Monday, 10 March 2025

Punjab - 2

ಸಿಖ್ಖರ ಮಾರಣಹೋಮ 

ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಹತ್ಯೆಯಾದ ಬೆನ್ನಲ್ಲೇ, ದಿಲ್ಲಿ ಮತ್ತಿತರ ಉತ್ತರ ಭಾರತದ ಪಟ್ಟಣಗಳಲ್ಲಿ ನಡೆದ ಸಿಖ್ಖರ ಮಾರಣಹೋಮ, ಭೂಮಂಡಲದಲ್ಲಿ ನಡೆದ ದಾರುಣ ನರಮೇಧಗಳಲ್ಲೊಂದು. ಇಂದಿರಾ ಗಾಂಧಿಯವರ ಹತ್ಯೆಯನ್ನು ಮಾಡಿದವರು ಅವರ ಅಂಗರಕ್ಷಕರಾದ ಇಬ್ಬರು ಸಿಖ್ ಪೊಲೀಸ್ ಕರ್ಮಚಾರಿಗಳು ಎಂಬ ಸುದ್ದಿ ಅಂದು ದಿಲ್ಲಿಯಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ರೊಚ್ಚಿಗೆದ್ದ ದಂಗೆಕೋರರು 'ಖೂನ ಕಾ ಬದ್ಲಾ ಖೂನ್, ಅಂದರೆ ರಕ್ತಕ್ಕೆ ರಕ್ತ ಹರಿಸುವುದೇ ಪ್ರತೀಕಾರ' ಎಂಬ ಘೋಷಣೆಯನ್ನು ಕೂಗುತ್ತಾ 2733 ಸಿಖ್ಖರ ಹತ್ಯೆಯನ್ನು ಮಾಡಿದ್ದು ನಾಗರೀಕ ಭಾರತದ ಇತಿಹಾಸದಲ್ಲಿ ಮಾಸದೊಂದು ಕಪ್ಪುಚುಕ್ಕೆ. ದಿಲ್ಲಿಯಿಂದ ದೂರದ ಝಾರ್ಖಂಡ್ನ ಬೊಕಾರೊ ಜಿಲ್ಲೆ, ಉತ್ತರಪ್ರದೇಶದ ಕಾನ್ಪುರ್ ಮತ್ತಿತರ ಸ್ಥಳಗಳಲ್ಲಿ ಹತ್ಯೆಯಾದ 586 ಸಿಖ್ಖರು ಸೇರಿದಂತೆ, ಒಟ್ಟು 2733 ಸಿಖ್ಖರ ಹತ್ಯೆ ಎಂಬುದು ಅಂದಿನ ಕೇಂದ್ರ ಸರಕಾರದ ಅಧಿಕೃತ ಅಂಕಿಅಂಶ ಮಾತ್ರ. ವಾಸ್ತವದಲ್ಲಿ 3870 ಸಿಖ್ಖರ ಹತ್ಯೆಯಾಯಿತು ಎಂಬುದು ಸತ್ಯಾಂಶ ಶೋಧನೆಯ ಹೋರಾಟಗಾರರ ವಾದ. 

ಸಿಖ್ಖರ ಮಾರಣಹೋಮ 1984ರಲ್ಲೇ ನಡೆದ ದುರ್ಘಟನೆಯಾದರೂ, ಅದರ ವಿವರಗಳು ಬೆಳಕಿಗೆ ಬಂದದ್ದು ಸುಮಾರು 20 ವರ್ಷಗಳನಂತರವೇ. ಮಾರಣಹೋಮ ನಡೆದ ಬೆನ್ನಲ್ಲೇ, ಅಂದರೆ 1985ರಲ್ಲಿ ರಚಿತವಾದ ನ್ಯಾಯಮೂರ್ತಿ ರಂಗನಾಥ ಮಿಶ್ರ  ಆಯೋಗ ಸತ್ಯಶೋಧನೆಗಿಂತ, ನಡೆದ ನರಮೇಧದ ದೋಷಾರೋಪಗಳನ್ನು ಮುಚ್ಚಿಹಾಕುವುದರಲ್ಲೇ ನಿರತವಾಗಿತ್ತು ಎಂಬುದು ಬಲ್ಲ ವಲಯಗಳಿಂದ ಅಂದು ಕೇಳಿಬಂದ ಆರೋಪ.  ಮೇ 2000ರಲ್ಲಿ, ಅಂದಿನ ವಾಜಪೇಯೀ ಸರಕಾರ  ನೇಮಿಸಿದ ನ್ಯಾಯಮೂರ್ತಿ ಜಿ.ಟಿ.ನಾನಾವತಿ ಆಯೋಗ ತನ್ನ 2005ರ  ವರದಿಯಲ್ಲಿ ಮಾರಣಹೋಮದ ಸವಿಸ್ತಾರ ವರದಿಯನ್ನು ನೀಡಿತು. ಆದರೂ ವರದಿಯನ್ನು ಸ್ವೀಕರಿಸಿದ ಪ್ರಧಾನಿ ಮನಮೋಹನ್ ಸಿಂಗ್ ರವರು, ಪೂರ್ಣ ಸತ್ಯಾಂಶ ಇನ್ನೂ ಬೆಳಕಿಗೆ ಬರಲೇ ಇಲ್ಲ ಎಂದು ವಿಷಾದಿಸಿದ್ದು, ಸತ್ಯಶೋಧನೆಗೆ ಶ್ರಮಿಸಿದ ಹಲವಾರು ವ್ಯಕ್ತಿಗಳ ಮನೋವೇದನೆಗೆ ಹಿಡಿದ ಕನ್ನಡಿಯಂತಿತ್ತು. 

ಇಂದಿರಾ ಹತ್ಯೆಯನಂತರದ ಅವರ ಮೊದಲ ಜನ್ಮದಿನ, ಅಂದರೆ ನವೆಂಬರ್ 19, 1984ರಂದು ಅಂದಿನ ನೂತನ ಪ್ರಧಾನಿ ರಾಜೀವ್ ಗಾಂಧಿಯವರು ಭಾಷಣ ಮಾಡುತ್ತಾ 'ಭಾರಿ ಮರವೊಂದು ಕೆಳಗುರುಳಿದಾಗ, ಭೂಮಿಗೆ ಸ್ವಲ್ಪ ಹಾನಿಯಾಗುವುದು ಸ್ವಾಭಾವಿಕ' ಎಂದು ಹೇಳಿದ್ದು ಪ್ರಜ್ಞಾವಂತರ ಹುಬ್ಬೇರುವಂತೆ ಮಾಡಿದ್ದು ಸಹಜವೇ ಆಗಿತ್ತು. ಅಂದು ಸಿಖ್ಖರ ಮೇಲೆ ನಡೆದ ನರಮೇಧವನ್ನು ಖಂಡಿಸಿ ವಿಷಾದ ವ್ಯಕ್ತಪಡಿಸುವ ಬದಲು, ಭಾರಿ ಮರ ಧರೆಗುರುಳಿದ ಉಪಮಾನವನ್ನು ನೀಡಿ ರಾಜೀವ್ ಗಾಂಧಿಯವರು ನಡೆದ ದುರ್ಘಟನೆಯನ್ನು ಸಮರ್ಥಿಸಿಕೊಂಡಂತಿತ್ತು.  ಸಿಖ್ಖರ ನರಮೇಧ 1984ರ ನವೆಂಬರ್ 1ರಿಂದ 5ರ ವರಗೆ ನಡೆದ ದುರ್ಘಟನೆಯಾದರೂ, ಜನವರಿ 1985ರಲ್ಲೂ ರಾಜೀವ್ ಗಾಂಧಿಯವರು ತನಿಖಾ ಆಯೋಗದ ರಚನೆಯ ವಿಷಯವನ್ನು ತಳ್ಳಿಹಾಕುತ್ತಲೇ ಬಂದಿದ್ದರು. ತನಿಖೆ ಎಂಬುದು ಮಾಸಿಹೋದ ಗಾಯವನ್ನು ಕೆದಕಿದಂತೆ ಎಂಬುದು ಅವರ ಅಭಿಪ್ರಾಯವಾಗಿತ್ತು.  ಆದರೂ ಆ ದಿನಗಳಲ್ಲಿನ ಪಂಜಾಬ್ ಸಮಸ್ಯೆಯನ್ನು ನಿವಾರಿಸಲು  'ಪಂಜಾಬ್  ಒಪ್ಪಂದ'ಕ್ಕೆ ಕೈಚಾಚಿದ ರಾಜೀವ್ ಗಾಂಧಿಯವರು, ಅಂದಿನ ಸಿಖ್ ಸಮುದಾಯದ ನಾಯಕ ಹರಚಂದ್ ಸಿಂಗ್ ಲೋಂಗೋವಾಲ್ ಅವರ ಒತ್ತಡಕ್ಕೆ ಮಣಿದು ನ್ಯಾಯಮೂರ್ತಿ ರಂಗನಾಥ ಮಿಶ್ರ ಆಯೋಗವನ್ನು ಏಪ್ರಿಲ್ 1985ರ ಸಮಯದಲ್ಲಿ ರಚಿಸಬೇಕಾಗಿಬಂತು.  ಒಲ್ಲದ ಮನಸ್ಸಿನಿಂದ ರಚಿತವಾದ ರಂಗನಾಥ ಮಿಶ್ರ ಆಯೋಗ ಸುರಕ್ಷತೆಯ ನೆಪದಲ್ಲಿ ವಿಚಾರಣೆಗಳನ್ನು ಗುಪ್ತವಾಗೇ ನಡೆಸಿತು. ಸಿಖ್ ನರಮೇಧದಲ್ಲಿ ಕಾಂಗ್ರೆಸ್  ಹಾಗೂ ಅದರ ಮುಂಚೂಣಿಯ ಯಾವ ನಾಯಕನ ಪಾತ್ರವೂ ಇರಲಿಲ್ಲವೆಂಬ  ನಿರ್ಣಯವನ್ನು ಎತ್ತಿಹಿಡಿದ ರಂಗನಾಥ್ ಮಿಶ್ರ ಆಯೋಗ, ಕೆಲವೇ ಕೆಲವು ಕೆಳಮಟ್ಟದ ಕಾಂಗ್ರೆಸ್ ಕರ್ಮಚಾರಿಗಳು ದೋಷಿಗಳೆಂಬ ಆರೋಪವನ್ನು ಹೊರಿಸಿತು.  

ಮೇ 2000ರಲ್ಲಿ ರಚಿತವಾದ ನಾನಾವತಿ ಆಯೋಗ ಪಾರದರ್ಶಕವಾಗಿ ಕೆಲಸ ಮಾಡಿತಾದರೂ, ಹೆಚ್ಚಿನ ಸತ್ಯಶೋಧನೆಯನ್ನೇನೂ ಮಾಡಲಾಗಲಿಲ್ಲ. ಅಂದಿನ ನೂತನ ಪ್ರಧಾನಿ ರಾಜೀವ್ ಗಾಂಧಿಯವರು ತಮ್ಮ ತಾಯಿಯವರ ಹತ್ಯೆಯಿಂದ ರೋಷಗೊಂಡು 'ಸಿಖ್ ಸಮುದಾಯಕೊಂದು ಪಾಠವನ್ನು ಕಲಿಸಿ' ಎಂದು ತಮ್ಮ ಆಪ್ತರಿಗೆ ಆದೇಶವನ್ನು ನೀಡಿದರು ಎಂಬ ಆರೋಪವನ್ನು ಪರಿಶೀಲಿಸಿದ ನಾನಾವತಿ ಆಯೋಗ ಆ ಆರೋಪ ಮಾಡಿದ್ದಕ್ಕೆ ಯಾವ ಸಾಕ್ಷ್ಯಾಧಾರಗಳೂ ಇರಲಿಲ್ಲವೆಂದು ಅಭಿಪ್ರಾಯಪಟ್ಟಿತು. ರಾಜೀವ್ ಗಾಂಧಿಯವರು ಸಿಖ್ಖರ ವಿರುದ್ಧದ ದಂಗೆಯ ನಿಯಂತ್ರಣಕ್ಕೆ ತೋರಿದ ಕಾಳಜಿಯನ್ನು ಮತ್ತು ಕಾರ್ಯಾಚರಣೆಯನ್ನು ಆಯೋಗ ಪ್ರಶಂಸೆ ಮಾಡಿತ್ತು. 

ನಾನಾವತಿ ಆಯೋಗ ಅಂದಿನ ಕೇಂದ್ರಮಂತ್ರಿ ಜಗದೀಶ್ ಟೈಟ್ಲರ್ ಅವರನ್ನು ತಪ್ಪಿತಸ್ಥರು ಎಂದು ಘೋಷಿಸಿ, ಅವರ ಮೇಲೆ ಮುಂದಿನ ಕ್ರಮಗಳನ್ನು ಜರುಗಿಸುವಂತೆ ಮಾಡಿದ ಶಿಫಾರಸನ್ನು ಕೇಂದ್ರ ಸರಕಾರ ತಿರಸ್ಕರಿಸಿತು. ಸರಕಾರಕ್ಕೆ ಬೆಂಬಲ ನೀಡಿದ ಕೆಲವು ಪಕ್ಷಗಳು ಸೇರಿದಂತೆ ಎಲ್ಲಾ ಪ್ರತಿಪಕ್ಷಗಳೂ ಸರಕಾರದ ಕ್ರಮವನ್ನು ಅಂದು ಖಂಡಿಸಿದ್ದವು. ಅದರ ಫಲವಾಗಿ,  ಜಗದೀಶ್ ಟೈಟ್ಲರ್ ಅವರು ಆ ದಿನಗಳಲ್ಲಿ ತಮ್ಮ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತೇ ಹೊರತು ಅವರ ಮೇಲೆ ಯಾವ ಕ್ರಮವನ್ನು ಸರಕಾರ ಜರುಗಿಸಲಿಲ್ಲ.

ಸಿಖ್ಖರ ನರಮೇಧ ನಡೆದು ಈಗ ನಾಲ್ಕು ದಶಕಗಳೇ ಉರುಳಿಹೋಗಿವೆ. ಈವರೆಗೆ 26 ಪ್ರಕರಣಗಳಲ್ಲಿ 441 ಜನ ದಂಗೆಕೋರರಿಗೆ ಮಾತ್ರ ಶಿಕ್ಷೆಯಾಗಿದೆ.  ಭಾರಿ ನಾಯಕರುಗಳ ಪೈಕಿ, ಕಾಂಗ್ರೆಸ್ ನೇತ ಸಜ್ಜನ್ ಕುಮಾರ್ ಅವರಿಗೆ ಮಾತ್ರ ಕೋರ್ಟ್ ನಿರ್ಣಯದಂತೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬೇರ್ಯಾವ ಉನ್ನತ ನಾಯಕರಿಗೂ ಇಂದಿಗೂ ಶಿಕ್ಷೆಯಾಗದಿರುವದು, ಆಡಳಿತದ ಸೂತ್ರವನ್ನು ಹಿಡಿದಿರುವವರು ತಮ್ಮ ಹಿತವನ್ನು ಕಾಯ್ದುಕೊಳ್ಳುವುದರಲ್ಲಿ ಎಷ್ಟು ಸಮರ್ಥರಿರುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. 

ನಾನಾವತಿ ಆಯೋಗದ ವರದಿಯಿಂದಲೂ ಸತ್ಯ ಹೊರಬರಲಿಲ್ಲ ಎಂದು ವಿಷಾದಿಸಿದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರವರು, ರಾಷ್ಟ್ರದ ಕ್ಷಮೆಕೋರಿದ್ದು ಈಗ ಇತಿಹಾಸ. '1984ರ ಸಿಖ್ಖರ ನರಮೇಧಕ್ಕಾಗಿ ನಾನು ಸಿಖ್ ಸಮುದಾಯದ ಹಾಗೂ ಇಡೀ ದೇಶದ ಜನತೆಯ ಕ್ಷಮೆಯನ್ನು ಕೇಳುತ್ತೇನೆ. ಸಿಖ್ಖರ ವಿರುದ್ಧ ನಡೆದ ನರಮೇಧ, ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ರಾಷ್ಟ್ರೀಯ ಧ್ಯೇಯಗಳನ್ನು ನಕಾರಗೊಳಿಸಿದೆ. ಕೇಂದ್ರ ಸರಕಾರದ ಪರವಾಗಿ ಮತ್ತು ಭಾರತದ ಜನತೆಯ ಪರವಾಗಿ ನಾನು ಕ್ಷಮೆಕೇಳುತ್ತಾ ತಲೆ ಬಾಗಿಸುತ್ತೇನೆ' ಎಂದು ಮನಮೋಹನ್ ಸಿಂಗ್ ರು ಅಂದು ಕೇಳಿದ ಕ್ಷಮಾಪಣೆ, ಸಂವೇದನಾಶೀಲ ಭಾರತದ ಆತ್ಮದ ಪ್ರತಿಧ್ವನಿಯಾಗಿತ್ತು. 

ಇಂದಿರಾ ಗಾಂಧಿಯವರ ಹತ್ಯೆಯಾದ ದಿನ ಭಾರತದ ರಾಷ್ಟ್ರಾಧ್ಯಕ್ಷರಾದ ಜೈಲ್ ಸಿಂಗ್ ರವರು ವಿದೇಶ ಪ್ರವಾಸದಲ್ಲಿದ್ದರು. ಹತ್ಯೆಯ ಸುದ್ದಿ ಕೇಳಿ ದಿಗ್ಭ್ರಾಂತರಾದ ಜೈಲ್ ಸಿಂಗರು ತಮ್ಮ ವಿದೇಶ ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಿ, ಅಂದು ಸುಮಾರು ಸಂಜೆ 4.45ಕ್ಕೆ ಇಂದಿರಾ ಗಾಂಧಿಯವರ ಪಾರ್ಥಿವ ಶರೀರವಿದ್ದ ಏಮ್ಸ್ ಆಸ್ಪತ್ರೆಗೆ ಬಂದರು. ಇಂದಿರಾ ಗಾಂಧಿಯವರು ಮರಣ ಹೊಂದಿರುವರೆಂಬ ಸುದ್ದಿ ಮಧ್ಯಾಹ್ನ 1 ಗಂಟೆ ಹೊತ್ತಿಗಾಗಲೇ ಏಮ್ಸ್ ಆಸ್ಪತ್ರೆಯ ಸುತ್ತಾ ನೆರೆದಿದ್ದ ಜನಜಂಗುಳಿಗೆ ತಿಳಿದಿತ್ತು. ಇಂದಿರಾ  ಹತ್ಯೆಯನ್ನು ಮಾಡಿದ್ದು ಅವರ ಅಂಗರಕ್ಷರಾದ ಇಬ್ಬರು ಸಿಖ್ ಪೊಲೀಸ್ ಕರ್ಮಚಾರಿಗಳು ಎಂಬುದು ಅಂದು ಕೆಲವು ಸಮಾಜ ವಿರೋಧಿ ಶಕ್ತಿಗಳನ್ನು ಕೆರಳಿಸಿತ್ತು. ಏಮ್ಸ್ ಆಸ್ಪತ್ರೆಯ ಬಳಿ ನೆರೆದಿದ್ದ ಜನಜಂಗುಳಿಯ ನಡುವೆ ಒಂದಿಪ್ಪತ್ತು ಜನ ಲಾಠಿಗಳನ್ನು ಮತ್ತು ಉರಿಯುವ ಪಂಜುಗಳನ್ನೂ ಹಿಡಿದು ಕಾಯುತ್ತಿದ್ದರು.  ಜೈಲ್ ಸಿಂಗ್ ರ ವಾಹನಗಳು  ಏಮ್ಸ್ ಆಸ್ಪತ್ರೆಯ ಕಡೆಗೆ ಸಾಗುತ್ತಿರುವಾಗ, ಆ ದುಷ್ಟರು ಆಕ್ರಮಣವನ್ನು ನಡೆಸಿದರು. ಜೈಲ್ ಸಿಂಗರೂ ಸಿಖ್ಖರು ಎಂಬ ಸತ್ಯ ಆ ದುಷ್ಟ ಶಕ್ತಿಗಳನ್ನು ಪ್ರಚೋದಿಸಿತ್ತು.  ರಾಷ್ಟ್ರಪತಿಗಳ ಕಾರು ಕ್ಷೇಮವಾಗಿ ಮುಂದೆ ಸಾಗಿತ್ತಾದರೂ, ಅವರ ಕಾರ್ಯದರ್ಶಿಗಳಿದ್ದ ಕಾರಿಗೆ ಕಲ್ಲುಗಳು ಬಿದ್ದವು. ರಾಷ್ಟ್ರದ ಪ್ರಥಮ ಪ್ರಜೆಯ ಮೇಲೆ ಆಕ್ರಮಣವಾದರೂ, ಅಲ್ಲಿಯೇ ಹಾಜರಿದ್ದ ದೊಡ್ಡ ಪೊಲೀಸ್ ಪಡೆ ನಿಷ್ಕ್ರಿಯವಾಗಿ ನಿಂತಿತ್ತು. ಆಕ್ರಮಣ ನಡೆಸಿದ ಯಾವನನ್ನೂ ಪೊಲೀಸರು ವಶಕ್ಕೆ ಪಡೆಯದಿದ್ದದ್ದು, ದುಷ್ಕರ್ಮಿಗಳ ಧೈರ್ಯವನ್ನು ಇಮ್ಮಡಿಗೊಳಿಸಿತ್ತು. ಏಮ್ಸ್ ಆಸ್ಪತ್ರೆಯ ಎದುರಿಗೆ ಜೈಲ್ ಸಿಂಗ್ ಅವರ ವಾಹನಗಳ ಮೇಲೆ ಮತ್ತೊಮ್ಮೆ ಕಲ್ಲುಗಳನ್ನು ಎಸೆಯಲಾಯಿತು. ಈ ಬಾರಿ ಜೈಲ್ ಸಿಂಗರ ಕಾರಿಗೆ ಕಲ್ಲು ಬಿದ್ದು ಕಾರಿನ ವಿಂಡ್ ಶೀಲ್ಡ್, ಅಂದರೆ ಮುಂದಿನ ಗಾಜು ನುಚ್ಚುನೂರಾಯಿತಾದರೂ, ಕಲ್ಲುಗಳು ಕಾರೊಳಗೆ ಹೋಗದಾದವು. ಬುಲೆಟ್ ಪ್ರೂಫ್ ಅಂದರೆ ಗುಂಡು ನಿರೋಧಕ ಕಾರು ಆದುದರಿಂದ ಜೈಲ್ ಸಿಂಗರಿಗೆ ಯಾವ ಪೆಟ್ಟು ಬೀಳಲಿಲ್ಲ. ಜೈಲ್ ಸಿಂಗರ ಅಂಗರಕ್ಷಕರುಗಳಿಗೆ ಸಣ್ಣಪುಟ್ಟ ಗಾಯಗಳಾದವು. ಉದ್ರಿಕ್ತರಾದ ಪುಂಡರ ಗುಂಪು 'ಜೈಲ್ ಸಿಂಗ್ ಮುರ್ದಾಬಾದ್, ಸಿಖ್ಖರು ದೇಶದ್ರೋಹಿಗಳು, ರಕ್ತಕ್ಕೆ ರಕ್ತವೇ ಪ್ರತೀಕಾರ' ಎಂಬ ಘೋಷಣೆಗಳನ್ನು ಜೈಲ್ ಸಿಂಗರ ವಾಹನಗಳ ಮುಂದೆ ನಿಂತು ಕೂಗುತ್ತಿತ್ತು. ಜೈಲ್ ಸಿಂಗರ ವಾಹನಗಳ ಮೇಲೆ ಕೆಲವೇ ನಿಮಿಷಗಳೊಳಗೆ ಎರಡು ಬಾರಿ ಕಲ್ಲೆಸೆತದ ದುಷ್ಕೃತ್ಯಗಳು ನಡೆದರೂ, ಅಲ್ಲೇ ನೆರದಿದ್ದ ದಿಲ್ಲಿ ಪೊಲೀಸರು ನಿಷ್ಕ್ರಿಯರಾಗಿ ನಿಂತಿದ್ದು, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಿತ್ತು. 

ತಲೆಯ ಮೇಲಿನ ಪಗಡಿ ಹಾಗೂ ಗಡ್ಡಗಳಿಂದ ಸಿಖ್ಖರನ್ನು ಪತ್ತೆಹಚ್ಚುವುದು ದುಷ್ಕರ್ಮಿಗಳಿಗೆ ಸುಲಭವಾಗಿತ್ತು. ಏಮ್ಸ್ ಆಸ್ಪತ್ರೆಯ ಸುತ್ತಾ ನೆರೆದಿದ್ದ ಜನಗಳ ನಡುವೆ ಇದ್ದ ಸಿಖ್ಖರು,  ಜೈಲ್ ಸಿಂಗರ ವಾಹನಗಳ ಮೇಲೆ ನಡೆದ ಆಕ್ರಮಣವನ್ನು ನೋಡಿ ಗಾಬರಿಗೊಂಡು, ಅಲ್ಲಿಂದ ಜಾಗ ಖಾಲಿ ಮಾಡಲಾರಂಭಿಸಿದರು. ಅಂದಿನ, ಅಂದರೆ ಅಕ್ಟೋಬರ್ 31, 1984ರ ಸಾಯಿಂಕಾಲದ ವೇಳೆಗಾಗಲೇ  ದುಷ್ಟರ ಗುಂಪುಗಳು ಹಿಂಸಾಚಾರ ನಡೆಸಲು ಸಿಖ್ ವ್ಯಕ್ತಿಗಳ ಹುಡುಕಾಟ ನಡೆಸಿತ್ತು. ಕೋಲ್ಕತ್ತಾದ ಸಾಹಿತಿ ಅಮಿತಾಭ್ ಘೋಷ್ ಎಂಬ ವ್ಯಕ್ತಿಯೊಬ್ಬರು ಆ ಸಂಜೆ ಬಸ್ಸೊಂದರಲ್ಲಿ ಏಮ್ಸ್ ಆಸ್ಪತ್ರೆಯ ಮಾರ್ಗವಾಗಿ ಹಾದುಹೋಗುತ್ತಿದ್ದರು. ಅವರ ಬಸ್ಸಿನಲ್ಲಿಸಿಖ್ ವ್ಯಕ್ತಿಯೊಬ್ಬನಿದ್ದ. ಲಾಠಿ ಮತ್ತು ಉರಿಯುವ ಪಂಜುಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಇದ್ದ ಗುಂಪೊಂದು ಬಸ್ಸಿನ ಕಡೆ ಬರುತ್ತಿದ್ದುದನ್ನು ಬಸ್ಸಿನ ಪ್ರಯಾಣಿಕರು ದೂರದಿಂದಲೇ ನೋಡಿಯಾಗಿತ್ತು. ಪರಿಸ್ಥಿತಿಯ ಅರಿವಿದ್ದ ಪ್ರಯಾಣಿಕರು, ಸಿಖ್ ಪ್ರಯಾಣಿಕನಿಗೆ ಆಸನಗಳ ತಳಗೆ ಅವಿತುಕೊಳ್ಳುವಂತೆ ಸೂಚಿಸಿದರು. ಬಸ್ಸನ್ನು ತಡೆ ಹಿಡಿದ ಗುಂಪು, 'ಸಿಖ್ ಪ್ರಯಾಣಿಕರು ಯಾರಾದರೂ ಇದ್ದಾರೆಯೇ?' ಎಂದು ಚಾಲಕನನ್ನು ಕೇಳಿದಾಗ, ಆ ಬಸ್ಸಿನ ಹಿಂದು ಚಾಲಕ 'ಯಾರು ಇಲ್ಲ' ಎಂದು ಉತ್ತರಿಸಿದ್ದು ಸಮಯೋಚಿತವಾಗಿತ್ತು. ಬಸ್ಸಿನ ಒಳಗೆ ಕಣ್ಣಾಡಿಸಿದ ಗುಂಪಿಗೆ, ಯಾವ ಸಿಖ್ಖನೂ ಬಸ್ಸಿನಲ್ಲಿ ಇಲ್ಲವೆಂದು ಎಲ್ಲಾ ಪ್ರಯಾಣಿಕರು ತಿಳಿಸಿದರು. ಗುಂಪು ಮುಂದೆ ಹೋಯಿತು. ಸಿಖ್ ಪ್ರಯಾಣಿಕ ಬದುಕುಳಿದಿದ್ದ. ಇಂದಿರಾ ಹತ್ಯೆಯನ್ನು ಮಾಡಿದ್ದು ಅವರ ಸಿಖ್ ಅಂಗರಕ್ಷಕರು ಎಂದು ಎಲ್ಲಾ ಹಿಂದೂಗಳಿಗೂ ತಿಳಿದಿದ್ದರೂ, ಅಜ್ಞಾತ ಸಿಖ್ಖರನ್ನು ರಕ್ಷಿಸುವ ಸ್ನೇಹಭಾವ ಮತ್ತು ಔದಾರ್ಯ ಎಲ್ಲಾ ಹಿಂದುಗಳಲ್ಲೂ ಆ ಸಮಯದಲ್ಲಿ ಇದ್ದದ್ದು ಸ್ವಾಭಾವಿಕವೇ ಆಗಿತ್ತು. 

ಆ ಸಂಜೆ 6ರ ಹೊತ್ತಿಗೆ ಸಿಖ್ ವ್ಯಕ್ತಿಯೊಬ್ಬನಿಗೆ ಸೇರಿದ ದ್ವಿಚಕ್ರ ವಾಹನವೊಂದಕ್ಕೆ ಬೆಂಕಿ ಹಚ್ಚಿದ್ದು, ಪೊಲೀಸರು ದಾಖಲಿಸಿದ ಮೊದಲ  ಸಿಖ್ಖರ ವಿರುದ್ಧದ ದಂಗೆಯ ಪ್ರಕರಣವಾಗಿತ್ತು.  ಈ ಪ್ರಕರಣ ಏಮ್ಸ್ ಆಸ್ಪತ್ರೆಯ ಆಸುಪಾಸಿನಲ್ಲೇ ನಡೆದದ್ದು ಕಾಕತಾಳೀಯವೇನಲ್ಲ. ಪೋಲೀಸರ ದಾಖಲೆಗಳ ಪ್ರಕಾರ, ಆ ಸಂಜೆ ಸಿಖ್ಖರ ವಿರುದ್ಧದ ಸುಲಿಗೆ, ದಾಂಧಲೆ ಮತ್ತು ಆಸ್ತಿಗಳಿಗೆ ಬೆಂಕಿಹಚ್ಚುವ ಪ್ರಸಂಗಗಳು ಏಮ್ಸ್ ಆಸ್ಪತ್ರೆಯ ಸುತ್ತಲಿನ ಪ್ರದೇಶಗಳಲ್ಲೇ ಜರುಗಿದ್ದು ಗಮನಾರ್ಹ. ಆದರೆ ಸಿಖ್ಖರ ಮಾರಣಹೋಮದ ಪ್ರಸಂಗಗಳು ಶುರುವಾದದ್ದು ಮಾರನೆಯ ದಿನ, ಅಂದರೆ ನವೆಂಬರ್ 1, 1984ರಿಂದಲೇ. 

ಸಿಖ್ಖರ ಹತ್ಯೆಯ ಅತಿ ಹೆಚ್ಚು ಪ್ರಕರಣಗಳು ಜರುಗಿದ್ದು ಪೂರ್ವ ದಿಲ್ಲಿಯ ನಿವಾಸ ಸ್ಥಾನಗಳಾದ  ಕಲ್ಯಾಣ್ಪುರಿ, ಮಂಗೋಲ್ಪುರಿ, ಸುಲ್ತಾನ್ಪುರಿ ಮತ್ತು ದಿಲ್ಲಿ ಕಂಟೋನ್ಮೆಂಟ್ ಪ್ರದೇಶಗಳಲ್ಲಿ.  ಅಕ್ಟೋಬರ್ 31, 1984ರ ಸಂಜೆಯೇ ರಾಜೀವ್ ಗಾಂಧಿಯವರು ಹೊಸ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿಯಾಗಿತ್ತು. ಅವರ ಹೊಸ ಸರಕಾರದ ಗೃಹಮಂತ್ರಿ ನುರಿತ ರಾಜಕಾರಣಿಯಾದ ಪಿ.ವಿ.ನರಸಿಂಹರಾಯರಾಗಿದ್ದರು. ಹಾಗಾಗಿ ದಿಲ್ಲಿ ಮಹಾನಗರದ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಸಂಪೂರ್ಣವಾಗಿ ನರಸಿಂಹರಾಯರದ್ದೇ ಆಗಿತ್ತು. ಪರಿಸ್ಥಿತಿಯ ಅರಿವಿದ್ದ ಅವರು, ನಗರದ ಸುರಕ್ಷತೆಯ ದೃಷ್ಟಿಯಿಂದ ಸೇನೆಯೂ ಸೇರಿದಂತೆ ಎಲ್ಲಾ ಸುರಕ್ಷಾ ಪಡೆಗಳನ್ನು ಆ ಸಂಜೆಯೇ  ಕಾರ್ಯೋನ್ಮುಖರನ್ನಾಗಿಸಬೇಕಿತ್ತು. ಆದರೆ ನರಸಿಂಹ ರಾಯರು ಆ ಅತ್ಯವಶ್ಯಕ ಕಾರ್ಯವನ್ನು ಮಾಡಲೇ ಇಲ್ಲ. ನಾಮಕಾವಸ್ಥೆಗೆ ನವೆಂಬರ್ 1ರಂದೇ ದಿಲ್ಲಿಯಲ್ಲಿ ಕರ್ಫ್ಯೂವನ್ನು ಜಾರಿಗೊಳಿಸಿದರೂ, ಅದು ಜಾರಿಯಾಗಿದ್ದು ಎರಡು ದಿನಗಳನಂತರವೇ.  ಅಷ್ಟರೊಳಗೆ 2733 ಸಿಖ್ಖರ ಹತ್ಯೆಯಾಗಿಹೋಗಿತ್ತು.  

ಹಿರಿಯ ವಕೀಲರಾದ ರಾಮ್ ಜತ್ ಮಲಾನಿ ಅವರು ಆ ಸಂಜೆ ಗೃಹಮಂತ್ರಿ ನರಸಿಂಹರಾಯರನ್ನು ಭೇಟಿಯಾದ ಘಟನೆಯನ್ನು, ಅವರು ನಾನಾವತಿ ಆಯೋಗದ ಮುಂದೆ ದಾಖಲಿಸಿದ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.  ಪರಿಸ್ಥಿತಿಯನ್ನು ನಿಭಾಯಿಸಲು ಸೇನೆಯನ್ನು ಕರೆಸಿ ಎಂದು ತಾವು ಸಲಹೆಯನ್ನು ನರಸಿಂಹರಾಯರಿಗೆ ನೀಡಿದಾಗ, ಅವರಿಂದ ಅನುಕೂಲಕರ ಪ್ರತಿಕ್ರಿಯೆ ಬರಲೇ ಇಲ್ಲ ಎಂದು ರಾಮ್ ಜತ್ ಮಲಾನಿಯವರು ತಿಳಿಸಿದ್ದಾರೆ. ಸುಮಾರು ಅರ್ಧ ಗಂಟೆ ರಾಯರೊಂದಿಗೆ ನಡೆಸಿದ ಚರ್ಚೆಯಲ್ಲಿ, ರಾಯರು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮಾತ್ರ ತಿಳಿಸಿದರು ಮತ್ತು ಅಷ್ಟು ಹೊತ್ತಿಗಾಗಲೇ ದಿಲ್ಲಿ ಹೊತ್ತಿ ಉರಿಯುತ್ತಿದ್ದರೂ, ಯಾವ ಸುರಕ್ಷತಾ ಪಡೆಯ ಹಿರಿಯ ಅಧಿಕಾರಿಯೊಂದಿಗೂ ರಾಯರು ಸಂಪರ್ಕದಲ್ಲಿದ್ದಂತೆ ಕಂಡುಬರಲಿಲ್ಲ ಎಂಬುದಾಗಿ ರಾಮ್ ಜತ್ ಮಲಾನಿಯವರು ನಾನಾವತಿ ಆಯೋಗಕ್ಕೆ ತಿಳಿಸಿದ್ದಾರೆ. ರಾಮ್ ಜತ್ ಮಲಾನಿಯವರ ಪ್ರಮಾಣ ಪತ್ರದ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಗೃಹಮಂತ್ರಿ ನರಸಿಂಹರಾಯರು ಅಂದು  ಕೈಚೆಲ್ಲಿ ಕುಳಿತಿದ್ದರು ಎಂಬುದು ಸುಸ್ಪಷ್ಟವಾಗಿತ್ತು. ನರಸಿಂಹರಾಯರು ಅಂದು ಅಸಹಾಯಕರಾಗಿದ್ದರು ಮತ್ತು ಕಾಣದ ಕೈಗಳು ಪರಿಸ್ಥಿತಿಯ ಸೂತ್ರಧಾರಿಗಳಾಗಿದ್ದವು ಎಂಬುದು ಮತ್ತೆ ಕೆಲವರ ಅಭಿಪ್ರಾಯವಾಗಿತ್ತು. 

ದಿಲ್ಲಿಯ ಅಂದಿನ ಹಿರಿಯ ಅಧಿಕಾರಿ ಅಶೋಕ್ ಜೈಟ್ಲೇ ಎಂಬುವರೊಬ್ಬರೂ  ಮಿಶ್ರ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ಅಂದು ಲುಟಿಯನ್ನರ ದಿಲ್ಲಿಯಲ್ಲಿ ಅಂದರೆ ಪಾರ್ಲಿಮೆಂಟ್ ಹಾಗೂ ರಾಷ್ಟ್ರಪತಿ ನಿವಾಸವಿದ್ದ ಪ್ರದೇಶದಲ್ಲಿ ಕಲ್ಲೆಸತದಂತಹ ಪ್ರಕರಣಗಳು ನಡೆಯುತ್ತಿದ್ದರೂ,  ಪೊಲೀಸರು ನಿಷ್ಕ್ರಿಯರಾಗಿದ್ದರು. ಪ್ರಕರಣವನ್ನು ಅವರು ಹತ್ತಿರವಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ತಿಳಿಸಿದಾಗ, ಆ ಪೊಲೀಸ್ ಅಧಿಕಾರಿ 'ಆತಂಕಗೊಳ್ಳ ಬೇಡಿ, ದಂಗೆಕೋರರ ಹಿಂಸಾಚಾರ ಸಿಖ್ಖರ ವಿರುದ್ಧ ಮಾತ್ರ ತಾನೇ' ಎಂದಿದ್ದು, ಅಂದು ನಡೆಯುತ್ತಿದ್ದ ಸಿಖ್ಖರ ವಿರುದ್ಧದ ದಂಗೆಯ ಬಗ್ಗೆ ಅಂದಿನ ಸುರಕ್ಷತಾ ಪಡೆಗಳ ಧೋರಣೆಗೆ ಹಿಡಿದ ಕನ್ನಡಿಯಂತಿತ್ತು. 

ಸಿಖ್ಖರ ದೇವಸ್ಥಾನಗಳಿಗೆ ಗುರುದ್ವಾರಗಳೆಂದು ಹೆಸರು. ಸಿಖ್ಖರ ಪವಿತ್ರ ಗ್ರಂಥವಾದ 'ಗುರುಗ್ರಂಥ ಸಾಹಿಬ್' ಅನ್ನು ಎತ್ತರದ ಪೀಠದ ಮೇಲೆ ವಿರಾಜಮಾನಗೊಳಿಸಿರುವ ಕೇಂದ್ರ ಸ್ಥಾನಗಳೇ ಗುರುದ್ವಾರಗಳ ಗರ್ಭಗುಡಿಗಳು. ಪವಿತ್ರ ಗ್ರಂಥಕ್ಕೆ ಅವಿರತವಾಗಿ ಛತ್ರಚಾಮರಗಳ ಸೇವೆಗಳು ನಡೆಯುತ್ತಿರುತ್ತವೆ. ಪವಿತ್ರ ಗ್ರಂಥದ ಸುತ್ತಾ ಆಸೀನರಾಗಿರುವ ಗ್ರಂಥಿಗಳೆಂಬ ಅರ್ಚಕರು ಪವಿತ್ರ ಗ್ರಂಥದ ವಿವಿಧ ಪದ್ಯಗಳನ್ನು  ಸುಶ್ರಾವ್ಯವಾಗಿ, ವಾದ್ಯಗಳೊಂದಿಗೆ ಸತತವಾಗಿ ಹಾಡುವ ಪ್ರಕ್ರಿಯೆಯೇ ಗುರುದ್ವಾರದ ಪಾಲಿಗೆ ಕೀರ್ತನ ಸೇವೆ. 

ಅಂದಿನ ಸಿಖ್ಖರ ವಿರುದ್ಧದ ದಂಗೆಗಳ ವಿಧ್ವಂಸ ಕೃತ್ಯಗಳಿಗೆ ಗುರುದ್ವಾರಗಳೇ ಗುರಿಯಾದದ್ದು ಅನೀರೀಕ್ಷಿತವೇನಲ್ಲ. ದಿಲ್ಲಿಯ ಐತಿಹಾಸಿಕ ಗುರುದ್ವಾರಗಳಾದ ಕೆಂಪುಕೋಟೆಯ ಸಮೀಪದ ಸೀಸ್ ಗಂಜ್ ಗುರುದ್ವಾರ ಮತ್ತು ತೀನ್ ಮೂರ್ತಿ ಭವನದ ಸಮೀಪದ ರಕಾಬ್ ಗಂಜ್ ಗುರುದ್ವಾರಗಳ ಮೇಲೆ ನಡೆದ ಆಕ್ರಮಣಗಳು ಎರಡು ವಿಭಿನ್ನ ಕತೆಗಳನ್ನು ಹೇಳುತ್ತಿದ್ದವು. ಈ ಎರಡೂ ಗುರುದ್ವಾರಗಳು ಹಿಂದೂಗಳ ಸುರಕ್ಷತೆಗಾಗಿ ಹೋರಾಡಿ ಬಲಿಯಾದ ಸಿಖ್ಖರ ಒಂಬತ್ತನೇ ಗುರು, ಗುರು ಟೇಗ್ ಬಹದ್ದೂರ್ ರ ನೆನಪಿನ ಸ್ಥಾನಗಳು. ಕಾಶ್ಮೀರಿ ಪಂಡಿತರುಗಳ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಮೊಗಲ್ ದೊರೆ ಔರಂಗಜೇಬನ ವಿರುದ್ಧ ಹೋರಾಡಿದ ಗುರು ಟೇಗ್ ಬಹದ್ದೂರರ ಶಿರಚ್ಛೇದನವಾದದ್ದು, ಸೀಸ್ ಗಂಜ್ ಗುರುದ್ವಾರ ಈಗಿರುವ ಸ್ಥಳದಲ್ಲೇ. ಬಲಿಯಾದ ಗುರುಗಳ ರುಂಡ ರಹಿತ ದೇಹವನ್ನು ಕೊಂಡೊಯ್ದ ಭಕ್ತನೊಬ್ಬ, ಆತಾತುರವಾಗಿ ದೇಹದ ಅಂತಿಮ ಸಂಸ್ಕಾರವನ್ನು ಮಾಡಿದ ಸ್ಥಳದಲ್ಲೇ ನಿರ್ಮಾಣಗೊಂಡದ್ದು ರಕಾಬ್ ಗಂಜ್ ಗುರುದ್ವಾರ. 

ಹಿಂದುಗಳ ಹಿತರಕ್ಷಣೆಗಾಗಿ ಗುರು ಟೇಗ್ ಬಹದ್ದೂರರ ಬಲಿದಾನ ಸ್ಥಾನವಾದ  ಸೀಸ್ ಗಂಜ್ ಗುರುದ್ವಾರ, 1984ರ ದಂಗೆಯ ಸಮಯದಲ್ಲಿ,  ಹಿಂದೂ ದಂಗೆಕೋರರ ಆಕ್ರಮಣಕ್ಕೆ ತುತ್ತಾಗಿ ನಿಂತದ್ದೊಂದು  ದೊಡ್ಡ ವಿಪರ್ಯಾಸ. ಅಂದು ಸೀಸ್ ಗಂಜ್ ಗುರುದ್ವಾರವನ್ನು ದಂಗೆಕೋರರ ಆಕ್ರಮಣದಿಂದ ರಕ್ಷಿಸಿದ್ದು ಕ್ರಿಸ್ತಧರ್ಮದ ಪೊಲೀಸ್ ಅಧಿಕಾರಿಯೊಬ್ಬ ಎಂಬುದು ವಿಶೇಷವಾದ ಸಂಗತಿ. ಅಷ್ಟೇನು ಹಿರಿಯರಲ್ಲದ ಪೊಲೀಸ್ ಅಧಿಕಾರಿ ಮ್ಯಾಕ್ಸ್ವೆಲ್ ಪೆರೀರಾ ಸೀಸ್ ಗಂಜ್ ಗುರುದ್ವಾರದ ಬಳಿ ಬರುವ ಹೊತ್ತಿಗಾಗಲೇ, ಪರಿಸ್ಥಿತಿ ಗಂಭೀರವಾಗಿತ್ತು. ಸುಮಾರು 200 ಸಿಖ್ಖರು ಕತ್ತಿ-ಚೂರಿಗಳನ್ನು ಹಿಡಿದು ಯುದ್ಧಕ್ಕೆ ಸನ್ನದ್ಧರಾಗಿದ್ದರು. ಗುರುದ್ವಾರದ ದಾಳಿಗೆ ಹೊಂಚುಹಾಕಿದ್ದ ದಂಗೆಕೋರರು ಅಲ್ಲಿ ನೆರೆದಿದ್ದ ಸಿಖ್ಖರನ್ನು ಪ್ರಚೋದಿಸಿದ್ದರು. ಪೆರೀರಾ ಅವರು ಸಿಖ್ಖರನ್ನು ನಿರಾಯುಧರನ್ನಾಗಿಸಲಿಲ್ಲ. ಆದರೆ ಅವರುಗಳನ್ನು ಸೀಸ್ ಗಂಜ್ ಗುರುದ್ವಾರದೊಳಗೆ ಕಳುಹಿಸುವಲ್ಲಿ ಪೆರೀರಾ ಯಶಸ್ವಿಯಾದರು. ಪೆರೀರರವರ ಜೊತೆ ಆಗ ಇದ್ದದ್ದು  ನಾಲ್ಕಾರು ಪೊಲೀಸರು ಮಾತ್ರ. ಸ್ವಲ್ಪ ಸಮಯದಲ್ಲೇ ಇನ್ನೂ ಕೆಲವು ಪೋಲೀಸರು ಪೆರೀರಾ ಅವರ ಬೆಂಬಲಕ್ಕೆ ಸೇರಿಕೊಂಡಾಗಲೇ ಅವರು ಕಾರ್ಯೋನ್ಮುಖರಾದದ್ದು. ಅಶ್ರುವಾಯು ಗುಂಡುಗಳನ್ನು ಸಿಡಿಸಿದ ಪೆರೀರಾ ದಂಗೆಕೋರರನ್ನು ಗುರುದ್ವಾರದಿಂದ ದೂರ ಚದುರುವಂತೆ ಮಾಡಿದರು. ಚದುರಿದ ದಂಗೆಕೋರರು ಸಮೀಪವೇ ಇದ್ದ ಸಿಖ್ಖರ ಅಂಗಡಿಗಳನ್ನು ಲೂಟಿಮಾಡಲು ಹೊರಟಾಗ, ಬೇರೇ ಮಾರ್ಗವಿಲ್ಲದೆ ತಮ್ಮ ನೆಚ್ಚಿನ ಪೊಲೀಸ್ ಪೇದೆ ಶಿವ ಅವರಿಗೆ ಗುಂಡುಹಾರಿಸುವ ಆಜ್ಞೆಯನ್ನು ಪೆರೀರಾ  ನೀಡಬೇಕಾಯಿತು. ಶಿವ ಅವರು ಗುಂಡು ಹಾರಿಸುತ್ತಲೇ, ದಂಗೆಕೋರನೊಬ್ಬ ಬಲಿಯಾದದ್ದು ಪೊಲೀಸ್ ಪಡೆಯ ಧೈರ್ಯವನ್ನು ಹೆಚ್ಚಿಸಿತ್ತು. 'ಗುಂಡು ಹಾರಿಸಿದ ಪೊಲೀಸ್ ಪೇದೆ ಶಿವ ಅವರಿಗೆ ೨೦೦ ರೂಪಾಯಿನ ಬಹುಮಾನಗಳು' ಎಂದು ಧ್ವನಿವರ್ಧಕದಲ್ಲಿ ಪೆರೀರಾ ಜೋರಾಗಿ ಘೋಷಿಸಿದಾಗ, ದಂಗೆಕೋರರು ಕಕ್ಕಾಬಿಕ್ಕಿಯಾಗಿ ಓಡತೊಡಗಿದರು. ಗುರುದ್ವಾರ ಸೀಸ್ ಗಂಜ್ ಮತ್ತದರೊಳಗಿದ್ದ ನೂರಾರು ಸಿಖ್ಖರುಗಳ ಸುರಕ್ಷತೆಯನ್ನು ಪೊಲೀಸ್ ಅಧಿಕಾರಿ ಮ್ಯಾಕ್ಸ್ವೆಲ್ ಪೆರೀರಾ ಅಂದು ಕಾಪಾಡಿದ್ದರು. ಅಂದು, ಅಂದರೆ ನವೆಂಬರ್ 1, 1984ರ ದಿನ, ಸಿಖ್ಖರ ವಿರುದ್ಧದ ದಂಗೆಯ ಅತ್ಯಂತ ಕರಾಳ ದಿನವಾಗಿದ್ದು ಅತಿ ಹೆಚ್ಚಿನ ಸಾವು ನೋವುಗಳಾಗಿದ್ದರೂ, ಇಡೀ ದಿಲ್ಲಿ ಮಹಾನಗರದಲ್ಲಿ ಗುಂಡು ಹಾರಿಸುವ ಎದೆಗಾರಿಕೆಯನ್ನು ತೋರಿಸಿದ್ದು ಪೊಲೀಸ್ ಅಧಿಕಾರಿ ಪೆರೀರಾರವರು ಮಾತ್ರ ಎಂಬುದನ್ನು ನಾವು ಗಮನಿಸಬೇಕು. ಪೊಲೀಸರು ಆ ದಿನಗಳಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸುವ ಸರಿಯಾದ  ಮಾರ್ಗವನ್ನು ಪಾಲಿಸಿದ್ದರೆ, ಇಷ್ಟೊಂದು ಭಾರಿ ಸಂಖ್ಯೆಯಲ್ಲಿ ಸಿಖ್ಖರ ಬಲಿಯಾಗುತ್ತಿರಲಿಲ್ಲ ಎಂಬ ಸತ್ಯ, ಅಂದಿನ ಸೀಸ್ ಗಂಜ್ ಗುರುದ್ವಾರದ ಪ್ರಕರಣದಿಂದ ಸಾಬೀತಾಗಿತ್ತು. 

ಸೀಸ್ ಗಂಜ್ ಗುರುದ್ವಾರದಷ್ಟು ಸುರಕ್ಷೆ, ಅದರ ಅವಳಿ ಗುರುದ್ವಾರವಾದ ರಕಾಬ್ ಗಂಜ್ ಗುರುದ್ವಾರಕ್ಕೆ ದೊರೆಯದಿದ್ದದ್ದು ದೊಡ್ಡ ದುರಂತವೇ ಸರಿ. ರಕಬ್ ಗಂಜ್ ಗುರುದ್ವಾರ, ಇಂದಿರಾ ಗಾಂಧಿಯವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇರಿಸಿದ್ದ ತೀನ್ ಮೂರ್ತಿ ಭವನದ ಸಮೀಪವೇ ಇತ್ತು.  ಹಾಗಾಗಿ ಇಂದಿರಾ ಪಾರ್ಥಿವ ಶರೀರದ ದರ್ಶನ ಮಾಡಿದ ಸುಮಾರು 4000ದಷ್ಟು ದುಷ್ಕರ್ಮಿಗಳು, ಸಮೀಪವೇ ಇದ್ದ ರಕಾಬ್ ಗಂಜ್ ಗುರುದ್ವಾರಕ್ಕೆ ಮುತ್ತಿಗೆ ಹಾಕಿದ್ದು ನಿರೀಕ್ಷಿತವೇ ಆಗಿತ್ತು. ಪೊಲೀಸರ ನಿಷ್ಕ್ರಿಯೆಯಿಂದ ಉತ್ತೇಜಿತರಾದ ದಂಗೆಕೋರರು ಸುಮಾರು ಐದು ಗಂಟೆಗಳ ಕಾಲ ರಕಾಬ್ ಗಂಜ್ ಗುರುದ್ವಾರದ ಮುತ್ತಿಗೆಯನ್ನು ಮುಂದುವರೆಸಿದ್ದರು. ದುಷ್ಕರ್ಮಿಗಳು ಗುರುದ್ವಾರದ ಮೇಲೆ ಕಲ್ಲುಗಳು ಮತ್ತು ಬೆಂಕಿಯ ಉಂಡೆಗಳನ್ನು ಎಸೆದು ದಾಳಿ ನಡೆಸಿದರು. ಗುರುದ್ವಾರದ ತಡೆಗೋಡೆಯನ್ನೇರಿದ ದುಷ್ಟರು, ಗುರುದ್ವಾರದೊಳಗೆ ನುಗ್ಗಿ ಇನ್ನಿಲ್ಲದ ದಾಂಧಲೆಯನ್ನು ನಡೆಸಿದರು. ದಂಗೆಕೋರರು ಗುರುದ್ವಾರದ ಮುಖ್ಯ ದ್ವಾರವನ್ನು ಮುರಿಯಲು ಪ್ರಯತ್ನಿಸಿದರೂ ವಿಫಲರಾದರು. 

ಮುಕ್ತಿಯಾರ್ ಸಿಂಗ್ ಎಂಬುವ ವ್ಯಕ್ತಿಯೊಬ್ಬರು ನಾನಾವತಿ ಆಯೋಗದ ಮುಂದೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ರಕಾಬ್ ಗಂಜ್ ಗುರುದ್ವಾರದ ಒಳಗಿನಿಂದ ಕೈ ಜೋಡಿಸಿ ಹೊರಬಂದ ಹಿರಿಯ ಸಿಖ್ ವ್ಯಕ್ತಿಯೊಬ್ಬರು ಹಿಂಸೆಯನ್ನು ನಿಲ್ಲಿಸುವಂತೆ ದಂಗೆಕೋರರನ್ನು ಪ್ರಾರ್ಥಿಸಿದರು. ಆ ಹಿರಿಯರನ್ನು ತೀವ್ರವಾಗಿ ಥಳಿಸಿದ ದುಷ್ಕರ್ಮಿಗಳು, ಅವರ ದೇಹದ ಮೇಲೆ ದಹಿಸಬಲ್ಲ ವಸ್ತುವೊಂದನ್ನು ಸಿಂಪಡಿಸಿ, ಅವರ ದೇಹಕ್ಕೆ ಬೆಂಕಿಯನ್ನು ಹಚ್ಚಿದರು. ಆ ಹಿರಿಯರ ರಕ್ಷಣೆಗೆಂದು ಹೊರಬಂದ ಅವರ ಪುತ್ರನಿಗೂ ದಂಗೆಕೋರರು ಅದೇ ಗತಿಯನ್ನು ಕಾಣಿಸಿದರು. ಉರಿದು ಹೋಗುತ್ತಿದ್ದ ಇಬ್ಬರು ಸಿಖ್ಖರನ್ನು ಆಸ್ಪತ್ರೆಗೆ ಸಾಗಿಸುವಂತೆ ಮುಕ್ತಿಯಾರ್ ಸಿಂಗರು ಸಮೀಪವೇ ಇದ್ದ ಪೊಲೀಸರಿಗೆ ಮನವಿ ಮಾಡಿದರೂ ಯಾವ ಸಹಾಯವು ದೊರೆಯಲಿಲ್ಲ. ನೋಡನೋಡುತ್ತಿದಂತೆ  ಇಬ್ಬರು ಸಿಖ್ಖರು ಸಂಪೂರ್ಣವಾಗಿ ಭಸ್ಮವಾದರು. 

ಗುರುದ್ವಾರ ರಕಾಬ್ ಗಂಜ್ ಗೆ ಮುತ್ತಿಗೆ ಹಾಕಿದ 4000ದಷ್ಟು ದಂಗೆಕೋರರ ನಡುವೆ ಮಧ್ಯ ಪ್ರದೇಶದ ಪ್ರತಿಷ್ಠಿತ ಕಾಂಗ್ರೆಸ್ ರಾಜಕಾರಣಿ ಹಾಗೂ ಅಂದಿನ ಸಂಸದ ಕಮಲ್ ನಾಥ್ ಅವರು ಇದ್ದದ್ದು ಆಶ್ಚರ್ಯಕರವಾಗಿತ್ತು. ಕಮಲ್ ನಾಥ್ ಅವರು ದಂಗೆಕೋರರ ನಡುವೆ ಇದ್ದುದ್ದನ್ನು ಪೊಲೀಸ್ ಅಧಿಕಾರಿಗಳಾದ ಸುಭಾಷ್ ಟಂಡನ್ ಮತ್ತು ಗೌತಮ್ ಕೌಲ್ ರವರು ನಾನಾವತಿ ಆಯೋಗಕ್ಕೆ ತಿಳಿಸಿದ್ದರು. ಇಂಡಿಯನ್ ಎಕ್ಸ್ ಪ್ರೆಸ್ಸಿನ  ಪತ್ರಕರ್ತ ಸಂಜಯ್ ಸೂರಿಯವರು ಕೂಡ ಕಮಲ್ ನಾಥ್ ಅಂದಿನ ದಂಗೆಕೋರರ ನಡುವೆ ಇದ್ದುದ್ದನ್ನು ತಮ್ಮ ಪ್ರಮಾಣಪತ್ರದಲ್ಲಿ ನಾನಾವತಿ ಆಯೋಗಕ್ಕೆ ತಿಳಿಸಿದ್ದರು. ಆದರೇ ಪೊಲೀಸರಾಗಲಿ ಅಥವ ಸಂಜಯ್ ಸೂರಿ ಅವರಾಗಲಿ ಕಮಲ್ ನಾಥ್ ಅಂದು ದಂಗೆಕೋರರಿಗೆ ನೀಡಿರಬಹುದಾದ ಪ್ರಚೋದನೆಯ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿರಲಿಲ್ಲ. ಕಮಲ್ ನಾಥ್ ಅವರು ತಾವು ಅಲ್ಲಿದ್ದ ಎರಡು ಗಂಟೆಯಷ್ಟು ಕಾಲ ಗಲಭೆಕೋರರನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೆ ಎಂದು ಮಾತ್ರ ಆಯೋಗದ ಮುಂದೆ ತಿಳಿಸಿದರು. ಎರಡು ಗಂಟೆಯಷ್ಟು ಕಾಲ ದಂಗೆಕೋರರ ನಡುವೆ ರಾಜಕಾರಣಿ ಕಮಲ್ ನಾಥರವರು ಇದ್ದದ್ದು ಆಯೋಗದ ಹುಬ್ಬೇರಿಸುವಂತೆ ಮಾಡಿತಾದರೂ, ಸ್ಪಷ್ಟ ಸಾಕ್ಷಿಗಳ ಕೊರತೆಯಿಂದ ಆಯೋಗ ಅವರ ಮೇಲೆ ಯಾವ ಆರೋಪವನ್ನು ಮಾಡದಾಯಿತು. ಆದರೂ ಕಾಂಗ್ರೆಸ್ಸಿನ ಪ್ರತಿಷ್ಠಿತ ರಾಜಕಾರಣಿಯೊಬ್ಬರು ದಂಗೆಕೋರರ ನಡುವೆ ಎರಡು ಗಂಟೆಗಳಷ್ಟು ಕಾಲ ಇದ್ದದ್ದು ಆಯೋಗದ ಮುಂದೆ ಸ್ಪಷ್ಟವಾಗಿದ್ದು, ರಕಾಬ್ ಗಂಜ್ ಗುರುದ್ವಾರದ ಪ್ರಕರಣದಲ್ಲಿ ಮಾತ್ರ.  

ದಂಗೆ ಪ್ರಕರಣಗಳಲ್ಲಿ ಸುಲಭ ತುತ್ತಾಗುವವರು ಬಡಜನರು. ಆದರೆ ಪೂರ್ವ ದಿಲ್ಲಿಯ ಕಲ್ಯಾಣ್ಪುರಿಯ ನಿವಾಸಿಗಳಾದ ಬಡ ಸಿಖ್ ಜನರುಗಳ ಕತೆಯೇ ಬೇರೆಯಾಗಿತ್ತು. ಸಿಖ್ಖರ ಒಳಪಂಗಡವಾದ 'ಸಿಕ್ಲಿಗರ್' ಗುಂಪಿಗೆ ಸೇರಿದ ಅಲ್ಲಿನ ಸಿಖ್ಖರು, ಸಿಖ್ಖರ ಹತ್ತನೇ ಗುರು, ಗುರು ಗೋವಿಂದ್ ಸಿಂಗರ ಕಾಲದಿಂದಲೂ ಆಯುಧಗಳನ್ನು ಹಿಡಿದೇ ಜೀವನಮಾಡಿದವರು. ಗಲಭೆ ನಡೆದ ದಿನ, ಅಂದರೆ ನವೆಂಬರ್ 1, 1984ರಂದು ಆ ಪ್ರದೇಶದ ಬಹುಪಾಲು ಜನ ಸಿಖ್ಖರಾಗಿದ್ದು, ಅವರೆಲ್ಲರ ಕೈಯಲ್ಲೂ ಪರವಾನಗಿಯನ್ನು ಪಡೆದ ಪಿಸ್ತೂಲು, ಬಂದೂಕಗಳಿದ್ದವು. ಸಿಖ್ಖರ ಹತ್ಯೆಗೆ ಹೊಂಚುಹಾಕಿ ಬಂದಿದ್ದ ದಂಗೆಕೋರರಿಗೆ ಅಲ್ಲಿನ ಜನಗಳ ಕೈಯಲ್ಲಿ ಪಿಸ್ತೂಲು ಬಂದೂಕಗಳಿದ್ದದ್ದು ತಿಳಿದಿರಲಿಲ್ಲ. ಸಂಘಟಿತವಾಗಿ ಆತ್ಮರಕ್ಷಣೆಗೆ ಮುಂದಾದ ಸಿಖ್ಖರುಗಳು ದಾಳಿಯಿಂದ ದಂಗೆಕೋರರು ಹಿಮ್ಮೆಟ್ಟಬೇಕಾಗಿಬಂತು. ಆಗ ಅಲ್ಲಿ ಮಧ್ಯ ಪ್ರವೇಶಿಸಿದವರೇ, ಕಲ್ಯಾಣ್ಪುರಿಯ ಪೊಲೀಸ್ ಠಾಣೆಯ ಮುಖ್ಯಾಧಿಕಾರಿಯಾದ ಸೂರ್ ವೀರ್ ಸಿಂಗ್ ತ್ಯಾಗಿ ಅವರು. ಸಿಂಗ್ ಎಂದ ಮಾತ್ರಕ್ಕೆ ತ್ಯಾಗಿ ಸಿಖ್ಖರಾಗಿರಲಿಲ್ಲ.  ಎಲ್ಲಾ ಸಿಖ್ಖರು ಸಿಂಗರಾದರೂ, ಸಿಂಗರುಗಳೆಲ್ಲಾ ಸಿಖ್ಖರುಗಳಲ್ಲ ಎಂಬುದನ್ನು ನಾವು ಮರೆಯುವಹಾಗಿಲ್ಲ. ಇನ್ಸ್ಪೆಕ್ಟರ್ ತ್ಯಾಗಿ ಅವರು ಮೊದಲು ಮಾಡಿದ ಕೆಲಸವೇನೆಂದರೆ, ಅಲ್ಲಿದ್ದ ಬಡಪಾಯೀ ಸಿಖ್ಖರುಗಳೆಲ್ಲಾ ತಮ್ಮ ತಮ್ಮ ಆಯುಧಗಳನ್ನು ಪೊಲೀಸರಿಗೊಪ್ಪಿಸುವಂತೆ ಮಾಡಿದ್ದು. ಇದಾದ ಮೇಲೆ ಸ್ಥಳದಿಂದ ಹೊರಟುಹೋದ ಪೊಲೀಸರು, ನಿರಾಯುಧರಾದ ಬಡ ಸಿಖ್ಖರುಗಳು  ದಂಗೆಕೋರರಿಗೆ ಸುಲಭ ತುತ್ತಾಗುವಂತೆ ಮಾಡಿದರು.  ಆದರೂ ಕೆಲವು ಸಿಖ್ಖರು ಇನ್ನೂ ತಮ್ಮ ಆಯುಧಗಳಾದ ಚೂರಿ ಮತ್ತು ಚಾಕುಗಳನ್ನು  ಹೊಂದೇ ಇದ್ದರು. ಸಿಖ್ಖರುಗಳ ಆತ್ಮರಕ್ಷಣೆಯ ಹೋರಾಟಕ್ಕೆ ಮತ್ತೆ ದಂಗೆಕೋರರು ಹಿಮ್ಮೆಟುವಂತಾಗಿತ್ತು.  ನಡೆದ ಚಕಮುಕಿಯ ಸದ್ದಿಗೆ ಮತ್ತೆ ಹಿಂತುರುಗಿದ ಪೊಲೀಸರು, ದಂಗೆಕೋರರನ್ನು ಬಂಧಿಸುವ ಬದಲು, 25 ಸಿಖ್ಖರುಗಳನ್ನು ದಂಗೆಕೋರರೆಂಬ ಆರೋಪವನ್ನು ಹೊರಿಸಿ ಬಂಧಿಸಿದರು. ಗಲಭೆಯ ದಿನಗಳಲ್ಲಿ ಅತ್ಯಂತ ಘಾತಕವಾದ ದಂಗೆಗಳು ನಡೆದ ನವೆಂಬರ್ 1, 1984ರಂದು, ಇಡೀ ಪೂರ್ವ ದಿಲ್ಲಿಯಲ್ಲಿ ಪೊಲೀಸರು ಬಂಧಿಸಿದ ವ್ಯಕ್ತಿಗಳು ಈ 25 ಸಿಖ್ಖರುಗಳು ಮಾತ್ರವಾಗಿದ್ದರು. 2733 ಸಿಖ್ಖರ ಹತ್ಯೆಯಾದ ಅಂದಿನ ದಂಗೆಗಳಲ್ಲಿ, 1234 ಸಿಖ್ಖರು ಪೂರ್ವ ದಿಲ್ಲಿ ಪ್ರದೇಶವೊಂದರಲ್ಲೇ ಹತ್ಯೆಗೊಂಡಿದ್ದರು. ಪೂರ್ವ ದಿಲ್ಲಿಯ ಕಲ್ಯಾಣ್ಪುರಿ ಪ್ರದೇಶದಲ್ಲಿ ನವೆಂಬರ್ 1, 1984ರಂದು 610 ಸಿಖ್ಖರ ಹತ್ಯೆಯಾಗಿದ್ದರೂ, ಅಂದು ಬಂಧನಕೊಳಪಟ್ಟವರು, ಆತ್ಮರಕ್ಷಣೆಗಾಗಿ ಹೋರಾಡಿದ 25 ಸಿಖ್ಖರು ಮಾತ್ರ ಎಂಬುದು ಅಂದಿನ ಪೋಲೀಸರ ಕಾರ್ಯವೈಖರಿ ಪಕ್ಷಾತೀತವಾಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು. ವಿಚಾರಣೆ ನಡೆಸಿದ ನಾನಾವತಿ ಆಯೋಗ, ಸಲ್ಲಿಸಿದ ಪ್ರಮಾಣಪತ್ರಗಳು ಮತ್ತು ಸಾಕ್ಷಿಗಳನ್ನು ಪರಿಶೀಲಿಸಿ, ಅಂದು ಕಲ್ಯಾಣ್ಪುರಿ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ತ್ಯಾಗಿ ಅವರು ಕಲ್ಯಾಣ್ಪುರಿಯ ಬಹುಸಂಖ್ಯಾತ ಸಿಖ್ಖರುಗಳನ್ನು ನಿರಾಯುಧರನ್ನಾಗಿಸಿದ್ದು ತಪ್ಪು ಮತ್ತು ಅದರಿಂದ ಅವರುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹತ್ಯೆಗೊಂಡರು ಎಂದು ಅಭಿಪ್ರಾಯಪಟ್ಟಿತು.

ಪೂರ್ವ ದಿಲ್ಲಿಯ ಮತ್ತೊಂದು ಬಡಾವಣೆಯಾದ ತ್ರಿಲೋಕ್ ಪುರಿ ಇನ್ನೂ ಭೀಕರವಾದ ಸಿಖ್ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿತ್ತು. ನವೆಂಬರ್ 2, 1984ರ ಮಧ್ಯಾಹ್ನ 2ರ ಸಮಯಕ್ಕೆ ಮೂರು ಜನ ಪತ್ರಕರ್ತರುಗಳಾದ ಇಂಡಿಯನ್ ಎಕ್ಸ್ ಪ್ರೆಸ್ಸಿನ  ರಾಹುಲ್ ಬೇಡಿ ಮತ್ತು ಜೋಸೆಫ್ ಮಲಿಯಾಕನ್ ಹಾಗೂ ಜನಸತ್ತಾ ಪತ್ರಿಕೆಯ ಅಲೋಕ್ ತೋಮರ್ ಅವರುಗಳು ತ್ರಿಲೋಕ್ ಪುರಿಯ 32ನೇ ವಿಭಾಗವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ, ಸುಮಾರು 100 ಜನ ಪುಂಡರುಗಳ ಪಡೆ ಅವರನ್ನು ತಡೆದಿತ್ತು. 32ನೇ ವಿಭಾಗದಿಂದ ಹೊರಬರುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ತಡೆದು ಪತ್ರಕರ್ತ ರಾಹುಲ್ ಬೇಡಿಯವರು ಮಾತನಾಡಿಸಿದಾಗ, ಆ ಪೊಲೀಸ್ ಅಧಿಕಾರಿಗಳು ಆ ಪ್ರಾಂತ್ಯದಲ್ಲಿ ಶಾಂತಿ ಇದೆ. ಒಂದೆರಡು ಸಾವುಗಳಾಗಿರಬಹುದೆಂದು ಮಾತ್ರ ಉತ್ತರಿಸಿದರು. ಪೊಲೀಸರು ದೂರ ಸಾಗುತ್ತಲೇ, ಅಲ್ಲಿದ್ದ ಪುಂಡರ ಗುಂಪು ಮೂರೂ ಜನ ಪತ್ರಕರ್ತರುಗಳ ಮೇಲೆ ಆಕ್ರಮಣವನ್ನು ಮಾಡಿ, ಅವರುಗಳು ಅಲ್ಲಿಂದ ಹೊರಟುಹೋಗುವಂತೆ ಆಗ್ರಹಿಸಿತು. ಹೇಗೋ ತಪ್ಪಿಸಿಕೊಂಡು ಒಳನುಗ್ಗಿದ ಪತ್ರಕರ್ತರುಗಳಿಗೆ ಅಲ್ಲೇ ನಿಂತಿದ್ದ ಲಾರಿಯೊಂದಕ್ಕೆ ನೊಣಗಳು ಮುತ್ತುತ್ತಿರುವುದು ಕಣ್ಣಿಗೆಬಿತ್ತು. ಆ ಲಾರಿಯ ಹಿಂಭಾಗದಲ್ಲಿ ಅರೆಬೆಂದ ಮೂರು ದೇಹಗಳಿದ್ದವು. ಅರೆಜೀವವಾಗಿದ್ದ ಒಬ್ಬ ಸಿಖ್ ಯುವಕನೂ ಅದೇ ಲಾರಿಯಲ್ಲಿ ಬಿದ್ದಿದ್ದನು. ಆ ಸಿಖ್ ಯುವಕ ಪತ್ರಕರ್ತರುಗಳೊಡನೆ ಮಾತನಾಡುತ್ತಾ 'ತಾನು ಪಂಜಾಬಿನವನೆಂದು, ನಿನ್ನೆಯ ದಿನ ತ್ರಿಲೋಕ್ ಪುರಿಯ ತನ್ನ ಸಂಬಂಧಿಕರೊಬ್ಬರ ಮನೆಗೆ ಬಂದಿದ್ದಾಗಿಯೂ, 2ನೇ ನವೆಂಬರ್ ನ  ನಸುಕಿನಲ್ಲೇ ದುಷ್ಟರ ಗುಂಪೊಂದು ಧಾಳಿಮಾಡಿ ತಾನುಳಿದುಕೊಂಡಿದ್ದ ಮನೆಯ ಗಂಡಸರನೆಲ್ಲಾ ಕೊಂದು, ತನ್ನನ್ನೂ ಥಳಿಸಿ ಬೆಂಕಿ ಹಚ್ಚಿದುದಾಗಿಯೂ, ತಮ್ಮೆಲ್ಲರ ದೇಹಗಳನ್ನು ಲಾರಿಯೊಂದರ ಹಿಂದೆ ಬಿಸಾಡಿದ್ದಾಗಿಯೂ ಮತ್ತು ದೇಹಗಳು ಕಳೆದ ನಾಲ್ಕು ಗಂಟೆಗಳಿಂದ ಲಾರಿಯಲ್ಲೇ ಬಿದ್ದಿರುವುದಾಗಿಯೂ' ತಿಳಿಸಿದನು.  

ಸಂಜೆ ಆರು ಘಂಟೆ ಆಗುವವರೆಗೆ ತ್ರಿಲೋಕ್ ಪುರಿಯ 32ನೇ ವಿಭಾಗದಲ್ಲೇ  ಕಾದ ಪತ್ರಕರ್ತರುಗಳು, ಕಡೆಗೂ ಆ ಪ್ರದೇಶದ ಪೊಲೀಸ್  ಮುಖ್ಯಾಧಿಕಾರಿ ತ್ಯಾಗಿ ಅವರು ಅಲ್ಲಿಗೆ ಬಂದುದನ್ನು ಕಂಡರು. ವಿಧಿಯಿಲ್ಲದೇ ತ್ಯಾಗಿ ಆ ಮೂರೂ ಪತ್ರಕರ್ತರನ್ನೂ ಆ ಪ್ರಾಂತ್ಯದ ಒಳಗೆ ಕರೆದುಕೊಂಡುಹೋಗಬೇಕಾಯಿತು. ಪತ್ರಕರ್ತರುಗಳು ಒಳಪ್ರವೇಶಿಸುತ್ತಲೇ ಅವರಿಗೆ ಪರಮಾಶ್ಚರ್ಯ ಕಾದಿತ್ತು. ಆ ದಂಗೆಗಳ ಸರಣಿಯಲ್ಲಿ ಒಂದೇ ವಿಭಾಗದಲ್ಲಿ ನಡೆದ ಅತ್ಯಂತ ಹೆಚ್ಚಿನ ಸಂಖ್ಯೆಯ ಸಿಖ್ಖರ ಹತ್ಯೆ ಅಲ್ಲಿ ನಡೆದಿತ್ತು. ಸುಮಾರು 400 ಸಿಖ್ ಪುರಷರ ಹೆಣಗಳು ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದಿದ್ದವು. ತುಂಡರಿಸಿದ ಕೈಗಳ, ಕಾಲುಗಳ ಮತ್ತು ಕೂದಲುಗಳ ರಾಶಿಯನ್ನು ದಾಟದೆ ಬೇರೆ ದಾರಿಯೇ ಇರಲಿಲ್ಲ. ಮೂರು ಸಾಹಸಿ ಪತ್ರಕರ್ತರುಗಳ ಪ್ರಯಾಸದಿಂದ ಭೀಕರವಾದ ಹತ್ಯಾಕಾಂಡವೊಂದು ಬೆಳಕಿಗೆ ಬಂದಿತ್ತು. ಪರಿಸ್ಥಿತಿಗೊಂದು ತೇಪೆ ಹಚ್ಚಲು ಮೇಲಧಿಕಾರಿಗಳು, ಆ ಪ್ರದೇಶದ ಪೊಲೀಸ್ ಮುಖ್ಯಾಧಿಕಾರಿಯಾದ ತ್ಯಾಗಿಯವರನ್ನು ಕರ್ತವ್ಯಲೋಪಕ್ಕಾಗಿ ಅಮಾನತುಗೊಳಿಸಿದರು. ನಾಮಕಾವಸ್ಥೆಗೆಂದು ತ್ರಿಲೋಕ್ ಪುರಿ ಕಗ್ಗೊಲೆಯ  ವಿಚಾರಣೆ ನಡೆಸಿದ ಪೊಲೀಸರು, ನವೆಂಬರ್ 3 ರಂದು ಒಂದೇ ಒಂದು ಪ್ರಕರಣವನ್ನು ಮಾತ್ರ ದಾಖಲಿಸಿದ್ದು ಪೊಲೀಸರೆಷ್ಟು ಪ್ರಾಮಾಣಿಕರಾಗಿದ್ದರು ಎಂಬುದನ್ನು ಎತ್ತಿ ತೋರಿಸುತ್ತಿತ್ತು. ಮೇಲಾಗಿ  ತ್ಯಾಗಿ ಅವರು ಸೇರಿದಂತೆ ಆ ಪ್ರಕರಣಕ್ಕೆ ಸಂಬಂಧಪಟ್ಟ ಯಾವ ಪೊಲೀಸ್ ಅಧಿಕಾರಿಗೂ ಯಾವ ಶಿಕ್ಷೆಯೂ ಆಗಲಿಲ್ಲ.  ಪ್ರಕರಣದ ವಿವರಗಳನ್ನು ಪರಿಶೀಲಿಸಿದ ನಾನಾವತಿ ಆಯೋಗ, ಆ ಪ್ರಾಂತ್ಯದಲ್ಲಿ ವಾಸವಿದ್ದ ಎಲ್ಲಾ ಪುರುಷ ಸಿಖ್ಖರನ್ನು ಹತ್ಯೆಮಾಡಲಾಗಿತ್ತು ಎಂದು ದಾಖಲಿಸಿಕೊಂಡಿತು. ಪ್ರತಿಷ್ಠಿತ ಕಾಂಗ್ರೆಸ್ ರಾಜಕಾರಣಿಗಳಾದ ಎಚ್.ಕೆ.ಎಲ್.ಭಗತ್, ರಾಂಪಾಲ್ ಸರೋಜ್ ಮತ್ತು ಅಶೋಕ್ ರವರುಗಳು ದೋಷಿಗಳೆಂದು ನಾನಾವತಿ ಆಯೋಗ ಪರಿಗಣಿಸಿತಾದರೂ, ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳೆಲ್ಲವೂ ವಜಾಗೊಂಡಿದ್ದರಿಂದ, ಅವರುಗಳೆಲ್ಲಾ ದೋಷಮುಕ್ತರಾದರು.  

ಮನಮೋಹನ್ ಬೀರ್ ಸಿಂಗ್ ತಲ್ವಾರ್ ರವರು ಮಹಾವೀರ ಚಕ್ರವನ್ನು ಪಡೆದ ಮಾಜಿ ಯೋಧರಾಗಿದ್ದರು. 1971ರಲ್ಲಿ ನಡೆದ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಆಗ್ರಾದ ವಾಯುನೆಲೆಯ ಮೇಲೆ ಪಾಕ್ ನಡೆಸಿದ ಆಕ್ರಮಣವನ್ನು ಹಿಮ್ಮೆಟಿಸಿದ ಕೀರ್ತಿ ಅವರದ್ದಾಗಿತ್ತು. ನಿವೃತ್ತಿಯನಂತರ ಅವರು ದಿಲ್ಲಿಯ ವೆಸ್ಟ್ ಪಟೇಲ್ ನಗರದ ನಿವಾಸಿಯಾಗಿದ್ದರು.  ಅವರ ಮನೆಯ ಮುಂಭಾಗದ ಮಳಿಗೆಯೊಂದರಲ್ಲಿ ಸಿದ್ಧ ಉಡುಪುಗಳ ಅಂಗಡಿಯೊಂದನ್ನು ಅವರು ನಡೆಸುತ್ತಿದ್ದರು. ಮಾಜಿ ಯೋಧರಾದುದರಿಂದ ಅವರಿಗೆ ಪರವಾನಿಗೆ ಸಹಿತ ಬಂದೂಕವೊಂದನ್ನು ಆತ್ಮರಕ್ಷಣೆಗೆಂದು ನೀಡಲಾಗಿತ್ತು. ಇಂದಿರಾ ಗಾಂಧಿಯವರ ಹತ್ಯೆಯಾದ ಮಾರನೇ ದಿನ ಸುಮಾರು ಬೆಳಗ್ಗೆ 9.30ರ ಸಮಯದಲ್ಲಿ ದಂಗೆಕೋರರ ಗುಂಪೊಂದು ತಲ್ವಾರರ ಅಂಗಡಿ ಮತ್ತು ಮನೆಯ ಮೇಲೆ ಧಾಳಿಯನ್ನು ಮಾಡಿತ್ತು. ದಂಗೆಕೋರರ ಮುಂದೆ ಕೈಜೋಡಿಸಿದ ತಲ್ವಾರರ ನೆರವಿಗೆ ಅವರ ನೆರೆಹೊರೆಯವರಾದ ಹಿಂದೂ ಬಾಂಧವರೂ ಬಂದಿದ್ದರು. ತಾವು ಮಾಜಿ ಯೋಧರೆಂದು ಮತ್ತು ಮಹಾವೀರ ಚಕ್ರ ವಿಜೇತರೆಂದೂ ನಿವೇದಿಸಿಕೊಂಡ ತಲ್ವಾರರು ದಂಗೆಕೋರರನ್ನು ಹಿಂದೆ ಕಳುಹಿಸುವಲ್ಲಿ ಯಶಸ್ವಿಯಾದರು. ಅದೇ ದಿನ ಮಧಾಹ್ನ 2.30ರ ವೇಳೆಗೆ ಎರಡು ಸರಕಾರಿ ಬಸ್ಸುಗಳ ಭರ್ತಿ ತುಂಬಿದ್ದ ದಂಗೆಕೋರರು ತಲ್ವಾರರ ಮನೆಯ ಮುಂದೆ ಬಂದಿಳಿದು ಮತ್ತೆ ಧಾಳಿಯನ್ನು ಮಾಡಲಾರಂಭಿಸಿದರು. ಸಾಯಂಕಾಲ ನಾಲ್ಕರ ಹೊತ್ತಿಗೆ ಸುಮಾರು 2000 ದಂಗೆಕೋರರ ದಂಡು ತಲ್ವಾರರ ಮನೆಯ ಮುಂದೆ ಮುತ್ತಿಗೆ ಹಾಕಿತ್ತು. ಅಷ್ಟು ಹೊತ್ತಿಗೆ ಪೊಲೀಸರ ಒಂದು ತಂಡ ತಲ್ವಾರರ ಮನೆಯ ಮುಂದೆ ಬಂದಿಳಿದಿತ್ತು. ಆ ಪೊಲೀಸ್ ತಂಡ ದಂಗೆಕೋರರನ್ನು ಚದುರಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಪೋಲೀಸರ ಆಗಮನದನಂತರವೂ  ದಂಗೆಕೋರರು ತಮ್ಮ ಆಕ್ರಮಣವನ್ನು ಮುಂದುವರೆಸಿದರು. ತಲ್ವಾರರ ಮನೆಯ ಮೇಲೆ ಗುಂಡುಗಳನ್ನು ಹಾರಿಸಿದಾಗ, ತಲ್ವಾರರೂ ಆತ್ಮರಕ್ಷಣೆಗಾಗಿ ಗುಂಡುಗಳನ್ನು ಹಾರಿಸಬೇಕಾಯಿತು. ನಡೆದ ಗುಂಡಿನ ಕಾಳಗದಲ್ಲಿ ಮೂರು ಜನ ದಂಗೆಕೋರರು ಸ್ಥಳದಲ್ಲೇ ಮೃತಪಟ್ಟರು. ಇನ್ನಿಬ್ಬರು ದಂಗೆಕೋರರು ಆಸ್ಪತ್ರೆಯಲ್ಲಿ ಮೃತಪಟ್ಟರು. ಸುದ್ದಿ ತಳಿದ ಹಿರಿಯ ಪೊಲೀಸ್ ಅಧಿಕಾರಿಗಳು ತಲ್ವಾರರ ಮನೆಯ ಮುಂದೆ ಬಂದಿಳಿದರು. ಆ ಪೊಲೀಸರು ಮೊದಲು ಮಾಡಿದ ಕೆಲಸವೇನೆಂದರೆ, ತಲ್ವಾರರ ಕೈಯಲ್ಲಿದ್ದ ಬಂದೂಕವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು. ಮರುಕ್ಷಣವೇ ಪೊಲೀಸರು ಕೊಲೆಯ ಆರೋಪದ ಮೇಲೆ ತಲ್ವಾರರನ್ನು ಬಂಧಿಸಿದರು. ತಾವು ಮಾಜಿ ಯೋಧರೆಂದು, ಮಹಾವೀರ ಚಕ್ರ ವಿಜೇತರೆಂದೂ, ಆತ್ಮರಕ್ಷಣೆಗಾಗಿ ಮಾತ್ರ ಗುಂಡು ಹಾರಿಸಿದ್ದು ಎಂದು ಗೋಗರೆದ ತಲ್ವಾರರ ಮನವಿಯನ್ನು ಪೊಲೀಸರು ಕೇಳದಾದರು.  ನವೆಂಬರ್ 1, 1984ರಂದು ವೆಸ್ಟ್ ಪಟೇಲ್ ನಗರದ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ದಾಖಲಾದ ಮೊದಲ ಪ್ರಕರಣ ತಲ್ವಾರರದಾಗಿತ್ತು. ಸಿಖ್ಖರ ವಿರುದ್ಧ ನಡೆದ ಕಗ್ಗೊಲೆಯ ದಿನಗಳಲ್ಲಿ ಸಿಖ್ಖರ ವಿರುದ್ಧ ದಾಖಲಿಸಿದ ಪ್ರಕರಣೆಗಳೇ ಹೆಚ್ಚಾಗಿತ್ತು. ತಿಹಾರ್ ಜೈಲಿಗೆ ಅಟ್ಟಲ್ಪಟ್ಟ ತಲ್ವಾರರು ಅಲ್ಲಿನ ಕೆಳದರ್ಜೆಯ ಕೊಠಡಿಯೊಂದರಲ್ಲಿ 15 ದಿನಗಳ ಸೆರೆವಾಸ ಅನುಭವಿಸಬೇಕಾಯಿತು. ತಲ್ವಾರರ ಪ್ರಕರಣ ಎರಡೂ ಆಯೋಗಗಳ ಮುಂದೆ ಪ್ರಸ್ತಾಪಗೊಂಡರೂ, ಯಾವ ಪೊಲೀಸ್ ಅಧಿಕಾರಿಗಾಗಲಿ, ದಂಗೆಕೋರರಿಗಾಗಲೀ ಯಾವ ಶಿಕ್ಷೆಯೂ ಆಗಲಿಲ್ಲ. 

ಅಂದಿನ ಸಿಖ್ಖರ ವಿರುದ್ಧದ ದಂಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹತರಾದವರಲ್ಲಿ ಬಹುತೇಕರು ಪುರುಷರೇ ಆಗಿದ್ದರು. ತಲೆಯ ಮೇಲಿನ ಪಗಡಿ ಮತ್ತು ಗಡ್ಡದಿಂದ ಪುರುಷ ಸಿಖ್ಖರನ್ನು ಗುರುತಿಸುವುದು ದಂಗೆಕೋರರಿಗೆ ಸುಲಭವಾಗಿತ್ತು. ಬಲಿಯಾದವರಲ್ಲಿ ಪುರುಷರೇ ಹೆಚ್ಚಾಗಿದ್ದುದರಿಂದ ಬಡ ಸಿಖ್ ಕುಟುಂಬಗಳಿಗೆ ದುಡಿಯುವ ಗಂಡಸರೇ ಇಲ್ಲದಂತಾಗಿತ್ತು. ಬದುಕುಳಿದ ಸಿಖ್ ಮಹಿಳೆಯರ ಬವಣೆ ಕೇಳುವವರಿಲ್ಲದಂತಾಗಿತ್ತು. ಗಂಡ, ಮಗ, ಅಣ್ಣತಮ್ಮಂದಿರನ್ನು ಕಳೆದುಕೊಂಡ ಮಹಿಳೆಯರು ಅನಾಥರಾಗಿ ಉಳಿದುಹೋಗಿದ್ದರು. ನ್ಯಾಯವನ್ನು ಒದಗಿಸುವ ಮಾತು ಹಾಗಿರಲಿ, ಆ ಕ್ಷಣಕ್ಕೆ ಬೇಕಾದ ಹಣ ಪರಿಹಾರದ ನೀರೀಕ್ಷೆಯೂ ದೂರದ ಮಾತಾಗಿತ್ತು. ಹಾಗೆಂದ ಮಾತ್ರಕ್ಕೆ ಹತರಾದ ಅಥವಾ ಅತ್ಯಾಚಾರಕ್ಕೆ ಒಳಗಾದ ಸಿಖ್ ಮಹಿಳೆಯರು ಇರಲಿಲ್ಲವೆಂದೇನಿಲ್ಲ. 

ಎರಡೂ ಆಯೋಗಗಳ ಮುಂದೆ ತಮ್ಮ ಪ್ರಮಾಣಪತ್ರವನ್ನು ದಾಖಲಿಸಿದ ದಿಲ್ಲಿಯ ಸುಲ್ತಾನ್ ಪುರಿಯ ಸಿಖ್ ಮಹಿಳೆ ಪದ್ಮಿ ಕೌರ್ ರವರ ಚಿಂತಾಜನಕ ಕಥೆ ಹೀಗಿತ್ತು. "ನವೆಂಬರ್ 1, 1984ರಂದು ನಾವು ನಮ್ಮ ಮನೆಯಲ್ಲಿ ಕುಳಿತ್ತಿದ್ದೆವು. ನನ್ನ ಮಗಳು ಮೈನಾ ಕೌರಳ ಮದುವೆಯ ದಿನಗಳಾದುದರಿಂದ ಸಾಕಷ್ಟು ಸಂಖ್ಯೆಯಲ್ಲಿ ನೆಂಟರುಗಳು ನಮ್ಮ ಮನೆಗೆ ಬಂದಿದ್ದರು. ನಮ್ಮ ಮನೆಯ ಬಳಿ ಬಂದ ಪೊಲೀಸ್ ವಾಹನವೊಂದು ಎಲ್ಲಾ ಸಿಖ್ಖರು ಮನೆಯ ಒಳಗೆ ಇರಬೇಕಾಗಿಯೂ ಮತ್ತು ನಮ್ಮೆಲ್ಲರ ಹಿತರಕ್ಷಣೆಯನ್ನು ಪೊಲೀಸರು ಮಾಡುವುದಾಗಿಯೂ ಧ್ವನಿವರ್ಧಕದ ಮೂಲಕ ಘೋಷಣೆಯನ್ನು ಮಾಡಿತು. ನಮ್ಮಗಳಲ್ಲಿ ಭಯ ಮೂಡಿಹೋಗಿತ್ತು. ಕೆಲವೇ ಕ್ಷಣಗಳಲ್ಲಿ ದಂಗೆಕೋರರ ಗುಂಪೊಂದು ಬಂದು ನಮ್ಮ ಮನೆಯ ಬಾಗಿಲನ್ನು ಮುರಿದು ಒಳ ನುಗ್ಗಿತು. ವಧುವಿನ ಉಡುಪಿನಲ್ಲಿ ಕುಳಿತಿದ್ದ ನನ್ನ ಮಗಳು ಮೈನಾ ಕೌರಳನ್ನು ಹಿಡಿದು ಎಳೆದಾಡಿದ ದುಷ್ಟರು ಅವಳನ್ನು ಎತ್ತಿಕೊಂಡು ಹೋದರು. ‘ನನ್ನ ಮಗಳು ಮಧುಮಗಳು. ಅವಳಿಗೆ ಏನೂ ಮಾಡಬೇಡಿರೆಂದು ನಮ್ಮ ಯಜಮಾನರು ಅಂಗಲಾಚಿದರೂ ದುಷ್ಕರ್ಮಿಗಳು ಕೇಳಲಿಲ್ಲ.’ ಯಾವ ಸಿಖ್ಖನನ್ನೂ ಉಳಿಸಿವುದಿಲ್ಲವೆಂದು ಅಬ್ಬರಿಸಿದ ದಂಗೆಕೋರರು ಪುರುಷ ಸಿಖ್ಖರನ್ನು ಥಳಿಸಲಾರಂಭಿಸಿದರು. ಮದುವೆ ಮನೆಯಾದುದರಿಂದ ನಮ್ಮ ಮನೆಯಲ್ಲಿ ಸಾಕಷ್ಟು ಜನರು ಸೇರಿದ್ದರು.  ನನ್ನ ಗಂಡ ಚರಣ್ ಸಿಂಗ್, ಮಗ ಅಶೋಕ್ ಸಿಂಗ್, ನೆರೆಮನೆಯ ಬಾಂಧವರಾದ ಬಲಿಂದರ್ ಸಿಂಗ್, ಅಣ್ಣಂದಿರಾದ ಇಂದರ್ ಸಿಂಗ್, ದಲಿಪ್ ಸಿಂಗ್, ಭಜನ್ ಸಿಂಗ್, ಬಾವಂದಿರುಗಳಾದ ಪ್ರೇಮ್ ಸಿಂಗ್, ಧರಮ್ ಸಿಂಗ್, ಧರಮ್ ಸಿಂಗರ ಮಗ ಅನಿಲ್ ಸಿಂಗ್ ಇವರೆಲ್ಲರನ್ನೂ ತೀವ್ರವಾಗಿ ಥಳಿಸಿದ ದಂಗೆಕೋರರು, ಅವರುಗಳ ಮೇಲೆ ಸೀಮೆಎಣ್ಣೆಯನ್ನು ಸುರಿದು ಬೆಂಕಿಹಚ್ಚಿದರು. ಅವರೆಲ್ಲರೂ ಸುಟ್ಟು ಸತ್ತುಹೋದರು. ನಮ್ಮ ನೆರೆಯವನೇ ಆದ ಓಮಿ ಎಂಬುವನು ಟೆಂಪೋ ಒಂದನ್ನು ತಂದು ಅವರ ಮೃತದೇಹಗಳನೆಲ್ಲಾ ಹೊತ್ತೊಯ್ದನು. ದಂಗೆಕೋರರಲ್ಲಿ ಹೆಚ್ಚಿನವರು ನಮ್ಮ ನೆರೆಹೊರೆಯವರೇ ಆಗಿದ್ದರು. ಅಪಹರಿಸಿಕೊಂಡುಹೋದ ನನ್ನ ಮಗಳು ಮೈನಾ ಕೌರಳನ್ನು ಮೂರು ದಿನಗಳನಂತರ ನನ್ನ ಮನೆಗೆ ತಂದು ಬಿಸಾಡಲಾಯಿತು. ಥಳಿತ, ಅತ್ಯಾಚಾರಗಳಿಗೆ ತುತ್ತಾದ ನನ್ನ ಮಗಳು ಈಗ ಹುಚ್ಚು ಹಿಡಿದಂತವಳಾಗಿದ್ದಾಳೆ."  ಪದ್ಮಿ ಕೌರ್ ತನ್ನ ಮಗಳಾದ ಮೈನಾ ಕೌರಳನ್ನು ಅಪಹರಿಸಿಕೊಂಡು ಹೋದ, ಸುಲ್ತಾನ್ ಪುರಿಯ ವ್ಯಕ್ತಿಯೊಬ್ಬನ ಹೆಸರನ್ನು ಎರಡೂ ಆಯೋಗಗಳ ಮುಂದೆ ದಾಖಲಿಸಿದರೂ, ಆ ಪ್ರಕರಣದಲ್ಲಿ ಯಾವ ಅಪರಾಧಿಗೂ ಶಿಕ್ಷೆ ಆಗಲಿಲ್ಲ. 

ದಿಲ್ಲಿಯ ಮಹಿಳಾ ಹೋರಾಟಗಾರ್ತಿ ಮಧು ಕಿಶ್ವರ್ ಅವರು ದಿಲ್ಲಿಯ ತ್ರಿಲೋಕ್ ಪುರಿಯ ಸಿಖ್ ಮಹಿಳೆ ಗುರ್ದಿಪ್ ಕೌರರ ಪರವಾಗಿ ನಾನಾವತಿ ಆಯೋಗದ ಮುಂದೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ಗುರ್ದಿಪ್ ಕೌರರ ಕರುಣಾಜನಕ ಕಥೆ ಹೀಗಿತ್ತು. 'ದಿಲ್ಲಿಯ ತ್ರಿಲೋಕ್ ಪುರಿಯ ಬ್ಲಾಕ್ 32ರ ನಿವಾಸಿ ಗುರ್ದಿಪ್ ಕೌರ್ ಅಂದಿಗೆ 45 ವರ್ಷದ ಮಹಿಳೆಯಾಗಿದ್ದರು. ಅವರ ಗಂಡ ಅದೇ ಪ್ರದೇಶದಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದರು. ಆಕೆಯ ಮೊದಲ ಮಗ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದನು. ಎರಡನೆಯ ಮಗ ರೇಡಿಯೋ ರಿಪೇರಿ ಮಾಡುವವನಾಗಿದ್ದನು. ಮೂರನೆಯ ಮಗ ಇನ್ನೂ ಚಿಕ್ಕವನು. 

ನವೆಂಬರ್ 1, 1984ರಂದು ಬೆಳಗ್ಗೆ 8 ಗಂಟೆಯ ಹೊತ್ತಿಗೆ ದಂಗೆಕೋರರ ಗುಂಪೊಂದು ಗುರ್ದಿಪ್ ಕೌರರ ಮನೆಯ ಮೇಲೆ ಧಾಳಿ ನಡೆಸಿತು. ಧಾಳಿಗೆ ಹೆದರಿ ಹೊರ ಓಡಿದ ಆಕೆಯ ಗಂಡ ಮತ್ತು ಇಬ್ಬರು ಮಕ್ಕಳನ್ನು ಬೆಂಕಿ ಹಚ್ಚಿ ಸುಡಲಾಯಿತು. ಮನೆಯ ಒಳಗೆ ಅವಿತುಕೊಂಡಿದ್ದ ಆಕೆಯ ಮೂರನೇ ಮಗನನ್ನೂ ಹೊರಗೆಳದ ದುಷ್ಕರ್ಮಿಗಳು ಗುರ್ದಿಪ್ ಕೌರರ ಮೇಲೂ ಆಕ್ರಮಣ ಮಾಡಿದರು.  ಗುರ್ದಿಪ್ ಕೌರರನ್ನು ವಿವಸ್ತ್ರಗೊಳಿಸಿದ ಎಂಟು ದಂಗೆಕೋರರು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. ಅತ್ಯಾಚಾರದನಂತರ ಗುರ್ದಿಪ್ ಕೌರರ ಕಿರಿಯ ಮಗನನ್ನೂ ಬೆಂಕಿ ಹಚ್ಚಿ ಸುಟ್ಟುಹಾಕಲಾಯಿತು. ಎರಡೂ ಆಯೋಗಗಳೂ ಗುರ್ದಿಪ್ ಕೌರರ ಪ್ರಕರಣವನ್ನೂ ಪರಿಶೀಲಿಸಿದರೂ, ಆಕೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಘಟನೆಗೆ ಸೂಕ್ತವಾಗಿ ಸ್ಪಂದಿಸಲೇ ಇಲ್ಲ. 

1984ರ ಸಿಖ್ಖರ ವಿರುದ್ಧದ ದಂಗೆಯಲ್ಲಿ, ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಸಿಖ್ಖರನ್ನು ಹೊರಗೆಳೆದು ಹತ್ಯೆಮಾಡಿದ ಪ್ರಕರಣಗಳು ಅವಿರತವಾಗಿ ನಡೆದವು. ಭಾರತ ಕೇಂದ್ರ ಸರಕಾರದ ಮಾಜಿ ರೈಲ್ವೆ ಮಂತ್ರಿ ಮಧು ದಂಡಾವತೆಯವರು ಮಿಶ್ರಾ ಆಯೋಗಕ್ಕೆ ಸಲ್ಲಿಸಿದೆ ಪ್ರಮಾಣ ಪಾತ್ರದಲ್ಲಿ 'ತಾವು ನವೆಂಬರ್ 2, 1984ರಂದು ಪ್ರಯಾಣಿಸುತ್ತಿದ್ದ ರೈಲು ದಿಲ್ಲಿಯ ತುಘಲಕ್ಕಾಬಾದ್ ನಿಲ್ದಾಣವನ್ನು ತಲಪುತ್ತಲೇ, ಪುಂಡರ ಗುಂಪೊಂದು ರೈಲು ಡಬ್ಬಗಳ ಒಳ ನುಗ್ಗಿ ಎರಡು ಸಿಖ್ ವ್ಯಕ್ತಿಗಳನ್ನು ಹೊರಗೆಳೆದು, ಅವರನ್ನು ಥಳಿಸಿ, ಜೀವಂತವಾಗಿ ಸುಟ್ಟರೂ, ಸಮೀಪವೇ ಇದ್ದ ಪೊಲೀಸರು ಯಾವ ಕ್ರಮವನ್ನು ತೆಗೆದುಕೊಳ್ಳಲಿಲ್ಲಾ ಎಂದು ದಾಖಲಿಸಿದ್ದಾರೆ.' 

ಗುರ್ಮೇಜ್ ಸಿಂಗ್ ಎಂಬ ಯುವಕ ಮುಂಬೈನ ನಿವಾಸಿಯಾಗಿದ್ದವನು. 1983ರಲ್ಲಿ ಅವನು ಮದುವೆಯಾಗಿದ್ದು ಮೊಹಿಂದರ್ ಕೌರ್ ಎಂಬ ಪಂಜಾಬಿನ ಯುವತಿಯನ್ನು.  ಮದುವೆಯಾನಂತರವೂ ತನ್ನ ಅತ್ತೆ-ಮಾವರ ಮನೆಯಲ್ಲೇ ಮೊಹಿಂದರ್ ಕೌರ್ ಉಳಿದುಕೊಂಡಿದ್ದು ಪಂಜಾಬಿನ ಖದೂರ್ ಸಾಹಿಬ್ ಎಂಬ ಹಳ್ಳಿಯಲ್ಲಿ. ಮದುವೆಯಾದ ಕೆಲವೇ ದಿನಗಳಲ್ಲಿ ಗರ್ಭಿಣಿಯಾದ ಮೊಹಿಂದರ್, ಪಂಜಾಬಿನ ಆ ಹಳ್ಳಿಯಲ್ಲೇ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿದ್ದಳು. ಹೆಂಡತಿ ಮತ್ತು ನವಜಾತ ಹೆಣ್ಣುಮಗುವನ್ನು ತಾನಿದ್ದ ಮುಂಬೈಗೆ ಕರೆದೊಯ್ಯಲ್ಲೆಂದು ಸಂಭ್ರಮದಿಂದ ಪಂಜಾಬಿಗೆ ಬಂದವನು ಗುರ್ಮೇಜ್ ಸಿಂಗ್. ಪಂಜಾಬಿನಿಂದ ಮುಂಬೈಗೆ ಹೋಗುವ ರೈಲಿನಲ್ಲಿ ಹೊರಟವರು ಗುರ್ಮೇಜ್ ಮತ್ತವನ ಕುಟುಂಬ. ಮೊಹಿಂದರ್ ಕೌರಳಿಗೆ ಅದು ಪಂಜಾಬಿನಿಂದ ಹೊರಗೆ ಹೊರಟ ಮೊದಲ ಪ್ರಯಾಣವಾಗಿತ್ತು.  ದುರದೃಷ್ಟವಶಾತ್ ಅವರ ರೈಲು ಪ್ರಯಾಣ ನವೆಂಬರ್ 1, 1984ರಂದಾಗಿತ್ತು. ಸಿಖ್ಖರ ಮಾರಣಹೋಮದ ಮೊದಲ ದಿನ ಅದಾಗಿತ್ತು.  ಅಂದೇ ಅವರ ರೈಲು ದಿಲ್ಲಿಯ ಶಾಹದರಾ ರೈಲ್ವೆ ನಿಲ್ದಾಣವನ್ನು ತಲುಪಿತು. 

ಪಂಜಾಬಿನಿಂದ ಬಂದ ರೈಲಿನಲ್ಲಿ ಸಿಖ್ ಜನರು ಇದ್ದೇ ಇರುವರೆಂದು ದಂಗೆಕೋರರು ಹಸಿದ ಹೆಬ್ಬುಲಿಗಳಂತೆ ಕಾಯುತ್ತಿದ್ದರು. ರೈಲು ಬಂದು ನಿಲ್ಲುತ್ತಲೇ ದಂಗೆಕೋರರ ಒಂದು ತಂಡ ಗುರ್ಮೇಜ್ ಇದ್ದ ರೈಲು ಡಬ್ಬದ ಒಳಗೆ ನುಗ್ಗಿತು. ಗುರ್ಮೇಜನಿಗೆ ತಪ್ಪಿಸಿಕ್ಕೊಳ್ಳುವ ದಾರಿಯೇ ಇರಲಿಲ್ಲ. ನಿಷ್ಕರುಣಿ ದಂಗೆಕೋರರು ಗುರ್ಮೇಜನನ್ನು ರೈಲಿನಿಂದ ಹೊರಗೆಳೆದು ಮನಬಂದಂತೆ ಥಳಿಸಿದರು. ದಂಗೆಕೋರರು ಮುಂದೆ ಹೋದನಂತರ, ಮೊಹಿಂದರ್ ತನ್ನ ಸಹಪ್ರಯಾಣಿಕರ ಸಹಾಯದೊಂದಿಗೆ  ಅರೆಜೀವವಾಗಿದ್ದ ತನ್ನ ಗಂಡನ ಶರೀರವನ್ನು ರೈಲಿನ ಒಳಗೆ ಎಳೆದುಕೊಂಡಳು. ಕೆಲವೇ ನಿಮಿಷಗಳಲ್ಲಿ ದಂಗೆಕೋರರ ಮತ್ತೊಂದು ತಂಡ ಅದೇ ರೈಲು ಡಬ್ಬದ ಒಳಗೆ ನುಗ್ಗಿತ್ತು. ದಂಗೆಕೋರರ ಸಂಚು ವ್ಯವಸ್ಥಿತವಾಗಿತ್ತು. ಮೊದಲ ತಂಡ ಸಿಖ್ಖರನ್ನು ಹೊರಗೆಳೆದು ಥಳಿಸುವುದು ಮತ್ತು ಎರಡನೇ ತಂಡ ಥಳಿಸಿದ ಸಿಖ್ಖರನ್ನು ಸುಟ್ಟುಹಾಕುವುದು ದಂಗೆಕೋರರ ಕ್ರಮವಾಗಿತ್ತು. ಗುರ್ಮೇಜನ ಶರೀರವನ್ನು ಸಹಪ್ರಯಾಣಿಕರು ಆಸನವೊಂದರ ತಳಗೆ ಬಚ್ಚಿಟ್ಟಿದ್ದರು. ಸಹಪ್ರಯಾಣಿಕರು ಎರಡನೇ ದಂಗೆಕೋರರ ತಂಡಕ್ಕೆ, ಇದ್ದ ಒಬ್ಬ ಸಿಖ್ಖನನ್ನು ದಂಗೆಕೋರರು ಎಳೆದುಕೊಂಡು ಹೋದರು ಎಂದು ಉತ್ತರಿಸಿದರೂ, ಆ ದುಷ್ಟರು ನಂಬದಾದರು. ದಂಗೆಕೋರರ ಕೈಯಲ್ಲಿ ಪ್ರಯಾಣಿಕರ ಪಟ್ಟಿ ಇತ್ತೋ ಎಂಬಂತೆ,  ಡಬ್ಬದಲ್ಲಿ ಇದ್ದ ಒಬ್ಬ ಸಿಖ್ಖನನ್ನು ಹುಡುಕಲಾರಂಭಿಸಿದರು. ಆಸನದ ಕೆಳಗಿದ್ದ ಗುರ್ಮೇಜನ ಶರೀರವನ್ನು ದರದರನೆ ತಳಗೆಳೆದ ದುಷ್ಟರು ಆತನ ದೇಹದ ಮೇಲೆ ಸೀಮೆಎಣ್ಣೆಯನ್ನು ಸುರಿದು ಸುಟ್ಟುಹಾಕಿದರು. ಪತಿ ಕಣ್ಣೆದುರೇ ಭಸ್ಮವಾದುದನ್ನು, ಅಸಹಾಯಕಳಾದ ಮೊಹಿಂದರ್ ತನ್ನ ಎರಡು ತಿಂಗಳ ಮಗುವನ್ನು ಎದೆಗವಚಿಕೊಂಡು ನೋಡಬೇಕಾಯಿತು. 

ಉರಿದು ಹೋಗುತ್ತಿದ್ದ ತನ್ನ ಗಂಡನ ಶರೀರವನ್ನು ರೈಲಿನ ಒಳಗೆ ಎಳೆದುಕೊಡುವಂತೆ ಮೊಹಿಂದರ್ ತನ್ನ ಸಹಪ್ರಯಾಣಿಕರನ್ನು ಕೇಳಿಕೊಂಡಳು. ಇಲ್ಲವಾದಲ್ಲಿ ತಾನು ದಿಲ್ಲಿಯ ಶಾಹದರಾ ನಿಲ್ದಾಣದಲ್ಲೇ ಇಳಿದುಕೊಳ್ಳುವುದಾಗಿ ಬೇಡಿಕೊಂಡಳು.  ದಿಲ್ಲಿಯ ರೈಲು ನಿಲ್ದಾಣದಲ್ಲಿ ಆ ದಿನ ಇಳಿದುಕೊಂಡರೆ ಬರಬಹುದಾದ ವಿಪತ್ತುಗಳನ್ನು ವಿವರಿಸಿದ ಸಹಪ್ರಯಾಣಿಕರು ಅವಳನ್ನು ಮುಂಬೈಗೆ ಕರೆದೊಯ್ದರು. ಎರಡು ತಿಂಗಳುಗಳಾದ ಮೇಲೆ ಅವಳ ಅಣ್ಣ ಬಂದು ಮೊಹಿಂದರಳನ್ನು ಮತ್ತು ಮಗುವನ್ನೂ ಪಂಜಾಬಿಗೆ ಕರೆದೊಯ್ದನು. 

ಬಡವಳು ಹಾಗೂ ಮುಗ್ಧಳಾದ ಮೊಹಿಂದರ್ ಕೌರಳಲ್ಲಿ ದಿಲ್ಲಿಗೆ ಬಂದು ಹತ್ಯೆಯಾಗಿಹೋಗಿದ್ದ ಗಂಡನ ಮರಣ ಪ್ರಮಾಣಪತ್ರವನ್ನು ಪಡೆಯುವ ಮತ್ತು ದೊರಕಬಹುದಾದ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ವ್ಯವಹಾರ ಜ್ಞಾನ ಮತ್ತು ಹಣಬಲ, ಯಾವುದೂ ಇರಲಿಲ್ಲ. ಅಂತಹ ಸಮಯದಲ್ಲಿ ಮೊಹಿಂದರಳ ಪಾಲಿಗೆ ದೇವರಾಗಿ ದೊರಕಿದವರು ದಿಲ್ಲಿಯ ಸುಪ್ರಸಿದ್ಧ ವಕೀಲ ಹರ್ವಿಂದರ್ ಸಿಂಗ್ ಫುಲ್ಕಾ ರವರು. ತಮ್ಮ ಇಡೀ ವಕೀಲಿ ವೃತ್ತಿ ಜೀವನವನ್ನೇ 1984ರ ಸಿಖ್ಖರ ಮಾರಣಹೋಮದ ಘಟನೆಯ ಬಲಿಪಶುಗಳ ಮತ್ತು ಅವರ ಕುಟುಂಬಗಳ ಕಾನೂನು ಹೋರಾಟಕ್ಕೆ ಮುಡಿಪಾಗಿಟ್ಟವರು ವಕೀಲ ಫುಲ್ಕಾ ರವರು. 1996ರಲ್ಲಿ ದಿಲ್ಲಿಯ ಹೈಕೋರ್ಟ್ ಸಿಖ್ ದಂಗೆಯಲ್ಲಿ ಮೃತರಾದವರ ಕುಟುಂಬಗಳಿಗೆ ನೀಡಬಹುದಾದ ಪರಿಹಾರ ಮೊತ್ತ ಮೂರುವರೆ ಲಕ್ಷ ರೂಪಾಯಿಗಳೆಂದು ನಿಗದಿಮಾಡಿತು. ಪಂಜಾಬಿನ ಹಿರಿಯರೊಬ್ಬರಿಂದ ಮೊಹಿಂದರ್ ಕೌರಳ ಕರುಣಾಜನಕ ಘಟನೆ ವಕೀಲ ಫುಲ್ಕಾ ರವರಿಗೆ ತಿಳಿಯಿತು. ಮೃತಪಟ್ಟ ಪತಿಯ ಮರಣ ಪ್ರಮಾಣಪತ್ರ ಮೊಹಿಂದರಳ ಕೈಯಲ್ಲಿರಲಿಲ್ಲ. ಹಾಗಾಗಿ ಆಕೆಯ ದಾವೆಯನ್ನು ನಡೆಸುವುದು ಫುಲ್ಕಾ ರವರಿಗೆ ಬಹಳ ಕಷ್ಟವೇ ಆಯಿತು. ಆದರೂ ರೈಲ್ವೆ ಚೌಕಿದಾರನೊಬ್ಬನ ಸಾಕ್ಷಿಯ ಆದರದ ಮೇಲೆ ಆ ದಾವೆಯನ್ನು ಎತ್ತಿಹಿಡಿಯುವುದು ವಕೀಲ ಫುಲ್ಕಾ ರವರಿಗೆ ಸಾಧ್ಯವಾಯಿತು.  ಈ ನಡುವೆ ಫುಲ್ಕಾ ರವರು ಮೊಹಿಂದರಳ ದಾವೆಯನ್ನು ಕೈಗೆತ್ತಿಕೊಂಡೇ 10 ವರ್ಷಗಳು ಉರುಳಿದ್ದವು.  ಮೊಹಿಂದರಳ ಮಗಳು 22ರ ಸುಂದರ ಯುವತಿಯಾಗಿ ಬೆಳೆದು ನಿಂತಿದ್ದಳು. ನರ್ಸಿಂಗ್ ಪದವೀಧರೆಯಾಗಿದ್ದ ಅವಳಿಗೆ ವಿವಾಹದ ನಿಶ್ಚಯವೂ ಆಗಿತ್ತು. ಆ ಸಮಯಕ್ಕೆ ಏಳು ಲಕ್ಷ ರೂಪಾಯಿನ ಪರಿಹಾರ ಮೊತ್ತದ ಚೆಕ್ಕು ಮೊಹಿಂದರಳ ಕೈಸೇರಿತ್ತು. ಚೆಕ್ಕು, ಸಿಹಿತಿಂಡಿಯ ಪೊಟ್ಟಣ ಮತ್ತು ಮದುವೆಯ ಆಮಂತ್ರಣಪತ್ರಗಳೊಂದಿಗೆ ವಕೀಲ ಫುಲ್ಕಾ ರವರ ಮನೆಗೆ ಬಂದ ಮೊಹಿಂದರಳ ಆನಂದಕ್ಕೆ ಪಾರವೇ ಇರಲಿಲ್ಲ. ಪಂಜಾಬಿನಲ್ಲಿ ನಡೆದ ಆ ಮದುವೆಗೆ ಹೋಗಿದ್ದು ನನ್ನ ಜೀವನದ  ಸಾರ್ಥಕ ಕ್ಷಣ ಎಂದು ಸಂತಸಪಟ್ಟವರು ವಕೀಲ ಫುಲ್ಕಾ ರವರು. 

2733 ಅಮಾಯಕ ಸಿಖ್ಖರ ಹತ್ಯೆಗೆ ಕಾರಣವಾದ ಅಂದಿನ ದಂಗೆಯ ನಿಯಂತ್ರಣಕ್ಕೆ ಸಕಾಲದಲ್ಲಿ ಸೇನೆಯನ್ನು ಕಾರ್ಯಾಚರಣಗೆ ನಿಯುಕ್ತಗೊಳಿಸಿದ್ದರೇ, ಅಷ್ಟೊಂದು ಭಾರೀ ಸಂಖ್ಯೆಯ ಸಾವು ನೋವುಗಳನ್ನು ತಪ್ಪಿಸಬಹುದಿತ್ತೇ ಎಂಬ ಚರ್ಚೆ ವಿಚಾರಣೆ ನಡೆಸಿದ ಎರಡೂ ಆಯೋಗಗಳ ಮುಂದೆ ನಡೆಯಿತು. ಮಿಶ್ರಾ ಆಯೋಗ ತನ್ನ ವರದಿಯಲ್ಲಿ ಸೇನೆಯ ಬಳಕೆ ಸಕಾಲದಲ್ಲಾಗಿದ್ದರೆ ಸಾವು ನೋವುಗಳನ್ನು ಸಾಕಷ್ಟು ನಿಯಂತ್ರಿಸಬಹುದಿತ್ತು ಎಂದು ವ್ಯಕ್ತಪಡಿಸಿತ್ತು. 'ಸಿಖ್ ಸಮುದಾಯಕ್ಕೊಂದು ಪಾಠ ಕಲಿಸುವ' ಸಂಚಿನ ಹಿಂದೆ ಸೇನೆಯನ್ನು ಕರೆಯುವಲ್ಲಿ ವಿಳಂಬ ನೀತಿಯನ್ನು ಅನುಸರಿಸುವ ಹುನ್ನಾರವೂ ಇತ್ತೇ ಎಂಬ ಅನುಮಾನ ಅಂದಿನ ವಿಚಾರವಂತರ ಮನಸ್ಸನ್ನು ಕಾಡದೇ ಇರಲಿಲ್ಲ.  ನವೆಂಬರ್ 1, 1984ರ ಸಂಜೆ ಸಮಯದಿಂದ ಹಂತ ಹಂತವಾಗಿ ಸೇನೆಯ ನಿಯುಕ್ತಿ ಕಾರ್ಯ ಜರುಗಿದರೂ, ಸೇನಾ ಕಾರ್ಯಾಚರಣೆ ಎಂಬುದು ಪರಿಣಾಮಕಾರಿಯಾಗಿ ಕಂಡುಬಂದದ್ದು    ನವೆಂಬರ್ 3, 1984ರ ಮಧ್ಯಾಹ್ನದನಂತರವೇ. ತತ್ಪರಿಣಾಮವಾಗಿ ಮೊದಲ ಮೂರು ದಿನಗಳು ದಿಲ್ಲಿಯಲ್ಲಿ ದಂಗೆಕೋರರ ಹಿಂಸಾಚಾರ ಅವ್ಯಾಹತವಾಗಿ ಜರುಗಿದ್ದು ಸುಳ್ಳಲ್ಲ. 

ನೂತನ ಪ್ರಧಾನಿ ರಾಜೀವ್ ಗಾಂಧಿಯವರು ಅಕ್ಟೋಬರ್ 31, 1984ರ ಸಾಯಂಕಾಲದ ಹೊತ್ತಿಗೆ ದಿಲ್ಲಿಯ ಶಾಂತಿ ಮತ್ತು ಸುವ್ಯವಸ್ಥೆ ಕದಡಿದ್ದನ್ನು ಗಮಿನಿಸಿ, ಸೇನೆಯನ್ನೂ ಸಜ್ಜಾಗಿರಿಸಿಕೊಳ್ಳುವ ಸೂಚನೆಯನ್ನು ನೀಡಿದ್ದರು ಎಂಬುದನ್ನು ಮೇಲ್ನೋಟಕ್ಕೆ ಕಂಡಂತೆ ಸತ್ಯವೆಂದು ಮಿಶ್ರಾ ಆಯೋಗ ಪರಿಗಣಿಸಿತ್ತು. ಅಂದು ಸೇನೆಯ ಬಳಕೆಯನ್ನು ಮಾಡಿಕೊಳ್ಳುವಲ್ಲಿ ವಿಳಂಬವಾಗಿದ್ದಕ್ಕೆ ಕೆಳಮಟ್ಟದ ಕಾರ್ಯನಿರ್ವಾಹಕರಾದ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಪಿ.ಜಿ.ಗವಾಯಿಯವರು ಮತ್ತು ದಿಲ್ಲಿಯ ಪೊಲೀಸ್ ಆಯುಕ್ತರಾದ ಎಸ್.ಸಿ. ಟಂಡನ್ ರವರು ಕಾರಣ ಎಂಬ ನಿಲುವು ಮಿಶ್ರಾ ಆಯೋಗದಾಗಿತ್ತು. ಆ ದಿನಗಳಲ್ಲಿ ದಂಗೆಯ ನಡುದಿನಗಳಲ್ಲೇ ಪಿ.ಜಿ.ಗವಾಯಿಯವರನ್ನು ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕೆಳಗಿಳಿಸಿದ್ದು ಕೂಡ ಅಂದಿನ ವಿಚಾರವಂತರು ಹುಬ್ಬೇರಿಸುವಂತೆ ಮಾಡಿದ್ದುಂಟು. 

ಅಂದಿನ ಸೇನೆಯ ಮೇಜರ್ ಜನರಲ್ ಜಾಮ್ವಲ್, ಪೊಲೀಸ್ ಆಯುಕ್ತರಾದ ಎಸ್.ಸಿ.ಟಂಡನ್, ಲೆಫ್ಟಿನೆಂಟ್ ಗವರ್ನರ್ ಪಿ.ಜಿ.ಗವಾಯಿ ಮತ್ತು ಹೊಸ ಪ್ರಧಾನಿಯವರ ಮುಖ್ಯ ಕಾರ್ಯದರ್ಶಿ ಅಲೆಕ್ಸಾಂಡರ್, ಇವರೆಲ್ಲರ ಕಳಕಳಿ ಸೇನೆಯನ್ನು ಆದಷ್ಟು ಬೇಗ ಕಾರ್ಯೋನ್ಮುಖವಾಗುವಂತೆ ಮಾಡಬೇಕು ಎಂಬುದು ಸ್ಪಷ್ಟವಾದರೂ, ಹಾಗಾಗಲಿಲ್ಲ ಎಂಬುದು ಮಾತ್ರ ಸತ್ಯ. 

ಅಂದಿನ ಹೊಸ ಸರಕಾರದ ನೂತನ ಗೃಹಮಂತ್ರಿಗಳಾದ ಪಿ.ವಿ. ನರಸಿಂಹರಾಯರ ಜೊತೆ ನವೆಂಬರ್ 1, 1984ರಂದು ಹಲವು ವಿಚಾರಶೀಲ ವ್ಯಕ್ತಿಗಳು ವಿಷಯವನ್ನು ಮುಖಾಮುಖಿ ಚರ್ಚಿಸಿದ್ದುಂಟು. ಇತಿಹಾಸ ತಜ್ಞ ಪತ್ವಂತ್ ಸಿಂಗ್, ಹಿರಿಯ ರಾಜಕಾರಣಿ ಐ.ಕೆ.ಗುಜ್ರಾಲ್, ಹಿರಿಯ ಸೇನಾಧಿಕಾರಿ ಜೆ.ಎಸ್.ಅರೋರಾ ಮತ್ತು ಹಿರಿಯ ವಕೀಲ ರಾಮ್ ಜತ್ ಮಲಾನಿ, ಇವರೆಲ್ಲರೂ ಅಭಿಪ್ರಾಯಪಟ್ಟಂತೆ ಆ ಸಮಯದಲ್ಲಿ ನರಸಿಂಹರಾಯರಲ್ಲಿ ಹಿಂಸಾಚಾರವನ್ನು ನಿಯಂತ್ರಿಸುವ ಕಳಕಳಿ ಕಂಡುಬರಲಿಲ್ಲ. ಅವರ ಗೃಹಕಚೇರಿಯಲ್ಲಿ ಅಂದಿನ ಪರಿಸ್ಥಿತಿಗೆ ಸಂಬಂಧಪಟ್ಟ ಕಾರ್ಯಾಚರಣೆಯ ಯಾವ ಲಕ್ಷಣಗಳೂ ಗೋಚರಿಸುತ್ತಿರಲಿಲ್ಲ, ಗೃಹಮಂತ್ರಿಗಳು ನೀಡಿದ ಉತ್ತರಗಳೆಲ್ಲವೂ ಹಾರಿಕೆಯ ಉತ್ತರಗಳಾಗಿದ್ದವೇ ಹೊರತು ಸ್ಪಷ್ಟತೆ ಇರಲಿಲ್ಲ, ಅಸಹಾಯಕರಂತೆ ಕಂಡುಬಂದ ನರಸಿಂಹರಾಯರು ಪರಿಸ್ಥಿತಿಯನ್ನು ನಿಯಂತ್ರಿಸುತ್ತಿರಲಿಲ್ಲ ಮತ್ತು ಪರಿಸ್ಥಿತಿಯ ನಿಯಂತ್ರಣದ ಸೂತ್ರಧಾರಿಗಳು ಕಾಣದ ಕೈಗಳಾಗಿದ್ದವು ಎಂಬಂತೆ ಕಂಡುಬರುತ್ತಿತ್ತು ಎಂಬುದು ಆ ಎಲ್ಲಾ ವಿಚಾರವಂತರ ಒಮ್ಮತವಾಗಿತ್ತು. ತತ್ಪರಿಣಾಮವಾಗಿ ಆಗಬಾರದ್ದು ಆಗಿಹೋದರೂ, ಎರಡೂ ಆಯೋಗಗಳು ನರಸಿಂಹರಾಯರನ್ನು ದೋಷಮುಕ್ತರೆಂದು ಪರಿಗಣಿಸಿದ್ದು ಗಮನಾರ್ಹ.   

ಮಾಜಿ ಕೇಂದ್ರ ಮಂತ್ರಿಗಳಾದ ಕಮಲ್ ನಾಥ್, ಎಚ್.ಕೆ.ಎಲ್.ಭಗತ್, ಜಗದೀಶ್ ಟೈಟ್ಲರ್ ಮತ್ತು ಮಾಜಿ ಸಂಸದರುಗಳಾದ ಸಜ್ಜನ್ ಕುಮಾರ್, ಧರಮ್ ದಾಸ್ ಶಾಸ್ತ್ರಿ ಮುಂತಾದವರುಗಳ ಮೇಲೆ ಆರೋಪಗಳು  ಎರಡೂ ತನಿಖಾ ಆಯೋಗಗಳ ಮುಂದೆ ಪ್ರಸ್ತಾಪವಾಗಿದ್ದರೂ, ಮೊದಲ ಬಾರಿಗೆ ಉನ್ನತ ನಾಯಕರಿಗೊಬ್ಬರಿಗೆ ಶಿಕ್ಷೆಯಾಗಿದ್ದು ಸಜ್ಜನ್ ಕುಮಾರ್ ರವರಿಗೆ ಮಾತ್ರ. ಪ್ರಕರಣಗಳು ನಡೆದ 34 ವರ್ಷಗಳನಂತರ ಅಂದರೆ 2018ರಲ್ಲಿ ದಿಲ್ಲಿಯ ಹೈಕೋರ್ಟ್ ನೀಡಿದ ನಿರ್ಣಯದ ಪ್ರಕಾರ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆಯಾಯಿತು. 

ಫೆಬ್ರವರಿ 25, 2025ರಂದು ದಿಲ್ಲಿಯ ವಿಚಾರಣಾ ನ್ಯಾಯಾಲಯ ನೀಡಿದ ಮತ್ತೊಂದು ಐತಿಹಾಸಿಕ ತೀರ್ಪಿನ ಪ್ರಕಾರ 1984ರ ಸಿಖ್ಖರ ವಿರುದ್ಧದ ದಂಗೆಯಲ್ಲಿ ಸಜ್ಜನ್ ಕುಮಾರ್ ರವರಿಗೆ ವಿಧಿಸಿದ ಮತ್ತೆರಡು ಜೀವಾವಧಿ ಶಿಕ್ಷೆಗಳು ಗಮನಾರ್ಹ. ನವೆಂಬರ್ 1, 1984ರಂದು ದಿಲ್ಲಿಯ ಸರಸ್ವತಿ ವಿಹಾರ್ ನಲ್ಲಿ ದಂಗೆಕೋರರು ಜಸ್ವಂತ್ ಸಿಂಗ್ ಮತ್ತವರ ಪುತ್ರ ತರುಣ್ ದೀಪ್ ಸಿಂಗರವರನ್ನು ಹತ್ಯೆ ಮಾಡಿದ್ದರು. ಮಿಶ್ರಾ ಆಯೋಗಕ್ಕೆ ಸಲ್ಲಿಸಲಾದ ದೂರಿನ ಪ್ರಕಾರ 1999ರಲ್ಲಿ ಈ ಜೋಡಿ ಹತ್ಯೆ ಪ್ರಕರಣದ ಪೊಲೀಸ್ ವಿಚಾರಣೆ ಆರಂಭವಾಯಿತು. ಡಿಸೆಂಬರ್ 16, 2021ರ ಆರೋಪ ಪತ್ರದ  ಪ್ರಕಾರ ಜೋಡಿ ಹತ್ಯೆಯನ್ನು ಮಾಡಿದ ದಂಗೆಕೋರರ ನಡುವೆ ಸಜ್ಜನ್ ಕುಮಾರ್ ಇದ್ದರು ಮತ್ತು ಅವರು ಆ ಗುಂಪಿನ ನಾಯಕರು ಕೂಡ ಆಗಿದ್ದರು ಎಂದು ಆರೋಪಿಸಲಾಯಿತು.  ಹತ್ಯೆಯಾದ ತಂದೆ-ಮಗನ ಕುಟುಂಬಕ್ಕೆ ಸೇರಿದ, ಪ್ರಕರಣದ ಪ್ರತ್ಯಕ್ಷದರ್ಶಿಗಳಾದ ಮೂರು ಮಹಿಳೆಯರ ಸಾಕ್ಷಿಯನ್ನು ಪರಿಗಣಿಸಿದ ನ್ಯಾಯಾಲಯ, ಸಜ್ಜನ್ ಕುಮಾರ್ ರವರಿಗೆ ಹತ್ಯೆ ಮಾಡಿದ್ದಕ್ಕಾಗಿ ಮತ್ತು ಮೃತರ ಮನೆಯನ್ನು ಲೂಟಿ ಮಾಡಿದ್ದಕ್ಕಾಗಿ ಎರಡು ಜೀವಾವಧಿ ಶಿಕ್ಷೆಗಳನ್ನು ವಿಧಿಸಿತು.  ಆರೋಪಿಗಾಗಲೇ 80 ವರ್ಷ ವಯಸ್ಸಾಗಿದ್ದು, ಹಲವು ರೋಗಗಳಿಂದ ಬಳಲುತ್ತಿದ್ದು, ಕಳೆದ ಆರು ವರ್ಷಗಳಿಂದ ಜೈಲಿನಲ್ಲಿ ಸನ್ನಡತೆಯಿಂದ ಇರುತ್ತಿದ್ದನ್ನು ಗಮನಿಸಿದ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿರಲಿಲ್ಲ. ಈ ಪ್ರಕರಣವನ್ನು ಯಶಸ್ವಿಯಾಗಿ ನಡೆಸಿ ನ್ಯಾಯವನ್ನು ಒದಗಿಸಿದವರೂ ವಕೀಲರಾದ ಎಚ್.ಎಸ್.ಫುಲ್ಕಾ ರವರೇ ಆಗಿದ್ದರು. 

ಪ್ರಕರಣದ ತೀರ್ಪಿನ ದಿನ ನ್ಯಾಯಾಲಯದಲ್ಲಿ ಹಾಜರಿದ್ದ ಕುಟುಂಬದ ಸದಸ್ಯರು, ಸಜ್ಜನ್ ಕುಮಾರ್ ರವರಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕಿತ್ತು ಎಂದು ಅಲವತ್ತುಕೊಂಡರು.  ಹತ್ಯೆಯ ಪ್ರತ್ಯಕ್ಷದರ್ಶಿಯಾದ ಪಪ್ಪಿ ಕೌರ್ (55), 'ನನ್ನ ತಂದೆ ಮತ್ತು ಅಣ್ಣನನ್ನು ಥಳಿಸಿ, ಬೆಂಕಿ ಹಚ್ಚಿ, ಅಮಾನುಷವಾಗಿ ಹತ್ಯೆ ಮಾಡಲಾಯಿತು. ಜೀವಾವಧಿ ಶಿಕ್ಷೆಯಾದರೂ ಆರೋಪಿಗೆ ಜೈಲಿನಲ್ಲಿ ವೈದ್ಯಕೀಯ ಸೇವೆಯೂ ಸೇರಿದಂತೆ ಎಲ್ಲಾ ಸವಲತ್ತುಗಳು ಸಿಕ್ಕುತ್ತವೆ. ಆರೋಪಿ ತನ್ನ ಕುಟುಂಬದ ಸದಸ್ಯರನ್ನು ಭೇಟಿ ಮಾಡುತ್ತಿರಬಹುದು. ಆದರೆ ನಾವು ಕಳೆದ 41 ವರ್ಷಗಳಿಂದ ಮೌನಿಗಳಾಗಿ ದುಃಖವನ್ನು ಅನುಭವಿಸುತ್ತಿದ್ದೇವೆ' ಎಂದರು. 

ತ್ರಿಲೋಕ್ ಪುರಿ ಬಡಾವಣೆಯ ಲಕ್ಷ್ಮಿ ಕೌರ್ ಕೂಡ ಪಪ್ಪಿ ಕೌರರ ಜೊತೆ ಅಂದು ನ್ಯಾಯಾಲಯಕ್ಕೆ ಬಂದಿದ್ದರು. ತನ್ನ ಗಂಡ ಮತ್ತು ಮಕ್ಕಳನ್ನು ದಂಗೆಯಲ್ಲಿ ಕಳೆದುಕೊಂಡ ಲಕ್ಷ್ಮಿ ಕೌರ್ ಅವರು ತಮ್ಮ ಕಣ್ಣೆದುರೇ ನಡೆದ ದುರಂತವನ್ನು ನೆನೆಸಿಕೊಳ್ಳುತ್ತಾ, "ನನ್ನ ಗಂಡ ಮತ್ತು ಮಕ್ಕಳನ್ನು ನನ್ನ ಕಣ್ಣೆದುರೇ ಮನೆಯಿಂದ ದರದರನೇ ಎಳೆದೊಯ್ಯಲಾಯಿತು ಮತ್ತು ಅವರುಗಳನ್ನು ಅವರುಗಳ ಉದ್ದನೆಯ ಕೂದಲುಗಳನ್ನು ಸೇರಿಸಿ ಕಟ್ಟಲಾಯಿತು. ಟೈರುಗಳೊಳಗೆ ಅವರ ಕುತ್ತಿಗೆಗಳನ್ನು ತೂರಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಯಿತು. ಅವರುಗಳು ನೋವಿನಿಂದ ತತ್ತರಿಸುತ್ತಿದ್ದಾಗ, 'ಅಲ್ಲಿ ನೋಡು, ಸಿಖ್ಖರುಗಳು ನರ್ತಿಸುತ್ತಿದ್ದಾರೆ' ಎಂದು ಗೇಲಿ ಮಾಡಲಾಯಿತು. ನಮ್ಮ ಮನೆಗಳನ್ನೆಲ್ಲಾ ಲೂಟಿ ಮಾಡಿದ ದಂಗೆಕೋರರು, ಗುರುದ್ವಾರದ ಕಬ್ಬಿಣದ ಗೇಟನ್ನೂ ಹೊತ್ತೊಯ್ದರು" ಎಂದರು. 

ದಿಲ್ಲಿಯ ತಿಲಕ್ ವಿಹಾರದ ಸಿ-ಬ್ಲಾಕ್ಗೆ 'ವಿಧವಾ ಕಾಲೋನಿ' ಎಂದೇ ಹೆಸರಿತ್ತು. ಅದರ ನಿವಾಸಿ ಭಾಗಿ ಕೌರ್ ಮಾತನಾಡುತ್ತಾ 'ದುರಂತ ನಡೆದು ನಾಲ್ಕು ದಶಕಗಳು ಉರುಳಿವೆ.  ಈಗ ನಮ್ಮಗಳ ಕುಟುಂಬಗಳೂ ಬೆಳೆದು ಸಂತೋಷ ಮರುಕಳಿಸಿದೆ. ವಿಧವಾ ಕಾಲೋನಿ ಎಂಬ ಹೆಸರು ನಮ್ಮಗಳಿಗೆ ಈಗ ಇಷ್ಟವಿಲ್ಲ. ನಮ್ಮ ತಿಲಕ್ ವಿಹಾರದ ಗುರುದ್ವಾರಕ್ಕೆ ಶಾಹೀದ್ ಗಂಜ್ ಗುರುದ್ವಾರವೆಂದೇ ಹೆಸರು. ಅಂದಿನ ಸಿಖ್ಖರ ವಿರುದ್ಧದ ದಂಗೆಯಲ್ಲಿ ಮಡಿದ ಸಿಖ್ಖರಿಗೆ ಈ ಗುರುದ್ವಾರ ಸಮರ್ಪಿತವಾಗಿದೆ. ಗುರುದ್ವಾರದ ಎಲ್ಲಾ ಗೋಡೆಗಳ ಭರ್ತಿ ಅಂದು ಮಡಿದ ಸಿಖ್ಖರ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ. ದುಡಿಯುವ ಪುರುಷರನ್ನು ಕಳೆದುಕೊಂಡ ಕುಟುಂಬಗಳಿಗೆ ದೊರಕಿದ ಪರಿಹಾರಗಳು ಏನೇನು ಸಾಲದಾಗಿತ್ತು. ಈಗ ನನ್ನ ಮೊಮ್ಮಕ್ಕಳು ಫೋಟೋಗ್ರಾಫರುಗಳಾಗಿ, ಟ್ಯಾಕ್ಸಿ ಚಾಲಕರುಗಳಾಗಿ ಜೀವನ ನಿರ್ವಹಿಸುತ್ತಿದ್ದಾರೆ. ಆದಾಯ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ, ಕಷ್ಟದಿಂದಲೇ ಜೀವನ ಸಾಗಿಸುತ್ತಿದ್ದೇವೆ' ಎಂದು ಕಣ್ಣೀರಿಟ್ಟರು. 

'ಇತಿಹಾಸವು ಪುನರಾವರ್ತನೆಯಾಗುತ್ತದೆ,' ಎಂಬ ಮಾತು ಸಿಖ್ಖರ ವಿರುದ್ಧದ 1984ರ ದಂಗೆಯನ್ನು ಚರ್ಚಿಸುವಾಗ ನೆನಪಿಗೆ ಬರುತ್ತದೆ. ಜನವರಿ 30, 1948ರಂದು ಭಾರತ ದೇಶದ ದಿಲ್ಲಿಯಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯಾಗಿತ್ತು. ಆ ಹತ್ಯೆಯನ್ನು ಮಾಡಿದ ನಾಥುರಾಮ್ ಗೋಡ್ಸೆ ಎಂಬುವವನು  ಮಹಾರಾಷ್ಟ್ರದ 'ಚಿತ್ತಪಾವನ ಬ್ರಾಹ್ಮಣ'ರ ಜಾತಿಗೆ ಸೇರಿದವನು ಎಂಬ ಕಾರಣಕ್ಕಾಗಿ ಅಂದು ಮಹಾರಾಷ್ಟ್ರದಲ್ಲಿ ನಡೆದ ಬ್ರಾಹ್ಮಣರ ವಿರುದ್ಧದ ಹತ್ಯಾಕಾಂಡ ಎಲ್ಲೂ ಚರ್ಚೆಗೊಳ್ಳದೆ ಇತಿಹಾಸದ ಗರ್ಭದಲ್ಲಡಗಿಹೋಗಿದೆ. ಜನವರಿ 30, 1948ರಂದೇ ಪುಣೆಯಲ್ಲಿ ನಡೆದ ಹತ್ಯಾಕಾಂಡದಲ್ಲಿ ಸುಮಾರು 50 ಬ್ರಾಹ್ಮಣರು ಹತರಾಗಿದ್ದರು.  ಪುಣೆಯಲ್ಲಿ 15 ಬ್ರಾಹ್ಮಣರ ಹತ್ಯೆಯಾದ ವಿಷಯ ಮಾರನೆಯ ದಿನದ 'ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮೊದಲು ಚಿತ್ತಪಾವನ ಬ್ರಾಹ್ಮಣರ ವಿರುದ್ಧ ಹಲ್ಲೆ ನಡೆಸಿದ ದಂಗೆಕೋರರು, ಮುಂದುವರೆದು ಎಲ್ಲಾ ವರ್ಗದ ಬ್ರಾಹ್ಮಣರ ವಿರುದ್ಧವೂ ಹಲ್ಲೆಯನ್ನು ನಡೆಸಿದರು. ಪುಣೆಯಲ್ಲಿ ಶುರುವಾದ ದಂಗೆ ಮುನ್ನಡೆದು ಮುಂಬೈ, ನಾಗ್ಪುರ್, ಕೊಲ್ಹಾಪುರ, ಸಾಂಗ್ಲಿ, ಸತಾರ ಮುಂತಾದ ಪಟ್ಟಣಗಳಿಗೂ ಹಬ್ಬಿತ್ತು. 

ವೀರ ಸಾವರ್ಕರ್ ಬಗ್ಗೆ ಇತಿಹಾಸ ತಜ್ಞ ವಿಕ್ರಂ ಸಂಪತ್ ರವರು ಈಚೆಗೆ ಬರೆದು ಪ್ರಕಟಿಸಿರುವ ಎರಡು ಸಂಪುಟಗಳ ಕಾದಂಬರಿಯಲ್ಲಿ, ಮಹಾತ್ಮಾ ಗಾಂಧಿಯವರ ಹತ್ಯೆಯನಂತರ ಮಹಾರಾಷ್ಟ್ರದಲ್ಲಿ ನಡೆದ ಬ್ರಾಹ್ಮಣರ ವಿರುದ್ಧದ ದಂಗೆಯ ಚರ್ಚೆಯನ್ನು ಮಾಡಿದ್ದಾರೆ. ಅಂದಿನ ಖ್ಯಾತ ವಕೀಲ ಪಿ.ಎಲ್.ಇನಾಂದಾರ್ ರವರು ತಮ್ಮ ಹತ್ತಿರದ ಸಂಬಂಧಿಗಳ ವಿರುದ್ಧ ನಡೆದ ಹಲ್ಲೆಯ ಬಗ್ಗೆ ಹೇಳಿಕೊಂಡಿದ್ದಾರೆ. ದ್ವಾರಕಾ ಪ್ರಸಾದ್ ಮಿಶ್ರ ಎಂಬ ಅಂದಿನ ಕಾಂಗ್ರೆಸ್ ನೇತಾರರೊಬ್ಬರು, ಕಾಂಗ್ರೆಸ್ ಪಕ್ಷದ ಬ್ರಾಹ್ಮಣರಲ್ಲದ ಕಾರ್ಯಕರ್ತರುಗಳು ಬ್ರಾಹ್ಮಣರ ಮೇಲೆ ನಡೆಸಿದ ಹಲ್ಲೆಯ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿದ್ದಾರೆ. ಆದರೆ ಸುದ್ದಿ ಮಾಧ್ಯಮಗಳು ಆ ಸಮಯದಲ್ಲಿ ಅಂದು ನಡೆದ ಬ್ರಾಹ್ಮಣರ ಹತ್ಯಾಕಾಂಡದ ಬಗ್ಗೆ ಯಾವ ವರದಿಯನ್ನು ಮಾಡುವ ಗೋಜಿಗೆ ಹೋಗದಿದ್ದದ್ದು  ಅನಿರೀಕ್ಷಿತವೇನಲ್ಲ. ಅಂದಿನ ದಿನಗಳ ಬ್ರಿಟಿಷ್ ಪತ್ರಕರ್ತೆ ಮೌರೀನ್ ಪ್ಯಾಟರ್ಸನ್ ರವರು ಆಸಕ್ತಿವಹಿಸಿ ವಿಷಯಗಳನ್ನು ಹೊರಗೆಳೆದಾಗಲೇ, ಅಂದಿನ ಬ್ರಾಹ್ಮಣರ ವಿರುದ್ಧದ ಹತ್ಯೆಯ ಸುದ್ದಿಗಳು ಹೊರಬರತೊಡಗಿದ್ದು. ಆ ಸಮಯದ ಲೆಕ್ಕಾಚಾರದಂತೆ ಬ್ರಾಹ್ಮಣರ ಆಸ್ತಿಗಳಿಗಾದ ನಷ್ಟ 6 ಕೋಟಿಯಿಂದ 10 ಕೋಟಿ ರೂಪಾಯಿಗಳಷ್ಟು ಎಂದು ಮೌರೀನ್ ರವರು ಅಂದಾಜಿಸಿದ್ದಾರೆ. 

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ದಂಗೆಯ ಸ್ವರೂಪ ತಾರಕಕ್ಕೆ ಹೋಗಿತ್ತು. ಅಂದಿನ ಪ್ರತಿಷ್ಠಿತ ಚಲನ ಚಿತ್ರ ನಿರ್ಮಾಪಕರಾಗಿದ್ದ ಬಾಲಾಜಿ ಪೆಂಧರ್ಕರ್ ಕರಹಾಡೆ ಪಂಗಡಕ್ಕೆ ಸೇರಿದ ಬ್ರಾಹ್ಮಣರಾಗಿದ್ದರು. ಕೊಲ್ಹಾಪುರದಲ್ಲಿ ನಡೆದ ದಂಗೆಯಲ್ಲಿ ಪೆಂಧರ್ಕರ್ ರವರ ಸುಸ್ಸಜಿತ ಸ್ಟುಡಿಯೋವನ್ನು ಧ್ವಂಸಗೊಳಿಸಲಾಯಿತು. ಇಡೀ ಕೊಲ್ಹಾಪುರ ಪಟ್ಟಣದಲ್ಲಿ ಬ್ರಾಹ್ಮಣರ ಆಸ್ತಿಪಾಸ್ತಿಗಳಿಗೆ ಅಪಾರವಾದ ನಷ್ಟವುಂಟಾಯಿತು. ಅಂದಿನ ಕೊಲ್ಹಾಪುರದ ಆಡಳಿತ ನಿಯುಕ್ತಗೊಳಿಸಿದ ನ್ಯಾಯಮೂರ್ತಿ  ಎನ್.ಎಚ್.ಸಿ. ಕೋಯಾಜಿ ಆಯೋಗ ಆ ಪ್ರದೇಶದ ಕೆಲವು ಮಂತ್ರಿಗಳೂ ಗಲಭೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯನ್ನು ನೀಡಿತ್ತು. 

ಮಹಾತ್ಮಾ ಗಾಂಧಿಯವರ ಹತ್ಯೆಯಿಂದ ರೊಚ್ಚಿಗೆದಿದ್ದ ಕಾಂಗ್ರೆಸ್ ಕಾರ್ಯಕರ್ತರುಗಳು ವೀರ ಸಾವರ್ಕರ್ ರವರ ಮುಂಬೈನ ಮನೆಯ ಮೇಲೂ ಧಾಳಿ ನಡೆಸಿದ್ದರು. ವೀರ ಸಾವರ್ಕರ್ ಅಂದು ಮನೆಯಲ್ಲಿ ಇಲ್ಲದಿದ್ದರಿಂದ ಬದುಕುಳಿದರು. ಅಂದು ಮನೆಯಲ್ಲಿದ್ದ ವೀರ ಸಾವರ್ಕರರ ಸಹೋದರ ನಾರಾಯಣ್ ಸಾವರ್ಕರ್ ರವರ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸಲಾಯಿತು.  ನಡೆದ ಹಲ್ಲೆಯಲ್ಲಿ ನಾರಾಯಣರ ತಲೆಗೆ ಪೆಟ್ಟುಬಿತ್ತು. ತಲೆಯ ಪೆಟ್ಟಿನಿಂದ ಚೇತರಿಸಿಕೊಳ್ಳಲಾಗದ ನಾರಾಯಣರು ಹಲ್ಲೆ ನಡೆದ ಕೆಲವೇ ತಿಂಗಳುಗಳಲ್ಲಿ ನಿಧನರಾದರು. ಇಷ್ಟೆಲ್ಲಾ ದಾಂಧಲೆಗಳು ನಡೆದರೂ ಯಾವ ವಿಷಯಗಳು ಹೊರಬರದಂತೆ ಅಲ್ಲಿದ್ದ ಅಂದಿನ ಕಾಂಗ್ರೆಸ್ ಸರಕಾರ ಸಂಚು ಮಾಡಿತ್ತು.

2002ರಲ್ಲಿ ನಡೆದ ಗುಜರಾತಿನ ದಂಗೆ ಪ್ರಕರಣಕ್ಕೂ, 1984ರ ಸಿಖ್ಖರ ವಿರುದ್ಧದ ಮರಣಹೋಮಕ್ಕೂ ಸಾಮ್ಯತೆ ಇದೆ. ಫೆಬ್ರವರಿ 27, 2002ರಂದು ಅಯೋಧ್ಯಯಿಂದ ಬರುತ್ತಿದ್ದ ಸಾಬರಮತಿ ಎಕ್ಸ್ ಪ್ರೆಸ್ಸಿನ ಡಬ್ಬವೊಂದರ ಭರ್ತಿ ರಾಮಭಕ್ತರೇ ಇದ್ದರು. ರೈಲು ಗುಜರಾತಿನ ಗೋಧ್ರಾ ರೈಲ್ವೆನಿಲ್ದಾಣವನ್ನು ತಲಪುತ್ತಲೇ ಅದೇ ರೈಲು ಡಬ್ಬದಲ್ಲಿ ಬೆಂಕಿ ಹೊತ್ತಿಕೊಂಡು ಡಬ್ಬದೊಳಗಿದ್ದ 57 ರಾಮಭಕ್ತರ ಸಜೀವ ದಹನವಾಯಿತು. ರೈಲ್ವೆ ಡಬ್ಬಕ್ಕೆ ಬೆಂಕಿ ಹಚ್ಚುವಲ್ಲಿ ಮುಸ್ಲಿಂ ದಂಗೆಕೋರರ ಕೈವಾಡವಿತ್ತೆಂದು ಆರೋಪಿಸಿದ ಹಿಂದೂ ದಂಗೆಕೋರರು ಪ್ರತೀಕಾರದ ಧಾಳಿಯನ್ನು ನಡೆಸಿ, ಗುಜರಾತಿನಾದ್ಯಂತ ಸಿಕ್ಕ ಸಿಕ್ಕ ಮುಸ್ಲಿಮರನ್ನು ಹತ್ಯೆಮಾಡಿದರು. ಮೂರು ತಿಂಗಳವರೆಗೆ ಮುಂದುವರೆದ ಅಂದಿನ ಹತ್ಯಾಕಾಂಡದಲ್ಲಿ 790 ಜನ ಮುಸ್ಲಿಮರು, 254 ಜನ ಹಿಂದುಗಳು ಮಡಿದರು ಮತ್ತು ಸುಮಾರು 223 ಮಂದಿ ಕಾಣೆಯಾದರು. 

ಗುಜರಾತಿನ ದಂಗೆ 2002ರಲ್ಲಿ ನಡೆದಾಗ ಅಂದು ಕೇಂದ್ರ ಹಾಗೂ ರಾಜ್ಯ, ಎರಡೂ ಕಡೆ ಬಿಜೆಪಿಯ ಸರಕಾರಗಳಿದ್ದವು. ದಂಗೆಯ ಪ್ರಕರಣಕ್ಕೆ ಸಬೂಬನ್ನು ಹೇಳುತ್ತಾ ಬಿಜೆಪಿಗರು 1984ರ ಸಿಖ್ಖರ ವಿರುದ್ಧದ ದಂಗೆಯ ಪ್ರಕರಣವನ್ನು ನೆನಪಿಸಿದರು. ಸಿಖ್ಖರ ವಿರುದ್ಧದ ದಂಗೆಯಲ್ಲಿ ಸಿಖ್ಖರು ಮಾತ್ರ ಸತ್ತರು, ಆದರೆ ಗುಜರಾತಿನಲ್ಲಿ ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿ ಸತ್ತಿದ್ದರು. ಸಮರ್ಥನೆಯನ್ನು ಮಾಡಿಕೊಳ್ಳುತ್ತಾ ಕಾಂಗ್ರೆಸ್ಸಿನವರು ದಿಲ್ಲಿ ದಂಗೆಯನ್ನು ಮೂರು ದಿನಗಳಲ್ಲಿ ನಿಯಂತ್ರಿಸಲಾಯಿತು, ಗುಜರಾತ್ ದಂಗೆ ಮೂರು ತಿಂಗಳವರೆಗೆ ನಡೆಯಿತು ಎಂದು ಬಿಜೆಪಿಗರ ಕಾಲೆಳೆದರು. 

ಗುಜರಾತ್ ದಂಗೆ ಮತ್ತು ದಿಲ್ಲಿ ದಂಗೆ, ಈ ಎರಡೂ ಪ್ರಕರಣಗಳಲ್ಲಿ ಆಡಳಿತಾರೂಢ ಪಕ್ಷಗಳ ಕೈವಾಡವಿದ್ದ ಆರೋಪಗಳು ಕೇಳಿಬಂದವು. ದಿಲ್ಲಿ ದಂಗೆಯ ಪ್ರಕರಣವನ್ನು ಧರೆಗುರುಳಿದ ಮರದ ಉಪಮಾನವನ್ನು ನೀಡಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಸಮರ್ಥಿಸಿಕೊಂಡರೆ, ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು, 'ಪ್ರತಿಯೊಂದು ಕ್ರಿಯೆಗೂ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ' ಎಂಬ ನ್ಯೂಟನನ ಚಲನ ಶಾಸ್ತ್ರದ ಮೂರನೇ ನಿಯಮವನ್ನು (Newton's third law of motion - For every action, there will be an equal and opposite reaction) ಉಲ್ಲೇಖಿಸಿ, ಅಂದಿನ ಗುಜರಾತ್ ದಂಗೆಯನ್ನು ಸಮರ್ಥಿಸಿಕೊಂಡರು. 1984ರಲ್ಲಿ ಇಂದಿರಾ ಹತ್ಯೆಯನಂತರ ಲೋಕಸಭಾ ಚುನಾವಣೆಯನ್ನು ಬೇಗನೆ ನಡೆಸಿ ಗೆದ್ದ ರಾಜೀವ್ ಗಾಂಧಿಯವರಂತೆಯೇ, 2002ರ ದಂಗೆಯಾದನಂತರ ನರೇಂದ್ರ ಮೋದಿಯವರು ಕೂಡ ರಾಜ್ಯದ ವಿಧಾನ ಸಭೆಯ ಚುನಾವಣೆಯನ್ನು ಅವಧಿಗೆ ಮುಂಚೆಯೇ ನಡೆಸಿ ಗೆದ್ದರು. ಎರಡೂ ಪ್ರಕರಣಗಳಲ್ಲಿ ಆಡಳಿತಾರೂಢ ಉನ್ನತ ನಾಯಕರುಗಳ ವಿರುದ್ಧ  ಯಾವ ಆರೋಪವೂ ಸಾಬೀತಾಗದಿದ್ದದ್ದು  ಗಮನಾರ್ಹವಾದ ವಿಷಯ. 

-೦-೦-೦-









No comments:

Post a Comment