Saturday 29 May 2021

೧೪. ಅಂತಿಮ ಜಯ ನಮ್ಮದೇ


೧೪

 ಅಂತಿಮ ಜಯ ನಮ್ಮದೇ


 

'ಕೊರೋನಾ ಸೇನಾನಿ'ಗಳಾಗಲು ತಮ್ಮ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಿದ ಮೇಲೆ ರಾಜು ಮತ್ತು ರೋಹಿಣಿಯವರಲ್ಲಿ ಹೊಸದೊಂದು ಉತ್ಸಾಹ ಮೂಡಿತ್ತು. ಅವರಿಬ್ಬರಿಗೂ  'ಸೇವಾ ಮನೋಭಾವ' ಎಂಬುದೇ ಸ್ಫೂರ್ತಿಯಾಗಿತ್ತು. ತನ್ನ ಸಂಶೋಧನೆಯ ಮಂಡನೆಗೆ ಹೆಚ್ಚಿನ ನೈಜತೆ ತರುವುದರಲ್ಲಿ, ಕೆಲವು ತಿಂಗಳುಗಳ 'ಕೊರೋನಾ ಸೇನಾನಿ' ಎಂಬ ಅನುಭವ ಅವಶ್ಯಕವಾದುದು ಎಂಬುದು ರೋಹಿಣಿಗೆ ಚೆನ್ನಾಗಿ ತಿಳಿದಿತ್ತು. 'ಅಪ್ಪಾ, ಸುಂದರ ಗುರಿಗಳ ಹಾದಿಗಳು ಕೆಲವೊಮ್ಮೆ ಕಲ್ಲು ಮುಳ್ಳಿನದಾಗಿರುತ್ತವೆ (difficult roads often lead to beautiful destinations), ಎಂದು ಕೇಳಿದ್ದೇನೆ. ಇದನ್ನೊಂದು ಅಪೂರ್ವ ಅವಕಾಶ ಎಂದು ಸ್ವೀಕರಿಸೋಣ,' ಎಂದಿದ್ದಳು ರೋಹಿಣಿ. 

'ರೋಹಿಣಿ, "ಕೋವಿಡ್ ಮಣಿಸಲು ಯೋಗ" ಎಂಬ ಆನ್ಲೈನ್ ಕಾರ್ಯಕ್ರಮವೊಂದು ನಾಳೆ ಇದೆ.  ಆ ಕಾರ್ಯಕ್ರಮವನ್ನು ಪ್ರಸಿದ್ಧ ಯೋಗ ಶಿಕ್ಷಕಿಯಾಗಿರುವ "ಜಾನಕೀ ಅಯ್ಯಂಗಾರ್"ರವರು ನಡೆಸಿಕೊಡುತ್ತಾರಂತೆ. ನಾಳಿನ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳೋಣವೇ?' ಎಂದರು ರಾಜು. 

'ನಿಮ್ಮ ಸಲಹೆ ಉತ್ತಮವಾದುದೇ. ಕೋವಿಡ್ ರೋಗವನ್ನು ದೂರವಿಡುವಲ್ಲಿ ನಮಗೆ ಹೆಚ್ಚಿನೆ ನಿರೋಧಕ ಶಕ್ತಿಯನ್ನು ತಂದು ಕೊಡಬಲ್ಲ, ಹಲವಾರು ಯೋಗಾಸನಗಳಿವೆ ಎಂದು ಕೇಳಿದ್ದೇನೆ. ಕೊರೋನಾ ಸೇನಾನಿಗಳಾಗಿ ಸೇವೆ ಸಲ್ಲಿಸಲು ನಾವಿಬ್ಬರೂ ಮುಂದಾಗಿರುವುದರಿಂದ, ಮುಂದಿನ ದಿನಗಳಲ್ಲಿ ನಮಗೆ ಸೋಂಕಿನ ಸಾಧ್ಯತೆ ಹೆಚ್ಚಾಗಿರುವುದು. ಆದುದರಿಂದ ನಾವುಗಳು ನಮ್ಮ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಹೆಚ್ಚು ಪ್ರಯತ್ನಗಳನ್ನು ಮಾಡಬೇಕು.  ಆ ನಿಟ್ಟಿನಲ್ಲಿ ಈ ಯೋಗದ ಕಾರ್ಯಕ್ರಮವು ಸಹಾಯಕವಾಗಬಲ್ಲದು,' ಎಂದಳು ರೋಹಿಣಿ. 

೨೦೨೦ರ ಆಗಸ್ಟ್ ತಿಂಗಳ ಅಂತಿಮ ಭಾನುವಾರದ ಅಂದು ಯೋಗ ಕಾರ್ಯಕ್ರಮದ ದಿನವಾಗಿತ್ತು. ರಾಜು ಮತ್ತು ರೋಹಿಣಿಯವರಿಬ್ಬರೂ ತಮ್ಮ ತಮ್ಮ ಲ್ಯಾಪ್ಟಾಪ್ಗಳ ಮುಂದೆ ಸಿದ್ಧರಾಗಿ ಕುಳಿತಿದ್ದರು. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತ್ತು. ಮೊದಲನೆಯದಾಗಿ, ಜಾನಕಿಯವರ ತಂದೆಯವರಾದ ನರಸಿಂಹ ಅಯ್ಯಂಗಾರ್ರವರ ಪ್ರಾಸ್ತಾವಿಕ  ಭಾಷಣವಿತ್ತು. ಅನುಭವಿ ಆಯುರ್ವೇದದ ವೈದ್ಯರು ಕೂಡ ಆಗಿದ್ದ ಅವರ ಭಾಷಣದ ವಾಗ್ಝರಿ ಹೀಗೆ ಸಾಗಿತ್ತು. 'ಇಡೀ ವಿಶ್ವವೀಗ ಕೋವಿಡ್ ಮಹಾಮಾರಿಯ ಸುಳಿವಿನಲ್ಲಿ ಸಿಕ್ಕಿ ನಲುಗುತ್ತಿದೆ. ನಮ್ಮ ಭಾರತೀಯ ಪರಂಪರೆಯ ಹಲವು ಮುನಿವರ್ಯರು, ಪ್ರಪಂಚವನ್ನು ಸಧ್ಯದಲ್ಲೇ ಕೋವಿಡ್ನಂತಹ  ರೋಗವೊಂದು ಕಾಡಬಹುದೆಂಬ ಮುನ್ಸೂಚನೆಯನ್ನು, ಸುಮಾರು ಒಂದು ವರ್ಷದ ಹಿಂದೆಯೇ ನೀಡಿದ್ದರು. ಮೊನ್ನೆ ಇನ್ನೂ ನೇಪಥ್ಯಕ್ಕೆ ಸರಿದಿರುವ "ವಿಕಾರಿ ನಾಮ ಸಂವತ್ಸರ (೨೦೧೯-೨೦)"ದ ಅಂತ್ಯ, ಇಡೀ ವಿಶ್ವವನ್ನು "ವಿಕಾರ"ವಾದಂತಹ ಪರಿಸ್ಥಿತಿಗೆ ತಳ್ಳಿದೆ. ವಿಶ್ವವನ್ನು ಕಾಡುತ್ತಿರುವ ಈ ವಿಚಿತ್ರ ರೋಗಕ್ಕೆ ಮದ್ದನ್ನು ಹುಡುಕುವುದು ಕಷ್ಟಸಾಧ್ಯ. ಹಲವು ಬಾರಿ ಮರುಕಳಿಸುವ ಆ ರೋಗದ ಹೊಸ ಹೊಸ ಅಲೆಗಳಿಗೆ ವಿಶ್ವವು ನಲುಗುವುದು ಖಚಿತ. ಕೋಟಿಗಟ್ಟಲೆ ಸಾವು-ನೋವುಗಳಾಗಬಹುದು. ಮಹಾಮಾರಿಯನ್ನು ನಿಯಂತ್ರಿಸಲಾಗದೆ, ವಿಶ್ವದ ಹಲವು ಖ್ಯಾತ ನಾಯಕರುಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳಬಹುದು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಮಹಾಮಾರಿಯ ತೀವ್ರತೆ, ನಮ್ಮ ಭಾರತದ ಮೇಲೆ ಕಮ್ಮಿ ಇರುವುದೆಂದೇ ಹೇಳಬಹುದು. ಆ ಮಹಾಮಾರಿಯನ್ನು ಹತ್ತಿಕ್ಕುವುದರಲ್ಲಿ, ನಮ್ಮ ಆಯುರ್ವೇದದ ವೈದ್ಯರುಗಳು ಕಂಡುಹಿಡಿಯಬಹುದಾದ ಔಷಧವೊಂದು ಪರಿಣಾಮಕಾರಿಯಾಗುವುದು. ಆ ದಿವ್ಯ ಔಷಧದ ಸಹಾಯದಿಂದ ಇಡೀ ವಿಶ್ವವನ್ನು ಕಾಪಾಡಿ, ಭಾರತ ವಿಶ್ವಗುರುವಾಗಿ ಹೊರಹೊಮ್ಮುವುದು.'  

ಕಾರ್ಯಕ್ರಮದ ಮುಂದಿನ ಭಾಗವಾಗಿ ಜಾನಕೀರವರ ಯೋಗ ಕುರಿತಾದ "ಪ್ರಾತ್ಯಕ್ಷಿಕೆ" ಶುರುವಾಗಿತ್ತು. 'ಕೋವಿಡ್-೧೯ ರೋಗವು ಮುಖ್ಯವಾಗಿ ಮಾನವನ ಶ್ವಾಸಕೋಶಗಳನ್ನು ಹಾನಿಗೊಳಿಸುತ್ತದೆ. ಆದುದರಿಂದ, ಕೋವಿಡ್ ನಿಯಂತ್ರಿಸಲು ಬೇಕಾದ ನಿರೋಧಕ ಶಕ್ತಿಯನ್ನು ಗಳಿಸಿಕೊಳ್ಳಲು ನಾವು ನಮ್ಮ ಶ್ವಾಸಕೋಶಗಳನ್ನು ಬಲಪಡಿಸಿಕೊಳ್ಳಬೇಕು. ನಮ್ಮ ಯೋಗ ಶಾಸ್ತ್ರದ "ಪ್ರಾಣಾಯಾಮ" ಎಂಬ ವಿಧಿಯ ಆವಿಷ್ಕಾರದ ಮೂಲೋದ್ದೇಶವೇ, ನಮ್ಮ ಶ್ವಾಸಕೋಶಗಳ ಬಲವರ್ಧನೆ. ನಮ್ಮ ಉಸಿರಾಟದ ಕ್ರಮವನ್ನು ನಿಯಂತ್ರಿಸುವ ವಿಶೇಷ ವಿಧಾನವೇ "ಪ್ರಾಣಾಯಾಮ"ವೆಂದು ಹೇಳಬಹುದು. ಇಂದು ನಾನು ತಮ್ಮಗಳಿಗೆ ಪ್ರಾಣಾಯಾಮದ ಮೂರು ಮುಖ್ಯ ವಿಧಾನಗಳಾದ "ಭಸ್ತ್ರಿಕ, ಕಪಾಲಭಾತಿ ಮತ್ತು ಅನುಲೋಮ-ವಿಲೋಮ"ಗಳನ್ನು, ಪ್ರಾತ್ಯಕ್ಷಿಕೆ ಮುಖಾಂತರ ವಿವರಿಸುತ್ತೇನೆ. ಕೋವಿಡ್ ರೋಗವನ್ನು ನಿಯಂತ್ರಿಸಲು ಬೇಕಾದ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು, ನಮ್ಮ ಪ್ರಾಣಾಯಾಮವೇ ಅತ್ಯಂತ ವೈಜ್ಞಾನಿಕವಾದ ಮಾರ್ಗವೆಂಬುದು ತಮ್ಮಗಳಿಗೆ ಇಂದು ಮನವರಿಕೆಯಾಗುವುದು ಖಂಡಿತ.'

'ತಾವೆಲ್ಲರೂ ಈಗ ಪ್ರಾಣಾಯಾಮದ ಪ್ರಕ್ರಿಯೆಗಳನ್ನು ಅಭ್ಯಾಸ ಮಾಡಲು ಸಿದ್ಧರಾಗಿ. ಮೊದಲ ಪ್ರಕ್ರಿಯೆಯನ್ನು "ಭಸ್ತ್ರಿಕ" ಎಂದು ಕರೆಯುತ್ತಾರೆ. ದೀರ್ಘವಾಗಿ ಉಸಿರನ್ನು ಒಳಗೆಳೆದುಕೊಳ್ಳುವುದು (ಉಚ್ಛ್ವಾಸ) ಮತ್ತು ದೀರ್ಘವಾಗಿ ಉಸಿರನ್ನು ಹೊರಬಿಡುವುದು (ನಿಶ್ವಾಸ), ಈ ಎರಡು ಪ್ರಕ್ರಿಯೆಗಳಿಗೆ "ಭಸ್ತ್ರಿಕ" ಎಂದು ಹೆಸರು.' ಭಸ್ತ್ರಿಕ ಪ್ರಕ್ರಿಯೆಯನ್ನು ಜಾನಕಿರವರು ಪ್ರಾತ್ಯಕ್ಷಿಕೆಯ ಮುಖಾಂತರ ವಿವರಿಸಿದರು.  ರಾಜು ಮತ್ತು ರೋಹಿಣಿಯರಿಬ್ಬರೂ ತಮ್ಮ ತಮ್ಮ ಆಸನಗಳ ಮೇಲೇ ಕುಳಿತು, ಭಸ್ತ್ರಿಕ ಪ್ರಕ್ರಿಯೆಯನ್ನು ಜಾನಕಿರವರ ಮಾರ್ಗದರ್ಶನದ ಪ್ರಕಾರ ನಿರ್ವಹಿಸಿದರು. 'ಹೊಸದಾಗಿ ಮಾಡುವವರು ೧೦-೧೨ ಭಸ್ತ್ರಿಕ ಪ್ರಕ್ರಿಯೆಗಳವರೆಗೆ ಮಾಡಬಹುದು. ಕ್ರಮೇಣವಾಗಿ ಪ್ರಕ್ರಿಯೆಗಳ ಸಂಖ್ಯೆಗಳನ್ನು ಹೆಚ್ಚಿಸುತ್ತಾ ಹೋಗಬಹುದು.' 

ಮುಂದಿನ ಸರದಿ "ಕಪಾಲಭಾತಿ"ಯದಾಗಿತ್ತು. 'ಕಪಾಲಭಾತಿಯನ್ನು "ಪ್ರಾಣಾಯಾಮಗಳ ರಾಜ"ನೆಂದು ಕರೆಯುತ್ತಾರೆ. ಈ ವಿಧಾನದಲ್ಲಿ, ಮೂಗಿನ ಹೊಳ್ಳೆಗಳ ಮುಖಾಂತರ ಚಿಕ್ಕದಾಗಿ ಮತ್ತು ಬಲವಾಗಿ ಉಸಿರನ್ನು ಹಲವು ಬಾರಿ ಹೊರಹಾಕಬೇಕು (ನಿಶ್ವಾಸ). ಉಚ್ಛ್ವಾಸ (ಉಸಿರನ್ನು ಒಳಗೆಳುದುಕೊಳ್ಳುವ ಕ್ರಿಯೆ) ಪ್ರಕ್ರಿಯೆ ತನಗೆ ತಾನೇ ಆಗುತ್ತದೆ. ನೀವುಗಳು ೨೦ ಪ್ರಕ್ರಿಯೆಗಳೊಂದಿಗೆ ಆರಂಭಿಸಿ, ಕ್ರಮೇಣವಾಗಿ ೧೦೦ರವರೆಗೆ ಹೋಗಬಹುದು,' ಎಂದು ವಿವರಿಸಿದ ಜಾನಕಿಯವರು ಕಪಾಲಭಾತಿಯ ವಿಧಾನವನ್ನು ಮಾಡಿ ತೋರಿಸಿಕೊಟ್ಟರು. ಮಿಕ್ಕೆಲ್ಲರೂ ಪ್ರಕ್ರಿಯೆಯನ್ನು ವಿಧೇಯರಾಗಿ ಪಾಲಿಸಿದರು. 

ಪ್ರಾಣಾಯಾಮದ ಮೂರನೇ ಪ್ರಕ್ರಿಯೆಯನ್ನು "ಅನುಲೋಮ-ವಿಲೋಮ" ಎಂದು ಕರೆಯುತ್ತಾರೆ. 'ತಮ್ಮ ಬಲ ಹೊಳ್ಳೆಯನ್ನು ತಮ್ಮ ಬಲ ಹೆಬ್ಬೆಟ್ಟಿನಿಂದ ಮುಚ್ಚಿಕೊಳ್ಳಿ  ಮತ್ತು ಎಡ ಹೊಳ್ಳೆಯ ಮುಖಾಂತರ ದೀರ್ಘವಾಗಿ ಉಸಿರನ್ನೆಳೆದುಕೊಳ್ಳಿ. ಈಗ ತಮ್ಮ ಎಡ ಹೊಳ್ಳೆಯನ್ನು ಮುಚ್ಚಿಕೊಳ್ಳಿ ಮತ್ತು ತಮ್ಮ ಬಲ ಹೊಳ್ಳೆಯ ಮುಖಾಂತರ ದೀರ್ಘವಾಗಿ ಉಸಿರನ್ನು ಹೊರ ತಳ್ಳಿ. ಆನಂತರ ಉಸಿರನ್ನು ಒಳಗೆ ಳುದುಕೊಳ್ಳುವ ಪ್ರಕ್ರಿಯೆ ತಮ್ಮ ಬಲ ಹೊಳ್ಳೆಯ ಮುಖಾಂತರ ನಡೆಯಲಿ ಮತ್ತು ಉಸಿರನ್ನು ಹೊರಹಾಕುವ ಪ್ರಕ್ರಿಯೆ ತಮ್ಮ ಎಡ ಹೊಳ್ಳೆಯಿಂದಾಗಲಿ. ಈ ರೀತಿಯ ಜೋಡಿ ಪ್ರಕ್ರಿಯೆಗೆ ಒಂದು "ಅನುಲೋಮ-ವಿಲೋಮದ"ದ ಸುತ್ತು ಎಂದು ಹೇಳುತ್ತಾರೆ. ಈ ವಿಧಾನದಿಂದ ಉಸಿರಿನ ಶಕ್ತಿಯ ನಿರ್ವಹಣೆ ಮತ್ತು ಸಂರಕ್ಷಣೆ ಉತ್ತಮವಾಗಿ ಆಗುತ್ತದೆ. ಅಭ್ಯಾಸವನ್ನು ಶುರು ಮಾಡುತ್ತಾ, ತಾವುಗಳು ಈ ಪ್ರಕ್ರಿಯೆಯನ್ನು ದಿನವೊಂದಕ್ಕೆ ೧೦-೧೨ ಬಾರಿ ಮಾಡಬಹುದು' ಎಂದು ಸಾಗಿತ್ತು ಜಾನಕಿಯವರ ಪ್ರಾತ್ಯಕ್ಷಿಕೆ. ವಿಧೇಯರಾದ ಎಲ್ಲಾ  ಅಭ್ಯರ್ಥಿಗಳು ತಮ್ಮ ಗುರುಗಳು ತೋರಿಸಿಕೊಟ್ಟ ವಿಧಾನವನ್ನು, ಚಾಚೂ ತಪ್ಪದೇ ಅನುಸರಿಸಿದರು. 

'ಪ್ರಾಣಾಯಾಮದ ಅಭ್ಯಾಸ  "ಓಂಕಾರ"ದ ಉದ್ಘೋಷದೊಂದಿಗೆ ಮುಗಿಯಬೇಕು. ಉದ್ಘೋಷದ ಮೊದಲು ತಾವು ದೀರ್ಘವಾಗಿ ಉಸಿರನ್ನು ಒಳಗೆಳೆದುಕೊಳ್ಳಬೇಕು. ಉಸಿರನ್ನು ಹೊರ ಹಾಕುವ ಪ್ರಕ್ರಿಯೆ ಆದಷ್ಟೂ ದೀರ್ಘವಾಗಿದ್ದು, "ಓಂಕಾರ"ದ ಗಟ್ಟಿಯಾದ ಉಚ್ಚಾರದೊಂದಿಗೆ ಸಾಗಬೇಕು. ಆರಂಭದಲ್ಲಿ ೪-೫ ಸುತ್ತುಗಳೊಂದಿಗೆ ಶುರುಮಾಡಿ, ಈ ಪ್ರಕ್ರಿಯೆಯನ್ನು ೨೦ ಸುತ್ತುಗಳವರೆಗೆ ಹೆಚ್ಚಿಸುತ್ತಾ ಸಾಗಬಹುದು' ಎಂದಿತ್ತು ಜಾನಕಿಯವರ ವಿವರಣೆ.  ಓಂಕಾರದ ಉದ್ಘೋಷದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಯೋಗದ ಕಾರ್ಯಕ್ರಮ ಮುಗಿದನಂತರ ರಾಜುರವರು ತಮ್ಮ ಮಗಳೊಂದಿಗೆ ಮಾತನಾಡುತ್ತಾ, 'ಇಂದಿನ ಕಾರ್ಯಕ್ರಮವೊಂದು ದೈವೀಕ ಅನುಭವವಾಗಿತ್ತಲ್ಲವೇ?' ಎಂದರು. 

'ಹೌದು, ಅದೊಂದು ದೈವೀಕ ಅನುಭವವೇ ಆಗಿತ್ತು. ಪ್ರಾಣಾಯಾಮದಿಂದ ನಮ್ಮ ಶ್ವಾಸಕೋಶಗಳ ಶಕ್ತಿ ವೃದ್ಧಿಸಿ, ನಮ್ಮಲ್ಲಿ ಕೋವಿಡ್ ರೋಗವನ್ನು ಧೈರ್ಯವಾಗೆದುರಿಸುವ ಆತ್ಮವಿಶ್ವಾಸವು  ಮೂಡುವುದರಲ್ಲಿ  ಅನುಮಾನವಿಲ್ಲ,' ಎಂಬುದು ರೋಹಿಣಿಯ ಅನಿಸಿಕೆಯಾಗಿತ್ತು. 

ಆದರೆ ಆಯುರ್ವೇದದ ವೈದ್ಯರಾದ ನರಸಿಂಹ ಅಯ್ಯಂಗಾರ್ರವರು ವ್ಯಕ್ತ ಪಡಿಸಿದ ವಿಚಾರಗಳ ಬಗ್ಗೆ ರೋಹಿಣಿಗೆ ತೀವ್ರ ಅಸಮಾಧಾನವಿತ್ತು. 'ಅವರ ವಿಚಾರಗಳು ಆಯುರ್ವೇದದ ವಿಚಾರಗಳಿಗಿಂತ, ಬುರುಡೆ ಭವಿಷ್ಯಕಾರರ ವಾಣಿಯಂತಿತ್ತು. ಅವರ ವಿಚಾರಗಳನ್ನೆಲ್ಲಾ ನಂಬಬಹುದೇ?'  

'ನರಸಿಂಹ ಅಯ್ಯಂಗಾರ್ರವರ ಭವಿಷ್ಯ ವಾಣಿಯನ್ನು ಕುರಿತಾದ ನಿನ್ನ ಅಸಮ್ಮತಿ ನನಗರ್ಥವಾಗುತ್ತದೆ. ಆ ರೀತಿಯ ಭವಿಷ್ಯ ವಾಣಿಗಳನ್ನು ಗೌರವಿಸುವ ಹಲವರು ನಮ್ಮ ದೇಶದಲ್ಲಿದ್ದಾರೆ. ಆಯುರ್ವೇದದ ಔಷಧಗಳ ವಿಚಾರಕ್ಕೆ ಬರೋಣ. ನಮ್ಮ ಭಾರತೀಯ ಪದ್ಧತಿಯಾದ ಆಯುರ್ವೇದದ ಬಗ್ಗೆ ಹಲವರು ಹಗುರವಾಗಿ ಮಾತನಾಡುತ್ತಾರೆ. ನಮ್ಮ ದೇಶವಾದ ಭಾರತದಲ್ಲಿ ಅಲೋಪಥಿಯೂ ಸೇರಿದಂತೆ, ಸುಮಾರು ಏಳು ವಿಭಿನ್ನ ಚಿಕಿತ್ಸಾ ಪದ್ಧತಿಗಳು ಜಾರಿಯಲ್ಲಿವೆ. "ಆಯುರ್ವೇದ, ಸಿದ್ಧ, ಯುನಾನಿ, ಯೋಗ, ಪ್ರಾಕೃತಿಕ ಚಿಕಿತ್ಸೆ (naturopathy) ಮತ್ತು ಹೋಮಿಯೋಪಥಿ," ಮುಂತಾದ ಚಿಕಿತ್ಸಾ ವಿಧಾನಗಳು ನಮ್ಮ ದೇಶದ ಒಂದಿಲ್ಲೊಂದು ಮೂಲೆಯಲ್ಲಿ ಜನಪ್ರಿಯವಾಗಿವೆ. ಅವುಗಳಲ್ಲಿನ  ಮೊದಲೈದು ಪದ್ಧತಿಗಳು ಶುದ್ಧ ಭಾರತೀಯ ಪದ್ಧತಿಗಳಾಗಿದ್ದು, ಅನಾದಿ ಕಾಲದಿಂದಲೂ ನಮ್ಮಲ್ಲಿ ಜಾರಿಯಲ್ಲಿವೆ. ವಿಶ್ವದಲ್ಲಿನ ಪ್ರತಿಯೊಂದು ಚಿಕಿತ್ಸಾ ವಿಧಾನಗಳಲ್ಲೂ, ಕೆಲವು ವಿಶೇಷಗಳು ಮತ್ತು ಕೆಲವು ನ್ಯೂನ್ಯತೆಗಳು ಇದ್ದೇ ಇರುತ್ತವೆ. ಅಲೋಪಥಿಯ ಎಲ್ಲಾ ವಿಧಿ-ವಿಧಾನಗಳು ಸರಿಯೆಂದು ಹೇಳಲಾಗದು. "ಮರಳಿ ಪ್ರಯತ್ನಿಸುವ ಮತ್ತು ಕಾದು ನೋಡುವ (trial and error, wait and watch)" ತಂತ್ರಗಳು ಅಲೋಪಥಿ ಪದ್ಧತಿಯ್ಲಲೂ ಇದ್ದೇ ಇದೆ. ೧೯೧೮ರಲ್ಲಿ "ಸ್ಪ್ಯಾನಿಷ್ ಫ್ಲೂ"ವನ್ನು ಹರಡಿದ್ದ ವೈರಾಣುವೇ, ೨೦೦೯ರಲ್ಲಿ "ಹಂದಿ ಜ್ವರ"ವನ್ನು ತಂದು ಹರಡಿತ್ತು ಎಂಬ ಬಲವಾದ ವಾದವಿದೆ. ೨೦೦೯ರಲ್ಲೂ, ಹಂದಿ ಜ್ವರವನ್ನು ನಿಯಂತ್ರಿಸುವಲ್ಲಿ ನಮ್ಮ ಅಲೋಪಥಿ ವೈದ್ಯರುಗಳು ತಿಣುಕಾಡಿದ್ದು ಸುಳ್ಳಲ್ಲ. ಇಂದಿಗೂ ನಮ್ಮ ಅಲೋಪಥಿ ವಿಜ್ಞಾನಿಗಳಿಗೆ, "ಸ್ಪ್ಯಾನಿಷ್ ಫ್ಲೂ - ೧೯೧೮ರ ವೈರಾಣು"ವಿನ  ಬಗ್ಗೆ ಹೆಚ್ಚು ತಿಳಿದಿಲ್ಲ. ಒಂದು ಶತಮಾನದಷ್ಟರ ದೀರ್ಘಾವಧಿಯಲ್ಲಿ ನಮ್ಮ ಅಲೋಪಥಿ ವೈದ್ಯರುಗಳು ಹಾಗೂ ವಿಜ್ಞಾನಿಗಳು ಮಾಡಿದ್ದಾದರೂ ಏನು? ಎಂದು ನಾವು ಆರೋಪಿಸಬಹುದಲ್ಲವೇ?

ರೋಹಿಣಿ, ನಿನಗೆ ತಿಳಿದಿರುವಂತೆ ಹಲವು ವರ್ಷಗಳಿಂದ ನನ್ನನ್ನು "ಬೆನ್ನು ನೋವು" ತೀವ್ರವಾಗಿ ಕಾಡುತ್ತಿದೆ. ಮೂಳೆ ತಜ್ಞರ (orthopaedic surgeon) ಆಸ್ಪತ್ರೆಯ ಕಡೆಗಿನ ನನ್ನ ದಂಡಯಾತ್ರೆಯನ್ನು ನೀನು ನೋಡುತ್ತಲೇ ಬಂದಿದ್ದೀಯ. ನನಗೇನಾದರೂ ಶಾಶ್ವತ ಪರಿಹಾರ ದೊರೆತಿದೆಯೇ? ಹಾಗೆಂದು ನಾನು ಆ  ವೈದ್ಯರನ್ನು ದೂಷಿಸುವುದಿಲ್ಲ. ಅವರಿಗೆ ತಿಳಿದಿರುವ ಎಲ್ಲಾ ಪ್ರಯತ್ನಗಳನ್ನೂ ಅವರು ಮಾಡುತ್ತಾ ಬಂದಿದ್ದಾರೆ.  ಅದೇ ರೀತಿಯ ರಿಯಾಯಿತಿ, ಅನುಕಂಪಗಳು ಬೇರೇ ಪದ್ಧತಿಯ ವೈದ್ಯರುಗಳ ಮೇಲೂ ಇರಲಿ ಎಂಬುದೇ ನನ್ನ ಪ್ರಾಮಾಣಿಕ ಅನಿಸಿಕೆ. ಆದರೆ, ಭಾರತೀಯ ಚಿಕಿತ್ಸಾ ಪದ್ಧತಿಗಳ ಮೇಲೆ ಆರೋಪವನ್ನು ಹೊರಿಸುವಲ್ಲಿ ಮಾತ್ರ, ನಮ್ಮಲ್ಲಿ ಹಲವರು  ಅಷ್ಟೊಂದು ತೀಕ್ಷ್ಣರಾಗುತ್ತಾರೇಕೆ?' ಎಂದು ಸಾಗಿತ್ತು ರಾಜುರವರ ವಿಚಾರ ಸರಣಿ. 

'ಅಪ್ಪಾ, ನಿಮ್ಮ ವಿಚಾರದಲ್ಲಿ ಸತ್ಯವಿಲ್ಲದಿಲ್ಲ. ಭಾರತದಾದ್ಯಂತ ನಮ್ಮ ಆಯುರ್ವೇದದ ವೈದ್ಯರುಗಳು, ಕೋವಿಡ್ ರೋಗಕ್ಕೆ ಔಷಧಗಳನ್ನು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಅವರುಗಳಲ್ಲಿ ಕೆಲವರು ತಮ್ಮ ಔಷಧಗಳು ಪರಿಣಾಮಕಾರಿಯಾಗಿವೆ ಎಂದೂ ಘೋಷಿಸಿದ್ದಾರೆ. ಕೆಲವು ರಾಜ್ಯಗಳಲ್ಲಿ ಅಂತಹ ಔಷಧಗಳನ್ನು, ಕೋವಿಡ್ ರೋಗಿಗಳ ಮೇಲೆ ಪ್ರಯೋಗಿಸಿ ನೋಡುವ ಅನುಮತಿಯನ್ನೂ ನೀಡಿದ್ದಾರೆ. ಕೆಲವು ಕೇಂದ್ರಗಳಲ್ಲಿನ ಫಲಿತಾಂಶಗಳು ಆಶಾದಾಯಕವಾಗಿವೆ. "ಆಯುರ್ವೇದದ ಔಷಧಗಳಿಂದ ಗುಣಮುಖರಾದರು ಎಂಬ ರೋಗಿಗಳಿಗೆ, ಅಲೋಪಥಿಯ ಔಷಧಗಳನ್ನೂ ನೀಡಲಾಗಿತ್ತು" ಎಂಬುದನ್ನು ಮರೆಯುವಂತಿಲ್ಲ ಎಂಬುದು ಅಲೋಪಥಿ ವೈದ್ಯರುಗಳ ವಾದ. ಆದರೂ, ಆಯುರ್ವೇದದ ವೈದ್ಯರುಗಳ ಔಷಧಗಳಿಗೂ ಅರ್ಹ ವೇದಿಕೆ ದೊರೆಯಲಿ, ಆ ಔಷಧಗಳೂ ಎಲ್ಲಾ ಪರೀಕ್ಷೆಗಳಿಗೂ ಒಳಪಡಲಿ ಎಂಬುದು ನನ್ನ ಅನಿಸಿಕೆ. ಅವಕಾಶವನ್ನೇ ನೀಡದೆ ಆಯುರ್ವೇದದ ಔಷಧಗಳನ್ನು ಅಲ್ಲಗಳೆಯುವುದು ಸರಿಯಲ್ಲ.'  

ರಾಜುರವರು ಮಾತು ಮುಂದುವರೆಸುತ್ತಾ, 'ನಿನ್ನ ವಿಚಾರಗಳು ಸರಿ ಎಂಬುದು ನನ್ನ ಅಭಿಪ್ರಾಯ. ಆಯುರ್ವೇದದ ಔಷಧಗಳ ಬಗ್ಗೆ ನಡೆಯುತ್ತಿರುವ ತನಿಖೆಗಳ ಬಗ್ಗೆ ನಾನೂ ಕೇಳಿದ್ದೇನೆ. ನಮ್ಮ ಕೆಲವು ಅಲೋಪಥಿ ವೈದ್ಯರುಗಳೂ, ಆಯುರ್ವೇದದ ಔಷಧಗಳ ಬಗ್ಗೆ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.  ಅವುಗಳಿಂದ ಅಡ್ಡ ಪರಿಣಾಮದ ಸಾಧ್ಯತೆ ಅತ್ಯಂತ ಕಡಿಮೆ ಎಂಬುದನ್ನು ಹಲವರು ಅನುಮೋದಿಸುತ್ತಾರೆ. "ಬೆಳ್ಳುಳ್ಳಿ, ಶುಂಠಿ, ಮೆಣಸು, ಈರುಳ್ಳಿ ಮತ್ತು ಜೇನುತುಪ್ಪ"ಗಳ ಆಯುರ್ವೇದದ ಕಷಾಯ, ವೈರಾಣುಗಳ ಸೋಂಕನ್ನು ತಡೆಯಬಲ್ಲದು ಎಂಬುದನ್ನು, ಹಲವು  ಅಲೋಪಥಿಯ ವೈದ್ಯರುಗಳೂ ಒಪ್ಪುತ್ತಾರೆ.

"ಗೌಟ್ (Gout ಎಂಬುದು ಒಂದು ರೀತಿಯ arthritis ರೋಗ)" ರೋಗದ ಚಿಕಿತ್ಸೆಗೆ ನೀಡುವ "ಕೋಲ್ಚಿಸೀನ್ (Colchicine)" ಎಂಬ ಗಿಡಮೂಲಿಕೆಗಳ ಮೂಲದ ಔಷಧವು ೨೦೦೦ ವರ್ಷಗಳಷ್ಟು ಹಳೆಯದು. ಆ ಔಷಧವು ಕೋವಿಡ್ ರೋಗದ ನಿವಾರಣೆಗೂ ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಗ್ರೀಸ್ ದೇಶದಲ್ಲಿ ಆ ಔಷಧಿಯ ಮೇಲಿನ ಸಂಶೋಧನೆ ಸಾಗಿದ್ದು, ಫಲಿತಾಂಶಗಳು ಹೊಸ ಭರವಸೆಯನ್ನು ಮೂಡಿಸಿವೆ. ಅದೇ ಔಷಧದ ಬಳಕೆ ಭಾರತೀಯ ಆಯುರ್ವೇದದ ಪದ್ಧತಿಯಲ್ಲೂ ಇದೆ ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಏನೇ ಆಗಲಿ, ಭಾರತೀಯ ಔಷಧಗಳು ಬಡವರ ಪಾಲಿಗೆ ದುಬಾರಿಯಲ್ಲದ್ದು, ಮತ್ತು ಅವುಗಳಿಂದ ಅಡ್ಡ ಪರಿಣಾಮಗಳ ಸಾಧ್ಯತೆ ಕಡಿಮೆ. ಆದುದರಿಂದ ಅವುಗಳ ಮೇಲಿನ ಪ್ರಯೋಗಗಳು ನಿರಂತರವಾಗಿ ಸಾಗಲಿ' ಎಂದರು. 

###  

ಅಂತೂ, ಬಹು ನಿರೀಕ್ಷೆಯ ಆ ದಿನ ಬಂದಿತ್ತು. ಸರಕಾರದ ವತಿಯಿಂದ ರಾಜು ಮತ್ತು ರೋಹಿಣಿರವರನ್ನು, 'ಕೊರೋನಾ ಸೇನಾನಿ'ಗಳೆಂದು ಅಧಿಕೃತವಾಗಿ ಗುರುತಿಸಿ, ಕರೆಪತ್ರವನ್ನು ನೀಡಲಾಗಿತ್ತು. ಅದೇ ದಿನ ಡಾ. ಕಿರಣರಿಗೆ ಸುದ್ದಿಯನ್ನು ಮುಟ್ಟಿಸಿದ ಅವರಿಬ್ಬರೂ, ಅಂದೇ ಕರ್ತವ್ಯಕ್ಕೆ ಹಾಜರಾಗಿದ್ದರು. 'ಕೊರೋನಾ  ಸೇನಾನಿಗಳನ್ನು ನಿಯಂತ್ರಿಸುವ ಕೋಣೆ (digital war room)'ಯ ಮುಖಾಂತರ ಕೊರೋನಾ ಸೇನಾನಿಗಳನ್ನು ನಿಯಂತ್ರಿಸಲಾಗುತ್ತಿತ್ತು. ಕೊರೋನಾ ಸೇನಾನಿಗಳಿಗೆ ವಹಿಸಬಹುದಾದ ವಿವಿಧ ಕಾರ್ಯಗಳ ಪಟ್ಟಿ ಕೆಳಕಂಡಂತಿತ್ತು. 

-ದಿನಸಿ ಪೊಟ್ಟಣಗಳ ವಿತರಣೆ 

-ಹಿರಿಯ ನಾಗರೀಕರು ಮತ್ತು ದೈಹಿಕ ಸವಾಲುಗಳನ್ನೆದುರಿಸುತ್ತಿರುವವರಿಗೆ (physically challenged) ಔಷಧ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವುದು 

-ಸಾಮೂಹಿಕ ಅಡುಗೆ ಮನೆಗಳಲ್ಲಿ ಸಿದ್ಧ ಪಡಿಸಿದ ಆಹಾರಗಳನ್ನು ಪೊಟ್ಟಣಗಳಲ್ಲಿರಿಸುವುದು 

-ಅವಶ್ಯಕತೆ ಇದ್ದವರಿಗೆ 'ಫೋನ್ ಮುಖಾಂತರ ಔಷಧ (telemedicine)'ಗಳ ವ್ಯವಸ್ಥೆ ಮಾಡುವುದು 

-ಕೊರೋನಾ ರೋಗಿಗಳ ಮತ್ತು ಕ್ವಾರಂಟೈನ್ಗೆ ಒಳಪಟ್ಟವರ ಮನೆಗಳ ಮುಂದೆ ಎಚ್ಚರಿಕೆಯ ಪತ್ರಗಳನ್ನು ಅಂಟಿಸುವುದು 

-ಕೊಳಚೆ ಪ್ರದೇಶ ಮತ್ತು ಹಳ್ಳಿ ಪ್ರದೇಶಗಳಲ್ಲಿ ಮಾಸ್ಕ್, ಸಾಬೂನು ಮುಂತಾದ ಸಾಮಗ್ರಿಗಳ ವಿತರಣೆ 

-ಜಿಲ್ಲಾಡಳಿತ ಏರ್ಪಡಿಸುವ ಕೊರೋನಾ ನಿರ್ವಹಣೆ ಕುರಿತಾದ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದು 

-ವಲಸಿಗ ಕೆಲಸಗಾರರಿಗೆ ಸೂಕ್ತ ಸಲಹೆಗಳನ್ನು ನೀಡುವುದು ಮತ್ತು ಅವರುಗಳು 'ಸೇವಾಸಿಂಧು' ಅರ್ಜಿಗಳನ್ನು ತುಂಬಿಸಿ, ಸರಕಾರಕ್ಕೆ  ಸಲ್ಲಿಸುವಲ್ಲಿ ಸಹಾಯ ಮಾಡುವುದು

ಹೀಗಿರಲು ಒಂದು ದಿನ, ಸೇನಾನಿಗಳ ಸಭೆಯೊಂದರಲ್ಲಿ ತಂಡದ ನಾಯಕರ ಕೋರಿಕೆಯೊಂದಿತ್ತು. ೮೦ ವರ್ಷದ ವಯೋವೃದ್ಧರೊಬ್ಬರಿಗೆ  ಸಹಾಯವೊಂದು ಬೇಕಿತ್ತು. ಕೃಷ್ಣ ಸೋಲಂಕಿ ಎಂಬ ಹೆಸರಿನ ಅವರು ಪಾರ್ಶ್ವವಾಯು (paralysis)ವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಅವರ ಪತ್ನಿ ಜಯ ಸೋಲಂಕಿರವರಿಗೆ ಸುಮಾರು ೭೦ ವರ್ಷಗಳಾಗಿದ್ದು, ಪ್ರತಿ ವಾರ ಅವರಿಗೆ ಡಯಾಲಿಸಿಸ್ (dialysis) ಚಿಕಿತ್ಸೆಯ ಅವಶ್ಯಕತೆ ಇತ್ತು. ವೃದ್ಧ ದಂಪತಿಗೆ ಮಕ್ಕಳಿರಲಿಲ್ಲ. ಸಮೀಪದ ಹಳ್ಳಿಯ ಯುವಕನೊಬ್ಬನು ಪ್ರತಿ ವಾರ ಆಕೆಯನ್ನು, ಸುಮಾರು ೬೦ ಕಿ.ಮೀ.ರಷ್ಟು ದೂರವಿರುವ ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ಡಯಾಲಿಸಿಸ್ ಚಿಕಿತ್ಸೆಯನ್ನು ಕೊಡಿಸುವ ಸತ್ಕಾರ್ಯವನ್ನು ಮಾಡುತ್ತಿದ್ದನು. ತುರ್ತು ಕಾರಣಗಳಿಗಾಗಿ ಅಂದು,  ಆ ಯುವಕನು ದೂರದ ಊರಿಗೆ ತೆರಳಿದ್ದನು. ಹಾಗಾಗಿ ಆ ಕಾರ್ಯವನ್ನು ಮಾಡುವ ಸೇನಾನಿಯೊಬ್ಬರನ್ನು ಹುಡುಕುವ ಭಾರ ತಂಡದ ನಾಯಕರ ಮೇಲಿತ್ತು. ಹಿರಿಯ ಸೇನಾನಿಗಳಾದ ರಾಜುರವರು ಆ ಕಾರ್ಯವನ್ನು ವಹಿಸಿಕೊಂಡಿದ್ದು, ಎಲ್ಲರಿಗೂ ಸ್ಫೂರ್ತಿದಾಯಕವಾಗಿತ್ತು. 

ಹತ್ತು ವರ್ಷಗಳಷ್ಟು ಹಳೆಯದಾದ ರಾಜುರವರ ಕಾರು, ಓಡಿದ್ದಕ್ಕಿಂತ ನಿಂತ್ತಿದ್ದೇ ಜಾಸ್ತಿಯಾಗಿತ್ತು. ಆದರೂ ರಾಜುರವರು ಆ ಕಾರಿನ ಸುಸ್ಥಿತಿಯ ನಿರ್ವಹಣೆಯಲ್ಲಿ ಉದಾಸೀನ ಮಾಡುತ್ತಿರಲಿಲ್ಲ. ಅವರೇ ಕಾರನ್ನು ಚಲಾಯಿಸುತ್ತಾ, ಕೃಷ್ಣ ಸೋಲಂಕಿಯವರ ಮನೆಯಿಂದ ವೃದ್ಧೆಯನ್ನು ಕೊಂಡೊಯ್ದು ಡಯಾಲಿಸಿಸ್ ಆಸ್ಪತ್ರೆಯನ್ನು ತಲುಪಿಸಿದ್ದರು. ಡಯಾಲಿಸಿಸ್ ಪ್ರಕ್ರಿಯೆ ಮುಗಿಯಲು ಸುಮಾರು ನಾಲ್ಕು ಘಂಟೆಗಳ ಕಾಲ ಕಾಯಬೇಕಾಗಿ ಬಂತು. ಸಮಾಧಾನದಿಂದ ಕಾದ ರಾಜುರವರು, ಚಿಕಿತ್ಸೆ ಮುಗಿದನಂತರ ವೃದ್ಧೆಯನ್ನು ಕ್ಷೇಮವಾಗಿ ಮನೆ ತಲುಪಿಸಿದ್ದರು. ಕೃಷ್ಣ ಮತ್ತು ಜಯ ಸೋಲಂಕಿರವರ ಆನಂದಕ್ಕೆ ಅಂದು ಪಾರವೇ ಇರಲಿಲ್ಲ. ಮನಸಾರೆ ಹರೆಸಿ, ಅವರು ರಾಜುರವರನ್ನು ಬೀಳ್ಕೊಟ್ಟಿದ್ದರು. 

ಮತ್ತೊಂದು ತಡ ರಾತ್ರಿ, 'ಕೊರೋನಾ ವಾರ್ ಕೋಣೆ'ಯಿಂದ ತುರ್ತು ಕರೆಯೊಂದು ಬಂದಿತ್ತು. ರಾಜು ಮತ್ತು ರೋಹಿಣಿಯರಿಬ್ಬರೂ ಕರೆಯನ್ನು ಸ್ವೀಕರಿಸಿ ಸಭೆಯಲ್ಲಿ ಭಾಗಿಗಳಾಗಿದ್ದರು. ತಂಡದ ನಾಯಕರ ಮಾತಿನಲ್ಲಿ ಸಾಕಷ್ಟು ಆತಂಕವಿತ್ತು. ಯುರೋಪ್ ಖಂಡದ ದೊಡ್ಡ ನಗರವೊಂದರಲ್ಲಿ, ಸುಮಾರು ೨೬೦ ಭಾರತೀಯರು ಸಿಲುಕಿಕೊಂಡಿದ್ದರು. ಅವರುಗಳಲ್ಲಿ ಬಹುತೇಕರು ಹಿರಿಯ ನಾಗರೀಕರಾಗಿದ್ದರು. ಕಳೆದೆರಡು ವಾರದಿಂದ ಅತಂತ್ರರಾದ ಅವರುಗಳು, ಭಾರತಕ್ಕೆ ಮರಳಲು ವಿಮಾನ  ದೊರಕದೆ ಪರೆದಾಡುತ್ತಿದ್ದರು. ಅಂದು, ಭಾರತ ಸರಕಾರವು ಅವರುಗಳನ್ನು ವಾಪಸ್ಸು ಕರೆ ತರಲು ವಿಮಾನವೊಂದನ್ನು ಕಳುಹಿಸುವ ಏರ್ಪಾಡನ್ನು ಮಾಡಿತ್ತು. ಆದರೆ, ಆ ವಿಮಾನದಲ್ಲಿ ಗಗನ ಸಖಿಯರ ತೀವ್ರ ಕೊರತೆಯಿತ್ತು. 'ಆ ವಿಮಾನದಲ್ಲಿರುವ ಒಂದೆರಡು ಹಿರಿಯ ಗಗನ ಸಖಿಯರಿಗೆ ಸಹಾಯಕರಾಗಿ ಹೋಗಲಿಚ್ಛಿಸುವ, ಸುಮಾರು ೨೫ರ ಪ್ರಾಯದ ಯುವತಿಯರು ನನಗೆ ತಮ್ಮ ಹೆಸರುಗಳನ್ನು ಈಗಲೇ ನೀಡಿ. ಇಂದೊಂದು ತುರ್ತು ಕರೆಯಾದುದರಿಂದ, ಅಭ್ಯರ್ಥಿಗಳಿಗೆ ಯಾವುದೇ ಅನುಭವ ಅಥವಾ ತರಬೇತಿಗಳ ಅವಶ್ಯಕತೆ ಇಲ್ಲ. ಇಚ್ಛೆಯುಳ್ಳ,  ಪಾಸ್ಪೋರ್ಟ್ ಇಲ್ಲದವರೂ ಮುಂದೆ ಬರಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ  "ಕೋವಿಡ್ ರೋಗ"ದ ಪರೀಕ್ಷೆಯನ್ನು ವಿಮಾನ ನಿಲ್ದಾಣದಲ್ಲೇ ಮಾಡಲಾಗುವುದು.  ಕೊರೋನಾ ಪರಿಸ್ಥಿತಿ ಇರುವುದರಿಂದ, ಕಾರ್ಯದಲ್ಲಿ ಪಾಲ್ಗೊಳ್ಳುವ  ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ, ಎಲ್ಲಾ ಮುಂಜಾಗರೂಕತೆಗಳನ್ನೂ ಅನುಸರಿಸಲಾಗುವುದು. "ಕೋವಿಡ್ ಇಲ್ಲ"ವೆಂಬ ಪ್ರಮಾಣ ಪತ್ರವನ್ನು, ಅಲ್ಲಿನ  ಸ್ಥಳೀಯ ವೈದ್ಯರಿಂದ ಪಡೆದವರನ್ನು ಮಾತ್ರ ಭಾರತಕ್ಕೆ ವಾಪಸ್ಸು ಕರೆ ತರಲಾಗುವುದರಿಂದ, ತಮ್ಮಗಳಲ್ಲಿ ಆತಂಕ ಬೇಡ' ಎಂದು ಕೋರಿಕೊಂಡ ತಂಡದ ನಾಯಕರು, ಪ್ರತಿಕ್ರಿಯೆಗಳಿಗಾಗಿ ಕಾಯುತ್ತಾ ಕುಳಿತಿದ್ದರು.  

ಕೋರಿಕೆಯ ಪ್ರಕಟಣೆಯನಂತರ, ಸದಸ್ಯರುಗಳು ತಮ್ಮ ತಮ್ಮ ಮನೆಯವರೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸಲೆಂದು, ೩೦ ನಿಮಿಷಗಳ ವಿರಾಮವನ್ನು ನೀಡಲಾಗಿತ್ತು. ವಿರಾಮದ ವೇಳೆಯಲ್ಲಿ, ರೋಹಿಣಿ ತನ್ನ ತಂದೆಯೊಂದಿಗೆ ಚರ್ಚಿಸಿದ್ದಳು. 'ಅಪ್ಪಾ, ನಾನು ೨೫ರ ಒಳಗಿನ ಪ್ರಾಯದ ಯುವತಿ. ನನ್ನ ಹತ್ತಿರ ಪಾಸ್ಪೋರ್ಟ್ ಕೂಡಾ ಇದೆ. ಭಾರತದಲ್ಲಿನ ವಿವಿಧ ನಗರಗಳಿಗೆ ನಾನು ಸುಮಾರು ಏಳು ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದೇನೆ. ಆದುದರಿಂದ, ಗಗನ ಸಖಿಯರ ಕೆಲಸವೇನೆಂಬುದರ ಅರಿವು ನನಗಿದೆ. ಹೇಗೂ ಇಬ್ಬರು ನುರಿತ ಗಗನ ಸಖಿಯರು ಇದ್ದು, ನನಗೆ ಮಾರ್ಗದರ್ಶನ ನೀಡುತ್ತಾರೆ. ನಾನೇಕೆ ಈ ಕೆಲಸಕ್ಕೆ ಮುಂದಾಗಬಾರದು?' 

'ಮಗಳೇ, ನಿನ್ನ ಬಗ್ಗೆ ನನಗೆ ಹೆಮ್ಮೆಯೆನಿಸುತ್ತಿದೆ. ನಿನ್ನ ಧೈರ್ಯ ಮತ್ತು ಸೇವಾ ಮನೋಭಾವಗಳನ್ನು ನೋಡಿ ನನ್ನ ಮನಸ್ಸು ತುಂಬಿ ಬಂದಿದೆ. ಸಂಕಷ್ಟಗಳಿಗೆ ಸಿಲುಕಿರುವ ಮನುಷ್ಯರುಗಳಿಗೆ ಸಹಾಯ ಹಸ್ತ ಚಾಚುವುದೊಂದು ಮಹತ್ಕಾರ್ಯ. ದೇವರ ಆಶೀರ್ವಾದ ನಿನ್ನೊಂದಿಗಿರಲಿ' ಎಂದು ತುಂಬು ಮನಸ್ಸಿನಿಂದ ಹರಸಿದ್ದರು, ತಂದೆ ರಾಜು. 

ಆನ್ಲೈನ್ ಸಭೆ ಮತ್ತೆ ಸೇರಿದ ಕ್ಷಣವೇ, ರೋಹಿಣಿ ತುದಿಗಾಲಿನಲ್ಲಿ ನಿಂತಿದ್ದಳು. 'ಗಗನ ಸಖಿಯರ ಸಹಾಯಕಿಯಾಗಿ ಕಾರ್ಯ ನಿರ್ವಹಿಸಲು ನಾನು ಸಿದ್ಧಳಿದ್ದೇನೆ' ಎಂದು ಕಿರುಚುತ್ತಾ ನುಡಿದ ರೋಹಿಣಿಯ ಧ್ವನಿಯಲ್ಲಿ ಕಾತರವಿತ್ತು. 

ವಿಮಾನ ಪ್ರಯಾಣದ ದಿನ ಸಮೀಪಿಸುತ್ತಿತ್ತು. ರೋಹಿಣಿಯ ಗೆಳೆಯನಾದ ಡಾ. ಕಿರಣ್ ಕೊಂಚ ಚಿಂತಿತನಾಗಿದ್ದನು. ತನ್ನ ಆತಂಕಗಳನ್ನು ತೋರ್ಪಡಿಸದೇ, ಅವನು ಗೆಳತಿ ರೋಹಿಣಿಯೊಂದಿಗೆ ಮಾತನಾಡಿದ್ದನು. 'ರೋಹಿಣಿ, ನಿನ್ನ ಬಗ್ಗೆ ನನ್ನಲ್ಲೀಗ ಹೆಚ್ಚಿನ ಗೌರವ ಮೂಡಿದೆ. ನಿನ್ನ ನಿಸ್ವಾರ್ಥ ಸೇವೆಗೆ ನನ್ನದೊಂದು ನಮನವಿರಲಿ. ಆದರೆ ನೀನು ಮುನ್ನೆಚ್ಚರಿಕೆಯಿಂದಿರಬೇಕು. "ಪಿ.ಪಿ.ಇ. ತೊಡುಗೆ"ಯನ್ನು ಅವರು ನೀಡಿದರೆ, ಅದನ್ನು ತಪ್ಪದೇ ಧರಿಸು. ಎನ್-೯೫ ಮಾಸ್ಕ್ಗಳನ್ನು ಮತ್ತು ಕೈ-ತೊಡುಗೆ (hand-gloves)ಗಳನ್ನು ನಾನು ನೀಡುತ್ತೇನೆ. ಅವುಗಳ ಧಾರಣೆ ನಿರಂತರವಾಗಿರಲಿ. ಆದಷ್ಟೂ ಸಾಮಾಜಿಕ ಅಂತರವನ್ನು ಕಾಪಾಡಿಕೊ. ಹಾರಾಟ ತಂಡದ ಮುಖ್ಯಸ್ಥರುಗಳು ನಿನಗೆ ಸಾಕಷ್ಟು ಎಚ್ಚರಿಕೆಗಳನ್ನು ನೀಡುತ್ತಾರೆ.  ಅವುಗಳನ್ನು ಚಾಚೂ ತಪ್ಪದೆ ಪಾಲಿಸು. ನಿನ್ನ ಕಾರ್ಯ ಯಶಸ್ವಿಯಾಗಿ ಸಾಗಲಿ.' 

ರಾಜು ಮತ್ತು ಕಿರಣರಿಬ್ಬರೂ, ರೋಹಿಣಿಯನ್ನು ಬೀಳ್ಕೊಡಲು ವಿಮಾನ ನಿಲ್ದಾಣದವರೆಗೆ ಬಂದಿದ್ದರು. ಎರಡೂ ಕಡೆಯ ಹಾರಾಟದ ಸಮಯದಲ್ಲೂ ಪಿ.ಪಿ.ಇ. ತೊಡುಗೆಗಳೊಂದಿಗೆ ಎಲ್ಲಾ ಸಲಕರಣೆಗಳನ್ನೂ, ಸ್ವಯಂ ಸೇವಕರಿಗೆ ನೀಡುವುದಾಗಿ ವಿಮಾನದ ಮುಖ್ಯಸ್ಥರು ಪ್ರಕಟಿಸಿದ್ದು, ಮೂವರಿಗೂ ಸಮಾಧಾನವನ್ನು ತಂದಿತ್ತು. ತಂದೆಗೆ ನಮಸ್ಕರಿಸಿ, ಕಿರಣನಿಗೆ 'ಬೈ' ಹೇಳಿದ ರೋಹಿಣಿ ವಿಮಾನದ ಕಡೆ ಹೊರಟಳು. 

ಯೂರೋಪಿನ ಆ ಮಹಾ ನಗರದಿಂದ ಭಾರತದ ಕಡೆಯ ಹಾರಾಟದ ದಿನ ಅದಾಗಿತ್ತು. ಎಲ್ಲಾ ೨೬೦ ಪ್ರಯಾಣಿಕರೂ ವಿಮಾನದಲ್ಲಿ ಆಸೀನರಾಗಿ ಕುಳಿತಿದ್ದರು. ಅವರೆಲ್ಲರೂ 'ಕೋವಿಡ್ ಇಲ್ಲ'ವೆಂಬ ಪ್ರಮಾಣ ಪತ್ರವನ್ನು ಸ್ಥಳೀಯ ವೈದ್ಯರಿಂದ ಹೊಂದಿದವರಾಗಿದ್ದರು. ರೋಹಿಣಿಯೂ ಸೇರಿದಂತೆ  ವಿಮಾನದ ತಂಡದ ಎಲ್ಲ ಸದಸ್ಯರುಗಳಿಗೂ, ಕೋವಿಡ್ ಇಲ್ಲವೆಂದು ಪರೀಕ್ಷೆಯ ಮೂಲಕ ದೃಢ ಪಡಿಸಿಕೊಳ್ಳಲಾಗಿತ್ತು. ತಂಡದ ಎಲ್ಲಾ ಸದಸ್ಯರುಗಳಿಗೂ ಪಿ.ಪಿ.ಇ. ತೊಡುಗೆಗಳೊಂದಿಗೆ ಎಲ್ಲಾ ಸುರಕ್ಷಾ ಸಲಕರಣೆಗಳನ್ನೂ ನೀಡಲಾಗಿತ್ತು. ಮನ್ನೆಚ್ಚರಿಕೆಯ ಎಲ್ಲಾ ಸೂಚನೆಗಳನ್ನೂ ತಂಡದ ಸದಸ್ಯರುಗಳೆಲ್ಲರಿಗೂ ಸ್ಪಷ್ಟವಾಗಿ ನೀಡಲಾಗಿತ್ತು. ಪ್ರಯಾಣಿಕರೆಲ್ಲರುಗಳನ್ನೂ ಸಾಮಾಜಿಕ ಅಂತರವಿರುವಂತೆ ಆಸೀನರನ್ನಾಗಿಸಿತ್ತು. ಪ್ರತಿ ಎರಡು ಪ್ರಯಾಣಿಕರುಗಳ ನಡುವೆ ಮಧ್ಯದ ಆಸನವನ್ನು ಖಾಲಿ ಬಿಡಲಾಗಿತ್ತು. ಪ್ರಯಾಣಿಕರುಗಳಿಗೆ ಮುನ್ಸೂಚನೆಯನ್ನು, ಇದ್ದ ಎರಡು ನುರಿತ ಗಗನ ಸಖಿಯರೇ ನೀಡಿದ್ದರು. ವಿಧೇಯಳಾದ ರೋಹಿಣಿ ತನ್ನ ಸೇವೆಯಲ್ಲಿ ನಿರತಳಾಗಿದ್ದಳು. ಆ ವಿಮಾನ ಭಾರತವನ್ನು ತಲುಪಲು ಸುಮಾರು ಹತ್ತು ಘಂಟೆಗಳ ಹಾರಾಟವನ್ನು ನಡೆಸಿತ್ತು. ಭಾರತದ ವಿಮಾನ ನಿಲ್ದಾಣದಲ್ಲಿ ಕ್ಷೇಮವಾಗಿ ವಿಮಾನ ನೆಲಕ್ಕಿಳಿದಾಗ, ಎಲ್ಲಾ ೨೬೦ ಪ್ರಯಾಣಿಕರೂ ಮತ್ತು ತಂಡದ ಸದಸ್ಯರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ವಿಮಾನದಿಂದಿಳಿದ ಎಲ್ಲರನ್ನೂ, ವಿಮಾನ ನಿಲ್ದಾಣದಲ್ಲೇ  ಪರೀಕ್ಷೆಗೊಳಪಡಿಸಲಾಯಿತು. ಪರೀಕ್ಷೆಗಳು ಮುಗಿದನಂತರ ರೋಹಿಣಿಯನ್ನು ಮನೆಗೆ ಕಳುಹಿಸುವ ಮುನ್ನ, ಹತ್ತು ದಿನಗಳ ಕ್ವಾರಂಟೈನಿನಲ್ಲಿರುವಂತೆ ಸೂಚಿಸಿ ಬೀಳ್ಕೊಡಲಾಯಿತು. ರೋಹಿಣಿಯನ್ನು ಸ್ವಾಗತಿಸಲು ಬಂದಿದ್ದ ಕಿರಣ್ ಮತ್ತು ರಾಜುರವರಿಬ್ಬರೂ, ರೋಹಿಣಿಯೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳ ಬೇಕಾಯಿತು. ಮೂರು ದಿನಗಳನಂತರ ಮತ್ತೊಮ್ಮೆ ಪರೀಕ್ಷೆಗೊಳಪಡುವಂತೆ ರೋಹಿಣಿಗೆ ಸೂಚಿಸಲಾಗಿತ್ತು. 

***

ರೋಹಿಣಿಯ ಸಾಹಸದ ಸೇವೆಯ ಬಗ್ಗೆ, ತಂದೆ ರಾಜು ಮತ್ತು ಕಿರಣರಿಬ್ಬರಿಗೂ ಹೆಮ್ಮೆಯೆನಿಸಿತ್ತು. ರೋಹಿಣಿಯೊಂದಿಗೆ ಕಿರಣ್ ಮಾತನಾಡುತ್ತಾ, 'ಮೂರು ದಿನಗಳನಂತರ ನೀನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು ಎಂದು ಸೂಚಿಸಿದ್ದಾರೆ. ಮುಂಜಾಗರೂಕತೆಯ ಎಲ್ಲಾ ಕ್ರಮಗಳನ್ನು ವಿಮಾನ ಪ್ರಯಾಣದ ಎಲ್ಲಾ ಹಂತಗಳಲ್ಲೂ ಶಿಸ್ತಿನಿಂದ ಅನುಸರಿಸಿರುವುದರಿಂದ,  ನೀನು ಭಯ ಪಡಬೇಕಿಲ್ಲ' ಎಂದಿದ್ದನು. 

ಮೂರು ದಿನಗಳು ಕಳೆದನಂತರ, ಗೆಳಯ ಕಿರಣ್ ಮತ್ತು ತನ್ನ ತಂದೆ ರಾಜುರವರೊಂದಿಗೆ ರೋಹಿಣಿ ಕೋವಿಡ್ ಪರೀಕ್ಷೆಗೆಂದು ಆಸ್ಪತ್ರೆಯನ್ನು ತಲುಪಿದ್ದಳು. ಕಾರಿನಲ್ಲಿ ಪ್ರಯಾಣಿಸುವಾಗ ಎಲ್ಲಾ  ಮುನ್ನೆಚ್ಚರಿಕೆಗಳನ್ನು ಮೂವರು ಚಾಚೂ ತಪ್ಪದೆ ಪಾಲಿಸಿದ್ದರು.  ರೋಹಿಣಿಯನ್ನು 'ಆರ್.ಟಿ. - ಪಿ.ಸಿ.ಆರ್. (RT-PCR)' ಪರೀಕ್ಷೆಗೆ ಅಂದಿನ ಬೆಳಗ್ಗೆ ಒಳಪಡಿಸಲಾಯಿತು. 'ಆರ್.ಟಿ. - ಪಿ.ಸಿ.ಆರ್. ಪರೀಕ್ಷೆಯು ಅತ್ಯಂತ ನಿಖರವಾದ ಕೋವಿಡ್ ಪರೀಕ್ಷೆಯೆಂಬುದು ತಜ್ಞರೆಲ್ಲರ ಅಭಿಪ್ರಾಯ' ಎಂದು ಪರೀಕ್ಷೆಯನ್ನು ನಡೆಸಿದ ಡಾ. ನಿರ್ಮಲ, ರಾಜುರವರಿಗೆ ತಿಳಿಸಿದ್ದರು. ರೋಹಿಣಿಯ ಮೂಗು ಮತ್ತು ಗಂಟಲಿನ ದ್ರವಗಳನ್ನು (Swab samples), ಡಾ. ನಿರ್ಮಲರವರೇ ಪಡೆದುಕೊಂಡಿದ್ದರು. ಸುಮಾರು ೬-೭ ಘಂಟೆಗಳೊಳಗೆ ಪರೀಕ್ಷೆಯ ಫಲಿತಾಂಶವನ್ನು ತಿಳಿಸುವುದಾಗಿ ಹೇಳಿ ರೋಹಿಣಿಯನ್ನು ಕಳುಹಿಸಿಕೊಡಲಾಗಿತ್ತು. 

ಆಸ್ಪತ್ರೆಯಿಂದ ಬಂದ ಕರೆಗೆ ಓಗೊಟ್ಟು, ರಾಜು ಮತ್ತು ರೋಹಿಣಿಯರಿಬ್ಬರೂ ಅದೇ ದಿನದ ಸಂಜೆ ೫ರ ವೇಳೆಗೆ ಆಸ್ಪತ್ರೆಯನ್ನು ತಲುಪಿದ್ದರು. ಡಾ. ನಿರ್ಮಲರವರ ಕೋಣೆಯಲ್ಲಿ, ಡಾ. ಕಿರಣ್ ಮುಂಚೆಯೇ ಬಂದು ಆಸೀನರಾಗಿದ್ದನ್ನು ನೋಡಿ ರಾಜು ಮತ್ತು ರೋಹಿಣಿಯರಿಗೆ ಆಶ್ಚರ್ಯವಾಗಿತ್ತು. ಡಾ. ನಿರ್ಮಲರ ಸನ್ನೆಯ ಮೇರೆಗೆ ರಾಜು ಮತ್ತು ರೋಹಿಣಿರವರು ಕೂಡಾ, ಅವರ ಕೋಣೆಯನ್ನು ಪ್ರವೇಶಿಸಿದರು. ಡಾ. ನಿರ್ಮಲರವರು ಮೆದುವಾದ ದನಿಯಲ್ಲಿ ಮಾತನಾಡುತ್ತಾ, 'ರೋಹಿಣಿ, ನೀನು ಹೆಚ್ಚು ಭಯ ಪಡುವ ಅವಶ್ಯಕತೆ ಇಲ್ಲ. ನಿನ್ನ ಮೇಲೆ ನಾವು ನಡೆಸಿರುವ  ಆರ್.ಟಿ. - ಪಿ.ಸಿ.ಆರ್. ಪರೀಕ್ಷೆಯ ಫಲಿತಾಂಶಗಳು ನಿಖರವಾದವು ಎಂಬುದು ವೈದ್ಯಕೀಯ ವಲಯದ ಅಭಿಪ್ರಾಯ. ನಿನ್ನ ಪರೀಕ್ಷೆಯ ಫಲಿತಾಂಶ ಬಂದಿದೆ. ಫಲಿತಾಂಶದ ಪ್ರಮಾಣ ಪತ್ರ, ಇಗೋ ಇಲ್ಲಿದೆ. "ಅದರ ಪ್ರಕಾರ ನಿನಗೆ ಕೋವಿಡ್ ಸೋಂಕು ತಗುಲಿದೆ." ಆದರೆ ಸೋಂಕಿನ ತೀವ್ರತೆ ಕಮ್ಮಿಯಿದ್ದು, ನೀವುಗಳು ಗಾಬರಿ ಪಡಬೇಕಾದ ಅವಶ್ಯಕತೆ ಏನಿಲ್ಲ.' ಸೋಂಕು ತಗುಲಿರುವ ಸುದ್ದಿ, ರೋಹಿಣಿಗಿಂತ ತಂದೆ ರಾಜುರವರನ್ನು ಹೆಚ್ಚು ಆತಂಕಿತರನ್ನಾಗಿಸಿತ್ತು. ಡಾ. ಕಿರಣ್ ಕಣ್ಸನ್ನೆ ಮಾಡಿ, ಶಾಂತಿಯಿಂದಿರುವಂತೆ ರಾಜು-ರೋಹಿಣಿಯರಿಗೆ ಸೂಚಿಸಬೇಕಾಯಿತು. ತನಗೆ ಸೋಂಕು ತಗುಲಿರುವ ವಿಷಯ ಕಿರಣನಿಗೆ ಮುಂಚೆಯೇ ತಿಳಿದಿತ್ತೆಂದು, ರೋಹಿಣಿಗೆ ಅರಿವಾಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. 

ಡಾ.ನಿರ್ಮಲರವರೇ ಮಾತನ್ನು ಮುಂದುವರೆಸುತ್ತಾ, 'ರೋಹಿಣಿ, ತುಂಬಾ ಗಾಬರಿ ಪಡಬೇಡ. ನಿನ್ನ ಸೋಂಕಿನ ತೀವ್ರತೆ ಹೆಚ್ಚೇನಿಲ್ಲ. ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಇರದು. ನಿನ್ನ ಚಿಕಿತ್ಸೆ ಮನೆಯಲ್ಲೂ ನಡೆಯಬಹುದು. ಇನ್ನೂ ಕೆಲವು ವಾರಗಳವರೆಗೆ ನೀನು ಕ್ವಾರಂಟೈನಿನಲ್ಲಿರಬೇಕಾಗ ಬಹುದು. ಮುಂದಿನ ವಿಧಿ-ವಿಧಾನಗಳು,  ನಿನಗೆ ಚಿಕಿತ್ಸೆಯನ್ನು ನೀಡುವ ವೈದ್ಯರ ನಿರ್ಧಾರಕ್ಕೆ ಬಿಟ್ಟದ್ದು' ಎಂದು ಡಾ. ಕಿರಣ್ ರವರ ಕಡೆ ನೋಡಿದರು. 

ರೋಹಿಣಿಯ ಸೋಂಕಿನ ನಿಜ ಪರಿಸ್ಥಿತಿಯನ್ನು ಡಾ. ನಿರ್ಮಲ, ಡಾ. ಕಿರಣರವರಿಗೆ ಮುಂಚೆಯೇ ವಿವರಿಸಿಯಾಗಿತ್ತು. ತಜ್ಞ ವೈದ್ಯರುಗಳಾಗಲೇ ರೋಹಿಣಿಯ ಸೋಂಕಿನ ತೀವ್ರತೆಯನ್ನು ಪರೀಶೀಲಿಸಿ, ಆಕೆಯನ್ನು ಎಲ್ಲಾ ಸೌಲಭ್ಯಗಳಿರುವ ಕೋವಿಡ್ ಆಸ್ಪತ್ರೆಯೊಂದಕ್ಕೆ ದಾಖಲಿಸುವುದೇ ಸೂಕ್ತ ಎಂದು ಡಾ. ಕಿರಣರಿಗೆ ತಿಳಿಸಿಯೂ ಆಗಿತ್ತು. ಅಸಲಿ ಪರಿಸ್ಥಿತಿಯನ್ನು ರೋಹಿಣಿ ಮತ್ತು ರಾಜುರವರಿಗೆ ತಿಳಿಸುವ ಭಾರ ಈಗ ಡಾ. ಕಿರಣರ ಮೇಲಿತ್ತು. 

'ಡಾ ಕಿರಣ್ ರವರೊಂದಿಗೆ, ಡಾ. ನಿರ್ಮಲ ಮಾತನಾಡುತ್ತಾ,  'ನಿಮ್ಮ ಮತ್ತು ರೋಹಿಣಿಯವರ ನಡುವಿನ ಸಂಬಂಧ "ವಿಶೇಷ"ವಾದುದು ಎಂದು ನನಗೆ ಗೊತ್ತು. ಆದುದರಿಂದ ಈಕೆಯನ್ನು ತಮ್ಮ ಆಸ್ಪತ್ರೆಗೆ ಚಿಕಿತ್ಸೆಗೆಂದು ಕೊಂಡೊಯ್ಯುವುದು ಬೇಡ. ಅವರಿಗೆ ಚಿಕಿತ್ಸೆ ನೀಡುವಾಗ ತಾವು ಭಾವುಕರಾಗುವ ಸಾಧ್ಯತೆ ಹೆಚ್ಚು. ಆದುದರಿಂದ ರೋಹಿಣಿಯನ್ನು, ಮುಂದಿನ ಪರೀಕ್ಷೆಗಾಗಿ  ಜಿಲ್ಲಾ ಆಸ್ಪತ್ರೆಗೆ  ಕೊಂಡೊಯ್ಯುವುದು ಒಳ್ಳೆಯದು. ಅಲ್ಲೂ ಕೋವಿಡ್ ಚಿಕಿತ್ಸೆಗೆ ಬೇಕಾದ ಎಲ್ಲಾ ಅನುಕೂಲಗಳೂ ಚೆನ್ನಾಗಿದೆ' ಎಂಬ ಡಾ.ನಿರ್ಮಲರ ಸಲಹೆ  ಡಾ. ಕಿರಣರಿಗೂ ಸರಿಯೆನಿಸಿತ್ತು. ಡಾ. ನಿರ್ಮಲರ ಮಾತುಗಳನ್ನು ಕೇಳಿಸಿಕೊಂಡ ರೋಹಿಣಿಗೆ, ತಾನು ಆಸ್ಪತ್ರೆ ಸೇರಬೇಕಾಗಬಹುದೇನೋ ಎಂಬ ಸಂಶಯ ಮೂಡಿರ ಬಹುದು ಎಂಬದನ್ನು, ಡಾ ಕಿರಣ  ಗಮನಿಸಿಯಾಗಿತ್ತು.   

 ರೋಹಿಣಿ, ರಾಜು ಮತ್ತು ಕಿರಣರು ಮನೆಯನ್ನು ತಲುಪುವ ಹೊತ್ತಿಗೆ ಸಮಯ ಸಂಜೆಯ ೭ ಘಂಟೆಯಾಗಿತ್ತು. ರೋಹಿಣಿ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿಯನ್ನು ಡಾ. ಕಿರಣ್, ರಾಜುರವರಿಗೆ ತಿಳಿಸಿಯಾಗಿತ್ತು. ತಂದೆ ರಾಜುರವರು ಆತಂಕಕ್ಕೊಳಗಾಗಿದ್ದು ಸ್ಪಷ್ಟವಾಗಿತ್ತು.

ಪರಿಸ್ಥಿತಿಯ ಸೂಕ್ಷ್ಮವನ್ನು ಗಮನಿಸಿದ್ದ ರೋಹಿಣಿ ಕೂಡ ಗಾಬರಿಗೊಂಡಿದ್ದರೂ, ಅದನ್ನಾಕೆ ಮುಖದಲ್ಲಿ ತೋರ್ಪಡಿಸುತ್ತಿಲ್ಲವೆಂಬುದು ವೈದ್ಯನಾದ ಕಿರಣನಿಗೆ ತಿಳಿದಿತ್ತು. ಕೆಲವು ನಿಮಿಷಗಳ ಮೌನ ಆ ಮೂವರನ್ನು ಆವರಿಸಿತ್ತು. ಎಲ್ಲರಿಗೂ ಚಹಾವನ್ನು ಮಾಡಿ ತರುತ್ತೇನೆಂದು ಹೇಳಿ, ತಂದೆ ರಾಜು ಅಡುಗೆ ಮನೆಯ ಕಡೆ ನಡೆದಿದ್ದರು. ಕಿರಣ್ ಮತ್ತು ರೋಹಿಣಿಯರ ನಡುವೆ ಪರಸ್ಪರ ವಿಚಾರ ವಿನಿಮಯಕ್ಕೆ ಅನುವು ಮಾಡಿಕೊಡುವುದೇ  ರಾಜುರವರು ನಿರ್ಗಮಿಸಿದ  ಉದ್ದೇಶವಾಗಿತ್ತು. 

'ರೋಹಿಣಿ, ಬಹಳ ಚಿಂತಿಸ ಬೇಡ. ನಿನಗೆ ತಗುಲಿರುವ ಸೋಂಕು ಸಾಧಾರಣವಾದದ್ದು. ಮನೆಯಲ್ಲೇ ಇದ್ದುಕೊಂಡು ನೀನು ಗುಣ ಹೊಂದಬಹುದು. ಒಂದೊಮ್ಮೆ ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಬಂದರೂ, ಹೆದರುವುದು ಬೇಡ. ಚಿಕಿತ್ಸೆಯುದ್ದಕ್ಕೂ ನಾನು ನಿನ್ನೊಡನಿರುತ್ತೇನೆ.  ಚಿಕಿತ್ಸೆ ಮತ್ತು ಕ್ವಾರಂಟೈನ್ ಅವಧಿ ೨-೩ ವಾರಗಳಷ್ಟಿರಬಹುದು. ಜಿಲ್ಲಾ ಆಸ್ಪತ್ರೆಯ ಕೋವಿಡ್ ಚಿಕಿತ್ಸೆಗೆಂದು ನಾನು ಕೂಡ ಹಲವು ಬಾರಿ ಹೋಗಿದ್ದೇನೆ.  ಹಾಗಾಗಿ ಅಲ್ಲಿನ ವೈದ್ಯರುಗಳೆಲ್ಲರೂ ನನ್ನ ಮಿತ್ರರುಗಳೇ. ಈವರೆಗೆ ನಡೆದಿರುವ ಸಂಶೋಧನೆಗಳ ಪ್ರಕಾರ ಕೋವಿಡ್ನ ಪರಿಣಾಮದ ತೀವ್ರತೆ,  ಸ್ತ್ರೀಯರ ಮೇಲೆ ಹೆಚ್ಚಾಗಿರುವುದಿಲ್ಲ ಎಂದೇ ತಿಳಿದು ಬಂದಿದೆ. ಪುರಷರಲ್ಲಿ ಒಂದೇ X-ಕ್ರೋಮೋಸೋಮ್ (X-chromosome) ಇರುತ್ತದೆ. ಆದರೆ ಸ್ತ್ರೀಯರಲ್ಲಿ X-ಕ್ರೋಮೋಸೋಮ್ ಗಳ ಸಂಖ್ಯೆ ಎರಡಿರುವದರಿಂದ, ಅವರಲ್ಲಿ ರೋಗ ನಿರೋಧಕ ಶಕ್ತಿ (immunity), ಪುರಷರಿಗಿಂತ ಜಾಸ್ತಿ. ಸ್ತ್ರೀಯರಲ್ಲಿರುವ ವಿಶೇಷವಾದ ಹಾರ್ಮೋನ್ (hormone)ಗಳೂ, ಅವರ ಹೆಚ್ಚಿನ ನಿರೋಧಕ ಶಕ್ತಿಗೆ ಪೂರಕವಾಗಿರುತ್ತದೆ. ಅಂದ ಹಾಗೆ, ನೀನಿನ್ನೂ ಯುವತಿ ಮತ್ತು ಆರೋಗ್ಯವಂತಳು. ಬೇರ್ಯಾವ ರೋಗದ (comorbidities) ತೊಡಕು ನಿನಗಿಲ್ಲ.  ನೀನು ಎಂದಿನಂತೆ  ಹರ್ಷಚಿತ್ತಳಾಗಿರು. ಅದು ಕೂಡ ನಿನ್ನ ಸೋಂಕಿನ ನಿವಾರಣೆಗೆ ಸಹಾಯಕವಾಗುತ್ತದೆ. ನಿನ್ನ ಮುಗುಳ್ನಗೆಯನ್ನು ನಾನು ನೋಡಲಿಚ್ಛಿಸುತ್ತೇನೆ. ಒಮ್ಮೆ ನಕ್ಕು ತೋರಿಸು' ಎಂದು ವಿವರಿಸಿದ ಡಾ. ಕಿರಣನ ಉದ್ದೇಶ ರೋಹಿಣಿಯ ಮನಸ್ಸನ್ನು ಹಗುರಗೊಳಿಸುವುದಾಗಿತ್ತು. 

ಸ್ತ್ರೀಯರ ಮೇಲೆ ಮತ್ತು ಯುವಕರ ಮೇಲೆ ಕೋವಿಡ್ನ ಪರಿಣಾಮ ಹೆಚ್ಚು ತೀವ್ರವಾಗಿರದು ಎಂಬುದು ರೋಹಿಣಿಗೂ ತಿಳಿದಿತ್ತು. ಜೊತೆಗೆ ತಾನು ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಇದೆ ಎಂಬುದೂ, ಸೂಕ್ಷ್ಮ ಮನಸ್ಸಿನ ರೋಹಿಣಿಯ ಗಮನಕ್ಕೆ ಬಂದಿತ್ತು.  ಎಲ್ಲವುದಕ್ಕಿಂತ ಹೆಚ್ಚಾಗಿ ತನ್ನ ಗೆಳಯ ಕಿರಣನೂ ಆತಂಕಕ್ಕೊಳಪಟ್ಟಿರುವುದನ್ನು ರೋಹಿಣಿ ಗಮನಿಸದಿರಲಿಲ್ಲ. ಅವನ ಮನಸ್ಸನ್ನು ಹಗುರಗೊಳಿಸಲು, ತಾನೊಂದು ನಗೆ ಬೀರಬೇಕಾದ್ದು ಅವಶ್ಯಕವೆಂದು ರೋಹಿಣಿಗನಿಸಿತ್ತು.  ರೋಹಿಣಿ ಆತ್ಮೀಯವಾಗಿ ಮುಗುಳ್ನಕ್ಕಿದ್ದನ್ನು ನೋಡಿ, ಗೆಳಯ ಕಿರಣನೂ ಮುಗುಳ್ನಕ್ಕರೂ, ಇಬ್ಬರ ಮನಸ್ಸಿನಲ್ಲೂ ಆತಂಕವಿದ್ದದ್ದು ಸುಳ್ಳಾಗಿರಲಿಲ್ಲ. 

ಆಗ ಸಮಯ ರಾತ್ರಿಯ ಎಂಟು ಘಂಟೆಯಾಗಿತ್ತು. ಜಿಲ್ಲಾ ಆಸ್ಪತ್ರೆಗೆ ದಾಖಲಿಸಲೆಂದು, ಡಾ ಕಿರಣ್, 'ಕೋವಿಡ್ ಹಾಸಿಗೆಗಳ ನಿರ್ವಹಣಾ ಕೇಂದ್ರ'ದ ಮುಖ್ಯಸ್ಥರಾದ ಡಾ. ನಾರಂಗ್ ರವರಿಗೆ ಫೋನಾಯಿಸಿದ್ದರು. ಡಾ. ನಾರಂಗ್ ಉತ್ತರಿಸುತ್ತಾ, 'ಒಹೋ, ನಿಮ್ಮ ಗೆಳತಿ ರೋಹಿಣಿಯವರ ದಾಖಲಾತಿಯ ಬಗ್ಗೆ ವಿಚಾರಿಸುತ್ತಿದ್ದೀರಾ? ಅವರ ಎಲ್ಲಾ ದಾಖಲೆ-ಪಾತ್ರಗಳು ನನಗೆ ದೊರೆತಿದೆ. ಅವರಿಗೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಯ ಹಾಸಿಗೆ ದೊರೆಯಬೇಕಾದರೆ, ಸ್ವಲ್ಪ ಸಮಯ ಬೇಕಾಗಬಹುದು. ತಾವು ನನಗೆ ಬೆಳಗ್ಗೆ ಕರೆಯನ್ನು ಮಾಡುವಿರಾ?' ಎಂದಿದ್ದರು. 

ಬೆಳಗಿನವರೆಗೆ ಕಾಯಬೇಕಾದ ಅನಿವಾರ್ಯತೆ ಉಂಟಾಗಿದ್ದರಿಂದ, ಡಾ. ಕಿರಣ್ ಅಂದಿನ ರಾತ್ರಿ ರೋಹಿಣಿಯ ಮನೆಯಲ್ಲೇ ಉಳಿದುಕೊಂಡರು. 

ಬೆಳಗಾಗುತ್ತಲೇ, ಸಮಯ ಎಂಟರ ಹೊತ್ತಿಗೆ ಡಾ. ಕಿರಣ್, ಡಾ. ನಾರಂಗ್ ರವರಿಗೆ ಮತ್ತೆ ಫೋನಾಯಿಸಿದ್ದರು. 'ನೀವು ಇನ್ನೂ ಸ್ವಲ್ಪ ಸಮಯ ಕಾಯಬೇಕು. ಸಾಯಿಂಕಾಲಕ್ಕೆ ಮುಂಚೆ ಯಾವ ಹಾಸಿಗೆಯೂ ಲಭ್ಯವಿರುವುದಿಲ್ಲ. ಅಂದ ಹಾಗೆ ರೋಗಿಯ ಪರಿಸ್ಥಿತಿ ಹೇಗಿದೆ? ಭರವಸೆಯ ಮಾತುಗಳನ್ನಾಡಿ, ಆಕೆಯ ಮನಸ್ಸು ಹಗುರಗೊಳ್ಳುವಂತೆ ಮಾಡುತ್ತಿರಿ' ಎಂಬ ಉತ್ತರ ಡಾ. ನಾರಂಗರಿಂದ ಬಂದಿತ್ತು. 

ಸಮಯ ಒಂಬತ್ತಾಗುತ್ತಲೇ, ಡಾ. ಕಿರಣ, ತನ್ನ ಆಸ್ಪತ್ರೆಗೆ ಹೊರಟು ನಿಂತಿದ್ದನು. 'ರೋಹಿಣಿ, ನಿನಗೆ ಹಾಸಿಗೆಯ ಏರ್ಪಾಡಾಗುವುದಕ್ಕೆ ಸಾಯಿಂಕಾಲದವರೆಗೆ ಕಾಯಬೇಕಾಗಿದೆ. ಕೊಟ್ಟಿರುವ ಔಷಧಿಗಳನ್ನು ಸಮಯಕ್ಕೆ ಸರಿಯಾಗೇ ತೆಗೆದುಕೋ, ಹೆದರಿಕೆ ಬೇಡ. "ನಾನಿದ್ದೇನಲ್ಲ," ಎಲ್ಲದರ ಮೇಲೂ ನನ್ನ ನಿಗಾ ಇದ್ದೆ ಇರುತ್ತದೆ. ನಿಮ್ಮಪ್ಪ ನಿನ್ನೊಡನೇ ಇರುತ್ತಾರಲ್ಲವೇ? ಸಾಯಿಂಕಾಲದ ಸಮಯಕ್ಕೆ ನಾನಿಲ್ಲಿಗೇ ಬರುತ್ತೇನೆ' ಎಂದನು. ಬಾಗಿಲನಲ್ಲೇ ನಿಂತ ರೋಹಿಣಿ, ಗೆಳಯ ಕಿರಣನಿಗೆ ಕೈಗಳನಾಡಿಸುತ್ತಾ ಬೀಳ್ಕೊಟ್ಟಿದ್ದಳು. 

ಸಾಯಿಂಕಾಲ ಐದರ ಸಮಯಕ್ಕೆ, ರೋಹಿಣಿಯ ಮನೆಯನ್ನು ತಲುಪಿದ ಕೂಡಲೇ, ಅವನು ಕರೆ ಮಾಡಿದ್ದು ಡಾ. ನಾರಂಗ್ ರವರಿಗೆ. 'ಐ ಆಮ್ ಸಾರೀ ಡಾ. ಕಿರಣ್. ಸುಮಾರು ೧೨ ರೋಗಿಗಳು  ಆಸ್ಪತ್ರೆಯಿಂದ ಬಿಡುಗಡೆ (discharge) ಆಗುವುದನ್ನು ಕಾಯುತ್ತಿದ್ದೇವೆ. ಅವರ ಅಂತಿಮ ಪರೀಕ್ಷಾ ಫಲಿತಾಂಶಗಳಿನ್ನೂ, ಆಸ್ಪತ್ರೆಯ ವೈದ್ಯರುಗಳ ಕೈಸೇರಿಲ್ಲ. ಸುಮಾರು ೨೦ ರೋಗಿಗಳು ಹಾಸಿಗೆ ಪಡೆಯಲು ಈಗಲೂ ಕಾಯುತ್ತಿದ್ದಾರೆ.  ಸಧ್ಯಕ್ಕಂತೂ ನಾನೇನೂ ಮಾಡಲಾರೆ. ನಾಳಿನ ಬೆಳಗಿನವರೆಗೆ ಕಾಯದೆ ಅನ್ಯ ಮಾರ್ಗವಿಲ್ಲ.' ಡಾ. ನಾರಂಗ್ ರವರ ಉತ್ತರ, ಕಿರಣನನ್ನೇ ಆತಂಕಗೊಳಿಸಿತ್ತು. 

ರೋಹಿಣಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಖಾತರಿಯಾಗಿ, ೨೪ ಘಂಟೆಗಳೇ ಕಳೆದಿದ್ದವು. ವೈದ್ಯನಾದ ಕಿರಣನಿಗೇ, ತನ್ನ ಗೆಳತಿಗೊಂದು ಹಾಸಿಗೆಯ ಏರ್ಪಾಡನ್ನು ಮಾಡಲಾಗಿರಲಿಲ್ಲ. ರಾತ್ರಿ ಹತ್ತರ ಸಮಯಕ್ಕೆ, ರೋಹಿಣಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿತ್ತು. ಅಂದ ಹಾಗೆ, ತನ್ನ ಆಸ್ಪತ್ರೆಯ ಪರಿಸ್ಥಿತಿ ಏನಿರಬಹುದೆಂದು ತಿಳಿಯಲು, ಡಾ. ಕಿರಣ್ ತನ್ನ ಆಸ್ಪತ್ರೆಗೇ ಫೋನಾಯಿಸಿದ್ದನು. ರಾತ್ರಿ ಪಾಳಯದ ಕರ್ತವ್ಯದ ಮೇಲಿದ್ದ, ಕಿರಿಯ ವೈದ್ಯ ಉಮೇಶ ಮಾತನಾಡುತ್ತಾ, ನಾಳಿನ ಬೆಳಗ್ಗೆ ವೇಳೆಗೆ ಒಂದೆರಡು ರೋಗಿಗಳು ಬಿಡುಗಡೆ ಹೊಂದಬಹುದೆಂದು ತಿಳಿಸಿದ್ದರು. 

ಕಿರಣ್ ಮತ್ತು ರಾಜುರವರಿಗೆ ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ. ಮಾರನೆಯ ದಿನದ ಬೆಳಗ್ಗೆ ೫ರ ಸಮಯಕ್ಕೆ, ಡಾ.ಕಿರಣ್ ರೋಹಿಣಿ ಹೇಗಿರಬಹುದೆಂದು ನೋಡಲು ಹೋಗಿದ್ದನು. ಅವಳ ಜ್ವರ ಸಾಕಷ್ಟು ಮೇಲೇರಿತ್ತು. ತನ್ನ ಇಡೀ ದೇಹದಲ್ಲಿ ನೋವಿನ ಅನುಭವವಾಗುತ್ತಿದ್ದು, ಮಗ್ಗುಲನ್ನು ಬದಲಾಯಿಸುವುದು ಕಷ್ಟವಾಗಿದೆ ಎಂದು ರೋಹಿಣಿ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಳು. ಆಗಾಗ ಅವಳು ಕೆಮ್ಮುತ್ತಿದ್ದದ್ದೂ, ಕಿರಣನ ಗಮನಕ್ಕೆ ಬಂದಿತ್ತು. ಕಳವಳಗೊಂಡ ಕಿರಣ್ ತನ್ನ ಆಸ್ಪತ್ರೆಯ, ಕಿರಿಯ ವೈದ್ಯ, ಉಮೇಶನಿಗೆ ಕರೆಮಾಡಿದ್ದನು. 'ಹೌದು, ಇನ್ನೇನು ೯ ಘಂಟೆಯ ಹೊತ್ತಿಗೆ ಮೂರು ಕೋವಿಡ್ ರೋಗಿಗಳು ಆಸ್ಪತ್ರೆಯಿಂದ ಮನೆಗೆ ತೆರಳಬಹುದು. ಅವರ ಡಿಸ್ಚಾರ್ಜ್ ಕುರಿತಾದ ಎಲ್ಲಾ ಕ್ರಮಗಳನ್ನು ಪೂರೈಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ನಿಮ್ಮ ರೋಹಿಣಿಗೆ ನಮ್ಮ ಆಸ್ಪತ್ರೆಯಲ್ಲಿ ಹಾಸಿಗೆಯ ವ್ಯವಸ್ಥೆ ಆಗಬೇಕಾದರೂ, ಸ್ಥಳೀಯ ಮುಖ್ಯಸ್ಥ ಡಾ.ನಾರಂಗ್ ರವರ ಅನುಮತಿ ಬೇಕೆಂಬುದು ನಿಮಗೂ ಗೊತ್ತು. ಕೂಡಲೇ ಅವರೊಂದಿಗೆ ಮಾತನಾಡುವುದು ಸೂಕ್ತ,' ಎಂದಿದ್ದರು ಡಾ. ಉಮೇಶ್. 

ಅಷ್ಟುಹೊತ್ತಿಗೆ ಸಮಯವಾಗಲೇ ಬೆಳಗ್ಗೆ ೯ ಘಂಟೆಯಾಗಿತ್ತು. ರೋಹಿಣಿಗೆ ಕೋವಿಡ್ ಸೋಂಕು ತಗುಲಿದೆ ಎಂಬುದು ಖಾತರಿಯಾಗಿ ೩೬ ಘಂಟೆಗಳೇ ಕಳೆದಿದ್ದವು. ಭರವಸೆಯ ಸಣ್ಣ ಎಳೆಯೊಂದನ್ನು ಕಂಡಿದ್ದ ಡಾ. ಕಿರಣ್, ಡಾ. ನಾರಂಗರಿಗೆ ಕರೆ ಮಾಡಿದ್ದರು.  'ನಿಮ್ಮದೇ ಆಸ್ಪತ್ರೆಯಲ್ಲಿರುವ ಮೂರು ಹಾಸಿಗೆಗಳನ್ನು ಬಿಟ್ಟರೆ, ಬೇರೆಲ್ಲೂ ಹಾಸಿಗೆಗಳು ಖಾಲಿ ಇಲ್ಲ. ಆ ಮೂರು ಹಾಸಿಗೆಗಳಿಗೂ, ಸುಮಾರು ೨೦ ರೋಗಿಗಳು ಕಾಯುತ್ತಿದ್ದಾರೆ. ಆದರೆ ನಿಮ್ಮ ರೋಹಿಣಿಗೆ ಕೊರೋನಾ ಸೇನಾನಿಯಾಗಿ ಕಾರ್ಯ ನಿರ್ವಹಿಸುವ ಸಮಯದಲ್ಲಿ ಸೋಂಕು ತಗುಲಿರುವುದರಿಂದ, ಅವಳಿಗೆ ಆದ್ಯತೆಯ ಮೇರೆಗೆ ನಿಮ್ಮ ಆಸ್ಪತ್ರೆಯ, ಎಲ್ಲಾ ಸಲಕರಣೆಗಳುಳ್ಳ ಹಾಸಿಗೆಯೊಂದರ ಏರ್ಪಾಡನ್ನು ಕೂಡಲೇ ಮಾಡುತ್ತಿದ್ದೇನೆ. ನಮ್ಮಲ್ಲಿ ಆಂಬುಲೆನ್ಸ್ ವ್ಯಾನ್ ಸಧ್ಯಕ್ಕಂತೂ ಲಭ್ಯವಿಲ್ಲ. ಅದರ ಏರ್ಪಾಡನ್ನು ತಾವೇ ಮಾಡಿಕೊಳ್ಳಬೇಕು. ಕೂಡಲೇ ಆಕೆಯನ್ನು ತಮ್ಮ ಆಸ್ಪತ್ರೆಗೆ ಕರೆದು ಕೊಂಡು ಹೊರಡಿರಿ,'  ಎಂದಿದ್ದರು ಡಾ. ನಾರಂಗ್. 

ಸಮಯಾವಕಾಶ ತುಂಬಾ ಕಮ್ಮಿ ಇದ್ದುದರಿಂದ, ಡಾ. ಕಿರಣನೇ, ತನ್ನ ಕಾರನ್ನು ಚಲಾಯಿಸುತ್ತಾ, ರೋಹಿಣಿಯನ್ನು,  ಅವಳ ತಂದೆ ರಾಜುರವರೊಂದಿಗೆ, ತನ್ನ ಆಸ್ಪತ್ರೆಗೆ ಕರೆದೊಯ್ದಿದ್ದನು. ಕಿರಣನ ಮೇಲಿನ ಹಿರಿಯ ವೈದರಾದ ಡಾ.ಈಶ್ವರ್ ಗುಲಾಟಿಯವರಾಗಲೇ ಕಾಯುತ್ತಿದ್ದರು. ಡಾ. ಗುಲಾಟಿಯವರ ಮುಂದೆ ಕೈಜೋಡಿಸಿ ನಿಂತ ತಂದೆ ರಾಜು, 'ನನ್ನ ಮಗಳ ಜೀವವನ್ನುಳಿಸಿ,' ಎಂದು ಬೇಡಿಕೊಂಡಿದ್ದರು.  ರಾಜುರವರನ್ನು ಸಂತೈಸಿದ ಡಾ. ಗುಲಾಟಿ, ರೋಹಿಣಿಯನ್ನು ಪರೀಕ್ಷಿಸಲೆಂದು ಅವಳ ವಾರ್ಡಿನ ಕಡೆಗೆ ನಡೆದರು; ಡಾ. ಕಿರಣ್ ಅವರನ್ನು ಹಿಂಬಾಲಿಸಿದ್ದರು. ಪರೀಕ್ಷೆಗಳನ್ನು ನಡೆಸಿದ ಡಾ. ಗುಲಾಟಿರವರು ಮಾತನಾಡುತ್ತಾ, 'ರೋಹಿಣಿ, ನೀನು ಭಯಪಡಬೇಕಾಗಿಲ್ಲ. ನಿನ್ನ ಪರೀಕ್ಷೆಯ ಪತ್ರಗಳನ್ನು ನೋಡಿದ್ದೇನೆ. ನಿನ್ನ ಸೋಂಕು ತೀವ್ರವಾದುದೇನಲ್ಲ. ೩-೪ ದಿನಗಳಲ್ಲಿ ನೀನು ಗುಣಮುಖಳಾಗಿ ಮನೆಗೆ ತೆರಳಬಹುದು. ಎಲ್ಲಿ, ಒಮ್ಮೆ ನಕ್ಕು ತೋರಿಸು' ಎಂದಿದ್ದರು. ರೋಹಿಣಿಯಲ್ಲಿ ಧೈರ್ಯವನ್ನು ತುಂಬುವುದು, ಚಿಕಿತ್ಸೆಯ ಯಶಸ್ಸಿಗೆ ಬೇಕಾದ ಪೂರಕ ಅಂಶವೆಂಬುದು ಡಾ.ಕಿರಣರಿಗೂ ಚೆನ್ನಾಗಿ ತಿಳಿದಿತ್ತು. ಸ್ವಲ್ಪವೂ ತಡ ಮಾಡದೆ ರೋಹಿಣಿಗೆ ಎಲ್ಲ ಚಿಕಿತ್ಸಾ ವಿಧಿ-ವಿಧಾನಗಳನ್ನು, ಆಸ್ಪತ್ರೆಯ ನರ್ಸ್ಗಳು ಶುರುಮಾಡಿದ್ದರು. 

ತಂದೆ ರಾಜುರವರ ಆತಂಕ ಕಿರಣನಿಗೆ ತಿಳಿದಿತ್ತು.  ಅವನು ರಾಜುರವರನ್ನು ಸಂತೈಸುತ್ತಾ, 'ರೋಹಿಣಿಯ ಚಿಕಿತ್ಸೆಯನ್ನು ಡಾ.ಗುಲಾಟಿ ಮಾಡುತ್ತಾರೆ.  ಅವರೊಬ್ಬ ಅನುಭವಿ ವೈದ್ಯರು. ಸಧ್ಯಕ್ಕೆ ಕೆಲವು ಸರಳ ಔಷಧಗಳನ್ನು ಅವಳಿಗೆ ನೀಡಲಾಗಿದೆ. ಮುಂದಿನ ೨೪ ಘಂಟೆಗಳ ಬೆಳವಣಿಗೆಗಳನ್ನು ವೈದ್ಯರು ಗಮನಿಸುತ್ತಿರುತ್ತಾರೆ. ರೋಹಿಣಿ ೩-೪ ದಿನಗಳಲ್ಲಿ ಗುಣ ಹೊಂದುವ ನಿರೀಕ್ಷೆ ಇದೆ. ಆತಂಕ ಬೇಡ' ಎಂದಿದ್ದನು. 

ರೋಹಿಣಿ, ಆಸ್ಪತ್ರೆಯನ್ನು ಸೇರಿ ೨೪ ಘಂಟೆಗಳ ಅವಧಿ ಕಳೆದಿತ್ತು. ಅಂದು ಬೆಳಗ್ಗೆ ನಡೆಸಿದ ಪರೀಕ್ಷೆಗಳಿಂದ, ರೋಹಿಣಿಯ ಶ್ವಾಸಕೋಶಗಳು ಊದಿಕೊಂಡಿರುವುದು ಸ್ಪಷ್ಟವಾಗಿತ್ತು. ಹಾಗಾಗಿ ಡಾ.ಗುಲಾಟಿ, ರೋಹಿಣಿಯನ್ನು ಆಮ್ಲಜನಕದ (Oxygen) ಹಾಸಿಗೆಯುಳ್ಳ  ಐ.ಸಿ.ಯು.(ICU)ಗೆ ಸ್ಥಳಾಂತರಿಸಿದ್ದರು. ಐ.ಸಿ.ಯು. ಒಳಗೆ ಪ್ರವೇಶಿಸಿದ ಕಿರಣ್ ತನ್ನ ಗೆಳತಿ ರೋಹಿಣಿಯ ಬಳಿ ನಿಂತಿದ್ದನು. 'ರೋಹಿಣಿ, ಗುಡ್ ಮಾರ್ನಿಂಗ್, ನೆನ್ನೆಗಿಂತ ನಿನ್ನ ಇಂದಿನ ಪರಿಸ್ಥಿತಿ ಚೆನ್ನಾಗಿದೆ. ಬೇರೇ ಸೋಂಕಿತರಿಂದ ನಿನ್ನನ್ನು ರಕ್ಷಿಸಲೆಂದು ಮಾತ್ರ, ನಿನ್ನನ್ನು ಐ.ಸಿ.ಯು.ಗೆ ಸ್ಥಳಾಂತರಿಸಲಾಗಿದೆ. ನಿನ್ನ ಉಸಿರಾಟದ ಪ್ರಕ್ರಿಯೆ ಸುಲಲಿತವಾಗಿರಲೆಂದು ಮಾತ್ರ, ನಿನಗೆ  ಆಕ್ಸಿಜನ್ ಮಾಸ್ಕನ್ನು ಅಳವಡಿಸಲಾಗಿದೆ. ಚಿಕಿತ್ಸೆಗಳೆಲ್ಲವೂ ಚೆನ್ನಾಗೇ ಮುನ್ಸಾಗುತ್ತಿದೆ. ನೀನು ಆತಂಕಪಡುವ ಅವಶ್ಯಕತೆ ಇಲ್ಲ' ಎಂದ ಗೆಳಯ ಕಿರಣನನ್ನು ನೋಡಿ ಮುಗುಳ್ನಕ್ಕು, ತನ್ನ ಹೆಬ್ಬರಳಿನಿಂದ 'ಥಂಬ್ಸ್-ಅಪ್ (Thumbs-up)' ಸನ್ನೆಯನ್ನು  ತೋರಿಸಿದ ರೋಹಿಣಿಗೆ, ಕಿರಣ್  ತನ್ನಲ್ಲಿ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಾನೆಂಬುದು ತಿಳಿದಿತ್ತು.  

ಮತ್ತೆರಡು ದಿನಗಳ ಅವಧಿ ಕಳೆದಿತ್ತು. ಡಾ.ಗುಲಾಟಿ ಮತ್ತು ಡಾ. ಕಿರಣರಿಬ್ಬರೂ, ರೋಹಿಣಿಯ ಪರಿಸ್ಥಿತಿ ಹದಗೆಡುತ್ತಿರುವದನ್ನು ಗಮನಿಸಿದ್ದರು.  ಅಂದಿನ ಬೆಳಗ್ಗೆ, ಆಕ್ಸಿಜನ್ ಮಾಸ್ಕ್ ಧರಿಸಿದ್ದರೂ ರೋಹಿಣಿ ಉಸಿರಾಡಲಾಗದೆ ಒದ್ದಾಡುತ್ತಿದ್ದಳು. ಆಕೆಯ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿತ್ತು. ಡಾ ಗುಲಾಟಿರವರ ಅನುಮಾನ ಸರಿಯಾಗೇ ಇತ್ತು. ಕೂಡಲೇ ನಡೆಸಿದ ಪರೀಕ್ಷೆಗಳ ಪ್ರಕಾರ, ರೋಹಿಣಿಗೆ ನಿಮೋನಿಯಾ (pneumonia) ಕೂಡಾ ವಕ್ಕರಿಸಿತ್ತು. ಡಾ. ಕಿರಣರನ್ನು ಐ.ಸಿ.ಯು.ಗೆ ಕರೆದೊಯ್ದ ಡಾ. ಗುಲಾಟಿ ಮಾತನಾಡುತ್ತಾ, 'ರೋಹಿಣಿ, ಧೈರ್ಯದಿಂದಿರು. ನಿನ್ನ ಪರಿಸ್ಥಿತಿ ಉತ್ತಮಗೊಳ್ಳುತ್ತಾ ಸಾಗಿದೆ. ಕೆಲವು ರೋಗಿಗಳಲ್ಲಿ, ಕೋವಿಡ್ ರೋಗ ಸುಧಾರಿಸುವ ಮುನ್ನ, ಸ್ವಲ್ಪ ಉಲ್ಬಣಗೊಂಡಂತಾಗುತ್ತದೆ. ಈಗ ಲೈಟಾಗಿ ತಿಂಡಿಯನ್ನು ತಿನ್ನು. ಮುಂದಿನ ೨೪ ಘಂಟೆಗಳಲ್ಲಿ ನೀನು ಸರಿ ಹೋಗುತ್ತೀಯ' ಎಂದಿದ್ದರು. ರೋಹಿಣಿ ತಿಂಡಿ ತಿಂದು ಮುಗಿಸಿದ ಕೂಡಲೇ, ಅವಳಿಗೆ ಐ.ಸಿ.ಯು.ನಲ್ಲೇ, 'ವೆಂಟಿಲೇಟರನ್ನು(ventilator)' ಅಳವಡಿಸಲಾಯಿತು. 

ರೋಹಿಣಿಯ ನಿಜ ಪರಿಸ್ಥಿತಿಯನ್ನು ಈಗ ತಡ ಮಾಡದೆ, ತಂದೆ ರಾಜುರವರಿಗೆ ತಿಳಿಸಬೇಕೆಂಬುದು ಡಾ. ಗುಲಾಟಿರವರ ಅಭಿಪ್ರಾಯವಾಗಿತ್ತು. ಡಾ. ಕಿರಣರ ಸಮ್ಮುಖದಲ್ಲಿ, ರಾಜುರವರೊಂದಿಗೆ ಅವರು  ಮಾತನಾಡುತ್ತಾ, 'ರಾಜುರವರೇ ಭಯಪಡ ಬೇಡಿ. ತಮ್ಮ ಮಗಳು ಕಳೆದ ಮೂರು ದಿನಗಳಿಂದ ನಮ್ಮ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಅವಳಿಗೀಗ ನಿಮೋನಿಯಾದ ಸೋಂಕು ಕೂಡಾ ತಗುಲಿದೆ. ಆದುದರಿಂದಲೇ ಅವಳಿಗೆ ನಾವು ವೆಂಟಿಲೇಟರ್ ಅಳವಡಿಸಬೇಕಾಯಿತು. ಅವಳಿಗೀಗ "ಪ್ಲಾಸ್ಮಾ ಚಿಕಿತ್ಸೆ (plasma therapy)"ಯನ್ನು ನೀಡಬೇಕಾಗಿದೆ. ಅದಕ್ಕೆ ಬೇಕಾದ ಎಲ್ಲ ಏರ್ಪಾಡುಗಳನ್ನೂ ಮಾಡಿಕೊಳ್ಳುತ್ತಿದ್ದೇವೆ,' ಎಂದಾಗ, ಕಿರಣನು ಹೌದೆಂಬಂತೆ ತಲೆಯಾಡಿಸಿದ್ದನು. ಮಾತೇ ಹೊರಡದಾದ ತಂದೆ ರಾಜು, ಡಾ.ಗುಲಾಟಿಯವರ ಮುಂದೆ ಕೈಮುಗಿದು ನಿಂತಿದ್ದರು. 

ತಂದೆ ರಾಜುರವರಿಗೆ, ಪ್ಲಾಸ್ಮಾ ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ಕಿರಣನಿಗೆ ಅನಿಸಿತ್ತು. 'ಪ್ಲಾಸ್ಮಾ ಚಿಕಿತ್ಸೆಯೊಂದು ಪರಿಣಾಮಕಾರಿಯಾದ ವಿಧಾನ. ಕೋವಿಡ್-೧೯ರ ರೋಗದಿಂದ ಗುಣಮುಖರಾಗಿರುವ ವ್ಯಕ್ತಿಗಳ ರಕ್ತದ "ಪ್ಲಾಸ್ಮಾ"ದಲ್ಲಿ, ಕೋವಿಡ್-೧೯ರ ವೈರಾಣುಗಳ ವಿರುದ್ಧ ಹೊರಡ ಬಲ್ಲ "ಪ್ರತಿರೋಧಕಾರಿ ಅಣು (antibodies)"ಗಳು ಇರುತ್ತವೆ. ಗುಣಮುಖರಾದ ರೋಗಿಗಳಿಂದ ಪಡೆದ ರಕ್ತದಿಂದ ಪ್ಲಾಸ್ಮಾವನ್ನು ನಮ್ಮ ತಂತ್ರಜ್ಞರು ಬೇರ್ಪಡಿಸುತ್ತಾರೆ. ವೈದ್ಯರು ಅಂತಹ ಪ್ಲಾಸ್ಮಾವನ್ನು ಕೋವಿಡ್ ರೋಗಿಗಳಿಗೆ ನೀಡುತ್ತಾರೆ. ಪ್ಲಾಸ್ಮಾ ಚಿಕಿತ್ಸೆಯಿಂದ ಈಚೆಗೆ ಸಾಕಷ್ಟು ರೋಗಿಗಳು ನಮ್ಮ ಆಸ್ಪತ್ರೆಯಲ್ಲೇ ಗುಣಮುಖರಾಗಿದ್ದಾರೆ. ರೋಹಿಣಿ ಕೂಡ ಶೀಘ್ರವಾಗಿ ಗುಣಮುಖಳಾಗಬಲ್ಲಳೂ ಎಂಬ ವಿಶ್ವಾಸ ನನಗಿದೆ,' ಎಂಬ ವಿವರಣೆಯನ್ನು ಕಿರಣನಿಂದ ಕೇಳಿದ ರಾಜುರವರಿಗೆ, ಪರಿಸ್ಥಿತಿ ಎಷ್ಟು ಗಂಭೀರವಾಗಿರುವುದು ಎಂಬುದರ ಅರಿವಾಗಿತ್ತು. 

ಡಾ. ಗುಲಾಟಿರವರ ಮಾರ್ಗದರ್ಶನದಲ್ಲಿ, ಆಸ್ಪತ್ರೆಯ ಹಿರಿಯ ನರ್ಸ್ರವರಾದ ಶ್ರೀಮತಿ ನಳಿನಿ ಗೌಡರವರು, ರೋಹಿಣಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದರು. ಅವರು ರೋಹಿಣಿಯೊಂದಿಗೆ ಮಾತನಾಡುತ್ತಾ, 'ರೋಹಿಣಿ, ನಿನ್ನ ಪ್ಲಾಸ್ಮಾ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದೇವೆ. ನಮ್ಮ ಆಸ್ಪತ್ರೆಯಲ್ಲೇ, ಈ ಚಿಕಿತ್ಸೆಯಿಂದ ಸಾಕಷ್ಟು ಕೋವಿಡ್ ರೋಗಿಗಳು ಗುಣಮುಖರಾಗಿದ್ದಾರೆ. ದೇಶಾದ್ಯಂತ ಪ್ಲಾಸ್ಮಾ ಚಿಕಿತ್ಸೆ ಹೆಚ್ಚಿನ ಯಶಸ್ಸನ್ನು ಕಂಡಿದ್ದು, ವೈದ್ಯಕೀಯ ವಲಯಗಳಲ್ಲಿ ಉತ್ತಮ ಭರವಸೆಯನ್ನು ಮೂಡಿಸಿದೆ. ನಿನಗೂ ಈ ಚಿಕಿತ್ಸೆಯಿಂದ ಒಳ್ಳೆಯದಾಗುವುದೆಂಬ ಭರವಸೆ ನನಗಿದೆ. ಡಾ. ಗುಲಾಟಿರವರೊಬ್ಬ ನುರಿತ ವೈದ್ಯರು. ಜೊತೆಗೆ ನಿನಗೆ ಡಾ. ಕಿರಣರಂತಹ ಆತ್ಮೀಯ ಗೆಳೆಯರಿದ್ದಾರೆ. ನಿಮ್ಮ ತಂದೆ ರಾಜುರವರು ದೇವರಲ್ಲಿ ನಂಬಿಕೆ ಇಟ್ಟವರು. ಅವರ ಪ್ರಾರ್ಥನೆ ಒಳ್ಳೆ ಫಲವನ್ನು ನೀಡೇ ನೀಡುತ್ತದೆ. ಇನ್ನೆರಡು ದಿನಗಳಲ್ಲಿ ನೀನು ಗುಣಮುಖ ಹೊಂದುವೆ,' ಎಂದರು.  ವೆಂಟಿಲೇಟರ್ನ ಅಳವಡಿಕೆಯ ಜೊತೆಗೆ, ರೋಹಿಣಿಯ ಎಲ್ಲಾ ಚಿಕಿತ್ಸೆಗಳೂ  ಐ.ಸಿ.ಯು.ನಲ್ಲೇ ಮುಂದುವರೆದಿತ್ತು. 

ರಾಜು ಮತ್ತು ಕಿರಣರು ಮನೆಯನ್ನು ತಲುಪಿಯಾಗಿತ್ತು. ಮನೆಯ "ಪೂಜಾ ಕೋಣೆ"ಗೆ ರಾಜು ಕೂಡಲೇ ತೆರಳಿದ್ದರು. 'ಓ, ನನ್ನ ದೇವರೇ, ನಮ್ಮೊಂದಿಗೆ ನೀನಿರು. ನನ್ನ ಮಗಳ ಜೀವವನ್ನು ಕಾಪಾಡು. ನನ್ನ ಮಗಳು ರೋಹಿಣಿ ಗುಣಮುಖಳಾದ ಮೇಲೆ, ನಾನು ತಿರುಪತಿ, ಶಿರಡಿ ಮತ್ತು ಉಜ್ಜಯಿನಿ ಕ್ಷೇತ್ರಗಳಿಗೆ  ಬಂದು ನಿನ್ನ ಸೇವೆಯನ್ನು ಮಾಡುತ್ತೇನೆ' ಎಂದು ಪ್ರಾರ್ಥಿಸಿದ ರಾಜು, ದೀರ್ಘದಂಡ ನಮಸ್ಕಾರವನ್ನು ಮಾಡಿದ್ದರು.  ಕಣ್ಣೀರೊರೆಸಿಕೊಂಡ ರಾಜುರವರು, ರೂ. ೧೦೧ರ ಮೂರು ಮುಡುಪಿನ ಕಟ್ಟುಗಳನ್ನು ಮಹಾಕಾಳೇಶ್ವರರ ಮೂರ್ತಿಯ ಪಕ್ಕದಲ್ಲಿಟ್ಟರು. ರಾಜುರವರ ಹಿಂದೆಯೇ ಕಣ್ಣು ಮುಚ್ಚಿ ನಿಂತಿದ್ದ ಕಿರಣ್ ಕೂಡ ದೇವರಿಗೆ ಕೈಗಳನ್ನು ಮುಗಿದು, ತಲೆ ಬಾಗಿಸಿದ್ದನು.

ರೋಹಿಣಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಿ ೨೪ ಘಂಟೆಗಳ ಸಮಯ ಕಳೆದಿತ್ತು. ರೋಹಿಣಿಯನ್ನು ಪರೀಕ್ಷಿಸಲೆಂದು, ಡಾ ಕಿರಣರವರೊಂದಿಗೆ ಬಂದ ಡಾ. ಗುಲಾಟಿಯವರನ್ನು ಗುರುತಿಸಿದ, ರೋಹಿಣಿಯೇ ಅವರಿಗೆ ಸನ್ನೆಯ ಮುಖಾಂತರ ನಮಸ್ಕಾರಗಳನ್ನು ಮಾಡಿದ್ದಳು. ರೋಹಿಣಿಯ ಪರಿಸ್ಥಿತಿ ಸುಧಾರಿಸಿದೆಯೆಂಬ ವಿಶ್ವಾಸ ಡಾ. ಗುಲಾಟಿರವರಿಗೆ ಗೋಚರಿಸಿತ್ತು. ಅಂದಿನ ಬೆಳಗ್ಗೆ ನಡೆಸಿದ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳು ಡಾ. ಗುಲಾಟಿರವರ ಕೈಸೇರಿದ್ದವು.  ಪ್ಲಾಸ್ಮಾ ಚಿಕಿತ್ಸೆಗೆ ರೋಹಿಣಿ ಉತ್ತಮವಾಗಿ ಪ್ರತಿಕ್ರಿಯಿಸಿದ್ದಳು. ಅವಳ ಆಕ್ಸಿಜನ್ ಮಟ್ಟ ಸಾಕಷ್ಟು ಸುಧಾರಿಸಿದ್ದು, ಶ್ವಾಸಕೋಶಗಳ ಸೋಂಕಿನ ದಟ್ಟಣೆ (congestion) ಸಾಕಷ್ಟು ತಿಳಿಯಾಗಿತ್ತು. ಹಸನ್ಮುಖರಾದ ಡಾ. ಗುಲಾಟಿರವರು ಸನ್ನೆಗಳನ್ನು ತೋರಿಸುತ್ತಾ, ರೋಹಿಣಿಯೊಂದಿಗೆ ಮಾತನಾಡಿ, 'ರೋಹಿಣಿ ಪ್ಲಾಸ್ಮಾ ಚಿಕಿತ್ಸೆಯಿಂದ ನಿನ್ನ ಪರಿಸ್ಥಿತಿ ಉತ್ತಮಗೊಂಡಿದೆ. ನಿನ್ನ ಆರೋಗ್ಯವೀಗ ನನ್ನ ನೀರಿಕ್ಷೆಗೂ ಮೀರಿ ಉತ್ತಮಗೊಂಡಿದೆ. ನಿನ್ನ ಆಕ್ಸಿಜನ್ ಮಟ್ಟ ವೃದ್ಧಿಸಿದ್ದು, ನಿನ್ನ ಶ್ವಾಸಕೋಶಗಳು ಸಾಕಷ್ಟು ತಿಳಿಯಾಗಿವೆ. ಗೆಲವಿನ ನಗೆ ಸೂಸುವ ಸಮಯ ನಿನಗೀಗ ಬಂದಿದೆ,' ಎಂದಾಗ, ರೋಹಿಣಿಯ ಮುಗುಳ್ನಗೆಯ ಮುಖಾಂತರ, ತನ್ನ ವೈದ್ಯರಿಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಳು. 

ಡಾ. ಕಿರಣ್, ರಾಜುರವರಿಗೆ ಅವರ ಮಗಳು ಆರೋಗ್ಯ ಸುಧಾರಿಸಿರುವ ವಿಷಯವನ್ನು ವಿವರಿಸಿದರು. ಸಂತುಷ್ಟರಾದ ರಾಜುರವರು, ಆಕಾಶದ ಕಡೆ ನೋಡುತ್ತಾ, ಕೈ ಮುಗಿದಿದ್ದರು. 

 ರೋಹಿಣಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಿ ಮೂರು ದಿನಗಳು ಕಳೆದಿತ್ತು. ಡಾ. ಗುಲಾಟಿರವರೀಗ, ರೋಹಿಣಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದರು. ಬೇಗನೆ ಬಂದ ಫಲಿತಾಂಶದ ಪ್ರಕಾರ, ರೋಹಿಣಿ ಕೋವಿಡ್ನಿಂದ ಮುಕ್ತಳಾಗಿದ್ದಾಳೆಂದು ತಿಳಿದು ಬಂದಿತ್ತು. 'ಡಾ. ಕಿರಣ್, ನಿಮ್ಮ ರೋಹಿಣಿಯನ್ನು ಅದೃಷ್ಟಶಾಲಿ ಎಂದೇ ಹೇಳಬೇಕು. ಪ್ಲಾಸ್ಮಾ ಚಿಕಿತ್ಸೆ ಅವಳಿಗೆ ಫಲ ನೀಡಿದೆ. ಪ್ಲಾಸ್ಮಾ ಚಿಕಿತ್ಸೆ ಪಡೆದ ಮೂರು ದಿನಗಳನಂತರ ಅವಳ ಕೋವಿಡ್ ರೋಗ ನಿವಾರಣೆಗೊಂಡಿರುವುದು ಕಂಡುಬಂದಿದೆ. ಇನ್ನೆರಡು ದಿನಗಳನಂತರ ನಾವು ನಡೆಸುವ ಕೋವಿಡ್ ಪರೀಕ್ಷೆಯಲ್ಲಿ, ರೋಹಿಣಿ ಗುಣಮುಖಳಾಗಿರುವುದು ಖಾತರಿಯಾದರೆ, ಅವಳನ್ನು ಅಂದೇ ಮನೆಗೆ ಕಳುಹಿಸಬಹುದು' ಎಂದ ಡಾ. ಗುಲಾಟಿರವರಲ್ಲಿ ಗೆಲುವಿನ ನಗುವಿತ್ತು. ಶುಭ ಸಮಾಚಾರವನ್ನು ಕೇಳಿಸಿಕೊಂಡ ರೋಹಿಣಿ, ರಾಜು ಮತ್ತು ಕಿರಣರೆಲ್ಲರೂ ಸಂತಸಗೊಂಡಿದ್ದರು. 

ಮತ್ತೆರಡು ದಿನಗಳ ಸಮಯ ಕಳೆದಿತ್ತು. ಆಸ್ಪತ್ರೆಗೆ ತೆರಳುವ ಮುನ್ನ, ಮೊತ್ತೊಮ್ಮೆ ಪೂಜಾ ಕೋಣೆಗೆ ತೆರಳಿದ ರಾಜು, ದೇವರಿಗೆ ಕೈಜೋಡಿಸಿ ಪ್ರಾರ್ಥಿಸಿದ್ದರು. ಆಸ್ಪತ್ರೆಯನ್ನು ತಲುಪಿದ ರಾಜುರವರಿಗೆ, ಡಾ. ಗುಲಾಟಿ ಮತ್ತು ಡಾ. ಕಿರಣರವರಿಬ್ಬರೂ ಐ.ಸಿ.ಯು. ಕೋಣೆಯಲ್ಲಿದ್ದದ್ದು ಕಂಡು ಬಂತು. ರೋಹಿಣಿಯ ಮೇಲೆ ಅಂತಿಮ ಕೋವಿಡ್ ಪರೀಕ್ಷೆ ನಡೆಯುತ್ತಿದೆಯೆಂಬುದು, ರಾಜುರವರು ಗಮನಿಸಿಯಾಗಿತ್ತು. ಬೇಗನೆ ಬಂದ ಪರೀಕ್ಷಾ ಫಲಿತಾಂಶಗಳಿಂದ ಸಂತುಷ್ಟರಾದ ಡಾ. ಗುಲಾಟಿ, ಡಾ. ಕಿರಣ್ ಮತ್ತು ನರ್ಸಗಳಿಬ್ಬರೂ, ವಿಜಯದ ಸನ್ನೆಯನ್ನು (V for Victory) ರೋಹಿಣಿಗೆ ತೋರಿಸುತ್ತಿರುವದನ್ನು ನೋಡಿದ, ರಾಜುರವರ ಆನಂದಕ್ಕೆ ಪಾರವೇ ಇರಲಿಲ್ಲ. 

'ರೋಹಿಣಿ, ನಿನ್ನ ಧೈರ್ಯವನ್ನು ನಾನು ಮೆಚ್ಚುತ್ತೇನೆ. ನಾವು ನೀಡಿದ ಚಿಕಿತ್ಸೆಗಳಿಗೆಲ್ಲಾ ಉತ್ತಮ ಸಹಕಾರ ನೀಡಿದ್ದೀಯ. ನಿನ್ನ ಧನಾತ್ಮಕ ಚಿಂತನೆ (Positive Mental Attitude)ಗಳಿಂದಲೇ ನಮ್ಮ ಚಿಕಿತ್ಸೆಗಳೆಲ್ಲಾ ಉತ್ತಮ ಫಲ ನೀಡಿವೆ. ನೀನೀಗಲೇ ಮನೆಗೆ ತೆರಳಬಹುದು' ಎಂದರು ಡಾ. ಗುಲಾಟಿ. ರೋಹಿಣಿ ಕೈಜೋಡಿಸಿ ಮಾತನಾಡುತ್ತಾ, 'ತಾವು ನೀಡಿರುವ ಉತ್ತಮ ಚಿಕಿತ್ಸೆಗಳಿಂದಲೇ ನಾನು ಮತ್ತೆ ಬದುಕಿ ಬಂದಿದ್ದೇನೆ. ಚಿಕಿತ್ಸೆಯುದ್ದಕ್ಕೂ ನೀವು ಮತ್ತು ನಿಮ್ಮ ನರ್ಸಗಳೆಲ್ಲರೂ ನನ್ನಲ್ಲಿ ಧೈರ್ಯ ತುಂಬುತ್ತಿದ್ದಿರಿ. ಹಿರಿಯ ನರ್ಸ್ ರವರಾದ ನಳಿನಿ ಗೌಡರವರಿಗೆ ನನ್ನ ವಿಶೇಷ ಧನ್ಯವಾದಗಳು. ಡಾ. ಕಿರಣನಂತಹ ಆತ್ಮೀಯ ಗೆಳೆಯನನ್ನು ಪಡೆದ ನಾನೇ ಭಾಗ್ಯವಂತಳು. ನಮ್ಮಪ್ಪ ಯಾವಾಗಲೂ ನನ್ನೊಡನಿದ್ದದ್ದು, ನನ್ನ ವಿಶ್ವಾಸವನ್ನು ಹೆಚ್ಚಿಸಿತ್ತು,' ಎಂದಳು. ರೋಹಿಣಿಯ ಗೆಲುವಿನ ಮಾತುಗಳನ್ನು ಕೇಳುತ್ತಿದ್ದ ಕಿರಣನ ಮುಖದಲ್ಲೂ ಆನಂದದ ನಗೆ ಮೂಡಿತ್ತು. ತಂದೆ ರಾಜು ಮಾತ್ರ ಡಾ. ಗುಲಾಟಿರವರಿಗೆ ಕೈ ಜೋಡಿಸಿ ನಿಂತಿದ್ದರು.   

ಆಸ್ಪತ್ರೆಯಿಂದ ಬಿಡುಗಡೆಯ ಪತ್ರಗಳನ್ನು ಸಹಿಮಾಡುತ್ತಿದ್ದ ಡಾ. ಗುಲಾಟಿರವರು, ರಾಜುವರೊಂದಿಗೆ ಮಾತನಾಡುತ್ತಾ, 'ರೋಹಿಣಿಗೆ ಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ, ಕೆಲವು ವಾರಗಳಾಗಬಹುದು. ಅವಳನ್ನು ಕೆಲವು ವಾರಗಳ ಕಾಲ ನಿರಂತರ ದಣಿವು ಕಾಡುಬಹುದು. ಮತ್ತೆ ೧೪ ದಿನಗಳು ಕಳೆದನಂತರ, ಅವಳನ್ನು ಮತ್ತೊಮ್ಮೆ ಪರೀಕ್ಷೆಗೆ ನೀವು ಕರೆತರಬೇಕು. ಮತ್ತೊಮ್ಮೆ ಸಂಪೂರ್ಣವಾಗಿ ಗುಣಮುಖಳಾದ ವರದಿಗಳು ಬರುವವರೆಗೆ, ಅವಳ ನಿರ್ಬಂಧನೆ (quarantine) ಮುಂದುವರೆಯಲಿ. ಎಲ್ಲರೂ ಜಾಗರೂಕತೆಯಿಂದಿರಿ,' ಎಂದರು. 

ಮುಂದಿನ ೧೪ ದಿನಗಳು ಕಳೆದಿದ್ದವು. ರೋಹಿಣಿಯ ಅಂತಿಮ ಕೋವಿಡ್ ಪರೀಕ್ಷೆಯ ದಿನ ಅಂದಾಗಿತ್ತು. ಕೋವಿಡ್ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳಿಗೆ, ರಾಜ್ಯ ಪ್ರಶಸ್ತಿಯನ್ನು ಪ್ರಕಟಿಸುವ ದಿನವೂ ಅಂದೇ ಆಗಿತ್ತು. ಜಿಲ್ಲೆಯಿಂದ ರಾಜ್ಯ ಸರಕಾರಕ್ಕೆ ಶಿಫಾರಿಸು ಮಾಡಿ ಕಳುಹಿಸಿದ ವೈದ್ಯರುಗಳ ಪಟ್ಟಿಯಲ್ಲಿ, ತನ್ನ ಹೆಸರು ಮುಂಚೂಣಿಯಲ್ಲಿದೆ ಎಂಬುದು ಡಾ. ಕಿರಣನಿಗೆ ತಿಳಿದಿತ್ತು. ಹಾಗಾಗಿ ಅಂದು ಡಾ. ಕಿರಣನು ಎರಡು ವಿಷಯಗಳ ಬಗ್ಗೆ ಕಾತರನಾಗಿದ್ದನು. ಒಂದು ರೋಹಿಣಿಯ ಅಂತಿಮ ವೈದ್ಯಕೀಯ ಪರೀಕ್ಷೆಯ ಫಲಿತಾಂಶವಾದರೆ, ಮತ್ತೊಂದು ರಾಜ್ಯ ಪ್ರಶಸ್ತಿಯ ಫಲಿತಾಂಶದ ಸುದ್ದಿಯಾಗಿತ್ತು. ರೋಹಿಣಿ, ಕಿರಣ್ ಮತ್ತು ರಾಜುರವರುಗಳು ಆಸ್ಪತ್ರೆಯ ಡಾ. ಗುಲಾಟಿರವರ ಕೋಣೆಯನ್ನು ಸೇರಿದಾಗ, ಅವರುಗಳೆಲ್ಲಾ ಹರ್ಷಚಿತ್ತರಾಗಿದ್ದರು. ರೋಹಿಣಿಯನ್ನು ಅಂತಿಮ ಪರೀಕ್ಷೆಗೆಂದು ವಿಶೇಷ ಕಕ್ಷೆಯೊಳಗೆ ಕರೆದೊಯ್ಯಲಾಯಿತು. ಬೇಗನೆ ಬಂದ ಪರೀಕ್ಷಾ ವರದಿಯನ್ನು ನೋಡಿದ ಕೂಡಲೇ ಡಾ. ಗುಲಾಟಿರವರು ನಗುತ್ತಾ,  ವಿಜಯದ ಸನ್ನೆಯನ್ನು ತೋರಿಸಿದ್ದರು. ನಾಲ್ವರ ನಡುವೆ ಸಂತಸದ ನಗೆಯ ವಿನಿಮಯವಾಗಿತ್ತು. ತಂದೆ ರಾಜು, ಕೈಜೋಡಿಸಿ ಡಾ. ಗುಲಾಟಿರವರಿಗೆ ವಂದನೆಗಳನ್ನು ಸಮರ್ಪಿಸಿದ್ದರು.  

ಈ ನಡುವೆ, ಡಾ. ಗುಲಾಟಿರವರ ಫೋನು ರಿಂಗಣಿಸಿತ್ತು. ಆ ಕಡೆಯ ಧ್ವನಿಯ ಮುಖಾಂತರ,  ಮಾತನಾಡುತ್ತಿದ್ದ ವ್ಯಕ್ತಿಯು ಯಾರೆಂಬುದು, ಡಾ. ಕಿರಣನಿಗೆ ತಿಳಿದಿತ್ತು. ಆ ಕಡೆಯಿಂದ ಮಾತನಾಡುತ್ತಿದ್ದವರು ರಾಜ್ಯದ ಆರೋಗ್ಯ ಇಲಾಖೆಯ ನಿರ್ದೇಶಕರಾಗಿದ್ದವರು. 'ಅಭಿನಂದನೆಗಳು ಡಾ. ಗುಲಾಟಿರವರೇ! ತಾವು ರಾಜ್ಯ ಸರಕಾರದ ಪ್ರಶಸ್ತಿಗೆ ಆಯ್ಕೆಯಾಗಿದ್ದೀರ. ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ತಮ್ಮ ಹೆಸರೇ ಮೊದಲನೆಯದು. ಪ್ರಶಸ್ತಿ ಗಳಿಸಿದ ಮಿಕ್ಕ ವೈದ್ಯರುಗಳ ಹೆಸರುಗಳು ಹೀಗಿವೆ,' ಎಂದು ಓದುತ್ತಾ ಸಾಗಿತ್ತು ನಿರ್ದೇಶಕರ ವಾಣಿ. ಪಟ್ಟಿಯಲ್ಲಿದ್ದ ಹೆಸರುಗಳನ್ನು, ಗಮನವಿಟ್ಟು ಡಾ. ಕಿರಣ್ ಕೇಳುತ್ತಿದ್ದದ್ದು, ಡಾ. ಗುಲಾಟಿ, ರೋಹಿಣಿ ಮತ್ತು ರಾಜುರವರ ಗಮನಕ್ಕೂ ಬಂದಿತ್ತು. ತನ್ನ ಹೆಸರು, ಪಟ್ಟಿಯಲ್ಲಿಲ್ಲದ್ದನ್ನು ಕೇಳಿ, ನಿರಾಶೆಯ ಛಾಯೆ ಡಾ. ಕಿರಣನ ಮುಖದಲ್ಲಿ ಮೂಡಿತ್ತು. 

'ಸಾರೀ ಡಾ. ಕಿರಣ್, ಉತ್ಸಾಹಿ ಯುವ ವೈದ್ಯರಾದ ತಮಗೂ ಈ ಪ್ರಶಸ್ತಿ ದೊರೆಯಬೇಕಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ತಾವು ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಪ್ರಶಸ್ತಿ ಪಡೆಯಬೇಕಾದ ಅರ್ಹ ವೈದ್ಯರು ತಾವಾಗಿದ್ದಿರಿ,' ಎಂದು ಡಾ. ಕಿರಣನನ್ನು ಸಂತೈಸಲೆತ್ನಿಸಿದವರು ಡಾ. ಗುಲಾಟಿ.  'ಇರಲಿ ಬಿಡಿ ಸಾರ್, ನನ್ನ ಪ್ರಶಸ್ತಿ ನನಗಾಗಲೇ ದೊರೆತಾಗಿದೆ,' ಎಂದು ಮುಗುಳ್ನಗುತ್ತಾ ಡಾ . ಕಿರಣ್, ತನ್ನ ಗೆಳತಿ ರೋಹಿಣಿಯತ್ತ ನೋಡಿದನು. ರೋಹಿಣಿ ಕೂಡಾ  ಹೆಮ್ಮೆಯಿಂದ ತನ್ನ ಗೆಳಯ ಕಿರಣನತ್ತ ನೋಡಿ ಮುಗುಳ್ನಕ್ಕಿದ್ದಳು. ಅವರಿಬ್ಬರ ನಡುವಿನ ಗೆಲುವಿನ ನಗು, ಅವರಿಬ್ಬರ ಜೀವನದ ಮುಂದಿನ ಸುಂದರ ಅಧ್ಯಾಯದ ಆರಂಭಕ್ಕೆ ನಾಂದಿ ಹಾಡಿತ್ತು.  

-೦-೦-೦-೦-೦-೦-೦-    

 



 


 


 



 







Sunday 23 May 2021

Did he encash Indian poverty?

 

Believe me, the reason for my today's blog is my granddaughter Prajna, aged just 7 years, who has produced the above cartoon to celebrate the birth centenary of Satyajit Ray, arguably the greatest film personality from India!

Bengal and India lost their way in celebrating Ray's birth centenary on 2nd May 2021 early this month, as they were drowned in the deluge of Covid-19 and Bengal election results, on that day. 

While most critics all over the world hailed Bharat Ratna Satyajit Ray as a great film personality of his times, a few criticized him for encashing 'Indian poverty,' for finding an easy road towards glory! Even a great film personality of his times, Nargis Dutt criticized Ray for glorifying Indian poverty instead of focusing on modern India. 
During 1971-72, when I was studying in I year B.Sc., I studied Pather Panchali as a Kannada text.  When Ray made his debut film based on this story, written by Bhibuthibushan Bandopadhyaya, during 1955, the film had created history. The story revolves around the boy Apu, his elder sister Durga and his mother Sarbajoya in impoverished rural Bengal.  The story is very much similar to the famous Kannada novel 'Gruhabhanga,' written by Sri.S.L.Bhyrappa.  The music for the film was scored by Pandit Ravishankar. Critics have praised the film for its realism, humanity and soul-stirring moments. Others have criticized it for its slow pace and romanticizing of poverty!  Many opine that the film received international fame and awards because it had projected India in poor light, highlighting its poverty. The run away success of the film inspired Ray to produce two more films soon based on 'Apu's life by names Aparajito and Apur sansar, completing the 'Apu triology.'

I personally feel that the criticism on Ray is harsh.  Ray was a multi-faceted personality and he produced 36 films mirroring various facets of life, other than poverty. In this context, I would like to mention about two of his hit films 'Mahanagar and Charulata' produced during 1960s.
Film Mahanagar highlighted the struggle of middle class for better life in a big city like Calcutta.  Its heroine (left), comes out on her own to take up a job for supplementing his husband's income.  When her husband loses his job, she becomes the sole breadwinner for the family, leading to 'Abhimaan' type of conflict, between husband and the wife. Film Charulata is also a film highlighting the cause of woman!  Its heroine (right) is encouraged by her husband to take up writing for which, her guide happens to be a third person. Through her literary journey, she falls in love with her guide, leading to triangular conflict.

Ray made a late entry into Mumbai film world too with the film 'Shatranj Ke Kilari,' starring Sanjeev Kumar and Amjad Khan.  Somehow Bollywood was not his forte, whereas his contemporaries like Hrishikesh Mukherjee ('Anand' fame) and Basu Chaterjee ('Rajnigandha' fame) made a great impact there.

Ray was a rare personality, who was a visionary. Somehow he has remained silent towards the key events of his prime time, like the '1962 war, 1971 war and the influx of refugees from East Bengal and the emergency of 1975.' Probably he has not made films on those themes, as it would have dented his image which was built towards the 'left of center!' No doubt, he made a political satire, 'Hirak Rajar Deshe,' little after emergency.  But critics have remarked that he was half hearted in confronting with the real issues. 

But nothing can bring down Ray's glory, as the founder of parallel cinema on the Indian panorama. As the 'father of Indian art movies,' he has shown the way for a generation of film personalities to make their mark in the international arena. Satyajit's 'ray' is bound to keep shining for ever!
-0-0-0-0-0-0-






Friday 21 May 2021

 ಕೋವಿಡ್ 

ಮಾನವ ಸೃಷ್ಟಿಯೇ?

(ಇದು ದೋಷಾರೋಪಗಳ ಪಟ್ಟಿ ಮಾತ್ರವಲ್ಲ)


ಲೇಖಕರು: ಲಕ್ಷ್ಮೀನಾರಾಯಣ ಕೆ. 

ವ್ಯಂಗಚಿತ್ರಗಳು: ಶ್ರೀ. ರಘುಪತಿ ಶೃಂಗೇರಿ 

Thursday 20 May 2021

ಮುನ್ನುಡಿ

ಮುನ್ನುಡಿ  

***

ಅಂದು ೩೧-೧೨-೨೦೧೯ರ ತಡ ರಾತ್ರಿಯಾಗಿತ್ತು. ನಾವು ವಾಸಿಸುವ ಪುಟ್ಟ ಬಡಾವಣೆಯಲ್ಲಿ, ಪ್ರತಿ ವರ್ಷದ ಆಚರಣೆಯಂತೆ 'ಹೊಸ ವರ್ಷ ೨೦೨೦'ನ್ನು ಸ್ವಾಗತಿಸುವ ಪುಟ್ಟ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಾವೆಲ್ಲರೂ ಸೇರಿದ್ದೆವು. ನಮ್ಮ ಯುವಕರ ಉತ್ಸಾಹ, ಸಂಭ್ರಮಗಳು ಮುಗಿಲು ಮುಟ್ಟಿದ್ದವು. ಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸಿದ ಅವರುಗಳು, ಕುಣಿದು ಕುಪ್ಪಳಿಸಿ ನಮ್ಮೆಲ್ಲರಿಗೂ ಸಿಹಿಯನ್ನು ಹಂಚಿದ್ದರು. ಆದರೆ, ಅಂದು ನೆರೆದಿದ್ದ ನಮಗ್ಯಾರಿಗೂ ಅದೇ ದಿನದ ಬೆಳಗ್ಗೆ ನಮ್ಮ ನೆರೆ ರಾಷ್ಟ್ರವಾದ ಚೀನಾ ತನ್ನ 'ಉಹಾನ್' ನಗರದಲ್ಲಿ, ಕೋವಿಡ್ ರೋಗದ ಹರಡುವಿಕೆ ಆರಂಭವಾಗಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದ ವಿಷಯ ತಿಳಿದಿರಲಿಲ್ಲ. ಮಾರನೆಯ ದಿನದ ಬೆಳಗ್ಗೆ, ಆ ವಿಶ್ವವ್ಯಾಪಿ  ಮಹಾಮಾರಿ (pandemic) ಮನುಕುಲಕ್ಕಪ್ಪಳಿಸಿದ್ದ ಸುದ್ದಿ, ನಮ್ಮ ದಿನ ಪತ್ರಿಕೆಯ ಪುಟ್ಟ ಅಂಕಣವೊಂದರಲ್ಲಿ ಪ್ರಕಟವಾಗಿದ್ದು, ನನ್ನ ಗಮನಕ್ಕೆ ಬರಲೇ ಇಲ್ಲ. 'ಕೋವಿಡ್-೧೯' ಎಂಬ ಆ ಮಹಾಮಾರಿ ಇಂದು ಇಡೀ ವಿಶ್ವವನ್ನೇ ಆವರಿಸಿ, ಕೋಟಿಗಟ್ಟಲೆ ಜನರುಗಳನ್ನು ಸೋಂಕಿತರನ್ನಾಗಿಸಿ, ಲಕ್ಷಗಟ್ಟಲೆ ಸಾವು-ನೋವುಗಳನ್ನು ಉಂಟುಮಾಡಿರುವುದು, ನಮ್ಮೆಲ್ಲರನ್ನೂ ಕಂಗೆಡಿಸಿರುವುದು ಸುಳ್ಳಲ್ಲ. 

'ಕೋವಿಡ್-೧೯ರ ರೀತಿಯ ಮಹಾಮಾರಿಯೊಂದು ಸಧ್ಯದಲ್ಲೇ ಮನುಕುಲವನ್ನು ಕಾಡಬಹುದೆಂದು,' ವಿಶ್ವ ಆರೋಗ್ಯ ಸಂಸ್ಥೆ (World Health Organization - WHO) ಆಗಾಗ ಎಚ್ಚರಿಕೆ ನೀಡುತ್ತಲೇ ಬಂದಿತ್ತು. ಆದರೆ ಆ ಎಚ್ಚರಿಕೆಯನ್ನು ಹೆಚ್ಚಿನವರು ಗಂಭೀರವಾಗಿ ಪರಿಗಣಿಸಿರಲಿಲ್ಲ. 'ಬರಲಾರದೆಂದು ಉದಾಸೀನ ಮಾಡಿದ್ದ ಅಪಾಯವೇ, ದಿಢೀರನೇ ಬಂದು ನಮ್ಮ ಮೇಲೆರಗಬಹುದು (the danger which is least expected soonest comes to us),' ಎಂಬ ಎಚ್ಚರಿಕೆಯನ್ನು ಫ್ರೆಂಚ್ ನಾಟಕಕಾರ ಹಾಗೂ ಸಮಾಜ ಸುಧಾರಕ ವೊಲ್ಟೈರ್ (Voltaire) ನೀಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. 

೧೯೮೧ರ ಸಮಯದಲ್ಲಿ ವಿಶ್ವವನ್ನು ಆವರಿಸಿದ  ಏಡ್ಸ್ (AIDS) ರೋಗದ ದಿನಗಳಿಂದಲೇ, ವಿಶ್ವದ ಗ್ರಹಚಾರ ಸರಿಯಿಲ್ಲವೆಂದೇ ಹೇಳಬಹುದು. ಏಡ್ಸ್ ರೋಗದ ನಂತರ, ಸಾಂಕ್ರಾಮಿಕಗಳಾದ 'ಹಕ್ಕಿಜ್ವರ (Bird flu-೧೯೯೬), ಸಾರ್ಸ್ (SARS-೨೦೦೨), ಹಂದಿಜ್ವರ (Swine flu -೨೦೦೯), ಎಬೋಲಾ (Ebola -೨೦೧೩), ನಿಪಾಹ್ (Nipah -೨೦೧೮), ಮೆರ್ಸ್ (MERS - ೨೦೧೯), ಮತ್ತೀಗ ಕೋವಿಡ್-೧೯ (Covid-೧೯),ರಂತಹ' ರೋಗಗಳು ಮನುಕುಲದ ಮೇಲೆ ಸರಣಿ ದಾಳಿಯನ್ನೇ ನಡೆಸಿವೆ ಎನ್ನಬಹುದು. ಕೋವಿಡ್-೧೯ರ ರೋಗವಂತೂ, ಕಳೆದ ಹದಿನೆಂಟು ತಿಂಗುಳುಗಳಿಂದ ಇಡೀ ವಿಶ್ವವನ್ನೇ ಸತತವಾಗಿ ಕಾಡುತ್ತಿದ್ದು, ಮಹಾಮಾರಿಯ ಸ್ವರೂಪವನ್ನು ತಾಳಿಬಿಟ್ಟಿದೆ. ಆ ಮಹಾಮಾರಿ ಮಾನವನ ಎಲ್ಲಾ ಚಟುವಟಿಕೆಗಳ ಲಯವನ್ನೇ ಕಂಗೆಡಿಸಿಟ್ಟಿದೆ. 

ಕೋವಿಡ್-೧೯ರ ಮಹಾಮಾರಿ ನಮ್ಮ ದೇಶಕ್ಕೆ ಕೊಂಚ ತಡವಾಗೇ ಕಾಲಿಟ್ಟಿತೆಂದೇ ಹೇಳಬಹುದು. ಆದರೂ, ಕಳೆದ ವರ್ಷ ಅದರ ಮೊದಲನೇ ಅಲೆಯಿಂದ ತತ್ತರಿಸಿದ ನಮ್ಮ ಮೇಲೆ, ಈಗ ಕ್ರೂರವಾಗಿ ಅಪ್ಪಳಿಸಿರುವ ಎರಡನೇ ಅಲೆ, ನಡೆಸುತ್ತಿರುವ ಅನಾಹುತಗಳನ್ನಂತೂ ಹೇಳತೀರದು. ಹೊಸ ಹೊಸದಾಗಿ ರೂಪಾಂತರಗಳನ್ನು (mutation) ಹೊಂದುತ್ತಾ, ಹೊಸ ಹೊಸ ರೌದ್ರಾವತಾರಗಳೊಂದಿಗೆ ನಮ್ಮನ್ನು ಕಾಡುತ್ತಿರುವ, ಈ ಮಹಾಮಾರಿಯ ವಿಪತ್ತಿಗೆ ಕೊನೆಯೆಂದೋ? ಎಂಬುದು ಎಲ್ಲರ ತವಕವಾಗಿ ಹೋಗಿದೆ. 

'ಕೋವಿಡ್, ಮಾನವ ಸೃಷ್ಟಿಯೇ?' ಎಂಬ ಶೀರ್ಷಿಕೆಯ ನನ್ನೀ ಕಾದಂಬರಿ, ಬರೀ ದೋಷಾರೋಪಗಳ ಪಟ್ಟಿ ಮಾತ್ರವಲ್ಲ. ತತ್ತರಿಸಿರುವ ನಮ್ಮ ಜನರುಗಳಲ್ಲಿ ಭರವಸೆ ಮತ್ತು ವಿಶ್ವಾಸಗಳನ್ನು ತುಂಬುವುದೇ ನನ್ನ ಉದ್ದೇಶ. 'ಪ್ರತಿಯೊಂದು ಬಿಕ್ಕಟ್ಟೂ ಹೊಸ ಅವಕಾಶಗಳ ಬಳುವಳಿಗಳನ್ನು ತರುತ್ತವೆಂಬ (every crisis brings an opportunity),' ನಮ್ಮ ಹಿರಿಯರ ಮಾತುಗಳಿಂದ ಪ್ರೇರಿತರಾಗಿ, ಮುನ್ಸಾಗುವ ಸಮಯವಿದು. ಕೋವಿಡ್ ಮಹಾಮಾರಿಯೊಂದಿಗಿನ ಮಾನವನ ಸಂಘರ್ಷದ, ಅದರಲ್ಲೂ ಮುಖ್ಯವಾಗಿ ನಮ್ಮೆಲ್ಲರ ಮಾತೃಭೂಮಿಯಾದ ಭಾರತದ ಸಂಘರ್ಷದ ವೃತ್ತಾಂತಗಳೇ, ನನ್ನೀ ಕಾದಂಬರಿಯ ಕಥಾವಸ್ತು. 

ಮಹಾಮಾರಿಯ ಈ ವೈರಾಣುವಿನೊಂದಿಗೇ  ಜೀವಿಸಲು ಕಲಿಯುವ ಅನಿವಾರ್ಯತೆ ಈಗ ನಮ್ಮ ಮುಂದಿದೆ. 'ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಆಗಾಗ ಸೋಪಿನಿಂದ ಕೈಗಳನ್ನು ತೊಳೆಯುವುದು ಮತ್ತು ಮಾಸ್ಕ್ ಧಾರಣೆ'ಯಂತಹ ಸರಳ ವಿಧಾನಗಳಿಂದ ಈ ವೈರಾಣುವಿನ ಹರಡುವಿಕೆಯನ್ನು ಸಾಕಷ್ಟು ನಿಯಂತ್ರಿಸಲು ಸಾಧ್ಯವಿದೆ. ಹಗಲಿರಳೆನ್ನದೇ ಅವಿರತವಾಗಿ ಶ್ರಮಿಸಿ,  ಸಂಶೋಧನೆಗಳನ್ನು ನಡೆಸಿ ಹೊಸ ಲಸಿಕೆಗಳನ್ನು ನಮಗೆ ನೀಡಿರುವ ನಮ್ಮ ವಿಜ್ಞಾನಿಗಳು, ನಮ್ಮಲ್ಲಿ ಹೊಸ ಭರವಸೆಯೊಂದನ್ನು ಮೂಡಿಸಿದ್ದಾರೆ. 

ಒಂದು ಪುಟ್ಟ ವೈರಾಣುವಿಗೆ ಹೆದರಿ ತನ್ನ ಕ್ರಿಯಾಶೀಲ ಚಟುವಟಿಕೆಗಳನ್ನೇ ನಿಲ್ಲಿಸಿ, ಕೈಕಟ್ಟಿ ಕೂರುವ ಜಾಯಮಾನ ಮಾನವನದಲ್ಲ. ಇದು 'ಜೀವಗಳು ಮತ್ತು ಜೀವನೋಪಾಯಗಳ (lives Vs livelihood)' ನಡುವಿನ ಸಂಘರ್ಷ. ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು, ಮಹಾಮಾರಿಗಿಂತಲೂ ಮಾರಕ ಎಂಬುದು ನಮ್ಮ ಆರ್ಥಿಕ ತಜ್ಞರ ಅಭಿಪ್ರಾಯ. ಕೋವಿಡ್-೧೯ರ ರೋಗವನ್ನು ಹತ್ತಿಕ್ಕಲು ಸತತವಾಗಿ ಶ್ರಮಿಸುತ್ತಿರುವ ನಮ್ಮ 'ಕೊರೋನಾ ಸೇನಾನಿಗಳಾದ, ಆರೋಗ್ಯ ಕರ್ಮಚಾರಿಗಳು, ಪೊಲೀಸರು, ರೈತರು, ಕಾರ್ಮಿಕರು, ತಾಂತ್ರಿಕ ತಜ್ಞರು, ಸ್ವಚ್ಛತಾ ಕರ್ಮಿಗಳು, ವ್ಯಾಪಾರಿಗಳು, ಬ್ಯಾಂಕ್ ಕರ್ಮಚಾರಿಗಳು ಮುಂತಾದವರುಗಳೆಲ್ಲರಿಗೂ ನನ್ನದೊಂದು ದೊಡ್ಡ ಸಲಾಂ!' ಮಾರಕ ವೈರಾಣುವನ್ನು ಹತ್ತಿಕ್ಕಲು, ನಮ್ಮ ಜನತೆ 'ಧನಾತ್ಮಕ ಚಿಂತನೆ(Positive Mental Attitude)'ಗಳನ್ನು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಈ 'ಮಹಾಮಾರಿ(pandemic)ಯ  ವಿರುದ್ಧದ ಹೋರಾಟದಲ್ಲಿ ಅಂತಿಮ ಜಯ ನಮ್ಮದೇ,' ಎಂಬ ವಿಶ್ವಾಸದ ಅರಿವು ನನ್ನ ಓದುಗರಲ್ಲಿ ಮೂಡಲಿ, ಎಂಬುದೇ ನನ್ನೀ ಬರಹದ ಉದ್ದೇಶ.   

'ಕೋವಿಡ್, ಮಾನವ ಸೃಷ್ಟಿಯೇ?' ಎಂಬ ನನ್ನ ಈ ಕಾದಂಬರಿ ಕಾಲ್ಪನಿಕವಾದುದಾದರೂ, ನಾನಿಲ್ಲಿ ಹೆಣೆದಿರುವ ಕಥೆಗಳು ಹಾಗೂ ಪಾತ್ರಗಳಿಗೆ, ಕಳೆದ ಹದಿನೆಂಟು ತಿಂಗಳುಗಳಲ್ಲಿ ಜರುಗಿರುವ ನಿಜ ಘಟನೆಗಳೇ ಆಧಾರ. ನಾನಿಲ್ಲಿ, ಕಳೆದ ವರ್ಷ ಅಂದರೆ ೨೦೨೦ರ ಬೇರೆ ಬೇರೆ ಅವಧಿಗಳ ಅಂಕಿ-ಅಂಶಗಳನ್ನು ದಾಖಲಿಸಿ, ಚರ್ಚಿಸಿದ್ದೇನೆ. ಆ ಅಂಕಿ-ಅಂಶಗಳು ಇಂದು ಭಾರೀ ಬದಲಾವಣೆಯನ್ನು ಕಂಡಿರಬಹುದು. ಈ ಪುಸ್ತಕದ ಬಹುಭಾಗವನ್ನು ನಾನು '೨೦೨೦ರ ಮಾರ್ಚ್-ಸೆಪ್ಟೆಂಬರ್' ತಿಂಗಳುಗಳ ಅವಧಿಯಲ್ಲಿ ಬರೆದಿದ್ದೇನೆ ಎಂಬ ವಿಚಾರವನ್ನು, ನಾನು ನನ್ನ ಓದುಗರುಗಳಿಗೆ ತಿಳಿಸಲಿಚ್ಛಿಸುತ್ತೇನೆ. ಕೋವಿಡ್ ತರುತ್ತಿರುವ ಹೊಸ ಹೊಸ ವಿಪತ್ತುಗಳು, ನಾವದನ್ನೆದುರಿಸಲು ಮಾಡುತ್ತಿರುವ ಹೋರಾಟಗಳು ಮತ್ತು ನಮ್ಮ ನಿರೀಕ್ಷೆಯನ್ನೂ ಮೀರಿ ಜರುಗುತ್ತಿರುವ ಘಟನೆಗಳು ದಿನ ದಿನಕ್ಕೂ ಬದಲಾಗುತ್ತಿರುವುದನ್ನು, ನಮ್ಮ ಓದುಗರು ಗಮನಿಸಬೇಕು ಎಂಬುದು ನನ್ನ ವಿನಮ್ರ ಅರಿಕೆ. ಇತ್ತೀಚಿನ ಬೆಳವಣಿಗೆಗಳ ಪ್ರಸ್ತಾವನೆ ನನ್ನ ಕಾದಂಬರಿಯಲ್ಲಿ ಇರದಿರಬಹುದು.  ಆದರೂ ನಾನಿಲ್ಲಿ ಚರ್ಚಿಸಿರುವ ವಿಷಯಗಳು ಸರ್ವಕಾಲಿಕ ಸತ್ಯಗಳೇ ಆಗಿದ್ದು, ಅವುಗಳೆಂದಿಗೂ ಪ್ರಸ್ತುತ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. 

'ಚಿತ್ರವೊಂದಕ್ಕೆ, ಸಾವಿರ ಪದಗಳಿಗೂ ಮೀರಿದ ಸಂವಹನ ಶಕ್ತಿ ಇದೆ (A picture is equal to thousand words)' ಎಂಬ ಮಾತೊಂದಿದೆ. ಆ ಮಾತಿನ ಸಾಕಾರವೋ ಎಂಬಂತೆ ನಮ್ಮ ನಾಡಿನ ಸುಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ 'ಶ್ರೀ. ರಘುಪತಿ ಶೃಂಗೇರಿ'ರವರು ನನ್ನ ಈ ಕಾದಂಬರಿಯ ೧೪ ಅಧ್ಯಾಯಗಳಿಗೆ, ೧೪ ವ್ಯಂಗ್ಯಚಿತ್ರಗಳನ್ನು ಬರೆದು ಕೊಟ್ಟಿದ್ದಾರೆ. ಮುಖಪುಟದ ವಿನ್ಯಾಸವನ್ನೂ ಅವರೇ ಮಾಡಿಕೊಟ್ಟಿದ್ದಾರೆ. ಅವರ ಚಿತ್ರಕಲೆ ನನ್ನ ಪುಸ್ತಕದ ಗುಣಮಟ್ಟವನ್ನು ಹೆಚ್ಚಿಸಿದೆ ಎಂಬುದು ನನ್ನ ಅನಿಸಿಕೆ. ಹಾಗಾಗಿ ನಾನವರಿಗೆ ಆಭಾರಿ. 

ನನ್ನ ಮಾಜಿ ಸಹೋದ್ಯೋಗಿಗಳು ಹಾಗೂ ಬಹುಕಾಲದ ಸನ್ಮಿತ್ರರೂ ಆದ 'ಶ್ರೀ. ಎಂ.ಜಿ. ಗೋಪಾಲ ಕೃಷ್ಣ ಭಟ್ಟ B.Sc., LL.B.,CAIIB, ಬೆಂಗಳೂರು, ಇವರು ಈ ಕಾದಂಬರಿಯನ್ನು ಬರೆಯುವ ಕಾಲದಲ್ಲಿ ನನ್ನೊಡನಿದ್ದು, ಚರ್ಚಿಸಿ ನನಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ನಾನು ಬರೆದ ಕರಡು ಪ್ರತಿಯನ್ನು ಕೂಲಂಕಷವಾಗಿ ಓದಿ, ತಪ್ಪುಗಳನ್ನು ತಿದ್ದಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. 

ನನ್ನ ಮಗನಾದ ಡಾ. ಸುಭಾಷ್ L., (ಸಹಾಯಕ ಪ್ರಾಧ್ಯಾಪಕರು, ಸ್ಕೂಲ್ ಆಫ್ ಇಂಜಿನಿಯರಿಂಗ್, ವಾರ್ವಿಕ್ ವಿಶ್ವವಿದ್ಯಾಲಯ, ಯು.ಕೆ.) ಅವನ  ಬಾಲ್ಯದಿಂದಲೂ ನನ್ನ ವಿರುದ್ಧದ 'ದೈತ್ಯ ವಕೀಲ (devil's advocate)'ನಾಗಿದ್ದವನು. ಅವನು, ನನ್ನ ಪುಸ್ತಕದ ಕರಡು ಪ್ರತಿಯನ್ನು ಓದಿ, ವೈಜ್ಞಾನಿಕವಾಗಿ ವಿಶ್ಲೇಷಿಸಿ ಹಲವು ಸಲಹೆಗಳನ್ನು ನೀಡಿ, ನನ್ನ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದ್ದಾನೆ ಎಂಬುದು ನನ್ನ ಅನಿಸಿಕೆ. ಅವನ ಶ್ರೇಯೋಭಿವೃದ್ಧಿಗೆ ನನ್ನ ಆಶೀರ್ವಾದಗಳು. 

ಕಾದಂಬರಿಯ ರಚನೆಯ ಕಾಲದ ಉದ್ದಕ್ಕೂ 'ನನ್ನೊಡನಿದ್ದ' ನನ್ನ ಪತ್ನಿ ಶ್ರೀಮತಿ. ಅನಸೂಯ'ಳಿಗೂ ನಾನು ಆಭಾರಿ. 

ನಾನು ನಿಮ್ಮಗಳಂತೆಯೇ ಶ್ರೀಸಾಮಾನ್ಯರುಗಳಲ್ಲೊಬ್ಬ ಮಾತ್ರ. ಈ ಕಾದಂಬರಿಯ ಉದ್ದಕ್ಕೂ ಹಲವು ವೈದ್ಯಕೀಯ ಪದಗಳನ್ನು, ವಿಧಿ-ವಿಧಾನಗಳನ್ನು ಚರ್ಚಿಸಿ, ಬರೆದಿದ್ದೇನೆ. ಆ ರೀತಿ ಬರೆಯುವುದಕ್ಕೆ,  ನನಗೆ ಯಾವ ವಿದ್ಯಾರ್ಹತೆಯೂ ಅಥವಾ ವೃತ್ತಿಪರತೆಯೂ ಇಲ್ಲವೇ ಇಲ್ಲ. ಆ ರೀತಿಯ ವೈದ್ಯಕೀಯ ವಿಚಾರಗಳ ಬಗ್ಗೆ ತಮ್ಮಗಳಿಗೇನಾದರೂ ಅನುಮಾನವಿದ್ದಲ್ಲಿ, ತಾವುಗಳು ತಮ್ಮ ಕುಟುಂಬದ ವೈದ್ಯರುಗಳ ಸಲಹೆಯನ್ನು ಪಡೆಯುವದು ಸೂಕ್ತ ಎಂಬುದು ನನ್ನ ಕೋರಿಕೆ. 

ಈ ಕೃತಿ ನನ್ನ ಮೂರನೇ ಕಾದಂಬರಿ. ಮುಂಚಿನ ನನ್ನ ಕೃತಿಗಳನ್ನು ಓದಿ, ನನ್ನನ್ನು ಪ್ರೋತ್ಸಾಹಿಸಿದ್ದೀರಿ. ನನ್ನ ಈ ಕಾದಂಬರಿಯನ್ನೂ ಅದೇ ರೀತಿ ಓದಿ ಪ್ರೋತ್ಸಾಹಿಸುವಿರೆಂದು ಆಶಿಸುತ್ತೇನೆ. ತೆರೆದ ಮನಸ್ಸಿ ನಿಂದ ನನ್ನ ಕಾದಂಬರಿಯನ್ನು ಓದಿ, ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗಳನ್ನು ನನಗೆ ಕಳುಹಿಸಿ ಎಂದು ಈ ಮೂಲಕ ತಮ್ಮನ್ನು ಪ್ರಾರ್ಥಿಸಿಕೊಳ್ಳುತ್ತೇನೆ. 

ಧನ್ಯವಾದಗಳು,

ಲಕ್ಷ್ಮೀನಾರಾಯಣ ಕೆ. 

ಲೇಖಕರು 

೧೦೪, ೨ನೇ ಮುಖ್ಯ ರಸ್ತೆ, ಶ್ರೇಯಸ್ ಕಾಲೋನಿ 

ಜೆಪಿ ನಗರ ೭ನೇ ಹಂತ 

ಬೆಂಗಳೂರು - ೫೬೦೦೭೮

೨೪ - ೦೫ - ೨೦೨೧

klakshminarayana1956@rediffmail.com


 

                                                                                










Thursday 6 May 2021

೧೩. ಕೊಳಚೆ ಪ್ರದೇಶದ ನಿರ್ವಹಣೆ ಅಸಾಧ್ಯವಲ್ಲ

೧೩

 ಕೊಳಚೆ ಪ್ರದೇಶದ ನಿರ್ವಹಣೆ ಅಸಾಧ್ಯವಲ್ಲ 



ಸಮರ್ಪಣಾ ಭಾವದ ಯುವಕನಾದ ಡಾ. ಕಿರಣ್, ಸ್ವಯಂಪ್ರೇರಿತನಾಗಿ ಸರಕಾರಿ ಆಸ್ಪತ್ರೆಗಳಲ್ಲೂ ಕೋವಿಡ್-೧೯ರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದನು. ೮೦-೯೦%ರಷ್ಟು ಕೋವಿಡ್ ರೋಗಿಗಳ ಚಿಕಿತ್ಸೆಯನ್ನು ನಿರ್ವಹಿಸುವ ಬೃಹತ್ ಕಾರ್ಯವನ್ನು ಮಾಡುತ್ತಿದ್ದ ಸರಕಾರಿ ಆಸ್ಪತ್ರೆಗಳ ಮತ್ತು ಅವುಗಳ ಕರ್ಮಚಾರಿಗಳ ಅಭಿಮಾನಿ ಅವನಾಗಿದ್ದನು. 'ಈ ಸಂಕಟದ ಸಮಯದಲ್ಲಿ ಬಡವರ ಹಾಗೂ ಕೆಳವರ್ಗದ ಜನರುಗಳ ಸೇವೆಯನ್ನು ಸಾರ್ವಜನಿಕ ವಲಯದ ಸಂಸ್ಥೆಗಳು ಮಾಡುತ್ತಿವೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ವಲಸಿಗ ಕೆಲಸಗಾರರು ಕೆಲಸಗಳನ್ನು ಕಳೆದುಕೊಂಡು, ನಗರಗಳಲ್ಲಿ ಸಿಲುಕಿಕೊಂಡಾಗ, ಭಾರತೀಯ ರೈಲು ಅವರುಗಳನ್ನು ಹೊತ್ತು, ಅವರವರ ಹಳ್ಳಿಗಳಿಗೆ ತಲುಪಿಸಿತ್ತು. ಇದೇ ಕಾರ್ಯದಲ್ಲಿ ಸರಕಾರಿ ಬಸ್ಸುಗಳು ಸಲ್ಲಿಸಿದ ಕಾರ್ಯವು ಮಹತ್ವವಾದುದೇ. ನಮ್ಮ ಅನಿವಾಸಿ ಭಾರತೀಯರು ಮತ್ತಿತರ ಭಾರತೀಯರುಗಳು ವಿದೇಶಗಳಲ್ಲಿ ಸಿಲುಕಿಕೊಂಡಾಗ, ಅವರುಗಳನ್ನು ಕ್ಷೇಮವಾಗಿ ಹೊತ್ತೊಯ್ದು ಭಾರತಕ್ಕೆ ಕರೆತಂದಿದ್ದು "ಏರ್ ಇಂಡಿಯಾ"ದ ವಿಮಾನಗಳೇ. ನಮ್ಮ ಸಣ್ಣ ಕೈಗಾರಿಕೆಗಳಿಗೆ, ಸಣ್ಣ ವ್ಯಾಪಾರಿಗಳಿಗೆ ಹಾಗೂ ಸಣ್ಣ ರೈತರಿಗೆ ಸಾಲದ ಸೌಲಭ್ಯ ಬೇಕಾದಾಗ, ಅವರುಗಳ ಸಹಾಯಕ್ಕೆ ಬಂದಿದ್ದು ಸಾರ್ವಜನಿಕವಲಯದ ಬ್ಯಾಂಕುಗಳೇ. ಇಂತಹ ವಿಷಮ ಪರಿಸ್ಥಿತಿಯಲ್ಲೂ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತಿರುವುದು ನಮ್ಮ ಪೊಲೀಸರೇ. ನಗರ ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿಡುವ ಮಹತ್ಕಾರ್ಯವನ್ನು ಮಾಡುತ್ತಿರುವುದು ನಮ್ಮ ನಗರ ಹಾಗೂ ಪಟ್ಟಣಗಳ ಆಡಳಿತದ ಸ್ವಚ್ಛತಾ ಕರ್ಮಚಾರಿಗಳೇ. ಆದರೆ ನಮ್ಮ ಸಾರ್ವಜನಿಕ ವಲಯದ ಸಂಸ್ಥೆಗಳನ್ನೇ, ಸಂಬಂಧ ಪಟ್ಟ ಎಲ್ಲರೂ ನಿರ್ಲಕ್ಷಿಸುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ,' ಎನ್ನುತ್ತಾ ಆತಂಕಗೊಂಡಿದ್ದವನು ಡಾ. ಕಿರಣ್. 

ಅಂದು ಅವರಿಬ್ಬರ ವಾರದ ಭೇಟಿಯ ಸಮಯವಾದುದ್ದರಿಂದ, ಕಿರಣ್ ತನ್ನ ಗೆಳತೀ ರೋಹಿಣಿಗಾಗಿ   ಕಾಯುತ್ತಿದ್ದನು. ರೋಹಿಣಿ ಬಂದ ಕೂಡಲೇ, ತನ್ನ ಎಂದಿನ ಉತ್ಸಾಹದಲ್ಲಿ ಮಾತನಾಡುತ್ತಾ, 'ಕಿರಣ್, ಇಂದಿನ ಸುದ್ದಿಯನ್ನು ಓದಿದೆಯಾ? ಕೇರಳ ರಾಜ್ಯದ ಆರೋಗ್ಯ ಮಂತ್ರಿ ಶ್ರೀಮತಿ ಕೆ.ಕೆ.ಶೈಲಜಾರವರನ್ನು ವಿಶ್ವಸಂಸ್ಥೆಯ ಸಾರ್ವಜನಿಕ ಸೇವೆಗಳ ದಿನದ ಭಾಷಣವನ್ನು ಮಾಡಲು ವಿಶ್ವಸಂಸ್ಥೆ ಆಹ್ವಾನಿಸಿದೆ. ಕೋವಿಡ್ ವಿರುದ್ಧದದ ಮಹಾಸಂಗ್ರಾಮದ ಹೋರಾಟದ ಮುಂಚೂಣಿಯಲ್ಲಿರುವವರನ್ನು ಸನ್ಮಾನಿಸುವುದೇ ಆ ಕಾರ್ಯಕ್ರಮದ ಉದ್ದೇಶ' ಎಂದಳು. 

'ಹೌದು ರೋಹಿಣಿ, ಮೇಡಂರವರಿಗೆ ಬಂದಿರುವ ಆಹ್ವಾನದ ಬಗ್ಗೆ ತಿಳಿದು ನನಗೂ ಸಂತಸವೆನಿಸಿತು. ಆ ಗೌರವಕ್ಕೆ ಆಕೆ ಅರ್ಹರು. ಕೋವಿಡ್-೧೯ರ ವಿರುದ್ಧದದ ಹೋರಾಟದಲ್ಲಿ, ನಮ್ಮ ಸಣ್ಣ ರಾಜ್ಯಗಳು ಉತ್ತಮ ನಿರ್ವಹಣೆಯನ್ನು ಮಾಡುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ಗೋವಾ, ಮಣಿಪುರ್ ಮತ್ತು ಅರುಣಾಚಲ ಪ್ರದೇಶ ಮುಂತಾದ ಸಣ್ಣ ರಾಜ್ಯಗಳು, ಒಂದು ಹಂತದಲ್ಲಿ, ತಮ್ಮೆಲ್ಲಾ ಕೋವಿಡ್ ರೋಗಿಗಳನ್ನು ಗುಣಮುಖರನ್ನಾಗಿ ಮಾಡಿ, ೧೦೦%ರಷ್ಟು ಸುಸ್ಥಿತಿಯ ಸಾಧನೆಯನ್ನು ಮಾಡಿದ್ದವು. ಸ್ವಲ್ಪ ದೊಡ್ಡವಾದರೂ, ಕೇರಳ, ಹಿಮಾಚಲ್ ಪ್ರದೇಶ, ಉತ್ತರಾಖಂಡ್, ಝಾರ್ಖಂಡ್ ಮತ್ತು ಅಸ್ಸಾಮಿನಂತಹ ರಾಜ್ಯಗಳು, ಕೋವಿಡ್ ನಿರ್ವಹಣೆಯಲ್ಲಿ ದೊಡ್ಡ ರಾಜ್ಯಗಳಿಗಿಂತಲೂ ಉತ್ತಮವಾದ ಸಾಧನೆಯನ್ನು ಮಾಡಿವೆ,' ಎಂದನು ಡಾ. ಕಿರಣ್. 

'ಶ್ರೀಮತಿ ಕೆ.ಕೆ. ಶೈಲಜಾರವರು, ಹೈಸ್ಕೂಲ್ ವಿಜ್ಞಾನದ ಶಿಕ್ಷಕಿ ಮಾತ್ರವಾಗಿದ್ದವರು. ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಸೇವೆಯನ್ನು ಸತತವಾಗಿ ಮಾಡುತ್ತಿರುವ ಅವರನ್ನು "ಕೊರೋನಾ ಸಂಹಾರಕಿ (corona slayer)" ಎಂದೇ ಗುರುತಿಸಲಾಗುತ್ತಿದೆ. ೨೦೨೦ರ ಮೇ ೧೫ರಂದು ನಡೆಸಿದ ಅಧ್ಯಯನದ ಪ್ರಕಾರ ೩೫ ಮಿಲಿಯೋನ್ನಷ್ಟು ಜನಸಂಖ್ಯೆ ಮತ್ತು ಪ್ರತಿವ್ಯಕ್ತಿಯ ವರಮಾನ (per capita GDP) ೨೨೦೦ ಬ್ರಿಟಿಷ್ ಪೌಂಡ್ಗಳಷ್ಟಿರುವ ಪುಟ್ಟ ರಾಜ್ಯ ಕೇರಳ, ಕೇವಲ ೫೨೪ ಸೋಂಕಿತರನ್ನು ಹೊಂದಿದ್ದು, ನಾಲ್ಕು ಸಾವುಗಳನ್ನು ಮಾತ್ರ ಕಂಡಿತ್ತು. ಅದಕ್ಕೆ ಹೋಲಿಸಿದರೆ, ೭೦ ಮಿಲಿಯೋನ್ನಷ್ಟು ಜನಸಂಖ್ಯೆಯನ್ನು ಮತ್ತು ಪ್ರತಿವ್ಯಕ್ತಿಯ ವರಮಾನ ೩೩,೧೦೦ ಬ್ರಿಟಿಷ್ ಪೌಂಡ್ಗಳಿಷ್ಟಿರುವ ಗ್ರೇಟ್ ಬ್ರಿಟನ್, ೪೦,೦೦೦ದಷ್ಟು ಸಾವುಗಳನ್ನು ಕಂಡಿತ್ತು. ಕೇರಳದ ಹತ್ತರಷ್ಟರ ಜನಸಂಖ್ಯೆಯನ್ನು ಮತ್ತು ೫೧,೦೦೦ ಬ್ರಿಟಿಷ್ ಪೌಂಡ್ಗಳಷ್ಟು ಪ್ರತಿವ್ಯಕ್ತಿಯ ವರಮಾನ ಹೊಂದಿರುವ ಬೃಹತ್ ರಾಷ್ಟ್ರ  ಅಮೇರಿಕಾ ೮೨,೦೦೦ ಸಾವುಗಳನ್ನು ಕಂಡಿದೆ! ಇಂದಿಗೂ ಕೇರಳದ ಕೋವಿಡ್ ನಿರ್ವಹಣೆ ಮೆಚ್ಚಬಹುದದ್ದಾಗಿದೆ. 

ಹಳ್ಳಿಗಳ ಮಟ್ಟದಲ್ಲಿರುವ "ಪ್ರಾಥಮಿಕ ಆರೋಗ್ಯ ಕೇಂದ್ರ"ಗಳನ್ನು ಸುಸ್ಥಿತಿಯಲ್ಲಿಟ್ಟಿರುವುದೇ, ಕೇರಳ ರಾಜ್ಯದ ಉತ್ತಮ ಕೋವಿಡ್ ನಿರ್ವಹಣೆಗೆ ಪೂರಕವಾಗಿ ಪರಿಣಮಿಸಿದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲೂ ಕೇರಳ ಸುಸಜ್ಜಿತ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿದೆ. ಆ ರಾಜ್ಯದಲ್ಲಿ ಹತ್ತು ವೈದ್ಯಕೀಯ ಕಾಲೇಜುಗಳಿದ್ದು, ಅವೆಲ್ಲವೂ ಉತ್ತಮ ಆಸ್ಪತ್ರೆಗಳನ್ನು ಹೊಂದಿವೆ. 

೨೦೧೮ರಲ್ಲಿ ಕೇರಳದಲ್ಲಿ ಹರಡಿದ್ದ "ನಿಪಾಹ್ ವೈರಾಣು (Nipah Virus)"ವನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಶೈಲಜಾರವರಿಗಿತ್ತು. ೨೦೨೦ರ ಜನವರಿ ೨೪ರ ಹೊತ್ತಿಗೇ, ಆಕೆ ಕೇರಳದಲ್ಲಿ ಕೋವಿಡ್-೧೯ರ ರೋಗವನ್ನು ನಿರ್ವಹಿಸಲು ವಿಶೇಷ  "ನಿರ್ವಹಣಾ ಕೇಂದ್ರ"ಗಳನ್ನು ಆರಂಭಿಸಿದ್ದರು. "ಪತ್ತೆ ಮಾಡು, ಪರೀಕ್ಷಿಸು, ಪ್ರತ್ಯೇಕಿಸು ಮತ್ತು ಬೆಂಬಲಿಸು (trace, test, isolate, support)" ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಕಿ ಕೊಟ್ಟ ಮೇಲ್ಪಂಕ್ತಿಯನ್ನೇ ಶೈಲಜಾರವರು ಅಳವಡಿಸಿಕೊಂಡಿದ್ದರು. 

ಹಳ್ಳಿಗಳ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉತ್ತಮ ನಿರ್ವಹಣೆ ಕೇರಳ ರಾಜ್ಯಕ್ಕೆ ಉತ್ತಮ ಫಲ ನೀಡಿದೆ. "ಜನಸಾಮಾನ್ಯರ ದೀರ್ಘ ಜೀವಾವಧಿ ಮತ್ತು ಮಕ್ಕಳ ಸಾವಿನ ನಿಯಂತ್ರಣ (Life expectancy and Infant mortality)"ಗಳ ನಿಟ್ಟಿನಲ್ಲಿ ಕೇರಳ ಇಡೀ ದೇಶದಲ್ಲಿ ಮುಂದಿದೆ. ಸಾಕ್ಷರತೆಯ ಸಾಧನೆಯಲ್ಲೂ ಕೇರಳವೇ ಮುಂದು.' ತನ್ನ ಗೆಳತಿ, ಕೇರಳ ಮಾದರಿಯ ಬಗ್ಗೆ ಬಿಗಿದ ಪುಟ್ಟ ಭಾಷಣವೊಂದನ್ನು, ಕಿರಣ್ ತದೇಕಚಿತ್ತನಾಗಿ ಆಲಿಸಿದ್ದನು. 

'ನಿನ್ನ ಅನಿಸಿಕೆಗಳು ಸರಿಯಾಗಿವೆ. ಮುಂಬೈನ ನನ್ನ ಸ್ನೇಹಿತ ಡಾ. ಪ್ರಶಾಂತ್ ಹೇಳುವಂತೆ "ಶ್ರೀಮಂತ ರಾಜ್ಯಗಳು ಆರೋಗ್ಯವಂತ ರಾಜ್ಯಗಳೇನಲ್ಲ." ಇಡೀ ದೇಶದಲ್ಲಿ ಮುಂಬೈ, ಅತ್ಯಂತ ಸಂಪನ್ಮೂಲಗಳನ್ನು ಮತ್ತು ಆದಾಯವನ್ನೂ ದಾಖಲಿಸಿದೆ. ಆದರೀಗ ಆ ಮಹಾನಗರವೇ ಕೋವಿಡ್-೧೯ರ ರೋಗದ ಕೇಂದ್ರವಾಗಿ ಹೋಗಿದೆ. ಮುಂಬೈ ಮತ್ತು ದಿಲ್ಲಿಯಂತಹ ೧೫ ಮಹಾನಗರಗಳಲ್ಲಿ ದೇಶದ ೫೦%ರಷ್ಟು ಕೋವಿಡ್ ಸೋಂಕಿತರಿದ್ದಾರೆ ಎಂಬುದು ಆಶ್ಚರ್ಯಕರ ಸುದ್ದಿ. ಮಹಾನಗರಗಳಲ್ಲಿ ಮತ್ತು ಅವುಗಳ ಹೊರ ವಲಯದಲ್ಲಿ ಆರೋಗ್ಯದ ವ್ಯವಸ್ಥೆ ತೀರಾ ಕಳಪೆಯೆಂದೇ ಹೇಳಬೇಕು. ಎಲ್ಲಾ  ಮಹಾನಗರಗಳಲ್ಲೂ ದೊಡ್ಡ ದೊಡ್ಡ ಕೊಳಚೆ ಪ್ರದೇಶ (slums) ಗಳಿವೆ. ನಗರಗಳ ೩೦%ರಷ್ಟು ಜನರುಗಳು ಆ ಸ್ಲಮ್ಗಳಲ್ಲಿ ವಾಸಿಸುತ್ತಾರೆ. ಎಲ್ಲಾ ಕೊಳಚೆ ಪ್ರದೇಶಗಳೂ ಜನರುಗಳಿಂದ ತುಂಬಿ ತುಳುಕುತ್ತಿರುತ್ತವೆ. ನೀರು ಮತ್ತು ನೈರ್ಮಲ್ಯದ ವ್ಯವಸ್ಥೆಯ ಕೊರತೆ ಎಲ್ಲಾ ಕೊಳಚೆ ಪ್ರದೇಶಗಳನ್ನೂ ಕಾಡಿವೆ. 

ಮುಂಬೈನ "ಧಾರಾವಿ ಸ್ಲಂ" ಎಂಬುದು ಇಡೀ ಏಷ್ಯಾ ಖಂಡದಲ್ಲೇ ಅತ್ಯಂತ ದೊಡ್ಡದಾದ ಕೊಳಚೆ ಪ್ರದೇಶ. ೨. ೫ ಚ.ಕಿ.ಮೀ.ಯಷ್ಟರ ಸಣ್ಣ ಪ್ರದೇಶದ ಆ ಕೊಳಚೆ ಪ್ರದೇಶದಲ್ಲಿ ೧೦ ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. ಅಲ್ಲಿ ವಾಸಿಸುವವರಲ್ಲಿ ಹೆಚ್ಚಿನವರು ವಲಸಿಗರಾಗಿದ್ದು,  ಸಣ್ಣ ವ್ಯಾಪಾರ, ದಿನಗೂಲಿ ಮುಂತಾದ ಕೆಲಸಗಳನ್ನು ಮಾಡುತ್ತಾರೆ. "೬-೮ ಜನರುಗಳ ಕುಟುಂಬಗಳು ಅಲ್ಲಿನ ೮'X೮'ಗಳಷ್ಟರ ಸಣ್ಣ ಕೋಣೆಗಳಲ್ಲಿ ವಾಸಿಸುತ್ತವೆ." ಅವರುಗಳಿಗೆ  ಸಾರ್ವಜನಿಕ ಶೌಚಾಲಯಗಳು ಮತ್ತು ಸ್ನಾನಗೃಹಗಳೇ ಗತಿ. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅಸಾಧ್ಯವೇ ಸರಿ!  

೨೦೨೦ರ ಏಪ್ರಿಲ್ ತಿಂಗಳಲ್ಲೇ, ಧಾರಾವಿ ಸ್ಲಮ್ನಲ್ಲಿನ ೫ ಭಾಗಗಳನ್ನು "ಅತ್ಯಂತ ಕೋವಿಡ್ ಪೀಡಿತ ಪ್ರದೇಶ"ಗಳೆಂದು ಗುರುತಿಸಲಾಗಿತ್ತು. ೨೫೦೦ಕ್ಕಿಂತಲೂ ಹೆಚ್ಚು ಆರೋಗ್ಯ ಕರ್ಮಚಾರಿಗಳನ್ನು ಆ ಐದು ಪ್ರದೇಶಗಳ ಸೇವೆಗೆಂದೇ ಮೀಸಲಿಡಲಾಗಿತ್ತು. ಸುರಕ್ಷಾ ತೊಡುಗೆಗಳನ್ನು ತೊಟ್ಟ ಆ ಕರ್ಮಚಾರಿಗಳು, ಅಂದಿನ ಏಪ್ರಿಲ್ ತಿಂಗಳಲ್ಲೇ, ಮನೆ ಮನೆಗಳಿಗೆ ತೆರಳಿ ಕೋವಿಡ್ ಸೋಂಕಿತರ ಪತ್ತೆ ಕಾರ್ಯವನ್ನು ನಡೆಸಿದ್ದರು. ಕಾರ್ಯತತ್ಪರ ಯೋಧನಾಗಿ ಆ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಶಾಮಣ್ಣ, ಸ್ಲಂ ನಿವಾಸಿಗಳನ್ನು ಎಚ್ಚರಿಸುವ ಪ್ರಕ್ರಿಯೆಯ ಮುಂಚೂಣಿಯಲ್ಲಿದ್ದರು. 'ಸಂಸಾರ ಗುಟ್ಟು, ವ್ಯಾಧಿ ರಟ್ಟು' ಎಂಬ ಕನ್ನಡದ ಗಾದೆಯನ್ನು ಮನದಟ್ಟಾಗುವಂತೆ ತಿಳಿಸುತ್ತಿದ್ದ ಡಾ. ಶಾಮಣ್ಣ, ಅಲ್ಲಿನ ಜನರುಗಳ ವಿಶ್ವಾಸವನ್ನು ಗೆದ್ದಿದ್ದರು. ಇಂತಹ ಪ್ರಯತ್ನಗಳ ಫಲವಾಗಿ ಧಾರಾವಿ ಸ್ಲಂ ನಿವಾಸಿಗಳಲ್ಲಿ ಕೋವಿಡ್ ಮುಂಜಾಗರೂಕತೆಯ ಬಗೆಗಿನ ಅರಿವು ಚೆನ್ನಾಗಿಯೇ ಮೂಡಿತ್ತು. ಅತ್ಯಂತ ಸಣ್ಣ ಲಕ್ಷಣವೊಂದು ಕಾಣಿಸಿಕೊಂಡರೂ, ಜನರು ತಮ್ಮ ತಮ್ಮ ಸಮೀಪದ ವೈದ್ಯರನ್ನು ಕಾಣುವಲ್ಲಿ ವಿಳಂಬ ಮಾಡುತ್ತಿರಲಿಲ್ಲ. ಆಯ್ದ ಆ ಐದು ಪ್ರದೇಶಗಳಲ್ಲಿ, ಸೋಂಕಿತರನ್ನು ಸಂಪರ್ಕಿಸಿದ ಚಾರಿತ್ರ್ಯವಿರುವ ೨೦%ರಷ್ಟು ವ್ಯಕ್ತಿಗಳು ಸೇರಿದಂತೆ ಸುಮಾರು ೫೦,೦೦೦ ಜನರುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರುಗಳ ಪೈಕಿ ಸುಮಾರು ೧೦,೦೦೦ ಶಂಕಿತರನ್ನು, ಸರಕಾರಿ ನೇತೃತ್ವದ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗಿತ್ತು. ಪರಿಸ್ಥಿತಿ ಸಾಕಷ್ಟು ನಿಯಂತ್ರಣದಲ್ಲಿರುವಂತೆ ಕಂಡಿದ್ದರೂ, ಲಾಕ್ಡೌನಿನ ಸಡಿಲಿಕೆ ಮತ್ತು  ಮಳೆಗಾಲದ ಆಗಮನ, ತಜ್ಞರುಗಳು ಮತ್ತೆ ಆತಂಕಗೊಳ್ಳುವಂತೆ ಮಾಡಿತ್ತು.

೨೦೨೦ರ ಏಪ್ರಿಲ್ ಸಮಯಕ್ಕೆ ೪೯೧ರಷ್ಟಿದ್ದ ಸೋಂಕಿತರ ಸಂಖ್ಯೆ, ಮೇ ತಿಂಗಳ ಹೊತ್ತಿಗೆ ೧೨೦೦ರಷ್ಟಾಗಿತ್ತು. ಸ್ಥಳೀಯ ಅಧಿಕಾರಿಗಳು, ಸರಕಾರಿ ಹಾಗೂ ಖಾಸಗಿ ವೈದ್ಯರುಗಳ ಸತತ ಪರಿಶ್ರಮದ ಫಲವಾಗಿ, ಜೂನ್ ತಿಂಗಳ ವೇಳೆಗೆ ಸೋಂಕಿತರ ಸಂಖ್ಯೆ ೨೭೪ಕ್ಕೆ ಇಳಿದಿತ್ತು, ಮತ್ತು ಕೇವಲ ೬ ಜನ ಸೋಂಕಿತರು ಸಾವನ್ನಪ್ಪಿದ್ದರು. ಆದರೂ ಜಾಗರೂಕರಾಗೇ ಇರಬೇಕಾದ ಅವಶ್ಯಕತೆಯನ್ನು ಮತ್ತೆ ಮತ್ತೆ ಹೇಳುತ್ತಿದ್ದ ಅಧಿಕಾರಿಗಳ ಅಭಿಪ್ರಾಯ,  "ಎಲ್ಲವನ್ನು ಗೆದ್ದೆವು" ಎಂದು ಹೇಳಲಾಗದು ಎಂಬುದಾಗಿತ್ತು. 

೨೦೨೦ರ ಜೂಲೈ ತಿಂಗಳ ಅಂತ್ಯದ ವೇಳೆಗೆ, ಧಾರಾವಿ ಸ್ಲಮ್ನಲ್ಲಿ ಒಟ್ಟು ೨೫೦೦ ಸೋಂಕಿತರ ಪತ್ತೆಯಾಗಿದ್ದು, ಅವರುಗಳಲ್ಲಿ ೨೧೨೧ರಷ್ಟು ರೋಗಿಗಳು ಗುಣಮುಖರಾಗಿದ್ದರು. ಸುಮಾರು ೨೦೦ ಸಾವುಗಳೂ ಸಂಭವಿಸಿದ್ದವು. ಅಂದಿಗೆ ೧೪೦ ರೋಗಿಗಳು ಮಾತ್ರ ಇದ್ದು,  ಅಲ್ಲಿ ಪ್ರತಿ ದಿನದ ಹೊಸ ರೋಗಿಗಳ ಪತ್ತೆಯ ಸಂಖ್ಯೆ ೨೦ರಷ್ಟಕ್ಕೆ ಇಳಿದಿತ್ತು. ಇಷ್ಟು ಸುಧಾರಿಸಿದ್ದ ಧಾರಾವಿ ಸ್ಲಮ್ಮಿನ ಪರಿಸ್ಥಿತಿ, ಇಡೀ ಮುಂಬೈ ನಗರಕ್ಕೇ ಮಾದರಿಯಾಗಿತ್ತು. 

ಧಾರಾವಿ ಸ್ಲಮ್ಮಿನ ಜನರುಗಳು ಮತ್ತೊಂದು ವಿಷಯದಲ್ಲಿ ಮಾನವೀಯತೆ ಮೆರೆದಿದ್ದರು. ತೀವ್ರವಾಗಿ ಬಳಲುತ್ತಿದ್ದ ಕೋವಿಡ್ ರೋಗಿಗಳ ಚಿಕಿತ್ಸೆಗೆ, ಕೋವಿಡ್ನಿಂದ ಗುಣಮುಖರಾದ ವ್ಯಕ್ತಿಗಳ ರಕ್ತ ನೀಡುವ  ಪ್ರಯೋಗವೂ, ಒಂದು ವಿಧಾನ. ಆ ವಿಧಾನವನ್ನು 'ಪ್ಲಾಸ್ಮಾ ಚಿಕಿತ್ಸೆ' ಎಂದೇ ಕರೆಯಲಾಗುತ್ತದೆ. ೮೫%ರಷ್ಟು ಗುಣಮುಖರಿದ್ದ ಧಾರಾವಿ ಸ್ಲಮ್ಮಿನಲ್ಲಿ, 'ಪ್ಲಾಸ್ಮಾ ದಾನ'ಕ್ಕೆ ಮುಂದಾಗುತ್ತಿದ್ದ ವ್ಯಕ್ತಿಗಳ ಸಂಖ್ಯೆ ಸಾಕಷ್ಟು ಹೆಚ್ಚಿತ್ತು. ಕೋವಿಡ್ನಿಂದ ಗುಣಮುಖರಾದ ೨೧೨೧ ವ್ಯಕ್ತಿಗಳನ್ನೂ, ಸ್ಥಳೀಯ ಅಧಿಕಾರಿಗಳು ಸಂಪರ್ಕಿಸಿದಾಗ, ಸುಮಾರು ೪೫೦ ವ್ಯಕ್ತಿಗಳು ಪ್ಲಾಸ್ಮಾದಾನಕ್ಕೆ ಸಮ್ಮತಿಯನ್ನು ನೀಡಿದ್ದರು. ಆ ೪೫೦ ವ್ಯಕ್ತಿಗಳಲ್ಲಿ ೫೦ರೊಳಗಿನ ಪ್ರಾಯದ ವ್ಯಕ್ತಿಗಳು ಸಾಕಷ್ಟಿದ್ದು, ಅವರುಗಳಿಗೆ ಬೇರ್ಯಾವ ರೋಗಗಳೂ (comorbidities) ಇಲ್ಲದೆ ಇದ್ದದ್ದು ಅನುಕೂಲಕರವಾಗಿತ್ತು. ಗುಣಮುಖರಾದವರಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಜನರು ಪ್ಲಾಸ್ಮಾದಾನಕ್ಕೆ ಮುಂದಾಗುವ ಸಾಧ್ಯತೆ ನಿಚ್ಚಳವಾಗಿತ್ತು. 

'ಕೋವಿಡ್-೧೯ರ ನಿರ್ವಹಣೆಯ ಅನುಭವದಿಂದ ಕಲಿತ ಪಾಠಗಳು ಅಮೂಲ್ಯವಾದುದ್ದು. ಹಳ್ಳಿಗಳ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗುಣಮಟ್ಟವನ್ನು ಮೊದಲು ಹೆಚ್ಚಿಸಬೇಕು. ಅಂತೆಯೇ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ ಗುಣಮಟ್ಟದ ನಿರ್ವಹಣೆಯೂ ಉತ್ತಮವಾಗಬೇಕು. ಭಾರೀ ನಗರಗಳ ಪರಿಸ್ಥಿತಿ ಮತ್ತು ನಿರ್ವಹಣೆ ಎಂದಿಗೂ ಆತಂಕಕಾರಿಯಾದದ್ದು. ಅಂತಹ ನಗರಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದರೂ, ಸರಕಾರಿ  ಆಸ್ಪತ್ರೆಗಳ ಸೇವೆಯನ್ನು ನಿರ್ಲಕ್ಷಿಸುವಂತಿಲ್ಲ. ಭಾರಿ ನಗರಗಳ ಅವಿಭಾಜ್ಯ ಅಂಗದಂತೆ, ಸ್ಲಮ್ಗಳು (ಕೊಳಚೆ ಪ್ರದೇಶಗಳು) ಎಂದಿಗೂ ಇದ್ದೆ ಇರುತ್ತವೆ. ಸ್ಲಮ್ಗಳ ಉತ್ತಮ ನಿರ್ವಹಣೆ ಅಸಾಧ್ಯವಾದುದೇನಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಸತತವಾಗಿ ಸಾಗುತ್ತಿರಬೇಕು' ಎಂಬುದು ಡಾ. ಕಿರಣನ ವಿಶ್ಲೇಷಣೆಯಾಗಿತ್ತು. 

ಆಶಾ ಕಾರ್ಯಕರ್ತೆಯರ (ASHA - Accredited Social Health Activists) ಸಮಸ್ಯೆಗಳನ್ನು ಕುರಿತಾದ ಕಳಕಳಿ ರೋಹಿಣಿಯದಾಗಿತ್ತು. 'ಬರೀ ಮೂರನೇ ಒಂದು ಭಾಗದಷ್ಟರ ಸಂಬಳಕ್ಕೆ ದುಡಿಯುತ್ತಿರುವಂತಹ, ೯ ಲಕ್ಷ ಆಶಾ ಕಾರ್ಯಕರ್ತೆಯರು ಮತ್ತು ೨. ೭೫ ಲಕ್ಷ ಇನ್ನಿತರ ಆರೋಗ್ಯ ಕಾರ್ಯಕರ್ತರೂ ನಮ್ಮ ದೇಶದಲ್ಲಿದ್ದಾರೆ. ಇವರ್ಯಾರು ಸರಕಾರದ ಖಾಯಂ ನೌಕರರಲ್ಲ. ಅವರುಗಳ ನೌಕರಿಯನ್ನು ಖಾಯಂಗೊಳಿಸಿ ಅವರುಗಳಿಗೆ ಸಂಪೂರ್ಣ ವೇತನವನ್ನು ನೀಡಿವಂತಹ ನಿರ್ಣಯವನ್ನು ಸರಕಾರ ಕೂಡಲೇ ಜಾರಿಗೊಳಿಸಬೇಕು' ಎಂದಳು. 

***

'ನಾನೊಂದು ಮುಖ್ಯವಾದ ವಿಚಾರವನ್ನು ಚರ್ಚಿಸಬೇಕು' ಎಂದು ನೀನು ನನಗೆ ತಿಳಿಸಿದ್ದೆ. 'ಏನದು?' ಎಂದು ಕೇಳಿದವನು ಡಾ. ಕಿರಣ್. 

'ನಾನು ಈವರಗೆ ಚರ್ಚಿಸಿದ ವಿಚಾರಗಳು ಮುಖ್ಯವಾದುವೇ. ಯುವಕರುಗಳು ಮತ್ತು ಉತ್ಸಾಹಿಗಳನ್ನು  ಕೊರೋನಾ ಸೇನಾನಿಗಳಾಗುವಂತೆ ಆಹ್ವಾನಿಸಿ ಸರಕಾರ ಜಾರಿಗೊಳಿಸಿದ ಜಾಹಿರಾತನ್ನು ನಾನು  ನೋಡಿದ್ದೇನೆ. ನಮ್ಮ ತಂದೆಯವರಾದ ರಾಜುರವರು ಮತ್ತು ನಾನೂ ಕೂಡಾ ಈ ವಿಷಯದಲ್ಲಿ ಆಸಕ್ತರು. ಅದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸರಕಾರಕ್ಕೆ ಸಲ್ಲಿಸುವುದು ಹೇಗೆ?' ಎಂದು ಕೇಳಿದಳು ರೋಹಿಣಿ. 

'ಒಹೋ, ಇದು ನಿಜವಾಗಲೂ ಸಂತೋಷದ ವಿಷಯ. ಕೊರೋನಾ ಸೇನಾನಿಗಳಾಗುವುದಕ್ಕೆ ಬೇಕಾದ ಮೊದಲ ಅರ್ಹತೆಯೆಂದರೆ, ಮೊದಲು ಅವರವರ ಸ್ಮಾರ್ಟ್ ಫೋನ್ಗಳಲ್ಲಿ "ಆರೋಗ್ಯ ಸೇತು" ಎಂಬ "ಆಪ್ (App)" ಅನ್ನು ಅಳವಡಿಸಿಕೊಂಡಿರಬೇಕು (download). ನಿನ್ನ ಫೋನಿನಲ್ಲಿ ಆ ಆಪ್ ಇದೆಯೇ?' 

'ಆರೋಗ್ಯ ಸೇತು ಆಪ್!' ಒಹೋ, ಕೇಳಿದ್ದೇನೆ. ಅದೇಕೋ, ನಾನು ಆ ಆಪನ್ನು ಡೌನ್ಲೋಡ್ ಮಾಡಿಕೊಳ್ಳಲಾಗಿಲ್ಲ. ನಮ್ಮ ತಂದೆಯವರಿಗಂತೂ ಅದರ ವಿಷಯವೇನೂ ಗೊತ್ತೇ ಇಲ್ಲ. ಆ ಆಪನ್ನು  ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಅದರಿಂದೇನು ಉಪಯೋಗ?' ತಿಳಿಸ ಬಲ್ಲೆಯಾ ಎಂದು ಕೇಳಿದವಳು ರೋಹಿಣಿ. 

'ಆರೋಗ್ಯ ಸೇತು ಎಂಬುದು ಭಾರತ ಸರಕಾರ ಸಿದ್ಧಪಡಿಸಿದ ಒಂದು ಮೊಬೈಲ್ ಆಪ್. ನಿನ್ನ ಸ್ಮಾರ್ಟ್ ಫೋನಿಗೆ ಅದನ್ನು "ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಗಳಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಕೋವಿಡ್-೧೯ ರೋಗದಿಂದ ಜನರನ್ನು ಕಾಪಾಡುವುದೇ ಆ ಆಪ್ನ ಮೂಲ ಉದ್ದೇಶ. ಆ ಆಪ್ನ ಪ್ರಮುಖ ರೂಪರೇಷೆಗಳು ಹೀಗಿವೆ. 

-ಆ ಆಪ್ ಅಳವಡಿಸಿರುವ ಸ್ಮಾರ್ಟ್ ಫೋನ್ ಹೊಂದಿರುವ ವ್ಯಕ್ತಿಗಳು, ಅದೇ ರೀತಿಯ ಆರೋಗ್ಯ ಸೇತು ಆಪನ್ನು ಅಳವಡಿಸಿರುವ ಫೋನನ್ನು ಹೊಂದಿರುವ  ಸೋಂಕಿತರ ಸಂಪರ್ಕಕ್ಕೆ ಬಂದಿದ್ದಲ್ಲಿ, ಆ ಸಂಪರ್ಕದ ಮಾಹಿತಿ ಬ್ಲೂ ಟೂತ್ (bluetooth)  ಮುಖಾಂತರ ಎರಡೂ ಫೋನ್ಗಳಲ್ಲಿ ದಾಖಲಾಗುತ್ತದೆ. 

-"ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR)" ಸಿದ್ಧ ಪಡಿಸಿರುವ ಕ್ರಮಗಳ ಪ್ರಕಾರ, ಕೆಲವು ಸೂಚಕ  ಸ್ವಯಂ ಪರೀಕ್ಷೆಗಳನ್ನು ಆ ಆಪ್ ಮುಖಾಂತರ ಮಾಡಿಕೊಳ್ಳಬಹುದಾಗಿರುತ್ತದೆ. 

-ಸೋಂಕಿತರ ಸಂಪರ್ಕದ ಮಾಹಿತಿಯ ಅನುಸಾರವಾಗಿ ಆಯಾ ವ್ಯಕ್ತಿಗಳು ಮುಂದಿನ ದಿನಗಳಲ್ಲಿ  ಸೋಂಕಿತರಾಗುವ ಸಾಧ್ಯತೆಯನ್ನು ಆ ಆಪ್ನಲ್ಲಿ ಕಾಣಬಹುದಾಗಿರುತ್ತದೆ. 

-ಕೋವಿಡ್-೧೯ ಅನ್ನು ಕುರಿತಾದ ಇತ್ತೀಚಿನ ಮಾಹಿತಿಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ಆ ಆಪ್ನಲ್ಲಿ ಪಡೆಯಬಹುದಾಗಿರುತ್ತದೆ. 

-ದೇಶಾದ್ಯಂತದ ಕೋವಿಡ್ ಅಂಕಿ-ಅಂಶಗಳನ್ನು ಅಲ್ಲಿ ಪಡೆಯಬಹುದಾಗಿರುತ್ತದೆ. 

-ಕೋವಿಡ್ ರೋಗಕ್ಕೆ ಸಂಬಂಧ ಪಟ್ಟಂತಹ ಮಾಹಿತಿಗಳನ್ನು ಪಡೆಯುವ ತುರ್ತು ಕರೆಗಳ ನಂಬರ್ಗಳನ್ನು ಅಲ್ಲಿ ನೀಡಲಾಗಿರುತ್ತದೆ. 

-ಕೋವಿಡ್ ರೋಗದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದಾದ ಕೇಂದ್ರಗಳ ಬಗೆಗಿನ ಮಾಹಿತಿಯನ್ನೂ ಆ ಆಪ್ನ ಸಹಾಯದಿಂದ ಪಡೆಯಬಹುದಾಗಿರುತ್ತದೆ.'

'ಕೋವಿಡ್ ಸೋಂಕಿತರೊಬ್ಬರ ಸಂಪರ್ಕ ನನಗಾಗಿದ್ದರೆ, ಆ ಬಗೆಗಿನ ಮುನ್ಸೂಚನೆಯನ್ನು ಆರೋಗ್ಯ ಸೇತು ನನಗೆ ನೀಡುತ್ತದೆಯೇ?' ರೋಹಿಣಿ ಕುತೂಹಲಕಾರಿಯಾಗಿದ್ದಳು. 

'ನಿನ್ನ ಸ್ಮಾರ್ಟ್ ಫೋನಿನಲ್ಲಿರುವ ಆರೋಗ್ಯ ಸೇತು ಆಪ್,  ಬೇರೆಯವರ  ಸ್ಮಾರ್ಟ್ ಫೋನಿನಲ್ಲಿ ಅಳವಡಿಕೆಯಾಗಿರುವ ಆರೋಗ್ಯ ಸೇತು ಆಪ್ನ ಸನಿಹಕ್ಕೆ ಬಂದಿದ್ದರೆ, ಬ್ಲೂ ಟೂತ್ ಮುಖಾಂತರ ಆ ಸಂಪರ್ಕದ ಮಾಹಿತಿ ದಾಖಲಾಗುತ್ತದೆ. ಅಂತಹ ದಾಖಲೆಯಲ್ಲಿ "ಎಲ್ಲಿ ಸಂಪರ್ಕವಾಗಿತ್ತು? ಎಷ್ಟು ಹೊತ್ತು ಸಂಪರ್ಕದಲ್ಲಿದ್ದಿರಿ? ಯಾವಾಗ ಸಂಪರ್ಕದಲ್ಲಿದ್ದಿರಿ?" ಎಂಬ ಎಲ್ಲಾ ಮಾಹಿತಿಗಳೂ ಇರುತ್ತವೆ. ನೀನು ಸಂಪರ್ಕಿಸಿದ್ದ ವ್ಯಕ್ತಿ ಸೋಂಕಿತನಾಗಿದ್ದರೆ, ಅಥವಾ ಮುಂದಿನ ೧೪ ದಿನಗಳಲ್ಲಿ ಆ ವ್ಯಕ್ತಿ  ಸೋಂಕಿತನಾದರೆ, ಅದರಿಂದ ನಿನಗಿರುವ ಅಪಾಯದ ಮುನ್ಸೂಚನೆ, ನಿನಗೆ ನಿನ್ನ ಆಪ್ ಮುಖಾಂತರ ತಿಳಿಯುತ್ತದೆ. ನಿನ್ನ ಸೋಂಕಿನ ಮಾಹಿತಿ, ಸಂಬಂಧ ಪಟ್ಟ ಆರೋಗ್ಯಾಧಿಕಾರಿಗಳಿಗೂ ದೊರೆತು, ಬೇಕಾದ ಮುಂದಿನ ಕ್ರಮಗಳನ್ನು ಅವರೇ ಆರಂಭಿಸುತ್ತಾರೆ. 

ಆರೋಗ್ಯ ಸೇತು ಆಪ್ನ ನಿನ್ನ ಪರದೆ, ನಿನಗೆ ರೋಗ ಬರುವ ಸಾಧ್ಯತೆಯ ತೀವ್ರತೆಯನ್ನು ಮಾಪನ ಮಾಡಿ, ಅದಕ್ಕೆ ತಕ್ಕಂತೆ ತನ್ನ ಬಣ್ಣವನ್ನು ಬದಲಾಯಿಸುತ್ತದೆ. 

-ನಿನಗ್ಯಾವ ಸೋಂಕಿನ ಸಾಧ್ಯತೆಯೂ ಇಲ್ಲದಿದ್ದರೆ ಅದರ ಬಣ್ಣ ಹಸಿರಾಗಿರುತ್ತದೆ. 

-ನಿನಗೆ ಸೋಂಕಿನ ಸಾಧ್ಯತೆ ಸಾಧಾರಣವಾಗಿದ್ದರೆ, ಅದರ ಬಣ್ಣ ಹಳದಿಯಾದಾಗಿರುತ್ತದೆ. 

-ನಿನಗೆ ಸೋಂಕಿನ ಸಾಧ್ಯತೆ ಹೆಚ್ಚಾಗಿದ್ದರೆ, ಪರದೆಯ ಬಣ್ಣ ಕಿತ್ತಳೆ ಹಣ್ಣಿನ ಬಣ್ಣದ್ದಾಗಿರುತ್ತದೆ. 

-ನೀನಾಗಲೇ ಕೋವಿಡ್ ಸೋಂಕಿತೆಯಾಗಿದ್ದರೆ, ಅದರ ಬಣ್ಣ ಕೆಂಪಾಗಿ ಹೋಗಿರುತ್ತದೆ.'

ಎಂದು ಸಾಗಿತ್ತು ಡಾ. ಕಿರಣನ ವಿವರಣೆ. 

'ಯಾರಿಗಾದರೂ ಕೋವಿಡ್-೧೯ರ ಸೋಂಕು ತಗುಲಿದಲ್ಲಿ ಆರೋಗ್ಯ ಸೇತು ಆಪ್ಗೆ ಅದು ಹೇಗೆ ತಿಳಿಯುತ್ತದೆ?'

'ಪ್ರಯೋಗಾಲಯವೊಂದರಲ್ಲಿ ಯಾವುದಾದರೂ ವ್ಯಕ್ತಿಗೆ ಕೋವಿಡ್-೧೯ರ ಸೋಂಕು ತಗುಲಿದೆ (ಪೊಸಿಟಿವ್ ಆಗಿದೆ) ಎಂದು ತಿಳಿದಾಗ, ಆ ಪ್ರಯೋಗಾಲಯದವರು ಆ ಮಾಹಿತಿಯನ್ನು "ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR)"ಗೆ ವಿದ್ಯುನ್ಮಾನ (electronic) ವಿಧಾನದ ಮೂಲಕ  ರವಾನಿಸುತ್ತಾರೆ. ಆ ಸಂಸ್ಥೆ ಸಂಬಂಧ ಪಟ್ಟ ವ್ಯಕ್ತಿಗಳ "ಆರೋಗ್ಯ ಸೇತು" ಆಪ್ಗಳಿಗೆ ಮಾಹಿತಿಯನ್ನು ರವಾನಿಸುತ್ತದೆ.  ಸೋಂಕಿತನಾದ ವ್ಯಕ್ತಿಯ ಆಪ್ನ ಬಣ್ಣ ಕೆಂಪಾಗಿ, ಸೋಂಕಿತನನ್ನು ಎಚ್ಚರಿಸುತ್ತದೆ. ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಆಪ್ನಲ್ಲೂ ಅಪಾಯದ ಸೂಚನೆ ಕಾಣಿಸಿಕೊಂಡಿರುತ್ತದೆ' ಎಂಬುದು ಡಾ. ಕಿರಣನ ವಿವರಣೆಯಾಗಿತ್ತು. 

'ನಾನಿರುವ ಪ್ರದೇಶದಲ್ಲಿರುವ ಅಪಾಯದ ತೀವ್ರತೆಯ ಸೂಚನೆಯನ್ನು "ಆರೋಗ್ಯ ಸೇತು" ಆಪ್ ತಿಳಿಸಬಲ್ಲದೇ?'

'ನಿನ್ನ ಆರೋಗ್ಯ ಸೇತುವಿನ ಆಪ್ನ ಪರದೆಯ ಚಲಿಸುವ (live) ಭಾಗವು ನಿನಗೆ ನಾಲ್ಕು ಅಂಕಿ-ಅಂಶಗಳನ್ನು ತೋರಿಸುತ್ತದೆ. ನೀನು ಪಾಯಿಂಟ್ "ಎ" ಇಂದ ಪಾಯಿಂಟ್ "ಬಿ"ಗೆ ತಲುಪಿದಾಗ, ಆ ಪ್ರದೇಶದ ಪರಿಸ್ಥಿತಿಗಳಿಗೆ ಅನುಗುಣವಾಗಿ ಕೆಳಕಂಡ ಮಾಹಿತಿಗಳನ್ನು, ನಿನ್ನ ಆಪ್ ತಿಳಿಸುತ್ತದೆ. 

- X-ಅಂತರದಲ್ಲಿರುವ, ಆಪ್ ಅಳವಡಿಸಿಕೊಂಡಿರುವ ವ್ಯಕ್ತಿಗಳ ಪೈಕಿ ಎಷ್ಟು ಜನರು, ಕಳೆದ ೨೪ ಘಂಟೆಗಳೊಳಗೆ  ಸ್ವಯಂ-ಪರೀಕ್ಷೆಗಳನ್ನು ನಡೆಸಿಕೊಂಡಿದ್ದಾರೆ?

-X-ಅಂತರದಲ್ಲಿರುವ ಎಷ್ಟು ವ್ಯಕ್ತಿಗಳು ಆರೋಗ್ಯ ಸೇತು ಆಪನ್ನು ಅಳವಡಿಸಿಕೊಂಡಿದ್ದಾರೆ? 

-X-ಅಂತರದಲ್ಲಿರುವ ಎಷ್ಟು ವ್ಯಕ್ತಿಗಳಲ್ಲಿ, ಒಂದು ಮತ್ತು ಅದಕ್ಕಿಂತ ಹೆಚ್ಚಿನ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ? 

-X-ಅಂತರದಲ್ಲಿನ ಎಷ್ಟು ವ್ಯಕ್ತಿಗಳನ್ನು ಕೋವಿಡ್ ಸೋಂಕಿತರೆಂದು (covid positive) ಗುರುತಿಸಲಾಗಿದೆ?

-X-ಅಂತರದಲ್ಲಿನ ಎಷ್ಟು ವ್ಯಕ್ತಿಗಳು ಕೋವಿಡ್ ಸೋಂಕಿತನೊಬ್ಬನ ಸಂಪರ್ಕಕ್ಕೆ ಬಂದಿದ್ದಾರೆ?

"x" ಎಂಬ ಅಂತರವನ್ನು, ಸ್ಮಾರ್ಟ್ ಫೋನಿನ ಮಾಲೀಕನು "೫೦೦ ಮೀ., ೧ ಕಿ.ಮೀ., ೨ ಕಿ.ಮೀ., ೫ ಕಿ.ಮೀ. ಮತ್ತು ೧೦ ಕಿ.ಮೀ." ಎಂದು ಬದಲಿಸಿ ಬೇಕಾದ ಎಲ್ಲಾ ಮಾಹಿತಿಗಳನ್ನೂ ಪಡೆಯಬಹುದು' ಎಂಬ ವಿಷಯವನ್ನು ಡಾ. ಕಿರಣ್ ತನ್ನ ಫೋನಿನ ಆರೋಗ್ಯ ಸೇತು ಆಪನ್ನು  ತೋರಿಸುತ್ತಾ ವಿವರಿಸಿದ್ದನು. 

'ಕಿರಣ್, ನನಗೊಬ್ಬ ಸ್ನೇಹಿತನಿದ್ದಾನೆ. ಆತನ ತಂದೆಗೆ ಕೆಲವು ದಿನಗಳ ಹಿಂದೆ  ಕೋವಿಡ್ ರೋಗವಿರುವುದು ಖಚಿತವಾಗಿತ್ತು. ಆದರೆ ನನ್ನ ಸ್ನೇಹಿತನ ಮೊಬೈಲ್ನ ಆರೋಗ್ಯ ಸೇತು ಆಪ್ನಲ್ಲಿ ಅವನೇ ಕೋವಿಡ್ ಸೋಂಕಿತನೆಂದು ಬಿಂಬಿತವಾಗುತ್ತಿದೆ. ಇದರಿಂದ ಅವನ ಸ್ನೇಹಿತರೆಲ್ಲರೂ ಅವನನ್ನು ಅನುಮಾನಿಸ ತೊಡಗಿದ್ದಾರೆ. ಇಂತಹ ಆಭಾಸಗಳು ಆರೋಗ್ಯ ಸೇತುವಿನಿಂದ ಉಂಟಾಗ ಬಹುದೇ?' ರೋಹಿಣಿ ಪ್ರಶೆಯಲ್ಲಿ ಆತಂಕವಿತ್ತು. 

ಕೆಲವು ಕ್ಷಣ ಯೋಚಿಸಿದ ಡಾ. ಕಿರಣನ ಉತ್ತರ ಹೀಗಿತ್ತು. 'ತನ್ನ ತಂದೆಗೆ ಪರೀಕ್ಷೆ ಮಾಡಿಸುವಾಗ, ನಿನ್ನ ಸ್ನೇಹಿತ, ತನ್ನ ಮೊಬೈಲ್ ಸಂಖ್ಯೆಯನ್ನೇ ನೀಡಿರಬಹುದು. ಆದುದರಿಂದ ಈ ರೀತಿಯ ಆಭಾಸ ನಡೆದಿರಬಹುದು. ಸಂಬಂಧಪಟ್ಟ ಜಿಲ್ಲಾ ಅಥವಾ ರಾಜ್ಯ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ, ಈಗ ಉಂಟಾಗಿರುವ ತೊಡಕನ್ನು ಸರಿಪಡಿಸಿಕೊಳ್ಳಬಹುದು' ಎಂದನು. 

'ನೀಡಿದ ಎಲ್ಲ ಮಾಹಿತಿಗಳಿಗಾಗಿ ವಂದನೆಗಳು ಎಂದು ನಾನು ಹೇಳುವುದಿಲ್ಲ. ಏಕೆಂದರೆ ನೀನು ನನ್ನ ಗೆಳಯ ತಾನೇ? ಆರೋಗ್ಯ ಸೇತು ಆಪನ್ನು ನಾನೀಗಲೇ ಅಳವಡಿಸಿಕೊಳ್ಳುತೇನೆ ಮತ್ತು ಕೊರೋನಾ ಸೇನಾನಿಯಾಗಲು ಕೂಡಲೇ ನನ್ನ ಮತ್ತು ನನ್ನಪ್ಪನ ಅರ್ಜಿಗಳನ್ನು ದಾಖಲಿಸುತ್ತೇನೆ' ಎಂದಳು ರೋಹಿಣಿ.

'ಅದು ಸಂತೋಷದ ವಿಷಯ. ಆರೋಗ್ಯ ಸೇತು ಎಂಬ ಆಪನ್ನು, ಕೋವಿಡ್-೧೯ ಕಲಿಸಿದ ಮತ್ತೊಂದು ಪಾಠವೆಂದು ಪರಿಗಣಿಸಬಹುದು. ಸಧ್ಯಕ್ಕೆ ಆ ಆಪ್ ಕೋವಿಡ್-೧೯ರ ಮಾಹಿತಿಯನ್ನು ಮಾತ್ರ ನೀಡು ತ್ತಿದೆ. ಮುಂಬರುವ ದಿನಗಳಲ್ಲಿ ಪ್ರತಿ ವ್ಯಕ್ತಿಯ ಆರೋಗ್ಯವನ್ನು ಕುರಿತಾದ ಸಮಗ್ರ ಮಾಹಿತಿಯನ್ನು ಅದೇ ಆಪ್ನಲ್ಲಿ ಅಳವಡಿಸಬಹುದು. ಆರೋಗ್ಯ ಸೇತು ಎಂಬ ಆಪ್ ದೇಶದ ಹೆಮ್ಮೆಯಾಗಿ ಪರಿವರ್ತನೆಗೊಳ್ಳಬಹುದು' ಎಂದ ಕಿರಣ್, ತನ್ನ ಗೆಳತಿಗೆ ಬೈ-ಬೈ ಹೇಳಿ ಹೊರಟನು. 

***

ಮನೆಗೆ ಹಿಂತಿರುಗಿದ ನಂತರ ರೋಹಿಣಿ ಮಾಡಿದ ಮೊದಲ ಕೆಲಸವೆಂದರೆ, ಆರೋಗ್ಯ ಸೇತು ಆಪನ್ನು ತನ್ನ ಸ್ಮಾರ್ಟ್ ಫೋನಿಗೆ ಅಳವಡಿಸಿಕೊಂಡಿದ್ದು. 

ತನ್ನ ತಂದೆ ರಾಜುರವರಿಗೂ ಆಪನ್ನು ಅಳವಡಿಸಿಕೊಡುವ ಕಾರ್ಯಕ್ಕೆ ರೋಹಿಣಿ ಮುಂದಾದಾಗ, ರಾಜುರವರು ಒಪ್ಪಲಿಲ್ಲ. 'ನೀನು ಆಪನ್ನು ಅಳವಡಿಸಿಕೊಡುವುದು ಬೇಡ, ಆ ಕೆಲಸವನ್ನು ಹೇಗೆ ಮಾಡಬೇಕೆಂಬುದನ್ನು ನನಗೆ ತಿಳಿಸು. ಆ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೇನೆ. ಏಕೆಂದರೆ ನಾನು "ಆತ್ಮನಿರ್ಭರ"ನಾಗಲು ಇಚ್ಛಿಸುತ್ತೇನೆ' ಎಂದರು ರಾಜು. 

'ಅಪ್ಪಾ, ನಿನ್ನ ಉತ್ಸಾಹವನ್ನು ನಾನು ಮೆಚ್ಚುತ್ತೇನೆ. ಆತ್ಮನಿರ್ಭರತೆಯೆಂಬುದು ಬರೀ ವ್ಯಕ್ತಿಗಳಿಗೆ ಸೀಮಿತವಾದುದಲ್ಲ. ನಮ್ಮ ಇಡೀ ದೇಶವೇ ಆತ್ಮನಿರ್ಭರತೆಯತ್ತ ಸಾಗಬೇಕಾಗಿದೆ. ಇದು ನಮ್ಮ ಪ್ರಧಾನಿ ಮೋದಿಯವರು ನೀಡಿರುವ ಸಂದೇಶವೂ ಹೌದು.'

ರೋಹಿಣಿ ನೀಡಿದ ಮಾರ್ಗದರ್ಶನದ ಪ್ರಕಾರ, ಪ್ರಯತ್ನ ಮಾಡಿದ ರಾಜುರವರು ಯಶಸ್ವಿಯಾಗಿ ಆರೋಗ್ಯ ಸೇತು ಆಪನ್ನು ತಮ್ಮ ಸ್ಮಾರ್ಟ್ ಫೋನಿಗೆ ಅಳವಡಿಸಿಕೊಂಡಾಗ ಉಬ್ಬಿ ಹೋಗಿ, 'ನಾನೀಗ  ಆತ್ಮನಿರ್ಭರನಾದೆ' ಎಂದು ಸಣ್ಣದಾಗಿ ಘರ್ಜಿಸಿದ್ದರು. 

'ಕೋವಿಡ್-೧೯ರ ಮಹಾಮಾರಿ ಕಲಿಸಿದ ಮತ್ತೊಂದು ಪಾಠವೆಂದರೆ "ಆತ್ಮನಿರ್ಭರತೆ." ಕೇವಲ ನಾಲ್ಕು ತಿಂಗಳುಗಳ ಹಿಂದೆ, ನಮ್ಮ ದೇಶದಲ್ಲಿ ಪಿ.ಪಿ.ಇ. ತೊಡುಗೆಗಳ ಉತ್ಪಾದನೆಯೂ ಆಗುತ್ತಿರಲಿಲ್ಲ. "ಅವಶ್ಯಕತೆಯೇ ಅನ್ವೇಷಣೆಯ ತಾಯಿ (Necessity is the mother of invention)." ಈಗ ಭಾರತದ ಉದ್ಯಮಿಗಳು ಪ್ರತಿದಿನ ೨ ಲಕ್ಷ ಪಿ.ಪಿ.ಇ. ತೊಡುಗೆಗಳನ್ನು ತಯಾರಿಸುವಷ್ಟು ಸಾಮರ್ಥ್ಯವನ್ನು ಸಾಧಿಸಿದ್ದಾರೆ. ಕಮ್ಮಿ ಜನಸಂಖ್ಯೆಯಿದ್ದು, ಹೆಚ್ಚಿನ ಜಿ.ಡಿ.ಪಿ. ಮತ್ತು ತಾಂತ್ರಿಕತೆಯನ್ನು ಹೊಂದಿರುವ ಹಲವು ದೇಶಗಳಿಗಿಂತ, ಭಾರತದ ಕೋವಿಡ್ ನಿರ್ವಹಣೆ ಉತ್ತಮವಾಗಿದೆ ಎಂಬ ಮಾತುಗಳು ಅಂತಾರಾಷ್ಟ್ರೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕೋವಿಡ್-೧೯ರ ರೋಗವನ್ನು ತಡೆಯಬಲ್ಲ ಲಸಿಕೆಯ ತಯಾರಿಕೆಯೂ* ಭಾರತದಲ್ಲಾಗುವ ಎಲ್ಲಾ ಸಾಧ್ಯತೆಗಳು ಇವೆ. ನಮ್ಮ ಆಟೋಮೊಬೈಲ್ ಉದ್ಯಮಿಗಳು, ಜೀವರಕ್ಷಕ ವೆಂಟಿಲೇಟಾರ್ಗಳ ಉತ್ಪಾದನೆಗೆ ತಮ್ಮ ಸಾಧನಗಳ ಮಾರ್ಪಾಡನ್ನು ಮಾಡಿಕೊಂಡು ಸಜ್ಜಾಗುತ್ತಿವೆ. 

ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ಅನುಕೂಲವಾಗುವಂತೆ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ. "ಆರ್ಥಿಕತೆ, ಮೂಲಭೂತ ಸೌಕರ್ಯಗಳು, ವಿಧಿವಿಧಾನಗಳು, ಕುಶಲ ಜನತೆ ಮತ್ತು ಬೇಡಿಕೆ, ಈ ಐದು ಅಂಶಗಳನ್ನು ಆತ್ಮನಿರ್ಭರತೆಯ ಐದು ಸ್ತ೦ಭಗಳೆಂದೇ ಗುರುತಿಸಲಾಗಿದೆ." ಎಂ.ಎಸ್.ಎಂ.ಇ. (MSME) ಉದ್ಯಮಿಗಳ, ವಲಸಿಗರ ಮತ್ತು ರೈತರುಗಳ ಬೆಂಬಲಕ್ಕಾಗಿ ಬೇಕಾದ ಕ್ರಮಗಳನ್ನು  ಮತ್ತು ಸುಧಾರಣೆಗಳನ್ನೂ ಜಾರಿಗೆ ತರುವ ಸರ್ವಪ್ರಯತ್ನಗಳು ನಡೆಯುತ್ತಿವೆ.  

ಆತ್ಮನಿರ್ಭರತೆಯೆಂದರೆ ಹೊರದೇಶಗಳೊಂದಿಗಿನ ವ್ಯಾಪಾರವನ್ನು ನಿಲ್ಲಿಸುವುದು ಎಂದಲ್ಲ. ಪ್ರಪಂಚದ ರಾಷ್ಟ್ರಗಳೊಂದಿಗಿನ ಸಂಬಂಧಗಳು ಎಂದಿನಂತೆ ಸಾಗುತ್ತಿರುತ್ತವೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಂದ ನಮಗೆ ಬಂಡವಾಳ (FDI) ಮತ್ತು ತಾಂತ್ರಿಕ ಮಾರ್ಗದರ್ಶನ (technical knowhow) ದೊರೆಯುತ್ತಲೇ ಸಾಗುತ್ತದೆ. ಆಹಾರದ ವಿಷಯದಲ್ಲಿ ದಶಕಗಳ ಹಿಂದೆ ನಾವು ಆತ್ಮನಿರ್ಭರತೆಯನ್ನು ಸಾಧಿಸಿದ್ದಾಗಿದೆ. ಸೇವಾ ಕ್ಷೇತ್ರದಲ್ಲಿ (Service sector) ನಮ್ಮ ದೇಶದ ಪ್ರಗತಿ ಶರವೇಗದಲ್ಲಿ ಸಾಗುತ್ತಿದೆ. ಇವುಗಳೆಲ್ಲಕ್ಕಿಂತ ಮೇಲಾಗಿ, ಭಾರತದ ೧೩೦ ಕೋಟಿಯಷ್ಟರ ಅಪಾರವಾದ ಜನಸಂಖ್ಯೆ, ವಿಶ್ವದ ಬೃಹತ್ ಮಾರುಕಟ್ಟೆಗಳಲ್ಲೊಂದಾಗಿದೆ. ಆದುದರಿಂದ ನಾವೊಂದು ಆತ್ಮನಿರ್ಭರ ದೇಶವಾಗಿ ಹೊರಹೊಮ್ಮುವ ಸಾಧ್ಯತೆ ನಿಚ್ಚಳವಾಗಿದೆ. ಆತ್ಮನಿರ್ಭರತೆಯ ಬಲದಿಂದ ವಿಶ್ವದ ಅತಿ ಮುಖ್ಯ ರಾಷ್ಟ್ರವೊಂದಾಗಿ ಬೆಳೆಯುವ ಶಕ್ತಿ ನಮಗಿದೆ.'  ರಾಜುರವರ ಆತ್ಮನಿರ್ಭರತೆಯ ವ್ಯಾಖ್ಯಾನ ಹೀಗೆ ಸಾಗಿತ್ತು. 

ರೋಹಿಣಿ ಪ್ರತಿವಾದಿಸುತ್ತಾ, 'ಅಪ್ಪಾ, ನಮ್ಮ ವಿರೋಧ ಪಕ್ಷಗಳ ನಾಯಕರು ಆತ್ಮನಿರ್ಭರತೆ ಎಂಬುದು ಆಡಳಿತ ಪಕ್ಷದ ನಾಟಕ ಮಾತ್ರ. ಅದು "ಹೊಸ ಬಾಟಲಿನಲ್ಲಿ ತುಂಬಿಸಿ ಕೊಟ್ಟ ಹಳೆ ಮದಿರೆಯಂತೆ (Old wine in a new bottle)." ಉಕ್ಕಿನ ಕ್ಷೇತ್ರದಲ್ಲಿ ಸೈಲ್ (SAIL), ತಾಂತ್ರಿಕ ಶಿಕ್ಷಣದಲ್ಲಿ ಐ.ಐ.ಟಿ. (IIT)ಗಳು, ವೈದ್ಯಕೀಯ ಸೌಲಭ್ಯದಲ್ಲಿ ಏಮ್ಸ್ (AIIMS), ರಕ್ಷಣಾ ಸಂಶೋಧನೆಯಲ್ಲಿ ಡಿಆರ್ಡಿಓ (DRDO), ಹಾರಾಟಗಳ ಕ್ಷೇತ್ರದಲ್ಲಿ ಎಚ್. ಎ.ಎಲ್.(HAL), ಬಾಹ್ಯಾಕಾಶ ಸಂಶೋಧನೆಯಲ್ಲಿ ಐ. ಎಸ್.ಆರ್.ಒ. (ISRO)" ಮುಂತಾದ ಸಂಸ್ಥೆಗಳ ಸ್ಥಾಪನೆ ಹಲವು ದಶಕಗಳ ಹಿಂದೇ ಆಗಿದ್ದು, ನಮ್ಮ ದೇಶ ಸಾಕಷ್ಟು ಆತ್ಮನಿರ್ಭರತೆಯನ್ನು ಅಂದೇ ಸಾಧಿಸಿತ್ತಲ್ಲವೇ?' ಎಂದಳು. 

'ಹೌದು ಮಗಳೆ, ಸ್ವಾತಂತ್ರ್ಯ ಸಿಕ್ಕನಂತರ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ೧೯೯೧ರಲ್ಲೇ ನಾವು ಆರ್ಥಿಕ ಕ್ಷೇತ್ರದ ಸುಧಾರಣೆಯನ್ನು ಆರಂಭಿಸಿದ್ದು, ಅದರ ಫಲವಾಗಿ ನಾವುಗಳು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ, ಮತ್ತು ನಮ್ಮ ಜಿ.ಡಿ.ಪಿ.ಯ ವೃದ್ಧಿಯ ದರ ಸಾಕಷ್ಟು ಹೆಚ್ಚಳವನ್ನು ಕಂಡಿದೆ. ಆದರೆ ಅನೀರಿಕ್ಷಿತವಾಗಿ ಬಂದಪ್ಪಳಿಸಿರುವ ಕೋವಿಡ್ ಮಹಾಮಾರಿ ನಮ್ಮನ್ನು ಹೊಡೆದೆಬ್ಬಿಸಿದೆ ಮತ್ತು ಆರ್ಥಿಕ ಕ್ಷೇತ್ರದ ಅಭಿವೃದ್ಧಿಯ ವೇಗವನ್ನು ತ್ವರಿತಗೊಳಿಸುವ ಅವಶ್ಯಕತೆಯ ಅರಿವನ್ನು ಮೂಡಿಸಿದೆ. ದೀರ್ಘವಾದ ಲಾಕ್ಡೌನಿನಿಂದ ಕುಂಠಿತವಾಗಿರುವ ಆರ್ಥಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಕೋವಿಡ್ನ ಜೊತೆಯೇ ಜನಜೀವನ ಸಾಗಬೇಕಿದೆ' ಎನ್ನುವ ಸಮಜಾಯಿಷಿ ತಂದೆ ರಾಜುರವರದಾಗಿತ್ತು. 

*** 

ತನ್ನ ಸಂಶೋಧನಾ ಕಾರ್ಯವನ್ನು ಮುಂದುವರೆಸುತ್ತಿದ್ದ ರೋಹಿಣಿಗೆ, ತಾನೊಂದು ತಳ ಕಾಣದ ಸಾಗರವೊಂದರಲ್ಲಿ ಈಜುತ್ತಿರುವಂತೆ ಅನಿಸಿತ್ತು.  ಆಲೋಚಿಸುತ್ತಿದ್ದ ಅವಳಿಗೆ, 'ಕೋವಿಡ್-೧೯ ತನ್ನ ಕಬಂಧ ಬಾಹುಗಳನ್ನು ಚಾಚುತ್ತಾ ಕದಡದ ಕ್ಷೇತ್ರಗಳೇ ಇಲ್ಲವೆ? ಪೂರ್ವಸ್ಥಿತಿಗೆ ಮರಳಲಾಗದಂತಹ (irreversible) ಹಲವಾರು ಬದಲಾವಣೆಗಳನ್ನು ಕೋವಿಡ್ ತಂದೊಡ್ಡಿದೆಯೆ? ಅಂತಹ ಬದಲಾವಣೆಗಳಲ್ಲಿ  'ಮನೆಯಿಂದಲೇ ಕೆಲಸ (work from home)' ಎಂಬುದೊಂದಲ್ಲವೇ?' ಎಂದೆನಿಸಿತ್ತು. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ರೋಹಿಣಿ, ತನ್ನ ಹಳೆಯ ಗೆಳತಿ  ಸೂಕ್ಷ್ಮಾಳಿಗೆ ಫೋನಾಯಿಸಿದ್ದಳು. ಆ ಕರೆಯನ್ನು ಕಾನ್ಫರೆನ್ಸ್ ಕರೆಯನ್ನಾಗಿ ಪರಿವರ್ತಿಸಿದ ಸೂಕ್ಶ್ಮಾ, ತನ್ನ ಪತಿ ಪ್ರತಾಪನು ಕರೆಯಲ್ಲಿ ಭಾಗಿಯಾಗುವಂತೆ ಮಾಡಿದ್ದಳು. 

'ಮನೆಯಿಂದಲೇ ಕೆಲಸ' ಎಂಬ ಹೊಸ ಬೆಳವಣಿಗೆಗೆ ಸಂಬಂಧಪಟ್ಟಂತಹ ತಮಾಷೆಯ ಪ್ರಸಂಗವೊಂದನ್ನು ಸೂಕ್ಷ್ಮಾ ಹೇಳಲಾರಂಭಿಸಿದಳು. 'ಮನೆಯಿಂದ ಕೆಲಸ ಮಾಡುತ್ತಿದ್ದ ತನ್ನ ಸಹಾಯಕನೊಬ್ಬನ ಮೇಲೆ ನಿಗಾ ಇರಿಸಲೆಂದು, ಮೇಲಧಿಕಾರಿ(Boss)ಯೊಬ್ಬನು ಅವನಿಗೆ ಕರೆಯೊಂದನ್ನು ಮಾಡಿದ್ದನು. ಕರೆಯ ಸಮಯ ಸುಮಾರು ಬೆಳಗಿನ ೯. ೦೦ ಘಂಟೆಯಾಗಿತ್ತು. ಕರೆಯನ್ನು ಸ್ವೀಕರಿಸಿದ ಸಹಾಯಕನ ಪತ್ನಿ ಮಾತನಾಡಿ, "ಅವರು ಬಟ್ಟೆಯನ್ನೊಗೆಯುತ್ತಿದ್ದಾರೆ," ಎಂದು ತಿಳಿಸಿದ್ದಳು. "ಕೂಡಲೇ ನನಗೆ ಮರುಕರೆಯೊಂದನ್ನು ಮಾಡಿ, ಎಂದು ನಿಮ್ಮ ಪತಿಗೆ ತಿಳಿಸಿ" ಎಂದ "ಬಾಸ್"ನ ಉತ್ತರದಲ್ಲಿ ದರ್ಪವಿತ್ತು. ೧೧. ೦೦ ಘಂಟೆಯಾದರೂ ಸಹಾಯಕನಿಂದ ಯಾವ ಮರುಕರೆಯೂ ಬಾಸ್ಗೆ ಬರದಿದ್ದಾಗ, ಕೋಪಗೊಂಡ ಬಾಸ್ ತನ್ನ ಸಹಾಯಕನಿಗೆ ಮತ್ತೊಂದು ಕರೆಯನ್ನು ಮಾಡಿ ಮಾತನಾಡಿದ್ದನು. "ನಾನು ನಿನಗೆ ಬೆಳಗ್ಗೆ ೯. ೦೦ ಘಂಟೆಗೆ ಕರೆಯೊಂದನ್ನು ಮಾಡಿದ್ದೆ. ಆಗ ನೀವು ತಮ್ಮ ಮನೆಯ ಬಟ್ಟೆಗಳನ್ನು ಒಗೆಯುತ್ತಿದ್ದಿರಿ. ನನಗೆ ಮರುಕರೆಯನ್ನು ಮಾಡುವಂತೆ ನಿಮ್ಮ ಪತ್ನಿಗೆ ತಿಳಿಸಿದ್ದೆ. ತಾವೇಕೆ ಮರುಕರೆಯನ್ನು ಈವರೆಗೆ ಮಾಡಿಲ್ಲ?" ಎಂದ ಬಾಸ್ನ ಕೋಪ ನೆತ್ತಿಗೇರಿತ್ತು. ಕ್ಷಮಾಪಣಾ ಛಾಯೆಯಿದ್ದ ದನಿಯಲ್ಲಿ ಉತ್ತರಿಸಿದ ಆ ಸಹಾಯಕ ಮಾತನಾಡುತ್ತಾ, "ಸಾರ್, ನಾನು ೯. ೩೦ಕ್ಕೇ ಮರುಕರೆಯನ್ನು ತಮಗೆ ಮಾಡಿದ್ದೆ. ಕರೆಯನ್ನು ಸ್ವೀಕರಿಸಿ ಮಾತನಾಡಿದ ತಮ್ಮ ಪತ್ನಿಯವರು, ತಾವು ಮನೆಯ ಪಾತ್ರೆಗಳನ್ನು ತೊಳೆಯುತ್ತಿರುವುದಾಗಿ ಉತ್ತರಿಸಿದರು," ಎಂದಾಗ ಆ ಬಾಸನಿಗಾದ ತಬ್ಬಿಬ್ಬನ್ನು ಕೇಳಿ,' ಮೂವರೂ ಗಹಗಹಿಸಿ ನಕ್ಕಿದ್ದರು. 

ಸೂಕ್ಷ್ಮಾ ಮುಂದುವರೆದು ಮಾತನಾಡುತ್ತಾ, 'ಹಾಸ್ಯದ ಪ್ರಸಂಗಗಳು ಹಾಗಿರಲಿ, ಕೋವಿಡ್ ಮಹಾಮಾರಿಯನಂತರ "ಮನೆಯಿಂದಲೇ ಕೆಲಸ" ಎಂಬುದೊಂದು "ಹೊಸ ಸಾಮಾನ್ಯ ಸಂಗತಿ"(new normal)ಯಾಗಿ ಹೋಗಿದೆ. ನನ್ನಂತಹ ೯೦%ರಷ್ಟು  ಐ.ಟಿ. ಉದ್ಯೋಗಿಗಳು, ಈಗ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರುಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳು ಸಣ್ಣ ಸಣ್ಣ ಪಟ್ಟಣಗಳ, ತಮ್ಮ ಮನೆಗಳಿಂದಲೇ ಕೆಲಸ ಮಾಡುತ್ತಿದ್ದು, ಮಹಾನಗರಗಳಲ್ಲಿ ಅವರುಗಳು ನೀಡುತ್ತಿದ್ದ ಭಾರೀ ಬಾಡಿಗೆಯನ್ನು ಮತ್ತು ಪ್ರಯಾಣದ ವೆಚ್ಚವನ್ನೂ ಉಳಿಸುತ್ತಿದ್ದಾರೆ. ನನ್ನಂತಹ ೧೨ ಮತ್ತು ೭ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಇರುವಂತಹ ತಾಯಂದಿರುಗಳಿಗೆ ಈ ಹೊಸ ಪದ್ಧತಿಯೊಂದು "ದೇವರು ಕೊಟ್ಟ ವರ"ವೆಂದೇ ಹೇಳಬೇಕು. ನಿನಗೆ ತಿಳಿದಿರುವಂತೆ ಈಗ ಲಾಕ್ಡೌನಿನಿಂದಾಗಿ ಮಕ್ಕಳ ಶಾಲೆಗಳೆಲ್ಲಾ ಮುಚ್ಚಿವೆ. ಮಕ್ಕಳೆಲ್ಲರ ಶಿಕ್ಷಣ ಈಗ  "ಆನ್ಲೈನ್ (online)" ತರಗತಿಗಳ ಮೂಲಕ ನಡೆಯುತ್ತಿದೆ. ಮನೆಯಲ್ಲೇ ಇದ್ದುಕೊಂಡು, ನನ್ನ ಮಕ್ಕಳ ಕಲಿಕೆಯ  ಹಿಂದಿರುವುದೆಂದರೆ ನನಗಿಷ್ಟ' ಎಂದಳು. 

ಆಗ, ಸೂಕ್ಷ್ಮಾಳ  ಪತಿ ಪ್ರತಾಪನ ಮಧ್ಯ ಪ್ರವೇಶ ತನ್ನಂತೆ ತಾನೇ ಆಗಿತ್ತು. 'ಇಲ್ಲ, ಇಲ್ಲ, ನನ್ನ ಹೆಂಡತಿ ಸುಳ್ಳು ಬಿಡುತ್ತಿದ್ದಾಳೆ. ಮಕ್ಕಳ ಮೇಲಿನ ನಿಗಾದ ಕಾರ್ಯವನ್ನು ಅವಳು ನನಗೆ ವಹಿಸಿ ತಾನು ತೆಪ್ಪನಿದ್ದಾಳೆ. ಅವಳ ಸ್ವಭಾವ "ಗೂಳಿ"ಯಂತಹದ್ದು. ಅವಳ ಸ್ವಭಾವಕ್ಕೆ ತಕ್ಕ ಹಾಗೆ ಅವಳ ಕೆಲಸದ ಸಮಯ ದಿನದ ವೇಳೆಯಲ್ಲಿದ್ದು, ಅದನ್ನವಳು ಇಷ್ಟಪಡುತ್ತಾಳೆ. ನನ್ನನ್ನವಳು "ಗೂಬೆ" ಅಂತ ಕರೆಯುತ್ತಾಳೆ. ಅದಕ್ಕೆ ತಕ್ಕ ಹಾಗೆ ನನ್ನ ಕೆಲಸದ ವೇಳೆ ಸಾಯಿಂಕಾಲ ೭ರಿಂದ ಮಧ್ಯರಾತ್ರಿ ೧ರ ವರೆಗಿರುತ್ತದೆ. ಹಾಗಾಗಿ ದಿನದ ವೇಳೆಯಲ್ಲಿ ನಡೆಯುವ ಮಕ್ಕಳ ಆನ್ಲೈನ್ ತರಗತಿಗಳ ಮೇಲಿನ ನಿಗಾ ವಹಿಸುವ ಭಾರ ನನ್ನದಾಗಿರುತ್ತದೆ. ಇದರ ಜೊತೆಗೆ ನನ್ನ ಮುದ್ದು ಮಗಳು "ತೀಕ್ಷ್ಣ"ಳ ೬೦ ನಿಮಿಷಗಳ ಸಂಗೀತದ ತರಗತಿಯೂ ಆನ್ಲೈನ್ನಲ್ಲೇ ಇದ್ದು, ಅದು ವಾರಕ್ಕೆರಡು ಬಾರಿ ಇರುತ್ತದೆ. ಅದರ ನಿಗವನ್ನೂ ನಾನೇ ವಹಿಸಬೇಕು. ನನಗಂತೂ ಸಂಗೀತದ ಗಂಧ ಸ್ವಲ್ಪವೂ ಇಲ್ಲ. ಸಂಗೀತದ ಕ್ಲಾಸ್ನಲ್ಲಿ ಏನಾಗುತ್ತದೆ ಎಂಬುದೇ ನನಗೆ ತಿಳಿಯುವುದಿಲ್ಲ. ನನ್ನ ಮಗಳ ಸಂಗೀತದ ಮೇಡಂ ಹೆಸರು "ಪ್ರೇಮಾ" ಎಂದು ಮಾತ್ರ ನನಗೆ ಗೊತ್ತು. ಯಾವಾಗಲೂ ನಗುಮೊಗದವರಾದ ಅವರೆಂದರೆ ನನಗಿಷ್ಟ! ಅವರು ಹಾಡುವುದೂ ನನಗಿಷ್ಟ. ತರಗತಿ ಆರಂಭವಾಗುವ ಮೊದಲು ಅವರಿಗೊಮ್ಮೆ "ಹಲೋ" ಅಂತೂ ಹೇಳೇ ಹೇಳುತ್ತೇನೆ.' 

ಮಾತನ್ನು ಮುಂದೆ ಬೆಳೆಸುತ್ತಾ ಪ್ರತಾಪ್, 'ರೋಹಿಣಿ, ನಿಮಗೆ ತಿಳಿದಿರುವಂತೆ ನಾನೂ ಕೂಡಾ ಐ.ಟಿ. ಕ್ಷೇತ್ರದಲ್ಲಿ ಕೆಲಸ ಮಾಡುವವನೆ. "ಮನೆಯಿಂದಲೇ ಕೆಲಸ" ಎಂಬ ಹೊಸ ಪದ್ಧತಿಗೆ ಐ.ಟಿ. ಕ್ಷೇತ್ರ ಮತ್ತು ಅದರ ಉದ್ಯೋಗಿಗಳು ಬಹು ಬೇಗ ಹೊಂದುಕೊಂಡಿದ್ದಾರೆ ಎಂದೇ ಹೇಳಬಹುದು. ನಮ್ಮ ಗ್ರಾಹಕರುಗಳಿಗೂ ಈ ಹೊಸ ಪದ್ಧತಿ ಸರಿಯೆನಿಸಿಹೋಗಿದೆ. ನಮ್ಮ ಐ.ಟಿ. ಉದ್ಯಮದ ಬಾಸ್ಗಳಿಗೂ ಹಾಗೂ ಗ್ರಾಹಕರುಗಳಿಗೂ, "ಮನೆಯಿಂದಲೇ ಕೆಲಸದ" ಸೂತ್ರದ  ಬಗ್ಗೆ ಏಕ ಕಾಲದಲ್ಲಿ, ಸಮ್ಮತಿ  ಮೂಡಿರುವುದು ಅಚ್ಚರಿಯ ಸಂಗತಿ. ಗುಣಮಟ್ಟದ ದೃಷ್ಟಿಯಿಂದ ನಾವುಗಳಂತೂ ಯಾವ ರಾಜಿಗೂ ಒಪ್ಪಲಾರೆವು. ದೊಡ್ಡ ನಗರಗಳು, ಸಣ್ಣ ಪಟ್ಟಣಗಳು ಮತ್ತು ಹಳ್ಳಿ ಹಳ್ಳಿಗಳಲ್ಲೂ, ಉತ್ತಮ ಗುಣಮಟ್ಟದ ಅಂತರ್ಜಾಲದ (bandwidth) ಸೌಲಭ್ಯಗಳು ದೊರೆಯುತ್ತಿರುವುದು "ಮನೆಯಿಂದಲೇ ಕೆಲಸ"ವೆಂಬ ಹೊಸ ಪದ್ಧತಿ ಬೇರೂರಲು ಸಹಾಯಕವಾಗಿದೆ' ಎಂದನು. 

'ಮನೆಯಿಂದಲೇ ಕೆಲಸವೆಂಬ ಹೊಸ ಪದ್ಧತಿ ಸಣ್ಣ ಪಟ್ಟಣಗಳ ಪಾಲಿಗೆ ವರವಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ವಿಷಯದ ಬಗ್ಗೆ ಸ್ವಲ್ಪ ವಿವರಿಸಿ,' ಎಂದು ಕೇಳಿದ ರೋಹಿಣಿಯಲ್ಲಿ ಹೆಚ್ಚಿನ ಉತ್ಸುಕತೆಯಿತ್ತು. 

ಸೂಕ್ಷ್ಮಾ ಪ್ರತಿಕ್ರಿಯಿಸುತ್ತಾ, 'ನಿನ್ನ ಅನಿಸಿಕೆ ಸರಿ ರೋಹಿಣಿ. ಸಣ್ಣ ಪಟ್ಟಣಗಳಲ್ಲಿನ ಉದ್ಯೋಗಿಗಳು ಕಮ್ಮಿ ಸಂಬಳಕ್ಕೆ ದುಡಿಯಲು ತಯಾರಿರುವುದು, ಕಂಪನಿಗಳ ಖರ್ಚನ್ನು ತಗ್ಗಿಸುವಲ್ಲಿ ಸಹಾಯಕವಾಗಿದೆ. ಸಣ್ಣ ಪಟ್ಟಣಗಳಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಅವರುಗಳು ಕೆಲಸವನ್ನು ಆಗಾಗ್ಗೆ ಬದಲಿಸುವ ಸಾಧ್ಯತೆ ಕಮ್ಮಿಯಿರುತ್ತದೆ. ಕೋವಿಡ್ನ೦ತರದ ದಿನಗಳಲ್ಲಿ ಐ.ಟಿ. ಕ್ಷೇತ್ರ ತನ್ನ ಕಾರ್ಯಕ್ಷೇತ್ರವನ್ನು ಸಣ್ಣ ಪಟ್ಟಣಗಳೆಡೆಗೆ, ಇನ್ನೂ ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರಿಸಿದರೂ ಆಶ್ಚರ್ಯವಿಲ್ಲ. ಆರ್ಥಿಕ ತಜ್ಞರುಗಳ ಪ್ರಕಾರ, ವಿವಿಧ ಉದ್ಯಮಗಳ ಕಾರ್ಯಕ್ಷೇತ್ರ ಸಣ್ಣ ಪಟ್ಟಣಗಳೆಡೆಗೆ ಸ್ಥಳಾಂತರಗೊಳ್ಳುವುದರಿಂದ, ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತದೆ. ಮತ್ತು ದೇಶದಲ್ಲಿ ಸಂಪತ್ತಿನ ಹಂಚಿಕೆ (wealth distribution)ಯಲ್ಲಿನ ಅಸಮತೋಲನ ಸಾಕಷ್ಟು ಸುಧಾರಿತವಾಗುತ್ತದೆ' ಎಂದಳು. 

ಪ್ರತಾಪ್ ಮಾತನಾಡುತ್ತಾ, 'ಹಲವಾರು ಉದ್ಯಮಗಳ ಕಾರ್ಯಕ್ಷೇತ್ರದ ವಿಸ್ತರಣೆ ಸಣ್ಣ ಪಟ್ಟಣಗಳ ಕಡೆಗೆ ಆಗುತ್ತಿರುವುದು ಒಂದು ಉತ್ತಮ ಬೆಳವಣಿಗೆ.  ಅದು ಭಾರೀ ನಗರಗಳ ಕಡೆಗೆ ಸತತವಾಗಿ ನಡೆಯುತ್ತಿರುವ "ವಲಸೆ"ಯನ್ನು ಸಾಕಷ್ಟು ತಪ್ಪಿಸುತ್ತಿದೆ. ಸಣ್ಣ ಪಟ್ಟಣಗಳಲ್ಲಿನ ಬಾಡಿಗೆಗಳು ಕಮ್ಮಿಯಿದ್ದು, ಅದು  ಉದ್ಯಮಗಳು ತಮ್ಮ ವೆಚ್ಚವನ್ನು ತಗ್ಗಿಸುವಲ್ಲಿ  ಸಹಾಯಕವಾಗಿದೆ.' 

'ಮನೆಯಿಂದಲೇ ಕೆಲಸವೇನೋ ಸರಿ. ಆದರೆ "ಮನೆಯ ಕೆಲಸ"ವನ್ನ್ಯಾರು ನಿರ್ವಹಿಸಿಯುತ್ತಾರೆ?' ರೋಹಿಣಿಯ ಪ್ರಶ್ನೆಯಲ್ಲಿ ವಿಶೇಷ ಕಾಳಜಿಯಿತ್ತು. 

ಈ ನಡುವೆ, ಸೂಕ್ಷ್ಮಾಳ ತಾಯಿಯಾದ 'ಪ್ರಭಾ'ರ ಮಧ್ಯೆ ಪ್ರವೇಶ ಸ್ವಲ್ಪ ಅಚ್ಚರಿ ಮೂಡಿಸಿತ್ತು. ಪ್ರಭಾರವರು  ಸುಮಾರು ೭೦ ವಯಸ್ಸಿನ ಹಿರಿಯ ಮಹಿಳೆಯಾಗಿದ್ದರು. ಲ್ಯಾಪ್ಟಾಪ್ ಪರದೆಯ ಮೇಲೆ ಪ್ರಭಾರವರನ್ನು ನೋಡಿದ ರೋಹಿಣಿ, 'ನಮಸ್ತೆ ಅಮ್ಮ. ತಾವೂ ಏನನ್ನೋ ಹೇಳಲು ಇಷ್ಟ ಪಡುತ್ತಿರುವಂತಿದೆ. ದಯವಿಟ್ಟು ಮಾತನಾಡಿ' ಎಂದಳು. 

'ರೋಹಿಣಿ ಮಗಳೇ, ನಿನ್ನ ಬಗ್ಗೆ ನಾನು ಸಾಕಷ್ಟು ಕೇಳಿದ್ದೇನೆ. ನನ್ನ ಮಗಳು ಮತ್ತು ನನ್ನಳಿಯ ಮನೆಯಿಂದಲೇ ಕೆಲಸ ಆರಂಭಿಸಿದಾಗಿನಿಂದ, ಮನೆಯಲ್ಲೊಂದು ಹೊಸ ಶಾಂತಿಯುಂಟಾಗಿದೆ. ಮಕ್ಕಳೂ ಸಂತೋಷವಾಗಿದ್ದಾರೆ. ದಿನದ ವೇಳೆ ಬಿಡುವಾಗಿರುವ ನನ್ನಳಿಯ, ನನಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾನೆ. ನನ್ನ ಅಡುಗೆಗಳೆಂದರೆ ನನ್ನ ಮಗಳಿಗೆ ಇಷ್ಟ. ಆದರೆ ಈ ಪ್ರತಾಪ್ ಸುಮ್ಮನಿರುವ ಮನುಷ್ಯನಲ್ಲ. ಹೊಸ ಹೊಸ ಅಡುಗೆಗಳ ಪ್ರಯೋಗ ಮಾಡುವುದೆಂದರೆ ಅವನಿಗಿಷ್ಟ. ಆ ರೀತಿಯ ಹೊಸ ಪ್ರಯೋಗಗಳಿಂದ ಸೂಕ್ಷ್ಮಾ ಮತ್ತು ಪ್ರತಾಪರ ನಡುವೆ ಆಗಾಗ್ಗೆ ಪುಟ್ಟ ಜಗಳಗಳೇ ಭುಗಿಲೇಳುತ್ತವೆ! ಆದರೆ ಅವುಗಳನ್ನೆಲ್ಲ ಜಗಳ ಎನ್ನುವದಕ್ಕಿಂತಾ, ಅವರಿಬ್ಬರ ಒಡನಾಟದ ಮುಂದುವರೆದ ಭಾಗವೆನ್ನಬಹುದು. ಆ ಪುಟ್ಟ ಜಗಳಗಳನ್ನು ನೋಡುವುದೆಂದರೆ, ನನಗೆ ಮತ್ತು ನನ್ನ ಮೊಮ್ಮಕ್ಕಳಿಗೆ ಖುಷಿ. "ಮನೆಯಿಂದಲೇ ಕೆಲಸ"ವೆಂಬ ಹೊಸ ಪದ್ಧತಿ ಸ್ವಾಗತಾರ್ಹವಾದುದೇ. ಆದರೆ ಅದರ ಯಶಸ್ಸಿಗೆ ಮನೆಯ ಎಲ್ಲಾ ಸದಸ್ಯರುಗಳು ಕೊಂಚ "ತ್ಯಾಗ"ವನ್ನು ಮಾಡಬೇಕಾಗುತ್ತದೆ. ಹಾಗಾಗಿ  "ಮನೆಯಿಂದಲೇ  ಕೆಲಸ"ವೆಂಬ ಹೊಸ ಪದ್ಧತಿಯ ಯಶಸ್ಸಿನ ಗೌರವ, ಮನೆಯ ಸದಸ್ಯರೆಲ್ಲರಿಗೂ  ಕೂಡ ದೊರೆಯಬೇಕು. ಈ ಪದ್ಧತಿಯೇ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಹೋದರೆ, ನನ್ನ ಅಭ್ಯಂತರಗಳೇನೂ ಇಲ್ಲ' ಎಂದು ಸಮಾಧಾನ ವ್ಯಕ್ತ ಪಡಿಸಿದವರು ಪ್ರಭಾ. 

ಪ್ರತಾಪ ಮಧ್ಯೆ ಪ್ರವೇಶಿಸಿ, 'ನಮ್ಮತ್ತೆಯವರ ಮಾತುಗಳು ಬಹುಪಾಲಿಗೆ ಸರಿ.  ಆದರೆ ಮನೆಯಿಂದಲೇ ಕೆಲಸವೆಂಬ ಪದ್ಧತಿಯಿಂದ ನಮ್ಮಂತಹ ಯುವಕರುಗಳು ಮನೆಯಲ್ಲೇ ಕೂರುವಂತಾಗಿ, ಒಂದು ರೀತಿಯ "ಜಡ್ಡು ಹಿಡಿದ ಭಾವ" ನಮ್ಮನ್ನು ಕಾಡುತ್ತಿದೆ.  ಮನೆಯ ಹೊರಗಿನ ಸ್ನೇಹಿತರುಗಳೊಂದಿಗೆ ನಮ್ಮ ನೇರ ಒಡನಾಟ ತಪ್ಪಿಹೋಗಿ ಬೇಸರವೆನಿಸುತ್ತಿದೆ. ಇದರಿಂದ ಹೊಸ ನೌಕರರು  "ವೃತ್ತಿಪರರಾಗಿ ಸರ್ವತೋಮುಖ" ಅಭಿವೃದ್ಧಿಹೊಂದುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ನನಗನಿಸುತ್ತದೆ. ಮೇಲಿನ ಅಧಿಕಾರಿಗಳಿಂದ ನಮ್ಮಗಳ ಮೇಲಿರುವ ಒತ್ತಡ ಕಮ್ಮಿಯೇನಲ್ಲ. "ಕೆಲಸದ ಕರೆ"ಗಳು ಯಾವಾಗೆಂದರವಾಗ ಬರಬಹುದು. ಕೆಲವೊಮ್ಮೆ ನಮ್ಮ ಸ್ವಾತಂತ್ರ್ಯ ಹಾಗೂ ನೆಮ್ಮದಿಗಳನ್ನೇ ಕಳೆದುಕೊಂಡಿದ್ದೇವೋ ಎನಿಸುತ್ತದೆ. ಮನೆಗಳ ಶಾಂತಿ ಕದಡಿ ಹೋಗಿರುವುದು ಸುಳ್ಳಲ್ಲ.  ನಮ್ಮಗಳಿಗಂತೂ ಇಂತಹ ಬದಲಾದ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವ ಅನಿವಾರ್ಯತೆ ಉಂಟಾಗಿ ಹೋಗಿದೆ ಎಂದೆನಿಸುತ್ತದೆ' ಎಂದನು. 

'ನಿಮ್ಮಗಳ ಕಷ್ಟ ನನಗರ್ಥವಾಗುತ್ತದೆ. ಆದರೂ ತಂತ್ರಜ್ಞಾನ ತಂದೊಡ್ಡುವ ಬದಲಾವಣೆಗಳನ್ನು ನಾವುಗಳು ತಡೆಯಲಾರೆವು ಎಂಬ ಮಾತುಗಳನ್ನು ಕೇಳಿದ್ದೇನೆ. ಮುಂದಿನ ದಿನಗಳಲ್ಲಿ ಉದ್ಯಮಗಳ ಕಾರ್ಯವೈಖರಿ ಹೇಗಿರುತ್ತದೆ?' ಎಂದ ರೋಹಿಣಿಯ ಪ್ರಶ್ನೆ, ಪ್ರತಾಪ್ ಮತ್ತು ರೋಹಿಣಿ, ಇಬ್ಬರನ್ನು ಕೆದಕಿತ್ತು. 

ಪ್ರತಾಪ್ ಉತ್ತರಿಸುತ್ತಾ, 'ಮನೆಯಿಂದಲೇ ಕೆಲಸ, ಆಗೀಗೊಮ್ಮೆ ಆಫೀಸಿನ ನೇರ ಭೇಟಿಗಳು ಮತ್ತು ಹೊರಗುತ್ತಿಗೆಗಳು (outsourcing) ಮುಂತಾದ ಹೊಸ ತಂತ್ರಗಳ ಸಮ್ಮಿಶ್ರಣವೇ ಮುಂದಿನ ದಿನಗಳ ವ್ಯವಸ್ಥೆಯ  ಅವಿಭಾಜ್ಯ ಅಂಗಗಳಾಗಿ ಹೋಗುತ್ತವೆ ಎಂದು ನನಗನಿಸುತ್ತದೆ. ಹೊರ ದೇಶಗಳಲ್ಲಿ ನೆಲಸಿರುವ, ನಮ್ಮ ಹಲವಾರು ಅನಿವಾಸಿ ಭಾರತೀಯ (Non-resident Indians - NRIs)ರುಗಳನ್ನೀಗ, ಅಲ್ಲಿನ ಅನಿಶ್ಚತತೆಗಳು ಕಾಡಿವೆ.  ಹಾಗಾಗಿ ಅವರುಗಳೀಗ ಭಾರತದ ಕಡೆ ಮುಖ ಮಾಡುವಂತಾಗಿದೆ. ಅನಿವಾಸಿ ಭಾರತೀಯರುಗಳಲ್ಲಿ ಹಲವರು ತಮ್ಮ ವಿದೇಶದ ಕೆಲಸಗಳನ್ನು ಕಳೆದುಕೊಂಡಿದ್ದಾರೆ. "ಅಮೇರಿಕಾ -ಅಮೇರಿಕಾ" ಎಂದು ತುಡಿಯುತ್ತಿದ್ದ ನಮ್ಮವರುಗಳಿಗೆ ಈಗ, ಸ್ವದೇಶದ ನೆಮ್ಮದಿಯ  ಸತ್ಯದರ್ಶನವಾಗುತ್ತಿದೆ ಎಂದು ನನಿಗನಿಸುತ್ತಿದೆ. ನೌಕರರು, ವಲಸಿಗರು, ಅನಿವಾಸಿ ಭಾರತೀಯರು, ಉದ್ಯಮಿಗಳು, ಬಹುರಾಷ್ಟ್ರೀಯ ಕಂಪನಿಗಳು  ಮುಂತಾದ ಎಲ್ಲಾ ಪಾಲುದಾರರಿಗೂ (stakeholders) ಕೋವಿಡನಂತರದ ಬೆಳವಣಿಗೆಗಳು "ಗೆಲ್ಲು ಮತ್ತು ಗೆಲ್ಲಿಸು (win-win)" ಎಂಬ ಸ್ವಾಗತಾರ್ಹ ಸನ್ನಿವೇಶವನ್ನು ಕಲ್ಪಿಸಿಕೊಡುತ್ತಿದೆ ಎಂಬುದು ನನ್ನ ಊಹೆ' ಎಂದನು.   

ಸಾಕಷ್ಟು ಅನುಭವಗಳನ್ನು ಹಂಚಿಕೊಂಡ ಪ್ರತಾಪ, ಪ್ರಭಾ ಮತ್ತು ಸೂಕ್ಷ್ಮಾರಿಗೆ  ವಂದಿಸಿ, ಕರೆಯನ್ನು ಕೊನೆಗೊಳಿಸಿದ ರೋಹಿಣಿ, 'ಪ್ರತಿಯೊಂದು ಬಿಕ್ಕಟ್ಟು (crisis) ಬದಲಾವಣೆಗಳನ್ನು ತರುತ್ತದೆ ಮತ್ತು ನಮಗೆ ಹೊಸ ಪಾಠಗಳನ್ನು ಕಲಿಸುತ್ತದೆ. ಕೋವಿಡ್ ಮಹಾಮಾರಿ ಇಡೀ ಪ್ರಪಂಚವನ್ನೇ ನಡುಗಿಸಿದೆ. ಮುಂದೇನು, ಕೋವಿಡ್ ಎಂದಿಗೆ ಪರಿಸಮಾಪ್ತಿಗೊಳ್ಳಬಹುದು ಎಂಬ ಆತಂಕ ಎಲ್ಲರನ್ನೂ ಈಗಲೂ ಕಾಡುತ್ತಿದೆ. ಕೋವಿಡನಂತಹ ವೈರಾಣುವಿನ ಹೊಸ ಹೊಸ ದಾಳಿಗಳು, ಮುಂದಿನ ದಿನಗಳಲ್ಲಿ ಮನುಕುಲವನ್ನು ಕಾಡುವುದು ಖಚಿತ. ಅಂತಹ ಸವಾಲುಗಳನ್ನು ನಿಭಾಯಿಸುತ್ತಾ ಮುನ್ನಡೆಯುವ ಹೊಸ ಜೀವನ ಕ್ರಮಗಳನ್ನು ನಾವುಗಳು ಅಳವಡಿಸಿಕೊಳ್ಳುವುದು ಅನಿವಾರ್ಯ' ಎಂದು ತನ್ನ ಸಂಶೋಧನಾ ಟಿಪ್ಪಣಿಗಳನ್ನು ಬರೆದುಕೊಂಡಳು. 

ಅಂತಿಮವಾದರೂ, ಅತಿ ಪ್ರಮುಖವಾದ ಮತ್ತೊಂದು ವಿಷಯವನ್ನು ರೋಹಿಣಿ ತನ್ನ 'ಕೋವಿಡ್ ಕಲಿ ಸಿದ ಪಾಠ'ಗಳು ಸರಣಿಯಲ್ಲಿ ಸೇರಿಸಲಿಚ್ಛಿಸಿದ್ದಳು. 'ಕೋವಿಡ್ ಮಹಾಮಾರಿಯ ಬಿಕ್ಕಟ್ಟು, ಸ್ವಾಭಾವಿಕವಾಗಿ ಆಗಿದ್ದೋ ಅಥವಾ ಯಾರೋ ದುಷ್ಕರ್ಮಿಗಳು ನೆಡೆಸಿದ ಜೈವಿಕಾಸ್ತ್ರದ ಪ್ರಯೋಗದ ಪರಿಣಾಮವೋ ತಿಳಿಯದು.  ವಿಶ್ವದ ಜನತೆಗೀಗ ಜೈವೀಕಾಸ್ತ್ರಗಳು ಉಂಟು ಮಾಡಬಹುದಾದ ಅನಾಹುತಗಳ ಅರಿವು ಉಂಟಾಗಿದೆ. ಜೈವೀಕಾಸ್ತ್ರಗಳ ವಿನಾಶಕಾರಿ ಶಕ್ತಿಯ ಮುಂದೆ ಅಣ್ವಸ್ತ್ರಗಳೇ ಮಕ್ಕಳಾಟಿಗೆಗಳಂತೆ ಕಾಣಿಸುತ್ತಿವೆ! ಮೊದಲ ಮಹಾಯುದ್ಧದ ಅಂತ್ಯದ ಸಮಯದಲ್ಲೇ, ವಿಶ್ವ ನಾಯಕರುಗಳು, ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಬಳಕೆಯನ್ನು ನಿಷೇಸಿದ್ದರು. ಈ ಮುಂಚೆ ಘೋಷಿಸಿದ್ದ ನಿಷೇಧಗಳ ಪುನರುಚ್ಛಾರದ ನಿರ್ಣಯಗಳನ್ನು ೧೯೭೨ ಮತ್ತು ೧೯೯೩ರಲ್ಲೂ ವಿಶ್ವದ ನಾಯಕರುಗಳು ಅನುಮೋದಿಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನಗಳು ಮುನ್ನಡೆಯುತ್ತಿರುವಂತೆ, ವಿಶ್ವದ ಬಲಶಾಲಿ ರಾಷ್ಟ್ರಗಳ ನಡುವಿನ ತಿಕ್ಕಾಟ ಹೆಚ್ಚಾಗುತ್ತಾ ಸಾಗುತ್ತಿದೆ. ಹಾಗಾಗಿ ಜೈವೀಕಾಸ್ತ್ರಗಳ ಬಳಕೆಯಂತಹ ನೀಚ ಕೃತ್ಯಗಳು ಮುಂಬರುವ ದಿನಗಳಲ್ಲಿ ನಡೆಯಲಾರವು ಎಂದು ಹೇಳಲಾಗುದು. ಈ ಸುಂದರ ವಿಶ್ವವನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಶ್ವದ ಮುಂಚೂಣಿಯಲ್ಲಿರುವ ನಮ್ಮ ನಾಯಕರುಗಳು ಈ ನಿಟ್ಟಿನಲ್ಲಿ ಯೋಚಿಸಬಲ್ಲರೇ? ಸಂಯಮವನ್ನು ಕಾಪಾಡಿಕೊಳ್ಳಬಲ್ಲರೇ? ಎಂಬುದೇ ಜನಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆ' ಎಂದು ದಾಖಲಿಸಿದ ರೋಹಿಣಿ, ಆತಂಕಿತಳಾಗಿದ್ದಳು. 

***


  











 

 

 




 






Sunday 2 May 2021

Itanikante mari

Om Namo Venkateshayanamaha!

Om Namo Narasimhayanamaha!!

Om Namo Sree Ramayanamaha!!!

Then sing all following three lines.

My humble pranams to all of you.  Today I will be taking you all through a harikatha of Dashavatharam.

 

 Itanikante mari daivamu kanamu yekkada vedakina nitade

ಇವನಿಗಾರೂ ಸರಿ ದೈವವ ಕಾಣೆನು, ಎಲ್ಲೆಲ್ಲಿ ಅರಸಲು ಇವನೇ 

ಶ್ರೀವೆಂಕಟ ಪ್ರಭುವು

 

Atisayamagu mahimalato velasenu annitikadharamutane

ಅತಿಶಯ ಮಹಿಮೆಗಳಲ್ಲಿ ಮೆರೆಯುವ, ಎಲ್ಲರಿಗಾಧರನು ತಾನೇ 
Itanikante mari daivamu kanamu yekkada vedakina nitade

 

 

Yes, Just now I have sung the pallavi lines of a great composition of the greatest Telugu composer of the 15th century, Saint Annamacharya. Annamacharya, who was popularly called Annamayya was a contemporary of the Kannada composer, Saint Purandaradasa. 

 

Annamacharya was great devotee of the Tirupati Lord Sri Venkateswara and has composed hundreds of keertanas in his praise. Popularity of his Kritis was rekindled when Bharata Ratna M.S.Subbulakshmi sang his selected Kritis under a project of Tirupati Temple. Remember the kriti

 

Sreemannarayana, Sreemannarayana (two lines.......)

 

When life story of the great composer was made into a Telugu film 

'Annamayya' around 1993, the film became a superhit! Remember a song from that film.....

 

(lines of a hit song from Annamayya)

 

 

 

In the present composition, Annamacharya sings.....

 

Itanikante mari daivamu kanamu yekkada vedakina nitade (sing one line)

ಇವನಿಗಾರೂ ಸರಿ ದೈವವ ಕಾಣೆನು, ಎಲ್ಲೆಲ್ಲಿ ಅರಸಲು ಇವನೇ 

ಶ್ರೀವೆಂಕಟ ಪ್ರಭುವು

Annamacharya says ‘I searched among all Gods.  But everywhere I can find only my Lord.

And He is "Sri Venkata vibhudu (singing)". There is Lord Venkateshwara everywhere and nobody else is seen’

For Annamayya, Lord Venkateswara is same as the ultimate God Maha Vishnu!  

Atisayamagu mahimalato velasenu annitikadharamutane (Sing this line again)

ಅತಿಶಯ ಮಹಿಮೆಗಳಲ್ಲಿ ಮೆರೆಯುವ, ಎಲ್ಲರಿಗಾಧರನು ತಾನೇ

He is capable of creating all wonders and he is the protector of all beings on this universe. 

 

At present the entire world is reeling under the worst effect of the pandemic 'Covid.'  It is covid, covid, covid everywhere. Critics may ask.........Can Lord Venkateshwara cure Covid? 

 

If invisible virus can give us so much of trouble, why not the invisible God cure all our troubles? I assure you my friends, that if we people appeal to the Lord Venkateswara, he can save us from the dreaded covid within no time! But do we have the firm faith in his powers? Do we have the faith in the power of prayer? I have the confidence that 'it works'. 

 


Itanikante mari daivamu kanamu yekkada vedakina nitade (Sing all three lines,

 

and continue to sing two more lines.............) 

end*****end of first part

-0-0-0-0-0-0-0-0-


Begin second part straight away singing Itanikantimari, nd go on till the line which describes matsyavatara.  (Later on we can do suitable editing)

      

Madijaladhulanokadaivamu vedakina matsyavatarambithadu (sing one line only)

ಮತಿಜಾಲದೊಳು ನಾ ದೈವವ ಹುಡುಕಿದ ಮತ್ಸ್ಯಾವತಾರವು ಇವನು 

 Annamacharya continues to narrate us about the searches he made to find God.  He searched in the deep oceans. He could find Lord Venkateshwara in the form of Matsyavatara! Long long ago, when the world was submerged because of a huge tsunami, Lord Vishnu incarnated in the form of a ‘matsya’, the huge fish and pulled all living beings and essentials of nature towards safety.

 

Repeat.....Madijaladhulano.....(sing two lines to pick adikoorma.....)


Adivo pathalamamdu vedakithe adikoorma mee vishnudu

ಕಂಡೆ ಪಾತಾಳದಲ್ಲಿ ಶೋಧಿಸಿ, ಆದಿ ಕೂರ್ಮನೀ ವಿಷ್ಣುವು 

The great saint now takes us to the deepest point of the universe, ie. Patala, where he could show us Lord Venkateswara in the form of adikoorma. We all know that devas and asuras chose to churn the ocean of milk (ksheera sagara)  using manadara parvata as the churning stick and vasuki, the supreme 

serpant as the huge rope, Mandara parvata started sinking.  Lord had to incarnate again as adikoorma, huge tortoise to lift the Manadara parvata. 

Sing four lines now starting from madijala………..


Podigoni yadavula vedaki choochite bhuvarahamanikontimi

ದಟ್ಟವಿಯೊಳು ನಾ ತಡಕಿದರೆ, ಭೂವರಾಹನನೇ ಖಂಡೇನು

When the demon Hiranyaksha, the brother of Hiranya Kashipu took away the mother earth and hid it in the ocean, Lord Vishnu had to incarnate again as the ‘bhuvaraha,’ the huge wild boar to lift the earth!

 

 
Chedaraka kondala guhala vedakite srinarasimhudu unnadu

Annamacharya now takes us inside valleys of huge hills.  He could show us Lord Venkateswara again in the form of Narasimha.  When the demon Hiranya Kashipu became all powerful by obtaining various blessings from Lord Brahma, and started playing havoc with Vishnu bhaktas and innocents,  Lord Vishnu had to incarnate as Narasimha (neither a lion, nor a man, but a combination of both). Narasimha tore the belley of the demon using his razor sharp nails, the most unconventional weapon. Furious Narasimha calmed down only when the boy devotee Prahlada prayed.

(Now you can sing only the first stanza of the following stotram composed by Saint Shankaracharya. Use the same tune. Make appropriate hand gestures.).

https://timesofindia.indiatimes.com/videos/lifestyle/devotional/kannada/watch-popular-kannada-devotional-video-song-sri-lakshmi-narasimha-karavalamba-stotram-popular-kannada-devotional-songs-of-2020-kannada-bhakti-songs-devotional-songs-bhajans-and-pooja-aarti-songs/videoshow/77978954.cms

(You can continued narration).  That was a composition by Saint Shankaracharya, popularly known as Karavalambha stotram. Pleased Narasimha blessed Prahlada and annointed him as the King!

end*******end of 2nd part

ಬೆಟ್ಟಗುಡ್ಡಗಳ ಗುಹೆಯಲ್ಲಿ ಬೆದಕಿದೆ, ನರಸಿಂಹನೇ ಇರುವನು 

-0-0-0-0-0-0-0-

start from.......

My humble namaskarams to all of you (folded hands).

I welcome you all to the second part of my harikatha on Dashavatara.

We were looking through Dashavatara of Mahavishnu, as narrated by Saint Annamacharya in one of his ever green kritis.

Start from....(with tala and action in the other hand)

itanikantimari..................and sing all pallavi lines with action.

And then pick up from below part.....

 Chedaraka kondala guhala vedakite srinarasimhudu unnadu

Telisi bhuna bhontharamuna vedakina trivikramakruti nilichinadi (sing throughout with tala and action in the other hand).

Annamacharya says, after searching through caves of valleys, I searched in the NABHOMANDALA, the vast sky (hand action in the form of gradual stretching of hands and looking up) and I again found Lord Venkateswara in the form of the gigantic Trivikrama! (hand action, waving both hands from top to bottom, and looking from top to bottom). When the most popular and generous King Maha Bali (hand action with right fist up)  became all powerful, Lord Vishnu had to incarnate as VAMANA  (one hand action, showing small sign). Little Vamana grew in size to the size of gigantic Trivikrama to contain King Maha Bali, and grant him immortality, by trampling him down to Patala.(show action of trampling down using your right hand).

 now sing following two lines....... (no tala and hand action only)

Telisi bhuna bhontharamuna vedakina trivikramakruti nilichinadi 

ತಿಳಿದು ನಭೋಮಂಡಲದಿ ಹುಡುಕಿದೆ ತ್ರಿವಿಕ್ರಮಕೃತಿ ನಿಂತ್ತಿತ್ತು 

Paluveerulalo vedakichoochite parasuramudokadainadu

ಹಲವು ವೀರರನ್ನೆಶ್ವಿಸಿ ನೋಡಿದೆ, ಪರಶುರಾಮನೊಬ್ಬನಿರುವನು 

Annamacharya then says that he searched among all great warriors.  Again there, he found Lord Venkateswara in the form of greatest warrior Parashurama (show the action of axe placed on your right shoulder. eyes should indicate the warrior look), who transferred all his powers to Lord Rama. (show hand action of transferring).

now start singing all following three lines with tala and action in one hand.  appropriate expression in eye.............

elisi bhuna bhontharamuna vedakina trivikramakruti nilichinadi 

ತಿಳಿದು ನಭೋಮಂಡಲದಿ ಹುಡುಕಿದೆ ತ್ರಿವಿಕ್ರಮಕೃತಿ ನಿಂತ್ತಿತ್ತು 

Paluveerulalo vedakichoochite parasuramudokadainadu

ಹಲವು ವೀರರನ್ನೆಶ್ವಿಸಿ ನೋಡಿದೆಪರಶುರಾಮನೊಬ್ಬನಿರುವನು 

Talapuna shivudunu parvati vedakina taraka brahmamu raghavudu

What I can say about Ramayana? (hand action)........which is the greatest epic on this earth.  Ramayana was originally written in sanskrit by Saint Valmiki and subsequently thousands of poets (hand action) have written Ramayana in almost all languages of the world.  Kannada poet Lakshminarayana K, who is my grandfather (show action by touching your heart),  describes Lord Rama.

ವಾಲ್ಮೀಕಿ ರಾಮಾಯಣದ  ಹರಿಕಾರನಾದ 

ಕಬೀರರ ಕಾವ್ಯಾಮೃತಕೆ ತಾ ಧಾರೆಯಾದ 

ತ್ಯಾಗರಾಜರಿಗೆ ಜಗದಾನಂದ ಕಾರಕನಾದ 

ರಾಮಾಯಣ ದರ್ಶನದಿ ಕನ್ನಡದ ಕಂಪಾದ 

ನಮ್ಮ ಭಾವೈಕ್ಯತೆಯ ಗುಪ್ತಗಾಮಿನಿ ಅವನು 

(while reciting above poem, follow hand action as I have done in my video)

Thus Lord Rama is the spirit which binds "we Indians" (hand action touching the heart with both hands) together with the spirit of 'Unity in diversity'. (unity - show by hand action.  Right first up). (you can recite the with hand actions like I have done in the video sent.  You need not byheart this.  You can read from book, like I have read.  Just copy me it is enough.)

And Lord Rama was a great warrior, Maha veera! (show hand action)  He was not only capable of fighting for himself, but could lead a mighty army. (hand action all through).   Vedanta deshikar, the Tamil scholar describes the varlor of lord Rama in his Raghuveeragadhyam!

(Sing raghuveeragadhyam with action upto 'vimochana')

Thus Lord Rama (folded hands) is our role model and we respect him as MARYADAPURUSHOTHAMA, the ultimate gentleman.

Ramayan is also remembered for another great God HANUMAAN (your right hand will go near your right arm, as if you are holding a mace (GADE). glowing eyes and hanuman type of mouth). Even Lord Rama could not have conquered Ravana, but for the heroic acts of Hanumaan. 

We children are carried away by heroic acts of batsman, iron man, spiderman, superman and so on (action for each .......man).  But our real superman is our HANUMAAN (folded hands)! Let's pray Hanuman to bless us with strength and wisdom.

Shankara suvana, Kesari nandan

...........................

....Rama laxmana jaanaki jai bolo.....

(Soorygayathri style)


end of part 3

-0-0-0-0-0-0-0-

Start with 'Talapuna shivudunu parvati vedakina taraka brahmamu raghavudu

ಶಿವನ ಲೇಹರಿಯಲ್ಲಿ ಪಾವತಿ ಅರಸಿದ ತಾರಕ ಬ್ರಹ್ಮನೇ ರಾಘವನು 
Kelakula naavula mandala vedakina krishnudu ramudu nainaru

ಗೋವುಗಳ ಹಿಂಡಾಲಿ ಅರಸಿದರೆ ಬಲರಾಮ ಕೃಷ್ಣರೇ ಇರುವರು 

Itanikante mari daivamu kanamu yekkada vedakina nitade

and go on till 'annitikadaramu taane.......' (sing with tala and action in the other hand)

Annamacharya (Chitike action) now takes us towards Mahavishnu's 8th avatara, the Krishnavatara (flute action). If scholars have described Lord Rama as Maryadapurushothama (folded hands action), I would like to describe Lord Krishna, as CHATURA PURUSHOTHAMA (pointed right hand finger touching your head). I only pray to Lord Kirshna to come again today (show hands as if Krishna comes from heaven), to set right our country and its numerous problems (open your hands with action).

How can we visualise (touch your both eyes and open up arms) Lord Krishna? A God-child? A prankster?, Navaneeta Chora (show holding butter in left hand, and show eating in the right hand)?, a model lover, a divine hero or the universal supreme being (show your eye and hand action as if you have seen his vishwaroopa)!

Oothukaadu Venkata Subba Iyer, a great devotee of Lord Krishna welcomes Him  this way. 

taaLam: aadi
Composer: OotukkaaDu VenkaTasubbaiyyar

pallavi

swaagatam krishNaa caraNaagatam krishNaa
madhuraapuri sadanaa mridu vadanaa madhusoodana iha
(swaagatam)

anupallavi

bOga dapta sulabaa supushpa gandha kalaba
kastoori tilaka mahiba mama kaanta nanda gOpa kandha
(swaagatam)

sadhwini koppa style

https://www.youtube.com/watch?v=KQiYXXwPDYw&ab_channel=SadwiniKoppa

Krishna was not only the loving child of Yashoda (look at your lap, as if child krishna is resting on your lap, hold the child's head and tap (ತಟ್ಟುವುದು) him with the right hand), but he was the loving child of all mothers of nanda gokula. He was not only the lover who charmed Radha (show flute holding action), but he was the lover for 16,000 gopikas.

Now sing the CHARANA OF THE SONG AND COMPLETE IT with tala and hand action.

Lord Krishna also saved the world by killing (hand action) demons like Kamsa. He also helped pandavas to defeat the wicked Duryodhana and establish the rule of 'dharma.' (thumbs up action).

When confused Arjuna, declined to fight, Lord Krishna preached him the BHAGAVADGEETHA and showed him his vishwaroopa (hand to go up and eye action looking up).

Yada yada hi dharmasya glaanirbhavati bhaarat
Abhyutthaanam adharmasya tadaatmaanam srijaamyaham
Paritranaay saadhunaam vinaashaay cha dushkritaam
Dharm sansthaapanaarthaay sambhavaami yuge yuge

https://www.youtube.com/watch?v=LEyy4C50b4Q&ab_channel=VedicBox

Mahabharat style

This message is relevant for all youngster of today like all of us (show hands all round). "Keep doing your duties (point fingers towards the audience), don't be bothered about the results (waving of hands) . I will take care of all of you (protection action with both hands (like you have shown in first part)" Lord Krishna has taught us the way of life.

Now sing 

Kelakula naavula mandala vedakina krishnudu ramudu nainaru

Ponchi asurakanthalalo vedakina buddhavataram bainadu

ಅಸುರ ಸತಿಯರಲಿ ಹುಡುಕಿದರೆ, ಬೌಧಾವತರವು ಇವನೇ 
Minchina kaalamu kadapata vedakina midati kalkyavataramu

ಮಿಂಚಿದ ಕಾಲದಲಿ ಉದಿಸಿದ ಕಲ್ಕ್ಯವತಾರವು ಇವನೇ 
Anchela jeevula lopala vedakina antharyamai merisenu

ಸರ್ವಜೀವಿ ಅಂತರ್ಯವ ಶೋಧಿಸಿ, ದೊರಕಿದ ಜ್ಯೋತಿಯು  ಈತನೇ 
Yenchuka ihamuna paramuna vedakina eethade Sri Venkatavibhudu

ಇಹದಲಿ ಪರದಲಿ ಅರಸಿದರೆ ಇವನೇ ಶ್ರೀ ವೆಂಕಟ ಪ್ರಭುವು 

Itanikante mari daivamu kanamu yekkada vedakina nitade

Whether it is buddhavatara or Kalkyavatara, It is Lord venkateswara everywhere. Let Lord Venkateswara who has appeared on this earth in the form of DASHAVATHARAS, bless us all

Now sing the mangalam.  Ajji has sung and sent the mangalam. Sing the same way. (with action on one hand folding hands towards the end three lines).

-0-0-0-0-0-0-THE END-0-0-0-0-0-0-0-