Friday 4 March 2022

 ಸರ್ವತೋಮುಖ ಅಭಿವೃದ್ಧಿಗೆ ಒತ್ತು 

ಇದು ಚುನಾವಣಾ ಬಜೆಟ್ ಮಾತ್ರವಲ್ಲ!

ಕರ್ನಾಟಕದ  ಮುಖ್ಯ ಮಂತ್ರಿ ಶ್ರೀ.ಬಸವರಾಜ ಬೊಮ್ಮಾಯಿ ರವರು 2022-23ನೇ ಸಾಲಿನ  ರಾಜ್ಯ ಬಜೆಟ್ ಮಂಡಿಸಿದ್ದಾರೆ.  ಇದು ಅವರ ಮೊದಲ ಬಜೆಟ್ ಮತ್ತು 2023ರ ಚುನಾವಣೆಯ ಮುಂಚಿನ ಅಂತಿಮ ಪೂರ್ಣ ಮಟ್ಟದ ಬಜೆಟ್. ಮುಂದಿನ ವರ್ಷದ ಚುನಾವಣೆಯ ಒತ್ತಡದ ನಡುವೆಯೂ, ಬೊಮ್ಮಾಯಿ ರವರ ಆರ್ಥಿಕ ಚಿಂತನೆ ವೃತ್ತಿಪರವಾಗಿದ್ದು, ಎಲ್ಲ ಕ್ಷೇತ್ರಗಳ ಮತ್ತು ಎಲ್ಲ ವಲಯಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಅಭಿನಂದಾರ್ಹವಾದದು. 

2022-23ನೇ ಸಾಲಿನ  ಬಜೆಟ್ ಗಾತ್ರ ರು. 2,65,000 ಕೋಟಿಯಷ್ಟಾಗಿರುವುದು  ಗಮನಿಸಬೇಕಾದ ಅಂಶ. ಕೃಷಿ, ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಬಂದರು, ವಸತಿ, ನೀರು ಸಂಪರ್ಕ ಮುಂತಾದ ಆದ್ಯತಾ ವಲಯ ಗಳಿಗೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. 

ರೈತರ ಆದಾಯ ದ್ವಿಗುಣಗೊಳಿಸಲು  ಆದ್ಯತೆ ನೀಡಲಾಗಿದೆ. ಕೃಷಿ ಯಂತ್ರೋಪಕರಣಗಳ  ಬಳಕೆ ಉತ್ತೇಜನ ನೀಡಲಾಗಿದ್ದು,  ಪ್ರತಿ ಎಕರೆಗೆ 250 ಡೀಸೆಲ್​ ಸಹಾಯ ಧನ ಒದಗಿಸಲಾಗುವುದು.   ಸರಳ ಬಡ್ಡಿ  ಯೋಜನೆ ಅಡಿ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ಸೌಲಭ್ಯ ನೀಡಲಾಗುವುದು.   

ಬೆಳಗಾವಿಯ  ಅಥಣಿ, ಬಳ್ಳಾರಿಯ ಹಗರಿಗಳಲ್ಲಿ  ನೂತನ ಕೃಷಿ ಕಾಲೇಜು ಆರಂಭಿಸಲಾಗುವುದು.  ಕಲಬುರಗಿ ಹಾವೇರಿಯಲ್ಲಿ ಹೈಟೆಕ್ ಸರ್ಕಾರಿ ರೇಷ್ಮೆಗೂಡು ಕೇಂದ್ರವನ್ನು  ಸ್ಥಾಪಿಸಲಾಗುವುದು.  ರಾಜ್ಯದ ಗೋಶಾಲೆಗಳ ಸಂಖ್ಯೆ 100ಕ್ಕೆ ಹೆಚ್ಚಳ ಮಾಡಿ, 50 ಕೋಟಿ ರೂ.  ಅನುದಾನ ಒದಗಿಸಲಾಗುವುದು.  ಹಾವೇರಿಯಲ್ಲಿ ಮೇಗಾ ಡೈರಿ ಸ್ಥಾಪನೆ ಹಾಗೂ 4 ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. 

ಮೇಕೆದಾಟು ಯೋಜನೆಗಳಿಗೂ ಅನುದಾನ ಒದಗಿಸಿದ್ದು ವಿಶೇಷ. ಎತ್ತಿನ ಹೊಳೆ ಯೋಜನೆಗ 3000 ಕೋಟಿ, ಭದ್ರಮೇಲ್​ದಂಡೆಗೆ  3000 ಕೋಟಿ, ಕಳಸಾಬಂಡೂರಿ ನಾಲ  ಯೋಜನೆಗೆ  1000 ಕೋಟಿ, ಕೃಷ್ಣ ಮೇಲ್ ದಂಡೆ 3 ನೇ ಹಂತಕ್ಕೆ  5000 ಕೋಟಿ ರೂ ಮೀಸಲಿಡಲಾಗಿದೆ.


5 ಜಿಲ್ಲೆಗಳ 15 ಕೈಗಾರಿಕಾ ಪ್ರದೇಶಗಳ ವಿದ್ಯುತ್ ಅಡಚಣೆ ನಿವಾರಣೆಗೆ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಿಂದ ಯೋಜನೆಗಳನ್ನು ರೂಪಿಸಲಾಗುವುದು. . ಶರಾವತಿ ಸಂಕೀರ್ಣದಲ್ಲಿ 5,391 ಕೋಟಿ ರೂ. ಅಂದಾಜು ವೆಚ್ಚದಲ್ಲಿ 2,000 ಮೆ.ವ್ಯಾ. ಸಾಮರ್ಥ್ಯ ಭೂಗರ್ಭ ವಿದ್ಯುತ್ ಕೇಂದ್ರ ಆರಂಭಿಸಲಾಗುವುದು.  ರಾಜ್ಯದ 8 ಜಿಲ್ಲೆಗಳಲ್ಲಿ ಸುಮಾರು 5,000 ಮೆಗಾ ವ್ಯಾಟ್ ಸಾಮರ್ಥ್ಯ ದ ಹೈಬ್ರಿಡ್ ಪಾರ್ಕ್ ಸ್ಥಾಪನೆ ಮಾಡಲು ಪ್ರಯತ್ನ ಮಾಡಲಾಗುವುದು. 

ಮೈಶುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಯೋಜನೆಗಳನ್ನು ರೂಪಿಸಲಾಗಿದೆ. . 50 ಕೋಟಿ ರೂ. ವೆಚ್ಚದಲ್ಲಿ ಯಂತ್ರಗಳ ದುರಸ್ತಿ ಮಾಡಲಾಗುವುದು.  ಕಲಬುರಗಿ, ವಿಜಯಪುರದಲ್ಲಿ ಮೆಗಾ ಟೆಕ್ಸ್‌ಟೈಲ್  ಪಾರ್ಕ್ ನಿರ್ಮಾಣ, ಬಳ್ಳಾರಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣ, ನವಲಗುಂದ, ರಾಣೆಬೆನ್ನೂರಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಮತ್ತು ಇದರಿಂದ  5 ಸಾವಿರ ಉದ್ಯೋಗ ಕಲ್ಪಿಸಿದಂತಾಗುವುದು. ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಆರಂಭಿಸಲಾಗುವುದು.  ಹೂಡಿಕೆದಾರರನ್ನು ಆಕರ್ಷಿಸಲು ‘ಇನ್ವೆಸ್ಟ್ ಕರ್ನಾಟಕ’ ಕಾರ್ಯಕ್ರಮ ಯೋಜಿಸಲಾಗುವುದು. ಬ

ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮಾರ್ಗಸೂಚಿಯಂತೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಕ್ಷೇತ್ರಗಳಿಗೆ ನೂತನ ಪಠ್ಯಕ್ರಮ ರಚಿಸಲು ಆಯೋಜಿಸಲಾಗಿದೆ. . ಸರ್ಕಾರಿ ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪೀಠೋಪಕರಣ ಒದಗಿಸಲು 100 ಕೋಟಿ ರೂ. ಕಾದಿರಿಸಲಾಗಿದೆ.  ರಾಜ್ಯದ 169 ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಲ್ಯಾಬ್-ಇನ್-ಎ-ಕಿಟ್ ವಿತರಣೆ ಮಾಡಲಾಗುವುದು.  ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಹಣವನ್ನು ಮೀಸಲಿರಿಸಲಾಗಿದೆ. 

ಶಿಕ್ಷಣಕ್ಕೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದು, ಆಯ್ದ ಪ್ರೌಢಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು.  15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ. 

 ರಾಜ್ಯದಲ್ಲಿ ಮಹಿಳಾ ಆರೋಗ್ಯ ಸಮಸ್ಯೆಗಳಿಗೆ ಸಲಹೆ ನೀಡಲು 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳನ್ನು  ಸ್ಥಾಪಿಸಲಾಗುವುದು. ಹುಬ್ಬಳ್ಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಹೃದ್ರೋಗ ಕೇಂದ್ರ ಸ್ಥಾಪನೆ ಮಾಡಲಾಗುವುದು. ಬೆಳಗಾವಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಆರಂಭಿಸಲಾಗುವುದು. ಆಯ್ದ 10 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ನೀಡುವ ಘಟಕ ಸ್ಥಾಪನೆಯಾಗುವುದು.  ಏಳು ತಾಲ್ಲೂಕು ಆಸ್ಪತ್ರೆಗಳು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು. 

ಹಂಪಿ, ಬಾದಾಮಿ. ಐಹೊಳೆ, ಪಟ್ಟದಕಲ್ಲು, ವಿಜಯಪುರ ಪ್ರವಾಸಿ ವೃತ್ತ ಮತ್ತು ಮೈಸೂರು, ಶ್ರೀರಂಗಪಟ್ಟಣ, ಹಾಸನ, ಬೇಲೂರು, ಹಳೇಬೀಡು ಪ್ರವಾಸಿ ವೃತ್ತ, ಇವುಗಳ ಅಭಿವೃದ್ಧಿಗೆ ವಿವಿಧ ಕಾಯಕಲ್ಪಗಳನ್ನು ಆಯೋಜಿಸಲಾಗಿದೆ. ಜೋಗ  ಜಲಪಾತದಲ್ಲಿ 116 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹೋಟೆಲ್ ಹಾಗೂ ರೋಪ್‍ವೇ ನಿರ್ಮಿಸಲಾಗುವುದು. ನಂದಿ ಬೆಟ್ಟದಲ್ಲಿ 93 ಕೋಟಿ ರೂ. ವೆಚ್ಚದಲ್ಲಿ ರೋಪ್‍ವೇ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿರಿಸಲಾಗಿದೆ. ಪರ ಚಾಮುಂಡಿ ಬೆಟ್ಟ ಹಾಗೂ ಮುಳ್ಳಯ್ಯನಗಿರಿ ದತ್ತಪೀಠಗಳಲ್ಲಿ ರೋಪ್‍ವೇ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುವುದು.  ತದಡಿ ಬಂದರಿನಲ್ಲಿ ಸಮಗ್ರ ಪರಿಸರ-ಪ್ರವಾಸೋದ್ಯಮ ಕೇಂದ್ರ ಅಭಿವೃದ್ಧಿ ಮಾಡಲಾಗುವುದು. ಪಾರಂಪರಿಕ ಪ್ರವಾಸಿ ತಾಣಗಳಾದ ಬೀದರ್ ಹಾಗೂ ಕಲಬುರಗಿ ಕೋಟೆಗಳ ಪುನರುಜ್ಜೀವನಗೊಳಿಸಲಾಗುವುದು.

ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಕೊಲ್ಲೂರು, ತಿರುಪತಿ, ಮಂತ್ರಾಲಯಗಳಿಗೆ ಪ್ಯಾಕೇಜ್ ಟ್ರಿಪ್ ಏರ್ಪಡಿಸಲಾಗುವುದು. 
30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5000 ರೂ ಸಹಾಯಧನ ನೀಡಲಾಗುವುದು.  ಶ್ರೀ ಶೈಲದಲ್ಲಿ 85 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುವುದು.
 ಚಾಮುಂಡಿ ಬೆಟ್ಟ ಮತ್ತು ದತ್ತಪೀಠದಲ್ಲಿ ರೋಪ್ ವೇ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಮಾಡಲಾಗಿದೆ ಮತ್ತು  ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ ಮೀಸಲಾಗಿಡಲಾಗಿದೆ.

ಸರ್ವರಿಗೂ ಸೂರು ಯೋಜನೆ ಅಡಿ 5 ಲಕ್ಷ ಹೊಸ ಮನೆಗಳನ್ನು   6,612 ಕೋಟಿ ರೂಪಾಯಿ ವೆಚ್ಚದಲ್ಲಿ  ನಿರ್ಮಿಸಲಾಗುವುದು.  ಮನೆಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ, ಪ.ಪಂಗಡಕ್ಕೆ ಆದ್ಯತೆ ನೀಡಲಾಗುವುದು, 

2 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನೀರು ಸಂಪರ್ಕ ಒದಗಿಸಲಾಗುವುದು, ನಲ್ಲಿಗಳ ಮೂಲಕ ನೀರು ಸಂಪರ್ಕ ಕಲ್ಪಿಸಲಾಗುವುದು.  ಕುಡಿಯುವ ನೀರು ಸಂಪರ್ಕಕ್ಕೆ 7 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುವುದು. 

ಯೋಜನೆಗಳ ಅನುಷ್ಠಾನ ಯಶಸ್ವಿಯಾಗಲಿ, ನಮ್ಮ ರಾಜ್ಯ ಸರ್ವೋತೋಮುಖ ಅಭಿವೃದ್ಧಿ ಹೊಂದಲಿ ಎಂದು ಆಶಿಸೋಣ. 

-೦-೦-೦-೦-೦-

೨೦೨೨-೨೩ನೇ ಸಾಲಿನ  ಬಜೆಟ್ ಗಾತ್ರ ರು. ೨,೬೫,೭೨೦ ಕೋಟಿಯಷ್ಟಾಗಿರುವುದು  ಗಮನಿಸಬೇಕಾದ ಅಂಶ. ಕೃಷಿ, ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಬಂದರು, ವಸತಿ, ನೀರು ಸಂಪರ್ಕ ಮುಂತಾದ ಆದ್ಯತಾ ವಲಯ ಗಳಿಗೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. 


 






No comments:

Post a Comment