Saturday 1 May 2021

೧೨. ಪುನರುಜ್ಜೀವನ

೧೨

ಪುನರುಜ್ಜೀವನ 



 ಒಂದು ದಿನ ಡಾ. ಕಿರಣರ ಮೇಲಧಿಕಾರಿಗಳು ಅವರಿಗೆ ಆಜ್ಞಾಪಿಸಿದ್ದರು. 'ಮುಂದಿನ ಹತ್ತು ದಿನಗಳವರೆಗೆ ನೀವು ಆಸ್ಪತ್ರೆಯನ್ನು ಪ್ರವೇಶಿಸುವಂತಿಲ್ಲ.' 

'ಏಕೆ ಸಾರ್? ಕೋವಿಡೇತರ (non-covid) ರೋಗಿಗಳ ಸೇವೆಯ ಅವಧಿ, ನನಗೆ  ಇಂದು  ಮುಗಿಯುತ್ತದೆ. ನಾಳೆಯಿಂದ ಕೋವಿಡ್ ರೋಗಿಗಳ ಚಿಕಿತ್ಸೆಯ ವಾರ್ಡ್ಗೆ ಹೋಗಿ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ. ಆಸ್ಪತ್ರೆ ಪ್ರವೇಶಿಸದಂತಹ  ತಪ್ಪನ್ನು ನಾನೇನು ಮಾಡಿದ್ದೇನೆ?' ಎಂದ ಡಾ. ಕಿರಣ್ ವಿಚಲಿತರಾಗಿದ್ದರು. 

ಕಿರಣರ ಮೇಲಧಿಕಾರಿ ಮಾತನ್ನು ಮುಂದುವರೆಸುತ್ತಾ, 'ಹೌದು, ನೀವು ಮಹಾಪರಾಧವೊಂದನ್ನು ಮಾಡಿದ್ದೀರಿ. ಕೋವಿಡ್ ರೋಗಿಗಳ ಮತ್ತು ಕೋವಿಡೇತರ ರೋಗಿಗಳ ಚಿಕಿತ್ಸೆಯನ್ನು ಸತತವಾಗಿ ನೀವು ಮೂರು ತಿಂಗುಳುಗಳಿಂದ ಮಾಡುತ್ತಿದ್ದೀರಿ. ಆದುದರಿಂದ ತಮಗೀಗ ವಿಶ್ರಾಂತಿಯ ಅವಶ್ಯಕತೆ ಇದೆ. ೧೦ ದಿನಗಳ ಅವಧಿಯಲ್ಲಿ ವಿಶ್ರಾಂತಿ ಪಡೆದು ಹೊಸ ಚೈತನ್ಯವನ್ನು ಪಡೆದು ಮತ್ತೆ ಬನ್ನಿ' ಎಂದರು. 

ಸಂತಸಗೊಂಡ ಡಾ. ಕಿರಣರು, ದಿನದ ಅವಧಿ ಮುಗಿದನಂತರ, ತಮ್ಮ ಕರ್ತವ್ಯಗಳನ್ನು ಬೇರೊಬ್ಬ ವೈದ್ಯರಿಗೆ ವಹಿಸಿ, ನೇರವಾಗಿ ಹೊರಟು ಗೆಳತಿ ರೋಹಿಣಿಯ ಮನೆಯನ್ನು ಸೇರಿದ್ದರು. ಮನೆಯನ್ನು ಪ್ರವೇಶಿಸುತ್ತಲೇ ಕಿರಣ್, 'ರೋಹಿಣಿ ನನಗೀಗ ೧೦ ದಿನಗಳ ರಜೆ ಸಿಕ್ಕಿದೆ. ಚೆನ್ನಾಗೆ ರಿಲ್ಯಾಕ್ಸ್ ಆಗೋಣ, ಪಿಕ್ನಿಕ್ಕೊಂದಕ್ಕೆ ಹೋಗೋಣ' ಎಂದನು. 

'ಪಿಕ್ನಿಕ್ ಬೇಡ, ಸಣ್ಣ ಪ್ರವಾಸವೊಂದನ್ನೇ ಕೈಗೊಳ್ಳೋಣ. ಆದರೆ ಪ್ರವಾಸದ ತಾಣದ ಆಯ್ಕೆ ನನ್ನದು, ನಾನಾಗಲೇ ಎಲ್ಲಾ ಏರ್ಪಾಡುಗಳನ್ನು ಮಾಡಿದ್ದಾಗಿದೆ.' ರೋಹಿಣಿ ಹೇಳಿದಾಗ ಕಿರಣ್ ರೋಮಾಂಚಿತನಾಗಿದ್ದನು. ಪುಟ್ಟ ಪ್ರವಾಸಕ್ಕೆ ತಂದೆ ರಾಜು ಕೂಡ ತಯಾರಾಗಿದ್ದರು. 

ಜಾಣೆಯಾದ ರೋಹಿಣಿ 'ರಜಾ, ಮಜಾ ಮತ್ತು ಕಲಿಕೆ' ಎಂಬ ಮೂರೂ ಅಂಶಗಳನ್ನು ಬೆಸೆದು, ತನ್ನ ಸಂಶೋಧನಾ ಕಾರ್ಯಕ್ಕೂ ಸಹಾಯಕವಾಗುವಂತಹ ಸಣ್ಣ ಪ್ರವಾಸದ ಏರ್ಪಾಡನ್ನು ಮಾಡಿದ್ದಳು. ಆ ಪ್ರವಾಸದ ತಾಣವನ್ನು ಸೇರಲು ಅವರುಗಳು ತಮ್ಮ 'ಟಾಟಾ ಸುಮೊ'ವಿನಲ್ಲಿ ಸುಮಾರು ೯೦೦ ಕಿ.ಮೀ.ನಷ್ಟು ದೂರ ಪ್ರಯಾಣಿಸಬೇಕಾಯಿತು. ಪಶ್ಚಿಮ ಘಟ್ಟಗಳ ಅತ್ಯಂತ ಒಳಗಿನ ನದಿಯೊಂದರ ತೀರದಲ್ಲಿ ಆ ತಾಣವಿತ್ತು. ಸರಕಾರ ಅಭಿವೃದ್ಧಿ ಪಡಿಸಿದ್ದ ಸುಮಾರು ೩೦ ಚ.ಕಿ.ಮೀ.ನಷ್ಟು ವಿಸ್ತೀರ್ಣದ ಅಭಯಾರಣ್ಯವೊಂದನ್ನು ಅವರುಗಳು ಸೇರಿದ್ದಾಗಿತ್ತು. ಆ ಅಭಯಾರಣ್ಯದಲ್ಲಿ ಪ್ರವಾಸಿ ಮಂದಿರವೊಂದೂ ಇತ್ತು. ನಾವೀ ಸರಕಾರೀ ಅಭಯರಾಣ್ಯಕ್ಕೆ ಹೋಗುತ್ತಿಲ್ಲಾ ಎಂದು ರೋಹಿಣಿ ಹೇಳಿದಾಗ, ಕಿರಣ್ ಮತ್ತು ರಾಜುರವರಿಬ್ಬರಿಗೂ ಆಶ್ಚರ್ಯವಾಗಿತ್ತು. ಅದೇ ಸರಕಾರಿ ಅಭಯಾರಣ್ಯಕ್ಕೆ ಹೊಂದಿಕೊಂಡಂತ್ತಿದ್ದ, ಸುಮಾರು ೪೦೦ ಎಕರೆ ವಿಸ್ತೀರ್ಣದ ಖಾಸಗೀ ಅರಣ್ಯವೊಂದನ್ನು ರೋಹಿಣಿ ಆರಿಸಿಕೊಂಡಿದ್ದಳು. 'ಈ ಖಾಸಗೀ ಅರಣ್ಯ ಯಾರಿಗೆ ಸೇರಿದ್ದು?' ಎಂದು ಕೇಳಿದ್ದನು ಕಿರಣ್. 'ಮೊದಲು ಒಳಗೆ ಹೋಗೋಣ. ನಂತರ ಎಲ್ಲಾ ವಿಷಯಗಳೂ ತಾನಾಗೇ ತಿಳಿಯುತ್ತವೆ' ಎಂದಳು ರೋಹಿಣಿ. 

ಸುಮಾರು ೬೭ರ ಪ್ರಾಯದ 'ಡ್ರೇಕ್ ಮತ್ತು ೬೮ರ ಪ್ರಾಯದ ಹರಿಣಿ,' ೪೦ ವರ್ಷಗಳ ಹಿಂದೆ ಅಮೇರಿಕಾದಲ್ಲಿ ಪ್ರಥಮ ಬಾರಿಗೆ ಭೇಟಿಯಾಗಿದ್ದರು. ಡ್ರೇಕ್ ಎಂದರೆ 'ಗಂಡು ಬಾತುಕೋಳಿ' ಎಂದು ಗೊತ್ತಾದ ಮೇಲೆ ರೋಹಿಣಿಗೆ, ಡ್ರೇಕನ ಮೇಲೆ ಕುತೂಹಲ ಉಂಟಾಗಿತ್ತು. 'ನೀನೊಬ್ಬ ಗಂಡು ಕೋಳಿ, ಮತ್ತು ನಾನೊಬ್ಬ ಹೆಣ್ಣು ಜಿಂಕೆ (ಹರಿಣಿ ಎಂದರೆ ಜಿಂಕೆ ಎಂದರ್ಥ). ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಬಾರದೇಕೆ?' ಎಂದು ಮೊದಲು  ಸ್ನೇಹಹಸ್ತ ಚಾಚಿದ್ದವಳು ಹರಿಣಿಯೇ. ಹರಿಣಿಯ ಸ್ನೇಹದ ಪ್ರಸ್ತಾಪ ಡ್ರೇಕನಿಗಿಷ್ಟವಾಗಿತ್ತು. ಅವರುಗಳ ಸ್ನೇಹ ಪ್ರೀತಿಗೆ ತಿರುಗಿದ ಕೆಲವೇ ತಿಂಗಳುಗಳಲ್ಲಿ ಅವರಿಬ್ಬರೂ ಮದುವೆ ಕೂಡ ಆಗಿದ್ದರು. ಸುಮಾರು ೩೦ ವರ್ಷಗಳ ಹಿಂದೆ, ಮಕ್ಕಳಿಲ್ಲದ ಡ್ರೇಕ್ ಮತ್ತು ರೋಹಿಣಿಯರು ವಿಚಿತ್ರ ಆಸೆಯೊಂದನ್ನು ಹೊತ್ತು,  ಭಾರತಕ್ಕೆ ಬಂದು ನೆಲಸಿದ್ದರು. ತಮ್ಮದೇ ಆದ ಕಾಡೊಂದನ್ನು ಹೊಂದುವ ಆಸೆ ಅವರುಗಳದಾಗಿತ್ತು. 'ನಿಮ್ಮದೇ ಆದ ಕಾಡು? ತುಂಬಾ ವಿಚಿತ್ರವಾದ ಮತ್ತು ಕುತೂಹಲಕಾರಿ ಸಾಹಸ ತಮ್ಮಗಳದ್ದು. ನಿಮಗೆ ಈ ರೀತಿಯ ಆಸೆ ಉಂಟಾಗಿದ್ದು ಹೇಗೆ?' ಎಂದು ಕೇಳಿದ್ದವನು ಕಿರಣ್.

'ಪ್ರಕೃತಿ ಮಾತೆಗೆ ಏನನ್ನಾದರೂ ಹಿಂತಿರುಗಿಸುವಾಸೆ ನಮಗಾಗಿತ್ತು. "ಸುಂದರವಾದ ಮರದ ನೆರಳಿನಲ್ಲಿ ಇಂದು ಯಾರಾದರೂ ಆರಾಮವಾಗಿ ಕುಳಿತಿದ್ದರೆ, ಬಹಳ ಹಿಂದೆ ಯಾರೋ ಆ ಮರವನ್ನು ನೆಟ್ಟಿದ್ದೇ ಕಾರಣ." ನಿರ್ಭೀತಿಯಿಂದ ಬದುಕುವ ತಾಣವೊಂದನ್ನು ಕಾಡು ಪ್ರಾಣಿಗಳಿಗಾಗಿ ನಾವು ಅಭಿವೃದ್ಧಿಪಡಿಸಲಿಚ್ಛಿಸಿದ್ದೆವು' ಎಂದವರು ಡ್ರೇಕ್. 

'ಆದರೆ ನಮ್ಮ ಯೋಜನೆ ಅಷ್ಟು ಸುಲಭವಾದುದಾಗಿತ್ತಿಲ್ಲ. ಸೂಕ್ತ ತಾಣಕ್ಕಾಗಿ ನಾವು ಭಾರತದ ಹಲವು ರಾಜ್ಯಗಳನ್ನರಸಿದೆವು. ೪೦೦ ಎಕರೆಗಳಷ್ಟರ ವಿಸ್ತಾರವಾದ ಜಾಗ, ಅಂತೂ ಇಲ್ಲಿ ನಮಗೆ ದೊರೆತಿತು. ಇಷ್ಟೂ ಜಾಗ ನಮಗೆ ಒಮ್ಮಲೇ ದೊರೆಯಲಿಲ್ಲ. ಸಣ್ಣ ಸಣ್ಣ ಜಮೀನುಗಳನ್ನು ಖರೀದಿಸಿ ಸೇರಿಸುತ್ತಾ ಹೋದ ನಮಗೆ ೪೦೦ ಎಕರೆಗಳನ್ನು ಪಡೆಯಲು ಸುಮಾರು ೧೦ ವರ್ಷಗಳ ಸಮಯ ಬೇಕಾಯಿತು. ಲಾಭ ಗಳಿಸುವ ಯೋಜನೆ ನಮ್ಮದಲ್ಲ. ಹಾಗೆ ನೋಡಿದರೆ ನಮ್ಮ ೪೦೦ ಎಕರೆಗಳ ಖಾಸಗೀ ಕಾಡು ಸಮೀಪದ ಸರಕಾರೀ ಅಭಯಾರಣ್ಯದ ವಿಸ್ತೀರ್ಣವನ್ನು ಹೆಚ್ಚಿಸಿದೆ; ಆದರೂ ಇದು ನಮಗೆ ಸೇರಿದ್ದೆಂಬ ಹೆಮ್ಮೆ ನಮ್ಮದು! ನಮ್ಮ ಕಾಡನ್ನು ಕಾಡು ಪ್ರಾಣಿಗಳ ವಾಸಕ್ಕೆಂದು ಬಿಟ್ಟು ಬಿಟ್ಟಿದ್ದೇವೆ. ನಮ್ಮ ಕಾಡಿನ ಒಂದು ಎಲೆಯನ್ನೂ ಯಾರೂ ಕೀಳುವಂತಿಲ್ಲ. ಇಲ್ಲಿರುವ ಕಾಡು ಪ್ರಾಣಿಗಳಿಗೆ ಯಾರೂ ತೊಂದರೆ ಕೊಡುವಂತಿಲ್ಲ. ಕಳೆದ ಒಂದು ದಶಕದಲ್ಲಿ, ಆರು ಹುಲಿಮರಿಗಳು ಇಲ್ಲಿ ಜನಿಸಿವೆ. ತಮ್ಮ ಮರಿಗಳಿಗೆ ಜನ್ಮನೀಡಿ, ಬೆಳಸಿಕೊಂಡು ಹೋಗಲು, ಕ್ಷೇಮವಾದ ತಾಣವನ್ನು ಹುಡುಕಿಕೊಂಡು ಕಾಡೆಮ್ಮೆಗಳು ನಮ್ಮಲಿಗೆ ಬರುತ್ತವೆ. ಕರಡಿ, ಕಡವೆ, ಜಿಂಕೆ ಮುಂತಾದ ಪ್ರಾಣಿಗಳ ನೆಚ್ಚಿನ ತಾಣ ನಮ್ಮ ಕಾಡಾಗಿದೆ.' ಎಂದು ವಿವರಣೆ ನೀಡಿದವರು ಹರಿಣಿ. 

ಮರು ದಿನದ  ನಸುಕಿನ ಸಮಯಕ್ಕೆ ಜೀಪೊಂದರಲ್ಲಿ, ಕಿರಣ್, ರೋಹಿಣಿ ಮತ್ತು ರಾಜುರವರು,  ಡ್ರೇಕ್ ಮತ್ತು ಹರಿಣಿಯವರೊಂದಿಗೆ ಪುಟ್ಟ ಕಾಡಿನ ಸುತ್ತಾ ಹೊರಟಾಗ ಅದೊಂದು ವಿಭಿನ್ನ ಅನುಭವವಾಗಿತ್ತು. ಮಾನವನ ಭಯವಿಲ್ಲದೆ ನಿರ್ಭೀತಿಯಿಂದ ಓಡಾಡುತ್ತಿದ್ದ ಕಾಡು ಪ್ರಾಣಿಗಳ ದೃಶ್ಯ ಸಂತಸದಾಯಕವಾಗಿತ್ತು. ಕಾಡು ಪ್ರಾಣಿಗಳ ಚಲನ-ವಲನಗಳ ದೃಶ್ಯಗಳನ್ನು ಸೆರೆ ಹಿಡಿಯಲೆಂದು, ಡ್ರೇಕರ ಪುಟ್ಟ ಅರಣ್ಯದ ಅಲ್ಲಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಚಿಲಿಪಿಲಿಗುಟ್ಟುವ ಅಪಾರ ಸಂಖ್ಯೆಯ ಹಕ್ಕಿ-ಪಕ್ಷಿಗಳು ಕಾಡಿನುದ್ದಕ್ಕೂ ಹಾರಾಡುತ್ತಿದ್ದುದು  ರಮಣೀಯ ದೃಶ್ಯವಾಗಿತ್ತು. ಅಪರೂಪದ ಪ್ರಾಣಿಯೆಂದೆನಿಸಿದ ಪೆಂಗೋಲಿನ್ಗಳು, ಆ ಕಾಡಿನಲ್ಲಿ ಸಾಕಷ್ಟಿದ್ದಂತೆ ಕಂಡುಬಂದಿತ್ತು. 

'ಕಾಡುಗಳ ಮರುಸೃಷ್ಟಿ ಸರಕಾರವೊಂದರ ಕಾರ್ಯವಲ್ಲ. ನಮ್ಮ-ನಿಮ್ಮಂತಹ  ಖಾಸಗಿ ವ್ಯಕ್ತಿಗಳು ಮತ್ತು ಭಾರಿ ಕಂಪನಿಗಳೂ ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು. ಮಾನವ ತನ್ನ ಸ್ವಾರ್ಥಕ್ಕಾಗಿ ಕಾಡುಗಳನ್ನು ನಾಶಪಡಿಸುತ್ತ ಹೋದರೆ, ಕೋವಿಡ್-೧೯ರಂತಹ ಮಹಾಮಾರಿಗಳು ಮತ್ತೆ ಮತ್ತೆ ಮನುಕುಲವನ್ನು ಕಾಡುವುದು ಖಂಡಿತ!' ಎಂದು ಡ್ರೇಕ್ರವರು ಹೇಳಿದ್ದು, ಡಾ. ಕಿರಣರಿಗೂ ಆಶ್ಚರ್ಯವನ್ನುಂಟುಮಾಡಿತ್ತು. ವಿದ್ಯಾರ್ಹತೆ ಮತ್ತು ಅನುಭವಗಳಿಂದ ಡ್ರೇಕ್ ಒಬ್ಬ ನುರಿತ 'ವೈರಾಣು ತಜ್ಞ'ರಾಗಿದ್ದರು. 'ಕೋವಿಡ್-೧೯ರ ಮಹಾಮಾರಿಯ ದಾಳಿ ನನಗೆ ಆಶ್ಚರ್ಯವನ್ನೇನು ಉಂಟುಮಾಡಿಲ್ಲ. ಈ ರೀತಿಯ ಮಹಾಮಾರಿಯ ದಾಳಿ  ಮನುಕುಲವನ್ನು ಅಪ್ಪಳಿಸಬಹುದೆಂಬ ಎಚ್ಚರಿಕೆಯನ್ನು ತಜ್ಞರು ಕೆಲವು ದಶಕಗಳಿಂದ ನೀಡುತ್ತಲೇ ಬಂದಿದ್ದಾರೆ. ಈವರೆಗಿನ ಸಂಶೋಧನೆಗಳ ಪ್ರಕಾರ ಕೋವಿಡ್-೧೯ರ ವೈರಾಣು ಒಂದು ಜಾತಿಯ ಬಾವಲಿಗಳಲ್ಲಿ ಸುಮಾರು ಒಂದು ಸಾವಿರ ವರ್ಷಗಳಿಂದ ಇದೆ. ಈ ಬಾವಲಿಗಳಿಂದ, ವೈರಾಣು ಪೆಂಗೋಲಿನ್ಗಳಿಗೆ ಹರಡಿದೆ. ಚೀನಾದ ವುಹಾನಿನ ಮಾಂಸದ ಹಸಿ ಮಾರುಕಟ್ಟೆಯಲ್ಲಿ, ತಿನ್ನುವ ಉದ್ದೇಶಕ್ಕಾಗಿ, ಪೆಂಗೋಲಿನ್ಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತದೆ. ಅಂತಹ ಪೆಂಗೋಲಿನ್ಗಳಿಂದ ಕೋವಿಡ್-೧೯ರ ವೈರಾಣು ಮಾನವನಿಗೆ ತಗುಲಿರಬಹುದೆಂಬುದು ತಜ್ಞರ ಅಭಿಪ್ರಾಯವಾಗಿದೆ. ಕೋವಿಡ್-೧೯ರಂತಹ ರೋಗ ಹರಡುವ ವೈರಾಣುಗಳನ್ನು 'ಪೆಥೊಜೆನ್ಗಳು' ಎಂದು ಕರೆಯುತ್ತಾರೆ. ಪೆಥೊಜೆನ್ಗಳ ಬಗ್ಗೆ ಮಾನವನಿಗೆ ತಿಳಿದಿರುವುದು ಅತ್ಯಲ್ಪ. ಕಾಡು ಪ್ರಾಣಿಗಳ ಸ್ವಾಭಾವಿಕ ವಾಸಸ್ಥಾನಗಳಾದ ಕಾಡುಗಳ ವಿನಾಶದಿಂದ, ಕೋವಿಡ್ನಂತಹ ರೋಗಗಳು ಪ್ರಾಣಿಗಳಿಂದ ಮನುಕುಲಕ್ಕೆ ಹರಡುತ್ತಿದೆ. ಮಿಲಿಯಾಂತರ ಜಾತಿಯ ವೈರಾಣುಗಳು ಕಾಡು ಪ್ರಾಣಿಗಳಲ್ಲಿ ಜೀವಂತವಾಗಿವೆ. ಕಾಡುಗಳು ಅಂತಹ ಪ್ರಾಣಿಗಳು ಮತ್ತು ಮಾನವರ ನಡುವಿನ ತಡೆಗೋಡೆಗಳಾಗಿವೆ. ಕಾಡುಗಳ ವಿನಾಶದಿಂದ ಅಂತಹ ತಡೆಗೋಡೆಗಳು ಕುಸಿದುಬಿದ್ದಂತಾಗಿ, ಪೆಥೊಜೆನ್ಗಳನ್ನು ಹೊತ್ತ ಪ್ರಾಣಿಗಳು ಮಾನವನ ಆವಾಸ ಸ್ಥಾನಗಳತ್ತ ದಾಳಿಯಿಡುತ್ತವೆ. ಅದರಿಂದ ಹೊಸ ಹೊಸ ರೀತಿಯ ರೋಗಗಳಿಗೆ ಮಾನವ ತುತ್ತಾಗುತ್ತಾನೆ. ಆದುದರಿಂದ ಜೈವಿಕ ವೈವಿಧ್ಯ (bio-diversity)ದ ವಿನಾಶದ ಕಾರ್ಯಗಳು ಮೊದಲು ನಿಲ್ಲಬೇಕು' ಎಂದು ವಿಷಾದಿಸಿದವರು ವೈರಾಣು ತಜ್ಞರಾದ ಡ್ರೇಕರವರು. 

ರಾಜುರವರು ಪ್ರತಿಕ್ರಿಯಿಸುತ್ತಾ, 'ಜೀವಂತ ಪ್ರಾಣಿಗಳನ್ನು ಮತ್ತು ತಾಜಾ ಮಾಂಸದ ಮಾರಾಟವನ್ನು ಮಾಡುತ್ತಿದ್ದ ಉಹಾನ್ ನಗರದ ಹಸಿ ಮಾರುಕಟ್ಟೆಗಳೇ,  ಕೋವಿಡ್-೧೯ ಮಹಾಮಾರಿಯ ಉಗಮ ಸ್ಥಾನಗಳು ಎಂಬುದನ್ನು ಚೀನಾ ಸರಕಾರವೂ ಈಗ ಒಪ್ಪುತ್ತಿದೆ. ತೋಳಗಳು, ನಾಯಿಗಳು, ಓತಿಕ್ಯಾತಗಳು, ಮೊಸಳೆಗಳು, ಚೇಳುಗಳು, ಅಳಿಲುಗಳು, ನರಿಗಳು, ಪುನುಗು ಬೆಕ್ಕುಗಳು,                    ಪ್ಯಾಂಗೊಲಿನ್ಗಳು, ಆಮೆಗಳು ಮುಂತಾದ ಜೀವಂತ ಪ್ರಾಣಿಗಳು ಮತ್ತು ಅವುಗಳ ಮಾಂಸವನ್ನು ಉಹಾನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಅಂತಹ ಪ್ರಾಣಿಗಳ ಮಾಂಸವನ್ನು ಯಾವ ಮುನ್ನೆಚ್ಚರಿಕೆಯೂ ಇಲ್ಲದಂತೆ ತಿನ್ನವುದೆಂದರೆ, ವಿವಿಧ ವೈರಾಣುಗಳನ್ನು ನಾವು ಮೈಮೇಲೆ ಎಳೆದುಕೊಂಡಂತೆಯೇ ಸರಿ. ಇಂತಹ ಹಸಿ ಮಾರುಕಟ್ಟೆಗಳಲ್ಲಿ ಚರಂಡಿ ಮತ್ತು ಹಸಿ ತ್ಯಾಜ್ಯಗಳನ್ನು ಹೊರ ಸಾಗಿಸುವ ವ್ಯವಸ್ಥೆಗಳು ಸಮರ್ಪಕವಾಗಿರುವುದಿಲ್ಲ. ಚೀನಾ ದೇಶಕ್ಕೀಗ ಸಲ್ಪ ಬುದ್ಧಿ ಬಂದಂತೆ ಕಾಣುತ್ತಿದೆ. ವುಹಾನ್ ಹಸಿ ಮಾರುಕಟ್ಟೆಯನ್ನು ಅವರೀಗ ಮುಚ್ಚಿರುವುದಾಗಿ ಕೇಳ್ಪಟ್ಟಿದ್ದೇನೆ. ಕಾಡು ಪ್ರಾಣಿಗಳನ್ನು ಮಾರಾಟ ಮಾಡುವುದನ್ನು ಮತ್ತು ತಿನ್ನುವುದನ್ನು ಚೀನಾ ನಿಷೇಧಿಸಿರುವುದಾಗಿಯೂ  ಸುದ್ದಿಗಳು ಬಂದಿವೆ,' ಎಂದರು. 

ಆದರೆ ಡ್ರೇಕರು ಎಚ್ಚರಿಸುತ್ತಾ, 'ಈ ಹಸಿ ಮಾರುಕಟ್ಟೆಗಳು ಬಡವರ ಪೌಷ್ಠಿಕ ಆಹಾರದ ಮೂಲಗಳು. ಸಂಪೂರ್ಣವಾಗಿ ಅವುಗಳನ್ನು ಮುಚ್ಚುವುದು ಅಸಾಧ್ಯ. ಹಾಗೆ ಮಾಡಿದರೆ ಕಾಡು ಪ್ರಾಣಿಗಳ ಮಾಂಸದ ಕಾಳಸಂತೆಯ ಮಾರಾಟಕ್ಕೆ ಎಡೆ ಮಾಡಿಕೊಟ್ಟಂತಾಗುವುದು. ಕಾಳಸಂತೆಯ ವ್ಯವಸ್ಥೆಯು ಯಾವುದೇ ಕಾನೂನಿನ ಹಿಡಿತಕ್ಕೆ ಒಳಪಡದಿದ್ದು, ನೈರ್ಮಲ್ಯ ಮತ್ತು ಶುಚಿತ್ವಗಳ ನಿರ್ವಹಣೆ ಅಲ್ಲಿ ಅಸಾಧ್ಯವಾದುದಾಗಿರುತ್ತದೆ. ಗೃಹ ನಿರ್ಮಾಣಕ್ಕೆ ಬೇಕಾಗುವ ಮರಗಳು, ಖನಿಜಗಳು, ರಸ್ತೆ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳು, ಕೃಷಿ ಭೂಮಿಯ ವಿಸ್ತರಣೆ ಮುಂತಾದ ಕಾರಣಗಳಿಗಾಗಿ ಕಾಡುಗಳ ಮತ್ತು ಭೂಮಿಯ ಸಂಪನ್ಮೂಲಗಳ ವಿನಾಶ ಎಗ್ಗಿಲ್ಲದೆ ಸಾಗುತ್ತಿದೆ. ಕಾಡುಪ್ರಾಣಿಗಳ ಸಂಪರ್ಕ ಮಾನವನೊಂದಿಗೆ ಉಂಟಾಗಿ ವೈರಾಣುಗಳ ಹರಡುವಿಕೆ ಮುಂದುವರೆಯುತ್ತಿದೆ. ಮೈಕ್ರೋಸ್ಕೋಪಿಗೂ ಕಾಣದ ವೈರಾಣುಗಳು ಕೋವಿಡ್ನಂತಹ ಮಹಾಮಾರಿಯನ್ನು ಹರಡುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿರುತ್ತವೆ. ಕೋವಿಡ್-೧೯ರ ವೈರಾಣುವಿನ ಉದ್ದ ಕೇವಲ ೧೨೦ ನ್ಯಾನೋಮೀಟರ್ (ಒಂದು ಮೀಟರನ್ನು, ೧೦೦ ಕೋಟಿ ಭಾಗಗಳನ್ನಾಗಿ ಮಾಡಿದರೆ, ಅದರಳೊಗೊಂದು ಭಾಗ ಎಂದಿಟ್ಟುಕೊಳ್ಳಿ - billionth of a meter)  ಮಾತ್ರದ್ದಾಗಿರುತ್ತದೆ. ಒಂದು ಸಣ್ಣ ಗುಂಡುಸೂಜಿಯ ಗುಂಡಿನಷ್ಟು ಗಾತ್ರದಲ್ಲಿ ೧೦೦ ಮಿಲಿಯೋನ್ನಷ್ಟು ಕೋವಿಡ್-೧೯ರ ವೈರಾಣುಗಳಿರುತ್ತವೆ ಎಂದು ಅಂದಾಜಿಸಲಾಗಿದೆ. ಕೆಲವೇ ನೂರರಷ್ಟು ವೈರಾಣುಗಳು ಒಬ್ಬ ಮಾನವನಿಗೆ ಕೋವಿಡ್ ರೋಗವನ್ನು ಹರಡಬಲ್ಲದು ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. 

ಇಂಗ್ಲೆಂಡಿನಲ್ಲಿ ನಡೆಸಿರುವ ಸಂಶೋಧನೆಗಳ ಪ್ರಕಾರ ಕೋವಿಡ್-೧೯ರ ವೈರಾಣು "ಕಪ್ಪು ಮತ್ತು ಕಂದು ಬಣ್ಣದ ಜನಾಂಗ"ದವರನ್ನು ಹೆಚ್ಚಾಗಿ ಕಾಡುತ್ತದೆ. ಭಾರತೀಯರಾದ ನಾವು ಕಂದು ಬಣ್ಣದ ಜನಾಂಗದವರಾದ್ದುದರಿಂದ ನಮ್ಮವರ ಮೇಲೆ ಇದರ ಪರಿಣಾಮ ಹೆಚ್ಚು ಎಂಬುದು ನನ್ನ ಆತಂಕ. "ಏಕೆ ಹೀಗೆ?" ತಜ್ಞರಲ್ಲಿ ಇದಕ್ಕೆ ನಿಖರವಾದ ಜೈವಿಕ ಕಾರಣಗಳಿಲ್ಲ. ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಕಂಡು ಬರುವ ಸಾಮಾಜಿಕ ಹಾಗೂ ಆರ್ಥಿಕ ಅಸಮತೋಲನಗಳು ಇದಕ್ಕೆ ಕಾರಣವಿರಬಹುದೆಂಬುದು  ಅವರುಗಳ ವಿಶ್ಲೇಷಣೆ ಮಾತ್ರವಾಗಿದೆ. 

ಮುಂದಿನ ಮಹಾಮಾರಿ (pandemic) ಎಲ್ಲಿಂದ ಮತ್ತು ಹೇಗೆ ಬರಬಹುದೆಂಬುದನ್ನು ಊಹಿಸುವುದು ಕಷ್ಟ ಸಾಧ್ಯ.  "ಮುಂದಿನ ದಿನಗಳಲ್ಲಿ ಇನ್ನೂ ಬೇರೆ ಬೇರೆ ರೀತಿಯ ಮಹಾಮಾರಿಗಳು ಮನುಕುಲಕ್ಕೆ ತಗಲುವುದೆಂಬುದನ್ನು ಮಾತ್ರ ಖಚಿತವಾಗಿ ಹೇಳಬಹುದು!"  ಆದುದರಿಂದ ಮುಂದಿನ ದಿನಗಳಲ್ಲಿ ಬರಬಹುದಾದಂತಹ ಮಾಹಾಮಾರಿಗಳ ಪರಿಣಾಮವನ್ನು ಆದಷ್ಟೂ ತಗ್ಗಿಸಬಲ್ಲ ಸಿದ್ಧತೆಯನ್ನು ನಾವು ನಡೆಸುತ್ತಿರಬೇಕು.' ಡ್ರೇಕರು ಮುಚ್ಚುಮರೆಯಿಲ್ಲದೇ, ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಿದ್ದಾರೆ, ಎಂಬುದನ್ನು ರೋಹಿಣಿ ಗಮನಿಸದೆ ಇರಲಿಲ್ಲ. 

ಈ ಸಂದರ್ಭದಲ್ಲಿ ಡಾ. ಕಿರಣರಿಗೆ ಪ್ರತಿಕ್ರಿಯಿಸಬೇಕೆನಿಸಿತ್ತು. 'ಡ್ರೇಕ್ ರವರೇ, ಕಂದು ಬಣ್ಣದ ಜನಾಂಗದವರಾದ ಭಾರತೀಯರ ಮೇಲೆ, ಕೋವಿಡ್ನ ಪರಿಣಾಮ ತೀವ್ರವಾಗಿರುತ್ತದೆ ಎಂಬುದಾಗಿ ತಿಳಿಸಿದ್ದೀರಿ. ನಮ್ಮಂತಹ ದೇಶಗಳ ಆರ್ಥಿಕ ಹಾಗೂ ಸಾಮಾಜಿಕ ಅಸಮತೋಲನಗಳ ಕಾರಣವನ್ನೂ ನೀಡಿದ್ದೀರಿ. ಅದೃಷ್ಟವಶಾತ್ ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚು.  ೪೦ ವರ್ಷದ ಪ್ರಾಯದೊಳಗಿನ ಜನರುಗಳ ಸಂಖ್ಯೆ, ನಮ್ಮ ಭಾರತದಲ್ಲಿ ಶೇಕಡ ೬೦ರಷ್ಟಕ್ಕಿಂತಾ ಹೆಚ್ಚಿದೆ. ಅಂತಹ ಯುವಕರುಗಳಿಗೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದ  ಬೇರೇ ಕಾಯಿಲೆಗಳ ಬಾಧೆ  (comorbidities) ಇರುವ ಸಾಧ್ಯತೆ ಕಮ್ಮಿ. ಹಾಗಾಗಿ ನಮ್ಮ  ಯುವಕರುಗಳ ಪ್ರತಿರೋಧ ಶಕ್ತಿ ಉತ್ತಮವಾಗಿರುತ್ತದೆ. ನಮ್ಮ ದೇಶದಲ್ಲಿ ಸಾವು- ನೋವುಗಳ ಸಂಖ್ಯೆ ಕಮ್ಮಿ ಇರವುದಕ್ಕೆ , ಈ ಅಂಶವೂ ಪೂರಕವಾಗಿರಬಹುದು. 

ರೋಗ ಹರಡುವ ಸಾಧ್ಯತೆ ಈಗ, ಕಾಡುಗಳ ಜೊತೆಗೆ ನಾಡಿನಿಂದಲೂ ಉಂಟಾಗಬಹುದೆಂದು ತಿಳಿದು ಬರುತ್ತಿದೆ. ನಮ್ಮ ಪಟ್ಟಣ ಮತ್ತು ನಗರಗಳ ಜನಸಂಖ್ಯೆಯ ದಟ್ಟಣೆ ಹೆಚ್ಚಾಗಿದ್ದು, ನಮ್ಮೊಡನೆ ಬಾವಲಿಗಳು, ಇಲಿಗಳು, ಹಾವುಗಳು, ಹಕ್ಕಿ-ಪಕ್ಷಿಗಳು ಇರುತ್ತವೆ. ಈ ಪ್ರಾಣಿಗಳೊಂದಿಗಿನ ಹತ್ತಿರದ ಸಂಪರ್ಕದಿಂದಲೂ ರೋಗಗಳು ಹರಡಬಹುದು' ಎಂದರು ಡಾ. ಕಿರಣ್. 

ಈ ನಡುವೆ ತುಂಬು ಗರ್ಭಿಣಿಯಾದ ಹೆಣ್ಣಾನೆಯೊಂದು ಭಾರಿ ಮರದ ಮರೆಯಲ್ಲಿ ತವಕ ಪಡುತ್ತಿರುವ ದೃಶ್ಯವೊಂದನ್ನು ಹರಿಣಿಯವರು ಗಮನಿಸಿದರು. ಎಲ್ಲರನ್ನು ನಿಶ್ಯಬ್ದವಾಗಿರುವಂತೆ ಸೂಚಿಸಿದ ಹರಿಣಿ, ಆ ಹೆಣ್ಣಾನೆಗೆ ಪ್ರಸವ ಸಮಯ ಸಮೀಪಿಸಿರಬಹುದೆಂದು ಎಲ್ಲರಿಗೂ ಪಿಸು ಮಾತಿನಲ್ಲಿ ತಿಳಿಸಿದರು. ಕುತೂಹಲದಿಂದ ನೋಡ ಹತ್ತಿದ ಎಲ್ಲರನ್ನೂ ಎಚ್ಚರಿಸಿದ ಹರಿಣಿ, 'ಇಂತಹ ಸಂದರ್ಭಗಳಲ್ಲಿ, ಮನುಷ್ಯರುಗಳು ಸಮೀಪದಲ್ಲಿದ್ದು ನೋಡುತ್ತಿದ್ದರೆ, ಹೆಣ್ಣಾನೆ ನಾಚುತ್ತದೆ. ಅದರ ಪ್ರಸವ ಕಾರ್ಯದಲ್ಲಿ ತೊಡಕುಂಟಾಗಬಹುದು. ಆದುದರಿಂದ ನಾವು ಬೇಗ ಬೇರೆಡೆಗೆ ನಿರ್ಗಮಿಸೋಣ' ಎಂದರು. 

ರೋಹಿಣಿ ಮಾತನ್ನು ಮುಂದುವರೆಸುತ್ತಾ, 'ಕೋವಿಡ್ ಲಾಕ್ಡೌನಿನಿಂದ ನಮ್ಮ ಪರಿಸರದಲ್ಲಿ  ನಾವೆಣಿಸಿರದ ಉತ್ತಮ ಮಾರ್ಪಾಡೊಂದು ಕಂಡು ಬಂದಿದೆ. ಗಾಳಿ ಮತ್ತು ನೀರುಗಳು ಈಗ ಹೆಚ್ಚು ಶುದ್ಧವಾಗಿವೆ. ಕೈಗಾರಿಕೆಗಳಿಂದ ಮತ್ತು ವಾಹನಗಳಿಂದ ಎಗ್ಗಿಲ್ಲದೆ ನಡೆಯುತ್ತಿದ್ದ ಇಂಗಾಲದ ಡೈ ಆಕ್ಸೈಡಿನ (Carbon dioxide) ಹೊರಸೂಸುವಿಕೆ ತಗ್ಗಿದ್ದು ವಾತಾವರಣ ನಿರ್ಮಲವಾಗಿದೆ. ಲಾಕ್ಡೌನಿನ ಆ   ದಿನಗಳಲ್ಲಿ ಹರಿದ್ವಾರದ ಗಂಗಾನದಿಯ ನೀರು ಸತತವಾಗಿ ಕಲುಷಿತಗೊಳ್ಳುತ್ತಿದ್ದ ಪ್ರಕ್ರಿಯೆ, ತಾನಾಗೇ ನಿಂತಿದ್ದು, ಕುಡಿಯಲು  ಯೋಗ್ಯವಾಗಿತ್ತು ಎಂದು ಪ್ರಯೋಗಗಳಿಂದ ತಿಳಿದು ಬಂದಿದೆ. ಯಮುನೆಯ ನೀರಾಗ ತಿಳಿಯಾಗಿದ್ದು, ಅದರ ತೀರಗಳಲ್ಲಿ ಡಾಲ್ಫಿನ್ಗಳ ಹರಿದಾಟವನ್ನು ಜನರುಗಳು ಗಮನಿಸಿದ್ದರು. ಲಾಕ್ಡೌನಿನ ವೇಳೆ ಸುಮಾರು ೨೦೦ ಕಿ.ಮೀ.ಗಳಷ್ಟು ದೂರದಿಂದ ಹಿಮಾಲಯ ಪರ್ವತ ಶ್ರೇಣಿಯ ರಮಣೀಯ ದೃಶ್ಯವನ್ನು ಜನರು ಸ್ಪಷ್ಟವಾಗಿ ನೋಡಿ ಆನಂದಿಸಿದ್ದಾರೆ. ನಗರದ ರಸ್ತೆಗಳಲ್ಲಿ ನವಿಲುಗಳು, ಜಿಂಕೆಗಳು ಮುಂತಾದ ಪ್ರಾಣಿಗಲು ನಿರ್ಭೀತಿಯಿಂದ ನಡೆದಾಡುವುದನ್ನೂ, ಲಾಕ್ಡೌನಿನ ದಿನಗಳಲ್ಲಿ ಹಲವರು ಗಮನಿಸಿದ್ದಾರೆ. ಈ ಎಲ್ಲಾ ಆಶ್ಚರ್ಯಕರ ಬೆಳವಣಿಗೆಗಳು ನಮ್ಮಗಳ ಕಣ್ಣನ್ನು ತೆರೆಸಿವೆ. ಎಗ್ಗಿಲ್ಲದೆ ನಡೆಯುವ ಮಾನವನ ಹಣ ಸಂಪಾದನೆಯ ಸ್ವಾರ್ಥ ಕಾರ್ಯಗಳೇ, ಪರಿಸರದ ಕೆಡುವಿಕೆಗೆ ಕಾರಣ ಎಂಬುದು ಸ್ಪಷ್ಟವಾಗಿ ನಿರೂಪಿತಗೊಂಡಿದೆ. ಪರಿಸರದ ಸುಧಾರಣೆ ಮತ್ತು ರಕ್ಷಣೆ  ಅಸಾಧ್ಯವಾದ ಕೆಲಸವಲ್ಲ ಎಂಬುದೂ ಸಹ ಲಾಕ್ಡೌನ್ ಅವಧಿಯಲ್ಲಿ ಸಾಬೀತಾಗಿದೆ. 

ಆದರೆ ಲಾಕ್ಡೌನ್ ಕೊನೆಗೊಳ್ಳಲೇ ಬೇಕು. ಮಾನವನ ದುಡಿಯುವ ಚಟುವಟಿಕೆಗಳು ಮತ್ತೆ ಹಿಂದಿನಂತೆ ಆಗಲೇ ಬೇಕು. ಇಲ್ಲವಾದರೆ ದುಡಿಮೆಯಿಲ್ಲದೇ ಬಡವರುಗಳ ಜೀವನ ದುಸ್ತರವಾಗುತ್ತದೆ. ಆದರೂ ಪರಿಸರದ ರಕ್ಷಣೆ ಕೂಡ ಆಗಬೇಕಾದ ಕಾರ್ಯವೇ. ಪೆಟ್ರೋಲ್ ಮತ್ತು ಕಲ್ಲಿದ್ದಲಿನಂತಹ ಇಂಧನಗಳ ಬಳಕೆಯನ್ನು ನಿಯಂತ್ರಿಸುವುದರಿಂದ ಪರಿಸರದ ಸುಧಾರಣೆ ಸಾಧ್ಯ. "ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಂ)," ಎಂಬ ವ್ಯವಸ್ಥೆಯಿಂದ ವಾಹನಗಳ ಸಂಚಾರ ಮತ್ತು ದಟ್ಟಣೆ ಕಡಿಮೆಯಾಗುವುದು, ಒಂದು ಒಳ್ಳೆಯ ಬೆಳವಣಿಗೆ. ಕಾಡು ಮತ್ತು ನಗರಗಳ ಹೊರವಲಯಗಳ ಕಬಳಿಕೆ ನಿಲ್ಲಬೇಕು. ಕಾಡು ಪ್ರಾಣಿಗಳನ್ನು ತಿನ್ನುವುದಕ್ಕಾಗಿ  ಎಗ್ಗಿಲ್ಲದೇ ಕೊಲ್ಲುವುದನ್ನು ನಿಲ್ಲಿಸಬೇಕು. ಪ್ರಕೃತಿ ಮಾತೆಯನ್ನು ಗೌರವಿಸುವುದನ್ನು ನಾವೆಲ್ಲರೂ ಕಲಿಯಬೇಕು. "ರೋಗ ಹರಡುವುದನ್ನು ತಡೆಯುವುದೇ, ಚಿಕಿತ್ಸೆಗಾಗಿ ಹೆಣಗಾಡುವುದಕ್ಕಿಂತ ಒಳ್ಳೆಯದು (Prevention is better than cure)" ಎಂಬ ನಾಣ್ನುಡಿಯನ್ನು ನಾವು ಮರೆಯುವಂತಿಲ್ಲಾ' ಎಂದಳು.  

'ಪ್ರಪಂಚದ ೨೦ ಅತ್ಯಂತ ಕಲುಷಿತ ನಗರಗಳಲ್ಲಿನ, ೧೫ ನಗರಗಳು ಭಾರತದಲ್ಲೇ ಇವೆ ಎಂದು  ಕೇಳಿದ್ದೇನೆ. ನಮ್ಮ ರಾಷ್ಟ್ರದ ರಾಜಧಾನಿ ದಿಲ್ಲಿಯು, ಇಡೀ ವಿಶ್ವದಲ್ಲೇ ಅತ್ಯಂತ ಕಲುಷಿತ ನಗರ ಎಂದು ಕೂಡ ತಜ್ಞರು ಹೇಳುತ್ತಿದ್ದಾರೆ. ಲಾಕ್ಡೌನ್ ನಮಗೆ ಹಲವು ಪಾಠಗಳನ್ನು ಕಲಿಸಿದೆ. ಲಾಕ್ಡೌನ್ ಪಾಠಗಳನ್ನು ಅರಿತುಕೊಳ್ಳಲು ನಾವುಗಳು ಭಾರೀ ಬೆಲೆಯನ್ನೂ ತೆತ್ತಿರಬಹುದು. ಆದರೂ,  ಕೋವಿಡ್-೧೯ರ ಮಹಾಮಾರಿ, ಪರಿಸರದ ಪುನರುಜ್ಜೀವನ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ. ಲಾಕ್ಡೌನನ್ನು ಜಾರಿಗೊಳಿಸಿದ ನಂತರ, ದಿಲ್ಲಿಯ ಪರಿಸರ ಮಾಲಿನ್ಯದ  ಪ್ರಮಾಣ ೬೦%ರಷ್ಟು ಸುಧಾರಿಸಿದೆ!  ಆದರೆ ಈ ಎಲ್ಲಾ ಒಳ್ಳೆ ಬೆಳವಣಿಗೆಗಳು ಬಹು ಕಾಲ ಉಳಿಯಲಾರವು. ಆದರೂ ನಮ್ಮ ಹಳ್ಳಿ, ಪಟ್ಟಣ ಮತ್ತು ನಗರಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ಮಾರ್ಗಗಳಿವೆ ಎಂಬುದನ್ನು ನಾವುಗಳು ಅರಿತುಕೊಳ್ಳಬೇಕು. ಅಂತಹ ಸುಧಾರಣೆಯನ್ನು ಮಾಡಲು,  ಬಲವಾದ ರಾಜಕೀಯ ಇಚ್ಚಾಶಕ್ತಿ, ನಮ್ಮ ನಾಯಕರುಗಳಲ್ಲಿ  ಇರಬೇಕು. ಜೊತೆಗೆ ಪರಿಸರ ಕಾಳಜಿಯ ಮನಃಸ್ಥಿತಿ ಶ್ರೀಸಾಮಾನ್ಯರಲ್ಲೂ ಉಂಟಾಗಬೇಕು,' ಎಂದರು ಡಾ. ಕಿರಣ್. 

'ಡ್ರೇಕ್ ಮತ್ತು ಹರಿಣಿಯಂಥವರು ನಮಗೆ ಆದರ್ಶಪ್ರಾಯರಾಗಿದ್ದಾರೆ. ಅರಣ್ಯೀಕರಣ (afforestation)ದ ಮಹತ್ಕಾರ್ಯ ಆಗಬೇಕಾದರೆ ರಾಜಕಾರಣಿಗಳು, ಕಾರ್ಪೊರೇಟ್ ನಾಯಕರುಗಳು, ಪರಿಸರವಾದಿಗಳು ಮತ್ತು ಜನಸಾಮಾನ್ಯರುಗಳ ನಡುವಿನ ಸಮನ್ವಯ ಮತ್ತು ಪ್ರಯತ್ನಗಳು ಸತತವಾಗಿ ನಡೆಯುತ್ತಿರಬೇಕು. ಪ್ರಕೃತಿ ಮಾತೆಯಿಂದ ನಾವು ಕಸಿದುಕೊಂಡಿರುವ ಭೂಭಾಗದ  ಅರ್ಧದಷ್ಟನ್ನಾದರೂ ನಾವು ಹಿಂತಿರುಗಿಸಬೇಕು,' ಎಂಬ ಹಿರಿಯ ರಾಜುರವರ ಅಭಿಪ್ರಾಯಕ್ಕೆ ಎಲ್ಲರೂ ತಲೆದೂಗಿದ್ದರು. 

ಡ್ರೇಕ್ ಮತ್ತು ಹರಿಣೀರವರ ಆತಿಥ್ಯದಿಂದ ರಾಜು, ರೋಹಿಣಿ ಮತ್ತು ಡಾ. ಕಿರಣರವರು ಸಂತಸಗೊಂಡಿದ್ದರು. ಅಪರೂಪದ ದಂಪತಿಗೆ ತುಂಬು ಮನಸ್ಸಿನ ಧನ್ಯವಾದಗಳನ್ನು ಅರ್ಪಿಸಿ, ಮೂವರು ತಮ್ಮೂರಿನತ್ತ ಪ್ರಯಾಣ ಬೆಳೆಸಿದ್ದರು. 

***          

ಊರಿಗೆ ಹಿಂತಿರುಗುವ ಸಮಯದಯಲ್ಲಿ, ವಾಹನ ಚಾಲನೆಯ ಹೊಣೆಯನ್ನು ರಾಜುರವರು ಹೊತ್ತಿದ್ದರು. ದಣಿದಿದ್ದ ರೋಹಿಣಿ, ಸಣ್ಣ ನಿದ್ದೆಯೊಂದಕ್ಕೆ ಜಾರಿದ್ದಳು. ಹಾದು  ಹೋಗುತ್ತಿದ್ದ ವಾಹನಗಳನ್ನು, ಜನರುಗಳನ್ನೂ ವೀಕ್ಷಿಸುತ್ತಾ, ಡಾ. ಕಿರಣ್ ವಿಚಾರಮಗ್ನರಾಗಿದ್ದರು. 'ಮಾಸ್ಕ್  ಧರಿಸಿದವರ ಸಂಖ್ಯೆ ಅತ್ಯಲ್ಪ. ಮಾಸ್ಕ್ ಧರಿಸಬೇಕೆಂಬುದು, ನಮಗೆ ಕೋವಿಡ್ ಕಲಿಸಿದ ಮತ್ತೊಂದು ಪಾಠವಲ್ಲವೇ? ಮಾಸ್ಕ್ ಧರಿಸುವುದು, "ನಾನು ನಿನ್ನನ್ನು ರಕ್ಷಿಸುತ್ತೇನೆ, ನೀನು ನನ್ನನ್ನು ರಕ್ಷಿಸು" ಎಂಬ ಉತ್ತಮ ಸಂದೇಶದ ಪ್ರತೀಕ!  ಮಾಸ್ಕ್ ಧರಿಸುವುದು, ಸಮಾಜದ ಒಳಿತನ್ನು ಕುರಿತಾದ ಕಾಳಜಿಯನ್ನು ವ್ಯಕ್ತ ಪಡಿಸುವ  ಒಂದು ಪ್ರಕ್ರಿಯೆ. ಎರಡೂ ವ್ಯಕ್ತಿಗಳು ಮಾಸ್ಕ್ ಧರಿಸದೇ ಸಂಧಿಸಿದರೆ, ವೈರಾಣು ಹರಡುವ ಸಾಧ್ಯತೆ ಅತಿ ಹೆಚ್ಚು. ಇಬ್ಬರಲ್ಲಿ, ಒಬ್ಬರಾದರೂ ಮಾಸ್ಕ್ ಧರಿಸಿದ್ದರೆ ವೈರಾಣು ಹರಡುವ ಸಾಧ್ಯತೆ ಸ್ವಲ್ಪ ಕಮ್ಮಿ. ಇಬ್ಬರೂ ಮಾಸ್ಕ ಧರಿಸಿದ್ದರೆ, ವೈರಾಣು ಹಾಡುವ ಸಾಧ್ಯತೆ ಅತ್ಯಲ್ಪ,' ಎಂದು ಮತ್ತೆ ಮತ್ತೆ ಹೇಳುತ್ತಿದ್ದ ತಮ್ಮ ಹಿರಿಯ ಸಹೋದ್ಯೋಗಿಯ ಮಾತುಗಳನ್ನು ಡಾ. ಕಿರಣ್ ನೆನಪಿಸಿಕೊಂಡಿದ್ದರು. 

ಕೋವಿಡ್ ಕುರಿತಾದ ವಿಚಾರಗಳಲ್ಲೇ ಡಾ. ಕಿರಣ್ ಮುಳುಗಿ ಹೋಗಿದ್ದರು. ರೋಗ ಲಕ್ಷಣಗಳಿಲ್ಲದ ಹಲವರು ಕೂಡಾ, ರೋಗವನ್ನು ಹರಡಬಲ್ಲರು. ಮಾಸ್ಕ್ ಧರಿಸುವುದರಿಂದ ಅಂತಹ ವ್ಯಕ್ತಿಗಳಿಂದ ಸಿಡಿಯಬಹುದಾದ ಉಗುಳಿನ ತುಂತುರುಗಳು ಬೇರೆಯವರ ಮೇಲೆ ಬೀಳಲಾರವು. ಎನ್-೯೫ ಮಾಸ್ಕ್ ಹೆಚ್ಚಿನ ಬೆಲೆಯದಾಗಿದ್ದು, ಅದನ್ನೇ ಧರಿಸುವುದು ಕಡ್ಡಾಯವಲ್ಲ. ಜನ ಸಾಮಾನ್ಯರಿಗೆ, ದುಬಾರಿಯಲ್ಲದ  ೩-ಪದರದ ಸಾಧಾರಣ ಮಾಸ್ಕ್ ಸಾಕು. ಮನೆಯಲ್ಲೇ ಉತ್ತಮ ಹತ್ತಿ ಬಟ್ಟೆಯಿಂದ ತಯಾರಿಸಿದ ಮಾಸ್ಕ್ಗಳು ಉತ್ತಮವಾಗಿದ್ದು, ಮತ್ತೆ ಮತ್ತೆ ಒಗೆದನಂತರವೂ, ಅವುಗಳ ಪುನರ್ಬಳಕೆ ಸಾಧ್ಯ. ಆದರೆ ತಮ್ಮ ತಮ್ಮ ಮುಖದ ಆಕೃತಿಗೆ ಮತ್ತು ಗಾತ್ರಕ್ಕೆ ಸರಿಹೊಂದುವಂತಹ ಮಾಸ್ಕನ್ನು ಧರಿಸುವುದು ಅತ್ಯವಶ್ಯಕ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವುದು, ಕೋವಿಡ್ ರೋಗವನ್ನು ತಡೆಯಬಹುದಾದ ಮತ್ತೆರಡು ಸುಲಭ ವಿಧಾನಗಳು. ಕೋವಿಡ್ ವೈರಾಣುವನ್ನು ಅತಿ ತೆಳುವಾದ ಕೊಬ್ಬಿನ ಪದರವೊಂದು ಜೋಪಾನವಾಗಿಟ್ಟಿರುತ್ತದೆ. ಆ ಕೊಬ್ಬಿನ ಪದರವನ್ನು, ಸೋಪಿನ ನೊರೆ ಸುಲಭವಾಗಿ ಕರಗಿಸಿ, ವೈರಾಣು ನಿಷ್ಕ್ರಿಯೆಗೊಳ್ಳುವಂತೆ ಮಾಡುತ್ತದೆ.

ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಡಾ. ಕಿರಣರ ದೃಷ್ಟಿ ನೆಟ್ಟಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಬೀಡಾ ಅಂಗಡಿಗಳಿದ್ದವು. ಹೊಗೆಸೊಪ್ಪಿನ ಮತ್ತು ವೀಳಯದೆಲೆಯ ಪಾನನ್ನು ಜನಗಳು ಜಗಿಯುತ್ತಾ ನಿಂತಿರುವುದು ಎಲ್ಲಡೆಯೂ ಕಂಡು ಬರುತ್ತಿತ್ತು. ಪಾನಿನ ಉಚ್ಚಿಷ್ಟವನ್ನು ಜನರುಗಳು ಎಲ್ಲೆಂದರಲ್ಲಿ ಉಗಿಯುವ ದೃಶ್ಯಗಳಂತೂ ಅತ್ಯಂತ ಅಸಹ್ಯಕಾರಿಯಾಗಿರುತ್ತಿತ್ತು. ಬಸ್ಸುಗಳಲ್ಲಿ ಪ್ರಯಾಣಿಸುತ್ತಿರುವ ಚಾಲಕರು ಮತ್ತು ಪ್ರಯಾಣಿಕರುಗಳು ಕೂಡಾ ಆ ರೀತಿ ಉಗಿಯುವುದು ತೀರಾ ಸಾಮಾನ್ಯವಾಗಿತ್ತು. ಆ ರೀತಿ ಉಗಿಯುವುದೆಂದರೆ, ಕೋವಿಡ್ ಹರಡುವಿಕೆಗೆ ಸ್ವಾಗತ ನೀಡಿದಂತೆ. ಎಲ್ಲೆಂದರಲ್ಲಿ ಉಗಿಯುವ ದುರಭ್ಯಾಸ ಇಡೀ ಭಾರತದಲ್ಲಿ ಸಾಗುತ್ತದೆ ಎಂಬುದು ಡಾ. ಕಿರಣರಿಗೆ ಗೊತ್ತಿತ್ತು. ಎಗ್ಗಿಲ್ಲದೆ ಎಲ್ಲೆಂದರಲ್ಲಿ ಉಗಿಯುವ ದುಶ್ಚಟವನ್ನು ತಡೆಯಬೇಕಾದ ಅವಶ್ಯಕತೆಯನ್ನು ಪ್ರಥಮ ಬಾರಿಗೆ, ಕೋವಿಡ್ನ ಜಾಗೃತಿ ಮೂಡಿಸಿತ್ತು! 

ಲಾಕ್ಡೌನಿನ ದಿನಗಳನಂತರ ದೇಶದಲ್ಲೇ ಪ್ರಥಮ ಬಾರಿಗೆ, ಎಲ್ಲೆಂದರಲ್ಲಿ ಉಗಿಯುವುದನ್ನು ನಿಷೇಧಿಸಿ ಮಹಾರಾಷ್ಟ್ರ ಸರಕಾರ ಕಾನೂನನ್ನು ಜಾರಿಗೊಳಿಸಿತ್ತು. ೨೦೨೦ರ ಮೇ ೨೯ರಂದು, ಸಾಂಕ್ರಾಮಿಕ ರೋಗಗಳ ಕಾಯಿದೆ - ೧೮೯೭ರ ಅಡಿಯಲ್ಲಿ ಆ ಸರಕಾರ ಜಾರಿಗೊಳಿಸಿದ ಕಾನೂನಿನ ಪ್ರಕಾರ, ಅಂತಹ ಅಪರಾಧಕ್ಕೆ ೬ ತಿಂಗಳ ಅವಧಿಯಿಂದ,  ೨ ವರುಷಗಳವರೆಗಿನ ಜೈಲುವಾಸವನ್ನು ವಿಧಿಸಬಹುದಾಗಿದೆ.  'ಮಹಾ' ಸರಕಾರದನಂತರ, ಇನ್ನೂ ಕೆಲವು ರಾಜ್ಯಗಳು ಅಂತಹ ಕಾನೂನನ್ನು ಜಾರಿಗೊಳಿಸಿವೆ. ಆದರೆ ಅಂತಹ ಕಾನೂನಿನ ಕಾರ್ಯಾನ್ವಯ ಮಾತ್ರ ಕಷ್ಟಸಾಧ್ಯ. ಎಲ್ಲವುದಕ್ಕಿಂತ ಪರಿಣಾಮಕಾರಿಯಾಗ ಬಲ್ಲದ್ದು, ಜನರುಗಳ ಮನಃಸ್ಥಿತಿಯ ಪರಿವರ್ತನೆ. ಅಂತಹ ಆರೋಗ್ಯಕರ ಅಭ್ಯಾಸಗಳಿಗೆ ಜನರುಗಳ ಮನಸ್ಸನ್ನು ಅಣಿಗೊಳಿಸುವಂತಹ ಪರಿಸ್ಥಿತಿಯನ್ನು ಕೋವಿಡ್ ಮಹಾಮಾರಿ ತಂದಿಟ್ಟಿರಬಹುದು ಎಂಬ ಆಶಾಭಾವನೆ ಕಿರಣರದಾಗಿತ್ತು. 

ಕೊರೋನಾ ಸೇನಾನಿಗಳನ್ನು ಗೌರವಿಸಬೇಕೆಂಬುದು ನಮಗೆ ಕೋವಿಡ್ ಮಹಾಮಾರಿ ಕಲಿಸಿದ ಮತ್ತೊಂದು ಪಾಠ. ಮುಖ್ಯವಾಗಿ ಸ್ವಚ್ಛತಾ ಕರ್ಮಚಾರಿಗಳ ಕೆಲಸ ಅತ್ಯಂತ ಕಷ್ಟದಾಯಕವಾದುದು. ಅವರುಗಳಿಗೀಗ ಸಾಕಷ್ಟು ಗೌರವ ದೊರೆಯುತ್ತಿರುವುದು ಸಂತಸದ ವಿಷಯ. ಕೆಲವು ಸಂದರ್ಭಗಳಲ್ಲಿ ಅವರುಗಳಿಗೆ ಜನರು ಹೆದರುವುದೂ ಉಂಟು! 'ನಮ್ಮ ಮನೆಯ ಕಸವನ್ನು ಅವರು ಬಿಟ್ಟು ಹೋದರೆ ಏನು ಮಾಡುವುದು?' ಎಂಬ ಭಯ ಸಾಧಾರಣವಾಗಿ ಎಲ್ಲಾ ಗೃಹಿಣಿಯರಿಗೂ ಇರುತ್ತದೆ. ಕಾಲೋನಿಗಳ  ಹೆಂಗಸರುಗಳು ಸ್ವಚ್ಛತಾ ಕರ್ಮಚಾರಿಗಳಿಗೆ ಕಾಫಿ/ಟೀ ಮತ್ತು ಬಿಸ್ಕತ್ ಗಳನ್ನೂ ಕೊಟ್ಟು ಸತ್ಕರಿಸುವುದು, ಲಾಕ್ಡೌನ್ ಸಮಯದಲ್ಲಿ ಕಂಡುಬರುತ್ತಿರುವ ಉತ್ತಮ ಬೆಳವಣಿಗೆಯಾಗಿದೆ. 

ಮಾಹಾಮಾರಿ (pandemic) ಸಮಯದಲ್ಲಿ ಎಲ್ಲಾ ವರ್ಗದ ಕರ್ಮಚಾರಿಗಳಿಗೂ ತಮ್ಮ ತಮ್ಮ ಕೆಲಸಗಳ ಬಗ್ಗೆ ಅಭಿಮಾನ (dignity of labour) ಮೂಡಿರುವುದು ಸಂತಸದ ವಿಷಯ. ತಾವು ಕೇಳಿದ ಸತ್ಯಕತೆಯೊಂದರ ನೆನಪು ಡಾ. ಕಿರಣರನ್ನು ಆಗ ಕೆಣಕಿತ್ತು. ಇಬ್ಬರೂ ಕೆಲಸ ಮಾಡುವ ದಂಪತಿಯ ಮನೆಯಲ್ಲಿ ಹೆಂಗಸೊಬ್ಬಳು ಮನೆಗೆಲಸ ಮಾಡುತ್ತಿದಳು. ಕೋವಿಡ್ ಹರಡುವಿಕೆ ಶುರುವಾದನಂತರ ಆ ಮನೆಗೆಲಸದವಳನ್ನು, ಆ ಮನೆಯೊಡತಿ ಕಡ್ಡಾಯವಾಗಿ ರಜೆಯ ಮೇಲೆ ಕಳುಹಿಸಿದ್ದಳು. ಒಂದು ತಿಂಗಳ ಸಮಯ ಕಳೆಯಿತು. ಮನೆಯ ಕೆಲಸದ ನಿಭಾವಣೆ ಅಸಾಧ್ಯವೆಂದು ಮನಗಂಡ ಆ ಮನೆಯೊಡತಿ, ಆ ಮನೆಗೆಲಸದವಳನ್ನು ಮತ್ತೆ ಕೆಲಸಕ್ಕೆ ಕರೆಸಿದ್ದಳು. ಮನೆಗೆಲಸದಾಕೆ ಥಟ್ಟನೆ ಬಂದಿದ್ದಳು, ಆದರೆ ರಜೆಯ ಒಂದು ತಿಂಗಳ ಅವಧಿಗೆ ಪೂರ್ತಿ ಸಂಬಳವನ್ನು ನೀಡಬೇಕೆಂದು ಆಗ್ರಹಿಸಿದ್ದಳು.  ಬೇರೆ ಮಾರ್ಗಗಳಿಲ್ಲದೆ ಆ ಮನೆಯೊಡತಿ ಅರ್ಧ ಸಂಬಳ ನೀಡಲೊಪ್ಪಿ, ಮನೆಗೆಲಸದವಳನ್ನು ಕರೆಸಿಕೊಂಡಿದ್ದಳು. ಬರುವ ಸೋಮವಾರದಿಂದ ಕೆಲಸಕ್ಕೆ ಹಾಜರಾಗುವ ಮುನ್ನ, ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು,  ಕೋವಿಡ್ ಇಲ್ಲವೆಂಬ ಪ್ರಮಾಣ ಪತ್ರವನ್ನು ತಂದು ತೋರಿಸಬೇಕಾಗಿ ಮನೆಯೊಡತಿ ಆಗ್ರಹಿಸಿದ್ದಳು. ಪರೀಕ್ಷೆ ಮಾಡಿಸಿಕೊಳ್ಳಲು ಪಾವತಿಸಬೇಕಾದ ಹಣವನ್ನು ಮನೆಯೊಡತಿಯೇ ನೀಡಲು ಸಮ್ಮತಿಸಿದ್ದಳು. ಪರೀಕ್ಷೆ ಮಾಡಿಸಿಕೊಳ್ಳಲೊಪ್ಪಿದ ಮನೆಗೆಲಸದಾಕೆ ನನ್ನದೂ ಒಂದು ಬೇಡಿಕೆ ಇದೆಯೆಂದಳು. "ಅಮ್ಮಾ, ನೀವೂ ಗಂಡ, ಹೆಂಡತಿ ಆಸ್ಪತ್ರಗೆ ಹೋಗಿ ಕೋವಿಡ್ ಇಲ್ಲವೆಂಬ ಪ್ರಮಾಣ ಪತ್ರವನ್ನು ನನಗೆ ಬರುವ ಸೋಮವಾರವೇ ತೋರಿಸಿ, ನನಗೂ ಮನೆಯಲ್ಲಿ ಗಂಡ ಮತ್ತು ಮಕ್ಕಳುಗಳಿದ್ದಾರೆ. ಅವರುಗಳು ಮತ್ತು ನನ್ನ ಆರೋಗ್ಯವೂ ನಿಮ್ಮಗಳಷ್ಟೇ  ಮುಖ್ಯ" ಎಂದಾಗ, ಮನೆಯೊಡತಿ ಮತ್ತವಳ ಗಂಡ ನಿಟ್ಟುಸಿರು ಬಿಡುವಂತಾಗಿತ್ತು. 

***

ದೂರದ ಖಾಸಗಿ ಕಾಡಿನ ಪ್ರವಾಸದಿಂದ  ಹಿಂತುರುಗಿದನಂತರವೂ, ಡಾ. ಕಿರಣರಿಗೆ ಇನ್ನೂ ನಾಲ್ಕು ದಿನಗಳ ರಜೆ ಉಳಿದಿತ್ತು. ಒಂದು ದಿನ, ಡಾ.ಕಿರಣರ ಫೋನು ರಿಂಗಣಿಸಿತ್ತು. 'ನಾನು, ಭವಾನಿ ಟೀಚರ್ ಮಾತನಾಡುತ್ತಿದ್ದೇನೆ. ನನ್ನ ನೆನಪು ನಿನಗಿದೆಯೇ?' ಥಟ್ಟನೆ ಉತ್ತರಿಸಿದ ಕಿರಣ್, 'ಒಹೋ, ಭವಾನಿ ಟೀಚರ್, ನಾನ್ಹೇಗೆ ನಿಮ್ಮನ್ನು ಮರೆಯಲಿ? ನನ್ನಲ್ಲಿ ವೈದ್ಯನಾಗಬೇಕೆಂಬ ಬಯಕೆಯ ಕಿಡಿಯನ್ನು  ಹೊತ್ತಿಸಿದವರೇ ನೀವು. ತಾವು ಹೇಗಿದ್ದೀರಿ ಮೇಡಂ? ನನ್ನಿಂದ ಏನಾಗಬೇಕು?' ಎಂದರು. 

'ನಾನು ನಿಮ್ಮ ಮನೆಗೊಮ್ಮೆ ಬಂದು ಕೆಲವು ವಿಷಯಗಳನ್ನು ಚರ್ಚಿಸಬಹುದೇ?' ಭವಾನಿಯವರ ಮಾತಿನಲ್ಲಿ ಕೋರಿಕೆಯ ಭಾವವಿತ್ತು. 

'ನಮ್ಮ ಮನೆಗೆ ಬರಲು, ತಾವು ಯಾವ ಅನುಮತಿಯನ್ನೂ ಪಡೆಯ ಬೇಕಿಲ್ಲ. ಯಾವಾಗಲಾದರೂ ತಾವು ನಮ್ಮ ಮನೆಗೆ ಬರಬಹುದು.' ಕಿರಣರ ಉತ್ತರದಲ್ಲಿ ಗೌರವದ ಭಾವವಿತ್ತು. 

ಪೂರ್ವ ನಿಗದಿತ ಸಮಯಕ್ಕೆ ಸರಿಯಾಗಿ ಭವಾನಿ ಟೀಚರ್ ಡಾ. ಕಿರಣರ ಮನೆಗೆ ಬಂದಿದ್ದರು. ಡಾ. ಕಿರಣರ ೧೦ನೇ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಪಡೆದಿದ್ದ, ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲರಾಗಿ ಈಗ ಕಾರ್ಯ ನಿರ್ವಹಿಸುತ್ತಿದವರು ಭವಾನಿಯವರು. ಉಭಯ ಕುಶಲೋಪರಿಯ ಸಂಭಾಷಣೆಗಳು ಮುಗಿದನಂತರ, ಭವಾನಿ ಟೀಚರ್ ವಿಷಯದ ಚರ್ಚೆಗೆ ಬಂದಿದ್ದರು. 'ನೋಡು ಕಿರಣ್, ಕೋವಿಡ್-೧೯ರ ಮಹಾಮಾರಿ ನಮ್ಮ ವಿದ್ಯಾಭ್ಯಾಸದ ವ್ಯವಸ್ಥೆಯನ್ನೇ ಬುಡಮೇಲು ಮಾಡಿಟ್ಟಿದೆ. "ವಿಶ್ವಾದ್ಯಂತ           ೧. ೨ ಬಿಲಿಯನ್(೧೨೦ ಕೋಟಿ)ರಷ್ಟು ವಿದ್ಯಾರ್ಥಿಗಳು, ಕೆಲವು ತಿಂಗಳುಗಳ ಹಿಂದೆ ಆರಂಭವಾದ ಶೈಕ್ಷಣಿಕ ವರ್ಷದಿಂದ, ಶಾಲೆಗಳಿಗೆ ಹೋಗುತ್ತಿಲ್ಲ."  ಆನ್ ಲೈನ್ ಕಲಿಕೆಯ ವ್ಯವಸ್ಥೆ ಇಡೀ ಪ್ರಪಂಚದಲ್ಲೇ ಈಗ ಜಾರಿಗೊಂಡಿದೆ. ಶಿಕ್ಷಣ ಮತ್ತು ಮನೋವಿಜ್ಞಾನದ ತಜ್ಞರುಗಳು ಸಹ ಆನ್ ಲೈನ್ ಕಲಿಕೆ ಎನ್ನುವ ವ್ಯವಸ್ಥೆ ಶಾಶ್ವತವಾಗಿ ವಿದ್ಯಾಭ್ಯಾಸದ ಭಾಗವಾಗಿ ಹೋಗಿದೆ ಎಂಬುದನ್ನು ಒಪ್ಪುತ್ತಾರೆ. ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪೋಷಕರು "ಆನ್ ಲೈನ್ ಕಲಿಕೆಯ ವ್ಯವಸ್ಥೆ ಸಮರ್ಪಕವಾಗಿದ್ದು,  ದೂರದ ಶಾಲೆಗಳಿಗೆ ವಿದ್ಯಾರ್ಥಿಗಳು ಹೋಗಿಬರುವ ಪ್ರಯಾಸದ ಹೊರೆಯನ್ನು ಈ  ವ್ಯವಸ್ಥೆ ನಿವಾರಿಸಿದೆ" ಎನ್ನುತ್ತಾರೆ. ಸಮಯದ ಉಳಿತಾಯ ಕೂಡ ಆನ್ ಲೈನ್ ವ್ಯವಸ್ಥೆಯ ಮತ್ತೊಂದು ಆಕರ್ಷಣೆಯಾಗಿದೆ. ಸಾಕಷ್ಟು ಸಂಖ್ಯೆಯ "ಶಿಕ್ಷಾ-ತಾಂತ್ರಿಕ ಆಪ್," (edu-tech apps)ಗಳು, ಭಾರತದಲ್ಲಿ ಈಗ ಹೆಚ್ಚು-ಹೆಚ್ಚು ಜನಪ್ರಿಯವಾಗುತ್ತ ಬೆಳೆಯುತ್ತಿವೆ. 

ಆದರೆ ಮತ್ತೆ ಕೆಲವರು, ಕಲಿಕೆಯ ಡಿಜಿಟಲ್ ವೇದಿಕೆಗಳ ಪ್ರವೇಶ ನಮ್ಮ ದೇಶದಲ್ಲಿ ದಿಢೀರನೆ ಆಗುತ್ತಾ ಇದೆ ಎಂದು ಆರೋಪಿಸುತ್ತಾರೆ. ಆ ಹೊಸರೀತಿಯ ಬೋಧನಾ ಕ್ರಮಕ್ಕೆ ಬೇಕಾದ ತರಬೇತಿ, ಶಿಕ್ಷಕರುಗಳಿಗೆ ದೊರೆತಿಲ್ಲ ಮತ್ತು "ಪ್ರಸಾರದ ವಿಸ್ತಾರದ (bandwidth)" ಕೊರತೆ ಕೂಡಾ ಇದೆ. ಲ್ಯಾಪ್ಟಾಪ್, ಡೆಸ್ಕ್ಟಾಪ್ ಮತ್ತು ಸ್ಮಾರ್ಟ್ ಫೋನ್ಗಳನ್ನು ನಮ್ಮ ಗ್ರಾಮೀಣ ವಿದ್ಯಾರ್ಥಿಗಳಿನ್ನೂ ಕಂಡೇ ಇಲ್ಲ. ಡಿಜಿಟಲ್ ಕಲಿಕೆಯ ಭಯದಿಂದ ಆ ಬಡ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಪೋಷಕರು ಹೆದರಿ ಹೋಗಿದ್ದಾರೆ. 

"ಶಾಲಾ ಕೊಠಡಿಗಳಲ್ಲಾಗುವ ನೇರ ಶಿಕ್ಷಣ ವ್ಯವಸ್ಥೆಗೆ ಪರ್ಯಾಯ" ಮತ್ತೊಂದಿಲ್ಲ ಎಂಬುದು ನನ್ನ ವೈಯುಕ್ತಿಕ ಅನಿಸಿಕೆ. ಶಿಕ್ಷಕ-ವಿದ್ಯಾರ್ಥಿ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿಗಳ ನಡುವಿನ ಸುಮಧುರ ಸಂಬಂಧ ಬಹು ಮುಖ್ಯ ಮತ್ತು ಅದರ ಸಾಧ್ಯತೆ ಇರುವುದು ನೇರ ಶಿಕ್ಷಣದ ವ್ಯವಸ್ಥೆಯಲ್ಲಿ ಮಾತ್ರ. ಪಠ್ಯೇತರ ಮತ್ತು ಪಠ್ಯಸಹಿತದ ಕಲಿಕೆ (co-curricular and extra-curricular learning)ಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಬಹಳ ಅವಶ್ಯಕವಾಗಿದ್ದು, ಅದು ನೇರ ಶಿಕ್ಷಣ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ. ಆಟೋಟ ಚಟುವಟಿಕೆಗಳ ಗತಿಯೇನು? ಆದರೆ ಕೋವಿಡ್ನ ಕಾಂಡ ಮುಗಿದನಂತರವೂ ಆನ್ಲೈನ್ ಶಿಕ್ಷಣವೆಂಬುದು ಹೋಗದು. ನೇರ ಶಿಕ್ಷಣ ಮತ್ತು ಆನ್ಲೈನ್ ಶಿಕ್ಷಣ, ಇವುಗಳ ಮಿಶ್ರಣದ ವ್ಯವಸ್ಥೆ (hybrid model) ಬರುವ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಹೋಗುವುದು ಖಂಡಿತ.'

ಭವಾನಿಯವರ ಮಾತುಗಳನ್ನು ಏಕಾಗ್ರತೆಯಿಂದ ಡಾ. ಕಿರಣ್ ಕೇಳುತ್ತಿದ್ದರು. 'ತಂತ್ರಜ್ಞಾನ (technology)ವೆಂಬುದೊಂದು ವ್ಯವಸ್ಥೆಯನ್ನು ಬದಲಿಸುವ (disruptor) ಶಕ್ತಿಯೆಂದು ತಿಳಿದಿದ್ದೆವು. ಆದರೆ ಕೋವಿಡ್-೧೯ ಎಂಬುದು ತಂತ್ರಜ್ಞಾನಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಬದಲಿಸುವ ಶಕ್ತಿಯಾಗಿ ಹೊರಹೊಮ್ಮಿದೆ. ಡಿಜಿಟಲ್ ಶಿಕ್ಷಣವೆಂಬುದು "ಮುಂದಿನ ದಿನಗಳ ಹೊಸ ಕ್ರಮವಾಗಿ (new normal)" ಹೋಗಿದೆ.  ಸಾರ್ಸ್-೨೦೦೨ರ ವೈರಾಣುವಿನ ರೋಗ ಹರಡಿದನಂತರ, ಇ-ವ್ಯಾಪಾರ (e-commerce) ಎಂಬ ವ್ಯವಸ್ಥೆ ಇಡೀ ವಿಶ್ವವನ್ನಾವರಿಸಿತು. ಕೋವಿಡ್-೧೯ರ ನಂತರ ಇ-ಶಿಕ್ಷಣದ ವ್ಯವಸ್ಥೆ ಬಂದು ನಿಂತಿದೆ.' ಶಿಷ್ಯನ ಅನಿಸಿಕೆ, ಭವಾನಿ ಟೀಚರ್ ರವರ ಮೆಚ್ಚುಗೆ ಗಳಿಸಿತ್ತು. 

'ಕಿರಣ್, ನಿನ್ನಿಂದ ನನಗೊಂದು ಕೆಲಸವಾಗಬೇಕು. ಇ-ಶಿಕ್ಷಣದ ವ್ಯವಸ್ಥೆಯೊಂದಿಗೆ ಮಕ್ಕಳು ಹೊಂದಿಕೊಳ್ಳುವಂತೆ ಮಾಡಲು ನಾವು ಬೇರೆ ಬೇರೆ ಕ್ಷೇತ್ರಗಳಿಂದ ಆಯ್ದ ನುರಿತ ಮಾತುಗಾರರ  ಕಾರ್ಯಕ್ರಮವನ್ನೇರ್ಪಡಿಸಿ, ಆ ತಜ್ಞರುಗಳೊಂದಿಗೆ ನಮ್ಮ ಮಕ್ಕಳು ಆನ್ಲೈನ್ನಲ್ಲಿ ಸಂವಹಿಸುವಂತಹ (interacting) ಅವಕಾಶವನ್ನು ಕಲ್ಪಿಸುತ್ತಿದ್ದೇವೆ. ಈ ಬಾರಿ ಕೋವಿಡ್-೧೯ರ ವಿಷಯವನ್ನು ಕುರಿತಾದ ಕಾರ್ಯಕ್ರಮವನ್ನು ವೈದ್ಯನಾದ ನೀನು ನಡೆಸಿಕೊಡಬೇಕೆಂಬುದು ನನ್ನ ಬಯಕೆ. ನಿನ್ನ ಕಾರ್ಯಕ್ರಮ ಒಂದು ಇ-ಪ್ರಶೋತ್ತರಾವಳಿ (e-quiz) ರೂಪದಲ್ಲಿರಲಿ. ೧೩-೧೫ರ ವಯಸ್ಸಿನ ನಮ್ಮ ಶಾಲೆಯ ಪ್ರೌಢ ಶಾಲೆಯ ಮಕ್ಕಳನ್ನು ನಾವು ಆರಿಸಿದ್ದೇವೆ. ಕ್ವಿಜ್ನ ಆಯ್ಕೆಯ ಸುತ್ತುಗಳನ್ನು ಈಗಾಗಲೇ ನಡೆಸಿದ್ದೇವೆ. ಎರಡು ವಿದ್ಯಾರ್ಥಿಗಳಿರುವ, ಮೂರು ತಂಡಗಳು ಅಂತಿಮ ಸುತ್ತುನ್ನು (finals)  ಪ್ರವೇಶಿಸಿವೆ. ಅಂತಿಮ ಸುತ್ತಿನ ಕಾರ್ಯಕ್ರಮದ "ಕ್ವಿಜ್-ಮಾಸ್ಟರ್ (Quiz Master)" ನೀನಾಗಿ ಕಾರ್ಯಕ್ರಮವನ್ನು ನಡೆಸಿಕೊಡಬೇಕು. ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಯಾದ ನೀನು, ನಮ್ಮ ವಿದ್ಯಾರ್ಥಿಗಳಿಗೆ  "ಮಾದರಿ ವ್ಯಕ್ತಿ (Role model)"ಯಾಗಿ ಕಾಣಿಸಿಕೊಳ್ಳಬೇಕು.' ಭವಾನಿ ಟೀಚರ್ ಕೋರಿಕೆಗೆ ಡಾ. ಕಿರಣ್ ತಕ್ಷಣ ಸಮ್ಮತಿ ನೀಡಿದ್ದನು. 

ಕ್ವಿಜ್ ದಿನ ಬಂದಿತ್ತು. ಉತ್ತಮ ತಯಾರಿಯನ್ನು ಮಾಡಿಕೊಂಡಿದ್ದ ಡಾ. ಕಿರಣ್ ಕ್ವಿಜ್ ನಡೆಸಲು ಕಾತರನಾಗಿದ್ದನು. 'ಇಂದಿನ ಆನ್ಲೈನ್ ಕ್ವಿಜ್ ಕಾರ್ಯಕ್ರಮಕ್ಕೆ ಎಲ್ಲಾ ವಿದ್ಯಾರ್ಥಿಗಳಿಗೂ ಸುಸ್ವಾಗತ. ಪ್ರಿನ್ಸಿಪಾಲರಾದ ಭವಾನಿರವರಿಗೆ ಮತ್ತು ಎಲ್ಲಾ ಶಿಕ್ಷಕ, ಶಿಕ್ಷಕಿಯರುಗಳಿಗೆ ನನ್ನ ಸವಿನಯ ನಮಸ್ಕಾರಗಳು. ಅಂತಿಮ ಸುತ್ತಿಗೆ ಆಯ್ಕೆಯಾಗಿರುವ "ಎ, ಬಿ, ಮತ್ತು ಸಿ" ತಂಡಗಳಿಗೆ ನನ್ನ ಅಭಿನಂದನೆಗಳು. ನಿಮ್ಮಗಳ ಹಾಗೇ ನಾನೂ ಕೂಡಾ, ಕೆಲವು ವರ್ಷಗಳ ಹಿಂದೆ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದೆ, ಎಂದು ನಿಮಗೆ ತಿಳಿಸಲು ಹೆಮ್ಮೆ ಪಡುತ್ತೇನೆ. ನನ್ನ ಹೆಸರು ಡಾ. ಕಿರಣ್. ಇಂದಿನ ಅಂತಿಮ ಸುತ್ತಿನ ಇ-ಕ್ವಿಜ್ ಗೆ ನಾನೇ ಇಂದಿನ ಕ್ವಿಜ್ ಮಾಸ್ಟರ್. ನಿಮಗೆಲ್ಲ ಮುಂಚೆಯೇ ತಿಳಿದಿರುವಂತೆ ಇಂದಿನ ಕ್ವಿಜ್ ನ ವಿಷಯ "ಕೋವಿಡ್-೧೯." ಕ್ವಿಜ್ ನ ನಿಯಮಗಳು ಬಹಳ ಸರಳವಾಗಿವೆ. ಒಟ್ಟು ೫ ಸುತ್ತುಗಳಲ್ಲಿ ಕ್ವಿಜ್ ಪ್ರಶ್ನೆಗಳನ್ನು ಕೇಳಲಾಗುತ್ತದೆ. ತಂಡವೊಂದಕ್ಕೆ ನೇರವಾಗಿ ಕೇಳಿದ ಪ್ರಶ್ನೆಗಳನ್ನು ಉತ್ತರಿಸಿದರೆ ೧೦ ಅಂಕಗಳು ದೊರೆಯುತ್ತದೆ. ನೇರ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕದಿದ್ದರೆ, ಅದೇ ಪ್ರಶ್ನೆಯನ್ನು ಮುಂದಿನ ತಂಡಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಆ ರೀತಿ ಮುಂತಳ್ಳಿದ ಪ್ರಶ್ನೆಗಳಿಗೆ (passed questions) ಸರಿಯುತ್ತರ ನೀಡಿದರೆ ೫ ಅಂಕಗಳನ್ನು ನೀಡಲಾಗುತ್ತದೆ. ನಿಮ್ಮ ಗಣಿತದ ಅಧ್ಯಾಪಕಿಯಾದ ಶ್ರೀಮತಿ ಮೇರಿಯವರು ಇಂದಿನ ಎಲೆಕ್ಟ್ರಾನಿಕ್ ಅಂಕಪಟ್ಟಿಯ ನಿರ್ವಹಣೆಯ ಕಾರ್ಯವನ್ನು ಮಾಡುತ್ತಾರೆ. ಪ್ರತಿ ಸುತ್ತು ಮುಗಿದನಂತರ ಅಂಕಪಟ್ಟಿಯನ್ನು ನಿಮ್ಮ ಪರದೆಗಳ ಮೇಲೆ  ತೋರಿಸಲಾಗುತ್ತದೆ. ಅತ್ತ್ಯತ್ತಮ ತಂಡ ಇಂದು ಜಯಗಳಿಸಲಿ ಎಂದು ಹಾರೈಸುತ್ತೇನೆ. ಇಂದಿನ ಕ್ವಿಜ್ ನ ವೀಕ್ಷಕರಾಗಿ  ಆನ್ಲೈನ್ ಚಾನ್ನೆಲ್ಲಿನಲ್ಲಿ ನಮ್ಮೊಡನಿರುವ ಎಲ್ಲ ವಿದ್ಯಾರ್ಥಿಗಳೂ,  ನಿಮ್ಮ ಪರದೆಗಳ ತಳಭಾಗದಲ್ಲಿರುವ  'ಸಂವಹನದ ಪೆಟ್ಟಿಗೆ (dialogue box)'ಯಲ್ಲಿ, ಇಂದಿನ ಅಂತಿಮ ಸುತ್ತಿನಲ್ಲಿ ಭಾಗವಹಿಸುತ್ತಿರುವ ಮೂರೂ ತಂಡಗಳಿಗೆ "ಗುಡ್ ಲಕ್" ಎಂದು ಟೈಪ್ ಮಾಡಿ, ಎಂದು  ಆಜ್ಞಾಪಿಸಿದ   ಡಾ. ಕಿರಣ್, ನುರಿತ ಕ್ವಿಜ್ ಮಾಸ್ಟರರಂತೆ ಕಂಡಿದ್ದರು. ಮುಂದಿನ ೭೦ ಸೆಕೆಂಡ್ ಸಮಯ ಮಾತ್ರದಲ್ಲಿ ಸುಮಾರು ೩೦೦ ವಿದ್ಯಾರ್ಥಿಗಳಿಂದ  "ಗುಡ್ ಲಕ್" ಎಂಬ ಸಂದೇಶಗಳು ಡೈಲಾಗ್ ಬಾಕ್ಸ್ ನಲ್ಲಿ ಮೂಡಿದಾಗ ಡಾ. ಕಿರಣ್ ಮತ್ತು ಪ್ರಿನ್ಸಿಪಾಲರಾದ ಭವಾನಿಯವರು ಪುಳಕಿತಗೊಂಡಿದ್ದರು. 

'ಇಂದಿನ ಕ್ವಿಜ್ ನ ವಿಷಯ ಕೋವಿಡ್-೧೯ ಎಂಬುದು ತಮಗೆಲ್ಲ ತಿಳಿದಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾಹಿತಿ ಫಲಕದಲ್ಲಿ ಪ್ರಕಟಿಸಿರುವ ಕೋವಿಡ್ ಮಾಹಿತಿಗಳ  ಮೇಲೆ ನನ್ನ ಪ್ರಶ್ನೆಗಳು ಆಧಾರಿತವಾಗಿರುತ್ತದೆ. ತಂಡಗಳು ಸಮಯ ಪಾಲನೆಯನ್ನು ತಪ್ಪದೇ ಮಾಡಬೇಕು. ಉತ್ತರಗಳನ್ನು  ನೀಡುವ ಮುನ್ನ, ಬೇರ್ಯಾವ ವೆಬ್ಸೈಟ್ ಗಳನ್ನು ತೆರೆದು ಮಾಹಿತಿಯನ್ನು ಪಡೆಯಲೆತ್ನಿಸಬಾರದು. ಎಲ್ಲಾ ಮೂರು ತಂಡಗಳ ಚಲನ-ವಲನಗಳ ಮೇಲೆ ನಮ್ಮ ಪ್ರತಿನಿಧಿಗಳು ಹದ್ದಿನ ಕಣ್ಣಿಟ್ಟಿರುತ್ತಾರೆ.  ನಾನು ಅನೊಮೋದಿಸುವ ಯಾವುದೇ ಉತ್ತರವನ್ನು "ವೈದ್ಯರೊಬ್ಬರ ಸಲಹೆ" ಎಂದು ಪರಿಗಣಿಸಬಾರದು. ತಮಗಾಗಲಿ ಅಥವಾ ತಮ್ಮ ಕುಟುಂಬದಲ್ಲಿ ಯಾರಿಗಾದರೂ, ಏನಾದರೂ ಸಮಸ್ಯೆಗಳಿದ್ದಲ್ಲಿ ತಮ್ಮ ಕುಟುಂಬದ ಡಾಕ್ಟರ್ ರವರನ್ನು ಸಂಪರ್ಕಿಸಬೇಕು. ಕ್ವಿಜ್ ಕಾರ್ಯಕ್ರಮ ಈಗ ಪ್ರಾರಂಭವಾಗುತ್ತದೆ.' ಎನ್ನುತ್ತಾ ಡಾ. ಕಿರಣ್ ತಮ್ಮ ದನಿಯನ್ನೇರಿಸಿದ್ದರು. 

ತಂಡ 'ಎ' ಗಾಗಿ ಇಗೋ ನನ್ನ ಮೊದಲ ಪ್ರಶ್ನೆ. 'ಕೊರೋನಾವೈರಾಣು ಎಂದರೇನು?'

ಟೀಮ್ 'ಎ' ಉತ್ತರ ಹೀಗಿತ್ತು: 'ಕೊರೋನಾ ವೈರಾಣುಗಳೆಂಬುದು ವೈರಾಣುಗಳ ಒಂದು ವಂಶ. ಬೇರೆ ಬೇರೆ ರೀತಿಯ ಕೊರೋನಾ ವೈರಾಣುಗಳಿಂದ ಈ ಮುಂಚೆ ಸಾರ್ಸ್ ಮತ್ತು ಮೆರ್ಸ್ (SARS and MERS) ಎಂಬ ರೋಗಗಳು ಹರಡಿವೆ. ಅತ್ಯಂತ ಈಚೆಗೆ ಕೋವಿಡ್-೧೯ ವೈರಾಣುವಿನ ಇರುವಿಕೆಯನ್ನು ಕಂಡುಹಿಡಿಯಲಾಗಿದೆ.'

ಉತ್ತರ ಸರಿಯಾಗಿದೆ. ಮೇರಿ ಮೇಡಂ 'ಎ' ತಂಡಕ್ಕೆ ೧೦ ಅಂಕಗಳನ್ನು ನೀಡುವುದು. ಈಗ ನನ್ನ ಪ್ರಶ್ನೆ 'ಬಿ' ತಂಡಕ್ಕೆ. 

'ಕೋವಿಡ್-೧೯ ಎಂದರೇನು? ಅದನ್ನು ಮಹಾಮಾರಿ (pandemic) ಎಂದೇಕೆ ಕರೆಯುತ್ತಾರೆ?'

ತಂಡ 'ಬಿ' ಯ ಉತ್ತರ ಹೀಗಿತ್ತು: 'ಕೋವಿಡ್-೧೯ ಎಂದರೆ "ಕೊರೋನಾ ವೈರಾಣುವಿನ ರೋಗ-೨೦೧೯ (Corona Virus Disease - 19)" ಎಂದು. ಈ ರೋಗ ಇಡೀ ವಿಶ್ವವನ್ನೇ ಆವರಿಸಿರುವುದರಿಂದ, ವಿಶ್ವ ಆರೋಗ್ಯ ಸಂಸ್ಥೆ ಈ ರೋಗವನ್ನು ಮಹಾಮಾರಿ ಎಂದು ಘೋಷಿಸಿದೆ.'

ಸಂತುಷ್ಟರಾದ ಕಿರಣ್, 'ಚೆನ್ನಾಗಿ ಹೇಳಿದ್ದೀರಿ. ನಿಮಗೀಗ ಹತ್ತು ಅಂಕಗಳು ದೊರೆತಿವೆ' ಎಂದರು. 

'ಕೋವಿಡ್-೧೯ ರೋಗದ ಲಕ್ಷಣಗಳೇನು?' ಇದು 'ಸಿ' ತಂಡಕ್ಕೆ ಕೇಳಿದ ಪ್ರಶ್ನೆಯಾಗಿತ್ತು. 

"ಜ್ವರ, ವಣಗೆಮ್ಮು, ಆಯಾಸ, ಮೂಗು ಕಟ್ಟಿದಂತಾಗುವುದು, ಗಂಟಲ ಕೆರತ, ಭೇದಿ, ವಾಸನೆ ಮತ್ತು ರುಚಿಗಳನ್ನು ಕಳೆದುಕೊಳ್ಳುವುದು, ಚರ್ಮದ ಮೇಲಿನ ಬೊಬ್ಬೆಗಳು ಮತ್ತು ಕೈ -ಕಾಲುಗಳ ಬೆರಳುಗಳು ತಮ್ಮ ಬಣ್ಣವನ್ನು ಕಳೆದುಕೊಳ್ಳುವುದು" ಎಂದುತ್ತರಿಸಿತ್ತು ತಂಡ 'ಸಿ.' 

'ಅಭಿನಂದನೆಗಳು ತಂಡ 'ಸಿ' ಗೆ. ಒಂದನೇ ಸುತ್ತು ಈಗ ಕೊನೆಗೊಂಡಿದೆ. ಎಲ್ಲಾ ತಂಡಗಳು  ೧೦ ಅಂಕಗಳನ್ನು ಗಳಿಸಿ ಸಮಸ್ಥಿತಿಯಲ್ಲಿವೆ. ಇದೀಗ ಎರಡನೇ ಸುತ್ತಿಗೆ ಪ್ರವೇಶಿಸುತ್ತಿದ್ದೇವೆ. ಡಾ. ಕಿರಣ್ ಮುಂದುವರೆಸಿದ್ದರು. 

'ಕೋವಿಡ್-೧೯ರ ಹರಡುವಿಕೆ ಹೇಗಾಗುತ್ತದೆ?'

ತಂಡ 'ಎ' ಉತ್ತರಿಸಿತ್ತು: ಸೋಂಕಿತರು ಕೆಮ್ಮುವಾಗ, ಸೀನುವಾಗ, ಅವರ  ಮೂಗುಗಳಿಂದ, ಬಾಯಿಗಳಿಂದ,  ಸಿಡಿಯುವ ತುಂತುರು ಬೇರೊಬ್ಬರ ಮುಖದ ಮೇಲೆ ಬಿದ್ದರೆ, ರೋಗ ಹರಡಬಹುದು. ಅಂತಹ ತುಂತುರುಗಳಲ್ಲಿನ ವೈರಾಣುಗಳು,  ಬಾಗಿಲ ಹಿಡಿಗಳು ಮತ್ತು ಮೇಜುಗಳ ಮೇಲೂ ಕೂತು ಕೆಲ ಕಾಲ ಜೀವಂತವಾಗಿರಬಹುದು. ಅವುಗಳನ್ನು ನಾವು ಮುಟ್ಟಿ, ಅದೇ ಕೈಗಳಿಂದ ನಮ್ಮ ಮೂಗು, ಬಾಯಿ ಮತ್ತು ಕಣ್ಣುಗಳನ್ನು ಮುಟ್ಟಿಕೊಂಡಾಗ, ರೋಗ ನಮಗೂ ಹರಡಬಹುದು.'

ತಂಡ 'ಎ' ಗೆ ಸಂಪೂರ್ಣ ಅಂಕಗಳನ್ನು ನೀಡಿತ್ತಿದ್ದೇನೆ. ಎರಡನೇ ಸುತ್ತಿನ ಮುಂದಿನ ಪ್ರಶ್ನೆ ಈಗ 'ಬಿ' ತಂಡಕ್ಕೆ. 

'ರೋಗ ಲಕ್ಷಣಗಳಿರದ ವ್ಯಕ್ತಿಯಿಂದ ಕೂಡಾ ರೋಗ ಹರಡಬಲ್ಲುದೆ?'

'ಯಾಕಾಗಬಾರದು?' ಎಂಬುದಾಗಿತ್ತು ತಂಡ 'ಬಿ' ಯ ಉತ್ತರ. 

'ತಮ್ಮ ತಂಡಕ್ಕೆ ಉತ್ತರ ನೀಡುವಲ್ಲಿನ ಪೂರ್ಣ ವಿಶ್ವಾಸ ಕಾಣಿಸಲಿಲ್ಲ. ಆದರೆ ನಿಮ್ಮ ಉತ್ತರ ಸರಿಯಾಗಿದೆ. ಅಂತೂ ಈ ಬಾರಿ ತಮಗೆ ಪೂರ್ಣ ಅಂಕಗಳನ್ನು ನೀಡಿತ್ತಿದ್ದೇನೆ.' ಎಂದರು ಡಾ. ಕಿರಣ್. 

ಮುಂದಿನ ಪ್ರಶ್ನೆ 'ಸಿ' ತಂಡದಾಗಿತ್ತು.  'ರೋಗ ಲಕ್ಷಣಗಳಿಲ್ಲದ ವ್ಯಕ್ತಿಯಿಂದ ರೋಗ ಹರಡುವುದನ್ನು  ನಾವು ಹೇಗೆ ತಡೆಯಬಹುದು?'

'ಎಲ್ಲ ವ್ಯಕ್ತಿಗಳಿಂದ ನಾವು ಒಂದು ಮೀಟರ್ನಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಉತ್ತಮ ಗುಣಮಟ್ಟದ ಮಾಸ್ಕನ್ನು ಯಾವಾಗಲೂ ಧರಿಸಿರಬೇಕು.' 

ಡಾ. ಕಿರಣ್ ಪ್ರತಿಕ್ರಿಯಿಸುತ್ತಾ, 'ಸರಿಯುತ್ತರ. ಆದರೆ ನಾವು ಆಗಾಗ ಸೋಪಿನಿಂದ ಕೈತೊಳೆಯುತ್ತಿರಬೇಕು ಎಂಬ ವಿಧಾನವನ್ನೂ ತಾವು ಹೇಳಬೇಕಿತ್ತು. ಆದರೂ ತಮ್ಮ ತಂಡಕ್ಕೆ ಪೂರ್ಣ ಅಂಕಗಳನ್ನು ನೀಡುತ್ತಿದ್ದೇನೆ' ಎಂದರು. ಎರಡನೇ ಸುತ್ತಿನ ಅಂತ್ಯದ ವೇಳೆಗೆ ಮೂರೂ ತಂಡಗಳು ೨೦ ಅಂಕಗಳನ್ನು ಗಳಿಸಿ ಸಮಸ್ಥಿತಿಯಲ್ಲಿದ್ದವು. 

'ಸ್ವಯಂ-ನಿರ್ಬಂಧ ಎಂದರೇನು?'

ಟೀಮ್ 'ಎ' ಉತ್ತರಿಸುತ್ತಾ, 'ವೈದ್ಯರನ್ನು ಸಂಪರ್ಕಿಸದೆ ಮನೆಯಲ್ಲೇ ಇರುವುದು.' ಎಂದಿತು. 

ಡಾ. ಕಿರಣ್ ಪ್ರತಿಕ್ರಿಯಿಸುತ್ತಾ, 'ತಮ್ಮ ಉತ್ತರದಿಂದ ನನಗೆ ಸಮಾಧಾನವಾಗಿಲ್ಲ. ಅದೇ ಪ್ರಶ್ನೆ ಈಗ ತಂಡ "ಬಿ"ಗೆ ದೊರೆತಿದೆ' ಎಂದರು. 

ಟೀಮ್ 'ಬಿ' ವಿದ್ಯಾರ್ಥಿಗಳು ಉತ್ತರಿಸುತ್ತಾ, 'ಯಾರಲ್ಲಾದರೂ ಕೋವಿಡ್-೧೯ರ ಲಕ್ಷಣಗಳು ಕಂಡುಬಂದಲ್ಲಿ ಅವರುಗಳು ಮನೆಯಲ್ಲೇ ಉಳಿದುಕೊಳ್ಳಬೇಕು. ದೇಹದಲ್ಲಾಗುವ ಮುಂದಿನ ಬೆಳವಣಿಗೆಗಳನ್ನು ಗಮನಿಸುತ್ತಿರಬೇಕು. ಸೋಂಕಿತರ ಪ್ರದೇಶದಲ್ಲಿ ಆ ವ್ಯಕ್ತಿ ವಾಸವಾಗಿದ್ದರೆ, ತಡ ಮಾಡದೆ ಅವರು ವೈದ್ಯರನ್ನು ಸಂಪರ್ಕಿಸಬೇಕು' ಎಂದರು. 

'ಹೆಚ್ಚು ಸಮರ್ಪಕವಾದ ಉತ್ತರ. ತಂಡ "ಬಿ"ಗೀಗ ೫ ಬೋನಸ್ ಅಂಕಗಳು ದೊರೆತಿದೆ' ಎಂದರು. 

'ಕ್ವಾರಂಟೈನಿಂಗ್ ಎಂದರೇನು?' ಇದು ಟೀಮ್ 'ಬಿ' ಗೆ ಕೇಳಿದ, ಮೂರನೇ ಸುತ್ತಿನ  ನೇರ ಪ್ರಶ್ನೆಯಾಗಿತ್ತು. 

'ವ್ಯಕ್ತಿಗೆ ರೋಗ ಲಕ್ಷಣಗಳು ಇಲ್ಲದಿರಬಹುದು. ಆದರೆ ಆ ವ್ಯಕ್ತಿ ಸೋಂಕಿತರೊಬ್ಬರ ಸಂಪರ್ಕವನ್ನು ಮಾಡಿದ್ದಾನೆ ಎಂಬುದು ತಿಳಿದಿರುತ್ತದೆ. ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಯಿಂದ ಕೂಡಾ ರೋಗ ಬೇರೆಯವರಿಗೆ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗುವುದನ್ನು ತಡೆಯಲು ಆ ವ್ಯಕ್ತಿ, ವೈದ್ಯರುಗಳು  ತಿಳಿಸಿದಷ್ಟು ಅವಧಿ ಮನೆಯಲ್ಲೇ ಪ್ರತ್ಯೇಕವಾಗಿರಬೇಕು' ಎಂಬುದು ಟೀಮ್ 'ಬಿ' ಯ ಉತ್ತರವಾಗಿತ್ತು. 

ಡಾ. ಕಿರಣ್ ಸಂತುಷ್ಟರಾಗಿದ್ದರು. 

'ಪ್ರತ್ಯೇಕವಾಗಿರುವುದು ಎಂದರೇನು?' ಎಂಬುದು ಮುಂದಿನ ಪ್ರಶ್ನೆಯಾಗಿತ್ತು. 

ತಂಡ 'ಸಿ' ಉತ್ತರಿಸುತ್ತಾ, 'ಕೋವಿಡ್ ಸೋಂಕಿತರಿಂದ ಬೇರೆಯವರಿಗೆ ರೋಗ ಹರಡದಂತೆ, ಆ ಸೋಂಕಿತರನ್ನು ಪ್ರತ್ಯೇಕವಾಗಿರಿಸಬೇಕು' ಎಂದಿತು. 

'ಇಲ್ಲಿಗೆ ಮೂರು ಸುತ್ತುಗಳು ಮುಗಿದಿವೆ. ತಂಡ "ಎ" ಗೆ ೨೦ ಅಂಕಗಳು, ತಂಡ "ಬಿ" ಗೆ  ೩೫ ಅಂಕಗಳು ಮತ್ತು ಟೀಮ್ "ಸಿ" ಗೆ ೩೦ ಅಂಕಗಳು ದೊರೆತಿವೆ,' ಎಂದರು ಡಾ. ಕಿರಣ್.  

ಈಗ ನಾಲ್ಕನೇ ಸುತ್ತನ್ನು ಪ್ರವೇಶಿಸುತ್ತಿದ್ದೇವೆ. ಈ ಸುತ್ತಿನ ಆರಂಭ ಟೀಮ್ 'ಸಿ' ಯಿಂದ ಆಗುತ್ತದೆ. 

'ಮಕ್ಕಳಿಗೆ ಮತ್ತು ಕಿಶೋರರಿಗೆ ಕೋವಿಡ್-೧೯ರ ರೋಗ ಹರಡಬಹುದೇ?'

'ಮಕ್ಕಳಿಗೂ ಮತ್ತು ಕಿಶೋರರಿಗೂ ಕೋವಿಡ್-೧೯ ಹರಡಬಹುದು' ಎಂಬುದಾಗಿತ್ತು ಟೀಮ್ 'ಸಿ' ಯ ಉತ್ತರ. 

ಅದು ಸರಿಯುತ್ತರವಾದುದರಿಂದ ಟೀಮ್ 'ಸಿ' ಗೆ ೧೦ ಅಂಕಗಳು ದೊರೆತಿತ್ತು. 

'ಕೋವಿಡ್-೧೯ರ ರೋಗಕ್ಕೆ ಲಸಿಕೆ ಮತ್ತು ಔಷಧಗಳಿವೇಯೇ?' ಎಂಬ ಪ್ರಶ್ನೆ ನಾಲ್ಕನೇ ಸುತ್ತಿನ ಪ್ರಶ್ನೆ ತಂಡ 'ಬಿ' ಯದಾಗಿತ್ತು. 

'ಇಲ್ಲ'* (* ಓದುಗರು ಗಮನಿಸಿ: ಈ ಪುಸ್ತಕವನ್ನು ಬರೆದು ಮುಗಿಸಿದನಂತರ, ಕೋವಿಡ್-೧೯ ರೋಗವನ್ನು ತಡೆಯಬಲ್ಲ ಹಲವು ಲಸಿಕೆಗಳು ಬಂದಿವೆ) ಎಂಬ ಸರಿಯುತ್ತರವನ್ನು ತಂಡ 'ಬಿ' ನೀಡಿದಾಗ ಅದಕ್ಕೆ ೧೦ ಅಂಕಗಳು ದೊರೆತಿತ್ತು. 

ಡಾ. ಕಿರಣ್ ನಾಲ್ಕನೇ ಸುತ್ತಿನ ಅಂತಿಮ ಪ್ರಶ್ನೆಯನ್ನು ತಂಡ 'ಎ' ಮುಂದಿಡುತ್ತಾ, 'ಕೋವಿಡ್-೧೯ರ ಸೋಂಕು ತಗುಲಿದ ಮೇಲೆ, ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಎಷ್ಟು ದಿನಗಳು ಬೇಕಾಗಬಹುದು?' ಎಂದರು. 

ತಂಡ 'ಎ' ಉತ್ತರಿಸುತ್ತಾ, 'ಪ್ರಾಯಶಃ ೩ ದಿನಗಳು' ಎಂದಿತು. 

'ತಪ್ಪುತ್ತರ, ಪ್ರಶ್ನೆ ಈಗ ತಂಡ "ಸಿ" ಗೆ ವರ್ಗಾವಣೆಗೊಂಡಿದೆ' ಎಂದರು ಡಾ. ಕಿರಣ್. 

ಟೀಮ್ 'ಸಿ' ಉತ್ತರಿಸುತ್ತಾ, '೧ರಿಂದ ೧೪ ದಿನಗಳು' ಎಂದಿತು. 

ಉತ್ತರದಿಂದ ಸಮಾಧಾನಗೊಂಡ ಡಾ. ಕಿರಣ್ ಟೀಮ್ 'ಸಿ' ಗೆ ೫ ಬೋನಸ್ ಅಂಕಗಳನ್ನು ನೀಡಿದರು. 'ನಾಲ್ಕನೇ ಸುತ್ತಿನ ಅಂತ್ಯದ ವೇಳೆಗೆ, ಟೀಮ್ "ಎ"ಗೆ ೨೦ ಅಂಕಗಳು, ಟೀಮ್ "ಬಿ" ಮತ್ತು ಟೀಮ್ "ಸಿ" ಗಳಿಗೆ ತಲಾ ೪೫ ಅಂಕಗಳು ಇವೆ ಎಂದು ಅಂಕ ಪಟ್ಟಿ ತೋರಿಸುತ್ತಿದೆ. ನಾವೀಗ ಐದನೆಯ ಹಾಗೂ ಅಂತಿಮ ಸುತ್ತನ್ನು ಪ್ರವೇಶಿಸುತ್ತಿದ್ದೇವೆ' ಎಂದರು. 

'ಕೋವಿಡ್ ವೈರಾಣು ಬೇರೆ ಬೇರೆ ಮೇಲ್ಮೈ (surfaces)ಗಳ ಮೇಲೆ ಎಷ್ಟು ಕಾಲ ಜೀವಂತವಾಗಿರುತ್ತದೆ?'

'ಸಿ' ತಂಡದವರು ಉತ್ತರಿಸುತ್ತಾ, 'ಪ್ಲಾಸ್ಟಿಕ್ ಮತ್ತು ಸ್ಟೀಲ್ ಪಾತ್ರೆಗಳ ಮೇಲೆ ೭೨ ಘಂಟೆಗಳು, ತಾಮ್ರದ ಪಾತ್ರೆಗಳ ಮೇಲೆ ೪ ಘಂಟೆಗಳು ಮತ್ತು ಕಾರ್ಡಬೋರ್ಡುಗಳ ಮೇಲೆ ೨೪ ಘಂಟೆಗಳಿಗಿಂತಾ ಕಮ್ಮಿಯಷ್ಟು ಅವಧಿಗಳ ಕಾಲ ಕೋವಿಡ್ ವೈರಾಣು ಜೀವಂತವಾಗಿರುತ್ತದೆ' ಎಂದಿತು. 

'ಸಿ' ತಂಡದ ಉತ್ತರ ಸರಿಯೆಂದು ಡಾ. ಕಿರಣ್ ಘೋಷಿಸಿದ್ದರು. 

'೫ಜಿ ಎಂದರೇನು?'

ಟೀಮ್ 'ಬಿ' ಉತ್ತರಿಸುತ್ತಾ, '೫ಜಿ ಅಥವಾ ೫ನೇ ತಲೆಮಾರು ಎಂಬುದು ಇತ್ತೀಚಿನ ವಿದ್ಯುನ್ಮಾನ ಫೋನ್ ತಂತ್ರಜ್ಞಾನ (wireless cellular phone technology). ಈ ತಂತ್ರಜ್ಞಾನವನ್ನು ೨೦೧೯ರ ನಂತರ ಹೆಚ್ಚು ಉಪಯೋಗಿಸಲಾಗುತ್ತಿದೆ' ಎಂದಿತು. 

ಸರಿಯುತ್ತರವೆಂಬ ಘೋಷಣೆ ಡಾ. ಕಿರಣ್ ರಿಂದ ಬಂದಿತ್ತು. 

'೫ಜಿ ತಂತ್ರ ಜ್ಞಾನದಿಂದ ಆರೋಗ್ಯದ ಸಮಸ್ಯಗಳೇನಾದರೂ ಉಂಟಾಗಬಹುದೇ?'

ಟೀಮ್ 'ಎ'  ಉತ್ತರಿಸುತ್ತಾ, 'ಈ ವರೆಗಿನ ಸಂಶೋಧನೆಗಳ ಪ್ರಕಾರ, ೫ ಜಿ ತಂತ್ರಜ್ಞಾನದ ಬಳೆಕೆಯಿಂದ ಆರೋಗ್ಯದ ಯಾವ ಸಮಸ್ಯೆಯೂ ಉಂಟಾಗದು' ಎಂದಿತು. 

ಡಾ. ಕಿರಣ್ ಪ್ರತಿಕ್ರಿಯಿಸುತ್ತಾ, 'ನಿಮ್ಮ ಉತ್ತರ ಸರಿಯಾಗಿದೆ. ನಿಮಗೆ ಪೂರ್ಣಾಂಕಗಳು. ಆದರೆ ೫ ಜಿ ತಂತ್ರಜ್ಞಾನದಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ ಎಂಬುದನ್ನು ತಮ್ಮಗಳಿಗೆ ತಿಳಿಸಲಿಚ್ಛಿಸುತ್ತೇನೆ. 

'ಇಲ್ಲಿಗೆ ೫ನೇ ಮತ್ತು ಅಂತಿಮ ಸುತ್ತು ಮುಗಿದಿದೆ. ತಂಡ "ಎ" ಗೆ ೩೦ ಅಂಕಗಳು, ತಂಡ "ಬಿ" ಮತ್ತು "ಸಿ" ಗಳಿಗೆ ತಲಾ ೫೫ ಅಂಕಗಳು ದೊರೆತಿವೆ. ಈಗ ತಂಡ "ಬಿ" ಮತ್ತು "ಸಿ" ತಂಡಗಳ ನಡುವೆ "ಟೈ-ಬ್ರೇಕರ್ (tie-breaker)" ಸುತ್ತು ನಡೆಯಬೇಕು. ಈ ಹೊಸ ಸುತ್ತನ್ನು "ಬಝರ್ ಸುತ್ತು (buzzer round)" ಎಂದು  ಕರೆಯೋಣ. ನಾನು ಪ್ರಶ್ನೆಯೊಂದನ್ನು ಕೇಳುತ್ತೇನೆ. ಬಝರ್  ಅನ್ನು ಯಾವ ತಂಡವು ಮೊದಲು ಒತ್ತುವುದೋ ಆ ತಂಡಕ್ಕೆ ಉತ್ತರವನ್ನು ನೀಡುವ ಅವಕಾಶವನ್ನು ನೀಡಲಾಗುವುದು. ಸರಿಯುತ್ತರಕ್ಕೆ ೧೦ ಅಂಕಗಳು. ಬಝರ್ ಒತ್ತಿದ ಮೇಲೂ ತಪ್ಪುತ್ತರ ನೀಡಿದರೆ "-೧೦ (minus ೧೦)" ಅಂಕಗಳನ್ನು ನೀಡಲಾಗುವುದು' ಎಂದರು. 

'ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?' ಎಂಬುದು ಬಝರ್ ಸುತ್ತಿನ ಪ್ರಶ್ನೆಯಾಗಿತ್ತು. 

'ಬಿ' ಮತ್ತು 'ಸಿ' ತಂಡಗಳ ನಡುವೆ ಒಂದು ನಿಮಿಷದ ಮೌನ ಆವರಿಸಿತ್ತು. ಅಂತಿಮವಾಗಿ ತಂಡ 'ಸಿ' ಬಝರ್ ಒತ್ತಿತ್ತು. 

ತಂಡ 'ಸಿ' ಉತ್ತರಿಸುತ್ತಾ 'ಜಿನೀವಾ, ಸ್ವಿಟ್ಜರ್ಲ್ಯಾಂಡ್' ಎಂದಿತು. 

ಸರಿಯುತ್ತರ ಎಂದು ಘೋಷಿಸಿದ ಡಾ. ಕಿರಣ್, 'ಸಿ' ತಂಡಕ್ಕೆ ೧೦ ಅಂಕಗಳನ್ನು ನೀಡಿದರು. ಒಟ್ಟು ೬೫ ಅಂಕಗಳನ್ನು ಗಳಿಸಿದ ತಂಡ 'ಸಿ' ಅನ್ನು ವಿಜೇತ ತಂಡವೆಂದು ಘೋಷಿಸಲಾಯಿತು. 'ತಂಡ "ಸಿ" ಗೆ ನಮ್ಮೆಲ್ಲರ ಅಭಿನಂದನೆಗಳು' ಎಂದರು ಡಾ. ಕಿರಣ್. ಪರದೆಯ ಮೇಲಿನ 'ಡೈಲಾಗ್ ಬಾಕ್ಸ್'ನಲ್ಲಿ, ತಂಡ 'ಸಿ' ಗೆ  ನೂರಾರು ಅಭಿನಂದನಾ ಸಂದೇಶಗಳು ಮೂಡಿ ಬಂದಿದ್ದವು. 

ಕ್ವಿಜ್ನ ಕಾರ್ಯಕ್ರಮ ಪ್ರಿನ್ಸಿಪಾಲರಾದ ಭವಾನಿಯವರ ಭಾಷಣದೊಂದಿಗೆ ಮುಗಿದಿತ್ತು. ಕ್ವಿಜ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದಕ್ಕೆ ಡಾ. ಕಿರಣ್ ರವರಿಗೆ ವಂದನೆಗಳನ್ನು ಭವಾನಿಯವರು ಅರ್ಪಿಸಿದ್ದರು. 

ಶಾಲಾ ಕಾರ್ಯಕ್ರಮವನ್ನು ಮುಗಿಸಿ ಮನೆಗೆ ಬಂದ ಕಿರಣನನ್ನು ಮೊದಲು ಅಭಿನಂದಿಸಿದವಳು ರೋಹಿಣಿ. 'ಇಡೀ ಕಾರ್ಯಕ್ರಮವನ್ನು ನಾನೂ ವೀಕ್ಷಿಸಿದೆ. ನೀನೊಬ್ಬ ವೃತ್ತಿಪರ ಕ್ವಿಜ್ ಮಾಸ್ಟರನಂತೆ ಕಾಣಿಸುತ್ತಿದ್ದೆ. ಕೊರೋನಾ ಬಗ್ಗೆ ನಿನಗೆ ಅಪಾರ ಜ್ಞಾನವಿರಬಹುದು. ನೀನೊಬ್ಬ 'ಗ್ರೇಟ್' ಎಂದಿಟ್ಟುಕೊಳ್ಳೋಣ.  ಆದರೆ ನನ್ನಿಂದ ನಿನಗೊಂದು ಪ್ರಶ್ನೆ.  ಸರಿಯುತ್ತರ ನೀಡ ಬಲ್ಲೆಯಾ?' ರೋಹಿಣಿ ತನ್ನ ಗೆಳಯ ಕಿರಣನಿಗೆ ಸವಾಲನ್ನೆಸೆದಿದ್ದಳು. ಕಿರಣ್ ತಯಾರಾಗೇ ನಿಂತಿದ್ದನು. 

'ಕೊರೋನಾವನ್ನು, ಕೊರೋನಾ ಎಂದು ಏಕೆ ಕರೆಯಲಾಗುತ್ತದೆ?' ಎಂಬುದು ರೋಹಿಣಿಯ ಸವಾಲಿನ ಪ್ರಶ್ನೆಯಾಗಿತ್ತು. 

'ಇದೆಂತಹ ಪ್ರಶ್ನೆ?' ಎಂದ ಕಿರಣ್, ಉತ್ತರವನ್ನು ನೀಡಲು ತಡಕಾಡಿದನು. ಆದರೆ ರೋಹಿಣಿಗೆ ಸರಿಯುತ್ತರ ತಿಳಿದಿತ್ತು. ಅವಳು ವಿವರಿಸುತ್ತಾ, 'ಕೋವಿಡ್-೧೯ರ ವೈರಾಣು ಕೊರೋನಾ ವಂಶಕ್ಕೆ ಸೇರಿದ್ದು. ನಾವುಗಳು ಟಿ.ವಿ.ಯಲ್ಲಿ ನೋಡುವಂತೆ ಕೊರೋನಾ ವೈರಾಣುವಿನ ಮೇಲಿನ ಹೊದಿಕೆಯ ಸುತ್ತ ಮೊಳೆಗಳು (ಸ್ಪೈಕ್ಸ್) ಇದ್ದು, ಆ ವೈರಾಣು ಕಿರೀಟದಂತೆ ಕಾಣುತ್ತದೆ. ಕಿರೀಟ (crown)ದ ಆಕಾರವಿರುವ ವೈರಾಣುವನ್ನು ವಿಜ್ಞಾನಿಗಳು "ಕೊರೋನಾ" ಎಂದು ಕರೆದಿದ್ದಾರೆ' ಎಂದಳು. 

'ಸರಿ ಮೇಡಂ, ನಾನಲ್ಲ, ನೀವೇ  ಗ್ರೇಟ್!, ನಿಮಗಿದೋ ಶರಣು. ಮತ್ತೇನಾದರೂ ಪ್ರಶ್ನೆಯನ್ನು ತಾವು ನನಗೆ ಕೇಳುವವರಿದ್ದೀರಾ?' ಎಂದವನು ಕಿರಣ್. 

ನಿಯತ ಕಾಲಿಕ (Magazine) ಒಂದನ್ನು ನೋಡುತ್ತಿದ್ದ ರೋಹಿಣಿ ಕಿರಣನಿಗೆ ಮತ್ತೊಂದು ಪ್ರಶ್ನೆಯನ್ನು ಕೇಳಿದ್ದಳು. 'ಕೋವಿಡ್-೧೯ರ ವೈರಾಣು ಮಿಕ್ಕ ಕೋರೋನ  ವೈರಾಣುಗಳಿಗಿಂತ ಹೆಚ್ಚು ಅಪಾಯಕಾರಿ ಏಕೆ?'

ಕಿರಣ್ ಉತ್ತರಿಸುತ್ತಾ, 'ಇದನ್ನೇ ನೋಡು ರೋಹಿಣಿ, "ಚೀಟಿಂಗ್" ಅನ್ನೋದು. ಮ್ಯಾಗಜಿನ್ ಒಂದನ್ನು ನೋಡಿಕೊಂಡು ಪ್ರಶ್ನೆ ಕೇಳೋದು ತಪ್ಪು. ಆದರೂ ನಿನ್ನ ಪ್ರಶ್ನೆಗೆ ಉತ್ತರ ಹೇಳ್ತೀನಿ, ಕೇಳು. ೨೦ ವರ್ಷಗಳ ಹಿಂದೆ ಪ್ರಪಂಚವನ್ನು ಕಾಡಿದ ಸಾರ್ಸ್ ವೈರಾಣು ಕೋವಿಡ್-೧೯ರ ತರಹದ ಸರಣಿ ಹತ್ಯಾಕಾರನಾಗಿತ್ತಿಲ್ಲ. ರೋಗ ಲಕ್ಷಣಗಳಿಲ್ಲದ ವ್ಯಕ್ತಿಯೊಬ್ಬನಲ್ಲಿ ಕೋವಿಡ್-೧೯ರ ವೈರಾಣು ಅಡಗಿ ಕುಳಿತುಕೊಳ್ಳಬಹುದು. ಆ ರೀತಿಯ ಲಕ್ಷಣಗಳಿಲ್ಲದ ವ್ಯಕ್ತಿಗಳೂ ರೋಗವನ್ನು ಹರಡಬಲ್ಲರು. ಸಾರ್ಸ್ ವೈರಾಣುವಿಗೆ ಈ ರೀತಿಯ ಸಾಮರ್ಥ್ಯವಿತ್ತಿಲ್ಲ. ನಮ್ಮ ದೇಹದೊಳಗಿರುವ ಉಸಿರಾಟದ ಕೊಳವೆ ಮತ್ತು ಶ್ವಾಸಕೋಶಗಳಲ್ಲಿರುವ "ಎಂಜೈಮ್ (enzyme)"ಗಳೊಂದಿಗೆ ಅಂಟಿ ಕೂರಬಲ್ಲ ಸಾಮರ್ಥ್ಯವನ್ನು ಕೋವಿಡ್-೧೯ರ ವೈರಾಣು ಬೆಳಸಿಕೊಂಡಿದೆ. ಸಾರ್ಸ್ ವೈರಾಣುವಿಗೆ ಈ ಸಾಮರ್ಥ್ಯವೂ ಇತ್ತಿಲ್ಲ. ಇವೆರಡು ಕಾರಣಗಳಿಂದ ಕೋವಿಡ್-೧೯ರ ವೈರಾಣು, ನಾವು ಹಿಂದೆ ಕಂಡ  ಸಾರ್ಸ್ ಮತ್ತು ಮೆರ್ಸ್ ವೈರಾಣುಗಳಿಗಿಂತಾ ಹೆಚ್ಚು ಅಪಾಯಕಾರಿಯಾಗಿದೆ,' ಎಂದಾಗ, ರೋಹಿಣಿ ತನ್ನ ಗೆಳೆಯನ ಜ್ಞಾನ ಭಂಡಾರಕ್ಕೆ ತಲೆದೂಗಿದ್ದಳು. 

ಕಿರಣ್ ಮಾತನಾಡುತ್ತ, 'ಕಳೆದ ೧೦ ದಿನಗಳ ರಜೆಯ ಸಮಯವನ್ನು ನಾವುಗಳು ಸೃಜನಾತ್ಮಕವಾಗಿ ಕಳೆದಿದ್ದೇವೆ. ನೀನು ಏರ್ಪಾಡು ಮಾಡಿದ್ದ "ಪ್ರಕೃತಿಯ ಪ್ರವಾಸ" ಸೊಗಸಾಗಿತ್ತು. "ಪ್ರಕೃತಿಯ ಸಮತೋಲವನ್ನು ಕೆದಕುವುದು ಬೇಡ" ಎಂಬುದು ಒಂದು ದೊಡ್ಡ ಪಾಠ. ಪ್ರಕೃತಿಯನ್ನು ವಿನಾಶಗೊಳಿಸುತ್ತಾ ಹೋದರೆ ನಾವುಗಳು ವಿನಾಶ ಹೊಂದುವುದು ಖಂಡಿತ,' ಎಂದನು. 

'ಹೌದು, ಕಿರಣ್. ನೀನು ಮತ್ತೆ ಮತ್ತೆ ಹೇಳುತ್ತಿರುವಂತೆ, ದೈಹಿಕ ಅಂತರ, ಮಾಸ್ಕ್ ಧಾರಣೆ ಮತ್ತು ಸೋಪಿನಿಂದ ಆಗ್ಗಾಗೆ ಕೈಗಳನ್ನು ತೊಳೆದುಕೊಳ್ಳುವಂತಹ ಸರಳ ವಿಧಾನಗಳಿಂದ ಕೋವಿಡ್ ಮಹಾಮಾರಿಯನ್ನು ತಡೆಯಲು ಸಾಧ್ಯ. ಎಲ್ಲೆಂದರಲ್ಲಿ ಉಗಿಯುವ ಕೆಟ್ಟ ಅಭ್ಯಾಸ ನಮ್ಮ ದೇಶದಲ್ಲಿ ಕೊನೆಗೊಳ್ಳಬೇಕು. ಕೊರೋನಾ ಕಾರ್ಯಕರ್ತರುಗಳನ್ನು ಗೌರವಿಸಬೇಕು.' ಎಂದು ಪುನರುಚ್ಛರಿಸಿದವಳು ರೋಹಿಣಿ. 

'ರೋಹಿಣಿ, ಕೋವಿಡ್-೧೯ ಎಂಬುದು ಮನುಕುಲಕ್ಕೆ, ಹಿಂದೆಂದೂ ಕಂಡು ಕೇಳರಿಯದ  ಬದಲಾವಣೆಗಳನ್ನು ತಂದು ನಿಲ್ಲಿಸಿರುವುದನ್ನೂ ನೀನು ಗಮನಿಸಿದ್ದೀಯಾ ಎಂದುಕೊಂಡಿದ್ದೇನೆ. "ಕೋವಿಡ್ ನಂತರದ (After Covid ಅಥವಾ A.C.) ಅಭ್ಯಾಸಗಳು ಮತ್ತು ಕೋವಿಡ್ ಮುಂಚಿನ (Before Covid ಅಥವಾ B.C.)" ಅಭ್ಯಾಸಗಳಿಗೂ ಭಾರೀ ವ್ಯತ್ಯಾಸವಿರುತ್ತದೆ. ಕೋವಿಡ್ ಬಂದನಂತರ A.C. ಮತ್ತು B.C. ಎಂಬ "ಹ್ರಸ್ವ(acronym)"ಗಳ ಪರಿಭಾಷೆಯೇ ಬದಲಾಗಿದೆ' ಎಂಬ ಅಂಶವನ್ನೂ ನೀನು ವಿಶ್ಲೇಷಿಸಬೇಕು. 

ಆನ್ಲೈನ್ ಶಿಕ್ಷಣವೆಂಬುದು, ಈಗ ಶಿಕ್ಷಣ ಪದ್ಧತಿಯ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಸಾಂಪ್ರದಾಯಿಕ ಶಾಲಾ ಕೊಠಡಿಯ ಕಲಿಕೆಯೊಂದಿಗೆ ಅದು ಮುಂದುವರೆಯಲಿದೆ.' ಕಿರಣ್ ಪಟ್ಟಿ ಮಾಡಿದ ಅಂಶಗಳೆಲ್ಲವನ್ನೂ, ರೋಹಿಣಿ ತನ್ನ ಸಂಶೋಧನಾ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದಳು. 

-೦-೦-೦-೦-೦-೦-  


     

 





                                        




No comments:

Post a Comment