Tuesday 30 March 2021

ಉದ್ಯೋಗಗಳ ಮರುಸೃಷ್ಟಿ

೯  

ಉದ್ಯೋಗಗಳ ಮರುಸೃಷ್ಟಿ



ಯುವಕನಾದ ಶಶಿಕಾಂತ್ ಒಬ್ಬ ವಿಭಿನ್ನ ಉದ್ದಿಮೆದಾರನಾಗಿದ್ದನು. ೧೦ ವರ್ಷಗಳ ಹಿಂದೆ ಅವನು 'ಎಂಬಿಬಿಎಸ್ಸ್' ಪದವಿ ಗಳಿಸಿ ವೈದ್ಯನಾದರೂ, ಉತ್ತಮ ಉದ್ಯೋಗವನ್ನು ಗಳಿಸಲು ಆ ಪದವಿ ಸಾಕಾಗದಾಗಿತ್ತು. ಸ್ನಾತಕೋತ್ತರ ಕೋರ್ಸಗಳ ಪ್ರವೇಶ ಪಡೆಯಲು ಅವನು ಆ ದಿನಗಳಲ್ಲಿ  ನಡೆಸಿದ ಹಲವು ಪ್ರಯತ್ನಗಳು ಸತತ ವಿಫಲವನ್ನು ಕಂಡಿದ್ದವು. ಅಂತಹ ಕೋರ್ಸಗಳ ಸೀಟೊಂದನ್ನು ಭಾರಿ ಮೊತ್ತದ ದೇಣಿಗೆ ತೆತ್ತು 'ಖರೀದಿಸುವಷ್ಟು ಹಣ' ಅವರಪ್ಪನ ಬಳಿ ಇತ್ತಿಲ್ಲ. 

ತನ್ನ 'ವೈದ್ಯಕೀಯ ಪದವಿಪೂರ್ವ ಸೇವಾ ಅವಧಿ (internship)'ಯನ್ನು ಪೂರೈಸಲು  ಸರಕಾರಿ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ, ಅದೇ ಆಸ್ಪತ್ರೆಯಲ್ಲಿ ನರ್ಸಾಗಿ ಸೇವೆ ಸಲ್ಲಿಸುತ್ತಿದ್ದ ಸುಹಾಸಿನಿ ಎಂಬ ಯುವತಿಯ ಪ್ರೇಮಪಾಶಕ್ಕೆ ಶಶಿಕಾಂತ್ ಬಿದ್ದಿದ್ದನು. ಅವರ ಪ್ರೇಮಾಯಣ ಸುಮಾರು ಎರಡು ವರ್ಷಗಳವರೆಗೂ ಸಾಗಿತ್ತು. ನಿರೋದ್ಯೋಗಿಯಾಗಿದ್ದರೂ, ಎರಡೂ ಕಡೆಯ ಪೋಷಕರ ಒತ್ತಾಯದ ಮೇರೆಗೆ ಶಶಿಕಾಂತ್, ಸುಹಾಸಿನಿಯನ್ನು ಮದುವೆಯಾಗಿದ್ದನು. ಮದುವೆಯನಂತರ ಶಶಿಯ ಮೇಲೆ ಸಂಪಾದಿಸಲೇ ಬೇಕಾದ ಒತ್ತಡ ಹೆಚ್ಚಿತ್ತು. ಪತಿಗಿಂತಲೂ ಹೆಚ್ಚು ಉತ್ಸಾಹಿಯೂ, ಉದ್ಯಮಶೀಲೆಯೂ ಆದ ಸುಹಾಸಿನಿ, ಶಶಿಗೆ ಮಾರ್ಗದರ್ಶಕಿಯಾಗಿಬಿಟ್ಟಿದ್ದಳು. ಆಸ್ಪತ್ರೆಗಳ ವಿವಿಧ ಉಪಕರಣಗಳಿಗೆ ನಗರದ ಆಸ್ಪತ್ರೆಗಳಿಲ್ಲಿ ಭಾರಿ ಬೇಡಿಕೆಯಿದೆಯೆಂಬುದನ್ನು ಮನಗಂಡಿದ್ದ ಸುಹಾಸಿನಿ, ತನ್ನ ಪತಿಗೆ ಆ ರೀತಿಯ ಉಪಕರಣಗಳನ್ನು ತಯಾರಿಸುವ ಸಣ್ಣ ಕೈಗಾರಿಕೆಯೊಂದನ್ನು ಆರಂಭಿಸುವ ಸಲಹೆಯನ್ನು ನೀಡಿದ್ದಳು. ಈ ವಿಷಯದಲ್ಲಿ ಮಾಜಿ ಬ್ಯಾಂಕರ್ ಕೂಡ ಆಗಿದ್ದ ಸುಹಾಸಿನಿಯ ತಂದೆ ಶಂಕರ್ ಸಿಂಗ್ ರವರ ಸಮ್ಮತಿಯೂ ಇತ್ತು. ಹತ್ತು ವರ್ಷಗಳ ಸುಲಭ ಬಾಡಿಗೆ (ಲೀಸ್) ಆಧಾರದ ಮೇಲೆ, ೩೦ ಕಿಲೋವಾಟ್ ಉಚಿತ ವಿದ್ಯುತ್ ಸಂಪರ್ಕದೊಂದಿಗೆ ೩೦೦೦ ಚ.ಮೀ.ನಷ್ಟು ವಿಸ್ತಾರವಿದ್ದ ಕೈಗಾರಿಕಾ ಮಳಿಗೆಯೊಂದು ಸರಕಾರದ ಕಡೆಯಿಂದ ಲಭಿಸಿದಾಗಿನಿಂದ, ಶಶಿಯ ಯೋಜನೆ ಚುರುಕುಗೊಂಡಿತ್ತು. 'ಶಶಿ ಹಾಸ್ಪಿಟಲ್ ಎಕ್ವಿಪ್ಮೆಂಟ್ಸ್' ಎಂಬ ಹೆಸರಿನ ತನ್ನ ಹೊಸ ಉದ್ದಿಮೆಯನ್ನು ಶಶಿ, 'ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಂ ಎಂಟರ್ಪ್ರೈಸಸ್  (Micro, Small and Medium Enterprises - MSME)'* ಎಂಬ ಕೇಂದ್ರ ಸರಕಾರದ ಯೋಜನೆಯಡಿ ದಾಖಲಿಸಿದ್ದನು. ಆ ಕೇಂದ್ರ ಸರಕಾರದ ಯೋಜನೆಯಡಿ 'ಉತ್ಪಾದಕ, ಸೇವಾ ಹಾಗೂ ವ್ಯಾಪಾರದ (Manufacturing, servicing and trading units)' ಘಟಕಗಳಿಗೂ ಮಾನ್ಯತೆ ಇದ್ದು, ಶಶಿಯ ಉದ್ದಿಮೆಯನ್ನು ಉತ್ಪಾದಕ ಘಟಕವೆಂದು ಪರಿಗಣಿಸಲಾಗಿತ್ತು.

ಇತ್ತೀಚೆಗೆ, ಕೋವಿಡ್ ದಾಳಿಯಿಂದಾದ ಉದ್ಯೋಗ ನಷ್ಟವನ್ನು ಮರುಸೃಷ್ಟಿಸಲು ಕೇಂದ್ರ ಸರಕಾರ ಘೋಷಿಸಿದ 'ಕೋವಿಡ್ ಆರ್ಥಿಕ ಪರಿಹಾರ(Covid package)ದ ಯೋಜನೆಯಡಿ  ಎಂ.ಎಸ್.ಎಂ.ಇ. ಯೋಜನೆಯ ಹೂಡಿಕೆ ಮತ್ತು ವಹಿವಾಟುಗಳ ಮಿತಿ (investment and turnover)ಗಳ ವಿಸ್ತಾರವನ್ನು ಹೆಚ್ಚಿಸಲಾಗಿತ್ತು. ಹೆಚ್ಚು ಘಟಕಗಳನ್ನು ಎಂ.ಎಸ್.ಎಂ. ಇ. ಯೋಜನೆಯಡಿ ಸೇರಿಸುವುದೇ ಆ ಕ್ರಮದ ಆಶಯವಾಗಿತ್ತು. 

ಉದ್ದಿಮೆಗೆ ಬೇಕಾದ ೨.೨ ಕೋಟಿಯಷ್ಟರ ಬ್ಯಾಂಕ್ ಸಾಲ, ಆ ದಿನಗಳಲ್ಲಿ ಭಾರಿ ಮೊತ್ತವಾಗಿದ್ದರೂ, ಶಶಿಗೆ ಅದು ದೊರಕುವುದರಲ್ಲಿ ಕಷ್ಟವೇನಾಗಲಿಲ್ಲ.  ಶಶಿಯ ಬ್ಯಾಂಕ್ ಸಾಲಕ್ಕೆ ಜಾಮೀನುದಾರರಾಗಿ ಸಹಿಮಾಡಿದ ಅವರ ಮಾವನವರಾದ ಶಂಕರ್ ಸಿಂಗ್ ರವರು, ಸುಮಾರು ಒಂದು ಕೋಟಿಯಷ್ಟು ಬೆಲೆಬಾಳುವ ತಮ್ಮ ವಾಸದ ಮನೆಯನ್ನೂ ಬ್ಯಾಂಕಿಗೆ ಅಡಮಾನ (mortgage) ಮಾಡಿಕೊಟ್ಟಿದ್ದರು. 

ಈ ಎಲ್ಲಾ ಬೆಳವಣಿಗೆಗಳು ಸುಮಾರು ಎಂಟು ವರ್ಷಗಳ ಹಿಂದೆ ನಡೆದಿದ್ದವು. ಆ ದಿನಗಳಲ್ಲಿ ಶಶಿಯ ಉತ್ಪನ್ನಗಳಾದ ಆಸ್ಪತ್ರೆಯ ಉಪಕರಣಗಳಿಗೆ ಸಾಕಷ್ಟು ಬೇಡಿಕೆಯಿತ್ತು. ಕುಶಲೆಯಾದ ಪತ್ನಿ ಸುಹಾಸಿನಿಯ ಆಸ್ಪತ್ರೆಯ ಸಂಪರ್ಕಗಳೂ ಶಶಿಗೆ ಸಹಾಯಕವಾಗಿತ್ತು. ಶಶಿಯ ಉದ್ದಿಮೆ ಬೇಗನೆ ಪ್ರಗತಿಯನ್ನು ಕಂಡಿತ್ತು. ಸುಮಾರು ೨೦ ಖಾಯಂ ಕೆಲಸಗಾರರನ್ನು ಮತ್ತು ೧೦ ದಿನಗೂಲಿಯ ಕೆಲಸಗಾರರನ್ನೂ ನೇಮಿಸಿಕೊಂಡಿದ್ದ ಶಶಿಯ ಉದ್ದಿಮೆ, ಕೇವಲ ಎರಡು ವರ್ಷಗಳ ಅವಧಿಯಲ್ಲಿ ನಾಲ್ಕು ಕೋಟಿಗೂ ಮೀರಿದ ವಾರ್ಷಿಕ ವ್ಯವಹಾರವನ್ನು ಕಂಡಿತ್ತು. ಹೊರಗಿನ ಸಣ್ಣ ಊರುಗಳಿಗೂ ತನ್ನ ಉತ್ಪಾದನೆಗಳ ಮಾರಾಟವನ್ನು ಶಶಿ ವಿಸ್ತರಿಸಿದ್ದು, ಅವನ ಉದ್ದಿಮೆಯ ಲಾಭಾಂಶ ಮೊದಲ ನಾಲ್ಕು ವರ್ಷಗಳ ಅವಧಿಯಲ್ಲಿ ಏರುತ್ತಲೇ ಸಾಗಿತ್ತು. 

ನಾಲ್ಕು ವರ್ಷಗಳನಂತರ ಶಶಿಯನ್ನು ಸಣ್ಣದಾಗಿ ಸಮಸ್ಯೆಗಳು ಕಾಡಹತ್ತಿದ್ದವು. ಶಶಿಯ ಉತ್ಪನ್ನಗಳನ್ನೇ ತಯಾರಿಸುವ ಹೆಚ್ಚು ಘಟಕಗಳು ನಗರದಲ್ಲಿ ತಲೆಯೆತ್ತಿದ್ದವು. ಮಾರಾಟದ ಬೆಲೆ ಗಳಲ್ಲಿ ಸ್ಪರ್ಧೆ ಹೆಚ್ಚಾಗಿ, ಶಶಿಯ ಗಳಿಕೆ ಕುಸಿತವನ್ನು ಕಂಡಿತ್ತು. ಖಾಸಗಿ ಆಸ್ಪತ್ರೆಗಳು 'ಕಮ್ಮಿ ಬೆಲೆಯಲ್ಲಿ ಅತ್ತ್ಯತ್ತಮ ಉಪಕರಣಗಳನ್ನು ನೀಡಿ' ಎಂದು ಶಶಿಯ ಮೇಲೆ ಒತ್ತಡವನ್ನು ಹೇರಲಾರಂಭಿಸಿದ್ದರು.  ಎರಡು ವರುಷಗಳ ಹಿಂದೆ, ಗುಣಮಟ್ಟ ಸಾಲದೆಂಬ ಕಾರಣವನ್ನು ನೀಡಿ, ಶಶಿಯು ಮಾರಾಟ ಮಾಡಿದ್ದ ಭಾರಿ ಸರಕುಗಳ ಪ್ಯಾಕೊಂದನ್ನು ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದು  ಹಿಂತಿರುಗಿಸಿದಾಗಿನಿಂದ, ಅವನ ತೊಂದರೆಗಳ ಸರಮಾಲೆ ಶುರುವಾಗಿತ್ತು. ಮಾರಾಟದ ಮೊತ್ತ ಕಮ್ಮಿಯಾಗುತ್ತಾ ಸಾಗಿತ್ತು. ಸಣ್ಣ ಸಣ್ಣ ಆಸ್ಪತ್ರೆಗಳು ಶಶಿಗೆ ಹಣ ಪಾವತಿಸುವಲ್ಲಿ ವಿಳಂಬ ಮಾಡತೊಡಗಿದ್ದವು. ಮಾರಾಟಗಳು ನಿಲ್ಲದಂತೆ ಮುಂದುವರೆಸಲು, ಸಾಲದ ಮೇಲೆ ಸರಕುಗಳನ್ನು ಕಳುಹಿಸುವುದೊಂದೇ ಮಾರ್ಗವಾಗಿತ್ತು. ಹಣದ ಒಳ ಹರಿವು ನಿಂತ್ತಿದ್ದರಿಂದ, ಶಶಿ ತನ್ನ ಕೆಲಸಗಾರರಿಗೆ ಸಂಬಳಗಳನ್ನು ಕೊಡುವುದು ಕಷ್ಟವಾಗಿ ಹೋಗಿತ್ತು. ಕೇವಲ ೨೦,೦೦೦ ರುಪಾಯಿಗಳಷ್ಟಿದ್ದ ಅವನ ಕೈಗಾರಿಕಾ ಮಳಿಗೆಯ ತಿಂಗಳ ಬಾಡಿಗೆ, ಒಮ್ಮಲೇ ಶಶಿಗೆ ಭಾರಿಯಾಗಿ ಕಾಣಿಸಹತ್ತಿತ್ತು. ನಗರದ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದ ಅವರ ಇಬ್ಬರು ಮುದ್ದು ಪುತ್ರಿಯರ ಶಾಲಾ ಶುಲ್ಕವನ್ನು ಕಟ್ಟಲಾಗ ದಾದಾಗ, ಶಶಿ-ಸುಹಾಸಿನಿಯರ ಆರ್ಥಿಕ ಮುಗ್ಗಟ್ಟಿನ ಬಿಸಿ ನೆತ್ತಿಗೇರಿತ್ತು. ವಿವಿಧ ಸಾಲಗಳ ಕಂತುಗಳ ಭಾರಿ ಬಾಕಿಯನ್ನು ಕಟ್ಟುವಂತೆ ಬ್ಯಾಂಕ್ ಮ್ಯಾನೇಜರ್ ರವರಿಂದ ಮೇಲಿಂದ ಮೇಲೆ ಒತ್ತಡ ಬರುತ್ತಿತ್ತು. ಹಲವರಿಗೆ ನೀಡಬೇಕಾದ ಹಣ ಪಾವತಿಗಾಗಿ ಶಶಿ, ಖಾಸಿಗಿಯವರಿಂದ ೩೦ ಲಕ್ಷ ರೂಪಾಯಿಗಳಷ್ಟು, ಭಾರಿ ಬಡ್ಡಿಯ ಕೈಸಾಲವನ್ನು ಮಾಡಬೇಕಾಗಿ ಬಂದಿತ್ತು. ೨೦೨೦ರ ಮಾರ್ಚ್ ತಿಂಗಳ ಮೊದಲ ವಾರದಲ್ಲಿ, ಬ್ಯಾಂಕ್ ಮ್ಯಾನೇಜರ್ ಶಶಿಯೊಂದಿಗೆ ಮಾತನಾಡಿ, ಅವನ ವಿವಿಧ ಸಾಲಗಳಲ್ಲಿ ಕಟ್ಟಬೇಕಾದ ಮೊತ್ತಗಳೇರುತ್ತಿದ್ದು, ಅವನ ಖಾತೆಯನ್ನು 'ಎನ್.ಪಿ.ಎ. (N.P.A.-ನಿರುತ್ಪಾದಕ ಆಸ್ತಿ)' ಎಂದು ಪರಿಗಣಿಸಬೇಕಾಗಬಹುದು ಎಂದು ಎಚ್ಚರಿಸಿದ್ದರು. 

ದೇಶಾದ್ಯಂತ ಕೋವಿಡ್ ಹರಡುವಿಕೆಯನ್ನು ತಡೆಯಲು ಜಾರಿಗೊಳಿಸಿದ್ದ ಲಾಕ್ಡೌನ್, ಶಶಿ ದಂಪತಿಯ ಉದ್ದಿಮೆಗೆ ಭಾರಿ ಆಘಾತವನ್ನೇ ತಂದಿತ್ತು. ನಗರದ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಹೊರತಾದ ರೋಗಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿತ್ತು. ಶಶಿಯ ಉತ್ಪಾದನೆಗಳಿಗೆ ಬೇಡಿಕೆಯೇ ಇಲ್ಲದಂತಾಗಿತ್ತು. ವೆಚ್ಚಗಳನ್ನು ಕಮ್ಮಿ ಮಾಡುವ ಸಲುವಾಗಿ ಶಶಿ ತನ್ನ ಹತ್ತು ದಿನಗೂಲಿಯ ನೌಕರರನ್ನು ಕೆಲಸದಿಂದ ತೆಗೆದು ಹಾಕಿದ್ದನು. ಲಾಕ್ಡೌನಿನಂತರದ ಆರು ವಾರಗಳು ಕಳೆದ ಮೇಲಂತೂ, ಕಾರ್ಖಾನೆಯ ಕೆಲಸಗಳು ನಿಂತು, ಹಣದ ಕೊರತೆ ತೀವ್ರವಾಗಿ, ೧೪ ಖಾಯಂ ನೌಕರರನ್ನೂ ಶಶಿ ತೆಗೆಯಬೇಕಾಗಿ ಬಂದಿತ್ತು.  ಇನ್ನುಳಿದ ಆರು ನೌಕರರುಗಳು ವಿಶೇಷ ಕೌಶಲ್ಯವುಳ್ಳವರಾಗಿದ್ದು ಅವರುಗಳು ಕೆಲಸವಿಲ್ಲದೇ ಕುಳಿತಿದ್ದರೂ, ಅವರುಗಳನ್ನು ಕೆಲಸದಿಂದ ತೆಗೆಯುವುದು ಕಷ್ಟಸಾಧ್ಯವಾಗಿತ್ತು. ಅಂತಹ ಕೌಶಲ್ಯವುಳ್ಳ ಕೆಲಸಗಾರರನ್ನು ಮತ್ತೆ ಪಡೆಯುವುದು ಅಷ್ಟು ಸುಲಭವಿರಲಿಲ್ಲ. ಬಹಳ ಪ್ರಯಾಸದಿಂದ ಆ ಆರು ನೌಕರರುಗಳನ್ನು ಅರ್ಧ ಸಂಬಳ ಮಾತ್ರ ನೀಡಿ ಶಶಿ ಉಳಿಸಿಕೊಂಡಿದ್ದನು. ತನ್ನ ಉದ್ದಿಮೆಯ ಕೆಲಸದಿಂದ ತೆಗೆಯಲ್ಪಟ್ಟ ೨೪ ನೌಕರರು ಎಲ್ಲಿ ಹೋದರು? ಏನು ಮಾಡುತ್ತಿದ್ದಾರೆ? ಎಂಬ ವಿಷಯದ ಬಗ್ಗೆ ಶಶಿಗೆ ಯಾವ ಆಸಕ್ತಿಯೂ ಉಳಿದಿತ್ತಿಲ್ಲ. ಗಂಡ, ಹೆಂಡತಿ ಇಬ್ಬರಿಗೂ ಮಂಕು ಕವಿದುಬಿಟ್ಟಿತ್ತು. 

ಪಕ್ಕದ ರಾಜ್ಯದ ಮುಖ್ಯಮಂತ್ರಿಗಳು, ಸಮಾರಂಭವೊಂದರಲ್ಲಿ, ತನ್ನ ಕಾಲೇಜು ದಿನಗಳ ಗೆಳತಿ ಉಷ ಮತ್ತವಳ ಗಂಡ ಮನೋಜರಿಗೆ ಸನ್ಮಾನ ಮಾಡುತ್ತಿರುವ ಚಿತ್ರವನ್ನು, ದಿನ ಪತ್ರಿಕೆಯೊಂದರಲ್ಲಿ ನೋಡಿದ ಸುಹಾಸಿನಿ ಆಶ್ಚರ್ಯಚಕಿತಳಾಗಿದ್ದಳು. ಆ ಸನ್ಮಾನದ ಚಿತ್ರವನ್ನು ಸುಹಾಸಿನಿ ತನ್ನ ಗಂಡನ ಗಮನಕ್ಕೂ ತಂದಿದ್ದಳು. ಶಶಿಯಂತೆ, ಮನೋಜ್ ಕೂಡ ನೆರೆಯ ನಗರವೊಂದರಲ್ಲಿ ಆಸ್ಪತ್ರೆ ಉಪಕರಣಗಳನ್ನು ತಯಾರಿಸುವ ಘಟಕವೊಂದನ್ನು ನಡೆಸುತ್ತಿದ್ದನು. ಮನೋಜನ ಘಟಕ ದೊಡ್ಡದಾಗಿದ್ದು, ಅವನ ಆರ್ಥಿಕ ಅನುಕೂಲ ಉತ್ತಮವಾಗಿತ್ತು. ದಿನ ಪತ್ರಿಕೆಯ ವರದಿಯ ಪ್ರಕಾರ, ಮನೋಜ್ ತನ್ನ ಘಟಕದಲ್ಲಿ ಉತ್ತಮ ಗುಣಮಟ್ಟದ ಪಿ.ಪಿ.ಇ. ತೊಡುಗೆಗಳ ಉತ್ಪಾದನೆಯನ್ನು   ಹೊಸದಾಗಿ ಆರಂಭಿಸಿದ್ದು, ಅದು ಇಡೀ ರಾಷ್ಟ್ರದ ಗಮನವನ್ನು ಸೆಳೆದಿತ್ತು. ಆ ರೀತಿಯ ತೊಡುಗೆಗಳಿಗೆ ರಫ್ತಿನ ಬೇಡಿಕೆ ಹೆಚ್ಚಿದ್ದರೂ, ಸ್ಥಳೀಯ ಆಸ್ಪತ್ರೆಗಳಿಗೆ ಅವುಗಳ ಪೂರೈಕೆಯನ್ನು ಮಾಡುತ್ತಿದ್ದ ಮನೋಜನ ಸೇವೆಯನ್ನು ಅಲ್ಲಿನ ರಾಜ್ಯ ಸರಕಾರ ಗಮನಿಸಿತ್ತು. ಆ ವಿನೂತನ ಸಾಧನೆಗಾಗೇ ನಡೆದಿತ್ತು ಅಂದಿನ ಸನ್ಮಾನ ಸಮಾರಂಭ. 

ತಮ್ಮ ಉದ್ದಿಮೆಯ ಸಮಸ್ಯೆಗಳಿಗೆ, ಉಷಾ ಮತ್ತು ಮನೋಜ್ರವರನ್ನು ಭೇಟಿ ಮಾಡುವುದರಿಂದ, ಏನಾದರೂ ಪರಿಹಾರ ಸಿಗಬಹುದೆಂಬ ಸಲಹೆಯನ್ನು ಸುಹಾಸಿನಿ ತನ್ನ ಗಂಡನಿಗೆ ಅಂದೇ ನೀಡಿದ್ದಳು. ಕೋವಿಡ್ ಹರಡುವಿಕೆ ಎರಡೂ ರಾಜ್ಯಗಳಲ್ಲಿ ತೀವ್ರವಾಗಿದ್ದುದರಿಂದ, ಮನೋಜನ ಊರಿಗೆ ಪ್ರಯಾಣಿಸುವುದು ಬೇಡ ಎಂಬುದು ಶಶಿಯ ಅಭಿಪ್ರಾಯವಾಗಿತ್ತು. ಕೋವಿಡ್ನ ಆತಂಕದಿಂದಾಗಿ  ಉಷಾ-ಮನೋಜರು ಕೂಡ, ನೆರೆ ರಾಜ್ಯದಿಂದ ಬಂದವರನ್ನು ಭೇಟಿಮಾಡಲು ಇಷ್ಟಪಡರು ಎಂಬ ವಿಚಾರವೂ, ಶಶಿ-ಸುಹಾಸಿನಿಯರ ಅನಿಸಿಕೆಯಾಗಿತ್ತು. 

ಶಶಿ-ಸುಹಾಸಿನಿಯರು ಮನೋಜನನ್ನು ಸಂಪರ್ಕಿಸಿ, ತಮ್ಮ ಸಮಸ್ಯೆಗಳನ್ನು ತೋಡಿಕೊಂಡ ಕೂಡಲೇ, ಮನೋಜ್ ವಿಡಿಯೋ ಮಾತುಕತೆಗೆ ಸಮ್ಮತಿಸಿದ್ದನು. ಉಷಾ ಹಾಗೂ ಮನೋಜರ ಈ ಔದಾರ್ಯ, ಶಶಿ-ಸುಹಾಸಿನಿಯರಿಗೆ ಸಂತಸವನ್ನು ತಂದಿತ್ತು. ತನ್ನ ಫ್ಯಾಕ್ಟರಿಯ ಎಲ್ಲಾ ವಿಭಾಗಗಳ ವಿಡಿಯೋ ಚಿತ್ರೀಕರಣವನ್ನು ಅಚ್ಚುಕಟ್ಟಾಗಿ ಮಾಡಿರಿಸಿದ್ದ ಉಷಾ, ತನ್ನ ಗೆಳತಿ ಸುಹಾಸಿನಿಗೆ ಅದರ ವಿವರಗಳನ್ನು ವಿಸ್ತಾರವಾಗೇ ವಿವರಿಸಿದ್ದಳು. ಮನೋಜನ ಫ್ಯಾಕ್ಟರಿ ದೊಡ್ಡದಾಗಿದ್ದು, ಅದರಲ್ಲಿ ಸುಮಾರು ೨೦೦ ಕೆಲಸಗಾರರು ಕೆಲಸ ಮಾಡುತ್ತಿದ್ದರು. ಅವರ ಫ್ಯಾಕ್ಟರಿಯಲ್ಲಿ ಚುರುಕಿನಿಂದ ನಡೆಯುತ್ತಿದ್ದ ಉತ್ಪಾದನಾ ಕಾರ್ಯವನ್ನು ನೋಡಿ ಶಶಿ ದಂಗು ಬಡಿದಂಥವನಾಗಿದ್ದು ಸುಳ್ಳಲ್ಲ. 

'ನೀನೇಕಿಷ್ಟು ಮಂಕಾಗಿಬಿಟ್ಟಿದ್ದೀಯ?' ಉಷಾ ತನ್ನ ಗೆಳತಿ ಸುಹಾಸಿನಿಯನ್ನು ಪ್ರಶ್ನಿಸಿದ್ದಳು. 

'ನಿನಗೆ ನಮ್ಮ ಉದ್ದಿಮೆಯ ಬಗ್ಗೆ ತಿಳಿದಿರಬಹುದು. ನಮ್ಮ ಫ್ಯಾಕ್ಟರಿ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಕಳೆದೆರಡು ವಷಗಳಿಂದ ಹಲವು ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಕೋವಿಡ್ ಲಾಕ್ಡೌನ್ ನಮ್ಮನ್ನು ನೆಲಕಪ್ಪಳಿಸಿ ತುಳಿದಿದೆ. ನಮ್ಮ ಫ್ಯಾಕ್ಟರಿಯಲ್ಲೀಗ ಯಾವ ಚಟುವಟಿಕೆಗಳೂ ನಡೆಯುತ್ತಿಲ್ಲ' ಎಂದುತ್ತರಿಸುವಾಗ ಸುಹಾಸಿನಿಯ ಮುಖದಲ್ಲಿ ಸಂಕೋಚವಿತ್ತು. 

'ನಿಮ್ಮ ಮಾರ್ಗದರ್ಶನವನ್ನು ಕೋರಿ ನಿಮ್ಮನ್ನು ಸಂಪರ್ಕಿಸಿದ್ದೇವೆ. ನಮ್ಮ ಉದ್ದಿಮೆಯನ್ನು ಪುನರುಜ್ಜೀವನಗೊಳಿಸುವ ಬಗೆ ಹೇಗೆ?' ಎಂದು ಶಶಿ, ಮನೋಜನನ್ನು ಪ್ರಶ್ನಿಸಿದ್ದನು. 

ಮನೋಜ್ ಮಾತನಾಡುತ್ತ, 'ತಾವಿಬ್ಬರೂ ಸರಿಯಾದ ಸಮಯದಲ್ಲಿ ನಮ್ಮನು ಸಂಪರ್ಕಿಸಿದ್ದೀರಿ. ತಾವುಗಳು ಹಳೆಯ ಸ್ನೇಹಿತರುಗಳಾದುದರಿಂದ ತಮ್ಮೊಡನೆ ಕೆಲವು ವಿಷಯಗಳನ್ನು ಹಂಚಿಕೊಳ್ಳಬಯಸುತ್ತೇನೆ. ಆ ವಿಷಯಗಳು ತಮ್ಮಲ್ಲೇ ಗೌಪ್ಯವಾಗಿರಬೇಕು,' ಎಂದಾಗ, ಶಶಿ-ಸುಹಾಸಿನಿಯರಿಬ್ಬರೂ ತಲೆಯಾಡಿಸಿ ಸಮ್ಮತಿಸಿದ್ದರು. 

'ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳ ಪರಿಚಯ ನಮಗೆ ಚೆನ್ನಾಗಿದೆ. ಕೋವಿಡ್ ರೋಗಿಗಳಿಗೆ ಅತ್ಯಾವಶ್ಯಕವಾಗಿ ಬೇಕಾಗಬಹುದಾದಂತಹ  "ಉಸಿರಾಟದ ಉಪಕರಣಗಳು ಮತ್ತು ವೆಂಟಿಲೇಟರ್ಗಳ" ಉತ್ಪಾದನೆಯನ್ನು ನಿಮ್ಮ ಫ್ಯಾಕ್ಟರಿಯಲ್ಲಿ ಮಾಡುವ ಪ್ರಯತ್ನವನ್ನೇಕೆ ಮಾಡಬಾರದೆಂದು, ಅವರು ನಮಗೆ ಸಲಹೆ ನೀಡಿದ್ದಾರೆ. ಆ ಎರಡೂ ಉಪಕರಣಗಳು ಜೀವ ರಕ್ಷಕಗಳಾಗಿದ್ದು, ಅವುಗಳಿಗೆ ದೇಶಾದ್ಯಂತ ಅಪಾರ ಬೇಡಿಕೆಯಿದೆ. ಅದರ ಉತ್ಪಾದನಾ ಕಾರ್ಯದಲ್ಲಿ, ವಿದೇಶೀ ಸಂಯೋಗದ ಮೂಲಕ, ನಮ್ಮ ರಾಜ್ಯವು ನಮಗೆ ಮಾರ್ಗದರ್ಶನವನ್ನು ನೀಡುವ ಭರವಸೆ ನೀಡಿದೆ.  ಆದರೂ ಆ ಕಾರ್ಯಕ್ಕೆ ಕೈ ಹಾಕುವುದು ಒಂದು ಸವಾಲೇ ಸರಿ. ನಮ್ಮ ಫ್ಯಾಕ್ಟರಿಯ ಮೇಲೆ ಕೆಲಸದೊತ್ತಡ ಹೆಚ್ಚಿ, ನಮ್ಮ ಎಂದಿನ ಉತ್ಪನ್ನವಾದ ಪಿ.ಪಿ.ಇ. ತೊಡುಗೆಗಳ ಉತ್ಪಾದನೆಗೆ ತೊಡಕುಂಟಾಗಬಹುದು. ಅಂದಹಾಗೆ ನಮ್ಮ ಪಿ.ಪಿ.ಇ. ತೊಡುಗೆಗಳಿಗೆ ಬೇಡಿಕೆ ಏರುತ್ತಲೇ ಸಾಗಿದ್ದು, ರಫ್ತಿನ ವ್ಯಾಪಾರಕ್ಕೂ ಅಪಾರ ಬೇಡಿಕೆ ಇದೆ. ತಾವುಗಳು ಪಿ.ಪಿ.ಇ. ತೊಡುಗೆಗಳನ್ನು ಉತ್ಪಾದಿಸುವಲ್ಲಿ ನಮ್ಮೊಡನೆ ಸಹಕರಿಸಬಹುದು. ಆ ಉತ್ಪಾದನೆಯನ್ನು ನೀವು ನಮಗಾಗಿ ಮಾಡಿಕೊಟ್ಟರೆ (job work), ಅದು ನಮ್ಮಿಬರಿಗೂ ಲಾಭದಾಯಕವಾಗುತ್ತದೆ. ಪಿ.ಪಿ.ಇ. ತೊಡುಗೆಗಳ ಉತ್ಪಾದನೆಯನ್ನು ಮಾಡಲು ಬೇಕಾದ ಕಚ್ಚಾ ವಸ್ತುಗಳನ್ನು ಮತ್ತು ಮಾರ್ಗದರ್ಶನವನ್ನೂ ನಿಮಗೆ ನಾವು ನೀಡಬಲ್ಲೆವು' ಎಂದು ಮನೋಜ್ ವಿವರಿಸಿದಾಗ, ಉಷಾ ತನ್ನ ಗೆಳತಿ ಸುಹಾಸಿನಿಯ ಪ್ರತಿಕ್ರಿಯೆಯನ್ನು ಗಮನಿಸುತ್ತಾ, ಅವಳ  ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿದ್ದಳು. 

ಸುಹಾಸಿನಿಗೀಗ, ಶಶಿಯ ಕಣ್ಣುಗಳಲ್ಲಿ ಹೊಸ ಮಿಂಚೊನ್ದು ಕಂಡುಬಂದಿತ್ತು. 'ತಾವು ನೀಡುತ್ತಿರುವ ಕೆಲಸವನ್ನು ಕೈಗೊಳ್ಳಲು ನನಗೆ ಎಷ್ಟು ಹಣ ಬೇಕಾಗಬಹುದು?' ಶಶಿಯ ಪ್ರಶ್ನೆ ಮನೋಜನ ಕಡೆಗಿತ್ತು. 

'ಹೊಸ ಉತ್ಪಾದನಾ ಯಂತ್ರಗಳನ್ನು ಖರೀದಿಸಲು ಸುಮಾರು ಒಂದು ಕೋಟಿ ರುಪಾಯೀಗಳು ಬೇಕಾಗಬಹುದು. ಕಚ್ಚಾ ಸಾಮಗ್ರಿಗಳನ್ನು ನಾವು ಕಳುಹಿಸಿಕೊಡುತ್ತೇವೆ,' ಮನೋಜನ ಉತ್ತರ ಥಟ್ಟನೆ ಬಂದಿತ್ತು. 

ಒಂದು ಕೋಟಿ ರೂಪಾಯಿಗಳಷ್ಟರ ಭಾರಿ ಮೊತ್ತದ ಮಾತನ್ನು ಕೇಳುತ್ತಲೇ, ಶಶಿಯ ಮನಸ್ಸು ಒಳಗೊಳಗೆ ಕುಸಿದಿದ್ದರೂ, ಮುಖದಲ್ಲಿ ಧೈರ್ಯ ತಂದುಕೊಂಡ ಅವನು, 'ಅಷ್ಟು ಹಣವನ್ನು ನಾನು ಹೊಂದಿಸಬಲ್ಲೆ. ೨-೩ ವಾರಗಳಷ್ಟರ ಸಮಯ ಬೇಕಾಗಬಹುದು,' ಎಂದನು. 

ಉಷಾ-ಮನೋಜರ ಅನುಮತಿಯನ್ನು ಪಡೆದನಂತರ, ಶಶಿ ವಿಡಿಯೋ ಕರೆಯನ್ನು ಅಂತ್ಯಗೊಳಿಸಿದ್ದನು. 

ಮಾರನೆಯ ದಿನವೇ ಶಶಿಕಾಂತ್ ಮತ್ತು ಸುಹಾಸಿನಿಯರು, ಅವರ ಬ್ಯಾಂಕ್ ಮ್ಯಾನೇಜರ್ ಕ್ಯಾಬಿನ್ನಲ್ಲಿ ಉಪಸ್ಥಿತರಿದ್ದರು. 'ನಿಮ್ಮ ವಿವಿಧ ಸಾಲಗಳಲ್ಲಿರುವ ಭಾರಿ ಬಾಕಿಯನ್ನು ಪಾವತಿಸುವ ಯಾವುದಾದರೂ ಪ್ರಸ್ತಾಪವನ್ನು ತಂದಿದ್ದೀರಾ?' ಬ್ಯಾಂಕ್ ಮ್ಯಾನೇಜರ್ ಪ್ರಶ್ನೆ ಶಶಿಯ ಕಣ್ಣಿಗೆ ಕೈ ಹಾಕಿದಂತಿತ್ತು. 

'ಹೌದು ಸಾರ್,' ಶಶಿಯ ಉತ್ತರದಲ್ಲೀಗ ದೃಢತೆಯಿತ್ತು. 

ತಮ್ಮ ಉದ್ದಿಮೆಯ ವಿಸ್ತರಣಾ ಯೋಜನೆಯನ್ನು ವಿವರಿಸಿದ ಶಶಿ, 'ಸುಮಾರು ಒಂದು ಕೋಟಿಯಷ್ಟು ಹೊಸ ಸಾಲವನ್ನು ತಾವು ಮಂಜೂರು ಮಾಡಿಸಿಕೊಟ್ಟರೆ, ನಾವು ನಮ್ಮ ಸಮಸ್ಯೆಯಿಂದ ಹೊರ ಬಂದು, ಆದಷ್ಟು ಬೇಗ ತಮ್ಮ ಸಾಲಗಳ ಬಾಕಿಯನ್ನೆಲ್ಲಾ ತೀರಿಸಬಲ್ಲೆವು' ಎಂದನು. 

ಶಶಿಯ ಕೋರಿಕೆಗೆ ಮ್ಯಾನೇಜರ್ ರವರ ಪ್ರತಿಕ್ರಿಯೆ ತಿರಸ್ಕಾರ ಭಾವದ ನಗೆ ಮಾತ್ರವಾಗಿತ್ತು. 'ನಿಮ್ಮ ವಿವಿಧ ಸಾಲಗಳಲ್ಲಿ ಭಾರಿ ಮೊತ್ತಗಳು ಬಾಕಿಯಿದ್ದು, ನಿಮ್ಮ ಎಲ್ಲಾ ಸಾಲಗಳನ್ನೂ  ಎನ್.ಪಿ.ಎ. ಎಂದು ಪರಿಗಣಿಸಬೇಕಾಬಹುದು. ನಿಮ್ಮ ಫ್ಯಾಕ್ಟರಿಯಲ್ಲಿ ಉತ್ಪಾದನೆ ನಿಂತಿದೆ. ತಮ್ಮ ಸಾಲಗಳಿಗೆ ಆಧಾರವಾಗಿ ತಾವು ನೀಡಿರುವ ಸ್ಥಿರಾಸ್ತಿಯ ಇಂದಿನ ಮಾರುಕಟ್ಟೆಯ ಬೆಲೆ ಕೇವಲ ಒಂದೂವರೆ ಕೋಟಿಯಷ್ಟಿದ್ದು, ತಮ್ಮ ಒಟ್ಟು ಸಾಲಗಳ ಮೊತ್ತ, ೩.೫ ಕೋಟಿ ರೂಪಾಯಿಗಳ ಮಂಜೂರಾತಿಗೆ ಹೋಲಿಸಿದರೆ, ೩.೮ ಕೋಟಿ ರುಪಾಯೀಗಳಿಷ್ಟಿದೆ. ಹೊಸ ಸಾಲವನ್ನು ನೀಡುವ ಪ್ರಶ್ನೆಯೇ ಇಲ್ಲ.' ಮ್ಯಾನೇಜರ್ ತಮ್ಮ ಕಂಪ್ಯೂಟರ್ ಮಾನಿಟರ್ನತ್ತ ನೋಡುತ್ತಾ, ಗಡಸು ಧ್ವನಿಯಲ್ಲೇ ಶಶಿಗೆ ಹೇಳಿದ್ದರು. 

ಸಪ್ಪಗಾದ ಶಶಿ ತನ್ನ ಪತ್ನಿಯ ಮುಖವನ್ನು ನೋಡಹತ್ತಿದ್ದನು. 'ಹೊಸ ಸಾಲವನ್ನು ಒದಗಿಸುವ ಅವಕಾಶವೇ ಇಲ್ಲ. ಕೋವಿಡ್ ಲಾಕ್ಡೌನ್ನಿಂದ ಇಡೀ ದೇಶದ ಆರ್ಥಿಕತೆಯೇ ಹದಗೆಟ್ಟು ಹೋಗಿದೆ. ಎಲ್ಲಾ ಬ್ಯಾಂಕ್ಗಳಂತೆ ನಮ್ಮ ಬ್ಯಾಂಕ್ ಕೂಡ ತೀವ್ರ ಸಂಕಷ್ಟದಲ್ಲಿದೆ. ತಮ್ಮ ಸಾಲಗಳ ಬಾಕಿಯನ್ನು ಮೊದಲು ಮರುಪಾವತಿ ಮಾಡುವ ಏರ್ಪಾಡು ಮಾಡಿ.' ಮ್ಯಾನೇಜರ್ ರವರ ಆದೇಶದಲ್ಲಿ ಆಕ್ರೋಶದ ಭಾವವಿತ್ತು. ಮ್ಯಾನೇಜರ್ ರವರ ಕ್ಯಾಬಿನ್ನನ್ನು ಕೆಲ ಕ್ಷಣ ಮೌನ ಆವರಿಸಿತ್ತು. ನಿರಾಶರಾದ ಶಶಿಕಾಂತ್, ಸುಹಾಸಿನಿ  ಹೊರಟು ನಿಂತಾಗ, ಮ್ಯಾನೇಜರ್ ರವರ ಅನುಮತಿಯನ್ನು ಕೇಳಬೇಕೆಂಬ ಸಮಾಧಾನವೂ ಅವರಲ್ಲಿ ಉಳಿದಿತ್ತಿಲ್ಲ. 

ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆದ ತನ್ನ ತಂದೆ ಶಂಕರ್ ಸಿಂಗ್ ರವರೊಂದಿಗೆ ವಿಷಯವನ್ನು ಚರ್ಚಿಸಬೇಕೆಂಬುದು ಸುಹಾಸಿನಿಯ ವಿಚಾರವಾಗಿತ್ತು. ನಿವೃತ್ತರಾದರೂ, ಚಟುವಟಿಕೆಯಿಂದಲೇ ಇದ್ದ ಶಂಕರ್ ಸಿಂಗ್, ಆರ್ಥಿಕ ವಲಯದ ಆಗು-ಹೋಗುಗಳನ್ನು ದಿನ ನಿತ್ಯ ಗಮನಿಸುವವರಾಗಿದ್ದರು. ಕೋವಿಡ್ನ ದಾಳಿಯಿಂದ ತತ್ತರಿಸಿದ ದೇಶ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಪ್ರಧಾನಿ ಮೋದಿಯವರು ಈಚೆಗೆ ಜಾರಿಗೊಳಿಸಿದ್ದ ರೂ. ೨೦ ಲಕ್ಷ ಕೋಟಿಯಷ್ಟರ ಆರ್ಥಿಕ ಪರಿಹಾರದ (pandemic package) ವಿಚಾರವನ್ನು, ಶಂಕರ್ ಸಿಂಗ್ರವರು ಕೆಲವು ಬಾರಿ ತಮ್ಮ ಅಳಿಯ ಶಶಿಕಾಂತನೊಂದಿಗೆ ಚರ್ಚಿಸಿದ್ದರು. 

'ದೇಶದ ಆರ್ಥಿಕತೆಯ ಜೀವನಾಡಿಗಳಾದಂತಹ  ಎಂ.ಎಸ್.ಎಂ.ಇ. ಘಟಕಗಳು ಲಾಕ್ಡೌನಿನಿಂದ ಬಳಲಿದ್ದು, ಅವುಗಳಿಗೆ ಹೊಸ ಚೈತನ್ಯವನ್ನು ನೀಡಲು ಪ್ರಧಾನಿಯವರ ಆರ್ಥಿಕ ಪ್ಯಾಕೇಜ್ನಲ್ಲಿ ವಿಶೇಷವಾದ ಪ್ರಸ್ತಾಪಗಳಿವೆ. ನೀವಿಬ್ಬರೂ ಬನ್ನಿ. ಎಂ.ಎಸ್.ಎಂ.ಇ. ಮಂತ್ರಾಲಯದ ವೆಬ್ಸೈಟನ್ನೇ ಅವಲೋಕಿಸೋಣ' ಎಂದು ಶಂಕರ್ ಸಿಂಗ್ ತಮ್ಮ ಮಗಳು-ಅಳಿಯಂದಿರನ್ನೂ ಕರೆದಾಗ, ಅವರ ಮುಖದಲ್ಲಿ ಕೊಂಚ ಕ್ರೋಧ ಭಾವವಿತ್ತು. ಆ ವೆಬ್ಸೈಟ್ನಲ್ಲಿ ಎಂ.ಎಸ್.ಎಂ.ಇ.ಗಳ ಪುನರುಜ್ಜೀವನಕ್ಕಾಗಿ ಅಧಿಕೃತವಾಗಿ ಪ್ರಕಟವಾದ ಪ್ಯಾಕೇಜ್ನ ವಿವರಗಳು ಹೀಗಿತ್ತು.  

"ಉದ್ಯಮಿ ಬಾಂಧವರೇ 

ತಾವುಗಳು ಎಂದಿಗೂ ಒಬ್ಬಂಟಿಗರಲ್ಲ. 

ಕೋವಿಡ್ನ ಪಿಡುಗಿನ ದಿನಗಳಲ್ಲಿ ಇಡೀ ದೇಶವೇ ತಮ್ಮೊಂದಿಗಿದೆ. 

ಎಂ.ಎಸ್.ಎಂ.ಇ. ಘಟಕಗಳನ್ನು ಪುನರುಜ್ಜೀವನಗೊಳಿಸಲು, ಕಮ್ಮಿ ಬಡ್ಡಿ ದರದಲ್ಲಿ ಅವುಗಳಿಗೆ ಸಾಲವನ್ನೊದಗಿಸಲು, ೩ ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಕಾದಿರಸಲಾಗಿದೆ. ತಮ್ಮ ಸಮೀಪದ ಬ್ಯಾಂಕ್ಗಳಲ್ಲಿ ಅಥವಾ ನಮ್ಮ ಪೋರ್ಟಲ್ ಮುಖಾಂತರ ತಾವುಗಳು ಆ ರೀತಿಯ ಸಾಲಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. 

ಆ ರೀತಿಯ ಸಾಲಗಳ ಮಂಜೂರಾತಿಗೆ ಯಾವ ರೀತಿಯ ಹೆಚ್ಚಿನ ಭದ್ರತೆ ಬೇಡವಾಗಿದ್ದು, ೧೦೦%ನಷ್ಟು ಮರು ಪಾವತಿಯ ಖಾತರಿಯನ್ನು ಕೇಂದ್ರ ಸರಕಾರ ಸಾಲ ನೀಡುವ ಹಣಕಾಸು ಸಂಸ್ಥೆಗಳಿಗೆ  ನೀಡುತ್ತದೆ. 

ಆ ರೀತಿಯ ಸಾಲಗಳ ಅಸಲಿನ ಮರುಪಾವತಿಯನ್ನು ಮೊದಲ ವರ್ಷ ಮಾಡಬೇಕಿಲ್ಲ. 

ಎಂ.ಎಸ್.ಎಂ.ಇ. ಘಟಕಗಳ 'ಹೂಡಿಕೆ ಮತ್ತು ವಹಿವಾಟುಗಳ ಮಿತಿ (investment and turnover)'ಯ ವಿಸ್ತಾರವನ್ನು ಹೆಚ್ಚಿಸಿರುವದರಿಂದ, ಇನ್ನೂ ಹೆಚ್ಚು ಘಟಕಗಳು ಆ ಯೋಜನೆಯಡಿ ವಿವಿಧ ರೀತಿಯ ಸೌಲಭ್ಯಗಳನ್ನು ಈಗ ಪಡೆಯಬಹುದು. 

ಎಂ.ಎಸ್.ಎಂ.ಇ. ಘಟಕಗಳ ವಹಿವಾಟನ್ನು ಸುಲಭೀಕರಣಗೊಳಿಸಲು, ಅವುಗಳು ೨೦೦ ಕೋಟಿ ರೂಪಾಯಿಗಳವರೆಗೆ ಸರಕಾರಗಳಿಗೆ ಮಾರಾಟ ಮಾಡುವ ಕರಾರುಗಳನ್ನು ಅಂಗೀಕರಿಸುವಾಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಂಡರ್ಗಳನ್ನು ಕರೆಯಲಾಗುವುದಿಲ್ಲ.  

ಕೋವಿಡ್ನ ಪರಿಸ್ಥಿತಿಯಿಂದ ಬಳಲಿರುವ ಎಂ.ಎಸ್.ಎಂ.ಇ. ಘಟಕಗಳ ಬೆಂಬಲಕ್ಕಾಗಿ ಕೆಳಕಂಡ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 

-೨೦,೦೦೦ ಕೋಟಿ ರುಪಾಯಿಗಳ ನಿಧಿಯೊಂದನ್ನು ಸುಲಭ ಸಾಲಗಳ ಬಿಡುಗಡೆಗಾಗಿ ಕಾದಿರಿಸಲಾಗಿದೆ. ಈ ನಿಧಿಯಿಂದ ಸುಮಾರು ೨ ಲಕ್ಷ ಘಟಕಗಳಿಗೆ ಸಹಾಯ ಕಲ್ಪಿಸಬಹುದೆಂದು ಅಂದಾಜಿಸಲಾಗಿದೆ. 

-೫೦,೦೦೦ ಕೋಟಿ ರುಪಾಯಿಗಳ ನಿಧಿಯೊಂದನ್ನು ಬಂಡವಾಳವನ್ನೊದಗಿಸುವ ಸಲುವಾಗಿ ಕಾದಿರಿಸಲಾಗಿದೆ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಜಂಟಿಯಾಗಿ ಈ ನಿಧಿಯನ್ನು ಒದಗಿಸಲಿವೆ. 

'www.champions.gov.in' ಎಂಬ ಹೊಸ ಪೋರ್ಟಲ್ಲೊಂದನ್ನು ಎಂ.ಎಸ್.ಎಂ.ಇ. ಮಂತ್ರಾಲಯ ಸ್ಥಾಪಿಸಿದೆ. ಅನ್ಯಾಯಕ್ಕೊಳಗಾಗಿರುವ ಘಟಕಗಳು ತಮ್ಮ ದೂರುಗಳನ್ನು ಈ ಪೋರ್ಟಲ್ ಮೂಲಕ ದಾಖಲಿಸಬಹುದಾಗಿದೆ. 

ತಾವುಗಳು ಗೆದ್ದರೆ, ದೇಶ ಗೆದ್ದಂತೆ. 

ಕೋಟ್ಯಾಂತರ ಪ್ರಜೆಗಳ ಜೀವನಕ್ಕಾಧಾರಿಯಾಗಿರುವ ಎಂ.ಎಸ್.ಎಂ.ಇ.ಗಳು ಆತ್ಮನಿರ್ಭರ ಭಾರತದ ಭದ್ರ ಬುನಾದಿಯಾಗಿವೆ. 

ನರೇಂದ್ರ ಮೋದಿ 

ಪ್ರಧಾನ ಮಂತ್ರಿಗಳು"

ಬ್ಯಾಂಕಿಂಗ್ ಕ್ಷೇತ್ರದ ಹಳೆ ಹುಲಿಯಾದ ಶಂಕರ್ ಸಿಂಗ್, ಮಂತ್ರಾಲಯದ ಪ್ರಕಟಣೆಯನ್ನೋದಿದನಂತರ ಇನ್ನೂ ಕುಪಿತರಾಗಿದ್ದರು. 'ಮಾನ್ಯ ಪ್ರಧಾನಿಗಳು ಇಷ್ಟು ಒಳ್ಳೆಯ ಸೌಲಭ್ಯಗಳನ್ನು ಎಂ.ಎಸ್.ಎಂ.ಇ. ಘಟಕಗಳ ಪುನರುಜ್ಜೀವನಕ್ಕಾಗಿ ಪ್ರಕಟಿಸಿರುವಾಗ, ಕಷ್ಟದಲ್ಲಿರುವ ನಿಮ್ಮ ಘಟಕಕ್ಕೇಕೆ ಸಹಾಯ ಮಾಡಲು ನಿಮ್ಮ ಬ್ಯಾಂಕ್ ಮ್ಯಾನೇಜರ್ ನಿರಾಕರಿಸಿದ್ದಾರೆ? ಹೊಸ ನೀತಿಯ ಪ್ರಕಟಣೆಯನ್ನು ನಿಮ್ಮ ಬ್ಯಾಂಕ್ ಮ್ಯಾನೇಜರ್ ರವರು ಓದಿಲ್ಲವೇಕೆ? ನಿಮ್ಮ ಮ್ಯಾನೇಜರ್ ಬಳಿ ಮತ್ತೆ ಹೋಗೋಣ, ಹೊಸ ನೀತಿಯ ಪ್ರಕಟಣೆಯನ್ನು ಅವರಿಗೆ ತೋರಿಸೋಣ.' ಶಂಕರ್ ಸಿಂಗ್ ತಮ್ಮ ಅಳಿಯನನ್ನು ನೋಡುತ್ತಾ ಸಣ್ಣದಾಗಿ ಗುಡುಗಿದ್ದರು. 

ಅದೇ ದಿನ ಶಶಿಕಾಂತನೊಡನೆ, ಶಂಕರ್ ಸಿಂಗ್ ರವರು ಬ್ಯಾಂಕ್ ಮ್ಯಾನೇಜರ್ ಬಳಿಗೆ ದೌಡಾಯಿಸಿದ್ದರು. ಎಂ.ಎಸ್.ಎಂ.ಇ. ಘಟಕಗಳ ಪುನರುಜ್ಜೀವನಕ್ಕಾಗಿ ಕೇಂದ್ರ ಸರಕಾರ ಪ್ರಕಟಿಸಿದ್ದ ವಿವರಗಳನ್ನು ಪ್ರಸ್ತಾಪಿಸುತ್ತಾ ಶಂಕರ್ ಸಿಂಗ್, ಬ್ಯಾಂಕ್ ಮ್ಯಾನೇಜರ್ ಮೇಲೆ ಒಮ್ಮಲೇ ಮುಗಿ ಬಿದ್ದಿದ್ದರು. 'ನಾನು ಕೂಡ ಒಬ್ಬ ಮಾಜಿ ಬ್ಯಾಂಕ್ ಮ್ಯಾನೇಜರ್. ಸಣ್ಣ ಕೈಗಾರಿಕೆಯೊಂದನ್ನು ಕೊಲ್ಲುವ ಪ್ರಯತ್ನವನ್ನೇಕೆ ಮಾಡುತ್ತಿದ್ದೀರಿ?  ಈ ರೀತಿಯ ಉದ್ದಿಮೆಗಳು  ೧೨ ಕೋಟಿಯಷ್ಟು ಜನಗಳಿಗೆ  ಉದ್ಯೋಗವನ್ನು ಕಲ್ಪಿಸಿವೆ ಎಂದು ತಮಗೆ ತಿಳಿದಿಲ್ಲವೆ? ಕೇಂದ್ರ ಸರಕಾರ ಜಾರಿಗೊಳಿಸಿರುವ ಹೊಸ ಯೋಜನೆಗಳನುಸಾರ ನಮ್ಮ ಘಟಕಕ್ಕೆ ಹೆಚ್ಚಿನ ಆರ್ಥಿಕ ಸಹಾಯವನ್ನು ನೀಡುವಲ್ಲಿ ಇರುವ ತೊಂದರೆಗಳಾದರೂ ಏನು?' ಎಂದಿತ್ತು  ಶಂಕರ್ ಸಿಂಗ್ ರವರ ವಾದ. 

ಶಂಕರ್ ಸಿಂಗ್ ರವರು ತಮ್ಮ ಮೊಬೈಲ್ನಲ್ಲಿ ತೆಗೆದು ತೋರಿಸಿದ್ದ ಕೇಂದ್ರ ಸರಕಾರದ ಹೊಸ ನೀತಿಯನ್ನು ನೋಡುವ ಗೋಜಿಗೂ ಹೋಗದ ಬ್ಯಾಂಕ್ ಮ್ಯಾನೇಜರ್, 'ನಿಮ್ಮ ಸಾಲಗಳು          "ಎನ್.ಪಿ.ಎ." ಹಾದಿ ಹಿಡಿದಿವೆ. ತಮ್ಮ ಫ್ಯಾಕ್ಟರಿ ಹಲವು ತಿಂಗಳುಗಳಿಂದ ಚಾಲನೆಯಲ್ಲಿಲ್ಲ. ನಿಮ್ಮ ಕೆಲಸಗಾರರನ್ನು ತೆಗೆದು ಹಾಕಿದ್ದೀರಿ. ೩೦ ಲಕ್ಷ ರೂಪಾಯಿಗಳಷ್ಟರ ಮರುಪಾವತಿಯನ್ನು ತಾವು ಕೂಡಲೇ ಮಾಡಬೇಕಾಗಿದೆ. ಹೀಗಿರುವಾಗ ತಮ್ಮ ಘಟಕಕ್ಕೆ ಒಂದು ಕೋಟಿಯಷ್ಟರ ಹೊಸ ಸಾಲವನ್ನು ಹೇಗೆ ನೀಡಲಿ? ಮಾಜಿ ಬ್ಯಾಂಕರ್ ಆದ ತಮಗೆ, ವಸೂಲಾಗದ ಸಾಲಗಳ ತೂಗುಗತ್ತಿ ನಮ್ಮಂಥ ಬಡಪಾಯೀ ಮ್ಯಾನೇಜರ್ ಗಳ ಮೇಲೆ ತೂಗುತ್ತಿರುತ್ತದೆ ಎಂದು ಗೊತ್ತಿಲ್ಲವೆ?' ಎಂದು ಕೇಳಿದಾಗ ಮ್ಯಾನೇಜರ್ ರವರ ದನಿಯಲ್ಲಿ ಕೊಂಚ ಆತಂಕವಿತ್ತು. 

'ಹಾಗಾದರೆ ಕೇಂದ್ರ ಸರಕಾರದ ಹೊಸ ನೀತಿಗೆ ಅರ್ಥವಿಲ್ಲವೇ? ನಿಮ್ಮ ಮೇಲಧಿಕಾರಿಗಳ ಅಭಿಪ್ರಾಯವನ್ನೇಕೆ ತಾವು ಕೇಳಬಾರದು?' ಶಶಿಯ ಪ್ರಶ್ನೆಯಲ್ಲಿ ಅಸಮಾಧಾನ ಕಾಣುತ್ತಿತ್ತು. 

'ನನಗೆ ಸ್ವಲ್ಪ ಕಾಲಾವಕಾಶ ಕೊಡಿ. ಹೊಸ ನೀತಿಯನ್ನು ನಾನೊಮ್ಮೆ ನೋಡುವೆ. ನಮ್ಮ ಮೇಲಧಿಕಾರಿಗಳನ್ನು ಸಂಪರ್ಕಿಸುವೆ. ಹೆಚ್ಚಿನ ಸಾಲವನ್ನು ನೀಡುವೆನೆಂಬ ಖಾತರಿಯನ್ನು ಈಗಲೇ ಕೊಡಲಾರೆ.' ಮ್ಯಾನೇಜರ್ ರವರ ಉತ್ತರ ಯಾವ ಭರವಸೆಯನ್ನೂ ಕೊಡದಂತಿತ್ತು.  

ಶಶಿಯೀಗ 'ಎಡಬಿಡದ ತ್ರಿವಿಕ್ರಮ'ನಂತಾಗಿದ್ದನು. ಮಾರನೇ ದಿನವೇ ಅವನು, ಮ್ಯಾನೇಜರ್ ಮುಂದಿನ ಕುರ್ಚಿಯಲ್ಲಿ ಜಮಾಯಿಸಿದ್ದನು. 'ನಿಮಗೆ ಹೆಚ್ಚಿನ ಸಾಲವನ್ನು ಒದಗಿಸುವ ಸಣ್ಣ ಭರವಸೆಯೊಂದು ಕಂಡಿದೆ. ತಮ್ಮ ಸಾಲಗಳನ್ನು ನಾವಿನ್ನು ಎನ್.ಪಿ. ಎ. ಎಂದು ಪರಿಗಣಿಸದಿರುವುದು ನಿಮ್ಮ ಪಾಲಿಗೆ ಒಳ್ಳೆಯದಾಗಿದೆ. ಹೆಚ್ಚಿನ ಸಾಲವನ್ನು ಕೋರಿ ತಾವು ಹೊಸ ಅರ್ಜಿಯೊಂದನ್ನು, ಈ ಪಟ್ಟಿಯಲ್ಲಿರುವ ವಿವರಗಳೊಂದಿಗೆ ಸಲ್ಲಿಸಿ' ಎಂದು ಹೇಳಿದ ಮ್ಯಾನೇಜರ್, ಶಶಿಯ ಕೈಗೆ ಪಟ್ಟಿಯನ್ನಿಟ್ಟಿದ್ದರು. ಮ್ಯಾನೇಜರ್ ನೀಡಿದ ಉದ್ದನೆಯ ಪಟ್ಟಿಯನ್ನು ನೋಡಿ ಶಶಿಕಾಂತ್ಗೆ ಗಾಬರಿಯಾಗಿತ್ತು.  ತನ್ನ ಹೊಸ ಸಾಲದ ಅರ್ಜಿಯೊಂದಿಗೆ ಶಶಿ ನೀಡಬೇಕಾದ ವಿವರಗಳು ಹಾಗೂ ದಾಖಲೆಗಳ ಪಟ್ಟಿ ಕೆಳಕಂಡಂತಿತ್ತು. 

೧. ಉದ್ದಿಮೆಯಲ್ಲಿ ಉತ್ಪಾದನೆ ನಿಂತು ಎಷ್ಟು ದಿನಗಳಾಗಿವೆ? ಉತ್ಪಾದನೆ ನಿಲ್ಲಲು ಕಾರಣಗಳೇನು?

೨. ೨೦೨೦ರ ಮಾರ್ಚ್ ೩೧ರ 'ಆಸ್ತಿ ಮತ್ತು ಹೊಣೆಗಳ(Balance Sheet) ಪಟ್ಟಿ'ಯನ್ನು ನೀಡಿ. 

೩. ಹೊಸ ಉತ್ಪಾದನೆ ಹಾಗು ಮುಂಚಿನ  ಉತ್ಪಾದನೆಯನ್ನು ಮತ್ತೆ ಆರಂಭಿಸುವ ಬಗೆಗಿನ ವಿವರಗಳನ್ನು (Project report) ನೀಡಿ. 

೪. ಪಿ.ಪಿ. ಇ. ತೊಡುಗೆಗಳನ್ನು ತಯಾರು ಮಾಡಿ, ಅವುಗಳನ್ನು ಮನೋಜರ ಸಂಸ್ಥೆಗೆ ಕಳುಹಿಸುವ/ಮಾರಾಟ ಮಾಡುವ ಪ್ರಕ್ರಿಯೆಯನ್ನು ಕುರಿತಾದ ಒಪ್ಪಂದದ ಪತ್ರವನ್ನು ನೀಡಿ. 

೫. ಮನೋಜರ ಸಂಸ್ಥೆಯ ಕಳೆದ ಎರಡು ವರ್ಷದ ಆಸ್ತಿ ಮತ್ತು ಹೊಣೆಗಳ ಪಟ್ಟಿಗಳನ್ನೂ ನೀಡಿ. 

೬. ಮನೋಜರವರು ವ್ಯವಹರಿಸುವ ಬ್ಯಾಂಕಿನಿಂದ, ಮನೋಜ್ರವರ ಸಂಸ್ಥೆಯ ಆರ್ಥಿಕ ಸ್ಥಿರತೆ ಕುರಿತಾದ 'ಗೌಪ್ಯ ವರದಿ (Confidential report)'ಯ ಪತ್ರವನ್ನು ನೀಡಿ. 

೭. ಮನೋಜ್ರವರ ಸಂಸ್ಥೆಯಿಂದ ನಿಮ್ಮ ಸಂಸ್ಥೆಗೆ ಮುಂದಿನ ದಿನಗಳಲ್ಲಿ ನೀಡಬಹುದಾದ ಹಣದ ಪಾವತಿ ನೇರವಾಗಿ ನಮ್ಮ ಬ್ಯಾಂಕಿಗೇ ತಲುಪಬೇಕು. ಈ ವಿಷಯದಲ್ಲಿ ಮನೋಜರವರ ಸಂಸ್ಥೆಯ 'ಸಮ್ಮತಿ ಪತ್ರ (Power of Attorney - PoA)'ವನ್ನು ನೀಡಿ. 

೮. ಹೊಸ ಉತ್ಪಾದನೆಯನ್ನು ಆರಂಭಿಸಲು ಈಗಿರುವ ಫ್ಯಾಕ್ಟರಿಯಲ್ಲಿರುವಷ್ಟು ಸ್ಥಳಾವಕಾಶ ಸಾಕೆ? ಅದರ ಬಗೆಗಿನ ವಿವರಗಳನ್ನು ನೀಡಿ. 

೯. ಹೊಸ ಉತ್ಪಾದನೆಗೆ ಬೇಕಾದ ಕೌಶಲ್ಯವುಳ್ಳ ಕೆಲಸಗಾರರ ಲಭ್ಯದ ಬಗೆಗಿನ ವಿವರಗಳನ್ನು ನೀಡಿ. 

೧೦. ಫ್ಯಾಕ್ಟರಿ ಆವರಣದ ಬಾಡಿಗೆ ಕರಾರು ಪತ್ರದ ಅವಧಿ ಶೀಘ್ರವೇ ಅಂತ್ಯಗೊಳ್ಳಲಿದ್ದು, ಅದನ್ನು ನವೀಕರಣಗೊಳಿಸಿ, ಹೊಸ ಕರಾರು ಪತ್ರದ ಪ್ರತಿಯನ್ನು ನೀಡಿ. 

'ಇಷ್ಟೊಂದು ವಿವರಗಳು, ದಾಖಲೆ ಪಾತ್ರಗಳು ಏಕೆ ಬೇಕು? ಈ ಎಲ್ಲ ಅಂಶಗಳಿಗೆ ದಾಖಲೆಗಳನ್ನೊದಗಿಸಲು ಸಾಕಷ್ಟು ಸಮಯ ಬೇಕು. ಸಧ್ಯಕ್ಕೆ ೫೦ ಲಕ್ಷ ರೂಪಾಯಿಗಳ ನೆರವನ್ನೇಕೆ ಬಿಡುಗಡೆ ಮಾಡಬಾರದು?' ಶಶಿಯ ಪ್ರಶ್ನೆಯಲ್ಲಿ ಅಸಹಾಯಕತೆ ಇತ್ತು. 

'ಶಶಿಯವರೇ, ತಾವು ಬ್ಯಾಂಕ್ಗೂ ಮತ್ತು ಸರಕಾರಕ್ಕೂ ಆಭಾರಿಗಳಾಗಿರಬೇಕು. ಕೋವಿಡ್ ಪ್ಯಾಕೇಜ್ನ ಸೌಲಭ್ಯಗಳ ಪ್ರಕಾರ, ತಮ್ಮ ಸಾಲದ ಖಾತೆಯಲ್ಲಿ ಬಾಕಿ ಇರುವ ಇಡೀ ಮೊತ್ತದ ೨೦%ನಷ್ಟು ಮೊತ್ತವನ್ನು, ಅಂದರೆ ಸುಮಾರು ೭೬ ಲಕ್ಷ ರೂಪಾಯಿಗಳನ್ನು ತಮ್ಮ ಫ್ಯಾಕ್ಟರಿಯ ಪುನರುಜ್ಜೀವನಕ್ಕೆಂದು ಹೊಸ ಸಾಲದ ರೂಪದಲ್ಲಿ ನೀಡಬಹುದು. ಬಂಡವಾಳದ ಹೆಚ್ಚಳಕ್ಕಾಗೆಂದು ಮತ್ತೆ ೧೨ ಲಕ್ಷ ರುಪಾಯಿಗಳ ನೆರವನ್ನು ನೀಡಬಹುದು. ನಿಮ್ಮ ಫ್ಯಾಕ್ಟರಿಯ ಪುನರುಜ್ಜೀವನ ಸಾಲದ ಬಡ್ಡಿಯ ದರ ೮%ಗಿಂತ ಹೆಚ್ಚಿರಲಾರದು. ನೀವು ಯಾವುದೇ ರೀತಿಯ ಹೆಚ್ಚಿನ ಭದ್ರತೆ/ಅಡಮಾನಗಳನ್ನು ನೀಡಬೇಕಿಲ್ಲ. ಆದರೆ ನಾವು ಕೇಳಿರುವ ವಿವರಗಳು ಮತ್ತು ದಾಖಲೆ ಪತ್ರಗಳನ್ನು  ನೀಡದೆ ಅನ್ಯ ಮಾರ್ಗವಿಲ್ಲ. ನಿಮ್ಮ ಸಾಲದ ಹೊಣೆ, ಮಂಜೂರಾತಿ ನೀಡುತ್ತಿರುವ ನಮ್ಮಗಳ ಮೇಲೂ ಇರುತ್ತದೆ. ಬ್ಯಾಂಕ್ ಮ್ಯಾನೇಜರ್ ಗಳಾದ ನಮ್ಮಗಳ ಮೇಲೂ ಹೆಚ್ಚಿನ ಜವಾಬ್ದಾರಿ ಹಾಗೂ ತೀವ್ರವಾದ ಆತಂಕಗಳು ಇರುತ್ತವೆ. ಮಾಜಿ ಬ್ಯಾಂಕರ್ ಆದ ನಿಮ್ಮ ಮಾವನವರಿಗೆ ನಮ್ಮ ಆತಂಕಗಳ ಅರಿವಿರಬಹುದು. ನಮಗೆ ಬೇಕಾದ ವಿವರಗಳು, ದಾಖಲೆಗಳು ನಮ್ಮ ಕೈಸೇರದೆ ನಾವು ಮುಂದುವರಿಯುವಂತಿಲ್ಲ.' ಬ್ಯಾಂಕ್ ಮ್ಯಾನೇಜರ್ ರವರ ಮಾತುಗಳಲ್ಲಿ ಖಚಿತತೆಯಿತ್ತು. 

'ನಿಮ್ಮ ಆಡಿಟರ್ಗಳ (ಲೆಕ್ಕ ಪರಿಶೋಧಕರು) ಮತ್ತು ನಿಮ್ಮ ಮಾವನವರ ಸಹಾಯವನ್ನು ಪಡೆಯಿರಿ. ನೀವೂ ಕೂಡಲೇ ಕಾರ್ಯೋನ್ಮುಖರಾಗಿ. ಆಗ ನಿಮ್ಮ ಕೆಲಸಗಳು ಬೇಗ ಮುಗಿಯಬಹುದು. ಮುಖ್ಯವಾಗಿ ತಮ್ಮ ಸ್ನೇಹಿತರಾದ ಮನೋಜ್ರವರ ಬೆಂಬಲ ತಮಗೆ ಅವಶ್ಯಕ.' ಮ್ಯಾನೇಜರ್ ರವರ ಸಲಹೆ ಮುಂದುವರೆದಿತ್ತು. 

ಶಶಿಗೀಗ ಹೊಸ ಭರವಸೆಯೊಂದು ಮೂಡಿತ್ತು. ಬೇಕಾದ ದಾಖಲೆಗಳನ್ನು ಪಡೆಯಲು ಅವನ ಪ್ರಯತ್ನಗಳು ಶುರುವಾಗಿತ್ತು. ಮಾವನವರಾದ ಶಂಕರ್ ಸಿಂಗ್ ರವರು ಫ್ಯಾಕ್ಟರಿ ಬಾಡಿಗೆ ಕರಾರು ಪತ್ರದ ನವೀಕರಣವನ್ನು ಮಾಡಿಸಿ ಮುಗಿಸಿದ್ದರು. ಶಶಿಯ ಫ್ಯಾಕ್ಟರಿಯ ಸಮೀಪವೇ ಇದ್ದ ಮತ್ತೊಂದು ಫ್ಯಾಕ್ಟರಿ ಆವರಣವನ್ನು ಅವರು ಪಡೆಯುವ ಕಾರ್ಯವನ್ನು ಮುಗಿಸಿಯಾಗಿತ್ತು. ಶಶಿಯ ಆಡಿಟರ್ಗಳು ಶಶಿಗೆ ಬೇಕಾದ ಮಿಕ್ಕೆಲ್ಲ ದಾಖಲೆಗಳನ್ನು ತಯಾರು ಮಾಡಿ ಕೊಟ್ಟಿದ್ದರು. ಮನೋಜರಿಂದ ಬರಬೇಕಾದ ಮಾಹಿತಿ ಮತ್ತು ದಾಖಲೆಗಳು ಬರುವಲ್ಲಿ ಯಾವ ತಡವೂ ಆಗಲಿಲ್ಲ. ಫ್ಯಾಕ್ಟರಿಗೆ ಬೇಕಾದ ಹೆಚ್ಚಿನ ವಿದ್ಯುತ್ತಿನ ಮಂಜೂರಿ ಸುಹಾಸಿನಿಯ ಪ್ರಯತ್ನದಿಂದ ದೊರೆತಿತ್ತು. ಫ್ಯಾಕ್ಟರಿಯಿಂದ ಹೊರನಡೆದ್ದಿದ್ದ ಕೆಲಸಗಾರರೆಲ್ಲರನ್ನು ವಾಪಸ್ಸು ಕರೆಸಿಕೊಳ್ಳುವ ಪ್ರಯತ್ನವನ್ನೂ ಸುಹಾಸಿನಿ ಮಾಡಹತ್ತಿದ್ದಳು. 'ಮನಸ್ಸಿದ್ದಲ್ಲಿ ಮಾರ್ಗ' ಎಂಬ ಮಾತು ಶಶಿಗೀಗ ನಿಜವೆನಿಸತೊಡಗಿತ್ತು.

ಹತ್ತು ದಿನಗಳು ಕಳೆಯುವಷ್ಟರಲ್ಲಿ, ಶಶಿ ಎಲ್ಲ ವಿವರಗಳನ್ನು ಹಾಗೂ ದಾಖಲೆಗಳನ್ನು ತನ್ನ ಬ್ಯಾಂಕ್ಗೆ ಸಲ್ಲಿಸಿದ್ದನು. ಶಶಿ ೧ ಕೋಟಿ ರುಪಾಯಿಗಳಷ್ಟರ  ಹೆಚ್ಚುವರಿ ಸಾಲಕ್ಕೆ ಅರ್ಜಿಯನ್ನು ನೀಡಿದ್ದರೂ, ಬ್ಯಾಂಕ್ ಮ್ಯಾನೇಜರ್ ರವರು ಮುಂಚೆಯೇ ತಿಳಿಸಿದ್ದಂತೆ  ರೂ. ೭೬  ಲಕ್ಷಗಳ ಹೆಚ್ಚುವರಿ ಸಾಲವನ್ನು ಮತ್ತು ರೂ. ೧೨ ಲಕ್ಷಗಳಷ್ಟರ ಬಂಡವಾಳ ನಿಧಿಯನ್ನು ಮಾತ್ರ ಮಂಜೂರು ಮಾಡಿದ್ದರು. ಅಷ್ಟೇ ಹೆಚ್ಚಿನ ಹಣದೊಂದಿಗೆ ತನ್ನ ಕೆಲಸವನ್ನು ನಿಭಾಯಿಸುವ ವಿಶ್ವಾಸ ಶಶಿಗೀಗ ಬಂದಿತ್ತು. 

ಫ್ಯಾಕ್ಟರಿಯಿಂದ ಕಳುಹಿಸಲ್ಪಟ್ಟ ೨೪ ಕೆಲಸಗಾರರ ಪೈಕಿ, ೧೬ ಕೆಲಸಗಾರರು ಅದೇ ನಗರದಲ್ಲೇ ವಾಸವಿದ್ದರು. ಕೆಲಸಕ್ಕೆ ಹಿಂತಿರುಗಿದ ೧೬ ಕೆಲಸಗಾರರಿಗೆ ಸುಹಾಸಿನಿ ತಲಾ ರೂ. ೧೦,೦೦೦ಗಳ ತಕ್ಷಣದ ಪರಿಹಾರವನ್ನು ನೀಡಿದ್ದಳು. ನೋಡು ನೋಡುವಷ್ಟರಲ್ಲೇ ಫ್ಯಾಕ್ಟರಿಗೆ ಮರು ಜೀವ ಬಂದು, ಕರ್ಣಾನಂದಕರವಾದ  ಉತ್ಪಾದನೆಯ ಸದ್ದು ಕೇಳಿಸತೊಡಗಿತು. ಒಂದೇ ತಿಂಗಳೊಳಗಾಗಿ ಶಶಿ ಪಿ.ಪಿ.ಇ. ತೊಡುಗೆಗಳ ಮೊದಲ ಕಟ್ಟ(ಪ್ಯಾಕ್)ನ್ನು, ಮನೋಜರಿಗೆ ಕಳಿಸಿದ್ದೂ ಆಗಿತ್ತು. ಸುಹಾಸಿನಿ ಮತ್ತು ಶಶಿಕಾಂತರಲ್ಲಿ ಹೊಸ ಉತ್ಸಾಹವೊಂದು ಮೂಡಿತ್ತು. 

ಶಶಿಯ ಆಹ್ವಾನದ ಮೇರೆಗೆ, ಅವನ  ಫ್ಯಾಕ್ಟರಿಯನ್ನು ಕಣ್ಣಾರೆ ಕಂಡ  ರಾಜು ಹಾಗು ರೋಹಿಣಿಯವರಿಗೆ ಸಂತೋಷವಾಗಿತ್ತು. ಶಶಿ ನೀಡಿದ ಮಾಹಿತಿಗಳ ಎಲ್ಲಾ ವಿವರಗಳನ್ನು ದಾಖಲಿಸಿಕೊಂಡ ರೋಹಿಣಿಗೆ, ತನ್ನ ಸಂಶೋಧನೆಯ ಪ್ರಬಂಧಕ್ಕೆ ಹೊಸದೊಂದು ಅಧ್ಯಾಯ ದೊರೆಕಿತ್ತು. 'ಸರಕಾರವನ್ನು ಟೀಕಿಸುವುದು ಸುಲಭದ ಕೆಲಸ. ಆದರೆ ಕುಸಿದು ಬಿದ್ದ ದೇಶದ ಆರ್ಥಿಕತೆಗೆ ಮರುಜೀವ ನೀಡುವುದು ಸುಲಭದ ಕೆಲಸವಲ್ಲ. ಮೋದಿಯವರು ಪ್ರಕಟಿಸಿದ ಎಂ.ಎಸ್.ಎಂ.ಇ. ಘಟಕಗಳ ಪುನರುಜ್ಜೀವನ ಯೋಜನೆಯ ಕಾರ್ಯಾನ್ವಯ ಸಾಧ್ಯ ಎಂಬುದಕ್ಕೆ ಶಶಿಯ ವೃತ್ತಾಂತವೇ ಜೀವಂತ ಸಾಕ್ಷಿ. ಸರಕಾರದ ಈ ಯೋಜನೆಯ ಯಶಸ್ಸಿಗೆ ಬ್ಯಾಂಕರ್ ಮತ್ತು ಗ್ರಾಹಕರುಗಳ ನಡುವಿನ ಸುಮಧುರ ಬಾಂಧವ್ಯ ಬಹಳ ಮುಖ್ಯವಾದದ್ದು. ಎರಡೂ ಕಡೆಯಿಂದ ಪ್ರಾಮಾಣಿಕ ಪ್ರಯತ್ನ ನಡೆದರೆ, ಯಶಸ್ಸು ಖಚಿತ.' ರಾಜುರವರ ಸಮಜಾಯಿಷಿ ಈ ಬಾರಿ ರೋಹಿಣಿಗೆ ಸರಿಯೆನಿಸಿತ್ತು.  

-೦-೦-೦-೦-೦-೦-






 



  





 


 

No comments:

Post a Comment