ನಾನು ಎರಡಕ್ಷರದ ಒಂದು ಮಂತ್ರ ಹೇಳಿಕೊಡುತ್ತೇನೆ, ಕಲಿತುಕೊಳ್ಳುವಿರಾ ಎಂದು ನಮ್ಮನ್ನು ಕೇಳಿದ್ದಾರೆ. ಯಾವುದು ಆ ಮಂತ್ರ? 

ರಾಮ ಮಂತ್ರವ ಜಪಿಸೋ, ಹೇ ಮನುಜ (ಪೂರ್ತಿ ಹಾಡು) 

-------------------------------------------------------------------------------------------------------------------------



------------------------------------------------------------------------------------------------------------------------

ರಾಮನಾಮದ ಮಹಿಮೆಯನ್ನು ಪುರಂದರದಾಸರು ಮತ್ತೊಂದು ದೇವರನಾಮದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ. 'ರಾಮ, ರಾಮ' ಎಂದು ಉಚ್ಛರಿಸುವುದರಿಂದ ನಮ್ಮ ದೇಹಕ್ಕಾಗುವ ಪ್ರಯೋಜನಗಳೇನು? 

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು 
ಪಾಮರರು ತಾವೇನು ಬಲ್ಲಿರಯ್ಯ?

ಎಂದಿದ್ದಾರೆ ದಾಸರು. 

ರಾ ಎಂಬ ಉಚ್ಚಾರದಿಂದ ನಮ್ಮ ದೇಹಕ್ಕಾಗುವ ಒಳ್ಳೆಯ ಪರಿಣಾಮವೇನು? 

ರಾ ಎಂದ ಮಾತ್ರದೊಳು ರಕ್ತಮಾಂಸದಲ್ಲಿದ್ದ 
ಆಯಸ್ಥಿಗತವಾದ ಅತಿ ಪಾಪವನು 
ಮಾಯಾವನು ಮಾಡಿ ಮಹರಾಯ ಮುಕ್ತಿಯ ಕೊಡುವ 
ದಾಯವನು ವಾಲ್ಮೀಕಿ ಮುನಿ ತಾ ಬಲ್ಲ 

ರಾ ಎಂದು ಉಚ್ಛರಿಸಬೇಕಾದರೆ ಬಾಯನ್ನು ದೊಡ್ಡದಾಗಿ ತೆರೆಯಬೇಕಾಗುತ್ತದೆ. ಆಗ ನಮ್ಮೊಳಗಿದ್ದ ಸಕಲ ಪಾಪಗಳು ಹೊರಗೆ ಹೋಗಿಬಿಡುತ್ತವೆ. 

ಮ ಎಂದರೆ ಆಗುವ ಉಪಯೋಗಗಳೇನು? 

ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು 
ಮತ್ತೆ ಒಳ ಪೊಗದಂತೆ ಕವಾಟವಾಗಿ 
ಚಿತ್ತಾಕಯವನ್ನೆಲ್ಲಾ ಪರಿಶುದ್ಧಮಾಡುವ ಪರಿಯ 
ಭಕ್ತವರ ಹನುಮಂತ ಒಬ್ಬ ತಾ ಬಲ್ಲ 

ಮ ಎಂದು ಉಚ್ಛರಿಸಬೇಕಾದರೆ ಎರಡೂ ತುಟಿಗಳನ್ನು ಮುಚ್ಚಬೇಕಾಗುತ್ತದೆ. ಆಗ ಹೊರಬಿದ್ದ ಪಾಪಗಳೆಲ್ಲಾ ಮತ್ತೆ ದೇಹವನ್ನು ಪ್ರವೇಶಿಸದಂತೆ ಕವಾಟವಾಗಿಬಿಡುತ್ತವೆ. ಹೀಗೆ ರಾಮ ನಾಮ ಮಂತ್ರ ನಮ್ಮ ದೇಹವನ್ನು, ಮನಸ್ಸನ್ನು ಶುದ್ಧಿಗೊಳಿಸುತ್ತದೆ. 
------------------------------------------------------------------------------------------------------------------------


------------------------------------------------------------------------------------------------------------------------


-----------------------------------------------------------------------------------------------------------------------

ರಾಮಯ್ಯ ರಾಮಭದ್ರಾಯ 
ರಾಮಚಂದ್ರಾಯ ವೇದಸೆ 
ರಘುನಾಥಾಯ ನಾಥಾಯ 
ಸೀತಾಯ ಪತೇಯೇನಮಃ 

ಇದು ದಶರಥನ ಅರಮನೆಯಲ್ಲಿ ಚಾಲ್ತಿಯಲ್ಲಿದಂತಹ ರಾಮನ ಬೇರೆ ಬೇರೆ ಹೆಸರುಗಳ ಶ್ಲೋಕ.  ರಾಮನನ್ನು 'ರಾಮಾ' ಎಂದು ಕರೆಯುತ್ತಿದ್ದವರು ದಶರಥ ಮಹಾರಾಜರು. ರಾಮಭದ್ರಾಯ - ಎಂದು ಕರೆಯುತ್ತಿದ್ದವರು ರಾಮನ ತಾಯೀ ಕೌಸಲ್ಯ. ರಾಮಭದ್ರ ಎಂದರೆ ರಾಮ ಎಲ್ಲರಿಗೂ ಮಂಗಳವನ್ನುಂಟುಮಾಡುವವನು ಎಂದರ್ಥ.  ರಾಮಚಂದ್ರಯ್ಯ--------! ರಾಮನನ್ನು ರಾಮಚಂದ್ರ ಎಂದು ಮೊದಲು ಕರೆದವರು ಯಾರು?  ಇದು ರಾಮಾಯಣದ ಮತ್ತೊಂದು ರಹಸ್ಯ. 

ಒಮ್ಮೆ ರಾಮ ಇನ್ನು ಮೂರು ವರ್ಷದ ಮಗುವಾಗಿದ್ದಾಗ, ಹುಣ್ಣಿಮ್ಮೆಯ ಒಂದು ದಿನ ನನಗೆ ಚಂದ್ರ ಬೇಕು, ನನಗೆ ಚಂದ್ರ ಬೇಕು ಅಂತ ರಚ್ಚೆ ಹಿಡಿದು ಅಳುವುದಕ್ಕೆ ಶುರುಮಾಡಿದ್ದನಂತೆ. ಮೂರು ಜನ ಮಹಾರಾಣಿಯರು ಮತ್ತು ಅರಮನೆಯ ಸಖಿಯರೆಲ್ಲ ರಾಮನನ್ನು ಸಮಾಧಾನಪಡಿಸಲಾಗದೆ ಕಂಗಾಲಾಗಿಹೋಗಿದ್ದರಂತೆ. ಆಗ ಜಾಣೆಯಾದ ಮಂಥರೆ ಬೋಗುಣಿಯೊಂದರಲ್ಲಿ ನೀರನ್ನು ತುಂಬಿ, ಆ ನೀರಿನಲ್ಲಿ ಚಂದ್ರನ ಪ್ರತಿಬಿಂಬವನ್ನು ರಾಮನಿಗೆ ತೋರಿಸಿ, ರಾಮಾ ನೋಡಿಲ್ಲಿ ಚಂದ್ರ, ರಾಮ..........,ಚಂದ್ರ......... ರಾಮಚಂದ್ರ ಎಂದು ರಾಮನನ್ನು ರಾಮಚಂದ್ರ ಎಂದು ಬಾಯ್ತುಂಬಾ ಮೊದಲ ಬಾರಿಗೆ ಕರೆದವಳು ಮಂಥರೆ.  ಚಂದ್ರ ಸಿಕ್ಕಿದ ಎಂದು ಹಿಗ್ಗಿಹೋದ ರಾಮ ಸಮಾಧಾನಗೊಂಡನಂತೆ. ರಾಮನನ್ನು ಸಮಾಧಾನಪಡಿಸಿದ  ಸಂತೋಷ ಹಾಗು ಹೆಮ್ಮೆಯಿಂದ ಮಂಥರೆ ಮಗು ರಾಮನನ್ನು ಎತ್ತಿಕೊಳ್ಳಲು ಹೋದಾಗ, ಮಹಾರಾಣಿ ಕೌಶಲ್ಯ ಅವಳನ್ನು ತಡೆದಳಂತೆ. "ವಕ್ರ ಹೆಂಗಸೇ, ವಿಕಾರವಾದವಳೇ" ಎಂದು ಕೌಸಲ್ಯೆ ಮಂಥರೆಯನ್ನು ಹಿಯ್ಯಾಳಿಸಿದಳಂತೆ. ಆ ಅವಮಾನದ ಸೇಡನ್ನು ಮನಸ್ಸಿನಲ್ಲೇ ಇಟ್ಟುಕೊಂಡ ಮಂಥರೆ ಸಮಯಕ್ಕಾಗಿ ಕಾದು, ರಾಮನನ್ನು ಕಾಡಿಗೆ ಕಳುಹಿಸಿವಂತೆ ಮಾಡಿದ್ದು ನಿಮಗೆಲ್ಲ ತಿಳಿದ ವಿಷಯವೇ. 

ಈ ಪ್ರಸಂಗ ಕನ್ನಡದ ಮಹಾಕವಿ ಕುವೆಂಪುರವರ ರಾಮಾಯಣದಲ್ಲಿ ಬರುತ್ತದೆ. ಮಂಥರೆಯ  'ಜಜ್ಜರಿತ ಮೈತ್ರಿ'ಯ ಪ್ರಸಂಗವನ್ನು ಕುವೆಂಪುರವರು ಸೊಗಸಾಗಿ ವರ್ಣಿಸಿದ್ದಾರೆ.  

ಹಾಗಂತ ನಾವು ಮಂಥರೆ-ಕೈಕಯೀಯರನ್ನು ಕೆಟ್ಟವರು ಅಂತ ಹೀಯಾಳಿಸಿದರೆ, ಅದು ತಪ್ಪು. ಮಂಥರೆ-ಕೈಕಯೀಯರು ಸಂಚು ಮಾಡದೇ ರಾಮನನ್ನು ಅಯೋಧ್ಯೆಯಲ್ಲೇ ಇರಿಸಿಕೊಂಡಿದ್ದಾರೆ, ರಾಮ ರಾಮ ಆಗ್ತಾನೇ ಇರಲಿಲ್ಲ. ರಾಮಾಯಣ ನಡೆಯುತ್ತಲೇ ಇರಲಿಲ್ಲ, ರಾವಣನ ಸಂಹಾರ ಆಗುತ್ತಲೇ ಇರಲಿಲ್ಲ. ಆದುದರಿಂದ ಮಂಥರೆ-ಕೈಕಯೀಯರು ಪ್ರಾತಃಸ್ಮರಣೀಯರು ಎಂದರೆ ತಪ್ಪಲ್ಲ.   

ಉತ್ತರದ ಅಯೋಧ್ಯಯಿಂದ ದಕ್ಷಿಣದ ರಾಮೇಶ್ವರಂವರೆಗೂ ಮೊದಲು ಪಾದಯಾತ್ರೆಯನ್ನು ಮಾಡಿ ಸಮಸ್ತ ಭಾರತವನ್ನು ಒಗ್ಗೂಡಿಸಿದ ಮಹಾನ್ ಶಕ್ತಿ ರಾಮ. ರಾಮನ ಭಾರತ ಯಾತ್ರೆಗೆ ಕಾರಣೀಭೂತಳು ಮಂಥರೆ.

ಸಭಿಕರೆ, ಹರಿಕಥೆ ಅಂದಮೇಲೆ ಒಂದು ಉಪಕಥೆ ಇರಲೇಬೇಕು. ಈಗ ಒಂದು ಉಪಕಥೆ  

ಶಿವಧನುಸ್ಸನ್ನು ಮುರಿದವರು ಯಾರು?

---------------------------------------------------------------------------------------------------------------

ತುಳಸಿದಾಸರು ಶ್ರೀ ರಾಮನ ಪರಮ ಭಕ್ತರು. ಅವರು ರಾಮನನ್ನು ಹೇಗೆ ಭಜಿಸಿದ್ದಾರೆ ಈಗ ಕೇಳೋಣ. 

ಶ್ರೀ ರಾಮಚಂದ್ರ ಕೃಪಾಳು ಭಜಮಾನ---------

--------------------------------------------------------------------------------------------------------

ರಾಮನ ಬಾಲಲೀಲೆಗಳ ಸರಣಿಯನ್ನು ಮುಂದುವರೆಸುತ್ತಾ, ರಾಮನಿಗೆ ಬಾಲ್ಯ ಸ್ನೇಹಿತರು ಯಾರಾದರೂ ಇದ್ದಾರೆ ಎಂಬ ರಹಸ್ಯವನ್ನು ಪರಿಶೀಲಿಸೋಣ. ಕೃಷ್ಣನಿಗೋ ಇಡೀ ನಂದಗೋಕುಲದ ಭರ್ತಿ ಅವನಿಗೆ ಸ್ನೇಹಿತರು. ಮಕರಂದ, ಕುಚೇಲ ಇವರೆಲ್ಲಾ ಕೃಷ್ಣನ ಬಾಲ್ಯ ಸ್ನೇಹಿತರು.  ಜೊತೆಗೆ ರಾಧೆ ಎಂಬ ಗರ್ಲ್ ಫ್ರೆಂಡ್ ಬೇರೆ. ರಾಮನ ಬಾಲ್ಯ ಸ್ನೇಹಿತರು ಯಾರು?  ಇದೂ ಒಂದು ರಾಮಾಯಣದ ರಹಸ್ಯವೇ ಸರಿ. 

ಅವನೇ ಗುಹ, ಬೆಸ್ತರ ರಾಜ. ಗಂಗಾನದಿಯನ್ನು ದಾಟಲು ರಾಮನಿಗೆ ಸಹಾಯ ಮಾಡಿದ ಗುಹ ರಾಮನ ಬಾಲ್ಯ ಸ್ನೇಹಿತ.  ಈ ಮಾತನ್ನು ನಾನು ಹೇಳುತ್ತಿಲ್ಲ, ಸಾಕ್ಷಾತ್ ವಾಲ್ಮೀಕಿಗಳೇ ಹೇಳಿದ್ದಾರೆ. 

ತ್ರ ರಾಜ ಗುಹೋ ನಾಮ 

ರಾಮಸ್ಯಾತ್ಮಸಮ: ಸಖಾ 

ನಿಷಾದ ಜಾತ್ಯೋ ಬಲವಾನ್ 

ಸ್ಥಪತಿಶ್ಚೇತಿ ವಿಶ್ರುತಃ 

ರಾಮಸ್ಯಾತ್ಮಸಮ: ಸಖಾ-----------ಎಂದರೆ ರಾಮನ ಬಾಲ್ಯ ಸ್ನೇಹಿತ ಗುಹ ಎಂಬುದಾಗಿ ವಾಲ್ಮೀಕಿಗಳೇ ಹೇಳಿದ್ದಾರೆ. 

ಗಂಗಾ ನದಿಯನ್ನು ದಾಟಿಸಿದ ಗುಹನಿಗೆ ಎಷ್ಟು ದಕ್ಷಿಣೆಯನ್ನು ಕೊಡಬೇಕೆಂದು ರಾಮ ಕೇಳಿದಾಗ, ಗುಹ ಹೇಳಿದ್ದು ಒಂದೇ ಮಾತು.  ಗಂಗಾನದಿಯನ್ನು ನಾನು ನಿನಗೆ ದಾಟಿಸಿದ್ದೇನೆ, ಜೀವನವೆಂಬ ಭವಸಾಗರವನ್ನು, ರಾಮ ನನ್ನನ್ನು ನೀನು ದಾಟಿಸಬೇಕು ಎಂದು ಕೇಳಿಕೊಂಡಾಗ, ಬೆಸ್ತನಾದರೂ ಗುಹ ಎಷ್ಟು ಜ್ಞಾನಿಯಾಗಿದ್ದನೆಂಬುದು ನಮಗೆ ತಿಳಿಯುತ್ತದೆ. 

-----------------------------------------------------------------------------------------------------------

-------------------------------------------------------------------------------------------------------

ಗಂಗಾನದಿಯನ್ನು ದಾಟಿದ ಶ್ರೀರಾಮ ಮೊದಲು ಪ್ರವೇಶಿಸಿದ್ದು ಚಿತ್ರಕೂಟವೆಂಬ ಅರಣ್ಯವನ್ನು. ರಾಮ ಚಿತ್ರಕೂಟವನ್ನು ಪ್ರವೇಶಿಸುತ್ತಾಲೇ ಚಿತ್ರಕೂಟದ ದೇವಿಯನ್ನು ಶ್ರೀ ರಾಮ ಏನೆಂದು ಬೇಡಿಕೊಂಡನು ಎಂಬುದು ರಾಮಾಯಣದ ಮತ್ತೊಂದು ರಹಸ್ಯ. 

ಚಿತ್ರಕೂಟದ ಅರಣ್ಯವನ್ನು ಪ್ರವೇಶಿಸಿದ ರಾಮನಿಗೆ ಚಿತ್ರಕೂಟದ ವನದೇವಿ ನಮಿಸುತ್ತಾ, ರಾಮಾ, ನೀನು ಸೀತಾ ಲಕ್ಷ್ಮಣ ಸಮೇತ ನನ್ನ ಚಿತ್ರಕೂಟವನ್ನು ಪ್ರವೇಶಿಸಿದೀಯ, ಸುಸ್ವಾಗತ. ನಿನ್ನ ಸೇವೆಯಲ್ಲಿ ನಾನು ಏನು ಮಾಡಬಹುದು ಎಂದು ಕೇಳುತ್ತಾಳೆ. ಶ್ರೀ ರಾಮ 'ಚಿತ್ರಕೂಟದ ದೇವಿ, ನಿನಗೆ ವಂದನೆ.  ನಿನ್ನ ಅರಣ್ಯಕ್ಕೆ ನಾನು ನಡೆದು ಬಂದ ದಾರಿಯಲ್ಲಿ ಇರುವ ಕಲ್ಲು ಮುಳ್ಳುಗಳನೆಲ್ಲಾ ಇಲ್ಲದಂತೆ ಮಾಡು' ಎಂದು ಪ್ರಾರ್ಥಿಸುತ್ತಾನೆ.  ಆಶ್ಚರ್ಯಚಕಿತಳಾದ ವನದೇವತೆ, 'ರಾಮ, ನೀನು ಆ ದಾರಿಯನ್ನು ದಾಟಿ ಬಂದಾಯಿತಲ್ಲಾ, ಈಗೇಕೆ ಆ ದಾರಿಯಲ್ಲಿ ಕಲ್ಲು ಮುಳ್ಳುಗಳು ಇಲ್ಲದಂತೆ ಮಾಡಬೇಕು?' ಎಂದು ಕೇಳುತ್ತಾಳೆ. ರಾಮ ಉತ್ತರಿಸುತ್ತಾ 'ನಾನು ಬಂದಾಯಿತು, ಆದರೆ ನನ್ನ ತಮ್ಮ ಭರತ ನನ್ನನ್ನು ಹುಡುಕುತ್ತಾ ಇಲ್ಲಿಗೆ ಬರುತ್ತಾನೆ. ಅವನಿಗೆ ಕಲ್ಲು, ಮುಳ್ಳುಗಳು ಚುಚ್ಚದೆ ಇರಲಿ' ಎಂದು ಉತ್ತರಿಸುತ್ತಾನೆ. ಹಾಗೆ ಆಗಲಿ ಎಂದು ಅಭಯವನಿತ್ತ ವನದೇವತೆ ರಾಮನನ್ನು ಪ್ರಶ್ನಿಸುತ್ತಲೇ.... 'ರಾಮ, ನಿನ್ನ ತಮ್ಮ ಭರತ ಸೂರ್ಯ ವಂಶಿ. ವಜ್ರದಂತೆ ಅವನ ಶರೀರ ಭಾರಿ ಗಟ್ಟಿ. ನನ್ನ ಅರಣ್ಯದ ಕಲ್ಲು ಮುಳ್ಳುಗಳಿಗೆ ಅವನು ಅಂಜುವನೆ?' ಎಂದು ಕೇಳುತ್ತಾಳೆ. ರಾಮ ಉತ್ತರಿಸುತ್ತಾ....'ವನದೇವಿ, ನೀನು ಹೇಳುತ್ತಿರುವುದು ನಿಜ.  ವಜ್ರಕಾಯದ ಪರಾಕ್ರಮಿಯಾದ ನನ್ನ ತಮ್ಮ ಭರತನಿಗೆ ನಿನ್ನ ಅರಣ್ಯದ ಕಲ್ಲು ಮುಳ್ಳುಗಳು ಏನೂ ಮಾಡವು.  ಆದರೆ ಮುಳ್ಳುಗಳು ನನ್ನ ತಮ್ಮ ಭರತನ ಕಾಲಿಗೆ ಚುಚ್ಚಿದಾಗ, ನನ್ನ ಅಣ್ಣನಾದ ರಾಮನಿಗೆ ಈ ಮುಳ್ಳುಗಳು ಚುಚ್ಚಿದಾಗ ಅವನಿಗೆ ಎಷ್ಟು ನೋವಾಗಿತ್ತೋ' ಎಂದು ಯೋಚಿಸಿ ಬಹಳ ನೊಂದುಕೊಳ್ಳುತ್ತಾನೆ. ಅದಕ್ಕಾಗಿ ವನದೇವಿ ನಿನಗೆ ಈ ಪ್ರಾರ್ಥನೆ ಎಂದು ರಾಮ ವನದೇವಿಗೆ ತಿಳಿಸುತ್ತಾನೆ. 

ಈ ಘಟನೆಯಿಂದ ರಾಮನ ಭ್ರಾತೃಪ್ರೇಮ ಭರತನ ಮೇಲೆ ಎಷ್ಟಿತ್ತೆಂಬುದು ತಿಳಿಯುತ್ತದೆ. 

-------------------------------------------------------------------------------------------------------------

ಭವ ಸಾಗರವನ್ನು ದಾಟಿಸುವ ನಮ್ಮನ್ನು ರಕ್ಷಿಸಬಲ್ಲ ಏಕೈಕ ದೈವ ಶ್ರೀ ರಾಮ. ಅಂತಹ ಶ್ರೀ ರಾಮನನ್ನು ಮೈಸೂರು ವಾಸುದೇವಾಚಾರ್ಯರು ಹೇಗೆ ಪ್ರಾರ್ಥಿಸಿದ್ದಾರೆ ಎಂಬುದನ್ನು ಈಗ ಕೇಳೋಣ. 

ಬ್ರೋಚೇವಾರೆ ವರೂರ (ಪೂರ್ತಿ ಹಾಡು)

-------------------------------------------------------------------------------------------------------------

ರಾಮೋ ವಿಗ್ರಹವಾನ್ ಧರ್ಮ:

ಇಂದೊಂದು ರಾಮಾಯಣದ ಮೇರು ವಾಕ್ಯ. 'ರಾಮ ಧರ್ಮದ ಅಂದರೆ ಸನ್ನಡತೆಯ ಮೂರ್ತಿ ರೂಪ, rama is the very embodiment of dharma'  ಈ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು ಎಂಬುದೇ ಒಂದು ದೊಡ್ಡ ರಹಸ್ಯ. 

ಶ್ರೋತೃಗಳೇ ನಿಮಗೆ ಆಶ್ಚರ್ಯವಾಗ ಬಹುದು. ಈ ಮಾತನ್ನು ಮಾರೀಚ ರಾವಣನಿಗೆ ಹೇಳಿದ್ದು. 

ರಾಮೋ ವಿಗ್ರಹವಾನ್ ಧರ್ಮ:

ಸಾಧುಹು ಸತ್ಯ ಪರಾಕ್ರಮಃ 

ರಾಜ ಸರ್ವಸ್ಯ ಲೋಕಸ್ಯ 

ದೇವಾನಿವ ವಾಸವಃ 

ಸೀತೆಯ ಅಪಹರಣದ ಸಂಚು ಮಾಡಿದ ರಾವಣ, ತನ್ನ ಮಾವ ಮಾರೀಚನ ಸಹಾಯಕ್ಕಾಗಿ ಆಗ್ರಹಿಸುತ್ತಾನೆ. ಸೀತೆಯ ಮುಂದೆ ಚಿನ್ನದ ಮಾಯಾಮೃಗವಾಗಿ ಕಾಣಿಸಿಕೊಳ್ಳುವಂತೆ ಆದೇಶಿಸುತ್ತಾನೆ. 

ವಿಶ್ವಾಮಿತ್ರ  ಯಾಗ ಸಂರಕ್ಷಣೆಯ ಸಮಯದಲ್ಲಿ, ರಾಮನ ಬಾಣದ ಹೊಡೆತಕ್ಕೆ ತತ್ತರಿಸಿ  ನೂರು ಯೋಜನ ಹಾರಿಬಿದ್ದ ಮಾರೀಚ ಈಗ ಸನ್ಯಾಸಿಯಾಗಿ ದಂಡಕಾರಣ್ಯದಲ್ಲಿ ತಪಸ್ಸನ್ನು ಮಾಡುತ್ತಿರುತ್ತಾನೆ. ದುಷ್ಟ ರಾವಣನ ಆಗ್ರಹವನ್ನು ಕೇಳಿ, ಮಾರೀಚ ರಾವಣನ ನ್ನು ಎಚ್ಚರಿಸುತ್ತಾ...... 'ರಾಮ ಧರ್ಮದ ಮೂರ್ತರೂಪ. ಅವನು ಮಹಾ ಪರಾಕ್ರಮಿ. ಅವನೊಂದಿಗಿನ ವೈರದಿಂದ ನೀನು ನಾಶವಾಗಿ ಹೋಗುತ್ತೀಯಾ, ಜೋಕೆ. ಸೀತೆಯನ್ನು ಅಪಹರಿಸುವ ಸಂಚು ಬೇಡ' ಎಂದು ಉಪದೇಶಿಸುತ್ತಾನೆ. ಕೋಪಗೊಂಡ ರಾವಣ 'ನನ್ನೊಡನೆ ಸಹಕರಿಸು, ಇಲ್ಲವೇ ಸಾಯಲು ಸಿದ್ಧನಾಗು' ಎಂದು ಮಾರೀಚನನ್ನು ಗದರಿಸುತ್ತಾನೆ. ಪರಿಸ್ಥಿತಿಯನ್ನು ಅರಿತುಕೊಂಡ ಮಾರೀಚ 'ರಾವಣ......  ನಿನ್ನೊಡನೆ ಸಹಕರಿಸದಿದ್ದರೆ ನಿನ್ನ ಕೈಯಿಂದ ಸಾಯುತ್ತೇನೆ.  ನಿನ್ನೊಡನೆ ಸಹಕರಿಸಿದರೆ ಸಾಕ್ಷಾತ್ ರಾಮನ ಕೈಯಲ್ಲಿ ಹತ್ಯೆಗೊಂಡು ಸ್ವರ್ಗವನ್ನು ಸೇರುತ್ತೇನೆ. ರಾಮನ ಕೈಯಲ್ಲಿ ಸಾಯುವುದೇ ಮೇಲೆ' ಎಂದು ರಾವಣನ ಸಂಚಿಗೆ ಒಪ್ಪಿಕೊಳ್ಳುತ್ತಾನೆ. 

-----------------------------------------------------------------------------------------------------------

ಸೀತೆಯನ್ನು ಕಳೆದುಕೊಂಡ ರಾಮ ಲಕ್ಷ್ಮಣರು, ಸೀತೆಯನ್ನು ಹುಡುಕುತ್ತಾ ಹನುಮನಂತನ ಭೇಟಿಯಾಗುತ್ತಾರೆ. ಹನುಮಂತನ ಮೂಲಕ ಸುಗ್ರೀವನೊಡನೆ ಸ್ನೇಹವಾಗುತ್ತದೆ. 

ಸೀತೆಯನ್ನು ಹುಡುಕಲು ಜಾಂಬವಂತರ  ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ ಸುಗ್ರೀವ, ಆ ತಂಡವನ್ನು ದಕ್ಷಿಣ ದಿಕ್ಕಿಗೆ ಕಳುಹಿಸುತ್ತಾನೆ. ಆ ತಂಡದಲ್ಲಿದ್ದ ನಮ್ಮ ಆಂಜನೇಯನ ಮೇಲೆ ಸಂಪೂರ್ಣ ಭರವಸೆ ಇದ್ದ ಶ್ರೀ ರಾಮ, ಅವನ ಕೈಗೆ ತನ್ನ ಮುದ್ರೆಯುಂಗುರವನ್ನು ನೀಡಿ ಸೀತೆಗೆ ಕೊಡುವಂತೆ ಆದೇಶಿಸುತ್ತಾನೆ. 

ಜಾಂಬವಂತರ ತಂಡ ದಕ್ಷಿಣದ ತುತ್ತುದಿಯ ಸಮುದ್ರದ ದಡಕ್ಕೆ ಬಂದು ನಿಲ್ಲುತ್ತದೆ. ಲಂಕಾ ಪಟ್ಟಣವನ್ನು ತಲುಪಲು ನೂರು ಯೋಜನಾ ಸಮುದ್ರವನ್ನು ಹಾರಬೇಕಾದಾಗ, ದಿಕ್ಕು ತೋಚದ ವಾನರ ತಂಡ ಪೆಚ್ಚಾಗಿ ಕುಳಿತುಕೊಳ್ಳುತ್ತದೆ. ಹನುಮಂತನು ಒಂದು ಮೂಲೆಯಲ್ಲಿ ಕುಳಿತುಕೊಂಡಿರುತ್ತಾನೆ. 

ಹನುಮಂತನ ಅಘಾದ ಶಕ್ತಿಯ ಅರಿವಿದ್ದ ಜಾಂಬವಂತರು, ಹನುಮಂತನೊಡನೆ ಮಾತನಾಡುತ್ತ...... 'ಹನುಮಂತ ನೀನು ವಾಯುಪುತ್ರ.  ಬಾಲ್ಯದಲ್ಲಿ ಸೂರ್ಯನನ್ನು ಹಿಡಿಯಲು ಆಕಾಶಕ್ಕೆ ಹಾರಿದ ಶಕ್ತಿವಂತ. ನೂರು ಯೋಜನಾ ಸಮುದ್ರವನ್ನು ಹಾರಿ ಲಂಕಾ ಪಟ್ಟಣವನ್ನು ತಲುಪುವುದು ನಿನಗೆ ಮಾತ್ರ ಸಾಧ್ಯ. ಎದ್ದೇಳು' ಎಂದು ಹುರಿದುಂಬಿಸಲು, ಸಮೀಪವ ಇದ್ದ  ಪರ್ವತವನ್ನು ಹತ್ತಿ ನಿಂತ ಹನುಮಂತ ಮುಗಿಲ್ಲೆತ್ತರಕ್ಕೆ ಬೆಳೆದು ನಿಲ್ಲುತ್ತಾನೆ. ಹನುಮಂತನ ವಿಶ್ವರೂಪವನ್ನು ನೋಡಿದ ವಾನರ ಸೇನೆ ಬೆರಗಾಗಿ ಹೋಗುತ್ತದೆ. ಮುಗಿಲ ಎತ್ತರದ ಹನುಮಂತ ಒಮ್ಮೆ ಘರ್ಜಿಸಿದಾಗ ಏನಾಯ್ತು?

ಘಟಿಕಾ ಚಲದಿ ನಿಂತ  (ಪೂರ್ತಿ ಹಾಡು)


-----------------------------------------------------------------------------------------------------------------------------

ಹನುಮಂತನ ಸಮುದ್ರ ಲಂಘನದ ಕಥೆ, (ಪ್ರಜ್ಞಳಿಂದ)

-----------------------------------------------------------------------------------------------------------------------------

ತುಳಸಿ ದಸರಾ ಹನುಮಾನ್ ಚಾಲೀಸಾದ ಆಯ್ದ ಅನುಪಲ್ಲವಿಗಳ ಗಾಯನ ಮತ್ತು  ಕಥೆ ಗೌರಿಯಿಂದ 

----------------------------------------------------------------------------------------------------------------------------


---------------------------------------------------------------------------------------------------------------------------

ರಾಮ ರಾವಣರ ಮಧ್ಯೆ ಘೋರ ಯುದ್ಧವಾಗುತ್ತದೆ. 

ವೀರಾವೇಶದಿಂದ ಹೋರಾಡಿದ ಲಕ್ಷ್ಮಣ ರಾವಣ ಪುತ್ರ ಇಂದ್ರಜಿತುವಿನ ಸಂಹಾರ ಮಾಡುತ್ತಾನೆ.  ಪುತ್ರ ಇಂದ್ರಜಿತುವಿನ ಹತ್ಯೆಯಿಂದ ರೋಷಗೊಂಡ ರಾವಣ, ರಾಮನ ಕಪಿ ಸೇನೆಯ ಮೇಲೆ 'ಮೂಲಬಲ'ವೆಂಬ ಎರಡು ಲಕ್ಷ ರಾಕ್ಷಸರ ಪಡೆಯ ಸೈನ್ಯದಿಂದ ದಾಳಿಮಾಡುತ್ತಾನೆ. ರಾವಣನ ಮೂಲಬಲದ ಹೋದತ್ತಕ್ಕೆ ತತ್ತರಿಸಿದ ಕಪಿಸೈನ್ಯ ದಿಕ್ಕಾಪಾಲಾಗಿ ಓಡಲಾರಂಭಿಸುತ್ತದೆ. ಕಪಿಸೈನ್ಯದ ರಕ್ಷಣೆಗಾಗಿ ಪಣತೊಟ್ಟ ಶ್ರೀ ರಾಮ, ರಾವಣ ಮೂಲಬಲದ ಮೇಲೆ ಗಂಧರ್ವಾಸ್ತ್ರವೆಂಬ ಸಮ್ಮೋಹಿನಿ ಅಸ್ತ್ರವನ್ನು ಪ್ರಯೋಗಿಸುತ್ತಾನೆ. ಗಂಧರ್ವಾಸ್ತ್ರದ ಮೋದಿಯ ಫಲವಾಗಿ ಮೂಲಬಲದ ರಾಕ್ಷರಿಗೆ ಮಂಕುಹಿಡಿದಂತಾಗುತ್ತದೆ. ರಾಕ್ಷಸರಿಗೆ  ಎಲ್ಲೆಲ್ಲೂ ಶ್ರೀ ರಾಮನೇ  ಕಾಣುವಂತಾಗುತ್ತದೆ. ಪ್ರತಿಯೊಬ್ಬ ರಾಕ್ಷಸನಿಗೂ ಪಕ್ಕದ ರಾಕ್ಷಸನೇ ರಾಮನಂತೆ ಕಾಣಿಸುತ್ತದೆ. ಅದನ್ನೇ ಪುರಂದರ ದಾಸರು 'ಅವನಿಗೆ ಇವ ರಾಮ, ಇವನಿಗೆ ಅವ ರಾಮ' ಎಂದು ವರ್ಣಿಸಿದ್ದಾರೆ. ಸಂಮೋಹಕ್ಕೆ ಒಳಗಾದ ರಾಕ್ಷಸರು ತಮ್ಮ ತಮ್ಮೊಳಗೆ ಕಾದಾಡಿ ಮಡಿಯುತ್ತಾರೆ. ಹೀಗೆ ರಾವಣನ ಮೂಲಬಲ ಹಾಗೂ ಅವನ ಎರಡು ಲಕ್ಷ ರಾಕ್ಷಸರ ಪದೇ ನಿರ್ನಾಮಗೊಳ್ಳುತ್ತದೆ.  

ಈ ಯುದ್ಧದ ವರ್ಣನೆಯನ್ನು ಪುರಂದರ ದಾಸರು ತಮ್ಮ ದೇವರನಾಮದಲ್ಲಿ ಸೊಗಸಾಗಿ ಮಾಡಿದ್ದಾರೆ. 

ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ (ಪೂರ್ತಿ ಹಾಡು) 

-----------------------------------------------------------------------------------------------------------------------------
ಇಡೀ ರಾಮಾಯಣವನ್ನು ಗದ್ಯ ರೂಪದಲ್ಲಿ ಪ್ರಸ್ತುತಪಡಿಸಿದವರು ತಮಿಳ್ ನಾಡಿನ ಕವಿ ವೇದಾಂತ ದೇಶಿಕರ್ರವರು. ತಮಿಳ್ ನಾಡಿನ ತಿರುವಹಿಂದ್ರಾಪುರಂನ ಕೋದಂಡ ರಾಮನ ಪರಮ ಭಕ್ತರಾದ ವೇದಾಂತ ದೇಶಿಕರ್ ಅವರು ಕೋದಂಡ ರಾಮನ shauryaವನ್ನು ತಮ್ಮ ರಘುವೀರ ಗದ್ಯದಲ್ಲಿ ಪ್ರಸ್ತುತಪಡಿಸಿದ್ದಾರೆ. 

ರಾವಣನ ಸೇನಾಧಿಪತಿ ಪ್ರಹಸ್ತನ ಹತ್ಯೆಯಾನಂತರ ರಾವಣ ತಾನೇ ರಣರಂಗಕ್ಕೆ ಬರುತ್ತಾನೆ. ಲಕ್ಷ್ಮಣನ ಮೇಲೆ ಘೋರ ಯುದ್ಧವನ್ನಾಡಿದ ರಾವಣ, ಅಮೋಘವಾದ ಅಸ್ತ್ರವೊಂದನ್ನು ಪ್ರಯೋಗಿಸಿ ಲಕ್ಷ್ಮಣನನ್ನು ಮೂರ್ಚಿತನನ್ನಾಗಿ ಮಾಡುತ್ತಾನೆ.  ಯುದ್ಧದ ಪಾರಿತೋಷಕವೆಂದು ಲಕ್ಷ್ಮಣನ ಶರೀರವನ್ನು ರಾವಣ ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತಾನೆ.  ಕೈಲಾಸವನ್ನು ಎತ್ತಿ ನಡುಗಿಸಿದ ರಾವಣನಿಗೆ, ಲಕ್ಷ್ಮಣನನ್ನು ಎತ್ತಲು ಆಗುವುದಿಲ್ಲ.  ಎಲ್ಲವನ್ನು ನೋಡುತ್ತಿದ್ದ ಹನುಮಂತ ರಾವಣನನ್ನು ಹಿಮ್ಮೆಟ್ಟಿಸಿ, ಲೀಲಾಜಾಲವಾಗಿ ಲಕ್ಷ್ಮಣನನ್ನು ಎತ್ತಿಕೊಂಡು ಹೋಗಿ ಸುರಕ್ಷಿತ ತಾಣಕ್ಕೆ ಕರೆದೊಯುತ್ತಾನೆ. 

ಹನುಮಂತ ಹಿಂತುರುಗಿ ರಣರಂಗಕ್ಕೆ ಬರುವ ಹೊತ್ತಿಗೆ ರಾಮ ರಾವಣರ ಯುದ್ಧವಾಗುತ್ತಿರುತ್ತದೆ. ರಾವಣ ರಥದ ಮೇಲಿದ್ದರೆ, ಶ್ರೀ ರಾಮ ಭೂಮಿಯ ಮೇಲೆ ನಿಂತಿರುತ್ತಾನೆ. ಮುನ್ನುಗ್ಗಿ ರಾಮನನ್ನು ತನ್ನ ಕುತ್ತಿಗೆಯ ಮೇಲೇರಿಸಿಕೊಂಡ ಹನುಮಂತ, ರಾಮನ ಬಲವನ್ನು ಹೆಚ್ಚಿಸುತ್ತಾನೆ. ವೀರಾವೇಶದಿಂದ ಹೋರಾಡಿದ ರಾಮನ ಬಾಣಗಳಿಗೆ ರಾವಣ ತತ್ತರಿಸಿ ಹೋಗುತ್ತಾನೆ, ನಿರಾಯುಧನಾಗಿ ಹೋಗುತ್ತಾನೆ.  ರಾವಣನ ಅಸಹಾಯಕ ಪರಿಸ್ಥಿತಿಯನ್ನು ಕಂಡ ರಾಮ, 'ರಾವಣ, ನೀನು ಸೋತು ನಿರಾಯುಧನಾಗಿದ್ದೀಯ. ಇಂತಹ ಪರಿಸ್ಥಿತಿಯಲ್ಲಿ ನಾನು ನಿನ್ನ ಹತ್ಯೆ ಮಾಡುವುದಿಲ್ಲ.  ಈಗ ನಿನ್ನ ಮನೆಗೆ ಹೋಗಿ ವಿಶ್ರಾಂತಿ ಪಡೆದುಕೋ. ನಾಳೆ ಮತ್ತೆ ಯುದ್ಧ ಮಾಡುವಿಯಂತೆ' ಎನ್ನುತ್ತಾನೆ. ವೀರ ರಾಮನ ಈ ಔದಾರ್ಯದ ಪ್ರಸಂಗವನ್ನು ರಘುವೀರ ಗದ್ಯದಲ್ಲಿ ವೇದಾಂತ ದೇಶಿಕರು ಹೇಗೆ ವರ್ಣಿಸಿದ್ದಾರೆ ಎಂಬುದನ್ನು ನೋಡೋಣ. 



ರಘುವೀರ ಗದ್ಯ ಗಾಯನ 

----------------------------------------------------------------------------------------------------------------------------
ರಾಮನನ್ನು 'ಮರ್ಯಾದಾ ಪುರುಶೋತ್ತಮ' ಎಂದು ವಾಲ್ಮೀಕಿಗಳು ವರ್ಣಿಸಿದ್ದಾರೆ. ಅಂತಹ ಶ್ರೀ ರಾಮನೇ ರಾಮಾಯಣದಲ್ಲಿ ಪೇಚಿಗೆ ಸಿಲುಕಿದ ಪ್ರಸಂಗವೊಂದನ್ನು ಕೇಳಿದೀರಾ? ಅದೇ ರಾಮಾಯಣದ ಮತ್ತೊಂದು ರಹಸ್ಯ.  ಆ ಕಥೆ ಈಗ ಪ್ರಜ್ಞಳಿಂದ. 

----------------------------------------------------------------------------------------------------------------------------
ಸ್ವಾತಿ ತಿರುನಾಳ್ ಮಹಾರಾಜರ ಅಮೋಘ ಕೃತಿಯೆಂದರೆ ಭಾವಯಾಮಿ ರಘುರಾಮಮ್. ಈ ಕೃತಿಯನ್ನು ಕೇಳುತ್ತಾ ಹೋದರೆ, ಇಡೀ ರಾಮಾಯಣದ ಕಥೆ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವಂತೆ ಭಾಸವಾಗುತ್ತದೆ. ಅಂತಹ ಕೃತಿಯನ್ನು ಈಗ ಕೇಳೋಣ. 
 
ಭಾವಯಾಮಿ ರಘುರಾಮಮ್  (ಒಂದು ಅನು ಪಲ್ಲವಿ ಮಾತ್ರ) 
-------------------------------------------------------------------------------------------------------------------------------
ಜನನಿ ಜನ್ಮ ಭೂಮಿಶ್ಚ 
ಸ್ವರ್ಗಾದಪಿ ಗರೀಯಸೀ 

ಕಥೆ ಪ್ರಜ್ಞಳಿಂದ 

--------------------------------------------------------------------------------------------------------------------------
ಇಂದಿನ ರಾಮಾಯಣದ ರಹಸ್ಯಗಳು ಎಂಬ ಹರಿಕಥೆ ರಾಮಾಯಣವನ್ನು ಸ್ವಾರಸ್ಯಕರ ರೀತಿಯಲ್ಲಿ ಪ್ರಸ್ತುತಪಡಿಸುವ ಒಂದು ಹೊಸ ಪ್ರಯತ್ನ.  ನಮ್ಮ ಇಂದಿನ ಹರಿಕಥೆಯನ್ನು ಆಲಿಸಿ ಆಶೀರ್ವದಿಸ ತಮಗೆಲ್ಲಾ ನಮಸ್ಕಾರಗಳು.  ಶ್ರೀ ರಾಮನಿಗೆ ಒಂದು ಮಂಗಳವನ್ನು ಈಗ ಹಾಡೋಣ. 


ಪವಮಾನ-------------------

ಮಧ್ಯಮಾವತಿ ಶ್ಲೋಕ ----------------------------------