Thursday, 11 March 2021

೬. ಕೋವಿಡ್ ಮಾನವ ಸೃಷ್ಟಿಯೇ?

 

 ಕೋವಿಡ್

 ಮಾನವ ಸೃಷ್ಟಿಯೇ?



'ದೇವರ ನ್ಯಾಯಾಲಯ'ದಲ್ಲಂದು ಮೊಕದ್ದಮೆಯೊಂದರ ಅಂತಿಮ ವಿಚಾರಣೆಯ ದಿನವಾಗಿತ್ತು. 'ಕೋವಿಡ್ನ ದುರಂತ ಮಾನವ ಸೃಷ್ಟಿಯೆ?' ಎಂಬ ಸೂಕ್ಷ್ಮ ಪ್ರಶ್ನೆಯ ನಿರ್ಣಯ ಅಂದಾಗಬೇಕಿತ್ತು.  ನಿಷ್ಪಕ್ಷಪಾತಿಯಾದ  ದೇವರು, ಸಂಬಂಧಪಟ್ಟ ಎಲ್ಲಾ ಆರೋಪಿಗಳಿಗೂ ಹಾಗೂ  ದೂರುದಾರರುಗಳಿಗೂ ತಮ್ಮ ತಮ್ಮ ವಾದ-ಪ್ರತಿವಾದಗಳನ್ನು ಮಂಡಿಸುವಂತೆ ತಿಳಿ ಹೇಳಿ ಕರೆಗಳನ್ನು ಜಾರಿಗೊಳಿಸಿದ್ದರು.  ನ್ಯಾಯಾಲಯಕ್ಕೆ ಹಾಜರಾದ ವ್ಯಕ್ತಿಗಳಲ್ಲಿ 'ರೋಹಿಣಿ ಮತ್ತವಳ ತಂದೆ ರಾಜು, ಅವಳ ಸ್ನೇಹಿತ ಡಾ. ಕಿರಣ್ ಮತ್ತು ವಕೀಲ ಮದನ್ ಲಾಲರು' ಸೇರಿದ್ದರು. ಚೀನಾ, ಫ್ರಾನ್ಸ್, ಜಪಾನ್, ಆಸ್ಟ್ರೇಲಿಯಾ, ಅಮೆರಿಕಾ ಮುಂತಾದ ದೇಶಗಳ ಅಧಿಕೃತ ಪ್ರತಿನಿಧಿಗಳು, ಹಲವಾರು ಖ್ಯಾತ ವಿಜ್ಞಾನಿಗಳು ಹಾಗೂ ಸಂಶೋಧಕರು ಕೂಡ ನ್ಯಾಯಾಲಯದಲ್ಲಿ ಜಮಾಯಿಸಿದ್ದರು. ಕೋವಿಡ್ನ ಸ್ಫೋಟದನಂತರ ವಿವಾದಾತ್ಮಕ ಪರಿಸ್ಥಿತಿಯಲ್ಲಿ ಮೃತಪಟ್ಟಿದ್ದ ಚೀನಾದ ಯುವ ವೈದ್ಯರೊಬ್ಬರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.  'ದಿವಂಗತರಾದ ಡಾ. ದ್ವಾರಕಾನಾಥ್ ಕೊಟ್ನಿಸ್' ಎಂಬ ವೈದ್ಯರೂ ಸಹ ದೇವರ ಕರೆಯ ಮೇರೆಗೆ ಬಂದು ಆಸೀನರಾಗಿದ್ದರು. 

'ನ್ಯಾಯದ ಪೀಠವಾದ ದೇವರ ಕುರ್ಚಿ' ಮಾತ್ರ ಖಾಲಿಯಿತ್ತು. ಆದರೆ ಅಂದಿನ ಸಭೆಯಲ್ಲಿ ದೇವರ ಇರುವಿಕೆಯ ಅನುಭೂತಿ ಮಾತ್ರ ಅಲ್ಲಿ ನೆರೆದಿದ್ದವರಿಗೆಲ್ಲಾ ಸ್ಪಷ್ಟವಾಗಿತ್ತು. ದೇವರ ಧ್ವನಿ ಎಲ್ಲರಿಗೂ ಕೇಳಿಸುತ್ತಿತ್ತು. ದೇವರ ದನಿಯಲ್ಲಿ ಪ್ರೇಮ, ವಿಶ್ವಾಸ, ನಿಷ್ಪಕ್ಷಪಾತ ಹಾಗು ಮುಚ್ಚುಮರೆಯಿಲ್ಲದ ಭಾವಗಳು ಸ್ಪಷ್ಟವಾಗಿದ್ದವು. ಸ್ವಯಂ ದೇವರೇ ದಿನದ ಚರ್ಚೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. 

ದೇವರೇ ಎಲ್ಲರನ್ನು ಸಂಬೋಧಿಸುತ್ತ, 'ವಿಶ್ವವ್ಯಾಪಿ ಕೋವಿಡ್ ರೋಗದ ದಾಳಿಯಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಎಲ್ಲ ವೈರಸ್ಗಳು, ಬ್ಯಾಕ್ಟೀರಿಯಗಳು ಮತ್ತು ಪ್ರಾಣಿಗಳು ಪ್ರಕೃತಿಯ ಸೃಷ್ಟಿಗಳೆ. ಕಾಲಾನುಕಾಲಕ್ಕೆ ಸೃಷ್ಟಿಯಾಗುತ್ತ ಸಾಗುವ ಈ ಜೀವಿಗಳ ಸೃಷ್ಟಿಯ ಹಿಂದೆ ಪ್ರಕೃತಿ ತನ್ನ    ಸಮತೋಲನವನ್ನು ಕಾಯ್ದಿರಿಸಿಕೊಳ್ಳುವ ಅಣಿಯಿದೆ. ಬ್ರಹ್ಮಾಂಡದ ಕೇಂದ್ರ, ಭೂಮಿಯೂ ಅಲ್ಲ ಮತ್ತು ಮಾನವನ ಸೃಷ್ಟಿ ಅದರ ಉದ್ದೇಶವೂ ಅಲ್ಲ. ಪ್ರಾಣಿ  ಜಗತ್ತಿನ ವಿಕಾಸದ ಪ್ರಕ್ರಿಯೆಯಲ್ಲಿ ಬುದ್ಧಿವಂತನಾದ ಮಾನವನ ಸೃಷ್ಟಿ ಆಕಸ್ಮಿಕ ಮಾತ್ರ. ಮಾನವನ ಯೋಚನೆ ಮತ್ತು ಕೃತ್ಯಗಳನ್ನು ನಾನಾಗಲಿ, ಪ್ರಕೃತಿಯಾಗಲಿ ನಿಯಂತ್ರಿಸುವ ಕಾರ್ಯವನ್ನು ಮಾಡವುದಿಲ್ಲ. ಪ್ರಪಂಚ ಹೇಗೆ ಮುಂದುವರಿಯಬೇಕೆಂಬುದು ನಾನು ನಿಯಂತ್ರಿಸುವ ಕಾರ್ಯವಲ್ಲ. ಸೃಷ್ಟಿಯ ಎಲ್ಲ ಜೀವಿಗಳು ಅವರವರ ವಿಚಾರಗಳಿಗೆ ಮತ್ತು ಕೃತ್ಯಗಳಿಗೆ ಅವರವರೇ ಜವಾಬ್ದಾರರು. ತಾವು ಜೀವಿಸಬೇಕಾದ ಪ್ರಪಂಚ  ಹೇಗಿರಬೇಕೆಂಬ ನಿರ್ಧಾರ, ಅಲ್ಲಿನ ಜೀವಿಗಳಿಗೆ ಬಿಟ್ಟದ್ದು. ಆದರೆ ಪ್ರಕೃತಿಯೆಂಬುದು ಜೀವಿಗಳ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಪ್ರಕೃತಿಯ ಜೀವಿಗಳ ವಿಚಾರ ಮತ್ತು ಕೃತ್ಯಗಳಿಂದ ಪ್ರಪಂಚಕ್ಕೆ ಆಗಾಗ ವಿಪತ್ತು ಬಂದೊದಗಬಹುದು. ನಿರ್ಜೀವಿಗಳಲ್ಲಾಗುವ ಬದಲಾವಣೆ ಮತ್ತು ಜರುಗುವ ಪ್ರಕ್ರಿಯೆಗಳಿಂದಲೂ ಪ್ರಪಂಚಕ್ಕೆ ವಿಪತ್ತು ಉಂಟಾಗಬಹುದು. ಹಾಗಾದರೂ ನಾನು ಎಂದಿಗೂ ಮಧ್ಯೆ ಪ್ರವೇಶಿಸುವುದಿಲ್ಲ. ಏಕೆಂದರೆ ಪ್ರಕೃತಿ ತನ್ನ ಸಮತೋಲನವನ್ನು ಕಾಯ್ದುಕೊಳ್ಳುವ ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳುವ  ಪ್ರಕ್ರಿಯೆ ನಿರಂತರವಾಗಿ ಸಾಗುತ್ತಿರುತ್ತೆ. ಆದುದರಿಂದ ಇಂದಿನ ಮೊಕದ್ದಮೆಯ ವಿಚಾರಣೆ ನನ್ನ ಪಾಲಿಗೆ ಅಪ್ರಸ್ತುತವಾದದ್ದು. ಇಂದಿನ ವಿಚಾರಣೆಯನ್ನು ಅಣಿಗೊಳಿಸಿರುವುದು ತಮ್ಮಗಳ ಕೋರಿಕೆಯ ಮನ್ನಣೆಗಾಗಿ ಮಾತ್ರ. ಇಲ್ಲಿ ನೆರೆದಿರುವರೆಲ್ಲರೂ ತಮ್ಮ ತಮ್ಮ ವಾದ-ಪ್ರತಿವಾದಗಳನ್ನು ಮಂಡಿಸಲು ಮುಕ್ತರು. ಇಂದಿನ ಚರ್ಚೆ ಶುರವಾಗಿದೆ ಎಂದು ಘೋಷಿಸುತ್ತೇನೆ' ಎಂದರು. 

ವಿಷಯ ಮಂಡನೆಗಾಗಿ ತುದಿಗಾಲಿನಲ್ಲಿ ನಿಂತಿದ್ದ ರೋಹಿಣಿ ಎದ್ದು ನಿಂತು ತನ್ನ ವಾದವನ್ನು ದೇವರ ಮುಂದಿಡುತ್ತಾ, 'ದೇವರೇ, ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ತಮಗೆ ವಂದನೆಗಳು. ನಿಮಗೆ ಎಲ್ಲವೂ ತಿಳಿದಿದೆ. ವಿಶ್ವಮಾರಿ ಕೋವಿಡ್ ಇಡೀ ವಿಶ್ವವನ್ನಾವರಿಸಿದೆ. ವಿಶೇಷವಾಗಿ ನನ್ನ ದೇಶ ಭಾರತ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಪ್ರಪಂಚದ ಐದನೇ ಒಂದು ಭಾಗದಷ್ಟು ಜನರುಗಳಿಗೆ ಆಶ್ರಯನ್ನು ನೀಡಿರುವ ನನ್ನ ದೇಶ, ಎದುರಿಸುತ್ತಿರುವ ಸವಾಲುಗಳು ಜಟಿಲವಾದವುಗಳಾಗಿವೆ. ಆದರೂ ತಮ್ಮ ಕೃಪೆಯಿಂದ, ಕಳೆದ ಮೂರು ದಶಕಗಳ ಸರ್ವತೋಮುಖ ವಿಕಾಸದ ಸಾಧನೆ ನಮ್ಮದಾಗಿತ್ತು. ಆದರೆ ಈಗ ಈ ವಿಶ್ವವ್ಯಾಪಿ ಕೋವಿಡ್ನ ದಾಳಿಯಿಂದ ನಮ್ಮ ದೇಶ ಕಂಡು ಕೇಳರಿಯದ ಸಂಕಷ್ಟಗಳ ಸುಳಿಗೆ ಸಿಕ್ಕಿ ಹಾಕಿಕೊಂಡು ನಲುಗಿ ಹೋಗಿದೆ. ೨೦೨೦ರ ಜೂನ್ ೧೦ರ ದಿನವಾದ ಇಂದು ೨.೫ ಲಕ್ಷ  ಕೋವಿಡ್ ರೋಗಿಗಳೊಂದಿಗೆ, ಸೋಂಕಿತ ದೇಶಗಳ ಪಟ್ಟಿಯಲ್ಲಿ, ನಮ್ಮ ದೇಶ ಐದನೇ ಸ್ಥಾನದಲ್ಲಿದೆ. ಈ ಐದು ದೇಶಗಳ ನಡುವೆಯೂ, ಶೇಕಡಾ ೪ರಷ್ಟು ಸೋಂಕಿತರ ಹೆಚ್ಚಳವನ್ನು ದಾಖಲಿಸುತ್ತಿರುವ ನಮ್ಮ ದೇಶದ ಪರಿಸ್ಥಿತಿ ಆತಂಕಕಾರಿಯಾಗಿದೆ. ಬೃಹತ್ ರಾಷ್ಟ್ರವಾದ ನಮ್ಮ ಭಾರತದಲ್ಲಿ ಕೋವಿಡ್ ಪರೀಕ್ಷೆಗಳನ್ನು ಮಾಡುವುದೊಂದು ಸವಲಾಗಿ ಹೋಗಿದೆ. ನಮ್ಮ ಕೋವಿಡ್ ಪರೀಕ್ಷೆಯ ಪ್ರಮಾಣ ಪ್ರತಿ ಸಾವಿರ ಜನಗಳಿಗೆ ೩.೪ ಮಾತ್ರವಾಗಿದೆ. ಇದೆ ಪ್ರಮಾಣದ ಸಂಖ್ಯೆ ರಷ್ಯಾಕ್ಕೆ ೮೭.೨, ಅಮೆರಿಕಕ್ಕೆ ೬೧.೬ ಮತ್ತು ಇಂಗ್ಲೆಂಡ್ಗೆ ೪೭.೯ರಷ್ಟಿದ್ದು, ಆ ದೇಶಗಳು ನಮಗಿಂತ ಬಹಳಷ್ಟು ಮುಂದಿವೆ. ನಮ್ಮ ಕೋವಿಡ್ ಪೀಡಿತರಲ್ಲಿ ಈಗಾಗಲೇ ಸುಮಾರು ೭೦೦೦ ಜನಗಳು ಮೃತಪಟ್ಟಿದ್ದಾರೆ. ಬೇಕಾದ ಪ್ರಮಾಣದಲ್ಲಿ ಸೋಂಕಿತರ ಪರೀಕ್ಷೆಗಳನ್ನು ನಡೆಸಿದಲ್ಲಿ, ನಮ್ಮ ಸೋಂಕಿತರ ಹಾಗೂ  ಕೋವಿಡ್ ಮೃತರುಗಳ ಸಂಖ್ಯೆ ಇನ್ನೂ ಹೆಚ್ಚಿರುವುದಾಗಿ ಕಂಡು ಬಂದರೂ ಆಶ್ಚರ್ಯವಿಲ್ಲ. ಮುಂಬರುವ ಇನ್ನೆರಡು ತಿಂಗಳುಗಳಲ್ಲಿ ಕೋವಿಡ್ ರೋಗದ  ಹರಡುವಿಕೆಯ ಬಗೆಗಿನ ಮುನ್ಸೂಚನೆ ನಮಗೆ ಆತಂಕವನ್ನುಂಟು ಮಾಡಿದೆ. ಭಾರಿ ಪ್ರಮಾಣದಲ್ಲಿ ಹರಡಲಿರುವ ಕೋವಿಡ್ ರೋಗವನ್ನು ನಿವಾರಿಸುವ ಮತ್ತು ನಿಯಂತ್ರಿಸುವ ಮೂಲಭೂತ ಸೌಕರ್ಯಗಳು ನಮ್ಮ ದೇಶದಲ್ಲಿ ಅತಿ ಕಡಿಮೆಯಿದ್ದು, ನಮ್ಮ ಕೋವಿಡ್ ಸೇನಾನಿಗಳ ಮೇಲಿನ ಒತ್ತಡವನ್ನು ಹೆಚ್ಚಾಗಿಸಿದೆ.  

ಸುಮಾರು ೧೪ ಕೋಟಿಯಷ್ಟು ವಲಸಿಗ ಕೆಲಸಗಾರರು ತಮ್ಮ ಕೆಲಸಗಳನ್ನು ಕಳೆದುಕೊಂಡು, ಆದಾಯವಿಲ್ಲದೆ ಕಂಗೆಟ್ಟಿದ್ದಾರೆ. ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ನಮ್ಮ ದೇಶ  ಎರಡೂವರೆ ತಿಂಗಳುಗಳಷ್ಟರ ದೀರ್ಘಾವಧಿಯ ಲಾಕ್ಡೌನನ್ನು ಜಾರಿಗೊಳಿಸಲೇ ಬೇಕಾದ ಅನಿವಾರ್ಯತೆ ಉಂಟಾಗಿದ್ದು ದುರದೃಷ್ಟಕರ. ಅದರಿಂದಾಗಿ ನಮ್ಮ ಅರ್ಥ ವ್ಯವಸ್ಥೆ ಅಲ್ಲೋಲ- ಕಲ್ಲೋಲವಾಗಿದ್ದು, ಕಳೆದ ಎರಡು-ಮೂರು ದಶಕಗಳಲ್ಲಿ ನಾವು ಸಾಧಿಸಿದ ಪ್ರಗತಿಗೆ ಭಾರಿ ಹಿನ್ನಡೆಯುಂಟಾಗಿದೆ. 

ನಮ್ಮ ದೇಶ ಅನುಭವಿಸುತ್ತಿರುವ ಆಘಾತಗಳಿಗೆ ಚೀನಾ ದೇಶವೇ ಕಾರಣವೆಂದು ನಾನು ನೇರವಾಗಿ ಆರೋಪಿಸುತ್ತೇನೆ. ಕೋವಿಡ್ನ ವೈರಾಣು ಆ ದೇಶದ ಮೂಲದ್ದು. ಆ ವೈರಾಣುವನ್ನು ಸೃಷ್ಟಿಸಿದ್ದೇ  ಚೀನಾದವರು ಎಂಬ ಆರೋಪಗಳೂ ಕೇಳಿ ಬಂದಿದೆ. ಕೋವಿಡ್ ರೋಗ ಆ  ದೇಶದಲ್ಲೇ ಮೊದಲು ಕಂಡು ಬಂದಿದ್ದು, ರೋಗದ ಹರಡುವಿಕೆ ಸ್ಪಷ್ಟವಾಗಿ ತಿಳಿದಿದ್ದರೂ, ರೋಗದ ಸುಳಿವನ್ನು ಮುಚ್ಚಿಟ್ಟು, ಇಡೀ ಜಗತ್ತನ್ನು ಚೀನಾ ವಂಚಿಸಿದೆ. ಚೀನಾ ದೇಶ ತನ್ನ ಸ್ವಾರ್ಥ ಸಾಧನಗೆ ಮಾಡಿದ ವಂಚನೆಯಿಂದ,  ನಮ್ಮ ದೇಶ ಭಾರತದೊಂದಿಗೆ ಇಡೀ ವಿಶ್ವವಿಂದು ಕಂಡು ಕೇಳರಿಯದ ಸಂಕಷ್ಟಕ್ಕೆ ತುತ್ತಾಗಿದೆ. ಎಲ್ಲರನ್ನೂ ಕಾಯುವ ದೇವರಾದ ತಾವು ಚೀನಾ ದೇಶಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಬೇಕೆಂದು ನಾನು ತಮ್ಮನ್ನು ವಿನಂತಿಸಿಕೊಳ್ಳುತ್ತೇನೆ' ಎಂದ ರೋಹಿಣಿಯ ಧ್ವನಿಯು ಗದ್ಗದಿತವಾಗಿತ್ತು. 

ಚೀನಾ ದೇಶದ ಪ್ರತಿನಿಧಿಗೆ, ತನ್ನ ದೇಶದ ಮೇಲಾಗಬಹುದಾದ ಆರೋಪಗಳ ಪೂರ್ವಾನುಮಾನ ಚೆನ್ನಾಗಿಯೇ ಇತ್ತು. ಉತ್ತಮವಾದ ವಾದವನ್ನು ನ್ಯಾಯಾಲಯದ ಮುಂದಿಡಲು ಬೇಕಾದ ತಯಾರಿಯನ್ನು ಮಾಡಿಕೊಂಡೇ ಬಂದಿತ್ತು ಚೀನಾದ ತಂಡ. ಎದ್ದು ನಿಂತು ಎಲ್ಲರಿಗೂ ವಂದಿಸಿದ ಚೀನಾದ ಪ್ರತಿನಿಧಿ ತನ್ನ ವಿಚಾರಗಳನ್ನು ಮಂಡಿಸುತ್ತಾ, 'ದೇವರೇ, ತಮ್ಮ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸುವ ಅವಕಾಶವನ್ನು ನಮ್ಮ ದೇಶಕ್ಕೂ ಕಲ್ಪಿಸಿದ ತಮಗೆ ವಂದನೆಗಳು. ಈ ಮಹಾಮಾರಿ ಕೋವಿಡ್ ವಿಶ್ವವನ್ನು ವ್ಯಾಪಿಸುವ ದುರಂತ  ಆರಂಭವಾದಾಗಿನಿಂದ, "ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ"ನೆಂಬಂತೆ, ಎಲ್ಲರೂ  ನಮ್ಮ ದೇಶ ಚೀನಾದ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಆದರೆ ಆ ಆರೋಪಗಳೆಲ್ಲವೂ ನಿರಾಧಾರವಾದದ್ದು. ಈ ವೈರಸ್ನ ವಂಶವಾಹಿ ನಕ್ಷೆ (genetic map) ಪತ್ತೆಯಾದ ಕೂಡಲೇ, ಅದರ ವಿವರಗಳನ್ನು ವಿಶ್ವ ಆರೋಗ್ಯ ಸಂಸ್ಥೆ (W.H.O.) ಮತ್ತು ಇಡೀ ವಿಶ್ವದೊಂದಿಗೆ ಹಂಚಿ ಕೊಂಡಿದ್ದೇವೆ. ನಮ್ಮ ಕಡೆಯಿಂದ ಎಲ್ಲರೊಂದಿಗೆ ಮಾಹಿತಿಯ ಹಂಚಿಕೆ ನಿರಂತರವಾಗಿ ಸಾಗಿದೆ. ನಮ್ಮ ದೇಶದ ವಿಜ್ಞಾನಿಗಳು ಅತಿ ಬೇಗನೆ ಅನಾವರಣಗೊಳಿಸಿದ ಕೋವಿಡ್ ವೈರಸ್ನ ವಂಶವಾಹಿ ನಕ್ಷೆಯಿಂದ, ರೋಗ ನಿಯಂತ್ರಣಕ್ಕೆ ಬೇಕಾದ ಪರೀಕ್ಷೆಗಳ, ಲಸಿಕೆಗಳ ಮತ್ತು ಔಷಧಿಗಳ ತಯಾರಿಕೆಯ ಪ್ರಕ್ರಿಯೆ ಇಡೀ ವಿಶ್ವದಲ್ಲಿ ಚುರುಕುಗೊಂಡಿದೆ. ಕೋವಿಡ್ ರೋಗ ಕಾಣಿಸಿಕೊಂಡ ದಿನಗಳಲ್ಲಿ, ನಮ್ಮ ವಿಜ್ಞಾನಿಗಳಿಗೂ ಯಾವುದೇ ಮಾಹಿತಿಯ ಸುಳಿವಿಲ್ಲದಿದ್ದು, ಅವರುಗಳು ಸಾಕಷ್ಟು ಹೆಣಗಾಡಿದ್ದಾರೆ. ಅವಶ್ಯಕವಾದ ಸಂಶೋಧನೆಗಳನ್ನು ಆದಷ್ಟು ಬೇಗ  ನಡೆಸಿ, ಮಾಹಿತಿಯನ್ನು ವಿಶ್ವದ ಮುಂದಿಟ್ಟು, ನಮ್ಮ ಚೀನಾ ದೇಶದ ವಿಜ್ಞಾನಿಗಳು ಮಹದುಪಕಾರವನ್ನು ಮಾಡಿದ್ದಾರೆ' ಎಂದರು. 

ಈ ಹಂತದಲ್ಲಿ ರಾಜುರವರಿಗೆ ಸುಮ್ಮನಿರುವುದು ಕಷ್ಟಸಾಧ್ಯವಾಗಿತ್ತು. ತಟ್ಟನೆ ಎದ್ದು ನಿಂತು, ಬಾಗಿ ದೇವರಿಗೆ ನಮಸ್ಕರಿಸಿದ ಅವರು, 'ದೇವರೇ, ನನ್ನ ವಿನಮ್ರ ಪ್ರಣಾಮಗಳನ್ನು ಸ್ವೀಕರಿಸಿ. ಇತಿಹಾಸದದುದ್ದಕ್ಕೂ, ಚೀನಾ ದೇಶದ ನಡವಳಿಕೆಗಳಲ್ಲಿ ಪ್ರಾಮಾಣಿಕತೆಯಿಲ್ಲದಿದ್ದು, ಅದರ ವಾದಗಳು ಸುಳ್ಳಿನ ಕಂತೆಗಳೇ ಆಗಿವೆ. ಕೋವಿಡ್ ವೈರಾಣುವಿನ ಸೃಷ್ಟಿ ಚೀನಾದವರೇ ಮಾಡಿದ್ದು, ಅದನ್ನವರು ಹೊಸ ಜೈವಿಕ ಅಸ್ತ್ರವನ್ನಾಗಿರಿಸಿಕೊಂಡಿರುವುದು ಸುಳ್ಳಲ್ಲ. ಮಹತ್ವಾಕಾಂಕ್ಷೆಯುಳ್ಳ ಚೀನಾಕ್ಕೆ ಬೇರೆಲ್ಲ ದೇಶಗಳನ್ನೂ, ಮುಖ್ಯವಾಗಿ ಅಮೇರಿಕಾ ಮತ್ತು ಭಾರತ ದೇಶಗಳನ್ನು, ಆದಷ್ಟೂ ಬೇಗ ಹಿಂದೆ ಹಾಕುವ ಹುನ್ನಾರವಿದೆ. ಆ ಉದ್ದೇಶದಿಂದ ತಾನು ಆವಿಷ್ಕರಿಸಿದ ಹೊಸ ಜೈವಿಕ ಅಸ್ತ್ರವಾದ ಕೋವಿಡ್ ವೈರಾಣುವಿನ  ಪ್ರಯೋಗವನ್ನು ಅದು ತನ್ನ ವುಹಾನ್ ನಗರದ ಪ್ರಯೋಗಶಾಲೆಯೊಂದರಲ್ಲಿ ಗುಪ್ತವಾಗಿ ನಡೆಸಿದೆ. ವೈರಾಣುವಿನ ಹರಡುವಿಕೆಯನ್ನು ಸಾಕಷ್ಟು ಕಾಲ ಗುಟ್ಟಾಗಿಟ್ಟ ಚೀನಾ, ವುಹಾನ್ ನಗರದಿಂದ ವಿಶ್ವದೆಲ್ಲಡೆಗೆ ಪ್ರಯಾಣಿಕರ ವಿಮಾನಯಾನಗಳನ್ನು ಎಗ್ಗಿಲ್ಲದಂತೆ ಮೂರು ತಿಂಗಳಿಗೂ ಹೆಚ್ಚು ಕಾಲ  ನಡೆಸಿದೆ. ಕುಟಿಲ ಬುದ್ಧಿಯ ಚೀನಾ ವುಹಾನ್ ನಗರದಿಂದ ಯಾವ ವಾಹನಗಳೂ ತನ್ನದೇ ದೇಶದ ಬೇರೆ ಊರುಗಳಿಗೆ ಹೋಗಿ ತಲುಪುವುದನ್ನು ಸಂಪೂರ್ಣವಾಗಿ ನಿಯಂತ್ರಿಸಿದೆ. ಈ ರೀತಿಯ ದುಷ್ಟ ವ್ಯೂಹದಿಂದ ಇಡೀ ವಿಶ್ವಕ್ಕೆ ಕೋವಿಡ್ ಹರಡಿದರೂ, ತನ್ನ ದೇಶ ಮಾತ್ರ ಸುರಕ್ಷಿತವಾಗಿರುವಂತೆ ಚೀನಾ ನೋಡಿಕೊಂಡಿದೆ. ಚೀನಾ ಮಾಡಿದ ಜೈವಿಕಾಸ್ತ್ರ ಪ್ರಯೋಗದಿಂದ ಇಡೀ ವಿಶ್ವವೇ ಕೋವಿಡ್ ರೋಗಕ್ಕೆ ತುತ್ತಾಗಿದೆ. ತನ್ನ ದೇಶದಿಂದಲೂ ಕೆಲವು  ಸಹಸ್ರ ಸಂಖ್ಯೆಗಳಲ್ಲಿನ  ಸಾವುಗಳನ್ನು ವರದಿ ಮಾಡಿರುವ   ಚೀನಾ, ತಾನಾಡಿದ ಮಹಾಮಾರಿಯ ನಿಯಂತ್ರಣದ ನಾಟಕಕ್ಕೆ ತೆರೆ ಎಳೆದಿದೆ.  "ಈ ರೀತಿಯ ಜೈವಿಕಾಸ್ತ್ರದ ಗುಪ್ತ ಪ್ರಯೋಗ, ಇಡೀ ವಿಶ್ವದ ವಿರುದ್ಧ ಚೀನಾ ನಡೆಸಿದ ಮೂರನೇ ಮಹಾಯುದ್ಧದ ಪ್ರಮುಖ ಭಾಗವಾಗಿತ್ತು ಎಂಬುದೇ ಸತ್ಯ."  ಒಂದು ಗುಂಡನ್ನೂ ಚಲಾಯಿಸದೇ, ಚೀನಾ ಈಗಾಗಲೇ ಮೂರನೇ ಮಹಾಯುದ್ಧವನ್ನು ಗೆದ್ದಾಗಿದೆ. ವಿಶ್ವದೆಲ್ಲಾ ದೇಶಗಳು ತಮ್ಮತಮ್ಮ ಪ್ರಗತಿಯ ಹಾದಿಯಲ್ಲಿ, ಕನಿಷ್ಠ ಒಂದು ದಶಕದಷ್ಟಾದರೂ ಹಿಂದೆ ಸರಿದಿವೆ. ಚೀನಾ ಮಾತ್ರ ಯಾವುದೇ ಅಡೆತಡೆಗಳಿಲ್ಲದೆ ಮುನ್ನಡೆದಿದೆ. ಮನುಕುಲದ ವಿರುದ್ಧ ರೂಪಿಸಿದ ಈ ಷಡ್ಯಂತ್ರಕ್ಕಾಗಿ ಚೀನಾ ದೇಶಕ್ಕೆ ತಕ್ಕ ಶಿಕ್ಷೆಯನ್ನು ತಮ್ಮ ನ್ಯಾಯಾಲಯ ನೀಡ ಬೇಕೆಂಬುದೇ ನನ್ನ ಕೋರಿಕೆ' ಎಂದು ಹೇಳಿ  ಕುಳಿತಾಗ, ಸಭಿಕರಿಗೆಲ್ಲಾ ದೀರ್ಘವಾದ ಸಿಡಿಲೊಂದು ಅಂತ್ಯಗೊಂಡಂತೆ  ಅನಿಸಿತ್ತು.  

ವಿಷಯ ಮಂಡನೆಯ ಮುಂದಿನ ಬಾರಿ, ಶಿಸ್ತಿನ ಸೂಟನ್ನು ಧರಿಸಿದ್ದ ಯೂರೋಪಿನ ವಿಜ್ಞಾನಿಯೊಬ್ಬರದಾಗಿತ್ತು. ತಮ್ಮ ವಾದವನ್ನು ಅವರು ಮಂಡಿಸುತ್ತಾ  'ಎಲ್ಲವನ್ನೂ ಬಲ್ಲ ದೇವರೇ, ನಾನು ಹೇಳುವುದೆಲ್ಲ ಸತ್ಯವೆಂದು ವಿನಂತಿಸಿಕೊಳ್ಳುತ್ತೇನೆ. ೧೯೮೦ರ ದಶಕದಿಂದ ವಿಶ್ವವನ್ನು ಕಾಡುತ್ತಿರುವ ಏಡ್ಸ್ ವೈರಸ್ನ ರಚನೆಯ ವಿನ್ಯಾಸದ  ಸಂಶೋಧನೆಯನ್ನು ಮಾಡಿದ ವಿಜ್ಞಾನಿಗಳ ತಂಡದಲ್ಲಿದ್ದವನು ನಾನು. ನಮ್ಮ ಸಂಶೋಧನೆ  ಏಡ್ಸ್ ರೋಗದ ಪತ್ತೆ, ಪರೀಕ್ಷೆ, ಲಸಿಕೆ ಮತ್ತು ಚಿಕಿತ್ಸೆಗಳಿಗೆ ಅನುವು ಮಾಡಿಕೊಟ್ಟಿದೆ. ಚೀನಾ ದೇಶದ ವುಹಾನಿನಲ್ಲಿ ಏಡ್ಸ್ ರೋಗದ ಸಂಪೂರ್ಣ ನಿಯಂತ್ರಣಕ್ಕೆ ಬೇಕಾದ ಪರಿಕರಗಳ ಬಗ್ಗೆ ಸಂಶೋಧನೆ ಮುಂದುವರೆದಿದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಚೀನಾದ ವಿಜ್ಞಾನಿಗಳು ತಮ್ಮ ಏಡ್ಸ್ ಸಂಶೋಧನೆಯನ್ನು ತ್ವರಿತಗೊಳಿಸಲು, ವಿಶ್ವವನ್ನು ೨೦೦೨-೦೪ರಲ್ಲಿ ಕಾಡಿದ ಸಾರ್ಸ್ ವೈರಾಣುವನ್ನು ಹೇರಳವಾಗಿ ಬಳಸಿದರೆಂಬುದು ನನಗೆ ಗೊತ್ತು. ಈ ಪ್ರಯೋಗಗಳ ನಡುವೆ, ಅನೀರಿಕ್ಷಿತವಾಗಿ ಕೋವಿಡ್ ವೈರಾಣುವಿನ ಸೃಷ್ಟಿಯಾಗಿದೆ. ಕೋವಿಡ್ ವೈರಾಣುವಿನ ವಂಶವಾಹಿ ನಕ್ಷೆಯಲ್ಲಿ ಏಡ್ಸ್ ಮತ್ತು ಸಾರ್ಸ್ ವೈರಾಣುಗಳ ವಿನ್ಯಾಸಗಳು ಕಂಡು ಬಂದಿರುವುದು ನನ್ನ ವಾದಕ್ಕೆ ಪುಷ್ಟಿಯನ್ನು ನೀಡುತ್ತದೆ. ಕೋವಿಡ್ ವೈರಾಣುವಿನ ವಿನಾಶಕಾರಿ ಶಕ್ತಿ, ಪ್ರಾಯಶಃ ಚೀನಾದ ವಿಜ್ಞಾನಿಗಳಿಗೂ ತಿಳಿದಿಲ್ಲದಿರಬಹುದು. ಪ್ರಯೋಗಾಲಯದಲ್ಲಿ ನಡೆದಿರಬಹುದಾದ ಅಚಾತುರ್ಯದ ಪ್ರಸಂಗವೊಂದರಲ್ಲಿ ಕೋವಿಡ್ ವೈರಾಣು ಮಾನವನೊಬ್ಬನನ್ನು ಸೋಂಕಿತಗೊಳಿಸಿರಬಹುದು. ಹೊಸ ಸೋಂಕಿನ ಹರಡುವಿಕೆಯ ಅರಿವು ಚೀನಕ್ಕಿದ್ದರೂ, ತನ್ನ ವ್ಯಾಪಾರೋದ್ಯಮಕ್ಕೆ ಘಾತಕಕಾರಿಯಾಗಬಹುದೆಂಬ ಕಾರಣಕ್ಕೆ, ಅದು ಕೋವಿಡ್ ವೈರಾಣುವಿನ ಸುದ್ದಿಯನ್ನು ಗೌಪ್ಯವಾಗಿಟ್ಟಿತು. ಅದರ ದುಷ್ಪರಿಣಾಮವನ್ನು ಈಗ ಇಡೀ ವಿಶ್ವ ಅನುಭವಿಸುತ್ತಿದೆ' ಎಂದರು. 

ಯೂರೋಪಿನ ವಿಜ್ಞಾನಿಯ ಆರೋಪವನ್ನು ಅಲ್ಲಗಳೆಯಲು ಚೀನಾದ ಪ್ರತಿನಿಧಿಗಳು ತುದಿಗಾಲಲ್ಲಿ ನಿಂತಿದ್ದು,  'ಪ್ರಭುವೇ, ಈ ಯೂರೋಪಿನ ವಿಜ್ಞಾನಿಯ ವಾದದಲ್ಲಿ ಹುರುಳಿಲ್ಲ. ಅವರದೇ ದೇಶದ ಹಲವು ವಿಜ್ಞಾನಿಗಳು ಅವರ ವಾದದ ಮಿಥ್ಯತೆಯನ್ನು ಚರ್ಚಿಸಿ ಗೇಲಿ ಮಾಡಿದ್ದಾರೆ. ಸಾರ್ಸ್ ಮತ್ತು ಏಡ್ಸ್ನ ವೈರಾಣುಗಳ ವಿನ್ಯಾಸ, ಕೋವಿಡ್ ವೈರಾಣುವಿನ ವಂಶವಾಹಿ ನಕ್ಷೆಯಲ್ಲಿ ಕಂಡು ಬಂದಿರುವುದರಿಂದ, ಆ ಎಲ್ಲ ವೈರಸ್ಸುಗಳು ಒಂದೇ ವರ್ಗಕ್ಕೆ ಸೇರಿದವಾಗಿರಬಹುದು ಎಂದು ಮಾತ್ರ ಹೇಳಬಹುದೇ ಹೊರತು ಇನ್ಯಾವ  ಅರ್ಥವನ್ನು ಕಲ್ಪಿಸಿಕೊಳ್ಳುವುದು ಸರಿಯಲ್ಲ,' ಎಂದರು. 

ಏತನ್ಮಧ್ಯೆ, ಅಮೆರಿಕಾದ ತಂಡದ ನಾಯಕರ ತುಡಿತ ಅವರ ನೆತ್ತಿಗೇರಿತ್ತು. ಬಿರುಗಾಳಿ ಮುನ್ನುಗುವಂತೆ ತಮ್ಮ ವಾದ ಮಂಡನೆಗೆ ಎದ್ದು ನಿಂತ ಅವರು, 'ಪ್ರಭುವೇ, ಇಡೀ ವಿಶ್ವದಲ್ಲಿ ಕೋವಿಡ್ನಿಂದ ಅತಿ ಹೆಚ್ಚು ಸಂಕಷ್ಟವನ್ನು ಅನುಭವಿಸುತ್ತಿರುವ ದೇಶ ನಮ್ಮದು. ಇಡೀ ವಿಶ್ವದ ಎಲ್ಲ ದೇಶಗಳೊಂದಿಗೆ ಚೀನಾ ಯುದ್ಧ ಮಾಡಲು ಕಾಲು ಕೆರದು ನಿಂತಿದೆ. ತನ್ನ ಗಡಿ ಸುತ್ತಲಿವಿರುವ ಎಲ್ಲಾ ದೇಶಗಳೊಂದಿಗೆ ಅದು ಘರ್ಷಣೆಯ ಧೋರಣೆಯನ್ನು ಪ್ರದರ್ಶಿಸುತ್ತಿದೆ. ತನ್ನದೇ ಭಾಗವಾಗಿರುವ ಹಾಂಗಕಾಂಗ್ ನಲ್ಲಿ  ನಡೆಯುತ್ತಿರುವ ಪ್ರಜಾಪ್ರಭುತ್ವದ ಪರವಾದ ಜನಾಂದೋಲನವನ್ನು ಚೀನಾ ತನ್ನ ರಾಕ್ಷಸೀ ಕೃತ್ಯಗಳೊಂದಿಗೆ ದಮನಗೊಳಿಸುತ್ತಿದೆ. ತನ್ನದೇ ಜನರುಗಳ ಮೇಲೆ ದೌರ್ಜನ್ಯವೆಸಗಿ, ಕೊಂದು, ಅವರುಗಳ ಬಾಯ್ಮುಚ್ಚಲೆತ್ನಿಸುತ್ತಿರುವ ಚೀನಾ, ತನ್ನೊಂದಿಗೆ ತಾನು ಯುದ್ಧನಿರತವಾಗಿರುವಂತೆ ಕಾಣಿಸುತ್ತಿದೆ. ಇಡೀ ವಿಶ್ವದ ಮೇಲೆ ತನ್ನ ಪಾರುಪತ್ಯವನ್ನು ಸಾಧಿಸಲು ಏನನ್ನಾದರೂ ಮಾಡಲು ಚೀನಾ ಸಿದ್ಧವಾಗಿ ನಿಂತಿದೆ. 

ಕಳೆದ ನಾಲ್ಕು ದಶಕಗಳಿಂದ ಇಡೀ ವಿಶ್ವವನ್ನು ವಿಶ್ವವ್ಯಾಪಿ ವೈರಾಣುಗಳು ಕಾಡುತ್ತಿವೆಯೆಂದು ಚೀನಾಕ್ಕೆ ತಿಳಿದಿದೆ. ೧೯೮೦ರ ಏಡ್ಸ್ ರೋಗದಿಂದ  ಶುರುವಾದ ಈ ಸರಣಿಯಲ್ಲಿ ವಿಶ್ವ, ಹಕ್ಕಿ-ಜ್ವರ, ಹಂದಿ-ಜ್ವರ, ಸಾರ್ಸ್, ಮೆರ್ಸ್ ಮತ್ತು ಎಬೋಲಾ (SARS, MERS and EBOLA)ದಂತಹ ಮಾರಕ ರೋಗಗಳನ್ನು ಎದುರಿಸುತ್ತಿದೆ. ವುಹಾನ್ನಿನ ವೈರಾಣು ಪ್ರಯೋಗಾಲಯ ೨೦೧೩ರಲ್ಲೇ  ಕೋವಿಡ್-೧೯ರ ವೈರಾಣುವಿನ ಸಂಶೋಧನೆಯನ್ನು ನಡೆಸಿತ್ತು.  ಅದರ ಸೋಂಕು ಮನುಕುಲಕ್ಕೆ ಮಾರಕವಾಗಬಹುದೆಂಬುದು ಚೀನಾಕ್ಕೆ ಚೆನ್ನಾಗೇ ತಿಳಿದಿತ್ತು. ಕೋವಿಡ್ ವೈರಾಣುವನ್ನು ಜೈವಿಕಾಸ್ತ್ರವಾಗಿ ಪ್ರಯೋಗಿಸುವ ದುಷ್ಕೃತ್ಯಕ್ಕೆ ಕೈ ಹಾಕಿದ ಚೀನಾ, ಅದರ ಪ್ರಯೋಗವನ್ನು ತನ್ನ ಪ್ರಜೆಗಳ ಮೇಲೇ ಆರಂಭಿಸಿತು. ಇಂತಹ ನೀಚ ಕೃತ್ಯವನ್ನು ಮರೆಮಾಚಲು, ತನ್ನ ಕೆಲವು ವಿಜ್ಞಾನಿಗಳಿಂದ "ಕೋವಿಡ್ ಸೋಂಕಿನ ಹರಡುವಿಕೆ ಆಕಸ್ಮಿಕವಾಗಾಗಿದ್ದು" ಎಂಬ ಹೇಳಿಕೆಯನ್ನು ನೀಡಿಸಿ ನಾಟಕವಾಡುತ್ತಿದೆ. 

ಕಳೆದ ವರ್ಷದ ಕಡೆಯ ದಿನವಾದ, ೩೧-೧೨-೨೦೧೯ರಂದೇ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ  ಕೋವಿಡ್ ವೈರಾಣುವಿನ ಬಗ್ಗೆ ಮಾಹಿತಿಯನ್ನು ತಾನು ಹಂಚಿಕೊಂಡಿರುವುದಾಗಿ ಚೀನಾ ಹೇಳಿಕೊಂಡಿದೆ. ಮಾರನೇ ದಿನವಾದ, ೦೧-೦೧-೨೦೨೦ರಂದು ಚೀನಾ ಸುಮಾರು ೨ ಲಕ್ಷ ಜನರುಗಳನ್ನು, ವುಹಾನ್ನಿಂದ ಬೇರೆ ಬೇರೆ ದೇಶಗಳಿಗೆ ವಿಮಾನ ಪ್ರಯಾಣದ ಮೂಲಕ ಕಳುಹಿಸಿದೆ. ಅಷ್ಟು ಹೊತ್ತಿಗಾಗಲೇ ಚೀನಾ, ಕೋವಿಡ್ನ ಎಚ್ಚರಿಕೆಯ ಸೀಟಿಯನ್ನು ಬಾರಿಸಿದ ತನ್ನ ಎಲ್ಲಾ ವೈದ್ಯರುಗಳ ಹಾಗೂ ವಿಜ್ಞಾನಿಗಳ ಬಾಯ್ಮುಚ್ಚಿಸಿಯಾಗಿತ್ತು. ತನ್ನ ದೇಶದಲ್ಲಿ ಕೋವಿಡ್ ರೋಗದಿಂದ ಉಂಟಾದ ಪ್ರಥಮ ಸಾವನ್ನು ಚೀನಾ ೨೦೨೦ರ ಜನವರಿ ೯ರಂದು ಪ್ರಕಟಿಸಿತ್ತು. ಆ ದಿನದ ನಂತರವೂ ಚೀನಾ ವುಹಾನ್ನಿಂದ, ಸುಮಾರು ೧೦೦೦ ಸೋಂಕಿತರು ಸೇರಿದಂತೆ, ೭೫,೦೦೦ ಪ್ರಯಾಣಿಕರನ್ನು ವಿಶ್ವದ ಎಲ್ಲೆಡೆಗೆ ರವಾನಿಸಿತ್ತು. 

೨೦೨೦ರ ಜನವರಿ ೧೦ರಂದು ಕೂಡ ಚೀನಾ ಕೋವಿಡ್ ವೈರಾಣು ಮಾನವನಿಂದ ಮಾನವನಿಗೆ ಹರಡುವುದಿಲ್ಲವೆಂದು ಹೇಳುತ್ತಾ, ವಿಶ್ವವನ್ನು ತಪ್ಪು ದಾರಿಗೆಳೆಯುವ ಪ್ರಯತ್ನವನ್ನು ಮುಂದುವರೆಸಿತ್ತು. "ತನ್ನ ಮಾಲೀಕನ ಮಾತುಗಳನ್ನೇ ಪುನರುಚ್ಛರಿಸು"ತ್ತಿರುವಂತೆ ಕಂಡ ವಿಶ್ವ ಆರೋಗ್ಯ ಸಂಸ್ಥೆಯೂ, ಕೋವಿಡ್ ವೈರಾಣು ಮಾನವರಿಂದ ಮಾನವರಿಗೆ ಹರಡುವುದಿಲ್ಲ ಮತ್ತು ಚೀನಾದ ಆರೋಗ್ಯ ಸಿಬ್ಬಂಧಿಗಳ್ಯಾರಿಗೂ ಕೋವಿಡ್ನ ಸೋಂಕು ಹರಡಿಲ್ಲವೆಂದು ಹೇಳಿತ್ತು.  ಇನ್ನೂ ಕೊಂಚ ಮುಂದುವರಿದ ವಿಶ್ವ ಆರೋಗ್ಯ ಸಂಸ್ಥೆ "ವಿಶ್ವದ ಯಾವುದೇ ದೇಶ ಚೀನಾದೊಂದಿಗಿನ ವ್ಯಾಪಾರ ಮತ್ತು ಪ್ರಯಾಣದ ಸಂಬಂಧವನ್ನು ಕಡಿದುಕೊಳ್ಳಬಾರದೆಂಬ ನೀತಿಬೋಧೆಯನ್ನು ಕೂಡ ಮಾಡಿತ್ತು." 

ಈ ಎಲ್ಲ ಘಟನೆಗಳನ್ನು ಅವಲೋಕಿಸಿದರೆ, ಚೀನಾ ಬೇಕೆಂದೇ ಕೋವಿಡ್ ವೈರಾಣು ವಿಶ್ವವನ್ನೆಲ್ಲಾ ವ್ಯಾಪಿಸುವಂತೆ ಮಾಡಿದ್ದು, ತಾನು ಮಾತ್ರ ಕ್ಷೇಮವಾಗಿ ಉಳಿಯುವ ಯೋಜನೆಯನ್ನು ವ್ಯವಸ್ಥಿತವಾಗಿ ಮಾಡಿದೆಯೆಂಬುದು ಸಾಬೀತಾಗುತ್ತದೆ. ಆದುದರಿಂದ ತಾವು ಚೀನಾಕ್ಕೆ ಅತಿ ಘೋರವಾದ ಶಿಕ್ಷೆಯನ್ನು ವಿಧಿಸಬೇಕೆಂದು ನಾನು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ' ಎಂದರು. 

ಅಮೆರಿಕಾದವರ ಆವೇಶಭರಿತ ವಾದವನ್ನು ತದೇಕ ಚಿತ್ತರಾಗಿ  ಕೇಳಿದ, ಚೀನಾ ತಂಡದವರೇನೂ  ವಿಚಲಿತರಾದಂತೆ ಕಂಡು ಬರಲಿಲ್ಲ. ಚೀನಾ ತಂಡದ ನಾಯಕ ತನ್ನ ಪ್ರತಿವಾದವನ್ನು ಮಂಡಿಸುತ್ತಾ, 'ಸದಾ ಯುದ್ಧನಿರತ ದೇಶವೆಂದರೆ ಅದು ಅಮೇರಿಕಾ ಮಾತ್ರ, ನಮ್ಮ ದೇಶವಲ್ಲ. ಎರಡನೇ ಮಹಾಯುದ್ಧದನಂತರವೂ ಪ್ರಪಂಚಾದ್ಯಂತ ವಿವಿಧ ದೇಶಗಳೊಂದಿಗೆ ಅಮೇರಿಕಾ ಕಾಲು ಕೆರದು ಯುದ್ಧ ಮಾಡುತ್ತಿದೆ. 

ವಿಶ್ವದ ಮುಂಚೂಣಿಯಲ್ಲಿರುವ ಅಮೆರಿಕ, ಮಹಾಮಾರಿ ಕೋವಿಡ್ನಿಂದ ತತ್ತರಿಸುತ್ತಿರುವ ದೇಶಗಳಿಗೆ ಸಹಾಯಹಸ್ತವನ್ನು ನೀಡುವ ಯಾವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿಲ್ಲ. ತನ್ನ ಮಿತ್ರ ದೇಶಗಳ ಕಡೆ ಕೋವಿಡ್ ಚಿಕಿತ್ಸಾ ಸಾಮಗ್ರಿಗಳನ್ನು ಹೊತ್ತು ಹೊರಟ ಹಡಗುಗಳನ್ನೇ ತನ್ನ ಕಡೆಗೆ ಅಪಹರಿಸಿದ ಆರೋಪ ಅಮೆರಿಕಾದ ಮೇಲಿದೆ. ಕೋವಿಡ್ ನಿಯಂತ್ರಣಕ್ಕಾಗಿ ಲಸಿಕೆಯ ಸಂಶೋಧನೆಯನ್ನು ನಡೆಸುತ್ತಿರುವ ಜರ್ಮನಿ ದೇಶದ ಪ್ರಯೋಗಾಲಯವೊಂದನ್ನು, ತನ್ನ ದೇಶಕ್ಕೆ ಸ್ಥಳಾಂತರಿಸುವಂತೆ ಅಮೇರಿಕಾ ಬಲಾತ್ಕಾರ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ.  ಮಲೇರಿಯಾ ಔಷಧಿಯಾದ ಎಚ್.ಸಿ.ಕ್ಯೂ.ವನ್ನು ಭಾರಿ ಪ್ರಮಾಣದಲ್ಲಿ ಪಡೆಯಲು, ಅಮೇರಿಕಾ ಭಾರತದ ದೇಶದ ಮೇಲೆ ಇನ್ನಿಲ್ಲದ ಒತ್ತಡವನ್ನು ಹೇರಿದ್ದು, ಗೂಂಡಾಗಿರಿಯ ವರ್ತನೆಯೇ ಸರಿ.  ಬೇರ್ಯಾವ ದೇಶದ ಮೇಲೂ ಬೊಟ್ಟು ತೋರಿಸಿ ಆರೋಪಿಸುವ ಅರ್ಹತೆ ಅಮೆರಿಕಾಗಿಲ್ಲ.

ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ತಂಡವೊಂದು, ೨೦೧೬ರಲ್ಲೇ ಕೋವಿಡ್-೧೯ ವೈರಾಣುವನ್ನು ಹೋಲುವ ವೈರಾಣುವೊಂದನ್ನು ಕಂಡು ಹಿಡಿದಿತ್ತು. ಹಾಗಾಗಿ ಕೋವಿಡ್ ವೈರಾಣುವನ್ನು ಅಮೆರಿಕವೇ ಇಡೀ ವಿಶ್ವಾದ್ಯಂತ ಹರಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 

೨೦೨೦ರ ಜನವರಿ ೨೦ರಂದು ನಾವು ಇಡೀ ವುಹಾನ್ ನಗರದಲ್ಲಿ ಸಂಪೂರ್ಣ ಲಾಕ್ಡೌನನ್ನು ಜಾರಿಗೊಳಿಸಿದೆವು. ಜನವರಿ ೩೧ರಂದು, ಟ್ರಂಪ್ ಸರಕಾರ, ಚೀನಾ ದೇಶಕ್ಕೆ ಭೇಟಿ ನೀಡಿರುವ ಯಾವುದೇ ಬೇರೆ ದೇಶಗಳ ಪ್ರಜೆ, ಅಮೇರಿಕಾ ಪ್ರವೇಶಿಸುವುದನ್ನು ನಿಷೇಧಿಸಿತ್ತು. ಅದರನಂತರವೂ ಸುಮಾರು ೪೦,೦೦೦ದಷ್ಟು ಜನರು ಚೀನಾದಿಂದ ಹೊರಟು ಅಮೇರಿಕಾ ಸೇರಿದ್ದಾರೆ. ೨೦೨೦ರ ಮೊದಲ ಮೂರು ತಿಂಗಳುಗಳಲ್ಲಿ, ಚೀನಾದಿಂದ ನೇರ ಹಾರಾಟದಲ್ಲಿ ಹೊರಟ ಸುಮಾರು ೪,೩೦,೦೦೦ದಷ್ಟು ಜನರು ಅಮೇರಿಕಾವನ್ನು ತಲುಪಿದ್ದಾರೆ. ಇದೇ ಅವಧಿಯಲ್ಲಿ, ಸಹಸ್ರಾರು ಸೋಂಕಿತರು ಯೂರೋಪ್ನ ವಿವಿಧ ದೇಶಗಳಿಂದ ಅಮೆರಿಕಾವನ್ನು ಸೇರಿದ್ದಾರೆ. ೨೦೨೦ರ ಫೆಬ್ರವರಿ ೨೫ರ ಹೊತ್ತಿಗಾಗಲೇ ಶೇಷ-ವಿಶ್ವದ ಕೋವಿಡ್ ಸೋಂಕಿತರ ಸಂಖ್ಯೆ, ಚೀನಾ ದೇಶದ ಕೋವಿಡ್ ಸೋಂಕಿತರ ಸಂಖ್ಯೆಗಿಂತ ಹೆಚ್ಚಿತ್ತು. ಅಂತಹ ವಿಷಮ ಪರಿಸ್ಥಿತಿಯಲ್ಲೂ, ಅಮೆರಿಕಾದ "ನ್ಯೂ ಒರಲೆಯನ್ಸ್"  ನಗರದ ರಸ್ತೆಗಳಲ್ಲಿ, "ಮರ್ಡಿ ಗ್ರಾಸ್ ಹಬ್ಬ"ದ ಸಂಭ್ರಮನ್ನಾಚರಿಸಲು, ಹತ್ತಾರು ಸಾವಿರ ಸಂಖ್ಯೆಯಲ್ಲಿ ಜನಗಳು ಜಮಾಯಿಸಿದ್ದು ಮತ್ತು ಅದು ಕೋವಿಡ್ ಕಾಡ್ಗಿಚ್ಚಿನಂತೆ ಹರಡಲು ಕಾರಣವಾಗಿದ್ದು, ಎಲ್ಲರಿಗೂ ತಿಳಿದ ವಿಷಯವೇ. ಇಷ್ಟೆಲ್ಲ ದುರ್ಘಟನೆಗಳು ತನ್ನದೇ ಮೂಗಿನಡಿ ಜರುಗುತ್ತಿದ್ದರೂ, ಕಣ್ಮುಚ್ಚಿ ಕುಳಿತು, ತನ್ನ ದೇಶದ ಸೋಂಕಿತರ ಸಂಖ್ಯೆಯನ್ನು ತಾನೇ  ಹೆಚ್ಚಿಸಿಕೊಂಡ ಅಮೆರಿಕಾಕ್ಕೆ, ಚೀನಾವನ್ನು ಆಕ್ಷೇಪಿಸುವ ಹಕ್ಕೆಲ್ಲಿದೆ? 

ಕೋವಿಡ್ ವೈರಾಣು ಮಾನವ ಸೃಷ್ಟಿ ಎಂಬ ವಾದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಆದುದರಿಂದ ಅಮೇರಿಕಾ ಸೇರಿದಂತೆ ಬೇರೆಲ್ಲರೂ ಹೊರಿಸುತ್ತಿರುವ ಆರೋಪಗಳಿಂದ, ನಮ್ಮ ದೇಶ ಚೀನಾವನ್ನು ವಿಮುಕ್ತಗೊಳಿಸಬೇಕು ಎಂದು ನಾನು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ' ಎಂದರು. 

ಇಷ್ಟರ ನಡುವೆ, ರೋಹಿಣಿಯ ಚಿತ್ತ ತನ್ನ ಸ್ನೇಹಿತ ಡಾ.ಕಿರಣನ ಮೇಲೆ ನೆಟ್ಟಿತ್ತು. ಅವನೇಕೆ ತನ್ನ ವಾದವನ್ನು ಮಂಡಿಸುತ್ತಿಲ್ಲ ಎನ್ನುವಂತ್ತಿತ್ತು ಅವಳ ನೋಟ. ರೋಹಿಣಿಯನ್ನು ಓಲೈಸಲೆಂದೇ ಎದ್ದುನಿಂತಂತೆ ಕಂಡ ಡಾ. ಕಿರಣ್ ಮಾತನಾಡುತ್ತ, 'ಪ್ರಭುವೇ, "ತೇನವಿನಾ ತೃಣಮಪಿನಚಲತಿ" ಎಂಬುದು ನಮ್ಮ ದೇಶದ ಜನಗಳ ಅಚಲವಾದ ನಂಬಿಕೆ. ತಮ್ಮ ಆಣತಿಯಿಲ್ಲದ ಒಂದು ಹುಲ್ಲುಕಡ್ಡಿ ಕೂಡ ಕದಲದು ಎಂಬುದು ನಮ್ಮ ಜನರ ವಿಶ್ವಾಸ. ಕೋವಿಡ್ ವೈರಾಣು ಪ್ರಕೃತಿಯ ಸೃಷ್ಟಿ ಮಾತ್ರ ಎಂಬುದು ನನ್ನ ನಂಬಿಕೆ. ಏತಕ್ಕಾಗಿ ಎಂಬುದು ಯಾರಿಗೂ ತಿಳಿಯದ ವಿಷಯ. ಚೀನಾ ದೇಶದ ವುಹಾನ್ ನಗರದಲ್ಲಿ ಜನಗಳಿಗೆ ರೋಗದ ಸೋಂಕನ್ನು ಹರಡಿದ ಕೋವಿಡ್ ವೈರಾಣು, ಎಲ್ಲ ವೈರಾಣುಗಳಂತೆ ಪ್ರಾಣಿಗಳಿಂದ ಮಾನವನಿಗೆ ಬಂದದ್ದು. ಕೋವಿಡ್ ವೈರಾಣುವಿನ ಮೂಲದ ಸಂಶೋಧನೆಯಿಂದ, ಕೋವಿಡ್ ನಿವಾರಣೆಗೆ ಬೇಕಾದ ಲಸಿಕೆ ಮತ್ತು ಔಷಧಿಗಳ ತಯಾರಿಕೆಗೆ ಸಹಾಯವಾಗುತ್ತದೆ. 

ತಿಳಿದ ಮಾಹಿತಿಯನ್ನು ಹಂಚಿಕೊಳ್ಳುವಲ್ಲಿ ಚೀನಾ ವಿಳಂಬ ಮಾಡಿತು ಎಂಬ ಆರೋಪವನ್ನು ಸರಿ ಎಂದಿಟ್ಟುಕೊಂಡರೂ, ವಿಶಾಲ ಮನೋಭಾವದವರಾದ ನಮ್ಮ ಭಾರತೀಯರಿಗೆ "ಚೀನಾದ ನಾಗರಿಕರು ಮತ್ತು ಚೀನಾದ ಸರಕಾರ"ದ ನಡುವಿನ ಅಂತರ ಚೆನ್ನಾಗಿ ತಿಳಿದಿದೆ. "ಸರಕಾರಗಳ ನಡುವೆ  ಇರಬಹುದಾದ ವೈಷಮ್ಯಗಳಿಂದಾಗಿ, ಜನಗಳ ನಡುವೆ ಕಂದಕವೇರ್ಪಡುವುದು ಸರಿಯಲ್ಲ." ಕೋವಿಡ್ನ ಬಗ್ಗೆ ಎಚ್ಚರಿಕೆಯ ಸೀಟಿಯನ್ನೂದಿದ, ಚೀನಾದ ಹಲವು ವಿಜ್ಞಾನಿಗಳು ಹಾಗೂ ವೈದ್ಯರುಗಳು, ತಮ್ಮ ಜೀವದ ಹಂಗನ್ನು ತೊರೆದು, ಇಡೀ ವಿಶ್ವವನ್ನೆಚ್ಚರಿಸಿದ್ದಾರೆ. ಚೀನಾದ ಜಾಕ್ ಮಾರಿಗೆ  ಮತ್ತು ಅಲಿಬಾಬಾ ಕಂಪನಿಗೆ ಸೇರಿದ ಹಲವಾರು ಸೇವಾ ಸಂಸ್ಥೆಗಳು ಭಾರತ ಮತ್ತು ಇನ್ನಿತರ ದೇಶಗಳಿಗೆ,  ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗೆ ಬೇಕಾದ ಹಲವು ಪರಿಕರಗಳನ್ನು ಮತ್ತು ಪದಾರ್ಥಗಳನ್ನು  ಕೊಡುಗೆಯಾಗಿ ನೀಡಿವೆ. ವಿಶ್ವ ಮಟ್ಟದಲ್ಲಿ ದಾಪುಗಾಲನ್ನಿಟ್ಟು ಮುನ್ನಡೆಯುತ್ತಿರುವ ಭಾರತದ ಔಷಧೋದ್ಯಮಕ್ಕೆ (Indian Pharmacy Industry) ಬೇಕಾದ ಕಚ್ಚಾ ವಸ್ತುಗಳ ೭೦%ರಷ್ಟು ಭಾಗವನ್ನು ನಾವು ಚೀನಾದಿಂದ ಪಡೆಯುತ್ತಿದ್ದೇವೆ ಎಂಬುದರಲ್ಲಿ ಉತ್ಪ್ರೇಕ್ಷೆಯಿಲ್ಲ.  ಚೀನಾದೊಂದಿಗಿನ ಇಂತಹ ಸುಮಧುರ ಸಂಬಂಧವನ್ನು, ನಾವು ಬೇಜಾವಾಬ್ದಾರಿಯಿಂದ ಕೂಡಿದ ಆರೋಪಗಳನ್ನು ಮಾಡಿ, ದುರ್ಬಲಗೊಳಿಸಬಾರದು. ಕೋವಿಡ್ ವೈರಾಣು ಮಾನವ ಸೃಷ್ಟಿಯಲ್ಲ ಎಂಬ ನಮ್ಮ ಚೀನಾದ ಪ್ರತಿನಿಧಿಗಳ ವಾದವನ್ನು ನಾನು ಕೂಡ ಸಮರ್ಥಿಸುತ್ತೇನೆ.  ಚೀನಿಯರ ಪ್ರಾಮಾಣಿಕತೆಯನ್ನು ಅನುಮಾನಿಸುವುದಕ್ಕೆ ಯಾವುದೇ ಬಲವಾದ ಕಾರಣಗಳಿಲ್ಲ ಎಂಬುದು ನನ್ನ ಅನಿಸಿಕೆ'  ಎಂದರು. ಹೀಗೆಂದ         ಡಾ. ಕಿರಣನ ವಿನೂತನವಾದ ವಿಷಯ ಮಂಡನೆಯನ್ನು, ತಲೆಯಾಡಿಸುತ್ತಾ ರೋಹಿಣಿ ಮೆಚ್ಚಿಕೊಂಡಿದ್ದು, ಹಾಗೂ ಕಿರಣ ಅದರಿಂದ ಪುಳಕಿತಗೊಂಡಿದ್ದು, ತಂದೆ ರಾಜುರವರ ಗಮನಕ್ಕೂ  ಬಾರದಿರಲಿಲ್ಲ. 

ಹೊಸ ವಾದ ಸರಣಿಯೊಂದಿಗೆ ಎದ್ದು ನಿಂತ ರೋಹಿಣಿಗೆ, ತಾನು ಈಗ ಮಂಡಿಸಲಿರುವ ವಾದವನ್ನು ಅಲ್ಲಗಳೆಯುವುದು ಯಾರಿಗೂ ಸಾಧ್ಯವಾಗದೆಂಬ ನಂಬಿಕೆಯಿತ್ತು. 'ಪ್ರಭುವೇ, ಏಷ್ಯಾದ ವಿಜ್ಞಾನಿಯೊಬ್ಬರ ವರದಿಯ ಆಧಾರದ ಮೇಲೆ ಒಂದು ವಿಷಯವನ್ನು ಎಲ್ಲರ ಮುಂದಿಡುತ್ತಿದ್ದೇನೆ. ಚೀನಾದ ಪ್ರಯೋಗಾಲಯಗಳ ಒಳ ಉದ್ದೇಶಗಳು ಮತ್ತು ಅವುಗಳು ಕಾರ್ಯ ನಿರ್ವಹಿಸುವ ವಿಧಾನಗಳು ಆ ವಿಜ್ಞಾನಿಗೆ ಚೆನ್ನಾಗಿ ತಿಳಿದಿದೆ. ಅವರ ವಾದದ ಪ್ರಕಾರ, ಕೋವಿಡ್ ವೈರಾಣು ಬಾವಲಿಗಳಿಂದ ಹರಡಿದ್ದಲ್ಲ. ಜೈವಿಕ ಅಸ್ತ್ರವೊಂದನ್ನು ತಯಾರಿಸುವ ಉದ್ದೇಶದಿಂದ ಕೋವಿಡ್ ವೈರಾಣುವನ್ನು ಚೀನಾದ ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ. ಒಂದೊಮ್ಮೆ ಕೋವಿಡ್ ವೈರಾಣು ಪ್ರಕೃತಿಯ ಕ್ರಿಯೆಯಿಂದ ಜನಿತವಾಗಿದ್ದರೆ, ಅದು ಚೀನಾದ  ವುಹಾನ್ ನಗರವಿರುವ ಹುಬೆಯ್ ಪ್ರಾಂತ್ಯದ ವಾತಾವರಣ ಮತ್ತು ಹವಾಮಾನವಿರುವ ಅನ್ಯ ಪ್ರಾಂತ್ಯಗಳಲ್ಲಿ ಮಾತ್ರ ಹರಡಬೇಕಿತ್ತು. ಆದರೆ ಹಾಗಾಗದೆ, ಬೇರೆ ಬೇರೆ ರೀತಿಯ ವಾತಾವರಣಗಳಿರುವ  ವಿಶ್ವದ ಎಲ್ಲಾ ಮೂಲೆ ಮೂಲೆಗಳಲ್ಲೂ ಕೋವಿಡ್ ಸಮನಾಗಿ ಹರಡುತ್ತಿದೆ. ಆದುದರಿಂದ ಕೋವಿಡ್ ವೈರಾಣು ಮಾನವ ಸೃಷ್ಟಿಯೇ ಹೊರತು ಸ್ವಾಭಾವಿಕವಾದ ಪ್ರಕ್ರಿಯೆಯಿಂದ ಉಂಟಾದುದಲ್ಲ ಎಂದು ಸಾಬೀತಾಗುತ್ತದೆ' ಎಂದ ರೋಹಿಣಿ ಚೀನಾದವರ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾ ಕುಳಿತಳು. 

ಯಾವ ಏಷ್ಯಾದ ವಿಜ್ಞಾನಿಯ ವರದಿಯನ್ನು ರೋಹಿಣಿ ಉಲ್ಲೇಖಿಸಿದ್ದಳೋ, ಅದೇ ವಿಜ್ಞಾನಿ ಖುದ್ದು ಪ್ರತ್ಯಕ್ಷನಾಗಿ ಸಭೆಯಲ್ಲಿ ಎದ್ದು ನಿಂತಾಗ, ರೋಹಿಣಿ ಆಶ್ಚರ್ಯಚಕಿತಳಾದಳು. ಕೋವಿಡ್ ವೈರಾಣುವಿನ ಮಾನವ ಸೃಷ್ಟಿಯ ಬಗ್ಗೆ,  ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವರದಿಯೆಂದು ಹಲವಾರು ಜನರು ಹರಿಬಿಟ್ಟಿರುವ, ಚೀನಾದ ಮೇಲಿನ ಆರೋಪ ಸುಳ್ಳೆಂದು ಆ ವಿಜ್ಞಾನಿ ಹೇಳಿದಾಗ ಸಭಿಕರೆಲ್ಲರೂ ತಬ್ಬಿಬ್ಬುಗೊಂಡರು. ತನ್ನ ವರದಿಯನ್ನಾಧರಿಸಿ ಹಲವರು ಚೀನಾದ ಮೇಲೆ ಮಾಡಿರುವ ಆರೋಪದಿಂದ, ಚೀನಾದ ಖ್ಯಾತಿಗೆ ಧಕ್ಕೆಯುಂಟಾಗಿದ್ದು, ಅದಕ್ಕಾಗಿ ತಾನು ಚೀನಾದ ಕ್ಷಮೆಯನ್ನು ಕೇಳುತ್ತಿರುವುದಾಗಿಯೂ ಆ ವಿಜ್ಞಾನಿ ಹೇಳಿದರು. 

ಚೀನಾದ ತಂಡದ ಬಹುದೂರ ಕುಳಿತಿದ್ದ, ಚೀನಾದ ಯುವ ನಾಗರೀಕನೊಬ್ಬ ಮಾತನಾಡಲು ಎದ್ದು ನಿಂತು ಎಲ್ಲರ ಗಮನ ಸೆಳೆದನು. 'ದೇವರೇ, ನಾನೊಬ್ಬ ಮೃತಪಟ್ಟ ವ್ಯಕ್ತಿ. ನಾನೊಬ್ಬ ಚೀನಾ ದೇಶದ ವೈದ್ಯ. ೨೦೧೯ರ ಕಡೆಯ ದಿನಗಳಲ್ಲಿ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಯೊಬ್ಬನು ಚಿಕಿತ್ಸೆಗಾಗಿ ನನ್ನಲ್ಲಿಗೆ ಬಂದಿದ್ದನು. ಸುಮಾರು ಒಂದು ದಶಕದ ಹಿಂದೆ ಪ್ರಪಂಚವನ್ನು ಕಾಡಿದ ಉಸಿರಾಟದ ಸಮಸ್ಯೆಯ ಸಾಂಕ್ರಾಮಿಕವೊಂದರ ಲಕ್ಷಣಗಳನ್ನೇ, ಆ ರೋಗಿಯ ಹೊಸ ರೋಗವು ಹೋಲುತ್ತಿತ್ತು. ಆ ರೋಗದ ಬಗ್ಗೆ ಹೆಚ್ಚು ಸಂಶೋಧಿಸುವಂತೆ ಮತ್ತು ಜಾಗರೂಕರಾಗಿರುವಂತೆ ನಾನು ನನ್ನ ಮಿತ್ರ ವೈದ್ಯರುಗಳನ್ನು ಎಚ್ಚರಿಸಿದೆ. ಬಿರುಗಾಳಿಯಂತೆ ಹರಡಿದ ನನ್ನ ಎಚ್ಚರಿಕೆಯ ಸಂದೇಶ, ಪೊಲೀಸರ ಗಮನಕ್ಕೂ ಬಂತು. ನನ್ನ ಸಂದೇಶದ ಸತ್ಯಾಸತ್ಯತೆಯ ತನಿಖೆಯನ್ನು ಮಾಡಿದ ಪೊಲೀಸರು, ನನ್ನ ಮೇಲೆ ಸಮಾಜದ ಶಾಂತಿಯನ್ನು ವಿನಾಕಾರಣ ಕದಡಿದ ಆರೋಪವನ್ನು ಹೊರಿಸಿ, ನನ್ನಿಂದ ತಪ್ಪೊಪ್ಪಿಗೆಯ ಪತ್ರವನ್ನೂ ಬರೆಸಿಕೊಂಡರು. ನನ್ನ ಮೇಲಾದ ಹಿಂಸಾಚಾರಕ್ಕೆ ಚೀನಾದ ಜನತೆಯಿಂದ ತೀವ್ರವಾದ ವಿರೋಧ ವ್ಯಕ್ತವಾಯಿತು. ಹೊಸದಾಗಿ ಕಂಡುಬಂದಿದ್ದ ರೋಗವೊಂದನ್ನು ಕುರಿತು ನಾನು ಎಚ್ಚರಿಕೆಯ ಸೀಟಿಯನ್ನು ಊದಿದ್ದನ್ನು ಪೊಲೀಸರು, ವದಂತಿಗಳನ್ನು ಹರಡಿದ ಅಪರಾಧವೆಂದು ಆರೋಪಿಸಿದರು. ಹೊಸ ರೋಗದ ಸುದ್ದಿಯ ಹಬ್ಬುವಿಕೆ ಚೀನಾದ ಮಾಣಿಜ್ಯೋದ್ಯಮಕ್ಕೆ ಮಾರಕವಾಗಬಹುದೆಂಬುದು ಚೀನೀ ಪೊಲೀಸರ ಅನಿಸಿಕೆಯಿರಬಹುದು. 

ರೋಗಿಯೊಬ್ಬರಲ್ಲಿ ನಾನು ಪತ್ತೆ ಹಚ್ಚಿದ ಹೊಸ ರೋಗವೊಂದನ್ನು, ಕೆಲವು ದಿನಗಳನಂತರ "ಕೋವಿಡ್-೧೯" ರೋಗ ಎಂದು ವಿಜ್ಞಾನಿಗಳು ಕಂಡು ಹಿಡಿದರು. ಕೆಲವು ದಿನಗಳನಂತರ ನಾನು ಕೂಡ ಅದೇ ರೋಗದಿಂದ ಸೋಂಕಿತನಾದೆ. ಕೋವಿಡ್ ರೋಗಿಯೆಂದು ಪರಿಗಣಿಸಲ್ಪಟ್ಟ ನನ್ನನು ನಿರ್ಬಂಧನದಲ್ಲಿಟ್ಟು(ಕ್ವಾರಂಟೈನ್), ನನಗೆ ಚಿಕಿತ್ಸೆಯನ್ನು ನೀಡಲಾರಂಭಿಸಿದರು. ಮತ್ತೆ ಕೆಲವು ದಿನಗಳನಂತರ ನಾನು ಅದೇ ರೋಗಕ್ಕೆ ಬಲಿಯಾಗಿ ಸತ್ತೆ. ಕೋವಿಡ್ ರೋಗದ ಬಗ್ಗೆ ಎಚ್ಚರಿಕೆಯ ಸೀಟಿಯನ್ನು ನಾನು ಊದಿದ ಪ್ರಕ್ರಿಯೆಗಿಂತ ನನ್ನ ಸಾವು, ಆ ರೋಗದ ಎಚ್ಚರಿಕೆಯನ್ನು ಅತಿ ದೊಡ್ಡದಾದ ಪ್ರಮಾಣದಲ್ಲಿ, ಇಡೀ ವಿಶ್ವಕ್ಕೇ ಸಾರಿತ್ತು. ನಾನು ಮೃತಪಟ್ಟಿದ್ದಕ್ಕೆ ನನಗೆ ವಿಷಾದವಿಲ್ಲ. ತಮ್ಮ ಇಚ್ಚೆಯಂತೆ ನನ್ನ ಸಾವು ಉಂಟಾಗಿದೆ. ನನ್ನ ದೇಶ ಚೀನಾವನ್ನು ಮತ್ತು ಇಡೀ ವಿಶ್ವವನ್ನು ಕೋವಿಡ್ ರೋಗದಿಂದ ಬೇಗ ಮುಕ್ತಗೊಳಿಸಬೇಕೆಂದು ತಮ್ಮನ್ನು ಪ್ರಾರ್ಥಿಸಿಕೊಳ್ಳುತೇನೆ,' ಎಂದ ಆ ತರುಣ ವೈದ್ಯನ ಮಾತುಗಳನ್ನು ಕೇಳಿ ಎಲ್ಲಾ ಸಭಿಕರು ದುಃಖತಪ್ತರಾದರು. 

ಹೆಚ್ಚು ಪರಿಚಯವಿಲ್ಲದ ಮತ್ತೊಬ್ಬ ವ್ಯಕ್ತಿ ಮಾತನಾಡಲು ಎದ್ದು ನಿಂತಾಗ, ದೇವರ ನ್ಯಾಯಾಲಯದ ಸಭಿಕರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. 'ನನ್ನ ಹೆಸರು ಡಾ. ದ್ವಾರಕಾನಾಥ್ ಎಸ್. ಕೊಟ್ನಿಸ್. ನಾನು ಭಾರತ ದೇಶದ ಮಹಾರಾಷ್ಟ್ರ ರಾಜ್ಯದವನು. ೧೯೩೮ರಲ್ಲಿ ಜಪಾನಿನ ಆಕ್ರಮಣದಿಂದ ಗಾಯಗೊಂಡ  ಚೀನಾದ ಸೈನಿಕರ ಶುಶ್ರೂಷೆಗೆಂದು ನನ್ನನ್ನು ಭಾರತದಿಂದ ಚೀನಾಕ್ಕೆ ಕಳುಹಿಸಲಾಯಿತು. ನಾನು ನನ್ನ ಕೆಲಸವನ್ನು ಮತ್ತು ಚೀನಾದ ಜನತೆಯನ್ನು ಪ್ರೀತಿಸುತಿದ್ದೆ. ಚೀನಾದ ಜನರೂ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಚೀನಾದ ಯುವತಿಯೊಬ್ಬಳನ್ನು ಪ್ರೀತಿಸಿದ ನಾನು ಅವಳನ್ನೇ ಮದುವೆ ಕೂಡ ಆದೆ. ದುರದೃಷ್ಟವಶಾತ್ ರೋಗವೊಂದಕ್ಕೆ ತುತ್ತಾದ ನಾನು ಚೀನಾದಲ್ಲಿ, ೧೯೪೨ರಲ್ಲೇ ಮೃತಪಟ್ಟೆ.  ಆಗ ನನ್ನ ವಯಸ್ಸು ಕೇವಲ ೩೨ ವರ್ಷವಾಗಿತ್ತು. "ನಮ್ಮ ಸೈನ್ಯ ಸಹಾಯ ಹಸ್ತವೊಂದನ್ನು ಕಳೆದುಕೊಂಡಿದೆ. ನಮ್ಮ ದೇಶ ಸನ್ಮಿತ್ರನೊಬ್ಬನನ್ನು ಕಳೆದುಕೊಂಡಿದೆ. ಗಡಿಯ ಎಲ್ಲೆಗಳನ್ನು ದಾಟಿದ ಅವನ ಸೇವಾ ಮನೋಭಾವವನ್ನು ಗೌರವಿಸೋಣ," ಎಂಬುದು ಅಂದಿನ ಚೀನಾ ದೇಶದ ಸರ್ವೋಚ್ಚ  ನಾಯಕರು ನನ್ನ ಬಗ್ಗೆ ನುಡಿದ ಮೆಚ್ಚುಗೆಯ ಮಾತುಗಳಾಗಿದ್ದವು. ನನ್ನ ನೆನಪಿನ ಸ್ಮಾರಕವೊಂದನ್ನು ಚೀನಾದ ಹೆಬಿ ಪ್ರಾಂತ್ಯದಲ್ಲಿ ನಿರ್ಮಿಸಲಾಗಿದೆ. ಈಗಲೂ ಕೂಡ ಚೀನಿಯರ ಪಾಲಿಗೆ ನಾನೊಬ್ಬ ಗೌರವಾನ್ವಿತ ಮಿತ್ರ. ನನ್ನ ಅಂಚೆ ಚೀಟಿಯೊಂದು ಕೂಡ ಅಲ್ಲಿ ಪ್ರಕಟವಾಗಿದ್ದು, ೨೦೦೯ರಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ, "ಚೀನಾದ ಮೊದಲ ೧೦ ಸನ್ಮಿತ್ರರ ಪಟ್ಟಿಯಲ್ಲಿ," ನಾನು ಕೂಡ ಒಬ್ಬನಾಗಿ ಆಯ್ಕೆಗೊಂಡಿದ್ದೇನೆ. ನನ್ನ ಕತೆಯಿಂದ "ಚೀನಾ ಸುಸಂಸ್ಕೃತ ದೇಶವೊಂದೆಂಬುದು" ಎಲ್ಲರಿಗೂ ಮನವರಿಕೆಯಾಗುತ್ತದೆ. ನನ್ನ ಮರಣದನಂತರ ಭಾರತಕ್ಕೆ ಭೇಟಿ ನೀಡಿರುವ, ಚೀನಾದ ಹಿರಿಯ ನಾಯಕರುಗಳೆಲ್ಲರೂ, ನನ್ನ ಸ್ಮರಣೆಯನ್ನು ಗೌರವಿಸಲು, ನನ್ನ ಕುಟುಂಬದ ಸದಸ್ಯರುಗಳನ್ನು ಭೇಟಿ ಮಾಡುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದಾರೆ. ನನ್ನ ಸೇವಾ ಸ್ಮರಣೆ ಭಾರತ-ಚೀನಾದ ಬಾಂಧವ್ಯವನ್ನು ಬೆಸೆಯುವ ಕಾರ್ಯವನ್ನು ಮಾಡುತ್ತಿರುವ ಬಗ್ಗೆ ನನಗೆ ಹೆಮ್ಮೆಯಿದೆ. 

ಭಾರತದಲ್ಲೂ ನನಗೆ ಅಪಾರ ಗೌರವ ದೊರೆತಿದೆ. ನನ್ನ ಜೀವನಾಧಾರಿತ  "ಡಾ. ಕೊಟ್ನಿಸ್ ಕಿ ಅಮರ್ ಕಹಾನಿ" ಎಂಬ ಚಲನ ಚಿತ್ರವೊಂದನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ, ೧೯೪೬ರಲ್ಲಿ ತಯಾರಿಸಲಾಯಿತು. ಸುಪ್ರಸಿದ್ಧ ನಟರಾದ ವಿ. ಶಾಂತಾರಾಮರವರು ನನ್ನ ಪಾತ್ರವನ್ನು ನಿರ್ವಹಿಸಿ, ಚಿತ್ರದ ನಿರ್ದೇಶನವನ್ನು ಸಹ ಮಾಡಿದ್ದರು. 

ಕೋವಿಡ್ ರೋಗದ ಬಗ್ಗೆ ಎಚ್ಚರಿಕೆಯ ಸೀಟಿಯನ್ನುಸಕಾಲದಲ್ಲಿ ಊದಿ, ಇಡೀ ವಿಶ್ವವನ್ನೇ ಎಚ್ಚರಿಸಿದ ಚೀನಾದ ತರುಣ ವೈದ್ಯರು ಈ ಸಭೆಗೆ ಬಂದು ಮಾತನಾಡಿದ್ದು ನನಗೆ ಸಂತಸ ತಂದಿದೆ.  ಆ  ತರುಣ ವೈದ್ಯರನ್ನು ವದಂತಿಕೋರನೆಂದು ಚೀನಾ ಶಿಕ್ಷಿಸಿದ ಘಟನೆಯನ್ನು ಕೇಳಿ ನನ್ನ ಮನಸ್ಸಿಗೆ ನೋವಾಗಿದೆ. ಪ್ರಾಯಶಃ ಅದು ಆತುರದ ಕಾರ್ಯಾಚರಣೆಯಿರಬಹುದು. ಅಂದಿನ ಘಟನೆಯನಂತರ ಚೀನಾ, ಆ ತರುಣ ವೈದ್ಯರನ್ನು ನಿರಪರಾಧಿಯೆಂದು ಘೋಷಿಸಿದೆ ಹಾಗೂ ಆ ವೈದ್ಯರ  ಕುಟುಂಬದ ಕ್ಷಮೆಯನ್ನು ಕೂಡ ಯಾಚಿಸಿದೆ.  

ನನ್ನ ಚೀನಾದ ಸೇವಾವಧಿಯಲ್ಲಿನ ಸುಮಧುರ ಕ್ಷಣಗಳನ್ನು ನೆನಪಿಸಿಕೊಂಡರೆ, ಕೋವಿಡ್ ವೈರಾಣುವನ್ನು ಸೃಷ್ಟಿಸಿ, ಅದನ್ನು ಜೈವಿಕಾಸ್ತ್ರವನ್ನಾಗಿ ಪ್ರಯೋಗಿಸಿರುವಂತಹ ನೀಚ ಕಾರ್ಯವನ್ನು ಚೀನಾ ಮಾಡಿರಲಾರದು ಎಂಬುದು ನನ್ನ ಅಭಿಪ್ರಾಯ. ಕೋವಿಡ್ನ ಶರವೇಗದ ಹಬ್ಬುವಿಕೆಗೆ ಕಾರಣವಾಗುವಂತಹ ಯಾವುದೇ ಕೃತ್ಯವನ್ನು ಚೀನಾ, ಗೊತ್ತಿದ್ದೂ ಮಾಡಿರಲಾರದೆಂಬುದು ನನ್ನ ಅನಿಸಿಕೆ.' ಹೀಗೆಂದು ಡಾ. ದ್ವಾರಕಾನಾಥ್ ಕೊಟ್ನಿಸ್ರವರು ತಮ್ಮ ಮಾತುಗಳನ್ನು ಮುಗಿಸುತ್ತಲೇ, ಇಡೀ ಸಭೆಯಲ್ಲಿ ಮೆಚ್ಚುಗೆಯ ಚಪ್ಪಾಳೆಗಳ ಭೋರ್ಗರೆತ ಕೇಳಿಬಂತು. 

ರಾಜುರವರ ಕಣ್ಣುಗಳೀಗ, ಅವರ ವಕೀಲ ಮಿತ್ರ ಮದನ್ ಲಾಲರ ಮೇಲಿತ್ತು. ಜಾಣರೂ ಮತ್ತು ಅನುಭವಿಯೂ ಆದ ಮದನ್ ಲಾಲರು, ಚೀನಾದ ವಿರುದ್ಧ ಪ್ರಬಲವಾದ ವಾದವನ್ನು ಮಂಡಿಸಬಲ್ಲರೆಂಬ ವಿಶ್ವಾಸ ರಾಜುರವರಿಗಿತ್ತು. 

'ಪ್ರಭುವೇ, ನನ್ನ ವಿನಮ್ರ ನಮಸ್ಕಾರಗಳನ್ನು ಸ್ವೀಕರಿಸಿ. ನಿಮ್ಮ ನ್ಯಾಯಾಲಯದಲ್ಲಿ ನಾನು, ಈಗ ತಾನೇ ಮತ್ತೊಬ್ಬ ದೇವರ ದರ್ಶನವನ್ನು ಮಾಡಿದ್ದೇನೆ. ಹೌದು, ನಮ್ಮವರೇ ಆದ ಡಾ. ದ್ವಾರಕಾನಾಥ್ ಕೊಟ್ನಿಸ್ರವರದ್ದು ಯಾವ ದೇವರಿಗೂ ಕಮ್ಮಿ ಇಲ್ಲದ ವ್ಯಕ್ತಿತ್ವ. ಮನುಕುಲಕ್ಕೆ ಅವರು ಸಲ್ಲಿಸಿರುವ ನಿಸ್ವಾರ್ಥ ಸೇವೆ ಶ್ಲಾಘನೀಯವಾದುದು. ಆದರೆ ಕುಟಿಲ ಬುದ್ಧಿಯ ಚೀನಾ, ಕೊಟ್ನಿಸ್ರವರನ್ನು ಗೌರವಿಸುವ, ಸ್ಮರಿಸುವ ನಾಟಕವನ್ನು ಮಾತ್ರ ಮಾಡುತ್ತಿದೆ. ಭಾರತದ ವಿರುದ್ಧ ಚೀನಾ ನಡೆಸಿರುವ ಕುಕೃತ್ಯಗಳು, ಆ ದೇಶ ವಿಶ್ವಾಸಕ್ಕೆ ಅರ್ಹವಲ್ಲವೆಂದು ಸಾರುತ್ತವೆ. 

ಭೂಗೋಳ ಶಾಸ್ತ್ರದ ಕೆಲವು ಪಾಠಗಳನ್ನು ನೆನೆಪಿಸಿಕೊಳ್ಳೋಣ. ಮಾರಕ ಕೋವಿಡ್ ವೈರಾಣುವಿನ ಮೂಲಸ್ಥಾನವಾದ ಚೀನಾ ದೇಶದ ವುಹಾನ್ ನಗರದಿಂದ, ವಿಶ್ವದ ಬೇರೆ ಪ್ರಮುಖ ನಗರಗಳ ನಡುವಿನ ದೂರವನ್ನು ಗಮನಿಸೋಣ. 

ವುಹಾನ್ನಿಂದ ಶಾಂಘೈ ಗೆ  - ೮೪೦ ಕಿ.ಮೀ.ಗಳು 

ವುಹಾನ್ನಿಂದ ಬೀಜಿಂಗ್ ಗೆ  - ೧೨೦೦ ಕಿ.ಮೀ.ಗಳು 

ವುಹಾನ್ನಿಂದ ಇಟಲಿ ದೇಶದ ಮಿಲಾನ್ ಗೆ - ೧೫,೦೦೦ ಕಿ.ಮೀ.ಗಳು 

ವುಹಾನ್ನಿಂದ ಅಮೆರಿಕಾದ ನ್ಯೂ ಯಾರ್ಕ್ ಗೆ - ೧೫,೦೦೦ ಕಿ.ಮೀ.ಗಳು 

ವುಹಾನ್ನಿಂದ ಭಾರತದ ದಿಲ್ಲಿಗೆ - ೩,೫೦೦ ಕಿ.ಮೀ.ಗಳು 

ವುಹಾನ್ನಿಂದ ಇರಾನಿನ ಟೆಹರಾನ್ ಗೆ - ೬,೦೦೦ ಕಿ.ಮೀ.ಗಳು 

ಆದರೆ ಮಾರಕ ಕೋವಿಡ್ ವೈರಾಣು ಶಾಂಘೈ ಮತ್ತು ಬೀಜಿಂಗ್ ನಗರಗಳಿಗೆ ದೊಡ್ಡ ಪ್ರಮಾಣದಲ್ಲಿ ಹರಡೇ ಇಲ್ಲ. ಆದರೆ ದೂರದ ಯೂರೋಪ್ನ ದೇಶಗಳಲ್ಲಿನ ಜನಗಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಿ ಮೃತಪಟ್ಟಿದ್ದಾರೆ. ಅಮೇರಿಕಾ ಮತ್ತು ಭಾರತ ದೇಶಗಳಲ್ಲೂ ಕೋವಿಡ್ನ ಸಮಸ್ಯೆ ತೀವ್ರವಾಗಿ ಹರಡಿದೆ. ಆದರೆ ಚೀನಾ ಕೋವಿಡ್ನ ಶರವೇಗದ ಹರಡುವಿಕೆಗೆ ಅಮೇರಿಕಾ ಮತ್ತಿತರ ದೇಶಗಳನ್ನು ದೋಷಿಯೆಂದು ಆರೋಪಿಸುತ್ತಿದೆ. "ತಾ ಕಳ್ಳ, ಪರರ ನಂಬ" ಎಂಬ ಗಾದೆಯಂತೆ ಚೀನಾ, ಕೋವಿಡ್ ಹರಡಿಸುವ ಅಪರಾಧವನ್ನು ತಾನು ಮಾಡಿ, ಬೇರೆಯವರ ಮೇಲೆ ಆರೋಪವನ್ನು ಹೊರಿಸುತ್ತಿದೆ. ಮುಜುಗರವೆನಿಸಿದರೂ ಚೀನಾ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲೇ ಬೇಕು. 

೧) ಇಡೀ ವಿಶ್ವದ ಮೂಲೆ ಮೂಲೆಗಳನ್ನಾವರಿಸಿರುವ ಕೋವಿಡ್, ಅಷ್ಟೇ ತೀವ್ರವಾಗಿ ಚೀನಾದಲ್ಲೇಕೆ ವ್ಯಾಪಿಸಿಲ್ಲ? ವುಹಾನ್ನ ಸುತ್ತವಿರುವ ಕೆಲವೇ ಪ್ರಾಂತ್ಯಗಳಲ್ಲಿ ಮಾತ್ರ ಕೋವಿಡ್ ಹರಡಿದ್ದು, ಚೀನಾದ ಮಿಕ್ಕ ಪ್ರಾಂತ್ಯಗಳು ಕ್ಷೇಮವಾಗೇ ಉಳಿದಿರುವುದು ಹೇಗೆ? 

೨) ಕೋವಿಡ್ ಕುರಿತಾದ ಮಾಹಿತಿಯನ್ನು ಬೇರೆ ದೇಶಗಳೊಂದಿಗೆ ಹಂಚಿಕೊಳ್ಳುವಲ್ಲಿ ಚೀನಾ ವಿಳಂಬನ್ನೇಕೆ ಮಾಡಿತು? ನಿಯಂತ್ರಣ ಕಾರ್ಯವನ್ನು ತ್ವರಿತಗೊಳಿಸಬಹುದಾದ ಅಮೂಲ್ಯ ಸಮಯ ವ್ಯರ್ಥವಾಗಿ ಹೋಗಿದ್ದಕ್ಕೆ ಚೀನಾ ಹೊಣೆಯಲ್ಲವೆ?

೩) ಕೋವಿಡ್ ಬಗ್ಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ ತನ್ನದೇ ವಿಜ್ಞಾನಿಗಳ ಮತ್ತು ವೈದ್ಯರುಗಳ ವಿರುದ್ಧ ಚೀನಾ ದಮನಕಾರಿ ಕ್ರಮಗಳನ್ನು ಜರುಗಿಸಿ, ಅವರುಗಳ ಬಾಯ್ಮುಚ್ಚಿಸಿದ್ದೇಕೆ? 

೪) ಕೋವಿಡ್ ವೈರಾಣುವಿನ ಹರಡುವಿಕೆಯನ್ನು ಘೋಷಿಸಿದನಂತರವೂ, ಚೀನಾ ತನ್ನ ವುಹಾನ್ ನಗರದಿಂದ ಅಂತಾರಾಷ್ಟ್ರೀಯ ಹಾರಾಟಗಳನ್ನು ನಿಯಂತ್ರಿಸಲಿಲ್ಲವೇಕೆ? 

೫) ಕೋವಿಡ್ ವೈರಾಣುವಿನ ಹರಡುವಿಕೆಗೆ ಪೂರಕವಾಗಿ ಚೀನಾ ನಡೆಸಿದ ಕುಟಿಲ ನಡೆಗಳ ಬಗ್ಗೆ, ವಿಶ್ವ ಆರೋಗ್ಯ ಸಂಸ್ಥೆ ಮೃದು ಧೋರಣೆಯನ್ನು ತಳೆದಿರುವುದೇಕೆ?'

ಹೀಗೆ ಸೂಕ್ಷ್ಮವಾದ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ ಮದನ್ ಲಾಲರ ವಾದವನ್ನು ಕೇಳಿ ರಾಜು ರವರು ಪುಳಕಿತರಾದರು. 

ವಾದವನ್ನು ಮುಂದುವರೆಸಿದ ಚೀನಾದ ಪ್ರತಿವಾದಿಗಳು ತಮಗೆ ಪೂರಕವಾದ ಅಂಶಗಳಿಗೆ ಒತ್ತು ನೀಡಿದರು. 'ಕೋವಿಡ್ನ ವೈರಾಣು ಪ್ರಾಣಿಗಳಿಂದ ಮಾನವನಿಗೆ ಹರಡಿದೆ. "ಕುದುರೆ ಗಾಳದ ಬಾವಲಿ(ಹಾರ್ಸ್ ಶೂ ಬ್ಯಾಟ್)"ಯಲ್ಲಿ ಕಂಡು ಬಂದ ವೈರಾಣುವಿನ ಮತ್ತು ಕೋವಿಡ್ ವೈರಾಣುವಿನ ವಂಶವಾಹಿ ನಕ್ಷೆಗಳ ನಡುವೆ ತುಂಬಾ ಹೋಲಿಕೆ ಇರುವುದು ಸಂಶೋಧನೆಯಿಂದ ತಿಳಿದಿದೆ. ಬಾವಲಿಯಿಂದ ಮಾನವನಿಗೆ ವೈರಾಣುಗಳು ಹರಡಲು ಮೂರನೇ ಪ್ರಾಣಿಯೊಂದರ ಸಂಪರ್ಕ ಬೇಕೇ ಬೇಕು. ೨೦೦೩ರಲ್ಲಿ ಹರಡಿದ್ದ ಸಾರ್ಸ್ ವೈರಾಣುಗಳು ಬಾವಲಿಗಳಿಂದ ಮಾನವನಿಗೆ ಪುನುಗು ಬೆಕ್ಕಿನ ಮೂಲಕ ಹರಡಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕೊರೋನಾ ವೈರಾಣುಗಳ ವಂಶದಿಂದ ಮಾನವನನ್ನು ಹೊಕ್ಕ ಮೊದಲ ವೈರಾಣುವೇ ಸಾರ್ಸ್ ವೈರಾಣು. ೨೦೧೨ರಲ್ಲಿ ಜಗತ್ತು ಕಂಡ ಮೆರ್ಸ್ ವೈರಾಣು, ಒಂಟೆಗಳ ಮೂಲಕ ಮಾನವನಿಗೆ ಹರಡಿರುವುದೆಂದೂ ತಿಳಿದು ಬಂದಿದೆ. ೨೦೧೯ರ ಕೋವಿಡ್ ರೋಗಕ್ಕೆ ಕಾರಣವಾಗಿರುವ ವೈರಾಣು, ಬಾವಲಿಗಳಿಂದ "ಇರುವೆ ತಿನ್ನುವ ಪ್ಯಾಂಗೋಲಿನ್"ಗಳಿಗೆ, ಮತ್ತು ಪ್ಯಾಂಗೋಲಿನ್ಗಳಿಂದ ಮಾನವನಿಗೆ ಹರಡಿದೆ ಎಂಬುದು ಸಂಶೋಧನೆಯಿಂದ ಋಜುವಾತಾಗಿದೆ. ಅಂತಹ ಪ್ಯಾಂಗೋಲಿನ್ ಗಳಲ್ಲಿ ಕಂಡುಬಂದಿರುವ ಕೊರೋನಾ ವೈರಾಣುವಿಗೂ ಮತ್ತು ಕೋವಿಡ್-೧೯ರ ವೈರಾಣುವಿಗೂ ಬಹಳಷ್ಟು ಹೋಲಿಕೆಯಿದೆ. 

ಕೋವಿಡ್-೧೯ರ ವೈರಾಣು, ಜೀವಂತ ಪ್ರಾಣಿಗಳ ಮಾರಾಟ ಮಾಡುವ ವುಹಾನಿನ ಮಾಂಸದ "ಹಸಿ ಮಾರುಕಟ್ಟೆ (ವೆಟ್ ಮಾರ್ಕೆಟ್)"ಯಿಂದ ಹರಡಿದೆ. ಅಂತಹ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕೆಲವು ಕೆಲಸಗಾರರಿಗೆ ಸೋಂಕು ಮೊದಲು ಹರಡಿ, ಅನಂತರ ಅವರುಗಳ ಮೂಲಕ ಬೇರೇ ಜನಗಳಿಗೂ ಹರಡಿದೆ. ಕೋವಿಡ್ ವೈರಾಣುವಿನ ವಂಶವಾಹಿ ನಕ್ಷೆಯನ್ನು ಚೀನಾದ ವಿಜ್ಞಾನಿಗಳು ಅತೀ ಬೇಗನೆ ಅನಾವರಣಗೊಳಿಸಿದ್ದಾರೆ. ಅದರ ಮಾಹಿತಿಯನ್ನು ಕೂಡಲೇ ವಿಶ್ವ ಆರೋಗ್ಯ ಸಂಸ್ಥೆಗೆ ನಮ್ಮ ದೇಶ  ನೀಡಿದೆ. ಇದೆಲ್ಲ ಮಾಹಿತಿಗಳಿಂದ, ಕೋವಿಡ್ ವೈರಾಣು ಮಾನವ ಸೃಷ್ಟಿಯಿಂದ ಆದುದ್ದಲ್ಲ, ಅದರ ಸೃಷ್ಟಿ ಸ್ವಾಭಾವಿಕವಾಗಿ ಆಗಿದೆ  ಎಂದು ಸಾಬೀತಾಗುತ್ತದೆ.' ಕೋವಿಡ್ ವೈರಾಣುವಿನ ಉಗಮದ ಬಗೆಗಿನ ಚೀನಾದ ವಿವರಣೆ ಹೀಗಿತ್ತು. 

'ವಕೀಲ ಮದನ್ ಲಾಲರು ಮುಂದಿಟ್ಟ ಕರಾರುವಾಕ್ಕಾದ ಪ್ರಶ್ನೆಗಳ ಮುಂದೆ ಚೀನಾದವರ ವಿವರಣೆ ಸಮಂಜಸವಾಗಿ ಕಾಣುತ್ತಿಲ್ಲ. ಸರಿಯಾದ ಸಮಯದಲ್ಲಿ ಚೀನಾ ಸರಿಯಾದ ಕ್ರಮಗಳನ್ನು ಕೈಗೊಂಡಿದ್ದರೆ, ಕೋವಿಡ್ ಇಡೀ ವಿಶ್ವವನ್ನಾವರಿಸುವುದನ್ನು ತಡೆಯಬಹುದಿತ್ತು. ಹಾಗೆ ಮಾಡದ ಚೀನಾ, ತನ್ನ ವ್ಯಾಪಾರದ ಹಿತದೃಷ್ಟಿಯ ರಕ್ಷಣೆಗೆ ಮೊದಲ ಆದ್ಯತೆಯನ್ನು ನೀಡಿ, ಬಹಳ ವಾರಗಳ ತನಕ ಸುಮ್ಮನಿದ್ದು, ಇಡೀ ವಿಶ್ವವನ್ನು ವಂಚಿಸಿದೆ. ಇಂತಹ ವಂಚನೆಯನ್ನು ಕುರಿತ ಚರ್ಚೆ ವಿಶ್ವ ಸಂಸ್ಥೆಯ ಮುಂದೆ ೨೦೨೦ರ ಮಾರ್ಚ್ ತಿಂಗಳ ಅಧಿವೇಶನದಲ್ಲಿ ನಡೆಯಬೇಕಾದಾಗ, ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಚೀನಾ, ಚರ್ಚೆಯೇ ಆಗದಂತೆ ಮಾಡಿತು. ಏಕೆಂದರೆ ಚೀನಾಕ್ಕೆ ತನ್ನ ವಂಚನೆಯನ್ನು ಮುಚ್ಚಿಟ್ಟುಕೊಳ್ಳಬೇಕಾದ ಹುನ್ನಾರವಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೂಡ ಚೀನಾದೊಂದಿಗೆ ಒಳಸಂಚು ಮಾಡಿ, ತನ್ನ ಕರ್ತವ್ಯವನ್ನು ಮರೆತು, ಇಡೀ ವಿಶ್ವಕ್ಕೇ  ದ್ರೋಹವನ್ನು ಬಗೆಯಿತು,' ಎಂದು ರೋಹಿಣಿ ತನ್ನ ವಾದವನ್ನು ಮತ್ತೊಮ್ಮೆ ಮುಂದಿಟ್ಟಳು. 

ತಮ್ಮ ಮಗಳ ವಾದಕ್ಕೆ ಒತ್ತು ನೀಡುವಂತೆ ಮಾತನಾಡಿದ ರಾಜುರವರು 'ಮೊನ್ನೆ ಮೊನ್ನೆಯ ಏಪ್ರಿಲ್ ತಿಂಗಳ ನಡುಭಾಗದಲ್ಲಿ, ಚೀನಾ ತನ್ನ ವುಹಾನ್ ನಗರದಲ್ಲಿ ಕೋವಿಡ್ನಿಂದಾದ ಮೃತರುಗಳ ಸಂಖ್ಯೆ, ಮುಂಚೆಯೇ ಘೋಷಿತವಾದ ಸಂಖ್ಯೆಗಿಂತ  ಶೇಕಡಾ ೫೦ರಷ್ಟು ಹೆಚ್ಚಿತ್ತು ಎಂದು ಒಪ್ಪಿಕೊಂಡಿದೆ! ಚೀನಾದ ಈ ಕ್ರಮ, ಆ ದೇಶದ "ಕೋವಿಡ್ ಮಾಹಿತಿ ಮತ್ತು ಅಂಕಿಅಂಶಗಳ ಪ್ರಕಟಣಾ ನೀತಿ"ಯಲ್ಲಿನ ಪಾರದರ್ಶಕತೆಯ ಕೊರತೆಗೆ ಹಿಡಿದ ಕನ್ನಡಿಯಾಗಿದೆ. ಆಸ್ಟ್ರೇಲಿಯಾ ದೇಶ ಕೂಡ, ಚೀನಾ ತನಗೆ ತಿಳಿದಿರುವ ಕೋವಿಡ್ ಮಾಹಿತಿಯನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳದೆಂದು ಅನುಮಾನವನ್ನು ವ್ಯಕ್ತಪಡಿಸಿದೆ. ವಿಶ್ವದ ೬೨ ದೇಶಗಳು, ಚೀನಾ ಕೋವಿಡ್ನ ವಿಷಯದಲ್ಲಿ ನಡೆಸಿರಬಹುದಾದ ವಂಚನೆಗಳ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಆಗ್ರಹಿಸಿವೆ. ವಿಶ್ವ ಆರೋಗ್ಯ ಸಂಸ್ಥೆ ತನ್ನ ಚೀನಾ ಕುರಿತಾದ ಮೃದು ಧೋರಣೆಯನ್ನು ಬಿಟ್ಟು, ಪ್ರಾಮಾಣಿಕ ತನಿಖೆಯನ್ನು ನಡೆಸುವುದೆಂದು ಆಶಿಸೋಣ. 

ಕೋವಿಡ್ನ ಸಂಕಟಗಳ ನಡುವೆ, ಭಾರತದ ಲಡಾಖ್ ಪ್ರಾಂತ್ಯದ ಗಡಿ ಭಾಗದಲ್ಲಿ, ಚೀನಾ ತನ್ನ ಕತ್ತಿಯನ್ನು ಮಸೆಯುತ್ತಾ,  ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿರುವುದು ಹೀನ ಕೃತ್ಯವೇ ಸರಿ. ಈ ರೀತಿಯ ಗಡಿಭಾಗದ ಚಕಮಕಿಗಳನ್ನು ಬೇರೆ ಬೇರೆ ಕಡೆ ನಡೆಸಿ, ವಿಶ್ವದ ಗಮನವನ್ನು ತನ್ನ ಕೋವಿಡ್ ವಂಚನೆಯ ಪ್ರಕರಣಗಳಿಂದ ಬೇರೆಡೆಗೆ ಸೆಳೆಯುವ ಪ್ರಯತ್ನವನ್ನು ಚೀನಾ ಮಾಡುತ್ತಿದೆ. ತನ್ನ ತಪ್ಪುಗಳ ಬಗ್ಗೆ ಚೀನಾಕ್ಕೆ ವಿಷಾದವೆಂಬುದೇ ಇಲ್ಲ. ವಿಶ್ವದ ಐದನೇ ಒಂದು ಭಾಗದಷ್ಟು ಮನುಕುಲಕ್ಕೆ ಆವಾಸ ಸ್ಥಾನವಾದ ನಮ್ಮ ದೇಶ ಭಾರತ ಕೋವಿಡ್ನ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಸಮಯದಲ್ಲಿ, ಚೀನಾ ನಮ್ಮ ಗಡಿಭಾಗದಲ್ಲಿ ಸೈನ್ಯದ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇದು ಮನುಕುಲದ ವಿರುದ್ಧ ಚೀನಾವೆಸಗಿರುವ ದ್ರೋಹವಲ್ಲವೆ?' ಎಂದು ಪ್ರಶ್ನಿಸಿದರು. 

ನಿರಂತರವಾಗಿ ಸಾಗಿದ್ದ ವಾದಗಳ ಸರಣಿಗೆ ಮುಕ್ತಾಯ ಹಾಡಲು ಎದ್ದು ನಿಂತಂತೆ  ಕಂಡ  ಚೀನಾ ತಂಡದ  ಪ್ರತಿನಿಧಿ ಮಾತನಾಡುತ್ತ, 'ಪ್ರಭುವೇ, ಈ ಚರ್ಚೆಯ ಎಳೆದಾಟ ಜಾಸ್ತಿಯಾಯಿತು ಎನಿಸುತ್ತದೆ. ಆದರೆ ನಮ್ಮ ದೇಶದ ಮೇಲಿನ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ಕೋವಿಡ್ ವೈರಾಣು ಮಾನವ ಸೃಷ್ಟಿಯಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕೋವಿಡ್ ರೋಗಿಗಳಲ್ಲಿ ಕಂಡು ಬಂದಿರುವ ವೈರಾಣುಗಳು ಹಾಗೂ ಪ್ಯಾಂಗೋಲಿನ್ನಿಂದ ಹೊರ ತೆಗೆದ ವೈರಾಣುಗಳಿಗೂ ಬಹಳ ಹತ್ತಿರದ ಹೋಲಿಕೆ ಇದೆ. ಪ್ಯಾಂಗೋಲಿನ್ ಪ್ರಾಣಿ ಕೋವಿಡ್ ವೈರಾಣುವಿನ ವಾಹಕವೆಂಬುದು ವೈಜ್ಞಾನಿಕ ಸತ್ಯ. 

ಕೋವಿಡ್ ವೈರಾಣುವಿನ ಸ್ವಾಭಾವಿಕ ಸೃಷ್ಟಿ, ಮಾನವನ ಊಹೆಗೂ ಮೀರಿದ ಸಂಕೀರ್ಣತೆಯಿಂದ ಕೂಡಿದೆ. ಮಾನವನ ಜೀವಕೋಶಗಳ ಒಳಹೊಕ್ಕು, ಗಟ್ಟಿಯಾಗಿ ಕುಳಿತು, ವೇಗವಾಗಿ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವ ಕೋವಿಡ್ ವೈರಾಣುವಿನ ಸಾಮರ್ಥ್ಯ, ಆಧುನಿಕ ವಿಜ್ಞಾನ ಲೋಕವನ್ನೇ ಆಶ್ಚರ್ಯಗೊಳಿಸಿದೆ. ಮುಂಬರುವ ದಿನಗಳಲ್ಲಿ ಕೋವಿಡ್ ವೈರಾಣುವಿಗಿಂತ ಇನ್ನೂ ಮಾರಕವಾದ ಕೊರೋನಾ ವೈರಾಣುಗಳು ನಮ್ಮ ವಿಸ್ಮಯ ಲೋಕದಲ್ಲಿ ಕಂಡು ಬರಬಹುದು.  

ಕೋವಿಡ್ ವೈರಾಣುವಿನ ಸೃಷ್ಟಿಯ ಬಗ್ಗೆ ಇಡೀ ವಿಶ್ವ ಚೀನಾದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದರೂ, ಕೋವಿಡ್ ರೋಗದ ಮೇಲಿನ ಹತೋಟಿಯನ್ನು ಮೊದಲು ಸಾಧಿಸಿದ್ದು ಚೀನಾ ದೇಶವೇ ಎಂಬುದನ್ನು ಕಡೆಗಣಿಸುವಂತಿಲ್ಲ. ಕೋವಿಡ್ ರೋಗದ ಯಶಸ್ವಿ ನಿರ್ವಹಣೆಯ ವಿಷಯದಲ್ಲಿ, ಚೀನಾ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು, ಹಗಲಿರುಳೆನ್ನದೆ ಸಂಶೋಧನೆ ನಡೆಸುತ್ತಿರುವ ನಮ್ಮ ವಿಜ್ಞಾನಿಗಳು ಕೋವಿಡ್ ರೋಗ ನಿಯಂತ್ರಣಕ್ಕೆ ಬಹು ಬೇಗ ಲಸಿಕೆಯನ್ನು ಮತ್ತು ಔಷಧಗಳನ್ನು ಕಂಡು ಹಿಡಿಯುತ್ತಾರೆಂಬ ವಿಶ್ವಾಸ ನಮಗಿದೆ. ನಮ್ಮ ವಿಜ್ಞಾನಿಗಳ ಸಂಶೋಧನೆಯ ವಿಚಾರವನ್ನು, ಲಸಿಕೆ ಮತ್ತು ಔಷಧಗಳನ್ನು ವಿಶ್ವದ ಎಲ್ಲಾ ದೇಶಗಳೊಂದಿಗೆ ಹಂಚಿಕೊಳ್ಳುವಲ್ಲಿ ನಮ್ಮಿಂದ ಯಾವುದೇ ವಿಳಂಬವಾಗದು ಎಂಬ ಪ್ರಮಾಣವನ್ನು, ತಮ್ಮ ನ್ಯಾಯಾಲಯದ ಮುಂದೆ ಇಂದು ನಾನು ಮಾಡುತ್ತಿದ್ದೇನೆ.  ವಿಶ್ವವನ್ನು ಕೋವಿಡ್ ರೋಗದಿಂದ ಮುಕ್ತಗೊಳಿಸುವಲ್ಲಿ, ಚೀನಾ ಮಹತ್ತರ ಪಾತ್ರವೊಂದನ್ನು ನಿರ್ವಹಿಸಲಿದೆ. 

ಕೋವಿಡ್ ವೈರಾಣುವನ್ನು ಕುರಿತಾದ, ನಮ್ಮ ಚೀನಾ ದೇಶದ ಮೇಲಿನ ಆರೋಪಗಳೆಲ್ಲವೂ ಆಧಾರರಹಿತವೆಂದು ಪರಿಗಣಿಸಿ, ನಮ್ಮ ದೇಶವನ್ನು ದೋಷಮುಕ್ತವಾಗಿಸಬೇಕೆಂದು ನಾನು ತಮ್ಮಲ್ಲಿ ಬೇಡುತ್ತೇನೆ' ಎಂದು ವಿನಂತಿಸಿಕೊಂಡರು. 

ಚೀನಾದ ಪ್ರತಿನಿಧಿ ತನ್ನ ಅಂತಿಮ ವಾದವನ್ನು ಮಂಡಿಸಿ ಕುಳಿತನಂತರ, ದೇವರ ನ್ಯಾಯಾಲಯವನ್ನು ದಿವ್ಯ ಮೌನ ಆವರಿಸಿತ್ತು. ಕೆಲ ಕಾಲ ನಿಶ್ಯಬ್ದವಾಗಿದ್ದ ಸಭಿಕರಲ್ಲಿ ದೇವರ ನಿರ್ಣಯದ ನಿರೀಕ್ಷೆಯಿತ್ತು. ಎಲ್ಲಾ ಕಣ್ಣುಗಳೂ ದೇವರ ನ್ಯಾಯ ಪೀಠದ ಮೇಲಿದ್ದವು. ದೇವರು ತಮ್ಮ ನ್ಯಾಯದ ಸುತ್ತಿಗೆಯನ್ನು ವೃತ್ತಾಕಾರದ ಹಲಗೆಯ ಮೇಲೆ ಬಡಿದ ತಕ್ಷಣ ಉಂಟಾದ ಭಾರೀ ಸದ್ದಿನಿಂದ ರೋಹಿಣಿ ಎಚ್ಚರಗೊಂಡಳು! ಇಡೀ ಕನಸಿನ ಎಲ್ಲಾ ವೃತ್ತಾಂತಗಳೂ ಅವಳ ಸ್ಮೃತಿ ಪಟಲದ  ಮೇಲೆ ಮತ್ತೊಮ್ಮೆ ಹಾದು  ಹೋದವು. ದೇವರು ನೀಡಬಹುದಾದ ನಿರ್ಣಯವನ್ನು ಕೇಳುವ ತನಕ ಕನಸು ಮುಂದುವರಿಯಲಿಲ್ಲವಲ್ಲಾ ಎಂಬ ವಿಷಾದ ರೋಹಿಣಿಯನ್ನು ಕಾಡಿತ್ತು. 'ದೇವರಿಗೆ ಸತ್ಯ ತಿಳಿದಿರುತ್ತೆ, ಆದರವನು ಕಾದು ನೋಡುತ್ತಾನೆ (God sees the truth, but waits) ಎಂಬ ರಷ್ಯಾದ ತತ್ತ್ವಜ್ಞಾನಿ ಲಿಯೋ ಟಾಲ್ಸ್ಟಾಯ್'ರವರ ವಾಣಿ ಅವಳ ಕಿವಿಗಳಲ್ಲಿ ರಿಂಗಣಿಸುತ್ತಿತ್ತು. 

-೦-೦-೦-೦-೦-೦-೦-   


          

 



Tuesday, 9 March 2021

೫. ವಲಸಿಗರ ವಂದನೆ


 ವಲಸಿಗರ ವಂದನೆ 

ಅಂದು ೨೦೨೦ರ ಮಾರ್ಚ್ ೨೮ರ ದಿನವಾಗಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಪರಮೋಚ್ಚ ನ್ಯಾಯಾಲಯ ನೀಡಿದ್ದ ಮಧ್ಯಕಾಲದ ಆದೇಶದ (interim order) ವಿಷಯದಲ್ಲಿ ತಂದೆ ರಾಜು ಮತ್ತು ಮಗಳು ರೋಹಿಣಿಯ ನಡುವಿನ ಸುದೀರ್ಘ ಚರ್ಚೆಯ ಕಾವೇರಿತ್ತು. ಲಾಕ್ಡೌನಿನಿಂದ  ಉಂಟಾದ ವಲಸಿಗ ಕೆಲಸಗಾರರ ಪರದಾಟಗಳಿಗೆ, ಸಾಧ್ಯವಾದಷ್ಟು ಪರಿಹಾರ ದೊರಕಲೆಂಬುದು ಪರಮೋಚ್ಚ ನ್ಯಾಯಾಲಯದ ಆದೇಶದ ಆಶಯವಾಗಿತ್ತು. ಕೋರ್ಟ್ ಆದೇಶದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ತಂದೆ-ಮಗಳಿಬ್ಬರೂ, ಕುಟುಂಬದ ಸ್ನೇಹಿತರು ಹಾಗೂ ವಕೀಲರೂ ಆದ ಮದನ್ ಲಾಲರ ಮನೆಗೆ ಬಂದಿದ್ದರು. ಕೋವಿಡ್ನಿಂದ ಉಂಟಾಗಿರುವ ಸಾಮಾಜಿಕ ಸಮಸ್ಯೆಗಳನ್ನು ಕುರಿತಾದ ಸಂಶೋಧನೆಯನ್ನು ಕೈಗೊಂಡಿದ್ದ ಯುವತಿ ರೋಹಿಣಿಗೆ, ಮದನ್ ಲಾಲರೊಂದಿಗಿನ ಚರ್ಚೆ ಬಹು ಮುಖ್ಯವಾಗಿತ್ತು. 

ರಾಜು ಮತ್ತು ರೋಹಿಣಿ ಇಬ್ಬರನ್ನೂ ಮದನ್ ಲಾಲರು ಬರಮಾಡಿಕೊಂಡೊಡನೆ, ರಾಜುರವರ ವಾದ ಸರಣಿ ಶುರುವಾಗಿತ್ತು. 'ಮದನ್ ಲಾಲರೆ, ನೋಡಿ ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವಿನ ತಿಕ್ಕಾಟ ಇಂದು-ನೆನ್ನೆಯದಲ್ಲ. ಪರಮೋಚ್ಚ ನ್ಯಾಯಾಲಯ ಕೆಲವೊಮ್ಮೆ ಕಾರ್ಯಾಂಗದ ವ್ಯಾಪ್ತಿಗೆ ಮೂಗು ತೂರಿಸಿ ಅಧಿಕಾರ ಚಲಾಯಿಸುವುದೆಂಬುದು ನನ್ನಂತಹ ಹಲವರ ವಾದ. "ಹೆದ್ದಾರಿಗಳಲ್ಲಿ ಮದ್ಯದ ಮಾರಾಟವನ್ನು ನಿಷೇಧಿಸಿ ಪರಮೋಚ್ಚ ನ್ಯಾಯಾಲಯ ಹೊರಡಿಸಿರುವ ಆದೇಶ"ವನ್ನೆ ನೋಡಿ. ಮದ್ಯದ ಬಾರುಗಳು ಮತ್ತು ಭೋಜನ ಮಂದಿರಗಳು ಹೆದ್ದಾರಿಯಿಂದ ೫೦೦ ಮೀಟರ್ಗಳಷ್ಟು ದೂರವಿರಬೇಕೆಂಬುದು ಸುಪ್ರೀಂ ಕೋರ್ಟ್ನ ಆದೇಶ. ಈ ಆದೇಶದಿಂದ ಹಲವಾರು ಬಾರುಗಳು ಮತ್ತು ಉಪಹಾರ ಗೃಹಗಳಿಗೆ ತೊಂದರೆಯುಂಟಾಗಿ ಅವರುಗಳ ಗಳಿಕೆಯಲ್ಲಿ ಭಾರಿ ವ್ಯತ್ಯಯವುಂಟಾಗಿದೆ. ಇಡೀ ಪ್ರವಾಸೋದ್ಯಮಕ್ಕೇ ಭಾರಿ ಹೊಡತವೇ ಬಿದ್ದು, ಸಹಸ್ರಾರು ಯುವಕರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಹೀಗೆಲ್ಲಾ ಮಾಡುವ ಬದಲು, ನ್ಯಾಯಾಲಯ ಸರಕಾರಕ್ಕೆ ಹೆದ್ದಾರಿಗಳಲ್ಲಾ ಗುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬೇಕಾದ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳುವಂತೆ ಆದೇಶವನ್ನು ನೀಡಬಹುದಿತ್ತು. ತಾನೇ ಕಾರ್ಯಾಂಗವೆಂಬಂತೆ ಇಷ್ಟು ತೀವ್ರವಾದ ಆದೇಶವನ್ನು ನೀಡುವ ಅವಶ್ಯಕತೆ ಏನಿತ್ತು?' ಹೀಗಿದ್ದ ರಾಜುರವರ ವಾದದಲ್ಲಿ ಸಾಕಷ್ಟು ಆಕ್ರೋಶವಿತ್ತು. 

ವಕೀಲರಾದ ಮದನ್ ಲಾಲರ ಮುಂದೆ ಮಗಳು ರೋಹಿಣಿಯ ಪ್ರತಿವಾದದಲ್ಲಿ ಕೂಡ ಅಷ್ಟೇ ತೀವ್ರತೆಯಿತ್ತು. 'ಪರಮೋಚ್ಚ ನ್ಯಾಯಾಲಯದ ಆದೇಶದಿಂದ ಹೆದ್ದಾರಿಗಳಲ್ಲಿನ ಅಪಘಾತಗಳ ಸಂಖ್ಯೆ ಕಮ್ಮಿಯಾಗಿ ಸಹಸ್ರಾರು ಅಮೂಲ್ಯ ಜೀವಗಳ ರಕ್ಷಣೆಯಾಗಿರುವುದು ಸುಳ್ಳಲ್ಲ. ಪರಿಸ್ಥಿತಿಯ ಅರಿವು ನ್ಯಾಯಾಲಯಕ್ಕೂ ಇದೆ. ಉದ್ಯಮಗಳಿಗಾಗುತ್ತಿರುವ ನಷ್ಟವನ್ನು ತುಂಬುವ  ಹಾಗೂ ಉದ್ಯೋಗಗಳ ಮರುಸೃಷ್ಠಿ ಮಾಡುವ ಉದ್ದೇಶದಿಂದ, ನ್ಯಾಯಾಲಯ ತನ್ನ ಆದೇಶವನ್ನು ಸಡಿಲಿಸಿ, ನಗರಗಳ ಹಾಗೂ  ಪಟ್ಟಣಗಳ ಪ್ರದೇಶಗಳಿಗೆ ತನ್ನ ಆದೇಶ ಅನ್ವಯಿಸದೆಂದು ಮರು ಆದೇಶ ಹೊರಡಿಸಿದೆ. 

ಪರಮೋಚ್ಚ ನ್ಯಾಯಾಲಯದ ಇತ್ತೀಚಿನ ಬಾಬ್ರಿ ಮಸೀದಿ ಕುರಿತಾದ ತೀರ್ಪು ಕೇಂದ್ರ ಸರಕಾರದ ಆಶಯಕ್ಕೆ ಪೂರಕವಾಗಿದೆ. ರಾಮ ಮಂದಿರದ ನಿರ್ಮಾಣಕ್ಕೆ ಬೇಕಾದ ಆದೇಶವನ್ನು ಕೇಂದ್ರ ಸರಕಾರ  ಹೊರಡಿಸಬೇಕಾಗಿ ಬಂದಿದ್ದರೆ, ದೊಡ್ಡ ಕೋಲಾಹಲವೇ ನಡೆದು ಹೋಗುತ್ತಿತ್ತು. ಸರಕಾರಕ್ಕೆ ಸಂಸತ್ತಿನಲ್ಲಿ ನಿಭಾಯಿಸಲಾಗದಷ್ಟು ಪ್ರತಿರೋಧ ಬರುತ್ತಿತ್ತು. ದಿನ ನಿತ್ಯ ನ್ಯಾಯಾಂಗವನ್ನು ಟೀಕಿಸುವ ಬುದ್ಧಿಜೀವಿಗಳು ರಾಮ ಮಂದಿರ ಕುರಿತಾದ ತೀರ್ಪಿಗೆ, ನ್ಯಾಯಾಲಯವನ್ನು ಪ್ರಶಂಸಿದ್ದಾರೆಯೆ? ಜಾರಿಗೊಳಿಸಲು ಕಷ್ಟ ಸಾಧ್ಯವಾದ ತೀರ್ಪುಗಳ ಬಗ್ಗೆ, ಸೂರಮೇಲೆ ನಿಂತು ಕೂಗಾಡುವ ಅವರುಗಳು, ಸರಕಾರಕ್ಕೆ ಅನುಕೂಲವಾಗುವಂತಹ ತೀರ್ಪುಗಳು ಬಂದಾಗ "ಜಾಣ ಮೌನ"ಕ್ಕೆ ಜಾರುತ್ತಾರೇಕೆ?' ಎಂದಿತ್ತು ರೋಹಿಣಿಯ ವಾದದ ಸರಣಿ.

ಸದರಿ ವಲಸಿಗರ ಪರದಾಟದ ವಿಷಯಕ್ಕೆ ಬರೋಣವೆಂಬುದು ಮದನ್ ಲಾಲರ ಅಭಿಪ್ರಾಯವಾಗಿತ್ತು. 

'ಮೇ ೧ರಂದು, ಸರ್ವೋಚ್ಚ ನ್ಯಾಯಾಲಯ ತನ್ನ ನಿಲುವನ್ನು ವ್ಯಕ್ತಪಡಿಸುತ್ತಾ, ವಲಸಿಗ ಕೆಲಸಗಾರರಿಗೆ ಪ್ರಯಾಣದ ವ್ಯವಸ್ಥೆಯನ್ನು ಮಾಡುವ ಕೆಲಸ ಸರಕಾರಗಳ ರೈಲು ಮತ್ತು ಬಸ್ಸಿನ ಇಲಾಖೆಗಳಿಗೆ ಸಂಬಂಧಪಟ್ಟದ್ದು ಎಂದು ಅಭಿಪ್ರಾಯಪಟ್ಟಿತ್ತು. ತಜ್ಞರ ಹಾಗೂ ಜನಾಭಿಪ್ರಾಯದ ಒತ್ತಡಗಳು  ನ್ಯಾಯಾಲಯವನ್ನೂ ಮಣಿಸಿದಂತೆ ಕಾಣುತ್ತದೆ. ತನ್ನ ತಟಸ್ಥ ನಿಲುವನ್ನು ಇದ್ದಕಿದ್ದಂತೆ ಕೈಬಿಟ್ಟ ನ್ಯಾಯಾಲಯ ಈಗ ಸರಕಾರಗಳಿಗೆ ವಲಸಿಗರ ಕುರಿತಾದ ಹೊಸ ಆದೇಶವನ್ನು ಹೊರಡಿಸಿರುವುದು ಸರಿಯೇ?' ಎಂದು ಮುಂದುವರೆದಿತ್ತು ರಾಜುರವರ ವಿಚಾರ ಧಾರೆ. 

'ಕೈ ಕಟ್ಟಿ ಕುಳಿತುಕೊಳ್ಳುವುದಕ್ಕಿಂತ, ತಡವಾಗಾದರೂ ಸರ್ವೋಚ್ಚ ನ್ಯಾಯಾಲಯವು ತೆಗೆದುಕೊಂಡಿರುವ ನಿಲುವು ವಲಸಿಗ ಕೆಲಸಗಾರರಿಗೆ ಪರಿಹಾರವನ್ನೊದಗಿಸಿದೆ. ವಲಸಿಗರ ಅತಿಥೇಯ ಮತ್ತು ಮೂಲ ರಾಜ್ಯಗಳು ಪ್ರಯಾಣದ ವೆಚ್ಚವನ್ನು ಸಮನಾಗಿ ಭರಿಸಬೇಕಾಗುತ್ತದೆ. ಪ್ರಯಾಣದ ವೇಳೆಯ ನೀರು-ಆಹಾರಗಳ ವ್ಯವಸ್ಥೆಯನ್ನು ಸಾರಿಗೆ ಇಲಾಖೆಗಳು ಮಾಡಬೇಕಾಗುತ್ತದೆ. ಪ್ರಯಾಣ ಮಾಡಲು ತಮ್ಮ ಸರದಿಗೆ ಕಾಯುತ್ತಿರುವ ವಲಸಿಗರಿಗೆ ಪ್ರಯಾಣದ ವ್ಯವಸ್ಥೆ ಮಾಡಿ ಸರಿಯಾದ ಮಾಹಿತಿಯನ್ನು ನೀಡುವ ಮತ್ತು ಅವರುಗಳಿಗೆ  ವಸತಿ ಮತ್ತು ಆಹಾರದ ಏರ್ಪಾಡನ್ನು ಮಾಡುವ ಜವಾಬ್ದಾರಿ ಆಯಾ ರಾಜ್ಯ ಸರಕಾರಗಳದ್ದಾಗಿರುತ್ತದೆ. ವಲಸಿಗರು ಸುಡು ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಪರದಾಡುವಂತಾಗ ಬಾರದೆಂಬುದು ನ್ಯಾಯಾಲಯದ ಆಶಯ' ಎಂದು ರೋಹಿಣಿ ತನ್ನ ಅನಿಸಿಕೆಯನ್ನು ಮಂಡಿಸಿದ್ದಳು. 

ರಾಜುರವರು ತಮ್ಮ ಮಗಳ ವಾದಕ್ಕೆ ತೀಕ್ಷ್ಣವಾಗೇ ಪ್ರತಿಕ್ರಿಯಿಸುತ್ತಾ 'ನ್ಯಾಯಾಂಗಕ್ಕಾಗಲಿ ಅಥವಾ ಕಾರ್ಯಾಂಗಕ್ಕಾಗಲಿ ತಮ್ಮದೇ ಆದ ಇತಿ-ಮಿತಿಗಳಿವೆ. ಭಾರತದ ಎಲ್ಲ ನ್ಯಾಯಾಲಯಗಳ ಮುಂದೆ ಬಾಕಿ ಇರುವ ಲಕ್ಷಾಂತರ ದಾವೆಗಳ ಪೈಕಿ ಶೇಕಡಾ ೭೦ರಷ್ಟನ್ನು ಇನ್ನೊಂದು ವರ್ಷದೊಳಗೆ ಇತ್ಯರ್ಥಗೊಳಿಸಿ ಎಂದು ಕೇಂದ್ರ ಸರಕಾರ ವಿನಂತಿಸಿಕೊಂಡರೆ, ಸರ್ವೋಚ್ಚ ನ್ಯಾಯಾಲಯ ತಾನೇ ಏನು ಮಾಡಬಲ್ಲದು? ಕೋರ್ಟ್ ಆದೇಶಗಳನ್ನೂ ಜಾರಿಗೊಳಿಸುವಲ್ಲಿ ಕಾರ್ಯಾಂಗಕ್ಕೂ ಅದೇ ರೀತಿಯ ಅಡಚಣೆಗಳು ಇರವುದಿಲ್ಲವೆ?' ಎಂದರು. 

ತಂದೆ-ಮಗಳ ವಾದ-ಪ್ರತಿವಾದಗಳನ್ನಾಲಿಸಿದ ವಕೀಲ ಮದನ್ ಲಾಲರಿಗೆ ಈಗ ಮಧ್ಯ ಪ್ರವೇಶ ಅನಿವಾರ್ಯವೆನಿಸಿತು. 'ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಕುರಿತಾದ ರೋಹಿಣಿಯ ವಿಶ್ಲೇಷಣೆ ಸರಿಯಾಗಿಯೇ ಇದೆ. ರಾಜುರವರ ವಾದದಲ್ಲೂ ತೂಕವಿಲ್ಲದಿಲ್ಲ. ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ಬಂದಿರುವಂತೆ ಸರಕಾರಗಳ ಕ್ರಮಗಳಿಂದ  ವಲಸಿಗರುಗಳಿಗೆ ಹಲವಾರು ತೊಂದರೆಗಳು ಉಂಟಾಗಿವೆ. ಬಸ್ಸು ಮತ್ತು ರೈಲುಗಳ ಬಗೆಗಿನ ತಪ್ಪು ಮಾಹಿತಿಗಳು, ಪ್ರಯಾಣದ ವೆಚ್ಚಗಳ ತೀವ್ರ ಹೆಚ್ಚಳ, ಬಸ್ಸು-ರೈಲುಗಳು ಕಡೇ ನಿಮಿಷದಲ್ಲಿ ರದ್ಧಾಗುವುದು ಮುಂತಾದ ಅಚಾತುರ್ಯಗಳಿಂದ ವಲಸಿಗರು ಬಳಲಿ ಬೆಂಡಾಗಿದ್ದಾರೆ. ಸರಕಾರಿ ವಕೀಲರ ವಾದವನ್ನು ಒಪ್ಪದ ಸರ್ವೋಚ್ಚ ನ್ಯಾಯಾಲಯ, ವಲಸಿಗರ ಹಿತರಕ್ಷಣೆಗಾಗಿ ಕೇಂದ್ರ ಹಾಗು ರಾಜ್ಯ ಸರಕಾರಗಳು ಕೈಗೊಂಡಿರುವ ಕ್ರಮಗಳ ವಿವರವನ್ನು ನೀಡುವಂತೆ ಆದೇಶಿಸಿದೆ. 

ಇದು ನಮ್ಮ ಸಂವಿಧಾನದ ಶಿಲ್ಪಿಗಳು ಸೃಷ್ಟಿಸಿಟ್ಟಿರುವಂತಹ ಅತ್ಯಂತ ಸೂಕ್ಷ್ಮವಾದ ಸಮತೋಲ. ಕಾರ್ಯಾಂಗ  ಹಾಗೂ ಶಾಸಕಾಂಗಗಳು ನೇರವಾಗಿ ಜನತೆಯಿಂದ ಚುನಾಯಿತವಾಗಿದ್ದರೂ, ನಮ್ಮ ಸಂವಿಧಾನದಲ್ಲಿ ನ್ಯಾಯಾಂಗದ ಸ್ವಾಯತ್ತತೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಸದಾ ಒಂದು ಹೆಜ್ಜೆಯನ್ನು ಮುಂದಾಗಿಯೇ ಇಡುವಂತೆ ಕಾಣುವ ನಮ್ಮ ನ್ಯಾಯಾಂಗ, ಆಗಾಗ ತನ್ನ ಎಲ್ಲೆಯನ್ನು ಮೀರಿದಂತೆ ಕಂಡರೂ, ಅದರ ಕ್ರಮಗಳೆಲ್ಲವೂ ಸಂವಿಧಾನದ ಪಾವಿತ್ರ್ಯವನ್ನು ಎತ್ತಿ ಹಿಡಿಯಲು ಕೈಗೊಂಡವಾಗಿವೆ. ನ್ಯಾಯಾಂಗದ ನಿರ್ಣಯಗಳೆಲ್ಲವೂ ಜನಪರವಾಗಿದ್ದು ದೇಶವನ್ನು ಸದೃಢ ಗೊಳಿಸಿವೆ ಎಂಬುದನ್ನು ನಾವು ಮರೆಯುವಂತಿಲ್ಲ' ಎಂದ  ಮದನ್ ಲಾಲರ ಮಾತುಗಳು ಅವರ ತೀರ್ಪೆನೋ ಎಂಬತ್ತಿತ್ತು. 

'ಕೇಂದ್ರ ಸರಕಾರವೂ ಹಲವಾರು ಮುಂಜಾಗ್ರತೆಯ ಕ್ರಮಗಳನ್ನು ಕೈಗೊಂಡಿದೆ. ವಲಸಿಗರ ಜೊತೆ ಇಡೀ ದೇಶವಿದೆ ಎಂಬುದನ್ನು ಈಗಾಗಲೇ ಸರಕಾರ ಸ್ಪಷ್ಟಪಡಿಸಿದೆ. ಕೋವಿಡ್ ಪಿಡುಗಿನಿಂದ ವಲಸಿಗರು ತೀವ್ರವಾಗಿ ಪೀಡಿತರಾಗಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಹುಟ್ಟಿ ಬೆಳದ ಹಳ್ಳಿಗಳಿಗೆ ಹಿಂತಿರುಗಿರುವ ವಲಸಿಗರಿಗೆ, ಅವರವರ ಹಳ್ಳಿಗಳಲ್ಲೇ, ಕೂಡಲೇ ಉದ್ಯೋಗ ಕಲ್ಪಿಸಲು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗದ ಯೋಜನೆಗೆ (MANREGA) ಪ್ರಸಕ್ತ ವರ್ಷದಲ್ಲಿ (೨೦೨೦-೨೧) ಈಗಾಗಲೇ ನೀಡಿರುವ ಒಂದು ಲಕ್ಷ ಕೋಟಿ  ರೂಪಾಯಿಗಳ ಜೊತೆಗೆ ಮತ್ತೆ ೪೦,೦೦೦ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. 

-ಮನ್ರೇಗಾ ಯೋಜನೆಯಡಿ ನೀಡುವ ದಿನದ ಸಂಬಳವನ್ನು ೧೮೨ರಿಂದ ೨೦೨ ರೂಪಾಯಿಗಳವರೆಗೆ ಹೆಚ್ಚಿಸಲಾಗಿದೆ. 

-ಮನರೇಗಾದ ಅಡಿಯಲ್ಲಿ ಉದ್ಯೋಗ ಪಡೆಯಲಿಚ್ಛಿಸುವವರು ಹಳ್ಳಿಯ ಗ್ರಾಮ ಪಂಚಾಯಿತಿಯ ಕಚೇರಿಯನ್ನು ಸಂಪರ್ಕಿಸಬಹುದು. 

-ರಾಷ್ಟ್ರದ ಪೂರ್ವ ಭಾಗದಲ್ಲಿರುವ ೬ ರಾಜ್ಯಗಳ ೧೧೬ ಜಿಲ್ಲೆಗಳಿಗೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಹಿಂತಿರುಗಿ ಬಂದಿದ್ದಾರೆ. ಅವರುಗಳಿಗೆ ಉದ್ಯೋಗ ಕಲ್ಪಿಸಲೆಂದೇ ಆ ೬ ರಾಜ್ಯಗಳಲ್ಲಿ ಸರಕಾರ ಭಾರಿ ಪ್ರಮಾಣದಲ್ಲಿ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ಮುಂದಾಗಿದೆ. ಮನರೇಗಾದಡಿ ಈ ಕಾರ್ಯಗಳು ನಡೆಯಲಿದ್ದು, ಆ ೧೧೬ ಜಿಲ್ಲೆಗಳಿಗೆ ಈಗಾಗಲೇ  ೫೦,೦೦೦ ಕೋಟಿ ರೂಪಾಯಿಗಳಷ್ಟು ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿದೆ.  

-ಪಡಿತರ ಚೀಟಿ ಇರದಿದ್ದರೂ, ವಲಸಿಗರು ಎಲ್ಲಾದರೂ ೫ ಕೆ.ಜಿ.ಗಳಷ್ಟು ದಿನಸಿಯನ್ನು ಮತ್ತು ೧ ಕೆ.ಜಿ.ಯಷ್ಟು ಬೇಳೆಯನ್ನು ಪಡೆಯುವ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. 

-ಕೆಲಸ ಕಳೆದುಕೊಂಡ ವಲಸಿಗರು ತಮ್ಮ ಶೆಡ್ಡುಗಳಿಗೆ ಬಾಡಿಗೆ ಕಟ್ಟಲಾಗದೆ, ತಮ್ಮ ತಮ್ಮ ಹಳ್ಳಿಗಳ ಕಡೆಗೆ ಮುಖ ಮಾಡುವಂತಾಗಿದೆ. ಈ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಲು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸುಲಭ ಬಾಡಿಗೆಯ ವಸತಿ ಸಂಕೀರ್ಣಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸಲಾಗಿದೆ.' 

ಬರುವ ದಿನಗಳಲ್ಲಿ ಈ ರೀತಿಯ ಇನ್ನೂ ಹೆಚ್ಚಿನ ಯೋಜನಗಳನ್ನು ಜಾರಿಗೊಳಿಸಲಾಗುವುದೆಂದು ವಿವರಿಸಿದ ರಾಜುರವರ ಮುಖದಲ್ಲಿ ದೊಡ್ಡದಾದ ಮುಗಳ್ನಗೆಯೊಂದು ಮೂಡಿತ್ತು.

ತಂದೆ ರಾಜುರವರು ತಮ್ಮ ವಿವರಗಳನ್ನು ನೀಡುತ್ತಿದ್ದ ಇಡೀ ಸಮಯದಲ್ಲಿ 'ಅವೆಲ್ಲ ಏನೇನು ಸಾಲದೆಂಬಂತೆ,' ಮಗಳು ರೋಹಿಣಿ ತಲೆಯಾಡಿಸುತ್ತಿದ್ದಳು. ಹಲವು ತಜ್ಞರುಗಳು ಆಗ್ರಹ ಪಡಿಸಿದಂತೆ ವಲಸೆ ಕೆಲಸಗಾರರೆಲ್ಲರಿಗೂ ತಲಾ ೨೫,೦೦೦ ರೂಪಾಯಿಗಳ ಪರಿಹಾರವನ್ನು ನೀಡಬೇಕೆಂಬುದು ರೋಹಿಣಿಯ ಅಭಿಪ್ರಾಯವೂ ಆಗಿತ್ತು. 

ಚರ್ಚೆಗೆ ತೆರೆ ಎಳೆಯುವ ಸಮಯ ಇದೆಂದು ಮದನ್ ಲಾಲರಿಗೆ  ಅನಿಸಿತ್ತು. ಅವರು ಮಾತನಾಡುತ್ತಾ 'ದೇಶದಲ್ಲಿ ಸುಮಾರು ೧೪ ಕೋಟಿಯಷ್ಟು ವಲಸಿಗ ಕೆಲಸಗಾರರಿದ್ದಾರೆ. ಅವರಗಳಲ್ಲಿ ಹೆಚ್ಚಿನವರು ದೇಶದ ಪೂರ್ವ ಭಾಗದ ರಾಜ್ಯಗಳವರು. ಹೆಚ್ಚಿನ ವಲಸಿಗರು ಬೃಹತ್ ನಗರಗಳನ್ನು ಸೇರಿದ್ದಾರೆ. 

-ಲಾಕ್ಡೌನ್ ಜಾರಿಗೊಳ್ಳುವುದಕ್ಕಿಂತ ಮುಂಚಿತವಾಗಿಯೇ, ಕೋವಿಡ್ ಭಯದಿಂದ ಸುಮಾರು ಶೇಕಡಾ ೧೦ರಷ್ಟು ವಲಸಿಗರು ತಮ್ಮ ಹಳ್ಳಿಗಳಿಗೆ ಪ್ರಯಾಣಿಸಿದ್ದರು. ಲಾಕ್ಡೌನ್ನಿನ  ಮೂರು ಮತ್ತು ನಾಲ್ಕನೇ ಹಂತಗಳ ನಡುವೆ ಇನ್ನು ೧೦%ರಷ್ಟು ವಲಸಿಗರು ನಿರ್ಗಮಿಸಿದ್ದಾರೆ. ಐದನೇ ಹಂತದ ಸಮಯದಲ್ಲಿ ಮತ್ತೆ ಶೇಕಡಾ ೧೦ರಷ್ಟು ವಲಸಿಗರ ಪ್ರಯಾಣದೊಂದಿಗೆ, ಒಟ್ಟು ಶೇಕಡಾ ೩೦ರಷ್ಟು ವಲಸಿಗರು ತಮ್ಮ ತಮ್ಮ ಹಳ್ಳಿಗಳಿಗೆ ಹಿಂತುರುಗಿದಂತಾಗಿದೆ. 

ರೋಹಿಣಿ ಆಗ್ರಹ ಪಡಿಸಿದಂತೆ, ಲಾಕ್ಡೌನಿನ  ಮೊದಲೆರಡು ತಿಂಗುಳುಗಳ ಸಂಬಳದ ಕೊರತೆಯೆನ್ನು ಸರಿದೂಗಿಸಲು, ವಲಸಿಗರಿಗೆ ತಲಾ ೨೫,೦೦೦ ರೂಪಾಯಿಗಳಷ್ಟು ಪರಿಹಾರವನ್ನು ಸರಕಾರ  ನೀಡಬೇಕಿತ್ತು.  ಇದರಿಂದ ವಲಸಿಗರ  ಕೈಯಲ್ಲಿ ಖರ್ಚು ಮಾಡಲು ಹಣ ಸೇರಿ,  ಸ್ಥಳೀಯ ವ್ಯಾಪಾರಗಳು  ಚುರುಕುಗೊಳ್ಳುತ್ತಿತ್ತು. 

ಹಳ್ಳಿಗಳನ್ನು ತಲುಪಿರುವ ಸುಮಾರು ಶೇಕಡಾ ೩೦ರಷ್ಟು ವಲಸಿಗರು ನಗರಗಳಿಗೆ ಹಿಂತಿರುಗಿ  ಬರಲಿಷ್ಟಪಡಲಾರರು. ಆದರೂ ಹಳ್ಳಿಗಳಲ್ಲಿ ಉದ್ಯೋಗಾವಕಾಶವಿರದ ಕಾರಣ ಅವರುಗಳೆಲ್ಲರೂ ನಗರಗಳಿಗೆ ಹಿಂತಿರುಗಬೇಕಾಗಬಹುದು' ಎಂದರು. 

***

ಈ ನಡುವೆ, ಪಟ್ಟಣಿಗರಂತೆ ಕಾಣುವ ಇಬ್ಬರು ವ್ಯಕ್ತಿಗಳ ಜೊತೆ ಸುಮಾರು ೧೦ ವಲಸಿಗ ಕೆಲಸಗಾರರು ಮದನ್ ಲಾಲರ ಕಚೇರಿಗೆ ಧಾವಿಸಿ ಬಂದರು. ಅವರುಗಳನ್ನು ಕಂಡ ಕೂಡಲೇ, ಎದ್ದು ನಿಂತು ಹೊರಗೆ ಹೊರಟ ರಾಜು ಮತ್ತು ರೋಹಿಣೀರವರನ್ನು ಕುಳಿತುಕೊಳ್ಳುವಂತೆ ಮದನ್ ಸೂಚಿಸಿದರು. ಪತ್ರಿಕಾ ವರದಿಗಾರ ಯೋಗಿಂದರ್ ಮತ್ತು ಸಮಾಜ ಸೇವಕ ಜಸ್ಪಾಲರು ಕೂಡ ಆಸನಗಳಲ್ಲಿ ಕುಳಿತರು.  ಮಿಕ್ಕವರು ಸುತ್ತಲೂ ನಿಂತೇ ಇದ್ದರು. 

ಯೋಗಿಂದರ್ ಮಾತನಾಡುತ್ತ 'ಏಪ್ರಿಲ್-ಮೇ ತಿಂಗಳುಗಳಲ್ಲಿ ಬಂಧನಗೊಂಡ ನಮ್ಮಿಬರನ್ನೂ ಮತ್ತು ಮಿಕ್ಕ ಹನ್ನೆರಡು ವಲಸಿಗರನ್ನೂ ಜಾಮೀನನ ಮೇಲೆ ಬಿಡುಗಡೆಗೊಳಿಸದ್ದಕ್ಕಾಗಿ ತಮಗೆ ಧನ್ಯವಾದಗಳು' ಎಂದರು. 

ವಕೀಲ ಮದನ್ ಲಾಲರು ಉತ್ತರಿಸುತ್ತಾ, 'ತಮ್ಮೆಲ್ಲರುಗಳ ಮೇಲೂ ಜಾರಿಗೊಂಡಿರುವ ಆರೋಪ ಪತ್ರ (Charge sheet) ನನ್ನ ಕೈಸೇರಿದೆ. ನಿಮ್ಮಗಳ ಮೇಲಿನ ಆರೋಪಗಳು ಗಂಭೀರವಾಗೇ ಇದೆ. ಅಂದಿನ ಘಟನೆ ಕುರಿತಾದ ಎಲ್ಲ ವಿವರಗಳನ್ನು ತಾವುಗಳು ನನಗೆ ನೀಡಬೇಕು. ತಾವುಗಳು ಶೀಘ್ರವಾಗಿ ದೋಷ ಮುಕ್ತರಾಗಬೇಕಾದರೆ, ಸದೃಢವಾದ ವಾದವನ್ನು ನ್ಯಾಯಾಲಯದ ಮುಂದಿಡಬೇಕು' ಎಂದರು. 

'ನಮ್ಮಗಳ ಮೇಲಿನ ಆರೋಪದ ವಿವರಗಳನ್ನು ನಮಗೆ ದಯಮಾಡಿ ತಿಳಿಸಿ' ಎಂದರು ಆತಂಕಗೊಂಡಂತೆ ಕಂಡ ಯೋಗಿಂದರ್. 

ವಕೀಲ ಮದನರು ಆರೋಪಗಳ ವಿವರಗಳನ್ನು ನೀಡುತ್ತಾ, 'ನಿಮ್ಮ ನಗರದ ಹನುಮಾನ್ ಮಂದಿರದ ಹತ್ತಿರವಿರುವ ಅಂತರ ರಾಜ್ಯ ಬಸ್ ನಿಲ್ದಾಣದಲ್ಲಿ ತಾವಿಬ್ಬರು ಅಂದು ಜಮಾಯಿಸಿದ್ದ ವಲಸಿಗರನ್ನು ದಾಂಧಲೆ ನಡೆಸುವಂತೆ ಪ್ರಚೋದಿಸಿದ್ದೀರಿ. ಆ ನಿಲ್ದಾಣದಿಂದ ಹೊರಡುವ ದೂರ ಪ್ರಯಾಣದ ಬಸ್ಸುಗಳ ತಪ್ಪು ಮಾಹಿತಿಯನ್ನು ನೀಡಿದ್ದೀರಿ. ಏಪ್ರಿಲ್ ೧೫ರನಂತರವೂ ಲಾಕ್ಡೌನ್ ಮುಂದುವರೆಸಿದ್ದರಿಂದ, ವಲಸಿಗರುಗಳಾಗಲೇ ಉದ್ರಿಕ್ತರಾಗಿದ್ದರು. ತಮ್ಮ ತಮ್ಮ ದೂರದ ಹಳ್ಳಿಗಳಿಗೆ ಪ್ರಯಾಣ ಬೆಳಸಲು ಬೇಕಾದ ಬಸ್ಸು-ರೈಲುಗಳ ವ್ಯವಸ್ಥೆಯನ್ನು ಕೂಡಲೇ ಮಾಡಿಕೊಡಬೇಕೆಂಬುದು ಅವರುಗಳ ಆಗ್ರಹವಾಗಿತ್ತು. "ನಮಗೆ ಕೆಲಸವಿಲ್ಲ, ನಮ್ಮ ಬಳಿ ಹಣವಿಲ್ಲ, ನಮ್ಮ ವಸತಿಯ ಶೆಡ್ಡುಗಳಿಗೆ ಬಾಡಿಗೆ ಕಟ್ಟಲಾಗುತ್ತಿಲ್ಲ" ಎಂಬುದು ಅವರುಗಳ ಒಕ್ಕೊರಲ ಘೋಷಣೆಯಾಗಿತ್ತು. 

ಅಂದು ನೆರೆ ರಾಜ್ಯಗಳ ಬೃಹತ್ ನಗರಗಳಲ್ಲೂ ಅದೇ ರೀತಿಯ ವಲಸಿಗರ ಜಮಾವಣೆ ಮತ್ತು ಹರತಾಳಗಳು ನಡೆದಿತ್ತು.  ಅವರುಗಳೂ ರಸ್ತೆ ತಡೆಗಳನ್ನು ಉಂಟುಮಾಡಿದ್ದರು. ನಿಮ್ಮಗಳ ಸಂಪರ್ಕದಲ್ಲಿದ್ದ ಬೇರೆ ಬೇರೆ ನಗರಗಳ ನಾಯಕರುಗಳ ಪೂರ್ವನಿಯೋಜನೆಗಳಿಂದಲೇ, ಸುತ್ತಲಿನ ಎಲ್ಲಾ ಬೃಹತ್ ನಗರಗಳಲ್ಲೂ, ಜಮಾಯಿಸಿದ್ದ ವಲಸಿಗರುಗಳು ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ರೊಚ್ಚಿಗೆದ್ದು ದಾಂಧಲೆಯೆಬ್ಬಿಸ್ಸಿದ್ದಾರೆ. 

ಸಹಸ್ರಾರು ಸಂಖ್ಯೆಗಳಲ್ಲಿ ಪ್ರಯಾಣಕ್ಕೆಂದು ಜಮಾಯಿಸಿದ್ದ ವಲಸಿಗರುಗಳ ಕೈಯಲ್ಲಿ ಗಂಟು ಮೂಟೆಗಳೇಕಿತ್ತಿಲ್ಲ? ದೊಂಬಿ ನಡೆದ ಬಸ್ ನಿಲ್ದಾಣದ ಸುತ್ತ ವಾಸವಿದ್ದ ವಲಸಿಗರುಗಳು ಮಾತ್ರ ಅಲ್ಲಿ ಜಮಾಯಿಸಿದ್ದಕ್ಕೆ ಕಾರಣವೇನು? ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಜರುಗಿದ ದೊಂಬಿ ಪ್ರಕರಣಗಳು ಸರಕಾರದ ಮುಖಕ್ಕೆ ಮಸಿ ಬಳಿಯಲೆಂದೇ ಪೂರ್ವನಿಯೋಜಿತವಾಗಿ ನಡೆಸಿದ ಕೃತ್ಯಗಳು ಎಂದು ನಿಮ್ಮಗಳ ಮೇಲೆ ಆರೋಪಿಸಲಾಗಿದೆ' ಎಂದರು.  

ಆರೋಪಗಳ ಪಟ್ಟಿಯನ್ನು ಆಲಿಸಿದ ಯೋಗಿಂದರ್ ಮತ್ತವರ ಸಂಗಡಿಗರು ಸ್ವಲ್ಪ ವಿಚಲಿತರಾದಂತೆ ಕಂಡರು. 'ಚಿಂತಿತರಾಗಬೇಡಿ, ತಮ್ಮಗಳನ್ನು ಆರೋಪ ಮುಕ್ತರುಗಳನ್ನಾಗಿಸುವ ಎಲ್ಲ ಪ್ರಯತ್ನಗಳನ್ನು ಮಾಡುವೆ' ಎಂದು ಮದನ್ ಅವರುಗಳನ್ನು ಸಮಾಧಾನ ಪಡಿಸಿದರು. 

ಘಟನೆಗಳ ಎಲ್ಲಾ ವಿವರಗಳನ್ನು ತದೇಕ ಚಿತ್ತಳಾಗಿ ಆಲಿಸಿದ ರೋಹಿಣಿ, ತನ್ನ ಡೈರಿಯಲ್ಲಿ ಕೆಲವು ಟಿಪ್ಪಣಿಗಳನ್ನು ಬರೆದುಕೊಂಡಿದ್ದಳು.  'ಲಾಕ್ಡೌನನ್ನು ಮಾರ್ಚ್ ೨೪ರಂದು ದಿಢೀರನೆ ಜಾರಿಗೊಳಿಸಿದಾಗ, ವಲಸಿಗ ಕೆಲಸಗಾರರಿಗೆ ಉಂಟಾಗಬಹುದಾದ ಅತಂತ್ರ ಪರಿಸ್ಥಿತಿಯ ಪೂರ್ವಾನುಮಾನ ನಮ್ಮ ನಾಯಕರುಗಳಿಗೆ ಇದ್ದಂತೆ ಕಾಣುವುದಿಲ್ಲ. ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುಲು ಹಲವು ಸಾಧನಗಳಿರುವ ನಮ್ಮ ನಾಯಕರುಗಳಿಗೆ ವಲಸಿಗರ ಬವಣೆಯ ಪೂರ್ವಾನುಮಾನ ಇರದೇ ಇದ್ದದ್ದು ನಾಚಿಕೆಗೇಡಿನ ವಿಷಯವೇ ಸರಿ. ಮಾರ್ಚ್ ೨೪ಕ್ಕಿಂತ ಕೆಲವು ದಿನಗಳ ಮುಂಚೆಯೇ, ಲಾಕ್ಡೌನಿನ ಪೂರ್ವಾನುಮಾನವಿದ್ದ ಹಲವು ವಲಸಿಗರು, ಪೂರ್ವದ ರಾಜ್ಯಗಳ ಕಡೆ ಹೊರಡುವ ಹಲವು ರೈಲುಗಳನ್ನು ಹತ್ತಲು ಮುಗಿ ಬಿದ್ದದ್ದು ಸರಕಾರಗಳು ಗಮನಿಸಲಿಲ್ಲವೆ? ವಲಸಿಗರ ಅತಂತ್ರ ಸ್ಥಿತಿಗೆ ನಮ್ಮ ಕೇಂದ್ರ ಹಾಗು ರಾಜ್ಯ ಸರಕಾರಗಳೇ ಕಾರಣ. ಉಂಟಾಗ ಬಹುದಾದ ವಲಸಿಗರ ಪರದಾಟಗಳನ್ನು ನಿಭಾಯಿಸುವ ಯಾವ ಮುಂಜಾಗರೂಕತೆಯ ಕ್ರಮಗಳನ್ನೂ ನಮ್ಮ ಸರಕಾರಗಳು ಕೈಗೊಳ್ಳಲಿಲ್ಲ. ಹಾಗಾಗಿ ನಮ್ಮ ವಲಸಿಗ ಕೆಲಸಗಾರರು ನೀರು, ಆಹಾರ, ವಸತಿಗಳಿಲ್ಲದೆ ಒದ್ದಾಡುವಂತಾಯ್ತು. ಪ್ರಯಾಣಿಸಲು ಅನ್ಯ ಮಾರ್ಗವಿಲ್ಲದೆ, ತಮ್ಮ ಸಾಮಾನುಗಳನ್ನು ಹೊತ್ತು, ಹೆಂಡತಿ-ಮಕ್ಕಳುಗಳೊಡನೆ, ಸುಡುಬಿಸಿಲಿನಲ್ಲಿ ರೈಲು ಮತ್ತು ಬಸ್ಸು ಮಾರ್ಗಗಳನ್ನು ಹಿಡಿದು ಕಾಲ್ನಡಿಗೆಯಲ್ಲಿ ಸಾಗಬೇಕಾಯಿತು' ಎನ್ನುತ್ತಾ ಪ್ರಲಾಪಿಸಿದವಳು ರೋಹಿಣಿ. 

ಮದನ್ ಲಾಲರು ಕೂಡ ಹೌದೆಂಬಂತೆ ತಲೆಯಾಡಿಸುತ್ತಾ, 'ರೈಲು ಮತ್ತು ಬಸ್ ಮಾರ್ಗಗಳಲ್ಲಿ  ಚಲಿಸುತ್ತಾ ತಮ್ಮ ತಮ್ಮ ಊರುಗಳತ್ತ ಹೋರಾಟ ವಲಸಿಗ ಕೆಲಸಗಾರರ ಕಾಲ್ನಡಿಗೆಯ ಪ್ರಯಾಣ, ೧೯೪೭ರ ಭಾರತ ವಿಭಜನೆಯ ಕರಾಳ ದಿನಗಳಂದು, ಪಂಜಾಬ್ ಹಾಗೂ ಬಂಗಾಳ ಗಡಿಗಳಲ್ಲಿ ದಿಕ್ಕೆಟು ಎರಡೂ ಕಡೆಗೆ ಸಾಗಿದ ನಿರಾಶ್ರಿತರ ವಲಸೆಯನ್ನು ನೆನಪಿಸಿತ್ತು. ಲಾಕ್ಡೌನ್ ವಿಧಿಸುವ ಮುನ್ನ, ವಲಸಿಗ ಕೆಲಸಗಾರರ ಸಮಸ್ಯೆಯನ್ನು ಸರಕಾರಗಳು ಮುಂಚಿತವಾಗಿ ಮನಗಾಣಬೇಕಿತ್ತು. ಲಾಕ್ಡೌನ್ ವಿಧಿಸುವ ಮುನ್ನ ವಲಸಿಗರು ತಮ್ಮ ತಮ್ಮ ಊರುಗಳತ್ತ ಪ್ರಯಾಣಿಸುವ ವ್ಯವಸ್ಥೆಯನ್ನು ಮಾಡಿಕೊಡಬೇಕಿತ್ತು ಅಥವಾ ಅವರುಗಳಿರುವಲ್ಲೇ ಅವರುಗಳಿಗೆ ನೀರು, ಆಹಾರ ಮತ್ತು ವಸತಿಯ ಸೌಕರ್ಯವನ್ನು ಮಾಡಿಕೊಡಬೇಕಿತ್ತು. ಲಾಕ್ಡೌನ್ ದಿನಗಳಲ್ಲಿ ವಲಸಿಗ ಕೆಲಸಗಾರರ ಮೂಲಭೂತ ಅವಶ್ಯಕತೆಗಳ  ಏರ್ಪಾಡನ್ನು ಅವರಗುಳಿರುವಲ್ಲಿಯೇ ಮಾಡಿಕೊಡಬೇಕೆಂದು, ನಿರ್ಮಾಣೋದ್ಯಮಿಗಳ ಮತ್ತು ದೊಡ್ಡ ಗುತ್ತಿಗೆದಾರರುಗಳ ಮೇಲೆ ಕಠಿಣ ಷರತ್ತುಗಳನ್ನು ಸರಕಾರಗಳು ವಿಧಿಸಬೇಕಿತ್ತು. ಈ ಅವಧಿಯಲ್ಲಿ ನೂರಾರು ವಲಸಿಗರು ತಮ್ಮ ಅಮೂಲ್ಯ ಜೀವಗಳನ್ನು ಕಳೆದುಕೊಂಡದ್ದು, ಸ್ವತಂತ್ರ ಭಾರತದ ಇತಿಹಾಸದ ಮೇಲಿನ ಕಪ್ಪು ಚುಕ್ಕೆ' ಎಂದು ಉದ್ಗರಿಸಿದರು. 

ಉತ್ತೇಜಿರಾದಂತೆ ಕಂಡ ರಾಜುರವರು, 'ನಾನು ವಕೀಲನಾಗಿರದಿರಬಹುದು. ಆದರೂ ತಮ್ಮ ಹೋಲಿಕೆ ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ' ಎಂದು ಮದನರನ್ನು ನೋಡುತ್ತಾ ಗುಡುಗಿದರು. 'ಹೌದು, ೧೯೪೭ರ ಭಾರತ ವಿಭಜನೆಯ ಸಮಯದಲ್ಲಿ ನಡೆದ ನಿರಾಶ್ರಿತರ ವಲಸೆಯ ದುರಂತ,  ಮನುಕುಲದ ಇತಿಹಾಸದಲ್ಲಿ ಕರಾಳವಾದುದೆಂದು ಓದಿದ್ದೇನೆ. ಸುಮಾರು ಒಂದು ಕೋಟಿಗೂ ಮೀರಿದಷ್ಟು ನಿರಾಶ್ರಿತರು ಪಂಜಾಬ್ ಗಡಿಯ ಎರಡೂ ಕಡೆ ಪರದಾಡುತ್ತ ಸಾಗಿದ್ದರು. ಬಂಗಾಳದ ಗಡಿಯಲ್ಲೂ ಸುಮಾರು ೧೦ ಲಕ್ಷದಷ್ಟು ನಿರಾಶ್ರಿತರ ವಿನಿಮಯ ಅಮಾನುಷ ರೀತಿಯಲ್ಲಿ ನಡೆದಿದೆ. ಆ  ರೀತಿಯ ನಿರಾಶ್ರಿತರ ಆತಂಕದ ಪ್ರಯಾಣ, ಹಿಂಸಾಚಾರಗಳು, ಕೊಲೆ-ಸುಲಿಗೆಗಳು ನಡೆದೇ ನಡೆಯುತ್ತದೆಂಬ ಪೂರ್ವಾನುಮಾನ ಎರಡೂ ಕಡೆಯ ನಾಯಾಕರುಗಳಿಗೆ ಇದ್ದೇ ಇತ್ತು. ಆದರೆ ಅಂದಿನ ಎರಡೂ ಕಡೆಯ ನಾಯಕರುಗಳಿಗೆ ಅಧಿಕಾರವನ್ನು ಕೂಡಲೇ ವಹಿಸಿಕೊಳ್ಳುವ ತವಕ ಮಾತ್ರವಿದ್ದು, ನಿರಾಶ್ರಿತರ ಕ್ಷೇಮೆದ ಚಿಂತೆಯನ್ನು ಮಾಡಲೇ ಇಲ್ಲ. ಅಂದಿನ ಭಾರತ ವಿಭಜನೆಯ ಪ್ರಕ್ರಿಯೆ, ಅಂದಿನ ನಾಯಕರುಗಳು  ಆತಾತುರವಾಗಿ ನಡೆಸಿದ ಅವಿವೇಕವಾಗಿತ್ತು. ಅಂದಿನ ಬ್ರಿಟಿಷ್ ಸರಕಾರ ವಿಭಜನೆಯ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುವಂತೆ  ೧೨ ತಿಂಗಳುಗಳಿಗೂ ಹೆಚ್ಚಿನ ಸಮಯಾವಕಾಶವನ್ನು ಅಂದಿನ ವೈಸ್ರಾಯರಿಗೆ ನೀಡಿದ್ದರೂ, ಎಲ್ಲ ನಾಯಕರುಗಳು ನಾಲ್ಕೇ ತಿಂಗಳುಗಳ ತರಾತುರಿಯಲ್ಲಿ ದೇಶದ ವಿಭಜನೆಯನ್ನು ಮಾಡಿ ಮುಗಿಸಿದರು. 

ಅಂದಿನ ಅವಿಭಜಿತ ಭಾರತದ ಕೈಯಲ್ಲಿ ಸಾಕಷ್ಟು ದೊಡ್ಡದಾದ ಸೇನಾಬಲವಿತ್ತು. ಸೇನೆಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ, ಸೂಕ್ತವಾಗಿ ನಿಯೋಜಿಸಿದ್ದರೆ  ರಕ್ತಪಾತ ಹಾಗು ಕೊಲೆ-ಸುಲಿಗೆಗಳನ್ನು ತಡೆಯಬಹುದಿತ್ತು. ದುರದೃಷ್ಟವಶಾತ್ ಹಾಗಾಗಲಿಲ್ಲ. ಆ ದಿನಗಳ ವರದಿಯೊಂದರ ಪ್ರಕಾರ ಅಂದು ನಡೆದ ಹಿಂಸಾಚಾರಗಳಲ್ಲಿ, ಎರಡೂ ಕಡೆಯ ಸುಮಾರು ೧೦ರಿಂದ ೨೦ ಲಕ್ಷಗಳಷ್ಟು ನಿರಾಶ್ರಿತರ ಕಗ್ಗೊಲೆ ನಡೆದು ಹೋಯಿತು. ಸಾವು-ನೋವುಗಳ ಅನುಮಾನವನ್ನು ಉತ್ಪ್ರೇಕ್ಷೆಯಿಲ್ಲದೆ  ಬಣ್ಣಿಸಿದ್ದೇವೆಂದು ಹೇಳಿಕೊಂಡ ವರದಿಗಳೂ ಕೂಡ ೨ ಲಕ್ಷದಿಂದ ೫ ಲಕ್ಷಗಳವರೆಗಿನ ಸಂಖ್ಯೆಯಲ್ಲಿ ನಿರಾಶ್ರಿತರು ಹಿಂಸಾಚಾರದಲ್ಲಿ ಅಸು ನೀಗಿದರು ಎಂದು ದಾಖಲಿಸಿವೆ. ಮತ್ತೊಂದು ವರದಿಯ ಪ್ರಕಾರ, "ಎರಡೂ ರಾಷ್ಟ್ರಗಳು ನಿರಾಶ್ರಿತರ  ವಿನಿಮಯಕ್ಕೆಂದು ಚಲಾಯಿಸಿದ ಹಲವಾರು ರೈಲುಗಾಡಿಗಳು, ತಮ್ಮ ಅಂತಿಮ ನಿಲ್ದಾಣಗಳನ್ನು ತಲುಪಿ ನಿಂತರೂ, ಯಾವ ಪ್ರಯಾಣಿಕರೂ ಇಳಿಯಲೇ ಇಲ್ಲ. ರೈಲಿನಲ್ಲೇ ನಿರಾಶ್ರಿತರ ಸಾಮೂಹಿಕ ಮಾರಣ ಹೋಮವನ್ನು ನಡೆಸಲಾಗಿತ್ತು. ಎರಡೂ ಕಡೆಯ ನಿರಾಶ್ರಿತರುಗಳ  ನಡುವಿನ ದ್ವೇಷ, ಅಸೂಯೆ ಅಷ್ಟು ತೀವ್ರವಾಗಿತ್ತು. ದುಷ್ಕರ್ಮಿಗಳ ಸಂಚು ಹಿಂಸಾಚಾರಕ್ಕೆ ತುಪ್ಪವನ್ನು ಸುರಿಯುವ ಕೆಲಸ ಮಾಡಿತ್ತು. ಜೊತೆಗೆ ಅಂದಿನ ನಾಯಕರುಗಳ ಬೇಜವಾಬ್ದಾರಿ ವರ್ತನೆ ಮತ್ತು ದಿವ್ಯ ನಿರ್ಲಕ್ಷ್ಯಗಳು ಸಾಮೂಹಿಕ ಹತ್ಯೆಗಳಿಗೆ ಎಡೆ ಮಾಡಿ ಕೊಟ್ಟಿತ್ತು. ಎರಡೂ ಕಡೆಯ ನಿರಾಶ್ರಿತರು ತಮ್ಮ ತಮ್ಮ ಆಸ್ತಿ-ಪಾಸ್ತಿಗಳನ್ನು ತೊರೆದು, ಬರಿಗೈಗಳಲ್ಲಿ ದೇಶಾಂತರಿಸಬೇಕಾಗಿ ಬಂದಿತ್ತು. ನಿರಾಶ್ರಿತರು ತ್ಯಜಿಸಿ ಬಂದ ಆಸ್ತಿಗಳ ಕ್ರಮಬದ್ಧ ಮರುಹಂಚಿಕೆಯನ್ನು ಮಾಡುವ ಯಾವ ಪ್ರಯತ್ನಗಳೂ  ವ್ಯವಸ್ಥಿತವಾಗಿ ನಡೆಯಲಿಲ್ಲ" ತಿಳಿದು ಬಂದಿದೆ.  

೨೦೨೦ರ ವಲಸಿಗರ ಬವಣೆಯನ್ನು ೧೯೪೭ರ ಘಟನೆಯೊಂದಿಗೆ ಹೋಲಿಸಬೇಡಿ. ಮಾರ್ಚ್ ೨೨ರ ದಿನದಂದೇ ನಮ್ಮ ಪ್ರಧಾನಿಯವರು ದೇಶದ ಜನತೆಯನ್ನು ಲಾಕ್ಡೌನ್ಗೆ ಮಾನಸಿಕವಾಗಿ ಸಿದ್ಧರಿರುವಂತೆ ಮಾಡಲು, ಒಂದು ದಿನದ ಲಾಕ್ಡೌನನ್ನು ಜಾರಿಗೊಳಿಸಿದ್ದರು. ಮಾರ್ಚ್ ೨೦ರ ತಮ್ಮ ಭಾಷಣದಲ್ಲೇ ಪ್ರಧಾನಿಯವರು ಜನತೆಗೆ ದೀರ್ಘವಾದ  ಹೋರಾಟವೊಂದಕ್ಕೆ ಸಿದ್ಧರಾಗಿರುವಂತೆ ಕರೆ ನೀಡಿದ್ದರು. ಆದುದರಿಂದ ಹಲವಾರು ಹಂತಗಳಲ್ಲಿ ದೀರ್ಘವಾದ  ಲಾಕ್ಡೌನನ್ನು ಜಾರಿಗೊಳಿಸಿದ್ದು, ದಿಢೀರನೆ ಕೈಗೊಂಡ ನಿರ್ಣಯವೆಂದು ಹೇಳಲಾಗದು. ಸರಕಾರಕ್ಕೆ ವಲಸಿಗರ ಸಮಸ್ಯೆಯ ಅರಿವು ಇರಲಿಲ್ಲವೆಂದೂ ಹೇಳಲಾಗದು. ವಲಸಿಗರನ್ನು ಲಾಕ್ಡೌನ್ಗೆ ಮುಂಚಿತವಾಗೇ ಅವರವರ ಊರುಗಳನ್ನು ತಲುಪುವಂತೆ ಮಾಡಿದ್ದರೆ, ನಗರಗಳಿಂದ ಸೋಂಕು ಮುಕ್ತವಾಗಿದ್ದ ಹಳ್ಳಿಗಳಿಗೆ ಕೋವಿಡ್ ಸೋಂಕನ್ನು ತಂದು ಸೇರಿಸಿದಂತಾಗುತ್ತಿತ್ತು. ರೈಲುಗಾಡಿಗಳ ತುಂಬಾ ವಲಸಿಗರು ಕಿಕ್ಕಿರಿದು ಸೇರಬೇಕಾಗಿದ್ದುದೇ  ಸೋಂಕಿನ ತೀವ್ರ ಹರಡುವಿಕೆಗೆ ಕಾರಣವಾಗ ಬಹುದೇನೋ ಎಂಬ ಭಯವಿತ್ತು. 

ವಲಸಿಗರ ಪರದಾಟದ ಬವಣೆಯನ್ನು, ೧೯೯೦ರಲ್ಲಿ ಕಾಶ್ಮೀರದಿಂದ ಹಿಂದೂಗಳನ್ನು ಹೊಡೆದಟ್ಟಿದ ಘಟನೆಗೂ ಹೋಲಿಸಿ ನೋಡಬಹುದು. ಅಂದು ಕಾಶ್ಮೀರದಿಂದ ಹೊರದೂಡಲ್ಪಟ್ಟ ಹಿಂದೂಗಳನ್ನು, ನಮ್ಮ ಮಾಧ್ಯಮದವರು, ರಾಜಕಾರಣಿಗಳು ಮತ್ತು ಕೆಲವು ಸರಕಾರಗಳೂ ಉದ್ದೇಶಪೂರ್ವಕವಾಗಿ "ಕಾಶ್ಮೀರಿ ಪಂಡಿತ"ರೆಂದೇ ಕರೆಯುತ್ತಾರೆ. ಪಂಡಿತ ಜನಾಂಗದವರು ಹಿಂದೂಗಳಲ್ಲವೆ? ಇದು "ಒಡೆದು ಆಳುವ ನೀತಿಯ" ಮುಂದುವರೆದ  ಹುನ್ನಾರವಲ್ಲವೆ? ಈ ರೀತಿಯ ಒಡೆದಾಳುವ ಹುನ್ನಾರಗಳಿಗೆ ನನ್ನ ಕಡು ವಿರೋಧವಿದೆ. ಆ ದಿನಗಳಲ್ಲಿ ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿರಂತರವಾಗಿ ಸಾಗಿತ್ತು. ಅಪಾರ ಸಂಖ್ಯೆಯಲ್ಲಿ ಅತ್ಯಾಚಾರ ಹಾಗು ಕೊಲೆ ಪ್ರಕರಣಗಳು ನಡೆದಿದ್ದವು. ಕಾಶ್ಮೀರವನ್ನು ಬಿಟ್ಟು ತೊಲಗುವಂತೆ ಉಗ್ರರು, ಶತ ಶತಮಾನಗಳಿಂದ ಅಲ್ಲೇ ಬದುಕು ಕಟ್ಟಿಕೊಂಡಿದ್ದ ಹಿಂದುಗಳಿಗೆ ಬೆದರಿಕೆಯೊಡ್ಡಿದ್ದರು. ನಾಲ್ಕು ಲಕ್ಷಕ್ಕೂ ಹೆಚ್ಚು ಹಿಂದೂಗಳು ಜೀವ ಭಯದಿಂದ ರಾತ್ರೋರಾತ್ರಿ ಕಾಶ್ಮೀರವನ್ನು ತೊರೆದು, ಜಮ್ಮು, ದಿಲ್ಲಿ ಮುಂತಾದ ಸುರಕ್ಷಿತ ತಾಣಗಳಿಗೆ ವಲಸೆ ಹೋದರು. ಆಸ್ತಿ-ಪಾಸ್ತಿಗಳನ್ನು ಬಿಟ್ಟು ಓಡಿ ಹೋಗಬೇಕಾದ ಅವರುಗಳಿಗೆ, ಎಷ್ಟರ ಮಟ್ಟಿನ ಮನೋವೇದನೆಯಾಗಿರ ಬೇಡ? ನಮ್ಮ ದೇಶದಲ್ಲೇ, ನಮ್ಮ ಕಾಶ್ಮೀರಿ ಹಿಂದೂಗಳು ನಿರಾಶ್ರಿತರಾದರು. ಆ ದಿನಗಳಲ್ಲಿ ಕಾಶ್ಮೀರಿ ಹಿಂದೂಗಳ ರಕ್ಷಣೆ ಮಾಡಲು ಅಂದಿನ ಯಾವ ಸರಕಾರಗಳೂ ಮುಂದೆ ಬರದೇ ಇದ್ದದ್ದು ದುರಂತವೇ ಸರಿ. ಈ ದುರ್ಘಟನೆ ನಡೆದು ಮೂರು ದಶಕಗಳೇ ಕಳೆದಿದ್ದರೂ, ಕಾಶ್ಮೀರಿ ಹಿಂದುಗಳಿಗೆ ತಮ್ಮ ಊರುಗಳಿಗೆ ಹಿಂತಿರುಗಲಾಗಿಲ್ಲ. ಅವರುಗಳೆಲ್ಲ ಕಾಶ್ಮೀರದ ಹೊರಗೆ ಉಳಿದು, ತಮ್ಮ ಬದುಕನ್ನು ಹೊಸದಾಗಿ ಕಟ್ಟಿಕೊಂಡಿದ್ದಾರೆ. ಇಂದಿನ ಕೇಂದ್ರ ಸರಕಾರ, ಕಾಶ್ಮೀರಿ ಹಿಂದೂಗಳು ಕಾಶ್ಮೀರಕ್ಕೆ            ಹಿಂತಿರುಗುವಂತೆ ಧೈರ್ಯ ತುಂಬಲು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಅವರುಗಳಿಗೆ ಹಿಂತಿರುಗುವಲ್ಲಿನ ಭಯದ ನಿವಾರಣೆಯಾಗಿಲ್ಲ. ಕಾಶ್ಮೀರಿ ಹಿಂದೂಗಳ ಸಮಸ್ಯೆಗಳಿಗೆ ಹೋಲಿಸಿದರೆ, ಲಾಕ್ಡೌನಿನಿಂದ ಸಂತ್ರಸ್ತರಾದ ವಲಸಿಗರ ಪರಿಸ್ಥಿತಿ ಅಷ್ಟೇನು ತ್ರಾಸದಾಯಕವಾಗೇನಿಲ್ಲವೆಂದೇ ಹೇಳಬಹುದು. ವಲಸಿಗ ಕೆಲಸಗಾರರು ಕೆಲಸಗಳನ್ನು ಕಳೆದುಕೊಂಡಿದ್ದಾರೆ, ಆದರೆ ಆಸ್ತಿ-ಪಾಸ್ತಿಗಳನ್ನಲ್ಲ. ಅವರವರ ಹಳ್ಳಿಗಳಲ್ಲೇ ಅವರುಗಳಿಗೆ ವಸತಿ, ಉದ್ಯೋಗಗಳ ವ್ಯವಸ್ಥೆಯನ್ನು ಮಾಡುವ ಸರ್ವ ಪ್ರಯತ್ನಗಳನ್ನು ಸರಕಾರಗಳು ಮಾಡಿವೆ. ಒಂದೊಮ್ಮೆ ಅವರುಗಳು ಕೆಲಸದ ಸಲುವಾಗಿ ನಗರಗಳಿಗೆ ಹಿಂತಿರುಗಲು ಬಯಸಿದಲ್ಲಿ, ಅವರ ಪ್ರಯಾಣದ ವ್ಯವಸ್ಥೆಯನ್ನೂ ಸರಕಾರ ಮಾಡುವ ಭರವಸೆ ನೀಡಿದೆ. 

ಲಾಕ್ಡೌನ್ ಜಾರಿಗೊಂಡ ಕೂಡಲೇ, ವಲಸಿಗ ನೌಕರರು ರೈಲು-ಬಸ್ಸುಗಳನ್ನು ಹಿಡಿದು ತಮ್ಮ ತಮ್ಮ ಊರುಗಳಿಗೆ ಹಿಂತಿರುಗಲು ಪ್ರಯತ್ನಿಸಿದರು. ದಿಕ್ಕು ತೋಚದ ಹಲವು ವಲಸಿಗರು ಕಾಲ್ನಡಿಗೆಯಲ್ಲೇ ತಮ್ಮ ಊರುಗಳತ್ತ ಹೊರಟರು. ಇಂತಹ ಬೆಳವಣಿಗೆಗಳನ್ನು ಗಮನಿಸಿದ ಕೇಂದ್ರ ಸರಕಾರ, ಆಯಾ ರಾಜ್ಯ ಸರಕಾರಗಳಿಗೆ ವಲಸಿಗರನ್ನು ಅವರುಗಳಿರುವ ಸ್ಥಳದಲ್ಲೇ ಉಳಿದುಕೊಳ್ಳುವಂತೆ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಕೂಡಲೇ ಮಾಡುವಂತೆ ನಿರ್ದೇಶಿಸಿತು. ಎಲ್ಲಾ ರಾಜ್ಯ ಸರಕಾರಗಳೂ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡರೂ, ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದಿರಬಹುದು. ಆದರೂ ಅಪಾರ ಸಂಖ್ಯೆಯಲ್ಲಿ ವಲಸಿಗರು ಅತಂತ್ರರಾಗಿದ್ದು, ಕಂಡು ಕೇಳರಿಯದ ಸಮಸ್ಯೆಯೇ ಸರಿ. ಆದರೂ ಸರಕಾರಗಳು ಕೈಗೊಂಡ ಕ್ರಮಗಳಿಂದ ಸಾವು ನೋವುಗಳು ನೂರರ ಸಂಖ್ಯೆಯಲ್ಲಿ ಮಾತ್ರವಿದ್ದು, ೧೯೪೭ರಂದು ನಡೆದ "ನರಮೇಧ"ದೊಂದಿಗಿನ ಹೋಲಿಕೆ ಸಲ್ಲದು. ಪರಿಸ್ಥಿತಿಯನ್ನು ನಿಭಾಯಿಸಲು ಶ್ರಮ ಪಡುತ್ತಿರುವ ಸರಕಾರಗಳ ಬಗ್ಗೆ ಸ್ವಲ್ಪ ಅನುಕಂಪವಿರಲಿ.' ಭಾವಾವೇಶದಿಂದ ಕೂಡಿದ ತಮ್ಮ ವಿಚಾರಗಳನ್ನು ಮಂಡಿಸಿದ ರಾಜುರವರು ಸಾಕಷ್ಟು ದಣಿದಿದ್ದಂತೆ ಕೂಡ ಕಂಡರು. 

ವಕೀಲ ಮದನ್ ಲಾಲ್ ಮತ್ತು ರೋಹಿಣಿಯವರಿಬ್ಬರೂ ರಾಜುರವರ ಆವೇಶಭರಿತ ವಾದವನ್ನು ಕೇಳಿ ಮೂಕವಿಸ್ಮಿತರಾಗಿದ್ದರು. ೧೯೪೭ರ ಘಟನೆಗಳ ಬಗ್ಗೆ ಕರಾರುವಾಕಾದ ವಿಚಾರಗಳನ್ನು ವಿವರಿಸಿದ ತಂದೆ ರಾಜುರವರಿಗೆ, ಮಗಳು ರೋಹಿಣಿ ಮೆಚ್ಚುಗೆ ವ್ಯಕ್ತಪಡಿಸಿದಳು. ರಾಜು ಮತ್ತು ರೋಹಿಣಿ ಮದನ್ ಲಾಲರ ಮನೆಯನ್ನು ಬಿಟ್ಟು ಹೊರಡುವ ಹೊತ್ತಿಗಾಗಲೇ ತಡರಾತ್ರಿಯಾಗಿತ್ತು. 

***     

ವಲಸಿಗ ಕೆಲಸಗಾರರ ಕಷ್ಟ-ಕಾರ್ಪಣ್ಯಗಳನ್ನು ಕುರಿತು ಇನ್ನೂ ಹೆಚ್ಚಿನ ಪರಿಶೋಧನೆಯನ್ನು ಮುಂದುವರಿಸಲಿಚ್ಛಿಸಿದ ರೋಹಿಣಿ, ತನ್ನ ತಂದೆ ರಾಜುರವರೊಂದಿಗೆ ನಗರ ಪ್ರದಕ್ಷಿಣೆ ಕೈಗೊಂಡಿದ್ದಳು. ಹೊರವಲಯದ ಒಂದು ಪ್ರದೇಶದಲ್ಲಿ, ಸುಮಾರು ೫೦ ವಲಸಿಗರು ಭಾರಿ ಚರಂಡಿಯ ಬದುವಿನ ಮೇಲಿದ್ದ, ಶಿಥಿಲವಾದ ಶೆಡ್ಡುಗಳಲ್ಲಿ ವಾಸವಿದ್ದರು. ಅವರುಗಳ ಮುಖ್ಯಸ್ಥರಾದ ಮಲ್ಕಿಯತ್ ಸಿಂಗರವರು ತಮ್ಮ ದುರಂತದ ಕಥೆಯನ್ನು ರೋಹಿಣಿಗೆ ವಿವರಿಸಿದರು. 'ನಮ್ಮ ತಂಡದವರೆಲ್ಲ ಕಟ್ಟಡದ ವಿಶೇಷ ಕುಶಲ ಕರ್ಮಿಗಳು. ಆದುದರಿಂದ ನಮ್ಮ ಗುತ್ತಿಗೆದಾರರು ನಮ್ಮಗಳಿಗೆ ಉತ್ತಮವಾದ ಶೆಡ್ಡುಗಳನ್ನು ವಾಸಕ್ಕಾಗಿ ನೀಡಿದ್ದರು.  ಆ ಶೆಡ್ಡುಗಳಲ್ಲಿ ವಾಸಿಸುತ್ತ, ನಾಲ್ಕು ವರ್ಷಗಳಷ್ಟು ಕಾಲ ನೆಮ್ಮದಿಯಿಂದ ಕೆಲಸ ಮಾಡಿಕೊಂಡಿದ್ದೆವು. ಲಾಕ್ಡೌನಿನ ಮುನ್ಸೂಚನೆಯನ್ನರಿತ ನಾನು, ನನ್ನ ತಂಡದವರೊಂದಿಗೆ  ಮುಂಚಿತವಾಗೇ ನಮ್ಮ ಊರುಗಳನ್ನು ಸೇರಿದೆ. ಆದರೆ ನಮ್ಮ ಊರಿನವರುಗಳೇ ನಮ್ಮಗಳನ್ನು "ದೂರದ ನಗರಗಳಿಂದ ಬಂದವರು, ಕೋವಿಡ್ ಸೋಂಕು ಹರಡುವವರು" ಎಂದು  ಭಾವಿಸಿ ನಮ್ಮನ್ನು ಊರಿನ ಹೊರಗೆ ಉಳಿದುಕೊಳ್ಳುವಂತೆ ಮಾಡಿದ್ದರು. ಮೂರು ವಾರಗಳನಂತರವೇ ನಮ್ಮಗಳನ್ನು ಊರಿನೊಳಗೆ ಸೇರಿಸಿಕೊಂಡಿದ್ದು. ನನ್ನ ಹತ್ತಿರ ಕೂಡಿಟ್ಟ ಸ್ವಲ್ಪ ಹಣವಿತ್ತು. ನನ್ನ ತಂದೆ ಹಾಗು ಚಿಕ್ಕಪ್ಪರುಗಳೊಂದಿಗೆ ನಮ್ಮ ಮುತ್ತಾತನವರು ಕಟ್ಟಿದ ಮನೆಯಲ್ಲಿ ಸ್ವಲ್ಪ ದಿನಗಳನ್ನು ಆರಾಮವಾಗಿ ಕಳೆದೆವು. ದಿನಗಳು ಕಳೆದಂತೆ ನನ್ನ ಕೈಯಲ್ಲಿದ್ದ ಹಣ ಖರ್ಚಾಗಿ ಹೋಯಿತು. ಏನಾದರೂ ಕೆಲಸ ಮಾಡಿ ದುಡಿಯೋಣವೆಂದರೆ, ನಮ್ಮ ಊರಿನಲ್ಲಿ ಯಾವ ಕೆಲಸಗಳೂ  ಸಿಗುವಂತಿರಲಿಲ್ಲ. ಕೈಗಳು ಬರಿದಾದ ನಮ್ಮಗಳನ್ನು, ನಮ್ಮ ತಂದೆಯವರು ಕೂಡ ಖರ್ಚಿನ  ಹೊರೆಗಳಂತೆ ಕಾಣ ತೊಡಗಿದರು. ಹಾಗು ಹೀಗೂ ಎರಡು ತಿಂಗಳುಗಳನ್ನು ಕಳೆದ ಬಳಿಕ, ರೈಲು ಬಸ್ಸುಗಳ ಸಂಚಾರ ಆರಂಭವಾಯಿತು. ನನ್ನೊಂದಿಗೆ ಸುಮಾರು ೪೦ ಜನಗಳು ಹೊರಟರು. ನಾವೆಲ್ಲರೂ ನಮ್ಮ ಕಟ್ಟಡದ ಕೆಲಸವಿದ್ದ ನಗರಕ್ಕೆ ಹಿಂತುರುಗಿ ಬಂದೆವು. ಅಷ್ಟು ಹೊತ್ತಿಗಾಗಲೇ ನಾವು ವಾಸಿಸುತ್ತಿದ್ದ ಶೆಡ್ಡುಗಳೆಲ್ಲವೂ ನೆಲಸಮಗೊಂಡಿದ್ದವು. ನಮ್ಮ ಗುತ್ತಿಗೆದಾರರನ್ನು ಭೇಟಿಮಾಡಿ ಕೇಳಿದಾಗ ಅವರು ನಮಗೆ ಯಾವ ಭರವಸೆಯನ್ನೂ ನೀಡದಾದರು. ನಾನು ಕೇಳ್ಪಟ್ಟ ಸುದ್ದಿಗಳ ಪ್ರಕಾರ, ನಮ್ಮ ನಿರ್ಮಾಣೋದ್ಯಮಿಗಳೇ ನಮ್ಮ ಶೆಡ್ಡುಗಳನ್ನು ನೆಲಸಮಗೊಳಿಸಿ ಮುಂದಿನ ಕಟ್ಟಡಗಳಿಗೆ ಅನುವು ಮಾಡಿಕೊಂಡಿದ್ದರು.  ಶೆಡ್ಡುಗಳ ಒಳಗಿದ್ದ ನಮ್ಮ ಸಾಮಾನುಗಳು ಏನಾದುವೆಂಬುದನ್ನು ಯಾರೂ ಹೇಳದಾದರು. ನಾವುಗಳು ಪೊಲೀಸರಿಗೆ ದೂರನ್ನು ನೀಡಿದರೂ, ಯಾವುದೇ ಪ್ರಯೋಜನವಾಗಲಿಲ್ಲ. ಕಟ್ಟಡದ ಕೆಲಸಗಳು ಪುನರಾರಂಭವಾಗುವ ಸೂಚನೆಗಳು ಇರಲಿಲ್ಲ. ಬೇರೆಲ್ಲೂ ಹೋಗಲು ತಿಳಿಯದೆ, ಭಾರಿ ಚರಂಡಿಯ ಬದುವಿನ ಮೇಲೆ ಹರಿದ ಮುರಿದ ತಗಡುಗಳಿಂದ ಶೆಡ್ಡುಗಳನ್ನು ನಿರ್ಮಿಸಿಕೊಂಡು ದಿನ ಕಳೆಯುತ್ತಿದ್ದೇವೆ' ಎಂದು ತಮ್ಮ ಅಳಲನ್ನು ರೋಹಿಣಿಯ ಬಳಿ ತೋಡಿಕೊಂಡವರು ಮಲ್ಕಿಯತ್ ಸಿಂಗ್. ಅವರುಗಳ ದಾಖಲೆ ಪತ್ರಗಳ ವಿವರಗಳನ್ನು ಬರೆದುಕೊಂಡ ರೋಹಿಣಿ, ಅವರುಗಳಿಗೆ ಸರಕಾರದಿಂದ ದೊರೆಯಬೇಕಾದ ದಿನಸಿ ಪೊಟ್ಟಣಗಳು ದೊರೆಯುವಂತೆ ಮಾಡುವ ಭರವಸೆಯನ್ನು ನೀಡಿದಳು. 

ಕೋವಿಡ್ ತಡೆಗೆಂದು ಜಾರಿಗೊಳಿಸಿದ ಲಾಕ್ಡೌನ್ ದಿನಗಳು ವಲಸಿಗ ಕೆಲಸಗಾರರ ಪಾಲಿಗೆ ಕರಾಳ ದಿನಗಳಾಗಿದ್ದವು. ದೇಶದ ದಕ್ಷಿಣದ ತುತ್ತುದಿಯ ವಲಸಿಗ ರಾಮುವಿನ ದುರಂತ ಕತೆಯನ್ನೋದಿದ ರೋಹಿಣಿ ದುಃಖಿತಳಾಗಿದ್ದಳು. ಒಂಬತ್ತು ಮಕ್ಕಳ ಬಡ ಕುಟುಂಬವೊಂದರ ಐದನೇ ಮಗುವಾಗಿ ಜನಿಸಿದ್ದವನು ರಾಮು. ಹದಿನೈದರ ಎಳೆ ಪ್ರಾಯದಲ್ಲೇ, ಮನೆಯವರಿಗೂ ತಿಳಿಸದೆ ನೌಕರಿಯನ್ನರಸಿ ದೂರದ ನಗರವೊಂದಕ್ಕೆ ವಲಸೆ ಹೋದ ಅವನಿಗೆ, ಸಕ್ಕರೆಯ ಕಾರ್ಖಾನೆಯೊಂದರಲ್ಲಿ ಕೆಲಸ ಸಿಕ್ಕಿತ್ತು. ಕೆಲಸದ ಸೂಕ್ಷ್ಮಗಳನ್ನು ಬೇಗನೆ ಕಲಿತ ರಾಮು ತನ್ನ ಮೇಲಧಿಕಾರಿಗಳ ಮೆಚ್ಚುಗೆಯನ್ನು ಗಳಿಸಿದ್ದನು. ಆರೇ ತಿಂಗಳುಗಳ ಅವಧಿಯಲ್ಲಿ ಸಾಕಷ್ಟು ಸಂಪಾದಿಸಲಾರಂಭಿಸಿದ ರಾಮು, ತನ್ನ ತಾಯಿಗೆ ಪ್ರತಿ ತಿಂಗಳು ಹಣವನ್ನು ಕಳುಹಿಸಲಾರಂಭಿಸಿದ ದಿನ, ಅವನ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಳೆದು ಹೋಗಿದ್ದ ಮಗ ಜೀವಂತವಾಗಿದ್ದು ಇಡೀ ಕುಟುಂಬವನ್ನು ಆನಂದ ಸಾಗರದಲ್ಲಿ ಮುಳಿಗಿಸಿತ್ತು. ಆರು ವರುಷಗಳ ಕಾಲ ನಿರಂತರವಾಗಿ ದುಡಿಯುತ್ತಿದ್ದ ರಾಮು, ಪ್ರತಿ ತಿಂಗಳು ಮನೆಗೆ ಹಣವನ್ನು ಕಳುಹಿಸುವುದನ್ನು ಮಾತ್ರ ಎಂದೂ ಮರೆಯುತ್ತಿರಲಿಲ್ಲ. ಕೋವಿಡ್ನಿಂದಾದ ಲಾಕ್ಡೌನ್ ರಾಮುವಿನ ಮೇಲೆ  ಬರ ಸಿಡಿಲಿನಂತೆ ಅಪ್ಪಳಿಸಿತ್ತು. ಕಾರ್ಖಾನೆಯ ಬಾಗಿಲು ಮುಚ್ಚಿ, ಅವನ ಕೆಲಸ ಇಲ್ಲದಂತಾಯ್ತು. ರಾಮುವಿಗೀಗ ತನ್ನ ಊರಿನತ್ತ ಪ್ರಯಾಣ ಬೆಳಸಿ ತನ್ನ ತಂದೆ-ತಾಯಿಗಳನ್ನು ನೋಡುವಾಸೆಯಾಗಿತ್ತು. ಆದರೆ ಬಸ್ಸು-ರೈಲುಗಳ ಸಂಚಾರ ಇಲ್ಲದಂತಾಗಿತ್ತು. ಎದೆಗುಂದದ ಯುವಕ ರಾಮು ಕಾಲ್ನಡುಗೆಯಲ್ಲೇ, ಸುಮಾರು ೨೫೦೦ ಕಿ.ಮೀ.ನಷ್ಟು ದೂರವಿರುವ ತನ್ನೂರಿನತ್ತ ಹೊರಟಿದ್ದನು. ಸ್ವಲ್ಪ ಕಾಲ್ನಡಿಗೆ, ಸ್ವಲ್ಪ ಸರಕು ವಾಹನಗಳ ಮೇಲಿನ ಸವಾರಿ, ಸ್ವಲ್ಪ ವಿಶ್ರಾಂತಿಗಳನ್ನೊಳಗೊಂಡ ರಾಮುವಿನ ಪ್ರಯಾಣ ಸುಮಾರು ಹತ್ತು ದಿನಗಳವರಗೆ ಮುಂದುವರೆದಿತ್ತು. ಕಡೆಗೊಂದು ದಿನ ತನ್ನೂರನ್ನು ತಲುಪಿದ ರಾಮುವನ್ನು ನೋಡಿದ ಅವನ ತಂದೆ-ತಾಯಿಗಳು ಸಂತೋಷದಿಂದ ಉಬ್ಬಿ ಹೋಗಿದ್ದರು. ತಮ್ಮ ಮಗ ರಾಮುವನ್ನು ತಮ್ಮ ಬಳಿ ಕಳುಹಿಸಿದ ದೇವರಿಗೆ ತುಪ್ಪದ ದೀಪ ಹಚ್ಚಿದ ರಾಮುವಿನ ತಾಯಿ, ಪ್ರಸಾದದ ಬೆಲ್ಲದ ಚೂರೊಂದನ್ನು ಮಗನ ಬಾಯಿಗಿಟ್ಟಿದ್ದರು. ರಾಮು ತಂದಿದ್ದ ಮಿಠಾಯಿಯ ಡಬ್ಬವೊಂದು ಮನೆಯವರ ಕೈಗಳಲ್ಲೆಲ್ಲಾ  ಸಾಗುತ್ತ, ಕ್ಷಣಾರ್ಧದಲ್ಲಿ ಖಾಲಿಯಾಗಿತ್ತು. ಮನೆಯವರೆಲ್ಲಾ ರಾಮುವಿನ ಮಿಠಾಯಿನ ಸವಿ ಸವಿದನಂತರ, ರಾಮು ಸ್ನಾನಕ್ಕೆಂದು ಹತ್ತಿರದ ತೆಂಗಿನ ತೋಟದ ಕಡೆ ಹೊರಟನು.  ಆ ತೋಟದ ಕಾವಲುಗಾರಿಕೆ ರಾಮುವಿನ ತಂದೆಯ ಕೆಲಸವಾಗಿತ್ತು. ನುರಿತ ಈಜುಗಾರನಾದ ರಾಮು ಸಂತೋಷವುಕ್ಕಿ ತೋಟದ ಬಾವಿಯೊಳಗೆ ಹಾರಿ, ಸುಮಾರು ಅರ್ಧ ಘಂಟೆಗಳ ಕಾಲ ಈಜಾಡುತ್ತಾ ಆನಂದಿಸಿದನು. ಸ್ನಾನ ಮುಗಿದನಂತರ ಮೆಟ್ಟಿಲುಗಳನ್ನೇರಿ ಬರುತ್ತಿದ್ದ ರಾಮು, ಪ್ರಾಯಶಃ ಜಾರಿ ಬಾವಿಯೊಳಗೆ ಹಿಮ್ಮುಖನಾಗಿ ಬಿದ್ದವನು, ಮತ್ತೇಳಲೇ ಇಲ್ಲ!

ಎಷ್ಟು ಹೊತ್ತಾದರೂ ಹಿಂತುರುಗಿ ಬಾರದ ರಾಮುವನ್ನು ಹುಡುಕಿಕೊಂಡು ಬಂದ  ಅವನ ಅಣ್ಣಂದಿರಿಗೆ, ರಾಮು ಕಾಣ ಸಿಗಲಿಲ್ಲ. ರಾಮು ಬಾವಿಯಲ್ಲಿ ಮುಳುಗಿರಬಹುದೆಂಬ ಅನುಮಾನ ಬಂದ  ಅವರು, ಬಾವಿ ಶೋಧಿಸುವರನ್ನು ಕರೆಸಿದರು. ಸುಮಾರು ಒಂದು ತಾಸಿನ ಸಮಯದಲ್ಲೇ ರಾಮುವಿನ ದೇಹವನ್ನು ಹೊರ ತೆಗೆದಾಗ, ರಾಮುವಿನ ಇಡೀ ಕುಟುಂಬ ದಿಗ್ಭ್ರಾಂತವಾಗಿತ್ತು.  ರಾಮುವಿನ ತಾಯಿ-ತಂದೆಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಆರು ವರುಷಗಳನಂತರ ಮರಳಿ ಬಂದ ಅವರ ಮುದ್ದಿನ ಮಗನ ಜೀವ ಆರೇ ಘಂಟೆಗಳಲ್ಲಿ ಹಾರಿ ಹೋಗಿತ್ತು. 

ಕತೆಯ ವರದಿಯನ್ನೋದಿದ  ರೋಹಿಣಿ 'ಒಮ್ಮೊಮ್ಮೆ ದೇವರೇಕೆ ಇಷ್ಟು ನಿಷ್ಕರುಣಿಯಾಗುತ್ತಾನೆ?' ಎಂದುಕೊಳ್ಳುತ್ತ ಕಣ್ಣೀರೊರೆಸಿಕೊಂಡಳು. 

ವಲಸಿಗರ ಕಾರ್ಪಣ್ಯಗಳ ಕತೆಯನ್ನು ಹೆಚ್ಚು ಹೆಚ್ಚು ಕಲೆ ಹಾಕುವ ರೋಹಿಣಿಯ ಶೋಧ ಮುಂದುವರೆದಿತ್ತು. ಗಡಿಗಂಟಿಕೊಂಡಿದ್ದ ರಾಜ್ಯವೊಂದರ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ವಲಸಿಗ ತಂಡವೊಂದರ, ಬೇಸಿಗೆ ಬೆಳೆಯ (Rabi crop) ಕೊಯ್ಲಿನ ಕಾರ್ಯ ಆಗಿನ್ನೂ ಮುಗಿದಿತ್ತು. ಲಾಕ್ಡೌನಿನಿಂದಾಗಿ ಬೇರೆ ಮಾರ್ಗವಿಲ್ಲದೆ, ಕಾಲ್ನಡಿಗೆಯಲ್ಲೇ ಅವರುಗಳು ತಮ್ಮ ಊರಿನತ್ತ ಪ್ರಯಾಣ ಬೆಳಸಿದ್ದರು. ಮಾರ್ಗ ತಪ್ಪಿ ಅವರುಗಳು ನೆರೆ ರಾಷ್ಟ್ರವಾದ ಪಾಕಿಸ್ತಾನದ ಗಡಿಯನ್ನು ತಲುಪಿಬಿಟ್ಟಿದ್ದರು. ಅಲ್ಲಿ ಕಾವಲು ಕಾಯುತ್ತಿದ್ದ ಭಾರತದ ಸುರಕ್ಷತಾ ಪಡೆಯ ಸೈನಿಕರುಗಳು ವಲಸಿಗರನ್ನು ನೋಡಿ ಆಶ್ಚರ್ಯಗೊಂಡರು. ಆದರೂ ಆಹಾರ ನೀರುಗಳ ಉಪಚಾರವನ್ನು ಸೈನಿಕರುಗಳು ವಲಸಿಗರಿಗೆ ಮಾಡಿದರು. 'ವಲಸಿಗರು ಕೂಡಲೇ ಹೊರಟು, ಸರಕಾರ ವಲಸಿಗರುಗಳಿಗಾಗಿ ಏರ್ಪಾಡು ಮಾಡಿರುವ ತಂಗುದಾಣಗಳನ್ನು ಸೇರಬೇಕು' ಎಂಬುದು ಸೈನಿಕರ ಕಟ್ಟಪ್ಪಣೆಯಾಗಿತ್ತು.  ವಲಸಿಗರ ತಂಡ ನಡಿಗೆಯನ್ನು ಮುಂದುವರೆಸಿ ಸಮೀಪದ ಸರಕಾರಿ ಶಾಲೆಯ ಕಟ್ಟಡವೊಂದರಲ್ಲಿ ಆಶ್ರಯ ಪಡೆಯಿತು. ಸಮೀಪದ ಹಳ್ಳಿಗರು ಅವರುಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡಿದರು. ಸುಮಾರು ೧೫ ದಿನಗಳು ಕಳೆದನಂತರ ವಲಸಿಗರು ಮಾಡಲು ಕೆಲಸವಿಲ್ಲದೇ ಬೇಜಾರುಗೊಂಡಿದ್ದರು. ತಮ್ಮಗಳಿಗೇನಾದರೂ ಕೆಲಸ ಕೊಡುವಂತೆ ಅವರುಗಳು ಶಾಲೆಯ ಮುಖ್ಯೋಪಾಧ್ಯಾಯರನ್ನು ಕೇಳಿಕೊಂಡರು. ಶಾಲೆಯ ಮತ್ತು ಅದಕ್ಕೆ ಸೇರಿದ ಶಾಲಾ ವಸತಿ ಗೃಹದ ಕಟ್ಟಡಗಳಿಗೆ ಕಳೆದ ಹತ್ತು ವರ್ಷಗಳಿಂದ ಬಣ್ಣ ಬಳಿಯುವ ಕೆಲಸವಾಗಿಲ್ಲ. ತಾವುಗಳು ಆ ಕೆಲಸವನ್ನು ಮಾಡುವಿರಾ ಎಂದು ಕೇಳಿದ ಮುಖ್ಯೋಪಾಧ್ಯಾಯರ ಸಲಹೆಗೆ, ವಲಸಿಗರು ಕೂಡಲೇ ಸಮ್ಮತಿಸಿದರು. ಹಳ್ಳಿಯ ಸರಪಂಚರು ಮತ್ತು ಹಳ್ಳಿಯ ಹಿರಿಯರ ಸಹಾಯದಿಂದ   ಮುಖ್ಯೋಪಾಧ್ಯಾಯರು ಬೇಕಾದ ಬಣ್ಣದ ಡಬ್ಬಗಳನ್ನು ತರಿಸಿಕೊಟ್ಟರು. ಉತ್ಸಾಹದಿಂದ ಬಣ್ಣ ಬಳಿಯುವ ಕೆಲಸ ಮಾಡಿದ ವಲಸಿಗರು, ಸುಮಾರು ಹತ್ತು ದಿನಗಳ ಅವಧಿಯಲ್ಲಿ ಇಡೀ ಶಾಲೆ ಹಾಗು ಶಾಲೆಯ ವಸತಿ ಗೃಹದ ಕಟ್ಟಡಗಳು ಹೊಸ ಶೋಭೆಯೊಂದಿಗೆ ಹೊಳೆಯುವಂತೆ ಮಾಡಿದರು. ಹಳ್ಳಿಯ ಮುಖ್ಯಸ್ಥರು ಕೆಲಸದ ಸಂಭಾವನೆಯನ್ನು ವಲಸಿಗರಿಗೆ ನೀಡಲು ಮುಂದಾದಾಗ, ವಲಸಿಗರು ಹಣವನ್ನು ಅಷ್ಟೇ ನಯವಾಗಿ ನಿರಾಕರಿಸಿದರು. 'ನಿಮ್ಮ ಆಥಿತ್ಯ ಪಡೆದು ತೃಪ್ತರಾಗಿದ್ದೇವೆ. ನಿರಾಶ್ರಿತರಾದ ನಮ್ಮಗಳಿಗೆ ಆಹಾರ, ನೀರು ಮತ್ತು ವಸತಿಗಳೊನ್ನದಗಿಸಿ ಸಲಹಿದ್ದೀರಿ. ತಮ್ಮ ಹಳ್ಳಿಯ ಶಾಲೆಗೆ ಬಣ್ಣವನ್ನು ಬಳಿದು, ಸುಂದರವನ್ನಾಗಿಸಿದ ತೃಪ್ತಿ ನಮ್ಮದಾಗಿದೆ' ಎಂದು ವಂದಿಸುತ್ತಾ ನುಡಿದ  ವಲಸಿಗರ ಮಾತುಗಳನ್ನು ಕೇಳಿ ಹಳ್ಳಿಗರು ಸಂತೋಷಗೊಂಡರು. 

-೦-೦-೦-೦-೦-೦-   

   




Monday, 1 March 2021

4. ವಲಸಿಗರ ಪರದಾಟ

4. ವಲಸಿಗರ ಪರದಾಟ 

ಸುಮಾರು ೪೦ರ ಪ್ರಾಯದ ಮದನ್ ಲಾಲ್ ವೃತ್ತಿಯಲ್ಲಿ ವಕೀಲರಾಗಿದ್ದರು.  ಬಡ ಕಾರ್ಮಿಕರ ಹಕ್ಕುಗಳಿಗಾಗಿ ಸದಾ ಹೋರಾಡಲು ಸಿದ್ಧರಿರುವ ಚಳವಳಿಗಾರರೆಂದೇ ಅವರನ್ನು ಜನತೆ ಗುರುತಿಸಿತ್ತು. ಹಾಗಾಗಿ ಅವರ ವಕೀಲೀ ವೃತ್ತಿಯ ವರಮಾನವೇನು ಹೇಳಿಕೊಳ್ಳುವಷ್ಟಿತ್ತಿಲ್ಲ. ಒಂದು ಕೋಟಿಗೂ ಮೀರಿದ ಜನಸಂಖ್ಯೆಯ ಒಂದು ನಗರದ ಹೊರವಲಯದಲ್ಲಿ ಮದನರ ಪುಟ್ಟ ಮನೆಯೊಂದಿತ್ತು.  ಅವರ ಮನೆಯ ಸುತ್ತ ಹಲವಾರು ಬೃಹತ್ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು.  ಆ ಕಟ್ಟಡಗಳ ಬದಿಯ ರಸ್ತೆಗಳಲ್ಲೇ ಮದನ್ ಲಾಲರ  ದಿನನಿತ್ಯದ ವಾಯುವಿಹಾರದ  ನಡಿಗೆ ಸಾಗಿತ್ತು. ನಿರ್ಮಾಣ ಹಂತದ ಆ ಕಟ್ಟಡಗಳ ಸುತ್ತ ಕಟ್ಟಡ ಕಾರ್ಮಿಕರ ಮಕ್ಕಳು ಆಟವಾಡುವುದನ್ನು ಮದನ್ ವಿಶೇಷವಾಗಿ ಗಮನಿಸುತ್ತಿದ್ದರು.  'ಚುಕ್-ಬುಕ್ ರೈಲಾಟ' ಆ ಮಕ್ಕಳ ದಿನನಿತ್ಯದ ಆಟವಾಗಿತ್ತು. ಕೊಂಚ ಹೆಚ್ಚು ಎತ್ತರವಿರುವ ಹುಡುಗನೊಬ್ಬ 'ಎಂಜಿನ್' ಆದರೆ, ಒಬ್ಬರ ಅಂಗಿಯನ್ನೊಬ್ಬರು ಹಿಡಿದ ಮಿಕ್ಕ ಬಾಲಕರು ಅವನ ಹಿಂದಿನ ರೈಲು ಡಬ್ಬಗಳಾಗಿ ಹಿಂಬಾಲಿಸುವುದು ಆಟದ ಕ್ರಮವಾಗಿತ್ತು. ಎಂಜಿನ್ ಬಾಲಕ 'ಕೂ....' ಎಂದು ಜೋರಾಗಿ ಕೂಗಿ ಓಡಲು ಶುರು ಮಾಡುತ್ತಲೇ, ಹಿಂದಿನ ಬಾಲಕರೆಲ್ಲರೂ 'ಚುಕ್-ಬುಕ್' ಎಂದು ಸದ್ದು ಮಾಡುತ್ತಾ  ಅವನನ್ನು ಹಿಂಬಾಲಿಸುತ್ತಿದ್ದರು. ಸುಮಾರು ೧೪ರ ಪ್ರಾಯದ ಒಂಟಿ ಕಾಲಿನ ಕುಂಟ ಹುಡುಗನೊಬ್ಬ ಮಾತ್ರ ವೃತ್ತಾಕಾರದ ರೈಲಿನ ಪಥದ ನಡುವೆ ನಿಂತು, ಹಳೆಯ ಹಸಿರು ಬಟ್ಟೆಯೊಂದನ್ನು ಬೀಸುತ್ತಾ ನಿರ್ವಾಹಕನ ಪಾತ್ರವನ್ನು ಉತ್ಸಾಹದಿಂದ ನಿರ್ವಹಿಸುತ್ತಿದ್ದನು. ಎಂಜಿನ್ ಮತ್ತು ರೈಲು ಡಬ್ಬಗಳ ಸರದಿ, ಮಿಕ್ಕ ಬಾಲಕರುಗಳ ನಡುವೆ ದಿನನಿತ್ಯ ಬದಲಾಗುತ್ತಿದಾದರೂ, ಆ ಒಂಟಿ ಕಾಲಿನ ಬಾಲಕನ ಪಾತ್ರ ಮಾತ್ರ ಎಲ್ಲ ದಿನಗಳಲ್ಲೂ ಮಧ್ಯೆ ನಿಂತ ನಿರ್ವಾಹಕನದೇ ಆಗಿರುತ್ತಿತ್ತು. 

ಒಂದು ದಿನ, ಎಂದಿನಂತೆ ಮದನ್ ಲಾಲರ ಗಮನ ರೈಲಾಟವಾಡುತ್ತಿರುವ ಬಾಲಕರ ಮೇಲಿತ್ತು. ಎಂದಿನಂತೆ ಆ ಒಂಟಿ ಕಾಲಿನ ಬಾಲಕ ಮಧ್ಯೆ ನಿಂತು, ನಿರ್ವಾಹಕನ ಪಾತ್ರವನ್ನು ನಿರ್ವಹಿಸುತ್ತಿದ್ದನು. ಆಟದ ರೈಲಿನ ಮಾರ್ಗದ ಬದಿಯೇ, ಮಹಿಳಾ ಕಾರ್ಮಿಕರುಗಳು ತಮ್ಮ ಕಂದಮ್ಮಗಳನ್ನು ಮಲಗಿಸಿ ಕೆಲಸಕ್ಕೆ ತೆರಳಿದ್ದರು. ಹುಡುಗರ ರೈಲು ಮಲಗಿದ್ದ ಕಂದಮ್ಮಗಳನ್ನು ಸಮೀಪಿಸುತ್ತಲೇ, 'ಕಂದಮ್ಮಗಳು ಮಲಗಿವೆ, ಹುಷಾರಾಗಿ ರೈಲು ಚಲಾಯಿಸಿ' ಎಂದು ನಿರ್ವಾಹಕ ಬಾಲಕ ಕೂಗಿದನು. ಹುಡುಗರು ರೈಲು ಮಾರ್ಗವನ್ನು ಕೊಂಚ ಬದಲಿಸಿ ಚಲಿಸಿದಾಗ, ಮಲಗಿದ ಕಂದಮ್ಮಗಳಿಗೆ ಯಾವ ತೊಂದರೆಯೂ  ಉಂಟಾಗಲಿಲ್ಲ. ನಿರ್ವಾಹಕ ಬಾಲಕನ ಎಚ್ಚರ, ಸೂಕ್ಷ್ಮಮತಿಯಾದ ಮದನ್ ಲಾಲರ ಗಮನಕ್ಕೆ ಬಾರದೇ ಇರಲಿಲ್ಲ. ನಿರ್ವಾಹಕ ಬಾಲಕನನ್ನು ಮಾತನಾಡಿಸುವ ಇಚ್ಛೆ ಅಂದು ಮದನ್ ಲಾಲರಿಗಾಗಿತ್ತು. ಆ ಬಾಲಕನನ್ನು ಮಾತನಾಡಿಸುತ್ತಾ,  'ಪ್ರತಿ ದಿನ ನೀನು ನಿರ್ವಾಹಕನ ಪಾತ್ರವನ್ನೇ ವಹಿಸುವೆ. ಎಂಜಿನ್ ಆಗುವ ಬಯಕೆ ನಿನಗಿಲ್ಲವೆ?' ಎಂಬುದು ಮದನರ ಪ್ರಶ್ನೆಯಾಗಿತ್ತು. 'ನನಗಿರುವುದು ಒಂದೇ ಕಾಲು.  ಅವರುಗಳಂತೆ ನಾನು ಓಡಲಾರೆ. ಹಾಗಾಗಿ ನನಗೆ ಬೇರೆ ದಾರಿಯಿಲ್ಲ. ದಿನ ನಿತ್ಯ ರೈಲ್ವೆ ಗಾರ್ಡ್ ಆಗುವುದೇ ನನ್ನ ಆಟ.  ಇಲ್ಲವಾದಲ್ಲಿ ಅವರುಗಳು ನನ್ನನ್ನು ಆಟಕ್ಕೆ ಸೇರಿಸಿಕೊಳ್ಳರು' ಎಂದ ಬಾಲಕನ ಉತ್ತರವನ್ನು ಕೇಳಿ ಮದನ್ ಲಾಲರಿಗೆ ಕನಿಕರ ಮೂಡಿತು. ಆ ಬಾಲಕನ ಉತ್ತರದಲ್ಲಿ ಜೀವನದ ಕಟು ಸತ್ಯವೊಂದು ಅಡಗಿತ್ತು. 'ಇಲ್ಲದಿರುವ ವಸ್ತುಗಳ ಬಗೆಗಿನ ತುಡಿತ ಎಲ್ಲರನ್ನೂ ಕಾಡುವುದು ಸಹಜ. ಆದರೆ ಈ ಬಾಲಕನ ಚಿಂತನೆಯೇ ಬೇರೆ.  ಒಂದು ಕಾಲಿಲ್ಲದ ಕುಂಟನಾದರೂ, ವಿಷಾದಿಸದೆ ಮಿಕ್ಕ ಬಾಲಕರೊಂದಿಗೆ ಬೆರೆತು ಆಟವಾಡುವ ಮಾರ್ಗವೊಂದನ್ನು ಕಂಡುಕೊಂಡಿದ್ದಾನೆ. ಇದಲ್ಲವೇ ಬದುಕುವ ದಾರಿ' ಎಂದು ಸಾಗಿತ್ತು ಮದನ್ ಲಾಲರ ಅಂದಿನ ವಿಚಾರ ಧಾರೆ. 

ಮತ್ತೊಂದು ದಿನ ಮದನರಿಗೆ, ವ್ಯಕ್ತಿಯೊಬ್ಬ ಆ ಕುಂಟ ಬಾಲಕನಿಗೆ ತಿಂಡಿಯ ಪೊಟ್ಟಣವೊಂದನ್ನು ಕೊಡುತ್ತಿರುವ ದೃಶ್ಯ ಕಂಡು ಬಂತು. ಆ ವ್ಯಕ್ತಿಯ ಬಳಿ ತೆರಳಿದ ಮದನ್ 'ನೀವು ಈ ಬಾಲಕನಿಗೇನಾಗಬೇಕು?' ಎಂದು ಕೇಳಿದರು. ಬಾಲಕನ ಬೆನ್ನು ತಟ್ಟುತ್ತಾ, 'ನನ್ನ ಹೆಸರು ವಿಷ್ಣು ಮಂಡಲ್. ಈ ಬಾಲಕ ನನ್ನ ಮಗ ಸೋನು. ನಾನು ಮತ್ತು ನನ್ನ ಹೆಂಡತಿ ಈ ಕಟ್ಟಡದ ಕೆಲಸ ಮಾಡುತ್ತೇವೆ. ನನ್ನ ತಮ್ಮನೂ ಇಲ್ಲೇ ಕೆಲಸ ಮಾಡುತ್ತಾನೆ. ನಮ್ಮ ಹಳ್ಳಿಯ ಸುಮಾರು ೪೦ ಜನರು ಇದೇ ಕಟ್ಟಡದ ಕೆಲಸ ಮಾಡುತ್ತಾರೆ' ಎಂದು ಆ ವ್ಯಕ್ತಿ ಉತ್ತರಿಸಿದನು. ಕುಂಟು ಬಾಲಕ ಸೋನುವಿನ ತಂದೆ ವಿಷ್ಣುವಿನ ಎಡಗೈ ಇಲ್ಲದಿರುವುದನ್ನು ಮದನ್ ಗಮನಿಸದಿರಲಿಲ್ಲ. 

'ನೀವು ಎಲ್ಲಿಯವರು?' ಎಂಬುದು ಮದನರ ಮರು ಪ್ರಶ್ನೆಯಾಗಿತ್ತು. 

'ನಾವು ದೂರದ ರಾಜ್ಯದವರು. ಸಾವಿರಾರು ಕಿ.ಮೀ. ದೂರದಲ್ಲಿ ನಮ್ಮ ಹಳ್ಳಿ ಇದೆ. ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕಿಕೊಂಡು ಇಲ್ಲಿಯವರೆಗೆ ಬಂದಿದ್ದೇವೆ' ಎಂಬುದು ವಿಷ್ಣುವಿನ  ಉತ್ತರವಾಗಿತ್ತು. 

'ನೀವಿಲ್ಲಿ ಏನು ಕೆಲಸ ಮಾಡುವಿರಿ?' ಮದನರ ಕುತೂಹಲ ಮುಂದುವರೆದಿತ್ತು. 

'ನನಗೆ ಎಡಗೈ ಇಲ್ಲದಿರುವುದನ್ನು ತಾವೇ ನೋಡಿದ್ದೀರಿ. ಕಟ್ಟಡದ ಕೆಲಸ ನಾನು ಮಾಡಲಾರೆ. ನಾನು ೧೦ನೇ ತರಗತಿವರೆಗೆ ಓದಿದ್ದೇನೆ. ಹಾಗಾಗಿ ಇವರು ನನ್ನನು "ಗೋದಾಮಿನ ರಕ್ಷಕ (Store keeper)" ಎಂದು ನೇಮಿಸಿಕೊಂಡಿದ್ದಾರೆ.'  

'ನಿಮ್ಮ ಸಂಬಳ ಎಷ್ಟು?' ಎಂಬದು ಮದನರ ಮರುಪ್ರಶ್ನೆಯಾಗಿತ್ತು. 

'ನಾನು ಮತ್ತು ನನ್ನ ಹೆಂಡತಿ ಇಬ್ಬರೂ  ಇಲ್ಲಿ ಕೆಲಸ ಮಾಡುತ್ತೇವೆ. ಸಿಮೆಂಟ್ ಚೀಲಗಳ ಲೆಕ್ಕವಿಡುವುದು ನನ್ನ ಕೆಲಸವಾದರೆ, ನಾವಿಬ್ಬರು ಮತ್ತು ನಮ್ಮ ಮಗ ಇಲ್ಲಿನ  ಸಿಮೆಂಟ್ ಗೋದಾಮಿನ  ರಾತ್ರಿ ಕಾವಲುಗಾರರಾಗಿ ಮಲಗುತ್ತೇವೆ. ನಮ್ಮಿಬ್ಬರ ಒಟ್ಟು ಸಂಬಳ  ದಿನವೊಂದಕ್ಕೆ ಸಾವಿರ ರೂಪಾಯಿಗಳೆಂದು ಕೊಡುತ್ತಾರೆ. ಇಡೀ ತಿಂಗಳ ಎಲ್ಲ ದಿನಗಳ ಸಂಬಳವೂ ನಮಗೆ ಸಿಗುತ್ತದೆ' ಎಂದು ಉತ್ತರಿಸುವಾಗ ವಿಷ್ಣು ಉಬ್ಬಿಹೋದಂತೆ ಮದನರಿಗೆ ಕಂಡು ಬಂತು. 'ತಂದೆಯಂತೆ ಮಗ' ಎಂಬ ನಾಣ್ನುಡಿಯನ್ನು ನೆನಪಿಸಿಕೊಂಡ  ಮದನ್ 'ಒಂದೇ ಕೈನವನಾದರೂ ಅಪ್ಪ ದುಡಿಯುವುದನ್ನು ನಿಲ್ಲಿಸಿಲ್ಲ, ಕುಂಟನಾದರೂ ಅವನ ಪುಟ್ಟ ಮಗ ಮಿಕ್ಕ ಬಾಲಕರೊಂದಿಗೆ ಆಡುವುದನ್ನು ಬಿಟ್ಟಿಲ್ಲ. ಜೀವನವೆಂಬುದು ಹಲವು ಉಪಯುಕ್ತ ಪಾಠಗಳನ್ನು ಕಲಿಸುತ್ತೆ' ಎಂದು ಯೋಚಿಸುತ್ತ ವಿಚಾರ ಮಗ್ನರಾದರು. 

ಅಂದು ೨೦೨೦ರ ಮಾರ್ಚ್ ೨೫ರ ದಿನವಾಗಿತ್ತು. ಕೋವಿಡ್ನ ಸಲುವಾಗಿ ದೇಶಾದ್ಯಂತ ಲಾಕ್ಡೌನನ್ನು ಜಾರಿಗೊಳಿಸಲಾಗಿತ್ತು. ಆ ಕಟು ನಿರ್ಧಾರ ಬಡವರ ಪಾಲಿಗೆ ಮಾರಕವಾದುದೆಂಬುದು ಎಲ್ಲರಿಗೂ  ತಿಳಿದಿತ್ತು. ಮದನ್ ಲಾಲರ ಮನೆ ಸಮೀಪದ ಬೃಹತ್ ಕಟ್ಟಡಗಳ ನಿರ್ಮಾಣ ಕಾರ್ಯವೆಲ್ಲಾ  ಸ್ಥಗಿತಗೊಂಡಿತ್ತು. ನಿರ್ಮಾಣ ಕಾರ್ಯದ ಸಾವಿರಾರು ಕಾರ್ಮಿಕರುಗಳಿಗೆ ಕೆಲಸವಿಲ್ಲದಂತಾಗಿತ್ತು. ಆ ಬಡ ಕೆಲಸಗಾರರ ವಾರದ ಸಂಬಳ ನಿಂತು ಹೋಗಿತ್ತು.  ಕೆಲಸವಿಲ್ಲದೇ ಬರಿಗೈಯಲ್ಲಿ ಕಾಲ ತಳ್ಳುತ್ತಿದ್ದ ಬಡ ಕಾರ್ಮಿಕರ ದೃಶ್ಯಗಳು ಮದನರ ಗಮನಕ್ಕೆ ಬಂದಿತ್ತು. ಒಂದು ದಿನ ವಿಷ್ಣು ಮಂಡಲನನ್ನು ಭೇಟಿ ಮಾಡಿದ ಮದನರು ಅವನ ಜೊತೆ ಮಾತಿಗಿಳಿದಿದ್ದರು.  

'ಸ್ವಾಮಿ, ನಾವ್ಗಳು ಸಂಬಳದ ಮುಖ ನೋಡಿ ಹತ್ತು ದಿನಗಳಾಯ್ತು. ನಮ್ಮವರ್ಯಾರ ಹತ್ತಿರವೂ ಹಣವಿಲ್ಲ. ನಮ್ಮ ಹಳ್ಳಿಗಳಿಗೆ ಈ ತಿಂಗಳ ಹಣವನ್ನು ನಾವುಗಳು ಕಳಿಸಲಾಗಿಲ್ಲ. ನಮ್ಮ ಗುತ್ತಿಗೆದಾರ ಒಳ್ಳೆಯವನು. ಅವನು ನಮ್ಮ ಹಳ್ಳಿಯವನೇ. ಎಲ್ಲರಿಗೂ ದಿನಸಿ ಪೊಟ್ಟಣಗಳನ್ನು ಅವನು ವಿತರಿಸಿದ್ದಾನೆ. ಮೇಲಿನ ಗುತ್ತಿಗೆದಾರರಿಂದ ಅವನಿಗೆ ಹಣ ಬಂದಿಲ್ಲವಾಗಿ, ಮುಂದಿನ ದಿನಗಳಲ್ಲಿ ಹಣದ ವಿತರಣೆ ಸಾಧ್ಯವಿಲ್ಲವೆಂದು ಅವನು ನಮ್ಮಗಳಿಗೆ ತಿಳಿಸಿಯಾಗಿದೆ. ಕಟ್ಟಡಗಳ ಕೆಲಸಗಳು ಮತ್ತೆ ಶುರುವಾಗುವ  ಯಾವ ಸೂಚನೆಯೂ ಸಿಕ್ಕಿಲ್ಲ. ಹತ್ತಿರದ ಕೊಳಚೆ ಪ್ರದೇಶದಲ್ಲಿ ವಾಸಿಸುವ ನಮ್ಮ ಹಲವಾರು ಕೆಲಸಗಾರರು, ಮನೆಯ ಬಾಡಿಗೆಗಳನ್ನು ಕಟ್ಟಲಾಗದೆ, ಬೈಗುಳಗಳನ್ನು ಕೇಳಬೇಕಾಗಿ ಬಂದಿದೆ. ಮುಂದೇನು ಎಂಬುದೇ ತಿಳಿಯದು' ಎನ್ನುತ್ತಿದ್ದ ವಿಷ್ಣುವಿನ ದನಿಯಲ್ಲಿ ನೋವಿತ್ತು. 

ಮದನರು ಮಾತು ಮುಂದುವರೆಸಿ 'ವಿಷ್ಣು, ನಾನೊಬ್ಬ ವಕೀಲ. ಕೋರ್ಟಿನಲ್ಲಿ ಹೋರಾಡಿ ನಿಮ್ಮಗಳಿಗೆ ಸ್ವಲ್ಪವಾದರೂ ಸಂಬಳ ಬರುವಂತೆ ಮಾಡಬಲ್ಲೆ. ನಿನ್ನೊಡನಿರುವ ಎಲ್ಲ ಕೆಲಸಗಾರರನ್ನೂ ನನ್ನ ಕಚೇರಿಗೆ ಕರೆತರಬಲ್ಲೆಯ?' ಎಂದು ಕೇಳಿದರು. ನಮ್ಮ ಪರವಾಗಿ ಮಾತಾಡುವರೊಬ್ಬರಿದ್ದಾರೆ ಎಂದು ವಿಷ್ಣುವಿಗೆ ಆಗ ಅನಿಸಿದ್ದು ಸುಳ್ಳಾಗಿತ್ತಿಲ್ಲ. 

ಮಾರನೆಯ ದಿನವೇ ಒಂದೆರಡು ಸ್ನೇಹಿತರೊಂದಿಗೆ ವಿಷ್ಣು, ಮದನರ ಕಚೇರಿ ಬಳಿ ಬಂದಿದ್ದನು. 'ಮಿಕ್ಕವರೆಲ್ಲಾ ಎಲ್ಲಿ?' ಎಂಬುದು ಮದನರ ಪ್ರಶ್ನೆಯಾಗಿತ್ತು.  'ಸಾರ್, ಅವರುಗಳೆಲ್ಲಾ ಹೆದರಿದವರಾಗಿದ್ದಾರೆ. ನಾವುಗಳು ತಮ್ಮ ಬಳಿಗೆ ಬಂದ ವಿಷಯ ನಮ್ಮ ಗುತ್ತಿಗೆದಾರನಿಗೆ ತಿಳಿದರೆ, ಅವನು ಸುಮ್ಮನಿರುವುದಿಲ್ಲ. "ಮೇಲಿನ ಗುತ್ತಿಗೆದಾರರೊಡನೆ ಮಾತನಾಡಿದ್ದೇನೆ, ಸ್ವಲ್ಪವಾದರೂ ಹಣವನ್ನು ತಮ್ಮಗಳಿಗೆ ದೊರಕಿಸಬಲ್ಲೆ. ಸ್ವಲ್ಪ ತಾಳ್ಮೆಯಿಂದಿರಿ" ಎಂದವನು ನಮಗೆ ತಿಳಿಹೇಳಿದ್ದಾಗಿದೆ. ಏನೇ ಆಗಲಿ, ಅವನು ನಮ್ಮ ಹಳ್ಳಿಯವನು. ಎಲ್ಲರಿಗೂ ಅವನಲ್ಲಿ ನಂಬಿಕೆ ಇದೆ. ಆದುದರಿಂದ ನಮ್ಮಷ್ಟಕ್ಕೆ ನಮ್ಮನ್ನು ಬಿಡಿ ಸಾರ್,' ಎಂಬ ವಿಷ್ಣುವಿನ ಮಾತುಗಳಲ್ಲಿ ಭಯ ಹಾಗು ಮುಗ್ಧತೆಯ ಎರಡೂ ಭಾವಗಳು ಮದನರಿಗೆ ಕಂಡು ಬಂತು. ಇನ್ನು ಮಾತು ಬೆಳಸಿ ಪ್ರಯೋಜನವಿಲ್ಲವೆಂಬ ನಿರ್ಧಾರಕ್ಕೆ ಮದನರು ಬಂದಾಗಿತ್ತು. 

ಕಟ್ಟಡ ನೌಕರರ ಪರಿಸ್ಥಿತಿ ದಿನೇ ದಿನೇ ಚಿಂತಾಜನಕವಾಗುತ್ತಾ ಸಾಗುತ್ತಿದುದನ್ನು ಮದನರು ಗಮನಿಸುತ್ತಲೇ ಇದ್ದರು. ಕೈಯಲ್ಲಿ ಕೆಲಸವಿಲ್ಲದೇ ಅವರುಗಳು ಒಂದು ತಿಂಗಳು ಕಳೆದುದ್ದಾಗಿತ್ತು. ಲಾಕ್ಡೌನಿನಿಂದ ಸಧ್ಯಕ್ಕೆ ಬಿಡುಗಡೆ ದೊರಕದೆಂಬುದು ವಲಸಿಗ ಕೆಲಸಗಾರರೆಲ್ಲರಿಗೂ ತಿಳಿದಿತ್ತು. ಸುತ್ತಲ ೧೦೦ ಕಿ.ಮೀ.ನಷ್ಟು ದೂರದ ಹಳ್ಳಿಗಳ ನೌಕರರು ಕಾಲ್ನಡುಗೆಯಲ್ಲೇ ಹೊರಟು, ತಮ್ಮ ತಮ್ಮ ಹಳ್ಳಿಗಳನ್ನು ಸೇರಿಯಾಗಿತ್ತು. ದೂರದ ರಾಜ್ಯಗಳ ವಲಸೆ ಕೆಲಸಗಾರರೂ ತಮ್ಮ ಹಳ್ಳಿಗಳನ್ನು ಹೇಗಾದರೂ ತಲುಪುವ ತವಕದಲ್ಲಿದ್ದರು. ಸರಕಾರ, ಗುತ್ತಿಗೆದಾರರು ಮತ್ತು ಕೆಲವು ಸೇವಾ ಸಂಸ್ಥೆಗಳಿಂದ ದಿನಸಿ  ಪೊಟ್ಟಣಗಳೇನೋ ಅವರುಗಳಿಗೆ ಆಗೀಗ ಬರುತ್ತಿತ್ತು. ಆದರೆ ಆಹಾರದ ವಿತರಣೆ ಸಾಕಾಗುತ್ತಿರಲಿಲ್ಲ. ಕೆಲಸವೇ ಇಲ್ಲದ ಕೈಗಳಿಗೆ ಸಂಬಳವೊಂದು ದೂರದ ಕನಸಾಗಿತ್ತು.  ಈ ನಡುವೆ ದೂರದ ರಾಜ್ಯಗಳಿಗೆ ವಲಸೆ ಕಾರ್ಮಿಕರನ್ನು ಕೊಂಡೊಯ್ಯಲು ರೈಲುಗಳ ವ್ಯವಸ್ಥೆಯನ್ನು ಸರಕಾರ ಮಾಡುತ್ತಿರುವ ಬಗ್ಗೆ ಹಲವಾರು ಮೂಲಗಳಿಂದ ಸುದ್ದಿ ಬರತೊಡಗಿತ್ತು. 

ಹೀಗಿರುವಾಗ ಒಂದು ದಿನ ಬೆಳಗಾಗಿ ಏಳುವ ಹೊತ್ತಿಗಾಗಲೇ ಮದನರನ್ನು ಭಯಾನಕ ಸುದ್ದಿಯೊಂದು ಆಘಾತಗೊಳಿಸಿತ್ತು. ಕಳೆದ ರಾತ್ರಿ, ಮದನರ ಮನೆಯಿಂದ ಕೇವಲ ೫೦ ಕಿ.ಮೀ. ದೂರದ ರಾಜ್ಯದ ಹೆದ್ದಾರಿಯ ಪಾದಚಾರಿಗಳ ಪಥದಲ್ಲಿ ಮಲಗಿದ್ದ ೧೫ ವಲಸಿಗ ಕೆಲಸಗಾರರ ಮೇಲೆ ವೇಗವಾಗಿ ಬಂದ ಬಸ್ಸೊಂದು ಹರಿದು, ಅವರುಗಳೆಲ್ಲರೂ ಸ್ಥಳದಲ್ಲೇ ಮೃತರಾಗಿದ್ದರು. ಕಾಲ್ನಡುಗೆಯಲ್ಲಿ  ಹೊರಟಿದ್ದ ಸಹಸ್ರಾರು ಕಿ.ಮೀ.ಗಳ ದೂರದ ಪ್ರಯಾಣ,  ಅವರುಗಳ ಸಾವಿನೊಂದಿಗೆ ಮುಗಿದಿತ್ತು.  ಮದನ್ ಲಾಲರ ಊರಿನಿಂದ ತಮ್ಮ ಹಳ್ಳಿಗಳ ಕಡೆ ಕೊಂಡೊಯ್ಯುವ ರೈಲುಬಂಡಿಗಳನ್ನು ಹತ್ತಲು ಕಾಲ್ನಡುಗೆಯಲ್ಲಿ  ಹೊರಟಿದ್ದ ೧೮ ವಲಸಿಗರ ಪೈಕಿ ೧೫ ಜನ ಮೃತಪಟ್ಟಿದ್ದು, ಮೂವರು ಮಾತ್ರ ಬದುಕುಳಿದಿದ್ದರು. ಹತ್ತಲು ಹೊರಟಿದ್ದ ರೈಲುಗಾಡಿ, ಯಾವ ಕಾರಣಕ್ಕೂ ತಪ್ಪದಂತೆ ಯೋಜಿಸಿದ್ದ ಅವರುಗಳ ಪೈಕಿ, ೧೫ ಜನಗಳಿಗೆ  ಜೀವನ ಪಯಣವೇ ತಪ್ಪಿಹೋಗಿದ್ದು ಮಾತ್ರ ದೊಡ್ಡ ವಿಪರ್ಯಾಸವಾಗಿತ್ತು.  

ಅಪಘಾತದಲ್ಲಿ ಬದುಕುಳಿದ ಮೂವರು ಕೂಡ ಮಲಗಿದ್ದು ಅದೇ ಹೆದ್ದಾರಿಯ ಪಾದಚಾರಿಗಳ ಪಥದಲ್ಲಿಯೆ.  ಆದರೂ ಅವರುಗಳು ನಿದ್ರೆಗಿನ್ನು ಜಾರಿರದ ಕಾರಣ ಬದುಕುಳಿದಿದ್ದರು. 'ಎರಡು ದಿನಗಳ ಹಿಂದಿನ ಬೆಳಗ್ಗೆ ೧೦ರ ಸಮಯಕ್ಕೆ ನಾವುಗಳು ನಮ್ಮ ಊರುನಿಂದ ಕಾಲ್ನಡುಗೆಯಲ್ಲಿ ಹೊರಟೆವು. ಸಹಸ್ರಾರು ಮೈಲು ದೂರದ ನಮ್ಮ ಹಳ್ಳಿಯನ್ನು ತಲುಪುವುದು ನಮ್ಮ ಉದ್ದೇಶವಾಗಿತ್ತು. ಸುಮಾರು ೫೦ ಕಿ.ಮೀ.ನಷ್ಟು ದೂರವನ್ನು ಕ್ರಮಿಸಿ, ನಮ್ಮನ್ನು ಕೊಂಡೊಯ್ಯುವ ರೈಲುಬಂಡಿ ಹೊರಡುವ ರೈಲು ನಿಲ್ದಾಣವನ್ನು ತಲುಪುವುದರಿಲ್ಲಿದ್ದೆವು. ರೈಲುಬಂಡಿ ಹೊರಡಲು ಇನ್ನೆರಡು ದಿನಗಳ ಸಮಯಾವ ಕಾಶವಿದೆಯೆಂದು ತಿಳಿದಿತ್ತು.  ಅಷ್ಟು ಹೊತ್ತಿಗಾಗಲೇ ಸಮಯ ರಾತ್ರಿ ೮ ಘಂಟೆಯಾಗಿತ್ತು. ೫೦ ಕಿ.ಮೀ.ನಷ್ಟು ದೂರ ನಡೆದು ನಾವೆಲ್ಲರೂ ದಣಿದಿದ್ದೆವು. ಲಾಕ್ಡೌನ್ ದಿನಗಳಾದ್ದರಿಂದ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಬಹಳ ಕಮ್ಮಿಯಿತ್ತು. ಹೆದ್ದಾರಿಯ ಬದುವಿನಲ್ಲೇ ವಿರಮಿಸಲು ಕುಳಿತ ನಾವುಗಳು ರೊಟ್ಟಿ-ಪಲ್ಯಗಳನ್ನು ತಿನ್ನುವಷ್ಟರಲ್ಲೇ, ನಮ್ಮಲ್ಲಿನ ಹಲವರುಗಳು ನಿದ್ದೆಗೆ ಜಾರಿದ್ದಾಗಿತ್ತು. ವೇಗವಾಗಿ ಅಡ್ಡಾದಿಡ್ಡಿ ಚಲಿಸುತ್ತಾ ಬರುತ್ತಿದ್ದ ಬಸ್ಸೊಂದನ್ನು ಎಚ್ಚರವಿದ್ದ ನಾವು ಮೂವರೂ ಮುಂಚೆಯೇ ನೋಡಿದ್ದೆವು. ಬಸ್ಸು ಮಾಮೂಲಿನಂತೆ ಹೆದ್ದಾರಿಯಲ್ಲೇ ಹೋಗುವುದೆಂದು ಎಣಿಸಿದ್ದೆವು.  ನಮ್ಮವರು ನಿದ್ರಿಸುತ್ತಿದ್ದ ಸ್ಥಳಕ್ಕೆ, ಸ್ವಲ್ಪ ದೂರದಿಂದ ಧಾವಿಸಿ ಬರುತ್ತಿದ್ದ ಬಸ್ಸು ನಿಯಂತ್ರಣ ತಪ್ಪಿ ಪಾದಚಾರಿಗಳ ಪಥದ ಕಟ್ಟೆಯನ್ನೇರಿತ್ತು. ಎಚ್ಚರವಿದ್ದ ನಾವುಗಳು ಎಷ್ಟೇ ಕಿರುಚಾಡಿದರೂ, ಮಲಗಿದ್ದ ನಮ್ಮವರುಗಳು ಏಳಲಿಲ್ಲ. ಬಸ್ ಚಾಲಕ ಬಸ್ಸನ್ನು ನಿಯಂತ್ರಿಸಲಾಗಲಿಲ್ಲ. ನೋಡು ನೋಡುತ್ತಲೇ ಆ ಪಾಪಿ ಬಸ್ಸು ಮಲಗಿದ್ದ  ನಮ್ಮವರುಗಳ ಮೇಲೆ ಹರಿದು ಅವರುಗಳ ಪ್ರಾಣಗಳನ್ನು ತೆಗೆದಿತ್ತು' ಎಂದು ವಿವರಿಸುತ್ತಾ ಟಿ.ವಿ. ಸುದ್ದಿಗಾರರ ಮುಂದೆ ರೋದಿಸಿದವನೇ ಸೋನು ಮಂಡಲ್ ಎಂದು ತಿಳಿಯಲು ಮದನ್ ಲಾಲರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. 

ಕೂಡಲೇ ಮದನ್ ಲಾಲರ ಕಣ್ಣು ಮೃತರ ಪಟ್ಟಿಯ ಮೇಲೆ ಹರಿಯಿತು. ಸತ್ತವರ ಪೈಕಿ ಸೋನುವಿನ ತಂದೆ ವಿಷ್ಣು ಮಂಡಲರ ಹೆಸರೂ ಇದ್ದುದನ್ನು ನೋಡಿ ಅವರು ಬೇಸರಗೊಂಡರು. 'ಇದೆಂತಹ ದುರಂತ? ದಿನ ನಿತ್ಯ ರೈಲುಗಾಡಿಯ ಆಟದಲ್ಲಿ ನಿರ್ವಾಹಕನಾಗುತ್ತಿದ್ದ ಸೋನು, ಅತ್ಯಾವಶ್ಯಕವಾದಾಗ  ಬಸ್ಸೊಂದನ್ನು ನಿಲ್ಲಿಸಿ ತನ್ನವರ ಪ್ರಾಣಗಳನ್ನು ಉಳಿಸಿಕೊಳ್ಳದಾದನೆ?' ಎನಿಸಿದ ಮದನ್ ಲಾಲರ ಕಣ್ಣುಗಳು ಅಪಘಾತದ ಕರಾಳ ದೃಶ್ಯಗಳ ಮೇಲೆ ಬಿತ್ತು. ಹೆದ್ದಾರಿಯ ಕಾಲ್ನಡುಗೆಯ ಪಥದ  ಭರ್ತಿ ಚದುರಿ ಹರಡಿದ್ದ ರುಂಡ-ಮುಂಡಗಳು, ಕೈ-ಕಾಲುಗಳು, ಸೂಟ್ಕೇಸುಗಳು, ರೊಟ್ಟಿಯ ಚೂರುಗಳ ದೃಶ್ಯ ಎಲ್ಲರ ಮನ ಕಲಕುವಂತ್ತಿತ್ತು.   

 'ಅಂದು ಇಡೀ ಬಸ್ ಖಾಲಿಯಿತ್ತು. ಬಸ್ಸನ್ನು ನಾನು ಗ್ಯಾರೇಜ್ ಕಡೆಗೆ ಚಲಾಯಿಸುತ್ತಿದ್ದೆ. ತಡ ರಾತ್ರಿಯಾದುದರಿಂದ ಬಸ್ಸನ್ನು ನಾನು ವೇಗವಾಗೇ ಓಡಿಸುತ್ತಿದ್ದೆ. ರಸ್ತೆಯ ಬದಿಯಲ್ಲೇ ಹಲವರು ಮಲಗಿದ್ದುದನ್ನು ನಾನು ದೂರದಿಂದಲೇ ನೋಡಿದ್ದೆ.  ಇದ್ದಕ್ಕಿದ್ದಂತೆ ನನಗೆ ಬಸ್ ಮೇಲಿನ ನಿಯಂತ್ರಣ ತಪ್ಪಿತು. ಬ್ರೇಕ್ ಹಾಕಿದ್ದು, ಜೋರಾಗಿ ಹಾರ್ನ್ ಬಾರಿಸಿದ್ದು, ಪ್ರಯೋಜನಕ್ಕೆ ಬರಲಿಲ್ಲ.  ನಿಯಂತ್ರಣ ತಪ್ಪಿದ ಬಸ್ಸು ಕಾಲ್ನಡುಗೆಯ ಕಟ್ಟೆಯನ್ನು ಹತ್ತೇ ಬಿಟ್ಟಿತ್ತು. ನೋಡು ನೋಡುವಷ್ಟರಲ್ಲೇ ಮಲಗಿದ್ದ ಹಲವರ ಮೇಲೆ ಬಸ್ಸು ಹರಿದೇ ಬಿಟ್ಟಿತ್ತು. ಬಡ ವಲಸಿಗ ಕೆಲಸಗಾರರ ಸಾವಿಗೆ ಕಾರಣನಾದ ನನ್ನನ್ನು ಕ್ಷಮಿಸಿ' ಎಂದು ಕೋರಿಕೊಂಡ ಬಸ್ ಚಾಲಕನ ಮುಖದಲ್ಲೂ ವಿಷಾದವಿತ್ತು. 

ಅಪಘಾತ ಜರುಗಿದ ರಾಜ್ಯದ ಮುಖ್ಯ ಮಂತ್ರಿಗಳು ಮೃತ ಪಟ್ಟವರ ಕುಟುಂಬಗಳಿಗೆ ತಲಾ ೫ ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದರು. ವಲಸಿಗರ ರಾಜ್ಯದ ಮುಖ್ಯ ಮಂತ್ರಿಗಳು ಕೂಡ ಅಷ್ಟೇ ಮೊತ್ತದ ಪರಿಹಾರವನ್ನು ಸಂಬಂಧ ಪಟ್ಟ ಕುಟುಂಬಗಳಿಗೆ ಘೋಷಿಸಿದ್ದರು. ಹಣದ ರಾಶಿ ಹಾರಿ ಹೋದ ಜೀವಗಳನ್ನು ಮರಳಿಸಬಲ್ಲುದೆ, ಎಂಬುದು ಮದನ್ ಲಾಲರ ಚಿಂತೆಯಾಗಿತ್ತು. ಮನೆಯಲ್ಲಿ ಕೂತು  ಮೊಬೈಲುಗಳನ್ನು ಒತ್ತುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ವಿತಂಡ ವಾದಿಗಳು ಅಪಘಾತದ ಬಗ್ಗೆ ಹರಿಬಿಟ್ಟಿದ್ದ ಉಡಾಫೆ ಟಿಪ್ಪಣಿಗಳು ಮದನರನ್ನು ಕುಪಿತರನ್ನಾಗಿಸಿತ್ತು. 'ಅಪಘಾತಕ್ಕೆ ವಲಸಿಗರ ಬೇಜಾಬ್ದಾರಿಯೇ ಕಾರಣ. ಅವರುಗಳು ಬೇರೆಯವರನ್ನು ಬೈದು ಪ್ರಯೋಜನವಿಲ್ಲ. ಹೆದ್ದಾರಿಯ ಕಾಲ್ನಡುಗೆಯ ಪಥದಲ್ಲಿ ಮಲಗುವ ಮುನ್ನ ಅವರುಗಳು ಕೊಂಚ ಯೋಚಿಸಬೇಕಿತ್ತು. ಅವರುಗಳ ಬೇಜಾಬ್ದಾರಿಗೆ ಪ್ರಾಯಶಃ ಅವರುಗಳ ಕುಡಿತದ ಚಟವೇ ಕಾರಣವಿರಬೇಕು. ಹೆದ್ದಾರಿಯ ಪಕ್ಕದಲ್ಲೇ ಇದ್ದ ದೊಡ್ಡ ಮೈದಾನದಲ್ಲೇಕೆ ಅವರುಗಳು ಮಲಗಲಿಲ್ಲ? ಆ ಮೂರ್ಖರ ಬೇಜಾಬ್ದಾರಿಯಿಂದುಂಟಾದ ಸಾವುಗಳಿಗೆ ಭಾರಿ ಮೊತ್ತದ ಸರಕಾರಿ ಪರಿಹಾರವೇಕೆ?' ಎಂಬ ನಿಷ್ಕರುಣರ  ಮಾತುಗಳನ್ನು ಫೇಸ್ಬುಕ್/ವಾಟ್ಸಪ್ಪುಗಳಲ್ಲಿ ಓದಿದ ಮದನರ ಮನಸ್ಸು ರೋಸಿ ಹೋಗಿತ್ತು. 'ಅತ್ಯಾಚಾರದ ಘಟನೆಗಳು ನಡೆದಾಗ, ಅತ್ಯಾಚಾರಕ್ಕೊಳಗಾದ ಬಲಿಪಶುಗಳದ್ದೆ ತಪ್ಪೆನ್ನುವ ನಮ್ಮ ಜನಗಳಿಂದ ಬೇರ್ಯಾವ ರೀತಿಯ ಮಾತುಗಳನ್ನು ನೀರಿಕ್ಷಿಸಲು ಸಾಧ್ಯ?' ಎಂಬುದು ಮದನರ್ ಮನಸ್ಸಿನ ಉದ್ಗಾರವಾಗಿತ್ತು. 

ಮದನ್ ಲಾಲರ ಯೋಚನಾ ಲಹರಿ ಮುಂದುವರೆದಿತ್ತು......  'ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡವರ, ಬಾಡಿಗೆ ಮನೆಗಳಿಂದ ಹೊರದೂಡಲ್ಪಟ್ಟವರ, ಹೆಂಡತಿ ಮಕ್ಕಳುಗಳೊಡನೆ ಸಾಮಾನುಗಳನ್ನು ಹೊತ್ತು  ಸುಡುಬಿಸಿಲ ನಡುವೆ ಕಾಲ್ನಡುಗೆಯಲ್ಲಿ ತಮ್ಮೂರಿನತ್ತ ತೆರಳುತ್ತಿರುವರ ನೋವು, ಹವಾನಿಯಂತ್ರಿತ ಕೋಣೆಯ ಆರಾಮದ ಕುರ್ಚಿಗಳ ಮೇಲೆ ಕುಳಿತು ಬರೆಯುವ ಈ ಸ್ವಯಂ ನಿಯೋಜಿತ ಸುದ್ದಿ ವಿಶ್ಲೇಷಕರಿಗೆ ತಿಳಿಯುತ್ತದೆಯೆ? ಅಸಹಾಯಕತೆ ಮತ್ತು ಆಯಾಸದಿಂದ ದಣಿದ ಮನಸ್ಸುಗಳಲ್ಲುಂಟಾದ ಆಘಾತಗಳಿಂದ  ವಿವೇಚನೆ ಕಳೆದು ಹೋಗುವುದು  ಸಹಜವಲ್ಲವೆ? ಕೋರ್ಟಿನ  ನ್ಯಾಯಾಧೀಶರುಗಳಿಗೆ ಅಂತಹ ವಲಸಿಗರ ಮೇಲೆ ಅನುಕಂಪ ಮೂಡಲಾರದೆ?'

ಲಾಕ್ಡೌನ್ ಜಾರಿಗೊಂಡನಂತರ, ರೈಲು ಮತ್ತು ರಸ್ತೆ ಅಪಘಾತಗಳಲ್ಲಿ ಸುಮಾರು ೭೨ರಷ್ಟು ವಲಸಿಗರು ಮೃತಪಟ್ಟಿದ್ದಾರೆಂದು ಕೇಂದ್ರ ಸರಕಾರಕ್ಕೆ ತಿಳಿದಿತ್ತು. ಇನ್ನೂ ಹೆಚ್ಚು ಜನರು ಹೊಟ್ಟೆಗಿಲ್ಲದೆ, ಕುಡಿಯಲು ನೀರಿಲ್ಲದೆ ಮತ್ತು ಬಿಸಿಲಿನ ತಾಪವನ್ನು ತಾಳಲಾರದೆ ಸತ್ತಿದ್ದರು. ೨೦೨೦ರ ಮಾರ್ಚ್ ೩೧ರ ದಿನ ಕೇಂದ್ರ ಸರಕಾರ  'ವಲಸಿಗರ್ಯಾರೂ ರಸ್ತೆ ಮತ್ತು ರೈಲ್ವೆ ಹಳಿಗಳ ಮೇಲೆ ಕಾಲ್ನಡುಗೆಯಲ್ಲಿ ತಮ್ಮ ಹಳ್ಳಿಗಳತ್ತ ನಡೆಯುವಂತೆ ಮಾಡುವುದಿಲ್ಲ. ಅವರುಗಳೆಲ್ಲರಿಗೂ ವಸತಿ ಹಾಗೂ ಆಹಾರದ ವ್ಯವಸ್ಥೆಗಳನ್ನು ಅವರುಗಳಿರುವಲ್ಲಿಯೇ ಮಾಡಿಕೊಡುತ್ತೇವೆಂಬ' ವಾಗ್ದಾನವನ್ನು ಪರಮೋಚ್ಚ ನ್ಯಾಯಾಲಯಕ್ಕೆ ನೀಡಿದ್ದಾಗಿತ್ತು. ಅದರನಂತರದ ದಿನಗಳಲ್ಲಿ ವಲಸಿಗರಿಗೆ ತಮ್ಮ ತಮ್ಮ ಊರುಗಳತ್ತ ಪ್ರಯಾಣಿಸಲು ಬಸ್ ಹಾಗು ರೈಲುಗಳ ವ್ಯವಸ್ಥೆಯನ್ನು ಕಲ್ಪಿಸುವ ಪ್ರಯತ್ನಗಳನ್ನು ಸರಕಾರಗಳು ಮಾಡಿದ್ದವು. ಆದರೂ ವ್ಯವಸ್ಥೆ ಸಮರ್ಪಕವಾಗಿರದೆ, ರೈಲು-ಬಸ್ಸುಗಳು ಹೊರಡುವ ಬಗ್ಗೆ ತಪ್ಪು ಮಾಹಿತಿಗಳು, ವದ೦ತಿಗಳು ಹರಿದಾಡಿ ವಲಸಿಗರನ್ನು ಹೈರಾಣಾಗಿಸಿದ್ದವು. ರದ್ದಾದ ಮತ್ತು ತಪ್ಪಿ ಹೋದ ರೈಲು-ಬಸ್ಸುಗಳಿಗಂತೂ ಲೆಕ್ಕವೇ ಇಲ್ಲದಂತಾಗಿ, ಪ್ರಯಾಣಕ್ಕೆ ಕಟ್ಟಿದ ಹಣ ವಾಪಸ್ಸು ಪಡೆಯುವುದು ಹೇಗೆಂಬ ಮಾಹಿತಿ ವಲಸಿಗರಿಗೆ ತಿಳಿಯದಾಗಿತ್ತು. ಹೀಗಾಗಿ ರೈಲ್ವೆ ಹಳಿಗಳ ಮೇಲೆ, ಹೆದ್ದಾರಿಯ ಕಾಲ್ನಡುಗೆಯ ಪಥಗಳ ಮೇಲೆ ವಲಸಿಗ ಕೆಲಸಗಾರರು ಮಲಗುವಂತಹ ಪರಿಸ್ಥಿತಿ ಏಕೆ ಉಂಟಾಯಿತು ಎಂಬುದು ಸಂಬಂಧಪಟ್ಟವರಿಗೆಲ್ಲ ತಿಳಿದ ವಿಷಯವೇ ಆಗಿತ್ತು. ಹಸಿವು, ಬಾಯಾರಿಕೆ ಮತ್ತು ದಣಿವಿನಿಂದ ಬಳಲಿ ನಿದ್ರಿಸುತ್ತಿದ್ದ ಅವರುಗಳನ್ನು ಓಡುತ್ತಿರುವ ರೈಲು-ಬಸ್ಸುಗಳ ಶಬ್ದ ಕೂಡ  ಎಚ್ಚರಿಸಲಾಗದಿದ್ದುದು ದುರಂತವೇ ಸರಿ. 'ರೈಲು-ಬಸ್ಸುಗಳ ಪಥದ ಮೇಲೆ ಚದುರಿ ಬಿದ್ದ ವಲಸಿಗರ ಕಾಲು-ಕೈಗಳಿಂದಲೇ ನಮ್ಮ ರಸ್ತೆಗಳು, ಸೇತುವೆಗಳು, ಅಣೆಕಟ್ಟುಗಳು ನಿರ್ಮಾಣಗೊಂಡಿದ್ದೆಂಬುದನ್ನು ಯಾರೂ ಮರೆಯುವಂತಿಲ್ಲ. ಅವರುಗಳ ಛಿದ್ರವಾದ ದೇಹಗಳ ಸುತ್ತ ಚದುರಿ ಬಿದ್ದ            ರೊಟ್ಟಿಗಳನ್ನೇನೋ ಅವರುಗಳೇ ತಯಾರಿಸಿದ್ದು. ಆದರೆ ಅವರುಗಳ ಪ್ರಾಣಗಳನ್ನು  ಹರಣ ಮಾಡಿದ್ದ  ಸಾವುಗಳನ್ನು ಮಾತ್ರ ಅವರುಗಳು ತಂದುಕೊಂಡಿದ್ದೆಂದು ಹೇಳಲಾಗದು' ಎಂಬ ಹೊಸ ವಾದ ಸರಣಿಯೊಂದನ್ನು ಮದನರ ಮನಸ್ಸು ಯೋಚಿಸುತ್ತಿತ್ತು. 

'ಸಂತ್ರಸ್ತರ ಕಣ್ಣು-ಕಿವಿಗಳ ತುಡಿತಗಳನ್ನು ಗಮನಿಸುವ ಹಾಗೂ ಅವರುಗಳ ಹೃದಯದ ಮಿಡಿತಗಳನ್ನು ಅರಿಯುವ ಅಂತಃಕರಣವೇ ಅನುಕಂಪದ ಮೂಲ'ವೆಂಬ ಸಮಾಜ ಶಾಸ್ತ್ರಜ್ಞ ಆಲ್ಫ್ರೆಡ್ ಅಡ್ಲರರ ಮಾತುಗಳು  ಮದನ್ ಲಾಲರ ಕಿವಿಯಲ್ಲಿ ರಿಂಗಣಿಸುತ್ತಿದ್ದವು. 

                                                                                                ***

ಮದನ್ ಲಾಲ್ ಮತ್ತು ಸಲೋನಿಯವರು ಬಾಲ್ಯ ಸ್ನೇಹಿತರೂ ಹಾಗೂ ಸಹಪಾಠಿಗಳಾಗಿದ್ದವರು. ಬೇರೆ ರಾಜ್ಯವೊಂದರ ಸರ್ಕಾರಿ ಅಧಿಕಾರಣಿಯಾಗಿದ್ದರೂ ಸಲೋನಿ, ಮದನ್ ಲಾಲರ ಸಂಪರ್ಕದಲ್ಲಿದ್ದರು. ವಕೀಲ ಮದನ್ ಲಾಲರ ಕಾನೂನಿನ ಜ್ಞಾನ ಹಾಗೂ ಬಡವರುಗಳ ಮೇಲಿನ ಕಳಕಳಿಯ ಬಗ್ಗೆ  ಸಲೋನಿಗೆ ಅಪಾರ ಮೆಚ್ಚುಗೆಯಿತ್ತು. ಬಡ ಕೆಲಸಗಾರರ ನೂರಾರು ಕಾನೂನಿನ ಹೋರಾಟಗಳನ್ನು ಯಶಸ್ವಿಯಾಗಿ ಮದನ್ ಲಾಲರು ನಿರ್ವಹಿಸಿದ್ದ ವಿಷಯ ಸಲೋನಿಗಿ ತಿಳಿದಿತ್ತು.  ಕಳೆದ ವರ್ಷ, ತಮ್ಮ ರಾಜ್ಯದ ಜಿಲ್ಲೆಯೊಂದರ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಅಧಿಕಾರಿಣಿಯಾಗಿ ಅವರು ಅಧಿಕಾರ ವಹಿಸಿಕೊಂಡಿದ್ದರು. ಹಾಗಾಗಿ ಮದನ್ ಲಾಲರಿಂದ ಆಗಾಗ ತಮ್ಮ ಇಲಾಖೆಗೆ ಸಂಬಂಧಪಟ್ಟಂತಹ ಕಾನೂನಿನ ಸಲಹೆಯನ್ನು ಸಲೋನಿ ಪಡೆಯುತ್ತಿದ್ದುದು  ಸಾಮಾನ್ಯವಾಗಿತ್ತು. ತನ್ನ ಇಲಾಖೆಗೆ ಸಂಬಂಧಪಟ್ಟಂತಹ ರಾಜ್ಯ ಹಾಗೂ ರಾಷ್ಟ್ರದ ಆಗು-ಹೋಗುಗಳು ಮತ್ತು ಅಂಕಿ-ಅಂಶಗಳು  ದಕ್ಷ ಅಧಿಕಾರಿಣಿಯಾಗಿದ್ದ ಸಲೋನಿಯವರ ಬೆರಳ ತುದಿಯಲ್ಲೇ ಇರುತ್ತಿತ್ತು. 

ಒಂದು ಭಾನುವಾರದ ಬೆಳಗ್ಗೆ ಸಲೋನಿ, ಮದನ್ ಲಾಲರಿಗೆ ಫೋನಾಯಿಸಿದ್ದರು. 'ಮದನ್ ಹೇಗಿದ್ದೀರಿ? ಇಂಟರ್ನೆಟ್ನಲ್ಲಿ, ನಿಮ್ಮ ರಾಜ್ಯದಲ್ಲಿ ನಡೆದ ಹೆದ್ದಾರಿ ಬಸ್ ದುರ್ಘಟನೆಯ ಬಗ್ಗೆ ತಾವು ಬರೆದ ವಿಶ್ಲೇಷಣೆಯನ್ನು ಓದಿದೆ. ದುರ್ಘಟನೆಯಲ್ಲಿ ೧೫ ಜನ ಅಮಾಯಕ ವಲಸಿಗರ ಸಾವು ಸಂಭವಿಸಿದ್ದನ್ನು ಕೇಳಿ ನನ್ನ ಮನಸ್ಸಿಗೆ ನೋವಾಯಿತು. ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರವನ್ನೊದಗಿಸಲು, ತಾವು ಕಾನೂನಿನ ಹೋರಾಟ ಕೈಗೆತ್ತಿಕೊಂಡಿರುವ ವಿಷಯ ತಿಳಿಯಿತು. ತಮ್ಮ ಹೋರಾಟ ಕೈಗೂಡಿದಲ್ಲಿ, ಇಡೀ ರಾಷ್ಟ್ರದ ವಲಸಿಗ ಕೆಲಸಗಾರರ ಸೇವಾ ನಿಯಮಗಳಲ್ಲಿ ಮಾರ್ಪಾಡುಂಟಾಗಿ, ಅವರುಗಳ ಜೀವನ ಹೆಚ್ಚು ಸುಗಮವಾಗಬಹುದೆಂಬ ನಂಬಿಕೆ ನನಗಿದೆ. ಇಲ್ಲಿ ನನ್ನ ಇಲಾಖೆಯ ವ್ಯಾಪ್ತಿಯು ಕೂಡ ವಲಸಿಗ ಕೆಲಸಗಾರರಿಗೆ ಸಂಬಂಧಪಟ್ಟದ್ದಾದುದರಿಂದ, ತಮ್ಮಿಂದ ಕೆಲವು ಸಲಹೆಗಳನ್ನು ಪಡೆಯೋಣವೆಂದು ತಮಗೆ ಕರೆ ಮಾಡಿದ್ದೇನೆ. ನನ್ನೊಂದಿಗೆ ಮಾತನಾಡಲು ತಮಗೆ ಸ್ವಲ್ಪ ಸಮಯವಿದೆಯೆ?'

'ಪ್ರಾಮಾಣಿಕವಾಗಿ ಸಲಹೆ ಕೇಳುವ ತಮಗೆ ನನ್ನ ಬಳಿ ಯಾವಾಗಲೂ ಸಮಯವಿದ್ದೇ ಇರುತ್ತದೆ. ತಮ್ಮ ಕಾರ್ಯಬದ್ಧತೆಯ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಆದರೆ ತಮ್ಮ ಸಮಸ್ಯೆಗಳಿಗೆ ದೀರ್ಘವಾದ ಚರ್ಚೆ ಅವಶ್ಯಕವಿರಬಹುದೆಂದು ನನ್ನ ಅನಿಸಿಕೆ. ತಮ್ಮ ಸಮಸ್ಯೆಗಳನ್ನು ವಿವರಿಸಿ ತಾವು ಇ-ಅಂಚೆಯೊಂದನ್ನು ಕಳುಹಿಸಬಾರದೇಕೆ?' ಎಂದು ಉತ್ತರಿಸಿದರು ಮದನ್. 

ಮಾರನೆಯ ದಿನವೇ ಮದನರ ಕೈಸೇರಿದ ಇ-ಅಂಚೆ ಹೀಗಿತ್ತು. 'ಮದನ್ ಲಾಲರವರಿಗೆ...., ನನ್ನ ಇಲಾಖೆಗೆ ಸಂಬಂಧಪಟ್ಟಂತಹ ಕೆಲವು ವಿಷಯಗಳ ಬಗ್ಗೆ ತಮ್ಮ ಸಲಹೆಯನ್ನು, ನಾನು ವೈಯಕ್ತಿಕವಾಗಿ ಕೇಳುತ್ತಿದ್ದೇನೆ. ನಿಮಗೆ ತಿಳಿದಿರುವಂತೆ ನಾನು ಬೇರೊಂದು ರಾಜ್ಯವೊಂದರಲ್ಲಿ ಸೇವೆ ಸಲ್ಲಿಸುತ್ತಿರುತ್ತೇನೆ. ನನ್ನ ಇಲಾಖೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ, ನನ್ನ ರಾಜ್ಯದ ಪರಿಸ್ಥಿತಿಗಳ ಅರಿವು ಮತ್ತು ನಮ್ಮ ಹಿರಿಯಧಿಕಾರಿಗಳ ಸಮ್ಮತಿಯೂ ಮುಖ್ಯ ಎಂಬುದು ನನಗೆ ಗೊತ್ತು. 

ಕೃಷಿ ಕ್ಷೇತ್ರವನ್ನು ಹೊರತು ಪಡಿಸಿ, ನಿರ್ಮಾಣ ಕ್ಷೇತ್ರ  ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ ಎಂಬುದು ತಮಗೆ ಗೊತ್ತು. ನಮ್ಮ ದೇಶದಲ್ಲಿ ಸುಮಾರು  ೧೪ ಕೋಟಿಗಳಷ್ಟು ವಲಸಿಗ ಕೆಲಸಗಾರರಿದ್ದು, ಅವರುಗಳ ಪೈಕಿ ೫ ಕೋಟಿಯಷ್ಟು ಕೆಲಸಗಾರರು ದುಡಿಯುವುದು ನಿರ್ಮಾಣ ಕ್ಷೇತ್ರದಲ್ಲಿ. ನಮ್ಮ ರಾಜ್ಯದ ನಾಲ್ಕು ನಗರಗಳಲ್ಲಿ, ಹಲವಾರು ಭಾರಿ ನಿರ್ಮಾಣ ಕ್ಷೇತ್ರದ ಕಂಪನಿಗಳು, ನೂರಾರು ಬೃಹತ್ ಕಟ್ಟಡಗಳ ನಿರ್ಮಾಣ ಮಾಡುತ್ತಿವೆ. ಆದರೆ ನಾನು ನಮ್ಮ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಣಿ ಮಾತ್ರ. ಕಳೆದ ಮಾರ್ಚ್ ೨೫ರಂದು ದೇಶಾದ್ಯಂತ ಜಾರಿಗೊಂಡ ಲಾಕ್ಡೌನ್, ನಿರ್ಮಾಣ ಕ್ಷೇತ್ರದ ವಲಸಿಗ ಕೆಲಸಗಾರರಿಗೆ ಕಂಡು ಕೇಳರಿಯದ ಸಮಸ್ಯೆಗಳನ್ನು ತಂದೊಡ್ಡಿದೆ. ನನ್ನ ಜಿಲ್ಲೆಯ ವಲಸಿಗ ಕೆಲಸಗಾರರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ನಾನು ಹಲವಾರು ಸಮಸ್ಯೆಗಳನ್ನು ಎದುರಿಸಿತ್ತಿದ್ದೇನೆ.  

ಸಾವಿರಾರು ಕಟ್ಟಡ ನಿರ್ಮಾಣ ಕೆಲಸಗಾರರು ಪರಿಹಾರ ಕೇಳಿ ನನ್ನನ್ನು ಸಂಪರ್ಕಿಸಿದ್ದಾರೆ. ಲಾಕ್ಡೌನ್ ಜಾರಿಗೊಂಡಾಗಿನಿಂದ ಇವರುಗಳು ತಮ್ಮ ಕೆಲಸಗಳನ್ನು ಕಳೆದುಕೊಂಡು ಆದಾಯವಿಲ್ಲದೆ, ವಸತಿ ಸೌಕರ್ಯವನ್ನು ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಅವರುಗಳಲ್ಲಿ ಕೆಲವರಿಗೆ ಮಾತ್ರ ವಸತಿ ಸೌಕರ್ಯ ಇನ್ನೂ ಉಳಿದಿದ್ದು, ಅಲ್ಪ-ಸ್ವಲ್ಪ ದಿನಸಿ ಪೊಟ್ಟಣಗಳು ಅವರುಗಳ ಗುತ್ತಿಗೆದಾರರ ಮೂಲಕ ದೊರೆಯುತ್ತಿವೆ. ಹಲವಾರು ನೌಕರರು ಬಾಡಿಗೆ ಶೆಡ್ಡುಗಳಲಿದ್ದು ಅವರುಗಳಿಗೆ ಬಾಡಿಗೆ ಕಟ್ಟಲಾಗುತ್ತಿಲ್ಲ. ಶೆಡ್ಡುಗಳನ್ನು ಖಾಲಿ ಮಾಡುವಂತೆ ಅವರುಗಳ ಮೇಲೆ ಬಲಾತ್ಕಾರ ನಡೆಯುತ್ತಿದೆ. ನನ್ನ ಇಲಾಖೆಯ ಮುಖಾಂತರ, ಕಳೆದ ಏಪ್ರಿಲ್ ತಿಂಗಳಂದು ಹಲವು ವಲಸಿಗರಿಗೆ ನಾವು ದಿನಸಿ ಪೊಟ್ಟಣಗಳನ್ನು ಒದಗಿಸಿದ್ದೆವು. ಹಲವಾರು ಸ್ವಯಂ ಪ್ರೇರಿತ ಸಂಘ ಸಂಸ್ಥೆಗಳ ನೆರವಿನ ಸಹಕಾರವಿದ್ದರೂ, ನಮ್ಮ ಜಿಲ್ಲೆಯ ಎಲ್ಲಾ ವಲಸಿಗರಿಗೆ  ಮೇ ತಿಂಗಳ ದಿನಸಿ ವಿತರಿಸಲಾಗಿಲ್ಲ. ಹಲವಾರು ಕೆಲಸಗಾರರು ನನ್ನಲ್ಲಿ ಬೇಡಿಕೆ ಇಟ್ಟಿದ್ದು, ಅವರುಗಳ ಗುತ್ತಿಗೆದಾರರು ತಡೆ ಹಿಡಿದಿಟ್ಟಿರುವ ಸುಮಾರು ತಲಾ ೨೫,೦೦೦ ರುಪಾಯಿಗಳಷ್ಟು ಹಣವನ್ನು ಬಿಡುಗಡೆ ಮಾಡಿಸಿಕೊಡಬೇಕಾಗಿ ಕೇಳಿಕೊಂಡಿದ್ದಾರೆ. ಗುತ್ತಿಗೆದಾರ ರುಗಳ ಪ್ರತಿನಿಧಿಗಳೊಂದಿಗೆ ಈ ವಿಷಯವನ್ನು ಚರ್ಚಿಸಿದ್ದೇನೆ. ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿದ್ದು, ಅವರುಗಳ ಮೇಲಧಿಕಾರಿಗಳು ಹಣ ಬಿಡುಗಡೆಗೆ ಸಿದ್ಧರಿಲ್ಲ. 

ನನ್ನ ಇಲಾಖೆಯ ಮೇಲಿನ ಅಧಿಕಾರಿಗಳಿಗೆ ನನ್ನ ಕಾರ್ಯ ವೈಖರಿ ಬಗ್ಗೆ ಅಸಮಾಧಾನವಿದೆ. ನಾನು "ಅತಿ ಜಾಣೆ"ಯಾಗಲು ಪ್ರಯತ್ನಿಸುತ್ತಿದ್ದೇನೆಂಬುದು ಅವರುಗಳ ಅನಿಸಿಕೆ. ನನ್ನ ಮೇಲಿನ ರಾಜ್ಯ ಮಟ್ಟದ ಅಧಿಕಾರಿಗಳು "ನಿಮ್ಮ ಇತಿ-ಮಿತಿ"ಯೊಳಗಿರಿ ಎಂದು ನನ್ನನ್ನು ಎಚ್ಚರಿಸಿದ್ದಾರೆ. "ವಲಸೆ ಕೆಲಸಗಾರರ ಸಾಮಾನ್ಯ ಸಮಸ್ಯೆಗಳ ಬಗ್ಗೆ ರಾಜ್ಯಮಟ್ಟದಲ್ಲಿ ತೆಗೆದುಕೊಳ್ಳಬಹುದಾದ ನಿರ್ಧಾರಗಳ ತನಕ ಸುಮ್ಮನಿರಿ"ಎಂಬುದು ಅವರುಗಳ ಅಲಿಖಿತ ಆಜ್ಞೆಯಾಗಿದೆ. ನಾನು ಜಿಲ್ಲಾ ಮಟ್ಟದ ಅಧಿಕಾರಿಣಿ ಮಾತ್ರವಾಗಿದ್ದು, ಸ್ವತಂತ್ರವಾಗಿ ಹೊಸ ಕ್ರಮಗಳನ್ನು ಕೈಗೂಳ್ಳುವ  ಅಧಿಕಾರ ನನಗಿಲ್ಲವೆಂಬುದು ಇಲಾಖೆಯ ಮುಖ್ಯಸ್ಥರ ವಿಚಾರವಾಗಿದೆ. 

ನಮ್ಮ ಜಿಲ್ಲೆಯ ವಲಸಿಗ ಕಟ್ಟಡದ ಕೆಲಸಗಾರರನ್ನು, ದೇಶದ ಪೂರ್ವದ ರಾಜ್ಯಗಳಿಂದ ದಲ್ಲಾಳಿಗಳು ಕರೆತಂದಿದ್ದಾರೆ. ಆಹಾರ, ವಸತಿ ಮತ್ತು ಪ್ರಯಾಣದ ಖರ್ಚುಗಳ ಆಶ್ವಾಸನೆಗಳನ್ನು ನೀಡಿ ಈ ಕಾರ್ಮಿಕರುಗಳನ್ನು ಆಕರ್ಷಿಸಲಾಗುತ್ತದೆ. ೧೦೦ರಿಂದ ೨೦೦ ಕೆಲಸಗಾರರುಗಳ ತಂಡವನ್ನು ನಮ್ಮ ನಗರಕ್ಕೆ ಕರೆತಂದು, ಅವರುಗಳನ್ನು ನಗರದ ಹೊರವಲಯಗಳ ಬಿಡಾರಗಳಲ್ಲಿ ಇರಿಸಲಾಗುತ್ತದೆ. ಅವರುಗಳಿಗೆ ಕೆಲಸಗಳನ್ನೊದಗಿಸುವ ಹೊತ್ತಿಗೆ ೨-೩ ವಾರಗಳಷ್ಟು ಸಮಯ ಬೇಕಾಗಬಹುದು. ಅಲ್ಲಿಯವರೆಗಿನ ವಲಸಿಗರ ಖರ್ಚುಗಳೆಲ್ಲವನ್ನೂ, ಸಂಬಂಧ ಪಟ್ಟ ದಳ್ಳಾಳಿಗಳೇ ವಹಿಸಿಕೊಂಡಿರುತ್ತಾರೆ. ಕಟ್ಟಡದ ಗುತ್ತಿಗೆದಾರರುಗಳಡಿ ಕೆಲಸಕ್ಕೆ ನೇಮಕಗೊಳ್ಳುವವರೆಗಿನ ಹೊಸ ವಲಸಿಗರ ಮೇಲಿನ ಖರ್ಚು-ವೆಚ್ಚಗಳನ್ನು, ಅವರುಗಳು ಮುಂದೆ ಗಳಿಸುವಂತಹ ವಾರ/ತಿಂಗಳುಗಳ ಹಣದಿಂದ ಕಂತುಗಳ ಮುಖಾಂತರ ಮುರಿದುಕೊಂಡು ಇರಿಸಿಕೊಳ್ಳಲಾಗುತ್ತೆ.  ಆ ರೀತಿ ಕಾದಿರಿಸಲಾದ ಮೊತ್ತವನ್ನು, ಆಯಾ ವಲಸಿಗ ಕೆಲಸಗಾರರು ಮೂರು ವರುಷುಗಳ ಸೇವಾವಧಿಯನ್ನು ಪೂರ್ಣಗೊಳಿಸಿದನಂತರ ಹಿಂತಿರುಗಿಸಲಾಗುವುದೆಂದು ಮುಂಚಿತವಾಗೇ ತಿಳಿಸಲಾಗಿರುತ್ತೆ. ಈ ರೀತಿಯ ನಿರ್ಬಂಧಗಳನ್ನು ಕೆಲಸ ಸಿಕ್ಕ ಹುರುಪಿನಲ್ಲಿ ಯಾವ ಹೊಸ ವಲಸಿಗರು ವಿರೋಧಿಸಿರುವುದಿಲ್ಲ. ಲಾಕ್ಡೌನಿನಿಂದ ಕೆಲಸ ಕಳೆದುಕೊಂಡಿರುವ ವಲಸಿಗರು ನನ್ನಲ್ಲಿ ಬಂದು ಈಗ ಗುತ್ತಿಗೆದಾರರುಗಳಿಂದ  ಹಿಂತುರಿಗಿಸಿ ಕೊಡಿಸುವಂತೆ ಕೇಳುತ್ತಿರುವುದೇ ಈಗಾಗಲೇ ಆ ರೀತಿ ಕಾದಿರಿಸಿಡಲಾದ  ತಲಾ ೨೫,೦೦೦ ರೂಪಾಯಿಗಳಷ್ಟರ  ಮೊತ್ತ. "ಹಾಗೆ ಕಾದಿರಿಸಿಟ್ಟ ಮೊತ್ತ ಕೈಸೇರಿದರೆ, ನಾವುಗಳು ನಮ್ಮ ಹಳ್ಳಿಗಳತ್ತ ಪ್ರಯಾಣ ಬೆಳಸಲು ಅನುಕೂಲ"ವಾಗುವುದೆಂಬುದು ಅವರುಗಳ ಆಗ್ರಹ. 

ಹೊಸ ವಲಸಿಗರನ್ನು ಸಣ್ಣ ಗುತ್ತಿಗೆದಾರರುಗಳ ಕೈಸೇರಿಸಿದ ಕೂಡಲೇ, ಅವರುಗಳನ್ನು ಕರೆತಂದ ದಲ್ಲಾಳಿಗಳ ಜಾವಬ್ದಾರಿ ಮುಗಿದಂತೆ. ವಲಸಿಗರ ಮುಂದಿನ ಆಗು-ಹೋಗುಗಳ ಜವಾಬ್ದಾರಿ ಆಯಾ ಸಣ್ಣ ಗುತ್ತಿಗೆದಾರರುಗಳದ್ದೆ. ವಲಸಿಗರಲ್ಲಿ ಕೆಲವರಿಗೆ ಮಾತ್ರ ವಸತಿಯ ಶೆಡ್ಡುಗಳು ದೊರೆಯುತ್ತೆ. ಮಿಕ್ಕವರು ತಮ್ಮ ಶೆಡ್ಡುಗಳನ್ನು ತಾವೇ ಬಾಡಿಗೆಗೆ ಪಡೆದು ಕೊಳ್ಳಬೇಕಾಗುತ್ತದೆ. ಕೆಲಸಗಾರರ ವಾರದ ಅಥವಾ ತಿಂಗಳ ಸಂಬಳದ ಪಾವತಿ ಸಣ್ಣ ಗುತ್ತಿಗೆದಾರರುಗಳಿಂದಲೇ ನಡೆದು ಹೋಗುತ್ತದೆ. ಹಾಗಾಗಿ ಕೆಲಸಗಾರರಿಗೆ ತಾವು ಯಾವ ಗುತ್ತಿಗೆದಾರರಡಿ ಕೆಲಸ ಮಾಡುತ್ತಿದ್ದೆವೆಂಬುದೇ ತಿಳಿದಿರುವುದಿಲ್ಲ. 

ವಲಸಿಗರ ನೆರವಿನಿಂದ ನಾನು ಎಲ್ಲ ಸಣ್ಣ ಗುತ್ತಿಗೆದಾರರುಗಳನ್ನು ಗುರುತಿಸಿ, ಅವರುಗಳನ್ನು ನನ್ನ ಕಚೇರಿಯ ಸಭೆಯೊಂದಕ್ಕೆ ಕರೆದಿದ್ದೆ. ಸಭೆಗೆ ಹಾಜರಾದವರು ಬೆರಳೆಣಿಕೆಯಷ್ಟು ಸಣ್ಣ ಗುತ್ತಿಗೆದಾರರುಗಳು ಮಾತ್ರ. ಮಿಕ್ಕವರೆಲ್ಲ ಮೇಲಿನ ಗುತ್ತಿಗೆದಾರರುಗಳ ಭಯದಿಂದ ಬಂದಿರಲಿಲ್ಲವಂತೆ. ನನ್ನೊಡನೆ ಮಾತನಾಡಿದ ಸಣ್ಣ ಗುತ್ತಿಗೆದಾರರುಗಳ ಪ್ರಕಾರ, ಮೇಲಿನ ಗುತ್ತಿಗೆದಾರರುಗಳೊಂದಿಗೆ ಅವರುಗಳು  ವ್ಯವಹರಿಸುವದೇ ಇಲ್ಲವಂತೆ. ನೌಕರರಿಗೆ ವಿತರಿಸಬೇಕಾದ ಹಣವನ್ನೆಲ್ಲಾ  ಮಧ್ಯವರ್ತಿಗಳ ಮುಖಾಂತರ ಪಡೆಯುತ್ತಾರಂತೆ. "ಹಾಗಾಗಿ ಕಾದಿರಿಸಿಟ್ಟ ಹಣದ ವಿಷಯ ತಮ್ಮಗಳಿಗೇನೂ ತಿಳಿದಿಲ್ಲವೆಂಬುದು" ಅವರುಗಳ ವಿವರಣೆಯಾಗಿತ್ತು. 

೨೦೨೦ರ ಮಾರ್ಚ್ ೨೯ರಂದು ಕೇಂದ್ರ ಸರ್ಕಾರ ಜಾರಿಗೊಳಿಸಿದ ನಿರ್ದೇಶನದ ಪ್ರಕಾರ, ಕಟ್ಟಡ ನೌಕರರ ಸಂಬಳಗಳನ್ನು ಲಾಕ್ಡೌನ್ ಅವಧಿಯಲ್ಲಿ ತಡೆ ಹಿಡಿಯುವಂತಿಲ್ಲ. ಆದರೆ ನಮ್ಮ ಜಿಲ್ಲೆಯ ಯಾವ ಗುತ್ತಿಗೆದಾರರು ಆ ನಿರ್ದೇಶನವನ್ನು ಪಾಲಿಸುತ್ತಿಲ್ಲ. ಅಂದ ಹಾಗೆ ನಿರ್ಮಾಣ ಕ್ಷೇತ್ರ ವಿಧಿಯುಕ್ತವಲ್ಲದ್ದು (informal sector). ಈ ಕ್ಷೇತ್ರದ ಸುಮಾರು ಶೇಕಡ ೯೮ರಷ್ಟು ಕೆಲಸಗಾರರುಗಳೊಂದಿಗೆ ಯಾವ ಲಿಖಿತ ಕರಾರುಗಳು ಇರುವುದಿಲ್ಲ.  ಪರಿಸ್ಥಿತಿ ಹೀಗಿರುವಾಗ ಕೆಲಸಗಾರರ ಹಿತಾಸಕ್ತಿಗಳಿಗೆ ಯಾರು ಜವಾಬ್ದಾರರೆಂಬುದನ್ನು ನಿರ್ಧರಿಸುವುದೇ ದೊಡ್ಡ ಪ್ರಶ್ನೆ.'

ಸಲೋನಿರವರ ಸಮಸ್ಯೆಗಳಿಗೆ ಮದನ್ ಲಾಲರ ಉತ್ತರ ಹೀಗಿತ್ತು. 'ಕಾರ್ಮಿಕರುಗಳಿಗೆ ಸಂಬಂಧ ಪಟ್ಟಂತಹ ಕಾನೂನುಗಳ ಸುಧಾರಣೆಗೆ ಸರಕಾರ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾ ಬರುತ್ತಿದ್ದು, ನಿರ್ಮಾಣ ಕ್ಷೇತ್ರದಲ್ಲಿ ನಿರ್ಮಾಣೋದ್ಯಮಿಗಳ (builders) ಹಾಗೂ ಗುತ್ತಿಗೆದಾರರುಗಳ ಕೈ ಮೇಲಾಗುತ್ತಿದೆ. ಮಧ್ಯವರ್ತಿಗಳ ಮುಖಾಂತರ ಸಣ್ಣ ಗುತ್ತಿಗೆದಾರರನ್ನು ನಿಯಂತ್ರಿಸುವ ನಿರ್ಮಾಣೋದ್ಯಮಿಗಳು, ತೆರೆಯ ಹಿಂದೆ ನಿಂತು ತಮ್ಮ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ. ಹೀಗಿರುವಾಗ ಕಟ್ಟಡ ನಿರ್ಮಾಣ ಕಾರ್ಯದ ಒಡೆಯ (employer) ಯಾರೆಂದು ನಿರ್ಧರಿಸುವುದೇ ಕಷ್ಟ. ಆದುದರಿಂದ ನನಗೆ ಒಂದೆರಡು ವಾರಗಳ ಸಮಯಾವಕಾಶ ಬೇಕಾಗಿದೆ. ಸಮಸ್ಯೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ತಮಗೆ ನಾನು ಸಲಹೆಯನ್ನು ನೀಡುತ್ತೇನೆ.'

ತಮ್ಮ ಸಲಹೆಯನ್ನು ಕಳುಹಿಸುವಲ್ಲಿ ವಕೀಲ ಮದನ್ ಲಾಲರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಆದರೆ,  ತಮ್ಮ ಸಲಹೆಯನ್ನು ಸಲೋನಿರವರಿಗೆ ಕಳುಹಿಸಿದ ಕೆಲವೇ ದಿನಗಳಲ್ಲೇ, ನಡೆದ ಬೆಳವಣಿಗೆಗಳು  ಅವರಿಗೆ ಆಘಾತವನ್ನುಂಟುಮಾಡಿತ್ತು. ದಿನ ಪತ್ರಿಕೆಗಳ ಸುದ್ದಿಯ ಪ್ರಕಾರ ಸಲೋನಿರವರನ್ನು ಬೇರೊಂದು ಇಲಾಖೆಗೆ ದಿಢೀರನೆ ವರ್ಗ ಮಾಡಲಾಗಿತ್ತು.  ರಾಜ್ಯ ಸಂಪುಟ ಮಟ್ಟದ ಒತ್ತಡವೇ ಸಲೋನಿರವರ ಅಕಾಲಿಕ ವರ್ಗಾವಣೆಗೆ ಕಾರಣವೆಂದು ಪತ್ರಿಕೆಗಳಲ್ಲಿ ಬರೆಯಲಾಗಿತ್ತು. ಸುದ್ದಿ ವಿಶ್ಲೇಷಕರ ಪ್ರಕಾರ ಸಲೋನಿರವರ ವರ್ಗದ ಹಿಂದಿನ ಕಾರಣಗಳ ಪಟ್ಟಿ ಕೆಳಕಂಡ ರೀತಿ ಇತ್ತು. 

-ಸಲೋನಿರವರು, ತಮ್ಮಕಾರ್ಮಿಕ ಇಲಾಖೆಯ ಮುಖಾಂತರ ಸುಮಾರು ೨೦,೦೦೦ ದಿನಸಿ ಪೊಟ್ಟಣಗಳನ್ನು ಕಟ್ಟಡದ ವಲಸೆ ಕೆಲಸಗಾರರಿಗೆ ವಿತರಣೆ ಮಾಡಿಸಿದ್ದರು. ಹಾಗೆ ವಿತರಿಸುವಲ್ಲಿ ಸ್ಥಳೀಯ ಶಾಸಕರುಗಳು ಮತ್ತು ನಗರ ಪಾಲಿಕೆ ಸದಸ್ಯರುಗಳು ನೀಡಿದ್ದ ಪಟ್ಟಿಯನ್ನು ಸಲೋನಿರವರು  ಸಾರಾ ಸಗಟಾಗಿ ತಿರಸ್ಕರಿಸಿದ್ದರು. ಅವರುಗಳು ಮಾಡಿದ್ದ ಪ್ರತ್ಯಾರೋಪಗಳ ಪ್ರಕಾರ ಸಲೋನಿಯವರೊಬ್ಬರೇ ವಿತರಣೆ ಕುರಿತಾದ ನಿರ್ಣಯಗಳನ್ನು ತೆಗೆದುಕೊಂಡಿದ್ದು, 'ಅವರ ನೆಚ್ಚಿನ ಪ್ರದೇಶ'ಗಳಿಗೆ ಹೆಚ್ಚಿನ ಪೊಟ್ಟಣಗಳು ವಿತರಣೆಯಾಗಿದ್ದು, ಬಡವರುಗಳಿಗೆ ಅನ್ಯಾಯವಾಗಿದೆ ಎಂಬುದಾಗಿತ್ತು.  

-ಸಲೋನಿಯವರ ಕೋರಿಕೆಯ ಮೇರೆಗೆ ಖಾಸಗಿ ಸಂಸ್ಥೆಗಳು ವಲಸಿಗರಿಗೆ ನೀಡಿದ ತಲಾ ರೂ.೨೦೦೦ಗಳ ನಗದು ವಿತರಣೆಯಲ್ಲಿ ಅಕ್ರಮ ನಡೆದಿದ್ದು, ನಗದು ವಿತರಣೆಯ ಬದಲು ಹಣವನ್ನು ಚೆಕ್ಕುಗಳ ಮುಖಾಂತರ ವಿತರಿಸಬಹುದಿತ್ತು ಎಂಬುದು ಮತ್ತೊಂದು ಆರೋಪವಾಗಿತ್ತು.  

-ತಮ್ಮ ಜಿಲ್ಲೆಯಲ್ಲಿನ ವಲಸಿಗ ಕಟ್ಟಡದ ಕೆಲಸಗಾರರನ್ನು ಲಾಕ್ಡೌನ್ ನೆಪವೊಡ್ಡಿ ಕೆಲಸದಿಂದ ತೆಗೆಯಬಾರದು ಹಾಗೂ ಅವರುಗಳ ಸಂಬಳಗಳನ್ನು ತಡೆ ಹಿಡಿಯಬಾರದಾಗಿ ಜಿಲ್ಲೆಯ ಎಲ್ಲ ನಿರ್ಮಾಣೋದ್ಯಮಿಗಳಿಗೆ ಸಲೋನಿರವರು ಆದೇಶ ನೀಡಿದ್ದರು. ಆದೇಶವನ್ನು ಪಾಲಿಸದ  ಕೆಲವು ನಿರ್ಮಾಣೋದ್ಯಮಿಗಳ ವಿರುದ್ಧ ಸಲೋನಿ, ಪೊಲೀಸ್ ದೂರನ್ನು ದಾಖಲಿಸಿದ್ದರು. ಜಿಲ್ಲೆಯ ಮಂತ್ರಿಗಳಿಗೆ ಈ ಕ್ರಮ ತೀವ್ರ ಮುಜುಗರವನ್ನುಂಟು ಮಾಡಿದ್ದು, ಸಲೋನಿಯವರ ಕ್ರಮ ಸಿಂಧುವಲ್ಲವೆಂಬುದು ಹಲವರ ಅಭಿಪ್ರಾಯವಾಗಿತ್ತು. ಜರುಗಿಸಿದ ಕ್ರಮಗಳೆಲ್ಲವನ್ನೂ ಹಿಂತೆಗೆದುಕೊಳ್ಳುವಂತೆ ಸಲೋನಿಯವರ ಮೇಲೆ ತೀವ್ರ ಒತ್ತಡವನ್ನು ಹೇರಲಾಗಿತ್ತು. 

-ಕೆಲಸವಿಲ್ಲದೆ ಕುಳಿತಿದ್ದ ವಲಸಿಗ ಕಟ್ಟಡದ ಕೆಲಸಗಾರರುಗಳಿಗೆ ಸಲೋನಿರವರು ಸ್ಥಳೀಯ ನಗರ ಪಾಲಿಕೆಯ ಕೆಲಸಗಳನ್ನು ನೀಡಿ ಸಹಾಯ ಮಾಡಿದ್ದರು. ಆ ರೀತಿ ಕೆಲಸಗಳಿಗೆ ಸ್ಥಳೀಯ ಕೆಲಸಗಾರರು ಲಭ್ಯವಿದ್ದರೂ, ಅವರುಗಳನ್ನು ನೇಮಿಸಿಕೊಳ್ಳಲಿಲ್ಲವೇಕೆ ಎಂಬುದೂ ಒಂದು ಆರೋಪವಾಗಿತ್ತು. 

-ವಲಸಿಗ ಕೆಲಸಗಾರರುಗಳ ಪರವಾಗಿ ಯಾರಾದರೂ 'ಆನ್ ಲೈನ್ (online)' ದೂರುಗಳನ್ನು ದಾಖಲಿಸುವ ಸೌಲಭ್ಯವೊಂದನ್ನು ಸಲೋನಿ ಕಲ್ಪಿಸಿದ್ದರು. ಈ ಕ್ರಮದ ಬಗೆಗಿನ ಮಾಹಿತಿ ಅವರ ಹಿರಿಯಧಿಕಾರಿಗಳಿಗೆ ಸಲೋನಿಯವರು ನೀಡಿತ್ತಿಲ್ಲ.

-ತಮ್ಮ ಕಾರ್ಯವ್ಯಾಪ್ತಿಯ ಎಲ್ಲೆಯನ್ನು ಮೀರಿ, ಕೋವಿಡ್ ಪರಿಹಾರ ಕಾರ್ಯಗಳಲ್ಲಿ ಆಗಿರಬಹುದಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸ್ಥಳೀಯ ಕಾರ್ಯಕರ್ತರುಗಳನ್ನೊಳಗೊಂಡ  'ಕೋವಿಡ್ ಸೇನಾನಿಗಳ ಜಾಗೃತ ದಳ'ವೊಂದನ್ನು ಸಲೋನಿ ಆರಂಭಿಸಿದ್ದರು. 

-ಸಲೋನಿಯವರ ಎಲ್ಲ ಕ್ರಮಗಳು ಅತಿಯಾದ ಉತ್ಸಾಹದಿಂದ ಕೂಡಿದ್ದು, ಇಲಾಖೆಯ ನೀತಿ-ನಿಯಮಗಳ ಅನುಸಾರ ಇತ್ತಿಲ್ಲವೆಂಬುದು ಹಲವರ ಅಭಿಪ್ರಾಯವಾಗಿತ್ತು. 

ಈ ಬೆಳವಣಿಗೆಗಳ ಮಧ್ಯೆ ಸಲೋನಿರವರು ಮಾಧ್ಯಮ ಮಿತ್ರರುಗಳೊಂದಿಗೆ ಮಾತನಾಡಿ, 'ತಾನು ತೆಗೆದುಕೊಂಡ ಕ್ರಮಗಳೆಲ್ಲವೂ ವಲಸಿಗ ಕೆಲಸಗಾರರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ತೆಗೆದುಕೊಂಡವುಗಳಾಗಿವೆ. ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಪರಮಾಧಿಕಾರ  ಸರಕಾರಕ್ಕಿದೆ. ಅದರ ಪ್ರಕಾರ ನನ್ನ ಅಧಿಕಾರವನ್ನು ನೇಮಕಗೊಂಡಿರುವ ಹೊಸ ಅಧಿಕಾರಿಗೆ ಹಸ್ತಾಂತರಿಸಿದ್ದೇನೆ. ನನ್ನ ವರ್ಗಾವಣೆ ಕುರಿತು ಹರಿದಾಡುತ್ತಿರುವ ವದಂತಿಗಳು ಈಗ ಅಪ್ರಸ್ತುತ. ಆ ರೀತಿಯ ವದಂತಿಗಳಿಂದ ನಮ್ಮಂತಹ ಸಾರ್ವಜನಿಕ ಸೇವಕರಿಗೆ ಯಾವ ಉಪಯೋಗವೂ ಆಗದು. ಸರಕಾರದ ರೀತಿ-ನೀತಿಗಳ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಮುಂದಿನ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇನೆ. ನನ್ನೊಡನೆ ಸಹಕರಿಸಿ ದುಡಿದ ಎಲ್ಲರಿಗೂ ನಾನು ಆಭಾರಿ' ಎಂದಿದ್ದರು.

ಎಲ್ಲ ವಿಷಯಗಳನ್ನು ಗ್ರಹಿಸಿದ ಮದನ್ ಲಾಲರು ತಮ್ಮ ಸ್ನೇಹಿತೆ ಸಲೋನಿರವರನ್ನು ಕೂಡಲೇ ಸಂಪರ್ಕಿಸಿ,  'ಆದ ಬೆಳವಣಿಗೆಗಳನ್ನೆಲ್ಲ ನಿಭಾಯಿಸಿ ಮುನ್ನಡೆಯುವ ಮನೋಧರ್ಮ ನಿಮ್ಮದು ಎಂದು ನನಗೆ ಗೊತ್ತು. ನಿಮ್ಮ ಕ್ರಮಗಳೆಲ್ಲವೂ ಪ್ರಾಮಾಣಿಕವಾದವಾಗಿದ್ದು, ತಲೆಯೆತ್ತಿ ಸಾಗುವ ಹೆಮ್ಮೆ ನಿಮ್ಮದು. ತಾತ್ಕಾಲಿಕವಾಗಿ ಸ್ವಲ್ಪ ಹಿನ್ನಡೆ ನಿಮಗಾಗಿರಬಹುದು. ಕೆಲವು ದಿನಗಳು ಕಳೆದನಂತರ ಗೆಲುವು ನಿಮ್ಮದೇ ಆಗಿರುತ್ತದೆ. ನೀವು ಜಾರಿಗೊಳಿಸಿದ ಕ್ರಮಗಳೆಲ್ಲವೂ ನ್ಯಾಯಯುತವಾಗಿದ್ದು, ಸರಕಾರ ಕೂಡ ಅವುಗಳನ್ನು ಜಾರಿಗೊಳಿಸಲೇ ಬೇಕಾಗುವ ಪರಿಸ್ಥಿತಿ ಬಂದೇ ಬರುತ್ತದೆ. ಕಾರ್ಮಿಕ ಇಲಾಖೆಯ ಅಧಿಕಾರವನ್ನು ನಿಮ್ಮಿಂದ ವಹಿಸಿಕೊಂಡಿರುವ ಅಧಿಕಾರಿಯೂ, ನೀವಿಟ್ಟ ದಿಟ್ಟ ಹೆಜ್ಜೆಯ  ಗುರುತುಗಳನ್ನು ಅನುಸರಿಸೇ ಸಾಗಬೇಕಾಗುತ್ತೆ. ಎಲ್ಲಿ ಹೋದರೂ ನಿಮ್ಮ ಪ್ರಾಮಾಣಿಕತೆ ಹಾಗೂ  ಉತ್ಸಾಹಗಳು ನಿಮ್ಮೊಂದಿಗಿರಲಿ. ದೇವರ ಆಶೀರ್ವಾದವೂ ನಿಮ್ಮೊಡನಿರಲಿ' ಎಂದರು.

-೦-೦-೦-೦-೦-೦-     

 

 






  

Saturday, 27 February 2021

೩. ಬಡವನ ಸೈಕಲ್

೩. ಬಡವನ ಸೈಕಲ್   



ಅಂದು ೨೦೨೦ರ ಮೇ ತಿಂಗಳ ಕಡೆ ವಾರದ ಸಮಯ. ಸುಮಾರು ಎರಡು ತಿಂಗಳ ಹಿಂದೆ ದೇಶಾದ್ಯಂತ ವಿಧಿಸಿದ ಲಾಕ್ಡೌನ್ ನಿರ್ಬಂಧದಿಂದ  ಗಳಿಸಿದ ಉಪಯೋಗಗಳ ಮಾಹಿತಿಯನ್ನು, ತನ್ನ ಲ್ಯಾಪ್ಟಾಪ್ ಕೆದಕುತ್ತಾ ರೋಹಿಣಿ ಕಲೆಹಾಕುತ್ತಿದ್ದಳು. ವಿಶ್ವದಲ್ಲೇ ಅತ್ಯಂತ ಕಠಿಣ ನಿರ್ಬಂಧನೆಗಳನ್ನೊಳಗೊಂಡ  ಲಾಕ್ಡೌನನ್ನು ಭಾರತ ವಿಧಿಸಿದ್ದರೂ, ಅದರ ಕೋವಿಡ್ ಪೀಡಿತರ ಸಂಖ್ಯೆ ಈಗಾಗಲೇ  ೧.೪ ಲಕ್ಷಗಳನ್ನೂ ಮೀರಿತ್ತು.  ವಿಶ್ವದ ದೇಶಗಳ ಕೋವಿಡ್ ಪಟ್ಟಿಯಲ್ಲಿ ಟರ್ಕಿಯನಂತರದ ೧೦ನೇ ಸ್ಥಾನ ಭಾರತದ್ದಾಗಿತ್ತು. 'ತಡವಾಗಿ ಕೋವಿಡ್ ಕಬಳಿಸಿದ್ದ ಭಾರತವನ್ನು ಅದೃಷ್ಟಶಾಲಿ ಎಂದೇ ಪರಿಗಣಿಸಬಹುದಿತ್ತು.  ಕೋವಿಡ್ ರೋಗಿಗಳ ಸಂಖ್ಯೆ ಕೇವಲ ೬೦೦ ಮಾತ್ರವಿದ್ದಾಗಲೇ ಲಾಕ್ಡೌನ್ ವಿಧಿಸಿದ್ದರೂ, ಪರಿಸ್ಥಿತಿ ಹೀಗೇಕೆ ಕೈಮೀರುತ್ತಿದೆ? ಎರಡು ತಿಂಗಳ ಲಾಕ್ಡೌನ್ಗಾಗಿ ದೇಶದ ಜನತೆ ಮಾಡಿದ ತ್ಯಾಗ ವ್ಯರ್ಥವಾಯ್ತೆ? ಮಾರಕ ವೈರಾಣುವಿನ  ಹರಡುವಿಕೆಯನ್ನು ತಡೆಹಿಡಿಯುವುದರಲ್ಲಿ ನಾವು ವಿಫಲರಾದೆವೆ?' ಎಂಬುದು ರೋಹಿಣಿಯ ಆತಂಕವಾಗಿತ್ತು. 

ಅವಳ ಗೆಳಯ ಡಾ. ಕಿರಣ್  ಇ-ಅಂಚೆ ಮುಖಾಂತರ ಕಳುಹಿಸಿದ್ದ ವಿವಿಧ ದೇಶಗಳ ಕೋವಿಡ್ ಪೀಡಿತರ ಅಂಕಿಅಂಶಗಳನ್ನು ಅವಲೋಕಿಸಿದಾಗಲೇ, ರೋಹಿಣಿಗೆ ನಿಜವಾದ ಪರಿಸ್ಥಿತಿಯ ಅರಿವಾಗಿದ್ದು. ಆ ಅಂಕಿಅಂಶಗಳು ಅಂದು ಕೆಳಕಂಡಂತ್ತಿದ್ದವು. 

ವಿಶ್ವಾದ್ಯಂತದ ೫೫ ಲಕ್ಷ ಕೋವಿಡ್ ಪೀಡಿತರ ಪೈಕಿ, ೧೬.೪೪ ಲಕ್ಷ (ಸುಮಾರು ೩೦%) ಪೀಡಿತರು ಅಮೆರಿಕದಲ್ಲೇ  ಇದ್ದರು. ಆ ದಿನಗಳಲ್ಲಿ ಭಾರತದಲ್ಲಿ ಪ್ರತಿನಿತ್ಯ ೭೦೦೦ ಹೊಸ ರೋಗಿಗಳ ಪತ್ತೆಯಾಗುತ್ತಿದ್ದು, ಒಟ್ಟು ಸಂಖ್ಯೆ ೧೫ ದಿನಗಳೊಳಗೆ ದ್ವಿಗುಣಗೊಳ್ಳುತ್ತಿತ್ತು. ಭಾರತದಲ್ಲಿ ಚೇತರಿಸಿಕೊಂಡವರ ಒಟ್ಟು ಸಂಖ್ಯೆ ಸುಮಾರು ೬೦,೦೦೦ (೪೩%)ವಾದರೆ, ಸಾವುಗಳ ಸಂಖ್ಯೆ ಸುಮಾರ ೪೦೦೦ (೨.೮%)ವಾಗಿತ್ತು. ಭಾರತದಲ್ಲಿನ ಕೋವಿಡ್ ಪರೀಕ್ಷಾ ಅನುಪಾತ ಪ್ರತಿ ೧೦೦೦ ಜನಸಂಖ್ಯೆಗೆ ಕೇವಲ ೨ ಮಾತ್ರವಿದ್ದದ್ದು, ಪೀಡಿತರ ಹಾಗು ಸಾವುಗಳ ಸಂಖ್ಯೆ ಇನ್ನೂ ಭಾರಿ ಪ್ರಮಾಣದಲ್ಲಿವೆಯೇನೋ ಎಂಬ ಆತಂಕಕ್ಕೆ ಕಾರಣವಾಗಿತ್ತು. ರಷ್ಯಾ, ಇಟಲಿ ಹಾಗೂ  ಅಮೇರಿಕಾಗಳ  ಪರೀಕ್ಷಾ ಅಂಕಿ-ಅಂಶಗಳ ಅನುಪಾತ ಪ್ರತಿ ಸಾವಿರ ಜನಸಂಖ್ಯೆಗೆ ಕ್ರಮವಾಗಿ ೬೦, ೫೬ ಮತ್ತು ೪೨ ಆಗಿದ್ದು, ಭಾರತವೇಕೆ ಹಿಂದೆ ಬಿದ್ದಿದೆ ಎಂಬುದು ರೋಹಿಣಿಯ ಕಳವಳವಾಗಿತ್ತು. 

ರೋಹಿಣಿ ತನ್ನ ಗೆಳಯ ಡಾ. ಕಿರಣ್ ಗೆ ಉತ್ತರಿಸುತ್ತಾ, 'ಭಾರತದಲ್ಲಿ ಕೋವಿಡ್ ಪರೀಕ್ಷಾ ಪರಿಕರಗಳು ಇನ್ನೂ ದುರ್ಲಭವಾಗಿದ್ದು, ಪ್ರಯಾಣದ ಹಿನ್ನೆಲೆಯುಳ್ಳವರು ಮತ್ತವರ ನೇರ ಮತ್ತು ಪರೋಕ್ಷ ಸಂಪರ್ಕವುಳ್ಳವರುಗಳನ್ನು ಮಾತ್ರ ಪರೀಕ್ಷೆಗೊಳಪಡಿಸುತ್ತಿರುವುದು ಸೂಕ್ತ. ಜೊತೆಗೆ, ಸತತ ಸಂಪರ್ಕದಲ್ಲಿರುವ ಕಾರಣ ಸೋಂಕಿನ ಸಾಧ್ಯತೆ ಹೆಚ್ಚಾಗಿರುವುದರಿಂದ ಕೊರೋನಾ ಸೇನಾನಿಗಳ ಮೇಲೂ  ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸುತ್ತಿರುವುದು ಸರಿ' ಎಂದು ವಾದಿಸಿದ್ದಳು.

ಡಾ. ಕಿರಣನ ಉತ್ತರ ರೋಹಿಣಿಯನ್ನು ಎಚ್ಚರಿಸುವಲ್ಲಿ ಹೆಚ್ಚು ಸಮರ್ಪಕವಾಗಿತ್ತು.  'ರೋಹಿಣಿ, ಈಗಾಗಲೇ ನಮ್ಮ ದೇಶದಲ್ಲಿ ಪ್ರತಿ ೧೦೦ ಪರೀಕ್ಷೆಗಳಿಗೆ, ೫ರಷ್ಟು ಕೋವಿಡ್ ರೋಗಿಗಳು ಪತ್ತೆಯಾಗುತ್ತಿದ್ದಾರೆ. ನಮ್ಮ ದೇಶದ ಹೊಸ ರೋಗಿಗಳ ಪತ್ತೆಯ ದರವನ್ನು ಅತ್ಯಂತ ಹೆಚ್ಚು ಪೀಡಿತ ದೇಶಗಳಿಗೆ ಹೋಲಿಸಿದರೂ, ಕಮ್ಮಿಯೇನಲ್ಲ. ನೀನು ಅನುಮಾನಿಸಿದಂತೆ, ನಮ್ಮ ದೇಶದಲ್ಲಿ ಸೋಂಕಿನ ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳ ಮೇಲೇ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ, ರೋಗಿಗಳ ಪತ್ತೆಯ ಪ್ರಮಾಣ ಹೆಚ್ಚಾಗಿದೆ. ನಾವೀಗ ಲಾಕ್ಡೌನಿನ ನಾಲ್ಕನೇ ಹಂತದಲ್ಲಿದ್ದು, ಎರಡು ತಿಂಗಳ ಹಿಂದೆ ವಿಧಿಸಿದ ಲಾಕ್ಡೌನಿನ ಮೊದಲ ಹಂತಕ್ಕೆ ಹೋಲಿಸಿದರೆ, ನಿರ್ಬಂಧಗಳನ್ನು ಸಾಕಷ್ಟು ಸಡಿಲಿಸಿರುವುದು ಸೋಂಕಿತರ ಪ್ರಮಾಣದ ತೀವ್ರ ಹೆಚ್ಚಳಕ್ಕೆ ಕಾರಣವಾಗಿರಬಹುದು. ಸೋಂಕಿನ ತೀವ್ರತೆಯ ಸರಿ ಪ್ರಮಾಣವನ್ನು ತಿಳಿಯಬೇಕಾದರೆ, ಪರೀಕ್ಷೆಯ ಸಂಖ್ಯೆಗಳನ್ನು ಹೆಚ್ಚಿಸುವುದೊಂದೇ ಉಳಿದಿರುವ ಮಾರ್ಗ. ಆದರೆ ನಮ್ಮ ದೇಶದ ಸೋಂಕಿತರಲ್ಲಿನ  "ಸಾವುಗಳ ದರ" ಕೇವಲ ೨.೮% ಮಾತ್ರವಿದ್ದು, ಇದನ್ನು ವಿಶ್ವದಲ್ಲೇ ಕನಿಷ್ಠವೆಂದು ಹೇಳಬಹದು. ವಿಶ್ವದ ಸರಾಸರಿ ಸಾವಿನ ದರ ೬.೮%ರಷ್ಟಿದ್ದು, ಹೆಚ್ಚು ಕಳವಳಕಾರಿಯಾಗಿದೆ. ಲಾಕ್ಡೌನನ್ನು ಬೇಗ ವಿಧಿಸಿದ್ದು, ಪರೀಕ್ಷೆ ಮತ್ತು ಸೋಂಕಿತರ ಚಿಕಿತ್ಸೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಡೆಸುತ್ತಿರುವುದು ನಮ್ಮ ಸಾವಿನ ದರವನ್ನು ಕಮ್ಮಿಮಾಡುವುದರಲ್ಲಿ ಸಹಕಾರಿಯಾಗಿದೆ ಎನ್ನಬಹದು. ಯುವಕರೇ ಹೆಚ್ಚಿರುವ ನಮ್ಮ ದೇಶದಲ್ಲಿನ ಜನತೆಗೆ ರೋಗನಿರೋಧಕ ಶಕ್ತಿ ಹೆಚ್ಚಿರುವುದೂ, ಸಾವುಗಳ ದರವನ್ನು ನಿಯಂತ್ರಿಸುವಲ್ಲಿ ಅನುಕೂಲಕರ ಪರಿಣಾಮವನ್ನು ಉಂಟು ಮಾಡಿರಬಹುದು,' ಎಂಬ ವಿವರಣೆಗೆ ಸಂಶೋಧಕಿ ರೋಹಿಣಿ ತಲೆದೂಗಿದ್ದಳು.  

ಭಾರತದಲ್ಲಿನ ಮೊದಲ ಹಂತದ  ೨೧ ದಿನಗಳ ಲಾಕ್ಡೌನ್, ಇಡೀ ವಿಶ್ವದಲ್ಲೇ ಅತ್ಯಂತ ಕಠಿಣ ಮಾದರಿಯದಾಗಿದ್ದು, ಕೆಳಕಂಡ ನಿರ್ಬಂಧನೆಗಳಿಂದ ಕೂಡಿತ್ತು. 

-ಶಾಲೆಗಳು, ಕಾಲೇಜುಗಳು ಹಾಗು ಕಾರ್ಯಾಲಯಗಳು ಸಂಪೂರ್ಣವಾಗಿ ಮುಚ್ಚಿದ್ದವು. 

-ಅವಶ್ಯಕ ವಸ್ತುಗಳ ವ್ಯಾಪಾರವನ್ನು ಹೊರತು ಪಡಿಸಿ, ಮಿಕ್ಕೆಲ್ಲ ವ್ಯಾಪಾರಗಳನ್ನು ಸ್ಥಗಿತಗೊಳಿಸಲಾಗಿತ್ತು. 

-ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. 

-ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಲ್ಲಿಸಲಾಗಿತ್ತು. 

-ಎಲ್ಲ ಮಾಧ್ಯಮಗಳ ಮುಖಾಂತರ ಸಾರ್ವಜನಿಕರಿಗೆ ಸೂಕ್ತ ತಿಳುವಳಿಕೆ ನೀಡಲಾಗಿತ್ತು. 

-ಅವಶ್ಯಕವಾದ ಆರ್ಥಿಕ ಪರಿಹಾರಗಳನ್ನು ಜಾರಿಗೊಳಿಸಲಾಗಿತ್ತು. 

-ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು. 

-ಕೋವಿಡ್ ಪರೀಕ್ಷಾ ವಿಧಿಗಳನ್ನು ಚುರುಕುಗೊಳಿಸಲಾಗಿತ್ತು. 

-ಕೋವಿಡ್ ರೋಗಿಗಳೊಂದಿಗಿನ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಪ್ರತ್ಯೇಕವಾಗಿರಿಸುವ  ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿತ್ತು. 

-ಕೋವಿಡ್ ಪರೀಕ್ಷೆ, ಚಿಕಿತ್ಸೆ ಹಾಗು ಲಸಿಕೆಗಳಿಗೆ ಸಂಬಂಧಪಟ್ಟ ಸಂಶೋಧನೆಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು. 

-ವಲಸೆ ಕಾರ್ಮಿಕರ ಬವಣೆಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ ಎಂಬುದು ಸರಕಾರಗಳ ಹೇಳಿಕೆಯಾಗಿತ್ತು.  

'ನಿರ್ಬಂಧನೆಗಳ ಪಟ್ಟಿಯೇನೋ ಜೋರಾಗೆ ಇದೆ. ಆದರೆ ಅವುಗಳ ನಿರ್ವಹಣೆ ಸಮರ್ಪಕವಾಗಿದೆಯೆ?' ಎಂಬುದು ರೋಹಿಣಿಯ ಪ್ರಶ್ನೆಯಾಗಿತ್ತು.  ಗೆಳಯ ಡಾ. ಕಿರಣನ ಉತ್ತರ ತೀಕ್ಷ್ಣವಾಗೇ ಇತ್ತು.  'ನಮ್ಮ ದೇಶದ ಇತಿ-ಮಿತಿಗಳೊಳಗೆ ಪರಿಶೀಲಿಸಿದರೆ, ನಿರ್ಬಂಧಗಳ ಅನುಷ್ಠಾನ ಸಮರ್ಪಕವಾಗಿಯೇ ಇದೆ. ಆದರೆ ವಲಸೆ ಕಾರ್ಮಿಕರ ಕಷ್ಟಗಳನ್ನು ಮಾತ್ರ ಹೇಳತೀರದು. ಅವರುಗಳಿಗುಂಟಾಗಬಹುದಾದ ಬವಣೆಗಳ ಬಗ್ಗೆ ಸರಕಾರಗಳು ಮುಂಜಾಗರೂಕತೆ ವಹಿಸದೆ ಕಣ್ಣುಮುಚ್ಚಿ ಕುಳಿತದ್ದು ಮಾತ್ರ ವಿಪರ್ಯಾಸವೇ ಸರಿ. ಅವರುಗಳ ಸಮಸ್ಯೆಗಳು ಬುಗಿಲೆದ್ದ ಮೇಲೂ ಪರಿಹಾರಕ್ಕೆಂದು ಕೈಕೊಂಡ ಕ್ರಮಗಳು ಏನೇನೂ ಸಾಲದು. 

ವರ್ಷಾರಂಭದ ಜನವರಿಯಿಂದ, ಮಾರ್ಚ್ ೨೫ರಂದು  ಲಾಕ್ಡೌನ್ ವಿಧಿಸುವವರೆಗೂ ಸುಮಾರು ೧೫ ಲಕ್ಷಗಳಿಗೂ ಹೆಚ್ಚು ಪ್ರಯಾಣಿಕರು ವಿದೇಶಗಳಿಂದ ಭಾರತಕ್ಕೆ ಬಂದಿದ್ದಾರೆ. ಅವರ್ಯಾರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸದೆ ಇದ್ದದೂ ಬೇಜಾಬ್ದಾರಿಯ ಪರಮಾವಧಿಯೇ ಸರಿ. 

ವಿಶ್ವ ಖ್ಯಾತಿಯ ಗಾಯಕ-ನರ್ತಕ ಮೈಕೆಲ್ ಕಿಶೋರ್ ಮಿಶ್ರನ ವಿಷಯದಲ್ಲಿ ಏನಾಯ್ತು ಎಂಬುದು ನಿನಗೆ ಗೊತ್ತಿರಬಹುದು! ಪಾಪ್ ಜಗತ್ತಿನ ಮಹಾನ್ ತಾರೆ ಮೈಕೆಲ್ ಜ್ಯಾಕ್ಸನನ ಮರು ಅವತಾರವೆಂದೇ ಕಿಶೋರ್ ಮಿಶ್ರನನ್ನು ಅವನ ಅಭಿಮಾನಿಗಳು ಭಾವಿಸಿದ್ದಾರೆ. ಹಾಗಾಗೇ ಅವನಿಗೆ ಅವರುಗಳು  'ಮೈಕೆಲ್' ಎಂಬ ಬಿರುದನ್ನೂ ನೀಡಿದ್ದಾರೆ. ಕೀರ್ತಿಶೇಷ ಮಹಾನ್ ಕಥಕ್ ನರ್ತಕರಾದ ವಿಶ್ವನಾಥ್ ಮಿಶ್ರಾಜಿರವರ ಮೊಮ್ಮಗನಾದ ಮೈಕೆಲ್, ಪಾಪ್ ನೃತ್ಯಗಳ ಶೈಲಿಯೊಂದಿಗೆ ಕಥಕ್ನ ಭಾವ-ಭಂಗಿಗಳನ್ನೂ ಸಮ್ಮಿಳನಗೊಳಿಸಿ ಸಿದ್ಧಪಡಿಸಿರುವ ಹೊಸ ನೃತ್ಯದ ಆವಿಷ್ಕಾರಕ್ಕೆ, ಇಡೀ ಉಪಖಂಡದ ಅಭಿಮಾನಿಗಳೇ ಹುಚ್ಚೆದ್ದಿರುವುದು ನಿನಗೂ ತಿಳಿದಿರಬಹುದು.  

ಯೂರೋಪ್ನ ಖ್ಯಾತ ನಗರವೊಂದರಲ್ಲಿ ತನ್ನ ತಂದೆ-ತಾಯಿಯರೊಂದಿಗೆ ಕೆಲವು ವಾರಗಳನ್ನು ೨೦೨೦ರ ಫೆಬ್ರವರಿ ತಿಂಗಳಲ್ಲಿ ಕಳೆದ ಮೈಕೆಲ್, ಅದೇ ನಗರದಲ್ಲಿ ಒಂದೆರಡು ಕಾರ್ಯಕ್ರಮಗಳನ್ನೂ ನೀಡಿದ್ದನು. ಆ ಕಾರ್ಯಕ್ರಮಗಳಲ್ಲಿ ಕಿಕ್ಕಿರಿದ ಪ್ರೇಕ್ಷೆಕರಲ್ಲಿ ಭಾರತೀಯ ಮೂಲದವರೇ ಹೆಚ್ಚಾಗಿದ್ದರು. 

೨೦೨೦ರ ಮಾರ್ಚ್ ೨೦ರ ಮೊದಲ ವಾರದಲ್ಲಿ ಮೈಕೆಲ್ ಯೂರೋಪಿನಿಂದ ಭಾರತಕ್ಕೆ ಪ್ರಯಾಣಿಸಿದ್ದನು. ವಿಶ್ವ ವಿಖ್ಯಾತನಾದ ಮೈಕೆಲನಿಗೆ ಭಾರತದ ವಿಮಾನ ನಿಲ್ದಾಣದಲ್ಲಿ ಯಾವುದೇ ತಡೆಯೊಡ್ಡದೆ ಒಳ ಬರಲು ಅನುಮತಿ ನೀಡಿದ್ದರೂ, ಆರೋಗ್ಯಾಧಿಕಾರಿಗಳು ಅವನಿಗೆ ಎರಡು ವಾರಗಳ ಸ್ವಯಂ-ನಿರ್ಬಂಧನೆಯೊಳಗಿರುವಂತೆ ಸೂಚಿಸಿದ್ದರು. ಎಲ್ಲರೊಡನೆ ಬೆರೆಯುವ ಮುನ್ನ ಕೋವಿಡ್ ಪರೀಕ್ಷೆಗೊಳಪಡುವಂತೆಯೂ ಸೂಚಿಸಲಾಗಿತ್ತು. ಸೂಚಿಸಿದ ಯಾವುದೇ ಮುಂಜಾಗರೂಕತೆಗಳಿಗೂ 'ಕ್ಯಾರೆ' ಎನ್ನದ ಮೈಕೆಲ್ ಎಗ್ಗಿಲ್ಲದೆ ಪ್ರಯಾಣಿಸಿದ್ದು ಮಾತ್ರ ವಿಷಾದಕರವೇ ಸರಿ. ಭಾರತಾದ್ಯಂತದ  ವಿವಿಧ ನಗರಗಳಲ್ಲಿ ಮೈಕೇಲನ ಬಹು ಪ್ರಚಾರಿತ ಕಾರ್ಯಕ್ರಮಗಳಿಗಾಗಲೇ ದಿನಾಂಕಗಳ ನಿಗದಿಯಾಗಿತ್ತು. ಮೈಕೇಲನ ಮೊದಲ ವಿಮಾನ ಪ್ರಯಾಣ, ಸುಮಾರು ೧೫೦೦ ಕಿ.ಮೀ. ದೂರವಿರುವ ಅವನ ಸ್ವಂತದೂರಿಗಾಗಿತ್ತು. ಅವನೂರಿನ ಭಾನುವಾರದ ಕಾರ್ಯಕ್ರಮದಲ್ಲಿ ಪ್ರಖ್ಯಾತ ರಾಜಕಾರಣಿಗಳನ್ನೂ ಒಳಗೊಂಡಂತೆ ಸುಮಾರು ೧೦೦೦ಕ್ಕೂ ಹೆಚ್ಚು ಗಣ್ಯಾತಿಗಣ್ಯರು ಸೇರಿದ್ದರು. ಭಾರತದ ಪ್ರಖ್ಯಾತ ಕೈಗಾರಿಕೋದ್ಯಮಿ, ಬದ್ರಿಪ್ರಸಾದರು ತಮ್ಮ ಮಗಳಾದ ಕಾಮಿನಿಯೊಂದಿಗೆ ಆಗಮಿಸಿದ್ದರು. ಹಾರ್ವರ್ಡ್ ಎಂಬಿಎ ಪದವೀಧರೆಯಾಗಿದ್ದ ನವ ತರುಣಿ ಕಾಮಿನಿ ವಿಶ್ವಾದ್ಯಂತ ಹಲವಾರು ಪ್ರತಿಷ್ಠಿತ ಉದ್ದಿಮೆಗಳನ್ನು ಖರೀದಿಸಿ ಪ್ರಖ್ಯಾತೆಯಾಗಿದ್ದಳು. ಮೈಕೇಲನನ್ನು ಹೊರತು ಪಡಿಸಿ, ಸಮಾರಂಭದ ಮುಖ್ಯಾಕರ್ಷಣೆ ಸುಂದರ ಯುವತಿ ಕಾಮಿನಿಯಾಗಿದ್ದಳು ಎಂಬುದು ಸುಳ್ಳಾಗಿತ್ತಿಲ್ಲ. 

ಸಮಾರಂಭದಲ್ಲಿ ನೆರೆದ ಪ್ರತಿಯೊಬ್ಬರೂ ಮೋಹಕ ತರುಣ ಮೈಕೇಲನ ಕೈಕುಲುಕಿ, ಸೆಲ್ಫಿಯೊಂದನ್ನು ಪಡೆಯಲು ಹಾತೊರೆಯುತ್ತಿದ್ದರು. ಬಹು ವರ್ಷಗಳನಂತರ ತನ್ನೂರಿನಲ್ಲಿ ಕಾರ್ಯಕ್ರಮ ನಡೆಸಿಕೊಡುವ ಉತ್ಸಾಹದಿಂದ ಉತ್ತೇಜಿನಾದಂತೆ ಕಂಡ ಮೈಕೆಲ್,  "ಸ್ವಯಂ ನಿರ್ಬಂಧ"ದ ಎಗ್ಗಿಲ್ಲದೆ ಎಲ್ಲರೊಡನೆ ಬೆರೆಯುತ್ತಿದ್ದದ್ದು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತ್ತು. ಸುಮಾರು ಎರಡು ಘಂಟೆಗಳ ಕಾಲ ನಡೆದ ಅಭೂತಪೂರ್ವ ನೃತ್ಯ ಕಾರ್ಯಕ್ರಮವನ್ನು ನೋಡಿ ನೆರೆದವರೆಲ್ಲರೂ ಮೂಕವಿಸ್ಮಿತರಾಗಿದ್ದರು. 

ನೃತ್ಯದ ಕಾರ್ಯಕ್ರಮ ಮುಗಿದನಂತರ, ನೆರಳು ಬೆಳಕಿನ ಪಂಚತಾರಾ ಭೋಜನ ಕೂಟದ ಸಮಯ. ವಿಶ್ವಮಾನ್ಯ ದುಬಾರಿ ಮದ್ಯಗಳ ವಿತರಣೆಯೊಂದಿಗೆ ಆರಂಭವಾದ ಕೂಟದ ರಂಗೇರಿತ್ತು. ಅಭಿಮಾನಿಗಳ ಉತ್ಸಾಹಕ್ಕೆ ಪುಳಕಿತನಾದ ಮೈಕೆಲ್ ಗಣ್ಯಾತಿಗಣ್ಯರುಗಳು ಆಸೀನರಾದ ಪ್ರತಿ ಮೇಜುಗಳ ಬಳಿಯೂ ತೆರಳಿ ಉಭಯ ಕುಶಲೋಪರಿ ನಡೆಸುತ್ತಿದ್ದನು. ಬದ್ರಿಪ್ರಸಾದರ ಕಣ್ಸನ್ನೆಯ ಅಯಸ್ಕಾಂತಕ್ಕೆ  ಸೂಜಿಯಂತೆ  ಆಕರ್ಷಿತನಾದ ಮೈಕೆಲ್, ತಂದೆ ಮಗಳ ನಡುವಿನ ಆಸನವನ್ನು ಕ್ಷಣಾರ್ಧದಲ್ಲಿ ಆಕ್ರಮಿಸಿ ಕುಳಿತು ಸಂಭ್ರಮಿಸಿದ್ದನು. ಆಗ ಸಭಿಕರೆಲ್ಲರೂ ತಮ್ಮ ಕಣ್ಣುಗಳನ್ನು ಮೈಕೆಲ್-ಕಾಮಿನಿಯರ ಮೇಲೇ ಹಾಯಿಸಿದ್ದು ಗುಟ್ಟಾಗಿ ಉಳಿದಿರಲಿಲ್ಲ. ಮೈಕೆಲ್-ಕಾಮಿನಿಯರು ಪರಸ್ಪರ ಕೈ-ಕೈ ಮಿಲಾಯಿಸಿ, ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಕ್ಷಣಗಳಲ್ಲಿ, ತಂದೆ ಬದ್ರಿಪ್ರಸಾದರು ಮೂಕ ಪ್ರೇಕ್ಷಕರು ಮಾತ್ರವಾಗಿದ್ದರು. ನಾಳಿನ ಮಾಧ್ಯಮಗಳ ಮುಖಪುಟದ ಸಿಂಗಾರಕ್ಕೋ ಎಂಬಂತೆ, ಸುತ್ತಲಿದ್ದ ಛಾಯಾಗ್ರಾಹಕರೆಲ್ಲರೂ ಮೈಕೆಲ್-ಕಾಮಿನಿಯರ ಜೋಡಿಯ ಆಪ್ತತೆಯ ಕ್ಷಣಗಳನ್ನು ಕ್ಲಿಕ್ಕಿಸಿದ್ದಕ್ಕೆ  ಲೆಕ್ಕವಿತ್ತಿಲ್ಲ.  ಇಂತಹ ಆಪ್ತತೆಯ ಕ್ಷಣಗಳ ನಡುವೆ ಗಣ್ಯಾತಿಗಣ್ಯರುಗಳ ನಡುವೆ ಮೈಕೆಲ್-ಕಾಮಿನಿಯರ ಜೋಡಿ ಕುರಿತ ಗುಸುಗುಸುಗಳು ಹರಿದಾಡ ತೊಡಗಿದ್ದವು. ಭೋಜನ ಕೂಟ ಮುಗಿಯುವ ಹೊತ್ತಿಗೆ ನಡುರಾತ್ರಿಯಾಗಿ ಹೋಗಿತ್ತು. 

ಮರು ದಿನವೂ ಮೈಕೆಲನ ಓಡಾಟ ಭರದಿಂದ ಸಾಗಿತ್ತು. ನಗರದ ಗಣ್ಯ ಉದ್ದಿಮೆದಾರರು, ಚಿತ್ರೋದ್ಯಮದ ಗಣ್ಯರು ಮತ್ತು ರಾಜಕಾರಣಿಗಳ ಜೊತೆಗಿನ ಭೇಟಿಯ ಸರಣಿ ಮುಂದುವರೆದಿತ್ತು. ಐದು ಹಿರಿಯ ಮಂತ್ರಿಗಳೊಂದಿಗಿನ ಪೂರ್ವ ನಿರ್ಧಾರಿತ ಭೇಟಿಗಳನ್ನು ಕೂಡ ಮೈಕೆಲ್ ಮರೆಯಲಿಲ್ಲ. ಮೈಕೆಲ್ ಹೋದಲೆಲ್ಲಾ ನೆರಳಿನಂತೆ  ಹಿಂಬಾಲಿಸಿದವರು ಬದ್ರಿಪ್ರಸಾದ್ ಮತ್ತವರ ಮುದ್ದು ಮಗಳು ಕಾಮಿನಿ.  

ಅಂದಿನ ಮಂಗಳವಾರದಂದೇ  ಬದ್ರಿಪ್ರಸಾದ್ರವರು ತಮ್ಮ ಕಂಪನಿಯ ಬೋರ್ಡ್ ಸದಸ್ಯರ ಸಭೆಯನ್ನು ಏರ್ಪಡಿಸಿದ್ದು ವಿಶೇಷವಾಗಿತ್ತು. ಸಭೆಯನಂತರದ ರಾತ್ರಿ ಭೋಜನ ಕೂಟಕ್ಕೆ ವಿಶೇಷ ಅತಿಥಿಯಾಗಿದ್ದವನು ಮೈಕೇಲನೇ ಎಂದು ಬೇರೆ ಹೇಳಬೇಕಿತ್ತಿಲ್ಲ. ಕಾಮಿನಿ-ಮೈಕೆಲ್ರವರ ವಿವಾಹದ ಬಗ್ಗೆ ಬೋರ್ಡ್ ಸದಸ್ಯ ಮಿತ್ರರ ಪ್ರಶ್ನೆಗೆ, ಬದ್ರಿಪ್ರಸಾದರ ಕಣ್ಣಲ್ಲಿ ಹಾಯ್ದ ಕಿರುಮಿಂಚೊನ್ದೆ ಉತ್ತರವಾಗಿತ್ತು. 

ಬೋರ್ಡ್ ಮೀಟಿಂಗ್ ನಂತರದ  ದಿನ, ಮೈಕೆಲನ ಕಾರ್ಯಕ್ರಮ, ದೇಶದ ಖ್ಯಾತ ಚಲನಚಿತ್ರ ನಿರ್ಮಾಪಕರೊಬ್ಬರು ಏರ್ಪಡಿಸಿದ್ದ ಭೋಜನ ಕೂಟವೊಂದಾಗಿತ್ತು.  ದೇಶದ ಚಿತ್ರೋದ್ಯಮದ ಪ್ರಮುಖರು, ಉದ್ಯೋಗಪತಿಗಳು, ಶಾಸಕರು ಹಾಗು ಸಂಸದರುಗಳು ಈ ಕೂಟದ ಆಹ್ವಾನಿತರುಗಳಾಗಿದ್ದರು. ಈ ಭೋಜನ ಕೂಟವನ್ನೇರ್ಪಡಿಸಿದ್ದ ನಿರ್ಮಾಪಕರು ಮೈಕೇಲನನ್ನು ನಾಯಕ ನಟನನ್ನಾಗಿಸಿ ತಯಾರಿಸಲು ಯೋಜಿಸಿರುವ ಭಾರಿ ವೆಚ್ಚದ ಚಲನ ಚಿತ್ರದ ಬಗೆಗಿನ ವದಂತಿಗಳ ಗುಸುಗುಸು ಜೋರಾಗಿತ್ತು. ಮೈಕೆಲ್, ಆಗಮಿಸಿದ ಗಣ್ಯರೆಲ್ಲರ ಕೈ ಕುಲುಕಿ ಅವರುಗಳನ್ನು ತಬ್ಬಿದ್ದು ಎಲ್ಲರಿಗೂ ಸಂತಸ ತಂದಿತ್ತು. 

ನಂತರದ ಶುಕ್ರವಾರ ಮಾತ್ರ ವಿಪತ್ತಿನ ದಿನವಾಗಿತ್ತು. ವೈದ್ಯರು ನೀಡಿದ ಹಲವು ದಿನಗಳ ಹಿಂದಿನ ಸಲಹೆಯಂತೆ ಮೈಕೆಲ್ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಅವನಿಗೂ ಹಾಗು ಅವನ ವೈದ್ಯರುಗಳಿಗೂ ಅಚ್ಚರಿಯ ಫಲಿತಾಂಶವನ್ನು ತಂದಿತ್ತು. ಮೈಕೆಲ್ ಕೋವಿಡ್ ಸೋಂಕಿತನೆಂಬ ಫಲಿತಾಂಶ ಹೊರಬಿದ್ದು, ಆ ಸುದ್ದಿ ಕಾಳ್ಗಿಚ್ಚಿನಂತೆ ಹರಡ ತೊಡಗಿತ್ತು. ಕಳೆದ ಒಂದು ವಾರದ ಕಾರ್ಯಕ್ರಮಗಳಲ್ಲಿ ಅವನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಲ್ಲ ಗಣ್ಯರ ಹಾಗು ಜನಸಾಮಾನ್ಯರ ಎದೆಯಲ್ಲಿ ನಡುಕವುಂಟಾಗಿತ್ತು. ಮೈಕೆಲ್ ಓಡಾಡಿದ ನಗರಗಳ ನಡುವೆಲ್ಲಾ ಆತಂಕದ ಕರೆಗಳ ಸರಣಿಯೇ ಹರಿದಾಡಿತ್ತು. 

ಬದ್ರಿಪ್ರಸಾದ್ ಮತ್ತು ಕಾಮಿನಿಯವರುಗಳನ್ನೋಳಗೊಂಡಂತೆ, ಮೈಕೆಲ್ ಸಂಪರ್ಕದಲ್ಲಿದ್ದವರೆಲ್ಲರೂ ಕೂಡಲೇ ಕೋವಿಡ್ ಪರೀಕ್ಷೆಗೊಳಪಟ್ಟಿದ್ದೂ ಆಯ್ತು ಮತ್ತು ವೈದ್ಯರ ಸಲಹೆಯಂತೆ ಎರಡು ವಾರಗಳ ನಿರ್ಬಂಧನೆಗೆ ಒಳಪಟ್ಟಿದ್ದೂ ಆಯ್ತು. ಪರೀಕ್ಷೆಗೊಳಪಟ್ಟ ಮತ್ತು ಸ್ವಯಂ ನಿರ್ಬಂಧನೆಗೊಳಗಾದ ವಿಷಯವನ್ನು ಬದ್ರಿಪ್ರಸಾದ್ ಹಾಗು ಕಾಮಿನಿಯವರೇ ಎಲ್ಲರಿಗು ಟ್ವಿಟ್ಟರ್ ಮೂಲಕ ತಿಳಿಯಪಡಿಸಿ, ಮೈಕೇಲನ ಕೋವಿಡ್ ಸೋಂಕಿನ ಬಗ್ಗೆ ತಮಗ್ಯಾವ ಮುನ್ಸೂಚನೆಯಾಗಲಿ, ಅನುಮಾನಗಳಾಗಲಿ ಇರಲಿಲ್ಲವೆಂಬುದನ್ನು ಸ್ಪಷ್ಟಪಡಿಸಿ, ತಮ್ಮಗಳ ಸಂಪರ್ಕದಲ್ಲಿದ್ದವರೆಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಕೂಡ ಮಾಡಿಕೊಂಡದ್ದೂ ಆಯ್ತು. 

ಮರುದಿನವೇ ಮೈಕೆಲ್ ಕೋವಿಡ್ ಸೋಂಕಿತನಾಗಿರುವ ವಿಷಯ ಎಲ್ಲಾ ಮಾಧ್ಯಮಗಳಲ್ಲೂ ಭಾರಿ ಸಂಚಲನವನ್ನುಂಟುಮಾಡಿತ್ತು. ಎರಡು ವಾರಗಳ ಸ್ವಯಂ-ನಿರ್ಬಂಧನೆಯಲ್ಲಿರುವಂತೆಯೂ ಮತ್ತು   ಸಾರ್ವಜನಿಕರುಗಳ ನಡುವೆ ಬೆರೆಯುವ ಮುನ್ನ ಕೋವಿಡ್ ಸೋಂಕಿನಿಂದ ಮುಕ್ತನೆಂಬುದನ್ನು ಖಾತರಿ ಪಡಿಸಿಕೊಳ್ಳಬೇಕೆಂಬ ವೈದ್ಯರ ಸೂಚನೆಗಳನ್ನು ಗಾಳಿಗೆ ತೂರಿ, ಎಲ್ಲರೊಡನೆ ಬೆರೆತು, ಅವರೆಲ್ಲರಿಗೂ ಕೋವಿಡ್ನ ಆತಂಕವುಂಟುಮಾಡಿದ ಮೈಕೆಲನ ಬೇಜಾಬ್ದಾರಿ ವರ್ತನೆಗೆ, ಎಲ್ಲಾ ಮಾಧ್ಯಮಗಳಲ್ಲೂ  ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸಂಬಂಧಪಟ್ಟ ರಾಜ್ಯ ಸರಕಾರವು ಸುಮಾರು ೪೦೦ ಪೊಲೀಸ್ ಕರ್ಮಚಾರಿಗಳನ್ನೊಳಗೊಂಡ ೨೦ ತಂಡಗಳನ್ನು ರಚಿಸಿ, ಮೈಕೆಲನೊಡನೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಂಪರ್ಕದಲ್ಲಿದ್ದರ ಪತ್ತೆಗೆ ಮುಂದಾಗಿತ್ತು. ಆ ರೀತಿಯ ಸುಮಾರು ೨೦೦೦ದಷ್ಟು ಸಂಪರ್ಕಿತರನ್ನು ಪತ್ತೆ ಹಚ್ಚಿ, ಅವರೆಲ್ಲರನ್ನು ಎರಡು ವಾರಗಳ ನಿರ್ಬಂಧನೆಗೊಳಪಡುವಂತೆ  ಸೂಚಿಸುವ ತ್ರಾಸದಾಯಕ ಕಾರ್ಯವನ್ನು ಮಾಡುವಲ್ಲಿ ಪೊಲೀಸರು ಹೈರಾಣಾಗಿ ಹೋಗಿದ್ದರು.' ಹೀಗೆ  ಡಾ. ಕಿರಣ್ ವಿವರಿಸಿದ  ಮೈಕೇಲನ ವೃತ್ತಾಂತವನ್ನು ರೋಹಿಣಿ ತದೇಕಚಿತ್ತಳಾಗಿ ಕೇಳಿದಳು. 

ಮೈಕೆಲನ ಬೇಜವಾಬ್ದಾರಿಯ ವೃತ್ತಾಂತವನ್ನು ಕೇಳಿ ರೋಹಿಣಿಗೆ ರೋಸಿಹೋಗಿತ್ತು. ಕೋವಿಡ್ನಂತಹ ಸಂಕಟದ ದಿನಗಳಲ್ಲೂ, ಮೈಕೇಲನಂಥ ವಿದ್ಯಾವಂತರು, ವಿಶ್ವಖ್ಯಾತಿ ಗಳಿಸಿದವರು, ವೈದ್ಯರ ಮುನ್ನೆಚ್ಚೆರಿಕೆಯನ್ನು ಧಿಕ್ಕರಿಸುತ್ತಾರೇಕೆ?  ಪ್ರಖ್ಯಾತರ ಸುತ್ತುವರೆಯಲು ಜನಸಾಮಾನ್ಯರಲ್ಲಿ ಅಷ್ಟೊಂದು ತುಡಿತವೇಕೆ? ಕೋವಿಡ್ ದಿನಗಳ ಅಪಾಯದ ಅರಿವು ಜನರಿಗಿಲ್ಲವೆ? ವಿದೇಶ  ಪ್ರಯಾಣ ಮಾಡಿರುವ ವ್ಯಕ್ತಿಗಳು ಕೋವಿಡ್ ವೈರಾಣುವನ್ನು ಹರಡುವ ಸಾಧ್ಯತೆಯಿದೆ ಎಂಬುದು  ಶ್ರೀಸಾಮಾನ್ಯರಿಗೆ ತಿಳಿದಿಲ್ಲವೆ? ಮೈಕೆಲನಂತಹ ಗಣ್ಯಾತಿಗಣ್ಯರ ವರ್ತನೆಯೇ ಈ ರೀತಿಯ ಬೇಜಾಬ್ದಾರಿಯಿಂದ ಕೂಡಿರುವುದಾದರೆ, ಜನಸಾಮಾನ್ಯರಿಂದ ಏನನ್ನು ನೀರಿಕ್ಷಿಸಬಹುದು? ಈ ಬಗೆಯ ಟಿಪ್ಪಣಿಗಳನ್ನು ತನ್ನ ಸಂಶೋಧನಾ ಪುಸ್ತಕದಲ್ಲಿ ಬರೆದುಕೊಳ್ಳುತ್ತಾ, ರೋಹಿಣಿ ಆತಂಕಿತಳಾಗಿದ್ದಳು. 

***

ರಾತ್ರಿಯೂಟದ ಸಮಯವಾಗಿತ್ತು. ತಂದೆ ರಾಜುರವರು, ಮಗಳು ರೋಹಿಣಿಗಾಗಿ ಕಾಯುತ್ತಿದ್ದರು. ಕೊಂಚ ತಡವಾಗಿ ಬಂದ ರೋಹಿಣಿ ದಣಿದಿದ್ದಳು. ಕೂಡಲೇ ರಾಜು ಅವಳನ್ನು ಊಟದ ಮೇಜಿನತ್ತ ಕರೆದೊಯ್ಯದಿದ್ದರು. ರೋಹಿಣಿಯ ಆಲೋಚನೆಗಳು ಮಾತ್ರ ನಾಲ್ಕು ಹಂತಗಳಲ್ಲಿ ಜಾರಿಗೊಳಿಸಿದ್ದ ಕಳೆದ ಎರಡು ತಿಂಗಳ ಅವಧಿಯ ಲಾಕ್ಡೌನಿನ ಸಾಧಕ-ಭಾಧಕಗಳ  ಸುತ್ತವೇ ಹರಿದಾಡುತ್ತಿದ್ದವು.          ಡಾ. ಕಿರಣನ ಮಾತುಗಳೇ ಅವಳ ಕಿವಿಯಲ್ಲಿ ರಿಂಗಣಿಸುತ್ತಿದ್ದವು. 

'ಲಾಕ್ಡೌನ್ ಕುರಿತಾದ ಸಂಶೋಧನೆಯ ಕೆಲಸ ಹೇಗೆ ಸಾಗಿದೆ?' ಎಂದು ಕೇಳಿ ರಾಜು ಮೌನ ಮುರಿದರು. ಮೌನ ಮುರಿಯದ ರೋಹಿಣಿಯ ನೋಟ ಮಾತ್ರ ರಾಜುರವರ ಮೇಲೇ ನೆಟ್ಟಿತ್ತು. ಲಾಕ್ಡೌನ್ನ ಸಾಧಕ-ಬಾಧಕಗಳನ್ನು ಕುರಿತಾದ ವೃತ್ತಪತ್ರಿಕೆಯ ಲೇಖನವೊಂದನ್ನು ರಾಜು ತಮ್ಮ ಮಗಳ ಮುಂದಿರಿಸಿದ್ದರು. ಆ ಲೇಖನದಲ್ಲಿ ವಿರೋಧ ಪಕ್ಷಗಳ ತೀಕ್ಷ್ಣ ಪ್ರತಿಕ್ರಿಯೆ ಬಗೆಗಿನ ಪ್ರಸ್ತಾಪವಿತ್ತು. 'ಎರಡು ತಿಂಗಳ ಲಾಕ್ಡೌನ್ ಜೀವಗಳನ್ನುಳಿಸಿದ್ದಂತೂ ಶುದ್ಧ ಸುಳ್ಳಿನ ಮಾತು.  ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿದೆ. ಲಾಕ್ಡೌನ್ನಿಂದ ಸುಮಾರು  ೪೦ ಕೋಟಿ  ಬಡಬಗ್ಗರುಗಳ ಸಂಪಾದನೆಗೆ ಕುತ್ತು ಬಂದಿದೆ. ಬೃಹತ್ ನಗರಗಳಿಂದ ತಮ್ಮ ತಮ್ಮ ಹಳ್ಳಿಗಳ ಕಡೆಗೆ  ಗುಳೆ ಹೊರಟ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರ ಕಷ್ಟಗಳನಂತೂ ಹೇಳತೀರದು. ಬಸ್ ಹಾಗೂ ರೈಲುಗಳ ಸಂಚಾರಗಳು  ಸ್ಥಗಿತಗೊಂಡಿದ್ದು, ಅನ್ಯ ಮಾರ್ಗವಿಲ್ಲದೆ ಅವರುಗಳು  ತಮ್ಮ ತಮ್ಮ ಹೆಂಡತಿ-ಮಕ್ಕಳೊಡನೆ, ಸಾಮಾನುಗಳನ್ನು ಹೊತ್ತು  ಕಾಲ್ನಡಿಗೆಯಲ್ಲೇ ಪ್ರಯಾಣಿಸಿತ್ತಿರುವುದನ್ನು ನೋಡಿದರೆ, ಹೃದಯವಂತರ ಕರುಳು    ಕಿತ್ತುಬಾರದಿರದು' ಎಂಬುದಾಗಿ ವಿರೋಧಿ ನಾಯಕರುಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಆದರೆ ಸರಕಾರಿ ಮೂಲಗಳ ಸಮಜಾಯಿಷಿಯೇ  ಬೇರೆಯಾಗಿತ್ತು.  'ಲಾಕ್ಡೌನ್ ಕೊರೋನಾ ಸೋಂಕನ್ನು ಹತ್ತಿಕ್ಕಲು, ಸಮಯಕ್ಕೆ ಸರಿಯಾಗಿ ಜಾರಿಗೊಳಿಸಿದಂತ ಮುನ್ನೆಚ್ಚರಿಕೆಯ ಕ್ರಮ. ನಾವು ನಡೆಸಿರುವ ಅಧ್ಯಯನಗಳ ಪ್ರಕಾರ ಈ ಎರಡು ತಿಂಗಳ ಲಾಕ್ಡೌನ್ನಿಂದ ಸುಮಾರು ೧೫-೩೦ ಲಕ್ಷ ಜನಗಳನ್ನು ಸೋಂಕಿನಿಂದ ಸಂರಕ್ಷಿಸಲಾಗಿದೆ ಮತ್ತು ಸುಮಾರು ೪೦ರಿಂದ ೮೦ ಸಾವಿರದಷ್ಟು ಜೀವಗಳನ್ನು ರಕ್ಷಿಸಲಾಗಿದೆ. ವಿದೇಶಿ ಸಂಸ್ಥೆಗಳ ಅಧ್ಯಯನದ ಪ್ರಕಾರ, ಭಾರತದಲ್ಲಿ ವಿಧಿಗೊಳಿಸಲಾದ ಸಮಯೋಚಿತ ಲಾಕ್ಡೌನ್ನಿಂದ ಇನ್ನೂ  ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹಾಗೂ ಸಾವುಗಳನ್ನು ನಿಯಂತ್ರಿಸಲಾಗಿದೆ' ಎಂಬುದು ಸರಕಾರಿ ಸಂಸ್ಥೆಗಳು ನೀಡಿದ ವಿವರಣೆಯಾಗಿತ್ತು. 

'ಭಾರತದಲ್ಲಿನ ಶೇ. ೮೦ರಷ್ಟು ಸೋಂಕಿತರು ಐದು ಪ್ರಮುಖ ರಾಜ್ಯಗಳಾದ, ಮಹಾರಾಷ್ಟ್ರ, ತಮಿಳ್ ನಾಡು, ಗುಜರಾತ್, ದಿಲ್ಲಿ ಮತ್ತು ಮಧ್ಯ ಪ್ರದೇಶಗಳಲ್ಲಿ ಮಾತ್ರವಿದ್ದಾರೆ. ಇಷ್ಟೇ ರಾಜ್ಯಗಳಿಗೆ ಹೆಚ್ಚಿನ ಸೋಂಕನ್ನು ಸೀಮಿತಗೊಳಿಸಿದ್ದು ಲಾಕ್ಡೌನಿನ ಒಳ್ಳೆ ಪರಿಣಾಮಗಳಲ್ಲೊಂದು ಎಂದೇ ಹೇಳಬಹುದು.  ಎರಡು ತಿಂಗಳ ಲಾಕ್ಡೌನಿನ ಸಮಯದಲ್ಲಿ, ಸುಮಾರು ಎರಡು ಲಕ್ಷ ಹಾಸಿಗೆಗಳುಳ್ಳ ೧೦೦೦ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿದೆ. ಸುಮಾರು ೩೦ ಲಕ್ಷದಷ್ಟು ಪಿಪಿಇ ತೊಡಿಗೆಗಳನ್ನು ಕೊರೋನಾ ಸೇನಾನಿಗಳಿಗೆ ಒದಗಿಸಲಾಗಿದೆ. ಸರಕಾರ ನೀಡಿದ ಸಹಾಯ ಹಸ್ತದಿಂದ ೧೦೯ ಕೈಗಾರಿಕೋದ್ಯಮಿಗಳು ದಿನನಿತ್ಯ ೨ ಲಕ್ಷ ಪಿಪಿಇ ತೊಡುಗೆಗಳನ್ನು ತಯಾರಿಸುವ ಸಾಮರ್ಥ್ಯವನ್ನು ಸಾಧಿಸಿದ್ದಾರೆ' ಎಂಬುದು ಮತ್ತೊಂದು ಸರಕಾರಿ ಅಂಗ ಸಂಸ್ಥೆ ನೀಡಿದ ಅಂಕಿ ಅಂಶವಾಗಿತ್ತು. 

'ಅಪ್ಪಾ, ಸರಕಾರಿ ಅಂಕಿ-ಅಂಶಗಳೆಲ್ಲ ಉತ್ಪ್ರೇಕ್ಷೆ ಮಾತ್ರ. ನಿಜ ಪರಿಸ್ಥಿತಿ ಬೇರೆಯೇ ಆಗಿದೆ. ಲಾಕ್ಡೌನ್ ಹೆಸರಿಗೆ ಮಾತ್ರವಿದೆ. ಸಾಮಾಜಿಕ ಅಂತರವನ್ನೇ ಗಾಳಿಗೆ ತೂರಿ, ತರಕಾರಿ ಹಣ್ಣುಗಳನ್ನು ಕೊಳ್ಳಲು ಜನ ಮುಗಿಬೀಳುತ್ತಿರುವುದು ಆತಂಕಕಾರಿಯಲ್ಲವೆ? ಉಚಿತ ಹಾಲಿನ ಪ್ಯಾಕೆಟ್ ಮತ್ತು ದಿನಸಿ ಪೊಟ್ಟಣಗಳನ್ನು ಹಂಚುವಾಗಲಂತೂ, ಪುಟ್ಟದೊಂದು ಯುದ್ಧವೇ ನಡೆದು ಹೋಗುತ್ತಿದೆ. ಪೊಲೀಸರ ಕಣ್ಣುಗಳಿಗೆ ಮಣ್ಣೆರಚಿ, ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸುವ ಹೊಸ ಹೊಸ ವಿಧಾನಗಳನ್ನು ಜನಗಳು ಕಂಡುಕೊಳ್ಳುತ್ತಿದ್ದಾರೆ. ಲಾಕ್ಡೌನ್ ವಿಧಿಸಿದ ಕೆಲ ದಿನಗಳ ಮುಂಚೆ, ಸುಮಾರು ೨೫ ಜನಗಳಿದ್ದ ಅನಿವಾಸಿ ಭಾರತೀಯರ ತಂಡವೊಂದು ಗಲ್ಫ್ ದೇಶವೊಂದರಿಂದ ಹೊರಟು ಭಾರತದ ಬೃಹತ್ ನಗರವೊಂದಕ್ಕೆ  ಬಂದಿಳಿಯಿತು.  ಅವರ್ಯಾರಲ್ಲೂ ಯಾವುದೇ ರೀತಿಯ ಕೋವಿಡ್ ಲಕ್ಷಣಗಳಿಲ್ಲ ದಿದ್ದು, ಅವರೆಲ್ಲರನ್ನೂ ಎರಡು ವಾರಗಳ ಗೃಹ-ನಿರ್ಬಂಧದಲ್ಲಿರುವಂತೆ ಸಲಹೆ ನೀಡಿ, ವಿಮಾನ ನಿಲ್ದಾಣದಿಂದ ನಗರ ಪ್ರವೇಶಿಸಲು ಅನುಮತಿ ನೀಡಲಾಯಿತು. ಅವರುಗಳ ಎಡಗೈ ಮೇಲ್ಭಾಗಕ್ಕೆ ನಿರ್ಬಂಧದ ಮುದ್ರೆಯನ್ನೊತ್ತಿದ್ದರು, ಅವರುಗಳೆಲ್ಲ ಆ ನಗರದ ಪ್ರಮುಖ ರೈಲು ನಿಲ್ದಾಣವನ್ನು ತಲುಪಿ, ತಮ ತಮ್ಮ ಪಟ್ಟಣಗಳಿಗೆ ಹೊರಡುವ ರೈಲುಗಳನ್ನು ಹತ್ತಿ ಕೂತಿದ್ದರು. ಅವರುಗಳ ಕೈಮೇಲಿನ ಮುದ್ರೆಯನ್ನು ಗಮನಿಸಿದ ಸಹಪ್ರಯಾಣಿಕರು ಪೊಲೀಸರಿಗೆ ವಿಷಯ ಮುಟ್ಟಿಸುತ್ತಲೇ, ಕಾರ್ಯೋನ್ಮುಖರಾದ ಪೊಲೀಸರು ಅವರುಗಳನ್ನು ವಶಕ್ಕೆ ಪಡೆಯಬೇಕಾಯಿತು. ಮತ್ತೊಂದು ಪ್ರಕರಣದಲ್ಲಿ, ಗಂಡ-ಹೆಂಡಿರ ಜೋಡಿಯೊಂದು ತಮ್ಮ ಮುದ್ರೆಯೊತ್ತಿದ ಕೈಗಳಿಗೆ ಗಾಯವಾದಂತೆ ದಪ್ಪ ಪಟ್ಟಿಗಳನ್ನು ಕಟ್ಟಿಕೊಂಡು, ತನ್ನ ಹಸುಗೂಸಿನೊಂದಿಗೆ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿತ್ತು. ಅನುಮಾನಗೊಂಡ ಪೊಲೀಸರು ಪ್ರಶ್ನೆಸಿದಾಗ ಆ ಜೋಡಿ ತಾವು ನಿರ್ಬಂಧನ ಅವಧಿಯಲ್ಲಿರುವುದಾಗಿ ಒಪ್ಪಿಕೊಂಡಿದ್ದರು. ಪೊಲೀಸರು ತಾನೇ ಎಷ್ಟು ಕಾವಲು ಕಾಯಲು ಸಾಧ್ಯ? ಈ ರೀತಿಯ ಘಟನೆಗಳು ಲಾಕ್ಡೌನಿನ ಸದುದ್ದೇಶಗಳನ್ನು ವಿಫಲಗೊಳಿಸಿದಂತಾಗುವುದಿಲ್ಲವೇ?' ಎಂಬುದು ಸಂಶೋಧಕಿ ರೋಹಿಣಿಯ ಕಳಕಳಿಯಾಗಿತ್ತು. ಎಲ್ಲವನ್ನು ತದೇಕ ಚಿತ್ತರಾಗಿ ಆಲಿಸಿದ ತಂದೆ ರಾಜುರವರಲ್ಲಿ ಯಾವುದಕ್ಕೂ ಉತ್ತರವಿರಲಿಲ್ಲ. 

***

'ಲಾಕ್ಡೌನ್ ದಿನಗಳಲ್ಲಿ, ದುರ್ಗಮ ಕ್ಷೇತ್ರಗಳಲ್ಲಿರುವ ಬಡ ಗ್ರಾಮೀಣರ ಗತಿಯೇನು? ತುರ್ತು ಕಾರಣಗಳಿಗಾಗಿ ಅವರಗಳು ಪ್ರಯಾಣಿಸಬೇಕಾದರೆ ಏನು ಮಾಡಿಯಾರು?' ಎಂಬುದು ರೋಹಿಣಿಯ ಮತ್ತೊಂದು ಕಳಕಳಿಯಾಗಿತ್ತು. 

'ಲಾಕ್ಡೌನ್ ಎಂಬುದೊಂದು ಕುರುಡು ಕಾವಲುಗಾರನಿದ್ದಂತೆ! ತಂಟೆಕೋರರ ಕುಕೃತ್ಯಗಳಾಗಲಿ, ಜನಸಾಮಾನ್ಯರ ಪ್ರಾಮಾಣಿಕ ಪರದಾಟಗಳಾಗಲಿ ಅದಕ್ಕೆ ಕಾಣದು' ಎಂಬ ದಪ್ಪಕ್ಷರಗಳ ಮುನ್ನುಡಿಯಿದ್ದ ಅಂದಿನ ಮತ್ತೊಂದು ದಿನಪತ್ರಿಕೆಯ ನಿಜ ಘಟನೆಯ ಲೇಖನವನ್ನು ರಾಜುರವರು ತಮ್ಮ ಮಗಳ ಅವಗಾಹನೆಗೆ ತಂದಿದ್ದರು. 

ಬಹಳ ದಿನಗಳ ಹಿಂದೆ ಪತ್ನಿಯನ್ನು ಕಳೆದುಕೊಂಡ ರಾಜಿಂದರ್ ವೃತ್ತಿಯಲ್ಲಿ ಕ್ಷೌರಿಕ.  ದೂರದ ಹಳ್ಳಿಯೊಂದರಲ್ಲಿ ಒಂದೇ ಆಸನವಿದ್ದ ಸೆಲೂನೊಂದೆ ಅವನ ಹೊಟ್ಟೆಪಾಡಿನ ಸಾಧನವಾಗಿತ್ತು. ಲಾಕ್ಡೌನ್ ಜಾರಿಗೊಂಡನಂತರ ಅವನ ಸೆಲೂನ್ ಗ್ರಾಹಕರಿಲ್ಲದೆ ಬಿಕೋ ಎನ್ನುತಿತ್ತು. ಆತನ ಮುದ್ದಿನ ಮಗಳಾದ, ಸುಮಾರು ೨೩ ವರ್ಷದ  ಲಾಜು  ಕೂಡ, ಮೂರು ಹಾಲ್ಕರೆಯುವ ಎಮ್ಮೆಗಳ ನಿಗಾವಹಿಸಿಕೊಂಡು, ಸಂಸಾರದ ಹೊಣೆ ಹೊತ್ತಿದ್ದಳು. ರಾಜಿಂದರರ  ಇನ್ನಿಬ್ಬರು ಹೆಣ್ಣುಮಕ್ಕಳು ಚಿಕ್ಕವರಾಗಿದ್ದರು. ತೆರವಾಗಿದ್ದ ಕುಟುಂಬದ ತಾಯಿಯ ಸ್ಥಾನವನ್ನು ಲಾಜು ತುಂಬಿದ್ದಳು. 

೨೦ರ ಪ್ರಾಯದವರೆಗೂ ಲಾಜುವಿನ ಆರೋಗ್ಯ ಚೆನ್ನಾಗೇ ಇತ್ತು.  ಕಳೆದ ಮೂರು ವರ್ಷಗಳಿಂದ ಅವಳನ್ನು ವಿಚಿತ್ರ ಖಾಯಿಲೆಯೊಂದು ಕಾಡಿತ್ತು. ಕೆಂಪು ರಕ್ತಕಣಗಳ ಕೊರತೆ ಅವಳಿಗುಂಟಾಗಿ, ಅವಳನ್ನು ನಿತ್ರಾಣಗೊಳಿಸುತ್ತಿತ್ತು.  ಹಳ್ಳಿಯ ವೈದ್ಯರ ಸಲಹೆಯಂತೆ, ರಾಜಿಂದರ್ ಅವಳನ್ನು ದೂರದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.  ಅಲ್ಲಿನ ವೈದ್ಯರುಗಳ ತಪಾಸಣೆಯಂತೆ, ಲಾಜುವಿನಲ್ಲಿ ಎಲ್ಲರಂತೆ ರಕ್ತದ ಸಾಕಷ್ಟು ಉತ್ಪಾದನೆಯಾಗುತ್ತಿರಲಿಲ್ಲ. ಮೂರು ತಿಂಗಳಿಗೊಮ್ಮೆ ಹೊರಗಿನಿಂದ ಅವಳ ದೇಹಕ್ಕೆ ಅವಶ್ಯಕ ಪ್ರಮಾಣದ  ರಕ್ತವನ್ನೊದಗಿಸುವುದೊಂದೇ (Blood transfusion) ಚಿಕಿತ್ಸೆ ಎಂಬುದು ವೈದ್ಯರುಗಳ ಸಲಹೆಯಾಗಿತ್ತು.  ಈ ರೀತಿಯ ಮೂರು ತಿಂಗಳುಗಳಿಗೊಮ್ಮೆಯ ಚಿಕಿತ್ಸೆ ಶುರುವಾಗಿ ಮೂರು ವರುಷಗಳೇ ಕಳೆದಿತ್ತು.  ಚಿಕಿತ್ಸೆಯನಂತರದ ಮೂರು ತಿಂಗಳು, ಲಾಜುವಿನ ಆರೋಗ್ಯ ಎಂದಿನಂತೆ ಇರುತ್ತಿತ್ತು. ಯಾವುದೇ ಕಷ್ಟ-ನಷ್ಟಗಳಿರಲಿ, ತಂದೆ ರಾಜಿಂದರ್ ಮಾತ್ರ ಮಗಳನ್ನು ದೂರದ ಜಿಲ್ಲಾಸ್ಪತ್ರೆಗೆ ನಿಗದಿತ ಸಮಯಕ್ಕೆ ಕರೆದುಕೊಂಡು  ಹೋಗುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಮೂರು ತಿಂಗಳುಗಳಿಗೊಮ್ಮಿನ ಚಿಕಿತ್ಸೆ ತಪ್ಪಿದರೆ, ಲಾಜುವಿಗೆ ವಿಪತ್ತು ತಪ್ಪದು ಎಂಬ ಅರಿವು ತಂದೆಗಿತ್ತು. ಮದುವೆಯ ವಯಸ್ಸಿನ ಮಗಳಿಗೆ ಈ ರೀತಿಯ ವಿಚಿತ್ರ ರೋಗ ಬಂದೊದಗಿದ್ದು, ರಾಜಿಂದರನ ಮನಸ್ಸನ್ನು ಕಾಡುತ್ತಿದ್ದದ್ದು ಸುಳ್ಳಲ್ಲ. ವೈದ್ಯರುಗಳು ನೀಡಿದ ವೇಳಾಪಟ್ಟಿಯಂತೆ, ಲಾಜುವಿನ ಮುಂದಿನ ಚಿಕಿತ್ಸೆ ೨೦೨೦ರ ಮಾರ್ಚ್ ೨೮ರಂದು ಎಂದು ನಿಗಿದಿಯಾಗಿತ್ತು.  

೨೦೨೦ರ ಮಾರ್ಚ್ ೨೫ರಂದು ಜಾರಿಗೊಳಿಸಿದ ಲಾಕ್ಡೌನ್, ರಾಜಿಂದರನಿಗೊಂದು ಆತಂಕವನ್ನುಂಟು ಮಾಡಿತ್ತು.  ಬಸ್ಸು-ರೈಲುಗಳ ಸಂಚಾರ ಸ್ತಬ್ಧಗೊಂಡಿದ್ದು, ದೂರದ ಜಿಲ್ಲಾಸ್ಪತ್ರೆಗೆ ಮಗಳನ್ನು ಕರೆದುಕೊಂಡು ಹೋಗುವುದು ಹೇಗೆ ಎಂಬ ಸಮಸ್ಯೆ ರಾಜಿಂದರನನ್ನು ಕಾಡಿತ್ತು. ಸತತ ಪ್ರಯತ್ನ ಮಾಡಿ ಡಾ. ತೇಜ್ ಕರಣ್ ರವರನ್ನು ಸಂಪರ್ಕಿಸಿದ ರಾಜಿಂದರನಿಗೆ, ಮಾರ್ಚ್ ೨೮ರ ಚಿಕಿತ್ಸೆ ಖಚಿತವೆಂಬುದು ತಿಳಿದಿತ್ತು. ಸುಮಾರು ೧೫೦ ಕಿ.ಮೀ. ದೂರವಿರುವ ಜಿಲ್ಲಾ ಕೇಂದ್ರಕ್ಕೆ ಪ್ರಯಾಣಿಸಲು ಟ್ಯಾಕ್ಸಿಯ ಲಭ್ಯವೂ ಇತ್ತಿಲ್ಲ.  ಅದರ ವೆಚ್ಚವನ್ನು ಭರಿಸುವಷ್ಟು ಹಣವಂತೂ ರಾಜಿಂದರನಲ್ಲಿ ಇತ್ತೇ ಇರಲಿಲ್ಲ.  ಹಳ್ಳಿಯ ನಾಯಕರುಗಳ ಬಳಿ ಹೋಗಿ ಅಂಗಲಾಚಿದರೂ, ರಾಜಿಂದರನ ಬವಣೆ ನೀಗದಾಗಿತ್ತು. ಸ್ಥಳೀಯ ಶಾಸಕರು ಎಲ್ಲಿದ್ದಾರೆ ಎಂಬದೇ ಯಾರಿಗೂ ತಿಳಿದಿತ್ತಿಲ್ಲ. ಹಾಲು ಮಾರಲು ಉಪಯೋಗಿಸುತ್ತಿದ್ದ ಹಳೆ ಸೈಕಲ್ಲೊಂದೇ ರಾಜಿಂದರನ ಪಾಲಿಗುಳಿದಿದ್ದ ವಾಹನವಾಗಿತ್ತು. ಹಳ್ಳಿಯ ಸೈಕಲ್ ರಿಪೇರಿಯವನ ಮೊರೆ ಹೋದ ರಾಜಿಂದರ್, ಎರಡು ದಿನ ಮೊದಲೇ ತನ್ನ ಸೈಕಲ್ಲನ್ನು ಸಿದ್ಧಗೊಳಿಸಿಕೊಂಡಿದ್ದೂ ಆಗಿತ್ತು. 

ಮಾರ್ಚ್ ೨೭ರ ಮುಂಜಾನೆಯೇ ರಾಜಿಂದರನ ಸೈಕಲ್ ಪ್ರಯಾಣ ಶುರುವಾಗಿತ್ತು. ಹಿಂಬದಿಯ ಆಸನದಲ್ಲಿ ಮಗಳು ಲಾಜು, ಸುಮಾರು ೩೦ ರೊಟ್ಟಿ-ಪಲ್ಯಗಳ ಗಂಟೊಂದನ್ನು ಹಿಡಿದೇ ಕುಳಿತಿದ್ದಳು. ಸೈಕಲ್ ಪ್ರಯಾಣದ ಮಾರ್ಗದಲ್ಲಿ, ಪೊಲೀಸರ ತಪಾಸಣೆ ಎದುರಾಗಬಹುದೆಂಬ ಆತಂಕ ರಾಜಿಂದರನಿಗೆ ಇದ್ದೇ ಇತ್ತು. ಪೊಲೀಸರ ಸಮಜಾಯಿಷಿಗೆಂದು ಪ್ಲಾಸ್ಟಿಕ್ ಚೀಲವೊಂದರಲ್ಲಿ, ಆಸ್ಪತ್ರೆ ಕಾಗದಗಳು ಹಾಗು ಆಧಾರ್ ಕಾರ್ಡ್ಗಳನ್ನು ಇಟ್ಟುಕೊಂಡು ಹೋಗುವುದನ್ನು ರಾಜಿಂದರ್ ಮರೆತಿರಲಿಲ್ಲ.  ಪ್ರಯಾಣ ೧೫೦ ಕಿ.ಮೀ.ನಷ್ಟು ದೂರದ್ದಾದರೂ, ಸುಮಾರು ೨೦ ಕಿ.ಮೀ.ನಷ್ಟು ದೂರವನ್ನು ತಗ್ಗಿಸುವ ಅಡ್ಡದಾರಿಗಳು ರಾಜಿಂದರನಿಗೆ ತಿಳಿದಿತ್ತು. ಸಾಯಂಕಾಲದ ಸಮಯ ಸಮೀಪಿಸುತ್ತಲೇ, ಅಡ್ಡಮಾರ್ಗವೊಂದರಲ್ಲಿ ಚಲಿಸುತ್ತಿದ್ದ ರಾಜಿಂದರನಿಗೆ, ಇಬ್ಬರು ಪೊಲೀಸ್ ಪೇದೆಗಳು ಎದುರಾಗೇ ಬಿಟ್ಟಿದ್ದರು. ಹಿರಿಯ ಪೇದೆಯ ಮೆಚ್ಚುಗೆ ಗಳಿಸಲೆಂದೇ, ಯುವ ಪೇದೆ ಒಮ್ಮಲೇ ರಾಜಿಂದರನ ಮೇಲೆ ಒಂದೆರಡು ಬಾರಿ ಲಾಠಿ ಪ್ರಯೋಗಿಸಿದ್ದು ಆಗಿ ಹೋಗಿತ್ತು.  ಮತ್ತೆರಡು ಲಾಠಿ ಏಟುಗಳು ರಾಜಿಂದರನ ಸೈಕಲ್ಲನ್ನು ಘಾಸಿಗೊಳಿಸಿತ್ತು. ಕೈ ಜೋಡಿಸಿ ಬೇಡಿದ ಲಾಜುವಿನ ವಿನಂತಿಗೂ ಪೇದೆಗಳ ಕೋಪ ಇಳಿಯದಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿರುವುದಾಗಿ ಲಾಜು ಕಿರುಚಿ ಹೇಳಿದಾಗ ಮಾತ್ರ ಪೊಲೀಸರು ಎತ್ತಿದ್ದ ಕೈಗಳನ್ನು ಇಳಿಸಿದ್ದು.  ಭಯಭೀತನಾದ ರಾಜಿಂದರ್ ಆಸ್ಪತ್ರೆಯ ಕಾಗದಗಳನ್ನು ತೋರಿಸಿದಾಗ ಮಾತ್ರ ಪೇದೆಗಳು ಸುಮ್ಮನಾಗಿದ್ದು. 'ಜಿಲ್ಲಾಸ್ಪತ್ರೆಯಲ್ಲಿನ ಚಿಕಿತ್ಸೆ ನಾಳೆ ದೊರೆಯದಿದ್ದಲ್ಲಿ ಮಗಳ ಜೀವಕ್ಕೇ ಕುತ್ತೆಂದು' ರಾಜಿಂದರ್ ವಿವರಿಸಿ ಹೇಳಿದಾಗ, ಪೊಲೀಸರ ಮನಸ್ಸು ಕರಗಿತ್ತು.  'ನಾವುಗಳು ನಮ್ಮ ಕರ್ತವ್ಯವನ್ನು ಮಾತ್ರ ಮಾಡುತ್ತಿರುತ್ತೇವೆ. ದಾಖಲೆಗಳಿಲ್ಲದೆ ನೀವುಗಳು ಮೇಲಧಿಕಾರಿಗಳ ಕೈಯಲ್ಲಿ ಮುಂದೆ ಸಿಕ್ಕಿ ಬಿದ್ದರೆ, ನಮ್ಮಗಳಿಗೆ ಶಿಕ್ಷೆ ತಪ್ಪಿದ್ದಲ್ಲ. ನಿಮ್ಮನ್ನು ಹೊಡೆದು ನೋಯಿಸಿದ್ದಕ್ಕೆ ಕ್ಷಮೆಯಿರಲಿ' ಎಂದು ತನ್ನ ಕೈಗಳನ್ನು ಮುಗಿಯುತ್ತ ತಿಳಿಸುವ ಹೊತ್ತಿಗೆ, ಹಿರಿಯ ಪೇದೆಯ ಕಣ್ಣಾಲೆಗಳು ತುಂಬಿ ಬಂದಿದ್ದವು. 

ಸೈಕಲ್ ಪ್ರಯಾಣದ ಮೊದಲ ದಿನವೇ ಸುಮಾರು ೮೦ ಕಿ.ಮೀ.ಗಳಷ್ಟು ದೂರ ಸವೆಸಿದ್ದ, ಅಪ್ಪ-ಮಗಳು ದಣಿದಿದ್ದರು. ಕತ್ತಲಾಗುತ್ತಲೇ ಸಮೀಪದ ಶಾಲೆಯೊಂದರ ಜಗುಲಿಯ ಮೇಲೆ ಅವರಿಬ್ಬರೂ ವಿರಮಿಸಿದ್ದರು. ಅದೇ ಕ್ಷಣ, ತಮ್ಮ ಲಾಠಿಗಳನ್ನು ಝಳಪಿಸುತ್ತಾ ಇಬ್ಬರು ಪೊಲೀಸ್ ಪೇದೆಗಳು ಅಲ್ಲಿಗೆ  ಬಂದರು. ವಿನಮ್ರನಾಗಿ ಎದ್ದುನಿಂತ ರಾಜಿಂದರ್, ತಮನ್ನು ಜಗುಲಿಯಿಂದ ಓಡಿಸದಂತೆ ಪೇದೆಗಳಿಗೆ ಕೈಜೋಡಿಸಿದನು. ಕೊಂಚ ಮುಂಚೆ ತಮನ್ನು ಥಳಿಸಿದ್ದ ಪೇದೆಗಳೇ ಮತ್ತೆ ಎದುರಾಗಿದ್ದನ್ನು ಅರಿಯಲು ಲಾಜುವಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ತಾವುಗಳು ಕೂಡ ರಾತ್ರಿಯಲ್ಲಿ ವಿರಮಿಸಲೆಂದೇ ಶಾಲೆಯ ಜಗುಲಿಯನ್ನು ಹುಡುಕಿಕೊಂಡು ಬಂದುದಾಗಿ ಪೊಲೀಸರು ತಿಳಿಸಿದಾಗ, ರಾಜಿಂದರ್ ಆಶ್ಚರ್ಯಚಕಿತನಾದನು. ಹಿರಿಯ ಪೇದೆ ಮಾತು ಮುಂದುವರಿಸುತ್ತಾ, 'ಇಲ್ಲಿ ವಿರಮಿಸದೇ ನಮಗೆ ಬೇರೆ ಮಾರ್ಗವಿಲ್ಲ. ನಾಳೆ ಬೆಳಗಿನ ೬ಕ್ಕೆ ಡ್ಯೂಟಿ ಮೇಲೆ ಹಾಜರಾಗಬೇಕು, ಮನೆಗೆ ಹೋಗಿ ಬರುವಷ್ಟು ಸಮಯಾವಕಾಶವೇ ಇಲ್ಲ' ಎಂದು ತಿಳಿಸದರು. ಲಾಜು ತನ್ನ ರೊಟ್ಟಿಯ ಗಂಟನ್ನು ಬಿಚ್ಚುತ್ತಲೇ, ಇಬ್ಬರೂ ಪೇದೆಗಳು ತಮ್ಮ ಮುಖಗಳನ್ನು ಬೇರೆಡೆ ತಿರುಗಿಸಿದರು. ಹಿರಿಯ ಪೇದೆಯ ಕಡೆ ತಿರುಗಿ 'ಪೊಲೀಸಣ್ಣ, ತಮ್ಮಗಳ ಊಟವಾಯ್ತೆ?' ಎಂದು ಲಾಜು ಕೇಳಿದಾಗ, ಪೇದೆಗಳಿಬ್ಬರೂ ಪೆಚ್ಚಾದರು. ತುಂಬಿ ಬಂದ ಅವರುಗಳ ದನಿಯಲ್ಲೇ, ಅವರುಗಳು ಹಸಿದಿರುವರೆಂದು ಲಾಜುವಿಗೆ ತಿಳಿಯಿತು. 'ರಸ್ತೆ ಬದಿಯ ಸಣ್ಣ ಹೋಟೆಲುಗಳೆಲ್ಲಾ ಲಾಕ್ಡೌನಿಂದ ಮುಚ್ಚಿ ಹೋಗಿವೆ. ಹಾಗಾಗಿ ನಮ್ಮಗಳಿಗೆ ಸಮಯಕ್ಕೆ ಸರಿಯಾಗಿ ಊಟ-ತಿಂಡಿಗಳೇ ಸಿಗದಾಗಿದೆ. ಕೋವಿಡ್ ಕರ್ತವ್ಯಕ್ಕೆ ನೇಮಕಗೊಂಡಾಗ, ೧೫ ದಿನಗಳ ಬಿಡುವಿರದ ಡ್ಯೂಟಿ ಕಡ್ಡಾಯವಾಗಿರುತ್ತದೆ. ಮನೆಗಳಿಗೆ ಹೋಗಿಬರುವಷ್ಟು ಸಮಯ ಇರುವುದೇ ಇಲ್ಲ' ಎಂದು ತಿಳಿಸಿದ ಹಿರಿಯ ಪೇದೆಯ ಮುಖದಲ್ಲಿ ವಿಷಾದವಿತ್ತು. ಎರಡು ಪೇದೆಗಳಿಗೆ ತಲಾ ಎರಡೆರಡು ರೊಟ್ಟಿ-ಪಲ್ಯಗಳನ್ನು ಮೊಸರ ದೊನ್ನೆಯೊಂದಿಗೆ ರಾಜಿಂದರ್ ನೀಡಿದಾಗ, ಪೇದೆಗಳ ಮುಖದಲ್ಲಿ ಮೂಡಿದ ನಗು, ಅವರುಗಳ ಪೊಲೀಸ್ ಸೇವಾ ಬವಣೆಯನ್ನು ಸಾರಿ ಹೇಳಿತ್ತು. 'ನಾವುಗಳು ನಿಮ್ಮನ್ನು ಲಾಠಿಯಿಂದ ಥಳಿಸಿದ್ದೆವು. ತಾವುಗಳು ನಮ್ಮ ಹಸಿದ ಹೊಟ್ಟೆಗೆ ರೊಟ್ಟಿಗಳನ್ನು ನೀಡಿದಿರಿ' ಎಂದು ಹಿರಿಯ ಪೇದೆ ಹೇಳುವಷ್ಟರಲ್ಲಿ, ಅವನ ಕಣ್ಣೀರ ಹನಿಗಳು ಕೈಲಿದ್ದ ರೊಟ್ಟಿಗಳ ಮೇಲೆ ಬಿದ್ದಿತ್ತು. 

ಘಟನೆಯ ವಿವರಗಳನ್ನು ಕೇಳುತ್ತಾ,  ರೋಹಿಣಿಯ ತಂದೆಯಾದ ರಾಜುರವರು  'ಅನುಕಂಪವೆಂಬುದು  ಧನಿಕರ ಹಾಗೂ ಬಲಿಷ್ಠರ ವರ್ಗದಲ್ಲಿ ಕಾಣಸಿಗದಿರಬಹುದು. ಅದು ಹೃದಯವಂತರ ಅಂತರಾಳದ ಮಿಡಿತ ಮಾತ್ರ' ಎಂದು ಉದ್ಗರಿಸುವಷ್ಟರಲ್ಲಿ ಅವರ ಕಣ್ಣುಗಳು ತುಂಬಿ ಬಂದಿದ್ದವು. 

ಮಾರನೆಯ ದಿನದ ಸೂರ್ಯೋದಯಕ್ಕೆ ಮುಂಚೆಯೇ ತನ್ನ ಸೈಕಲ್ ಪ್ರವಾಸವನ್ನು ಆರಂಭಿಸಿದ ರಾಜಿಂದರನಿಗೆ, ಮಧ್ಯಾಹ್ನ ೨ರ ಸಮಯಕ್ಕೆ ಜಿಲ್ಲಾಸ್ಪತ್ರೆಯನ್ನು ಸೇರಲಾರೆ ಎಂಬ ವಿಷಯದ ಅರಿವಾಗಿತ್ತು. ಜಾಣನಾದ ಅವನು ಕೂಡಲೇ ಡಾ. ತೇಜ್ ಕರಣರನ್ನು ಮೊಬೈಲ್ನಿಂದ ಸಂಪರ್ಕಿಸಿ ತನ್ನ ಸೈಕಲ್ ಪ್ರಯಾಣದ ಪ್ರಯಾಸವನ್ನು ವಿವರಿಸಿದನು. ದಯಾವಂತರಾದ ವೈದ್ಯರು ರಾಜಿಂದರನಿಗಾಗಿ ತಡರಾತ್ರಿವರೆಗೂ ಕಾಯುವುದಾಗಿ ಆಶ್ವಾಸನೆಯನ್ನು ನೀಡಿದರು. 

ಎರಡೆನೆಯ ದಿನ ಸೈಕಲ್ ತುಳಿಯುವುದು ರಾಜಿಂದರನಿಗೆ ಹೆಚ್ಚು ಪ್ರಯಾಸವೆನಿಸುತ್ತಿತ್ತು. ಸುಮಾರು ೩೦ ಕಿ.ಮೀ.ನಷ್ಟು ದೂರ ಕ್ರಮಿಸುವಷ್ಟರಲ್ಲೇ ಸೈಕಲ್ ಸರಪಳಿ ತುಂಡಾಯಿತು. ದಿಕ್ಕು ತೋಚದ ರಾಜಿಂದರ್ ಮಗಳೊಂದಿಗೆ ಸೈಕಲ್ ತಳ್ಳುತ್ತಾ ಸಾಗಿ, ಸಮೀಪದ ತೋಟದ ಮನೆಯೊಂದನ್ನು ತಲುಪಿದನು. ಆ ಮನೆಯ ಮಾಲಿಕನು ಇಬ್ಬರಿಗೂ ಊಟವನ್ನು ಉಣ ಬಡಿಸಿದಾಗ, ಅವರುಗಳ ದಣಿವು ಸಾಕಷ್ಟು ನಿವಾರಣೆಯಾಯಿತು. 'ಇದೆ ದಾರಿಯಲ್ಲೇ ಮತ್ತೆ ೩ ಕಿ.ಮೀ.ನಷ್ಟು ದೂರ ನಡೆದರೆ, ಸೈಕಲ್ ರಿಪೇರಿ ಅಂಗಡಿಯೊಂದು ಇದೆ' ಎಂದು ಆ ಮನೆಯ ಮಾಲೀಕ ರಾಜಿಂದರನಿಗೆ ತಿಳಿಸಿದನು. ರಾಜಿಂದರನ ಬಳಿ ಸೈಕಲ್ ರಿಪೇರಿಗೆ ಹಣವಿಲ್ಲದಿದ್ದು, ಅವನು ಆ ಮನೆಯ ಮಾಲೀಕನ ಮುಂದೆ ಹಣಕ್ಕಾಗಿ ಕೈ ಜೋಡಿಸಬೇಕಾಯಿತು. ಎಡಬಿಡದ ತ್ರಿವಿಕ್ರಮನಂತೆ ಸೈಕಲ್ ತಳ್ಳಿದ ರಾಜಿಂದರ್ ಸೈಕಲ್ ರಿಪೇರಿ ಅಂಗಡಿಯನ್ನು ತಲುಪುವಹೊತ್ತಿಗೆ ಹೈರಾಣಾಗಿ ಹೋಗಿದ್ದನು. ರಾಜಿಂದರನ ಪ್ರಯಾಸದ ಕಥೆಯನ್ನು ಕೇಳಿ ಮರುಗಿದ ಸೈಕಲ್ ರಿಪೇರಿಯವನು, ಯಾವುದೇ ಹಣ ಪಡೆಯದೆ ಅವನ ಸೈಕಲ್ ರಿಪೇರಿ ಮಾಡಿಕೊಟ್ಟಾಗ, ರಾಜಿಂದರ್ ಕರಗಿ ನೀರಾಗಿದ್ದನು. 

ಸೈಕಲ್ ಪ್ರಯಾಣ ಮುಂದುವರೆಸಿ ಜಿಲ್ಲಾಸ್ಪತ್ರೆಯನ್ನ ತಲುಪುವ ಹೊತ್ತಿಗಾಗಲೇ ಸಂಜೆಯ ಸಮಯದ ೫ ಘಂಟೆಯಾಗಿತ್ತು. ಕಾಯುತ್ತ ಕುಳಿತಿದ್ದ ಡಾ. ತೇಜ್ ಕರಣರವರು ಕೂಡಲೇ ದಣಿದಿದ್ದ ಇಬ್ಬರಿಗೂ ತಿಂಡಿಯನ್ನು ನೀಡಿ ಉಪಚರಿಸಿದರು. ಲಾಜು ಕೊಂಚ ವಿರಮಿಸಿದನಂತರ ಅವಳಿಗೆ ನಿಗದಿತದ ಪ್ರಮಾಣದ ರಕ್ತ ನೀಡುವ ಚಿಕಿತ್ಸೆಯನ್ನು ವೈದ್ಯರ ತಂಡ ಯಶಸ್ವಿಯಾಗಿ ಮಾಡಿ ಮುಗಿಸಿತ್ತು. ಇನ್ನೆರಡು ತಾಸಿನ ವಿರಾಮದಾನಂತರ ಲವಲವಿಕೆಯಿಂದ ಎದ್ದು ಕುಳಿತ ಮಗಳನ್ನು ನೋಡಿ, ರಾಜಿಂದರನಿಗೆ ತಾನು ಪಟ್ಟ ಶ್ರಮ ಸಾರ್ಥಕವಾಯಿತೆನಿಸಿತು. ಡಾ. ತೇಜ್ ಕರಣ್ ಹಾಗು ಅವರ ತಂಡದ ಸದಸ್ಯರುಗಳು ರಾಜಿಂದರ್ ಹಾಗು ಲಾಜುರವರ ಸಾಹಸವನ್ನು ಹೊಗಳಿ ಮೆಚ್ಚುಗೆಯ ಮಾತುಗಳನ್ನಾ ಡಿದರು.  ಇಬ್ಬರಿಗೂ ಆಸ್ಪತ್ರೆಯಲ್ಲೇ ರಾತ್ರಿ ತಂಗುವ ವ್ಯವಸ್ಥೆಯನ್ನು ವೈದ್ಯರು ಮಾಡಿಕೊಟ್ಟರು. ಮೇಲಧಿಕಾರಿಗಳನ್ನು ಸಂಪರ್ಕಿಸಿದ ಡಾ. ತೇಜ್ ಕರಣ್, ಇಬ್ಬರೂ ಅವರ  ಹಳ್ಳಿಗೆ  ಹಿಂತಿರುಗಲು ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದರು. ಆದರೂ ಮುಗ್ಧ ಮನಸ್ಸಿನ  ಲಾಜುವನ್ನು ಸಮಸ್ಯೆಯೊಂದು ಕಾಡುತ್ತಿತ್ತು. ಅಪ್ಪನ ಸೈಕಲ್ಲನ್ನು ತೆಗೆದುಕೊಂಡು ಹೋಗುವುದು ಹೇಗೆ ಎಂಬುದೇ ಅವಳ ಆತಂಕಕ್ಕೆ ಕಾರಣವಾಗಿತ್ತು. ಸೈಕಲನ್ನು ಆಂಬುಲೆನ್ಸ್ ವ್ಯಾನಲ್ಲೇ ಕೊಂಡೊಯ್ಯಬಹುದೆಂದು ಡಾ. ತೇಜ್ ಕರಣ್ ತಿಳಿಸಿದಾಗ, ಅಪ್ಪ-ಮಗಳ ಆನಂದಕ್ಕೆ ಪಾರವೇ ಇರಲಿಲ್ಲ. 

'ಲಾಕ್ಡೌನ್ ವಿಧಿಸದೇ ವಿಧಿಯಿತ್ತಿಲ್ಲ. ಆದರೆ ಲಾಕ್ಡೌನ್ ಬೇರೆ ಬೇರೆ ಜನಗಳಿಗೆ, ವಿಶೇಷವಾಗಿ ಬಡವರಿಗೆ ಹಲುವು ಕಷ್ಟಗಳನ್ನು ತಂದೊಡ್ಡಿತ್ತು. ದಿನಗೂಲಿ ಕಾರ್ಮಿಕರ ದುಡಿಮೆಗೆ ಕುತ್ತು ಉಂಟಾಗಿದ್ದು ಮಾತ್ರ ಅವರುಗಳಿಗೆ ಭರಿಸಲಾಗದ ಸಮಸ್ಯೆಯಾಗಿತ್ತು. ಸರ್ಕಾರೀ ಹಾಗೂ ಹಲವು ಖಾಸಗಿ ಸಂಸ್ಥೆಗಳ ಪ್ರಯತ್ನದಿಂದ ದಿನಸಿ ಹಾಗು ಸಿದ್ಧ ಭೋಜನದ ಪೊಟ್ಟಣಗಳು ಬಡವರ ಕೈಗಳನ್ನೇನೋ ಸೇರುತ್ತಿದ್ದವು. ಆದರೂ ಎಲ್ಲರಿಗೂ ಆಹಾರದ ಸೌಲಭ್ಯ ಸಾಕಷ್ಟು ಪ್ರಮಾದಲ್ಲಿ ದೊರಕ್ಕುತ್ತಿದೆಯೇ ಎಂಬ ಕಳಕಳಿಯನ್ನು ರೋಹಿಣಿ ತನ್ನ ಸಂಶೋಧನೆಯ ಪುಸ್ತಕದಲ್ಲಿ ದಾಖಲಿಸಿದ್ದು, ತಂದೆ ರಾಜುರವರ ಅಭಿಪ್ರಾಯವೂ ಆಗಿತ್ತು.

                                                                                            ######