Saturday 27 February 2021

೩. ಬಡವನ ಸೈಕಲ್

೩. ಬಡವನ ಸೈಕಲ್   



ಅಂದು ೨೦೨೦ರ ಮೇ ತಿಂಗಳ ಕಡೆ ವಾರದ ಸಮಯ. ಸುಮಾರು ಎರಡು ತಿಂಗಳ ಹಿಂದೆ ದೇಶಾದ್ಯಂತ ವಿಧಿಸಿದ ಲಾಕ್ಡೌನ್ ನಿರ್ಬಂಧದಿಂದ  ಗಳಿಸಿದ ಉಪಯೋಗಗಳ ಮಾಹಿತಿಯನ್ನು, ತನ್ನ ಲ್ಯಾಪ್ಟಾಪ್ ಕೆದಕುತ್ತಾ ರೋಹಿಣಿ ಕಲೆಹಾಕುತ್ತಿದ್ದಳು. ವಿಶ್ವದಲ್ಲೇ ಅತ್ಯಂತ ಕಠಿಣ ನಿರ್ಬಂಧನೆಗಳನ್ನೊಳಗೊಂಡ  ಲಾಕ್ಡೌನನ್ನು ಭಾರತ ವಿಧಿಸಿದ್ದರೂ, ಅದರ ಕೋವಿಡ್ ಪೀಡಿತರ ಸಂಖ್ಯೆ ಈಗಾಗಲೇ  ೧.೪ ಲಕ್ಷಗಳನ್ನೂ ಮೀರಿತ್ತು.  ವಿಶ್ವದ ದೇಶಗಳ ಕೋವಿಡ್ ಪಟ್ಟಿಯಲ್ಲಿ ಟರ್ಕಿಯನಂತರದ ೧೦ನೇ ಸ್ಥಾನ ಭಾರತದ್ದಾಗಿತ್ತು. 'ತಡವಾಗಿ ಕೋವಿಡ್ ಕಬಳಿಸಿದ್ದ ಭಾರತವನ್ನು ಅದೃಷ್ಟಶಾಲಿ ಎಂದೇ ಪರಿಗಣಿಸಬಹುದಿತ್ತು.  ಕೋವಿಡ್ ರೋಗಿಗಳ ಸಂಖ್ಯೆ ಕೇವಲ ೬೦೦ ಮಾತ್ರವಿದ್ದಾಗಲೇ ಲಾಕ್ಡೌನ್ ವಿಧಿಸಿದ್ದರೂ, ಪರಿಸ್ಥಿತಿ ಹೀಗೇಕೆ ಕೈಮೀರುತ್ತಿದೆ? ಎರಡು ತಿಂಗಳ ಲಾಕ್ಡೌನ್ಗಾಗಿ ದೇಶದ ಜನತೆ ಮಾಡಿದ ತ್ಯಾಗ ವ್ಯರ್ಥವಾಯ್ತೆ? ಮಾರಕ ವೈರಾಣುವಿನ  ಹರಡುವಿಕೆಯನ್ನು ತಡೆಹಿಡಿಯುವುದರಲ್ಲಿ ನಾವು ವಿಫಲರಾದೆವೆ?' ಎಂಬುದು ರೋಹಿಣಿಯ ಆತಂಕವಾಗಿತ್ತು. 

ಅವಳ ಗೆಳಯ ಡಾ. ಕಿರಣ್  ಇ-ಅಂಚೆ ಮುಖಾಂತರ ಕಳುಹಿಸಿದ್ದ ವಿವಿಧ ದೇಶಗಳ ಕೋವಿಡ್ ಪೀಡಿತರ ಅಂಕಿಅಂಶಗಳನ್ನು ಅವಲೋಕಿಸಿದಾಗಲೇ, ರೋಹಿಣಿಗೆ ನಿಜವಾದ ಪರಿಸ್ಥಿತಿಯ ಅರಿವಾಗಿದ್ದು. ಆ ಅಂಕಿಅಂಶಗಳು ಅಂದು ಕೆಳಕಂಡಂತ್ತಿದ್ದವು. 

ವಿಶ್ವಾದ್ಯಂತದ ೫೫ ಲಕ್ಷ ಕೋವಿಡ್ ಪೀಡಿತರ ಪೈಕಿ, ೧೬.೪೪ ಲಕ್ಷ (ಸುಮಾರು ೩೦%) ಪೀಡಿತರು ಅಮೆರಿಕದಲ್ಲೇ  ಇದ್ದರು. ಆ ದಿನಗಳಲ್ಲಿ ಭಾರತದಲ್ಲಿ ಪ್ರತಿನಿತ್ಯ ೭೦೦೦ ಹೊಸ ರೋಗಿಗಳ ಪತ್ತೆಯಾಗುತ್ತಿದ್ದು, ಒಟ್ಟು ಸಂಖ್ಯೆ ೧೫ ದಿನಗಳೊಳಗೆ ದ್ವಿಗುಣಗೊಳ್ಳುತ್ತಿತ್ತು. ಭಾರತದಲ್ಲಿ ಚೇತರಿಸಿಕೊಂಡವರ ಒಟ್ಟು ಸಂಖ್ಯೆ ಸುಮಾರು ೬೦,೦೦೦ (೪೩%)ವಾದರೆ, ಸಾವುಗಳ ಸಂಖ್ಯೆ ಸುಮಾರ ೪೦೦೦ (೨.೮%)ವಾಗಿತ್ತು. ಭಾರತದಲ್ಲಿನ ಕೋವಿಡ್ ಪರೀಕ್ಷಾ ಅನುಪಾತ ಪ್ರತಿ ೧೦೦೦ ಜನಸಂಖ್ಯೆಗೆ ಕೇವಲ ೨ ಮಾತ್ರವಿದ್ದದ್ದು, ಪೀಡಿತರ ಹಾಗು ಸಾವುಗಳ ಸಂಖ್ಯೆ ಇನ್ನೂ ಭಾರಿ ಪ್ರಮಾಣದಲ್ಲಿವೆಯೇನೋ ಎಂಬ ಆತಂಕಕ್ಕೆ ಕಾರಣವಾಗಿತ್ತು. ರಷ್ಯಾ, ಇಟಲಿ ಹಾಗೂ  ಅಮೇರಿಕಾಗಳ  ಪರೀಕ್ಷಾ ಅಂಕಿ-ಅಂಶಗಳ ಅನುಪಾತ ಪ್ರತಿ ಸಾವಿರ ಜನಸಂಖ್ಯೆಗೆ ಕ್ರಮವಾಗಿ ೬೦, ೫೬ ಮತ್ತು ೪೨ ಆಗಿದ್ದು, ಭಾರತವೇಕೆ ಹಿಂದೆ ಬಿದ್ದಿದೆ ಎಂಬುದು ರೋಹಿಣಿಯ ಕಳವಳವಾಗಿತ್ತು. 

ರೋಹಿಣಿ ತನ್ನ ಗೆಳಯ ಡಾ. ಕಿರಣ್ ಗೆ ಉತ್ತರಿಸುತ್ತಾ, 'ಭಾರತದಲ್ಲಿ ಕೋವಿಡ್ ಪರೀಕ್ಷಾ ಪರಿಕರಗಳು ಇನ್ನೂ ದುರ್ಲಭವಾಗಿದ್ದು, ಪ್ರಯಾಣದ ಹಿನ್ನೆಲೆಯುಳ್ಳವರು ಮತ್ತವರ ನೇರ ಮತ್ತು ಪರೋಕ್ಷ ಸಂಪರ್ಕವುಳ್ಳವರುಗಳನ್ನು ಮಾತ್ರ ಪರೀಕ್ಷೆಗೊಳಪಡಿಸುತ್ತಿರುವುದು ಸೂಕ್ತ. ಜೊತೆಗೆ, ಸತತ ಸಂಪರ್ಕದಲ್ಲಿರುವ ಕಾರಣ ಸೋಂಕಿನ ಸಾಧ್ಯತೆ ಹೆಚ್ಚಾಗಿರುವುದರಿಂದ ಕೊರೋನಾ ಸೇನಾನಿಗಳ ಮೇಲೂ  ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸುತ್ತಿರುವುದು ಸರಿ' ಎಂದು ವಾದಿಸಿದ್ದಳು.

ಡಾ. ಕಿರಣನ ಉತ್ತರ ರೋಹಿಣಿಯನ್ನು ಎಚ್ಚರಿಸುವಲ್ಲಿ ಹೆಚ್ಚು ಸಮರ್ಪಕವಾಗಿತ್ತು.  'ರೋಹಿಣಿ, ಈಗಾಗಲೇ ನಮ್ಮ ದೇಶದಲ್ಲಿ ಪ್ರತಿ ೧೦೦ ಪರೀಕ್ಷೆಗಳಿಗೆ, ೫ರಷ್ಟು ಕೋವಿಡ್ ರೋಗಿಗಳು ಪತ್ತೆಯಾಗುತ್ತಿದ್ದಾರೆ. ನಮ್ಮ ದೇಶದ ಹೊಸ ರೋಗಿಗಳ ಪತ್ತೆಯ ದರವನ್ನು ಅತ್ಯಂತ ಹೆಚ್ಚು ಪೀಡಿತ ದೇಶಗಳಿಗೆ ಹೋಲಿಸಿದರೂ, ಕಮ್ಮಿಯೇನಲ್ಲ. ನೀನು ಅನುಮಾನಿಸಿದಂತೆ, ನಮ್ಮ ದೇಶದಲ್ಲಿ ಸೋಂಕಿನ ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳ ಮೇಲೇ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ, ರೋಗಿಗಳ ಪತ್ತೆಯ ಪ್ರಮಾಣ ಹೆಚ್ಚಾಗಿದೆ. ನಾವೀಗ ಲಾಕ್ಡೌನಿನ ನಾಲ್ಕನೇ ಹಂತದಲ್ಲಿದ್ದು, ಎರಡು ತಿಂಗಳ ಹಿಂದೆ ವಿಧಿಸಿದ ಲಾಕ್ಡೌನಿನ ಮೊದಲ ಹಂತಕ್ಕೆ ಹೋಲಿಸಿದರೆ, ನಿರ್ಬಂಧಗಳನ್ನು ಸಾಕಷ್ಟು ಸಡಿಲಿಸಿರುವುದು ಸೋಂಕಿತರ ಪ್ರಮಾಣದ ತೀವ್ರ ಹೆಚ್ಚಳಕ್ಕೆ ಕಾರಣವಾಗಿರಬಹುದು. ಸೋಂಕಿನ ತೀವ್ರತೆಯ ಸರಿ ಪ್ರಮಾಣವನ್ನು ತಿಳಿಯಬೇಕಾದರೆ, ಪರೀಕ್ಷೆಯ ಸಂಖ್ಯೆಗಳನ್ನು ಹೆಚ್ಚಿಸುವುದೊಂದೇ ಉಳಿದಿರುವ ಮಾರ್ಗ. ಆದರೆ ನಮ್ಮ ದೇಶದ ಸೋಂಕಿತರಲ್ಲಿನ  "ಸಾವುಗಳ ದರ" ಕೇವಲ ೨.೮% ಮಾತ್ರವಿದ್ದು, ಇದನ್ನು ವಿಶ್ವದಲ್ಲೇ ಕನಿಷ್ಠವೆಂದು ಹೇಳಬಹದು. ವಿಶ್ವದ ಸರಾಸರಿ ಸಾವಿನ ದರ ೬.೮%ರಷ್ಟಿದ್ದು, ಹೆಚ್ಚು ಕಳವಳಕಾರಿಯಾಗಿದೆ. ಲಾಕ್ಡೌನನ್ನು ಬೇಗ ವಿಧಿಸಿದ್ದು, ಪರೀಕ್ಷೆ ಮತ್ತು ಸೋಂಕಿತರ ಚಿಕಿತ್ಸೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಡೆಸುತ್ತಿರುವುದು ನಮ್ಮ ಸಾವಿನ ದರವನ್ನು ಕಮ್ಮಿಮಾಡುವುದರಲ್ಲಿ ಸಹಕಾರಿಯಾಗಿದೆ ಎನ್ನಬಹದು. ಯುವಕರೇ ಹೆಚ್ಚಿರುವ ನಮ್ಮ ದೇಶದಲ್ಲಿನ ಜನತೆಗೆ ರೋಗನಿರೋಧಕ ಶಕ್ತಿ ಹೆಚ್ಚಿರುವುದೂ, ಸಾವುಗಳ ದರವನ್ನು ನಿಯಂತ್ರಿಸುವಲ್ಲಿ ಅನುಕೂಲಕರ ಪರಿಣಾಮವನ್ನು ಉಂಟು ಮಾಡಿರಬಹುದು,' ಎಂಬ ವಿವರಣೆಗೆ ಸಂಶೋಧಕಿ ರೋಹಿಣಿ ತಲೆದೂಗಿದ್ದಳು.  

ಭಾರತದಲ್ಲಿನ ಮೊದಲ ಹಂತದ  ೨೧ ದಿನಗಳ ಲಾಕ್ಡೌನ್, ಇಡೀ ವಿಶ್ವದಲ್ಲೇ ಅತ್ಯಂತ ಕಠಿಣ ಮಾದರಿಯದಾಗಿದ್ದು, ಕೆಳಕಂಡ ನಿರ್ಬಂಧನೆಗಳಿಂದ ಕೂಡಿತ್ತು. 

-ಶಾಲೆಗಳು, ಕಾಲೇಜುಗಳು ಹಾಗು ಕಾರ್ಯಾಲಯಗಳು ಸಂಪೂರ್ಣವಾಗಿ ಮುಚ್ಚಿದ್ದವು. 

-ಅವಶ್ಯಕ ವಸ್ತುಗಳ ವ್ಯಾಪಾರವನ್ನು ಹೊರತು ಪಡಿಸಿ, ಮಿಕ್ಕೆಲ್ಲ ವ್ಯಾಪಾರಗಳನ್ನು ಸ್ಥಗಿತಗೊಳಿಸಲಾಗಿತ್ತು. 

-ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. 

-ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಲ್ಲಿಸಲಾಗಿತ್ತು. 

-ಎಲ್ಲ ಮಾಧ್ಯಮಗಳ ಮುಖಾಂತರ ಸಾರ್ವಜನಿಕರಿಗೆ ಸೂಕ್ತ ತಿಳುವಳಿಕೆ ನೀಡಲಾಗಿತ್ತು. 

-ಅವಶ್ಯಕವಾದ ಆರ್ಥಿಕ ಪರಿಹಾರಗಳನ್ನು ಜಾರಿಗೊಳಿಸಲಾಗಿತ್ತು. 

-ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು. 

-ಕೋವಿಡ್ ಪರೀಕ್ಷಾ ವಿಧಿಗಳನ್ನು ಚುರುಕುಗೊಳಿಸಲಾಗಿತ್ತು. 

-ಕೋವಿಡ್ ರೋಗಿಗಳೊಂದಿಗಿನ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಪ್ರತ್ಯೇಕವಾಗಿರಿಸುವ  ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿತ್ತು. 

-ಕೋವಿಡ್ ಪರೀಕ್ಷೆ, ಚಿಕಿತ್ಸೆ ಹಾಗು ಲಸಿಕೆಗಳಿಗೆ ಸಂಬಂಧಪಟ್ಟ ಸಂಶೋಧನೆಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು. 

-ವಲಸೆ ಕಾರ್ಮಿಕರ ಬವಣೆಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ ಎಂಬುದು ಸರಕಾರಗಳ ಹೇಳಿಕೆಯಾಗಿತ್ತು.  

'ನಿರ್ಬಂಧನೆಗಳ ಪಟ್ಟಿಯೇನೋ ಜೋರಾಗೆ ಇದೆ. ಆದರೆ ಅವುಗಳ ನಿರ್ವಹಣೆ ಸಮರ್ಪಕವಾಗಿದೆಯೆ?' ಎಂಬುದು ರೋಹಿಣಿಯ ಪ್ರಶ್ನೆಯಾಗಿತ್ತು.  ಗೆಳಯ ಡಾ. ಕಿರಣನ ಉತ್ತರ ತೀಕ್ಷ್ಣವಾಗೇ ಇತ್ತು.  'ನಮ್ಮ ದೇಶದ ಇತಿ-ಮಿತಿಗಳೊಳಗೆ ಪರಿಶೀಲಿಸಿದರೆ, ನಿರ್ಬಂಧಗಳ ಅನುಷ್ಠಾನ ಸಮರ್ಪಕವಾಗಿಯೇ ಇದೆ. ಆದರೆ ವಲಸೆ ಕಾರ್ಮಿಕರ ಕಷ್ಟಗಳನ್ನು ಮಾತ್ರ ಹೇಳತೀರದು. ಅವರುಗಳಿಗುಂಟಾಗಬಹುದಾದ ಬವಣೆಗಳ ಬಗ್ಗೆ ಸರಕಾರಗಳು ಮುಂಜಾಗರೂಕತೆ ವಹಿಸದೆ ಕಣ್ಣುಮುಚ್ಚಿ ಕುಳಿತದ್ದು ಮಾತ್ರ ವಿಪರ್ಯಾಸವೇ ಸರಿ. ಅವರುಗಳ ಸಮಸ್ಯೆಗಳು ಬುಗಿಲೆದ್ದ ಮೇಲೂ ಪರಿಹಾರಕ್ಕೆಂದು ಕೈಕೊಂಡ ಕ್ರಮಗಳು ಏನೇನೂ ಸಾಲದು. 

ವರ್ಷಾರಂಭದ ಜನವರಿಯಿಂದ, ಮಾರ್ಚ್ ೨೫ರಂದು  ಲಾಕ್ಡೌನ್ ವಿಧಿಸುವವರೆಗೂ ಸುಮಾರು ೧೫ ಲಕ್ಷಗಳಿಗೂ ಹೆಚ್ಚು ಪ್ರಯಾಣಿಕರು ವಿದೇಶಗಳಿಂದ ಭಾರತಕ್ಕೆ ಬಂದಿದ್ದಾರೆ. ಅವರ್ಯಾರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸದೆ ಇದ್ದದೂ ಬೇಜಾಬ್ದಾರಿಯ ಪರಮಾವಧಿಯೇ ಸರಿ. 

ವಿಶ್ವ ಖ್ಯಾತಿಯ ಗಾಯಕ-ನರ್ತಕ ಮೈಕೆಲ್ ಕಿಶೋರ್ ಮಿಶ್ರನ ವಿಷಯದಲ್ಲಿ ಏನಾಯ್ತು ಎಂಬುದು ನಿನಗೆ ಗೊತ್ತಿರಬಹುದು! ಪಾಪ್ ಜಗತ್ತಿನ ಮಹಾನ್ ತಾರೆ ಮೈಕೆಲ್ ಜ್ಯಾಕ್ಸನನ ಮರು ಅವತಾರವೆಂದೇ ಕಿಶೋರ್ ಮಿಶ್ರನನ್ನು ಅವನ ಅಭಿಮಾನಿಗಳು ಭಾವಿಸಿದ್ದಾರೆ. ಹಾಗಾಗೇ ಅವನಿಗೆ ಅವರುಗಳು  'ಮೈಕೆಲ್' ಎಂಬ ಬಿರುದನ್ನೂ ನೀಡಿದ್ದಾರೆ. ಕೀರ್ತಿಶೇಷ ಮಹಾನ್ ಕಥಕ್ ನರ್ತಕರಾದ ವಿಶ್ವನಾಥ್ ಮಿಶ್ರಾಜಿರವರ ಮೊಮ್ಮಗನಾದ ಮೈಕೆಲ್, ಪಾಪ್ ನೃತ್ಯಗಳ ಶೈಲಿಯೊಂದಿಗೆ ಕಥಕ್ನ ಭಾವ-ಭಂಗಿಗಳನ್ನೂ ಸಮ್ಮಿಳನಗೊಳಿಸಿ ಸಿದ್ಧಪಡಿಸಿರುವ ಹೊಸ ನೃತ್ಯದ ಆವಿಷ್ಕಾರಕ್ಕೆ, ಇಡೀ ಉಪಖಂಡದ ಅಭಿಮಾನಿಗಳೇ ಹುಚ್ಚೆದ್ದಿರುವುದು ನಿನಗೂ ತಿಳಿದಿರಬಹುದು.  

ಯೂರೋಪ್ನ ಖ್ಯಾತ ನಗರವೊಂದರಲ್ಲಿ ತನ್ನ ತಂದೆ-ತಾಯಿಯರೊಂದಿಗೆ ಕೆಲವು ವಾರಗಳನ್ನು ೨೦೨೦ರ ಫೆಬ್ರವರಿ ತಿಂಗಳಲ್ಲಿ ಕಳೆದ ಮೈಕೆಲ್, ಅದೇ ನಗರದಲ್ಲಿ ಒಂದೆರಡು ಕಾರ್ಯಕ್ರಮಗಳನ್ನೂ ನೀಡಿದ್ದನು. ಆ ಕಾರ್ಯಕ್ರಮಗಳಲ್ಲಿ ಕಿಕ್ಕಿರಿದ ಪ್ರೇಕ್ಷೆಕರಲ್ಲಿ ಭಾರತೀಯ ಮೂಲದವರೇ ಹೆಚ್ಚಾಗಿದ್ದರು. 

೨೦೨೦ರ ಮಾರ್ಚ್ ೨೦ರ ಮೊದಲ ವಾರದಲ್ಲಿ ಮೈಕೆಲ್ ಯೂರೋಪಿನಿಂದ ಭಾರತಕ್ಕೆ ಪ್ರಯಾಣಿಸಿದ್ದನು. ವಿಶ್ವ ವಿಖ್ಯಾತನಾದ ಮೈಕೆಲನಿಗೆ ಭಾರತದ ವಿಮಾನ ನಿಲ್ದಾಣದಲ್ಲಿ ಯಾವುದೇ ತಡೆಯೊಡ್ಡದೆ ಒಳ ಬರಲು ಅನುಮತಿ ನೀಡಿದ್ದರೂ, ಆರೋಗ್ಯಾಧಿಕಾರಿಗಳು ಅವನಿಗೆ ಎರಡು ವಾರಗಳ ಸ್ವಯಂ-ನಿರ್ಬಂಧನೆಯೊಳಗಿರುವಂತೆ ಸೂಚಿಸಿದ್ದರು. ಎಲ್ಲರೊಡನೆ ಬೆರೆಯುವ ಮುನ್ನ ಕೋವಿಡ್ ಪರೀಕ್ಷೆಗೊಳಪಡುವಂತೆಯೂ ಸೂಚಿಸಲಾಗಿತ್ತು. ಸೂಚಿಸಿದ ಯಾವುದೇ ಮುಂಜಾಗರೂಕತೆಗಳಿಗೂ 'ಕ್ಯಾರೆ' ಎನ್ನದ ಮೈಕೆಲ್ ಎಗ್ಗಿಲ್ಲದೆ ಪ್ರಯಾಣಿಸಿದ್ದು ಮಾತ್ರ ವಿಷಾದಕರವೇ ಸರಿ. ಭಾರತಾದ್ಯಂತದ  ವಿವಿಧ ನಗರಗಳಲ್ಲಿ ಮೈಕೇಲನ ಬಹು ಪ್ರಚಾರಿತ ಕಾರ್ಯಕ್ರಮಗಳಿಗಾಗಲೇ ದಿನಾಂಕಗಳ ನಿಗದಿಯಾಗಿತ್ತು. ಮೈಕೇಲನ ಮೊದಲ ವಿಮಾನ ಪ್ರಯಾಣ, ಸುಮಾರು ೧೫೦೦ ಕಿ.ಮೀ. ದೂರವಿರುವ ಅವನ ಸ್ವಂತದೂರಿಗಾಗಿತ್ತು. ಅವನೂರಿನ ಭಾನುವಾರದ ಕಾರ್ಯಕ್ರಮದಲ್ಲಿ ಪ್ರಖ್ಯಾತ ರಾಜಕಾರಣಿಗಳನ್ನೂ ಒಳಗೊಂಡಂತೆ ಸುಮಾರು ೧೦೦೦ಕ್ಕೂ ಹೆಚ್ಚು ಗಣ್ಯಾತಿಗಣ್ಯರು ಸೇರಿದ್ದರು. ಭಾರತದ ಪ್ರಖ್ಯಾತ ಕೈಗಾರಿಕೋದ್ಯಮಿ, ಬದ್ರಿಪ್ರಸಾದರು ತಮ್ಮ ಮಗಳಾದ ಕಾಮಿನಿಯೊಂದಿಗೆ ಆಗಮಿಸಿದ್ದರು. ಹಾರ್ವರ್ಡ್ ಎಂಬಿಎ ಪದವೀಧರೆಯಾಗಿದ್ದ ನವ ತರುಣಿ ಕಾಮಿನಿ ವಿಶ್ವಾದ್ಯಂತ ಹಲವಾರು ಪ್ರತಿಷ್ಠಿತ ಉದ್ದಿಮೆಗಳನ್ನು ಖರೀದಿಸಿ ಪ್ರಖ್ಯಾತೆಯಾಗಿದ್ದಳು. ಮೈಕೇಲನನ್ನು ಹೊರತು ಪಡಿಸಿ, ಸಮಾರಂಭದ ಮುಖ್ಯಾಕರ್ಷಣೆ ಸುಂದರ ಯುವತಿ ಕಾಮಿನಿಯಾಗಿದ್ದಳು ಎಂಬುದು ಸುಳ್ಳಾಗಿತ್ತಿಲ್ಲ. 

ಸಮಾರಂಭದಲ್ಲಿ ನೆರೆದ ಪ್ರತಿಯೊಬ್ಬರೂ ಮೋಹಕ ತರುಣ ಮೈಕೇಲನ ಕೈಕುಲುಕಿ, ಸೆಲ್ಫಿಯೊಂದನ್ನು ಪಡೆಯಲು ಹಾತೊರೆಯುತ್ತಿದ್ದರು. ಬಹು ವರ್ಷಗಳನಂತರ ತನ್ನೂರಿನಲ್ಲಿ ಕಾರ್ಯಕ್ರಮ ನಡೆಸಿಕೊಡುವ ಉತ್ಸಾಹದಿಂದ ಉತ್ತೇಜಿನಾದಂತೆ ಕಂಡ ಮೈಕೆಲ್,  "ಸ್ವಯಂ ನಿರ್ಬಂಧ"ದ ಎಗ್ಗಿಲ್ಲದೆ ಎಲ್ಲರೊಡನೆ ಬೆರೆಯುತ್ತಿದ್ದದ್ದು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತ್ತು. ಸುಮಾರು ಎರಡು ಘಂಟೆಗಳ ಕಾಲ ನಡೆದ ಅಭೂತಪೂರ್ವ ನೃತ್ಯ ಕಾರ್ಯಕ್ರಮವನ್ನು ನೋಡಿ ನೆರೆದವರೆಲ್ಲರೂ ಮೂಕವಿಸ್ಮಿತರಾಗಿದ್ದರು. 

ನೃತ್ಯದ ಕಾರ್ಯಕ್ರಮ ಮುಗಿದನಂತರ, ನೆರಳು ಬೆಳಕಿನ ಪಂಚತಾರಾ ಭೋಜನ ಕೂಟದ ಸಮಯ. ವಿಶ್ವಮಾನ್ಯ ದುಬಾರಿ ಮದ್ಯಗಳ ವಿತರಣೆಯೊಂದಿಗೆ ಆರಂಭವಾದ ಕೂಟದ ರಂಗೇರಿತ್ತು. ಅಭಿಮಾನಿಗಳ ಉತ್ಸಾಹಕ್ಕೆ ಪುಳಕಿತನಾದ ಮೈಕೆಲ್ ಗಣ್ಯಾತಿಗಣ್ಯರುಗಳು ಆಸೀನರಾದ ಪ್ರತಿ ಮೇಜುಗಳ ಬಳಿಯೂ ತೆರಳಿ ಉಭಯ ಕುಶಲೋಪರಿ ನಡೆಸುತ್ತಿದ್ದನು. ಬದ್ರಿಪ್ರಸಾದರ ಕಣ್ಸನ್ನೆಯ ಅಯಸ್ಕಾಂತಕ್ಕೆ  ಸೂಜಿಯಂತೆ  ಆಕರ್ಷಿತನಾದ ಮೈಕೆಲ್, ತಂದೆ ಮಗಳ ನಡುವಿನ ಆಸನವನ್ನು ಕ್ಷಣಾರ್ಧದಲ್ಲಿ ಆಕ್ರಮಿಸಿ ಕುಳಿತು ಸಂಭ್ರಮಿಸಿದ್ದನು. ಆಗ ಸಭಿಕರೆಲ್ಲರೂ ತಮ್ಮ ಕಣ್ಣುಗಳನ್ನು ಮೈಕೆಲ್-ಕಾಮಿನಿಯರ ಮೇಲೇ ಹಾಯಿಸಿದ್ದು ಗುಟ್ಟಾಗಿ ಉಳಿದಿರಲಿಲ್ಲ. ಮೈಕೆಲ್-ಕಾಮಿನಿಯರು ಪರಸ್ಪರ ಕೈ-ಕೈ ಮಿಲಾಯಿಸಿ, ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಕ್ಷಣಗಳಲ್ಲಿ, ತಂದೆ ಬದ್ರಿಪ್ರಸಾದರು ಮೂಕ ಪ್ರೇಕ್ಷಕರು ಮಾತ್ರವಾಗಿದ್ದರು. ನಾಳಿನ ಮಾಧ್ಯಮಗಳ ಮುಖಪುಟದ ಸಿಂಗಾರಕ್ಕೋ ಎಂಬಂತೆ, ಸುತ್ತಲಿದ್ದ ಛಾಯಾಗ್ರಾಹಕರೆಲ್ಲರೂ ಮೈಕೆಲ್-ಕಾಮಿನಿಯರ ಜೋಡಿಯ ಆಪ್ತತೆಯ ಕ್ಷಣಗಳನ್ನು ಕ್ಲಿಕ್ಕಿಸಿದ್ದಕ್ಕೆ  ಲೆಕ್ಕವಿತ್ತಿಲ್ಲ.  ಇಂತಹ ಆಪ್ತತೆಯ ಕ್ಷಣಗಳ ನಡುವೆ ಗಣ್ಯಾತಿಗಣ್ಯರುಗಳ ನಡುವೆ ಮೈಕೆಲ್-ಕಾಮಿನಿಯರ ಜೋಡಿ ಕುರಿತ ಗುಸುಗುಸುಗಳು ಹರಿದಾಡ ತೊಡಗಿದ್ದವು. ಭೋಜನ ಕೂಟ ಮುಗಿಯುವ ಹೊತ್ತಿಗೆ ನಡುರಾತ್ರಿಯಾಗಿ ಹೋಗಿತ್ತು. 

ಮರು ದಿನವೂ ಮೈಕೆಲನ ಓಡಾಟ ಭರದಿಂದ ಸಾಗಿತ್ತು. ನಗರದ ಗಣ್ಯ ಉದ್ದಿಮೆದಾರರು, ಚಿತ್ರೋದ್ಯಮದ ಗಣ್ಯರು ಮತ್ತು ರಾಜಕಾರಣಿಗಳ ಜೊತೆಗಿನ ಭೇಟಿಯ ಸರಣಿ ಮುಂದುವರೆದಿತ್ತು. ಐದು ಹಿರಿಯ ಮಂತ್ರಿಗಳೊಂದಿಗಿನ ಪೂರ್ವ ನಿರ್ಧಾರಿತ ಭೇಟಿಗಳನ್ನು ಕೂಡ ಮೈಕೆಲ್ ಮರೆಯಲಿಲ್ಲ. ಮೈಕೆಲ್ ಹೋದಲೆಲ್ಲಾ ನೆರಳಿನಂತೆ  ಹಿಂಬಾಲಿಸಿದವರು ಬದ್ರಿಪ್ರಸಾದ್ ಮತ್ತವರ ಮುದ್ದು ಮಗಳು ಕಾಮಿನಿ.  

ಅಂದಿನ ಮಂಗಳವಾರದಂದೇ  ಬದ್ರಿಪ್ರಸಾದ್ರವರು ತಮ್ಮ ಕಂಪನಿಯ ಬೋರ್ಡ್ ಸದಸ್ಯರ ಸಭೆಯನ್ನು ಏರ್ಪಡಿಸಿದ್ದು ವಿಶೇಷವಾಗಿತ್ತು. ಸಭೆಯನಂತರದ ರಾತ್ರಿ ಭೋಜನ ಕೂಟಕ್ಕೆ ವಿಶೇಷ ಅತಿಥಿಯಾಗಿದ್ದವನು ಮೈಕೇಲನೇ ಎಂದು ಬೇರೆ ಹೇಳಬೇಕಿತ್ತಿಲ್ಲ. ಕಾಮಿನಿ-ಮೈಕೆಲ್ರವರ ವಿವಾಹದ ಬಗ್ಗೆ ಬೋರ್ಡ್ ಸದಸ್ಯ ಮಿತ್ರರ ಪ್ರಶ್ನೆಗೆ, ಬದ್ರಿಪ್ರಸಾದರ ಕಣ್ಣಲ್ಲಿ ಹಾಯ್ದ ಕಿರುಮಿಂಚೊನ್ದೆ ಉತ್ತರವಾಗಿತ್ತು. 

ಬೋರ್ಡ್ ಮೀಟಿಂಗ್ ನಂತರದ  ದಿನ, ಮೈಕೆಲನ ಕಾರ್ಯಕ್ರಮ, ದೇಶದ ಖ್ಯಾತ ಚಲನಚಿತ್ರ ನಿರ್ಮಾಪಕರೊಬ್ಬರು ಏರ್ಪಡಿಸಿದ್ದ ಭೋಜನ ಕೂಟವೊಂದಾಗಿತ್ತು.  ದೇಶದ ಚಿತ್ರೋದ್ಯಮದ ಪ್ರಮುಖರು, ಉದ್ಯೋಗಪತಿಗಳು, ಶಾಸಕರು ಹಾಗು ಸಂಸದರುಗಳು ಈ ಕೂಟದ ಆಹ್ವಾನಿತರುಗಳಾಗಿದ್ದರು. ಈ ಭೋಜನ ಕೂಟವನ್ನೇರ್ಪಡಿಸಿದ್ದ ನಿರ್ಮಾಪಕರು ಮೈಕೇಲನನ್ನು ನಾಯಕ ನಟನನ್ನಾಗಿಸಿ ತಯಾರಿಸಲು ಯೋಜಿಸಿರುವ ಭಾರಿ ವೆಚ್ಚದ ಚಲನ ಚಿತ್ರದ ಬಗೆಗಿನ ವದಂತಿಗಳ ಗುಸುಗುಸು ಜೋರಾಗಿತ್ತು. ಮೈಕೆಲ್, ಆಗಮಿಸಿದ ಗಣ್ಯರೆಲ್ಲರ ಕೈ ಕುಲುಕಿ ಅವರುಗಳನ್ನು ತಬ್ಬಿದ್ದು ಎಲ್ಲರಿಗೂ ಸಂತಸ ತಂದಿತ್ತು. 

ನಂತರದ ಶುಕ್ರವಾರ ಮಾತ್ರ ವಿಪತ್ತಿನ ದಿನವಾಗಿತ್ತು. ವೈದ್ಯರು ನೀಡಿದ ಹಲವು ದಿನಗಳ ಹಿಂದಿನ ಸಲಹೆಯಂತೆ ಮೈಕೆಲ್ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಅವನಿಗೂ ಹಾಗು ಅವನ ವೈದ್ಯರುಗಳಿಗೂ ಅಚ್ಚರಿಯ ಫಲಿತಾಂಶವನ್ನು ತಂದಿತ್ತು. ಮೈಕೆಲ್ ಕೋವಿಡ್ ಸೋಂಕಿತನೆಂಬ ಫಲಿತಾಂಶ ಹೊರಬಿದ್ದು, ಆ ಸುದ್ದಿ ಕಾಳ್ಗಿಚ್ಚಿನಂತೆ ಹರಡ ತೊಡಗಿತ್ತು. ಕಳೆದ ಒಂದು ವಾರದ ಕಾರ್ಯಕ್ರಮಗಳಲ್ಲಿ ಅವನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಲ್ಲ ಗಣ್ಯರ ಹಾಗು ಜನಸಾಮಾನ್ಯರ ಎದೆಯಲ್ಲಿ ನಡುಕವುಂಟಾಗಿತ್ತು. ಮೈಕೆಲ್ ಓಡಾಡಿದ ನಗರಗಳ ನಡುವೆಲ್ಲಾ ಆತಂಕದ ಕರೆಗಳ ಸರಣಿಯೇ ಹರಿದಾಡಿತ್ತು. 

ಬದ್ರಿಪ್ರಸಾದ್ ಮತ್ತು ಕಾಮಿನಿಯವರುಗಳನ್ನೋಳಗೊಂಡಂತೆ, ಮೈಕೆಲ್ ಸಂಪರ್ಕದಲ್ಲಿದ್ದವರೆಲ್ಲರೂ ಕೂಡಲೇ ಕೋವಿಡ್ ಪರೀಕ್ಷೆಗೊಳಪಟ್ಟಿದ್ದೂ ಆಯ್ತು ಮತ್ತು ವೈದ್ಯರ ಸಲಹೆಯಂತೆ ಎರಡು ವಾರಗಳ ನಿರ್ಬಂಧನೆಗೆ ಒಳಪಟ್ಟಿದ್ದೂ ಆಯ್ತು. ಪರೀಕ್ಷೆಗೊಳಪಟ್ಟ ಮತ್ತು ಸ್ವಯಂ ನಿರ್ಬಂಧನೆಗೊಳಗಾದ ವಿಷಯವನ್ನು ಬದ್ರಿಪ್ರಸಾದ್ ಹಾಗು ಕಾಮಿನಿಯವರೇ ಎಲ್ಲರಿಗು ಟ್ವಿಟ್ಟರ್ ಮೂಲಕ ತಿಳಿಯಪಡಿಸಿ, ಮೈಕೇಲನ ಕೋವಿಡ್ ಸೋಂಕಿನ ಬಗ್ಗೆ ತಮಗ್ಯಾವ ಮುನ್ಸೂಚನೆಯಾಗಲಿ, ಅನುಮಾನಗಳಾಗಲಿ ಇರಲಿಲ್ಲವೆಂಬುದನ್ನು ಸ್ಪಷ್ಟಪಡಿಸಿ, ತಮ್ಮಗಳ ಸಂಪರ್ಕದಲ್ಲಿದ್ದವರೆಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಕೂಡ ಮಾಡಿಕೊಂಡದ್ದೂ ಆಯ್ತು. 

ಮರುದಿನವೇ ಮೈಕೆಲ್ ಕೋವಿಡ್ ಸೋಂಕಿತನಾಗಿರುವ ವಿಷಯ ಎಲ್ಲಾ ಮಾಧ್ಯಮಗಳಲ್ಲೂ ಭಾರಿ ಸಂಚಲನವನ್ನುಂಟುಮಾಡಿತ್ತು. ಎರಡು ವಾರಗಳ ಸ್ವಯಂ-ನಿರ್ಬಂಧನೆಯಲ್ಲಿರುವಂತೆಯೂ ಮತ್ತು   ಸಾರ್ವಜನಿಕರುಗಳ ನಡುವೆ ಬೆರೆಯುವ ಮುನ್ನ ಕೋವಿಡ್ ಸೋಂಕಿನಿಂದ ಮುಕ್ತನೆಂಬುದನ್ನು ಖಾತರಿ ಪಡಿಸಿಕೊಳ್ಳಬೇಕೆಂಬ ವೈದ್ಯರ ಸೂಚನೆಗಳನ್ನು ಗಾಳಿಗೆ ತೂರಿ, ಎಲ್ಲರೊಡನೆ ಬೆರೆತು, ಅವರೆಲ್ಲರಿಗೂ ಕೋವಿಡ್ನ ಆತಂಕವುಂಟುಮಾಡಿದ ಮೈಕೆಲನ ಬೇಜಾಬ್ದಾರಿ ವರ್ತನೆಗೆ, ಎಲ್ಲಾ ಮಾಧ್ಯಮಗಳಲ್ಲೂ  ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸಂಬಂಧಪಟ್ಟ ರಾಜ್ಯ ಸರಕಾರವು ಸುಮಾರು ೪೦೦ ಪೊಲೀಸ್ ಕರ್ಮಚಾರಿಗಳನ್ನೊಳಗೊಂಡ ೨೦ ತಂಡಗಳನ್ನು ರಚಿಸಿ, ಮೈಕೆಲನೊಡನೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಂಪರ್ಕದಲ್ಲಿದ್ದರ ಪತ್ತೆಗೆ ಮುಂದಾಗಿತ್ತು. ಆ ರೀತಿಯ ಸುಮಾರು ೨೦೦೦ದಷ್ಟು ಸಂಪರ್ಕಿತರನ್ನು ಪತ್ತೆ ಹಚ್ಚಿ, ಅವರೆಲ್ಲರನ್ನು ಎರಡು ವಾರಗಳ ನಿರ್ಬಂಧನೆಗೊಳಪಡುವಂತೆ  ಸೂಚಿಸುವ ತ್ರಾಸದಾಯಕ ಕಾರ್ಯವನ್ನು ಮಾಡುವಲ್ಲಿ ಪೊಲೀಸರು ಹೈರಾಣಾಗಿ ಹೋಗಿದ್ದರು.' ಹೀಗೆ  ಡಾ. ಕಿರಣ್ ವಿವರಿಸಿದ  ಮೈಕೇಲನ ವೃತ್ತಾಂತವನ್ನು ರೋಹಿಣಿ ತದೇಕಚಿತ್ತಳಾಗಿ ಕೇಳಿದಳು. 

ಮೈಕೆಲನ ಬೇಜವಾಬ್ದಾರಿಯ ವೃತ್ತಾಂತವನ್ನು ಕೇಳಿ ರೋಹಿಣಿಗೆ ರೋಸಿಹೋಗಿತ್ತು. ಕೋವಿಡ್ನಂತಹ ಸಂಕಟದ ದಿನಗಳಲ್ಲೂ, ಮೈಕೇಲನಂಥ ವಿದ್ಯಾವಂತರು, ವಿಶ್ವಖ್ಯಾತಿ ಗಳಿಸಿದವರು, ವೈದ್ಯರ ಮುನ್ನೆಚ್ಚೆರಿಕೆಯನ್ನು ಧಿಕ್ಕರಿಸುತ್ತಾರೇಕೆ?  ಪ್ರಖ್ಯಾತರ ಸುತ್ತುವರೆಯಲು ಜನಸಾಮಾನ್ಯರಲ್ಲಿ ಅಷ್ಟೊಂದು ತುಡಿತವೇಕೆ? ಕೋವಿಡ್ ದಿನಗಳ ಅಪಾಯದ ಅರಿವು ಜನರಿಗಿಲ್ಲವೆ? ವಿದೇಶ  ಪ್ರಯಾಣ ಮಾಡಿರುವ ವ್ಯಕ್ತಿಗಳು ಕೋವಿಡ್ ವೈರಾಣುವನ್ನು ಹರಡುವ ಸಾಧ್ಯತೆಯಿದೆ ಎಂಬುದು  ಶ್ರೀಸಾಮಾನ್ಯರಿಗೆ ತಿಳಿದಿಲ್ಲವೆ? ಮೈಕೆಲನಂತಹ ಗಣ್ಯಾತಿಗಣ್ಯರ ವರ್ತನೆಯೇ ಈ ರೀತಿಯ ಬೇಜಾಬ್ದಾರಿಯಿಂದ ಕೂಡಿರುವುದಾದರೆ, ಜನಸಾಮಾನ್ಯರಿಂದ ಏನನ್ನು ನೀರಿಕ್ಷಿಸಬಹುದು? ಈ ಬಗೆಯ ಟಿಪ್ಪಣಿಗಳನ್ನು ತನ್ನ ಸಂಶೋಧನಾ ಪುಸ್ತಕದಲ್ಲಿ ಬರೆದುಕೊಳ್ಳುತ್ತಾ, ರೋಹಿಣಿ ಆತಂಕಿತಳಾಗಿದ್ದಳು. 

***

ರಾತ್ರಿಯೂಟದ ಸಮಯವಾಗಿತ್ತು. ತಂದೆ ರಾಜುರವರು, ಮಗಳು ರೋಹಿಣಿಗಾಗಿ ಕಾಯುತ್ತಿದ್ದರು. ಕೊಂಚ ತಡವಾಗಿ ಬಂದ ರೋಹಿಣಿ ದಣಿದಿದ್ದಳು. ಕೂಡಲೇ ರಾಜು ಅವಳನ್ನು ಊಟದ ಮೇಜಿನತ್ತ ಕರೆದೊಯ್ಯದಿದ್ದರು. ರೋಹಿಣಿಯ ಆಲೋಚನೆಗಳು ಮಾತ್ರ ನಾಲ್ಕು ಹಂತಗಳಲ್ಲಿ ಜಾರಿಗೊಳಿಸಿದ್ದ ಕಳೆದ ಎರಡು ತಿಂಗಳ ಅವಧಿಯ ಲಾಕ್ಡೌನಿನ ಸಾಧಕ-ಭಾಧಕಗಳ  ಸುತ್ತವೇ ಹರಿದಾಡುತ್ತಿದ್ದವು.          ಡಾ. ಕಿರಣನ ಮಾತುಗಳೇ ಅವಳ ಕಿವಿಯಲ್ಲಿ ರಿಂಗಣಿಸುತ್ತಿದ್ದವು. 

'ಲಾಕ್ಡೌನ್ ಕುರಿತಾದ ಸಂಶೋಧನೆಯ ಕೆಲಸ ಹೇಗೆ ಸಾಗಿದೆ?' ಎಂದು ಕೇಳಿ ರಾಜು ಮೌನ ಮುರಿದರು. ಮೌನ ಮುರಿಯದ ರೋಹಿಣಿಯ ನೋಟ ಮಾತ್ರ ರಾಜುರವರ ಮೇಲೇ ನೆಟ್ಟಿತ್ತು. ಲಾಕ್ಡೌನ್ನ ಸಾಧಕ-ಬಾಧಕಗಳನ್ನು ಕುರಿತಾದ ವೃತ್ತಪತ್ರಿಕೆಯ ಲೇಖನವೊಂದನ್ನು ರಾಜು ತಮ್ಮ ಮಗಳ ಮುಂದಿರಿಸಿದ್ದರು. ಆ ಲೇಖನದಲ್ಲಿ ವಿರೋಧ ಪಕ್ಷಗಳ ತೀಕ್ಷ್ಣ ಪ್ರತಿಕ್ರಿಯೆ ಬಗೆಗಿನ ಪ್ರಸ್ತಾಪವಿತ್ತು. 'ಎರಡು ತಿಂಗಳ ಲಾಕ್ಡೌನ್ ಜೀವಗಳನ್ನುಳಿಸಿದ್ದಂತೂ ಶುದ್ಧ ಸುಳ್ಳಿನ ಮಾತು.  ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿದೆ. ಲಾಕ್ಡೌನ್ನಿಂದ ಸುಮಾರು  ೪೦ ಕೋಟಿ  ಬಡಬಗ್ಗರುಗಳ ಸಂಪಾದನೆಗೆ ಕುತ್ತು ಬಂದಿದೆ. ಬೃಹತ್ ನಗರಗಳಿಂದ ತಮ್ಮ ತಮ್ಮ ಹಳ್ಳಿಗಳ ಕಡೆಗೆ  ಗುಳೆ ಹೊರಟ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರ ಕಷ್ಟಗಳನಂತೂ ಹೇಳತೀರದು. ಬಸ್ ಹಾಗೂ ರೈಲುಗಳ ಸಂಚಾರಗಳು  ಸ್ಥಗಿತಗೊಂಡಿದ್ದು, ಅನ್ಯ ಮಾರ್ಗವಿಲ್ಲದೆ ಅವರುಗಳು  ತಮ್ಮ ತಮ್ಮ ಹೆಂಡತಿ-ಮಕ್ಕಳೊಡನೆ, ಸಾಮಾನುಗಳನ್ನು ಹೊತ್ತು  ಕಾಲ್ನಡಿಗೆಯಲ್ಲೇ ಪ್ರಯಾಣಿಸಿತ್ತಿರುವುದನ್ನು ನೋಡಿದರೆ, ಹೃದಯವಂತರ ಕರುಳು    ಕಿತ್ತುಬಾರದಿರದು' ಎಂಬುದಾಗಿ ವಿರೋಧಿ ನಾಯಕರುಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಆದರೆ ಸರಕಾರಿ ಮೂಲಗಳ ಸಮಜಾಯಿಷಿಯೇ  ಬೇರೆಯಾಗಿತ್ತು.  'ಲಾಕ್ಡೌನ್ ಕೊರೋನಾ ಸೋಂಕನ್ನು ಹತ್ತಿಕ್ಕಲು, ಸಮಯಕ್ಕೆ ಸರಿಯಾಗಿ ಜಾರಿಗೊಳಿಸಿದಂತ ಮುನ್ನೆಚ್ಚರಿಕೆಯ ಕ್ರಮ. ನಾವು ನಡೆಸಿರುವ ಅಧ್ಯಯನಗಳ ಪ್ರಕಾರ ಈ ಎರಡು ತಿಂಗಳ ಲಾಕ್ಡೌನ್ನಿಂದ ಸುಮಾರು ೧೫-೩೦ ಲಕ್ಷ ಜನಗಳನ್ನು ಸೋಂಕಿನಿಂದ ಸಂರಕ್ಷಿಸಲಾಗಿದೆ ಮತ್ತು ಸುಮಾರು ೪೦ರಿಂದ ೮೦ ಸಾವಿರದಷ್ಟು ಜೀವಗಳನ್ನು ರಕ್ಷಿಸಲಾಗಿದೆ. ವಿದೇಶಿ ಸಂಸ್ಥೆಗಳ ಅಧ್ಯಯನದ ಪ್ರಕಾರ, ಭಾರತದಲ್ಲಿ ವಿಧಿಗೊಳಿಸಲಾದ ಸಮಯೋಚಿತ ಲಾಕ್ಡೌನ್ನಿಂದ ಇನ್ನೂ  ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹಾಗೂ ಸಾವುಗಳನ್ನು ನಿಯಂತ್ರಿಸಲಾಗಿದೆ' ಎಂಬುದು ಸರಕಾರಿ ಸಂಸ್ಥೆಗಳು ನೀಡಿದ ವಿವರಣೆಯಾಗಿತ್ತು. 

'ಭಾರತದಲ್ಲಿನ ಶೇ. ೮೦ರಷ್ಟು ಸೋಂಕಿತರು ಐದು ಪ್ರಮುಖ ರಾಜ್ಯಗಳಾದ, ಮಹಾರಾಷ್ಟ್ರ, ತಮಿಳ್ ನಾಡು, ಗುಜರಾತ್, ದಿಲ್ಲಿ ಮತ್ತು ಮಧ್ಯ ಪ್ರದೇಶಗಳಲ್ಲಿ ಮಾತ್ರವಿದ್ದಾರೆ. ಇಷ್ಟೇ ರಾಜ್ಯಗಳಿಗೆ ಹೆಚ್ಚಿನ ಸೋಂಕನ್ನು ಸೀಮಿತಗೊಳಿಸಿದ್ದು ಲಾಕ್ಡೌನಿನ ಒಳ್ಳೆ ಪರಿಣಾಮಗಳಲ್ಲೊಂದು ಎಂದೇ ಹೇಳಬಹುದು.  ಎರಡು ತಿಂಗಳ ಲಾಕ್ಡೌನಿನ ಸಮಯದಲ್ಲಿ, ಸುಮಾರು ಎರಡು ಲಕ್ಷ ಹಾಸಿಗೆಗಳುಳ್ಳ ೧೦೦೦ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿದೆ. ಸುಮಾರು ೩೦ ಲಕ್ಷದಷ್ಟು ಪಿಪಿಇ ತೊಡಿಗೆಗಳನ್ನು ಕೊರೋನಾ ಸೇನಾನಿಗಳಿಗೆ ಒದಗಿಸಲಾಗಿದೆ. ಸರಕಾರ ನೀಡಿದ ಸಹಾಯ ಹಸ್ತದಿಂದ ೧೦೯ ಕೈಗಾರಿಕೋದ್ಯಮಿಗಳು ದಿನನಿತ್ಯ ೨ ಲಕ್ಷ ಪಿಪಿಇ ತೊಡುಗೆಗಳನ್ನು ತಯಾರಿಸುವ ಸಾಮರ್ಥ್ಯವನ್ನು ಸಾಧಿಸಿದ್ದಾರೆ' ಎಂಬುದು ಮತ್ತೊಂದು ಸರಕಾರಿ ಅಂಗ ಸಂಸ್ಥೆ ನೀಡಿದ ಅಂಕಿ ಅಂಶವಾಗಿತ್ತು. 

'ಅಪ್ಪಾ, ಸರಕಾರಿ ಅಂಕಿ-ಅಂಶಗಳೆಲ್ಲ ಉತ್ಪ್ರೇಕ್ಷೆ ಮಾತ್ರ. ನಿಜ ಪರಿಸ್ಥಿತಿ ಬೇರೆಯೇ ಆಗಿದೆ. ಲಾಕ್ಡೌನ್ ಹೆಸರಿಗೆ ಮಾತ್ರವಿದೆ. ಸಾಮಾಜಿಕ ಅಂತರವನ್ನೇ ಗಾಳಿಗೆ ತೂರಿ, ತರಕಾರಿ ಹಣ್ಣುಗಳನ್ನು ಕೊಳ್ಳಲು ಜನ ಮುಗಿಬೀಳುತ್ತಿರುವುದು ಆತಂಕಕಾರಿಯಲ್ಲವೆ? ಉಚಿತ ಹಾಲಿನ ಪ್ಯಾಕೆಟ್ ಮತ್ತು ದಿನಸಿ ಪೊಟ್ಟಣಗಳನ್ನು ಹಂಚುವಾಗಲಂತೂ, ಪುಟ್ಟದೊಂದು ಯುದ್ಧವೇ ನಡೆದು ಹೋಗುತ್ತಿದೆ. ಪೊಲೀಸರ ಕಣ್ಣುಗಳಿಗೆ ಮಣ್ಣೆರಚಿ, ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸುವ ಹೊಸ ಹೊಸ ವಿಧಾನಗಳನ್ನು ಜನಗಳು ಕಂಡುಕೊಳ್ಳುತ್ತಿದ್ದಾರೆ. ಲಾಕ್ಡೌನ್ ವಿಧಿಸಿದ ಕೆಲ ದಿನಗಳ ಮುಂಚೆ, ಸುಮಾರು ೨೫ ಜನಗಳಿದ್ದ ಅನಿವಾಸಿ ಭಾರತೀಯರ ತಂಡವೊಂದು ಗಲ್ಫ್ ದೇಶವೊಂದರಿಂದ ಹೊರಟು ಭಾರತದ ಬೃಹತ್ ನಗರವೊಂದಕ್ಕೆ  ಬಂದಿಳಿಯಿತು.  ಅವರ್ಯಾರಲ್ಲೂ ಯಾವುದೇ ರೀತಿಯ ಕೋವಿಡ್ ಲಕ್ಷಣಗಳಿಲ್ಲ ದಿದ್ದು, ಅವರೆಲ್ಲರನ್ನೂ ಎರಡು ವಾರಗಳ ಗೃಹ-ನಿರ್ಬಂಧದಲ್ಲಿರುವಂತೆ ಸಲಹೆ ನೀಡಿ, ವಿಮಾನ ನಿಲ್ದಾಣದಿಂದ ನಗರ ಪ್ರವೇಶಿಸಲು ಅನುಮತಿ ನೀಡಲಾಯಿತು. ಅವರುಗಳ ಎಡಗೈ ಮೇಲ್ಭಾಗಕ್ಕೆ ನಿರ್ಬಂಧದ ಮುದ್ರೆಯನ್ನೊತ್ತಿದ್ದರು, ಅವರುಗಳೆಲ್ಲ ಆ ನಗರದ ಪ್ರಮುಖ ರೈಲು ನಿಲ್ದಾಣವನ್ನು ತಲುಪಿ, ತಮ ತಮ್ಮ ಪಟ್ಟಣಗಳಿಗೆ ಹೊರಡುವ ರೈಲುಗಳನ್ನು ಹತ್ತಿ ಕೂತಿದ್ದರು. ಅವರುಗಳ ಕೈಮೇಲಿನ ಮುದ್ರೆಯನ್ನು ಗಮನಿಸಿದ ಸಹಪ್ರಯಾಣಿಕರು ಪೊಲೀಸರಿಗೆ ವಿಷಯ ಮುಟ್ಟಿಸುತ್ತಲೇ, ಕಾರ್ಯೋನ್ಮುಖರಾದ ಪೊಲೀಸರು ಅವರುಗಳನ್ನು ವಶಕ್ಕೆ ಪಡೆಯಬೇಕಾಯಿತು. ಮತ್ತೊಂದು ಪ್ರಕರಣದಲ್ಲಿ, ಗಂಡ-ಹೆಂಡಿರ ಜೋಡಿಯೊಂದು ತಮ್ಮ ಮುದ್ರೆಯೊತ್ತಿದ ಕೈಗಳಿಗೆ ಗಾಯವಾದಂತೆ ದಪ್ಪ ಪಟ್ಟಿಗಳನ್ನು ಕಟ್ಟಿಕೊಂಡು, ತನ್ನ ಹಸುಗೂಸಿನೊಂದಿಗೆ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿತ್ತು. ಅನುಮಾನಗೊಂಡ ಪೊಲೀಸರು ಪ್ರಶ್ನೆಸಿದಾಗ ಆ ಜೋಡಿ ತಾವು ನಿರ್ಬಂಧನ ಅವಧಿಯಲ್ಲಿರುವುದಾಗಿ ಒಪ್ಪಿಕೊಂಡಿದ್ದರು. ಪೊಲೀಸರು ತಾನೇ ಎಷ್ಟು ಕಾವಲು ಕಾಯಲು ಸಾಧ್ಯ? ಈ ರೀತಿಯ ಘಟನೆಗಳು ಲಾಕ್ಡೌನಿನ ಸದುದ್ದೇಶಗಳನ್ನು ವಿಫಲಗೊಳಿಸಿದಂತಾಗುವುದಿಲ್ಲವೇ?' ಎಂಬುದು ಸಂಶೋಧಕಿ ರೋಹಿಣಿಯ ಕಳಕಳಿಯಾಗಿತ್ತು. ಎಲ್ಲವನ್ನು ತದೇಕ ಚಿತ್ತರಾಗಿ ಆಲಿಸಿದ ತಂದೆ ರಾಜುರವರಲ್ಲಿ ಯಾವುದಕ್ಕೂ ಉತ್ತರವಿರಲಿಲ್ಲ. 

***

'ಲಾಕ್ಡೌನ್ ದಿನಗಳಲ್ಲಿ, ದುರ್ಗಮ ಕ್ಷೇತ್ರಗಳಲ್ಲಿರುವ ಬಡ ಗ್ರಾಮೀಣರ ಗತಿಯೇನು? ತುರ್ತು ಕಾರಣಗಳಿಗಾಗಿ ಅವರಗಳು ಪ್ರಯಾಣಿಸಬೇಕಾದರೆ ಏನು ಮಾಡಿಯಾರು?' ಎಂಬುದು ರೋಹಿಣಿಯ ಮತ್ತೊಂದು ಕಳಕಳಿಯಾಗಿತ್ತು. 

'ಲಾಕ್ಡೌನ್ ಎಂಬುದೊಂದು ಕುರುಡು ಕಾವಲುಗಾರನಿದ್ದಂತೆ! ತಂಟೆಕೋರರ ಕುಕೃತ್ಯಗಳಾಗಲಿ, ಜನಸಾಮಾನ್ಯರ ಪ್ರಾಮಾಣಿಕ ಪರದಾಟಗಳಾಗಲಿ ಅದಕ್ಕೆ ಕಾಣದು' ಎಂಬ ದಪ್ಪಕ್ಷರಗಳ ಮುನ್ನುಡಿಯಿದ್ದ ಅಂದಿನ ಮತ್ತೊಂದು ದಿನಪತ್ರಿಕೆಯ ನಿಜ ಘಟನೆಯ ಲೇಖನವನ್ನು ರಾಜುರವರು ತಮ್ಮ ಮಗಳ ಅವಗಾಹನೆಗೆ ತಂದಿದ್ದರು. 

ಬಹಳ ದಿನಗಳ ಹಿಂದೆ ಪತ್ನಿಯನ್ನು ಕಳೆದುಕೊಂಡ ರಾಜಿಂದರ್ ವೃತ್ತಿಯಲ್ಲಿ ಕ್ಷೌರಿಕ.  ದೂರದ ಹಳ್ಳಿಯೊಂದರಲ್ಲಿ ಒಂದೇ ಆಸನವಿದ್ದ ಸೆಲೂನೊಂದೆ ಅವನ ಹೊಟ್ಟೆಪಾಡಿನ ಸಾಧನವಾಗಿತ್ತು. ಲಾಕ್ಡೌನ್ ಜಾರಿಗೊಂಡನಂತರ ಅವನ ಸೆಲೂನ್ ಗ್ರಾಹಕರಿಲ್ಲದೆ ಬಿಕೋ ಎನ್ನುತಿತ್ತು. ಆತನ ಮುದ್ದಿನ ಮಗಳಾದ, ಸುಮಾರು ೨೩ ವರ್ಷದ  ಲಾಜು  ಕೂಡ, ಮೂರು ಹಾಲ್ಕರೆಯುವ ಎಮ್ಮೆಗಳ ನಿಗಾವಹಿಸಿಕೊಂಡು, ಸಂಸಾರದ ಹೊಣೆ ಹೊತ್ತಿದ್ದಳು. ರಾಜಿಂದರರ  ಇನ್ನಿಬ್ಬರು ಹೆಣ್ಣುಮಕ್ಕಳು ಚಿಕ್ಕವರಾಗಿದ್ದರು. ತೆರವಾಗಿದ್ದ ಕುಟುಂಬದ ತಾಯಿಯ ಸ್ಥಾನವನ್ನು ಲಾಜು ತುಂಬಿದ್ದಳು. 

೨೦ರ ಪ್ರಾಯದವರೆಗೂ ಲಾಜುವಿನ ಆರೋಗ್ಯ ಚೆನ್ನಾಗೇ ಇತ್ತು.  ಕಳೆದ ಮೂರು ವರ್ಷಗಳಿಂದ ಅವಳನ್ನು ವಿಚಿತ್ರ ಖಾಯಿಲೆಯೊಂದು ಕಾಡಿತ್ತು. ಕೆಂಪು ರಕ್ತಕಣಗಳ ಕೊರತೆ ಅವಳಿಗುಂಟಾಗಿ, ಅವಳನ್ನು ನಿತ್ರಾಣಗೊಳಿಸುತ್ತಿತ್ತು.  ಹಳ್ಳಿಯ ವೈದ್ಯರ ಸಲಹೆಯಂತೆ, ರಾಜಿಂದರ್ ಅವಳನ್ನು ದೂರದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.  ಅಲ್ಲಿನ ವೈದ್ಯರುಗಳ ತಪಾಸಣೆಯಂತೆ, ಲಾಜುವಿನಲ್ಲಿ ಎಲ್ಲರಂತೆ ರಕ್ತದ ಸಾಕಷ್ಟು ಉತ್ಪಾದನೆಯಾಗುತ್ತಿರಲಿಲ್ಲ. ಮೂರು ತಿಂಗಳಿಗೊಮ್ಮೆ ಹೊರಗಿನಿಂದ ಅವಳ ದೇಹಕ್ಕೆ ಅವಶ್ಯಕ ಪ್ರಮಾಣದ  ರಕ್ತವನ್ನೊದಗಿಸುವುದೊಂದೇ (Blood transfusion) ಚಿಕಿತ್ಸೆ ಎಂಬುದು ವೈದ್ಯರುಗಳ ಸಲಹೆಯಾಗಿತ್ತು.  ಈ ರೀತಿಯ ಮೂರು ತಿಂಗಳುಗಳಿಗೊಮ್ಮೆಯ ಚಿಕಿತ್ಸೆ ಶುರುವಾಗಿ ಮೂರು ವರುಷಗಳೇ ಕಳೆದಿತ್ತು.  ಚಿಕಿತ್ಸೆಯನಂತರದ ಮೂರು ತಿಂಗಳು, ಲಾಜುವಿನ ಆರೋಗ್ಯ ಎಂದಿನಂತೆ ಇರುತ್ತಿತ್ತು. ಯಾವುದೇ ಕಷ್ಟ-ನಷ್ಟಗಳಿರಲಿ, ತಂದೆ ರಾಜಿಂದರ್ ಮಾತ್ರ ಮಗಳನ್ನು ದೂರದ ಜಿಲ್ಲಾಸ್ಪತ್ರೆಗೆ ನಿಗದಿತ ಸಮಯಕ್ಕೆ ಕರೆದುಕೊಂಡು  ಹೋಗುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಮೂರು ತಿಂಗಳುಗಳಿಗೊಮ್ಮಿನ ಚಿಕಿತ್ಸೆ ತಪ್ಪಿದರೆ, ಲಾಜುವಿಗೆ ವಿಪತ್ತು ತಪ್ಪದು ಎಂಬ ಅರಿವು ತಂದೆಗಿತ್ತು. ಮದುವೆಯ ವಯಸ್ಸಿನ ಮಗಳಿಗೆ ಈ ರೀತಿಯ ವಿಚಿತ್ರ ರೋಗ ಬಂದೊದಗಿದ್ದು, ರಾಜಿಂದರನ ಮನಸ್ಸನ್ನು ಕಾಡುತ್ತಿದ್ದದ್ದು ಸುಳ್ಳಲ್ಲ. ವೈದ್ಯರುಗಳು ನೀಡಿದ ವೇಳಾಪಟ್ಟಿಯಂತೆ, ಲಾಜುವಿನ ಮುಂದಿನ ಚಿಕಿತ್ಸೆ ೨೦೨೦ರ ಮಾರ್ಚ್ ೨೮ರಂದು ಎಂದು ನಿಗಿದಿಯಾಗಿತ್ತು.  

೨೦೨೦ರ ಮಾರ್ಚ್ ೨೫ರಂದು ಜಾರಿಗೊಳಿಸಿದ ಲಾಕ್ಡೌನ್, ರಾಜಿಂದರನಿಗೊಂದು ಆತಂಕವನ್ನುಂಟು ಮಾಡಿತ್ತು.  ಬಸ್ಸು-ರೈಲುಗಳ ಸಂಚಾರ ಸ್ತಬ್ಧಗೊಂಡಿದ್ದು, ದೂರದ ಜಿಲ್ಲಾಸ್ಪತ್ರೆಗೆ ಮಗಳನ್ನು ಕರೆದುಕೊಂಡು ಹೋಗುವುದು ಹೇಗೆ ಎಂಬ ಸಮಸ್ಯೆ ರಾಜಿಂದರನನ್ನು ಕಾಡಿತ್ತು. ಸತತ ಪ್ರಯತ್ನ ಮಾಡಿ ಡಾ. ತೇಜ್ ಕರಣ್ ರವರನ್ನು ಸಂಪರ್ಕಿಸಿದ ರಾಜಿಂದರನಿಗೆ, ಮಾರ್ಚ್ ೨೮ರ ಚಿಕಿತ್ಸೆ ಖಚಿತವೆಂಬುದು ತಿಳಿದಿತ್ತು. ಸುಮಾರು ೧೫೦ ಕಿ.ಮೀ. ದೂರವಿರುವ ಜಿಲ್ಲಾ ಕೇಂದ್ರಕ್ಕೆ ಪ್ರಯಾಣಿಸಲು ಟ್ಯಾಕ್ಸಿಯ ಲಭ್ಯವೂ ಇತ್ತಿಲ್ಲ.  ಅದರ ವೆಚ್ಚವನ್ನು ಭರಿಸುವಷ್ಟು ಹಣವಂತೂ ರಾಜಿಂದರನಲ್ಲಿ ಇತ್ತೇ ಇರಲಿಲ್ಲ.  ಹಳ್ಳಿಯ ನಾಯಕರುಗಳ ಬಳಿ ಹೋಗಿ ಅಂಗಲಾಚಿದರೂ, ರಾಜಿಂದರನ ಬವಣೆ ನೀಗದಾಗಿತ್ತು. ಸ್ಥಳೀಯ ಶಾಸಕರು ಎಲ್ಲಿದ್ದಾರೆ ಎಂಬದೇ ಯಾರಿಗೂ ತಿಳಿದಿತ್ತಿಲ್ಲ. ಹಾಲು ಮಾರಲು ಉಪಯೋಗಿಸುತ್ತಿದ್ದ ಹಳೆ ಸೈಕಲ್ಲೊಂದೇ ರಾಜಿಂದರನ ಪಾಲಿಗುಳಿದಿದ್ದ ವಾಹನವಾಗಿತ್ತು. ಹಳ್ಳಿಯ ಸೈಕಲ್ ರಿಪೇರಿಯವನ ಮೊರೆ ಹೋದ ರಾಜಿಂದರ್, ಎರಡು ದಿನ ಮೊದಲೇ ತನ್ನ ಸೈಕಲ್ಲನ್ನು ಸಿದ್ಧಗೊಳಿಸಿಕೊಂಡಿದ್ದೂ ಆಗಿತ್ತು. 

ಮಾರ್ಚ್ ೨೭ರ ಮುಂಜಾನೆಯೇ ರಾಜಿಂದರನ ಸೈಕಲ್ ಪ್ರಯಾಣ ಶುರುವಾಗಿತ್ತು. ಹಿಂಬದಿಯ ಆಸನದಲ್ಲಿ ಮಗಳು ಲಾಜು, ಸುಮಾರು ೩೦ ರೊಟ್ಟಿ-ಪಲ್ಯಗಳ ಗಂಟೊಂದನ್ನು ಹಿಡಿದೇ ಕುಳಿತಿದ್ದಳು. ಸೈಕಲ್ ಪ್ರಯಾಣದ ಮಾರ್ಗದಲ್ಲಿ, ಪೊಲೀಸರ ತಪಾಸಣೆ ಎದುರಾಗಬಹುದೆಂಬ ಆತಂಕ ರಾಜಿಂದರನಿಗೆ ಇದ್ದೇ ಇತ್ತು. ಪೊಲೀಸರ ಸಮಜಾಯಿಷಿಗೆಂದು ಪ್ಲಾಸ್ಟಿಕ್ ಚೀಲವೊಂದರಲ್ಲಿ, ಆಸ್ಪತ್ರೆ ಕಾಗದಗಳು ಹಾಗು ಆಧಾರ್ ಕಾರ್ಡ್ಗಳನ್ನು ಇಟ್ಟುಕೊಂಡು ಹೋಗುವುದನ್ನು ರಾಜಿಂದರ್ ಮರೆತಿರಲಿಲ್ಲ.  ಪ್ರಯಾಣ ೧೫೦ ಕಿ.ಮೀ.ನಷ್ಟು ದೂರದ್ದಾದರೂ, ಸುಮಾರು ೨೦ ಕಿ.ಮೀ.ನಷ್ಟು ದೂರವನ್ನು ತಗ್ಗಿಸುವ ಅಡ್ಡದಾರಿಗಳು ರಾಜಿಂದರನಿಗೆ ತಿಳಿದಿತ್ತು. ಸಾಯಂಕಾಲದ ಸಮಯ ಸಮೀಪಿಸುತ್ತಲೇ, ಅಡ್ಡಮಾರ್ಗವೊಂದರಲ್ಲಿ ಚಲಿಸುತ್ತಿದ್ದ ರಾಜಿಂದರನಿಗೆ, ಇಬ್ಬರು ಪೊಲೀಸ್ ಪೇದೆಗಳು ಎದುರಾಗೇ ಬಿಟ್ಟಿದ್ದರು. ಹಿರಿಯ ಪೇದೆಯ ಮೆಚ್ಚುಗೆ ಗಳಿಸಲೆಂದೇ, ಯುವ ಪೇದೆ ಒಮ್ಮಲೇ ರಾಜಿಂದರನ ಮೇಲೆ ಒಂದೆರಡು ಬಾರಿ ಲಾಠಿ ಪ್ರಯೋಗಿಸಿದ್ದು ಆಗಿ ಹೋಗಿತ್ತು.  ಮತ್ತೆರಡು ಲಾಠಿ ಏಟುಗಳು ರಾಜಿಂದರನ ಸೈಕಲ್ಲನ್ನು ಘಾಸಿಗೊಳಿಸಿತ್ತು. ಕೈ ಜೋಡಿಸಿ ಬೇಡಿದ ಲಾಜುವಿನ ವಿನಂತಿಗೂ ಪೇದೆಗಳ ಕೋಪ ಇಳಿಯದಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿರುವುದಾಗಿ ಲಾಜು ಕಿರುಚಿ ಹೇಳಿದಾಗ ಮಾತ್ರ ಪೊಲೀಸರು ಎತ್ತಿದ್ದ ಕೈಗಳನ್ನು ಇಳಿಸಿದ್ದು.  ಭಯಭೀತನಾದ ರಾಜಿಂದರ್ ಆಸ್ಪತ್ರೆಯ ಕಾಗದಗಳನ್ನು ತೋರಿಸಿದಾಗ ಮಾತ್ರ ಪೇದೆಗಳು ಸುಮ್ಮನಾಗಿದ್ದು. 'ಜಿಲ್ಲಾಸ್ಪತ್ರೆಯಲ್ಲಿನ ಚಿಕಿತ್ಸೆ ನಾಳೆ ದೊರೆಯದಿದ್ದಲ್ಲಿ ಮಗಳ ಜೀವಕ್ಕೇ ಕುತ್ತೆಂದು' ರಾಜಿಂದರ್ ವಿವರಿಸಿ ಹೇಳಿದಾಗ, ಪೊಲೀಸರ ಮನಸ್ಸು ಕರಗಿತ್ತು.  'ನಾವುಗಳು ನಮ್ಮ ಕರ್ತವ್ಯವನ್ನು ಮಾತ್ರ ಮಾಡುತ್ತಿರುತ್ತೇವೆ. ದಾಖಲೆಗಳಿಲ್ಲದೆ ನೀವುಗಳು ಮೇಲಧಿಕಾರಿಗಳ ಕೈಯಲ್ಲಿ ಮುಂದೆ ಸಿಕ್ಕಿ ಬಿದ್ದರೆ, ನಮ್ಮಗಳಿಗೆ ಶಿಕ್ಷೆ ತಪ್ಪಿದ್ದಲ್ಲ. ನಿಮ್ಮನ್ನು ಹೊಡೆದು ನೋಯಿಸಿದ್ದಕ್ಕೆ ಕ್ಷಮೆಯಿರಲಿ' ಎಂದು ತನ್ನ ಕೈಗಳನ್ನು ಮುಗಿಯುತ್ತ ತಿಳಿಸುವ ಹೊತ್ತಿಗೆ, ಹಿರಿಯ ಪೇದೆಯ ಕಣ್ಣಾಲೆಗಳು ತುಂಬಿ ಬಂದಿದ್ದವು. 

ಸೈಕಲ್ ಪ್ರಯಾಣದ ಮೊದಲ ದಿನವೇ ಸುಮಾರು ೮೦ ಕಿ.ಮೀ.ಗಳಷ್ಟು ದೂರ ಸವೆಸಿದ್ದ, ಅಪ್ಪ-ಮಗಳು ದಣಿದಿದ್ದರು. ಕತ್ತಲಾಗುತ್ತಲೇ ಸಮೀಪದ ಶಾಲೆಯೊಂದರ ಜಗುಲಿಯ ಮೇಲೆ ಅವರಿಬ್ಬರೂ ವಿರಮಿಸಿದ್ದರು. ಅದೇ ಕ್ಷಣ, ತಮ್ಮ ಲಾಠಿಗಳನ್ನು ಝಳಪಿಸುತ್ತಾ ಇಬ್ಬರು ಪೊಲೀಸ್ ಪೇದೆಗಳು ಅಲ್ಲಿಗೆ  ಬಂದರು. ವಿನಮ್ರನಾಗಿ ಎದ್ದುನಿಂತ ರಾಜಿಂದರ್, ತಮನ್ನು ಜಗುಲಿಯಿಂದ ಓಡಿಸದಂತೆ ಪೇದೆಗಳಿಗೆ ಕೈಜೋಡಿಸಿದನು. ಕೊಂಚ ಮುಂಚೆ ತಮನ್ನು ಥಳಿಸಿದ್ದ ಪೇದೆಗಳೇ ಮತ್ತೆ ಎದುರಾಗಿದ್ದನ್ನು ಅರಿಯಲು ಲಾಜುವಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ತಾವುಗಳು ಕೂಡ ರಾತ್ರಿಯಲ್ಲಿ ವಿರಮಿಸಲೆಂದೇ ಶಾಲೆಯ ಜಗುಲಿಯನ್ನು ಹುಡುಕಿಕೊಂಡು ಬಂದುದಾಗಿ ಪೊಲೀಸರು ತಿಳಿಸಿದಾಗ, ರಾಜಿಂದರ್ ಆಶ್ಚರ್ಯಚಕಿತನಾದನು. ಹಿರಿಯ ಪೇದೆ ಮಾತು ಮುಂದುವರಿಸುತ್ತಾ, 'ಇಲ್ಲಿ ವಿರಮಿಸದೇ ನಮಗೆ ಬೇರೆ ಮಾರ್ಗವಿಲ್ಲ. ನಾಳೆ ಬೆಳಗಿನ ೬ಕ್ಕೆ ಡ್ಯೂಟಿ ಮೇಲೆ ಹಾಜರಾಗಬೇಕು, ಮನೆಗೆ ಹೋಗಿ ಬರುವಷ್ಟು ಸಮಯಾವಕಾಶವೇ ಇಲ್ಲ' ಎಂದು ತಿಳಿಸದರು. ಲಾಜು ತನ್ನ ರೊಟ್ಟಿಯ ಗಂಟನ್ನು ಬಿಚ್ಚುತ್ತಲೇ, ಇಬ್ಬರೂ ಪೇದೆಗಳು ತಮ್ಮ ಮುಖಗಳನ್ನು ಬೇರೆಡೆ ತಿರುಗಿಸಿದರು. ಹಿರಿಯ ಪೇದೆಯ ಕಡೆ ತಿರುಗಿ 'ಪೊಲೀಸಣ್ಣ, ತಮ್ಮಗಳ ಊಟವಾಯ್ತೆ?' ಎಂದು ಲಾಜು ಕೇಳಿದಾಗ, ಪೇದೆಗಳಿಬ್ಬರೂ ಪೆಚ್ಚಾದರು. ತುಂಬಿ ಬಂದ ಅವರುಗಳ ದನಿಯಲ್ಲೇ, ಅವರುಗಳು ಹಸಿದಿರುವರೆಂದು ಲಾಜುವಿಗೆ ತಿಳಿಯಿತು. 'ರಸ್ತೆ ಬದಿಯ ಸಣ್ಣ ಹೋಟೆಲುಗಳೆಲ್ಲಾ ಲಾಕ್ಡೌನಿಂದ ಮುಚ್ಚಿ ಹೋಗಿವೆ. ಹಾಗಾಗಿ ನಮ್ಮಗಳಿಗೆ ಸಮಯಕ್ಕೆ ಸರಿಯಾಗಿ ಊಟ-ತಿಂಡಿಗಳೇ ಸಿಗದಾಗಿದೆ. ಕೋವಿಡ್ ಕರ್ತವ್ಯಕ್ಕೆ ನೇಮಕಗೊಂಡಾಗ, ೧೫ ದಿನಗಳ ಬಿಡುವಿರದ ಡ್ಯೂಟಿ ಕಡ್ಡಾಯವಾಗಿರುತ್ತದೆ. ಮನೆಗಳಿಗೆ ಹೋಗಿಬರುವಷ್ಟು ಸಮಯ ಇರುವುದೇ ಇಲ್ಲ' ಎಂದು ತಿಳಿಸಿದ ಹಿರಿಯ ಪೇದೆಯ ಮುಖದಲ್ಲಿ ವಿಷಾದವಿತ್ತು. ಎರಡು ಪೇದೆಗಳಿಗೆ ತಲಾ ಎರಡೆರಡು ರೊಟ್ಟಿ-ಪಲ್ಯಗಳನ್ನು ಮೊಸರ ದೊನ್ನೆಯೊಂದಿಗೆ ರಾಜಿಂದರ್ ನೀಡಿದಾಗ, ಪೇದೆಗಳ ಮುಖದಲ್ಲಿ ಮೂಡಿದ ನಗು, ಅವರುಗಳ ಪೊಲೀಸ್ ಸೇವಾ ಬವಣೆಯನ್ನು ಸಾರಿ ಹೇಳಿತ್ತು. 'ನಾವುಗಳು ನಿಮ್ಮನ್ನು ಲಾಠಿಯಿಂದ ಥಳಿಸಿದ್ದೆವು. ತಾವುಗಳು ನಮ್ಮ ಹಸಿದ ಹೊಟ್ಟೆಗೆ ರೊಟ್ಟಿಗಳನ್ನು ನೀಡಿದಿರಿ' ಎಂದು ಹಿರಿಯ ಪೇದೆ ಹೇಳುವಷ್ಟರಲ್ಲಿ, ಅವನ ಕಣ್ಣೀರ ಹನಿಗಳು ಕೈಲಿದ್ದ ರೊಟ್ಟಿಗಳ ಮೇಲೆ ಬಿದ್ದಿತ್ತು. 

ಘಟನೆಯ ವಿವರಗಳನ್ನು ಕೇಳುತ್ತಾ,  ರೋಹಿಣಿಯ ತಂದೆಯಾದ ರಾಜುರವರು  'ಅನುಕಂಪವೆಂಬುದು  ಧನಿಕರ ಹಾಗೂ ಬಲಿಷ್ಠರ ವರ್ಗದಲ್ಲಿ ಕಾಣಸಿಗದಿರಬಹುದು. ಅದು ಹೃದಯವಂತರ ಅಂತರಾಳದ ಮಿಡಿತ ಮಾತ್ರ' ಎಂದು ಉದ್ಗರಿಸುವಷ್ಟರಲ್ಲಿ ಅವರ ಕಣ್ಣುಗಳು ತುಂಬಿ ಬಂದಿದ್ದವು. 

ಮಾರನೆಯ ದಿನದ ಸೂರ್ಯೋದಯಕ್ಕೆ ಮುಂಚೆಯೇ ತನ್ನ ಸೈಕಲ್ ಪ್ರವಾಸವನ್ನು ಆರಂಭಿಸಿದ ರಾಜಿಂದರನಿಗೆ, ಮಧ್ಯಾಹ್ನ ೨ರ ಸಮಯಕ್ಕೆ ಜಿಲ್ಲಾಸ್ಪತ್ರೆಯನ್ನು ಸೇರಲಾರೆ ಎಂಬ ವಿಷಯದ ಅರಿವಾಗಿತ್ತು. ಜಾಣನಾದ ಅವನು ಕೂಡಲೇ ಡಾ. ತೇಜ್ ಕರಣರನ್ನು ಮೊಬೈಲ್ನಿಂದ ಸಂಪರ್ಕಿಸಿ ತನ್ನ ಸೈಕಲ್ ಪ್ರಯಾಣದ ಪ್ರಯಾಸವನ್ನು ವಿವರಿಸಿದನು. ದಯಾವಂತರಾದ ವೈದ್ಯರು ರಾಜಿಂದರನಿಗಾಗಿ ತಡರಾತ್ರಿವರೆಗೂ ಕಾಯುವುದಾಗಿ ಆಶ್ವಾಸನೆಯನ್ನು ನೀಡಿದರು. 

ಎರಡೆನೆಯ ದಿನ ಸೈಕಲ್ ತುಳಿಯುವುದು ರಾಜಿಂದರನಿಗೆ ಹೆಚ್ಚು ಪ್ರಯಾಸವೆನಿಸುತ್ತಿತ್ತು. ಸುಮಾರು ೩೦ ಕಿ.ಮೀ.ನಷ್ಟು ದೂರ ಕ್ರಮಿಸುವಷ್ಟರಲ್ಲೇ ಸೈಕಲ್ ಸರಪಳಿ ತುಂಡಾಯಿತು. ದಿಕ್ಕು ತೋಚದ ರಾಜಿಂದರ್ ಮಗಳೊಂದಿಗೆ ಸೈಕಲ್ ತಳ್ಳುತ್ತಾ ಸಾಗಿ, ಸಮೀಪದ ತೋಟದ ಮನೆಯೊಂದನ್ನು ತಲುಪಿದನು. ಆ ಮನೆಯ ಮಾಲಿಕನು ಇಬ್ಬರಿಗೂ ಊಟವನ್ನು ಉಣ ಬಡಿಸಿದಾಗ, ಅವರುಗಳ ದಣಿವು ಸಾಕಷ್ಟು ನಿವಾರಣೆಯಾಯಿತು. 'ಇದೆ ದಾರಿಯಲ್ಲೇ ಮತ್ತೆ ೩ ಕಿ.ಮೀ.ನಷ್ಟು ದೂರ ನಡೆದರೆ, ಸೈಕಲ್ ರಿಪೇರಿ ಅಂಗಡಿಯೊಂದು ಇದೆ' ಎಂದು ಆ ಮನೆಯ ಮಾಲೀಕ ರಾಜಿಂದರನಿಗೆ ತಿಳಿಸಿದನು. ರಾಜಿಂದರನ ಬಳಿ ಸೈಕಲ್ ರಿಪೇರಿಗೆ ಹಣವಿಲ್ಲದಿದ್ದು, ಅವನು ಆ ಮನೆಯ ಮಾಲೀಕನ ಮುಂದೆ ಹಣಕ್ಕಾಗಿ ಕೈ ಜೋಡಿಸಬೇಕಾಯಿತು. ಎಡಬಿಡದ ತ್ರಿವಿಕ್ರಮನಂತೆ ಸೈಕಲ್ ತಳ್ಳಿದ ರಾಜಿಂದರ್ ಸೈಕಲ್ ರಿಪೇರಿ ಅಂಗಡಿಯನ್ನು ತಲುಪುವಹೊತ್ತಿಗೆ ಹೈರಾಣಾಗಿ ಹೋಗಿದ್ದನು. ರಾಜಿಂದರನ ಪ್ರಯಾಸದ ಕಥೆಯನ್ನು ಕೇಳಿ ಮರುಗಿದ ಸೈಕಲ್ ರಿಪೇರಿಯವನು, ಯಾವುದೇ ಹಣ ಪಡೆಯದೆ ಅವನ ಸೈಕಲ್ ರಿಪೇರಿ ಮಾಡಿಕೊಟ್ಟಾಗ, ರಾಜಿಂದರ್ ಕರಗಿ ನೀರಾಗಿದ್ದನು. 

ಸೈಕಲ್ ಪ್ರಯಾಣ ಮುಂದುವರೆಸಿ ಜಿಲ್ಲಾಸ್ಪತ್ರೆಯನ್ನ ತಲುಪುವ ಹೊತ್ತಿಗಾಗಲೇ ಸಂಜೆಯ ಸಮಯದ ೫ ಘಂಟೆಯಾಗಿತ್ತು. ಕಾಯುತ್ತ ಕುಳಿತಿದ್ದ ಡಾ. ತೇಜ್ ಕರಣರವರು ಕೂಡಲೇ ದಣಿದಿದ್ದ ಇಬ್ಬರಿಗೂ ತಿಂಡಿಯನ್ನು ನೀಡಿ ಉಪಚರಿಸಿದರು. ಲಾಜು ಕೊಂಚ ವಿರಮಿಸಿದನಂತರ ಅವಳಿಗೆ ನಿಗದಿತದ ಪ್ರಮಾಣದ ರಕ್ತ ನೀಡುವ ಚಿಕಿತ್ಸೆಯನ್ನು ವೈದ್ಯರ ತಂಡ ಯಶಸ್ವಿಯಾಗಿ ಮಾಡಿ ಮುಗಿಸಿತ್ತು. ಇನ್ನೆರಡು ತಾಸಿನ ವಿರಾಮದಾನಂತರ ಲವಲವಿಕೆಯಿಂದ ಎದ್ದು ಕುಳಿತ ಮಗಳನ್ನು ನೋಡಿ, ರಾಜಿಂದರನಿಗೆ ತಾನು ಪಟ್ಟ ಶ್ರಮ ಸಾರ್ಥಕವಾಯಿತೆನಿಸಿತು. ಡಾ. ತೇಜ್ ಕರಣ್ ಹಾಗು ಅವರ ತಂಡದ ಸದಸ್ಯರುಗಳು ರಾಜಿಂದರ್ ಹಾಗು ಲಾಜುರವರ ಸಾಹಸವನ್ನು ಹೊಗಳಿ ಮೆಚ್ಚುಗೆಯ ಮಾತುಗಳನ್ನಾ ಡಿದರು.  ಇಬ್ಬರಿಗೂ ಆಸ್ಪತ್ರೆಯಲ್ಲೇ ರಾತ್ರಿ ತಂಗುವ ವ್ಯವಸ್ಥೆಯನ್ನು ವೈದ್ಯರು ಮಾಡಿಕೊಟ್ಟರು. ಮೇಲಧಿಕಾರಿಗಳನ್ನು ಸಂಪರ್ಕಿಸಿದ ಡಾ. ತೇಜ್ ಕರಣ್, ಇಬ್ಬರೂ ಅವರ  ಹಳ್ಳಿಗೆ  ಹಿಂತಿರುಗಲು ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದರು. ಆದರೂ ಮುಗ್ಧ ಮನಸ್ಸಿನ  ಲಾಜುವನ್ನು ಸಮಸ್ಯೆಯೊಂದು ಕಾಡುತ್ತಿತ್ತು. ಅಪ್ಪನ ಸೈಕಲ್ಲನ್ನು ತೆಗೆದುಕೊಂಡು ಹೋಗುವುದು ಹೇಗೆ ಎಂಬುದೇ ಅವಳ ಆತಂಕಕ್ಕೆ ಕಾರಣವಾಗಿತ್ತು. ಸೈಕಲನ್ನು ಆಂಬುಲೆನ್ಸ್ ವ್ಯಾನಲ್ಲೇ ಕೊಂಡೊಯ್ಯಬಹುದೆಂದು ಡಾ. ತೇಜ್ ಕರಣ್ ತಿಳಿಸಿದಾಗ, ಅಪ್ಪ-ಮಗಳ ಆನಂದಕ್ಕೆ ಪಾರವೇ ಇರಲಿಲ್ಲ. 

'ಲಾಕ್ಡೌನ್ ವಿಧಿಸದೇ ವಿಧಿಯಿತ್ತಿಲ್ಲ. ಆದರೆ ಲಾಕ್ಡೌನ್ ಬೇರೆ ಬೇರೆ ಜನಗಳಿಗೆ, ವಿಶೇಷವಾಗಿ ಬಡವರಿಗೆ ಹಲುವು ಕಷ್ಟಗಳನ್ನು ತಂದೊಡ್ಡಿತ್ತು. ದಿನಗೂಲಿ ಕಾರ್ಮಿಕರ ದುಡಿಮೆಗೆ ಕುತ್ತು ಉಂಟಾಗಿದ್ದು ಮಾತ್ರ ಅವರುಗಳಿಗೆ ಭರಿಸಲಾಗದ ಸಮಸ್ಯೆಯಾಗಿತ್ತು. ಸರ್ಕಾರೀ ಹಾಗೂ ಹಲವು ಖಾಸಗಿ ಸಂಸ್ಥೆಗಳ ಪ್ರಯತ್ನದಿಂದ ದಿನಸಿ ಹಾಗು ಸಿದ್ಧ ಭೋಜನದ ಪೊಟ್ಟಣಗಳು ಬಡವರ ಕೈಗಳನ್ನೇನೋ ಸೇರುತ್ತಿದ್ದವು. ಆದರೂ ಎಲ್ಲರಿಗೂ ಆಹಾರದ ಸೌಲಭ್ಯ ಸಾಕಷ್ಟು ಪ್ರಮಾದಲ್ಲಿ ದೊರಕ್ಕುತ್ತಿದೆಯೇ ಎಂಬ ಕಳಕಳಿಯನ್ನು ರೋಹಿಣಿ ತನ್ನ ಸಂಶೋಧನೆಯ ಪುಸ್ತಕದಲ್ಲಿ ದಾಖಲಿಸಿದ್ದು, ತಂದೆ ರಾಜುರವರ ಅಭಿಪ್ರಾಯವೂ ಆಗಿತ್ತು.

                                                                                            ######