Thursday 6 May 2021

೧೩. ಕೊಳಚೆ ಪ್ರದೇಶದ ನಿರ್ವಹಣೆ ಅಸಾಧ್ಯವಲ್ಲ

೧೩

 ಕೊಳಚೆ ಪ್ರದೇಶದ ನಿರ್ವಹಣೆ ಅಸಾಧ್ಯವಲ್ಲ 



ಸಮರ್ಪಣಾ ಭಾವದ ಯುವಕನಾದ ಡಾ. ಕಿರಣ್, ಸ್ವಯಂಪ್ರೇರಿತನಾಗಿ ಸರಕಾರಿ ಆಸ್ಪತ್ರೆಗಳಲ್ಲೂ ಕೋವಿಡ್-೧೯ರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದನು. ೮೦-೯೦%ರಷ್ಟು ಕೋವಿಡ್ ರೋಗಿಗಳ ಚಿಕಿತ್ಸೆಯನ್ನು ನಿರ್ವಹಿಸುವ ಬೃಹತ್ ಕಾರ್ಯವನ್ನು ಮಾಡುತ್ತಿದ್ದ ಸರಕಾರಿ ಆಸ್ಪತ್ರೆಗಳ ಮತ್ತು ಅವುಗಳ ಕರ್ಮಚಾರಿಗಳ ಅಭಿಮಾನಿ ಅವನಾಗಿದ್ದನು. 'ಈ ಸಂಕಟದ ಸಮಯದಲ್ಲಿ ಬಡವರ ಹಾಗೂ ಕೆಳವರ್ಗದ ಜನರುಗಳ ಸೇವೆಯನ್ನು ಸಾರ್ವಜನಿಕ ವಲಯದ ಸಂಸ್ಥೆಗಳು ಮಾಡುತ್ತಿವೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ವಲಸಿಗ ಕೆಲಸಗಾರರು ಕೆಲಸಗಳನ್ನು ಕಳೆದುಕೊಂಡು, ನಗರಗಳಲ್ಲಿ ಸಿಲುಕಿಕೊಂಡಾಗ, ಭಾರತೀಯ ರೈಲು ಅವರುಗಳನ್ನು ಹೊತ್ತು, ಅವರವರ ಹಳ್ಳಿಗಳಿಗೆ ತಲುಪಿಸಿತ್ತು. ಇದೇ ಕಾರ್ಯದಲ್ಲಿ ಸರಕಾರಿ ಬಸ್ಸುಗಳು ಸಲ್ಲಿಸಿದ ಕಾರ್ಯವು ಮಹತ್ವವಾದುದೇ. ನಮ್ಮ ಅನಿವಾಸಿ ಭಾರತೀಯರು ಮತ್ತಿತರ ಭಾರತೀಯರುಗಳು ವಿದೇಶಗಳಲ್ಲಿ ಸಿಲುಕಿಕೊಂಡಾಗ, ಅವರುಗಳನ್ನು ಕ್ಷೇಮವಾಗಿ ಹೊತ್ತೊಯ್ದು ಭಾರತಕ್ಕೆ ಕರೆತಂದಿದ್ದು "ಏರ್ ಇಂಡಿಯಾ"ದ ವಿಮಾನಗಳೇ. ನಮ್ಮ ಸಣ್ಣ ಕೈಗಾರಿಕೆಗಳಿಗೆ, ಸಣ್ಣ ವ್ಯಾಪಾರಿಗಳಿಗೆ ಹಾಗೂ ಸಣ್ಣ ರೈತರಿಗೆ ಸಾಲದ ಸೌಲಭ್ಯ ಬೇಕಾದಾಗ, ಅವರುಗಳ ಸಹಾಯಕ್ಕೆ ಬಂದಿದ್ದು ಸಾರ್ವಜನಿಕವಲಯದ ಬ್ಯಾಂಕುಗಳೇ. ಇಂತಹ ವಿಷಮ ಪರಿಸ್ಥಿತಿಯಲ್ಲೂ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತಿರುವುದು ನಮ್ಮ ಪೊಲೀಸರೇ. ನಗರ ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿಡುವ ಮಹತ್ಕಾರ್ಯವನ್ನು ಮಾಡುತ್ತಿರುವುದು ನಮ್ಮ ನಗರ ಹಾಗೂ ಪಟ್ಟಣಗಳ ಆಡಳಿತದ ಸ್ವಚ್ಛತಾ ಕರ್ಮಚಾರಿಗಳೇ. ಆದರೆ ನಮ್ಮ ಸಾರ್ವಜನಿಕ ವಲಯದ ಸಂಸ್ಥೆಗಳನ್ನೇ, ಸಂಬಂಧ ಪಟ್ಟ ಎಲ್ಲರೂ ನಿರ್ಲಕ್ಷಿಸುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ,' ಎನ್ನುತ್ತಾ ಆತಂಕಗೊಂಡಿದ್ದವನು ಡಾ. ಕಿರಣ್. 

ಅಂದು ಅವರಿಬ್ಬರ ವಾರದ ಭೇಟಿಯ ಸಮಯವಾದುದ್ದರಿಂದ, ಕಿರಣ್ ತನ್ನ ಗೆಳತೀ ರೋಹಿಣಿಗಾಗಿ   ಕಾಯುತ್ತಿದ್ದನು. ರೋಹಿಣಿ ಬಂದ ಕೂಡಲೇ, ತನ್ನ ಎಂದಿನ ಉತ್ಸಾಹದಲ್ಲಿ ಮಾತನಾಡುತ್ತಾ, 'ಕಿರಣ್, ಇಂದಿನ ಸುದ್ದಿಯನ್ನು ಓದಿದೆಯಾ? ಕೇರಳ ರಾಜ್ಯದ ಆರೋಗ್ಯ ಮಂತ್ರಿ ಶ್ರೀಮತಿ ಕೆ.ಕೆ.ಶೈಲಜಾರವರನ್ನು ವಿಶ್ವಸಂಸ್ಥೆಯ ಸಾರ್ವಜನಿಕ ಸೇವೆಗಳ ದಿನದ ಭಾಷಣವನ್ನು ಮಾಡಲು ವಿಶ್ವಸಂಸ್ಥೆ ಆಹ್ವಾನಿಸಿದೆ. ಕೋವಿಡ್ ವಿರುದ್ಧದದ ಮಹಾಸಂಗ್ರಾಮದ ಹೋರಾಟದ ಮುಂಚೂಣಿಯಲ್ಲಿರುವವರನ್ನು ಸನ್ಮಾನಿಸುವುದೇ ಆ ಕಾರ್ಯಕ್ರಮದ ಉದ್ದೇಶ' ಎಂದಳು. 

'ಹೌದು ರೋಹಿಣಿ, ಮೇಡಂರವರಿಗೆ ಬಂದಿರುವ ಆಹ್ವಾನದ ಬಗ್ಗೆ ತಿಳಿದು ನನಗೂ ಸಂತಸವೆನಿಸಿತು. ಆ ಗೌರವಕ್ಕೆ ಆಕೆ ಅರ್ಹರು. ಕೋವಿಡ್-೧೯ರ ವಿರುದ್ಧದದ ಹೋರಾಟದಲ್ಲಿ, ನಮ್ಮ ಸಣ್ಣ ರಾಜ್ಯಗಳು ಉತ್ತಮ ನಿರ್ವಹಣೆಯನ್ನು ಮಾಡುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ಗೋವಾ, ಮಣಿಪುರ್ ಮತ್ತು ಅರುಣಾಚಲ ಪ್ರದೇಶ ಮುಂತಾದ ಸಣ್ಣ ರಾಜ್ಯಗಳು, ಒಂದು ಹಂತದಲ್ಲಿ, ತಮ್ಮೆಲ್ಲಾ ಕೋವಿಡ್ ರೋಗಿಗಳನ್ನು ಗುಣಮುಖರನ್ನಾಗಿ ಮಾಡಿ, ೧೦೦%ರಷ್ಟು ಸುಸ್ಥಿತಿಯ ಸಾಧನೆಯನ್ನು ಮಾಡಿದ್ದವು. ಸ್ವಲ್ಪ ದೊಡ್ಡವಾದರೂ, ಕೇರಳ, ಹಿಮಾಚಲ್ ಪ್ರದೇಶ, ಉತ್ತರಾಖಂಡ್, ಝಾರ್ಖಂಡ್ ಮತ್ತು ಅಸ್ಸಾಮಿನಂತಹ ರಾಜ್ಯಗಳು, ಕೋವಿಡ್ ನಿರ್ವಹಣೆಯಲ್ಲಿ ದೊಡ್ಡ ರಾಜ್ಯಗಳಿಗಿಂತಲೂ ಉತ್ತಮವಾದ ಸಾಧನೆಯನ್ನು ಮಾಡಿವೆ,' ಎಂದನು ಡಾ. ಕಿರಣ್. 

'ಶ್ರೀಮತಿ ಕೆ.ಕೆ. ಶೈಲಜಾರವರು, ಹೈಸ್ಕೂಲ್ ವಿಜ್ಞಾನದ ಶಿಕ್ಷಕಿ ಮಾತ್ರವಾಗಿದ್ದವರು. ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಸೇವೆಯನ್ನು ಸತತವಾಗಿ ಮಾಡುತ್ತಿರುವ ಅವರನ್ನು "ಕೊರೋನಾ ಸಂಹಾರಕಿ (corona slayer)" ಎಂದೇ ಗುರುತಿಸಲಾಗುತ್ತಿದೆ. ೨೦೨೦ರ ಮೇ ೧೫ರಂದು ನಡೆಸಿದ ಅಧ್ಯಯನದ ಪ್ರಕಾರ ೩೫ ಮಿಲಿಯೋನ್ನಷ್ಟು ಜನಸಂಖ್ಯೆ ಮತ್ತು ಪ್ರತಿವ್ಯಕ್ತಿಯ ವರಮಾನ (per capita GDP) ೨೨೦೦ ಬ್ರಿಟಿಷ್ ಪೌಂಡ್ಗಳಷ್ಟಿರುವ ಪುಟ್ಟ ರಾಜ್ಯ ಕೇರಳ, ಕೇವಲ ೫೨೪ ಸೋಂಕಿತರನ್ನು ಹೊಂದಿದ್ದು, ನಾಲ್ಕು ಸಾವುಗಳನ್ನು ಮಾತ್ರ ಕಂಡಿತ್ತು. ಅದಕ್ಕೆ ಹೋಲಿಸಿದರೆ, ೭೦ ಮಿಲಿಯೋನ್ನಷ್ಟು ಜನಸಂಖ್ಯೆಯನ್ನು ಮತ್ತು ಪ್ರತಿವ್ಯಕ್ತಿಯ ವರಮಾನ ೩೩,೧೦೦ ಬ್ರಿಟಿಷ್ ಪೌಂಡ್ಗಳಿಷ್ಟಿರುವ ಗ್ರೇಟ್ ಬ್ರಿಟನ್, ೪೦,೦೦೦ದಷ್ಟು ಸಾವುಗಳನ್ನು ಕಂಡಿತ್ತು. ಕೇರಳದ ಹತ್ತರಷ್ಟರ ಜನಸಂಖ್ಯೆಯನ್ನು ಮತ್ತು ೫೧,೦೦೦ ಬ್ರಿಟಿಷ್ ಪೌಂಡ್ಗಳಷ್ಟು ಪ್ರತಿವ್ಯಕ್ತಿಯ ವರಮಾನ ಹೊಂದಿರುವ ಬೃಹತ್ ರಾಷ್ಟ್ರ  ಅಮೇರಿಕಾ ೮೨,೦೦೦ ಸಾವುಗಳನ್ನು ಕಂಡಿದೆ! ಇಂದಿಗೂ ಕೇರಳದ ಕೋವಿಡ್ ನಿರ್ವಹಣೆ ಮೆಚ್ಚಬಹುದದ್ದಾಗಿದೆ. 

ಹಳ್ಳಿಗಳ ಮಟ್ಟದಲ್ಲಿರುವ "ಪ್ರಾಥಮಿಕ ಆರೋಗ್ಯ ಕೇಂದ್ರ"ಗಳನ್ನು ಸುಸ್ಥಿತಿಯಲ್ಲಿಟ್ಟಿರುವುದೇ, ಕೇರಳ ರಾಜ್ಯದ ಉತ್ತಮ ಕೋವಿಡ್ ನಿರ್ವಹಣೆಗೆ ಪೂರಕವಾಗಿ ಪರಿಣಮಿಸಿದೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲೂ ಕೇರಳ ಸುಸಜ್ಜಿತ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿದೆ. ಆ ರಾಜ್ಯದಲ್ಲಿ ಹತ್ತು ವೈದ್ಯಕೀಯ ಕಾಲೇಜುಗಳಿದ್ದು, ಅವೆಲ್ಲವೂ ಉತ್ತಮ ಆಸ್ಪತ್ರೆಗಳನ್ನು ಹೊಂದಿವೆ. 

೨೦೧೮ರಲ್ಲಿ ಕೇರಳದಲ್ಲಿ ಹರಡಿದ್ದ "ನಿಪಾಹ್ ವೈರಾಣು (Nipah Virus)"ವನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಶೈಲಜಾರವರಿಗಿತ್ತು. ೨೦೨೦ರ ಜನವರಿ ೨೪ರ ಹೊತ್ತಿಗೇ, ಆಕೆ ಕೇರಳದಲ್ಲಿ ಕೋವಿಡ್-೧೯ರ ರೋಗವನ್ನು ನಿರ್ವಹಿಸಲು ವಿಶೇಷ  "ನಿರ್ವಹಣಾ ಕೇಂದ್ರ"ಗಳನ್ನು ಆರಂಭಿಸಿದ್ದರು. "ಪತ್ತೆ ಮಾಡು, ಪರೀಕ್ಷಿಸು, ಪ್ರತ್ಯೇಕಿಸು ಮತ್ತು ಬೆಂಬಲಿಸು (trace, test, isolate, support)" ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಕಿ ಕೊಟ್ಟ ಮೇಲ್ಪಂಕ್ತಿಯನ್ನೇ ಶೈಲಜಾರವರು ಅಳವಡಿಸಿಕೊಂಡಿದ್ದರು. 

ಹಳ್ಳಿಗಳ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉತ್ತಮ ನಿರ್ವಹಣೆ ಕೇರಳ ರಾಜ್ಯಕ್ಕೆ ಉತ್ತಮ ಫಲ ನೀಡಿದೆ. "ಜನಸಾಮಾನ್ಯರ ದೀರ್ಘ ಜೀವಾವಧಿ ಮತ್ತು ಮಕ್ಕಳ ಸಾವಿನ ನಿಯಂತ್ರಣ (Life expectancy and Infant mortality)"ಗಳ ನಿಟ್ಟಿನಲ್ಲಿ ಕೇರಳ ಇಡೀ ದೇಶದಲ್ಲಿ ಮುಂದಿದೆ. ಸಾಕ್ಷರತೆಯ ಸಾಧನೆಯಲ್ಲೂ ಕೇರಳವೇ ಮುಂದು.' ತನ್ನ ಗೆಳತಿ, ಕೇರಳ ಮಾದರಿಯ ಬಗ್ಗೆ ಬಿಗಿದ ಪುಟ್ಟ ಭಾಷಣವೊಂದನ್ನು, ಕಿರಣ್ ತದೇಕಚಿತ್ತನಾಗಿ ಆಲಿಸಿದ್ದನು. 

'ನಿನ್ನ ಅನಿಸಿಕೆಗಳು ಸರಿಯಾಗಿವೆ. ಮುಂಬೈನ ನನ್ನ ಸ್ನೇಹಿತ ಡಾ. ಪ್ರಶಾಂತ್ ಹೇಳುವಂತೆ "ಶ್ರೀಮಂತ ರಾಜ್ಯಗಳು ಆರೋಗ್ಯವಂತ ರಾಜ್ಯಗಳೇನಲ್ಲ." ಇಡೀ ದೇಶದಲ್ಲಿ ಮುಂಬೈ, ಅತ್ಯಂತ ಸಂಪನ್ಮೂಲಗಳನ್ನು ಮತ್ತು ಆದಾಯವನ್ನೂ ದಾಖಲಿಸಿದೆ. ಆದರೀಗ ಆ ಮಹಾನಗರವೇ ಕೋವಿಡ್-೧೯ರ ರೋಗದ ಕೇಂದ್ರವಾಗಿ ಹೋಗಿದೆ. ಮುಂಬೈ ಮತ್ತು ದಿಲ್ಲಿಯಂತಹ ೧೫ ಮಹಾನಗರಗಳಲ್ಲಿ ದೇಶದ ೫೦%ರಷ್ಟು ಕೋವಿಡ್ ಸೋಂಕಿತರಿದ್ದಾರೆ ಎಂಬುದು ಆಶ್ಚರ್ಯಕರ ಸುದ್ದಿ. ಮಹಾನಗರಗಳಲ್ಲಿ ಮತ್ತು ಅವುಗಳ ಹೊರ ವಲಯದಲ್ಲಿ ಆರೋಗ್ಯದ ವ್ಯವಸ್ಥೆ ತೀರಾ ಕಳಪೆಯೆಂದೇ ಹೇಳಬೇಕು. ಎಲ್ಲಾ  ಮಹಾನಗರಗಳಲ್ಲೂ ದೊಡ್ಡ ದೊಡ್ಡ ಕೊಳಚೆ ಪ್ರದೇಶ (slums) ಗಳಿವೆ. ನಗರಗಳ ೩೦%ರಷ್ಟು ಜನರುಗಳು ಆ ಸ್ಲಮ್ಗಳಲ್ಲಿ ವಾಸಿಸುತ್ತಾರೆ. ಎಲ್ಲಾ ಕೊಳಚೆ ಪ್ರದೇಶಗಳೂ ಜನರುಗಳಿಂದ ತುಂಬಿ ತುಳುಕುತ್ತಿರುತ್ತವೆ. ನೀರು ಮತ್ತು ನೈರ್ಮಲ್ಯದ ವ್ಯವಸ್ಥೆಯ ಕೊರತೆ ಎಲ್ಲಾ ಕೊಳಚೆ ಪ್ರದೇಶಗಳನ್ನೂ ಕಾಡಿವೆ. 

ಮುಂಬೈನ "ಧಾರಾವಿ ಸ್ಲಂ" ಎಂಬುದು ಇಡೀ ಏಷ್ಯಾ ಖಂಡದಲ್ಲೇ ಅತ್ಯಂತ ದೊಡ್ಡದಾದ ಕೊಳಚೆ ಪ್ರದೇಶ. ೨. ೫ ಚ.ಕಿ.ಮೀ.ಯಷ್ಟರ ಸಣ್ಣ ಪ್ರದೇಶದ ಆ ಕೊಳಚೆ ಪ್ರದೇಶದಲ್ಲಿ ೧೦ ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. ಅಲ್ಲಿ ವಾಸಿಸುವವರಲ್ಲಿ ಹೆಚ್ಚಿನವರು ವಲಸಿಗರಾಗಿದ್ದು,  ಸಣ್ಣ ವ್ಯಾಪಾರ, ದಿನಗೂಲಿ ಮುಂತಾದ ಕೆಲಸಗಳನ್ನು ಮಾಡುತ್ತಾರೆ. "೬-೮ ಜನರುಗಳ ಕುಟುಂಬಗಳು ಅಲ್ಲಿನ ೮'X೮'ಗಳಷ್ಟರ ಸಣ್ಣ ಕೋಣೆಗಳಲ್ಲಿ ವಾಸಿಸುತ್ತವೆ." ಅವರುಗಳಿಗೆ  ಸಾರ್ವಜನಿಕ ಶೌಚಾಲಯಗಳು ಮತ್ತು ಸ್ನಾನಗೃಹಗಳೇ ಗತಿ. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅಸಾಧ್ಯವೇ ಸರಿ!  

೨೦೨೦ರ ಏಪ್ರಿಲ್ ತಿಂಗಳಲ್ಲೇ, ಧಾರಾವಿ ಸ್ಲಮ್ನಲ್ಲಿನ ೫ ಭಾಗಗಳನ್ನು "ಅತ್ಯಂತ ಕೋವಿಡ್ ಪೀಡಿತ ಪ್ರದೇಶ"ಗಳೆಂದು ಗುರುತಿಸಲಾಗಿತ್ತು. ೨೫೦೦ಕ್ಕಿಂತಲೂ ಹೆಚ್ಚು ಆರೋಗ್ಯ ಕರ್ಮಚಾರಿಗಳನ್ನು ಆ ಐದು ಪ್ರದೇಶಗಳ ಸೇವೆಗೆಂದೇ ಮೀಸಲಿಡಲಾಗಿತ್ತು. ಸುರಕ್ಷಾ ತೊಡುಗೆಗಳನ್ನು ತೊಟ್ಟ ಆ ಕರ್ಮಚಾರಿಗಳು, ಅಂದಿನ ಏಪ್ರಿಲ್ ತಿಂಗಳಲ್ಲೇ, ಮನೆ ಮನೆಗಳಿಗೆ ತೆರಳಿ ಕೋವಿಡ್ ಸೋಂಕಿತರ ಪತ್ತೆ ಕಾರ್ಯವನ್ನು ನಡೆಸಿದ್ದರು. ಕಾರ್ಯತತ್ಪರ ಯೋಧನಾಗಿ ಆ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಶಾಮಣ್ಣ, ಸ್ಲಂ ನಿವಾಸಿಗಳನ್ನು ಎಚ್ಚರಿಸುವ ಪ್ರಕ್ರಿಯೆಯ ಮುಂಚೂಣಿಯಲ್ಲಿದ್ದರು. 'ಸಂಸಾರ ಗುಟ್ಟು, ವ್ಯಾಧಿ ರಟ್ಟು' ಎಂಬ ಕನ್ನಡದ ಗಾದೆಯನ್ನು ಮನದಟ್ಟಾಗುವಂತೆ ತಿಳಿಸುತ್ತಿದ್ದ ಡಾ. ಶಾಮಣ್ಣ, ಅಲ್ಲಿನ ಜನರುಗಳ ವಿಶ್ವಾಸವನ್ನು ಗೆದ್ದಿದ್ದರು. ಇಂತಹ ಪ್ರಯತ್ನಗಳ ಫಲವಾಗಿ ಧಾರಾವಿ ಸ್ಲಂ ನಿವಾಸಿಗಳಲ್ಲಿ ಕೋವಿಡ್ ಮುಂಜಾಗರೂಕತೆಯ ಬಗೆಗಿನ ಅರಿವು ಚೆನ್ನಾಗಿಯೇ ಮೂಡಿತ್ತು. ಅತ್ಯಂತ ಸಣ್ಣ ಲಕ್ಷಣವೊಂದು ಕಾಣಿಸಿಕೊಂಡರೂ, ಜನರು ತಮ್ಮ ತಮ್ಮ ಸಮೀಪದ ವೈದ್ಯರನ್ನು ಕಾಣುವಲ್ಲಿ ವಿಳಂಬ ಮಾಡುತ್ತಿರಲಿಲ್ಲ. ಆಯ್ದ ಆ ಐದು ಪ್ರದೇಶಗಳಲ್ಲಿ, ಸೋಂಕಿತರನ್ನು ಸಂಪರ್ಕಿಸಿದ ಚಾರಿತ್ರ್ಯವಿರುವ ೨೦%ರಷ್ಟು ವ್ಯಕ್ತಿಗಳು ಸೇರಿದಂತೆ ಸುಮಾರು ೫೦,೦೦೦ ಜನರುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರುಗಳ ಪೈಕಿ ಸುಮಾರು ೧೦,೦೦೦ ಶಂಕಿತರನ್ನು, ಸರಕಾರಿ ನೇತೃತ್ವದ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗಿತ್ತು. ಪರಿಸ್ಥಿತಿ ಸಾಕಷ್ಟು ನಿಯಂತ್ರಣದಲ್ಲಿರುವಂತೆ ಕಂಡಿದ್ದರೂ, ಲಾಕ್ಡೌನಿನ ಸಡಿಲಿಕೆ ಮತ್ತು  ಮಳೆಗಾಲದ ಆಗಮನ, ತಜ್ಞರುಗಳು ಮತ್ತೆ ಆತಂಕಗೊಳ್ಳುವಂತೆ ಮಾಡಿತ್ತು.

೨೦೨೦ರ ಏಪ್ರಿಲ್ ಸಮಯಕ್ಕೆ ೪೯೧ರಷ್ಟಿದ್ದ ಸೋಂಕಿತರ ಸಂಖ್ಯೆ, ಮೇ ತಿಂಗಳ ಹೊತ್ತಿಗೆ ೧೨೦೦ರಷ್ಟಾಗಿತ್ತು. ಸ್ಥಳೀಯ ಅಧಿಕಾರಿಗಳು, ಸರಕಾರಿ ಹಾಗೂ ಖಾಸಗಿ ವೈದ್ಯರುಗಳ ಸತತ ಪರಿಶ್ರಮದ ಫಲವಾಗಿ, ಜೂನ್ ತಿಂಗಳ ವೇಳೆಗೆ ಸೋಂಕಿತರ ಸಂಖ್ಯೆ ೨೭೪ಕ್ಕೆ ಇಳಿದಿತ್ತು, ಮತ್ತು ಕೇವಲ ೬ ಜನ ಸೋಂಕಿತರು ಸಾವನ್ನಪ್ಪಿದ್ದರು. ಆದರೂ ಜಾಗರೂಕರಾಗೇ ಇರಬೇಕಾದ ಅವಶ್ಯಕತೆಯನ್ನು ಮತ್ತೆ ಮತ್ತೆ ಹೇಳುತ್ತಿದ್ದ ಅಧಿಕಾರಿಗಳ ಅಭಿಪ್ರಾಯ,  "ಎಲ್ಲವನ್ನು ಗೆದ್ದೆವು" ಎಂದು ಹೇಳಲಾಗದು ಎಂಬುದಾಗಿತ್ತು. 

೨೦೨೦ರ ಜೂಲೈ ತಿಂಗಳ ಅಂತ್ಯದ ವೇಳೆಗೆ, ಧಾರಾವಿ ಸ್ಲಮ್ನಲ್ಲಿ ಒಟ್ಟು ೨೫೦೦ ಸೋಂಕಿತರ ಪತ್ತೆಯಾಗಿದ್ದು, ಅವರುಗಳಲ್ಲಿ ೨೧೨೧ರಷ್ಟು ರೋಗಿಗಳು ಗುಣಮುಖರಾಗಿದ್ದರು. ಸುಮಾರು ೨೦೦ ಸಾವುಗಳೂ ಸಂಭವಿಸಿದ್ದವು. ಅಂದಿಗೆ ೧೪೦ ರೋಗಿಗಳು ಮಾತ್ರ ಇದ್ದು,  ಅಲ್ಲಿ ಪ್ರತಿ ದಿನದ ಹೊಸ ರೋಗಿಗಳ ಪತ್ತೆಯ ಸಂಖ್ಯೆ ೨೦ರಷ್ಟಕ್ಕೆ ಇಳಿದಿತ್ತು. ಇಷ್ಟು ಸುಧಾರಿಸಿದ್ದ ಧಾರಾವಿ ಸ್ಲಮ್ಮಿನ ಪರಿಸ್ಥಿತಿ, ಇಡೀ ಮುಂಬೈ ನಗರಕ್ಕೇ ಮಾದರಿಯಾಗಿತ್ತು. 

ಧಾರಾವಿ ಸ್ಲಮ್ಮಿನ ಜನರುಗಳು ಮತ್ತೊಂದು ವಿಷಯದಲ್ಲಿ ಮಾನವೀಯತೆ ಮೆರೆದಿದ್ದರು. ತೀವ್ರವಾಗಿ ಬಳಲುತ್ತಿದ್ದ ಕೋವಿಡ್ ರೋಗಿಗಳ ಚಿಕಿತ್ಸೆಗೆ, ಕೋವಿಡ್ನಿಂದ ಗುಣಮುಖರಾದ ವ್ಯಕ್ತಿಗಳ ರಕ್ತ ನೀಡುವ  ಪ್ರಯೋಗವೂ, ಒಂದು ವಿಧಾನ. ಆ ವಿಧಾನವನ್ನು 'ಪ್ಲಾಸ್ಮಾ ಚಿಕಿತ್ಸೆ' ಎಂದೇ ಕರೆಯಲಾಗುತ್ತದೆ. ೮೫%ರಷ್ಟು ಗುಣಮುಖರಿದ್ದ ಧಾರಾವಿ ಸ್ಲಮ್ಮಿನಲ್ಲಿ, 'ಪ್ಲಾಸ್ಮಾ ದಾನ'ಕ್ಕೆ ಮುಂದಾಗುತ್ತಿದ್ದ ವ್ಯಕ್ತಿಗಳ ಸಂಖ್ಯೆ ಸಾಕಷ್ಟು ಹೆಚ್ಚಿತ್ತು. ಕೋವಿಡ್ನಿಂದ ಗುಣಮುಖರಾದ ೨೧೨೧ ವ್ಯಕ್ತಿಗಳನ್ನೂ, ಸ್ಥಳೀಯ ಅಧಿಕಾರಿಗಳು ಸಂಪರ್ಕಿಸಿದಾಗ, ಸುಮಾರು ೪೫೦ ವ್ಯಕ್ತಿಗಳು ಪ್ಲಾಸ್ಮಾದಾನಕ್ಕೆ ಸಮ್ಮತಿಯನ್ನು ನೀಡಿದ್ದರು. ಆ ೪೫೦ ವ್ಯಕ್ತಿಗಳಲ್ಲಿ ೫೦ರೊಳಗಿನ ಪ್ರಾಯದ ವ್ಯಕ್ತಿಗಳು ಸಾಕಷ್ಟಿದ್ದು, ಅವರುಗಳಿಗೆ ಬೇರ್ಯಾವ ರೋಗಗಳೂ (comorbidities) ಇಲ್ಲದೆ ಇದ್ದದ್ದು ಅನುಕೂಲಕರವಾಗಿತ್ತು. ಗುಣಮುಖರಾದವರಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಜನರು ಪ್ಲಾಸ್ಮಾದಾನಕ್ಕೆ ಮುಂದಾಗುವ ಸಾಧ್ಯತೆ ನಿಚ್ಚಳವಾಗಿತ್ತು. 

'ಕೋವಿಡ್-೧೯ರ ನಿರ್ವಹಣೆಯ ಅನುಭವದಿಂದ ಕಲಿತ ಪಾಠಗಳು ಅಮೂಲ್ಯವಾದುದ್ದು. ಹಳ್ಳಿಗಳ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗುಣಮಟ್ಟವನ್ನು ಮೊದಲು ಹೆಚ್ಚಿಸಬೇಕು. ಅಂತೆಯೇ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ ಗುಣಮಟ್ಟದ ನಿರ್ವಹಣೆಯೂ ಉತ್ತಮವಾಗಬೇಕು. ಭಾರೀ ನಗರಗಳ ಪರಿಸ್ಥಿತಿ ಮತ್ತು ನಿರ್ವಹಣೆ ಎಂದಿಗೂ ಆತಂಕಕಾರಿಯಾದದ್ದು. ಅಂತಹ ನಗರಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದರೂ, ಸರಕಾರಿ  ಆಸ್ಪತ್ರೆಗಳ ಸೇವೆಯನ್ನು ನಿರ್ಲಕ್ಷಿಸುವಂತಿಲ್ಲ. ಭಾರಿ ನಗರಗಳ ಅವಿಭಾಜ್ಯ ಅಂಗದಂತೆ, ಸ್ಲಮ್ಗಳು (ಕೊಳಚೆ ಪ್ರದೇಶಗಳು) ಎಂದಿಗೂ ಇದ್ದೆ ಇರುತ್ತವೆ. ಸ್ಲಮ್ಗಳ ಉತ್ತಮ ನಿರ್ವಹಣೆ ಅಸಾಧ್ಯವಾದುದೇನಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಸತತವಾಗಿ ಸಾಗುತ್ತಿರಬೇಕು' ಎಂಬುದು ಡಾ. ಕಿರಣನ ವಿಶ್ಲೇಷಣೆಯಾಗಿತ್ತು. 

ಆಶಾ ಕಾರ್ಯಕರ್ತೆಯರ (ASHA - Accredited Social Health Activists) ಸಮಸ್ಯೆಗಳನ್ನು ಕುರಿತಾದ ಕಳಕಳಿ ರೋಹಿಣಿಯದಾಗಿತ್ತು. 'ಬರೀ ಮೂರನೇ ಒಂದು ಭಾಗದಷ್ಟರ ಸಂಬಳಕ್ಕೆ ದುಡಿಯುತ್ತಿರುವಂತಹ, ೯ ಲಕ್ಷ ಆಶಾ ಕಾರ್ಯಕರ್ತೆಯರು ಮತ್ತು ೨. ೭೫ ಲಕ್ಷ ಇನ್ನಿತರ ಆರೋಗ್ಯ ಕಾರ್ಯಕರ್ತರೂ ನಮ್ಮ ದೇಶದಲ್ಲಿದ್ದಾರೆ. ಇವರ್ಯಾರು ಸರಕಾರದ ಖಾಯಂ ನೌಕರರಲ್ಲ. ಅವರುಗಳ ನೌಕರಿಯನ್ನು ಖಾಯಂಗೊಳಿಸಿ ಅವರುಗಳಿಗೆ ಸಂಪೂರ್ಣ ವೇತನವನ್ನು ನೀಡಿವಂತಹ ನಿರ್ಣಯವನ್ನು ಸರಕಾರ ಕೂಡಲೇ ಜಾರಿಗೊಳಿಸಬೇಕು' ಎಂದಳು. 

***

'ನಾನೊಂದು ಮುಖ್ಯವಾದ ವಿಚಾರವನ್ನು ಚರ್ಚಿಸಬೇಕು' ಎಂದು ನೀನು ನನಗೆ ತಿಳಿಸಿದ್ದೆ. 'ಏನದು?' ಎಂದು ಕೇಳಿದವನು ಡಾ. ಕಿರಣ್. 

'ನಾನು ಈವರಗೆ ಚರ್ಚಿಸಿದ ವಿಚಾರಗಳು ಮುಖ್ಯವಾದುವೇ. ಯುವಕರುಗಳು ಮತ್ತು ಉತ್ಸಾಹಿಗಳನ್ನು  ಕೊರೋನಾ ಸೇನಾನಿಗಳಾಗುವಂತೆ ಆಹ್ವಾನಿಸಿ ಸರಕಾರ ಜಾರಿಗೊಳಿಸಿದ ಜಾಹಿರಾತನ್ನು ನಾನು  ನೋಡಿದ್ದೇನೆ. ನಮ್ಮ ತಂದೆಯವರಾದ ರಾಜುರವರು ಮತ್ತು ನಾನೂ ಕೂಡಾ ಈ ವಿಷಯದಲ್ಲಿ ಆಸಕ್ತರು. ಅದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸರಕಾರಕ್ಕೆ ಸಲ್ಲಿಸುವುದು ಹೇಗೆ?' ಎಂದು ಕೇಳಿದಳು ರೋಹಿಣಿ. 

'ಒಹೋ, ಇದು ನಿಜವಾಗಲೂ ಸಂತೋಷದ ವಿಷಯ. ಕೊರೋನಾ ಸೇನಾನಿಗಳಾಗುವುದಕ್ಕೆ ಬೇಕಾದ ಮೊದಲ ಅರ್ಹತೆಯೆಂದರೆ, ಮೊದಲು ಅವರವರ ಸ್ಮಾರ್ಟ್ ಫೋನ್ಗಳಲ್ಲಿ "ಆರೋಗ್ಯ ಸೇತು" ಎಂಬ "ಆಪ್ (App)" ಅನ್ನು ಅಳವಡಿಸಿಕೊಂಡಿರಬೇಕು (download). ನಿನ್ನ ಫೋನಿನಲ್ಲಿ ಆ ಆಪ್ ಇದೆಯೇ?' 

'ಆರೋಗ್ಯ ಸೇತು ಆಪ್!' ಒಹೋ, ಕೇಳಿದ್ದೇನೆ. ಅದೇಕೋ, ನಾನು ಆ ಆಪನ್ನು ಡೌನ್ಲೋಡ್ ಮಾಡಿಕೊಳ್ಳಲಾಗಿಲ್ಲ. ನಮ್ಮ ತಂದೆಯವರಿಗಂತೂ ಅದರ ವಿಷಯವೇನೂ ಗೊತ್ತೇ ಇಲ್ಲ. ಆ ಆಪನ್ನು  ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಅದರಿಂದೇನು ಉಪಯೋಗ?' ತಿಳಿಸ ಬಲ್ಲೆಯಾ ಎಂದು ಕೇಳಿದವಳು ರೋಹಿಣಿ. 

'ಆರೋಗ್ಯ ಸೇತು ಎಂಬುದು ಭಾರತ ಸರಕಾರ ಸಿದ್ಧಪಡಿಸಿದ ಒಂದು ಮೊಬೈಲ್ ಆಪ್. ನಿನ್ನ ಸ್ಮಾರ್ಟ್ ಫೋನಿಗೆ ಅದನ್ನು "ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಗಳಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಕೋವಿಡ್-೧೯ ರೋಗದಿಂದ ಜನರನ್ನು ಕಾಪಾಡುವುದೇ ಆ ಆಪ್ನ ಮೂಲ ಉದ್ದೇಶ. ಆ ಆಪ್ನ ಪ್ರಮುಖ ರೂಪರೇಷೆಗಳು ಹೀಗಿವೆ. 

-ಆ ಆಪ್ ಅಳವಡಿಸಿರುವ ಸ್ಮಾರ್ಟ್ ಫೋನ್ ಹೊಂದಿರುವ ವ್ಯಕ್ತಿಗಳು, ಅದೇ ರೀತಿಯ ಆರೋಗ್ಯ ಸೇತು ಆಪನ್ನು ಅಳವಡಿಸಿರುವ ಫೋನನ್ನು ಹೊಂದಿರುವ  ಸೋಂಕಿತರ ಸಂಪರ್ಕಕ್ಕೆ ಬಂದಿದ್ದಲ್ಲಿ, ಆ ಸಂಪರ್ಕದ ಮಾಹಿತಿ ಬ್ಲೂ ಟೂತ್ (bluetooth)  ಮುಖಾಂತರ ಎರಡೂ ಫೋನ್ಗಳಲ್ಲಿ ದಾಖಲಾಗುತ್ತದೆ. 

-"ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR)" ಸಿದ್ಧ ಪಡಿಸಿರುವ ಕ್ರಮಗಳ ಪ್ರಕಾರ, ಕೆಲವು ಸೂಚಕ  ಸ್ವಯಂ ಪರೀಕ್ಷೆಗಳನ್ನು ಆ ಆಪ್ ಮುಖಾಂತರ ಮಾಡಿಕೊಳ್ಳಬಹುದಾಗಿರುತ್ತದೆ. 

-ಸೋಂಕಿತರ ಸಂಪರ್ಕದ ಮಾಹಿತಿಯ ಅನುಸಾರವಾಗಿ ಆಯಾ ವ್ಯಕ್ತಿಗಳು ಮುಂದಿನ ದಿನಗಳಲ್ಲಿ  ಸೋಂಕಿತರಾಗುವ ಸಾಧ್ಯತೆಯನ್ನು ಆ ಆಪ್ನಲ್ಲಿ ಕಾಣಬಹುದಾಗಿರುತ್ತದೆ. 

-ಕೋವಿಡ್-೧೯ ಅನ್ನು ಕುರಿತಾದ ಇತ್ತೀಚಿನ ಮಾಹಿತಿಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ಆ ಆಪ್ನಲ್ಲಿ ಪಡೆಯಬಹುದಾಗಿರುತ್ತದೆ. 

-ದೇಶಾದ್ಯಂತದ ಕೋವಿಡ್ ಅಂಕಿ-ಅಂಶಗಳನ್ನು ಅಲ್ಲಿ ಪಡೆಯಬಹುದಾಗಿರುತ್ತದೆ. 

-ಕೋವಿಡ್ ರೋಗಕ್ಕೆ ಸಂಬಂಧ ಪಟ್ಟಂತಹ ಮಾಹಿತಿಗಳನ್ನು ಪಡೆಯುವ ತುರ್ತು ಕರೆಗಳ ನಂಬರ್ಗಳನ್ನು ಅಲ್ಲಿ ನೀಡಲಾಗಿರುತ್ತದೆ. 

-ಕೋವಿಡ್ ರೋಗದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದಾದ ಕೇಂದ್ರಗಳ ಬಗೆಗಿನ ಮಾಹಿತಿಯನ್ನೂ ಆ ಆಪ್ನ ಸಹಾಯದಿಂದ ಪಡೆಯಬಹುದಾಗಿರುತ್ತದೆ.'

'ಕೋವಿಡ್ ಸೋಂಕಿತರೊಬ್ಬರ ಸಂಪರ್ಕ ನನಗಾಗಿದ್ದರೆ, ಆ ಬಗೆಗಿನ ಮುನ್ಸೂಚನೆಯನ್ನು ಆರೋಗ್ಯ ಸೇತು ನನಗೆ ನೀಡುತ್ತದೆಯೇ?' ರೋಹಿಣಿ ಕುತೂಹಲಕಾರಿಯಾಗಿದ್ದಳು. 

'ನಿನ್ನ ಸ್ಮಾರ್ಟ್ ಫೋನಿನಲ್ಲಿರುವ ಆರೋಗ್ಯ ಸೇತು ಆಪ್,  ಬೇರೆಯವರ  ಸ್ಮಾರ್ಟ್ ಫೋನಿನಲ್ಲಿ ಅಳವಡಿಕೆಯಾಗಿರುವ ಆರೋಗ್ಯ ಸೇತು ಆಪ್ನ ಸನಿಹಕ್ಕೆ ಬಂದಿದ್ದರೆ, ಬ್ಲೂ ಟೂತ್ ಮುಖಾಂತರ ಆ ಸಂಪರ್ಕದ ಮಾಹಿತಿ ದಾಖಲಾಗುತ್ತದೆ. ಅಂತಹ ದಾಖಲೆಯಲ್ಲಿ "ಎಲ್ಲಿ ಸಂಪರ್ಕವಾಗಿತ್ತು? ಎಷ್ಟು ಹೊತ್ತು ಸಂಪರ್ಕದಲ್ಲಿದ್ದಿರಿ? ಯಾವಾಗ ಸಂಪರ್ಕದಲ್ಲಿದ್ದಿರಿ?" ಎಂಬ ಎಲ್ಲಾ ಮಾಹಿತಿಗಳೂ ಇರುತ್ತವೆ. ನೀನು ಸಂಪರ್ಕಿಸಿದ್ದ ವ್ಯಕ್ತಿ ಸೋಂಕಿತನಾಗಿದ್ದರೆ, ಅಥವಾ ಮುಂದಿನ ೧೪ ದಿನಗಳಲ್ಲಿ ಆ ವ್ಯಕ್ತಿ  ಸೋಂಕಿತನಾದರೆ, ಅದರಿಂದ ನಿನಗಿರುವ ಅಪಾಯದ ಮುನ್ಸೂಚನೆ, ನಿನಗೆ ನಿನ್ನ ಆಪ್ ಮುಖಾಂತರ ತಿಳಿಯುತ್ತದೆ. ನಿನ್ನ ಸೋಂಕಿನ ಮಾಹಿತಿ, ಸಂಬಂಧ ಪಟ್ಟ ಆರೋಗ್ಯಾಧಿಕಾರಿಗಳಿಗೂ ದೊರೆತು, ಬೇಕಾದ ಮುಂದಿನ ಕ್ರಮಗಳನ್ನು ಅವರೇ ಆರಂಭಿಸುತ್ತಾರೆ. 

ಆರೋಗ್ಯ ಸೇತು ಆಪ್ನ ನಿನ್ನ ಪರದೆ, ನಿನಗೆ ರೋಗ ಬರುವ ಸಾಧ್ಯತೆಯ ತೀವ್ರತೆಯನ್ನು ಮಾಪನ ಮಾಡಿ, ಅದಕ್ಕೆ ತಕ್ಕಂತೆ ತನ್ನ ಬಣ್ಣವನ್ನು ಬದಲಾಯಿಸುತ್ತದೆ. 

-ನಿನಗ್ಯಾವ ಸೋಂಕಿನ ಸಾಧ್ಯತೆಯೂ ಇಲ್ಲದಿದ್ದರೆ ಅದರ ಬಣ್ಣ ಹಸಿರಾಗಿರುತ್ತದೆ. 

-ನಿನಗೆ ಸೋಂಕಿನ ಸಾಧ್ಯತೆ ಸಾಧಾರಣವಾಗಿದ್ದರೆ, ಅದರ ಬಣ್ಣ ಹಳದಿಯಾದಾಗಿರುತ್ತದೆ. 

-ನಿನಗೆ ಸೋಂಕಿನ ಸಾಧ್ಯತೆ ಹೆಚ್ಚಾಗಿದ್ದರೆ, ಪರದೆಯ ಬಣ್ಣ ಕಿತ್ತಳೆ ಹಣ್ಣಿನ ಬಣ್ಣದ್ದಾಗಿರುತ್ತದೆ. 

-ನೀನಾಗಲೇ ಕೋವಿಡ್ ಸೋಂಕಿತೆಯಾಗಿದ್ದರೆ, ಅದರ ಬಣ್ಣ ಕೆಂಪಾಗಿ ಹೋಗಿರುತ್ತದೆ.'

ಎಂದು ಸಾಗಿತ್ತು ಡಾ. ಕಿರಣನ ವಿವರಣೆ. 

'ಯಾರಿಗಾದರೂ ಕೋವಿಡ್-೧೯ರ ಸೋಂಕು ತಗುಲಿದಲ್ಲಿ ಆರೋಗ್ಯ ಸೇತು ಆಪ್ಗೆ ಅದು ಹೇಗೆ ತಿಳಿಯುತ್ತದೆ?'

'ಪ್ರಯೋಗಾಲಯವೊಂದರಲ್ಲಿ ಯಾವುದಾದರೂ ವ್ಯಕ್ತಿಗೆ ಕೋವಿಡ್-೧೯ರ ಸೋಂಕು ತಗುಲಿದೆ (ಪೊಸಿಟಿವ್ ಆಗಿದೆ) ಎಂದು ತಿಳಿದಾಗ, ಆ ಪ್ರಯೋಗಾಲಯದವರು ಆ ಮಾಹಿತಿಯನ್ನು "ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR)"ಗೆ ವಿದ್ಯುನ್ಮಾನ (electronic) ವಿಧಾನದ ಮೂಲಕ  ರವಾನಿಸುತ್ತಾರೆ. ಆ ಸಂಸ್ಥೆ ಸಂಬಂಧ ಪಟ್ಟ ವ್ಯಕ್ತಿಗಳ "ಆರೋಗ್ಯ ಸೇತು" ಆಪ್ಗಳಿಗೆ ಮಾಹಿತಿಯನ್ನು ರವಾನಿಸುತ್ತದೆ.  ಸೋಂಕಿತನಾದ ವ್ಯಕ್ತಿಯ ಆಪ್ನ ಬಣ್ಣ ಕೆಂಪಾಗಿ, ಸೋಂಕಿತನನ್ನು ಎಚ್ಚರಿಸುತ್ತದೆ. ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಆಪ್ನಲ್ಲೂ ಅಪಾಯದ ಸೂಚನೆ ಕಾಣಿಸಿಕೊಂಡಿರುತ್ತದೆ' ಎಂಬುದು ಡಾ. ಕಿರಣನ ವಿವರಣೆಯಾಗಿತ್ತು. 

'ನಾನಿರುವ ಪ್ರದೇಶದಲ್ಲಿರುವ ಅಪಾಯದ ತೀವ್ರತೆಯ ಸೂಚನೆಯನ್ನು "ಆರೋಗ್ಯ ಸೇತು" ಆಪ್ ತಿಳಿಸಬಲ್ಲದೇ?'

'ನಿನ್ನ ಆರೋಗ್ಯ ಸೇತುವಿನ ಆಪ್ನ ಪರದೆಯ ಚಲಿಸುವ (live) ಭಾಗವು ನಿನಗೆ ನಾಲ್ಕು ಅಂಕಿ-ಅಂಶಗಳನ್ನು ತೋರಿಸುತ್ತದೆ. ನೀನು ಪಾಯಿಂಟ್ "ಎ" ಇಂದ ಪಾಯಿಂಟ್ "ಬಿ"ಗೆ ತಲುಪಿದಾಗ, ಆ ಪ್ರದೇಶದ ಪರಿಸ್ಥಿತಿಗಳಿಗೆ ಅನುಗುಣವಾಗಿ ಕೆಳಕಂಡ ಮಾಹಿತಿಗಳನ್ನು, ನಿನ್ನ ಆಪ್ ತಿಳಿಸುತ್ತದೆ. 

- X-ಅಂತರದಲ್ಲಿರುವ, ಆಪ್ ಅಳವಡಿಸಿಕೊಂಡಿರುವ ವ್ಯಕ್ತಿಗಳ ಪೈಕಿ ಎಷ್ಟು ಜನರು, ಕಳೆದ ೨೪ ಘಂಟೆಗಳೊಳಗೆ  ಸ್ವಯಂ-ಪರೀಕ್ಷೆಗಳನ್ನು ನಡೆಸಿಕೊಂಡಿದ್ದಾರೆ?

-X-ಅಂತರದಲ್ಲಿರುವ ಎಷ್ಟು ವ್ಯಕ್ತಿಗಳು ಆರೋಗ್ಯ ಸೇತು ಆಪನ್ನು ಅಳವಡಿಸಿಕೊಂಡಿದ್ದಾರೆ? 

-X-ಅಂತರದಲ್ಲಿರುವ ಎಷ್ಟು ವ್ಯಕ್ತಿಗಳಲ್ಲಿ, ಒಂದು ಮತ್ತು ಅದಕ್ಕಿಂತ ಹೆಚ್ಚಿನ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ? 

-X-ಅಂತರದಲ್ಲಿನ ಎಷ್ಟು ವ್ಯಕ್ತಿಗಳನ್ನು ಕೋವಿಡ್ ಸೋಂಕಿತರೆಂದು (covid positive) ಗುರುತಿಸಲಾಗಿದೆ?

-X-ಅಂತರದಲ್ಲಿನ ಎಷ್ಟು ವ್ಯಕ್ತಿಗಳು ಕೋವಿಡ್ ಸೋಂಕಿತನೊಬ್ಬನ ಸಂಪರ್ಕಕ್ಕೆ ಬಂದಿದ್ದಾರೆ?

"x" ಎಂಬ ಅಂತರವನ್ನು, ಸ್ಮಾರ್ಟ್ ಫೋನಿನ ಮಾಲೀಕನು "೫೦೦ ಮೀ., ೧ ಕಿ.ಮೀ., ೨ ಕಿ.ಮೀ., ೫ ಕಿ.ಮೀ. ಮತ್ತು ೧೦ ಕಿ.ಮೀ." ಎಂದು ಬದಲಿಸಿ ಬೇಕಾದ ಎಲ್ಲಾ ಮಾಹಿತಿಗಳನ್ನೂ ಪಡೆಯಬಹುದು' ಎಂಬ ವಿಷಯವನ್ನು ಡಾ. ಕಿರಣ್ ತನ್ನ ಫೋನಿನ ಆರೋಗ್ಯ ಸೇತು ಆಪನ್ನು  ತೋರಿಸುತ್ತಾ ವಿವರಿಸಿದ್ದನು. 

'ಕಿರಣ್, ನನಗೊಬ್ಬ ಸ್ನೇಹಿತನಿದ್ದಾನೆ. ಆತನ ತಂದೆಗೆ ಕೆಲವು ದಿನಗಳ ಹಿಂದೆ  ಕೋವಿಡ್ ರೋಗವಿರುವುದು ಖಚಿತವಾಗಿತ್ತು. ಆದರೆ ನನ್ನ ಸ್ನೇಹಿತನ ಮೊಬೈಲ್ನ ಆರೋಗ್ಯ ಸೇತು ಆಪ್ನಲ್ಲಿ ಅವನೇ ಕೋವಿಡ್ ಸೋಂಕಿತನೆಂದು ಬಿಂಬಿತವಾಗುತ್ತಿದೆ. ಇದರಿಂದ ಅವನ ಸ್ನೇಹಿತರೆಲ್ಲರೂ ಅವನನ್ನು ಅನುಮಾನಿಸ ತೊಡಗಿದ್ದಾರೆ. ಇಂತಹ ಆಭಾಸಗಳು ಆರೋಗ್ಯ ಸೇತುವಿನಿಂದ ಉಂಟಾಗ ಬಹುದೇ?' ರೋಹಿಣಿ ಪ್ರಶೆಯಲ್ಲಿ ಆತಂಕವಿತ್ತು. 

ಕೆಲವು ಕ್ಷಣ ಯೋಚಿಸಿದ ಡಾ. ಕಿರಣನ ಉತ್ತರ ಹೀಗಿತ್ತು. 'ತನ್ನ ತಂದೆಗೆ ಪರೀಕ್ಷೆ ಮಾಡಿಸುವಾಗ, ನಿನ್ನ ಸ್ನೇಹಿತ, ತನ್ನ ಮೊಬೈಲ್ ಸಂಖ್ಯೆಯನ್ನೇ ನೀಡಿರಬಹುದು. ಆದುದರಿಂದ ಈ ರೀತಿಯ ಆಭಾಸ ನಡೆದಿರಬಹುದು. ಸಂಬಂಧಪಟ್ಟ ಜಿಲ್ಲಾ ಅಥವಾ ರಾಜ್ಯ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ, ಈಗ ಉಂಟಾಗಿರುವ ತೊಡಕನ್ನು ಸರಿಪಡಿಸಿಕೊಳ್ಳಬಹುದು' ಎಂದನು. 

'ನೀಡಿದ ಎಲ್ಲ ಮಾಹಿತಿಗಳಿಗಾಗಿ ವಂದನೆಗಳು ಎಂದು ನಾನು ಹೇಳುವುದಿಲ್ಲ. ಏಕೆಂದರೆ ನೀನು ನನ್ನ ಗೆಳಯ ತಾನೇ? ಆರೋಗ್ಯ ಸೇತು ಆಪನ್ನು ನಾನೀಗಲೇ ಅಳವಡಿಸಿಕೊಳ್ಳುತೇನೆ ಮತ್ತು ಕೊರೋನಾ ಸೇನಾನಿಯಾಗಲು ಕೂಡಲೇ ನನ್ನ ಮತ್ತು ನನ್ನಪ್ಪನ ಅರ್ಜಿಗಳನ್ನು ದಾಖಲಿಸುತ್ತೇನೆ' ಎಂದಳು ರೋಹಿಣಿ.

'ಅದು ಸಂತೋಷದ ವಿಷಯ. ಆರೋಗ್ಯ ಸೇತು ಎಂಬ ಆಪನ್ನು, ಕೋವಿಡ್-೧೯ ಕಲಿಸಿದ ಮತ್ತೊಂದು ಪಾಠವೆಂದು ಪರಿಗಣಿಸಬಹುದು. ಸಧ್ಯಕ್ಕೆ ಆ ಆಪ್ ಕೋವಿಡ್-೧೯ರ ಮಾಹಿತಿಯನ್ನು ಮಾತ್ರ ನೀಡು ತ್ತಿದೆ. ಮುಂಬರುವ ದಿನಗಳಲ್ಲಿ ಪ್ರತಿ ವ್ಯಕ್ತಿಯ ಆರೋಗ್ಯವನ್ನು ಕುರಿತಾದ ಸಮಗ್ರ ಮಾಹಿತಿಯನ್ನು ಅದೇ ಆಪ್ನಲ್ಲಿ ಅಳವಡಿಸಬಹುದು. ಆರೋಗ್ಯ ಸೇತು ಎಂಬ ಆಪ್ ದೇಶದ ಹೆಮ್ಮೆಯಾಗಿ ಪರಿವರ್ತನೆಗೊಳ್ಳಬಹುದು' ಎಂದ ಕಿರಣ್, ತನ್ನ ಗೆಳತಿಗೆ ಬೈ-ಬೈ ಹೇಳಿ ಹೊರಟನು. 

***

ಮನೆಗೆ ಹಿಂತಿರುಗಿದ ನಂತರ ರೋಹಿಣಿ ಮಾಡಿದ ಮೊದಲ ಕೆಲಸವೆಂದರೆ, ಆರೋಗ್ಯ ಸೇತು ಆಪನ್ನು ತನ್ನ ಸ್ಮಾರ್ಟ್ ಫೋನಿಗೆ ಅಳವಡಿಸಿಕೊಂಡಿದ್ದು. 

ತನ್ನ ತಂದೆ ರಾಜುರವರಿಗೂ ಆಪನ್ನು ಅಳವಡಿಸಿಕೊಡುವ ಕಾರ್ಯಕ್ಕೆ ರೋಹಿಣಿ ಮುಂದಾದಾಗ, ರಾಜುರವರು ಒಪ್ಪಲಿಲ್ಲ. 'ನೀನು ಆಪನ್ನು ಅಳವಡಿಸಿಕೊಡುವುದು ಬೇಡ, ಆ ಕೆಲಸವನ್ನು ಹೇಗೆ ಮಾಡಬೇಕೆಂಬುದನ್ನು ನನಗೆ ತಿಳಿಸು. ಆ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೇನೆ. ಏಕೆಂದರೆ ನಾನು "ಆತ್ಮನಿರ್ಭರ"ನಾಗಲು ಇಚ್ಛಿಸುತ್ತೇನೆ' ಎಂದರು ರಾಜು. 

'ಅಪ್ಪಾ, ನಿನ್ನ ಉತ್ಸಾಹವನ್ನು ನಾನು ಮೆಚ್ಚುತ್ತೇನೆ. ಆತ್ಮನಿರ್ಭರತೆಯೆಂಬುದು ಬರೀ ವ್ಯಕ್ತಿಗಳಿಗೆ ಸೀಮಿತವಾದುದಲ್ಲ. ನಮ್ಮ ಇಡೀ ದೇಶವೇ ಆತ್ಮನಿರ್ಭರತೆಯತ್ತ ಸಾಗಬೇಕಾಗಿದೆ. ಇದು ನಮ್ಮ ಪ್ರಧಾನಿ ಮೋದಿಯವರು ನೀಡಿರುವ ಸಂದೇಶವೂ ಹೌದು.'

ರೋಹಿಣಿ ನೀಡಿದ ಮಾರ್ಗದರ್ಶನದ ಪ್ರಕಾರ, ಪ್ರಯತ್ನ ಮಾಡಿದ ರಾಜುರವರು ಯಶಸ್ವಿಯಾಗಿ ಆರೋಗ್ಯ ಸೇತು ಆಪನ್ನು ತಮ್ಮ ಸ್ಮಾರ್ಟ್ ಫೋನಿಗೆ ಅಳವಡಿಸಿಕೊಂಡಾಗ ಉಬ್ಬಿ ಹೋಗಿ, 'ನಾನೀಗ  ಆತ್ಮನಿರ್ಭರನಾದೆ' ಎಂದು ಸಣ್ಣದಾಗಿ ಘರ್ಜಿಸಿದ್ದರು. 

'ಕೋವಿಡ್-೧೯ರ ಮಹಾಮಾರಿ ಕಲಿಸಿದ ಮತ್ತೊಂದು ಪಾಠವೆಂದರೆ "ಆತ್ಮನಿರ್ಭರತೆ." ಕೇವಲ ನಾಲ್ಕು ತಿಂಗಳುಗಳ ಹಿಂದೆ, ನಮ್ಮ ದೇಶದಲ್ಲಿ ಪಿ.ಪಿ.ಇ. ತೊಡುಗೆಗಳ ಉತ್ಪಾದನೆಯೂ ಆಗುತ್ತಿರಲಿಲ್ಲ. "ಅವಶ್ಯಕತೆಯೇ ಅನ್ವೇಷಣೆಯ ತಾಯಿ (Necessity is the mother of invention)." ಈಗ ಭಾರತದ ಉದ್ಯಮಿಗಳು ಪ್ರತಿದಿನ ೨ ಲಕ್ಷ ಪಿ.ಪಿ.ಇ. ತೊಡುಗೆಗಳನ್ನು ತಯಾರಿಸುವಷ್ಟು ಸಾಮರ್ಥ್ಯವನ್ನು ಸಾಧಿಸಿದ್ದಾರೆ. ಕಮ್ಮಿ ಜನಸಂಖ್ಯೆಯಿದ್ದು, ಹೆಚ್ಚಿನ ಜಿ.ಡಿ.ಪಿ. ಮತ್ತು ತಾಂತ್ರಿಕತೆಯನ್ನು ಹೊಂದಿರುವ ಹಲವು ದೇಶಗಳಿಗಿಂತ, ಭಾರತದ ಕೋವಿಡ್ ನಿರ್ವಹಣೆ ಉತ್ತಮವಾಗಿದೆ ಎಂಬ ಮಾತುಗಳು ಅಂತಾರಾಷ್ಟ್ರೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕೋವಿಡ್-೧೯ರ ರೋಗವನ್ನು ತಡೆಯಬಲ್ಲ ಲಸಿಕೆಯ ತಯಾರಿಕೆಯೂ* ಭಾರತದಲ್ಲಾಗುವ ಎಲ್ಲಾ ಸಾಧ್ಯತೆಗಳು ಇವೆ. ನಮ್ಮ ಆಟೋಮೊಬೈಲ್ ಉದ್ಯಮಿಗಳು, ಜೀವರಕ್ಷಕ ವೆಂಟಿಲೇಟಾರ್ಗಳ ಉತ್ಪಾದನೆಗೆ ತಮ್ಮ ಸಾಧನಗಳ ಮಾರ್ಪಾಡನ್ನು ಮಾಡಿಕೊಂಡು ಸಜ್ಜಾಗುತ್ತಿವೆ. 

ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ಅನುಕೂಲವಾಗುವಂತೆ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ. "ಆರ್ಥಿಕತೆ, ಮೂಲಭೂತ ಸೌಕರ್ಯಗಳು, ವಿಧಿವಿಧಾನಗಳು, ಕುಶಲ ಜನತೆ ಮತ್ತು ಬೇಡಿಕೆ, ಈ ಐದು ಅಂಶಗಳನ್ನು ಆತ್ಮನಿರ್ಭರತೆಯ ಐದು ಸ್ತ೦ಭಗಳೆಂದೇ ಗುರುತಿಸಲಾಗಿದೆ." ಎಂ.ಎಸ್.ಎಂ.ಇ. (MSME) ಉದ್ಯಮಿಗಳ, ವಲಸಿಗರ ಮತ್ತು ರೈತರುಗಳ ಬೆಂಬಲಕ್ಕಾಗಿ ಬೇಕಾದ ಕ್ರಮಗಳನ್ನು  ಮತ್ತು ಸುಧಾರಣೆಗಳನ್ನೂ ಜಾರಿಗೆ ತರುವ ಸರ್ವಪ್ರಯತ್ನಗಳು ನಡೆಯುತ್ತಿವೆ.  

ಆತ್ಮನಿರ್ಭರತೆಯೆಂದರೆ ಹೊರದೇಶಗಳೊಂದಿಗಿನ ವ್ಯಾಪಾರವನ್ನು ನಿಲ್ಲಿಸುವುದು ಎಂದಲ್ಲ. ಪ್ರಪಂಚದ ರಾಷ್ಟ್ರಗಳೊಂದಿಗಿನ ಸಂಬಂಧಗಳು ಎಂದಿನಂತೆ ಸಾಗುತ್ತಿರುತ್ತವೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಂದ ನಮಗೆ ಬಂಡವಾಳ (FDI) ಮತ್ತು ತಾಂತ್ರಿಕ ಮಾರ್ಗದರ್ಶನ (technical knowhow) ದೊರೆಯುತ್ತಲೇ ಸಾಗುತ್ತದೆ. ಆಹಾರದ ವಿಷಯದಲ್ಲಿ ದಶಕಗಳ ಹಿಂದೆ ನಾವು ಆತ್ಮನಿರ್ಭರತೆಯನ್ನು ಸಾಧಿಸಿದ್ದಾಗಿದೆ. ಸೇವಾ ಕ್ಷೇತ್ರದಲ್ಲಿ (Service sector) ನಮ್ಮ ದೇಶದ ಪ್ರಗತಿ ಶರವೇಗದಲ್ಲಿ ಸಾಗುತ್ತಿದೆ. ಇವುಗಳೆಲ್ಲಕ್ಕಿಂತ ಮೇಲಾಗಿ, ಭಾರತದ ೧೩೦ ಕೋಟಿಯಷ್ಟರ ಅಪಾರವಾದ ಜನಸಂಖ್ಯೆ, ವಿಶ್ವದ ಬೃಹತ್ ಮಾರುಕಟ್ಟೆಗಳಲ್ಲೊಂದಾಗಿದೆ. ಆದುದರಿಂದ ನಾವೊಂದು ಆತ್ಮನಿರ್ಭರ ದೇಶವಾಗಿ ಹೊರಹೊಮ್ಮುವ ಸಾಧ್ಯತೆ ನಿಚ್ಚಳವಾಗಿದೆ. ಆತ್ಮನಿರ್ಭರತೆಯ ಬಲದಿಂದ ವಿಶ್ವದ ಅತಿ ಮುಖ್ಯ ರಾಷ್ಟ್ರವೊಂದಾಗಿ ಬೆಳೆಯುವ ಶಕ್ತಿ ನಮಗಿದೆ.'  ರಾಜುರವರ ಆತ್ಮನಿರ್ಭರತೆಯ ವ್ಯಾಖ್ಯಾನ ಹೀಗೆ ಸಾಗಿತ್ತು. 

ರೋಹಿಣಿ ಪ್ರತಿವಾದಿಸುತ್ತಾ, 'ಅಪ್ಪಾ, ನಮ್ಮ ವಿರೋಧ ಪಕ್ಷಗಳ ನಾಯಕರು ಆತ್ಮನಿರ್ಭರತೆ ಎಂಬುದು ಆಡಳಿತ ಪಕ್ಷದ ನಾಟಕ ಮಾತ್ರ. ಅದು "ಹೊಸ ಬಾಟಲಿನಲ್ಲಿ ತುಂಬಿಸಿ ಕೊಟ್ಟ ಹಳೆ ಮದಿರೆಯಂತೆ (Old wine in a new bottle)." ಉಕ್ಕಿನ ಕ್ಷೇತ್ರದಲ್ಲಿ ಸೈಲ್ (SAIL), ತಾಂತ್ರಿಕ ಶಿಕ್ಷಣದಲ್ಲಿ ಐ.ಐ.ಟಿ. (IIT)ಗಳು, ವೈದ್ಯಕೀಯ ಸೌಲಭ್ಯದಲ್ಲಿ ಏಮ್ಸ್ (AIIMS), ರಕ್ಷಣಾ ಸಂಶೋಧನೆಯಲ್ಲಿ ಡಿಆರ್ಡಿಓ (DRDO), ಹಾರಾಟಗಳ ಕ್ಷೇತ್ರದಲ್ಲಿ ಎಚ್. ಎ.ಎಲ್.(HAL), ಬಾಹ್ಯಾಕಾಶ ಸಂಶೋಧನೆಯಲ್ಲಿ ಐ. ಎಸ್.ಆರ್.ಒ. (ISRO)" ಮುಂತಾದ ಸಂಸ್ಥೆಗಳ ಸ್ಥಾಪನೆ ಹಲವು ದಶಕಗಳ ಹಿಂದೇ ಆಗಿದ್ದು, ನಮ್ಮ ದೇಶ ಸಾಕಷ್ಟು ಆತ್ಮನಿರ್ಭರತೆಯನ್ನು ಅಂದೇ ಸಾಧಿಸಿತ್ತಲ್ಲವೇ?' ಎಂದಳು. 

'ಹೌದು ಮಗಳೆ, ಸ್ವಾತಂತ್ರ್ಯ ಸಿಕ್ಕನಂತರ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ೧೯೯೧ರಲ್ಲೇ ನಾವು ಆರ್ಥಿಕ ಕ್ಷೇತ್ರದ ಸುಧಾರಣೆಯನ್ನು ಆರಂಭಿಸಿದ್ದು, ಅದರ ಫಲವಾಗಿ ನಾವುಗಳು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ, ಮತ್ತು ನಮ್ಮ ಜಿ.ಡಿ.ಪಿ.ಯ ವೃದ್ಧಿಯ ದರ ಸಾಕಷ್ಟು ಹೆಚ್ಚಳವನ್ನು ಕಂಡಿದೆ. ಆದರೆ ಅನೀರಿಕ್ಷಿತವಾಗಿ ಬಂದಪ್ಪಳಿಸಿರುವ ಕೋವಿಡ್ ಮಹಾಮಾರಿ ನಮ್ಮನ್ನು ಹೊಡೆದೆಬ್ಬಿಸಿದೆ ಮತ್ತು ಆರ್ಥಿಕ ಕ್ಷೇತ್ರದ ಅಭಿವೃದ್ಧಿಯ ವೇಗವನ್ನು ತ್ವರಿತಗೊಳಿಸುವ ಅವಶ್ಯಕತೆಯ ಅರಿವನ್ನು ಮೂಡಿಸಿದೆ. ದೀರ್ಘವಾದ ಲಾಕ್ಡೌನಿನಿಂದ ಕುಂಠಿತವಾಗಿರುವ ಆರ್ಥಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಕೋವಿಡ್ನ ಜೊತೆಯೇ ಜನಜೀವನ ಸಾಗಬೇಕಿದೆ' ಎನ್ನುವ ಸಮಜಾಯಿಷಿ ತಂದೆ ರಾಜುರವರದಾಗಿತ್ತು. 

*** 

ತನ್ನ ಸಂಶೋಧನಾ ಕಾರ್ಯವನ್ನು ಮುಂದುವರೆಸುತ್ತಿದ್ದ ರೋಹಿಣಿಗೆ, ತಾನೊಂದು ತಳ ಕಾಣದ ಸಾಗರವೊಂದರಲ್ಲಿ ಈಜುತ್ತಿರುವಂತೆ ಅನಿಸಿತ್ತು.  ಆಲೋಚಿಸುತ್ತಿದ್ದ ಅವಳಿಗೆ, 'ಕೋವಿಡ್-೧೯ ತನ್ನ ಕಬಂಧ ಬಾಹುಗಳನ್ನು ಚಾಚುತ್ತಾ ಕದಡದ ಕ್ಷೇತ್ರಗಳೇ ಇಲ್ಲವೆ? ಪೂರ್ವಸ್ಥಿತಿಗೆ ಮರಳಲಾಗದಂತಹ (irreversible) ಹಲವಾರು ಬದಲಾವಣೆಗಳನ್ನು ಕೋವಿಡ್ ತಂದೊಡ್ಡಿದೆಯೆ? ಅಂತಹ ಬದಲಾವಣೆಗಳಲ್ಲಿ  'ಮನೆಯಿಂದಲೇ ಕೆಲಸ (work from home)' ಎಂಬುದೊಂದಲ್ಲವೇ?' ಎಂದೆನಿಸಿತ್ತು. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ರೋಹಿಣಿ, ತನ್ನ ಹಳೆಯ ಗೆಳತಿ  ಸೂಕ್ಷ್ಮಾಳಿಗೆ ಫೋನಾಯಿಸಿದ್ದಳು. ಆ ಕರೆಯನ್ನು ಕಾನ್ಫರೆನ್ಸ್ ಕರೆಯನ್ನಾಗಿ ಪರಿವರ್ತಿಸಿದ ಸೂಕ್ಶ್ಮಾ, ತನ್ನ ಪತಿ ಪ್ರತಾಪನು ಕರೆಯಲ್ಲಿ ಭಾಗಿಯಾಗುವಂತೆ ಮಾಡಿದ್ದಳು. 

'ಮನೆಯಿಂದಲೇ ಕೆಲಸ' ಎಂಬ ಹೊಸ ಬೆಳವಣಿಗೆಗೆ ಸಂಬಂಧಪಟ್ಟಂತಹ ತಮಾಷೆಯ ಪ್ರಸಂಗವೊಂದನ್ನು ಸೂಕ್ಷ್ಮಾ ಹೇಳಲಾರಂಭಿಸಿದಳು. 'ಮನೆಯಿಂದ ಕೆಲಸ ಮಾಡುತ್ತಿದ್ದ ತನ್ನ ಸಹಾಯಕನೊಬ್ಬನ ಮೇಲೆ ನಿಗಾ ಇರಿಸಲೆಂದು, ಮೇಲಧಿಕಾರಿ(Boss)ಯೊಬ್ಬನು ಅವನಿಗೆ ಕರೆಯೊಂದನ್ನು ಮಾಡಿದ್ದನು. ಕರೆಯ ಸಮಯ ಸುಮಾರು ಬೆಳಗಿನ ೯. ೦೦ ಘಂಟೆಯಾಗಿತ್ತು. ಕರೆಯನ್ನು ಸ್ವೀಕರಿಸಿದ ಸಹಾಯಕನ ಪತ್ನಿ ಮಾತನಾಡಿ, "ಅವರು ಬಟ್ಟೆಯನ್ನೊಗೆಯುತ್ತಿದ್ದಾರೆ," ಎಂದು ತಿಳಿಸಿದ್ದಳು. "ಕೂಡಲೇ ನನಗೆ ಮರುಕರೆಯೊಂದನ್ನು ಮಾಡಿ, ಎಂದು ನಿಮ್ಮ ಪತಿಗೆ ತಿಳಿಸಿ" ಎಂದ "ಬಾಸ್"ನ ಉತ್ತರದಲ್ಲಿ ದರ್ಪವಿತ್ತು. ೧೧. ೦೦ ಘಂಟೆಯಾದರೂ ಸಹಾಯಕನಿಂದ ಯಾವ ಮರುಕರೆಯೂ ಬಾಸ್ಗೆ ಬರದಿದ್ದಾಗ, ಕೋಪಗೊಂಡ ಬಾಸ್ ತನ್ನ ಸಹಾಯಕನಿಗೆ ಮತ್ತೊಂದು ಕರೆಯನ್ನು ಮಾಡಿ ಮಾತನಾಡಿದ್ದನು. "ನಾನು ನಿನಗೆ ಬೆಳಗ್ಗೆ ೯. ೦೦ ಘಂಟೆಗೆ ಕರೆಯೊಂದನ್ನು ಮಾಡಿದ್ದೆ. ಆಗ ನೀವು ತಮ್ಮ ಮನೆಯ ಬಟ್ಟೆಗಳನ್ನು ಒಗೆಯುತ್ತಿದ್ದಿರಿ. ನನಗೆ ಮರುಕರೆಯನ್ನು ಮಾಡುವಂತೆ ನಿಮ್ಮ ಪತ್ನಿಗೆ ತಿಳಿಸಿದ್ದೆ. ತಾವೇಕೆ ಮರುಕರೆಯನ್ನು ಈವರೆಗೆ ಮಾಡಿಲ್ಲ?" ಎಂದ ಬಾಸ್ನ ಕೋಪ ನೆತ್ತಿಗೇರಿತ್ತು. ಕ್ಷಮಾಪಣಾ ಛಾಯೆಯಿದ್ದ ದನಿಯಲ್ಲಿ ಉತ್ತರಿಸಿದ ಆ ಸಹಾಯಕ ಮಾತನಾಡುತ್ತಾ, "ಸಾರ್, ನಾನು ೯. ೩೦ಕ್ಕೇ ಮರುಕರೆಯನ್ನು ತಮಗೆ ಮಾಡಿದ್ದೆ. ಕರೆಯನ್ನು ಸ್ವೀಕರಿಸಿ ಮಾತನಾಡಿದ ತಮ್ಮ ಪತ್ನಿಯವರು, ತಾವು ಮನೆಯ ಪಾತ್ರೆಗಳನ್ನು ತೊಳೆಯುತ್ತಿರುವುದಾಗಿ ಉತ್ತರಿಸಿದರು," ಎಂದಾಗ ಆ ಬಾಸನಿಗಾದ ತಬ್ಬಿಬ್ಬನ್ನು ಕೇಳಿ,' ಮೂವರೂ ಗಹಗಹಿಸಿ ನಕ್ಕಿದ್ದರು. 

ಸೂಕ್ಷ್ಮಾ ಮುಂದುವರೆದು ಮಾತನಾಡುತ್ತಾ, 'ಹಾಸ್ಯದ ಪ್ರಸಂಗಗಳು ಹಾಗಿರಲಿ, ಕೋವಿಡ್ ಮಹಾಮಾರಿಯನಂತರ "ಮನೆಯಿಂದಲೇ ಕೆಲಸ" ಎಂಬುದೊಂದು "ಹೊಸ ಸಾಮಾನ್ಯ ಸಂಗತಿ"(new normal)ಯಾಗಿ ಹೋಗಿದೆ. ನನ್ನಂತಹ ೯೦%ರಷ್ಟು  ಐ.ಟಿ. ಉದ್ಯೋಗಿಗಳು, ಈಗ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರುಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳು ಸಣ್ಣ ಸಣ್ಣ ಪಟ್ಟಣಗಳ, ತಮ್ಮ ಮನೆಗಳಿಂದಲೇ ಕೆಲಸ ಮಾಡುತ್ತಿದ್ದು, ಮಹಾನಗರಗಳಲ್ಲಿ ಅವರುಗಳು ನೀಡುತ್ತಿದ್ದ ಭಾರೀ ಬಾಡಿಗೆಯನ್ನು ಮತ್ತು ಪ್ರಯಾಣದ ವೆಚ್ಚವನ್ನೂ ಉಳಿಸುತ್ತಿದ್ದಾರೆ. ನನ್ನಂತಹ ೧೨ ಮತ್ತು ೭ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಇರುವಂತಹ ತಾಯಂದಿರುಗಳಿಗೆ ಈ ಹೊಸ ಪದ್ಧತಿಯೊಂದು "ದೇವರು ಕೊಟ್ಟ ವರ"ವೆಂದೇ ಹೇಳಬೇಕು. ನಿನಗೆ ತಿಳಿದಿರುವಂತೆ ಈಗ ಲಾಕ್ಡೌನಿನಿಂದಾಗಿ ಮಕ್ಕಳ ಶಾಲೆಗಳೆಲ್ಲಾ ಮುಚ್ಚಿವೆ. ಮಕ್ಕಳೆಲ್ಲರ ಶಿಕ್ಷಣ ಈಗ  "ಆನ್ಲೈನ್ (online)" ತರಗತಿಗಳ ಮೂಲಕ ನಡೆಯುತ್ತಿದೆ. ಮನೆಯಲ್ಲೇ ಇದ್ದುಕೊಂಡು, ನನ್ನ ಮಕ್ಕಳ ಕಲಿಕೆಯ  ಹಿಂದಿರುವುದೆಂದರೆ ನನಗಿಷ್ಟ' ಎಂದಳು. 

ಆಗ, ಸೂಕ್ಷ್ಮಾಳ  ಪತಿ ಪ್ರತಾಪನ ಮಧ್ಯ ಪ್ರವೇಶ ತನ್ನಂತೆ ತಾನೇ ಆಗಿತ್ತು. 'ಇಲ್ಲ, ಇಲ್ಲ, ನನ್ನ ಹೆಂಡತಿ ಸುಳ್ಳು ಬಿಡುತ್ತಿದ್ದಾಳೆ. ಮಕ್ಕಳ ಮೇಲಿನ ನಿಗಾದ ಕಾರ್ಯವನ್ನು ಅವಳು ನನಗೆ ವಹಿಸಿ ತಾನು ತೆಪ್ಪನಿದ್ದಾಳೆ. ಅವಳ ಸ್ವಭಾವ "ಗೂಳಿ"ಯಂತಹದ್ದು. ಅವಳ ಸ್ವಭಾವಕ್ಕೆ ತಕ್ಕ ಹಾಗೆ ಅವಳ ಕೆಲಸದ ಸಮಯ ದಿನದ ವೇಳೆಯಲ್ಲಿದ್ದು, ಅದನ್ನವಳು ಇಷ್ಟಪಡುತ್ತಾಳೆ. ನನ್ನನ್ನವಳು "ಗೂಬೆ" ಅಂತ ಕರೆಯುತ್ತಾಳೆ. ಅದಕ್ಕೆ ತಕ್ಕ ಹಾಗೆ ನನ್ನ ಕೆಲಸದ ವೇಳೆ ಸಾಯಿಂಕಾಲ ೭ರಿಂದ ಮಧ್ಯರಾತ್ರಿ ೧ರ ವರೆಗಿರುತ್ತದೆ. ಹಾಗಾಗಿ ದಿನದ ವೇಳೆಯಲ್ಲಿ ನಡೆಯುವ ಮಕ್ಕಳ ಆನ್ಲೈನ್ ತರಗತಿಗಳ ಮೇಲಿನ ನಿಗಾ ವಹಿಸುವ ಭಾರ ನನ್ನದಾಗಿರುತ್ತದೆ. ಇದರ ಜೊತೆಗೆ ನನ್ನ ಮುದ್ದು ಮಗಳು "ತೀಕ್ಷ್ಣ"ಳ ೬೦ ನಿಮಿಷಗಳ ಸಂಗೀತದ ತರಗತಿಯೂ ಆನ್ಲೈನ್ನಲ್ಲೇ ಇದ್ದು, ಅದು ವಾರಕ್ಕೆರಡು ಬಾರಿ ಇರುತ್ತದೆ. ಅದರ ನಿಗವನ್ನೂ ನಾನೇ ವಹಿಸಬೇಕು. ನನಗಂತೂ ಸಂಗೀತದ ಗಂಧ ಸ್ವಲ್ಪವೂ ಇಲ್ಲ. ಸಂಗೀತದ ಕ್ಲಾಸ್ನಲ್ಲಿ ಏನಾಗುತ್ತದೆ ಎಂಬುದೇ ನನಗೆ ತಿಳಿಯುವುದಿಲ್ಲ. ನನ್ನ ಮಗಳ ಸಂಗೀತದ ಮೇಡಂ ಹೆಸರು "ಪ್ರೇಮಾ" ಎಂದು ಮಾತ್ರ ನನಗೆ ಗೊತ್ತು. ಯಾವಾಗಲೂ ನಗುಮೊಗದವರಾದ ಅವರೆಂದರೆ ನನಗಿಷ್ಟ! ಅವರು ಹಾಡುವುದೂ ನನಗಿಷ್ಟ. ತರಗತಿ ಆರಂಭವಾಗುವ ಮೊದಲು ಅವರಿಗೊಮ್ಮೆ "ಹಲೋ" ಅಂತೂ ಹೇಳೇ ಹೇಳುತ್ತೇನೆ.' 

ಮಾತನ್ನು ಮುಂದೆ ಬೆಳೆಸುತ್ತಾ ಪ್ರತಾಪ್, 'ರೋಹಿಣಿ, ನಿಮಗೆ ತಿಳಿದಿರುವಂತೆ ನಾನೂ ಕೂಡಾ ಐ.ಟಿ. ಕ್ಷೇತ್ರದಲ್ಲಿ ಕೆಲಸ ಮಾಡುವವನೆ. "ಮನೆಯಿಂದಲೇ ಕೆಲಸ" ಎಂಬ ಹೊಸ ಪದ್ಧತಿಗೆ ಐ.ಟಿ. ಕ್ಷೇತ್ರ ಮತ್ತು ಅದರ ಉದ್ಯೋಗಿಗಳು ಬಹು ಬೇಗ ಹೊಂದುಕೊಂಡಿದ್ದಾರೆ ಎಂದೇ ಹೇಳಬಹುದು. ನಮ್ಮ ಗ್ರಾಹಕರುಗಳಿಗೂ ಈ ಹೊಸ ಪದ್ಧತಿ ಸರಿಯೆನಿಸಿಹೋಗಿದೆ. ನಮ್ಮ ಐ.ಟಿ. ಉದ್ಯಮದ ಬಾಸ್ಗಳಿಗೂ ಹಾಗೂ ಗ್ರಾಹಕರುಗಳಿಗೂ, "ಮನೆಯಿಂದಲೇ ಕೆಲಸದ" ಸೂತ್ರದ  ಬಗ್ಗೆ ಏಕ ಕಾಲದಲ್ಲಿ, ಸಮ್ಮತಿ  ಮೂಡಿರುವುದು ಅಚ್ಚರಿಯ ಸಂಗತಿ. ಗುಣಮಟ್ಟದ ದೃಷ್ಟಿಯಿಂದ ನಾವುಗಳಂತೂ ಯಾವ ರಾಜಿಗೂ ಒಪ್ಪಲಾರೆವು. ದೊಡ್ಡ ನಗರಗಳು, ಸಣ್ಣ ಪಟ್ಟಣಗಳು ಮತ್ತು ಹಳ್ಳಿ ಹಳ್ಳಿಗಳಲ್ಲೂ, ಉತ್ತಮ ಗುಣಮಟ್ಟದ ಅಂತರ್ಜಾಲದ (bandwidth) ಸೌಲಭ್ಯಗಳು ದೊರೆಯುತ್ತಿರುವುದು "ಮನೆಯಿಂದಲೇ ಕೆಲಸ"ವೆಂಬ ಹೊಸ ಪದ್ಧತಿ ಬೇರೂರಲು ಸಹಾಯಕವಾಗಿದೆ' ಎಂದನು. 

'ಮನೆಯಿಂದಲೇ ಕೆಲಸವೆಂಬ ಹೊಸ ಪದ್ಧತಿ ಸಣ್ಣ ಪಟ್ಟಣಗಳ ಪಾಲಿಗೆ ವರವಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ವಿಷಯದ ಬಗ್ಗೆ ಸ್ವಲ್ಪ ವಿವರಿಸಿ,' ಎಂದು ಕೇಳಿದ ರೋಹಿಣಿಯಲ್ಲಿ ಹೆಚ್ಚಿನ ಉತ್ಸುಕತೆಯಿತ್ತು. 

ಸೂಕ್ಷ್ಮಾ ಪ್ರತಿಕ್ರಿಯಿಸುತ್ತಾ, 'ನಿನ್ನ ಅನಿಸಿಕೆ ಸರಿ ರೋಹಿಣಿ. ಸಣ್ಣ ಪಟ್ಟಣಗಳಲ್ಲಿನ ಉದ್ಯೋಗಿಗಳು ಕಮ್ಮಿ ಸಂಬಳಕ್ಕೆ ದುಡಿಯಲು ತಯಾರಿರುವುದು, ಕಂಪನಿಗಳ ಖರ್ಚನ್ನು ತಗ್ಗಿಸುವಲ್ಲಿ ಸಹಾಯಕವಾಗಿದೆ. ಸಣ್ಣ ಪಟ್ಟಣಗಳಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಅವರುಗಳು ಕೆಲಸವನ್ನು ಆಗಾಗ್ಗೆ ಬದಲಿಸುವ ಸಾಧ್ಯತೆ ಕಮ್ಮಿಯಿರುತ್ತದೆ. ಕೋವಿಡ್ನ೦ತರದ ದಿನಗಳಲ್ಲಿ ಐ.ಟಿ. ಕ್ಷೇತ್ರ ತನ್ನ ಕಾರ್ಯಕ್ಷೇತ್ರವನ್ನು ಸಣ್ಣ ಪಟ್ಟಣಗಳೆಡೆಗೆ, ಇನ್ನೂ ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರಿಸಿದರೂ ಆಶ್ಚರ್ಯವಿಲ್ಲ. ಆರ್ಥಿಕ ತಜ್ಞರುಗಳ ಪ್ರಕಾರ, ವಿವಿಧ ಉದ್ಯಮಗಳ ಕಾರ್ಯಕ್ಷೇತ್ರ ಸಣ್ಣ ಪಟ್ಟಣಗಳೆಡೆಗೆ ಸ್ಥಳಾಂತರಗೊಳ್ಳುವುದರಿಂದ, ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತದೆ. ಮತ್ತು ದೇಶದಲ್ಲಿ ಸಂಪತ್ತಿನ ಹಂಚಿಕೆ (wealth distribution)ಯಲ್ಲಿನ ಅಸಮತೋಲನ ಸಾಕಷ್ಟು ಸುಧಾರಿತವಾಗುತ್ತದೆ' ಎಂದಳು. 

ಪ್ರತಾಪ್ ಮಾತನಾಡುತ್ತಾ, 'ಹಲವಾರು ಉದ್ಯಮಗಳ ಕಾರ್ಯಕ್ಷೇತ್ರದ ವಿಸ್ತರಣೆ ಸಣ್ಣ ಪಟ್ಟಣಗಳ ಕಡೆಗೆ ಆಗುತ್ತಿರುವುದು ಒಂದು ಉತ್ತಮ ಬೆಳವಣಿಗೆ.  ಅದು ಭಾರೀ ನಗರಗಳ ಕಡೆಗೆ ಸತತವಾಗಿ ನಡೆಯುತ್ತಿರುವ "ವಲಸೆ"ಯನ್ನು ಸಾಕಷ್ಟು ತಪ್ಪಿಸುತ್ತಿದೆ. ಸಣ್ಣ ಪಟ್ಟಣಗಳಲ್ಲಿನ ಬಾಡಿಗೆಗಳು ಕಮ್ಮಿಯಿದ್ದು, ಅದು  ಉದ್ಯಮಗಳು ತಮ್ಮ ವೆಚ್ಚವನ್ನು ತಗ್ಗಿಸುವಲ್ಲಿ  ಸಹಾಯಕವಾಗಿದೆ.' 

'ಮನೆಯಿಂದಲೇ ಕೆಲಸವೇನೋ ಸರಿ. ಆದರೆ "ಮನೆಯ ಕೆಲಸ"ವನ್ನ್ಯಾರು ನಿರ್ವಹಿಸಿಯುತ್ತಾರೆ?' ರೋಹಿಣಿಯ ಪ್ರಶ್ನೆಯಲ್ಲಿ ವಿಶೇಷ ಕಾಳಜಿಯಿತ್ತು. 

ಈ ನಡುವೆ, ಸೂಕ್ಷ್ಮಾಳ ತಾಯಿಯಾದ 'ಪ್ರಭಾ'ರ ಮಧ್ಯೆ ಪ್ರವೇಶ ಸ್ವಲ್ಪ ಅಚ್ಚರಿ ಮೂಡಿಸಿತ್ತು. ಪ್ರಭಾರವರು  ಸುಮಾರು ೭೦ ವಯಸ್ಸಿನ ಹಿರಿಯ ಮಹಿಳೆಯಾಗಿದ್ದರು. ಲ್ಯಾಪ್ಟಾಪ್ ಪರದೆಯ ಮೇಲೆ ಪ್ರಭಾರವರನ್ನು ನೋಡಿದ ರೋಹಿಣಿ, 'ನಮಸ್ತೆ ಅಮ್ಮ. ತಾವೂ ಏನನ್ನೋ ಹೇಳಲು ಇಷ್ಟ ಪಡುತ್ತಿರುವಂತಿದೆ. ದಯವಿಟ್ಟು ಮಾತನಾಡಿ' ಎಂದಳು. 

'ರೋಹಿಣಿ ಮಗಳೇ, ನಿನ್ನ ಬಗ್ಗೆ ನಾನು ಸಾಕಷ್ಟು ಕೇಳಿದ್ದೇನೆ. ನನ್ನ ಮಗಳು ಮತ್ತು ನನ್ನಳಿಯ ಮನೆಯಿಂದಲೇ ಕೆಲಸ ಆರಂಭಿಸಿದಾಗಿನಿಂದ, ಮನೆಯಲ್ಲೊಂದು ಹೊಸ ಶಾಂತಿಯುಂಟಾಗಿದೆ. ಮಕ್ಕಳೂ ಸಂತೋಷವಾಗಿದ್ದಾರೆ. ದಿನದ ವೇಳೆ ಬಿಡುವಾಗಿರುವ ನನ್ನಳಿಯ, ನನಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾನೆ. ನನ್ನ ಅಡುಗೆಗಳೆಂದರೆ ನನ್ನ ಮಗಳಿಗೆ ಇಷ್ಟ. ಆದರೆ ಈ ಪ್ರತಾಪ್ ಸುಮ್ಮನಿರುವ ಮನುಷ್ಯನಲ್ಲ. ಹೊಸ ಹೊಸ ಅಡುಗೆಗಳ ಪ್ರಯೋಗ ಮಾಡುವುದೆಂದರೆ ಅವನಿಗಿಷ್ಟ. ಆ ರೀತಿಯ ಹೊಸ ಪ್ರಯೋಗಗಳಿಂದ ಸೂಕ್ಷ್ಮಾ ಮತ್ತು ಪ್ರತಾಪರ ನಡುವೆ ಆಗಾಗ್ಗೆ ಪುಟ್ಟ ಜಗಳಗಳೇ ಭುಗಿಲೇಳುತ್ತವೆ! ಆದರೆ ಅವುಗಳನ್ನೆಲ್ಲ ಜಗಳ ಎನ್ನುವದಕ್ಕಿಂತಾ, ಅವರಿಬ್ಬರ ಒಡನಾಟದ ಮುಂದುವರೆದ ಭಾಗವೆನ್ನಬಹುದು. ಆ ಪುಟ್ಟ ಜಗಳಗಳನ್ನು ನೋಡುವುದೆಂದರೆ, ನನಗೆ ಮತ್ತು ನನ್ನ ಮೊಮ್ಮಕ್ಕಳಿಗೆ ಖುಷಿ. "ಮನೆಯಿಂದಲೇ ಕೆಲಸ"ವೆಂಬ ಹೊಸ ಪದ್ಧತಿ ಸ್ವಾಗತಾರ್ಹವಾದುದೇ. ಆದರೆ ಅದರ ಯಶಸ್ಸಿಗೆ ಮನೆಯ ಎಲ್ಲಾ ಸದಸ್ಯರುಗಳು ಕೊಂಚ "ತ್ಯಾಗ"ವನ್ನು ಮಾಡಬೇಕಾಗುತ್ತದೆ. ಹಾಗಾಗಿ  "ಮನೆಯಿಂದಲೇ  ಕೆಲಸ"ವೆಂಬ ಹೊಸ ಪದ್ಧತಿಯ ಯಶಸ್ಸಿನ ಗೌರವ, ಮನೆಯ ಸದಸ್ಯರೆಲ್ಲರಿಗೂ  ಕೂಡ ದೊರೆಯಬೇಕು. ಈ ಪದ್ಧತಿಯೇ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಹೋದರೆ, ನನ್ನ ಅಭ್ಯಂತರಗಳೇನೂ ಇಲ್ಲ' ಎಂದು ಸಮಾಧಾನ ವ್ಯಕ್ತ ಪಡಿಸಿದವರು ಪ್ರಭಾ. 

ಪ್ರತಾಪ ಮಧ್ಯೆ ಪ್ರವೇಶಿಸಿ, 'ನಮ್ಮತ್ತೆಯವರ ಮಾತುಗಳು ಬಹುಪಾಲಿಗೆ ಸರಿ.  ಆದರೆ ಮನೆಯಿಂದಲೇ ಕೆಲಸವೆಂಬ ಪದ್ಧತಿಯಿಂದ ನಮ್ಮಂತಹ ಯುವಕರುಗಳು ಮನೆಯಲ್ಲೇ ಕೂರುವಂತಾಗಿ, ಒಂದು ರೀತಿಯ "ಜಡ್ಡು ಹಿಡಿದ ಭಾವ" ನಮ್ಮನ್ನು ಕಾಡುತ್ತಿದೆ.  ಮನೆಯ ಹೊರಗಿನ ಸ್ನೇಹಿತರುಗಳೊಂದಿಗೆ ನಮ್ಮ ನೇರ ಒಡನಾಟ ತಪ್ಪಿಹೋಗಿ ಬೇಸರವೆನಿಸುತ್ತಿದೆ. ಇದರಿಂದ ಹೊಸ ನೌಕರರು  "ವೃತ್ತಿಪರರಾಗಿ ಸರ್ವತೋಮುಖ" ಅಭಿವೃದ್ಧಿಹೊಂದುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ನನಗನಿಸುತ್ತದೆ. ಮೇಲಿನ ಅಧಿಕಾರಿಗಳಿಂದ ನಮ್ಮಗಳ ಮೇಲಿರುವ ಒತ್ತಡ ಕಮ್ಮಿಯೇನಲ್ಲ. "ಕೆಲಸದ ಕರೆ"ಗಳು ಯಾವಾಗೆಂದರವಾಗ ಬರಬಹುದು. ಕೆಲವೊಮ್ಮೆ ನಮ್ಮ ಸ್ವಾತಂತ್ರ್ಯ ಹಾಗೂ ನೆಮ್ಮದಿಗಳನ್ನೇ ಕಳೆದುಕೊಂಡಿದ್ದೇವೋ ಎನಿಸುತ್ತದೆ. ಮನೆಗಳ ಶಾಂತಿ ಕದಡಿ ಹೋಗಿರುವುದು ಸುಳ್ಳಲ್ಲ.  ನಮ್ಮಗಳಿಗಂತೂ ಇಂತಹ ಬದಲಾದ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವ ಅನಿವಾರ್ಯತೆ ಉಂಟಾಗಿ ಹೋಗಿದೆ ಎಂದೆನಿಸುತ್ತದೆ' ಎಂದನು. 

'ನಿಮ್ಮಗಳ ಕಷ್ಟ ನನಗರ್ಥವಾಗುತ್ತದೆ. ಆದರೂ ತಂತ್ರಜ್ಞಾನ ತಂದೊಡ್ಡುವ ಬದಲಾವಣೆಗಳನ್ನು ನಾವುಗಳು ತಡೆಯಲಾರೆವು ಎಂಬ ಮಾತುಗಳನ್ನು ಕೇಳಿದ್ದೇನೆ. ಮುಂದಿನ ದಿನಗಳಲ್ಲಿ ಉದ್ಯಮಗಳ ಕಾರ್ಯವೈಖರಿ ಹೇಗಿರುತ್ತದೆ?' ಎಂದ ರೋಹಿಣಿಯ ಪ್ರಶ್ನೆ, ಪ್ರತಾಪ್ ಮತ್ತು ರೋಹಿಣಿ, ಇಬ್ಬರನ್ನು ಕೆದಕಿತ್ತು. 

ಪ್ರತಾಪ್ ಉತ್ತರಿಸುತ್ತಾ, 'ಮನೆಯಿಂದಲೇ ಕೆಲಸ, ಆಗೀಗೊಮ್ಮೆ ಆಫೀಸಿನ ನೇರ ಭೇಟಿಗಳು ಮತ್ತು ಹೊರಗುತ್ತಿಗೆಗಳು (outsourcing) ಮುಂತಾದ ಹೊಸ ತಂತ್ರಗಳ ಸಮ್ಮಿಶ್ರಣವೇ ಮುಂದಿನ ದಿನಗಳ ವ್ಯವಸ್ಥೆಯ  ಅವಿಭಾಜ್ಯ ಅಂಗಗಳಾಗಿ ಹೋಗುತ್ತವೆ ಎಂದು ನನಗನಿಸುತ್ತದೆ. ಹೊರ ದೇಶಗಳಲ್ಲಿ ನೆಲಸಿರುವ, ನಮ್ಮ ಹಲವಾರು ಅನಿವಾಸಿ ಭಾರತೀಯ (Non-resident Indians - NRIs)ರುಗಳನ್ನೀಗ, ಅಲ್ಲಿನ ಅನಿಶ್ಚತತೆಗಳು ಕಾಡಿವೆ.  ಹಾಗಾಗಿ ಅವರುಗಳೀಗ ಭಾರತದ ಕಡೆ ಮುಖ ಮಾಡುವಂತಾಗಿದೆ. ಅನಿವಾಸಿ ಭಾರತೀಯರುಗಳಲ್ಲಿ ಹಲವರು ತಮ್ಮ ವಿದೇಶದ ಕೆಲಸಗಳನ್ನು ಕಳೆದುಕೊಂಡಿದ್ದಾರೆ. "ಅಮೇರಿಕಾ -ಅಮೇರಿಕಾ" ಎಂದು ತುಡಿಯುತ್ತಿದ್ದ ನಮ್ಮವರುಗಳಿಗೆ ಈಗ, ಸ್ವದೇಶದ ನೆಮ್ಮದಿಯ  ಸತ್ಯದರ್ಶನವಾಗುತ್ತಿದೆ ಎಂದು ನನಿಗನಿಸುತ್ತಿದೆ. ನೌಕರರು, ವಲಸಿಗರು, ಅನಿವಾಸಿ ಭಾರತೀಯರು, ಉದ್ಯಮಿಗಳು, ಬಹುರಾಷ್ಟ್ರೀಯ ಕಂಪನಿಗಳು  ಮುಂತಾದ ಎಲ್ಲಾ ಪಾಲುದಾರರಿಗೂ (stakeholders) ಕೋವಿಡನಂತರದ ಬೆಳವಣಿಗೆಗಳು "ಗೆಲ್ಲು ಮತ್ತು ಗೆಲ್ಲಿಸು (win-win)" ಎಂಬ ಸ್ವಾಗತಾರ್ಹ ಸನ್ನಿವೇಶವನ್ನು ಕಲ್ಪಿಸಿಕೊಡುತ್ತಿದೆ ಎಂಬುದು ನನ್ನ ಊಹೆ' ಎಂದನು.   

ಸಾಕಷ್ಟು ಅನುಭವಗಳನ್ನು ಹಂಚಿಕೊಂಡ ಪ್ರತಾಪ, ಪ್ರಭಾ ಮತ್ತು ಸೂಕ್ಷ್ಮಾರಿಗೆ  ವಂದಿಸಿ, ಕರೆಯನ್ನು ಕೊನೆಗೊಳಿಸಿದ ರೋಹಿಣಿ, 'ಪ್ರತಿಯೊಂದು ಬಿಕ್ಕಟ್ಟು (crisis) ಬದಲಾವಣೆಗಳನ್ನು ತರುತ್ತದೆ ಮತ್ತು ನಮಗೆ ಹೊಸ ಪಾಠಗಳನ್ನು ಕಲಿಸುತ್ತದೆ. ಕೋವಿಡ್ ಮಹಾಮಾರಿ ಇಡೀ ಪ್ರಪಂಚವನ್ನೇ ನಡುಗಿಸಿದೆ. ಮುಂದೇನು, ಕೋವಿಡ್ ಎಂದಿಗೆ ಪರಿಸಮಾಪ್ತಿಗೊಳ್ಳಬಹುದು ಎಂಬ ಆತಂಕ ಎಲ್ಲರನ್ನೂ ಈಗಲೂ ಕಾಡುತ್ತಿದೆ. ಕೋವಿಡನಂತಹ ವೈರಾಣುವಿನ ಹೊಸ ಹೊಸ ದಾಳಿಗಳು, ಮುಂದಿನ ದಿನಗಳಲ್ಲಿ ಮನುಕುಲವನ್ನು ಕಾಡುವುದು ಖಚಿತ. ಅಂತಹ ಸವಾಲುಗಳನ್ನು ನಿಭಾಯಿಸುತ್ತಾ ಮುನ್ನಡೆಯುವ ಹೊಸ ಜೀವನ ಕ್ರಮಗಳನ್ನು ನಾವುಗಳು ಅಳವಡಿಸಿಕೊಳ್ಳುವುದು ಅನಿವಾರ್ಯ' ಎಂದು ತನ್ನ ಸಂಶೋಧನಾ ಟಿಪ್ಪಣಿಗಳನ್ನು ಬರೆದುಕೊಂಡಳು. 

ಅಂತಿಮವಾದರೂ, ಅತಿ ಪ್ರಮುಖವಾದ ಮತ್ತೊಂದು ವಿಷಯವನ್ನು ರೋಹಿಣಿ ತನ್ನ 'ಕೋವಿಡ್ ಕಲಿ ಸಿದ ಪಾಠ'ಗಳು ಸರಣಿಯಲ್ಲಿ ಸೇರಿಸಲಿಚ್ಛಿಸಿದ್ದಳು. 'ಕೋವಿಡ್ ಮಹಾಮಾರಿಯ ಬಿಕ್ಕಟ್ಟು, ಸ್ವಾಭಾವಿಕವಾಗಿ ಆಗಿದ್ದೋ ಅಥವಾ ಯಾರೋ ದುಷ್ಕರ್ಮಿಗಳು ನೆಡೆಸಿದ ಜೈವಿಕಾಸ್ತ್ರದ ಪ್ರಯೋಗದ ಪರಿಣಾಮವೋ ತಿಳಿಯದು.  ವಿಶ್ವದ ಜನತೆಗೀಗ ಜೈವೀಕಾಸ್ತ್ರಗಳು ಉಂಟು ಮಾಡಬಹುದಾದ ಅನಾಹುತಗಳ ಅರಿವು ಉಂಟಾಗಿದೆ. ಜೈವೀಕಾಸ್ತ್ರಗಳ ವಿನಾಶಕಾರಿ ಶಕ್ತಿಯ ಮುಂದೆ ಅಣ್ವಸ್ತ್ರಗಳೇ ಮಕ್ಕಳಾಟಿಗೆಗಳಂತೆ ಕಾಣಿಸುತ್ತಿವೆ! ಮೊದಲ ಮಹಾಯುದ್ಧದ ಅಂತ್ಯದ ಸಮಯದಲ್ಲೇ, ವಿಶ್ವ ನಾಯಕರುಗಳು, ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಬಳಕೆಯನ್ನು ನಿಷೇಸಿದ್ದರು. ಈ ಮುಂಚೆ ಘೋಷಿಸಿದ್ದ ನಿಷೇಧಗಳ ಪುನರುಚ್ಛಾರದ ನಿರ್ಣಯಗಳನ್ನು ೧೯೭೨ ಮತ್ತು ೧೯೯೩ರಲ್ಲೂ ವಿಶ್ವದ ನಾಯಕರುಗಳು ಅನುಮೋದಿಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನಗಳು ಮುನ್ನಡೆಯುತ್ತಿರುವಂತೆ, ವಿಶ್ವದ ಬಲಶಾಲಿ ರಾಷ್ಟ್ರಗಳ ನಡುವಿನ ತಿಕ್ಕಾಟ ಹೆಚ್ಚಾಗುತ್ತಾ ಸಾಗುತ್ತಿದೆ. ಹಾಗಾಗಿ ಜೈವೀಕಾಸ್ತ್ರಗಳ ಬಳಕೆಯಂತಹ ನೀಚ ಕೃತ್ಯಗಳು ಮುಂಬರುವ ದಿನಗಳಲ್ಲಿ ನಡೆಯಲಾರವು ಎಂದು ಹೇಳಲಾಗುದು. ಈ ಸುಂದರ ವಿಶ್ವವನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಶ್ವದ ಮುಂಚೂಣಿಯಲ್ಲಿರುವ ನಮ್ಮ ನಾಯಕರುಗಳು ಈ ನಿಟ್ಟಿನಲ್ಲಿ ಯೋಚಿಸಬಲ್ಲರೇ? ಸಂಯಮವನ್ನು ಕಾಪಾಡಿಕೊಳ್ಳಬಲ್ಲರೇ? ಎಂಬುದೇ ಜನಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆ' ಎಂದು ದಾಖಲಿಸಿದ ರೋಹಿಣಿ, ಆತಂಕಿತಳಾಗಿದ್ದಳು. 

***


  











 

 

 




 






No comments:

Post a Comment