Monday 5 April 2021

೧೦. ನಲುಗಿದ ಆರ್ಥಿಕ ಸ್ಥಿತಿ

೧೦ 

ನಲುಗಿದ ಆರ್ಥಿಕ ಸ್ಥಿತಿ 



ರಾಜುರವರು ಅವರ ಬಡಾವಣೆಯ ನಿವಾಸಿಗಳ ಸಂಘದ ಅಧ್ಯಕ್ಷರಾಗಿದ್ದರು. ವಿವಿಧ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದ ರಾಜುರವರಿಂದ,  ದೇಶದಲ್ಲಿನ ಇಂದಿನ ಆಗು-ಹೋಗುಗಳ ಬಗ್ಗೆ ಚರ್ಚೆ-ತರ್ಕಗಳನ್ನು ಅವರ ಸ್ನೇಹಿತರು ಬಯಸುತ್ತಿದ್ದರು. ರಾಜು ಅವರ ಸ್ನೇಹಿತರುಗಳನ್ನೆಂದೂ ನಿರಾಸೆಗೊಳಿಸುವವರಾಗಿರಲಿಲ್ಲ. 

ಅಂದು ನಿವಾಸಿಗಳ ಸಂಘದ ತಿಂಗಳ ಸಭೆಯ ದಿನವಾಗಿತ್ತು. ಕೋವಿಡ್ ನಿರ್ಬಂಧಗಳಿಂದಾಗಿ ಅದು ಕೇವಲ ಹದಿನೈದು ಪದಾಧಿಕಾರಿಗಳ ಸಭೆಯಾಗಿತ್ತು. ಸಂಘದ ಮಾಮೂಲಿ ವ್ಯವಹಾರಗಳ ಮಂಡನೆ ಮುಗಿದನಂತರ ಅನೌಪಚಾರಿಕ ಚರ್ಚೆಯ ಸಮಯವಾಗಿತ್ತು. ಚರ್ಚೆ ಪ್ರಧಾನ ಮಂತ್ರಿಗಳು ಆ ದಿನಗಳಲ್ಲಿ ಪ್ರಕಟಿಸಿದ್ದ 'ಕೋವಿಡ್ ಆರ್ಥಿಕ ಪ್ಯಾಕೇಜ್ (Covid Pandemic Package)'ನ ಕಡೆಗೆ ತಿರುಗಿತ್ತು. 

ಹಿರಿಯ ಪದಾಧಿಕಾರಿಗಳಾಗಿದ್ದ ಶ್ರೀ ಶಂಕರ್ ಸಿಂಗ್ ರವರಿಂದ ಚರ್ಚೆಯ ಆರಂಭವಾಗಿತ್ತು. ಮಾಜಿ ಬ್ಯಾಂಕ್ ಅಧಿಕಾರಿ ಕೂಡ ಆಗಿದ್ದ ಸಿಂಗ್ ರವರು ಉತ್ತಮ ತಯಾರಿಯೊಂದಿಗೆ ಬಂದಿದ್ದರು. ಅವರು ಮಾತನಾಡುತ್ತಾ 'ಕೋವಿಡ್ ಮಹಾಮಾರಿ ಬರುವುದಕ್ಕೆ ಮುಂಚೆಯೇ ನಮ್ಮ ದೇಶ ಆರ್ಥಿಕ ಸಂಕಷ್ಟದಲ್ಲಿತ್ತು. "೨೦೧೬ರ ಅಪನಗದೀಕರಣ (demonetization) ಮತ್ತು ೨೦೧೭ರ ಸರಕು ಮತ್ತು ಸೇವೆಗಳ ತೆರಿಗೆ (GST)"ಗಳೊಡ್ಡಿದ್ದ ಅವಳಿ ಸಂಕಟಗಳಿಂದ ನಮ್ಮ ದೇಶ ಮುಂಚೆಯೇ ತತ್ತರಿಸಿ ಹೋಗಿತ್ತು. ಕೋವಿಡ್ನ ದಾಳಿಗೆ ಸಾಕಷ್ಟು ಮುಂಚೆಯೇ, ೨೦೨೦ರ  ಆರ್ಥಿಕ ವರ್ಷದ ಜಿ.ಡಿ.ಪಿ. ಹೆಚ್ಚಳದ ದರ         ೫. ೩%ರಿಂದ ೨. ೫%ರಷ್ಟಕ್ಕೆ ಇಳಿಯಬಹುದೆಂಬುದು ಆರ್ಥಿಕ ತಜ್ಞರ ನಿರೀಕ್ಷೆಯಾಗಿತ್ತು. 

ಆರ್ಥಿಕ ತಜ್ಞರ ಮುನ್ನೆಚ್ಚರಿಕೆಯಂತೆ ಮಹಾಮಾರಿ ಕೋವಿಡ್, ಮುಂಚೆಯೇ ಇದ್ದ ಆರ್ಥಿಕ ಸಂಕಷ್ಟಗಳನ್ನು ಮತ್ತಷ್ಟು ಜಟಿಲಗೊಳಿಸಿದೆ. ೨೦೨೧ರ ಆರ್ಥಿಕ ವರ್ಷದ ಜಿ.ಡಿ.ಪಿ. ಹೆಚ್ಚಳದ ದರದ ನಿರೀಕ್ಷೆಯಂತೂ ೧. ೫%ರಿಂದ ೨. ೦%ರಷ್ಟಿರಬಹುದೆಂದು ಅಂದಾಜಿಸಲಾಗಿದ್ದು, ಅದನ್ನು ೧೯೯೧ರ ಆರ್ಥಿಕ ಸುಧಾರಣೆಗಳನಂತರದ ಕನಿಷ್ಠ ಬೆಳವಣಿಗೆಯೆಂದೇ ಬಣ್ಣಿಸಲಾಗುತ್ತಿದೆ. ಕೋವಿಡ್ ಮತ್ತು ಅದರಿಂದುಟಾದ ಲಾಕ್ಡೌನಿನಿಂದ ಸುಮಾರು ೧೪ ಕೋಟಿಗಳಷ್ಟು ವಲಸಿಗ ಕೆಲಸಗಾರರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ದೇಶದ ಅರ್ಧದಷ್ಟು ಕುಟುಂಬಗಳು, ತಮ್ಮ ತಿಂಗಳ ಆದಾಯಗಳಲ್ಲಿ ಭಾರಿ ಕುಸಿತವನ್ನು ಕಂಡಿವೆ. ಒಂದು ಅಂದಾಜಿನ ಪ್ರಕಾರ, ಕೋವಿಡ್ ಲಾಕ್ಡೌನ್ - ೧೯ರ ಸಂಕಷ್ಟದಿಂದ ದಿನನಿತ್ಯ ರೂ. ೩೨,೦೦೦ ಕೋಟಿಗಳಷ್ಟರ (೪. ೫ ಬಿಲಿಯನ್ ಅಮೇರಿಕಾ ಡಾಲರ್) ನಷ್ಟ ನಮ್ಮ ದೇಶಕ್ಕಾಗುತ್ತಿದೆ. ದೇಶದ ಅರ್ಧದಷ್ಟಕ್ಕೂ ಹೆಚ್ಚಿನ ಸಂಖ್ಯೆಯ ಉದ್ದಿಮೆಗಳು ವಹಿವಾಟಿಲ್ಲದೆ ನಿಂತುಹೋಗಿವೆ. ಸರಬರಾಜಿನ ಸರಪಳಿ (supply chain)ಯ ಕೊಂಡಿಗಳು ಕಳಚಿ, ಇಡೀ ದೇಶದ ಆರ್ಥಿಕತೆಯೇ ಸ್ತಬ್ಧವಾಗಿದೆ.  ತರಕಾರಿಗಳಂತಹ ಬೇಗನೆ ಕೆಡುವ ಬೆಳೆಗಳನ್ನು ಬೆಳೆಯುವ ರೈತರಂತೂ ಕಂಗಾಲಾಗಿ ಹೋಗಿದ್ದಾರೆ. ಸಂಚಾರ ವ್ಯವಸ್ಥೆ ನಿಂತು, ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ. ಲಕ್ಷಾಂತರ ರುಪಾಯಿಗಳ ಬೆಲೆ ಬಾಳುವ ಅವರ ಟ್ಯಾಕ್ಸಿಗಳು ಕೆಲಸವಿಲ್ಲದೆ ನಿಂತಿವೆ. ಪ್ರವಾಸೋದ್ಯಮವಂತೂ ನೆಲ ಕಚ್ಚಿಹೋಗಿದೆ. ನಮ್ಮ ಆಮದು-ರಫ್ತುಗಳ ವಹಿವಾಟಿನಲ್ಲಿ ೪೦%ರಷ್ಟು ಕುಸಿತ ಕಂಡುಬಂದಿದೆ. 

ಇವೆಲ್ಲಾ ಆತಂಕಕಾರಿ ಬೆಳವಣಿಗೆಗಳ ನಡುವೆ, ನಮ್ಮ ದೇಶದ ಷೇರು ಮಾರುಕಟ್ಟೆಯ ಬೆಳವಣಿಗೆ ಮಾತ್ರ ಕುಸಿಯದೆ ಉಳಿದು, ಆಶ್ಚರ್ಯವನ್ನುಂಟು ಮಾಡಿದೆ. ೨೦೨೦ರ ಮಾರ್ಚ್ ೨೩ರಂದು ಭಾರಿ ಕುಸಿತವನ್ನು ಕಂಡಿದ್ದ ಷೇರು ಮಾರುಕಟ್ಟೆ, ಮಾರ್ಚ್ ೨೫ರಂದೇ ಚೇತರಿಸಿಕೊಂಡಿತ್ತು. ಇಂದು, ಅಂದರೆ ೨೦೨೦ರ ಜೂನ್ ೧೭ರಂದು ಮುಂಬೈ ಸೂಚ್ಯಂಕ ೩೩,೫೦೭ ಮತ್ತು ನಿಫ್ಟಿ ಸೂಚ್ಯಂಕ ೯೮೮೧ರಷ್ಟಿದ್ದು ಸಮಾಧಾನಕರವಾದ ಮಟ್ಟದಲ್ಲೇ ಇದೆ. ಕೋವಿಡ್ನ ಮಹಾಮಾರಿಯ ದಾಳಿಯಿಂದ ವಿಶ್ವ ಕಾಣುತ್ತಿರುವ ಆರ್ಥಿಕ ಕುಸಿತದದ ಹೊರತಾಗಿಯೂ, ಏರುತ್ತಾ ಸಾಗುತ್ತಿರುವ ಷೇರು ಮಾರುಕಟ್ಟೆಯ ಸೂಚ್ಯಂಕದ ಬಗ್ಗೆ ಹೂಡಿಕೆದಾರರು ಎಚ್ಚರದಿಂದಿರುವುದು ಒಳಿತು' ಎಂದರು. 

ಈಗ ಮಾತಿನ ಸರದಿ ರಾಜುರವರದಾಗಿತ್ತು. 'ಧನ್ಯವಾದಗಳು ಶಂಕರ್ ಸಿಂಗರವರೆ. ಕೋವಿಡ್ ಮಹಾಮಾರಿಯ ದಾಳಿಗೆ ಸಿಲುಕಿ ನಲುಗುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿಯ ವಿವರಣೆಯನ್ನು ಚೆನ್ನಾಗೇ ನೀಡಿದ್ದೀರಿ. ಆದರೆ ನಾವುಗಳು ನಿರಾಶರಾಗಬೇಕಿಲ್ಲ. ಆರ್ಥಿಕ ಪರಿಸ್ಥಿತಿಯ ಚೇತರಿಕೆಗೆ ಬೇಕಾದ ಎಲ್ಲಾ ಕ್ರಮಗಳನ್ನು ನಮ್ಮ ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿದೆ. ಆ ಕ್ರಮಗಳ ವಿವರಗಳನ್ನು ತಮ್ಮಗಳ ಮುಂದಿಡುತ್ತಿದ್ದೇನೆ. 

೧೨ ಮೇ ೨೦೨೦

ಅಂದು ನಮ್ಮ ಪ್ರಧಾನಿ ಮೋದಿಯವರು ರೂ. ೨೦ ಲಕ್ಷ ಕೋಟಿಗಳಷ್ಟರ (ಯು.ಎಸ್.ಡಾ.೨೮೦ ಬಿಲಿಯನ್) ಆರ್ಥಿಕ ಪರಿಹಾರವನ್ನು(ಪ್ಯಾಕೇಜ್) ಪ್ರಕಟಿಸಿದರು. ಅದು ನಮ್ಮ ಜಿ.ಡಿ.ಪಿ.ಯ ೧೦%ರಷ್ಟು ಎಂಬುದನ್ನು ನಾವು ಗಮನಿಸಬೇಕು. ಜಪಾನ್ (ಜಿ.ಡಿ.ಪಿಯ ೨೧%ರಷ್ಟು) ಮತ್ತು ಅಮೇರಿಕಾ (ಜಿ.ಡಿ.ಪಿ.ಯ ೧೩%ರಷ್ಟು) ದೇಶಗಳ ಕೋವಿಡ್  ಪ್ಯಾಕೇಜುಗಳನಂತರದ ಹೆಚ್ಚಿನ ಪ್ಯಾಕೇಜ್ ನಮ್ಮ ದೇಶದ್ದೇ ಎಂಬುದು ನಮಗೆ ಹೆಮ್ಮಯ ವಿಷಯ. ಕೋವಿಡ್ ಮಹಾಮಾರಿ ತಂದೊಡ್ಡಿರುವ ಆರ್ಥಿಕ ಸಂಕಷ್ಟ ನಮಗೆ ಹಲವು ಪಾಠಗಳನ್ನು ಕಲಿಸಿದೆ. "ಆತ್ಮನಿರ್ಭರ ಭಾರತದ ನಿರ್ಮಾಣದತ್ತ ನಾವೀಗ ಸಾಗಬೇಕಿದೆ" ಎಂಬ ಕರೆಯನ್ನೂ ನಮ್ಮ ಪ್ರಧಾನಿಗಳು ನಮಗೆ ಅಂದು ನೀಡಿದರು. 

ಆರ್ಥಿಕ ಪ್ಯಾಕೇಜ್ ಕುರಿತಾದ ಮುಂದಿನ ಪ್ರಕಟಣೆಗಳನ್ನು ವಿತ್ತ ಮಂತ್ರಿಗಳು ಮಾಡುತ್ತಾರೆಂದೂ ಅಂದೇ ಪ್ರಧಾನಿಗಳು ತಿಳಿಸಿದ್ದರು. 

೧೩ ಮೇ ೨೦೨೦

ಅಂದು ದೇಶದ ವಿತ್ತ ಮಂತ್ರಿಗಳಾದ ಶ್ರೀಮತಿ ನಿರ್ಮಲ ಸೀತಾರಾಮನ್ ರವರು ಎಂ.ಎಸ್.ಎಂ.ಇ. ಘಟಕಗಳ ಪುನರುಜ್ಜೀವನಕ್ಕಾಗಿ ರೂ. ೩ ಲಕ್ಷ ಕೋಟಿಗಳ ನಿಧಿಯೊಂದನ್ನು ಪ್ರಕಟಿಸಿದರು. ಮುಂದಿನ ದಿನದ ಪ್ರಕಟಣೆಗಳನ್ನೂ ಅವರೇ ಮುಂದುವರೆಸಿದ್ದರು. 

೧೪ ಮೇ ೨೦೨೦

ಆ ದಿನದ ಪರಿಹಾರದ ಪ್ರಕಟಣೆ ವಲಸಿಗ ಕೆಲಸಗಾರರು, ರೈತರು ಮತ್ತು ರಸ್ತೆ ಬದಿಯ ವ್ಯಾಪಾರಿಗಳಿಗಾಗಿತ್ತು. "ಒಂದು ದೇಶ, ಒಂದು ರೇಷನ್ ಕಾರ್ಡ್" ಎಂಬ ವ್ಯವಸ್ಥೆಯ ಕಾರ್ಯಾನ್ವಯವನ್ನು ವಲಸಿಗ ಕೆಲಸಗಾರರ ಹಿತದೃಷ್ಟಿಯಿಂದ ತ್ವರಿತಗೊಳಿಸಲಾಗುವುದೆಂದು ಕೂಡ ಪ್ರಕಟಿಸಲಾಯಿತು. 

೧೫ ಮೇ ೨೦೨೦

ಕೃಷಿ ಉತ್ಪನ್ನಗಳ ಶೇಖರಣೆಯ ಮಿತಿಯನ್ನು ಸಮಾಪ್ತಿಗೊಳಿಸಲೆಂದು "ಅವಶ್ಯಕ ವಸ್ತುಗಳ ಕಾಯಿದೆ (Essential Commodities Act - 1958)ಗೆ ತಿದ್ದುಪಡಿಯನ್ನು ಮಾಡಲಾಗುವುದು. ಹೊಸ ಕೃಷಿ ಕಾಯಿದೆಗಳನ್ನು ಜಾರಿಗೊಳಿಸಲಾಗುವುದು. ಮೀನುಗಾರಿಕೆ ಮತ್ತು ಪಶುಪಾಲನೆಗಳಿಗಾಗಿ ವಿಶೇಷ ನಿಧಿಯಯನ್ನು ಕೂಡ ಅಂದು ಪ್ರಕಟಿಸಲಾಯಿತು. 

೧೬ ಮೇ ೨೦೨೦

ಇಂಧನ, ರಕ್ಷಣೆ ಮತ್ತು ಬಾಹ್ಯಾಕಾಶ (Power, Defense and Space) ಕ್ಷೇತ್ರಗಳ ಖಾಸಗೀಕರಣವನ್ನು ಯೋಜಿಸಲಾಗಿದ್ದು, ಅವುಗಳ ತೀವ್ರ ಅಭಿವೃದ್ಧಿಗಾಗಿ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂಬ ಪ್ರಕಟಣೆಯನ್ನು ಅಂದು ಮಾಡಲಾಯಿತು.  

೧೭ ಮೇ ೨೦೨೦

ಅಂದು ವಿವಿಧ ಪ್ರಕಟಣೆಗಳ ಮುಕ್ತಾಯದ ದಿನವಾಗಿತ್ತು. ಆರ್ಥಿಕ ಪ್ಯಾಕೇಜಿನ ಯೋಜನೆ ಮೂರು ಮುಖ್ಯ ಆಯಾಮಗಳ ವ್ಯಾಪ್ತಿಯನ್ನೊಳಗೊಂಡಿದೆ. 

-ರಾಜ್ಯಾದಾಯ (Fiscal) - (ಸರಕಾರದ ಆದಾಯ ಮತ್ತು ವೆಚ್ಚಗಳ ಉತ್ತಮ ನಿರ್ವಹಣೆ)

-ವಿತ್ತೀಯ ನಿರ್ವಹಣೆ (Monetary) - (ಬಡ್ಡಿ ದರಗಳೂ ಸೇರಿದಂತೆ, ಆರ್.ಬಿ.ಐ.ನಿಂದ ವಿವಿಧ ನಿಯಮಾವಳಿಗಳ ಉತ್ತಮ ನಿರ್ವಹಣೆ)

-ಹಣಕಾಸಿನ ಪರ್ಯಾಪ್ತತೆ (liquidity) - (ಎಲ್ಲ ಉದ್ದಿಮೆಗಳಿಗೆ ಸಾಕಷ್ಟು ಸಾಲಗಳ ದೊರೆಯುವಿಕೆ) 

"ಪ್ರಕಟಿಸಿದ ಆರ್ಥಿಕ ಪರಿಹಾರಗಳಿಂದ ಇಂದೇ ಉತ್ತಮ ಫಲಿತಾಂಶಗಳು ಕಂಡುಬರದೆ ಇರಬಹುದು. ಆದರೆ ಕೋವಿಡ್ನ ದಾಳಿಯಿಂದ ತತ್ತರಿಸಿರುವ ಬಡವರಿಗೆ ಕೂಡಲೇ ಪರಿಹಾರ ದೊರೆಕಿಸುವುದೇ ನಮ್ಮ ಯೋಜನೆಗಳ ಉದ್ದೇಶ ಎಂಬುದು ವಿತ್ತ ಮಂತ್ರಿಗಳ ಅಂದಿನ ಸಮಜಾಯಿಷಿಯಾಗಿತ್ತು" ಎಂದು ತಮ್ಮ ಭಾಷಣವನ್ನು ಅಂತ್ಯಗೊಳಿಸಿದ ರಾಜುರವರು, ಇತರರ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾ ಕುಳಿತರು. 

ರಾಜುರವರ ಭಾಷಣ ಮುಗಿಯುತ್ತಲೇ ಉತ್ತೇಜಿತರಾಗಿ ಕುಳಿತಲ್ಲಿಂದಲೇ ಘರ್ಜಿಸಿದವರು ಹರ್ಬನ್ಸ್ ಲಾಲರಾಗಿದ್ದರು. ಸುಮಾರು ೨೦,೦೦೦ ಸದಸ್ಯರನ್ನೊಳಗೊಂಡ ನಗರದ ರಸ್ತೆ ಬದಿಯ ವ್ಯಾಪಾರಿಗಳ ಸಂಘದ ಅಧ್ಯಕ್ಷರು ಅವರಾಗಿದ್ದರು. 'ನಿಮ್ಮ ವಿತ್ತ ಶಾಸ್ತ್ರದ ಯೋಜನೆಗಳು ನಮಗೆ ತಿಳಿಯುವುದಿಲ್ಲ. ತಮ್ಮ ಕೋಟಿ ಕೋಟಿಗಳ  ಅಂಕೆ-ಸಂಖ್ಯೆಗಳ ವಿವರ ನಮಗೆ ಬೇಕಿಲ್ಲ. ಕಳೆದ ಮೂರು ತಿಂಗಳ ಲಾಕ್ಡೌನಿನಿಂದ ವ್ಯಾಪಾರವಿಲ್ಲದೆ ಕೈಕಟ್ಟಿ, ಹೊಟ್ಟೆಗಿಲ್ಲದೆ ಕುಳಿತಿರುವ ನಮ್ಮ ರಸ್ತೆ ಬದಿಯ ವ್ಯಾಪಾರಿಗಳಿಗೆ ಯಾವ ನೆರವನ್ನು ನೀಡಿದ್ದೀರಿ? ಎಂಬುದನ್ನು ಮೊದಲು ತಿಳಿಸಿ. ಲಾಕ್ಡೌನ್ ಮುಗಿದನಂತರವೂ ಅವರ ರಸ್ತೆ ಬದಿಯ ವ್ಯಾಪಾರಕ್ಕೆ ಇಲ್ಲದ ಅಡೆತಡೆಗಳನ್ನೊಡ್ಡಲಾಗುತ್ತಿದೆ. ದಿನ ಬೆಳಗಾದರೆ ಸ್ವಚ್ಛತೆ, ಕೋವಿಡ್ಗಳ ಹೆಸರಿನಲ್ಲಿ ಪೊಲೀಸರು, ನಗರಸಭೆಯ ಅಧಿಕಾರಿಗಳು ಅವರುಗಳನ್ನು ಒಕ್ಕಲೆಬ್ಬಿಸುತ್ತಾರೆ. ತಮ್ಮ ಕೋವಿಡ್ ಪ್ಯಾಕೇಜ್ನಲ್ಲಿ ರಸ್ತೆ ಬದಿಯ ವ್ಯಾಪಾರಿಗಳನ್ನು ಏಕೆ ಕಡೆಗಣಿಸಲಾಗಿದೆ?' ಹರ್ಬನ್ಸ್ ಲಾಲರ ಸಿಟ್ಟು ನೆತ್ತಿಗೇರಿತ್ತು. 

ಹರ್ಬನ್ಸ್ ಲಾಲರ ಘರ್ಜನೆಯಿಂದ ಎಲ್ಲರು ಆಶ್ಚರ್ಯಚಕಿತರಾಗಿದ್ದರು. ಕೆಲಕ್ಷಣ ಇಡೀ ಕೋಣೆ ಮೌನದಿಂದ ಮರಗಟ್ಟಿತ್ತು. 'ಅವರ ಆಕ್ರೋಶ ನ್ಯಾಯಯುತವಾದದ್ದು. ಅವರ ಪ್ರಶ್ನೆಗಳಿಗೆ ನಮ್ಮಲ್ಲಿ ಯಾರೊಬ್ಬರಾದರೂ ಸರಿಯುತ್ತರ ನೀಡಬೇಕು' ಎಂಬ ಗುಸು ಗುಸು ಎಲ್ಲರ ನಡುವೆ ಹರಿದಾಡಿತ್ತು. ರಾಜುರವರಲ್ಲಿ ಯಾವ ಉತ್ತರವೂ ಇದ್ದಂತೆ ಕಾಣುತ್ತಿರಲಿಲ್ಲ. ವಕೀಲ ಮದನ್ ಲಾಲರು ಮಾತ್ರ ತಮ್ಮ ಮೊಬೈಲ್ನಲ್ಲಿ ಅಂತರ್ಜಾಲವನ್ನು ಕೆದಕುತ್ತಿರುವಂತೆ ಕಂಡುಬಂದಿತ್ತು. ಕೆಲವು ನಿಮಿಷಗಳನಂತರ ಮದನ್ ಲಾಲರು ಮಾತನಾಡುತ್ತ, 'ಹರ್ಬನ್ಸ್ ಲಾಲ್ರವರೇ, ತಮ್ಮ ಸಾತ್ವಿಕ ಆಕ್ರೋಶವನ್ನು ನಾನು ಗೌರವಿಸುತ್ತೇನೆ. ಬಡಬಗ್ಗರ ನೆರವಿಗೆ ಬಾರದ ಯಾವುದೇ ಯೋಜನೆಯನ್ನೂ ನಿಷ್ಪ್ರಯೋಜಕವೆಂದೇ ಹೇಳಬೇಕು. ಆದರೆ ಕೇಂದ್ರ ಸರಕಾರದ ಕೋವಿಡ್ ಪ್ಯಾಕೇಜ್ನಲ್ಲಿ ರಸ್ತೆ ಬದಿಯ ವ್ಯಾಪಾರಿಗಳ ಬವಣೆಯನ್ನು ನಿವಾರಿಸುವ ಬಗ್ಗೆ ಕೆಲವು ಕ್ರಮಗಳನ್ನು ಘೋಷಿಸಲಾಗಿದೆ. ಸರಕಾರಿ ಜಾಲತಾಣದಲ್ಲಿರುವ ವಿವರಗಳನ್ನು ಓದುತ್ತಿದ್ದೇನೆ. ಎಲ್ಲರೂ ದಯಮಾಡಿ ಕೇಳಿ. 

"ಸಣ್ಣ ವ್ಯಾಪಾರಿಗಳೇ ಹಾಗೂ ರಸ್ತೆ ಬದಿಯ ವ್ಯಾಪಾರಿಗಳೇ,

ತಮಗೆ ತಿಳಿದಿದೆಯೇ?

ಲಾಕ್ಡೌನ್ನಿನ ದಿನಗಳು ಮುಗಿದಿವೆ. ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮತ್ತೆ ತೆರೆಯುವ ಸಮಯ ಬಂದಿದೆ. ನಿಮಗೆ ಬಂಡವಾಳದ ನೆರವು ದೊರೆತು, ಬಡ್ಡಿಯ ಹೊರೆ ಇಳಿಸಲಾಗಿದೆ. 

-ಸಣ್ಣ ವ್ಯಾಪಾರಿಗಳ (ಮುದ್ರಾ ಶಿಶು ಸಾಲಗಳು - MUDRA SHISHU LOANS) ಬಡ್ಡಿಯ ಹೊರೆಯನ್ನು ತಗ್ಗಿಸಲು ಕೇಂದ್ರ ಸರಕಾರ ೨%ರಷ್ಟು ನೆರವು ನೀಡಲಿದೆ. ಈ ನೆರವಿಗಾಗಿ ರೂ. ೧೫೦೦ ಕೋಟಿಯಷ್ಟರ ನಿಧಿಯನ್ನು ಕಾದಿರಸಲಾಗಿದೆ. 

-೫೦ ಲಕ್ಷ ರಸ್ತೆ ಬದಿಯ ವ್ಯಾಪಾರಿಗಳಿಗೆ ತಲಾ ರೂ. ೧೦,೦೦೦ ಸಾಲವನ್ನು ಸರಕಾರಿ ವಲಯದ ಬ್ಯಾಂಕ್ಗಳಿಂದ ಒದಗಿಸುವ ಕಾರ್ಯಕ್ರಮವೊಂದನ್ನು ಜಾರಿಗೊಳಿಸಲಾಗಿದೆ. ಈ ನೆರವಿಗಾಗಿ              ರೂ. ೫೦೦೦ ಕೋಟಿಗಳ ನಿಧಿಯನ್ನು ಕಾದಿರಿಸಲಾಗಿದೆ. 

ತಮ್ಮ ಗೆಲುವೇ ದೇಶದ ಗೆಲುವು" 

ಹರ್ಬನ್ಸ್ ಲಾಲ್ರವರೇ, 'ತಮ್ಮ ಎಲ್ಲ ರಸ್ತೆ ಬದಿಯ ವ್ಯಾಪಾರಿಗಳನ್ನು ದಾಖಲೆ ಪಾತ್ರಗಳೊಂದಿಗೆ ಕರೆ ತನ್ನಿ. ಅವರುಗಳಿಗೆ ತಲಾ  ರೂ.೧೦೦೦೦ ಸಾಲವನ್ನು ಕೊಡಿಸುವ ಪ್ರಯತ್ನವನ್ನು ಮಾಡೋಣ. ಎಲ್ಲ  ರಾಜ್ಯ ಸರಕಾರಗಳೂ ರಸ್ತೆ ಬದಿಯ ವ್ಯಾಪಾರಿಗಳಿಗೆ ಅಧಿಕೃತ ಗುರುತಿನ ಚೀಟಿಯೊಂದನ್ನು ನೀಡುವ ಏರ್ಪಾಡನ್ನು ಮಾಡಿವೆ. ಆ ಗುರುತಿನ ಚೀಟಿಯನ್ನು ಒಮ್ಮೆ ಪಡೆದರೆ ಮುಗಿಯಿತು, ಅವರುಗಳನ್ಯಾರು ರಸ್ತೆ ಬದಿಗಳಿಂದ ಒಕ್ಕಲೆಬ್ಬಿಸಲು ಸಾಧ್ಯವಾಗದು' ಎಂದರು. 

ಹರ್ಬನ್ಸ್ ಲಾಲರು ಸೇರಿದಂತೆ ಎಲ್ಲರಿಗೂ ಮದನ್ ಲಾಲರು ನೀಡಿದ ರಸ್ತೆ ಬದಿಯ ವ್ಯಾಪಾರಿಗಳ ಸವಲತ್ತುಗಳ ಬಗೆಗಿನ ಮಾಹಿತಿಗಳು ಆಶ್ಚರ್ಯವನ್ನು ಮತ್ತು ಸಂತಸವನ್ನು ಒಮ್ಮಲೇ ಉಂಟುಮಾಡಿದ್ದವು.  ಆದರೂ ಸುಮ್ಮನಾಗದ ಹರ್ಬನ್ಸ್ ಲಾಲರು ಮಾತನಾಡುತ್ತ, '೧೪ ಕೋಟಿಗಳಷ್ಟು ವಲಸಿಗ ಕೆಲಸಗಾರರು ಕಳೆದ ಮೂರು ತಿಂಗಳುಗಳಿಂದ ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಸುಡು ಬಿಸಿಲಿನಲ್ಲಿ ಸಂಸಾರದೊಂದಿಗೆ ತಮ್ಮ ತಮ್ಮ ಹಳ್ಳಿಗಳತ್ತ ನಡೆದು ಸಾಗಿದ ಅವರುಗಳಲ್ಲಿ ಕೆಲವರು ನೀರು ಆಹಾರಗಳಿಲ್ಲದೆ ಪ್ರಾಣವನ್ನು ಬಿಟ್ಟಿದ್ದಾರೆ. ಅವರುಗಳಿಗ್ಯಾವ ಆರ್ಥಿಕ ನೆರವು ಸಿಗುತ್ತದೆ?' ಎಂದು ಕೇಳಿದರು. 

ಮದನ್ ಲಾಲರು ಉತ್ತರಿಸುತ್ತಾ, 'ವಲಸಿಗ ಕೆಲಸಗಾರರೆಲ್ಲರಿಗೂ ಎರಡು ತಿಂಗುಳುಗಳಿಗೆ ಸಾಕಾಗುವಷ್ಟು ದಿನಸಿ ಪೊಟ್ಟಣಗಳನ್ನು ವಿತರಿಸಲಾಗಿದೆ. ಈ ಯೋಜನೆಯನ್ನು ಈ ವರ್ಷದ ಡಿಸೆಂಬರ್ ತಿಂಗಳ ಅಂತ್ಯದವರೆಗೆ ವಿಸ್ತರಿಸುವ ಪ್ರಸ್ತಾಪವಿದೆ. ಕೆಲವು ರಾಜ್ಯ ಸರಕಾರಗಳು ಅವರುಗಳಿಗೆ ಸ್ವಲ್ಪ ಆರ್ಥಿಕ ಸಹಾಯವನ್ನೂ ನೀಡಿವೆ. ಇನ್ನೂ ಹೆಚ್ಚಿನ ಪರಿಹಾರ ಅವರುಗಳಿಗೆ ಹರಿದು ಬರಬೇಕಿತ್ತು ಎಂಬುದನ್ನು ನಾನು ಒಪ್ಪುತ್ತೇನೆ. ಕನಿಷ್ಠ ತಲಾ ರೂ.೧೦,೦೦೦ಗಳ ಆರ್ಥಿಕ ನೆರವು ಅವರುಗಳ ತುರ್ತು ಪರಿಹಾರಕ್ಕಾಗಿ ನೀಡಬೇಕಿತ್ತು. ಆ ರೀತಿಯ ಪರಿಹಾರ ಬೇಗ ಹರಿದು ಬರಲಿ ಎಂದು ಆಶಿಸೋಣ.' 

ಮುಂದಿನ ಮಾತಿನ ಸರದಿ ಪ್ರೊ. ಪ್ರಹ್ಲಾದ್ ಸರ್ದೇಶಪಾಂಡೆರವರದಾಗಿತ್ತು. ಅವರು ನಿವೃತ್ತ ಅರ್ಥ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದು, ಮೋದಿಯವರ ಆರ್ಥಿಕ ಯೋಜನೆಗಳ ಕಡು ವಿಮರ್ಶಕರಾಗಿದ್ದರು. 'ಕೋವಿಡ್-೧೯ ಮಹಾಮಾರಿಯು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಹಾಳುಗೆಡವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೂಲಂಕಷವಾಗಿ ವಿಮರ್ಶಿಸದೆ ಸರಕಾರ  ದಿಢೀರನೆ ವಿಧಿಸಿದ ದೀರ್ಘಾವಧಿಯ ಲಾಕ್ಡೌನ್ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಕೊಂದು  ಹಾಕಿಬಿಟ್ಟಿದೆ ಎಂಬುದು ನನ್ನ ಅಭಿಪ್ರಾಯ. ೨೦೧೬ರ ಅಪನಗದೀಕರಣವೆಂಬ ದುಃಸ್ವಪ್ನದ ಪುನರಾವರ್ತನೆಯೆ ಲಾಕ್ಡೌನ್ - ೨೦೨೦ ಎಂಬುದು ಹಲವು ತಜ್ಞರ ಅನಿಸಿಕೆಯೂ ಹೌದು. ನಮ್ಮ ದೇಶದಲ್ಲಿ ವಿಧಿಸಿದ ಲಾಕ್ಡೌನ್ ಇಡೀ ವಿಶ್ವದಲ್ಲೇ ಅತ್ಯಂತ ಕಠಿಣವಾದುದಾಗಿತ್ತು. ಆದರೆ ಲಾಕ್ಡೌನ್ ಜಾರಿಗೊಳಿಸಿದ ನಮ್ಮ ನಾಯಕರುಗಳು "ಜೀವಗಳ ರಕ್ಷಣೆ ಮುಖ್ಯವೋ ಅಥವ ಜೀವನೋಪಾಯಗಳ ರಕ್ಷಣೆ ಮುಖ್ಯವೋ (Lives Vs Livelihood)" ಎಂಬ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಸ್ವಲ್ಪ ವಿವೇಚನೆಯುಳ್ಳ ಯಾರಿಗಾದರೂ ಲಾಕ್ಡೌನ್ ಪೂರ್ವಾಪರಗಳನ್ನು ವಿಮರ್ಶಿಸದೆ ಕೈಗೊಂಡ ಮಾರಕ ನಿರ್ಧಾರವೆಂಬುದು ತಿಳಿಯದಿರದು. 

ರೋಗಿಯ ರೋಗದ ಸಂಪೂರ್ಣ ಮಾಹಿತಿ ತಿಳಿದನಂತರವೂ ವೈದ್ಯರು ನೀಡಿರುವ ತಪ್ಪು ಔಷಧದಂತಿದೆ ಮೋದಿಯವರು ಪ್ರಕಟಿಸಿದ ಆರ್ಥಿಕ ಪ್ಯಾಕೇಜ್. ದೇಶದ ಜಿ.ಡಿ.ಪಿ.ಯ ೧೦%ರಷ್ಟು ಎಂದು ಘೋಷಿಸಿರುವ ಅವರ ಬಹುಪ್ರಚಾರಿತ ಆರ್ಥಿಕ ಪ್ಯಾಕೇಜ್ನ ರೂ. ೨೦ ಲಕ್ಷ ಕೋಟಿಗಳಲ್ಲಿ, ಮುಂಚೆಯೇ ಆರ್.ಬಿ.ಐ. ಘೋಷಿಸಿದ್ದ ರೂ. ೮ ಲಕ್ಷ ಕೋಟಿಗಳಷ್ಟರ ನಿಧಿಯೂ ಸೇರಿದೆ. ಅದೇ ಪ್ಯಾಕೇಜ್ನ ನಿಧಿಯಲ್ಲಿ ಬ್ಯಾಂಕ್ಗಳು ಮುಂದಿನ ದಿನಗಳಲ್ಲಿ ಹಲವು ಉದ್ದಿಮೆಗಳಿಗೆ ನೀಡಲಿರುವ ಸಾಲಗಳ ಮೊತ್ತವನ್ನು ಸೇರಿಸಲಾಗಿದೆ. ಈ ಎಲ್ಲಾ ಮೊತ್ತಗಳನ್ನು ಹೊರತುಪಡಿಸಿದರೆ, ಆರ್ಥಿಕ ಪ್ಯಾಕೇಜ್ನ ನೈಜ ಮೊತ್ತ ದೇಶದ ಜಿ.ಡಿ.ಪಿ.ಯ ೧%ರಷ್ಟು ಮಾತ್ರ ಎಂದು ಹೇಳಬಹುದು. 

ವಿತ್ತ ಮಂತ್ರಿಗಳು ಮಾಡಿದ ಐದು ಪ್ರಕಟಣೆಗಳು, ಪರಿಹಾರ ಒದಗಿಸಿದ್ದಕ್ಕಿಂತ ಸದ್ದು ಮಾಡಿದ್ದೆ ಜಾಸ್ತಿಯೆನ್ನಬಹುದು. ಅದರಿಂದ ತತ್ತರಿಸಿದ ಅರ್ಥ ವ್ಯವಸ್ಥೆಗೆ ಸ್ವಲ್ಪ ಹಣ ಒದಗಿಸಿದಂತೆ ಮಾತ್ರವಾಗಿದೆಯೇ ಹೊರತು, ಉದ್ದಿಮೆಗಳ ಉತ್ಪನ್ನಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ. ಮನುಕುಲಕ್ಕೆ ಕೋವಿಡ್ ಮಹಾಮಾರಿಯೊಂದು ಶಾಪವಿದ್ದಂತೆ. ಆಹಾರ ಮತ್ತು ಔಷಧಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಉದ್ದಿಮೆಗಳ ಉತ್ಪನ್ನಗಳ ಬೇಡಿಕೆಯನ್ನು ಕೋವಿಡ್ ರೋಗ ಮತ್ತು ಎಗ್ಗಿಲ್ಲದೆ ವಿಧಿಸಿದ ಲಾಕ್ಡೌನ್ಗಳು ನುಂಗಿ ಕುಳಿತಿವೆ. ಮಧ್ಯಮ ವರ್ಗದ ಕುಟುಂಬಗಳೇ ನಮ್ಮ ಆರ್ಥಿಕತೆಯ ಜೀವನಾಡಿಗಳೆನ್ನಬಹುದು. ಆದರೆ ಆ ವರ್ಗದ ಬಹುತೇಕ ಕುಟುಂಬಗಳ ತಿಂಗಳ ಆದಾಯಗಳಲ್ಲಿ ಭಾರಿ ಕುಸಿತವುಂಟಾಗಿದೆ. ಸುಮಾರು ೪೦ ಕೋಟಿಯಷ್ಟು ಅಸಂಘಟಿತ (unorganized workers) ನೌಕರರು ಲಾಕ್ಡೌನಿನಿಂದ  ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಸೃಷ್ಟಿಗೆ ಆರ್ಥಿಕ ಪ್ಯಾಕೇಜ್ನಲ್ಲಿ ಪ್ರಯತ್ನ ಮಾಡಿದ್ದಾರೆಯೆ? ದೇಶೀಯ ಉತ್ಪನ್ನಗಳ ಮಾರಾಟಕ್ಕೆ ಬೇಡಿಕೆಯನ್ನು ಉಂಟುಮಾಡುವ ವ್ಯವಸ್ಥೆ ರೂಪುಗೊಳ್ಳುವುದು ಯಾವಾಗ? ಕೆಲಸ ಕಳೆದುಕೊಂಡು ಕುಳಿತಿರುವ  ವಲಸಿಗ ಕೆಲಸಗಾರರ ಜೇಬುಗಳಿಗಿಷ್ಟು ಹಣವನ್ನು ಸರಕಾರಗಳು ಇಳಿಸಿದ್ದರೆ, ಬೇಡಿಕೆಯ ಸೃಷ್ಟಿ ಗ್ರಾಮೀಣ ಮಟ್ಟದಲ್ಲೂ ಉಂಟಾಗುತ್ತಿತ್ತಲ್ಲವೆ? 

ಇಂದಿನ ಕೋವಿಡ್ ಪ್ಯಾಕೇಜ್ನ ಮಾತು ಬದಿಗಿರಲಿ. ಸ್ವಾತಂತ್ರ್ಯ ಗಳಿಸಿದನಂತರ ನಮ್ಮ ಬಜೆಟ್ಗಳಲ್ಲಿ ಆರೋಗ್ಯ ವಲಯಕ್ಕೆ ಮುಡಿಪಾಗಿಟ್ಟ ಧನದ ರಾಶಿಯನ್ನು "ಜುಜುಬಿ" ಎಂದೇ ಹೇಳಬಹುದು. "ಆರೋಗ್ಯವೇ ಭಾಗ್ಯ"ವೆಂಬ ಗಾದೆ ಮಾತಿನ ಅರಿವೇ ನಮ್ಮ ನಾಯಕರುಗಳಿಗೆ  ಇದ್ದಂತ್ತಿಲ್ಲ. ಆರೋಗ್ಯದ ವ್ಯವಸ್ಥೆ ಸುಧಾರಿಸದೆ ಸಂಪತ್ತಿನ ಕ್ರೋಡೀಕರಣ ಆಗದು. 

೨೦೧೯ರ ಡಿಸೆಂಬರ್ ೩೧ರಂದು ಕೇಂದ್ರ ಸರಕಾರ ಪ್ರಕಟಿಸಿದ ರಾಷ್ಟ್ರೀಯ ಮೂಲಭೂತ ಸೌಕರ್ಯದ (National Infra Plan - NIA) ರೂ. ೧೦೨ ಲಕ್ಷ ಕೋಟಿಗಳ ಯೋಜನೆಯನ್ನು, ಸರಕಾರ ಮರೆತು ಕೂತಿದೆಯೇಕೆ? ಈ ಯೋಜನೆಯನ್ನು ತ್ವರಿತಗೊಳಿಸುವುದರಿಂದ ಉದ್ಯೋಗ ಸೃಷ್ಟಿಗೆ ಭಾರಿ ಚಾಲನೆ ದೊರೆತಂತಾಗುವುದಿಲ್ಲವೆ? ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ "ನದಿಗಳ ಜೋಡಣೆ"ಯ ಯೋಜನೆಯನ್ನು ಕೈಗೆತ್ತಿಕೊಳ್ಳುವುದರಿಂದ, ಕೋಟಿಗಟ್ಟಲೆ ಉದ್ಯೋಗಗಳ ಸೃಷ್ಟಿಯಾಗುವುದಿಲ್ಲವೆ? ಸರಕಾರದಲ್ಲಿ ಇಚ್ಚಾ ಶಕ್ತಿಯ ಕೊರತೆ ಇರವುದೇಕೆ? 

ನಮ್ಮ ಜಿ.ಡಿ.ಪಿ.ಯ ಹೆಚ್ಚಳ ಹೆಚ್ಚಾಗಿ ನಮ್ಮ ಮಹಾರಾಷ್ಟ್ರ, ತಮಿಳ್ ನಾಡು, ಗುಜರಾತ್ ಮತ್ತು ದಿಲ್ಲಿ ರಾಜ್ಯಗಳ ಆರ್ಥಿಕತೆಯ ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ.  ದುರದೃಷ್ಟವಶಾತ್ ಇದೇ ನಾಲ್ಕು ರಾಜ್ಯಗಳಲ್ಲಿ ಕೋವಿಡ್ನ ದಾಳಿ ತೀವ್ರವಾಗಿದೆ. ಹಾಗಾಗಿ ದೇಶದ ಜಿ.ಡಿ.ಪಿ.ಯ ಹೆಚ್ಚಳ ಆಗಬಹುದೇ ಎಂಬ ಅನುಮಾನ ಕಾಡದಿರದು. 

ಆರ್ಥಿಕ ಸುಧಾರಣೆಗಳ ಪ್ರಕಟಣೆಯಿಂದ ಮಾತ್ರ ಏನೂ ಆಗದು. ಅವುಗಳ ಕಾರ್ಯಾನ್ವಯಕ್ಕೆ ದೃಢ ವಾದ ರಾಜಕೀಯ ಇಚ್ಚಾಶಕ್ತಿ ಬೇಕು. ಅತ್ಯವಶ್ಯಕ ಸಂಪನ್ಮೂಲಗಳಾದ "ಭೂಮಿ, ನೌಕರರು ಮತ್ತು ಇಂಧನ" ಕ್ಷೇತ್ರಗಳಲ್ಲಿ ತುರ್ತಾಗಿ ಸುಧಾರಣೆಗಳಾಗಬೇಕು. "ಭೂಮಿ" ರಾಜ್ಯಗಳ ನಿಯಂತ್ರಣಕ್ಕೆ ಸಂಬಂಧಪಟ್ಟಿದ್ದಾದರೆ, "ನೌಕರರು ಮತ್ತು ಇಂಧನ"ಗಳ ವಿಷಯ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಸಂಬಂಧಿಸಿದ್ದು. ಆದುದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯದ ಕೊರತೆ ಕಾಡುತ್ತಿದ್ದರೆ, ಈ ಸುಧಾರಣೆಗಳ ಕಾರ್ಯಾನ್ವಯ ಅಸಾಧ್ಯ. ಇಂತಹ ಮಹತ್ವದ ಸುಧಾರಣೆಗಳ ಕಾರ್ಯಸಾಧನೆ ಆಗದಿದ್ದರೆ, ಚೀನಾ ದೇಶದಿಂದ ಹೊರಬರಲಿಚ್ಛಿಸುವ ಭಾರಿ ಉದ್ಯಮಗಳನ್ನು ಕರೆತರುವುದು ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ವಿಯಟ್ನಾಂ ಮತ್ತು ಇಂಡೋನೇಷ್ಯಾ ರಾಷ್ಟ್ರಗಳಲ್ಲಿ ಅನುಕೂಲಕರ ವಾತಾವರಣದ ಸೃಷ್ಟಿ ಭರದಿಂದ ಸಾಗಿದ್ದು, ಚೀನಾದ ಭಾರಿ ಉದ್ಯಮಗಳು ಆ ರಾಷ್ಟ್ರಗಳ ಕಡೆಗೆ ಮುಖ ಮಾಡಿರುವುದನ್ನು ನಾವು ಗಮನಿಸಬೇಕು. 

ಬ್ಯಾಂಕುಗಳು ಸಾಲದ ಬಡ್ಡಿಯ ದರಗಳನ್ನು ಇಳಿಸುತ್ತಿರುವುದು ಒಳ್ಳೆಯದೇ. ಅದರ ಜೊತೆ ಜೊತೆಗೆ ಬ್ಯಾಂಕುಗಳು ಠೇವಣಿಗಳ ಮೇಲೆ ನೀಡುವ ಬಡ್ಡಿ ದರಗಳು ಕೂಡ ಇಳಿತವನ್ನು ಕಂಡಿವೆ. ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವವರಲ್ಲಿ ಹೆಚ್ಚಿನವರು ಹಿರಿಯ ನಾಗರೀಕರು. ಬ್ಯಾಂಕುಗಳು ನೀಡುವ ತಿಂಗಳ ಬಡ್ಡಿಯಲ್ಲೇ ಅವರುಗಳ ಜೀವನ. ಹಾಗಾಗಿ ಹಿರಿಯ ನಾಗರೀಕರ ಜೀವನಕ್ಕೆ ಕುತ್ತೊದಗಿದ್ದು, ಅವರುಗಳು ಖಾಸಗಿ ಹಣಕಾಸು ಸಂಸ್ಥೆಗಳತ್ತ ಮುಖ ಮಾಡುವಂತಾಗಿದೆ. ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ನಮ್ಮ ಹಿರಿಯ ನಾಗರೀಕರುಗಳ ಹಣ ಸುರಕ್ಷಿತವಾಗಿರಬಲ್ಲದೆ? 

ಹೌದು,  ನಮ್ಮ ಬ್ಯಾಂಕ್ಗಳು ಮತ್ತು ಆರ್.ಬಿ.ಐ.ನ ಬಳಿ ಅಪಾರವಾದ ಧನರಾಶಿಯಿದೆ. ಆದರೆ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆಯುವ ಅಭ್ಯರ್ಥಿಗಳೇ ಮುಂದೆ ಬರುತ್ತಿಲ್ಲ. ನಮ್ಮ ದೇಶದಲ್ಲಿ ಸಕ್ರಿಯವಾಗಿರುವ ಕಾರ್ಪೊರೇಟ್ ಸಂಸ್ಥೆಗಳು ಜಾಗರೂಕತೆಯ ಹೆಜ್ಜೆಗಳನಿಡುತ್ತಾ, "ಕಾದು ನೋಡುವ" ನೀತಿಯನ್ನು ತಮ್ಮದಾಗಿಸಿಕೊಂಡು, ಭಾರಿ ಸಾಲಗಳನ್ನು ಪಡೆಯಲು ಉತ್ಸುಕರಾಗಿದ್ದಂತೆ ತೋರುತ್ತಿಲ್ಲ. ಗೃಹ ಸಾಲಗಳ ಬೇಡಿಕೆಯಲ್ಲೂ ಹಿಂಜರಿತ ಕಂಡುಬಂದಿದೆ. ವಾಹನಗಳ ಮಾರಾಟದಲ್ಲಿ ಭಾರಿ ಕುಸಿತವುಂಟಾಗಿದೆ. ನಮ್ಮ ಬ್ಯಾಂಕರ್ಗಳಿಗೂ ಭಾರಿ ಸಾಲಗಳನ್ನು ಮಂಜೂರು ಮಾಡುವ  ಮನಸಿದ್ದಂತ್ತಿಲ್ಲ. "ಮಂಜೂರು ಮಾಡಿದ ಸಾಲಗಳೇನಾದರೂ ಹಿಂತುರುಗಿ ಬಾರದವಾದರೆ, ತಮ್ಮಗಳಿಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ" ಎಂಬ ಭಯ ನಮ್ಮ ಬ್ಯಾಂಕ್ ಅಧಿಕಾರಿಗಳನ್ನು ಕಾಡುತ್ತಿದೆ. ಸಾಲಗಳನ್ನು ಮಂಜೂರು ಮಾಡುವಾಗ ಸಾಲದ ಅಭ್ಯರ್ಥಿಗಳಲ್ಲಿ ಪರೀಕ್ಷಿಸಬೇಕಾದ ೪-Cಗಳಾದ "ಗುಣ (Character), ಸಾಮರ್ಥ್ಯ (Capacity), ಬಂಡವಾಳ (Capital) ಮತ್ತು ಪರಿಸ್ಥಿತಿ (Conditions)"ಗಳನ್ನು ನಮ್ಮ ಹಿರಿಯ ಬ್ಯಾಂಕ್ ಅಧಿಕಾರಿಗಳು ಮರೆತೇಬಿಟ್ಟಿದ್ದಾರೆ. ಈಗ ಅವರುಗಳನ್ನು ಬೇರೆ ೪-Cಗಳಾದ "ಕೋರ್ಟ್ಗಳು, ಸಿ.ವಿ.ಸಿ., ಸಿ.ಏ.ಜಿ. ಮತ್ತು ಸಿ.ಬಿ.ಐ. (Courts, CVC, CAG and CBI)"ಗಳ ಭಯ ಕಾಡ ಹತ್ತಿದೆ. ಈ ಭಯದ ವಾತಾವರಣವನ್ನು ಹೋಗಲಾಡಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿಲ್ಲ. ಪ್ರಾಮಾಣಿಕ ಬ್ಯಾಂಕ್ ಅಧಿಕಾರಿಗಳ ಬೆನ್ನ ಹಿಂದೆ ನಾವಿದ್ದೇವೆ ಎಂಬ ಸಂದೇಶವನ್ನು ಸರಕಾರ ಅವರುಗಳಿಗೇಕೆ ರವಾನಿಸುತ್ತಿಲ್ಲ?

ಕಾರ್ಮೋಡ ಕವಿದಂತಿರುವ ಆರ್ಥಿಕ ಕ್ಷೇತ್ರದ, ಬೆಳ್ಳಿ ಅಂಚಾಗಿ ನಮ್ಮ ಕೃಷಿ ವಲಯ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಕೋವಿಡ್ ದಾಳಿಯನ್ನೂ ಲೆಕ್ಕಿಸದೆ ನಮ್ಮ ರೈತರುಗಳು ತಮ್ಮ ಕಾರ್ಯಗಳನ್ನು         ಎಂದಿನ ಉತ್ಸಾಹದಿಂದ ಮಾಡುತ್ತಿದ್ದಾರೆ. ಮೊನ್ನೆಯಿನ್ನು ಸಮಾಪ್ತಿಗೊಂಡ ಹಿಂಗಾರು ಬೆಳೆಗಳ (Rabi harvest) ಕೊಯ್ಲಿನಲ್ಲಿ, ಕಳೆದ ವರ್ಷಕ್ಕಿಂತ ಹೆಚ್ಚಿನ ಇಳುವರಿಯನ್ನು ನಮ್ಮ ರೈತರು ಸಾಧಿಸಿ ತೋರಿಸಿದ್ದಾರೆ. ಮುಂಗಾರು ಬೆಳೆಯ (Kharif season) ಭಿತ್ತನೆಯ ಕಾರ್ಯ ಕೂಡ ಚುರುಕಾಗೇ  ಸಾಗಿದೆ. ಈ ಬಾರಿಯ ಮುಂಗಾರು ಮಳೆ (Manson)ಯ ವಿಷಯದಲ್ಲಿ ವರುಣ ದೇವ ನಮ್ಮ ದೇಶದ ಪಾಲಿಗೆ ಕರುಣಾಮಯನಾಗಿದ್ದಾನೆ. ಆದರೆ ತನ್ನ ಆರ್ಥಿಕ ಪ್ಯಾಕೆಜ್ನಲ್ಲಿ ನಮ್ಮ ಸರಕಾರ ರೈತರಿಗಳಿಗೇನು ಕೊಟ್ಟಿದೆ?' ಎಂದು ಪ್ರಶ್ನಿಸುತ್ತಾ ಪ್ರೊ. ಪ್ರಹ್ಲಾದ್ ರವರು ತಮ್ಮ ಭಾಷಣವನ್ನು ಮುಗಿಸುತ್ತಲೇ, ಎಲ್ಲರ ನಡುವೆ ಕೆಲ ಕ್ಷಣ ಮೌನ ಮರಗಟ್ಟಿತ್ತು. ಪ್ರಹ್ಲಾದರ ಭಾಷಣದದ್ದಕ್ಕೂ ಟಿಪ್ಪಣಿಗಳನ್ನು ಬರೆದುಕೊಳ್ಳುತ್ತಿದ್ದ ರಾಜುರವರು ಮಾತನಾಡಲು ಎದ್ದು ನಿಂತಾಗ, ಎಲ್ಲರ ಗಮನ ಅವರ ಮೇಲೇ  ಕೇಂದ್ರೀಕೃತವಾಗಿತ್ತು. 

'ವಿಮರ್ಶಾತ್ಮಕ ಭಾಷಣವನ್ನು ಮನಮುಟ್ಟುವಂತೆ ಮಾಡಿದ ಪ್ರೊ. ಪ್ರಹ್ಲಾದ್ ರವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ಅವರು ಪ್ರಸ್ತಾಪಿಸಿದ ಕೆಲವೊಂದು ಅಂಶಗಳು ಕೇಂದ್ರ ಸರಕಾರದ ಕಣ್ತೆರಸುವಂತಾಗಲಿ ಎಂದು ಆಶಿಸುತ್ತೇನೆ. ಸಾಧ್ಯವಾದ ಎಲ್ಲಾ ಕಡೆಗಳಲ್ಲಿ ನದಿಗಳ ಜೋಡಣೆಯ ಬಗೆಗಿನ ಅವರ ಸಲಹೆ ಸ್ವಾಗತಾರ್ಹವಾದುದು. ೨೦೧೯ರ ಡಿಸೆಂಬರ್ ದಿನಗಳಂದು ಕೇಂದ್ರ ಸರಕಾರ ಯೋಜಿಸಿದ್ದ ರೂ. ೧೦೨ ಲಕ್ಷ ಕೋಟಿಗಳ ನ್ಯಾಷನಲ್ ಇನ್ಫ್ರಾ ಯೋಜನೆಯಡಿ ಕಾರ್ಯಗಳನ್ನು ತ್ವರಿತಗೊಳಿಸುವ ಅವರ ಸಲಹೆ ಕೂಡಾ ಸೂಕ್ತವಾದುದೆ. ಆದರೆ ಪ್ರೊ. ಪ್ರಹ್ಲಾದರು ಪ್ರಸ್ತಾಪಿಸಿದ ಮಿಕ್ಕ ಪ್ರಶ್ನೆಗಳನ್ನು ಕುರಿತಾದ ಉತ್ತರಗಳನ್ನು ನೀಡಲಿಚ್ಛಿಸುತ್ತೇನೆ. 

-ಮಾರ್ಚ್ ೨೫ರಿಂದ ಜಾರಿಗೊಳಿಸಿದ ಲಾಕ್ಡೌನನ್ನು ದಿಢೀರನೆ ಕೈಕೊಂಡ ನಿರ್ಧಾರ ಎನ್ನಲಾಗದು. ಮಾರ್ಚ್ ೨೨ರಂದು ಜಾರಿಗೊಳಿಸಿದ ಜನತಾ ಕರ್ಫ್ಯೂವಿನ ಘೋಷಣೆಯನ್ನು ಮಾರ್ಚ್ ೨೦ರಂದೇ ಪ್ರಧಾನಿ ಮೋದಿಯವರು ಮಾಡಿದ್ದರು. ಅಂದಿನ ಭಾಷಣದಲ್ಲೇ ದೀರ್ಘವಾದ ಲಾಕ್ಡೌನಿನ ಮುನ್ಸೂಚನೆಯನ್ನು ನೀಡಲಾಗಿತ್ತು. 

-೨೦-೨೧ರ ಆರ್ಥಿಕ ವರ್ಷದ ಮುನ್ಸೂಚನೆಯ ಪ್ರಕಾರ ಭಾರತ (೧. ೫%) ಮತ್ತು ಚೀನಾ (೧. ೭%)ಗಳು ಮಾತ್ರ ತಮ್ಮ ತಮ್ಮ ಜಿ.ಡಿ.ಪಿ.ಗಳಲ್ಲಿ ಹೆಚ್ಚಳವನ್ನು ದಾಖಲಿಸಲಿವೆ. ಮಿಕ್ಕೆಲ್ಲಾ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ಕುಸಿಯುವುದು ಖಚಿತ. 

-ಕೋವಿಡ್ ಪ್ಯಾಕೇಜ್ನ ಯೋಜನೆಗಳ ಪ್ರಕಾರ, ಎಂ.ಎಸ್.ಎಂ.ಇ.ಗಳಿಗೆ ಒದಗಿಸಲಿರುವ ಆಧಾರರಹಿತ ಸಾಲಗಳಿಂದ, ಅವುಗಳು ಮತ್ತೆ ಪ್ರಗತಿಯ ಹಾದಿಯನ್ನು ಹಿಡಿಯುವ ಎಲ್ಲಾ ಸಾಧ್ಯತೆಗಳು ಇವೆ. ಈ ಎಲ್ಲ ಸಂಕಷ್ಟಗಳ ನಡುವೆಯೂ ನಿರ್ಮಾಣದ ಕ್ಷೇತ್ರದಲ್ಲಿ ಕಾರ್ಯಗಳಾಗಲೇ ಶುರುವಾಗಿದೆ. ಈ ಎಲ್ಲಾ  ಬೆಳವಣಿಗೆಗಳಿಂದ ವಲಸಿಗರು ಮತ್ತೆ ನಗರಗಳತ್ತ ಕೆಲಸವನ್ನರಸಿ ಮುಖ ಮಾಡುವಂತಾಗಿದೆ. 

-ನಗರಗಳಿಗೆ ಹಿಂತಿರುಗಲಿಚ್ಛಿಸಿದ ವಲಸಿಗರಿಗೆ, ಅವರವರ ಹಳ್ಳಿಗಳಲ್ಲೇ ಉದ್ಯೋಗವನ್ನೊದಗಿಸುವ ಏರ್ಪಾಡನ್ನೂ ಮನರೇಗ (MANREGA) ಯೋಜನೆಯಡಿ ರೂಪಿಸಲಾಗಿದೆ. ಆರ್ಥಿಕ ವರ್ಷ ೨೦-೨೧ಕ್ಕೆ ಮನರೇಗ ಯೋಜನೆಯಡಿ ಮೀಸಲಿರಿಸಿದ ಮೊತ್ತ ರೂ. ೧ ಲಕ್ಷ ಕೋಟಿಗಳಾಗಿತ್ತು. ಆ ಯೋಜನೆಗೀಗ  ರೂ .೪೦,೦೦೦ ಕೋಟಿಗಳ ಹೆಚ್ಚಿನ ಮೊತ್ತವನ್ನು ನೀಡಲಾಗಿದೆ. ಆ ಯೋಜನೆಯಡಿ ನಿರುದ್ಯೋಗಿ ವಲಸಿಗರೆಲ್ಲರಿಗೂ ಅವರವರ ಹಳ್ಳಿಗಳಲ್ಲಿ ೧೦೦ ದಿನಗಳ ಉದ್ಯೋಗದ ಖಾತರಿಯನ್ನು ನೀಡಲಾಗಿದೆ. ಪ್ರತಿ ದಿನದ ಸಂಬಳವನ್ನು ರೂ.೧೮೨ರಿಂದ ರೂ.೨೦೨ರ ವರೆಗೆ ಹೆಚ್ಚಿಸಲಾಗಿದೆ. 

-ಅತ್ಯಂತ ಹೆಚ್ಚಿನ ಸಂಖ್ಯೆಯ ವಲಸಿಗರು ಹಿಂತಿರುಗಿರುವ ಪೂರ್ವ ಭಾಗದ  ಆರು ರಾಜ್ಯಗಳ ೧೧೬ ಜಿಲ್ಲೆಗಳಲ್ಲಿ, ಹೆಚ್ಚಿನ ಉದ್ಯೋಗಗಳ ಸೃಷ್ಟಿಯನ್ನುಂಟುಮಾಡಲು, ಹಲವು ಮೂಲಭೂತ ಸೌಕರ್ಯಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳಿಗೆ ರೂ. ೫೦,೦೦೦ ಕೋಟಿಗಳ ನಿಧಿಯನ್ನು ಕಾದಿರಿಸಲಾಗಿದೆ. 

-"ಭೂಮಿ, ರಕ್ಷಣೆ ಮತ್ತು ಕಾರ್ಮಿಕರ (Land, Defense and Labour)" ಕ್ಷೇತ್ರಗಳಲ್ಲಿ ತುರ್ತಾಗಿ ಬೇಕಾದ ಸುಧಾರಣೆಗಳನ್ನು ಹಲವು ರಾಜ್ಯಗಳಾಗಲೇ ಜಾರಿಗೊಳಿಸಿದ್ದಾಗಿದೆ. ಆ ಸುಧಾರಣೆಗಳ ಪ್ರಕಾರ ರೈತರು ತಮ್ಮ ಉತ್ಪನ್ನಗಳನ್ನು ಆಯಾ ರಾಜ್ಯಗಳ ಎ.ಪಿ.ಎಂ.ಸಿ.ಗಳಲ್ಲೇ ಮಾರಾಟ ಮಾಡಬೇಕಾದ ಅನಿವಾರ್ಯತೆ ಇಲ್ಲ. ಉತ್ತಮ ದರ ದೊರೆಯುವ ಯಾವುದೇ ಮಾರುಕಟ್ಟೆಯಲ್ಲಿ ಅವರುಗಳು ತಮ್ಮ ಉತ್ಪನ್ನವನ್ನು ಮಾರಾಟ ಮಾಡಬಹುದಾಗಿದೆ. 

-ಚೀನಾದಿಂದ ಹೊರಬರಲಿಚ್ಛಿಸುವ ಉದ್ಯಮಿಗಳನ್ನು ಭಾರತದ ಕಡೆ ಕರೆತರುವ ಎಲ್ಲ ಪ್ರಯತ್ನಗಳಿಗೂ ಒತ್ತು ನೀಡಲಾಗುತ್ತಿದೆ. ಜೆರ್ಮನಿಯ ಭಾರಿ ಪಾದರಕ್ಷೆಗಳ ಘಟಕವೊಂದು ಚೀನಾದಿಂದ ಭಾರತದೆಡೆಗೆ ಸ್ಥಳಾಂತರ ಮಾಡುವ ನಿರ್ಧಾರವನ್ನು ಕೈಗೊಂಡಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉದ್ಯಮಿಗಳು ಭಾರತದೆಡೆಗೆ ಬರುವ ನೀರೀಕ್ಷೆಯಿದೆ. 

-ಭಾರತ ಹೊಂದಿರುವ  ಇಂದಿನ ವಿದೇಶಿ ವಿನಿಮಯಗಳ ರಾಶಿಯ ಮೊತ್ತ ಯು.ಎಸ್.ಡಾ.  ೫೦೧ ಬಿಲಿಯನ್ ಗಳಷ್ಟಿದ್ದು, ಇಂದೊಂದು ದಾಖಲೆಯ ಮೊತ್ತವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಮ್ಮಿಯಾಗಿದ್ದು, ನಮ್ಮ ವಿದೇಶಿ ವಿನಿಮಯಗಳ ರಾಶಿಯ ಹೆಚ್ಚಿನ ಶೇಖರಣೆಗೆ ಪೂರಕವಾಗಿದೆ. 

-ಠೇವಣಿಗಳ ಮೇಲಿನ ಬಡ್ಡಿಯ ದರ ಬ್ಯಾಂಕುಗಳಲ್ಲಿ ಕುಸಿಯುತ್ತಿರುವುದರ ಬಗೆಗಿನ ತಮ್ಮ ಕಳಕಳಿ ನನಗೂ ಇದೆ. ನಮ್ಮ ಹಿರಿಯ ನಾಗರಿಕರು ಇದರಿಂದ ಆತಂಕಗೊಂಡಿರುವುದಂತೂ ಸತ್ಯ. ಆದರೆ ಕೇಂದ್ರ ಸರಕಾರ ಹಿರಿಯ ನಾಗರೀಕರಿಗಾಗಿ ಎರಡು ಉತ್ತಮ ಠೇವಣಿಯ ಯೋಜನೆಗಳನ್ನು ಈಗಲೂ ಜಾರಿಯಲ್ಲಿರಿಸಿದೆ. "ಎಲ್.ಐ.ಸಿ. ಸಂಸ್ಥೆಯ ವಯವಂದನಾ" ಯೋಜನೆ ೧೦ ವರ್ಷಗಳ ಠೇವಣಿ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ಹಿರಿಯ ನಾಗರಿಕರು ತಲಾ ರೂ. ೧೫ ಲಕ್ಷಗಳವರೆಗಿನ ಹಣವನ್ನು ತೊಡಗಿಸಬಹುದಾಗಿದೆ. ಕೇಂದ್ರ ಸರಕಾರದ ಮತ್ತೊಂದು ಯೋಜನೆಯಾದ "ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme - SCSS)" ಕೂಡ ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಅದು ೫ ವರ್ಷಗಳ ಅವಧಿಯ ಯೋಜನೆಯಾಗಿದ್ದು, ಆ  ಯೋಜನೆಯಲ್ಲೂ ತಲಾ ರೂ. ೧೫ ಲಕ್ಷಗಳವರೆಗಿನ ಮೊತ್ತವನ್ನು ತೊಡಗಿಸಬಹುದಾಗಿದೆ. ಈ ಎರಡೂ ಯೋಜನೆಗಳಲ್ಲಿ ಇಂದು ೭. ೪%ರಷ್ಟು ಬಡ್ಡಿಯ ದರ ನಿಗದಿಯಾಗಿದ್ದು, ಪ್ರತಿ ತಿಂಗಳು ಬಡ್ಡಿ ಪಡೆಯುವ  ಸೌಲಭ್ಯವಿದೆ.   

ಕಡೆಯದಾಗಿ ಪ್ರಹ್ಲಾದ್ರವರು ರೈತರ ಬವಣೆಯ ಮೇಲಿನ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮೆಲ್ಲರಿಗೂ ಆ ವಿಷಯದ ಬಗೆಗಿನ ಅನುಕಂಪವಿದೆ. ಕೋವಿಡ್ ಪ್ಯಾಕೇಜಿನಡಿ ರೈತರುಗಳಿಗಾಗಿ ಪ್ರಕಟಿಸಿರುವ ಪರಿಹಾರಗಳ ವಿವರಗಳನ್ನು ತಮ್ಮಗಳ ಮುಂದೆ ನೀಡ ಬಯಸುತ್ತೇನೆ. ದಯಮಾಡಿ ಗಮನವಿಟ್ಟು ಕೇಳಿ. 

"ನಮ್ಮ ಪ್ರೀತಿಯ ರೈತರುಗಳೇ 

ಭಾರತ ತಮ್ಮೊಂದಿಗಿದೆ. 

ಕೋವಿಡ್ನಿಂದಾದ ದುಃಸ್ಥಿತಿಯನ್ನು ನಿಭಾಯಿಸಲು ತಮಗಾಗಿ ಕೆಳಕಂಡ ವ್ಯವಸ್ಥೆಗಳನ್ನು ಮಾಡಲಾಗಿದೆ. 

-ಕಿಸಾನ್ ಕ್ರೆಡಿಟ್ ಕಾರ್ಡ್ನಡಿ ಹೆಚ್ಚಿನ ಸಾಲವನ್ನು ಒದಗಿಸಲು ರೂ. ೨ ಲಕ್ಷ ಕೋಟಿಯಷ್ಟರ ನಿಧಿಯನ್ನು ಕಾದಿರಸಲಾಗಿದೆ. 

-ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸಣ್ಣ ರೈತರಿಗೆ ತಲಾ ರೂ. ೬೦೦೦ ಗಳನ್ನೂ, ಮೂರು ಸಮನಾದ ಕಂತುಗಳಲ್ಲಿ ವಿತರಿಸಲಾಗುವುದು. ಈ ಯೋಜನೆಯಡಿ ಲಾಕ್ಡೌನ್ ಅವಧಿಯಲ್ಲಿ  ರೂ. ೧೯,೪೫೭ ಕೋಟಿಯಷ್ಟು ಹಣವನ್ನು ೯. ೭೨ ಕೋಟಿ  ರೈತ ಕುಟುಂಬಗಳಿಗೆ ನೀಡಲಾಗಿದೆ. 

-ರೈತರ ಉತ್ಪನ್ನಗಳಿಗಾಗಿ  ಶಿಥಿಲೀಕರಣ ಕಪಾಟುಗಳ(Cold Storage) ವ್ಯವಸ್ಥೆಯ ಅಭಿವೃದ್ಧಿಗಾಗಿ ರೂ. ೧ ಲಕ್ಷ ಕೋಟಿಯಷ್ಟರ ನಿಧಿಯನ್ನು ಕಾದಿರಿಸಲಾಗಿದೆ. 

-ಈಗಿರುವ ಎ.ಪಿ.ಎಂ.ಸಿ. ವ್ಯವಸ್ಥೆ ಮುಂದುವರೆಯುತ್ತದೆ. ರೈತರ ಉತ್ಪನ್ನಗಳ ಮಾರುಕಟ್ಟೆಯ ವಿಸ್ತಾರವನ್ನು ಹೆಚ್ಚಿಸಲು ಬೇಕಾದ ಕಾನೂನಿನ ಸುಧಾರಣೆಗಳನ್ನು ತರಲಾಗುವುದು. ಉತ್ತಮ ಬೆಲೆ ಸಿಗುವ ಯಾವುದೇ ಮಾರುಕಟ್ಟೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಂತಹ  ವ್ಯವಸ್ಥೆಯನ್ನು ರೂಪಿಸಲಾಗುವುದು. 

-ಅಗತ್ಯ ವಸ್ತುಗಳ ಕಾಯಿದೆ (Essential Commodities Act) ಮತ್ತು ಎ.ಪಿ.ಎಂ.ಸಿ. ಕಾಯಿದೆಗಳಿಗೆ ಬೇಕಾದ ಸುಧಾರಣೆಗಳನ್ನು ತಂದು, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವಂತೆ ಮಾಡಲಾಗುವುದು. 

-ಅಸಂಘಟಿತ (unorganized sector) ಕ್ಷೇತ್ರದ ಎರಡು ಲಕ್ಷ  ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ (Micro-Food Processing Enterprises) ಪ್ರೋತ್ಸಾಹ ನೀಡಲು, ರೂ. ೧೦,೦೦೦ ಕೋಟಿಗಳಷ್ಟು ನಿಧಿಯನ್ನು ಮಂಜೂರು ಮಾಡಲಾಗಿದೆ. 

-ಮೀನುಗಾರರ ಆದಾಯ ವೃದ್ಧಿಸಲು ಬೇಕಾದ ಕ್ರಮಗಳನ್ನು ಜಾರಿಗೊಳಿಸಲು ರೂ. ೨೦,೦೫೦ ಕೋಟಿಗಳ ನಿಧಿಯನ್ನು ವಿನಿಯೋಗಿಸಲಾಗುವುದು. 

-ಪಶು ಸಂಗೋಪನೆಯ ಕಾಯಕದ ಅಭಿವೃದ್ಧಿಗೆ ರೂ. ೧೫,೦೦೦ ಕೋಟಿಗಳ ಧನವನ್ನು ಕಾದಿರಿಸಲಾಗಿದೆ. 

-ರೈತರ ಗೆಲುವೇ ದೇಶದ ಗೆಲುವು. ತಮ್ಮ ವಿಜಯದೊಂದಿಗೆ  ಕೋವಿಡ್ನೊಂದಿಗಿನ ಸಮರದ ವಿಜಯ ಸಾಧಿಸೋಣ."

ಇಡೀ ವಿಶ್ವ ಇಂದು ಎದುರಿಸುತ್ತಿರುವ ಕೋವಿಡ್ನ ಸವಾಲುಗಳು ನಮಗೆ "ಆತ್ಮನಿರ್ಭರತೆ"ಯ ಪಾಠವನ್ನು ಕಲಿಸಿದೆ. 

ನರೇಂದ್ರ ಮೋದಿ 

ಪ್ರಧಾನ ಮಂತ್ರಿಗಳು'

ಮೋದಿಯವರ ಕಟ್ಟಾ ಅಭಿಮಾನಿಯಾದ ರಾಜುರವರ ಸಮಜಾಯಿಷಿಯ ವಾದದ ಸರಣಿ ಹೀಗೆ ಅಂತ್ಯಗೊಂಡಿತ್ತು. 

ರಾಜುರವರ ವಾದ ಸರಣಿಯನ್ನು ಅನುಮೋದಿಸಿ ಭೋರ್ಗರೆದ ಚಪ್ಪಾಳೆಯ ಸರಣಿ ಪ್ರೊ. ಪ್ರಹ್ಲಾದ್ರವರಿಂದಲೇ ಆರಂಭವಾಗಿದ್ದು ಗಮನಾರ್ಹವಾಗಿತ್ತು. 

ತನ್ನ ಮಾತಿನ ಅವಕಾಶಕ್ಕಾಗಿ ಸಹನೆಯಿಂದ ಕಾಯುತ್ತಿದ್ದ ರೋಹಿಣಿಯ ಸರದಿ ಈಗ ಬಂದಿತ್ತು. 'ಇಂದಿನ ಗಹನವಾದ ಚರ್ಚೆ ಉನ್ನತ ಮಟ್ಟದಾಗಿದ್ದು ನಾನು ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಇಂದು ಮಾತನಾಡಿದ ಎಲ್ಲಾ ಹಿರಿಯರುಗಳಿಗೂ ನನ್ನ ಧನ್ಯವಾದಗಳು. 

ಶ್ರೀಮತಿ ನಳಿನೀರವರು ನನ್ನ ಚಿಕ್ಕಮ್ಮ. ಸುಮಾರು ೪೦ರ ಪ್ರಾಯದ,  ಆಕೆಯ ಹೋರಾಟದ ಕತೆಯನ್ನು ತಮ್ಮಗಳ ಮುಂದೆ ಪ್ರಸ್ತಾಪಿಸಲಿಚ್ಛಿಸುತ್ತೇನೆ. ನಾಲ್ಕು ವರ್ಷಗಳ ಹಿಂದೆ ಆಕೆಯ ಪತಿಯವರು ಅಪಘಾತವೊಂದರಲ್ಲಿ ಮೃತಪಟ್ಟರು. ಎರಡು ಚಿಕ್ಕ ಹೆಣ್ಣು ಮಕ್ಕಳ ಜಾವಬ್ದಾರಿ ಅವರ ಮೇಲೆ ದಿಢೀರನೇ ಬಿದ್ದಿತ್ತು.  ಜೀವನೋಪಾಯಕ್ಕಾಗಿ ಯಾವುದಾದರೂ ಕೆಲಸವನ್ನು ಕೈಗೊಳ್ಳುವ ಒತ್ತಡ  ಆಕೆಯ ಮೇಲಿತ್ತು. ಪತಿಯ ನಿಧನದನಂತರ ಅವರು ಮಾಂಟೆಸರಿ ತರಬೇತಿಯ ಕೋರ್ಸ್ ಒಂದನ್ನು   ಪೂರ್ಣಗೊಳಿಸಿಕೊಂಡರು. ಎರಡು ವರ್ಷಗಳ ಹಿಂದೆ ಬ್ಯಾಂಕೊಂದರಿಂದ ಏಳು ಲಕ್ಷ ರುಪಾಯಿಗಳ ಸಾಲವನ್ನು ಪಡೆದು ಮಾಂಟೆಸರಿ ಶಾಲೆಯೊಂದನ್ನು ಆಕೆ ಆರಂಭಿಸಿದ್ದರು. ಸುಮಾರು ೧೦,೦೦೦ ಫ್ಲ್ಯಾಟ್ಗಳ ಸಂಕೀರ್ಣಗಳಿಂದ ಸುತ್ತುವರೆದ ಬಡಾವಣೆಯೊಂದರ ಕೇಂದ್ರ ಸ್ಥಾನದಲ್ಲಿ ಹೆಚ್ಚಿನ ಬಾಡಿಗೆಯ ಕರಾರಿಗೆ ಸಹಿಮಾಡಿ ತಮ್ಮ ಶಾಲೆಗಾಗಿ ಸುಸಜ್ಜಿತ ಕಟ್ಟಡವೊಂದನ್ನು ಅವರು ಪಡೆದಿದ್ದರು. ಇಂದಿನ ದಿನಗಳ ಮಾಂಟೆಸರಿ ಶಾಲೆಗೆ ಬೇಕಾದ ಎಲ್ಲಾ ಆಧುನಿಕ ಉಪಕರಣಗಳನ್ನು ಆರು ಲಕ್ಷ ರುಪಾಯಿಗಳ ಹಣವನ್ನು ತೊಡಗಿಸಿ ಖರೀದಿಸಿದ್ದರು. ಶಾಲೆಯನ್ನು ಆರಂಭಿಸಿದ ಮೊದಲ ವರ್ಷದಲ್ಲೇ ೧೦೦ಕ್ಕೂ ಹೆಚ್ಚು ಮಕ್ಕಳು ಸೇರ್ಪಡೆಯಾಗಿದ್ದು ನನ್ನ ಚಿಕ್ಕಮ್ಮನಿಗೆ ಸಂತಸವನ್ನು ತಂದಿತ್ತು. ಆರು ಶಿಕ್ಷಕರನ್ನು ಮತ್ತು ೮ ಸಹಾಯಕರನ್ನು ಅವರು ನೇಮಿಸಿಕೊಂಡಿದ್ದರು. ಕೆಲವೇ ತಿಂಗಳುಗಳ ಹಿಂದೆ ಅವರು ಒಬ್ಬ ಹೆಮ್ಮೆಯ ಮಹಿಳಾ ಉದ್ಯಮಿ ಎನಿಸಿಕೊಂಡಿದ್ದರು. 

ಕೋವಿಡ್ನ ಮಹಾಮಾರಿ ವ್ಯಾಪಕವಾಗಿ ಹರಡಿದನಂತರ, ಪೋಷಕರು ತಮ್ಮ ಮಕ್ಕಳುಗಳನ್ನು ಮಾಂಟೆಸರಿ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದ್ದಾರೆ. ಕೇವಲ ಸೇವಾ ಮನೋಭಾವದ ಮಹಿಳೆಯಾದ ನನ್ನ ಚಿಕ್ಕಮ್ಮ ತಿಂಗಳು ಕಳೆದನಂತರವೇ ಶುಲ್ಕವನ್ನು ವಸೂಲು ಮಾಡುತ್ತಿದ್ದವರು. ಇಡೀ ವರ್ಷದ ಶುಲ್ಕವನ್ನು ವರ್ಷದ ಮೊದಲೇ ಪಡೆದುಕೊಳ್ಳುವ ಪರಿಪಾಠ ಮುಗ್ಧೆಯಾದ ನಳಿನಿಯವರಿಗೆ ತಿಳಿದಿರಲಿಲ್ಲ. ಹೆಚ್ಚಿನ ಸಂಖ್ಯೆಯ ಪೋಷಕರು ಫೆಬ್ರವರಿ ೨೦೨೦ರ ನಂತರ ಶುಲ್ಕವನ್ನು ಕಟ್ಟುವುದನ್ನೇ ನಿಲ್ಲಿಸಿದ್ದಾರೆ. ಹೊಸವರ್ಷದ ಹೊಸ ಸೇರ್ಪಡೆಗಳು ಆರಂಭವಾಗೇ ಇಲ್ಲ. ಮಹಾಮಾರಿ ಮುಂದುವರೆದಿರುವುದರಿಂದ ಹೊಸ ಸೇರ್ಪಡೆಗಳ ಸಾಧ್ಯತೆ ಇಲ್ಲವೇ ಇಲ್ಲ. ಬ್ಯಾಂಕಿನ ಸಾಲದ ಕಂತುಗಳನ್ನು ಕಟ್ಟಲಾಗದ ಅವರ ಮೇಲೆ ಬೇರೆ ಬೇರೆ ಕಡೆಗಳಿಂದ ಹಣಕ್ಕಾಗಿ ಒತ್ತಡಗಳು ಬರ ಹತ್ತಿವೆ.  ಎಲ್ಲಾ ಭರವಸೆಗಳನ್ನೂ ಕಳೆದುಕೊಂಡಿರುವ ನಮ್ಮ ಚಿಕ್ಕಮ್ಮ ಈಗ ತಮ್ಮ ಶಾಲೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಆದರೆ ಶಾಲೆಯನ್ನು ಖರೀದಿಸಲು ಯಾರೂ ಮುಂದೆ ಬಂದಿಲ್ಲ. ಪೀಠೋಪಕರಣಗಳನ್ನು ಬಿಡಿಯಾಗೂ ಮಾರಲು ಆಕೆ ತಯಾರಿದ್ದರೂ, ಅವರ ವಸ್ತುಗಳನ್ನು ಕೊಳ್ಳುವರಿಲ್ಲವಾಗಿದ್ದಾರೆ. ಕೋವಿಡ್ ಮಹಾಮಾರಿ ಅವರನ್ನು ಜೀವಂತವಾಗಿ ಕೊಂದು ಬಿಟ್ಟಿದೆ. 

ಮಹಾಮಾರಿ ಕೊನೆಗೊಳ್ಳಬಹುದೆಂಬ ಭರವಸೆಯ ಮೇಲೆ ನಳಿನೀರವರು ಮತ್ತೊಂದು ವರ್ಷ ಕಾಯಲು ತಯಾರಿದ್ದಾರೆ. ಆದರೆ ಒಂದು ವರ್ಷ ಕಳೆದನಂತರವೂ ಹೆಚ್ಚಿನ ಮಕ್ಕಳು ಸೇರುವ ನೀರಿಕ್ಷೆ ಕುಂದುತ್ತಿದೆ. ಮನೆಯಿಂದಲೇ ಕೆಲಸಗಳನ್ನು ಮಾಡುತ್ತಿರುವ ಮಹಿಳೆಯರು  ತಮ್ಮ ಮಕ್ಕಳುಗಳನ್ನು ಕೆಲಸದೊಂದಿಗೇ ಮನೆಯಲ್ಲೇ ನಿಭಾಯಿಸುವ ವಿಧಾನಗಳನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. 

ಕೆಲವೇ ತಿಂಗಳುಗಳ ಹಿಂದೆ ನನ್ನ ಚಿಕ್ಕಮ್ಮ ಒಬ್ಬ "ಮಹಾತಾಯಿ (Super Mother)"ಯಾಗಿದ್ದರು,  ರಾಣಿಯಂತ್ತಿದ್ದರು. ಆದರೀಗ ಅವರು ಅಸಹಾಯಕ ಮಹಿಳೆಯಾಗಿ ನಿಂತಿದ್ದಾರೆ. ಆಕೆಗೆ ಯಾರು ಪರಿಹಾರವನ್ನೊದಗಿಸ ಬಲ್ಲರು? ಬ್ಯಾಂಕುಗಳು ಅವರ ಸಾಲದ ಮರುಪಾವತಿಯಲ್ಲಿ ರಿಯಾಯಿತಿಗಳನ್ನು ತೋರಬಲ್ಲದೇ? ಸರಕಾರ ಅವರ ನೆರವಿಗೆ ಬರಬಲ್ಲದೆ?'

ನಳಿನಿಯವರ ಕತೆಯನ್ನು ಹೇಳುತ್ತಾ ನಿಂತ್ತಿದ್ದ ರೋಹಿಣಿಯವರ ಕಣ್ಣುಗಳಲ್ಲಿ ನೀರು ಹನಿಯುತ್ತಿತ್ತು. ಕೆಲವು ಹಿರಿಯವರು  ಕೂಡಾ ಅವರ ಕಣ್ಣಾಲೆಗಳನ್ನು ಒರೆಸಿಕೊಳ್ಳುವುದು ಕಂಡಿತ್ತು. ಕಾರ್ಯಕ್ರಮದ ಅಂತ್ಯದಲ್ಲಿ ಸಭಿಕರೆಲ್ಲರನ್ನು ದುಃಖದಲ್ಲಿ ಮುಳುಗಿಸಿದ್ದಕ್ಕಾಗಿ ರೋಹಿಣಿ ಎಲ್ಲರ ಕ್ಷಮೆಯಾಚಿಸಿದ್ದಳು. ಆದರೆ ರೋಹಿಣಿ ಹೇಳಿದ ಕತೆ,  ಇಡೀ ದೇಶದ ಮೂಲೆ ಮೊಲೆಗಳಲ್ಲಿರುವ ಕೋಟಿ ಕೋಟಿ ಸ್ವಂತ ಉದ್ಯಮಿಗಳ ಕತೆಯಾಗಿತ್ತು. ಕಾಣದ ಮಹಾಮಾರಿ ಜೀವಗಳನ್ನು ಹರಣ ಮಾಡಿದ್ದಕ್ಕಿಂತ, ಹೆಚ್ಚಿನ ಸಂಖ್ಯೆಯ ಉದ್ಯಮಗಳನ್ನು ಮತ್ತು ಉದ್ಯೋಗಗಳನ್ನು ಕೊಂದಿತ್ತು. 'ದೇವರೆಂಬ ಒಬ್ಬನಿದ್ದಾನೆಯೇ? ಮನುಕುಲದ ಕಷ್ಟಗಳೇನು ಅವನಿಗೆ ಕಾಣಿಸುತ್ತಿಲ್ಲವೇ? ಅವನು ಮೌನವಾಗಿದ್ದನೇಕೆ?' ಯಾರ ಮನಸಿನಲ್ಲೂ ಈ ಪ್ರಶ್ನೆಗಳಿಗೆ ಅಂದು ಉತ್ತರವಿರಲಿಲ್ಲ.

###


         





No comments:

Post a Comment