ಮುದಕಾರಾರ್ಥ -----------------------
---------------------------------------------------------------------------------------
ಎಲ್ಲರಿಗೂ ನಮಸ್ಕಾರ.
"ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ" ಅವರ ಹರಿಕಥೆಗೆ ತಮಗೆಲ್ಲರಿಗೂ ಸುಸ್ವಾಗತ.
ನಮ್ಮ ತಂಡದ ಇಂದಿನ ಪ್ರಯತ್ನಕ್ಕೆ ತಮ್ಮೆಲ್ಲರ ಆಶೀರ್ವಾದ ಅತಿ ಮುಖ್ಯವಾದದ್ದು. ಕಳೆದ ೧೬ರ೦ದೇ ಭಾರತ ರತ್ನ ಸುಬ್ಬುಲಕ್ಷ್ಮಿ ಅವರ ಜನ್ಮದಿನವಾಗಿತ್ತು. ನಾಲ್ಕು ದಿನ ಹೆಚ್ಚಿಸಿ ಈ ದಿನ ನಮ್ಮ ಶ್ರೀ ರಾಮಲಲಿತ ಕಲಾ ಮಂದಿರದ ಮುಖ್ಯಸ್ಥರಾದ ಶ್ರೀ ಎಂ.ಆರ್.ಯೋಗಾನಂದರವರು ಎಂ.ಎಸ್.ಸುಬ್ಬುಲಕ್ಷ್ಮಿಯವರ ಜನ್ಮದಿನವನ್ನು ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯ. ಹಾಗು ಎಂ.ಎಸ್.ಸುಬ್ಬುಲಕ್ಷ್ಮೀರವರನ್ನು ಕುರಿತಾದ ಹರಿಕಥೆಯನ್ನು ನಡೆಸಿಕೊಡಲು ನಮ್ಮ ತಂಡಕ್ಕೆ ಅವಕಾಶ ನೀಡಿರುವುದು ಇನ್ನೂ ಸಂತೋಷವಾದ ವಿಷಯ. ಶ್ರೀ ರಾಮಲಲಿತಾ ಕಲಾಮಂದಿರದ ಎಲ್ಲಾ ಪದಾಧಿಕಾರಿಕರಿಗಳಿಗೂ ನಮ್ಮ ಹೃತ್ಪೂರ್ವಕ ನಮನಗಳು.
----------------------------------------------------------------------------------------------------------------------------------------
ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಆಆ......
ಮಾಣಿಕ್ಯ ವೀಣಾಂ ಉಪಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ......
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
ಮಾತಂಗಕನ್ಯಾಂ ಮನಸಾಸ್ಮರಾಮೀ....ಈ..
ಮನಸಾಸ್ಮರಾಮೀ
-----------------------------------------------------------------------------------------------------------------------
ಒಂದು ದಿನ ಕೈಲಾಸದಲ್ಲಿ ಸಾಕ್ಷಾತ್ ಪರಮೇಶ್ವರ ಕುಳಿತಿರುತ್ತಾನೆ. ಸರ್ವಾಲಂಕಾರ ಭೂಷಿತೆಯಾದ
ಪಾರ್ವತಿ ತನ್ನ ಮಾಣಿಕ್ಯ ವೀಣೆಯನ್ನು ನುಡಿಸುತ್ತಾ ಇರುತ್ತಾಳೆ. ತನ್ನ ಮಾಣಿಕ್ಯ ವೀಣೆಯ ನಾದ-
ಮಾಧುರ್ಯಕ್ಕೆ ತಾನೇ ಪರವಶಳಾದ ಪಾರ್ವತಿ ಶಿವನಿಗೆ ಹೇಳುತ್ತಳೆ....... "ಪ್ರಭು, ನನ್ನ ಮಾಣಿಕ್ಯ ವೀಣೆಯ ನಾದಮಾಧುರ್ಯಕ್ಕೆ ನಾನು ಮಾರು ಹೋಗಿದ್ದೇನೆ. ಈ ಮಾಣಿಕ್ಯ ವೀಣೆಯ ನಾದ ಮಾಧುರ್ಯ ನನ್ನ ತವರಾದ ಭೂಲೋಕದ ಜನರಿಗೂ ದೊರಕುವಂತಾಗಲಿ. ನನ್ನ ಮಾಣಿಕ್ಯ ವೀಣೆಯನ್ನು ಹೆಣ್ಣೊಂದರ ರೂಪದಲ್ಲಿ ಭೂಲೋಕಕ್ಕೆ ಏಕೆ ಕಳುಹಿಸಬಾರದು?"
ಶಿವನು ಉತ್ತರಿಸುತ್ತಾ "ಎಲ್ಲವನ್ನು ನೀನೆ ನಿರ್ಧಾರ ಮಾಡಿರುತ್ತೀಯ. ನನ್ನ ಅನುಮತಿಯನ್ನು ನೆಪ ಮಾತ್ರಕ್ಕೆ ಕೇಳುತ್ತೀಯಾ. ನಿನ್ನಿಷ್ಟದಂತೆ ನಿನ್ನ ಮಾಣಿಕ್ಯ ವೀಣೆಯ ಅವತಾರ ಹೆಣ್ಣೊಂದರ ರೂಪದಲ್ಲಿ ಭೂಲೋಕದಲ್ಲಾಗಲಿ" ಎಂದು ಅಭಯವಿತ್ತನಂತೆ.
ಪಾರ್ವತಿ ದೇವಿ ಮುಂದುವರೆದು " ಸ್ವಾಮಿ, ನನ್ನ ಈ ಮಾಣಿಕ್ಯ ವೀಣೆ ನಿರ್ಜೀವ ವಸ್ತು. ಇದಕ್ಕೆ ಏನೇನೂ ತಿಳಿಯದು. ಭೂಲೋಕದಲ್ಲಿ ನನ್ನ ಮಾಣಿಕ್ಯ ವೀಣೆಯ ರಕ್ಷಣೆಗಾಗಿ ತಾವೇ ಹೋಗಬೇಕು" ಎನ್ನುತ್ತಾಳೆ. "ತಥಾಸ್ತು" ಎಂದು ಪರಮೇಶ್ವರ ಅನುಮೋದಿಸುತ್ತಾನೆ.
ಕೆಲವು ದಿನಗಳನಂತರ ಪಾರ್ವತಿ ದೇವಿ ನಾರದರನ್ನು ಕರೆದು "ನಾರದರೆ, ನನ್ನ ಮಾಣಿಕ್ಯ ವೀಣೆ, ಲೋಕಕಲ್ಯಾಣಕ್ಕೆಂದು ಭೂಲೋಕದಲ್ಲಿ ಹೆಣ್ಣಾಗಿ ಜನಿಸಿದೆ. ಆ ಹೆಣ್ಣು ಎಲ್ಲಿದೆ, ಹೇಗಿದೆ ಎಂದು ಪತ್ತೆ ಮಾಡಿ. ಬಂದು ನನಗೆ ವಿಷಯ ತಿಳಿಸಿ" ಎಂದು ಆಜ್ಞಾಪಿಸುತ್ತಳೆ.
ಭೂಲೋಕಕ್ಕೆ ಪ್ರಯಾಣ ಮಾಡಿದ ನಾರದರು ಮೊದಲು ಬಂದಿದ್ದು ಹಿಮಾಲಯ ಪರ್ವತದ ಶಿಖರಕ್ಕೆ. ಕೊರೆಯುವ ಚಳಿ, ತುಪಾಕಿ ಗುಂಡುಗಳ ನಡುವೆ ಮಾಣಿಕ್ಯ ವೀಣೆ ಇರಲಾರಳೆಂದು, ನಾರದರು ದಕ್ಷಿಣಕ್ಕೆ ಪ್ರಯಾಣ ಮಾಡುತ್ತಾರೆ. ಅಲ್ಲಿ ಮಲ್ಲಿಗೆಯ ಸುವಾಸನೆ ಅವರ ಗಮನ ಸೆಳೆಯುತ್ತದೆ. ನೇರವಾಗಿ ಅವರು ಬಂದಿಳಿದದ್ದು ಮೀನಾಕ್ಷಿ ಸುಂದರೇಶ್ವರರ ವಾಸಸ್ಥಾನವಾದ ಮಧುರೈಗೆ. ಪಕ್ಕದಲ್ಲೇ ಇದ್ದ ಹನುಮಂತರಾಯರ ಬೀದಿಯ ಒಂದು ಪುಟ್ಟ ಮನೆಯಿಂದ ಹೆಣ್ಣು ಕೂಸೊಂದರ ಶ್ರುತಿಬದ್ದವಾದ ಅಳು ಕೇಳಿಬರುತ್ತೆ. ಮಾರು ವೇಷದಲ್ಲಿ ಆ ಮನೆಯನ್ನು ಪ್ರವೇಶಿಸಿದ ನಾರದರು ಮಗುವಿನ ತಾಯಿಯನ್ನು, ಮಗುವಿನ ಹೆಸರು ಏನೆಂದು ಕೇಳುತ್ತಾರೆ. "ಸುಬ್ಬುಲಕ್ಷ್ಮಿ" ಎಂದು ತಾಯಿ ಉತ್ತರಿಸುತ್ತಾಳೆ. "ಸುಬ್ಬುಲಕ್ಷ್ಮಿ"ಯೇ ಪಾರ್ವತಿದೇವಿಯ ಮಾಣಿಕ್ಯ ವೀಣೆಯ ಅವತಾರವೆಂದು ತಿಳಿದ ನಾರದರು ಹಿರಿಹಿಗ್ಗಿ ಹೋಗುತ್ತಾರೆ. ಪಕ್ಕದಲ್ಲೇ ಇರುವ ಮದ್ರಾಸಿನಲ್ಲಿ ಪರಮೇಶ್ವರರ ಅಂಶಧಾರಿಯಾದ "ಸದಾಶಿವಂ" ಎಂಬ ಬಾಲಕನ ಜನನವೂ ಆಗಿರುವುದು ನಾರದರ ಗಮನಕ್ಕೆ ಬರುತ್ತದೆ.
-------------------------------------------------------------------------------------------------------------------------
ಸಭಿಕರೆ....... ಕಥೆಯನ್ನೇನೋ ನೀವೆಲ್ಲಾ ಕೇಳಿದಿರಿ. ರಾಮಾಯಣದ್ದೋ, ಮಹಾಭಾರತದ್ದೋ, ಭಾಗವತದ್ದೋ ಹರಿಕಥೆಯಾಗಿದ್ದರೆ ತಾವೆಲ್ಲ ನಾನು ಹೇಳಿದ ಕಥೆಯನ್ನು ಒಪ್ಪುತ್ತಿದ್ದೀರಿ. ಇಂದಿನ ಕಥೆ ನಮ್ಮೊಡನೆ ಬದುಕಿ ಬಾಳಿದ ಸುಬ್ಬುಲಕ್ಷ್ಮಿಯವರದ್ದು. ಸಭೆಯಲ್ಲಿರುವ ಹಲವು ಹಿರಿಯರು ಸುಬ್ಬಲಕ್ಷ್ಮಿಯವರನ್ನು ಪ್ರತ್ಯಕ್ಷವಾಗಿ ನೋಡಿದ್ದೀರಿ, ಅವರ ಸಂಗೀತವನ್ನು ಕೇಳಿದ್ದೀರಿ. ನಾನು ಹೇಳಿದೆ ಕಥೆ ನಿಜವಿರಬಹುದೇ ಎಂಬ ಪ್ರಶ್ನೆ ತಮನ್ನು ಕಾಡುತ್ತಿದ್ದರೆ ಆಶ್ಚರ್ಯವಿಲ್ಲ.
ಸುಬ್ಬಲಕ್ಷ್ಮಿಯವರನ್ನು ಕುರಿತು ಮೊದಲ ಬಾರಿಗೆ ಹರಿಕಥೆ ಮಾಡಿದವರೆಂದರೆ "ಹರಿಕಥಾ ವಿದುಷಿ , ಸಂಗೀತ ವಿದುಷಿ ರೇವತಿ ಶಂಕರನ್" ರವರು. ನಾನು ಹೇಳಿದ ಮಾಣಿಕ್ಯ ವೀಣೆಯ ಕಥೆಯ ಪರಿಕಲ್ಪನೆ ರೇವತೀರವರದ್ದು. ರಾಮಾಯಣ ಕಾಲದಲ್ಲಿ ಲವಕುಶರು ಹೇಗೆ ರಾಮನ ಸಮ್ಮುಖದಲ್ಲೇ ರಾಮಾಯಣದ ಹರಿಕಥೆ ಮಾಡಿದರೋ, ಹಾಗೆ ರೇವತಿಯವರು ೧೯೯೯ರಲ್ಲಿ ಎಂ.ಎಸ್. ಸುಬ್ಬಲಕ್ಷ್ಮಿಯವರ ಸಮ್ಮುಖದಲ್ಲೇ ಸುಬ್ಬಲಕ್ಷ್ಮಿಯವರ ಹರಿಕಥೆಯನ್ನು ಮಾಡಿದ್ದವರು. ಸುಬ್ಬುಲಕ್ಷ್ಮಿಯವರು ತಾವೇ ಮಾಣಿಕ್ಯ ವೀಣೆಯ ಅವತಾರವೆಂದು ಕೇಳಿ ನಸುನಕ್ಕರಂತೆ. ಹರಿಕಥೆಯನಂತರ ರೇವತಿಯವರನ್ನು ಆಶೀರ್ವದಿಸಿದ ಸುಬ್ಬುಲಕ್ಷ್ಮಿಯವರು "ನಾನು ಮಾಣಿಕ್ಯ ವೀಣೆಯ ಅವತಾರವೇ" ಎಂದು ಹೇಳುತ್ತಾ ಸಂತೋಷಪಟ್ಟರಂತೆ.
ಈಗ ಎಂ. ಎಸ್. ಅಮ್ಮನವರೇ ಹಾಡಿ ಜನಪ್ರಿಯಗೊಳಿಸಿರುವ ಅಣ್ಣಮ್ಮಚಾರ್ಯರ ಒಂದು ಕೃತಿಯನ್ನು ಕೇಳೋಣ.
---------------------------------------------------------------------------------------------------------------------
ಶ್ರೀಮನ್ನಾರಾಯಣ----------------------
------------------------------------------------------------------------------------------------------------------------
ಭಾರತ ರತ್ನ "ಮಧುರೈ ಷಣ್ಮುಗವಡಿವು ಸುಬ್ಬುಲಕ್ಷ್ಮಿ"ಯವರು ಜನಿಸಿದ್ದು ತಮಿಳ್ನಾಡಿನ ಮಧುರೈನಲ್ಲಿ. ತಾಯಿಯ ಹೆಸರು ಷಣ್ಮುಗವಡಿವು ಎಂದು. ಷಣ್ಮುಗವಡಿವು ರವರು "ದೇವ ದಾಸಿ" ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು. ಹಾಗಾಗಿ ಸುಬ್ಬುಲಕ್ಷ್ಮಿಯವರ ತಂದೆ ಯಾರು ಎಂಬುದಕ್ಕೆ ಖಚಿತ ಮಾಹಿತಿ ಇಲ್ಲ. ತಾಯಿಯ ಹೆಸರಲ್ಲೇ, ತಾಯಿಯ ನೆರಳಲ್ಲೇ ಬೆಳೆದವರು ಸುಬ್ಬುಲಕ್ಷ್ಮಿ.
ಸುಬ್ಬುಲಕ್ಷ್ಮಿಯವರು ಜನಿಸಿದ್ದು ೧೬-೦೯-೧೯೧೬ರಂದು. ನ್ಯೂಮ್ಯಾರೊಲೊಜಿ ತಿಳಿದವರಿಗೆ ೧೬ರ ಮಹತ್ವ ಗೊತ್ತು. ೧೬ ಎಂದರೆ ೧ + ೬ = ೭, ಸಪ್ತಸ್ವರಗಳು ಎಂದರ್ಥ. ೯ ಎಂಬುದು ನವರಸಗಳ ಪ್ರತೀಕ. ಅಂದರೆ ಸುಬ್ಬುಲಕ್ಷ್ಮಿ ಅವರಿಗೆ ಸಪ್ತಸ್ವರಗಳು ಕರಗತವಾಗಿದ್ದವು ಮತ್ತು ಸಪ್ತ ಸ್ವರಗಳ ಮೂಲಕ ಅವರು ನವರಸಗಳನ್ನೂ ಸಮರ್ಪಕವಾಗಿ ವ್ಯಕ್ತ ಪಡಿಸುತ್ತಿದ್ದರು ಎಂದರ್ಥ.
ಸುಬ್ಬುಲಕ್ಷ್ಮಿ ಅವರು ತಮ್ಮ ಹೆಸರಿಗೆ ತಕ್ಕಂತೆ ಬಾಳಿದವರು. "ಸುಬ್ಬು" ಅಥವಾ "ಸುಬ್ಬ" ಎಂಬುದು ಸಂಸ್ಕೃತದ "ಶುಭ" ಎಂಬ ಪದದ ತದ್ಭವ. ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ, ಸಂತೋಷ ಪಡಿಸುತ್ತಾ ಬಾಳಿದವರು ಸುಬ್ಬುಲಕ್ಷ್ಮಿ.
ಸುಬ್ಬುಲಕ್ಷ್ಮಿಯವರಿಗೆ, ಶಕ್ತಿವೇಲು ಎಂಬ ಅಣ್ಣನೂ ಮತ್ತು vadivaambal ಎಂಬ ತಂಗಿಯೂ ಇದ್ದರು.
ಸುಬ್ಬುಲಕ್ಷ್ಮಿಯವರನ್ನು ಪ್ರೀತಿಯಿಂದ ಅವರಮ್ಮ "ಕುಂಜಮ್ಮ, ಕುಂಜ" ಎಂದು ಕರೆಯುತ್ತಿದ್ದರು.
ಷಣ್ಮುಗವಡಿವು ಅವರು ಸಂಗೀತ ವಿದುಷಿ. ಸುಬ್ಬುಲಕ್ಷ್ಮಿಯವರ ಅಜ್ಜಿಯಾದ ಅಕ್ಕಮ್ಮಾಳ್ ಕೂಡ ನುರಿತ ಪಿಟೀಲು ವಾದಕಿಯಾಗಿದ್ದವರು. ಹೀಗೆ ಸುಬ್ಬುಲಕ್ಷ್ಮಿಯವರಿಗೆ ಸಂಗೀತ ಎನ್ನುವುದು ರಕ್ತದಲ್ಲೇ ಬಂದಿತ್ತು. ಹಾಡುಗಾರಿಕೆ ಹಾಗು ವೀಣೆ ಎರಡರಲ್ಲೂ ಪರಿಣಿತಿ ಪಡೆದಿದ್ದ ಷಣ್ಮುಗವಡಿವು ಅವರು, ಬರಿ ಮಧುರೈ ಪಟ್ಟಣವೇ ಏಕೆ, ದೂರದ ಮದ್ರಾಸಿನವರೆಗೂ ಹೋಗಿ ಕಚೇರಿಗಳನ್ನು ನೀಡುವಷ್ಟು ಪರಿಣಿತಿ ಹೊಂದಿದ್ದವರು ಅವರು. ಹಾಗಾಗಿ ತಾಯಿಯಾದ ಷಣ್ಮುಗವಡಿವು ರವರೇ ಸುಬ್ಬುಲಕ್ಷ್ಮಿಯವರ ಮೊದಲ ಸಂಗೀತ ಗುರು.
"ಮನೆಯೇ ಮೊದಲ ಪಾಠಶಾಲೆ
ಜನನಿ ತಾನೇ ಮೊದಲ ಗುರುವು
ಜನನಿಯಿಂದ ಪಾಠ ಕಲಿತ
ಜನರು ಧನ್ಯರು"
ಎಂಬ ಕುವೆಂಪು ರವರ ವಾಣಿಯಂತೆ ತಾಯಿಯಿಂದ ಸಂಗೀತ ಪಾಠ ಕಲಿತೇ ಸುಬ್ಬುಲಕ್ಷ್ಮಿ ಯವರು ಪ್ರಸಿದ್ಧಿಯನ್ನು ಪಡೆದರು ಎಂದರೆ ತಪ್ಪಾಗಲಾರದು.
--------------------------------------------------------------------------------------------------------------------
ಸುಬ್ಬುಲಕ್ಷ್ಮಿಯವರ ಸಂಗೀತ ಪಾಠ ಹೀಗೆ ಆರಂಭವಾಗಿತ್ತು.
ಶ್ರೀ ಗಣನಾಥ ಸಿಂಧೂರವರ್ಣ
***************************
******************************
*****************************
ವರವೀಣಾ ಮೃದು ಪಾಣಿ
**********************
*************************
ಕಮಲಾಜಾ ದಳ ವಿಮಲ ಸುನಯನ
****************************
*****************************
****************************
-------------------------------------------------------------------------------------------------------------------
ಹೀಗೆ ಸುಬ್ಬುಲಕ್ಷ್ಮೀರವರ ಸಂಗೀತ ಶಿಕ್ಷಣ ಆರಂಭವಾಯಿತು. ೫ನೇ ತರಗತಿಗೆ ಶಾಲಾ ಶಿಕ್ಷಣ ಮೊಟಕಾದರೂ, ಸಂಗೀತ ಶಿಕ್ಷಣ ಮುಂದುವರೆಯುತ್ತಲೇ ಇತ್ತು. ಸುಶ್ರಾವ್ಯವಾದ ಕಂಠ, ಶಿಸ್ತುಬದ್ಧ ಲಯ ಜ್ಞಾನ ಸುಬ್ಬುಲಕ್ಷ್ಮಿಯವರಿಗೆ ರಕ್ತದಲ್ಲೇ ಬಂದಿತ್ತು. ೧೦ನೇ ವಯಸ್ಸಿಗೆ ಸುಬ್ಬುಲಕ್ಷ್ಮಿಯವರು ನೂರಾರು ಕೀರ್ತನೆಗಳನ್ನು ಸುಶ್ರಾವ್ಯಯಾಗಿ ಹಾಡಲು ಕಲಿತಿದ್ದರು.
ಅಂದಿನ ಕಾಲದಲ್ಲಿ "ಸೇತುಪತಿ ಶಾಲೆ" ಎಂಬುದು ಮಧುರೈನ ಹೆಸರುವಾಸಿಯಾದ ಶಾಲೆ. ಸ್ವತಂತ್ರ ಹೋರಾಟಗಾರ, ಸಂಗೀತಗಾರ ಸುಬ್ರಮಣ್ಯ ಭಾರತಿಯವರು ಆ ಶಾಲೆಯ ಮೇಷ್ಟ್ರಾಗಿದ್ದರು ಎಂಬುದು ಹೆಮ್ಮೆಯ ವಿಷಯ. ಒಂದು ದಿನ ಆ ಶಾಲೆಯಲ್ಲಿ ಷಣ್ಮುಗವಡಿವು ಅವರ ವೀಣಾ ವಾದನ ಕಚೇರಿ ನಡೆಯುತಿತ್ತು. ಕಾರ್ಯಕ್ರಮದ ಕಡೆಯ ಹೊತ್ತಿಗೆ ಷಣ್ಮುಗವಡಿವು ಅವರು, ಹತ್ತಿರದಲ್ಲೇ ಮಣ್ಣಿನಲ್ಲಿ ಆಟವಾಡುತ್ತಿದ್ದ ತಮ್ಮ ಮಗಳಾದ ಸುಬ್ಬುಲಕ್ಷ್ಮಿಯವರನ್ನು ವೇದಿಕೆಗೆ ಕರೆಯುತ್ತಾರೆ. ವೇದಿಕೆ ಏರಿದ ಮಗುವಿಗೆ ಹಾಡುವಂತೆ ಹೇಳುತ್ತಾರೆ.
ಈಗಿನ ಕಾಲದ ಮಕ್ಕಳಿಗೆ ಅವರ ತಂದೆತಾಯಂದಿರು ಸಾವಿರಾರು ರುಪಾಯೀ ಫಿ ಕೊಟ್ಟು ಸಂಗೀತ ಪಾಠ ಹೇಳಿಸುತ್ತಿರುತ್ತಾರೆ. ಆದರೂ, ಇಂತಹ ಸಂದರ್ಭಗಳಲ್ಲಿ ಈಗಿನ ಕಾಲದ ಹೆಚ್ಚು ಮಕ್ಕಳು ಹಾಡಲು ಹಿಂಜರಿಯುತ್ತಾರೆ. ಎಲ್ಲರೆದುರು "ಹಾಡು" ಎಂದು ಹೇಳಿದಕ್ಕೆ ಸಿಟ್ಟಾಗುತ್ತಾರೆ. 'ಯು ಮೇಡ್ ಮೀ ಟು ಫೀಲ್ ಬ್ಯಾಡ ಇನ್ ಫ್ರಂಟ್ ಆಫ್ ಆಲ್" ಎಂದು ಸಿಟ್ಟು ಪ್ರದರ್ಶಿಸುತ್ತಾ, ಇಂಗ್ಲಿಷ್ನಲ್ಲಿ ಡೈಲಾಗ್ ಕೂಡ ಹೊಡೀತಾರೆ. ಆದರೆ ನಮ್ಮ ಸುಬ್ಬುಲಕ್ಷ್ಮಿಯವರು ಹಾಗಿದ್ದ ಮಗುವಾಗಿತ್ತಿಲ್ಲ.
ಷಣ್ಮುಗವಡಿವು ಅವರದ್ದೂ, ಬಡತನದ ಸಂಸಾರ. ಬಾಲಕಿ ಸುಬ್ಬುಲಕ್ಷ್ಮಿ ಅವರು ಹಾಕಿದ್ದೋ, ಮಾಸಿದ ಲಂಗ. ಷಣ್ಮುಗವಡಿವು ಅವರ ಹಳೆಯ ಸೀರೆಯಿಂದ ಹೊಲಿದಿದ್ದೋ ಏನೋ, ಬಾಲಕಿಯ ರೌಕೆ ತೋಳು ಒಂದು ಮೇಲೆ, ಒಂದು ತಳಗೆ. ಹಾಗೆಯೇ ಯಾವ ಹಿಂಜರಿಕೆಯೂ ಇಲ್ಲದೆ ಅಂದು ವೇದಿಕೆ ಏರಿದ್ದು ಬಾಲಕಿ ಸುಬ್ಬುಲಕ್ಷ್ಮಿ.
ಲಂಗದ ಮೇಲಿನ ಮಣ್ಣು ಕೊಡವಿಕೊಂಡು, ಯಾವ ಹಿಂಜರಿಕೆಯೂ ಇಲ್ಲದೆ ೧೦ ವರ್ಷದ ಬಾಲಕಿ ಸುಬ್ಬುಲಕ್ಷ್ಮಿ ಹಾಡಲು ಶುರು ಮಾಡುತ್ತಾರೆ. ಅವರು ಆ ದಿನ ಹೇಗೆ ಹಾಡಿದರು ಎಂಬುದನ್ನು ನನ್ನ ಹನ್ನೊಂದು ವರ್ಷದ ತಂಗಿ ಪ್ರಜ್ಞಾ ನಿಮಗೆ ಹಾಡಿ ತೋರಿಸುತ್ತಳೆ.
---------------------------------------------------------------------------------------------------------------------------
ಪ್ರಜ್ಞಾಳಿಂದ ಕೀರ್ತನೆ
----------------------------------------------------------------------------------------------------------------------------
ಷಣ್ಮುಗವಡಿವು ರವರ ಮಧುರೈ ಮನೆ ಸಂಗೀತದ ಕೇಂದ್ರವಾಗಿತ್ತು. ಸುಪ್ರಸಿದ್ಧ ಸಂಗೀತಗಾರರಾದ ಅರಿಯಾಕುಡಿ ರಾಮಾನುಜ ಐಯಂಗಾರ್, ಮುಸಿರಿ ಸುಬ್ರಮಣ್ಯ ಅಯ್ಯರ್, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮುಂತಾದವರು ಆಗಾಗ ಷಣ್ಮುಗವಡಿವು ಅವರ ಮನೆಗೆ ಭೇಟಿ ನೀಡುವುದು ಸಾಮಾನ್ಯವಾಗಿತ್ತು. ಅವರುಗಳ ಪೈಕಿ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ರವರಿಂದ ಸುಬ್ಬುಲಕ್ಷ್ಮಿ ಸಂಗೀತದ ಹೆಚ್ಚಿನ ಅಭ್ಯಾಸ ಮಾಡಿದರು. ಹಾಗಾಗಿ ತಾಯಿಯೇ ಸುಬ್ಬುಲಕ್ಷ್ಮಿ ಅವರ ಮೊದಲ ಗುರುವಾದರೆ, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರು ಸುಬ್ಬುಲಕ್ಷ್ಮಿಯವರಿಗೆ ನಂತರದ ಸಂಗೀತ ಗುರುಗಳು.
ಮಗಳು ಸುಬ್ಬುಲಕ್ಷ್ಮಿಯ ಸಂಗೀತ ಸಾಮರ್ಥ್ಯದ ಬಗ್ಗೆ ತಾಯಿ ಷಣ್ಮುಗವಡಿವು ಅವರಿಗೆ ಅಪಾರ ಭರವಸೆ ಇತ್ತು. ಹಾಗಾಗಿ ಮಗಳಿಗೆ ಕಚೇರಿಯ ಅವಕಾಶ ನೀಡುವಂತೆ ಮಧುರೈನ ಎಲ್ಲಾ ಪ್ರಮುಖರಿಗೂ ಷಣ್ಮುಗವಡಿವು ಕೇಳಿಕೊಳ್ಳುತ್ತಿದ್ದರು. ತಮಗೆ ಬಂದ ಅವಕಾಶಗಳನ್ನೂ ಮಗಳಿಗೆ ನೀಡುತ್ತಿದ್ದರು. ಹೀಗಾಗಿ ಸುಬ್ಬಲಕ್ಷ್ಮಿಯವರು ತಮ್ಮ ೧೩ನೇ ವಯಸ್ಸಿಗೆ ಸಂಗೀತ ಕಚೇರಿಗಳನ್ನು ನೀಡಲು ಆರಂಭಿಸಿದರು. ಸುಶ್ರಾವ್ಯವಾದ ಕಂಠಸಿರಿಯ ಜೊತೆಗೆ ಸುಬ್ಬುಲಕ್ಷ್ಮಿ ಅವರ ಸೌಂದರ್ಯವೂ ಜನರನ್ನು ಆಕರ್ಷಿಸತೊಡಗಿತು.
ಬರೀ ಮದುರೈನಲ್ಲೇ ಕುಳಿತರೆ, ಅವಕಾಶಗಳು ಕಡಿಮೆ. ಮದ್ರಾಸಿಗೆ ವಲಸೆ ಹೋದರೆ ಹೆಚ್ಚು ಅವಕಾಶಗಳು ಸಿಗಬಹುದು ಎಂದು, ದೂರದ ಮದ್ರಾಸಿಗೆ ಮಗಳೊಂದಿಗೆ ವಲಸೆ ಹೊರಟವರು ತಾಯಿ ಷಣ್ಮುಗವಡಿವು. ಆಗ ತಾಯಿ ಮಗಳಿಗೆ ಆಶ್ರಯ ನೀಡಿದವರು ವೀಣಾ ಧನಮ್ಮಾಳ್. ವೀಣಾ ಧನಮ್ಮಾಳ್ ಕೂಡ ಒಬ್ಬ ದೇವದಾಸಿ ಮನೆತನದ ಹೆಣ್ಣು ಮಗಳು. ಆದರೇನು? ಆಕೆ ಆಗಿನ ಕಾಲದ ಸುಪ್ರಸಿದ್ದ ವೀಣಾ ಕಲಾವಿದೆ ಮತ್ತು ಹಾಡುಗಾರ್ತಿ. ಹೆಸರುವಾಸಿಯಾದ ಸಂಗೀತದ ಜೋಡಿ ಟಿ.ಬೃಂದಾ ಮತ್ತು ಟಿ.ಮುಕ್ತ ಅವರ ಮೊಮ್ಮಕ್ಕಳು. ಸುಪ್ರಸಿದ್ದ ನೃತ್ಯಗಾರ್ತಿ ಪದ್ಮ ವಿಭೂಷಣೇ ಬಾಲಸರಸ್ವತಿ ಕೂಡ ವೀಣಾ ಧನಮ್ಮಾಳ್ ಅವರ ಮೊಮ್ಮಗಳು. ನೋಡಿದಿರಾ...... ದೇವದಾಸಿಯರ ಕುಟುಂಬವಾದರೇನು? ವೀಣಾ ಧನಮ್ಮಾಳ್ ಅವರ ಕುಟುಂಬ ಸರಸ್ವತಿಯ ಆವಾಸಸ್ಥಾನವಾಗಿತ್ತು.
ತಾಯಿ ಷಣ್ಮುಗವಡಿವು ಅವರು ಶತಪ್ರಯತ್ನಪಟ್ಟರೂ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಕಾರ್ಯಕ್ರಮ ಸುಬ್ಬುಲಕ್ಷ್ಮಿ ಅವರ ಪಾಲಿಗೆ ದೊರಕದಾಯಿತು. ವೀಣಾ ಧನಮ್ಮಾಳ್ ಅವರ ಶಿಫಾರಿಸು ಕೂಡ ಕೆಲಸ ಮಾಡದಾಯಿತು. ಸುಪ್ರಸಿದ್ದ ನರ್ತಕಿ ಪದ್ಮ ಸುಬ್ರಮಣ್ಯಮ್ಮು ಅವರ ತಂದೆ, ಟಿ. ಸುಬ್ರಮಣ್ಯಂರವರ ಪ್ರಯತ್ನದಿಂದಲೂ, ಸುಬ್ಬುಲಕ್ಷ್ಮಿ ಅವರಿಗೆ ಮದ್ರಾಸ್ಖ್ಯ ಮ್ಯೂಸಿಕ್ ಅಕಾಡೆಮಿಯ ಅವಕಾಶ ಸಿಕ್ಕಲೇ ಇಲ್ಲ. ಮುಖ್ಯ ಕಾರಣವೇನೆಂದರೆ ಹೆಣ್ಣು ಮಕ್ಕಳು ಅಂದಿನ ಕಾಲದಲ್ಲಿ ದೊಡ್ಡ ವೇದಿಕೆಯೇರುವುದನ್ನು ಪುರುಷ ಪ್ರಧಾನ್ಯ ಸಮಾಜ ಸಹಿಸುತ್ತಿರಲಿಲ್ಲ.
ಆದರೂ, ಅದೃಷ್ಟ ಎನ್ನವುದು ಸುಬ್ಬಲಕ್ಷ್ಮಿ ಅವರ ಪಾಲಿಗೆ ಇತ್ತೋ, ಏನೋ. ಕಡೆಗೂ ಮದ್ರಾಸ್ ಮ್ಯೂಸಿಕ್ ಅಕ್ಯಾಡೆಮಿಯ ಪೂರ್ವನಿಯೋಜಿತ ಕಾರ್ಯಕ್ರಮಕ್ಕೆ ಸುಪ್ರಸಿದ್ದ ಹಾಡುಗಾರ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಕಾರಣಾಂತರಗಳಿಂದ ಬರಲಾಗಲಿಲ್ಲ. ವಿಷಯ ತಿಳಿದದ್ದು ಕಾರ್ಯಕ್ರಮದ ಬೆಳ ಸಮಯದಲ್ಲಿ. ಬೇರೆ ಮಾರ್ಗವಿಲ್ಲದೆ ಅಂದಿನ ಕಾರ್ಯಕರ್ತರು
"ಆ ದಿನ ಬೇಕಾದರೆ ಸುಬ್ಬುಲಕ್ಷ್ಮಿ ಹಾಡಿಕೊಳ್ಳಲಿ" ಎಂದು ಆಜ್ಞಾಪಿಸಿದರು. ಆದರೇನು, ಪಕ್ಕ ವಾದ್ಯದವರು ಯಾರೂ ಸುಬ್ಬಲಕ್ಷ್ಮಿಯೊಂದಿಗೆ ನುಡಿಸಲು ಒಪ್ಪಲೇ ಇಲ್ಲ. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಪಕ್ಕವಾದ್ಯ ನುಡಿಸುವುದೆಂದರೆ, ಒಂದು ನಿಕೃಷ್ಟ ಭಾವನೆ ಇತ್ತು. ಹೆಣ್ಣು ಮಕ್ಕಳು ಏನು ಹಾಡಿ ಯರು ಎಂಬ ಧೋರಣೆ ಬೇರೆ. ಮೇಲಾಗಿ, ಸುಬ್ಬುಲಕ್ಷ್ಮಿ ಅವರು ದೇವದಾಸಿ ಮನೆತನಕ್ಕೆ ಸೇರಿದವಳು ಎಂಬ ಕೀಳು ಭಾವನೆ ಬೇರೆ. ಅಂದು ಅಸಹಾಯಕರಾಗಿ ಕುಳಿತಿದ್ದ, ತಾಯಿ ಮಗಳ ನೆರವಿಗೆ ಬಂದವರು ನಮ್ಮ ಕರ್ನಾಟಕದ ಸುಪ್ರಸಿದ್ದ ಪಿಟೀಲು ವಾದಕರಾದ ಪಿಟೀಲು ಚೌಡಯ್ಯನವರು. ಆಗಿನ ಕಾಲಕ್ಕೆ ಮದ್ರಾಸಿನಲ್ಲೂ ಭಾರಿ ಹೆಸರು ಮಾಡಿದ್ದ ಹಿರಿಯ ಕಲಾವಿದರು ಚೌಡಯ್ಯನವರಾಗಿದ್ದರು. ಚೌಡಯ್ಯನವರ ಸ್ನೇಹಿತರೆಲ್ಲಾ, 'ನೋಡು ಚೌಡಯ್ಯ, ಗೊತ್ತುಗುರಿಯಿಲ್ಲದ ಹೆಣ್ಣುಮಕ್ಕಳಿಗೆಲ್ಲಾ ನೀನು ಪಕ್ಕವಾದ್ಯ ನುಡಿಸಲು ಆರಂಭಿಸಿದರೆ, ಮುಂದೆ ನಿನಗೆ ಕಚೇರಿಗಳು ಸಿಗದ ಹಾಗೆ ಆಗಬಹುದು, ಹುಷಾರ್' ಎಂದು ಎಚ್ಚರಿಸಿದರು, ಎದೆಗುಂದದೆ, ಸುಬ್ಬಲಕ್ಷ್ಮಿಯವರ ಹಿಂದೆ ಕಲ್ಲುಬಂಡೆಯಾಗಿ ಅವರ ಬೆಂಬಲಕ್ಕೆ ನಿಂತವರು ನಮ್ಮ ಚೌಡಯ್ಯನವರು. ಪಾಲಿಗೆ ಬಂದ ಅವಕಾಶವನ್ನು ಅಪ್ಪಿಕೊಂಡ ಯುವತಿ ಸುಬ್ಬುಲಕ್ಷ್ಮಿ ವೇದಿಕೆಯನ್ನು ಏರೆಬಿಟ್ಟರು. ಅಂದಿನ ಕಚೇರಿಗೆ ಸಾಕ್ಷಿಯಾದವರು ಚೆಮ್ಬೈ ವೈದ್ಯನಾಥ ಭಾಗವತರ್, ಮುಸುರಿ ಸುಬ್ರಮಣ್ಯ ಅಯ್ಯರ್ ಮುಂತಾದವರು. ಆ ದಿನ ಸುಬ್ಬುಲಕ್ಷ್ಮಿ ಅವರ ಕಾರ್ಯಕ್ರಮ ಹೇಗಿತ್ತು ಎಂಬುದನ್ನು ನಾವೀಗ ನೋಡಣ .
------------------------------------------------------------------------------------------------------------------------------
ಸರೋಜಾ ದಳನೇತ್ರೀ.....
------------------------------------------------------------------------------------------------------------------------
ಯುವತಿ ಸುಬ್ಬಲಕ್ಷ್ಮಿ ಅವರು ಕಚೇರಿ ಇಡೀ ಅಮೋಘವಾಗಿ ಹಾಡಿ ಗೆದ್ದರು. ಎಲ್ಲಾ ಗಣ್ಯರು ಮುಕ್ತ ಕಂಠದಿಂದ ಸುಬ್ಬುಲಕ್ಷ್ಮಿ ಅವರನ್ನು "ಸಂಗೀತ ಕ್ಷೇತ್ರದ ಹೊಸ ನಕ್ಷತ್ರ" ಎಂದೇ ಬಣ್ಣಿಸಿದರು. ವೀಣೆ ಸಾಂಬಶಿವ ಅಯ್ಯರ್ ಎಂಬುವರು ಸುಬ್ಬುಲಕ್ಷ್ಮಿ ಅವರ ಸಂಗೀತವನ್ನು ಪ್ರಶಂಸಿಸುತ್ತಾ "ಅಮ್ಮನವರ ಮಾಣಿಕ್ಯ ವೀಣೆ ಸುಬ್ಬುಲಕ್ಷ್ಮಿ ಅವರ ಕೊರಳಿನಲ್ಲೇ ಇದೆ" ಎಂದು ಹೇಳಿದರು.
ಅಂದು ಸುಬ್ಬಲಕ್ಷ್ಮಿ ಅವರೊಡನೆ ಗೆದ್ದು ಬೀಗಿದವರು ಪಿಟೀಲು ಚೌಡಯ್ಯ ನವರು ಕೂಡ. ಸುಬ್ಬಲಕ್ಷ್ಮಿ ಅವರ ಯಶಸ್ಸಿಗೆ ಭದ್ರ ಬುನಾದಿ ಹಾಕಿ ಕೊಟ್ಟವರಲ್ಲಿ ಒಬ್ಬ ಪ್ರಮುಖರು ನಮ್ಮ ಚೌಡಯ್ಯ ನವರು ಮತ್ತು ಅವರು ಕನ್ನಡಿಗರು ಎಂಬುದನ್ನು ನಾವು ಮರೆಯುವಂತಿಲ್ಲ.
-----------------------------------------------------------------------------------------------------------------------------
ಸಂಗೀತ ಅಂದ ಮೇಲೆ ಒಂದು ಉಪಕಥೆ ಇರಲೇ ಬೇಕು. ಈಗ ನನ್ನ ತಂಗಿ ಪ್ರಜ್ಞಾಳಿಂದ ಒಂದು ಉಪಕಥೆ.
ಉಪಕಥೆ_(ಕಿಟ್ಟು ಸೀನು ಕಥೆ)_______
-------------------------------------------------------------------------------------------------------------------
ಮ್ಯೂಸಿಕ್ ಅಕಾಡೆಮಿ ಯ ಕಾರ್ಯಕ್ರಮದ ಅಭೂತ ಪೂರ್ವ ಯಶಸ್ಸಿನ ಅನಂತರ ಸುಬ್ಬುಲಕ್ಷ್ಮಿ ಅವರ ಸಂದರ್ಶನ ಕೋರಿ ಹಲವಾರು ಪತ್ರಕರ್ತರು ಮುಂದೆ ಬಂದರು. ಹೀಗೆ ಬಂದವರೇ ಅಂದಿನ ಪತ್ರಕರ್ತರಾದ ಸದಾಶಿವಂ ಅವರು. ಸಂದರ್ಶನದ ನೆಪದಲ್ಲಿ ಹಲವು ಬಾರಿ ಸುಬ್ಬುಲಕ್ಷ್ಮಿ ಅವರನ್ನು ಭೇಟಿಯಾದ ಸದಾಶಿವಂ, ಸುಬ್ಬುಲಕ್ಷ್ಮಿ ಅವರಿಗೆ ಹತ್ತಿರದ ಗೆಳಯರಾದರು. ಸದಾಶಿವಂ ಅವರು ಅಷ್ಟುಹೊತ್ತಿಗಾಗಲೇ ಮದುವೆಯಾಗಿದ್ದವರಾದರೂ, ಸುಬ್ಬಲಕ್ಷ್ಮಿ ಅವರ ಗಾಯನ ಪ್ರತಿಭೆಗೆ ಮತ್ತು ಸೌಂದರ್ಯಕ್ಕೆ ಸದಾಶಿವಂ ಅವರು ಮಾರುಹೋಗಿದ್ದರು.
---------------------------------------------------------------------------------------------------------------------
ಮಗಳಿಗೆ ವಯಸ್ಸು ೨೦ ತುಂಬಿದ್ದರಿಂದ ತಾಯಿ ಷಣ್ಮುಗವಡಿವು ಆತಂಕಗೊಂಡಿದ್ದರು. ಮಗಳಿಗೆ ಮದುವೆಯೊಂದನ್ನು ಮಾಡಿಬಿಟ್ಟರೆ ತಾವು ಧನ್ಯಳೆಂದು ಭಾವಿಸಿದ ಷಣ್ಮುಗವಡಿವು ಮತ್ತೆ ಮದುರೈ ಅತ್ತ ಹೊರಟೇಬಿಟ್ಟರು. ದೇವದಾಸಿ ಮನೆಗಳಲ್ಲಿ ಮದುವೆ ಅಂದರೆ ಅದು ಬೇರೆಯ ಥರ. ಎಪ್ಪತ್ತರ ದಶಕದ "ಗೆಜ್ಜೆ ಪೂಜೆ" ಸಿನಿಮಾ ತಾವೆಲ್ಲ ನೋಡಿದೀರಿ. ಭಾರಿ ಶ್ರೀಮಂತ ವ್ಯಕ್ತಿಯೊಂದಿಗೆ ಸುಬ್ಬಲಕ್ಷ್ಮಿ ಅವರ ಮದುವೆ ಅಲ್ಲ "ಗೆಜ್ಜೆ ಪೂಜೆ"ಗೆ ಏರ್ಪಾಡುಮಾಡಿ ನಿಂತಿದ್ದವರು ತಾಯಿ ಷಣ್ಮುಗವಡಿವು. ಮದುವೆಯಾಗೋ ವರನಿಗೆ ಮದುವೆ ಒಂದನೇಯದೋ, ಎರಡನೇಯದೋ, ಮೂರನೆಯದೋ.... ಯಾವುದನ್ನೂ ನೋಡುತ್ತಿರಲಿಲ್ಲ. ಅವನಿಗೆ ಎಷ್ಟು ವಯಸ್ಸು ಎಂಬುದು ನಗಣ್ಯವಾಗಿತ್ತು. ಮದುವೆ ದೊಡ್ಡ ಆಸ್ತಿವಂತನಾಗಿದ್ದರೆ ಸಾಕು, ಗೆಜ್ಜೆಪೂಜೆಯ ಮಾಡುವೆ ನಡೆದೇ ಹೋಗುತ್ತಿತ್ತು.
ಸುಬ್ಬುಲಕ್ಷ್ಮಿ ಅವರು ಎಷ್ಟು ವಿರೋಧಿಸಿದರೂ ತಾಯಿ ಕೇಳದಾದರು. ಸಭಿಕರೆ_____ ಅಂತಹ ಸಂದರ್ಭದಲ್ಲಿ ಸುಬ್ಬುಲಕ್ಷ್ಮಿ ಅವರ ಮನಸಿನಲ್ಲಿ ಏಂತಹ ತೊಳಲಾಟ ಉಂಟಾಗಿರಬಹುದು ಎಂಬುದನ್ನು ಸ್ವಲ್ಪ ಯೋಚಿಸಿ. ಸಂಗೀತ ಕ್ಷೇತ್ರದಲ್ಲಿ ತನಗೆ ಉಜ್ವಲ ಭವಿಷ್ಯವಿದೆ ಎಂಬ ಆತ್ಮವಿಶ್ವಾಸವಿದ್ದ ಸುಬ್ಬುಲಕ್ಷ್ಮಿ ಅವರು ದೃಢವಾದ ನಿರ್ಧಾರಕ್ಕೆ ಬಂದಿದ್ದರು. ಗಟ್ಟಿಗಿತ್ತಿ ಹೆಣ್ಣಾಗಿ ನಿಂತರು. ಸ್ತ್ರೀ ಶಕ್ತಿಯ ಪ್ರತಿರೂಪವಾಗಿ ನಿಂತ ಅವರು ಸಮಾಜದ ಕೆಟ್ಟ ಪದ್ದತಿಗೆ ಎದುರಾಗಿ ನಿಂತರು. ತಾಯಿಗೂ ತಿಳಿಯದಂತೆ ಗುಟ್ಟಾಗಿ ಮದ್ರಾಸ್ ರೈಲು ಹತ್ತೇಬಿಟ್ಟರು. ಗೆಜ್ಜೆ ಪೂಜೆ ಸಿನಿಮಾದ ನಾಯಕಿ ಕಲ್ಪನಾ ಅವರು ಸೋತ ಸತ್ತರೆ, ಸುಬ್ಬುಲಕ್ಷ್ಮಿ ನಿಜ ಜೀವನದಲ್ಲಿ ಗೆದ್ದು ನಿಂತಿದ್ದರು. ಅಂದು ಗೆದ್ದಿದ್ದು ಸುಬ್ಬುಲಕ್ಷ್ಮಿ ಮಾತ್ರವಾಗಿರಲಿಲ್ಲ, ಅಂದು ಗೆದ್ದಿದ್ದು ಸಮಸ್ತ ಭಾರತದ ಹೆಣ್ಣುಮಕ್ಕಳ ಗೌರವ ಕೂಡ.
----------------------------------------------------------------------------------------------------------------------
ಮದ್ರಾಸ್ ಗೆ ಬಂದಿಳಿದ ಸುಬ್ಬುಲಕ್ಷ್ಮಿ ಅವರು ಮೊದಲು ಬಾಗಿಲು ತಟ್ಟಿದ್ದೆ ಸದಾಶಿವಂ ಅವರ ಮನೆ. ಮುಂಚೆಯೇ ಮದುವೆಯಾಗಿದ್ದು ಎರಡು ಮಕ್ಕಳಿದ್ದ ಸದಾಶಿವಂ ರವರು ಸ್ವಲ್ಪವೂ ಹಿಂಜರಿಯದೆ ಸುಬ್ಬುಲಕ್ಷ್ಮಿ ಅವರಿಗೆ ಆಶ್ರಯ ಕೊಟ್ಟರು. ಸುಬ್ಬಲಕ್ಷ್ಮಿ ಅವರ ಸಂಗೀತ ಸಾಧನೆಗೆ ಬೆನ್ನೆಲುಬಾಗಿ ನಿಂತರು.
ವ್ಯವಹಾರ ಮತ್ತು ವಹಿವಾಟ್ಟು ಗಳಲ್ಲಿ ಸದಾಶಿವಂರವರು ಸಿದ್ಧಹಸ್ತರಾಗಿದ್ದವರು. ಸುಬ್ಬುಲಕ್ಷ್ಮಿ ಅವರ ಗಾಯನ ಸಾಮರ್ಥ್ಯ ಮತ್ತು ದೈವೀಕ ಸೌಂದರ್ಯದ ಬೆಲೆಯನ್ನು ಸದಾಶಿವಂ ಚೆನ್ನಾಗಿ ಅರಿತಿದ್ದರು. ಹಾಗಾಗಿ ೨೨ರ ಯುವತಿ ಸುಬ್ಬುಲಕ್ಷ್ಮಿ ಅವರನ್ನು ಸಿನಿಮಾ ನಾಯಕಿಯನ್ನಾಗಿಸುವ ಯೋಜನೆ ಸದಾಶಿವಂ ಅವರದಾಗಿತ್ತು.
ತಮಿಳ್ ಭಾಷೆಯಲ್ಲಿ "ಶಕುಂತಳಯ್" ಸಿನಿಮಾವನ್ನು ತಯಾರಿಸುವ ಏರ್ಪಾಡು ಸದಾಶಿವಂ ಅವರದ್ದಾಗಿತ್ತು. ಸುಂದರ ಯುವತಿ ಸುಬ್ಬುಲಕ್ಷ್ಮಿ ಅವರು ಶಕುಂತಳೆ ಪಾತ್ರಕ್ಕೆ ಹೇಳಿಮಾಡಿಸಿದಂತ್ತಿದ್ದರು. ಅಂದಿನ ಕಾಲದಲ್ಲಿ ಸೌಂದರ್ಯದೊಂದಿಗೆ ಹಾಡುವ ಸಾಮರ್ಥ್ಯ ಇರವವರನ್ನು ಮಾತ್ರ ಸಿನಿಮಾಗಳಲ್ಲಿ ನಾಯಕಿಯನ್ನಾಗಿ ಆಯ್ಕೆ ಮಾಡುತ್ತಿದ್ದರು. ನಾಯಕ ದುಷ್ಯಂತನ ಪಾತ್ರಕ್ಕೆ ಆಯ್ಕೆಯಾದವರು ಸುಪ್ರಸಿದ್ದ ಶಾಸ್ತ್ರೀಯ ಗಾಯಕ G.N. ಬಾಲಸುಬ್ರಮಣ್ಯಂ ಅವರು.
ನಿಮಗೆಲ್ಲ ಶಕುಂತಳೆಯ ಕಥೆ ತಿಳಿದೇ ಇದೆ. ಭಾರತದ ಎಲ್ಲ ಭಾಷೆಗಳಲ್ಲೂ ಹಲವು ಭಾರಿ ತೆರೆ ಕಂಡಿರುವ ಕಥೆ ಶಕುಂತಳೆಯದ್ದು.
"ಅಭಿಜ್ಞಾನ ಶಾಕುಂತಲಂ" ಎಂಬುದು ಸಂಸ್ಕ್ರತದ ಮೇರು ಕವಿ ಕಾಳಿದಾಸರು ಬರೆದ ನಾಟಕ. ಋಷಿ ವಿಶ್ವಾಮಿತ್ರ ಮತ್ತು ದೇವಲೋಕದ ಅಪ್ಸರೆ ಮೇನಕೆಯರ ಮಗಳು ಶಕುಂತಳೆ. ಕಣ್ವ ಮಹರಿಷಿಗಳು ಶಕುಂತಳೆಯ ಸಾಕು ತಂದೆ.
ಸುಂದರ ಯುವತಿಯಾಗಿ ಬೆಳೆದು ನಿಂತ ಶಕುಂತಲೆಗೆ ಅನಸೂಯಾ ಮತ್ತು ಪ್ರಿಯಂವದಾ ಎಂಬ ಇಬ್ಬರು ಸ್ನೇಹಿತೆಯರು. ಸುಂದರ ಯುವತಿಯಾದ ಶಕುಂತಲೆಗೆ ತನ್ನ ಪ್ರಿಯತಮನ ಆಗಮನದ ನೀರೀಕ್ಷೆ. ಆ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಅಮೋಘವಾಗಿ ಅಭಿನಯಿಸಿದ ಸುಬ್ಬುಲಕ್ಷ್ಮಿ ಅಷ್ಟೇ ಅಮೋಘವಾಗಿ ಹಾಡಿದ್ದಾರೆ.
-----------------------------------------------------------------------------------------------------------------------
ತಮಿಳ್ ಹಾಡು
-----------------------------------------------------------------------------------------------------------------------
ತಂದೆ ಕಣ್ವರು ಇಲ್ಲದ ಸಮಯ. ಆಗ ಬೇಟೆಯಾಡುತ್ತಾ ಆಶ್ರಮವನ್ನು ಪ್ರವೇಶಿಸಿದವನು ಮಹಾರಾಜ ದುಷ್ಯಂತ. ದುಷ್ಯಂತನಿಗೆ ಮೊದಲ ನೋಟದಲ್ಲೇ ಶಕುಂತಲೆಯ ಮೇಲೆ ಪ್ರೇಮ ಉಂಟಾಗುತ್ತದೆ. ಶಕುಂತಲೆಗೆ ಕೂಡ ಮೊದಲ ನೋಟದಲ್ಲೇ ದುಷ್ಯಂತನ ಮೇಲೆ ಪ್ರೇಮ್ ಉಂಟಾಗುತ್ತದೆ. ಇಬ್ಬರೂ, ಗುಟ್ಟಾಗಿ ಗಾಂಧರ್ವ ವಿವಾಹವಾಗುತ್ತಾರೆ. ವಿವಾಹದ ನೆನಪಿಗಾಗಿ ದುಷ್ಯಂತ, ಶಂಕುಂತಲೆಗೆ ಮುದ್ರೆಯುಂಗರವೊಂದನ್ನು ನೀಡಿರುತ್ತಾನೆ. ಈ ನಡುವೆ, ಶಕುಂತಲೆ ಗರ್ಭಿಣಿ ಕೂಡ ಆಗಿರುತ್ತಾಳೆ. ರಾಜ್ಯಭಾರದ ಒತ್ತಡದಿಂದ, ಮಹಾರಾಜಾ ದುಷ್ಯಂತ ತನ್ನ ರಾಜಧಾನಿಗೆ ಹಿಂದಿರುಗುತ್ತಾನೆ. ಬೇಗನೆ ತನ್ನ ಅರಮನೆಗೆ ಕರೆಸಿಕೊಳ್ಳುವುದಾಗಿ ದುಷ್ಯಂತ, ಶಕುಂತಲೆಗೆ ಆಶ್ವಾಸನೆಯನ್ನು ಕೊಟ್ಟಿರುತ್ತಾನೆ. ದುಷ್ಯಂತನ ನೆನಪಿನಲ್ಲೇ ಶಕುಂತಲೆ ಕಣ್ವರ ಆಶ್ರಮದಲ್ಲಿ ಕಾಲ ಕಳೆಯುತ್ತಿರುತ್ತಾಳೆ.
ಈ ನಡುವೆ, ಒಂದು ದಿನ ಕಣ್ವರ ಆಶ್ರಮಕ್ಕೆ ಕೋಪಿಷ್ಠ ಮುನಿ ದೂರ್ವಾಸರ ಆಗಮನವಾಗುತ್ತದೆ. ದುಷ್ಯಂತನ ನೆನಪಿನಲ್ಲೇ ಮುಳುಗಿಹೋದಿದ್ದ ಶಕುಂತಲೆ, ಮುನಿ ದುರ್ವಾಸರ ಆಗಮನವನ್ನು ಗಮನಿಸುವುದೇ ಇಲ್ಲ. ಇದರಿಂದ ಕೋಪಗೊಂಡ ದೂರ್ವಾಸರು, ಶಂಕುಂತಲೆಗೆ ಶಾಪವನ್ನು ನೀಡಿ 'ಶಕುಂತಲೆ, ನೀನು ಯಾರ ನೆನಪಿನಲ್ಲಿ ನನ್ನನ್ನು ಗಮನಿಸದೆ ಹೋದೆಯೋ, ಅದೇ ವ್ಯಕ್ತಿ ನಿನ್ನನ್ನು ಮರೆಯುವಂತಾಗಲಿ' ಎಂದು ಶಾಪವನ್ನು ನೀಡಿತ್ತಾನೆ. ತನ್ನ ತಪ್ಪಿನ ಅರಿವಾದ ಶಕುಂತಲೆ, ದೂರ್ವಾಸರ ಕ್ಷಮೆಯನ್ನು ಬೇಡುತ್ತಾಳೆ. ದೂರ್ವಾಸರು ತಮ್ಮ ಶಾಪಕ್ಕೆ ಉಪಶಮನವೊಂದನ್ನು ಸೂಚಿಸುತ್ತಾರೆ. 'ದುಷ್ಯಂತ ನಿನಗೆ ನೀಡಿರುವ ಮುದ್ರೆಯುಂಗುರವನ್ನು ನೀನು ಅವನಿಗೆ ತೋರಿಸದರೆ, ಅವನಿಗೆ ನಿನ್ನ ನೆನಪಾಗುತ್ತದೆ' ಎಂದು ಶಾಪಕ್ಕೆ ಪರಿಹಾರವನ್ನು ದೂರ್ವಾಸರು ನೀಡುತ್ತಾರೆ.
ಈ ಎಲ್ಲಾ ಘಟನೆಗಳು ಕಳೆದನಂತರ, ತಂದೆಯಾದ ಕಣ್ವರು ತಮ್ಮ ಆಶ್ರಮಕ್ಕೆ ಹಿಂದಿರುಗುತ್ತಾರೆ. ಶಕುಂತಲೆ-ದುಷ್ಯಂತರ ವಿವಾಹದ ಸುದ್ದಿಯನ್ನು ಕೇಳಿ, ಕಣ್ವರಿಗೆ ಸಂತೋಷವಾಗುತ್ತದೆ. ಗರ್ಭಿಣಿಯಾದ ಶಕುಂತಲೆಯನ್ನು, ಆಶ್ರಮದ ಮುನಿಗಳೊಂದಿಗೆ ದುಷ್ಯಂತನ ಅರಮನೆಗೆ ಕಳುಹಿಸುವ ಏರ್ಪಾಡನ್ನು ಋಷಿ ಕಣ್ವರು ಮಾಡುತ್ತಾರೆ. ಪ್ರಯಾಣದ ಮಾರ್ಗ ಮಧ್ಯೆ, ನದಿಯೊಂದರಲ್ಲಿ ಸ್ನಾನ ಮಾಡುವಾಗ ಶಂಕುಂತಲೆಯ ಮುದ್ರೆಯುಂಗರ ಅವಳ ಬೆರಳುಗಳಿಂದ ಜಾರಿಹೋಗಿರುತ್ತದೆ. ಅದು ಶಕುಂತಲೆಗೆ ಗೊತ್ತಾಗುವುದೇ ಇಲ್ಲ.
ದುಷ್ಯಂತನನ್ನು ಅರಮನೆಯಲ್ಲಿ ಭೇಟಿಯಾದ ಶಂಕುಂತಲೆಯನ್ನು ದುಷ್ಯಂತ ಗುರುತಿಸುವುದೇ ಇಲ್ಲ. ಏಕೆಂದರೆ, ಮುನಿ ದೂರ್ವಾಸರ ಶಾಪ ಅವನಿಗೂ ತಟ್ಟಿರುತ್ತದೆ. ಮುನಿ ದೂರ್ವಾಸರ ಶಾಪ ಪರಿಹಾರದ ನೆನಪಾದ ಶಕುಂತಲೆ, ದುಷ್ಯಂತ ನೀಡಿದ ಮುದ್ರೆಯುಂಗರವನ್ನು ದುಷ್ಯಂತನಿಗೆ ತೋರಿಸಲು ತನ್ನ ಬೆರಳುಗಳನ್ನು ಮುಂದೆ ಚಾಚುತ್ತಾಳೆ. ಆದರೆ ಅವಳ ಬೆರಳಿನಲ್ಲಿ ಮುಂದ್ರೆಯುಂಗುರ ಇರುವದೇ ಇಲ್ಲ. ದುಷ್ಯಂತನಿಂದ ತಿರಸ್ಕೃತಳಾದ ಶಕುಂತಲೆಯನ್ನು, ಕಣ್ವರ ಆಶ್ರಮದ ಋಷಿಮುನಿಗಳು ತಿರಸ್ಕರಿಸುತ್ತಾರೆ. 'ನಿನ್ನ-ರಾಜನ ವಿವಾಹದ ವಿಷಯ ನಿಜವಾದರೆ, ನೀನು ಅರಮನೆಯಲ್ಲೇ ಇರುತ್ತೀಯ, ಅದು ಸುಳ್ಳಾದರೆ ನಿನ್ನ ದಾರಿ ನಿನಗೆ, ನಮ್ಮ ದಾರಿ ನಮಗೆ' ಎಂದು ಹೇಳಿ ಋಷಿಮುನಿಗಳು ಶಕುಂತಲೆಯನ್ನು ಬಿಟ್ಟು ಹೋಗುತ್ತಾರೆ.
ಎಲ್ಲರಿಂದಲೂ ದೂರವಾಗಿ, ಏಕಾಂಗಿಯಾದ ಶಕುಂತಲೆ ಬೇರೆ ಆಶ್ರಮವೊಂದನ್ನು ಸೇರುತ್ತಾಳೆ. ಈ ನಡುವೆ ಮೀನುಗಾರನೊಬ್ಬನಿಗೆ ಶಕುಂತಲೆಯ ಮುದ್ರೆಯುಂಗುರ, ಮೀನುಗಾರನೊಬ್ಬನಿಗೆ ಮೀನಿನ ಹೊಟ್ಟೆಯೊಂದರಲ್ಲಿ ದೊರಕ್ಕುತ್ತದೆ. ಆ ಉಂಗುರ ರಾಜ ದುಷ್ಯಂತನಿಗೆ ಸೇರಿದ್ದು ಎಂದು ಗುರುತಿಸಿದ ಆ ಮೀನುಗಾರ, ಅದನ್ನು ರಾಜ ದುಷ್ಯಂತನಿಗೆ ಒಪ್ಪಿಸುತ್ತಾನೆ. ಮುಂದ್ರೆಯುಂಗುರವನ್ನು ನೋಡುತ್ತಲೇ, ದುಷ್ಯಂತನಿಗೆ ಶಕುಂತಲೆಯ ನೆನಪು ಮರುಕಳಿಸುತ್ತದೆ. ತನ್ನ ತಪ್ಪಿನ ಅರಿವಾದ ದುಷ್ಯಂತ ಶಕುಂತಲೆಗಾಗಿ ಹುಡುಕಾಡುತ್ತಾನೆ. ಕಡೆಗೆ ದುಷ್ಯಂತ-ಶಕುಂತಳೆಯರ ಮಿಲನವಾಗುತ್ತದೆ. ಜೊತೆಗೆ ರಾಜಕುಮಾರನಾದ ಭರತ ಕೂಡ. ಮುಂದೆ ಚಕ್ರವರ್ತಿಯಾದ ಭರತನ ಹೆಸರನಿಂದಲೇ, ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂದಿರುವುದು ಎಂಬುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು.
ಶೃಂಗಾರ ರಸ ಪ್ರಧಾನವಾದ ಶಕುಂತಲೆಯ ಪಾತ್ರಕ್ಕೆ ಸುಬ್ಬುಲಕ್ಷ್ಮಿಯವರು ಹೇಳಿಮಾಡಿಸಿದ ನಟಿಯಾಗಿರುತ್ತಾರೆ.
------------------------------------------------------------------------------------------------------------------------
ಶಕುಂತಲೆ ಸಿನಿಮಾದ ಭಾರಿ ಯಶಸ್ಸನ್ನು ಕಂಡ ನಿರ್ಮಾಪಕ ಸದಾಶಿವಂ ಅವರು ಮುಂದೆ "ಮೀರಾ" ಚಿತ್ರವನ್ನು ನಿರ್ಮಾಣವನ್ನು ಮಾಡುವ ಕನಸು ಕಂಡಿರುತ್ತಾರೆ. ಈ ನಡುವೆ ಸದಾಶಿವಂ ಅವರ ಮೊದಲ ಪತ್ನಿ ಅವರು ಮರಣಹೊಂದುತ್ತಾರೆ. ಸದಾಶಿವಂ ಅವರು ಸುಬ್ಬುಲಕ್ಷ್ಮಿ ಅವರನ್ನು ಮರು ವಿವಾಹ ಮಾಡಿಕೊಳ್ಳುತ್ತಾರೆ. ಸುಬ್ಬುಲಕ್ಷ್ಮಿ ಅವರಿಗಿಂತ ಸದಾಶಿವಂ ಅವರು ೧೫ ವರ್ಷಗಳಷ್ಟು ಹಿರಿಯರು ಎಂಬುದು ಗಮನಿಸಬೇಕಾದ ವಿಷಯ. ತಾಯಿ ಮನೆಯನ್ನು ತೊರೆದು ಬಂದಿದ್ದ ಸುಬ್ಬುಲಕ್ಷ್ಮಿ ಅವರಿಗೆ ಬೇರೆ ಮಾರ್ಗವೇ ಇರಲಿಲ್ಲ. ಮತ್ತು ಸದಾಶಿವಂರವರೂ ಕೂಡ ಸುಬ್ಬಲಕ್ಷ್ಮಿ ಅವರಿಗೆ ಆಪ್ತರಾಗಿ ಹೋಗಿದ್ದರು. ಹಾಗಾಗಿ ಸುಬ್ಬುಲಕ್ಷ್ಮಿ ಮತ್ತು ಸದಾಶಿವಂರವರ ಮಾಡುವೆ ಅಂದು ನಡದೇ ಹೋಯಿತು.
ತಮ್ಮ ಪತ್ನಿ ಸುಬ್ಬುಲಕ್ಷ್ಮಿ ಅವರನ್ನು ಇಡೀ ಭಾರತ ದೇಶದ ಮಹಾನ್ ನಾಯಕಿಯನ್ನಾಗಿಸುವ ಕನಸು ಕಂಡವರು ಸದಾಶಿವಂ ಅವರು. ಅದಕ್ಕಾಗಿಯೇ ಅವರು "ಮೀರಾ" ಚಿತ್ರದ ನಿರ್ಮಾಣವನ್ನು ತಮಿಳು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಮಾಡುವ ಯೋಜನೆಯನ್ನು ಸಿದ್ಧಪಡಿಸುತ್ತಾರೆ. ಎರಡೂ ಚಿತ್ರಗಳಲ್ಲಿ "ನಾಯಕಿ ಮೀರಾ" ಆಗಿ ಅಭಿನಯಿಸಿದವರು ಸುಬ್ಬುಲಕ್ಷ್ಮಿ ಅವರು. ಸುಶ್ರಾವ್ಯವಾದ ಕಂಠ ಮತ್ತು ಅಪಾರ ಸೌಂದರ್ಯ ಎರಡನ್ನು ಪಡೆದಿದ್ದ ಸುಬ್ಬುಲಕ್ಷ್ಮಿ, ಮೀರಾಳ ಪಾತ್ರಕ್ಕೆ ಹೇಳಿಮಾಡಿಸಿದವರಾಗಿರುತ್ತಾರೆ.
---------------------------------------------------------------------------------------------------------------------
೧೬ನೇ ಶತಮಾನದಲ್ಲಿ ಜನಿಸಿದ "ಮೀರಾ" ರಾಜಸ್ಥಾನದ ರಜಪೂತ ವಂಶಕ್ಕೆ ಸೇರಿದ ಹೆಣ್ಣು ಮಗಳು. ಬಾಲ್ಯದಿಂದಲೇ ಕೃಷ್ಣನ ಪರಮಭಕ್ತೆಯಾದ ಮೀರಾ, ಕೃಷ್ಣನನ್ನೇ ತನ್ನ ಪತಿಯೆಂದು ಭಾವಿಸಿರುತ್ತಾಳೆ. ದೊಡ್ಡವಳಾದ ಮೇಲೆ ಮೀರಾಳ ವಿವಾಹ ಭೋಜರಾಜ್ ಸಿಸೋಡಿಯಾ ಎಂಬ ರಜಪೂತ ರಾಜನೊಂದಿಗೆ ಆಗುತ್ತದೆ. ಮಹಾರಾಣಿಯಾದ ಅನಂತರವೂ ಮೀರಾಳ ಕೃಷ್ಣ ಭಕ್ತಿ ಮುಂದುವರೆದಿರುತ್ತದೆ. ತನ್ನ ಪರಮ ದೈವಾದ ಗಿರಿಧರ ಗೋಪಾಲನಿಗೆ ದೇವಸ್ಥಾನ ಒಂದನ್ನು ಕಟ್ಟಿಸಬೇಕೆಂದು ಮೀರಾ ತನ್ನ ಗಂಡನಲ್ಲಿ ಪ್ರಾರ್ಥಿಸಿಕೊಳ್ಳುತ್ತಳೆ. ಮಂದಿರದ ನಿರ್ಮಾಣವಾಗುತ್ತಲೇ ಮೀರಾ ಭಕ್ತಿಪರವಶಳಾಗಿ ಹಾಡುತ್ತಳೆ. ಆ ಹಾಡಿನ ಗಾಯನವೂ ಸುಬ್ಬುಲಕ್ಷ್ಮಿ ಅವರದ್ದೇ.
-----------------------------------------------------------------------------------------------------------------------------
ಗಿರಿಧರ ಗೋಪಾಲ ಹಾಡು
----------------------------------------------------------------------------------------------------------------------------
ಅರಮನೆಯನ್ನು ತೊರೆದು ಮೀರಾ ಭಕ್ತ ಜನರೊಡನೆ ಗಿರಿಧರ ಗೋಪಾಲನ ಮಂದಿರದಲ್ಲೇ ವಾಸಿಸ ತೊಡಗುತ್ತಾಳೆ. ಮಾಹಾರಾಣಿಯಾದರೂ ಅರಮನೆಯನ್ನು ತೊರೆದು ಬಡ ಸಂತರು ಮತ್ತು ಬಡ ಜನಗಳೊಂದಿಗೆ ಇರುತ್ತಾ ಇದ್ದದ್ದು ಮಹಾರಾಜನಿಗೆ ಕೋಪವನ್ನು ತರಿಸುತ್ತದೆ. ಲೆಕ್ಕಿಸದೆ ಮೀರಾ ಜನಸಾಮಾನ್ಯರೊಂದಿಗೆ ಇದ್ದು ಅರಮನೆಯ ಕೆಂಗಣ್ಣಿಗೆ ಗುರಿಯಾಗುತ್ತಾಳೆ.
ತನ್ನ ಕೃಷ್ಣಭಕ್ತಿ ಮತ್ತು ಸಂಗೀತದಿಂದ ಹೆಸರುವಾಸಿಯಾದ ಮೀರಾಳನ್ನು ಅಕ್ಬರ್ ಭೇಟಿಯಾದ ಕಥೆಯನ್ನು ಈಗ ನನ್ನ ತಂಗಿ ಪ್ರಜ್ಞಾ ಹೇಳುತ್ತಾಳೆ.
----------------------------------------------------------------------------------------------------------------------
ಪ್ರಜ್ಞಳಿಂದ ಅಕ್ಬರ್ ಕಥೆ
------------------------------------------------------------------------------------------------------------------------
ತಾವೇ ಮಹಾರಾಣಿಯಾಗಿದ್ದರು ಮೀರಾ ಅವರು ಜನ ಸಾಮಾನ್ಯರ ಪರವಾಗಿದ್ದರು ಮತ್ತು ಜನಸಾಮಾನ್ಯರ ನಡುವೆಯೇ ಬಾಳಿದರು ಎಂಬುದಕ್ಕೆ ನಾವೀಗ ಹಾಡುವ ಮೀರಾ ಭಜನೆಯೇ ಸಾಕ್ಷಿ.
-----------------------------------------------------------------------------------------------------------------------
ಕರಮ್ ಕೆ ಗತಿ ನ್ಯಾರಿ ಹಾಡು
----------------------------------------------------------------------------------------------------------------------------
ಕೃಷ್ಣಭಕ್ತಿ, ಸಂಗೀತ ಇದರಲ್ಲೇ ಮುಳುಗಿದ್ದ ಮೀರಾ ತನ್ನನ್ನು ಉದಾಸೀನ ಮಾಡುತ್ತಿದ್ದಳೆಂದು ಮೀರಾಳ ಪತಿಗೆ ಅನಿಸುತ್ತಾ ಇರುತ್ತೆ. ಇದರಿಂದ ಭೋಜರಾಜನ ಕೋಪ ನೆತ್ತಿಗೇರುತ್ತದೆ. ತನ್ನ ಬಗೆಗಿನ ಮೀರಾಳ ಉದಾಸೀನಕ್ಕೆ ಗಿರಿಧರ ಗೋಪಾಲನೇ ಕಾರಣ ಎಂದು ಭಾವಿಸಿದ ಭೋಜರಾಜ, ತಾನೇ ಮೀರಾಳಿಗಾಗಿ ಕಟ್ಟಿಸಿದ ಗಿರಿಧರ ಗೋಪಾಲನ ಮಂದಿರವನ್ನು ಮದ್ದು ಗುಂಡುಗಳನ್ನು ಸಿಡಿಸಿ ನಾಶ ಪಡಿಸುವಂತೆ ಆಜ್ಞಾಪಿಸುತ್ತಾನೆ. ಬೇಸರಗೊಂಡ ಮೀರಾ ಕೃಷ್ಣನನ್ನು ಸೇರಲು ಮಥುರಾ ಮಾರ್ಗವಾಗಿ ದ್ವಾರಕೆಯನ್ನು ತಲುಪುತ್ತಾಳೆ. ದ್ವಾರಕೆಯಲ್ಲೇ ಮೀರಾ ಕೃಷ್ಣನೊಂದಿಗೆ ಐಕ್ಯಳಾಗುತ್ತಾಳೆ. --------------------------------------------------------------------------------------------------------------------------------------
ಮೀರಾ ಸಿನಿಮಾ ತಮಿಳು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಜಯಭೇರಿ ಬಾರಿಸುತ್ತದೆ.
ಮೀರಾಳ ಜೀವನ ಮತ್ತು ಸಾಧನೆಗೂ ಮತ್ತು ಸುಬ್ಬುಲಕ್ಷ್ಮಿ ಅವರ ಜೀವನ ಮತ್ತು ಸಾಧನೆಗೂ ಅತಿ ಹೆಚ್ಚು ಹೋಲಿಕೆ ಇರುವುದನ್ನು ಸಭಿಕರು ಗಮನಿಸಬೇಕು. ಮೀರಾಳಂತೆಯೇ ಸುಬ್ಬುಲಕ್ಷ್ಮಿ ಅವರು ದೈವ ಭಕ್ತೆ. ಮೀರಾಳಂತೆ ಸಂಸಾರಕ್ಕೆ ಅಂಟಿಕೊಳ್ಳದೇ ಸುಬ್ಬುಲಕ್ಷ್ಮಿ ಅವರು ಭಗವನ್ನಾಮ ಸ್ಮರಣೆಯಲ್ಲೇ ಜೀವನವನ್ನು ಕಳೆದವರು. ಮೀರಾಳಂತೇ ಸುಬ್ಬುಲಕ್ಷ್ಮಿ ಅವರು ಕೂಡ ಜನಸಾಮಾನ್ಯರಿಗೆ ಹತ್ತಿರವಾಗಿ ಬಾಳಿದವರು, ದಾನ ಧರ್ಮಗಳನ್ನು ಮಿತಿ ಇಲ್ಲದೆ ಮಾಡಿದವರು. ಮೀರಾಳ ಹಾಡುಗಳು ಹಾಗೂ ಕೃತಿಗಳು ಹೇಗೆ ಶತಮಾನಗಳು ಉರುಳಿದರೂ ಜೀವಂತವಾಗಿರುವವೋ ಅದೇ ರೀತಿ ಸುಬ್ಬುಲಕ್ಷ್ಮಿ ಅವರ ಹಾಡುಗಳು ಮತ್ತು ಸ್ತೋತ್ರಗಳು ಶತಮಾನಗಳು ಉರುಳಿದರೂ ಉಳಿಯುವಂತಹವು.
------------------------------------------------------------------------------------------------------------------------
ಹಿಂದಿ ಭಾಷೆಯ ಮೀರಾ ಸಿನಿಮಾದ ಬಿಡುಗಡೆಯ ವೇಳೆ ಸುಬ್ಬುಲಕ್ಷ್ಮಿ ಅವರಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಪ್ರಧಾನಿ ನೆಹರು, ಸರೋಜಿನಿ ನಾಯ್ಡು ಮುಂತಾದವರ ಪರಿಚಯವಾಗುತ್ತದೆ. ಸುಬ್ಬುಲಕ್ಷ್ಮಿ ಅವರ ಸಂಗೀತ ಪ್ರತಿಭೆಯನ್ನು ಮನಸಾರೆ ಹೊಗಳಿದ ಪ್ರಧಾನಿ ನೆಹರು "ನಾನು ಒಬ್ಬ ಪ್ರಧಾನಿ ಮಾತ್ರ, ಆದರೆ ನೀನು ಸಂಗೀತ ಪ್ರಪಂಚಕ್ಕೆ ಮಹಾರಾಣಿ" ಎಂದು ಹೇಳಿದ್ದನ್ನು ಹಿರಿಯರೆಲ್ಲಾ ಈಗಲೂ ನೆನಪಿಸಿಕೊಳ್ಳುತ್ತಾರೆ.
ಗಾಂಧೀಜಿ ಅವರ ಆಶಯದಂತೆ ಸುಬ್ಬುಲಕ್ಷ್ಮಿ ಅವರು ಹಾಡಿದ "ವೈಷ್ಣವ ಜನತೋ ತೇನೆ ಕಹಿಯೆಜೆ" ಹಾಡು ಜನಮಾನಸದಲ್ಲಿ ಇಂದಿಗೂ ಉಳಿದಿರುವುದನ್ನು ತಾವೆಲ್ಲಾ ನೋಡಿದ್ದೀರಿ.
--------------------------------------------------------------------------------------------------------------------------
Vaishnav jan to tene kahiye jay
Vaishnav jan to tene kahiye jay
peerh paraaye janney ray--------------------------------------------------------------------------------------------------------------------------
೧೯೬೩ರಲ್ಲಿ ಸುಬ್ಬುಲಕ್ಷ್ಮಿ ಅವರು ಹಾಡಿದ ವೆಂಕಟೇಶ್ವರರ ಸುಪ್ರಭಾತ ಇಂದಿಗೂ ಭಾರತ ದೇಶದ ಮನೆ ಮನಗಳ ಸುಪ್ರಭಾತವಾಗಿ ಉಳಿದಿರುವುದು ಎಲ್ಲರಿಗೂ ತಿಳಿದ ವಿಷಯವೇ.
Kousalya supraja Rama poorva sandhya pravarthathe
Uttishta Narasardula karthavyam dhaivamanhikam.
-----------------------------------------------------------------------------------
ಸುಬ್ಬುಲಕ್ಷ್ಮಿ ಹಾಗೂ ಸದಾಶಿವಂ ದಂಪತಿ ದಾನ-ಧರ್ಮಗಳಲ್ಲಿ ಎತ್ತಿದ ಕೈ. ವೆಂಕಟೇಶ್ವರ ಸುಪ್ರಭಾತದ ಸಮಸ್ತ ಮಾರಾಟದ ಹಕ್ಕುಗಳನ್ನು ತಿರುಪತಿ ದೇವಸ್ಥಾನಕ್ಕೆ ನೀಡಿದ್ದಾರೆ. ಅದರಿಂದ ಬರುವ ಎಲ್ಲ ಆದಾಯ ತಿರುಪತಿ ದೇವಸ್ಥಾನದವರು ನಡೆಸುವ ವೇದ ಪಾಠಶಾಲೆಗೆ ಇಂದಿಗೂ ಸಲ್ಲುತ್ತದೆ.
೧೯೬೨-೬೩ರ ದಿನಗಳಲ್ಲಿ ನಮ್ಮ ದೇಶ ಬಲಿಷ್ಠ ಚೀನಾದಾ ವಿರುದ್ಧ ಯುದ್ಧ ಮಾಡಬೇಕಾಗಿಬಂತು. ಯುದ್ಧದಲ್ಲಿ ಸೋಲನ್ನು ಕಂಡ ಭಾರತ ಅಪಾರ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ಕಳೆದುಕೊಂಡಿತು. ಮೃತ ಸೈನಿಕರ ಕುಟುಂಬಗಳಿಗೆ ಪರಿಹಾರವನ್ನು ಬೇಡಿ ಸೈನಿಕರ ತಂಡವೊಂದು ಸುಬ್ಬುಲಕ್ಷ್ಮಿ ಅವರ ಕಚೇರಿಯೊಂದಕ್ಕೆ ಬಂದಿತ್ತು. ಕಚೇರಿ ನಡುವೆಯೇ ಸುಬ್ಬುಲಕ್ಷ್ಮಿ ಅವರು ತಾವು ಬಲಗೈಯಲ್ಲಿ ಧರಿಸಿದ್ದ ಒಂದು ಜೊತೆ ಚಿನ್ನದ ಬಳೆಯನ್ನು ಸೈನಿಕರಿಗೆ ಕಾಣಿಕೆಯಾಗಿ ನೀಡಿದರು. ಸುಬ್ಬುಲಕ್ಷ್ಮಿ ಅವರ ಕೊಡುಗೈ ದಾನವನ್ನು ಮೆಚ್ಚಿದ ಜನಸ್ತೋಮ ಧೀರ್ಘ ಕರತಾಡನವನ್ನು ಮಾಡಿದರು. ಅಷ್ಟೇ ಅಲ್ಲಾ, ಕಚೇರಿಯಲ್ಲಿ ನೆರೆದ ಎಲ್ಲಾ ಹೆಂಗಸರೂ ತಮ್ಮ ಮೈಮೇಲಿದ್ದ ಚಿನ್ನಾಭರಣಗಳನ್ನು ಕಳೆಚಿ ಸೈನಿಕರಿಗೆ ಕಾಣಿಕೆಯಾಗಿ ನೀಡಿದ್ದು ಈಗ ಇತಿಹಾಸ. ಆ ದಿನ ಸುಮಾರು ೨ ಕೆಜಿಯಷ್ಟು ಬಂಗಾರ ಸೈನಿಕರ ಜೋಳಿಗೆಯನ್ನು ಸೇರಿತು ಎಂಬುದನ್ನು ಹಿರಿಯರು ಈಗಲೂ ನೆನೆಸಿಕೊಳ್ಳುತ್ತಾರೆ.
------------------------------------------------------------------------------------------------------------
ನಾಚಿಯಪ್ಪನ್ ಕಥೆ :
-------------------------------------------------------------------------------------------------------------------------
೧೯೬೬ ಸುಬ್ಬುಲಕ್ಷ್ಮಿಯವರ ಜೀವನದ ಮೇರುಕಾಲವೆಂದೇ ಹೇಳಬಹುದು. ವಿಶ್ವ ಸಂಸ್ಥೆಯಿಂದ ಬಂದ ಕರೆಯ ಮೇರೆಗೆ ೧೯೬೬ರ ಅಕ್ಟೋಬರ್ ೨೩ರಂದು ಸುಬ್ಬುಲಕ್ಷ್ಮಿ ಅವರು ನ್ಯೂ ಯೋರ್ಕ್ನ ವಿಶ್ವಸಂಸ್ಥೆಯ ಸಭಾಂಗಣದಲ್ಲಿ ಹಾಡಿದ್ದು ಈಗ ಇತಿಹಾಸ. ವಿಶ್ವದ ಕೆಲವೇ ಕೆಲವು ಸಂಗೀತಗಾರರಿಗೆ ಮಾತ್ರ ಈ ಅವಕಾಶ ದೊರಕಿರುವುದನ್ನು ನಾವು ಗಮನಿಸಬೇಕು. ಅಂದಿನ ವಿಶ್ವ ಸಂಸ್ಥೆಯ ಕಚೇರಿಯಲ್ಲಿ ಹಾಡಲು ಕನ್ನಡದ ಹರಿದಾಸರಾದ ಪುರಂದರ ದಾಸರ "ಆಡಿಸಿದಳೇಶೋದ" ಕೃತಿಯನ್ನು ಆಯ್ಕೆಮಾಡಿಕೊಂಡಿದ್ದು ಕನ್ನಡಿಗರಾದ ನಮ್ಮೆಲರಿಗೂ ಹೆಮ್ಮೆಯ ವಿಷಯ. ವಿಶ್ವ ಸಂಸ್ಥೆಯ ಧ್ಯೆಯವಾದ "ಜಗದೋದ್ದಾರವನ್ನು" ಮಾಡಿದವನು ಶ್ರೀ ಕೃಷ್ಣ. ಹಾಗಾಗೇ "ಜಗದೋದ್ಧಾರನ ಆಡಿಸಿದಳೇಶೋದ" ಎಂಬ ದಾಸರ ಪದವನ್ನು ಸುಬ್ಬುಲಕ್ಷ್ಮಿ ಅವರು ಹಾಡಿದ್ದು ಅಂದಿನ ಸಭಿಕರಿಗೆಲ್ಲರಿಗೂ ಸಂತಸ ತಂದಿದ್ದು ನಮ್ಮೆಲರಿಗೂ ಸಂತೋಷದ ವಿಷಯ .
-----------------------------------------------------------------------------------------------------------
ಆಡಿಸಿದಳೇಶೊದ ಹಾಡು
---------------------------------------------------------------------------------------------------------------
ಕನ್ನಡದ ದಾಸರ ಕೃತಿಗಳನ್ನು ಜನಪ್ರಿಯಗೊಳಿಸುವಲ್ಲಿ ಸುಬ್ಬುಲಕ್ಷ್ಮಿಯವರ ಕೊಡುಗೆ ಅಪಾರ. ಸುಬ್ಬುಲಕ್ಷ್ಮಿ ಅವರ ಪ್ರಯತ್ನಕ್ಕೆ "ಆಡಿಸಿದಳೇಶೋದ" ಕೃತಿಯನ್ನು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಹಾಡಿದ್ದೇ ಸಾಕ್ಷಿ.
ಅಂದಿನ ದಿನ ವಿಶ್ವಸಂಸ್ಥೆಯಲ್ಲಿ ಸುಬ್ಬುಲಕ್ಷ್ಮಿ ಅವರು ಹಾಡಿದ ಮತ್ತೊಂದು ಹಾಡೆಂದರೆ ಅದು "ಮೈತ್ರೀಮ್ ಭಜತ” ಎಂಬ ಕಂಚಿ ಪರಮಾಚಾರ್ಯರ ಕೃತಿ.
-------------------------------------------------------------------------------------------------------------
ಮೈತ್ರೀಮ್ ಭಜತಾಂ ಹಾಡು
ಯುದ್ಧಮ್ ತ್ಯಜಾತಂ, ಅಂದರೆ ಯುದ್ಧಗಳು ನಿಲ್ಲಲಿ, ತ್ಯಜತ ಪರೇಷ್ವ ಅಕ್ರಮ ಅಕ್ರಮಣಂ ಅಂದರೆ ಬೇರೆ ದೇಶಗಳ ಮೇಲೆ ಅಕ್ರಮ ಆಕ್ರಮಣಗಳು ನಿಲ್ಲಲಿ ಎಂದು. ಈಗ ನೋಡಿ, ಉಕ್ರೈನ್-ರಷ್ಯಾ, ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧಗಳು ಆರಂಭವಾಗಿ ವರ್ಷಗಳೇ ಉರುಳಿವೆ. ಆದರೂ ಯುದ್ಧ ಮಾತ್ರ ನಿಂತಿಲ್ಲ. ಯುದ್ಧವೇನೋ ದೊಡ್ಡ ದೊಡ್ಡ ನಾಯಕರುಗಳ ಪ್ರತಿಷ್ಠೆಗಾಗಿ ಶುರುವಾಗುತ್ತವೆ. ಆದರೆ, ಅದರ ದುಷ್ಪರಿಣಾಮಗಳನ್ನು ಎದುರಿಸುವರು ಮಾತ್ರ ನಮ ನಿಮ್ಮಂಥ ಸಾಮಾನ್ಯ ಪ್ರಜೆಗಳೇ!
"ಮೈತ್ರೀಮ್ ಭಜತ" ಕೃತಿ ಕೂಡ ವಿಶ್ವಸಂಸ್ಥೆಯ ಧ್ಯೆಯವನ್ನು ಪ್ರತಿಬಿಂಬಿಸುವುದನ್ನು ನಾವು ಮತ್ತೆ ಮತ್ತೆ ಗಮನಿಸಬೇಕಾದ ಅಂಶ.
----------------------------------------------------------------------------------------------------------------
ಮೈತ್ರೀಮ್ ಭಜತಾಂ ಹಾಡು
------------------------------------------------------------------------------------------------------------
ವಿಶ್ವ ಸಂಸ್ಥೆಯ ಕಾರ್ಯಕ್ರಮದನಂತರ ಪತ್ರಕರ್ತರೊಬ್ಬರು ಸಂದರ್ಶನವೊಂದರಲ್ಲಿ ಸುಬ್ಬಲಕ್ಷ್ಮಿಯವರಿಗೆ ಪ್ರಶ್ನೆಯೊಂದನ್ನು ---------------------
ದೈನಿಕ ಅಭ್ಯಾಸದ ಮಹತ್ವ
------------------------------------------------------------------------------------------------------------
ಸುಬ್ಬುಲಕ್ಷ್ಮಿ ಅವರಿಗೆ ಪ್ರತಿಸ್ಪರ್ಧಿಗಳು ಇತ್ತಿಲ್ಲ ಎಂದೇನಲ್ಲ. ಹೆಸರಾಂತ ವಿದುಷಿಯರಾದ ಡಿ.ಕೆ. ಪಟ್ಟಮ್ಮಾಳ್ ಅವರು ಮತ್ತು ಎಂ.ಎಲ್. ವಸಂತ ಕುಮಾರಿಯವರು ಸುಬ್ಬಲಕ್ಷ್ಮಿ ಅವರ ಸಮಕಾಲೀನರೇ. ಡಿ.ಕೆ. ಪಟ್ಟಮಾಳ್ ಅವರು ಲಯ ವಿಶೇಷಕ್ಕೆ ಹೆಸರುವಾಸಿಯಾದರೆ, ಮನೋಧರ್ಮ ಸಂಗೀತಕ್ಕೆ ಎಂ.ಎಲ್. ವಸಂತ ಕುಮಾರಿ ಅವರು ಹೆಸರುವಾಸಿಯಾಗಿದ್ದವರು. ಎಲ್ಲರನ್ನೂ ಮೀರಿಸಿದ ಭಕ್ತಿ ಸಂಗೀತ ಸುಬ್ಬಲಕ್ಷ್ಮಿ ಅವರದ್ದು.
-------------------------------------------------------------------------------------------------------
೬೦ರ ದಶಕದಲ್ಲಿ ಸುಬ್ಬುಲಕ್ಷ್ಮಿ ಅವರು ಪ್ರಕಟಿಸಿದ ಮತ್ತೊಂದು ಅನರ್ಘ್ಯ ರತ್ನವೆಂದರೆ, ಸ್ವಾತಿ ತಿರುನಾಳ್ ಮಹಾರಾಜರ ಕೃತಿಯಾದ "ಭಾವಯಾಮಿ ರಘುರಾಮಮ್". ಸಂಪೂರ್ಣ ರಾಮಾಯಣವನ್ನು ಸುಶ್ರಾವ್ಯವಾಗಿ ಹಾಡಿ ಜನಪ್ರಿಯಗೊಳಿಸಿದವರು ಸುಬ್ಬಲಕ್ಷ್ಮಿ ಅವರು.
ಅದನ್ನೀಗ ಕೇಳೋಣ.
ರಾಗಂ: ರಾಗಮಾಲಿಕಾ
ತಾಳಂ: ರೂಪಕಂ
ಸಂಯೋಜಕ: ಸ್ವಾತಿ ತಿರುನಾಳ್
ಆವೃತ್ತಿ: ಎಂ ಎಸ್ ಸುಬ್ಬಲಕ್ಷ್ಮಿ
ಪಲ್ಲವಿ : (SAVERI) : [ARO: S R1 M1 P D1 S || AVA: S N3 D2 P M1 G3 R1 S || ,
ಭಾವಯಾಮಿ ರಾಹುರಾಮಂ ಭವ್ಯ ಸುಗುಣರಾಮಮ್
ಅನುಪಲ್ಲವಿ : (SAVERI)
ಭಾವುಕವುತರನಪರಾ ಅಪಂಗಲೀಲಾಲಸಿತಮ್
ಚರಣಂಗಳು :
ನಟ್ಟಕುರಂಜಿ (ಬಾಲಕಂಡಂ ) [ARO: S R2 G3 M1 N2 D2 N2 P D2 N2 S ||
AVA: S N2 D2 M1 G3 R2 G3 M2 P G3 R2 S || ,
ದಿನಕರವಾಯತಿಲಕಂ ದಿವ್ಯಗಾದಿಸುತಾಸವನ
ವಾನರಚಿತಸುಬಾಹುಮುಖ ವದಮಹಲ್ಯಾಪಾವನಮ್
ಅನಾಗಮೀಶಚಾಪಭಂಗಂ ಜನಕಸುತಪ್ರಾಣೇಶಮ್
ಘನಕುಪಿತಭೃಗುರಾಮ ಗರ್ವಾಹಮಿತಾಸಕೇತಮ್
ಧನ್ಯಾಸಿ (ಅಯೋಧ್ಯಾಕಾಂಡಂ) [ARO: S G2 M1 P N2 S || AVA: S N2 D1 P M1 G2 R1 S || ,
ವಿಹತಮಭಿಷೇಕಮದಃ ವಿಪಿನಾಗತಮರ್ಯವಚಃ
ಸಹಿತಾಸೀತಾ ಸೌಮಿತ್ರೀಂ ಸನ್ತತಮಶೀಲಮ್
ಗುಹಾನಿಲಯಾಗತಾಂ ಚಿತ್ರಕೂಟಗಾಥಾಭಾರತದತ್ತಾ
ಮಹಿತರತ್ನಮಯಪಾದುಕಾ ಮದನ ಸುಂದರಾಂಗಮ್
ಭಾವಯಾಮಿ ಕೃತಿಯನ್ನು ಮನಸಿಟ್ಟು ಕೇಳಿದರೆ ರಾಮಾಯಣದ ಎಲ್ಲಾ ಘಟನೆಗಳು ಕಣ್ಣಿಗೆ ಕಟ್ಟಿದಂತೆ ನಮ್ಮ ಮುಂದೆ ಬಂದು ಹಾದುಹೋಗುತ್ತವೆ.
---------------------------------------------------------------------------------------------------
ಭರತನ ಮೇಲೆ ರಾಮನ ಪ್ರೀತಿಯ ಕಥೆ ಗೌರಿಯಿಂದ
----------------------------------------------------------------------------------------------------------------
ರಾಮಾಯಣದಲ್ಲಿ ಸಾಕ್ಷಾತ್ ರಾಮನೇ ಪೇಚಿಗೆ ಸಿಲುಕಿದ ಪ್ರಸಂಗವೊಂದರ ಕಥೆಯನ್ನು ಈಗ ಪ್ರಜ್ಞಾ ಹೇಳುತ್ತಾಳೆ.
ಒಂದು ರಾಮಾಯಣದ ಕಥೆ ಪ್ರಜ್ಞಳಿಂದ
ಸುಬ್ಬುಲಕ್ಷ್ಮಿಯವರು ಶಂಕರಾಚಾರ್ಯರ ಹಲವು ಕೃತಿಗಳನ್ನು ಹಾಡಿದ್ದಾರೆ. ಅವುಗಳಲ್ಲಿ "ಭಜ ಗೋವಿಂದಂ" ಕೃತಿ ತುಂಬಾ ಜನಪ್ರಿಯವಾದುದು.
ಕನ್ನಡ ಅರ್ಥ ಸಮೇತ
ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ|
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ || 1||
ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು, ಎಲೈ ಮೂಢ..!
ಅಂತ್ಯ ಕಾಲವು ಸಮೀಪಿಸಿರುವಾಗ ನಿನ್ನ ವ್ಯಾಕರಣ ಜ್ಞಾನ, ನಿನ್ನ ಅಪಾರ ವಿದ್ಯೆ ನಿನ್ನನ್ನು ಕಾಪಾಡುವುದಿಲ್ಲ.
ಭಜಗೋವಿಂದಂ ಕೃತಿಯ ಸಂದೇಶವನ್ನು ಸಾರುವ ಒಂದು ಹಾಸ್ಯಭರಿತ ಲೌಕಿಕ ಕಥೆ ಈಗ ಪ್ರಜ್ಞಳಿಂದ.
ತನಿ ಆವರ್ತನ
---------------------------------------------------------------------------------------------------------------------------------------------
ಒಂದು ಉಪಕಥೆ ಪ್ರಜ್ಞಳಿಂದ
---------------------------------------------------------------------------------------------------
-----------------------------------------------------------------------------------------------------------------------------------------------
ಶ್ರೀ ರಂಗ ಗದ್ಯವನ್ನು ಸುಶ್ರಾವ್ಯವಾಗಿ ಹಾಡಿ ಬೆಳಕಿಗೆ ತಂದವರು ಸುಬ್ಬಲಕ್ಷ್ಮಿ ಅವರು. ಶ್ರೀ ರಂಗ ಗದ್ಯವನ್ನು ರಚಿಸಿದವರು ಸಾಕ್ಷಾತ್ ಶ್ರೀ ರಾಮಾನುಜಾಚಾರ್ಯರೇ. ರಾಮಾನುಜಾಚಾರ್ಯರ ಶ್ರೀರಂಗ ಗದ್ಯದಿಂದ ಸ್ಫೂರ್ತಿಪಡೆದೆ, ಮುಂದೆ ತಮಿಳ್ ಸಂತರಾದ ವೇದಾಂತ ದೇಶಿಕರ್ ಅವರು 'ರಘುವೀರ ಗದ್ಯ'ವನ್ನು ರಚಿಸಿದ್ದು. ವೇದಾಂತ ದೇಶಿಕರ್ ಅವರು ತಮಿಳ್ ನಾಡಿನ ತಿರುವಹಿಂದ್ರಾಪುರಮ್ ನ ಕೋದಂಡರಾಮ ಪರಮ ಭಕ್ತರು. ಅವರು ರಘುವೀರ ಗದ್ಯದಲ್ಲಿ ವರ್ಣಿಸಿರುವುದು ಕೋದಂಡರಾಮನ ಶೌರ್ಯದ ವೀರಾವೇಶವನ್ನು. ರಾಮಾಯಣ ಯುದ್ಧದಲ್ಲಿ ಒಮ್ಮೆ........
ರಘುವೀರ ಗದ್ಯವನ್ನು ಪ್ರಥಮ ಭಾರಿಗೆ ಹಾಡಿ ಜನಪ್ರಿಯಗೊಳಿಸಿದವರೂ ಎಂ. ಎಸ್. ಅಮ್ಮನವರೇ. ಅದನ್ನೀಗ ಕೇಳೋಣ.
ಜಯ ಜಯ ಮಹಾವೀರ.
--------------------------------------------------------------------------------------------------------------------------------------
ಉತ್ತರ ಪ್ರದೇಶದ ತುಳಸಿದಾಸರು ಶ್ರೀರಾಮನ ಪರಮಭಕ್ತರು. ಶ್ರೀ ರಾಮಚರಿತ ಮಾನಸವನ್ನು ಅವಧಿ ಭಾಷೆಯಲ್ಲಿ ಬರೆದ ಕೀರ್ತಿ ತುಳಸೀದಾಸರಿಗೆ ಸಲ್ಲುತ್ತದೆ. ತುಳಸೀದಾಸರ ಹನುಮಾನ್ ಚಾಲೀಸವನ್ನು ಮೊದಲ ಬಾರಿಗೆ ಹಾದಿ ಜನಪ್ರಿಯಗೊಳಿಸಿದವರು ನಮ್ಮ ಭಾರತರತ್ನ ಸುಬ್ಬುಲಕ್ಷ್ಮಿ ಅವರು. ಹನುಮಾನ್ ಚಲಿಸದ ರಚನೆಯ ಹಿಂದೆ ಒಂದು ರೋಚಕ ಕಥೆಯೇ ಇದೆ. ಅದನ್ನೀಗ ಕೇಳೋಣ.
ಪ್ರಜ್ಞಾಳಿಂದ ಅಕ್ಬರ್-ತುಳಸೀದಾಸರ ಕಥೆ.
-------------------------------------------------------------------------------------------------------------------------------------
ಹನುಮಾನ್ ಚಾಲೀಸಾ ಹಾಡುಗಾರಿಕೆ
------------------------------------------------------------------------------------------------------------------------------------------------
ಭೂಮಿ ಮತ್ತು ಸೂರ್ಯನ ನಡುವಿನ ದೂರ, ಹನುಮಾನ್ ಚಲಿಸದಲ್ಲಿ. - ಗೌರಿಯಿಂದ
---------------------------------------------------------------------------------------------------------------------------------------------------
೧೯೮೨ರ ನಂತರ ಸುಬ್ಬುಲಕ್ಷ್ಮಿಯವರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಲ್ಲಿಸಿ, ತಮಿಳ್ ನಾಡಿನ ಚೆನ್ನೈನಲ್ಲಿ ವಾಸಿಸ ತೊಡಗಿದರು. ೧೯೯೭ರಲ್ಲಿ ಸುಬ್ಬಲಕ್ಷ್ಮಿ ಅವರ ಪತಿಯವರಾದ ಸದಾಶಿವಂ ಅವರು ನಿಧನರಾದರು.
೧೯೯೮ರ ಅಟಲ್ ಬಿಹಾರಿ ವಾಜಪೇಯೀ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಸುಬ್ಬುಲಕ್ಷ್ಮಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಭಾರತ ರತ್ನದಿಂದ ಸುಬ್ಬಲಕ್ಷ್ಮಿ ಅವರ ಘನತೆ ಹೆಚ್ಚುವುದಿರಲಿ, ಸುಬ್ಬುಲಕ್ಷ್ಮಿ ಅವರಿಂದ ಭಾರತ ರತ್ನ ಪ್ರಶಸ್ತಿಯ ಘನತೆ ಹೆಚ್ಚಿತ್ತೆಂದರೆ ತಪ್ಪಾಗಲಾರದು.
೮೮ ವರ್ಷದ ತುಂಬು ಹಾಗು ಸಾರ್ಥಕ ಜೀವನ ನಡೆಸಿದ ಸುಬ್ಬುಲಕ್ಷ್ಮಿಯವರು ೨೦೦೪ರಲ್ಲಿ ಪರಮಾತ್ಮನ ಪಾದ ಸೇರಿದರು.
ಇಲ್ಲಿಗೆ ನಮ್ಮ ಭಾರತ ರತ್ನ ಸುಬ್ಬುಲಕ್ಷ್ಮಿ ಅವರ ಹರಿಕಥೆಯನ್ನು ಮುಕ್ತಾಯಗೊಳಿಸುತ್ತಿದ್ದೇವೆ. ಬಾಲಕಿಯರಾದ ನಮ್ಮನ್ನು ಆಶೀರ್ವದಿಸಿ ನಮ್ಮ ಹರಿಕಥೆಯನ್ನು ಕೇಳಿದ ತಮ್ಮೆಲ್ಲರಿಗೂ ಧನ್ಯವಾದಗಳು.
ಮಂಗಳ
madhyamavati shloka
-೦-೦-೦-೦-೦-೦-