Wednesday 20 October 2021

 

 

ಕವನೋತ್ಸವ  

(ರಚನೆ: ಲಕ್ಷ್ಮೀನಾರಾಯಣ ಕೆ.

Klakshminarayana1956@rediffmail.com

Mobile: 98455 62603)

***

ಕವನೋತ್ಸವ1

ಯಾರಿವರು?

***

'ಮಸಣದ ಚಲುವೊಂದಿಗೆ' ಪ್ರಣಯವಾಯ್ತೆ?

ಮಸಣದ ನೀರವತೆ ದಮನಿತರ

ದನಿಗೆ, ತಾ ಸ್ಫೂರ್ತಿಯಾಯ್ತೆ?

 

'ನಾ ಮೂಳೆ, ನಾ ಇಂಗೆ ಇರಲ್ಲಾ

ಕೂಗ್ತೀನಿ, ಸಿಡಿತೀನಿ,' ಎಂಬಿವನ ದನಿ

ಬಂಡಾಯದ ಕೂಗಾಯ್ತೆ?

 

'ತ್ರಾಣ, ಪ್ರಾಣ ಎಳ್ಡೂ ಇಲ್ದೆ

ತ್ವಡೆ ನಡ್ಗಿ ಸತ್ತೋಗೋರಾ,' ಎಂಬೀ ಕೂಗು

ನಮ್ಮಾಳೋರ ಬಡಿದೆಬ್ಬಿಸಿತೇ?

 

 

'ಟಾಟಾ, ಬಿರ್ಲಾ ಜೋಬಿಗೆ ಬಂತು

ನಲವತ್ತೇಳರ ಸ್ವಾತಂತ್ರ್ಯ' ಎಂದವನ ನಾದ

ಸಾಮಾಜಿಕ ನ್ಯಾಯಕ್ಕೆ ತಾ ನಾಂದಿಯಾಯ್ತೆ?

 

ಶೋಷಿತರ ದನಿಯಿಂದು ಸದ್ದಡಗಿಸಿತೆ?

ದಿವ್ಯ ಚೇತನಕೇತರ ಸಾವು?

ಸ್ಥಾವರಕಳಿವುಂಟು, ಜಂಗಮಕ್ಕುಂಟೇ?

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಬಂಡಾಯ ಕವಿ ಸಿದ್ಧಲಿಂಗಯ್ಯ)

******

 

ಕವನೋತ್ಸವ2

ಯಾರಿವರು?

***

ಮೂರ್ತಿ ಚಿಕ್ಕದಾದರೂ 

ಕೀರ್ತಿ ದೊಡ್ಡದಂತೆ 

ಮೊದಲಾಟದಲ್ಲೇ ಸಿಡಿಯಿತಂತೆ 

ಭರ್ಜರಿ ಚೊಚ್ಚಲ ಶತಕ 

ಬ್ಯಾಟಿಂಗ್ ಕಲೆಯ ನಿಪುಣನೀತ 

ನೂರೇರಿಸಿದಾಗೆಲ್ಲ ನಾವ್  ಸೋತಿಲ್ಲವಂತೆ 

'ವಿಶ್ವ'ಮಾನ್ಯ ಕನ್ನಡಿಗನೀತ 

ಸಜ್ಜನ ಕ್ರಿಕೆಟಿಗನಂತೆ 

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಜಿ.ಆರ್. ವಿಶ್ವನಾಥ್) 

******

ಕವನೋತ್ಸವ - 3

ಯಾರಿವರು?

***

ಚಾಮಯ್ಯ ಮೇಷ್ಟ್ರ ಪ್ರೀತಿಯೇ 

ಶಿಷ್ಯನಿಗೆ ಮುಳುವಾಯ್ತೆ?

 

ಸದಾಶಿವರಾಯರ ಅತಿಯಕ್ಕರೆಯೂ 

ಮಿನುಗುತಾರೆಯ ಮೆರೆಸದಾಯ್ತೆ?

ದುರಂತಗಳಿಗೆ ಮುನ್ನುಡಿ ಬರೆವುದೆ 

ಇವರ ಪಾತ್ರವಾಯ್ತೆ?

 

'ನಮ್ಮ ಮಕ್ಕಳೀ' ಪಾತ್ರಧಾರಿ

'ಸತ್ಯಮಾರ್ಗದಿ ನಡೆವ ಶಕ್ತಿ' ಬೇಡಿದರೇಕೆ?

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಕೆ.ಎಸ್.ಅಶ್ವತ್ಥ್) 

 

 

ಕವನೋತ್ಸವ - 4

ಯಾರಿವರು?

***

ಹೆಸರಲಿ ಶಾಂತನಾದರೂ 

ಹೋರಾಟದ ಹಠವಂತನೆ?

ಕಾಗೋಡ ಗೂಡಿಗೆ ಲೋಹಿಯಾರ 

ಕರೆತಂದ ಭಗೀರಥನಿವನೆ?

'ಅವಸ್ಥೆ' ಶೋಷಿತನಿವ 

ಅರಸರ ಭೂಸುಧಾರಣೆಗೆ ಪ್ರೇರಣೆಯಾದನೆ?

ಏನವಸರವಿತ್ತೋ, ಬೇಗ ತೆರಳಿ 

ಉತ್ಸಾಹಿಗಳೇಕೆ ಅಲ್ಪಾಯುಗಳೆಂದೆಮ್ಮ ಕಾಡಿದನೆ?

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಶಾಂತವೇರಿ ಗೋಪಾಲ ಗೌಡ)

***

 

 

 

 

 

 

 

ಕವನೋತ್ಸವ - 5

ಯಾರಿವರು?

***

ವಿಷವುಂಡವನ ಬೀಡ ನರ್ತಕಿಗೆ 

ಬೆಂಗಳೂರ ಬಿರುದೇಕೆ?

ಗೆಜ್ಜೆಪೂಜೆಗೆ ಕೊರಳೊಡ್ಡಿದರು, ನೃತ್ಯ, ಸಂಗೀತ 

ಸಾಹಿತ್ಯಗಳ  ಕರುಳಲೇ  ಪಡೆದಳೆ?

ತನು, ಮನ, ಧನಗಳ ಗಾನಗುರು ತ್ಯಾಗಯ್ಯಗರ್ಪಿಸಿ 

 ಅವರರಾಧನೆಗೆ ನಾಂದಿ ಹಾಡಿದಳೆ?

ಕೀಳೆಂಬ ಹಣೆಪಟ್ಟಿ ಹೊತ್ತು ಸೆಣಸಿ  

ಲೀನಳಾದಳಲ್ಲ ಗುರು ಚರಣದೊಳಗೆ!

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಬೆಂಗಳೂರು ನಾಗರತ್ನಮ್ಮ)

******

 

ಕವನೋತ್ಸವ - 6

ಯಾರಿವರು?

***

ಕೃಷ್ಣರಾಜರ ಮುರಳಿ ಕರೆಯಿತೆ 

ದೂರ ತೀರಕೆ ನಿನ್ನನು?

ಸಪ್ತ ಸಾಗರದಾಚೆ ಹಾರಿ 

ಸೇರಿದೆಯಾ ಕರುನಾಡನು?

 

ಹೂವ ಹಾಸಿಗೆ ಹಸಿರು ಹೊದಿಕೆ 

ಮರರೆಂಬಗಳ ಚುಂಬನ 

'ಕೆಂಪು ತೋಟ' ಬೇಲಿಯೊಳಗೆ 

ನಿರ್ಮಿಸಿದೆ ಸ್ವರ್ಗವೊಂದನ!

 

ಬಿಳಿಯ ಸೀರೆಯನುಟ್ಟು ಬಳುಕುವ  

ಜಲಕನ್ನಿಕೆಯರ ನರ್ತನ 

ಸೆಳೆವ ಬೃಂದಾವನವ ಕಟ್ಟಿ 

ಸಿಂಗರಿಸಿದೆ ಕಾವೇರಿ ಅಣೆಕಟ್ಟನ!

 

ಕರ್ಮಭೂಮಿಯಲೇ ಮಣ್ಣಾದ 

ಸಾರ್ಥಕವು ನಿನ್ನೀ ಜೀವನ 

ಹಸಿರು ಸಂದೇಶದ ನಿನ್ನ 

ನೆನೆಯುತಿದೆ ಕನ್ನಡ ವನ, ಮನ 

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಜಿ.ಎಚ್. ಕ್ರುಮ್ಬಿಗಲ್)

******

 

 

ಕವನೋತ್ಸವ - 7

ಯಾರಿವರು?

***

ಮಧುರ ಕಂಠದ ಪುಟ್ಟ ಕೋಗಿಲೆಗೆ 

ಕುತ್ತಾಯ್ತೆ ಕೊರಳ ನೋವೊಂದು?

ಗಡುಸಾಯ್ತು ಗಾನಗಂಗೆಯ ಸಿರಿಕಂಠವಂದು!

 

ಸೋಲೊಪ್ಪುವುದುಂಟೆ 

ಗಂಡುಮೆಟ್ಟಿನ ನಾಡ ದಿಟ್ಟ ಮಹಿಳೆ?

ಒಲಿಸಿಕೊಂಡಳಲ್ಲಾ ಗಡುಸು ದನಿಗೆ ಭಾವದ ಸೆಲೆ!

 

ಸಣ್ಣ ಝರಿಯೊಂದು ಬೆಟ್ಟಗುಡ್ಡಗಳ ಬಳಸಿ 

ಮೈತುಂಬಿ ಭೋರ್ಗರೆದು ನದಿಯಾಗುವಂತೀ 

ಗಂಗೆಯ ಗಾನಶ್ರುತಿ 

 

ಭೀಮ, ಬಸವ, ಮಲ್ಲಿಕಾರ್ಜುನರ ಸೆಣಸಿ 

ಗೆದ್ದು ಬೀಗಿದಳಲ್ಲಾ ಹೆಣ್ತನವ ಮೆರೆಸಿ 

ಪದ್ಮವಿಭೂಷಣೆಯಾಗಿ ಕರುನಾಡ ಗೆಲಿಸಿ 

***

(ರಚನೆ: ಲಕ್ಷ್ಮೀನಾರಾಯಣ ಕೆ.) 

(ಉತ್ತರ: ಗಂಗೂಬಾಯ್ ಹಾನಗಲ್)

******

ಕವನೋತ್ಸವ - 8

ಯಾರಿವರು?

***

ಗೋಕಾಕದ ಜಲಧಾರ 

ಕರುನಾಡ ನಯಾಗರ 

ಅಲ್ಲಿ ಜನಿಸಿತೊಂದು 

ಗಣಿತದ ಧ್ರುವತಾರ 

 

ಬೆಳಗಿತದು  

ಗಂಡುಮೆಟ್ಟಿನ ನಾಡ  

ವಿದ್ಯಾಲಯಗಳ 

ಪರಿಕರ 

 

ದೂರದೈದು ನದಿಗಳ ಬೀಡ  

ಆಳಿದ್ದು ಅದರ ಶಿಖರ 

ಅದರ  ಸ್ಮರಣೆಯೆ 

ನಮಗೆ ಶ್ರೀಕಾರ 

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಡಿ.ಸಿ.ಪಾವಟೆ)

******

 

ಕವನೋತ್ಸವ9

ಯಾರಿವರು?

***

ಹೂವು ಹೊರಳುವವು ಸೂರ್ಯನ ಕಡೆಗೆ

ನಮ್ಮ ದಾರಿ  ಭಾವ ಜೀವಿಯವರೆಗೆ

ಗದ್ಯದ ಒಡಲಿಗೆ, ಪದ್ಯದ ಕಡಲಿಗೆ

ಮುಳುಗಿದಂತೆ, ದಿನ ಬೆಳಗಿದಂತೆ

ಹೊರಬರುವನು ರವಿಯ ಹಾಗೆ

 

'ಮಣ್ಣಿನ ಮೆರವಣಿಗೆ'ಯಲಿ

 ಕರಗಿಸಿ ಬಿಡವನು

ಎಲ್ಲ ಬಗೆಯ ಸರಕು:

ಸಮನ್ವಯದ ಕವಿಯು

ಕೂಡಿಸಿ ಬಾಳ ತೊಡಕು

 

'ಜೀವ ಧ್ವನಿ' ಕವನಗಳಿಗೂ ಮುದ

ಭಾವಪೂರ್ಣ ಗಾನಕೂ ಒಂದೇ ಹದ,

ಕವಿ ಹೃದಯದೊಳೇನು ನಡೆವುದೋ

'ಚೆಲ್ವವೀರನವನು'ನವನು ಕಲಾವಿದ

***

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಚೆನ್ನವೀರ ಕಣವಿ)

******

 

ಕವನೋತ್ಸವ10

ಯಾರಿವರು?

***

'ಇಗೋ ಕನ್ನಡ'  ಎಂದಾತ 

ನಮ್ಮೆಲ್ಲರ ಬಡಿದೆಬ್ಬಿಸಿದಾತ 

ಬರೆದಿಟ್ಟು ನಮಗೊಂದು ನಿಘಂಟ 

ಹೊರಟು ನಿಂತ ಧೀಮಂತ 

 

ಇಗೋ 'ಜೀವಿ' ಈತ 

ಪಂಪರನ್ನರ ನಮಗೆ ತೋರಿಸಿದಾತ 

ಕೆಟಲರ ಕಾರ್ಯ ಮುಂದುವರೆಸಿದಾತ 

'ಶಬ್ದಸಾಗರ'ಕೆ  ಸೇತು ನಿರ್ಮಿಸಿದಾತ 

 

ಎರಡು ಮಹಾಮಾರಿಗಳ ಜಯಿಸಿದಾತ 

ಎರಡು ಮಹಾಯುದ್ಧಗಳ ಗೆದ್ದು ನಿಂತಾತ 

ಕನ್ನಡದುಳಿವೆಗೆ ಯುವಸೈನ್ಯ ಕಟ್ಟಿದಾತ 

ಶತನಮಾನಗಳು ನಿಮಗಿದೋ ನಮ್ಮೆಲ್ಲರ ತಾತ

 

(ರಚನೆ: ಲಕ್ಷ್ಮೀನಾರಾಯಣ ಕೆ.)

(ಉತ್ತರ: ಜಿ. ವೆಂಕಟಸುಬ್ಬಯ್ಯ)

******

 

 

 

 

 

No comments:

Post a Comment