Tuesday 6 November 2018

ಮಂಕುತಿಮ್ಮನಿಗೀಗ ೭೫


ಕನ್ನಡದ ಭಗವದ್ಗೀತೆ ಎಂದೇ  ಪ್ರಸಿದ್ಧಿ  ಹೊಂದಿರುವ ಡಿ.ವಿ.ಜಿ.ಯವರ 'ಮಂಕುತಿಮ್ಮನ ಕಗ್ಗ'ಕ್ಕೀಗ (ಬಿಡುಗಡೆ-೧೯೪೩) ೭೫ರ ಸಂಭ್ರಮ. ಸಮಸ್ತ ಕನ್ನಡಿಗರ ಮನೆ-ಮಾನಸದಲ್ಲಿ ನೆಲೆಸಿರುವ ಈ ಕೃತಿ ನಮ್ಮೆಲ್ಲರ ಪಾಲಿಗೆ ಬದುಕಿನ ದಾರಿದೀಪ. 

೧೯೬೬-೬೭ರ ಸಮಯ.  ನಾನಾಗ ೭ನೇ ತರಗತಿಯಲ್ಲಿ ಓದುತ್ತಿದೆ. ನಮ್ಮ ನೆಚ್ಚಿನ ಗುರುಗಳಾದ ನಾರಾಯಣಾಚಾರ್ಯರು ಮಂಕುತಿಮ್ಮನ ಕಗ್ಗದ ಕೆಲವು ಪದ್ಯಗಳ ಪಾಠ ಮಾಡುತಿದ್ದರು. ಮೊದಲ ಪದ್ಯಕ್ಕೆ ವಿವರಿಸುತ್ತಾ, 'ನಮ್ಮ ಶಾಲೆಯೇ ಈ 
(ಹೊಸ ಚಿಗುರು ಮತ್ತು ಹಳೆ ಬೇರು ಸೇರಿದ್ದರೆ ಮರದ ಚೆಲುವು .  ಅಂತೆಯೇ ಹೊಸ ಸಂಶೋಧನೆಗಳ ಜೊತೆ, ಋಷಿ-ಮುನಿಗಳ ಮಾರ್ಗದರ್ಶನವೂ ಸೇರಿಕೊಂಡರೆ, ಮಾನವಕುಲ ಯಶಸ್ಸನ್ನು ಕಾಣುವುದು). 

ಪದ್ಯಕ್ಕೆ ಉದಾಹರಣೆ.  ಮಕ್ಕಳಾದ ನೀವೆಲ್ಲಾ ಹೊಸ ಚಿಗುರುಗಳು. ಉಪಾಧ್ಯಾಯರುಗಳಾದ ನಾವೆಲ್ಲಾ ಹಳೆ ಬೇರುಗಳು. ನಾವು ಭೋಧಿಸುವ  ಸಮಾಜ ಶಾಸ್ತ್ರವೇ ಹಳೆ ತತ್ವ.  ಜೊತೆಗೆ ವಿಜ್ಞಾನವನ್ನೂ ಕಲಿಯುವ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ' ಎಂದರು.  ಅಂದು ಸ್ವಲ್ಪ-ಸ್ವಲ್ಪ ಮಾತ್ರ ಅರ್ಥವಾಗಿತ್ತು. ದಶಕಗಳು ಕಳೆದು, ಹೊಸ ಶತಮಾನವೇ ಉದಯಿಸದರೂ ಈ ಪದ್ಯದ ಸಂದೇಶವನ್ನು ನಮ್ಮ ಜನತೆಯಿನ್ನೂ ಅರ್ಥಮಾಡಿಕೊಳ್ಳದಿರುವುದು ಮಾತ್ರ ವಿಪರ್ಯಾಸವೇ ಸರಿ!

ವರ್ಷಗಳುರುಳಿ ನಾನು ೧೦ನೇ ತರಗತಿಗೆ ಬಂದಿದ್ದೆ. ಕನ್ನಡದ ಮೇಷ್ಟ್ರಾದ   ಸುಬ್ಬಣ್ಣನವರು 
(ಪುಸ್ತಕದಿಂದ ಪಡೆದ ಜ್ಞಾನ ಡಿಗ್ರಿ ಪಡೆಯಲು ಮಾತ್ರ.  ಅನುಭವದಿಂದ ಮೂಡಿದ ಜ್ಞಾನವೇ ಜೀವನಕ್ಕೆ ದಾರಿದೀಪವಾಗಬಲ್ಲದು)

ಪಾಠ ಮಾಡುತ್ತಾ 'ಲೋ ದಡ್ಡ ಶಿಖಾಮಣಿಗಳ, ಬರೀ ಪುಸ್ತಕದ ಬದನೆಕಾಯ್  ಓದೋದ್ರಿಂದ  ಏನೂ ಬರೋಲ್ಲ ಕಣ್ರೊ.  ಬೆಳಿತಾ-ಬೆಳಿತಾ ನಿಮಗಾಗೊ  ಅನುಭವಗಳೇ ನಿಮಗೆ ಪಾಠ ಕಲ್ಸುತ್ತೆ  ಕಣ್ರೊ' ಅಂದಿದ್ರು. 

೧೯೭೦ರ ಸಮಯ.  ನಾನೂ ಕಾಲೇಜು ಮೆಟ್ಟಿಲು ಹತ್ತಿದೆ.  ಜಿ.ಪಿ. ರಾಜರತ್ನಂರವರು ನಮ್ಮ ಕಾಲೇಜಿಗೆ ಬಂದು ಭಾಷಣ ಮಾಡಿದ್ದರು . ಅಂದಿನ ವಿಷಯ  'ದೇವರಿದ್ದಾನೆಯೇ'? ಎಂಬುದು.  ಅನುಭವಿಗಳಾದ ಅವರು ಪ್ರಸ್ತಾಪಿಸಿದ್ದೂ  ಗುಂಡಪ್ಪನವರನ್ನೆ. 


ಇಹುದೋ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ 
ಮಹಿಮೆಯಿಂ ಜಗವಾಗಿ ಜೀವವೇಷದಲಿ 
ವಿಹರಿಪುದದೊಳ್ಳಿತೆಂಬುದು ನಿಸಾದವಾದೊಡಾ 
ಗಹನ ತತ್ತ್ವಕೆ ಶರಣೊ - ಮಂಕುತಿಮ್ಮ 
(ದೇವರು ಇದ್ದನೊ, ಇಲ್ಲವೊ ಎಂಬ ಜಿಜ್ಞಾಸೆ ಮಾನವನಲ್ಲಿದೆ.  ನಮ್ಮ ಸುತ್ತ ಕಾಣುವ ಜೀವರಾಶಿಗಳೆ ದೇವರ ಅಸ್ತಿತ್ವವನ್ನು ಸಾರುತ್ತವೆ).  

ನಮ್ಮ ಸುತ್ತ ಕಾಣುವ ಜೀವರಾಶಿಗಳೇ ದೇವರ ಅಸ್ತಿತ್ವಕ್ಕೆ ಪ್ರಮಾಣ ಎಂದು ಹೇಳಿದ್ದರು. ವಿಜ್ಞಾನದ ವಿದ್ಯಾರ್ಥಿಯಾದ ನನಗಂದು ಅದು ಸರಿಯೆನಿಸಿತ್ತು. 

ಕಾಲ ಮುಂದುವರೆದು ನನ್ನ ವಿದ್ಯಾಭ್ಯಾಸ ಮುಗಿದಿತ್ತು.  ಬ್ಯಾಂಕ್ ನೌಕರಿ ಹಿಡಿದು ಬಡ್ತಿಯನ್ನೂ ಪಡೆದಿದ್ದೆ.  ದೂರದ ಪಂಜಾಬಿನ ಸಣ್ಣ ಊರೊಂದಕ್ಕೆ ಪ್ರಯಾಣ 
(ಬದುಕೆಂಬ ಜಟಕಾ ಬಂಡಿಗೆ ವಿಧಿಯೇ ಸಾಹೇಬ.  ನಾವೆಲ್ಲಾ ಕುದುರೆಗಳು ಮಾತ್ರ. ವಿಧಿ ಓಡಿಸಿದ ಕಡೆ ನಾವು ಓಡಬೇಕೆ ಹೊರೆತು, ನಮಗೆ ಬೇರೆ ಆಯ್ಕೆಗಳಿಲ್ಲ). 

ಬೆಳೆಸಿದ್ದೆ.  ಸ್ವಲ್ಪ ದೂರದ ರೈಲು-ನಿಲ್ದಾಣಕ್ಕೆ ಹೊರಟಿದ್ದು ಜಟಕಾ ಗಾಡಿಯೊಂದರಲ್ಲಿ.   ನನ್ನವರೆಲ್ಲರನ್ನೂ ಬಿಟ್ಟು ಏಕಾಂಗಿಯಾಗಿ  ಹೊರಟಾಗ ಮನಸ್ಸು ಭಾರವಾಗಿತ್ತು. ಎಲ್ಲಾ ವಿಧಿಯಾಟ, ನನ್ನದೇನೂ ಇಲ್ಲ ಅನ್ನಿಸಿತ್ತು. 



ಅಂದಿನ ದಿನಗಳಲ್ಲಿ ಇಂಗ್ಲಿಷ್ ಸಿನಿಮಾ ನೋಡುವುದೆಂದರೆ ಹೆಚ್ಚುಗಾರಿಕೆ. 
(ನಗು, ನಗಿಸು, ನಕ್ಕು-ನಗುತ್ತಾ ಬಾಳುವ ವರವನ್ನು ಪಡೆ ಎಂದು ಡಿ.ವಿ.ಜಿ.ಯವರು ತಿಳಿಹೇಳಿದ್ದಾರೆ).  

ದಿಲ್ಲಿಯಲ್ಲಿ ಚಾರ್ಲಿ ಚಾಪ್ಲಿನರ  'ಮಾಡರ್ನ್ ಟೈಮ್ಸ್' ಸಿನಿಮಾ ನೋಡಿದ್ದೆ.  ಕೈಗಾರಿಕಾ ಕ್ರಾಂತಿ ಉಂಟು ಮಾಡಿದ ಏರುಪೇರುಗಳನ್ನು ಚಾಪ್ಲಿನ್ ಹಾಸ್ಯದ  ಹೊನಲಿನಲ್ಲಿ ಮನಮುಟ್ಟುವಂತೆ ನಿರೂಪಿಸಿದ್ದರು.  'ನಗಿಸಿವುದು ಪರಧರ್ಮ' ಎಂದೇ ಬಾಳಿ ಸಾಧಿಸಿದ ಚಾಪ್ಲಿನ್, ಮತ್ತೊಂದು ಕಡೆ 'ಮಳೆಯಲ್ಲಿ ನೆನೆಯುವುದೆಂದರೆ ನನಗಿಷ್ಟ. ಆಗ ನಾನಳುವುದು ಯಾರಿಗೂ ಕಾಣದು' ಎಂದು ಹೇಳಿಕೊಂಡಿರುವುದು ಎಲ್ಲರ ಮನಸ್ಸನ್ನೂ ಒಮ್ಮೆಯಾದರೂ ಕಲಕದಿರದು. 

೧೯೮೧ರ ಕಡೇ ದಿನಗಳು. ಆಗ ನನಗಂದು ವಿವಾಹದ ಸಂಭ್ರಮ. ಹತ್ತು-ಹಲವು ಉಡುಗೊರೆಗಳು ಬಂದಿದ್ದವು. ಗಮನ ಸೆಳೆದದ್ದು ಆತ್ಮೀಯರೊಬ್ಬರು ನೀಡಿದ ಎರಡು ಪುಸ್ತಕಗಳು. ಒಂದು 'ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ, ಮತ್ತೊಂದೇ ಮಂಕುತಿಮ್ಮನ ಕಗ್ಗ'.  ಕಗ್ಗದ ಕವಿತೆಯೊಂದು ಹೀಗಿತ್ತು. 


(ಬೆಟ್ಟದಡಿಯ ಹುಲ್ಲಾಗು, ಮನೆಗೆ ಮಲ್ಲಿಗೆಯಾಗು, ಕಷ್ಟಗಳನ್ನೆದುರಿಸುವಾಗ ಕಲ್ಲಿನಂತಾಗು, ಬಡವರಿಗೆ ಹಾಯ ಮಾಡು, ಎಲ್ಲರಲ್ಲೂ ಬೆರೆತು ಬಾಳು ಎನ್ನುತ್ತೆ ಈ ಪದ್ಯದ ಸಾರಾಂಶ ). 

'ಮನೆಗೆ ಮಲ್ಲಿಗೆಯಾಗು' ಎಂಬುದು ವಿವಾಹ ಜೀವನದ ಮಾರ್ಗದರ್ಶಿಯಾದರೆ, 'ಎಲ್ಲರೊಳಗೊಂದಾಗು' ಎಂಬ ಸಾಲು ಸಮಗ್ರ ಜೀವನದ ಹಾದಿಯನ್ನು ತೋರಿಸಿತ್ತು. 

ಪ್ರಾಯದ ಆ ದಿನಗಳಲ್ಲಿ ಬೇಗ ಎಲ್ಲವನ್ನೂ ಗಳಿಸಿಕೊಳ್ಳುವ ಹಪಹಪಿ. ಡಿ.ವಿ.ಜಿ. -


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ 
ಚಿನ್ನದಾತುರಕಿಂತ ಹೆಣ್ಣುಗಂಡೊಲವು 
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ 
ತಿನ್ನುವುದಾತ್ಮವನೆ - ಮಂಕುತಿಮ್ಮ  

(ಅನ್ನಕ್ಕಿಂತ ಚಿನ್ನದಾಸೆ ಹೆಚ್ಚು. ಚಿನ್ನಕಿಂತ ಹೆಣ್ಣು-ಗಂಡಿನಾಸೆ ಹೆಚ್ಚು.  ಸಮಾಜದಲ್ಲಿ ಗೌರವ ಗಳಿಸುವ ಆಸೆ ಇವೆಲ್ಲವಕ್ಕಿಂತ ದೊಡ್ದದಾಗಿ ಮನುಷ್ಯನನ್ನು ಕಾಡುತ್ತದೆ). 

ಯವರ ಮೇಲಿನ ಸಾಲುಗಳ ಎಚ್ಚರ ಸಮಂಜಸವಾಗಿದ್ದರೂ, ಬಿಸಿರಕ್ತ ಕೇಳಬೇಕಲ್ಲ!
ಆ ದಿನಗಳಲ್ಲಿ ಸ್ಕೇಲ್-೨ ಬಡ್ತಿ ಯಾವಾಗ? ಮನೆಸಾಲ ಹೆಚ್ಚಾಗುವುದ್ಯಾವಾಗ? ಎಂಬ ಪ್ರಶ್ನೆಗಳದ್ದೇ ನಿತ್ಯ ಜಪವಾಗಿತ್ತು.

ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು 
ಅಸಮಂಜಸದಿ ಸಮನ್ವಯ ಸೂತ್ರ ನಯವ 
ವೆಸನಮಯ ಸಂಸಾರದಲಿ ವಿನೋದವ ಕಾಂಬ 
ರಸಿಕತೆಯೆ ಯೋಗವೆಲೊ - ಮಂಕುತಿಮ್ಮ  

(ಹಣ-ಹಕ್ಕು-ಮನ್ನಣೆಗಳಲ್ಲಿ ತಾರತಮ್ಯ ಇದ್ದದೆ. ದ್ವೇಷ-ಭಿನ್ನಾಭಿಪ್ರಾಯಗಳು ಇದ್ದದೆ. ನೋವುಗಳು ಸಂಸಾರದಲ್ಲಿ ಇದ್ದದೆ. ಇವುಗಳನ್ನೆಲ್ಲ ಸರಿದೂಗಿಸಿಕೊಂಡು ಸಂತೋಷವಾಗಿರುವನೆ ರಸಿಕ ಎನ್ನುತ್ತಾರೆ ಗುಂಡಪ್ಪನವರು). 

ಎಂಬ ಸಾಲುಗಳ ಅರಿವಿದ್ದರೂ, ಎಲ್ಲ ಗಳಿಸಬೇಕೆಂಬ ತುಡಿತ ತಗ್ಗಿತ್ತಿಲ್ಲ. 

ಪಂಜಾಬಿನ ಲೂಧಿಯಾನದಲ್ಲಿ ಸೇವೆ ಸಲ್ಲಿಸುತಿದ್ದ ಸಮಯದಲ್ಲಿ ದೂರದ ನೇಪಾಳದ ಗಡಿಯಿಂದ ವಲಸೆಬಂದ ಬಡ ಯುವಕನೊಬ್ಬ ನಮ್ಮ ಬ್ಯಾಂಕ್ನಲ್ಲಿ ದಿನಗೂಲಿಯ ನೌಕರನಾಗಿದ್ದ. ಒಂದೊಮ್ಮೆ  ಬ್ಯಾಂಕ್ ನಿಯಮಗಳ ಪ್ರಕಾರ ಅವನನ್ನು ಕೆಲಸದಿಂದ ತೆಗೆಯಲಾಗಿತ್ತು. ನಾನು ತೆರೆಮರೆಯಲ್ಲಿ ನಡೆಸಿದ ಸಣ್ಣ ಪ್ರಯತ್ನದಿಂದಾಗಿ ಅವನನ್ನು ಖಾಯಂ ನೌಕರನಾಗಿ ನೇಮಿಸಿಕೊಳ್ಳಲಾಯಿತು. ಸ್ನೇಹಿತರ ಪ್ರಶಂಸೆಯಿಂದ ನಾನು ಉಬ್ಬಿಹೋಗಿದ್ದೆ. ಅಂದು ನನ್ನ ಎಚ್ಚರಿಸಿದ್ದು ಕಗ್ಗದ ಸಾಲುಗಳೆ!



(ಮೊಳಕೆಯೊಡೆಯುವುದು, ಕಾಯಿ ಹಣ್ಣಾಗುವುದು, ಸೂರ್ಯ-ಚಂದ್ರರು ಬೆಳಕನ್ನು ನೀಡುವುದು, ಇವುಗಳೆಲ್ಲ ಪ್ರಕೃತಿಯ ವಿಸ್ಮಯವೆ ಸರಿ. ಆದರೆ ಆ ಕ್ರಿಯೆಗಳೆಲ್ಲಾ ಸದ್ದಿಲ್ಲದೆ ನಡೆಯುತ್ತವೆ. ಅದೇ ರೀತಿ ನಾವು ಮಾಡಿದ ಸಣ್ಣ-ಪುಟ್ಟ ಕೆಲಸಗಳ ಬಗ್ಗೆ ಕೊಚ್ಚಿಕೊಳ್ಳುವುದು ಸರಿಯಲ್ಲ). 

ಸಂಸಾರ ಮುಂದುವರೆದು ಮಕ್ಕಳು ಬೆಳೆದು ನಿಂತಾಗ ಅವರ ಭವಿಷ್ಯದ ಚಿಂತೆ. 
ನಮ್ಮ ಆತಂಕ-ಹೋರಾಟಗಳ ಹೊರೆತಾಗು, ಕಡೆಗೆ ನಿಜವಾಗಿದ್ದು ಕಗ್ಗದ 'ದಿಕ್ಕುವರಿಗವರವರೆ' ಎಂಬ ಸಾಲುಗಳೆ! ಹಿಂತುರಿಗಿ ನೋಡಿದಾಗ ನಮ್ಮ 

(ಮಕ್ಕಳ ಭವಿಷ್ಯದ ಬಗ್ಗೆ ಹಿರಿಯರು  ಅತಿಯಾಗಿ ಮೂಗು ತೂರಿಸುವುದು ಸರಿಯಲ್ಲ.  ಅವರುಗಳು ಅವರ ಮಾರ್ಗವನ್ನು ಕಂಡುಕೊಳ್ಳಲು ಬಿಡುವುದೆ ಸರಿ). 

ಮಾರ್ಗದರ್ಶನಕ್ಕಿಂತ, ನಮ್ಮ ಮಕ್ಕಳುಗಳು ಕಂಡುಕೊಂಡ ದಾರಿಯೇ ಸರಿಯೆನಿಸಿದ್ದು ಸುಳ್ಳಲ್ಲ. 

ಮಂಕುತಿಮ್ಮನ ಕಗ್ಗ ಇಡೀ ವಿಶ್ವದ ಮಹಾಕಾವ್ಯಗಳಲೊಂದು ಎಂಬುದರಲ್ಲಿ ಎರಡು ಮಾತಿಲ್ಲ.  ಆದರೂ ಅಲ್ಲಿಲ್ಲಿ ಸಣ್ಣ-ಪುಟ್ಟ ದೋಷಗಳು ಇಲ್ಲವೆಂದೇನಿಲ್ಲ.  

೧. ಕಗ್ಗದ ಭಾಷೆ ವಚನ ಸಾಹಿತ್ಯದಂತೆ ಸರಳವಲ್ಲ. 
೨. ಒಂದು ಪದ್ಯಕ್ಕೂ ಮತ್ತೊಂದಕ್ಕೂ ಸಂಬಂಧವಿಲ್ಲದಿರುವಂತೆ ಕಂಡುಬರುವುದೂ 
        ಉಂಟು. 
೩. ಈ ಪದ್ಯವನ್ನು ನೋಡಿ.......                                                                        
             (ಹುಲಿ, ಸಿಂಹ ಮುಂತಾದ ಪ್ರಾಣಿಗಳು ಉಸಿರಾಡಿ, ನಾವು ಸೇವಿಸುವ ಗಾಳಿಯನ್ನು ಕಲುಷಿತಗೊಳಿಸುತ್ತವೆ).            

ನಾವಾಡುವ ಉಸಿರನ್ನು ಇತರ ಪ್ರಾಣಿಗಳೂ ಉಸಿರಾಡಿ ಕಲುಷಿತಗೊಳಿಸುತ್ತಿವೆಎಂಬುದು ಸರಿಯೆ? ಪ್ರಕೃತಿಯನ್ನೇ ವಿನಾಶದ             ಅಂಚಿಗೆ ತಳ್ಳಿರುವ ಮಾನವನೆ ಸ್ವಾರ್ಥಿಯಲ್ಲವೆ? 


೪. ನಮ್ಮ ಬದುಕಿನ ಜಟಕಾ ಬಂಡಿಗೆ 'ವಿಧಿ' ಸಾಹೇಬನೆ? ನಾವೆ ಏಕಾಗಬಾರದು?  ನಮ್ಮಿಚ್ಛೆಯಂತೆ ಗಾಡಿಯನ್ನು ಓಡಿಸುವ ಪ್ರಯತ್ನವನ್ನು ಕೈಬಿಡಬೇಕೆ? ಎಂಬ ಸಂದೇಹಗಳು ಕೆಲವರಲ್ಲಾದರೂ ಮೂಡಿರಬಹುದು. 

ಸ್ವತಃ ಗುಂಡಪ್ಪನವರೆ ಕಡೆಯ ಪದ್ಯವೊಂದನ್ನು ಬರೆಯುತ್ತಾ 

 ಸಂದೇಹವೀ ಕೃತಿಯೊಳಿಲ್ಲವೆಂದಲ್ಲ 
ಇಂದು ನಂಬಿಹುದೆ ಮುಂದೆಂದುಮೆಂದಲ್ಲ 
ಕುಂದು ತೋರ್ದಂದದನು  ತಿದ್ದಿಕೊಳೆ ಮನಸುಂಟು 
ಇಂದಿಗೀ ಮತವುಚಿತ - ಮಂಕುತಿಮ್ಮ 
(ನನ್ನ ಕೃತಿಯಲ್ಲಿ ತಪ್ಪಿಲ್ಲವೆಂದಲ್ಲ.  ಇಂದಿನ ಸತ್ಯಗಳೇ  ಎಲ್ಲಕಾಲಕ್ಕೂ ಎಂದೇನಲ್ಲ.  ತಪ್ಪುಗಳನ್ನು ತೋರಿಸಿದರೆ ತಿದ್ದಿಕೊಳ್ಳಲು ಸಿದ್ದನಿದ್ದೇನೆ ಎಂದಿದ್ದಾರೆ ಡಿ.ವಿ.ಜಿ.). 

ಎಂದು ಹೇಳಿ ವಿನಮ್ರತೆ ಮೆರೆದಿದ್ದಾರೆ. 

ಕೇವಲ ಪ್ರೌಢಶಾಲೆವರೆಗೆ ಮಾತ್ರ ಓದಿದ್ದ ಡಿ.ವಿ. ಗುಂಡಪ್ಪನವರು ಅಪಾರವಾದ ಜೀವನಾನುಭವದಿಂದ ಕಲಿತು, ಅದನ್ನೆಲ್ಲಾ ತಮ್ಮ ಕಗ್ಗದಲ್ಲಿ ಅಡಗಿಸಿಟ್ಟಿದ್ದಾರೆಂಬುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಕನ್ನಡಿಗರ ಕುರಿತಾದ 'ಕುರಿತೋದದೆಯುಮ್ ಕಾವ್ಯ ಪ್ರಯೋಗ ಪರಿಣತ ಮತಿಗಳ್' ಎಂಬ 'ಅಮೋಘವರ್ಷ-ಶ್ರೀವಿಜಯರ' ಉದ್ಘಾರಕ್ಕೆ ಜೀವಂತ ಉದಾಹರಣೆ ನಮ್ಮ ಗುಂಡಪ್ಪನವರೆಂದರೆ ಅತಿಶಯೋಕ್ತಿಯ ಮಾತಲ್ಲ. 

(Thanks to the sources of pictures used in this blog).