Sunday, 2 March 2025

ರಾಮಾಯಣದ ರಹಸ್ಯಗಳು - ಹರಿಕಥೆ

ರಾಮಾಯಣದ ರಹಸ್ಯಗಳು - ಹರಿಕಥೆ  

ಗೌರವಾನ್ವಿತ ಸಭಿಕರಿಗೆಲ್ಲಾ ನಮ್ಮ ಸವಿನಯ ನಮಸ್ಕಾರಗಳು.  

'ರಾಮಾಯಣದ ರಹಸ್ಯಗಳು' ಎಂಬ ಇಂದಿನ ಹರಿಕಥೆಗೆ ತಮೆಲ್ಲರಿಗೂ ಸುಸ್ವಾಗತ. ಬಾಲಕಿಯರಾದ ನಮ್ಮ ಇಂದಿನ ಪ್ರಯತ್ನಕ್ಕೆ ತಮ್ಮಗಳ ಆಶೀರ್ವಾದ ಅತಿ ಮುಖ್ಯವಾದದ್ದು. 

ಹರಿಕಥೆಗೆ ಮೊದಲು ನಮ್ಮ ಸಂಗೀತ ಗುರುಗಳಾದ ಚೆನ್ನೈನ ಅಕ್ಕರೈ ಸಹೋದರಿಯರ ಮತ್ತು ನಮ್ಮ ಹರಿಕಥಾ ಗುರುಗಳಾದ ನಮ್ಮ ತಾತ ಲಕ್ಷ್ಮೀನಾರಾಯಣ ಅವರ ಆಶೀರ್ವಾದಗಳನ್ನು ಬೇಡುತ್ತೇವೆ.  

ಹರಿಕಥೆಯ ಶುಭಾರಂಭವನ್ನು ಶ್ರೀ ರಾಮನ ಸ್ಮರಣೆಯೊಂದಿಗೆ ಮಾಡೋಣ. 

ರಾಮ ರಾಮ ರಾಮ ಸೀತಾ ರಾಮ ಎನ್ನಿರೋ........ (ಪೂರ್ತಿ ಹಾಡು)

---------------------------------------------------------------------------

ಸಭಿಕರೆ...... 

ಕಳೆದ ಹತ್ತು ವರ್ಷಗಳಿಂದೀಚೆಗೆ ನಮ್ಮ ದೇಶದಲ್ಲಿ ನಮ್ಮ ಸನಾತನ ಧರ್ಮದ ಬಗ್ಗೆ ಹೆಚ್ಚು ಹೆಚ್ಚು ಒಲವು ಮೂಡುತ್ತಿರುವುದು ಸಂತೋಷದ ವಿಷಯ. ಈ ವರ್ಷದ ಆರಂಭದಲ್ಲಿ ಪ್ರಯಾಗ್ ರಾಜ್ನಲ್ಲಿ ನಡೆದ 'ಮಹಾ ಕುಂಭಮೇಳ'ದಲ್ಲಿ ೬೬ ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಮಂಗಳ ಸ್ನಾನದ ಪುಣ್ಯಯಾತ್ರೆಯನ್ನು ಮಾಡಿರುವುದು ಒಂದು ವಿಶ್ವ ದಾಖಲೆಯೇ ಸರಿ. 

ಸನಾತನ ಧರ್ಮ ಎಲ್ಲಿದೆ?

ಅದು ನಶಿಸಿ ಹೋಗುತ್ತಿದೆ....... ಎಂದು ಬೊಬ್ಬೆ ಹೊಡೆಯುತ್ತಿದ್ದವರ ಬಾಯನ್ನು ನಮ್ಮ ಮಹಾ ಕುಂಭಮೇಳದ ದಾಖಲೆ ಮುಚ್ಚಿಸಿದೆ. ಇಡೀ ವಿಶ್ವವೇ ನಮ್ಮ ಭಾರತ ದೇಶದ ಕಡೆ ತಿರುಗಿ ನೋಡಿ ಗೌರವದಿಂದ ನಮಿಸುವಂತೆ ಮಾಡಿದೆ. 

ನಮ್ಮ ಅಯೋಧ್ಯಯ ರಾಮ ಮಂದಿರ ಇಡೀ ವಿಶ್ವದ ಅತಿ ದೊಡ್ಡ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಿದೆ. ಕಳೆದ ವರ್ಷ, ಅಂದರೆ ೨೦೨೪ರಲ್ಲಿ, ಮುಸಲ್ಮಾನರ ಮೆಕ್ಕಾಕ್ಕೆ ೧.೪ ಕೋಟಿ ಜನ ಭೇಟಿ ನೀಡಿದ್ದಾರೆ. ಕ್ರಿಶ್ಚೆನರ ವ್ಯಟಿಕನ್ ಸಿಟಿಗೆ  ೮೦ ಲಕ್ಷ ಜನ ಭೇಟಿ ನೀಡಿದ್ದಾರೆ.  ನಮ್ಮ ಅಯೋಧ್ಯಗೆ ೧೬ ಕೋಟಿ ಜನ, ೨೦೨೪ರಲ್ಲಿ ಭೇಟಿ ನೀಡಿ ಶ್ರೀ ರಾಮನ ದರ್ಶನ ಪಡೆದಿದ್ದಾರೆ.  

ಎಲ್ಲಿಯ ೮೦ ಲಕ್ಷ?

ಎಲ್ಲಿಯೇ ೧ ಕೋಟಿ ೪೦ ಲಕ್ಷ?

ಎಲ್ಲಿಯ ೧೬ ಕೋಟಿ?

ನೀವೇ ಲೆಕ್ಕ ಹಾಕಿ ಶ್ರೋತೃಗಳೇ? 

ಸನಾತನ   ಧರ್ಮ ಕಿ  ______________ ಜೈ 

ಬೋಲೋ ಭಾರತ ಮಾತಾ ಕಿ._________ಜೈ 

ಶ್ರೀ ರಾಮಚಂದ್ರ ಕಿ __________________ಜೈ 

ಪವನ ಪುತ್ರ ಹನುಮಾನ ________________ ಜೈ 

________________________________________________________________________

ಇಂದಿನ ನಮ್ಮ ಹರಿಕಥಾ ವಿಷಯ ಬರೋಣ .  "ರಾಮಾಯಣದ ರಹಸ್ಯಗಳು", ಇಂದಿನ ನಮ್ಮ ಹರಿಕಥಾ ವಿಷಯ. 

ರಾಮಾಯಣ ನಿಮಗೆಲ್ಲರಿಗೂ ಚೆನ್ನಾಗೆ ಗೊತ್ತು. ಅಂತಹ ರಾಮಾಯಣದಲ್ಲಿ ರಹಸ್ಯಗಳು ಇರಬಹುದೇ? 

ಸಭಿಕರೆ, ಪ್ರಪಂಚದ ಎಲ್ಲ ಭಾಷೆಗಳಲ್ಲೂ ರಾಮಾಯಣ ಇದೆ. 

ಎಲ್ಲವುದಕ್ಕೂ ಮೂಲ ನಮ್ಮ ಸಂಸ್ಕೃತದ ವಾಲ್ಮೀಕಿ ರಾಮಾಯಣ. ಕನ್ನಡದಲ್ಲಿ ತೊರವೆ ರಾಮಾಯಣ, ತಮಿಳಿನಲ್ಲಿ ಕಂಬ ರಾಮಾಯಣ, ತೆಲುಗಿನಲ್ಲಿ ರಂಗನಾಥ ರಾಮಾಯಣ, ಮಲಯಾಳಂನಲ್ಲಿ ಅಧ್ಯಾತ್ಮ ರಾಮಾಯಣ, ಹಿಂದಿಯಲ್ಲಿ ತುಳಸಿ ರಾಮಾಯಣ, ಬೆಂಗಾಲಿಯಲ್ಲಿ ಕೃತ್ತಿವಾಸ ರಾಮಾಯಣ, ಮರಾಠಿಯಲ್ಲಿ ಏಕನಾಥರ  ರಾಮಾಯಣ, ಇಂಗ್ಲಿಷ್ನಲ್ಲಿ ಟಿ.ಎಚ್. ಗ್ರಿಫಿತ್ ರ ರಾಮಾಯಣ--------------- ಹೀಗೆ ಪ್ರಪಂಚದ ಎಲ್ಲಾ ಭಾಷೆಗಳಲ್ಲಿ ರಾಮಾಯಣ ಇದೆ. 

ಹಾಗಾಗೇ 

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ

ಎಂದು ನಮ್ಮ ಕವಿ ಕುಮಾರ ವ್ಯಾಸ ಹಾಡಿದ್ದಾನೆ. 

ಬೇರೆ ಬೇರೆ ಕವಿಗಳು ಬೇರೆ ಬೇರೆ ಘಟನೆಗಳನ್ನು ಕಂಡು ತಮ್ಮ ರಾಮಾಯಣದಲ್ಲಿ ಬರೆದಿದ್ದಾರೆ. ಹಾಗಾಗಿ ಎಲ್ಲ ಘಟನೆಗಳ ಪರಿಚಯ ಎಲ್ಲಾ ಶ್ರೋತೃಗಳಿಗೂ ಇರುವುದಿಲ್ಲ. ನಮಗೆ ಪರಿಚಯವಿರದ ಘಟನೆಗಳೇ ನಮ್ಮ ಪಾಲಿಗೆ ರಹಸ್ಯಗಳು.  ಅಂತಹ ರಾಮಾಯಣದ ವಿವಿಧ ರಹಸ್ಯಗಳನ್ನು ತಮ್ಮ ಮುಂದೆ ಪ್ರಸ್ತುತಪಡಿಸುವುದೇ ಇಂದಿನ ಹರಿಕಥೆಯ ಉದ್ದೇಶ. 

ರಾಮಾಯಣ ಒಂದು ಚಿನ್ನದ ಗಣಿ. ಅದನ್ನು ಶೋಧಿಸುತ್ತಾ ಹೋದಷ್ಟೂ ನಮಗೆ ಹೊಸ ಹೊಸ ರತ್ನಗಳು ಅಂದರೆ ರಹಸ್ಯಗಳು ದೊರಕುತ್ತಾಹೋಗುತ್ತವೆ. 

--------------------------------------------------------------------------------------------------------

 ಶ್ರೋತೃಗಳೇ--------

ಅಂದ ಹಾಗೆ ರಾಮಾಯಣ ನಡೆದ್ದದ್ದು ಯಾವಾಗ? ಇದೇ ಒಂದು ದೊಡ್ಡ ರಹಸ್ಯದ ವಿಷಯ. ಆ ರಹಸ್ಯವನೀಗ ಪರಿಶೀಲಿಸೋಣ. 

ರಾಮನ ಜನನ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯ ಮಧ್ಯಾನ್ಹ ೧ ಘಂಟೆಗಾಯ್ತು ಅಂತ ವಾಲ್ಮೀಕಿಗಳು ರಾಮಾಯಣದಲ್ಲಿ ಬರೆದಿದ್ದರೆ. ರಾಮನ ಜನ್ಮ ಕುಂಡಲಿಯನ್ನೇ ಬರೆದಿರುವ ವಾಲ್ಮೀಕಿಗಳು ರಾಮ ಜನನದ ಸಮಯದಲ್ಲಿದ್ದ ಗ್ರಹಕೂಟಗಳ ಸ್ಥಾನವನ್ನು ಬರೆದಿಟ್ಟಿದ್ದಾರೆ. ಇಂದಿನ ವಿಜ್ಞಾನಿಗಳು ತಮ್ಮ ಪ್ಲಾನೆಟ್ ಸಾಫ್ಟ್ವೇರ್ ನಲ್ಲಿ  ಶೋಧಿಸಿದಾಗ, ವಾಲ್ಮೀಕಿಗಳು ದಾಖಲಿಸಿರುವ ಗ್ರಹಸ್ಥಾನಗಳು ಕ್ರಿಸ್ತ ಪೂರ್ವ ೫೧೧೪ರ ಏಪ್ರಿಲ್ ೧೦ರಂದು ಇತ್ತು ಎಂದು ಒಪ್ಪಿಕೊಳ್ಳುತ್ತಾರೆ. ಕ್ರಿಸ್ತ ಪೂರ್ವದ ೫೦೦೦ ವರ್ಷ ಪ್ಲಸ್ ಕ್ರಿಸ್ತ ಶಕದ ಇಂದಿನ ೨೦೦೦ ವರ್ಷ……….ಅಂದರೆ ರಾಮಾಯಣ ನಡೆದದ್ದು ಇಂದಿಗೆ ಸುಮಾರು ಏಳು ಸಾವಿರ ವರ್ಷಗಳ ಹಿಂದೆ. 

ಆದರೂ ವಿತಂಡ ವಾದಿಗಳು ಇಷ್ಟೇ ಆಧಾರ ಸಾಲದು ಅಂತ ತಕರಾರು ಮಾಡ್ತಾರೆ. ಅಂತಹವರಿಗೆ ನಾನ್ ಹೇಳೋದೆನಂದ್ರೆ, ರಾಮ ಸೇತು ಎನ್ನೋದು ಈಗಲೂ ಇದೆ. ಅದು ಶಿಥಿಲವಾಗಿ ಸಾಕಷ್ಟು ಹಾಳಾಗಿರಬಹುದು. ಆದರೂ  ನಮ್ಮ ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ತುದಿಯವರೆಗೆ ಇರುವ ರಾಮಸೇತುವನ್ನು ಬ್ರಿಟಿಷರು ಆಡಮ್'ಸ್ ಬ್ರಿಡ್ಜ್ ಎಂದು ಕರೆದರು. ಕಾರ್ಬನ್ ಡೇಟಿಂಗ್ ಅನ್ನೋ ತಂತ್ರದ ಪ್ರಕಾರ ರಾಮಸೇತುಗೆ ೭೦೦೦ ವರ್ಷಗಳಾಗಿರಬಹುದು ಎಂಬುದನ್ನು ಇಂದಿನ ವಿಜ್ಞಾನಿಗಳು ಒಪ್ಪುತ್ತಾರೆ. ರಾಮಾಯಣ ನಡೆದ್ದದ್ದು ನಿಜ, ರಾಮಾವತಾರವಾಗಿದ್ದು ೭೦೦೦ ವರ್ಷಗಳ ಹಿಂದೆ ಎಂಬುದಕ್ಕೆ ರಾಮ ಸೇತು ಮತ್ತೊಂದು ಆಧಾರ. 

---------------------------------------------------------------------------------------------------

೭೦೦೦ ವರ್ಷದ ಹಿಂದೆ ನಮ್ಮನ್ನೆಲ್ಲಾ ಕಾಪಾಡಲು ಭೂಮಿಯ ಮೇಲೆ ಅವತರಿಸಿದ ಶ್ರೀ ರಾಮನನ್ನು ಮೈಸೂರು ವಾಸುದೇವಾಚಾರ್ಯರು  ಹೇಗೆ ಸ್ವಾಗತಿಸಿದರು ಎಂಬುದನ್ನು ಈಗ ಕೇಳೋಣ. 

ರಾ ರಾ ರಾಜೀವಲೋಚನಾ ರಾಮ-----------(ಪೂರ್ತಿ ಹಾಡು) 

------------------------------------------------------------------------------------------------------

ಇಡೀ ಪ್ರಪಂಚಕ್ಕೆ ಆದಿ ಕವಿ ವಾಲ್ಮೀಕಿಗಳು, ಆದಿ ಕಾವ್ಯ ಶ್ರೀಮದ್ರಾಮಾಯಣ. ಬೇಡರಾಗಿ ಜನಿಸಿದ ವಾಲ್ಮೀಕಿಗಳಿಗೆ ರಾಮಾಯಣ ಬರೆಯಲು ಪ್ರೇರಣೆ ದೊರೆತದ್ದು ಹೇಗೆ? ಇದು ರಾಮಾಯಣದ ಮತ್ತೊಂದು ರಹಸ್ಯ. 

ನಾರದರ ಬೋಧನೆಯಿಂದ ಜ್ಞಾನವನ್ನು ಪಡೆದು ಋಷಿಗಳಾದ ವಾಲ್ಮೀಕಿಗಳು ಒಂದು ಬೆಳಗ್ಗೆ ತಮ್ಮ ಪ್ರಿಯ ಶಿಷ್ಯ ಭರದ್ವಾಜನೊಡನೆ ಬೆಳಗಿನ ಮಂಗಳ ಸ್ನಾನಕ್ಕಾಗಿ ತಮಸಾ ನದಿಯ ದಡಕ್ಕೆ ತೆರಳುತ್ತಾರೆ. ಪೂರ್ವದಲ್ಲಿ ಸೂರ್ಯ ಉದಯಿಸುತ್ತ ಇರುವ ನೋಟ ಮನೋಹರವಾಗಿರುತ್ತೆ. ನದಿಯ ತೀರದಲ್ಲಿ ಎರಡು ಕ್ರೌನ್ಚ ಪಕ್ಷಿಗಳು (ಕ್ರೌನ್ಚ ಪಕ್ಷಿ ಎಂದರೆ ಕೆಂಪು ಕತ್ತುಳ್ಳ ಕೊಕ್ಕರೆ ಎಂದಿಟ್ಟುಕೊಳ್ಳಿ), ಅದರಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಪಕ್ಷಿಗಳು ಪ್ರಣಯದಲ್ಲಿ ತೊಡಗಿರುತ್ತವೆ. ಕವಿಹೃದಯದ ಕೋಮಲ ಮನಸ್ಸಿನ ವಾಲ್ಮೀಕಿಗಳು ಕ್ರೌನ್ಚ ಪಕ್ಷಿಗಳ ಪ್ರಣಯವನ್ನು ಬಹಳ ಕುತೂಹಲದಿಂದ ನೋಡುತ್ತಿರುತ್ತಾರೆ. ಆ ಸಮಯದಲ್ಲಿ ಇದ್ದಕಿದ್ದಂತೆ ದೂರದ ಮರದ ಮರೆಯಿಂದ ಬೇಡನೊಬ್ಬ ತೀಕ್ಷ್ಣವಾದ ಬಾಣವೊಂದನ್ನು ಗಂಡು ಕ್ರೌನ್ಚ ಪಕ್ಷಿಯ ಕೊರಳಿಗೆ ಗುರಿಯಿಟ್ಟು ಬಿಡುತ್ತಾನೆ. ಬಾಣ ಕೊರಳಿಗೆ ಬೀಳುತ್ತಲೇ, ಪಕ್ಷಿಯ ಕೊರಳು ತುಂಡಾಗಿ ಗಂಡು ಪಕ್ಷಿ ಸಾಯುತ್ತದೆ. ಸತ್ತ ಗಂಡು ಪಕ್ಷಿಯನ್ನು ನೋಡಿ ಹೆಣ್ಣು ಪಕ್ಷಿ ದುಃಖಿಸುತ್ತಾ ರೋದಿಸಲಾರಂಭಿಸುತ್ತದೆ. ಆ ದುಃಖದ ದೃಶ್ಯವನ್ನು ನೋಡಿ ವಾಲ್ಮೀಕಿಗಳ ಸಿಟ್ಟು ನೆತ್ತಿಗೇರಿರುತ್ತದೆ. ಕೋಪದಲ್ಲಿ ಅವರು ಬೇಡನಿಗೆ ಶಪಿಸುತ್ತಾ.----------

ಮಾ ನಿಷಾದ  ಪ್ರತಿಷ್ಠಾ ತ್ವ೦ 

ಅಗಮಃ ಶಾಶ್ವತೀ:  ಸಮಾ: 

ಯತ್ ಕ್ರೌನ್ಚಮಿಥುನಾದೇಕಂ   

ಅವಧೀ: ಕಾಮಮೋಹಿತಃ 

ಎಂದು ಜೋರಾಗಿ ಹೇಳುತ್ತಾರೆ. ವಾಲ್ಮೀಕಿಗಳ ಶಾಪದ ಅರ್ಥವೇನೆಂದರೆ, 'ಓ ಬೇಡ, ಪ್ರಣಯದಲ್ಲಿದ ಕ್ರೌನ್ಚ ಪಕ್ಷಿಯನ್ನು ಕೊಂದಿರುವ ನಿನಗೆ, ಜೀವನದಲ್ಲಿ ಶಾಂತಿ ಎನ್ನುವುದು ಎಂದೆಂದಿಗೂ ಇಲ್ಲದಿರಲಿ' ಎಂದು. 

ಕ್ರೌನ್ಚ ಪಕ್ಷಿಗಳ ಗೋಳನ್ನು ನೋಡಿ ಮನಕಲಕಿಹೋದ ವಾಲ್ಮೀಕಿಗಳು, ಮನಸ್ಸಿಲ್ಲದಿದ್ದರೂ ಸ್ನಾನವನ್ನು ಮಾಡಿ ತಮ್ಮ ನಿತ್ಯ ಕರ್ಮಗಳನ್ನು ಬೇಗನೆ ಮುಗಿಸಿ, ತಮ್ಮ ಶಿಷ್ಯ ಭರದ್ವಾಜನೊಡನೆ ತಮ್ಮ ಆಶ್ರಮವನ್ನು ಸೇರುತ್ತಾರೆ. ಅವರ ಮನಸಿನಲ್ಲಿ ಬೇರೆ ಬೇರೆ ರೀತಿಯ ಯೋಚನೆಗಳು ಹಾದು ಹೋಗುತ್ತಿರುತ್ತದೆ. "ಆ ಬೇಡನೇಕೆ ಕ್ರೌನ್ಚ ಪಕ್ಷಿಯನ್ನು ಕೊಂದ? ಸನ್ಯಾಸಿಯಾದ ನಾನೇಕೆ ಕೋಪಕ್ಕೊಳಗಾದೆ? ನಾನೇಕೆ ಆ ಬೇಡನನ್ನು ಶಪಿಸಿದೆ? ಸ್ವಲ್ಪ ಕಾಲದ ಹಿಂದೆ ತಾನೂ ಬೇಡನಾಗಿ, ಪ್ರಾಣಿಗಳ ಬೇಟೆಯನ್ನಾಡುತ್ತಿದ್ದೆನಲ್ಲವೇ? ಹೊಟ್ಟೆ ಪಾಡಿಗೆ ಬೇಟೆಯಾಡಿದ ಆ ಬೇಡನದೆನು ತಪ್ಪು?"

ಆ ಸಮಯದಲ್ಲಿ ವಾಲ್ಮೀಕಿಗಳ ಮುಂದೆ ಬ್ರಹ್ಮದೇವರು ಪ್ರತ್ಯಕ್ಷಗೊಳ್ಳುತ್ತಾರೆ. ವಾಲ್ಮೀಕಿಗಳನ್ನು ಸಂಭೋದಿಸುತ್ತಾ, 'ಓ ವಾಲ್ಮೀಕಿ, ಏಕೆ ದುಃಖದಿಂದ ಕುಳಿತಿರುವೆ? ಇಂದು ಬೆಳಗ್ಗೆ ನಿನ್ನ ಬಾಯಿಂದ ಅಯಾಚಿತವಾಗಿ, ಅಂದರೆ ತಾನೇ ತಾನಾಗಿ ಹೋರಾಟ ಶಬ್ದಗಳು ಬೇಡನಿಗಿತ್ತ ಶಾಪವಲ್ಲ, ಅದು ಶ್ರೀಮನ್ನಾರಾಯಣನ ಸ್ತುತಿ" ಎನ್ನುತ್ತಾರೆ. ಆಶ್ಚರ್ಯಗೊಂಡ  ವಾಲ್ಮೀಕಿಗಳು ಬ್ರಹ್ಮದೇವರಿಗೆ ವಂದಿಸಿ, 'ಬ್ರಹ್ಮದೇವರೇ, ಅದು ಹೇಗೆ ಶ್ರೀಮನ್ನಾರಾಯಣನ ಸ್ತುತಿಯಾಗುತ್ತದೆ?' ಎಂದು ಕೇಳುತ್ತಾರೆ. 

ಶ್ರೋತೃಗಳೇ ನೋಡಿ, ಸಂಸ್ಕೃತ ಭಾಷೆಯ ಆಪೂರ್ವ ಶಕ್ತಿಯೇ ಅಂತಹದ್ದು. ಒಂದೇ ಪದಕ್ಕೆ ಹಲವಾರು ಅರ್ಥಗಳು ಇಲ್ಲುಂಟು.  ಮಾ ನಿಷಾದ ಎಂದರೆ ಏನರ್ಥ? 'ಮಾ' ಅಂದರೆ  'ಆಗದಿರಲಿ' ಎಂದರ್ಥ. ನಿಷಾದ ಎಂದರೆ ಬೇಟೆಯಾಡುವ ಬೇಡ ಎಂದರ್ಥ. ಅದೇ ಪದಗಳಿಗೆ ಬೇರೆ ಅರ್ಥಗಳು ಉಂಟು. ಬ್ರಹ್ಮದೇವರು ವಾಲ್ಮೀಕಿಗಳಿಗೆ ವಿವರಿಸುತ್ತಾ, 'ಮಾ ಎಂದರೆ ಮಹಾತಾಯೀ ಲಕ್ಷ್ಮಿ ಎಂದರ್ಥ. ನಿಷಾದ ಎಂದರೆ ವಾಸಸ್ಥಾನ. ಲಕ್ಷ್ಮಿಯ ವಾಸಸ್ಥಾನ ಎಂದರೆ ಶ್ರೀಮನ್ನಾರಾಯಣ ಎಂದರ್ಥ. ಲಕ್ಷ್ಮಿ ವಾಸಸ್ಥಾನ ಶ್ರೀಮನ್ನಾರಾಯಣನ ಹೃದಯ ತಾನೇ? ಹಾಗಾಗಿ ನಿನ್ನ ಬೆಳಗಿನ ಮಾತುಗಳ ಅರ್ಥವೇ ಬೇರೆ. ಕಾಮಮೋಹಿತನಾದ ರಾವಣನನ್ನು ಕೊಂದು, ಲೋಕಕಲ್ಯಾಣವನ್ನು ಮಾಡಿರುವ ಶ್ರೀಮನ್ನಾರಾಯಣನೇ, ನಿನ್ನ ನಾಮವು ಬ್ರಹ್ಮಾ೦ಡದಲ್ಲಿ ಶಾಶ್ವತವಾಗಿ ಉಳಿಯಲಿ ಎಂದರ್ಥ. 

ವಾಲ್ಮೀಕಿ,  ನೀನಾಡಿದ ಮಾತುಗಳು ಬರಿ ಮಾತುಗಳಲ್ಲ, ಅದೊಂದು ಉತ್ತಮ ಛ೦ದಸ್ಸಿನಲ್ಲಿರುವ   ಶ್ಲೋಕ ನೋಡು. 

ಮಾ ನಿಷಾದ  ಪ್ರತಿಷ್ಠಾ ತ್ವ೦ 

ಅಗಮಃ ಶಾಶ್ವತೀ:  ಸಮಾ: 

ಯತ್ ಕ್ರೌನ್ಚಮಿಥುನಾದೇಕಂ   

ಅವಧೀ: ಕಾಮಮೋಹಿತಃ 

ನಿನ್ನ ಮಾತುಗಳಲ್ಲಿ ನಾಲ್ಕು ಸಾಲುಗಳಿವೆ.  ಪ್ರತಿ ಸಾಲಿನಲ್ಲೂ ಎಂಟು ಅಕ್ಷರಗಳಿವೆ. ಕಾವ್ಯಕ್ಕೆ ಇಂದೊಂದು ಸುಂದರ ಛಂದಸ್ಸು. ಇದನ್ನು ಇನ್ನು ಮುಂದೆ 'ಅನುಷ್ಟಪ್ ಛಂದಸ್ಸು' ಎಂದು ಕರೆಯೋಣ. ಇದೆ ಛಂದಸ್ಸಿನಲ್ಲಿ ವಾಲ್ಮೀಕಿ ನೀನು ಶ್ರೀಮದ್ರಾಮಯಣದ ಕಾವ್ಯವನ್ನು ರಚಿಸಿ ಲೋಕಕಲ್ಯಾಣವನ್ನುಂಟುಮಾಡು' ಎನ್ನುತ್ತಾರೆ ಬ್ರಹ್ಮದೇವರು. 

ಬ್ರಹ್ಮದೇವರಿಂದ ಹೊಸ ಪ್ರೇರೇಪಣೆಯನ್ನು ಪಡೆದ ವಾಲ್ಮೀಕಿಗಳು, ತಮ್ಮ ಬಾಯಿಂದ ಅಯಾಚಿತವಾಗಿ ಹೋರಾಟ ಅನುಷ್ಟಪ್ ಛಂದಸ್ಸಿನಲ್ಲೇ ರಾಮಾಯಣ ರಚನೆಯನ್ನು ಮಾಡಿರುವುದು ಈಗ ಇತಿಹಾಸ. ವಾಲ್ಮೀಕಿಗಳಿಂದ ರಚಿತವಾದ ಅನುಷ್ಟಪ್ ಛಂದಸ್ಸು ಈಗ ಇಡೀ ಸಂಸ್ಕೃತ ಕಾವ್ಯಲೋಕಕ್ಕೆ ಅಡಿಪಾಯವಾಗಿರುವುದೂ ಇತಿಹಾಸ. ಮುಂದೆ ಬಂದ  ವ್ಯಾಸರು ಮಹಾಭಾರತವನ್ನು ರಚಿಸಿದ್ದೂ ಅನುಷ್ಟಪ್ ಛಂದಸ್ಸಿನಲ್ಲೇ.

-------------------------------------------------------------------------------------------------

ಓಂ ಭೂರ್ಭುವಸ್ಸುವಃ |
ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್ ||

ಶ್ರೋತೃಗಳೇ, ನಾನೀಗ ಪಠಿಸಿದ್ದು ಗಾಯತ್ರಿ ಮಂತ್ರ. ರಾಮಾಯಣದ ಮಧ್ಯ ಗಾಯತ್ರಿ ಮಂತ್ರ ಏಕೆ ಬಂತು? ಗಾಯತ್ರಿ ಮಂತ್ರಕ್ಕೂ, ರಾಮಾಯಣಕ್ಕೂ ಏನು ಸಂಬಂಧ? ರಾಮಾಯಣ ಮುಂಚೆ ಬಂತೋ? ಅಥವಾ ಗಾಯತ್ರಿ ಮಂತ್ರ ಮುಂಚೆ ಬಂತೋ? ಎಂಬ ಅನುಮಾನಗಳು ನಿಮ್ಮಿಗಳನೀಗ ಕಾಡುತ್ತಿರಬಹುದು. 

ಗಾಯತ್ರಿ ಮಂತ್ರಕ್ಕೂ ರಾಮಾಯಣಕ್ಕೂ ಇರುವ ಸಂಬಂಧವೇ ರಾಮಾಯಣದ ಮತ್ತೊಂದು ರಹಸ್ಯ. 

ಗಾಯತ್ರಿ ಮಂತ್ರ ರಾಮಾಯಣಕ್ಕಿಂತ ಪ್ರಾಚೀನವಾದುದು. ಆತ್ಮಲಿಂಗವನ್ನು ಪ್ರಮೇಶ್ವರನಿಂದ ಪಡೆದುಕೊಂಡ ರಾವಣ, ಲಂಕೆಗೆ ಹಿಂತಿರುಗುವಾಗ ಗಾಯತ್ರಿ ಮಂತ್ರದ ಪಠಣದೊಂದಿಗೆ ಸಂಧ್ಯಾವಂದನೆಯನ್ನು ಮಾಡಿದ್ದನ್ನು ನಾವು ಕೇಳಿದ್ದೇವೆ. 

ಗಾಯತ್ರಿ ಮಂತ್ರದ ಅರ್ಥವೇನು?

ಗಾಯತ್ರಿ ಮಂತ್ರ ಪ್ರತ್ಯಕ್ಷ ದೈವ ಸೂರ್ಯನಾರಾಯಣನ ಪ್ರಾರ್ಥನೆ. ಮಹಾ ತೇಜಸ್ಸಿನಿಂದ ಕೂಡಿರುವ ಓ, ಸೂರ್ಯನಾರಾಯಣ, ನಿನ್ನ ತೇಜಸ್ಸು ನಮ್ಮ ಬುದ್ಧಿಯನ್ನು ಉದ್ದೀಪನಗೊಳಿಸಲಿ, ಚುರುಕುಗೊಳಿಸಲಿ, ಧಿಯೋ ಯೋ ನ: ಪ್ರಚೋದಯಾತ್ ಎಂದರ್ಥ. ಇಂದು ನಾವೆಲ್ಲರೂ ಪ್ರತಿದಿನ ಮಾಡುವ ಸೂರ್ಯನಾರಾಯಣನ ಸ್ಮರಣೆ. 

ಸಭಿಕರೆ, ನೋಡಿ ಗಾಯತ್ರಿ ಮಂತ್ರದ ಉದಾರ ಧ್ಯೇಯವನ್ನು! ನನ್ನ ಬುದ್ಧಿಯನ್ನು ಉದ್ದೀಪನಗೊಳಿಸು ಎನ್ನುವ ಸ್ವಾರ್ಥ ಅದರಲಿಲ್ಲ. ನಮ್ಮ ಬುದ್ಧಿಯನ್ನು ಉದ್ದೀಪನಗೊಳಿಸು, ಇಡೀ ಸಮಾಜವನ್ನೇ ಜಾಗೃತಗೊಳಿಸು ಎಂಬ ಉದಾರ ಧ್ಯೇಯ ಗಾಯತ್ರಿ ಮಂತ್ರದ್ದು.  

ತತ್ಸವಿತುರ್ವರೇಣ್ಯಂ------------------------------------------------------------------------------------------------

ಎಂಬಲ್ಲಿಂದ ಎಣಿಸಿದರೆ ಗಾಯತ್ರಿ ಮಂತ್ರದಲ್ಲಿ ೨೪ ಅಕ್ಷರಗಳಿವೆ.  ವಾಲ್ಮೀಕಿ ರಾಮಾಯಣದಲ್ಲಿ ೨೪೦೦೦ ಶ್ಲೋಕಗಳಿವೆ. ರಾಮಾಯಣದ ಮೊದಲ ಶ್ಲೋಕ ಯಾವುದು? 

ತಪ: ಸ್ವಾಧ್ಯಾಯ ನಿರತ೦
ತಪಸ್ವೀ ವಾಗ್ವಿದಾಂ ವರ೦
ನಾರದಂ ಪರಿಪಪ್ರಚ್ಛ 
ವಾಲ್ಮೀಕಿರ್ಮುನಿಪುಂಗವ೦

ರಾಮಾಯಣದ ಮೊದಲ ಶ್ಲೋಕದ ಮೊದಲ ಅಕ್ಷರ 'ತ'

ಹಾಗೆಯೇ ಹುಡುಕುತ್ತಹೋದರೆ ರಾಮಾಯಣದ ೧೦೦೧ನೇ ಶ್ಲೋಕದ ಮೊದಲ ಅಕ್ಷರ 'ತ್ಸ'. 

೨೦೦೧ನೇ ಶ್ಲೋಕದ ಮೊದಲ ಅಕ್ಷರ 'ವಿ'

ಹೀಗೆ ರಾಮಾಯಣದ ಪ್ರತಿ ಒಂದು ಸಾವಿರದ ಮೊದಲ ಶ್ಲೋಕದ ಮೊದಲ ಅಕ್ಷರಗಳನ್ನು ನಾವುಗಳು ಆರಿಸಿಕೊಳ್ಳುತ್ತಾಹೋದರೆ ನಮಗೆ ೨೪ ಅಕ್ಷರಗಳು ಸಿಕ್ಕುತ್ತವೆ. ಆ ೨೪ ಅಕ್ಷರಗಳನ್ನು ಅದೇ ಕ್ರಮದಲ್ಲಿ ಜೋಡಿಸಿ ನೋಡಿದರೆ ನಮಗೆ ಗಾಯತ್ರಿ ಮಂತ್ರ ದೊರಕ್ಕುತ್ತದೆ. ಹೀಗೆ ಗಾಯತ್ರಿ ಮಂತ್ರ ಎಂಬ ಅನರ್ಘ್ಯ ರತ್ನವನ್ನು ವಾಲ್ಮೀಕಿಗಳು  ತಮ್ಮ ರಾಮಾಯಣದಲ್ಲಿ ಅಡಗಿಸಿಟ್ಟಿದ್ದಾರೆ 

ಮೊದಲಕ್ಷರವನ್ನು ನಾವುಗಳು ಆರಿಸಿಕೊಂಡ ಆ ೨೪ ಶ್ಲೋಕಗಳನ್ನು ನಾವು ಪಠಿಸಿದರೆ ಅದೇ 'ಗಾಯತ್ರಿ ರಾಮಾಯಣ.'   ಗಾಯತ್ರಿ ರಾಮಾಯಣದ ೨೪ ಶ್ಲೋಕಗಳನ್ನು ನಾವು ಪಠಿಸಿದರೆ, ಇಡೀ ರಾಮಾಯಣವನ್ನು ಪಠಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ವಾಲ್ಮೀಕಿಗಳು ನಮ್ಮೆಲ್ಲರಿಗೂ ತಿಳಿಸಿದ್ದಾರೆ. 

-------------------------------------------------------------------------------------------------------------------------

ರಾಮಾಯಣ ಪಠಿಸುವುದು ಜನಸಾಮಾನ್ಯರಿಗೆ ಕಷ್ಟ. ೨೪,೦೦೦ ಶ್ಲೋಕಗಳು. 

ಗಾಯತ್ರಿ ರಾಮಾಯಣವನ್ನು ಪಠಿಸುವುದೂ ಕಷ್ಟ. ೨೪ ಶ್ಲೋಕಗಳು, ಅದೂ ಸಂಸ್ಕೃತದಲ್ಲಿ. 

ಪುರಂದರ ದಾಸರು ನಮ್ಮಂತಹವರಿಗೆ ಹೇಳಿದ್ದಾರೆ. ೨೪,೦೦೦ ಶ್ಲೋಕವೂ ಬೇಡ, ೨೪ ಶ್ಲೋಕಗಳೂ ಬೇಡ, ನಾನು ಎರಡಕ್ಷರದ ಒಂದು ಮಂತ್ರ ಹೇಳಿಕೊಡುತ್ತೇನೆ, ಕಲಿತುಕೊಳ್ಳುವಿರಾ ಎಂದು ನಮ್ಮನ್ನು ಕೇಳಿದ್ದಾರೆ. ಯಾವುದು ಆ ಮಂತ್ರ? 

ರಾಮ ಮಂತ್ರವ ಜಪಿಸೋ, ಹೇ ಮನುಜ (ಪೂರ್ತಿ ಹಾಡು) 

------------------------------------------------------------------------------------------------------------------------

ರಾಮನಾಮದ ಮಹಿಮೆಯನ್ನು ಪುರಂದರದಾಸರು ಮತ್ತೊಂದು ದೇವರನಾಮದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ. 'ರಾಮ, ರಾಮ' ಎಂದು ಉಚ್ಛರಿಸುವುದರಿಂದ ನಮ್ಮ ದೇಹಕ್ಕಾಗುವ ಪ್ರಯೋಜನಗಳೇನು? 

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು 
ಪಾಮರರು ತಾವೇನು ಬಲ್ಲಿರಯ್ಯ?

ಎಂದಿದ್ದಾರೆ ದಾಸರು. 

ರಾ ಎಂಬ ಉಚ್ಚಾರದಿಂದ ನಮ್ಮ ದೇಹಕ್ಕಾಗುವ ಒಳ್ಳೆಯ ಪರಿಣಾಮವೇನು? 

ರಾ ಎಂದ ಮಾತ್ರದೊಳು ರಕ್ತಮಾಂಸದಲ್ಲಿದ್ದ 
ಆಯಸ್ಥಿಗತವಾದ ಅತಿ ಪಾಪವನು 
ಮಾಯಾವನು ಮಾಡಿ ಮಹರಾಯ ಮುಕ್ತಿಯ ಕೊಡುವ 
ದಾಯವನು ವಾಲ್ಮೀಕಿ ಮುನಿ ತಾ ಬಲ್ಲ 

ರಾ ಎಂದು ಉಚ್ಛರಿಸಬೇಕಾದರೆ ಬಾಯನ್ನು ದೊಡ್ಡದಾಗಿ ತೆರೆಯಬೇಕಾಗುತ್ತದೆ. ಆಗ ನಮ್ಮೊಳಗಿದ್ದ ಸಕಲ ಪಾಪಗಳು ಹೊರಗೆ ಹೋಗಿಬಿಡುತ್ತವೆ. 

ಮ ಎಂದರೆ ಆಗುವ ಉಪಯೋಗಗಳೇನು? 

ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು 
ಮತ್ತೆ ಒಳ ಪೊಗದಂತೆ ಕವಾಟವಾಗಿ 
ಚಿತ್ತಾಕಯವನ್ನೆಲ್ಲಾ ಪರಿಶುದ್ಧಮಾಡುವ ಪರಿಯ 
ಭಕ್ತವರ ಹನುಮಂತ ಒಬ್ಬ ತಾ ಬಲ್ಲ 

ಮ ಎಂದು ಉಚ್ಛರಿಸಬೇಕಾದರೆ ಎರಡೂ ತುಟಿಗಳನ್ನು ಮುಚ್ಚಬೇಕಾಗುತ್ತದೆ. ಆಗ ಹೊರಬಿದ್ದ ಪಾಪಗಳೆಲ್ಲಾ ಮತ್ತೆ ದೇಹವನ್ನು ಪ್ರವೇಶಿಸದಂತೆ ಕವಾಟವಾಗಿಬಿಡುತ್ತವೆ. ಹೀಗೆ ರಾಮ ನಾಮ ಮಂತ್ರ ನಮ್ಮ ದೇಹವನ್ನು, ಮನಸ್ಸನ್ನು ಶುದ್ಧಿಗೊಳಿಸುತ್ತದೆ. 

------------------------------------------------------------------------------------------------------------------------

ಕೃಷ್ಣನ ಬಾಲಲೀಲೆಯನ್ನು ನಾವು ವಿಶೇಷವಾಗಿ ಓದಿ ಆನಂದಿಸುತ್ತೇವೆ. ಯಶೋಧ ಕಂದನ ತುಂಟಾಟಗಳಿಗೆ ಇಡೀ ನಂದಗೋಕುಲವೇ ಬೆರಗಾಗಿತ್ತು. ಆದರೆ ನಮ್ಮ ರಾಮನ ಬಾಲಲೀಲೆಗಳನ್ನು ವಾಲ್ಮೀಕಿಗಳು ಅದೇಕೋ  ಅಷ್ಟಾಗಿ ವರ್ಣಿಸಿಲ್ಲ. ರಾಮ ಜನನವಾಗುತ್ತಲೇ ವಿಶ್ವಮಿತ್ರರು ಬಂದೆ ಬಿಡ್ತಾರೆ, ಯಜ್ಞ ರಕ್ಷಣೆಗೆಂದು ರಾಮ ಲಕ್ಷ್ಮಣರನ್ನು ಕರೆದುಕೊಂಡು ಹೋಗೇಬಿಡುತ್ತಾರೆ. ತಾಟಕಿ, ಸುಭಾಹುಗಳ ಸಂಹಾರವಾಗುತ್ತದೆ. ಅಲ್ಲಿಂದ ರಾಮನನ್ನು ವಿಶ್ವಮಿತ್ರರು ಜನಕನ ಮಿಥಿಲೆಗೆ  ಕರೆದುಕೊಂಡು ಹೋಗಿ, ರಾಮನಿಗೆ ಸೀತೆಯೊಂದಿಗೆ  ಮದುವೆ ಮಾಡ್ಸೆಬಿಡ್ತಾರೆ. ವಾಲ್ಮೀಕಿಗಳಿಗೆ ಅದೇಕೋ ರಾಮನಿಗೆ ಮದುವೆ ಮಾಡ್ಸೋ ಆತುರ. ನಮ್ಮ ಕುಟುಂಬಗಳಲ್ಲೂ ಮಕ್ಕಳ ಮದುವೆಗೆ ಆತುರಪಡೋ ಹಿರಿಯರ ಥರ ನಮ್ಮ ವಾಲ್ಮೀಕಿಯವರು.  

ಆದ್ರೆ ತುಳಸಿದಾಸರು ಹಾಗಲ್ಲ.  ಶ್ರೀ ರಾಮನ ಬಾಲಲೀಲೆಯನ್ನು ಸೊಗಸಾಗಿ ವರ್ಣಿಸಿದ್ದಾರೆ.  ದಶರಥನ ಅರಮನೆಯಲ್ಲಿ ಎರಡು ವರ್ಷದ ಬಾಲರಾಮ  ತಪ್ಪು ಹೆಜ್ಜೆಗಳನಿಡುತ್ತಾ ನಡೆಯುತ್ತಾ ಅಡ್ಡಾಡುತ್ತಿದ್ದರೆ ಅರಮನೆಯ ರಾಣಿಯರೆಲ್ಲಾ ಸುಸ್ತಾಗಿಬಿಡುತ್ತಿದ್ದರಂತೆ.  ತುಳಸಿ ದಾಸರು ಅದರ ವರ್ಣನೆಯನ್ನು ಹೇಗೆ ಮಾಡಿದ್ದಾರೆ ನೋಡೋಣ. 

ಠುಮಕ ಚಲತ ರಾಮಚಂದ್ರ  (ಪೂರ್ತಿ ಹಾಡು)

-----------------------------------------------------------------------------------------------------------------------

ರಾಮಯ್ಯ ರಾಮಭದ್ರಾಯ 
ರಾಮಚಂದ್ರಾಯ ವೇದಸೆ 
ರಘುನಾಥಾಯ ನಾಥಾಯ 
ಸೀತಾಯ ಪತೇಯೇನಮಃ 

ಇದು ದಶರಥನ ಅರಮನೆಯಲ್ಲಿ ಚಾಲ್ತಿಯಲ್ಲಿದಂತಹ ರಾಮನ ಬೇರೆ ಬೇರೆ ಹೆಸರುಗಳ ಶ್ಲೋಕ.  ರಾಮನನ್ನು 'ರಾಮಾ' ಎಂದು ಕರೆಯುತ್ತಿದ್ದವರು ದಶರಥ ಮಹಾರಾಜರು. ರಾಮಭದ್ರಾಯ - ಎಂದು ಕರೆಯುತ್ತಿದ್ದವರು ರಾಮನ ತಾಯೀ ಕೌಸಲ್ಯ. ರಾಮಭದ್ರ ಎಂದರೆ ರಾಮ ಎಲ್ಲರಿಗೂ ಮಂಗಳವನ್ನುಂಟುಮಾಡುವವನು ಎಂದರ್ಥ.  ರಾಮಚಂದ್ರಯ್ಯ--------! ರಾಮನನ್ನು ರಾಮಚಂದ್ರ ಎಂದು ಮೊದಲು ಕರೆದವರು ಯಾರು?  ಇದು ರಾಮಾಯಣದ ಮತ್ತೊಂದು ರಹಸ್ಯ. 

ಒಮ್ಮೆ ರಾಮ ಇನ್ನು ಮೂರು ವರ್ಷದ ಮಗುವಾಗಿದ್ದಾಗ, ಹುಣ್ಣಿಮ್ಮೆಯ ಒಂದು ದಿನ ನನಗೆ ಚಂದ್ರ ಬೇಕು, ನನಗೆ ಚಂದ್ರ ಬೇಕು ಅಂತ ರಚ್ಚೆ ಹಿಡಿದು ಅಳುವುದಕ್ಕೆ ಶುರುಮಾಡಿದ್ದನಂತೆ. ಮೂರು ಜನ ಮಹಾರಾಣಿಯರು ಮತ್ತು ಅರಮನೆಯ ಸಖಿಯರೆಲ್ಲ ರಾಮನನ್ನು ಸಮಾಧಾನಪಡಿಸಲಾಗದೆ ಕಂಗಾಲಾಗಿಹೋಗಿದ್ದರಂತೆ. ಆಗ ಜಾಣೆಯಾದ ಮಂಥರೆ ಬೋಗುಣಿಯೊಂದರಲ್ಲಿ ನೀರನ್ನು ತುಂಬಿ, ಆ ನೀರಿನಲ್ಲಿ ಚಂದ್ರನ ಪ್ರತಿಬಿಂಬವನ್ನು ರಾಮನಿಗೆ ತೋರಿಸಿ, ರಾಮಾ ನೋಡಿಲ್ಲಿ ಚಂದ್ರ, ರಾಮ..........,ಚಂದ್ರ......... ರಾಮಚಂದ್ರ ಎಂದು ರಾಮನನ್ನು ರಾಮಚಂದ್ರ ಎಂದು ಬಾಯ್ತುಂಬಾ ಮೊದಲ ಬಾರಿಗೆ ಕರೆದವಳು ಮಂಥರೆ.  ಚಂದ್ರ ಸಿಕ್ಕಿದ ಎಂದು ಹಿಗ್ಗಿಹೋದ ರಾಮ ಸಮಾಧಾನಗೊಂಡನಂತೆ. ರಾಮನನ್ನು ಸಮಾಧಾನಪಡಿಸಿದ  ಸಂತೋಷ ಹಾಗು ಹೆಮ್ಮೆಯಿಂದ ಮಂಥರೆ ಮಗು ರಾಮನನ್ನು ಎತ್ತಿಕೊಳ್ಳಲು ಹೋದಾಗ, ಮಹಾರಾಣಿ ಕೌಶಲ್ಯ ಅವಳನ್ನು ತಡೆದಳಂತೆ. "ವಕ್ರ ಹೆಂಗಸೇ, ವಿಕಾರವಾದವಳೇ" ಎಂದು ಕೌಸಲ್ಯೆ ಮಂಥರೆಯನ್ನು ಹಿಯ್ಯಾಳಿಸಿದಳಂತೆ. ಆ ಅವಮಾನದ ಸೇಡನ್ನು ಮನಸ್ಸಿನಲ್ಲೇ ಇಟ್ಟುಕೊಂಡ ಮಂಥರೆ ಸಮಯಕ್ಕಾಗಿ ಕಾದು, ರಾಮನನ್ನು ಕಾಡಿಗೆ ಕಳುಹಿಸಿವಂತೆ ಮಾಡಿದ್ದು ನಿಮಗೆಲ್ಲ ತಿಳಿದ ವಿಷಯವೇ. 

ಈ ಪ್ರಸಂಗ ಕನ್ನಡದ ಮಹಾಕವಿ ಕುವೆಂಪುರವರ ರಾಮಾಯಣದಲ್ಲಿ ಬರುತ್ತದೆ. ಮಂಥರೆಯ  'ಜಜ್ಜರಿತ ಮೈತ್ರಿ'ಯ ಪ್ರಸಂಗವನ್ನು ಕುವೆಂಪುರವರು ಸೊಗಸಾಗಿ ವರ್ಣಿಸಿದ್ದಾರೆ.  

ಹಾಗಂತ ನಾವು ಮಂಥರೆ-ಕೈಕಯೀಯರನ್ನು ಕೆಟ್ಟವರು ಅಂತ ಹೀಯಾಳಿಸಿದರೆ, ಅದು ತಪ್ಪು. ಮಂಥರೆ-ಕೈಕಯೀಯರು ಸಂಚು ಮಾಡದೇ ರಾಮನನ್ನು ಅಯೋಧ್ಯೆಯಲ್ಲೇ ಇರಿಸಿಕೊಂಡಿದ್ದಾರೆ, ರಾಮ ರಾಮ ಆಗ್ತಾನೇ ಇರಲಿಲ್ಲ. ರಾಮಾಯಣ ನಡೆಯುತ್ತಲೇ ಇರಲಿಲ್ಲ, ರಾವಣನ ಸಂಹಾರ ಆಗುತ್ತಲೇ ಇರಲಿಲ್ಲ. ಆದುದರಿಂದ ಮಂಥರೆ-ಕೈಕಯೀಯರು ಪ್ರಾತಃಸ್ಮರಣೀಯರು ಎಂದರೆ ತಪ್ಪಲ್ಲ.   

ಉತ್ತರದ ಅಯೋಧ್ಯಯಿಂದ ದಕ್ಷಿಣದ ರಾಮೇಶ್ವರಂವರೆಗೂ ಮೊದಲು ಪಾದಯಾತ್ರೆಯನ್ನು ಮಾಡಿ ಸಮಸ್ತ ಭಾರತವನ್ನು ಒಗ್ಗೂಡಿಸಿದ ಮಹಾನ್ ಶಕ್ತಿ ರಾಮ. ರಾಮನ ಭಾರತ ಯಾತ್ರೆಗೆ ಕಾರಣೀಭೂತಳು ಮಂಥರೆ.

ಸಭಿಕರೆ, ಹರಿಕಥೆ ಅಂದಮೇಲೆ ಒಂದು ಉಪಕಥೆ ಇರಲೇಬೇಕು. ಈಗ ಒಂದು ಉಪಕಥೆ ಪ್ರಜ್ಞಾಳಿಂದ.. 

ಶಿವಧನುಸ್ಸನ್ನು ಮುರಿದವರು ಯಾರು?

--------------------------------------------------------------------------------------------------------

ರಾಮನ ಬಾಲಲೀಲೆಗಳ ಸರಣಿಯನ್ನು ಮುಂದುವರೆಸುತ್ತಾ, ರಾಮನಿಗೆ ಬಾಲ್ಯ ಸ್ನೇಹಿತರು ಯಾರಾದರೂ ಇದ್ದಾರೆ ಎಂಬ ರಹಸ್ಯವನ್ನು ಪರಿಶೀಲಿಸೋಣ. ಕೃಷ್ಣನಿಗೋ ಇಡೀ ನಂದಗೋಕುಲದ ಭರ್ತಿ ಅವನಿಗೆ ಸ್ನೇಹಿತರು. ಮಕರಂದ, ಕುಚೇಲ ಇವರೆಲ್ಲಾ ಕೃಷ್ಣನ ಬಾಲ್ಯ ಸ್ನೇಹಿತರು.  ಜೊತೆಗೆ ರಾಧೆ ಎಂಬ ಗರ್ಲ್ ಫ್ರೆಂಡ್ ಬೇರೆ. ರಾಮನ ಬಾಲ್ಯ ಸ್ನೇಹಿತರು ಯಾರು?  ಇದೂ ಒಂದು ರಾಮಾಯಣದ ರಹಸ್ಯವೇ ಸರಿ. 

ಅವನೇ ಗುಹ, ಬೆಸ್ತರ ರಾಜ. ಗಂಗಾನದಿಯನ್ನು ದಾಟಲು ರಾಮನಿಗೆ ಸಹಾಯ ಮಾಡಿದ ಗುಹ ರಾಮನ ಬಾಲ್ಯ ಸ್ನೇಹಿತ.  ಈ ಮಾತನ್ನು ನಾನು ಹೇಳುತ್ತಿಲ್ಲ, ಸಾಕ್ಷಾತ್ ವಾಲ್ಮೀಕಿಗಳೇ ಹೇಳಿದ್ದಾರೆ. 

ತ್ರ ರಾಜ ಗುಹೋ ನಾಮ 

ರಾಮಸ್ಯಾತ್ಮಸಮ: ಸಖಾ 

ನಿಷಾದ ಜಾತ್ಯೋ ಬಲವಾನ್ 

ಸ್ಥಪತಿಶ್ಚೇತಿ ವಿಶ್ರುತಃ 

ರಾಮಸ್ಯಾತ್ಮಸಮ: ಸಖಾ-----------ಎಂದರೆ ರಾಮನ ಬಾಲ್ಯ ಸ್ನೇಹಿತ ಗುಹ ಎಂಬುದಾಗಿ ವಾಲ್ಮೀಕಿಗಳೇ ಹೇಳಿದ್ದಾರೆ. 

ಗಂಗಾ ನದಿಯನ್ನು ದಾಟಿಸಿದ ಗುಹನಿಗೆ ಎಷ್ಟು ದಕ್ಷಿಣೆಯನ್ನು ಕೊಡಬೇಕೆಂದು ರಾಮ ಕೇಳಿದಾಗ, ಗುಹ ಹೇಳಿದ್ದು ಒಂದೇ ಮಾತು.  ಗಂಗಾನದಿಯನ್ನು ನಾನು ನಿನಗೆ ದಾಟಿಸಿದ್ದೇನೆ, ಜೀವನವೆಂಬ ಭವಸಾಗರವನ್ನು, ರಾಮ ನನ್ನನ್ನು ನೀನು ದಾಟಿಸಬೇಕು ಎಂದು ಕೇಳಿಕೊಂಡಾಗ, ಬೆಸ್ತನಾದರೂ ಗುಹ ಎಷ್ಟು ಜ್ಞಾನಿಯಾಗಿದ್ದನೆಂಬುದು ನಮಗೆ ತಿಳಿಯುತ್ತದೆ. 

ಭವ ಸಾಗರವನ್ನು ದಾಟಿಸುವ ನಮ್ಮನ್ನು ರಕ್ಷಿಸಬಲ್ಲ ಏಕೈಕ ದೈವ ಶ್ರೀ ರಾಮ. ಅಂತಹ ಶ್ರೀ ರಾಮನನ್ನು ಮೈಸೂರು ವಾಸುದೇವಾಚಾರ್ಯರು ಹೇಗೆ ಪ್ರಾರ್ಥಿಸಿದ್ದಾರೆ ಎಂಬುದನ್ನು ಈಗ ಕೇಳೋಣ. 

ಬ್ರೋಚೇವಾರೆ ವರೂರ (ಪೂರ್ತಿ ಹಾಡು)

-------------------------------------------------------------------------------------------------------

ಗಂಗಾನದಿಯನ್ನು ದಾಟಿದ ಶ್ರೀರಾಮ ಮೊದಲು ಪ್ರವೇಶಿಸಿದ್ದು ಚಿತ್ರಕೂಟವೆಂಬ ಅರಣ್ಯವನ್ನು. ರಾಮ ಚಿತ್ರಕೂಟವನ್ನು ಪ್ರವೇಶಿಸುತ್ತಾಲೇ ಚಿತ್ರಕೂಟದ ದೇವಿಯನ್ನು ಶ್ರೀ ರಾಮ ಏನೆಂದು ಬೇಡಿಕೊಂಡನು ಎಂಬುದು ರಾಮಾಯಣದ ಮತ್ತೊಂದು ರಹಸ್ಯ. 

ಚಿತ್ರಕೂಟದ ಅರಣ್ಯವನ್ನು ಪ್ರವೇಶಿಸಿದ ರಾಮನಿಗೆ ಚಿತ್ರಕೂಟದ ವನದೇವಿ ನಮಿಸುತ್ತಾ, ರಾಮಾ, ನೀನು ಸೀತಾ ಲಕ್ಷ್ಮಣ ಸಮೇತ ನನ್ನ ಚಿತ್ರಕೂಟವನ್ನು ಪ್ರವೇಶಿಸಿದೀಯ, ಸುಸ್ವಾಗತ. ನಿನ್ನ ಸೇವೆಯಲ್ಲಿ ನಾನು ಏನು ಮಾಡಬಹುದು ಎಂದು ಕೇಳುತ್ತಾಳೆ. ಶ್ರೀ ರಾಮ 'ಚಿತ್ರಕೂಟದ ದೇವಿ, ನಿನಗೆ ವಂದನೆ.  ನಿನ್ನ ಅರಣ್ಯಕ್ಕೆ ನಾನು ನಡೆದು ಬಂದ ದಾರಿಯಲ್ಲಿ ಇರುವ ಕಲ್ಲು ಮುಳ್ಳುಗಳನೆಲ್ಲಾ ಇಲ್ಲದಂತೆ ಮಾಡು' ಎಂದು ಪ್ರಾರ್ಥಿಸುತ್ತಾನೆ.  ಆಶ್ಚರ್ಯಚಕಿತಳಾದ ವನದೇವತೆ, 'ರಾಮ, ನೀನು ಆ ದಾರಿಯನ್ನು ದಾಟಿ ಬಂದಾಯಿತಲ್ಲಾ, ಈಗೇಕೆ ಆ ದಾರಿಯಲ್ಲಿ ಕಲ್ಲು ಮುಳ್ಳುಗಳು ಇಲ್ಲದಂತೆ ಮಾಡಬೇಕು?' ಎಂದು ಕೇಳುತ್ತಾಳೆ. ರಾಮ ಉತ್ತರಿಸುತ್ತಾ 'ನಾನು ಬಂದಾಯಿತು, ಆದರೆ ನನ್ನ ತಮ್ಮ ಭರತ ನನ್ನನ್ನು ಹುಡುಕುತ್ತಾ ಇಲ್ಲಿಗೆ ಬರುತ್ತಾನೆ. ಅವನಿಗೆ ಕಲ್ಲು, ಮುಳ್ಳುಗಳು ಚುಚ್ಚದೆ ಇರಲಿ' ಎಂದು ಉತ್ತರಿಸುತ್ತಾನೆ. ಹಾಗೆ ಆಗಲಿ ಎಂದು ಅಭಯವನಿತ್ತ ವನದೇವತೆ ರಾಮನನ್ನು ಪ್ರಶ್ನಿಸುತ್ತಲೇ.... 'ರಾಮ, ನಿನ್ನ ತಮ್ಮ ಭರತ ಸೂರ್ಯ ವಂಶಿ. ವಜ್ರದಂತೆ ಅವನ ಶರೀರ ಭಾರಿ ಗಟ್ಟಿ. ನನ್ನ ಅರಣ್ಯದ ಕಲ್ಲು ಮುಳ್ಳುಗಳಿಗೆ ಅವನು ಅಂಜುವನೆ?' ಎಂದು ಕೇಳುತ್ತಾಳೆ. ರಾಮ ಉತ್ತರಿಸುತ್ತಾ....'ವನದೇವಿ, ನೀನು ಹೇಳುತ್ತಿರುವುದು ನಿಜ.  ವಜ್ರಕಾಯದ ಪರಾಕ್ರಮಿಯಾದ ನನ್ನ ತಮ್ಮ ಭರತನಿಗೆ ನಿನ್ನ ಅರಣ್ಯದ ಕಲ್ಲು ಮುಳ್ಳುಗಳು ಏನೂ ಮಾಡವು.  ಆದರೆ ಮುಳ್ಳುಗಳು ನನ್ನ ತಮ್ಮ ಭರತನ ಕಾಲಿಗೆ ಚುಚ್ಚಿದಾಗ, ನನ್ನ ಅಣ್ಣನಾದ ರಾಮನಿಗೆ ಈ ಮುಳ್ಳುಗಳು ಚುಚ್ಚಿದಾಗ ಅವನಿಗೆ ಎಷ್ಟು ನೋವಾಗಿತ್ತೋ' ಎಂದು ಯೋಚಿಸಿ ಬಹಳ ನೊಂದುಕೊಳ್ಳುತ್ತಾನೆ. ಅದಕ್ಕಾಗಿ ವನದೇವಿ ನಿನಗೆ ಈ ಪ್ರಾರ್ಥನೆ ಎಂದು ರಾಮ ವನದೇವಿಗೆ ತಿಳಿಸುತ್ತಾನೆ. 

ಈ ಘಟನೆಯಿಂದ ರಾಮನ ಭ್ರಾತೃಪ್ರೇಮ ಭರತನ ಮೇಲೆ ಎಷ್ಟಿತ್ತೆಂಬುದು ತಿಳಿಯುತ್ತದೆ. 

-------------------------------------------------------------------------------------------------------------

ಅಣ್ಣ ಶ್ರೀ ರಾಮನನ್ನು ಹುಡುಕುತ್ತಾ ಭರತ ಚಿತ್ರಕೂಟಕ್ಕೆ ಬರುತ್ತಾನೆ.  ದೂರದಿಂದಲೇ ಭರತ ಬರುತ್ತಿರುವುದನ್ನು ನೋಡಿ ಲಕ್ಷ್ಮಣನಿಗೆ ಅನುಮಾನದ ಭಾವವು ಮತ್ತು ಕ್ರೋಧವು ಬರುತ್ತದೆ. ಲಕ್ಷ್ಮಣನನಿಗೆ ತಿಳಿಹೇಳಿದ ರಾಮ, ಭರತನನ್ನು ಸ್ವಾಗತಿಸುತ್ತಾ ಅವನನ್ನು ಆಲಿಂಗಿಸಿಕೊಳ್ಳುತ್ತಾನೆ. ಮಾತೆಯಾದ ಕೈಕಯೀಗೆ ಮೊದಲು ವಂದಿಸಿದ ರಾಮ ಕೌಸಲ್ಯೆ ಸುಮಿತ್ರೆಯರಿಗೂ ನಮಿಸುತ್ತಾನೆ. 

ತಂದೆ ದಶರಥನ ಮರಣದ ಸುದ್ದಿಯನ್ನು ಕೇಳಿ ತತ್ತರಿಸಿಹೋದ ಶ್ರೀ ರಾಮ ಬಹಳ ದುಃಖವನ್ನು ಅನುಭವಿಸುತ್ತಾನೆ. ಎಚ್ಚರಗೊಂಡ ಶ್ರೀ ರಾಮ  ಭರತನಿಗೆ ಆಡಳಿತ ನೀತಿಯ ಉಪದೇಶವನ್ನು ಮಾಡುತ್ತಾನೆ. ಭರತನನ್ನು ಪ್ರಶ್ನಿಸುತ್ತಾ 

ಗುರು ಹಿರಿಯರನ್ನು, ಮಹಿಳೆಯರನ್ನು ಗೌರವದಿಂದ ಕಾಣುತ್ತಿರುವೆ ತಾನೇ?

ತಾಯಂದಿರ, ಮಕ್ಕಳ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವೆ ತಾನೇ?

ಯೋಗ್ಯರನ್ನು ಮಂತ್ರಿ ಮಾಡಿದ್ದೀಯಾ ತಾನೇ?

ಗಹನವಾದ ಸಮಸ್ಯೆಗಳನ್ನು ಮಂತ್ರಿಗಳೊಂದಿಗೆ ಚರ್ಚಿಸುತ್ತೀಯಾ ತಾನೇ?

ಮಹತ್ತರವಾದ ಯೋಜನೆಗಳಿಗೆ ತಡಮಾಡುತ್ತಿಲ್ಲ ತಾನೇ?

ಗೌಪ್ಯಾಯತೆಯನ್ನು ಕಾಪಾಡಿಕೊಳ್ಳುತ್ತಿದ್ದೀಯ ತಾನೇ?

ದಕ್ಷರು ನಿನ್ನ ಸೇನಾಧಿಪತಿಗಳಾಗಿದ್ದರೆ ತಾನೇ?

ಸೈನಿಕರಿಗೆ ಉಚಿತ ವೇತನ ನೀಡುತ್ತಿದ್ದೀಯ ತಾನೇ?

ಆದಾಯ ಹೆಚ್ಚಿದ್ದು, ಖರ್ಚು ಕಮ್ಮಿ ಇದೆ ತಾನೇ?

ಹೀಗೆ ಹಲವು ಪ್ರಶ್ನೆಗಳಿಂದ ಭರತನಿಗೆ ಆಡಳಿತ ನೀತಿಯನ್ನು ಶ್ರೀ ರಾಮ ಭೋದಿಸುತ್ತಾನೆ. ವಾಲ್ಮೀಕಿ ರಾಮಾಯಣದ ಆಡಳಿತ ನೀತಿಯೇ ಭಾರತದ ಸಂವಿಧಾನವನ್ನು ರಚಿಸಿದ ಡಾ. ಅಂಬೇಡ್ಕರ್ ಅವರಿಗೆ ಸ್ಪೂರ್ತಿ. ಹಾಗಾಗೇ ಅಂಬೇಡ್ಕರ್ ಅವರು ಭಾರತ ಸಂವಿಧಾನದ ಪುಟಗಳಲ್ಲಿ ರಾಮಾಯಣದ ಚಿತ್ರವನ್ನು ಅಳವಡಿಸಿದ್ದಾರೆ. ರಾಮಾಯಣದ ರಹಸ್ಯಗಳಲ್ಲಿ ಇದೂ ಒಂದು. ರಾಮ, ಲಕ್ಷ್ಮಣ, ಸೀತೆಯರು ಅಯೋಧ್ಯೆಗೆ ಮರಳುತ್ತಿರುವ ಚಿತ್ರ ಅಂಬೇಡ್ಕರ್ ರಚಿಸಿದ ಭಾರತ ಸಂವಿಧಾನದ ಒಂದು ಭಾಗವಾಗಿ ಇಂದಿಗೂ ರಾರಾಜಿಸುತ್ತಿದೆ. 

-------------------------------------------------------------------------------------------------------------

ರಾಮೋ ವಿಗ್ರಹವಾನ್ ಧರ್ಮ:

ಇಂದೊಂದು ರಾಮಾಯಣದ ಮೇರು ವಾಕ್ಯ. 'ರಾಮ ಧರ್ಮದ ಅಂದರೆ ಸನ್ನಡತೆಯ ಮೂರ್ತಿ ರೂಪ, rama is the very embodiment of dharma'  ಈ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು ಎಂಬುದೇ ಒಂದು ದೊಡ್ಡ ರಹಸ್ಯ. 

ಶ್ರೋತೃಗಳೇ ನಿಮಗೆ ಆಶ್ಚರ್ಯವಾಗ ಬಹುದು. ಈ ಮಾತನ್ನು ಮಾರೀಚ ರಾವಣನಿಗೆ ಹೇಳಿದ್ದು. 

ರಾಮೋ ವಿಗ್ರಹವಾನ್ ಧರ್ಮ:

ಸಾಧುಹು ಸತ್ಯ ಪರಾಕ್ರಮಃ 

ರಾಜ ಸರ್ವಸ್ಯ ಲೋಕಸ್ಯ 

ದೇವಾನಿವ ವಾಸವಃ 

ಸೀತೆಯ ಅಪಹರಣದ ಸಂಚು ಮಾಡಿದ ರಾವಣ, ತನ್ನ ಮಾವ ಮಾರೀಚನ ಸಹಾಯಕ್ಕಾಗಿ ಆಗ್ರಹಿಸುತ್ತಾನೆ. ಸೀತೆಯ ಮುಂದೆ ಚಿನ್ನದ ಮಾಯಾಮೃಗವಾಗಿ ಕಾಣಿಸಿಕೊಳ್ಳುವಂತೆ ಆದೇಶಿಸುತ್ತಾನೆ. 

ವಿಶ್ವಾಮಿತ್ರ  ಯಾಗ ಸಂರಕ್ಷಣೆಯ ಸಮಯದಲ್ಲಿ, ರಾಮನ ಬಾಣದ ಹೊಡೆತಕ್ಕೆ ತತ್ತರಿಸಿ  ನೂರು ಯೋಜನ ಹಾರಿಬಿದ್ದ ಮಾರೀಚ ಈಗ ಸನ್ಯಾಸಿಯಾಗಿ ದಂಡಕಾರಣ್ಯದಲ್ಲಿ ತಪಸ್ಸನ್ನು ಮಾಡುತ್ತಿರುತ್ತಾನೆ. ದುಷ್ಟ ರಾವಣನ ಆಗ್ರಹವನ್ನು ಕೇಳಿ, ಮಾರೀಚ ರಾವಣನ ನ್ನು ಎಚ್ಚರಿಸುತ್ತಾ...... 'ರಾಮ ಧರ್ಮದ ಮೂರ್ತರೂಪ. ಅವನು ಮಹಾ ಪರಾಕ್ರಮಿ. ಅವನೊಂದಿಗಿನ ವೈರದಿಂದ ನೀನು ನಾಶವಾಗಿ ಹೋಗುತ್ತೀಯಾ, ಜೋಕೆ. ಸೀತೆಯನ್ನು ಅಪಹರಿಸುವ ಸಂಚು ಬೇಡ' ಎಂದು ಉಪದೇಶಿಸುತ್ತಾನೆ. ಕೋಪಗೊಂಡ ರಾವಣ 'ನನ್ನೊಡನೆ ಸಹಕರಿಸು, ಇಲ್ಲವೇ ಸಾಯಲು ಸಿದ್ಧನಾಗು' ಎಂದು ಮಾರೀಚನನ್ನು ಗದರಿಸುತ್ತಾನೆ. ಪರಿಸ್ಥಿತಿಯನ್ನು ಅರಿತುಕೊಂಡ ಮಾರೀಚ 'ರಾವಣ......  ನಿನ್ನೊಡನೆ ಸಹಕರಿಸದಿದ್ದರೆ ನಿನ್ನ ಕೈಯಿಂದ ಸಾಯುತ್ತೇನೆ.  ನಿನ್ನೊಡನೆ ಸಹಕರಿಸಿದರೆ ಸಾಕ್ಷಾತ್ ರಾಮನ ಕೈಯಲ್ಲಿ ಹತ್ಯೆಗೊಂಡು ಸ್ವರ್ಗವನ್ನು ಸೇರುತ್ತೇನೆ. ರಾಮನ ಕೈಯಲ್ಲಿ ಸಾಯುವುದೇ ಮೇಲೆ' ಎಂದು ರಾವಣನ ಸಂಚಿಗೆ ಒಪ್ಪಿಕೊಳ್ಳುತ್ತಾನೆ. 

-----------------------------------------------------------------------------------------------------------

ಸೀತೆಯನ್ನು ಕಳೆದುಕೊಂಡ ರಾಮ ಲಕ್ಷ್ಮಣರು, ಸೀತೆಯನ್ನು ಹುಡುಕುತ್ತಾ ಹನುಮನಂತನ ಭೇಟಿಯಾಗುತ್ತಾರೆ. ಹನುಮಂತನ ಮೂಲಕ ಸುಗ್ರೀವನೊಡನೆ ಸ್ನೇಹವಾಗುತ್ತದೆ. 

ಸೀತೆಯನ್ನು ಹುಡುಕಲು ಜಾಂಬವಂತರ  ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ ಸುಗ್ರೀವ, ಆ ತಂಡವನ್ನು ದಕ್ಷಿಣ ದಿಕ್ಕಿಗೆ ಕಳುಹಿಸುತ್ತಾನೆ. ಆ ತಂಡದಲ್ಲಿದ್ದ ನಮ್ಮ ಆಂಜನೇಯನ ಮೇಲೆ ಸಂಪೂರ್ಣ ಭರವಸೆ ಇದ್ದ ಶ್ರೀ ರಾಮ, ಅವನ ಕೈಗೆ ತನ್ನ ಮುದ್ರೆಯುಂಗುರವನ್ನು ನೀಡಿ ಸೀತೆಗೆ ಕೊಡುವಂತೆ ಆದೇಶಿಸುತ್ತಾನೆ. 

ಜಾಂಬವಂತರ ತಂಡ ದಕ್ಷಿಣದ ತುತ್ತುದಿಯ ಸಮುದ್ರದ ದಡಕ್ಕೆ ಬಂದು ನಿಲ್ಲುತ್ತದೆ. ಲಂಕಾ ಪಟ್ಟಣವನ್ನು ತಲುಪಲು ನೂರು ಯೋಜನಾ ಸಮುದ್ರವನ್ನು ಹಾರಬೇಕಾದಾಗ, ದಿಕ್ಕು ತೋಚದ ವಾನರ ತಂಡ ಪೆಚ್ಚಾಗಿ ಕುಳಿತುಕೊಳ್ಳುತ್ತದೆ. ಹನುಮಂತನು ಒಂದು ಮೂಲೆಯಲ್ಲಿ ಕುಳಿತುಕೊಂಡಿರುತ್ತಾನೆ. 

ಹನುಮಂತನ ಅಘಾದ ಶಕ್ತಿಯ ಅರಿವಿದ್ದ ಜಾಂಬವಂತರು, ಹನುಮಂತನೊಡನೆ ಮಾತನಾಡುತ್ತ...... 'ಹನುಮಂತ ನೀನು ವಾಯುಪುತ್ರ.  ಬಾಲ್ಯದಲ್ಲಿ ಸೂರ್ಯನನ್ನು ಹಿಡಿಯಲು ಆಕಾಶಕ್ಕೆ ಹಾರಿದ ಶಕ್ತಿವಂತ. ನೂರು ಯೋಜನಾ ಸಮುದ್ರವನ್ನು ಹಾರಿ ಲಂಕಾ ಪಟ್ಟಣವನ್ನು ತಲುಪುವುದು ನಿನಗೆ ಮಾತ್ರ ಸಾಧ್ಯ. ಎದ್ದೇಳು' ಎಂದು ಹುರಿದುಂಬಿಸಲು, ಸಮೀಪವ ಇದ್ದ  ಪರ್ವತವನ್ನು ಹತ್ತಿ ನಿಂತ ಹನುಮಂತ ಮುಗಿಲ್ಲೆತ್ತರಕ್ಕೆ ಬೆಳೆದು ನಿಲ್ಲುತ್ತಾನೆ. ಹನುಮಂತನ ವಿಶ್ವರೂಪವನ್ನು ನೋಡಿದ ವಾನರ ಸೇನೆ ಬೆರಗಾಗಿ ಹೋಗುತ್ತದೆ. ಮುಗಿಲ ಎತ್ತರದ ಹನುಮಂತ ಒಮ್ಮೆ ಘರ್ಜಿಸಿದಾಗ ಏನಾಯ್ತು?

ಘಟಿಕಾ ಚಲದಿ ನಿಂತ  (ಪೂರ್ತಿ ಹಾಡು)


-----------------------------------------------------------------------------------------------------------------------------

ಹನುಮಂತನ ಸಮುದ್ರ ಲಂಘನದ ಕಥೆ, (ಪ್ರಜ್ಞಳಿಂದ)

-----------------------------------------------------------------------------------------------------------------------------

ತುಳಸಿ ದಸರಾ ಹನುಮಾನ್ ಚಾಲೀಸಾದ ಆಯ್ದ ಅನುಪಲ್ಲವಿಗಳ ಗಾಯನ ಮತ್ತು  ಕಥೆ ಗೌರಿಯಿಂದ 

----------------------------------------------------------------------------------------------------------------------------

ರಾವಣನ ಮೇಲೆ ಯುದ್ಧ ಮಾಡಲು ಶ್ರೀ ರಾಮ ಸೇತುವೆಯನ್ನು ನಿರ್ಮಿಸಿ ಲಂಕಾ ಪಟ್ಟಣದ ಗಾಡಿಯನ್ನು ತಲುಪುತ್ತಾನೆ. ಆಗ ಶ್ರೀ ರಾಮನಿಗೆ ಯುದ್ಧದ ವಿಜಯಕ್ಕಾಗಿ ಯಾಗವೊಂದನ್ನು ಮಾಡುವ ಆಲೋಚನೆ ಬರುತ್ತದೆ.  ಆದರೆ ಅಂತಹ ಮಹಾಯಾಗವನ್ನು ನಡೆಸಲು ಸಮರ್ಥನಾದ ಪುರೋಹಿತನೊಬ್ಬ ಬೇಕಾಗಿರುತ್ತದೆ. ಆ ಮಹಾಯಾಗವನ್ನು ಶ್ರೀ ರಾಮ ಮಾಡಲು ಪುರೋಹಿತನಾಗಿ ಬಂದ ಆ ಮಹಾನ್ ವ್ಯಕ್ತಿ ಯಾರು ಎಂಬುದೇ ರಾಮಾಯಣದ ಮುಂದಿನ ರಹಸ್ಯ.  

ಮಹಾಯಾಗದ ಆಲೋಚನೆಯನ್ನು ಹಿರಿಯರಾದ ಜಾಂಬವಂತರಿಗೆ ತಿಳಿಸಿದ ಶ್ರೀ ರಾಮ, ಯಾಗವನ್ನು ನಡೆಸಿಕೊಡುವ ಶೈವರು, ವೈಷ್ಣವರೂ ಆದ ಪುರೋಹಿತರೊಬ್ಬರು ಇಲ್ಲಿ ಯಾರಿದ್ದಾರೆ ಎಂದು ಸಮಾಲೋಚಿಸುತ್ತಾನೆ. ಯೋಚಿಸಿದ ಜಾಂಬವಂತರು 'ಈ ಪ್ರದೇಶದಲ್ಲಿ ಅಂತಹ ವಿಜಯದ ಯಾಗವನ್ನು ನಡೆಸಿಕೊಡಬಲ್ಲ ಒಬ್ಬನೇ ಪುರೋಹಿತನಿದ್ದಾನೆ, ಅವನೇ ರಾವಣ. ಆದರೆ ತನ್ನ ಮೇಲಿನ ವಿಜಯದ ಯಾಗವನ್ನು ರಾವಣ ನಡೆಸಿಕೊಟ್ಟನೆಯೇ' ಎಂದು ಅನುಮಾನವನ್ನು ವ್ಯಕ್ತಪಡಿಸುತ್ತಾರೆ. ಎಲ್ಲವನ್ನು ತಿಳಿದ ರಾಮ ಜಾಂಬವಂತರಿಗೆ ರಾವಣನನ್ನು ಹೋಗಿ ಆಹ್ವಾನಿಸುವಂತೆ ಕೇಳಿಕೊಳ್ಳುತ್ತಾರೆ. 

ಜಾಂಬವಂತರ ಮುಖವನ್ನು ನೋಡೇ ರಾವಣನಿಗೆ ಎಲ್ಲಾ ಅರ್ಥವಾಗಿಹೋಗಿರುತ್ತದೆ. ಅಪ್ಪಟ ಬ್ರಾಹ್ಮಣನು ಮತ್ತು ಪುರೋಹಿತನು ಆದ ರಾವಣ 'ಪೌರೋಹಿತ್ಯಕ್ಕೆ ಆಹ್ವಾನ ಬಂದಲ್ಲಿ ನಿರಾಕರಿಸುವ ಪ್ರಶ್ನೆಯೇ ಇಲ್ಲ, ಬರುತ್ತೇನೆ' ಎಂದು ಒಪ್ಪಿಕೊಳ್ಳುತ್ತಾನೆ. 

ರಾಮನ ಯುದ್ಧವಿಜಯದ ಯಾಗದ ಪೌರೋಹಿತ್ಯವನ್ನು ವಹಿಸಿಕೊಂಡ ಮಹಾಬ್ರಾಹ್ಮಣ ರಾವಣನ್ನು ಕುರಿತಾದ ಲಾವಣಿಯೊಂದು ಹಿಂದಿ  ಬಾಷೆಯಲ್ಲಿದೆ. 

ಬನಾ ಪುರೋಹಿತ್ ರಾಮಚಂದ್ರಕಾ 
ಜಯ್ ಕಾ ವರ್ ವೊ ದೇ ಆಯಾ 
ಲಂಕಾ ವಿಜಯ್ ಕೆ ಹೇತು ರಾಮ ನೆ 
ಹವನ್  ಯಜ್ಞ ಹೈ ಕರವಾಯ 

ರಾಮಚಂದ್ರನ ಯುದ್ಧವಿಜಯದ ಯಜ್ಞಕ್ಕೆ ರಾವಣ ಪುರೋಹಿತನಾದ. 

ಜಾಂಬವಂತ ಸೆ ಬೋಲೇ ಭಗವನ್ 
ಕೋಯೀ ಪುರೋಹಿತ್ ಲೇ ಆವೋ 
ಹೊ ವಹ್ ಶೈವ್ ಔರ್ ವೈಷ್ಣವ್ 
ಐಸಾ ಪಂಡಿತ್ ಲೇ ಆವೋ 

ಜಾಂಬವಂತರಿಗೆ ರಾಮ ಹೇಳುತ್ತಾನೆ. 'ಯಜ್ಞಕ್ಕಾಗಿ ಸೂಕ್ತ ಪುರೋಹಿತನನ್ನು ಕರೆದುಕೊಂಡು ಬಾ. ಆ ಪುರೋಹಿತ ಶೈವನು ಆಗಿರಬೇಕು ಮತ್ತು ವೈಷ್ಣವನೂ ಆಗಿರಬೇಕು. ಜಾಂಬವಂತರು ಯೋಚಿಸಿ ಹೇಳುತ್ತಾರೆ.  ಆ ಪ್ರದೇಶದಲ್ಲಿ ಅಂತಹ ಪುರೋಹಿತನಾಗಿ ರಾವಣ ಮಾತ್ರ ಇದ್ದಾನೆ. ರಾವಣನನ್ನೇ ಕರೆದು ತರುತ್ತೇನೆ. 

ಜಾಂಬವಂತನ ಆಹ್ವಾನವನ್ನು ಒಪ್ಪಿದ ರಾವಣ 'ಕಾರ್ಯದ ಯಜಮಾನ ಕಷ್ಟದಲ್ಲಿದ್ದಾಗ ಅವನಿಗೆ ಬೇಕಾದ ಸಕಲ ಅನುಕೂಲಗಳನ್ನೂ ಮಾಡಿಕೊಡುವುದು ಪುರೋಹಿತನ ಕರ್ತವ್ಯ' ಎನ್ನುತ್ತಾನೆ. 

ಇಂದ್ರಜೀತ್ ಸೆ ಬೋಲಾ ರಾವಣ್ 
ಮಾ ಸೀತಾ ಕೋ ಪಹುಂಚವೋ 
ಬಿನ ಪತ್ನಿ ಕೆ ಯಜ್ಞ ನ ಹೊವೆ 
ಪೂರ್ಣ ಯಜ್ಞ ಹಾಯ್ ಕರವಾವೊ 

ಪತ್ನಿಯಿಲ್ಲದ ಯಾವ ಯಜ್ಞವೂ  ಫಲಿಸದು ಎಂದ ರಾವಣ, ತನ್ನ ಮಗ ಇಂದ್ರಜಿತನಿಗೆ ಸೀತೆಯನ್ನು ಯಜ್ಞ ಮಂಟಪಕ್ಕೆ ಕರೆತರುವಂತೆ ಆಜ್ಞಾಪಿಸುತ್ತಾನೆ. 


ಮಾ ಸೀತಾ ಕೆ ಸಾತ್ ರಾಮ ಕೋ 
ಯಜ್ಞ ಪೂರ್ಣ ಹೈ ಕರವಾಯ 

ಸೀತಾ ರಾಮ ದಂಪತಿಯನ್ನು ಕೂರಿಸಿ ಯಜ್ಞವನ್ನು ಸಾಂಗವಾಗಿ ನೆರವೇರಿಸಿಕೊಡುತ್ತಾನೆ ಪುರೋಹಿತ ರಾವಣ. 

ರಾಮಜಿ ಬೋಲೇ ರಾವಣ್ ಸೆ 
ದಕ್ಷಿಣಾ ಅಪನೀ ಬತಲವೋ 
ತ್ರಿಲೋಕ್ ಕಿ ಸಂಪದ ಮೇರೇ 
ಕ್ಯಾ ಮಾಂಗೂ ಭಗವನ್ ತುಂಸೇ 

ಧನ್ಯನಾದ ರಾಮ ರಾವಣನನ್ನು ತಮ್ಮ ದಕ್ಷಿಣೆ ಏನೆಂದು ಕೇಳುತ್ತಾನೆ. ತ್ರಿಲೋಕದ ಸಮಸ್ತ ಐಶ್ವರಿಯವೂ ತನ್ನದಾಗಿರುವಾಗ, ಭಗವಂತನಿಂದ ಏನು ದಕ್ಷಿಣೆಯನ್ನು ಬೇಡಲಿ ಎಂದು ರಾವಣ ಹೇಳುತ್ತಾನೆ.   

ಅಂತ ಸಮಯ್ ಮೇರೇ ಸಾಮನೆ ಹೊ ತುಮ 
ಯಹೀ ದಕ್ಷಿಣ ಹೊ ಮೇರಿ 

ಚೆನ್ನಾಗಿ ಯೋಚಿಸಿದ ರಾವಣ, ತನ್ನ ಅಂತ್ಯಕಾಲದಲ್ಲಿ ಹೇ ರಾಮ, ನಿನ್ನ ದರ್ಶನ ನನಗೆ ಕರುಣಿಸು ಎನ್ನುತ್ತಾನೆ. 

(ಇಲ್ಲಿರುವಷ್ಟು ಪದ್ಯಗಳನ್ನು ಹಾಡಿಕೊಂಡು ಅರ್ಥ ಹೇಳುತ್ತಹೋದರೆ ಸಾಕು. ಪೂರ್ತಿ ಹಾಡು ಬೇಡ) 

---------------------------------------------------------------------------------------------------------------------------

ರಾಮ ರಾವಣರ ಮಧ್ಯೆ ಘೋರ ಯುದ್ಧವಾಗುತ್ತದೆ. 

ವೀರಾವೇಶದಿಂದ ಹೋರಾಡಿದ ಲಕ್ಷ್ಮಣ ರಾವಣ ಪುತ್ರ ಇಂದ್ರಜಿತುವಿನ ಸಂಹಾರ ಮಾಡುತ್ತಾನೆ.  ಪುತ್ರ ಇಂದ್ರಜಿತುವಿನ ಹತ್ಯೆಯಿಂದ ರೋಷಗೊಂಡ ರಾವಣ, ರಾಮನ ಕಪಿ ಸೇನೆಯ ಮೇಲೆ 'ಮೂಲಬಲ'ವೆಂಬ ಎರಡು ಲಕ್ಷ ರಾಕ್ಷಸರ ಪಡೆಯ ಸೈನ್ಯದಿಂದ ದಾಳಿಮಾಡುತ್ತಾನೆ. ರಾವಣನ ಮೂಲಬಲದ ಹೋದತ್ತಕ್ಕೆ ತತ್ತರಿಸಿದ ಕಪಿಸೈನ್ಯ ದಿಕ್ಕಾಪಾಲಾಗಿ ಓಡಲಾರಂಭಿಸುತ್ತದೆ. ಕಪಿಸೈನ್ಯದ ರಕ್ಷಣೆಗಾಗಿ ಪಣತೊಟ್ಟ ಶ್ರೀ ರಾಮ, ರಾವಣ ಮೂಲಬಲದ ಮೇಲೆ ಗಂಧರ್ವಾಸ್ತ್ರವೆಂಬ ಸಮ್ಮೋಹಿನಿ ಅಸ್ತ್ರವನ್ನು ಪ್ರಯೋಗಿಸುತ್ತಾನೆ. ಗಂಧರ್ವಾಸ್ತ್ರದ ಮೋದಿಯ ಫಲವಾಗಿ ಮೂಲಬಲದ ರಾಕ್ಷರಿಗೆ ಮಂಕುಹಿಡಿದಂತಾಗುತ್ತದೆ. ರಾಕ್ಷಸರಿಗೆ  ಎಲ್ಲೆಲ್ಲೂ ಶ್ರೀ ರಾಮನೇ  ಕಾಣುವಂತಾಗುತ್ತದೆ. ಪ್ರತಿಯೊಬ್ಬ ರಾಕ್ಷಸನಿಗೂ ಪಕ್ಕದ ರಾಕ್ಷಸನೇ ರಾಮನಂತೆ ಕಾಣಿಸುತ್ತದೆ. ಅದನ್ನೇ ಪುರಂದರ ದಾಸರು 'ಅವನಿಗೆ ಇವ ರಾಮ, ಇವನಿಗೆ ಅವ ರಾಮ' ಎಂದು ವರ್ಣಿಸಿದ್ದಾರೆ. ಸಂಮೋಹಕ್ಕೆ ಒಳಗಾದ ರಾಕ್ಷಸರು ತಮ್ಮ ತಮ್ಮೊಳಗೆ ಕಾದಾಡಿ ಮಡಿಯುತ್ತಾರೆ. ಹೀಗೆ ರಾವಣನ ಮೂಲಬಲ ಹಾಗೂ ಅವನ ಎರಡು ಲಕ್ಷ ರಾಕ್ಷಸರ ಪದೇ ನಿರ್ನಾಮಗೊಳ್ಳುತ್ತದೆ.  

ಈ ಯುದ್ಧದ ವರ್ಣನೆಯನ್ನು ಪುರಂದರ ದಾಸರು ತಮ್ಮ ದೇವರನಾಮದಲ್ಲಿ ಸೊಗಸಾಗಿ ಮಾಡಿದ್ದಾರೆ. 

ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ (ಪೂರ್ತಿ ಹಾಡು) 

-----------------------------------------------------------------------------------------------------------------------------
ಇಡೀ ರಾಮಾಯಣವನ್ನು ಗದ್ಯ ರೂಪದಲ್ಲಿ ಪ್ರಸ್ತುತಪಡಿಸಿದವರು ತಮಿಳ್ ನಾಡಿನ ಕವಿ ವೇದಾಂತ ದೇಶಿಕರ್ರವರು. ತಮಿಳ್ ನಾಡಿನ ತಿರುವಹಿಂದ್ರಾಪುರಂನ ಕೋದಂಡ ರಾಮನ ಪರಮ ಭಕ್ತರಾದ ವೇದಾಂತ ದೇಶಿಕರ್ ಅವರು ಕೋದಂಡ ರಾಮನ shauryaವನ್ನು ತಮ್ಮ ರಘುವೀರ ಗದ್ಯದಲ್ಲಿ ಪ್ರಸ್ತುತಪಡಿಸಿದ್ದಾರೆ. 

ರಾವಣನ ಸೇನಾಧಿಪತಿ ಪ್ರಹಸ್ತನ ಹತ್ಯೆಯಾನಂತರ ರಾವಣ ತಾನೇ ರಣರಂಗಕ್ಕೆ ಬರುತ್ತಾನೆ. ಲಕ್ಷ್ಮಣನ ಮೇಲೆ ಘೋರ ಯುದ್ಧವನ್ನಾಡಿದ ರಾವಣ, ಅಮೋಘವಾದ ಅಸ್ತ್ರವೊಂದನ್ನು ಪ್ರಯೋಗಿಸಿ ಲಕ್ಷ್ಮಣನನ್ನು ಮೂರ್ಚಿತನನ್ನಾಗಿ ಮಾಡುತ್ತಾನೆ.  ಯುದ್ಧದ ಪಾರಿತೋಷಕವೆಂದು ಲಕ್ಷ್ಮಣನ ಶರೀರವನ್ನು ರಾವಣ ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತಾನೆ.  ಕೈಲಾಸವನ್ನು ಎತ್ತಿ ನಡುಗಿಸಿದ ರಾವಣನಿಗೆ, ಲಕ್ಷ್ಮಣನನ್ನು ಎತ್ತಲು ಆಗುವುದಿಲ್ಲ.  ಎಲ್ಲವನ್ನು ನೋಡುತ್ತಿದ್ದ ಹನುಮಂತ ರಾವಣನನ್ನು ಹಿಮ್ಮೆಟ್ಟಿಸಿ, ಲೀಲಾಜಾಲವಾಗಿ ಲಕ್ಷ್ಮಣನನ್ನು ಎತ್ತಿಕೊಂಡು ಹೋಗಿ ಸುರಕ್ಷಿತ ತಾಣಕ್ಕೆ ಕರೆದೊಯುತ್ತಾನೆ. 

ಹನುಮಂತ ಹಿಂತುರುಗಿ ರಣರಂಗಕ್ಕೆ ಬರುವ ಹೊತ್ತಿಗೆ ರಾಮ ರಾವಣರ ಯುದ್ಧವಾಗುತ್ತಿರುತ್ತದೆ. ರಾವಣ ರಥದ ಮೇಲಿದ್ದರೆ, ಶ್ರೀ ರಾಮ ಭೂಮಿಯ ಮೇಲೆ ನಿಂತಿರುತ್ತಾನೆ. ಮುನ್ನುಗ್ಗಿ ರಾಮನನ್ನು ತನ್ನ ಕುತ್ತಿಗೆಯ ಮೇಲೇರಿಸಿಕೊಂಡ ಹನುಮಂತ, ರಾಮನ ಬಲವನ್ನು ಹೆಚ್ಚಿಸುತ್ತಾನೆ. ವೀರಾವೇಶದಿಂದ ಹೋರಾಡಿದ ರಾಮನ ಬಾಣಗಳಿಗೆ ರಾವಣ ತತ್ತರಿಸಿ ಹೋಗುತ್ತಾನೆ, ನಿರಾಯುಧನಾಗಿ ಹೋಗುತ್ತಾನೆ.  ರಾವಣನ ಅಸಹಾಯಕ ಪರಿಸ್ಥಿತಿಯನ್ನು ಕಂಡ ರಾಮ, 'ರಾವಣ, ನೀನು ಸೋತು ನಿರಾಯುಧನಾಗಿದ್ದೀಯ. ಇಂತಹ ಪರಿಸ್ಥಿತಿಯಲ್ಲಿ ನಾನು ನಿನ್ನ ಹತ್ಯೆ ಮಾಡುವುದಿಲ್ಲ.  ಈಗ ನಿನ್ನ ಮನೆಗೆ ಹೋಗಿ ವಿಶ್ರಾಂತಿ ಪಡೆದುಕೋ. ನಾಳೆ ಮತ್ತೆ ಯುದ್ಧ ಮಾಡುವಿಯಂತೆ' ಎನ್ನುತ್ತಾನೆ. ವೀರ ರಾಮನ ಈ ಔದಾರ್ಯದ ಪ್ರಸಂಗವನ್ನು ರಘುವೀರ ಗದ್ಯದಲ್ಲಿ ವೇದಾಂತ ದೇಶಿಕರು ಹೇಗೆ ವರ್ಣಿಸಿದ್ದಾರೆ ಎಂಬುದನ್ನು ನೋಡೋಣ. 



ರಘುವೀರ ಗದ್ಯ ಗಾಯನ 


----------------------------------------------------------------------------------------------------------------------------

ಇಂದಿನ ರಾಮಾಯಣದ ರಹಸ್ಯಗಳು ಎಂಬ ಹರಿಕಥೆ ರಾಮಾಯಣವನ್ನು ಸ್ವಾರಸ್ಯಕರ ರೀತಿಯಲ್ಲಿ ಪ್ರಸ್ತುತಪಡಿಸುವ ಒಂದು ಹೊಸ ಪ್ರಯತ್ನ.  ನಮ್ಮ ಇಂದಿನ ಹರಿಕಥೆಯನ್ನು ಆಲಿಸಿ ಆಶೀರ್ವದಿಸ ತಮಗೆಲ್ಲಾ ನಮಸ್ಕಾರಗಳು.  ಶ್ರೀ ರಾಮನಿಗೆ ಒಂದು ಮಂಗಳವನ್ನು ಈಗ ಹಾಡೋಣ. 







 







Wednesday, 19 February 2025

Punjab - 1

ಅಂದು ೩೧ ಅಕ್ಟೋಬರ್ ೧೯೮೪, ಬುಧವಾರವಾಗಿತ್ತು. ಬೆಳಗ್ಗೆ ಸುಮಾರು ೯.೨೦ರ ಸಮಯ. ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ತಮ್ಮ ದಿಲ್ಲಿಯ ನಂ. ೧, ಸಫ್ದಾರ್ಜನ್ಗ್ ರಸ್ತೆಯ  ನಿವಾಸದ ಹಿಂಬಾಗಿಲ ತೋಟದ ಕಡೆಯಿಂದ, ತಮ್ಮ ನಂ. ೧, ಅಕ್ಬರ್ ರಸ್ತೆಯ ಕಚೇರಿಯ ಕಡೆಗೆ ಹೊರಟಿದ್ದರು. ಎಂದಿನಂತೆ ತಮ್ಮ ಕಚೇರಿಗೆ ಹೊರಟಿದ್ದ ಶ್ರೀಮತಿ ಗಾಂಧಿಯವರು ಅಂದು ತಮಗೆ ಬಲು ಪ್ರಿಯವಾದ ಕಂದು ಬಣ್ಣದ ಸಂಬಲ್ಪುರಿ ಸೀರೆಯನ್ನುಟ್ಟಿದ್ದರು. ಗುಪ್ತಚರ ಸಂಸ್ಥೆಗಳ ಕಟ್ಟುನಿಟ್ಟಿನ ಸಲಹೆಯಿದ್ದರೂ,  'ಗುಂಡು ನಿರೋಧಕ ಅಂಗಿಯನ್ನು  (ಬುಲೆಟ್ ಪ್ರೂಫ್ ಜಾಕೆಟ್)' ಅಂದು ಪ್ರಧಾನಿಯವರು  ಧರಿಸಿರಲಿಲ್ಲ. ಹೆಗಲ ಮೇಲೊಂದು  ಕೆಂಪು ಚೀಲ ನೇತು ಹಾಕಿಕೊಂಡದ್ದು ಅವರ ಎಂದಿನ ಕಚೇರಿ ಉಡುಪಿನ ಭಾಗವಾಗಿತ್ತು. ಕಪ್ಪು ಬಣ್ಣದ ಬೂಟುಗಳನ್ನು ಧರಿಸಿದ್ದ ಅವರು ನಿಧಾನವಾಗಿ ಮನೆಯ ಹಿಂಬಾಗಿಲಿನಿಂದ ಹೊರ ನಡೆದಿದ್ದರು.  ಶ್ರೀಮತಿ ಗಾಂಧಿ ಅವರ ಹಿಂದೆ ಕೊಡೆಯನ್ನು ಹಿಡಿದಿದ್ದ ಪೊಲೀಸ್ ಪೇದೆ ನಾರಾಯಣ್ ಸಿಂಗ್ ರವರು, ಅಂಗ ರಕ್ಷಕ  ರಾಮೇಶ್ವರ್ ದಯಾಳ್ ರವರು,  ಆಪ್ತ ಸಹಾಯಕ ನಾಥು ರಾಮ್ ರವರು ಮತ್ತು ಅವರ  ಆಪ್ತ ಕಾರ್ಯದರ್ಶಿ ಆರ್. ಕೆ. ಧವನ್ ರವರು ನಡೆದಿದ್ದರು. 

ದಿನದ ಮೊದಲ ಕಾರ್ಯಕ್ರಮವಾಗಿ ಅಂದು ಶ್ರೀಮತಿ ಗಾಂಧಿಯವರು, ಬ್ರಿಟನ್ ನ  ಪೀಟರ್ ಉಸ್ತಿನೋವ್ ಅವರಿಗೆ ಸಂದರ್ಶನವೊಂದನ್ನು ನೀಡಬೇಕಾಗಿತ್ತು. ಅವರ ಅಂದಿನ ಸಂದರ್ಶನ ಐರ್ಲೆಂಡಿನ  ಟಿ.ವಿ.ಯ ಸಾಕ್ಷ್ಯ ಚಿತ್ರವೊಂದರ ಭಾಗವಾಗಿತ್ತು.  

ನಿಧಾನವಾಗಿ ನಡೆಯುತ್ತಾ ಸಾಗಿದ್ದ ಶ್ರೀಮತಿ ಗಾಂಧಿಯವರು, ದಿಲ್ಲಿ ಪೊಲೀಸ್ ನ ಇಬ್ಬರು  ಭದ್ರತಾ ಪಡೆಗಳು ಕಾಯುತ್ತಿದ್ದ ದ್ವಾರವೊಂದನ್ನು ದಾಟುತ್ತಲೇ, ಸಮವಸ್ತ್ರವಲ್ಲದ ಸಾಧಾರಣ ಉಡುಪಿನಲ್ಲಿದ್ದ  ಪೊಲೀಸ್  ಸಬ್ ಇನ್ಸ್ಪೆಕ್ಟರ್ ಬೆಅಂತ್ ಸಿಂಗ್ ತನ್ನ  ಪಿಸ್ತೂಲನ್ನು ಹೊರತೆಗೆದು, ಏಕಾಏಕಿ ಮೂರು ಗುಂಡುಗಳನ್ನು ಅತಿ ಸಮೀಪವಿದ್ದ ಇಂದಿರಾ ಗಾಂಧಿಯವರ ಮೇಲೆ ಹಾರಿಸಿದನು.  ಮೂರೂ  ಗುಂಡುಗಳು ಇಂದಿರಾ ಗಾಂಧಿಯವರ ಹೊಟ್ಟೆಯನ್ನು ಹೊಕ್ಕಿದ್ದವು. ಗುಂಡುಗಳ ಹೊಡೆತಕ್ಕೆ ಇಂದಿರಾ ಗಾಂಧಿಯವರು ತತ್ತರಿಸಿ ನೆಲಕ್ಕುರುಳಿದರು. ನೆಲಕ್ಕುರುಳಿದ ಇಂದಿರಾ ಗಾಂಧಿಯವರ ಜಾಳು ಶರೀರದ  ಮೇಲೆ,  ದ್ವಾರದ ಇನ್ನೊಂದು ಪಕ್ಕದಲ್ಲಿ ಸಮವಸ್ತ್ರದಲ್ಲಿದ್ದ  ಪೊಲೀಸ್ ಪೇದೆ ಸತ್ವಂತ್ ಸಿಂಗ್ ತನ್ನ ೯ ಮೀ.ಮೀ. ಕಾರ್ಭಯ್ನ್ ಬಂದೂಕದಿಂದ  ಮೂವತ್ತು ಗುಂಡುಗಳ ಮಳೆಗರೆದನು.   ಕ್ಷಣಾರ್ಧದಲ್ಲಿ ಆಗಬಾರಾದ್ದು ಆಗಿಹೋಗಿತ್ತು. ಕೂಡಲೇ ಹಂತಕರಾದ ಬೆಅಂತ್ ಸಿಂಗ್ ಮತ್ತು ಸತ್ವಂತ್  ಸಿಂಗ್ ಇಬ್ಬರೂ ತಮ್ಮ ಆಯುಧಗಳನ್ನು ಕೆಳಗೆಸದು, ತಮ್ಮ ಕೈಗಳನ್ನು ಮೇಲೆತ್ತಿದರು. 'ನಾವೇನು ಮಾಡಬೇಕಿತ್ತೋ, ಅದನ್ನು ಮಾಡಿದ್ದೇವೆ. ನೀವೇನು ಮಾಡಬೇಕೋ ಅದನ್ನು ನೀವು ಮಾಡಿರಿ' ಎಂದು ಸಂಚಿನ ರೂವಾರಿ ಬೆಅಂತ್ ಸಿಂಗ್ ಹೇಳಿದ್ದು, ಅಲ್ಲಿದ್ದ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು. 

ಕೂಡಲೇ ಕಾರ್ಯೋನ್ಮುಖರಾದ ಗಡಿ ಭದ್ರತಾ ಪಡೆಯ (ಬಿ.ಎಸ್.ಎಫ್.) ಅಧಿಕಾರಿಗಳಾದ ತರ್ಸೆನ್ ಸಿಂಗ್ ಜಮ್ವಾಲ್ ಮತ್ತು ರಾಮ್ ಶರಣ್ ಅವರುಗಳು ಹಂತಕರಿಬ್ಬರನ್ನೂ ಹಿಡಿದು ತಮ್ಮ ರೂಮಿನತ್ತ ಕರೆದೊಯ್ದರು. ಹಂತಕ ಬೆಅಂತ್ ಸಿಂಗ್ ಪ್ರತಿರೋಧ ಒಡ್ಡಿದರಿಂದ ಘರ್ಷಣೆ ಉಂಟಾಯಿತು. ಆಗ ನಡೆದ ಗುಂಡಿನ ಚಕಮಕಿಯಲ್ಲಿ  ಬೆಅಂತ್ ಸಿಂಗ್ ನ ಹತ್ಯೆಯಾಯಿತು. ಗಾಯಗೊಂಡ ಸತ್ವಂತ್    ಸಿಂಗ್ ನನ್ನು ಬಂಧಿಸಲಾಯಿತು. 

ನಡೆದ ಗುಂಡಿನ ಚಕಮಕಿಯ ಸದ್ದು ಕೇಳಿ, ಇಂದಿರಾ ಗಾಂಧಿಯವರ ಸೊಸೆ ಸೋನಿಯಾ ಗಾಂಧಿ ಮತ್ತು ಇಂದಿರಾರ ಆಪ್ತ ಎಂ.ಎಲ್.ಫೋತೆದಾರ್ ಅವರುಗಳು ಮನೆಯಿಂದ ಹೊರಗೆ ಬಂದರು. ಇಂದಿರಾ ಗಾಂಧಿಯವರ ಪುತ್ರ ರಾಜೀವ್ ಗಾಂಧಿ ಚುನಾವಣಾ ಪ್ರಸಾರಕ್ಕೆಂದು ದೂರದ ಪಶ್ಚಿಮ ಬಂಗಾಳದ ಪ್ರವಾಸಕ್ಕೆ ತೆರಳಿದ್ದರು. ಮೊಮ್ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಶಾಲೆಗೆ ತೆರಳಿದ್ದರು. ಪ್ರಧಾನಿಯವರ ಆಪ್ತ ವೈದ್ಯರೂ ಸ್ಥಳಕ್ಕೆ ಧಾವಿಸಿದ್ದರು. ಇವರೆಲ್ಲರೂ ಸೇರಿ ರಕ್ತದ ಮಡುವಿನಲ್ಲಿದ ಇಂದಿರಾ ಗಾಂಧಿಯವರನ್ನು ದಿಲ್ಲಿಯ  ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್) ಚಿಕಿತ್ಸೆಗೆಂದು ಅಂಬಾಸೆಡರ್ ಕಾರೊಂದರ ಹಿಂದಿನ ಆಸನದಲ್ಲಿ ಮಲಗಿಸಿಕೊಂಡು ಕೊಂಡೊಯ್ದರು. ಪ್ರಧಾನಿಯವರ ನಿವಾಸ ಮತ್ತು ಕಚೇರಿ, ಇವೆರಡೂ ಕೂಗಳತೆಯ ಸಮೀಪದಲ್ಲೇ ಇದ್ದರೂ, ನಡುವೆ ಒಂದು ಆಂಬುಲೆನ್ಸ್ ವಾಹನವೊಂದು ಸಿದ್ಧವಿಲ್ಲದ್ದು ಸಂಬಂಧಪಟ್ಟ ಇಲಾಖೆಗಳ ಬೇಜಾಬ್ದಾರಿತನವನ್ನು ಎತ್ತಿ ತೋರಿಸುತ್ತಿತ್ತು. ಆಂಬುಲೆನ್ಸ್ ವಾಹನದಂತೆ ವಿಶೇಷ ದೀಪ ಮತ್ತು ಎಚ್ಚರಿಕೆ ಗಂಟೆಗಳ ಸೌಲಭ್ಯವಿರದೆ, ಇಂದಿರಾ ಗಾಂಧಿಯವರ ಶರೀರವನ್ನು ಹೊತ್ತ ಸಾಧಾರಣ ಅಂಬಾಸೆಡರ್ ಕಾರು, ಅತ್ಯಂತ ಸಂಚಾರ ದಟ್ಟಣೆಯಿಂದ ಕೂಡಿದ, ನಾಲ್ಕೂವರೆ ಕಿಲೋಮೀಟರಿನಷ್ಟು ದೂರವಿದ್ದ ಏಮ್ಸ್ ಆಸ್ಪತ್ರೆಯನ್ನು ಸೇರಲು ಸಾಕಷ್ಟು ಪ್ರಯಾಸಪಡಬೇಕಾಯಿತು. ಗುಂಡುಗಳ ಸುರಿಮಳೆಗೆ ತುತ್ತಾದ ಇಂದಿರಾ ಗಾಂಧಿಯವರನ್ನು ಬೇಗ ಆಸ್ಪತ್ರೆಗೆ ಕೊಂಡೊಯ್ದಿದ್ದರೆ, ಬದುಕುಳಿಯುತ್ತಿದ್ದರೆ?  ಎಂಬುದು  ಬೇರೆ ವಿಷಯ. 

ಪ್ರಧಾನಿ ಇಂದಿರಾ ಗಾಂಧಿಯವರ ಮೇಲೆ ನಡೆದ ಮಾರಣಾಂತಿಕ  ಹಲ್ಲೆಯ ಸುದ್ದಿ ಕಾಡ್ಗಿಚ್ಚಿನಂತೆ  ಹಬ್ಬತೊಡಗಿತ್ತು. ಹತ್ಯೆಯ ಪ್ರಯತ್ನದ ಘಾತಕ ಸುದ್ದಿಯನ್ನು ಬಿ.ಬಿ.ಸಿ.ಯಂತಹ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ಅಂದೇ ಬೆಳಗ್ಗೆ ೧೦ರ ಹೊತ್ತಿಗೆ ಪ್ರಸಾರ ಮಾಡಿಯಾಗಿತ್ತು. ದೇಶಾದ್ಯಂತದ ಉನ್ನತ ವ್ಯಕ್ತಿಗಳಿಗೆ  ದೂರವಾಣಿಯ ಮುಖಾಂತರ ಕೂಡ ಅದೇ ಸಮಯಕ್ಕೆ ಸುದ್ದಿ ತಿಳಿದು ಬಂದಿತ್ತು. ಸುದ್ದಿ ತಿಳಿದ ದಿಲ್ಲಿಯ ಜನಸಾಮಾನ್ಯರು ಏಮ್ಸ್ ಸಂಸ್ಥೆಯ ಮುಂದೆ ಜಮಾಯಿಸತೊಡಗಿದರು. ಇಂದಿರಾ ಗಾಂಧಿಯವರು ಬದುಕುಳಿಯುವ ಸಾಧ್ಯತೆ ಅತಿ ಕಮ್ಮಿ ಎಂಬುದು ನೆರದಿದ್ದ ಜನಗಳಿಗಾಗಲೇ ತಿಳಿದಿತ್ತು. ಮಧ್ಯಾಹ್ನ ೨.೨೦ರ ಹೊತ್ತಿಗೆ ಇಂದಿರಾ ಗಾಂಧಿಯವರು ನಿಧನ ಹೊಂದಿದ್ದಾರೆಂದು  ಏಮ್ಸ್ ಸಂಸ್ಥೆಯ ವೈದ್ಯರುಗಳು ಖಾತರಿಪಡಿಸಿಯಾಗಿತ್ತು. ಇಂದಿರಾ ಗಾಂಧಿಯವರ ಹತ್ಯೆಯಾದದ್ದು ೩೧-೧೦-೧೯೮೪ರ  ಬುಧವಾರ.  ಕಾಕತಾಳಿಯವೋ ಏನೋ, ಇಂದಿರಾ ಗಾಂಧಿಯವರು ಸ್ವರ್ಣ ಮಂದಿರದೊಳಗೆ ಕಾರ್ಯಾಚರಣೆಗಾಗಿ ಸೇನೆಯನ್ನು ೦೬ ಜೂನ್ ೧೯೮೪ರಂದು  ಕಳುಹಿಸಿದ್ದೂ ಬುಧವಾರವೇ ಆಗಿತ್ತು. 

ಹಿಂದಿನ ದಿನ,  ಅಂದರೆ ೩೦ ಅಕ್ಟೋಬರ್ ೧೯೮೪ರ ಮಂಗಳವಾರದಂದು ಇಂದಿರಾ ಗಾಂಧಿಯವರು ಒಡಿಶಾದ ಭುವನೇಶ್ವರದಲ್ಲಿ ಚುನಾವಣಾ ಪ್ರಸಾರದ ಭಾಷಣ ಮಾಡುತ್ತ, 'ನಾನು ಜೀವಂತ ಇರುತ್ತೇನೋ, ಇಲ್ಲವೋ ಅದರ ಚಿಂತೆ ನನಗಿಲ್ಲ. ಈಗಾಗಲೇ ನಾನು ದೀರ್ಘ ಕಾಲ ಬದುಕಿಯಾಗಿದೆ. ನನ್ನ ಇಡೀ ಜೀವನವನ್ನು ಸೇವೆಯಲ್ಲಿ ಕಳೆದಿದ್ದೇನೆ ಎಂಬುದು ನನಗೆ ಗೌರವದ ವಿಷಯ. ನನ್ನ ಜೀವನದ ಕಡೆಯ ಉಸಿರಿರುವವರೆಗೆ ನನ್ನ ಜೀವನ ಸೇವೆಯಲ್ಲೇ ಸಾಗುತ್ತದೆ. ಒಂದು ಪಕ್ಷ ನನ್ನ ಜೀವ ಹೋದರೆ, ನನ್ನ ಶರೀರದ ಒಂದೊಂದು ರಕ್ತದ ಹನಿಯೂ ಭಾರತವನ್ನು ಜೀವಿತಗೊಳಿಸಿ, ಸದೃಢಗೊಳಿಸುತ್ತದೆ' ಎಂದು ಹೇಳಿದ ಭವಿಷ್ಯ ವಾಣಿ, ಮಾರನೆಯ ದಿನವೇ ನಿಜವಾಗಿದ್ದು ಮಾತ್ರ  ವಿಪರ್ಯಾಸ. ಇಂದಿರಾ ಗಾಂಧಿಯವರ ಅಂತಿಮ ಸಾರ್ವಜನಿಕ ಭಾಷಣ ಅದಾಗಿದ್ದು, ಭಾಷಣದ ಕಡೆಯಲ್ಲಿ ತಮ್ಮ ಸಾವಿನ ಬಗ್ಗೆ ಪ್ರಸ್ತಾಪಿಸಿದ್ದ ಅವರಿಗೆ ತಮ್ಮ ಸಾವು ಸಮೀಪವೇ ಇದೆ, ಮತ್ತು ತಮ್ಮ ಹತ್ಯೆ ಸದ್ಯದಲ್ಲೇ ಆಗಬಹುದೆಂಬ ಶಂಕೆ ಇತ್ತೆಂಬುದು ಸ್ಪಷ್ಟವಾಗಿತ್ತು. 

ಏಮ್ಸ್ ಆಸ್ಪತ್ರೆಯವರು ಇಂದಿರಾ ಗಾಂಧಿಯವರ ಮರಣದ ಸುದ್ದಿಯನ್ನು ಖಾತರಿಪಡಿಸಿದ ಕೂಡಲೇ,  ನೆರೆ ರಾಷ್ಟ್ರ ಪಾಕಿಸ್ತಾನವೂ ಸೇರಿದಂತೆ ಎಲ್ಲಾ ವಿದೇಶಿ ಸುದ್ದಿ ಸಂಸ್ಥೆಗಳು ಇಂದಿರಾ ಗಾಂಧಿಯವರ ಹತ್ಯೆಯ ಸುದ್ದಿಯನ್ನು ಪ್ರಸಾರ ಮಾಡಿದ್ದರೂ, ಭಾರತೀಯ ಸುದ್ದಿಮಾಧ್ಯಮಗಳು ಮಾತ್ರ ಮರಣದ ಸುದ್ದಿಯನ್ನು ಇನ್ನೂ ಪ್ರಸಾರ ಮಾಡಿರಲಿಲ್ಲ. 

ಈ ನಡುವೆ ಡಾ. ತೀರ್ಥ್ ದಾಸ್ ದುಗಾರರಿಂದ ಮೃತಪಟ್ಟ ಇಂದಿರಾ ಗಾಂಧಿಯವರ ದೇಹದ ಮರಣೋತ್ತರ ಪರೀಕ್ಷೆ ನಡೆಯಿತು. ಇಂದಿರಾ ಗಾಂಧಿಯವರ ದೇಹದ ಮೇಲೆ ಒಟ್ಟು ೩೩ ಗುಂಡುಗಳನ್ನು ಅತ್ಯಂತ ಸಮೀಪದಿಂದ ಹಾರಿಸಲಾಗಿದ್ದು, ಅವುಗಳಲ್ಲಿ ೩೦ ಗುಂಡುಗಳು ಅವರ ದೇಹವನ್ನು ಹೊಕ್ಕಿದ್ದವು.  ಅವುಗಳಲ್ಲಿ ೭ ಗುಂಡುಗಳು  ಇನ್ನೂ ಅವರ ದೇಹದಲ್ಲೇ ಉಳಿದಿತ್ತು.  ಉಳಿದ ೨೩  ಗುಂಡುಗಳು ಅವರ ದೇಹವನ್ನು ಹೊಕ್ಕು ಹೊರಬಂದಿದ್ದವೆಂದರೆ, ಅವರ ಮೇಲಿನ ಆಕ್ರಮಣದ ತೀವ್ರತೆಯನ್ನು ಅರಿಯಬಹುದು. ಇಂದಿರಾ ಗಾಂಧಿಯವರ  ಹೊಟ್ಟೆ ಮತ್ತು ಎದೆಯ ಭಾಗಗಳೆಲ್ಲವೂ ಛಿದ್ರವಾಗಿದ್ದರೂ, ಅವರ ಮುಖಕ್ಕೆ ಯಾವುದೇ ಹಾನಿಯಾಗಿರಲಿಲ್ಲ. 

ಇಂದಿರಾರವರ ಮೇಲೆ ಮಾರಣಾಂತಿಕ ಹಲ್ಲೆಯ ಸುದ್ದಿಯನ್ನು ತಿಳಿದು ತಲ್ಲಣಗೊಂಡ ರಾಜೀವ್ ಗಾಂಧಿಯವರು ತಮ್ಮ ಪಶ್ಚಿಮ ಬಂಗಾಳದ ಪ್ರವಾಸವನ್ನು ಮೊಟಕುಗೊಳಿಸಿ, ಅಂದಿನ ಕೇಂದ್ರ ಹಣಕಾಸು ಮಂತ್ರಿ ಪ್ರಣಬ್ ಕುಮಾರ್ ಮುಖರ್ಜಿ ಅವರೊಂದಿಗೆ ದಿಲ್ಲಿಯ ಕಡೆಗೆ ವಿಮಾನ ಪ್ರಯಾಣ ಬೆಳಸಿದ್ದರು. ವಿಮಾನ ಪ್ರಯಾಣ ಸಮಯದಲ್ಲಿ ರಾಜೀವರೊಂದಿಗೆ ಮಾತನಾಡಿದ ಪ್ರಣಬ್ ಮುಖರ್ಜಿಯವರು, 'ಹತ್ಯೆಯಾದ ಇಂದಿರಾ ಗಾಂಧಿಯವರ ಸಂಪುಟದಲ್ಲಿ ತಾವು ಅತ್ಯಂತ ಹಿರಿಯರಾಗಿದ್ದು, ಆ ಕ್ಷಣಕ್ಕೆ ಹೊಸ ಪ್ರಧಾನಿಯಾಗಲು ತಾವೇ ಸೂಕ್ತರೆಂಬ ಅಭಿಪ್ರಾಯ,' ಮಂಡಿಸಿದ್ದು ಅವರ ಪಾಲಿಗೆ ಮುಳ್ಳಾಗಿ ಪರಿಣಮಿಸಿತು. ಪ್ರಣಬರನ್ನು  ದೂರವಿರಿಸಿದ ರಾಜೀವ್, ಅವರನ್ನು ಮತ್ತೆಂದೂ ಹತ್ತಿರಕ್ಕೆ ಕರೆಯಲೇ ಇಲ್ಲ. ಏಳು ವರ್ಷಗಳ ಸುಧೀರ್ಘ ರಾಜಕೀಯ ಅಜ್ಞಾತ ಅನುಭವಿಸಿದ ಪ್ರಣಬ್, ಮತ್ತೆ ಕೇಂದ್ರ ಸಂಪುಟ ಸೇರಿದ್ದು ರಾಜೀವ್ ಹತ್ಯೆಯಾದನಂತರವೇ! ಮಧ್ಯಾಹ್ನ ೩.೦೦ರ ಹೊತ್ತಿಗೆ ದಿಲ್ಲಿಗೆ ಬಂದಿಳಿದ  ರಾಜೀವ್, ನೇರವಾಗಿ ತಲುಪಿದ್ದು ಇಂದಿರಾ ಮೃತಪಟ್ಟಿದ್ದ ಏಮ್ಸ್ ಆಸ್ಪತ್ರೆಯನ್ನು. 

ಅಂದಿನ ರಾಷ್ಟ್ರಾಧ್ಯಕ್ಷ ಜೈಲ್ ಸಿಂಗರು ಕೂಡ ಅಂದು ವಿದೇಶಿ ಪ್ರವಾಸದಲ್ಲಿದ್ದರು. ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಿದ ಅವರು ದಿಲ್ಲಿಯನ್ನು ತಲುಪಿದ ತಕ್ಷಣ, ಭೇಟಿ ನೀಡಿದ್ದು ಏಮ್ಸ್ ಆಸ್ಪತ್ರೆಗೆ. ಅಷ್ಟು ಹೊತ್ತಿಗಾಗಲೇ ಅಲ್ಲಿ ನೆರದಿದ್ದ ಜನಗಳಿಗೆ ಇಂದಿರಾ ಗಾಂಧಿ ಮೃತಪಟ್ಟ ಸುದ್ದಿ ತಿಳಿದು ಹೋಗಿತ್ತು. ಇಂದಿರಾಜಿ ಅವರ ಹತ್ಯೆ ಮಾಡಿದವರು ಅವರ ಅಂಗರಕ್ಷಕರೇ ಆಗಿದ್ದ ಇಬ್ಬರು ಸಿಖ್ ಪೊಲೀಸ್ ಕರ್ಮಚಾರಿಗಳು ಎಂದು ತಿಳಿದಿದ್ದ ಜನಗಳು ಅಂದು ಉದ್ರಿಕ್ತರಾಗಿದ್ದರು. ರಾಷ್ಟ್ರಾಧ್ಯಕ್ಷ ಜೈಲ್ ಸಿಂಗರ ವಾಹನವನ್ನು ಕಂಡ ಕೂಡಲೇ ರೋಷಗೊಂಡ ಜನರು, ಅವರ ವಾಹನದ ಮೇಲೆ ಕಲ್ಲುಗಳನ್ನೆಸೆದು ಘೋಷಣೆಗಳನ್ನು ಕೂಗಿದರು. ಜೈಲ್ ಸಿಂಗರ ವಾಹನದ ಮೇಲಿನ ಕಲ್ಲೆಸತದ ಘಟನೆ ಮುಂದುಂಟಾದ ಸಿಖ್ಖರ ವಿರುದ್ಧದ ದಂಗೆಗೆ ಮುನ್ನುಡಿಯೋ ಎಂಬಂತಿತ್ತು.  ಜೈಲ್ ಸಿಂಗರನ್ನು ಸುರಕ್ಷಿತಗೊಳಿಸವುದೇ ಪೋಲಿಸರಿಗೊಂದು ಸವಾಲಾಗಿಹೋಗಿತ್ತು.  

ಅಂದು ಸಂಜೆ ೬.೦೦ರ ಹೊತ್ತಿಗೆ ಭಾರತೀಯ ಸುದ್ದಿಮಾಧ್ಯಮಗಳು ಇಂದಿರಾ ಗಾಂಧಿಯವರ ಹತ್ಯೆಯ ಸುದ್ದಿಯನ್ನು ಪ್ರಸಾರ ಮಾಡಿದ್ದಾಗಿತ್ತು. ಅದೇ ಸುದ್ದಿಯ ನಡುವೆಯೇ ರಾಷ್ಟ್ರಾಧ್ಯಕ್ಷ ಜೈಲ್ ಸಿಂಗ್ ರವರು, ಇಂದಿರಾ ಗಾಂಧಿಯವರ ಪುತ್ರ ರಾಜೀವ್ ಗಾಂಧಿಯವರಿಗೆ ಭಾರತ ದೇಶದ ಹೊಸ ಪ್ರಧಾನಿಯಾಗಿ ಪ್ರಮಾಣ ವಚನ ಬೋಧಿಸಿದ ವಿಷಯವನ್ನು ಪ್ರಕಟಿಸಿದ್ದನ್ನು ಕೇಳಿ, ಸಮಸ್ತ ಭಾರತದ ಜನತೆ ಅನುಮೋದಿಸಿತ್ತೆಂದರೆ ತಪ್ಪಾಗಲಾರದು. 

ಮೃತಪಟ್ಟ ಇಂದಿರಾ ಗಾಂಧಿಯವರ ದೇಹವನ್ನು ಮೊದಲು ಅವರ ನಿವಾಸಕ್ಕೆ ತಂದಿರಿಸಲಾಯಿತು. ಮಾರನೆಯ ದಿನ, ಅಂದರೆ ೦೧ ನವೆಂಬರ್ ೧೯೮೪ರ, ಗುರುವಾರ ಬೆಳಗ್ಗೆ ಅವರ ದೇಹವನ್ನು ದಿಲ್ಲಿಯ ತೀನ್ ಮೂರ್ತಿ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಯಿತು. 

ಅಕ್ಟೋಬರ್  ೩ರಂದು ಇಂದಿರಾ ಗಾಂಧಿಯವರ ಪಾರ್ಥಿವ ಶರೀರವನ್ನು ಸಕಲ ರಾಜಮರ್ಯಾದೆಯೊಂದಿಗೆ ಮೆರವಣಿಗೆಯಲ್ಲಿ ರಾಜ್ ಘಾಟ್ಗೆ ತೆಗೆದುಕೊಂಡು ಹೋಗಲಾಯ್ತು. ರಾಜ್ ಘಾಟ್ನಲ್ಲಿ ಮಹಾತ್ಮಾ ಗಾಂಧಿಯವರ ಸಮಾಧಿಯ ಸಮೀಪವೇ ಇಂದಿರಾ ಗಾಂಧಿಯವರ ಅಂತಿಮ ಸಂಸ್ಕಾರವನ್ನು ಹಿಂದೂ ಸಂಪ್ರದಾಯದ ಪ್ರಕಾರ ಮಾಡಲಾಯಿತು. ಇಂದಿರಾ ಗಾಂಧಿಯವರ ಪುತ್ರ ರಾಜೀವ್ ಗಾಂಧಿಯವರು ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸಿದರು. ಇಂದಿರಾ ಗಾಂಧಿಯವರ ಸಮಾಧಿ ಸ್ಥಳಕ್ಕೆ 'ಶಕ್ತಿ ಸ್ಥಳ'ವೆಂದು ನಾಮಕರಣಮಾಡಲಾಯಿತು. 

ಇಂದಿರಾ ಗಾಂಧಿಯವರ ಹತ್ಯೆಯ ಪ್ರತ್ಯಕ್ಷ ದರ್ಶಿಗಳಲ್ಲಿ, ಅವರ ಹಿಂದೆ ಕೊಡೆ ಹಿಡಿದು ಸಾಗಿದ್ದ ಪೊಲೀಸ್ ಪೇದೆ ನಾರಾಯಣ್ ಸಿಂಗ್ ರವರೂ ಒಬ್ಬರು. ಅವರು ನೀಡಿದ ದೂರಿನ ಆಧಾರದ ಮೇಲೆ ದಿಲ್ಲಿಯ ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ  ದೂರೊಂದನ್ನು ದಾಖಲಿಸಿಕೊಳ್ಳಲಾಯಿತು. ಇಂದಿರಾ ಗಾಂಧಿಯವರ ಹತ್ಯೆಯ ಕೂಲಂಕುಷ ತನಿಖೆಗಾಗಿ, ದಿಲ್ಲಿಯ ಸಿ.ಐ.ಎಸ್.ಎಫ್.ನ ಐ.ಪಿ.ಎಸ್. ಅಧಿಕಾರಿ ಎಸ್. ಆನಂದ ರಾಮ್ ರವರ ನೇತೃತ್ವದಲ್ಲಿ ವಿಶೇಷ ತನಿಖಾ ದಳವೊಂದನ್ನು (ಎಸ್.ಐ.ಟಿ.) ರಚಿಸಲಾಯಿತು.

ಐರ್ಲೆಂಡಿನ ಟಿ.ವಿ.ಗೆ ತಯಾರಾಗಬೇಕಿದ್ದ ಇಂದಿರಾಗಾಂಧಿಯವರ ಸಂದರ್ಶನಕ್ಕೆ ಛಾಯಾಗ್ರಾಹಕರ ತಂಡ ಸಿದ್ಧರಾಗಿದ್ದರೂ, ಇಂದಿರಾ ಗಾಂಧಿಯವರ ಹತ್ಯೆಯ ದೃಶ್ಯಗಳನ್ನು ಯಾರೂ ಚಿತ್ರೀಕರಿಸದಿದ್ದದ್ದು ಆಶ್ಚರ್ಯಕರವಾಗಿತ್ತು.  ಪ್ರತ್ಯಕ್ಷ ಸಾಕ್ಷಿಗಳೇ ಅಲ್ಲಿದ್ದದ್ದು ಮತ್ತು ಹಂತಕರನ್ನು ಸ್ಥಳದಲ್ಲೇ ಬಂಧಿಸಿದ್ದು ಮುಂದಿನ ತನಿಖೆಗೆ ಅನುಕೂಲವಾಯಿತು. 

ಭಾರತದ ಎಲ್ಲ ಗುಪ್ತಚರ ಸಂಸ್ಥೆಗಳಿಗೆ ಇಂದಿರಾ ಗಾಂಧಿಯವರ ಹತ್ಯೆಯ ಸಂಚಿನ ಬಗ್ಗೆ ಮೊದಲೇ ತಿಳಿದಿತ್ತು. ೧೯೮೪ರ ಜೂನ್ ತಿಂಗಳ ವೇಳೆಗೆ ಪಂಜಾಬಿನ ಅಮೃತ್ ಸರದ ಸ್ವರ್ಣ ಮಂದಿರ ಸಿಖ್ ಉಗ್ರವಾದಿಗಳ ಅಡ್ಡೆಯಾಗಿ ಹೋಗಿತ್ತು. ಉಗ್ರ ಸಂತ್ ಜರ್ನೈಲ್ ಸಿಂಗ್ ಭಿನ್ದ್ರನ್ ವಾಲೆ ನೇತೃತ್ವದಲ್ಲಿ ಸ್ವರ್ಣ ಮಂದಿರದಲ್ಲಿ ನೆಲೆಸಿದ್ದ ಉಗ್ರರ ತಂಡ ಪಂಜಾಬಿನಲ್ಲಿ ಇನ್ನಿಲ್ಲಿದ ಹಿಂಸಾಚಾರ, ಕೊಲೆ, ಸುಲಿಗೆಗಳ ಸರಣಿಯನ್ನು ನಡೆಸಿತ್ತು. ಸಾಕಷ್ಟು ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದ ಇಂದಿರಾ ಗಾಂಧಿ ನೇತೃತ್ವದ ಆಡಳಿತಕ್ಕೆ  ದಿಕ್ಕುತೋಚದಂತಾಗಿತ್ತು. ಬೇರೆ ಮಾರ್ಗವಿಲ್ಲದೆ, ಇಂದಿರಾ ಗಾಂಧಿಯವರು ಜೂನ್ ತಿಂಗಳ ಆರಂಭದಲ್ಲಿ, ಸ್ವರ್ಣ ಮಂದಿರವನ್ನು ಉಗ್ರರಿಂದ ವಿಮುಕ್ತಗೊಳಿಸಲು ಭಾರತೀಯ ಸೇನೆಯನ್ನು ಕಳುಹಿಸಬೇಕಾಗಿಬಂದದ್ದು ಈಗ ಇತಿಹಾಸ. ಸೇನೆಯ ಕಾರ್ಯಾಚರಣೆಯ ವೇಳೆ ಸ್ವರ್ಣ ಮಂದಿರದ ಪ್ರಮುಖ ಮಂದಿರವೊಂದಾದ  'ಅಕಾಲ್ ತಖ್ತ್'ಗೆ ಭಾರಿ ಹಾನಿಯುಂಟಾಗಿದ್ದು ಸಮಸ್ತ ಸಿಖ್ ಸಮುದಾಯವನ್ನು ಕೆರಳಿಸಿತ್ತು. ಆ ವೇಳೆಗಾಗಲೇ ಸಿಖ್ಖರಿಗೊಂದು ಪ್ರತ್ಯೇಕ ರಾಷ್ಟ್ರ 'ಖಾಲಿಸ್ತಾನ್' ಬೇಕೆಂಬ ಹೋರಾಟವನ್ನು ಪಂಜಾಬಿನ ಕೆಲ ಸಿಖ್ ಸಂಸ್ಥೆಗಳು ಮತ್ತು ಕೆಲವು ಸಿಖ್ಖರ ವಿದೇಶಿ ಸಂಸ್ಥೆಗಳೂ ಆರಂಭಿಸಿದ್ದವು. ಅಂತಹ ಖಾಲಿಸ್ತಾನ್ ಹೋರಾಟದ ವಿದೇಶಿ ಸಂಸ್ಥೆಯ ನೇತಾರ ಜಗಜೀತ್ ಸಿಂಗ್ ಚೌಹಾಣ್ ಎಂಬುವರು ೧೨ ಜೂನ್ ೧೯೮೪ರಂದು ಬಿ.ಬಿ.ಸಿ.ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಸ್ವರ್ಣ ಮಂದಿರದ ಮೇಲೆ ಸೇನೆಯ ಆಕ್ರಮಣ ನಡೆಸಿದ ಇಂದಿರಾ ಗಾಂಧಿ ಅವರ ಮೇಲೆ ಪ್ರತೀಕಾರದ ಮಾತುಗಳನ್ನಾಡಿದ್ದರು. ಇಂದಿರಾ ಗಾಂಧಿ ಮತ್ತವರ ಎಲ್ಲಾ ಕುಟುಂಬದ ಸದಸ್ಯರುಗಳನ್ನು ಬೇಗ ಹತ್ಯೆ ಮಾಡುವುದಾಗಿ ಚೌಹಾಣ್ ಆ ಸಂದರ್ಶನದಲ್ಲಿ ತಿಳಿಸಿದ್ದರು. ಹಾಗಾಗಿ ಭಾರತದ ಎಲ್ಲ ಗುಪ್ತಚರ ಸಂಸ್ಥೆಗಳಿಗೆ ಇಂದಿರಾ ಗಾಂಧಿಯವರ ಮೇಲಿನ ತೂಗುಗತ್ತಿಯ ವಿಚಾರ ಚೆನ್ನಾಗೇ ತಿಳಿದಿತ್ತು. ಹಾಗಾದರೂ ಇಂದಿರಾ ಗಾಂಧಿಯವರ ಹತ್ಯೆ ಚೌಹಾಣರು ಸಂದರ್ಶನದ ನೀಡಿದ ಐದು ತಿಂಗಳೊಳಗೆ ನಡೆದದ್ದು ದುರದೃಷ್ಟಕರವೇ ಸರಿ. 'ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ' ಇಂದಿರಾ ಗಾಂಧಿಯವರ ಹತ್ಯೆಯಾಗಿದ್ದು ನಮ್ಮ ಗುಪ್ತಚರ ಹಾಗು ಸುರಕ್ಷಾ ಸಂಸ್ಥೆಗಳ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು. 

ಇಂದಿರಾ ಗಾಂಧಿಯವರ ಹತ್ಯೆಯ ಪ್ರಮುಖ ಆರೋಪಿ, ಮೂವತ್ತೆಂಟು ವರ್ಷದ ದಿಲ್ಲಿ ಪೊಲೀಸ್ನ ಸಬ್ ಇನ್ಸ್ಪೆಕ್ಟರ್ ಬೆಅಂತ ಸಿಂಗ್.  ಆತ ಕಳೆದ ಹತ್ತು ವರ್ಷಗಳಿಂದ ಇಂದಿರಾ ಗಾಂಧಿಯವರ ನಿವಾಸದ ಭದ್ರತೆಯ ಕರ್ತವ್ಯವನ್ನು ನಿರ್ವಹಿಸುತಿದ್ದು, ಅವರಿಗೆ ಮತ್ತು ಅವರ ಕುಟುಂಬದವರಿಗೆ ಆಪ್ತನಾಗಿಹೋಗಿದ್ದನು. ಬಾಲಕ ರಾಹುಲ್ ಗಾಂಧಿಗೆ ವ್ಯಾಯಾಮ ಮತ್ತು ಬ್ಯಾಡ್ಮಿಂಟನ್ ಹೇಳಿಕೊಡುತ್ತಿದ್ದ ಗುರುವು ಬೆಅಂತ್ ಸಿಂಗನೇ ಆಗಿದ್ದನು. ಮತ್ತೊಬ್ಬ ಹಂತಕ ಇಪ್ಪತ್ತೆರಡು ವರ್ಷದ ಪೊಲೀಸ್ ಪೇದೆ ಸತ್ವಂತ್ ಸಿಂಗ್ ಕಳೆದ ೧೮ ತಿಂಗಳುಗಳಿಂದ  ಇಂದಿರಾ ಗಾಂಧಿಯವರ ನಿವಾಸದ ಭದ್ರತೆಯ ಸೇವೆಯಲ್ಲಿದ್ದನು. 

ಇಬ್ಬರು ನೇರ ಹಂತಕರಲ್ಲದೆ, ದಿಲ್ಲಿ ಪೊಲೀಸ್ನ ಮತ್ತೊಬ್ಬ ಸಬ್ ಇನ್ಸ್ಪೆಕ್ಟರ್ ಬಲಬೀರ್ ಸಿಂಗನನ್ನೂ ಮತ್ತು ದಿಲ್ಲಿ ಸರಕಾರದ ಉದ್ಯೋಗಿ ಕೆಹರ್ ಸಿಂಗ್ ನನ್ನೂ ಇಂದಿರಾ ಹತ್ಯೆಯ ಸಂಚಿನ ಆರೋಪಿಗಳನ್ನಾಗಿಸಿ ಪ್ರಕರಣವನ್ನು ದಾಖಲಿಸಲಾಯ್ತು. ಬಲಬೀರ್ ಸಿಂಗ್ ಬೆಅಂತ್ ಸಿಂಗನಿಗೆ ಆಪ್ತ ಸ್ನೇಹಿತನಾಗಿದ್ದನು. ೧೯೮೪ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಇಂದಿರಾ ಗಾಂಧಿಯವರ ನಿವಾಸದ ತೋಟದ ಮುಂದಿನ ಮರವೊಂದರ ಮೇಲೆ 'ಗಿಡುಗ'ವೊಂದು ಕುಳಿತಿದ್ದನ್ನು ನೋಡಿದ ಬಲಬೀರ್ ಸಿಂಗ್ ಅದನ್ನು ಸಮೀಪವೇ ಇದ್ದ ತನ್ನ ಸ್ನೇಹಿತ ಬೆಅಂತ್ ಸಿಂಗನನ್ನು ಕರೆದು ತೋರಿಸಿದನು. ಸಿಖ್ ಧರ್ಮದ ಹತ್ತನೇ ಗುರು, ಗುರುಗೋವಿಂದ್ ಸಿಂಗರ ಅತ್ಯಂತ ಮೆಚ್ಚಿನ ಪಕ್ಷಿ 'ಗಿಡುಗ'ವಾಗಿದ್ದು, ಆ ಪಕ್ಷಿಯನ್ನು ಗುರುಗೋವಿಂದ್ ಸಿಂಗರ ಪ್ರತೀಕವೆಂದೇ ಸಮಸ್ತ ಸಿಖ್ಖರೂ ಪರಿಗಣಿಸುತ್ತಿದ್ದದ್ದು ಎಲ್ಲರಿಗೂ ತಿಳಿದ ವಿಷಯ. ಬಲಬೀರ್ ಸಿಂಗ್ ಮತ್ತು ಬೆಅಂತ್ ಸಿಂಗ್ ಇಬ್ಬರೂ, ಗಿಡುಗ ಇಂದಿರಾ ಗಾಂಧಿಯವರ ಮನೆಯ ಮುಂದೆ ಕಾಣಿಸಿಕೊಂಡಿದ್ದು, ಇಂದಿರಾ ಗಾಂಧಿಯವರ ಹತ್ಯೆಗೆ ಗುರು ಗೋವಿಂದ್ ಸಿಂಗರಿಂದ  ದೊರೆತ ಪ್ರೇರಣೆಯೆಂದು ಪರಿಗಣಿಸಿದರೆಂದೂ ಮತ್ತು ಆ ಸಮಯದಲ್ಲೇ ಸಿಖ್ಖರ ಪೂಜಾಮಂದಿರವಾದ ಗುರುದ್ವಾರಕ್ಕೆ ತೆರಳಿ ಬೆಅಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಇಬ್ಬರೂ ಹತ್ಯೆಯ ದೀಕ್ಷೆಯ ಪ್ರತೀಕವಾಗಿ 'ಪ್ರಾರ್ಥನೆ ಮತ್ತು ಅಮೃತ ಪ್ರಾಶನ' ಮಾಡಿದರೆಂಬ ವಿಷಯ, ವಿಚಾರಣಾ ಅಧಿಕಾರಿಗಳ ಮುಂದೆ ಪ್ರಸ್ತಾಪಗೊಂಡರೂ, ವಿಚಾರಣಾ ಸಂಸ್ಥೆ ಅವುಗಳನ್ನು ಆಧಾರವಾಗಿ ಪರಿಗಣಿಸಲಿಲ್ಲ. 

ಬೆಅಂತ್ ಸಿಂಗನ ಹತ್ತಿರದ ನೆಂಟನಾಗಿದ್ದ ಮತ್ತೊಬ್ಬ ಆರೋಪಿ  ಕೆಹರ್ ಸಿಂಗ್, ಸ್ವರ್ಣ ಮಂದಿರದ ಮೇಲೆ ಸೇನೆಯ ಆಕ್ರಮಣ ನಡೆಸಿದ ಇಂದಿರಾ ಗಾಂಧಿಯವರ ಮೇಲೆ ಸೇಡಿನ ಭಾವವನ್ನು ಹೊಂದಿದ್ದನು. ನೇರ ಹಂತಕರಾದ ಬೆಅಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಇಬ್ಬರನ್ನೂ ಹತ್ಯೆಗೆ ಪ್ರೇರೇಪಿಸಿದವರಲ್ಲಿ ಕೆಹರ್ ಸಿಂಗ್ ಕೂಡ ಸೇರಿದ್ದನು.  ಕೆಹರ್ ಸಿಂಗ್, ಬೆಅಂತ್ ಸಿಂಗ್ ಮತ್ತು ಬೆಅಂತ್  ಸಿಂಗನ ಪತ್ನಿ ಬಿಮ್ಲಾ ಖಲ್ಸಾ, ಆ ಮೂವರೂ ೧೯೮೪ರ ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ ಅಮೃತ್ ಸರಕ್ಕೆ ತೆರಳಿದ್ದರು.  ಆ ಸಂದರ್ಭದಲ್ಲಿ ಬೆಅಂತ್ ಸಿಂಗ್ ಸ್ವರ್ಣ ಮಂದಿರದಲ್ಲಿ 'ಅಮೃತ ಪ್ರಾಶನ' ಮಾಡಿ, ತನ್ನ ಉಂಗುರ ಮತ್ತು ಕೈಕಡಗಳನ್ನು ಕೆಹರ್ ಸಿಂಗನಿಗೊಪ್ಪಿಸಿದ್ದನು. ಇದಾದನಂತರ ದಿಲ್ಲಿಯ ಆರ್. ಕೆ. ಪುರಂನ ಗುರುದ್ವಾರಕ್ಕೆ ಬೆಅಂತ್, ಸತ್ವಂತ ಸಿಂಗನೊಂದಿಗೆ ತೆರಳಿ,  ಸತ್ವಂತ್ ಸಿಂಗನಿಗೂ 'ಅಮೃತ ಪ್ರಾಶನ' ಮಾಡಿಸಿದನೆಂಬುದು ಕೂಡ ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿತ್ತು. 

ಪಂಜಾಬಿನ ಐ.ಪಿ.ಎಸ್. ಪೊಲೀಸ್ ಅಧಿಕಾರಿಯಾಗಿದ್ದ ಸಿಮರಂಜಿತ್ ಸಿಂಗ್ ಮಾನ್ ಎಂಬುವರು ಕೂಡ ಅಮೃತ್ ಸರದ ಸ್ವರ್ಣ ಮಂದಿರದ ಮೇಲೆ ನಡೆದ ಸೇನೆಯ ಆಕ್ರಮಣದ ಬಗ್ಗೆ ಕುಪಿತರಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಪ್ರತೀಕಾರದ ಭಾವವನ್ನು ಹೊಂದಿದ್ದ ಅವರನ್ನು ಮತ್ತು ಅವರ ಮೂವರು ಸಹಚರರನ್ನೂ ಕೂಡ ಆರೋಪಿಗಳೆಂದು, ಇಂದಿರಾ ಹತ್ಯೆಯ ವಿಚಾರಣಾ ಸಮಿತಿ  ಪರಿಗಣಿಸಿ ಬಂಧಿಸಿತ್ತು. ನಂತರ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಸಲಹೆ ಮೇರೆಗೆ ಆ ನಾಲ್ಕೂ ಜನರನ್ನು ವಿಚಾರಣೆಯಿಂದ ವಿಮುಕ್ತಗೊಳಿಸಲಾಯ್ತು. 

ಇಂದಿರಾ ಗಾಂಧಿಯವರ ಹತ್ಯೆಯ ವಿಚಾರಣೆಯನ್ನು ತ್ವರಿತವಾಗೇ ಮುಗಿಸಿದ ವಿಚಾರಣಾ ನ್ಯಾಯಾಲಯ, ತನ್ನ ತೀರ್ಪನ್ನು ಪ್ರಕಟಿಸಿ, ಎಲ್ಲಾ ಮೂವರು ಆರೋಪಿಗಳಾದ ಸತ್ವಂತ ಸಿಂಗ್, ಬಲಬೀರ್ ಸಿಂಗ್ ಮತ್ತು ಕೆಹರ್ ಸಿಂಗರವರುಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಮತ್ತೊಬ್ಬ ಪ್ರಮುಖ ಆರೋಪಿ ಬೆಅಂತ್ ಸಿಂಗ್, ಇಂದಿರಾ ಗಾಂಧಿ ಹತ್ಯೆಯಾದ ದಿನವೇ, ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದನು. ದಿಲ್ಲಿಯ ಹೈಕೋರ್ಟ್  ಕೂಡ ೦೩ ಡಿಸೆಂಬರ್ ೧೯೮೬ರಂದು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು.  ಭಾರತದ ಸರ್ವೋಚ್ಛ ನ್ಯಾಯಾಲಯ ಬಲಬೀರ್ ಸಿಂಗ್ ಮಾಡಿದ ಅಹವಾಲನ್ನು ಪರಿಗಣಿಸಿ, ೦೩ ಆಗಸ್ಟ್ ೧೯೮೮ರಂದು ಅವನನ್ನು  ದೋಷಮುಕ್ತನನ್ನಾಗಿಸಿತು ಮತ್ತು ಮಿಕ್ಕಿಬ್ಬರಿಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿತ್ತು. ಕೆಹರ್ ಸಿಂಗನ ಕರುಣಾ ಕ್ಷಮೆಯ ಅಹವಾಲನ್ನು ೦೨ ಜನವರಿ ೧೯೮೯ರಂದು ಭಾರತದ ರಾಷ್ಟ್ರಪತಿಯವರು ತಿರಸ್ಕರಿಸಿದರು. ೦೬ ಜನವರಿ ೧೯೮೯ರಂದು ಸತ್ವಂತ ಸಿಂಗ್ ಮತ್ತು ಕೆಹರ್ ಸಿಂಗರನ್ನು ದಿಲ್ಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯ್ತು.  ಅವರ ಶವಗಳನ್ನು ಜೈಲಿನ ಆವರಣದಲ್ಲೇ ಸಮಾಧಿ ಮಾಡಲಾಯಿತು. 

ಸ್ವರ್ಣ ಮಂದಿರದೊಳಗೆ ಭಾರತೀಯ ಸೇನೆಯನ್ನು ಕಾರ್ಯಾಚರಣೆಗೆ ಕಳುಹಿಸಿದ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹತ್ಯೆ ಮಾಡಬೇಕೆಂಬ ರೋಷ,  ಖಾಲಿಸ್ತಾನ್ ಹೋರಾಟಗಾರರ ಸಂಸ್ಥೆಗಳು ಸೇರಿದಂತೆ ಹಲವಾರು ಸಿಖ್ ಸಮುದಾಯಕ್ಕೆ ಸೇರಿದ ಸಂಸ್ಥೆಗಳಿಗೆ ಇದ್ದಿದ್ದು ನಿಜವಾದರೂ, ಇಂದಿರಾ ಹಂತಕರಿಗೂ ಮತ್ತು ಬೇರ್ಯಾವ ಸಂಸ್ಥೆಗಳಿಗೂ ಅಥವಾ ವ್ಯಕ್ತಿಗಳಿಗೂ  ಇರಬಹುದಾದ  ಸಂಬಂಧವನ್ನು ಸಾಬೀತುಪಡಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾದವು. ಇಂದಿರಾ ಗಾಂಧಿಯವರ ಹತ್ಯೆಯಾದ ಮರುಕ್ಷಣದಲ್ಲೇ ನಡೆದ ಗುಂಡಿನ ಚಕಮಕಿಯಲ್ಲಿ ಮಡಿದ, ಇಂದಿರಾ ಹತ್ಯೆಯ ಪ್ರಮುಖ ರೂವಾರಿ ಬೆಅಂತ್ ಸಿಂಗನೊಂದಿಗೆ ಹತ್ಯೆಯ ಸಂಚಿನ ಕೊಂಡಿಗಳೆಲ್ಲವೂ ಮತ್ತೆಂದಿಗೂ ಸಿಗದಂತೆ ಮಾಯವಾಗಿದ್ದವು. ವಿಚಾರಣೆಗೊಳಗಾದ  ಆರೋಪಿಗಳಾದ ಸತ್ವಂತ್ ಸಿಂಗ್, ಕೆಹರ್ ಸಿಂಗ್ ಮತ್ತು ಬಲಬೀರ್ ಸಿಂಗರುಗಳಿಂದ ಹೆಚ್ಚಿನ ಮಾಹಿತಿಗಳನ್ನೇನೂ ಬೇಧಿಸಲಾಗಲಿಲ್ಲ.  

೦೬ ಜನವರಿ ೨೦೦೮ರಂದು ಇಂದಿರಾಗಾಂಧಿಯವರ  ಹಂತಕರಾದ ಬೆಅಂತ್ ಸಿಂಗ್, ಸತ್ವಂತ ಸಿಂಗ್ ಮತ್ತವರ ಸಹಚರನಾದ ಕೆಹರ್ ಸಿಂಗರನ್ನು ಹುತಾತ್ಮರೆಂದು ಅಮೃತ್ ಸರದ ಅಕಾಲ್ ತಖ್ತ್ ನ  ಪೀಠದಿಂದ ಘೋಷಿಸಲಾಯಿತು. ೩೧ ಅಕ್ಟೋಬರ್ ೨೦೦೮ರಂದು ಪ್ರಥಮ ಬಾರಿಗೆ ಆ ಮೂವರೂ ಹತ್ಯೆಕೋರ ಹುತಾತ್ಮರ ಪುಣ್ಯ ತಿಥಿಯನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಅವರುಗಳ ಪುಣ್ಯ ತಿಥಿಯನ್ನು ಅಕಲ್ ತಖ್ತ್ ನಲ್ಲಿ ಆಚರಿಸಲಾಗುತ್ತಿದೆ. 

ಗುಪ್ತಚರ ಸಂಸ್ಥೆಗಳಿಗೆ ಇಂದಿರಾ ಗಾಂಧಿಯವರ ಹತ್ಯೆಯ ಮುನ್ಸೂಚನೆ ಚೆನ್ನಾಗೆ ತಿಳಿದಿತ್ತು. ಸಿಖ್ ಧರ್ಮಕ್ಕೆ ಸೇರಿದ ಪ್ರತಿಯೊಬ್ಬ ಸಿಖ್ ಪ್ರಜೆಗೂ, ಸ್ವರ್ಣ ಮಂದಿರದ ಮೇಲೆ ಸೇನೆಯ ಆಕ್ರಮಣ ನಡೆಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಮೇಲೆ ಕೋಪವಿದ್ದದ್ದು ಸರ್ವವಿಧಿತವಾಗಿತ್ತು. ಹಾಗಾಗಿ  ಸಿಖ್ ಧರ್ಮಕ್ಕೆ ಸೇರಿದ ಭದ್ರತಾ ಕರ್ಮಚಾರಿಗಳನ್ನು ಇಂದಿರಾ ಗಾಂಧಿಯವರ ಸಮೀಪದ ಭದ್ರತೆಗೆ ನೇಮಿಸುವುದು ಬೇಡವೆಂಬ ಸಲಹೆಯನ್ನು ಗುಪ್ತಚರ ಸಂಸ್ಥೆಗಳು ಸಂಬಂಧ ಪಟ್ಟ ಮೇಲಧಿಕಾರಿಗಳಿಗೆ ತಿಳಿಸಿಯಾಗಿತ್ತು. ಮೇಲಧಿಕಾರಿಗಳು ಸಿಖ್ ಕರ್ಮಚಾರಿಗಳನ್ನು ಇಂದಿರಾ ಗಾಂಧಿಯವರ ಸಮೀಪದ ಭದ್ರತೆಯ ಪಡೆಗಳಿಂದ ದೂರವಿಡುವ ವ್ಯವಸ್ಥೆ ಮಾಡಬೇಕಾದ ಸಮಯದಲ್ಲಿ, ಇಂದಿರಾ ಗಾಂಧಿಯವರ ನಿವಾಸದ ಭದ್ರತೆಯ ಕರ್ತವ್ಯದ ಮೇಲಿದ್ದ ಸಬ್ ಇನ್ಸ್ಪೆಕ್ಟರುಗಳಾದ ಬೆಅಂತ್ ಸಿಂಗ್ ಮತ್ತು ಬಲಬೀರ್ ಸಿಂಗ್ ಇಬ್ಬರೂ, ಇಂದಿರಾ ಗಾಂಧಿಯವರ ಆಪ್ತ ಕಾರ್ಯದರ್ಶಿ ಆರ್.ಕೆ.ಧವನ್ ರವರನ್ನು ಸಂಪರ್ಕಿಸಿ, ತಾವುಗಳು ಪ್ರಾಮಾಣಿಕರೆಂದು, ಕರ್ತವ್ಯ ಲೋಪ ಮಾಡುವವರಲ್ಲವೆಂದು ಮತ್ತು ತಮ್ಮನ್ನು ಇಂದಿರಾ ಗಾಂಧಿಯವರ ನಿವಾಸದ ಭದ್ರತಾ ಕರ್ತವ್ಯದಿಂದ ದೂರಮಾಡದಂತೆ ವಿನಂತಿಸಿಕೊಂಡರು. ಸಿಖ್ ಭದ್ರತಾ ಕರ್ಮಚಾರಿಗಳನ್ನು ಇಂದಿರಾ ಗಾಂಧಿಯವರ ಸಮೀಪದ ಭದ್ರತೆಯ ಪಡೆಗಳಿಂದ ದೂರ ಸರಿಸಿದರೆ, ಅದು ಸಿಖ್ಖರನ್ನು ಬೇಧ ಭಾವದಿಂದ ನೋಡಿದಂತಾಗುತ್ತದೆ ಎಂದು ಪರಿಗಣಿಸಿದ ಆರ್.ಕೆ.ಧವನ್ ರವರು, ಬೆಅಂತ್ ಸಿಂಗ್ ಮತ್ತು ಬಲಬೀರ್ ಸಿಂಗರನ್ನು ಇಂದಿರಾ ಗಾಂಧಿಯವರ ಸಮೀಪದ ಭದ್ರತಾ ಕರ್ತವ್ಯದಿಂದ ಬೇರ್ಪಡಿಸದಂತೆ ಶಿಫಾರಿಸು ಮಾಡಿದರು. ಸಿಖ್ ಪೊಲೀಸ್ ಕರ್ಮಚಾರಿಗಳನ್ನು ದೂರ ಸರಿಸದ ಔದಾರ್ಯದ ನಿರ್ಧಾರ ಇಂದಿರಾ ಗಾಂಧಿಯವರದೇ ಎಂದು ಕೆಲವರು ಹೇಳಿದರೂ, ವಾಸ್ತವದಲ್ಲಿ ಅದು ಆರ್.ಕೆ. ಧವನ್ ರವರ ನಿರ್ಧಾರವಾಗಿತ್ತು.  ಮುಂದೆ ಅದೇ ನಿರ್ಣಯ ಘಾತಕವಾಗಿ ಪರಿಣಮಿಸಿ, ಇಂದಿರಾ ಗಾಂಧಿಯವರ ಸಮೀಪದ ಕರ್ತವ್ಯದಲ್ಲೇ ಉಳಿದ ಬೆಅಂತ್ ಸಿಂಗರಿಂದಲೇ ಇಂದಿರಾ ಹತ್ಯೆಯಾಗಿದ್ದು ದುರದೃಷ್ಟಕರ. ಆರ್.ಕೆ. ಧವನ್ ರವರ ಆ ನಿರ್ಣಯ ಸ್ವಾಭಾವಿಕವಾಗಿ ತನಿಖಾ ಸಮಿತಿಯ ಗಮನಕ್ಕೆ ಬಂದಿತ್ತು.  'ಅನುಮಾನದ ಸೂಜಿ' ಆರ್.ಕೆ.ಧವನ್ ರವರ ಕಡೆಗೂ ತಿರುಗಿದ್ದು, ಅವರ ವಿರುದ್ಧವೂ ತನಿಖೆಯಾಯಿತು. ಸಿಖ್ ಕರ್ಮಚಾರಿಗಳನ್ನು ಇಂದಿರಾ ಗಾಂಧಿಯವರ ಸಮೀಪದ ಭದ್ರತಾ ಕರ್ತವ್ಯದ ಮೇಲೆ ಉಳಿಸಿಕೊಂಡ ನಿರ್ಣಯ ಆರ್.ಕೆ.ಧವನ್ ರದ್ದಾಗಿತ್ತೇ ಹೊರತು, ಹತ್ಯೆಯಾದ ದಿನ ಎರಡು ಸಿಖ್ ಕರ್ಮಚಾರಿಗಳನ್ನು ಪಕ್ಕ ಪಕ್ಕವೇ ನೇಮಿಸಿದ್ದರಲ್ಲಿ, ಅವರ ಪಾತ್ರವಿರಲಿಲ್ಲ ಎಂಬ ವಿಷಯವನ್ನು ಮನಗಂಡ ತನಿಖಾ ಸಮಿತಿ ಆರ್.ಕೆ.ಧವನ್ ರನ್ನು ದೋಷಾರೋಪದಿಂದ ವಿಮುಕ್ತಗೊಳಿಸಿತು. 

ಸಿಖ್ ಭದ್ರತಾ ಕರ್ಮಚಾರಿಗಳನ್ನು ಇಂದಿರಾ ಗಾಂಧಿಯವರ ಸಮೀಪದ ಭದ್ರತಾ ಕರ್ತವ್ಯದಿಂದ ದೂರವಿಡುವಂತೆ, ಗುಪ್ತಚರ ಸಂಸ್ಥೆಗಳು ಸಲಹೆ ನೀಡಿದ್ದರೂ, ಆ ವಿಷಯವನ್ನು ಇಂದಿರಾ ಗಾಂಧಿಯವರೊಂದಿಗೆ ಯಾವ ಉನ್ನತ ಅಧಿಕಾರಿಯೂ ಕೂಲಂಕುಷವಾಗಿ ಚರ್ಚಿಸದಿಲ್ಲದ್ದು, ಅಂದಿನ ಭದ್ರತಾ ವ್ಯವಸ್ಥೆ ಎಸಗಿದ ಮಹಾಪರಾಧವೆಂದೇ ಹೇಳಬಹುದು. ಆರ್.ಕೆ.ಧವನ್ ರ ನಿರ್ಧಾರವನ್ನು ಬದಿಗೊತ್ತಿ, ಸಿಖ್ ಭದ್ರತಾ ಕರ್ಮಚಾರಿಗಳನ್ನು ದೂರವಿಡುವ ಕಾರ್ಯವನ್ನು ಉನ್ನತ ಭದ್ರತಾ ಅಧಿಕಾರಿಗಳು ಮಾಡಬಹುದಿತ್ತು. ಹಾಗಾಗದಿದ್ದದ್ದು ಇಂದಿರಾ ಗಾಂಧಿಯವರ ಪಾಲಿಗೆ ಘಾತಕವಾಗಿ ಪರಿಣಮಿಸಿದ್ದು ಈಗ ಇತಿಹಾಸ. 

ಭದ್ರತಾ ವ್ಯವಸ್ಥೆಯ ಮತ್ತೊಂದು ಘಾತಕ ಲೋಪವೆಂದರೆ, ಹಂತಕ ಸತ್ವಂತ ಸಿಂಗನನ್ನು ಮತ್ತೊಬ್ಬ ಹಂತಕ ಬೆಅಂತ್ ಸಿಂಗನ ಪಕ್ಕವೇ ಕರ್ತವ್ಯಕ್ಕೆ ನೇಮಿಸಿದ್ದು. ಆ ದಿನ, ಅಂದರೆ ೩೧ ಅಕ್ಟೋಬರ್ ೧೯೮೪ರಂದು ಸತ್ವಂತ ಸಿಂಗನ ಕರ್ತವ್ಯವಿದ್ದದ್ದು, ಇಂದಿರಾ ಗಾಂಧಿಯವರ ಹತ್ಯೆಯಾದ ನಿವಾಸದಲ್ಲಲ್ಲ.  ಅಂದು ಸತ್ವಂತ ಸಿಂಗನ ಕರ್ತವ್ಯವಿದ್ದದ್ದು ಇಂದಿರಾ ಕಚೇರಿ ಇದ್ದ ಅಕ್ಬರ್ ರಸ್ತೆಯ ಆವರಣದಲ್ಲಿ. ಅಂದಿನ ಅವನ ನೇಮಕವನ್ನು ಇಂದಿರಾ ಕಛೇರಿಯಿದ್ದ ಅಕ್ಬರ್ ರಸ್ತೆಯ ಆವರಣದಿಂದ, ಸಫ್ದಾರ್ಜನ್ಗ್ ರಸ್ತೆಯ ಇಂದಿರಾ ನಿವಾಸದ ಕಡೆಗೆ ಬದಲಿಸಿದ ನಿರ್ಧಾರ ಯಾರದೆಂಬುದು ಇಂದಿಗೂ ನಿಗೂಢ! ಕೆಲವರು ಹೇಳುವ ಪ್ರಕಾರ ನಡೆದ ಆ ಬದಲಾವಣೆಗೆ ಹತ್ಯೆಯ ಆರೋಪಿ ಸಬ್ ಇನ್ಸ್ಪೆಕ್ಟರ್ ಬಲಬೀರ್ ಸಿಂಗ್ ಕಾರಣರೆಂಬುದನ್ನು ನಂಬಲಸಾಧ್ಯ. ಕೇವಲ ಒಬ್ಬ ಸಬ್ ಇನ್ಸ್ಪೆಕ್ಟರ್ಗೆ ಅಷ್ಟೊಂದು ದೊಡ್ಡ ನಿರ್ಣಯದ ಅಧಿಕಾರವಿತ್ತೆ ಎಂಬುದು ಒಂದು ದೊಡ್ಡ ಪ್ರಶ್ನೆ. ಇಂದಿರಾ ನಿವಾಸದ ಕರ್ತವ್ಯದ ಅವಕಾಶವನ್ನು ಗಿಟ್ಟಿಸಿಕೊಂಡ ಸತ್ವಂತ ಸಿಂಗ್, ತನ್ನ ನಿಕಟವರ್ತಿ ಬೆಅಂತ್ ಸಿಂಗನ ಪಕ್ಕದಲ್ಲೇ ಕರ್ತವ್ಯ ಸ್ಥಾನವನ್ನು ಗಿಟ್ಟಿಸಿಕೊಂಡದ್ದು ಮತ್ತೊಂದು ಆಶ್ಚರ್ಯಜನಕ ವಿಷಯ. ಒಂದು ಮೂಲದ ಪ್ರಕಾರ ಸತ್ವಂತ, ತನಗೆ ಹೊಟ್ಟೆ ಸರಿ ಇಲ್ಲದಿದ್ದು, ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾದ ಅವಶ್ಯಕತೆ ಇದೆ ಎಂದು ಬೇಡಿ, ಬೆಅಂತ್ ಸಿಂಗನ ಪಕ್ಕದ ಸ್ಥಾನವನ್ನು ಗಿಟ್ಟಿಸಿದ್ದ ಎಂಬುದು ಮತ್ತೊಂದು ಸೋಜಿಗದ ವಿಷಯ. ಇಬ್ಬರೂ ಹಂತಕರು ಪಕ್ಕ ಪಕ್ಕವೇ ಇರದಿದ್ದರೆ, ಉಳಿದ ಒಬ್ಬ ಹಂತಕನಿಗೆ ಹತ್ಯೆ ಮಾಡುವ ಧೈರ್ಯ ಇಲ್ಲದಿರುವ ಸಾಧ್ಯತೆ ಇತ್ತು. ಎದುರಿಗಿರುವ ಬೇರೊಬ್ಬ ಭದ್ರತಾ ಸಿಬ್ಬಂಧಿ ಮಧ್ಯ ಪ್ರವೇಶಿಸಿ, ಹತ್ಯೆಯನ್ನು ತಪ್ಪಿಸುವ ಪ್ರಯತ್ನಪಟ್ಟರೆ ಏನಾದಿತೂ ಎಂಬ ಅನುಮಾನ ಹಂತಕನ ಧೈರ್ಯವನ್ನು ಹತ್ತಿಕ್ಕುವ ಸಾಧ್ಯತೆ ಇರುತ್ತಿತ್ತು. ಒಟ್ಟಿನಲ್ಲಿ ಅಂದು ಸತ್ವಂತ ಸಿಂಗ್ ಗಿಟ್ಟಿಸಿಕೊಂಡ ಬದಲಾವಣೆಗಳು, ಅಂದಿನ ಪ್ರಧಾನಿ ಅವರ ಸಮೀಪದ ಭದ್ರತಾ ಜವಾಬ್ದಾರಿಯನ್ನು ಹೊತ್ತ ಭದ್ರತಾ ಸಂಸ್ಥೆಗಳು ಎಷ್ಟರ ಮಟ್ಟಿಗೆ ಬೇಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದವು ಎಂಬುದಕ್ಕೆ ಸಾಕ್ಷಿ.  ಭದ್ರತಾ ಸಂಸ್ಥೆಗಳ ಬೇಜವಾಬ್ದಾರಿತನವೇ ಇಂದಿರಾ ಗಾಂಧಿಯವರ ಹತ್ಯೆಗೆ ಕಾರಣವಾದದ್ದು ಮಾತ್ರ ದುರದೃಷ್ಟಕರ.  

ಸ್ವತಂತ್ರ ಭಾರತದಲ್ಲಿ ಮೂರು ಭಾರೀ ಹತ್ಯೆಗಳು ನಡೆದಿವೆ.  ೧೯೪೮ರ ಜನವರಿ ೩೦ರಂದು ನಡೆದ ಮಹಾತ್ಮಾ ಗಾಂಧಿಯವರ ಹತ್ಯೆ, ೧೯೮೪ರ ಅಕ್ಟೋಬರ್ ೩೧ರಂದು ನಡೆದ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ಮತ್ತು ೧೯೯೧ರ ಮೇ ೨೧ರಂದು ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ, ಇವುಗಳ ನಡುವೆ ಇದ್ದ ಆಘಾತಕಾರಿ ಸಾಮ್ಯವೆಂದರೆ  ಗುಪ್ತಚರ ಹಾಗೂ ಭದ್ರತಾ ಸಂಸ್ಥೆಗಳ ಬೇಜಾಬ್ದಾರಿತನ ಮತ್ತು ವೈಫಲ್ಯ. ಮೂರೂ ಹತ್ಯೆಗಳ ಖಚಿತ ಮುನ್ಸೂಚನೆ ಗುಪ್ತಚರ ಸಂಸ್ಥೆಗಳಿಗಿದ್ದರೂ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದದ್ದು, ಹಂತಕರ ಕುಕೃತ್ಯದ ಹಾದಿಯನ್ನು ಸುಗಮಗೊಳಿಸಿತ್ತು. ಮಹಾತ್ಮಾ ಗಾಂಧಿಯವರ ಜೀವದ ಮೇಲೆ ಏಳು ಬಾರಿ ಹತ್ಯೆಯ ಪ್ರಯತ್ನಗಳು ನಡೆದಿದ್ದರೂ, ಎಚ್ಚರಗೊಳ್ಳದ ಭದ್ರತಾ ಸಂಸ್ಥೆಗಳೂ ಅವರ ಹತ್ಯೆಗೆ ಕಾರಣರೆಂದರೆ ತಪ್ಪಲ್ಲ. ಮಹಾತ್ಮಾ ಗಾಂಧಿಯವರ ಹತ್ಯೆಗೆ ಹತ್ತು ದಿನಗಳ  ಮುಂಚೆ, ಅಂದರೆ ೧೯೪೮ರ ಜನವರಿ ೨೦ರಂದು ಬಿರ್ಲಾರ ಮನೆಯಲ್ಲೇ, ಅವರ ಹತ್ಯೆಗೆ ಪ್ರಯತ್ನ ನಡೆದು ವಿಫಲವಾದಾಗ, ಅಂದು ಮದನಲಾಲ್ ಪಹ್ವಾ ಎಂಬುವರನ್ನು ಬಂಧಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಆತನ ಹೇಳಿಕೆಯ ಮೇರೆಗೆ ಮತ್ತೊಬ್ಬ ಸಹಚರನನ್ನು ಹುಡುಕುತ್ತಾ ಸಮೀಪದ ಹೋಟೆಲ್ ಒಂದರಲ್ಲಿ ಹುಡುಕಾಟ ನಡೆಸಿದಾಗ ನಾಥುರಾಮ್ ಗೋಡ್ಸೆಗೆ ಸೇರಿದ್ದು ಎನ್ನಲಾದ ಅಂಗಿಯೊಂದು ದೊರಕ್ಕಿದ್ದರೂ, ಅವನನ್ನು ಬಂಧಿಸದಿದ್ದದ್ದು ತನಿಖಾ ದಳಗಳ ವೈಫಲ್ಯವಲ್ಲದೆ ಮತ್ತೇನು? 

ಸ್ವರ್ಣ ಮಂದಿರಕ್ಕೆ ಸೇನೆಯನ್ನು ಕಳುಹಿಸಿದ್ದು ಇಂದಿರಾ ಗಾಂಧಿಯವರ ಹತ್ಯೆಗೆ ಕಾರಣವಾದರೆ,        ಶ್ರೀ ಲಂಕಾದಲ್ಲಿ ತಮಿಳ್ ಉಗ್ರರ ವಿರುದ್ಧ ಹೋರಾಡಲು ಭಾರತೀಯ ಸೇನೆಯನ್ನು ಕಳುಹಿಸಿದ್ದು ರಾಜೀವ್ ಗಾಂಧಿಯವರ ಹತ್ಯೆಗೆ ಕಾರಣವಾಗಿದ್ದು ಮಾತ್ರ ದೊಡ್ಡ ವಿಪರ್ಯಾಸವೇ ಸರಿ. ಆ ಕಾರಣಕ್ಕಾಗಿ ರಾಜೀವ್ ಗಾಂಧಿಯವರ ಮೇಲೆ ತೂಗುಗತ್ತಿ ನೇತಾಡುತ್ತಿದ್ದದ್ದು ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಡಿಸೆಂಬರ್ ೧೯೯೦ರ ಸಮಯದಲ್ಲೇ ರಾಜೀವ್ ಗಾಂಧಿ ಹತ್ಯೆಯ ಮುನ್ಸೂಚನೆಯನ್ನು ಪಿ.ಎಲ್.ಓ. ನಾಯಕ ಯಾಸೀರ್ ಅರಾಫತ್ ಪತ್ರದ ಮೂಲಕ ಭಾರತ ಸರಕಾರಕ್ಕೆ ರವಾನಿಸಿದ್ದು ಈಗ ಇತಿಹಾಸ. ಪ್ರಧಾನಿಯಾಗಿದ್ದವರೆಗೆ ರಾಜೀವ್ ಗಾಂಧಿ ಮತ್ತವರ ಕುಟುಂಬದವರಿಗೆ ಎಸ್.ಪಿ.ಜಿ.ಭದ್ರತೆ ಇತ್ತು. ೧೯೮೯ರ ಚುನಾವಣೆಯನಂತರ ತಮ್ಮ ಪ್ರಧಾನಿ ಹುದ್ದೆಯನ್ನು ಕಳೆದುಕೊಂಡ ರಾಜೀವ್ ಗಾಂಧಿ ಮತ್ತವರ ಕುಟುಂಬಕ್ಕೆ ಎಸ್.ಪಿ.ಜಿ.ಭದ್ರತೆ ತಪ್ಪಿದ್ದು, ಅವರ ಆಪ್ತರೂ  ಮತ್ತು ಅವರ ಸಂಪುಟದಲ್ಲಿ ಆಂತರಿಕ ಭದ್ರತೆಯ ಸಚಿವರೂ ಆಗಿದ್ದ ಪಿ.ಚಿದಂಬರಂರವರಿಗೆ ತಿಳಿದಿತ್ತು. ರಾಜೀವ್ ಗಾಂಧಿಯವರ ಹತ್ಯೆಯಾದಾಗ, ಕಾಂಗ್ರೆಸ್ ಪಕ್ಷದ ಕೃಪೆಯಲ್ಲೇ ರಚನೆಗೊಂಡ ಚಂದ್ರಶೇಖರ್  ಸರಕಾರವಿತ್ತು. ಆ ಸರಕಾರದೊಂದಿಗೆ ಚಿದಂಬರಂ ಅವರಂತಹ ಚಾಣಾಕ್ಷರು ಮಾತನಾಡಿ ರಾಜೀವ್ ಗಾಂಧಿಯವರಿಗೆ ಎಸ್.ಪಿ.ಜಿ. ರಕ್ಷಣೆ ಮತ್ತೆ ದೊರೆಯುವಂತೆ ಮಾಡಬಹುದಿತ್ತು. ಹಾಗಾಗದಿದ್ದದ್ದೂ ರಾಜೀವ್ ಗಾಂಧಿಯವರ ಹತ್ಯೆಗೆ ಕಾರಣವಾಗಿದ್ದು ದುರದೃಷ್ಟಕರ. 

ಈ ಮೂರೂ ಮಹಾನ್ ವ್ಯಕ್ತಿಗಳ ಹತ್ಯೆಯ ಸಂಚಿನ ಸಾಧಕ ಬಾಧಕಗಳ ಅಧ್ಯಯನವನ್ನು,  ಎಲ್ಲಾ ಭದ್ರತಾ ಸಂಸ್ಥೆಗಳ ಅಧಿಕಾರಿಗಳ ತರಬೇತಿ ಸಮದಲ್ಲಿ ಕಡ್ಡಾಯಗೊಳಿಸಬೇಕಾದುದು ಸೂಕ್ತ.  ಆದರೂ ಆ ರೀತಿಯ ಅಧ್ಯಯನ ಮತ್ತು ಚರ್ಚೆ, ಸಂಬಂಧ ಪಟ್ಟ ಅಧಿಕಾರಿಗಳ  ತರಬೇತಿ ಸಮಯದಲ್ಲಿ ಆಗುತ್ತಿಲ್ಲವೆಂಬುದು ಹಲವು ಹಿರಿಯ ಅಧಿಕಾರಿಗಳ ಅಳಲು. ಈ ಮೂರು ಮಹಾನ್ ವ್ಯಕ್ತಿಗಳ ಹತ್ಯೆಯನಂತರುವೂ ಭಾರತದಲ್ಲಿ ಭಾರಿ ಅನಾಹುತಗಳು ನಡೆದಿಲ್ಲವೆಂದೇನಲ್ಲ. ಭಾರತ ಮತ್ತದರ ಎಲ್ಲಾ ಪ್ರಜೆಗಳು ಸದಾ  ಸುರಕ್ಷಿತವಾಗಿರಲಿ ಎಂಬುದು ಎಲ್ಲರ ಆಶಯ. 

೧೯ ನವೆಂಬರ್ ೧೯೧೭ರಂದು ಜನಿಸಿದ ಇಂದಿರಾ ಪ್ರಿಯದರ್ಶಿನಿ ಗಾಂಧಿಯವರು  ಸುಮಾರು ೧೬ ವರ್ಷಗಳ ಕಾಲ ಭಾರತದ ಪ್ರಧಾನ ಮಂತ್ರಿಯಾಗಿದ್ದರು. ಇಂದಿರಾ ಗಾಂಧಿಯವರು ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್ ನೆಹರುರವರ ಏಕೈಕ ಪುತ್ರಿಯಾಗಿದ್ದರು.  ಇಂದಿರಾ ಗಾಂಧಿಯವರು ಅವರನಂತರದ    ಪ್ರಧಾನಿ ರಾಜೀವ್ ಗಾಂಧಿಯವರ ಮಾತೆಯವರೂ ಹೌದು. 

ನೆಹರು ಅವರನಂತರ ಧೀರ್ಘಕಾಲ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು, ನೆಹರುರವರು ಜೀವಂತವಾಗಿದ್ದ ಕಾಲದಲ್ಲೇ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು.  ನೆಹರುರವರು ೧೯೬೪ರಲ್ಲಿ ನಿಧನರಾದಾಗ, ಅವರನಂತರ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾದರು.  ಶಾಸ್ತ್ರಿಯವರ ಸಂಪುಟದಲ್ಲಿ ಇಂದಿರಾ ಗಾಂಧಿ ವಾರ್ತಾ ಮತ್ತು ಪ್ರಸಾರ ಮಂತ್ರಿಯಾಗಿದ್ದರು.  ೧೯೬೬ರಲ್ಲಿ ಶಾಸ್ತ್ರಿಯವರು ನಿಧನರಾದಾಗ, ಇಂದಿರಾ ಗಾಂಧಿಯವರು ನೂತನ ಪ್ರಧಾನಿಯಾಗಿ ಆಯ್ಕೆಗೊಂಡರು. ೧೯೬೬ರ ಅವಧಿಯಲ್ಲಿ ಭಾರತ ಸಾಧಿಸಿದ 'ಹಸಿರು ಕ್ರಾಂತಿ'ಯ ರೂವಾರಿ ಇಂದಿರಾ ಗಾಂಧಿಯವರಾಗಿದ್ದರು. ಆಹಾರದಲ್ಲಿ ಸ್ವಾವಲಂಬನೆಯನ್ನು ಭಾರತ ಸಾಧಿಸಿದ್ದು ಇಂದಿರಾ ಗಾಂಧಿಯವರ ಆಡಳಿತ ಕಾಲದಲ್ಲೇ ಎಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ. 

ಭಾರತ ಸ್ವಾತಂತ್ರ್ಯ ಗಳಿಸಿದನಂತರ, ಸ್ವಾತಂತ್ರ್ಯ ಭಾರತದಡಿ ಸಿಖ್ಖರಿಗೊಂದು ಪ್ರತ್ಯೇಕ ರಾಜ್ಯ ಬೇಕೆಂಬುದು ಸಿಖ್ ಸಮುದಾಯದ ಪ್ರಮುಖ ಬೇಡಿಕೆಯಾಗಿತ್ತು. ೦೧ ನವೆಂಬರ್ ೧೯೬೬ರಂದು ಸಿಖ್ಖರ ಪ್ರಾಬಲ್ಯವಿದ್ದ ನೂತನ ಪಂಜಾಬ್ ರಾಜ್ಯ ಉದಯವಾಗಿದ್ದಕ್ಕೆ ನಾಂದಿ ಹಾಡಿದವರೇ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು. ಅದೇ ಸಿಖ್ ಸಮುದಾಯದ ಪ್ರತ್ಯೇಕತೆಯ ಹೋರಾಟಕ್ಕೆ ಇಂದಿರಾ ಗಾಂಧಿಯವರೇ ಬಲಿಯಾದದ್ದು ಒಂದು ದೊಡ್ಡ ವಿಪರ್ಯಾಸ. 

೧೯೬೭ರ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದ ಇಂದಿರಾಜಿಯವರು ಮತ್ತೆ ಪ್ರಧಾನಿಯಾದರು. ಸ್ವಂತ ಬಲದ ಮೇಲೆ ಪ್ರಧಾನಿಯಾಗಿದ್ದ ಅವರು ಹಲವು ದೃಢ ನಿರ್ಧಾರಗಳನ್ನು ತೆಗೆದುಕೊಂಡರು.  ಅವುಗಳಲ್ಲಿ ಹದಿನಾಲ್ಕು ಬ್ಯಾಂಕುಗಳ ರಾಷ್ಟ್ರೀಕರಣವೂ ಒಂದು. ಪರಿಣಾಮಕಾರಿಯಾದ ಬ್ಯಾಂಕುಗಳ ರಾಷ್ಟ್ರೀಕರಣ, ಇಡೀ ರಾಷ್ಟ್ರದಲ್ಲಿ ಬ್ಯಾಂಕುಗಳ ಶಾಖಾಜಾಲದ ವಿಸ್ತರಣೆಗೆ ನಾಂದಿಯಾಗಿತ್ತು. ಬ್ಯಾಂಕ್ ಸೇವೆಯನ್ನು ಜನರ ಮನೆ ಬಾಗಿಲಿಗೆ ಕೊಂಡೊಯುವಲ್ಲಿ ಯಶಸ್ವಿಯಾದ ರಾಷ್ಟ್ರೀಕರಣದ ಪ್ರಕ್ರಿಯೆ, ಬಡತನ ನಿವಾರಣೆಗೆ ಕೂಡ ದೊಡ್ಡ ಕೊಡುಗೆಯನ್ನು ನೀಡಿತು. 

೧೯೭೧ರ ಸಾರ್ವತ್ರಿಕ ಚುನಾವಣೆಯಲ್ಲಿ 'ಗರೀಬೀ ಹಠಾವೋ' ಎಂಬ ಘೋಷಣೆಯೊಂದಿಗೆ ಇಂದಿರಾ ಗಾಂಧಿಯವರು ಭಾರತದೇಶದ ಜನತೆಯ ಮುಂದೆ ಮತಗಳನ್ನು ಬೇಡಿದರು. ಅಭೂತಪೂರ್ವ ವಿಜಯ ಸಾಧಿಸಿದ ಅವರು ಮತ್ತೊಮ್ಮೆ ಪ್ರಧಾನಿಯಾದರು. ಅದೇ ವರ್ಷದಲ್ಲೇ ಇಂದಿರಾ ಗಾಂಧಿಯವರು ಪಾಕಿಸ್ತಾನದೊಂದಿಗೆ ಘೋರ ಯುದ್ಧವನ್ನು ಮಾಡಬೇಕಾಯಿತು. ಪಶ್ಚಿಮ ಬಂಗಾಳದ ಮಗ್ಗುಲ ಅಂದಿನ  ಪೂರ್ವ ಪಾಕಿಸ್ತಾನದ ಸ್ವಾತಂತ್ರದ ಹೋರಾಟವನ್ನು ಬೆಂಬಲಿಸಿ ಪಾಕಿಸ್ತಾನದ ವಿರುದ್ಧ ಹೋರಾಡಿ ಜಯಗಳಿಸಿದ ಇಂದಿರಾಜಿಯವರು ಬಾಂಗ್ಲಾದೇಶದ ಉದಯಕ್ಕೆ ಕಾರಣರಾದರು. 

ಚುನಾವಣಾ ಅಕ್ರಮದ ಮೊಕದ್ದಮೆಯೊಂದರಲ್ಲಿ ಕೋರ್ಟ್ ನೀಡಿದ ತೀರ್ಪಿನಿಂದ ತಮ್ಮ ಲೋಕ ಸಭಾ ಸದಸ್ಯತ್ವವನ್ನು ಕಳೆದುಕೊಂಡ ಇಂದಿರಾ ಗಾಂಧಿಯವರು, ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿ ತಮ್ಮ ಅಧಿಕಾರವನ್ನು ಮುಂದುವರೆಸಿದರು. ದೇಶದ ಎಲ್ಲಾ ಪ್ರಮುಖ ವಿರೋಧ ಪಕ್ಷದ ನಾಯಕರುಗಳನ್ನು ಜೈಲಿಗಟ್ಟಿದ  ಅವರು,  ಭಾರತೀಯರ ಮೂಲಭೂತ ಹಕ್ಕುಗಳನ್ನು  ಮೊಟಕುಗೊಳಿಸಿದರು. ದುರಾಡಳಿತವೆಂಬ ಹಣೆಪಟ್ಟಿ ಹೊತ್ತ ಅವರು ೧೯೭೭ರ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಯಿತು. ಹಾಗಾಗಿ ೧೯೭೭ರ ಚುನಾವಣೆಯನ್ನು ಸೋತ ಇಂದಿರಾ ಗಾಂಧಿ ತಮ್ಮ ಅಧಿಕಾರವನ್ನು ಕಳೆದುಕೊಂಡರು. 

ಛಲಬಿಡದೆ ವಿರೋಧ ಪಕ್ಷದ ನಾಯಕಿಯಾಗಿ ಕೆಲಸ ಮಾಡಿದ ಇಂದಿರಾ ಗಾಂಧಿಯವರು, ೧೯೮೦ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಗೊಂಡರು.  ೧೯೮೦ರಲ್ಲಿ ವಿಮಾನ ಅಪಘಾತವೊಂದರಲ್ಲಿ ತಮ್ಮ ಕಿರಿಯ ಪುತ್ರ ಸಂಜಯ್ ಗಾಂಧಿಯವರನ್ನು ಕಳೆದುಕೊಂಡ ಅವರು, ತಮ್ಮ ಹಿರಿಯ ಪುತ್ರ ರಾಜೀವ್ ಗಾಂಧಿಯವರನ್ನು ರಾಜಕೀಯಕ್ಕೆ ಕರೆತಂದರು. ೧೯೮೦ರಲ್ಲಿ ಆರಂಭವಾದ ಪ್ರತ್ಯೇಕವಾದಿ ಸಿಖ್ಖರ ಸಮರ ಇಂದಿರಾ ಗಾಂಧಿಯವರಿಗೆ ನುಂಗಲಾರದ ತುತ್ತಾಯಿತು. ಪಂಜಾಬಿನ ಅಮೃತ್ ಸರದ ಸ್ವರ್ಣ ಮಂದಿರವನ್ನು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡ ಸಿಖ್ ಉಗ್ರರು ಪಂಜಾಬಿನಾದ್ಯಂತ ಕೊಲೆ, ಸುಲಿಗೆಗಳ ಅವಿರತ ಸರಣಿಯನ್ನೇ ನಡೆಸಿ, ಆಡಳಿತಾರೂಢರನ್ನು ಕಂಗೆಡಿಸಿದರು. ಅನ್ಯ ಮಾರ್ಗವಿಲ್ಲದೆ ಇಂದಿರಾ ಗಾಂಧಿಯವರು ಸ್ವರ್ಣ ಮಂದಿರವನ್ನು ಉಗ್ರರಿಂದ ವಿಮುಕ್ತಗೊಳಿಸಲು ಸೇನೆಯನ್ನು ಕಳುಹಿಸಬೇಕಾಗಿಬಂತು. 'ಆಪರೇಷನ್ ಬ್ಲೂ ಸ್ಟಾರ್' ಹೆಸರಿನಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿ, ಉಗ್ರರಿಂದ ಸ್ವರ್ಣ ಮಂದಿರ ವಿಮುಕ್ತಗೊಂಡರೂ, ಸ್ವರ್ಣ ಮಂದಿರದ ಅತಿ ಮುಖ್ಯ ಮಂದಿರವಾದ 'ಅಕಾಲ್ ತಖ್ತ್'ಗೆ ಉಂಟಾದ ಹಾನಿ, ಸಮಸ್ತ ಸಿಖ್ ಸಮುದಾಯವನ್ನು ಕೆರಳಿಸಿತ್ತು. ಸೇನಾ ಕಾರ್ಯಾಚರಣೆ ನಡೆಸಿದ ಇಂದಿರಾ ಗಾಂಧಿಯವರ ಮೇಲೆ ಘೋರ ಪ್ರತೀಕಾರದ ಭಾವ ಸಮಸ್ತ ಸಿಖ್ ಸಮುದಾಯದ ಮನಗಳಲ್ಲಿ ಉಂಟಾಗಿತ್ತು. ಸೇನಾ ಕಾರ್ಯಾಚರಣೆ ನಡೆಸಿದ ಐದು ತಿಂಗಳುಗಳೊಳಗೆ ಇಂದಿರಾ ಗಾಂಧಿಯವರ ಹತ್ಯೆ ಅವರ ಸಿಖ್ ಅಂಗರಕ್ಷಕರಿಂದಲೇ ಆಗಿದ್ದು ಈಗ ಇತಿಹಾಸ. 

ಬಡವರ ಮತ್ತು ಹಿಂದುಳಿದವರ ನಾಯಕಿಯಾಗಿ ತಮ್ಮನ್ನು ಗುರುತಿಸಿಕೊಂಡ ಇಂದಿರಾ ಗಾಂಧಿಯವರು ಇಂದಿಗೂ ಭಾರತೀಯರ ಮನೆಮಾನಸಗಳಲ್ಲಿ ಉಳಿದುಹೋಗಿದ್ದಾರೆ. ಇಂದಿರಾ ಗಾಂಧಿಯವರ ಕಾಲದ ಅಮೇರಿಕಾದ ಖ್ಯಾತ ರಾಜತಂತ್ರಜ್ಞ ಹೆನ್ರಿ ಕಿಸ್ಸಿಂಜರ್ ಇಂದಿರಾ ಗಾಂಧಿಯವರ ದಿಟ್ಟ ನಿರ್ಧಾರಗಳನ್ನು ಪ್ರಶಂಸಿಸುತ್ತಾ ಅವರನ್ನು 'ಐರನ್ ಲೇಡಿ, ಉಕ್ಕಿನ ಮಹಿಳೆ' ಎಂದು ಕರೆದಿದ್ದರು. ೧೯೯೯ರಲ್ಲಿ ಬಿ.ಬಿ.ಸಿ.ಸಂಸ್ಥೆ ನಡೆಸಿದ ಸಮೀಕ್ಷೆಯೊಂದರಲ್ಲಿ ಇಂದಿರಾ ಗಾಂಧಿಯವರನ್ನು 'ಸಹಸ್ರಮಾನದ ಮಹಿಳೆ' ಎಂದು ಆಯ್ಕೆಮಾಡಲಾಯಿತು.